Tuesday, April 29, 2014

ಗೊಂಚಲು - ನೂರು + ಹದಿನೈದು.....

ಮತ್ತಿಷ್ಟು ಸಮ್ಮಿಶ್ರ ಭಾವಗಳು.....

ಗೆಳತೀ -
ಯಾರೂ ಪ್ರಶ್ನಿಸಬಾರದ, ಎಲ್ಲ ಪ್ರಶ್ನೋತ್ತರಗಳಾಚೆಯ ಮಮತೆಯ ಮಡಿಲು - ಅದು ನಿನ್ನ ಪ್ರೀತಿ...
---
ರತಿಯ ಸಖೀ -
ನಿನ್ನೊಂದು ಕಿರುಬೆರಳ ಸ್ಪರ್ಶ ಸಾಕಲ್ವಾ ನನ್ನ ಎಂಥ ನಿದ್ದೆಯನೂ ಹಾಳುಗೆಡವೋಕೆ...
ಬಾಕಿ ಉಳಿದ ಇರುಳೆಲ್ಲ ದೇಹ ವೀಣೆಯಲಿ ಮಿಡಿವ ಮನ್ಮಥ ರಾಗ...
---
ನಿನ್ನ ನೋವ ಸಮ್ಮುಖದಲ್ಲಿ ನನ್ನ ಸಾಂಗತ್ಯವಿದ್ದಾಗ ನಿನ್ನ ಕಣ್ಣಲ್ಲಿ ಜಾರೊ ಹನಿಗಳ ಆಯಸ್ಸು ಒಂದು ಘಳಿಗೆ ಕಡಿಮೆಯಾದರೆ – ನಿನ್ನ ನಗೆಯ ಸನ್ನಿಧಿಯಲ್ಲಿ ನನ್ನ ಜತೆಯಿದ್ದಾಗ ನಿನ್ನ ಆ ನಗು ಒಂದು ಕ್ಷಣ ಹೆಚ್ಚು ಜೀವಿಸಿದರೆ ಅಲ್ಲಿಗೆ ಈ ಗೆಳೆತನಕೆ ಬಹುದೊಡ್ಡ ಸಾರ್ಥಕ್ಯ ದಕ್ಕಿದಂತೆ...
ನಗುವನ್ನು ಯಾರಲ್ಲಿ ಬೇಕಾದರೂ ಹಂಚಿಕೊಳ್ಳಲಾದೀತು – ನೋವನ್ನು ಹಂಚಿಕೊಳ್ಳಲು ಮಾತ್ರ ತನ್ನವರೆಂಬ ಆತ್ಮೀಯ ಭಾವ ಬೇಕು...
ಈತನೆದುರು ಕಣ್ಣ ಹನಿ ಕೂಡ ಸಹನೀಯ ಅನ್ನಿಸುವ ಭರವಸೆ ಬೇಕು...
ನೋವ ಹಂಚಿಕೊಳ್ಳಲಾರೆಯಾದರೆ (ಆ ಭರವಸೆ ಮೂಡಿಲ್ಲದಿದ್ದಲ್ಲಿ) ‘ಗೆಳೆಯ’ ಎಂಬ ಪದದ ಮೊದಲು ‘ಆತ್ಮೀಯ’ ಎಂಬ ಪದ ಸೇರಿಸಬೇಡ...
ಆತ್ಮೀಯತೆ ಅಂದರೆ ಬೇಲಿಯ ಹಂಗಿಲ್ಲದ “ಮನದ ಭಾವ ಸಂವಹನ...”
ಅದನ್ನು ಕೇವಲ ನಾಲಿಗೆಯ ಪದವಾಗಿ ಕೇಳುವುದು ಸಹನೀಯವೆನಿಸದು ನನಗೆ...
---
ಸಾವಿಗಿಂತ ತೀವ್ರವಾಗಿ ಕಾಡುವ ಕೆಲ ಸತ್ಯಗಳನ್ನು ಅರಗಿಸಿಕೊಳ್ಳಲಾಗದೇ ಹೊರಳಾಡುವ ನಿದ್ದೆ ಸತ್ತ ಸುದೀರ್ಘ ಒಂಟೊಂಟಿ ಅನಾಥ ಇರುಳಲ್ಲಿ ವಿಶಾದದ ನಗುವ ಬೀರುತ್ತದೆ – ಹೊಟ್ಟೆಯಲ್ಲೇ ಸತ್ತ ಮಗುವ ಹೆತ್ತ ಅಮ್ಮನಂಥ ನನ್ನ ಮನಸು...
---
ನನ್ನೀ ಸೋಲು ನನ್ನ ದೌರ್ಬಲ್ಯದಂತೆ ಕಂಡೀತು... 
