Tuesday, September 27, 2011

ಗೊಂಚಲು - ಇಪ್ಪತ್ತು ಮೇಲೊಂದು...

"ಹೂವಂತಿದ್ದರೆ ಬದುಕು..."































ಒಂದೇ ದಿನದ ಬಾಳು...
ಮುಂಜಾನೆ ಅರಳಿ - ಮುಸ್ಸಂಜೆಗೆ ಬಾಡಿ - ಮರು ಮುಂಜಾನೆಗೆ ನೆಲ ಸೇರೋದು ಹೂವ ಜೀವನ ಚಕ್ರ...
ಆದರೂ
ಚೆಲ್ಲುವ ಚೆಲುವು - ಬೀರುವ ಸುಗಂಧ - ದುಂಬಿಗೆ ನೀಡಿದ ಒಲವಿನಲ್ಲಿ
ಹೂವ ಬದುಕು ಸಾರ್ಥಕ...


ನೂರು ವರ್ಷದ ಬಾಳು ನಮ್ಮದು...
ಹೇಳಿಕೊಳ್ಳಲು ಇರುವುದು ಬರೀ ಗೋಳು...
ಕೊಟ್ಟಿದ್ದು - ಪಡೆದಿದ್ದರ ಲೆಕ್ಕ ತೆಗೆದರೆ ನೆನಪುಳಿವುದು ಎಷ್ಟು..???


ನಾವೂ ಬದುಕಬಹುದಿದ್ದರೆ...
:::
::
:
ಹೂಗಳಂತೆ...


ಚಿತ್ರಗಳು: ನನ್ನ ಕ್ಯಾಮರಾ ಕಣ್ಣಲ್ಲಿ ಒಂದಷ್ಟು ಹೂಗಳು...

Sunday, September 11, 2011

ಗೊಂಚಲು - ಇಪ್ಪತ್ತು...

"ನಿನ್ನ ಬೆಳಕು ನೀನಾಗು..."


ತನ್ನಿಂದ - ತನ್ನ ಇರುವಿಕೆಯಿಂದ ಯಾರಿಗೂ ಸುಖವಿಲ್ಲ ಎಂಬ ಹತಾಶ ಭಾವ ಕಾಡದಂಥ ಬದುಕ ಜೀವಿಸಬಲ್ಲವರು ಎಷ್ಟೊಂದು ಸುಖಿಗಳು...!!!
ಕ್ಷಮಿಸಿ ಅಂಥ ಬದುಕುಗಳೆಡೆಗೆ ಸಣ್ಣದೊಂದು ಹೊಟ್ಟೆಕಿಚ್ಚಿದೆ ನನಗೆ...
ಹಾಗಂತ ನಾನೇ ಬರೆದೆ ಒಮ್ಮೆ...
ಹಿರಿಯರೊಬ್ಬರು ಅಂಥ ಬದುಕುಗಳೆಡೆಗೆ ಹೊಟ್ಟೆಕಿಚ್ಚಿನ ಬದಲು ಮೆಚ್ಚುಗೆ ಬೆಳೆಸಿಕೊಳ್ಳಬೇಕು,ಹಾಗಾದಾಗ ನಾವೂ ಹಾಗೆ ಬದುಕಬಲ್ಲ ಮನಸ್ಥಿತಿ ಹೊಂದಬಹುದೇನೋ ಅಂತ ಪ್ರತಿಕ್ರಿಯಿಸಿದರು...
ಯಾರದೋ ಸುಖಕ್ಕಾಗಿ ಜೀವಿಸುವಷ್ಟು ದೊಡ್ಡದಲ್ಲ ಬದುಕು, ನಮ್ಮ ಸುಖಕ್ಕಾಗಿ ಬದುಕೋಣ, ಅದು ಸುತ್ತಲಿನವರಿಗೂ ಸುಖ ನೀಡೀತು ಎಂದ ಕಿರಿಯ ಮಿತ್ರ...

ಎರಡೂ ಸತ್ಯವೇ...


