Saturday, September 20, 2014

ಗೊಂಚಲು - ಒಂದು ನೂರಾ ಮೂವತ್ತೆರಡು.....

ಆಗೀಗ ಹಿಂಡುವ ತುಂಡು ತುಂಡು ಭಾವಗಳು.....
(ಬದುಕ ಕಾಡುವ ಸಂಚಾರಿ ಭಾವಗಳಿವು - ಒಂದಕೊಂದು ವಿರುದ್ಧವೆನಿಸಿದರೆ ತಪ್ಪು ನನ್ನದಲ್ಲ...)

ಆತ್ಮ ಸಾಂಗತ್ಯವೇ - 
ಹೊಸ ಹೆಸರಿಡುವ ಹಂಗನು ಮರೆತು ಹಸನಾಗಿ ಹಬ್ಬಿರುವ ಸ್ನೇಹದ ಅನುಭಾವದಾಲಯದ ನಡುಮನೆಯಲ್ಲಿ ಈ ಬದುಕೆಂಬೋ ಬದುಕನು ಹಣತೆಯಾಗಿಸಿ ಹಚ್ಚಿಟ್ಟುಕೊಂಡು ಇಷ್ಟಿಷ್ಟೇ ಕರಗೋಣ... 
ಕರಗೋ ನೋವು ಮತ್ತು ಬೆಳಗೋ ನಗು ಎರಡೂ ನಮ್ಮದಾಗಲಿ...

ಕರುಳ ಜೋಗುಳವೇ -
ಎನ್ನ ಮೊಗದ ನಿತ್ರಾಣ ನಗುವನ್ನೂ, ಮನದ ಜೀವಂತ ಅಳುವನ್ನೂ ನಿನ್ನೆದೆಯ ಒಲವ ದಾರದಲ್ಲಿ ಕಟ್ಟಿ ಮಾಲೆಯಾಗಿಸಿ ಮುಡಿವ ನಿಸ್ವಾರ್ಥ ಮತ್ತು ತಂತಿ ಹರಿದ ವೀಣೆಯಿಂದ ಜೀವೋನ್ಮಾದದ ಮೇಘ ಮಲ್ಹಾರದ ನಾದ ಹೊಮ್ಮಿಸುವ ಹುಚ್ಚು ಹಂಬಲ ನಿನ್ನೊಳಗೆ ಮೂಡಿದ್ದು ಹೇಗೆ ಮತ್ತು ಏಕೆ..?? 
ಈಗಲೂ ಸೋಜಿಗವೆನಗೆ... 
ನೀನು -
ನಾ ಅರಿಯಲಾರದೆ ಹೋದ, ಬರೆಯಲಾಗದೆ ಸೋತ ಒಂದು ಮಹಾ ಕವಿತೆ...

ನಗುವಿಲ್ಲದ ಸ್ಮಶಾನ ಮೌನ - 
ಒಲವಿಲ್ಲದ ಪಿಶಾಚ ಧ್ಯಾನ - 
ರೆಪ್ಪೆಗಳು ಒಂದಾಗದ ಪರಿತ್ಯಕ್ತ ಕಾರಿರುಳು - 
ಒಂದಾದರೂ ಘನ ಕನಸು ಹುಟ್ಟದ ದರಿದ್ರ ಹಗಲು - 
ಆತ್ಮಗಳ ಬೆಸೆದು ಬೆಳಗದ ಶವ ಸಂಭೋಗದಂಥ ಕ್ಷುದ್ರ ಮಿಲನ - 
ಕೋಟಿ ಆಸೆಗಳ ಸಂಚಯಿಸೋ ಬಣ್ಣದ ಕಿರಣಗಳ ಹೊತ್ತು ಪ್ರತಿಫಲಿಸೋ ಮುಂಜಾವಿನ ಮಂಜಿಗೂ, ಪ್ರೇಮದ ನಂಜೇರಿ ಶೃಂಗಾರ ರಂಗೇರಬೇಕಿದ್ದ ಚುಮು ಚುಮು ಮುಸ್ಸಂಜೆಗೂ ಸ್ಪಂದನೆಯ ಹಂಗೇ ಇಲ್ಲದಂತೆ ಮುಖ ತಿರುವಬೇಕಾದ ಅಸಹಾಯ ಮನಸು - 
ಉಸಿರಿದ್ದೂ ಸಾಯುವುದೆಂದರೆ ಇಷ್ಟೆ ತಾನೆ... 
ಅಂಥ ಬದುಕುಗಳನ್ನು ಘೋರಿಯೊಳಗಣ ಬದುಕುಗಳೆನ್ನಬಹುದೇನೋ ಅಲ್ಲವಾ...........  