ಆದ್ರೂ ಈ ಸೋಲಿನಲ್ಲೂ ನನ್ನೀ ಬದುಕಿಗೆ ಖುಷಿಯಿದೆ ಎಂಬ ಅರಿವು ದಕ್ಕಿದ ಮೇಲೆ ಮನಸಿಂದ ಇಷ್ಟಪಟ್ಟೇ ಸೋತು ಮಂಡಿಯೂರಿದ್ದೇನೆ - ವಿನಾಕಾರಣದ ಪ್ರೀತಿಯ ಮಡಿಲುಗಳೆದುರು, ಬದುಕ ಅಗಾಧ ಕರುಣೆಯೆದುರು ಮತ್ತು ಕೊಟ್ಟ ಕೊನೆಯಲ್ಲಿ ನಿಷ್ಕರುಣಿ ಸಾವಿನೆದುರು... 
ಪೊರವ ಹೊಣೆಯೀಗ ಅವುಗಳದ್ದೇ ಮತ್ತು ಅವುಗಳದ್ದು ಮಾತ್ರ...
---
ಮೇಲೆ ನಗೆಯ ನೀರ್ಗಲ್ಲು – ಅದರಡಿಗೆ ಅಂತರ್ಗತ ನೋವ ಗಂಗೆಯ ಪ್ರವಾಹ...
ಯಾವುದು ಸತ್ಯ, ಯಾವುದು ಮಿತ್ಯ..?
ಎರಡೂ ನಿರಂತರ ಎಂಬುದು ಆಂತರ್ಯದ ಕಟು ಸತ್ಯ...
---
ಬದುಕ ಕರುಣೆ ತಪ್ಪಿದ ಮೇಲೆ ಅರಿವಾಗುತ್ತಿದೆ ಅಷ್ಟಿಷ್ಟು – ನಾ ಒಂಟಿಯಾಗಿ ಸವೆಸಬೇಕಾದ ಈ ಬದುಕ ದಾರಿಯಲಿ ಎದುರಾಗೋ ಎಷ್ಟೋ ಪ್ರಶ್ನೆಗಳಿಗೆ ಒಳಗುದಿಯ ಮುಚ್ಚಿಟ್ಟು ನಾ ಬೀರಲೇಬೇಕಾದ, ಎಲ್ಲರಿಂದ ಚಂದ ಅಂತ ಹೊಗಳಿಸಿಕೊಳ್ಳುವ ನನ್ನ ದೊಡ್ಡ ನಗುವೊಂದೇ ಹೆಚ್ಚು ಸ್ಪಷ್ಟ ಉತ್ತರ...
---
ಮನಸಿಗೂ ಪ್ರಜ್ಞೆಗೂ ಪ್ರತಿದಿನವೂ ಶೀತಲ ಸಂಘರ್ಷ...
ಅಂತಿಮವಾಗಿ ಪ್ರಜ್ಞೆಯನ್ನೇ ಗೆಲ್ಲಿಸಬೇಕಾದ್ದು ಈ ಬದುಕಿನ ಅಸಹಾಯ ಸೋಲು...
ಚಂದ್ರಂಗೂ ಮೋಡಕ್ಕೂ ನಡುವೆ ಸಣ್ಣ ಜಗಳ...
ಚಂದ್ರ ನನ್ನ ಅತೀ ಆತ್ಮೀಯ ಸ್ನೇಹಿ – ಮೋಡ ಕರಗಿಯೇ ಮಳೆ ಮತ್ತು ಮಳೆಯೆಂದರೆ ಜೀವದಾಯಿನಿ...
ಯಾರ ಪಕ್ಷ ವಹಿಸಲಿ..?
ಮನಸಾ ಅಥವಾ ಪ್ರಜ್ಞೆಯಾ..??
---
ಪಡೆದುಕೊಂಡದ್ದೇ ಭ್ರಮೆಯಾಗಿರುವಾಗ ಕಳೆದುಕೊಂಡೆ ಎಂಬುದು ಸತ್ಯ ಹೇಗಾದೀತಲ್ಲವಾ...
ಎದೆಯ ಗೂಡಲ್ಲಿ ಕೂತ ಅನಾಥ ಭಾವಗಳೆಲ್ಲ ತೀರದ ದಾಹದಿಂದ ಚೀರುತ್ತವೆ...
ಅವಕೆಲ್ಲ ಒಲವ ಹನಿಯನುಣಿಸಿ ಸಲಹುವ ನದಿಯಷ್ಟೇ ಅಲ್ಲ ನದಿಯ ಒರತೆಯ ಮೂಲವೇ ಬತ್ತಿ ಹೋದಂತಿದೆ...
ಹೊಸ ನದಿಯೆಡೆಗೆ ವಲಸೆ ಹೋಗೋಣವೆಂದರೆ ಮನಸ ಹಕ್ಕಿಯ ರೆಕ್ಕಯೊಂದೇ ಅಲ್ಲ ಪುಕ್ಕಗಳೂ ಉದುರಿ ಹೋಗಿವೆ...
---
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, April 12, 2014

