Tuesday, July 18, 2017

ಗೊಂಚಲು - ಎರಡ್ನೂರಾ ಇಪ್ಪತ್ತಾರು.....

ಏನೋ ಅಷ್ಟಿಷ್ಟು..... 

ಸಾವನ್ನು ಜೀವಿಸುವ ಭಾವಾನುಭಾವ ಸಂಗ್ರಹ ಈ ಬದುಕು...
ನನ್ನೊಳಗಣ ಹಗಲ ಮುಖ ಹಾಗೂ ಇರುಳ ಮುಖದ ನಡುವಿನ ನಾಡಿ ನುಡಿಯ ಹಾಡು ವಿರೂಪಗೊಂಡು ಆತ್ಮಾನುರಾಗ ತೀವ್ರತೆ ಕಳಕೊಂಡ ಹೊತ್ತು ಬದುಕೇ ಸಾವು...
!!!#!!!

ಪಡೆದ ಪ್ರೀತಿಗೆ ಗೌರವ ಸಲ್ಲಿಸುವುದೆಂದರೆ ಕೊಟ್ಟವರಿಗೆ ತಕ್ಷಣಕೊಂದು ಧನ್ಯವಾದದ ಆಭಾರ ಮನ್ನಣೆ ಅರ್ಪಿಸಿ ಖುಷಿಪಡಿಸಿ ಮರೆಯುವುದಾಗಲೀ ಅಥವಾ ಅಲ್ಲಲ್ಲಿ ಆಗೀಗ ಕೊಟ್ಟವರ ಕೊಡುಗೈಯ್ಯನ್ನು ಹಾಡಿ ಹೊಗಳಿ ಮೆರೆಸುವುದಾಗಲೀ ಅಲ್ಲ...
ಆ ಪ್ರೀತಿ ತುತ್ತಿಟ್ಟ ಹೃದಯಕೆ ಇನಿತಾದರೂ ಪ್ರೀತಿಯನೇ ಬಡಿಸಬಹುದಾದ ಸಣ್ಣ ಅವಕಾಶಕೂ ಹಸಿ ಭಾವದಿ ಕಾಯುವುದು - ಕಾಯುತ್ತ ಕಾಯುತ್ತ ನಾವು ಪಡೆದ ವಲಯದಿಂದಾಚೆಯೂ ಹಿಗ್ಗಿ ಎಲ್ಲೆಲ್ಲಿ ಬೇಕಾದಲ್ಲಲ್ಲಿ ಅಷ್ಟಿಷ್ಟು ಹಂಚುತ್ತಾ ಪ್ರೀತಿ ಬಿಳಲನ್ನು ವಿಸ್ತರಿಸುತ್ತಾ ಸಾಗುವುದು...
ಬಯಲಲ್ಲಿ ಬಯಲಾಗಿ ತೆರೆದ ತೋಳ ತುಂಬ ಗಾಳಿಯು ಕದ್ದ ಗಂಧ ಪ್ರೀತಿ...
ಪಡೆದ ಕಣ್ಣಲ್ಲಿ ಕೊಟ್ಟ ಎದೆಯ ಮೃದು ಮಿಡಿತವು ಬಿಡಿಸಿದ ಬಣ್ಣದ ಬಿಲ್ಲು ಪ್ರೀತಿ...
#ಪ್ರೀತಿಗೆ_ಪ್ರೀತಿಯೊಂದೇ_ಪ್ರೀತಿಯ_ಉಡುಗೊರೆ...
!!!#!!!

ಕತ್ತಲ ಕಣ ಕಣದಿ ಕದ್ದು ಕುದಿವ ಸುಖದ ಹಪಹಪಿ...
ಬೆಳಕಿಗೋ ಎಲ್ಲವನೂ ಒಡೆದು ತೋರುವ ಹಠ...
ಕತ್ತಲ ಬೀಜದ ಚಿಪ್ಪೊಡೆದು ನಕ್ಕ ಬೇರು - ಚಿಗುರನು ಸಂಧಿಸುವ, ಬಂಧಿಸುವ ತಂತುವಿನಲಿ ಹೊಚ್ಚಿಹುದು ಕತ್ತಲು ಬೆಳಕಿನ ಅನುಸಂಧಾನ...
#ಅಜ್ಞಾನಿಯ_ವಿಜ್ಞಾನ...;)
!!!#!!!