ಅವಳ ಸ್ನೇಹದ ಕಣ್ಣಂಚಿಂದ ಭರವಸೆಯ ಕಿಡಿಯೊಂದ ಬಸಿದುಕೊಂಡೆ... 
ಕಂಪಿಸೋ ಕಿರುಬೆರಳಿಂದ ಹೃದಯಕ್ಕೆ ಜೀವ ಸಂಚಾರ...
ಹೊತ್ತಿದ ಹೊಸ ಉತ್ಸಾಹದ ಉರಿಯ ಸುತ್ತ ಬದುಕಿನದೀಗ ಸಂಭ್ರಮದ ತಕಧಿಮಿತ...

ಹೊಟ್ಟೇಲಿ ಕರುಳ ಕೊಯ್ಯುವಷ್ಟು ಹಸಿವನಿಟ್ಟು - ತಟ್ಟೇಲಿ ರುಚಿಯಾದ ಅನ್ನವನಿಟ್ಟು - ಮೂಗು, ಕಣ್ಣುಗಳ ಸ್ವೇಚ್ಛೆಯಾಗಿ ಬಿಟ್ಟು - ಉಣ್ಣಲು ಬೇಕಾದ ಬಾಯಿ ಮತ್ತು ಕೈಗಳನು ಕಟ್ಟಿ - ಸಾವಿನ ಮನೆಯ ಜೀತಕ್ಕೆ ಅಟ್ಟಿದ ‘ಕರುಣಾಳು’ ಬದುಕಿನೆಡೆಗೆ ಯಾಕೋ ಸಣ್ಣ ಅಸಹನೆ ಈಗೀಗ...
ಕಸಿದುಕೊಂಡ ಸ್ವಾತಂತ್ರ‍್ಯವನೆಲ್ಲ ಮರಳಿ ಕೊಡೆಂದು ಕೊರಳ ಪಟ್ಟಿ ಹಿಡಿದು ಕೇಳೋಣ ಅಂದುಕೊಂಡರೆ - ಕ್ಷಣ ಕ್ಷಣಕೂ ಬಣ್ಣ ಬದಲಿಸೋ ಮೂಲ ಸ್ವಭಾವದ ಊಸರವಳ್ಳಿಯನ್ನು ಹಿಡಿದು ಪಳಗಿಸಿಕೊಳ್ಳುವುದಷ್ಟು ಸುಲಭವಾ...???

ಎನ್ನಾತ್ಮಲತೆಯೇ -
ನೀ ನನ್ನೀ ಬದುಕ ತಬ್ಬಿದ ಪರಿಗೆ ಎದೆಯ ಚಿಪ್ಪಿನಲ್ಲಿ ಒಲವು ಗರ್ಭಧರಿಸಿದೆ...
ಹುಟ್ಟಲಿರೋ ಹೊಸ ಕನಸ ಕಂದಮ್ಮನಿಗಾಗಿ ಕಣ್ಣ ಪಾಪೆಯಂಚಲಿ ತೊಟ್ಟಿಲು ಕಟ್ಟಿ ಕಾಯುತ್ತಿದ್ದೇನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, September 1, 2014

ಗೊಂಚಲು - ಒಂದು ನೂರಾ ಮೂವತ್ತು + ಒಂದು.....

ಅರ್ಧರ್ಧ ಬರೆದ ಸಾಲುಗಳು...
ಅರ್ಥ......................????