ಗೊಂಚಲು - ಒಂದು ಸೊನ್ನೆ ಒಂದು ನಾಕು.....

ಹೀಗೆಲ್ಲ ಕಾಡುತ್ತವೆ.....

“ಜಗದೆಲ್ಲ ಮಹಾಕಾವ್ಯಗಳಿಗಿಂತ ನನ್ನದೇ ಡೈರಿಯಲಿ ನಾ ಬರಕೊಂಡ ನನ್ನ ಬದುಕಿನೆಡೆಗಣ ಎರಡು ಪ್ರಾಮಾಣಿಕ ಸಾಲು ದೊಡ್ಡ ಕಾವ್ಯ ಅಂತನ್ನಿಸುತ್ತೆ ನಂಗೆ...
ಕಾರಣ –
ಬದುಕಿಗಿಂತ ದೊಡ್ಡ ಕಾವ್ಯ ಇದೆಯಾ..??
ಡೈರಿಯ ಆ ಎರಡು ಸಾಲಲ್ಲಿ ನನ್ನದೇ ಬದುಕ ಕಾಣ್ಕೆ (ಕಾಣಿಕೆ) ಇದೆ...”

ನನ್ನ ಮನಸೇ -
"ನಿನ್ನಲ್ಲಿ ಎಲ್ಲಾರೂ ಇರಬಹುದು ನೀನು ಎಲ್ಲರಲ್ಲೂ ಇರಲಾಗದು ಎಂಬ ಸತ್ಯ ಗೊತ್ತಿದ್ದೂ, ಎಲ್ರೂ ಅವರವರು ಎಲ್ಲೆಲ್ಲಿ ಇಟ್ಟಿದಾರೋ ಅಲ್ಲಿ ಇರಲಾಗದೇ ಸುಮ್ಮನೇ ನನಗಿಲ್ಲೇ ಸ್ಥಾನಬೇಕಂತ ಬಡಿದಾಡೋದರ ಒಳಗುಟ್ಟೇನು....
ಮತ್ತು
ಆತ್ಮೀಯರಿಗೆಲ್ಲಾ ನಾನಿಲ್ಲದೂರಲ್ಲೂ ಖುಷಿಯಾಗಿರಿ ಅಂತ ಖುಷಿಯ ಆಶಿಸೋ ನೀನು ಅಮಿತವಾದ ಖುಷಿಗೋಸ್ಕರವೇ ನಿನ್ನಿಂದ ಅವರು ದೂರಾದಾಗ ಯಾಕೆ ಕಂಗಾಲಾಗ್ತೀಯೋ....
ಅರಿವಾಗುತ್ತಿಲ್ಲ ನಿನ್ನ ಮಾಯಕಗಳು..."