ಸಾವು, ನೋವಿನ ಸನ್ನಿಧಿಯಲ್ಲಿ ಕೆಟ್ಟ ಮಾತಾಡಬಾರದು ಅನ್ನೋದು ಬದುಕಿನ ಸಹಜ ಸೌಜನ್ಯ...
ಸಾವು, ನೋವುಗಳು ಕೂಡಾ ಸುಳ್ಳಿನ ಅಥವಾ ಸೋಗಿನ ಪರವೇ ನಿಂತಂತಾಗೋದು ನಿಜದ ವಿಷಾದ...
ಸತ್ಯಕ್ಕೆ ಶ್ರೇಷ್ಠತೆಯ ಗುಡಿ, ಆದರ್ಶದ ಬೀಗ, ಪವಿತ್ರತೆಯ ಕಾವಲು, ಸೌಜನ್ಯದ ಸಾಷ್ಟಾಂಗ...
ಬದುಕಿನ ಬಾಯಿಗೆ ಸುಳ್ಳಿನ ಬಿಸಿಬಿಸಿ, ರುಚಿರುಚಿ ಕೂಳು...
!!!#!!!

"ನಗುವಿಗೆ ತೂಕವಿಲ್ಲ, ನೋವ ಹಿಮ ಕರಗುವದೇ ಇಲ್ಲ...
ಇಂತಿಪ್ಪಲ್ಲಿ ಸಾವಿನಷ್ಟು ಸುಖವಿಲ್ಲ ಬದುಕಿಗೆ... 
ಎದೆಯ ಅಭಿಮಾನ ಅಸಹಾಯವಾಗೋಕೂ ಮುಂಚೆ ಉಸಿರು ತಂಪಾಗಿಬಿಡಬೇಕು..."
  ___ನೋವ ಹಾದಿಯ ಧೂಳು ಮೆತ್ತಿದ ಕಣ್ಣ ಬಿಂದುವಿನ ಭಾರ ಭಾರದ ಮಾತು ಕಿವಿಯ ಸುಡುತಿದೆ...
!!!#!!!

ರಂಗಸ್ಥಳದ ಆವಾಹಿತ ಭಾವಕ್ಕೆ ಕಣ್ಣು ಕರಗಿದಷ್ಟು ತೀವ್ರವಾಗಿ ಕಣ್ಣೆದುರಿನ ಬದುಕಿನ ವಾಸ್ತವತೆಗೂ ಮನಸು ಆರ್ದ್ರವಾಗಿ ಸ್ಪಂಧಿಸಿದ್ದಿದ್ದರೆ ನಾನೂ ಒಂಚೂರು ಮನುಷ್ಯನಾಗಬಹುದಿತ್ತೇನೋ...
#ನಾಟಕೋತ್ಸವ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, July 14, 2017

ಗೊಂಚಲು - ಎರಡ್ನೂರಾ ಇಪ್ಪತ್ತೈದು.....

ಮಳೆ - ಬಣ್ಣ - ಅವಳು - ಕಡಲು.....

ಹೇ ಕಪ್ಪು ಹುಡುಗೀ -
ಅಲೆ ತಲುಪದ ತೀರದಲ್ಲಿ ನಿನ್ನ ಹೆಸರ ಬರೆಯ ಹೋದೆ - ಕರಿಗಪ್ಪು ಹಸಿ ಮೋಡವೊಂದು ಒಳಗೊಳಗೇ ನಕ್ಕಿತು...

ಜೊಳ್ಳು ಬೀಜವನ್ನು ಗೊಬ್ಬರ ಗುಂಡಿಯಲಿ ಹೂತರೂ ಆಗೋದು ಮಣ್ಣೇ...