ನೆನಪು -
ಮನದಲ್ಲಿ ನಿಂತ ನೆನಪುಗಳು ನಾಳೆಗೆ ಪಾಠವಾದರೆ ಬದುಕು ನಗುತ್ತೆ - ಇಲ್ಲದೇ ಹೋದಲ್ಲಿ ನಮ್ಮನ್ನು ನಿನ್ನೆಯಿಂದಾಚೆ ನಡೆಯಗೊಡದೇ, ನಾಳೆಗಳನೂ ನಿನ್ನೆಗಳಲೇ ಬೆರೆಸಿ, ಕೊಳೆಸಿ, ನಿಜವಾದ ಹೊಸ ನಾಳೆಗಳೇ ಇಲ್ಲದಂತಾಗಿಸಿಬಿಡುತ್ತವೆ - ಬದುಕು ನಿಂತಲ್ಲೆ ನಿಂತು ಪಾಚಿಗಟ್ಟಿದ ನಿರುಪಯುಕ್ತ ನೀರಾಗುತ್ತೆ... 
ಯಾವ ದಾರಿ ನಾನೇ ನನ್ನ ಕೀಳಾಗಿ ಕಾಣುವಷ್ಟು ಅವಮಾನಿಸಿತೋ, ಯಾವ ದಾರಿ ನನ್ನ ಆತ್ಮಾಭಿಮಾನವನ್ನೇ ಅಲುಗಾಡಿಸಿತೋ ಅದೇ ದಾರೀಲಿ ಮತ್ತೆ ನಡೆಯುವಂತೆ ಆಸೆ ಹುಟ್ಟಿಸೋ ಕೆಲ ನೆನಪುಗಳೆಡೆಗೆ; ಅವೆಷ್ಟೇ ಸಿಹಿ ಅನ್ನಿಸಿದರೂ ಅಂಥ ನೆನಪುಗಳ ಮತ್ತೆ ಮತ್ತೆ ಎದುರು ತಂದು ನಿಲ್ಲಿಸಿ ತನ್ನಾಸೆಯ ಶಕ್ತಿ ಹೆಚ್ಚಿಸಿಕೊಳ್ಳ ಬಯಸೋ ನನ್ನದೇ ಮನದ ದೌರ್ಬಲ್ಯದೆಡೆಗೆ ನನ್ನ ಧಿಕ್ಕಾರವಿದೆ...
ಪ್ರಜ್ಞೆ ತಾನು ಎತ್ತರದ ಗೆಲುವಿನ ಕನಸು ಕಂಡರೆ ಈ ಮನಸೋ ಬದುಕಿನೊಳಮನೆಯ ಗಬ್ಬೆಬ್ಬಿಸಿದ ಅದೇ ಹಳೆಯ ಆಸೆಗಳ (ನೆನಪು) ಸುತ್ತ ಗಿರಕಿಹೊಡೆಯುತ್ತಿರುತ್ತೆ...
ನಾಚಿಕೆಯಿಲ್ಲದ ಹಂದಿಯಂಥ ಮನಸು - ಕೊಳಚೆಯೆಂದರೆ ಅದೇನು ಪ್ರೀತಿಯೋ...



ರೂಪದರ್ಶಿ: ಮುದ್ದು ಸೊಸೆ ‘ಅಭಿಜ್ಞಾ
ದುರುಳ ಜನಗಳ ಕಲ್ಲೇಟಿನ ನೋವನೂ ನಗುವಿಂದಲೇ ಅರಗಿಸಿಕೊಂಡು, ಆ ನಗುವಿಂದಲೇ ಕಲ್ಲೆಸೆದ ಜನರನು ಅಣಕಿಸಬಲ್ಲ ಮರುಳನ ಮನದ ನಗುವೂ ಯಾಕೋ ಶ್ರೇಷ್ಠವೇ ಅಂತೆನಿಸುತ್ತೆ... ನಿದ್ದೆ ಹೊರಳಲ್ಲಿನ ಮಗುವ ನಗುವಂಥ ನಗುವಲ್ಲಿ ಎಲ್ಲವನೂ ಕೊನೆಗೆ ತನ್ನನೇ ತಾನೂ ಮರೆತವನ ನಗುವನ್ನು ಹೀಗಳೆಯಲಿ ಹೇಗೆ... ಅಹಂನ ಕೋಟೆಯೊಳಗಿನ ಒಣ ಗಾಂಭೀರ್ಯದ ಸಭ್ಯತೆಗಿಂತ - ಬಯಲ ತುಂಬುವ ಶುದ್ಧ ಮನದ ಸ್ವಚ್ಛ ನಗು ಹೆಚ್ಚು ಹಿತಕರ ಅಲ್ಲವಾ... ನಗು ದಕ್ಕಿದಾಗ ನಕ್ಕುಬಿಡಿ ಮನಸಾರೆ - ಕಣ್ಣಲಿ ಹೊಸ ಬೆಳಕು ಮೂಡಲಿ... ಜನ ಹುಚ್ಚು ಅಂದರೆ ಅನ್ನಲಿ... ಹಂಚಬಹುದಾದ ನಗುವಾದರೆ ಒಂಚೂರು ಹಂಚಿಬಿಡಿ ಅವರೂ ಹುಚ್ಚರಾಗಲಿ... ನಗುವೆಂಬುದು ಎಲ್ಲರ ಆತ್ಮದ ದೀಪವಾಗಲಿ... :)  