"ಇರುಳಿಗೆ ಬಣ್ಣ ಬಂದಂತಿದೆ...
ಕನಸ ಹೋಳಿಯ ಸಂಭ್ರಮದಲ್ಲಿ ನಿದ್ದೆಗಿನ್ನೆಷ್ಟು ಕಾಲ ರಜೆಯೋ...
ಆಗಿದ್ದಿಷ್ಟೇ –
ನಿನ್ನೆ ಮುಸ್ಸಂಜೆಯಲಿ ಆ ದಾರಿ ತಿರುವೊಂದರಲಿ ಅವಳ ಕಿರುಬೆರಳು ನನ್ನ ಕಿರುಬೆರಳೊಂದಿಗೆ ಜತೆ ನಡೆವ ಮಾತಾಡಿತು...
ಕಂಗಳ ಆರ್ದ್ರತೆ ಅದಕೆ ಸಾಕ್ಷಿಯಾಯಿತು..."

ಗೆಳತೀ -
ಕಣ್ಣಲ್ಲಿ ಕಣ್ಣಿಡದೆ, ಕನಸುಗಳೊಂದಿಷ್ಟು ಅದಲುಬದಲಾಗದೇ, ನಾನಿಲ್ಲಿ ನೀನಲ್ಲಿ ನಮ್ಮಲ್ಲಿ ನಾವಿರದೇ, ಅಕಾರಣವೆಂಬಂತೆ ಮಿಡಿವ ಕಣ್ಣ ಹನಿಗೆ ಸಿಗದ ಅರ್ಥ ಹುಡುಕುತ್ತ ಸಂಜೆಗಳ ಕೊಲ್ಲುವುದು ಅದೇನು ಚಂದವೇ ....
ನೆನಪುಗಳೊಂದಿಗೆ ಒಂಟಿ ನಡಿಗೆ ಸಾಕಾಗಿದೆ - ಕಿರುಬೆರಳ ಹಿಡಿದು ನಾಕು ಹೆಜ್ಜೆ ಜೊತೆ ನಡೆವ ಬಾ...
ಸಂಜೆಯಿದು ಶೃಂಗಾರದ, ಜೊತೆಗೂಡಿ ಗೂಡ ಕಟ್ಟುವ, ಬದುಕ ಸವಿ ಬೆಲ್ಲವಾಗಿಸುವ ಕನಸುಗಳ ಸಗ್ಗವಾದೀತು...