ಹೊರಗೆ ಆರ್ಭಟದ ಗಲಗಲ... 
ಆಳಕಿಳಿದಷ್ಟೂ ಕ್ರುದ್ಧ ಮೌನ...
ಎಂಥ ಮಳೆಗೂ ತುಂಬದ ಪಾತ್ರ...
ಗಾಳಿಯಲೆಗೆ ನೀರಲೆಯ ಸಾತತ್ಯ...
ಈ ಮನಸೂ ಆ ಕಡಲಂತೆಯೇ - ಒಳ ಹೊರಗಿನ ತಿಕ್ಕಾಟದಲ್ಲಿ, ಎಂದೂ ತುಂಬದ ಖಾಲಿತನದಲ್ಲಿ...
ವ್ಯತ್ಯಾಸ ಇಷ್ಟೇ - ಕಡಲು ತನ್ನದಲ್ಲದ್ದನ್ನು ದಡಕೆ ದೂಡಿ ತನ್ನೊಳಗೆ ಗುರುತುಗಳನುಳಿಸಿಕೊಳ್ಳದೇ ತಾನು ತಾನಾಗಬಲ್ಲದು, ಆದರೆ ಈ ಮನದೆ ಎಷ್ಟೇ ಹಳತಾದರೂ ನೆನಪುಗಳ ಗಾಯ ಮಾಯಲಾರದು...
ಸಾವಿರ ನದಿಗಳ ಸಿಹಿ ನೀರಿಗೂ ತನ್ನ ತನದ ಉಪ್ಪು ಬೆರೆಸುವ ಕಡಲ ಕಲೆ ಮನಕೆ ಸಿದ್ಧಿಸುವುದೇ ಇಲ್ಲ...

ತುಂಟ ಗಾಳಿ ಅಲೆಯೊಂದು ಸುಳಿಸುಳಿದು ಬಳಿ ಬಂದು ನಿನ್ನ ಇನಿದನಿಯಲಿ ಎನ್ನ ಹೆಸರನು ಉಸುರಿದೆ - ಕಂಗಳಿವು ನಿನ್ನನಲ್ಲೆಲ್ಲೋ ಹುಡುಕಿವೆ...

ನೆನಪುಗಳ ಕೂಡಿಡಬೇಕು - ನಗೆಯ ಜಾಡಿನ ಗುರುತುಳಿಯಬೇಕು...😍😍

ಬಸುರಿ ಮೋಡ ಮಳೆಯಾಗಿ ಸುರಿವಾಗ ತುಂಟ ಅಲೆಯೊಂದು ಅಲೆದಲೆದು ಬಳಿ ಬಂದು ಕಣ್ ಮಿಟುಕಿಸಿ ನಿನ್ಹೆಸರ ಉಸುರಿತು...
ನೆನಪ ನಾಭಿಯಾಳದಿಂದ ಹುಚ್ಚೆದ್ದ ಮೃಗೋನ್ಮಾದವೊಂದು ಎದೆ ಹೊಕ್ಕು ಅಲೆಯಂತೆ ಕುಣಿದಾಡಿತು...
#ನೆನಪುಗಳ_ಕೊಂದು_ಕೊಂಡೊಯ್ಯೋ_ತಾಕತ್ತು_ಸರ್ವಾಧಿಕಾರಿ_ಸಾವಿಗೂ_ಇಲ್ಲ...

ಸುರಿಯುತಿರಲಿ ಸೋನೆಯಂತೆ ಎತ್ತಿಡುವ ಅಡಿಗಡಿಗೆ ನಗೆಯ ಬಣ್ಣದ ಹುಡಿ...
#ಹೆಜ್ಜೆ ಜಾಡು_ಗೆಜ್ಜೆ ಹಾಡು_ಕನಸ ಸುರಗಿಯ ಗಂಧ...



ದನಿಯಿಲ್ಲದ ಗೆಜ್ಜೆಗೆ ಬಣ್ಣವೇ ಮೆರಗು... 
ತುಸು ಸೋಕಲಿ ಹೆಜ್ಜೆಗೂ ನಗೆ ಬಣ್ಣದ ಸೆರಗು...
#ಹೆಜ್ಜೆ, ಗೆಜ್ಜೆ, ಬಣ್ಣ - ಲಜ್ಜೆ ಒಜ್ಜೆಯ ಬೆರಗು...😍😘

ಚಿತ್ರ ರೂಪದರ್ಶಿಗಳು: ಅರ್ಚನಾ ಖ್ಯಾಡಿ ಹಾಗೂ ಸುಮತಿ ದೀಪಾ... 



*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)