ಘಟಿಸಿದ ಪ್ರತಿ ಸಣ್ಣ ಸಂಗತಿಯನ್ನೂ - ಎದುರಾಗುವ ಪುಟ್ಟ ಪುಟ್ಟ ಖುಷಿಗಳನ್ನೂ ಮನಸಾರೆ ಅನುಭಾವಿಸಿ ಜೀವಿಸುವುದರಲ್ಲಿ ಬದುಕಿನ ಸೌಂದರ್ಯದ ಮತ್ತು ಸಂಭ್ರಮದ ಶ್ರೀಮಂತಿಕೆ ಅಡಗಿದೆ. ನೆನಪಾಗಿ ಬದಲಾದಾಗ ಕಣ್ಣೀರು ಕೂಡ ನಗುವನ್ನೆ ಮೂಡಿಸುತ್ತದೆ. ಹುಡುಕಿಕೊಳ್ಳಬೇಕಿದೆ ನಾನು ಪುಟ್ಟ ಖುಷಿಯಲ್ಲಿ ಬೆಟ್ಟದಷ್ಟು ಸಂಭ್ರಮ...


"ಆಪೋದೀಪ್ ಆಪ್ ಭವ" = ನಿನ್ನ ಬೆಳಕು ನೀನಾಗು. ಇದು ಬುದ್ಧನಾಡಿದ ಮಾತು.
ಹಾಗಾಗಲು ಸಾಧ್ಯವಿದ್ದರೆ..!!
ಬದುಕೆಷ್ಟು ಚೆಂದವಿರುತ್ತಿತ್ತು...

ಎಲ್ಲವೂ ಖರೆ...

ಆದರೂ...

ಹಾಗೆ ಬದುಕುವುದು ಅಷ್ಟು ಸುಲಭವಾ..?
ಬದುಕು ಎಲ್ಲರಿಗೂ ಹಾಗೆ ಜೀವಿಸಬಲ್ಲ ಅವಕಾಶ ಕಲ್ಪಿಸುತ್ತಾ...???

ಒಂದಷ್ಟು ಬದುಕುಗಳು ಹೇಗಿರುತ್ತೆ ಗೊತ್ತಾ..!!

ಮನದ ಬೀದಿಯಲ್ಲಿ - ಕರಗದ ಮೋಹದ, ಫಲಿಸದ ಪ್ರೇಮದ, ಈಡೇರದ ಆಸೆಗಳ ಯಾತನೆಯ ಮೆರವಣಿಗೆ...
ಮತ್ತೆ ಮತ್ತೆ ನೆನಪಾಗಿ ಮನವ ಹಿಪ್ಪೆ ಮಾಡುವ ಮತ್ತೆ ಬರಲಾರದ ಆ ದಿನಗಳು...
ಬದುಕುವ ಆಸೆಯನ್ನೇ ಕೊಲ್ಲುವಂಥ ಖಟು ವಾಸ್ತವ - ಅದರ ಕುಲುಮೆಯಲ್ಲಿ ಬೆಂದು ಹೋಗುವ ಸ್ವಪ್ನಗಳ ಸೊಣಕಲು ವಾಸನೆ...
ಸತ್ತು ಹುಟ್ಟಿದ ಮಗುವಿನಂಥ ಬದುಕು...

ದುಡ್ಡು ಮಾತ್ರ ಒದಗಿಸಬಲ್ಲ ಸುಖಗಳೆಡೆಗೆ ತೀವ್ರ ಹಂಬಲ...
ಆದರೆ - ದುಡ್ಡನ್ನು ದುಡಿಯಲಾರದ ಅಸಹಾಯಕತೆ...
ದುಡ್ಡು ದುಡಿದವರೆಡೆಗೆ ಮತ್ಸರ...
ಅದರಿಂದ ಮೂಡುವ, ನನ್ನ ಸೋಲಿಗೆ ಇನ್ಯಾರನ್ನೋ ಹೊಣೆ ಮಾಡುವ ಮನಸ್ಥಿತಿ...


ಸದಾ ರೋಗಗ್ರಸ್ಥ ಮನಸು ಮತ್ತು ದೇಹ...
ರೋಗ ತರುವ ನೋವು, ಅಸಹಾಯಕತೆ ಮತ್ತು ಸಾವಿನ ಭಯ - ಆತಂಕ...
ಸಮಾಜ ತೋರುವ ಅನುಕಂಪ...
ಅನುಕಂಪದೆಡೆಗೆ ಆಸೆ ಮತ್ತು ಕೋಪ...