ಒಲವೇ ನೀನೊಂದು ಮಹಾಸಾಗರ...
ನಿನ್ನ ಸೇರಬೇಕೆಂದರೆ ಪ್ರೀತಿಯ ನದಿಯಾದರೂ ಆಗಬೇಕಿತ್ತು ನಾ...
ಆದರೆ ನಾನೊಂದು ಪುಟ್ಟ ಕೊಳ...
ನಾ ನಿನ್ನ ನೇರವಾಗಿ ಸೇರಬಲ್ಲ ಶಕ್ತಿ ಮತ್ತು ಮಾರ್ಗವೇ ನನಗಿಲ್ಲ...
ಆವಿಯಾಗಿ ಮೋಡ ಸೇರಿ ಹನಿಯಾಗಿಯಾದರೂ ನಿನ್ನ ಸೇರಲಾದೀತಾ...
ಬಯಕೆಯ ಮಿಡಿತ ಮನದಲ್ಲಿ...
ಅಲ್ಲೂ ಗಾಳಿಯ ಬೆಂಬಲ ಸಿಕ್ಕಿ ಮೋಡ ನಿನ್ನ ಮೇಲೆಯೇ ಹನಿಯಾಗಿ ಸುರಿವುದಕ್ಕಾಗಿ ಪ್ರಾರ್ಥಿಸಬೇಕಲ್ಲವಾ ನಾನು... ನಾನೆಂಥ ನಿಸ್ಸಹಾಯಕ ಜೀವಿ ನೋಡು...
ಆದರೂ ನಿನ್ನೆಡೆಗೆ ನನ್ನದು ಹಿಂಗಲಾರದ ತುಡಿತ ನಿರಂತರ...


ಗೊತ್ತು – ಅಂದ, ಗಂಧಗಳಿಂದ ಶೋಭಿಸೋ ಹೂಗಳ ಎದುರು ನಾರು (ದಾರ) ಕ್ಷುದ್ರವೇ...
ಆದರೆ ಹೂಗಳು ಮಾಲೆಯಾಗಿ ಹೆರಳು, ಕೊರಳುಗಳಲಿ ಶೋಭಿಸುವಲ್ಲಿ ನಾರಿನುಸಿರ ಸಾರ್ಥಕ್ಯ...
ನಾರಾದರೂ ಆಗಬಹುದಿತ್ತೇನೋ ಬಯಕೆ ಮನಕೆ...
ಹಾಗಾದರೂ ಹೂಗಳ ಸಂಸರ್ಗ ದಕ್ಕುವಂತಿದ್ದಿದ್ದರೆ...

ನೆನಪು ಪ್ರತಿಕ್ಷಣದ ಊಟ ನನಗೆ...
ಅಮೂರ್ತ ಶಕ್ತಿ ನಂಗೆ ಇಂದೀಗ ಆ ನೆನಪುಗಳು...
ನಿನ್ನೆ ಜತೆಗಿದ್ದ ಊಟ ನಾಳೆಯೂ ಜತೆಗಿದ್ದೇ ಇರುತ್ತೆ... 
ಯಾರಿಲ್ಲದ ಊರಲ್ಲೂ ಅದು ಜತೆಗಿದ್ದೇ ಇರುತ್ತೆ...
ನಾನಿಲ್ಲದ ಊರಲ್ಲೂ ಇದ್ದೀತು ಉಳಿದವರಲ್ಲಿ...

ಮಾತಂದ್ರೆ ಸಿಟ್ಟು, ಮಾತಂದ್ರೆ ವಾಕರಿಕೆ, ಮಾತೆಂದರೆ ಅಸಹ್ಯ ಅಂತಾರೆ...
ಅರೇ ಮಾತೆಂದರೆ ಪ್ರೀತಿ ಕೂಡ ಅಲ್ಲವಾ...
ಇಂದು ಸಹ್ಯವೆನಿಸುತಿಲ್ಲದ ಇಂಥದೇ ಮಾತುಗಳು ಅಂದು ಬಂಧವ ಬೆಸೆದ ಕೊಂಡಿ ಕೂಡ ಹೌದು ಅನ್ನಿಸುವಾಗ ಸಣ್ಣ ವಿಷಾದವೊಂದು ಮೂಡುತ್ತೆ...
ಹೌದು ಮೌನ ಕೂಡ ಇದೆಲ್ಲ ಆಗಬಹುದು...
ಆದರೆ ಮೊದ ಮೊದಲು ಬಂಧ ಬೆಸೆಯಲು ಮಾತೇ ಮೂಲಾಧಾರ...
ಮೌನದ ಮಾತು ಅರ್ಥವಾಗದ ನನಗಂತೂ ಮಾತೇ ಮಾಣಿಕ್ಯ...
ಅದು ಈವರೆಗಿನ ಅನುಭವ...
ನನ್ನ ಮಟ್ಟಟಿಗೆ ಇಷ್ಟಾದರೂ ಬದುಕ ಪ್ರೀತಿ ದಕ್ಕಿದ್ದು ಇದೇ ಮಾತಿಂದ...
ಅದಕೇ ಮಾತೆಂದರೆ ಬರೀ ಪ್ರೀತಿ ನಂಗೆ...
ಕಹಿಯೆಲ್ಲ ಕರಗಿ ಹೋಗಿ ಬಂಧವೊಂದು ಮರಳಿ ಕೂಡುವುದಾದರೆ ಮಾತಿನ ಜಗಳ ಕೂಡ ಹಿತವೇ ಅನ್ನುತ್ತೇನೆ ಅದಕೇ...
ಮೌನ ನನ್ನೊಳ ಭಾವವಾಗಿ ಸೇರಿದ ಸುದ್ದಿ ಎಲ್ಲೂ ಸುದ್ದಿಯಾಗದಿರಲಿ...
ಕಾರಣ ಮೌನವೆಂದರೆ ಸಾವು ನಂಗೆ...