                                                                  
ಹಾಳಾದ್ದು ಈ ಸಾವಿಗೆ ಸ್ವಲ್ಪವೂ ಕರುಣೆಯೆಂಬುದಿಲ್ಲ...
ಅಲ್ಲೇಲ್ಲೋ ಅಕಾಲದಲ್ಲೂ ಬಂದು ಕಂಗೆಡಿಸುವುದು - ಇನ್ನೆಲ್ಲೋ ಅದಕೆಂದೇ ಕಾಯುತಿರುವವರೆಡೆಗೆ ತಿರುಗಿಯೂ ನೋಡದೇ ಕಾಡುವುದು...
ಬದುಕೆಂಬ ಹಾಡಿನ ಸ್ವರ, ಲಯ, ತಾಳಗಳ ಹದ ತಪ್ಪಿಸಿ ವಿನೋದ ನೋಡುವ ಸಾವೆಂಬ ಸಾವಿನ ಎಲ್ಲ ನಡೆಗಳೂ ವಿಪರೀತಗಳೇ...


ಮಳೆಗಾಲದ ಹಬ್ಬಗಳ ಒಂದು ನೆನಪು -
ಮುಂಬೆಳಗಲ್ಲಿ ಹನಿವ ಸೋನೆಯ ಲಾಸ್ಯ...
ಅಂಗಳದ ನೀರಲ್ಲಿ ರಂಗೋಲಿ ಹುಡಿಯ ನಾಟ್ಯ...
ಒಳಮನೇಲಿ ಅಮ್ಮನ ಬಳೆಗಳ ತಾರಕ ಸಂಗೀತ...
ನನ್ನ ನಾಲಿಗೆಗೆ ಕಜ್ಜಾಯದ ಆಸೆಯ ತುರಿಕೆ...


ಸಾವಿನ ಮನೆಯಂಗಳದಲ್ಲೂ ಎಂದಿನಂತೆ ಮತ್ತು ಎಲ್ಲಿನಂತೆ ಸೂರ್ಯ ಅದೇ ನಗು ನಗುತ್ತಾನೆ...
ಕಣ್ಣೀರಲ್ಲೂ ಕಾಮನಬಿಲ್ಲನು ಬಿಂಬಿಸಬಲ್ಲನಾತ - ಬೆಳಕಿನಾಗರ...
ಎತ್ತರದಲ್ಲಿರುವವರಿಗೆ (ಪ್ರಕೃತಿಗೆ) ಸೂತಕಗಳ ಹಂಗಿಲ್ಲವೆನ್ನಿಸುತ್ತೆ...!!!


ಅಬ್ಬರಿಸಿ ನಗುತ್ತೇನೆ -
ಅಳಬಾರದೆಂಬ ಅಹಂಕಾರ ಮತ್ತು ಅಳು ಕೂಡ ಬಾರದಷ್ಟು ಅಸಹಾಯಕತೆ ಕಾಡುವಾಗಲೆಲ್ಲ...
ಹೃದಯದ ಬಿಕ್ಕಳಿಕೆಗಳ ಹಕ್ಕುಗಳನ್ನೆಲ್ಲ ಇರುಳಿಗೆ ಮಾರಿದ್ದೇನೆ...
ಹೃದಯ ಮತ್ತು ಕಣ್ಣುಗಳ ಅನುಸಂಧಾನದಲ್ಲಿ ಭಾವಗಳು ಬೆತ್ತಲಾಗಲು ಕೂಡ ಇರುಳೇ ಹಿತವಂತೆ...
ಹಗಲಿಗೆಂದೂ ಕಣ್ಣ ಹನಿ ಕಾಣಬಾರದು - ಹಗಲೇನಿದ್ದರೂ ನಗುವ ಮಾರುವ ಸಂತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)