ಅಸ್ವಸ್ಥ ದೇಹದಲ್ಲೂ ಕೆರಳುವ, ಧಗಧಗಿಸುವ ಬೆಂಕಿಯಂಥ ಕಾಮ - ಹೊರ ತೋರಲಾರದೆ, ಒಳಗಿನ ಒತ್ತಡ ತಡೆಯಲೂ ಆಗದಂತೆ ಕಾಡಿ ಒಳಗೇ ಸುಡುತ್ತದೆ...
ರಾತ್ರಿ ರೆಪ್ಪೆ ಮುಚ್ಚಿದ ಕೂಡಲೆ - ಹಗಲು ಕಣ್ಣು ಕಂಡ ಹೆಣ್ಣು ದೇಹಗಳ ಬೆತ್ತಲೆ ಬೆಕ್ಕಿನ ನಡಿಗೆ...
ಹಾಸಿಗೆಯಲ್ಲಿ ಅತೃಪ್ತ ಒಂಟಿ ಹೊರಳಾಟ...
ತೋಳ ತೆವಲಿಗೆ ದಿಂಬಿನೊಂದಿಗೆ ಶುಷ್ಕ ಸರಸ...
ಹಸ್ತ ಮೈಥುನದುತ್ತುಂಗದಲ್ಲಿ ಬೆವರಿಳಿದ ದೇಹಕ್ಕೆ ಶೀಘ್ರ ಸ್ಖಲನದ ಭಯ...
ಮಾರನೆಯ ಹಗಲೆಲ್ಲ ಒಳ್ಳೆಯವನಾಗುವ ಶಪಥ...
ರಾತ್ರಿ ಮತ್ತದೇ ಪುನರಾವರ್ತನೆ...

ಇವೆಲ್ಲ ಬೆರೆತು ನನ್ನ ಬಗೆಗೇ ನನಗೆ ಮೂಡುವ ವಿನಾಕಾರಣದ ಅಪರಾಧೀ ಭಾವ ಮತ್ತು ಅಸಹಾಯಕತೆಯಿಂದ ಮೂಡುವ ನಿಷ್ಪ್ರಯೋಜಕನೆಂಬ ಭಾವ...
ಇದು ಪ್ರತಿನಿತ್ಯದ ಏಳು - ಬೀಳು...

ನನ್ನೊಳಗೇ ಅಶಾಂತಿ, ಸುಖದ ಭಾವದ ಕೊರತೆ...
ಇನ್ನು ಸುತ್ತಲಿನವರಿಗೆ ಸುಖ ಕೊಡುವುದೆಲ್ಲಿಂದ...
ಇಂಥ ಮನಸ್ಥಿತಿಯಿಂದ ಪ್ರಾರಂಭದಲ್ಲಿ ಹೇಳಿದ ಮನಸ್ಥಿತಿಯೆಡೆಗೆ ಪಯಣ ಅಷ್ಟು ಸುಲಭ ಸಾಧ್ಯವಾ...???
ಹಸ್ತ ಮೈಥುನಕ್ಕೂ ಪಾಪಪ್ರಜ್ಞೆಯಿಂದ ಬಳಲುವ ಮನಸ್ಥಿತಿಯಿಂದ ಮೇಲೇರಿ ಸುತ್ತಲಿನ ಸಕಲರ ಸುಖದಲ್ಲೂ ಭಾಗಿ ಎಂಬ ತೃಪ್ತ ಭಾವದ ಬದುಕನ್ನು ಜೀವಿಸಬಲ್ಲ ಬದುಕುಗಳೆಡೆಗೆ ನನಗೆ ನಿಜಕ್ಕೂ ಒಂದು ಸಣ್ಣ ಮಧುರ ಹೊಟ್ಟೆಕಿಚ್ಚಿದೆ...
ಅಂಥ ಬದುಕುಗಳ ಗೆಳೆತನ ದಕ್ಕಿದರೂ ನನ್ನ ಬದುಕು ಸಾರ್ಥಕ...


"ನನ್ನ ಬೆಳಕು ನಾನಾಗುವುದು" ಹೇಗೆ...???
ಅರ್ಥವಾಗುತ್ತಿಲ್ಲ...