ಅದ್ಯಾವುದೋ ದಾರಿಯ ತಿರುವಿನಲ್ಲಿ ಅವಳ ಆ ಮೈಮಾಟ ನನ್ನ ಕಣ್ಣಲ್ಲಿ ಇಷ್ಟಿಷ್ಟೇ ಚಿತ್ರವಾಗಿ ಪಡಿಮೂಡುವ ಹೊತ್ತಲ್ಲಿ ಅವಳ ಅಪರಿಚಿತತೆ ಮನವ ಚುಚ್ಚುತ್ತದೆ...
ಜಂಗಮವಾಣಿಯ ಮೂಲಕ ಕಿವಿಯಲಿ ರಿಂಗಣಿಸುತಿರೋ ಶೃಂಗಾರ ಗೀತೆಯಲೂ ಸಣ್ಣ ವಿಷಾದ ಭಾವ ಮತ್ತು ಪೋಲಿ ಮನಸಲ್ಲಿ ಇಷ್ಟೇ ಇಷ್ಟು (ಅಭಾವ) ವೈರಾಗ್ಯ ನುಸುಳಿಬಿಡುತ್ತದೆ... ;)

ಬೇರೆ ಬೇರೆ ನೆಲಗಳಲ್ಲಿ ಹತ್ತಾರು ಬಾರಿ ಸೋತ ಮೇಲೂ ಮತ್ತೆ ಮತ್ತೆ ಸೋಲಲೆಂದೇ ಹೂಡುವ ಯುದ್ಧವಿರಬಹುದಾ ಪ್ರೇಮವೆಂದರೆ...
ಮನಸು ಆ ಯುದ್ಧದ ಶಾಶ್ವತ ಅವಿರೋಧ ದಂಡನಾಯಕ...
ಈ ಮನಸೋ –
ವಾದ – ವಿವಾದ – ವಿಮರ್ಶೆ – ವಿವೇಚನೆ - ವಾಸ್ತವ ಪ್ರಜ್ಞೆ - ಅದೂ – ಇದೂ – ಹಾಳು – ಮೂಳು ಎಲ್ಲವನ್ನೂ ಬಡಿದು ಬಾಯಿಗಿಟ್ಕೊಂಡು ತನ್ನಿಚ್ಛೆಯ ತೀರಿಸಿಕೊಳ್ಳೋ ಮಹಾ ಮರ್ಕಟ...

ಸುತ್ತ ಸಮುದ್ರಾನೇ ಇದೆ – ಗುಟುಕು ದಾಹವೂ ನೀಗಲಾರದು...
ಶರಧಿಯ ನಡುವೆಯ ಬಂಡೆ ಮೇಲೆ ಕೂತು ಒಂದೇ ಒಂದು ಹನಿ ಮಳೆಗಾಗಿ ಹಂಬಲಿಸೋ ಚಾತಕಪಕ್ಷಿಯ ಬವಣೆ ನನ್ನೀ ಮನಸು...
ಪಕ್ಷಿಯಾಗುವ ಬದಲು ಆ ಬಂಡೆಯಾಗಿರುತ್ತಿದ್ದಿದ್ದರೆ...
ದಾಹ – ಮೋಹಗಳ ಹಂಬಲದ ಹಂಗಿಲ್ಲದೇ ಬದುಕಿಬಿಡಬಹುದಿತ್ತಲ್ಲವಾ...
ಬಂಡೆಯ ನಿರ್ಲಿಪ್ತಿಯ ಮೇಲೆ ಬಹಳವೇ ಪ್ರೀತಿಯಾಗುತ್ತಿದೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, April 1, 2014

ಗೊಂಚಲು - ಒಂದು ಸೊನ್ನೆ ಒಂದು ಮೂರು.....

ಎಲ್ಲಾ ಮನಸಲ್ಲಿ.....
(ಚೂರು ಚೂರು ಮಾತುಗಳು - ಹೇಗಾದರೂ ಹೊಂದಿಸಿಕೊಳ್ಳಿ...)

ಪ್ರೇಮದ ಮೃದು ಪಾದದ ಧೂಳ ಕಣವೊಂದು ಎದೆಯ ತಾಕಿತು - ನಗುವೊಂದು ಗೂಡು ಕಟ್ಟಿದೆ...

ಹಸಿ ಬಿಸಿ ಉಸಿರಲ್ಲಿ ಹಸೆಮಣೆಯ ಹಾಡು...

ಹೆರಳ ಕೇದಗೆಯ ಘಮಲು – ನಾಭಿಯಾಳದಲೇನೋ ಹುಚ್ಚು ಅಮಲು...

ಕನಸು ಕಣಿ ಹೇಳಿದೆ...

ನೆನಪೊಂದೇ ಈಗೀಗ ಪ್ರತಿ ಕ್ಷಣದ ಊಟ ಒಳಗಿನ ತೀರದ ಹಸಿವಿಗೆ...

ಕನಸುಗಳು ಹಾದಿ ತಪ್ಪದಿರಲು ನೆನಪುಗಳ ಸರ್ಪಗಾವಲು - ಮತ್ತದೇ ಹಾದಿಯ ತುಳಿಯದಿರಲು ಕೂಡ...

ನೀನಂದಂತೆ ನೀ ಮರಳಿ ಬರುವ ಭರವಸೆಯಲಿ ಕಾಯುತ್ತಲೇ ಇರುತ್ತೇನೆ – ಬರುವುದೊಂದಿಷ್ಟು ತಡವಾದರೆ ಸಮಾಧಿಗೆ ಹೂವಿಡುವಾಗ ಅಳಬೇಡ ಅಷ್ಟೇ...

ಎಲ್ಲೆಲ್ಲಿ ತಿರುಗಿದರೂ ಮತ್ತಲ್ಲೆ ತಲುಪುವೆ ಎಂಬುದು ಎಷ್ಟು ಸತ್ಯ..!! ಆ ದಿನಗಳಲ್ಲಿ ಒಬ್ಬಂಟಿಯಾಗಿ ಬಂದು ಕೂರುತ್ತಿದ್ದ ಅದೇ ಜಾಗದ ಕಲ್ಲುಚಪ್ಪಡಿ ಮೇಲೆ ಇಂದು ಮತ್ತೆ ಕೂತಿದ್ದೇನೆ. ಅಂದಿನಂತೆಯೆ ಒಂಟಿಯಾಗಿ ಜನಜಾತ್ರೆಯ ನೋಡುತ್ತಾ. ಅಂದಿನ ಆ ನಾನು ನಂಗೆ ಮತ್ತೆ ಸಿಕ್ಕೇನಾ... 
ತಿರುಕನಲ್ಲೀಗ ಹಿಮ್ಮುಖ ಚಲನೆಯ ತೀವ್ರ ಬಯಕೆ...

ಖಾಲಿಯಾಗಿದೆ ಮನಸು...
ಇರುಳೊಂದರ ಮಟ್ಟಿಗಾದರೂ ಒಳತೂರಿ ಬರಬಾರದೇ ಒಂದಾದರೂ ಹೊಸ ಕನಸು...

ಕೊಟ್ಟದ್ದಕ್ಕೂ, ಕಿತ್ತುಕೊಂಡಿದ್ದಕ್ಕೂ ಒಂದು ಕಾರಣವನೂ ಕೊಡದೇ ಕಾಡಿಸೋ ಈ ಬದುಕಿನೆಡೆಗೆ ನಂಗೆ ತೀವ್ರ ಬೇಸರ, ಕೋಪ ಮತ್ತು ನಿರಂತರ ಪ್ರೀತಿ...

ನನ್ನ ನಾ ಗೆಲ್ಲಲು ನನ್ನ ಮನೋಬಲ ನಂಗೆ ಆಧಾರ...
ಆದರೆ ಪ್ರೀತಿಯ ಗಳಿಕೆ ಎಂಬುದು ಪರರ ಮನಸ ಗೆಲ್ಲೋ ಆಟ..
ಅಲ್ಲಿ ನನ್ನ ಮನೋಬಲ ಬಲವನೆಲ್ಲ ಕಳಕೊಂಡ ಮೂರು ಕಾಸಿಗೂ ಇರದ ಕಸವೂ ಆದೀತು...

ಪ್ರೀತಿ ಹರಿವ ನದಿಯಂತೆ...
ಸಮುದ್ರವ ಸೇರೋ ಹಂಬಲವ ಬಿಟ್ಟರೆ ಹರಿವು ಇನ್ನಷ್ಟು ಸರಾಗವೇನೋ ಅನ್ನಿಸುತ್ತೆ...
ಆದ್ರೆ ಸಮುದ್ರದ ಸೆಳೆತವ ಬಿಡೋದು ಹೇಗೆ - ಬಿಟ್ಟುದೇ ಆದರೆ ಹರಿವಿಗಿರೋ ಉದ್ದೇಶ ಕಳೆದುಹೋಗುತ್ತೆ - ಉದ್ದೇಶ ಇಲ್ಲದಲ್ಲಿ ತುಡಿತ ಎಲ್ಲಿಯದು... 

ನನ್ನದಲ್ಲದ್ದು, ನನ್ನೋಳಿರದೇಹೋದದ್ದು ಮತ್ತು ನನಗೆಂದಿಗೂ ಸಿಗಲಾರದು ಎಂಬುದರೆಡೆಗೆ ನಂಗೆ ತುಡಿತ ಜಾಸ್ತಿಯೇ ಎಂದಿಗೂ...
ಅದಕೇ ನನ್ನಲ್ಲಿ ಪ್ರೀತಿಯೆಡೆಗೆ ಆ ಪರಿ ದಾಹವಿದ್ದೀತು...
ತಣಿಯದ ದಾಹವೆಂಬ ಅರಿವಿದ್ದೂ ಸದಾ ಬರೀ ಹುಡುಕಾಟ...

ಬೆಳಗೆಂದರೆ ಕವಿನಾಮದಂಕಿತವಿಲ್ಲದೆ ಹುಟ್ಟಬೇಕಾದ ಹೊಸ ಕವಿತೆಯ ಮೊದಲ ಸಾಲು...

ಬೆಳಗೆಂದರೆ ಗಲಗಲ – ಒಳಗೂ, ಹೊರಗೂ...

ಪ್ರೀತಿ – ಪರವಶತೆ – ಮೌನ = ಬೆಳಗು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)