Tuesday, December 24, 2013

ಗೊಂಚಲು - ಒಂದು ಸೊನ್ನೆ ಎರಡು.....

ಅವನಾಡಿದ ಹೀಗೊಂದಿಷ್ಟು ಮಾತುಗಳು.....
(ಕೇವಲ ಅವನ ಮಾತುಗಳು...)

ಮಾತಾಡು...
ಏನ ಮಾತಾಡಲಿ...

ಏನಾದ್ರೂ...
.....

ನಿನ್ನ ಮಾತಲ್ಲಿ ಎಷ್ಟೊಂದು ಸತ್ಯಗಳಿರುತ್ತವೆ...
ಹೌದು ಸತ್ಯವೇ, ಆದರೆ ಪ್ರಿಯವಾದುದಲ್ಲವಲ್ಲ... 
ಸತ್ಯ ಎಂದೂ ಖುಷಿಯ ಕೊಡುವುದಿಲ್ಲ... 
ನಗ್ನತೆಯಲ್ಲಿ ಕುತೂಹಲಗಳು ಕಡಿಮೆ... 
ಮುಖವ ಮುಚ್ಚಿಟ್ಟ ಮುಖವಾಡದ ಪ್ರೀತಿಗೆ ಬಣ್ಣಗಳ ಮೆರಗಿದೆ... 
ನಂಗೆ ಅಂಥ ಬಣ್ಣಗಳೆಡೆಗೆ ಮಹಾ ಅಲರ್ಜಿ...

ನೀನು ಬದಲಾಗಿದ್ದೀಯಾ...
ನಗು ನನ್ನ ಉತ್ತರ...

ಈ ನಗುವೇ ಅರ್ಥವಾಗಲ್ಲ...
ಅಪಾರ್ಥವಾಗುವುದಕಿಂತ ಅರ್ಥವಾಗದಿರುವುದೇ ಒಳಿತಲ್ಲವಾ...

ಇಷ್ಟಕ್ಕೂ ಈ ಬದಲಾವಣೆ ಯಾಕೆ..?
ಬದಲಾವಣೆ ಏನಿಲ್ಲ... 
ಇದ್ದರೆ ಅದು ನಿಮ್ಮಗಳೊಂದಿಗೆ ಚಿರಕಾಲ ನಗುತಿರಬೇಕೆಂಬ ನನ್ನೊಳಗಿನ ತೀವ್ರ ಬಯಕೆಗೆ ಅಷ್ಟೇ...

ನಮಗಾಗಿ ನೀ ಬದಲಾಗಬೇಕಿಲ್ಲ...
ಖಂಡಿತಾ ಇಲ್ಲ... 
ಅಷ್ಟೊಂದು ಉದಾರತೆ ನನ್ನಲ್ಲಿಲ್ಲ... 
ಇಷ್ಟಕ್ಕೂ ನನ್ನೊಳಗು ಏನಂದರೆ ಏನೂ ಬದಲಾಗಿಲ್ಲ... 
ಬಹುಶಃ ಎಂದಿಗೂ ಆಗಲಾರದು ಕೂಡ... 
ಅಲ್ಲಿ ನಾನು, ನನ್ನ ಶಾಶ್ವತ ಒಂಟಿತನ ಮತ್ತು ನಿಮ್ಮ ಸಾಂಗತ್ಯದ ನೆನಪು ಹಾಗೂ ಕನಸು ಹೇಗೆಂದರೆ ಹಾಗೇ ಇದೆ – ನಿನ್ನೆ ಇದ್ದ ಹಾಗೇ... 
ಅದು ನಾಳೆಗಳಲೂ ಹಾಗೇ ಇರುತ್ತೆ ಕೂಡ...

ಮತ್ಯಾಕೆ ಈ ಮೌನ..?
ಮೌನ..!!! 
ನನ್ನಲ್ಲಾ..!!! 
ಮಹಾ ವಾಚಾಳಿ ನಾನು – ಮೌನವೆಂದರೆ ಶೃದ್ಧಾಂಜಲಿಯಷ್ಟೇ ನಂಗೆ...
ಮೌನವಾಗಿಲ್ಲ ನಾನು – ಮಾತು ಕೂಡ ಬಿಟ್ಟಿಲ್ಲ... 
ನಿಮ್ಮೊಡನೆಯ ಒಂದಿಷ್ಟು ‘ಪ್ರತ್ಯಕ್ಷ’ ಮಾತುಗಳಿಗೆ ಜರಡಿ ಹಿಡಿದು ಸೋಸಿ ಹರಿಬಿಡುವುದ ’ಕಲಿಯುತ್ತಿದ್ದೇನೆ’ ಅಷ್ಟೇ... 
ನೇರ ಪ್ರಸಾರದ ಕಾರ್ಯಕ್ರಮಗಳ ಕಡಿಮೆ ಮಾಡಿ - ಶಬ್ದಗಳ, ಭಾವಗಳ ತೀವ್ರತೆಯ ಸಂಸ್ಕರಿಸಿದ ಸಿದ್ಧ ಮಾತುಗಳನಷ್ಟೇ ಹೇಳುವ ಪರಿಯ ಕಲಿವ ಪ್ರಯತ್ನ... 
ಆದರೂ ನನ್ನೊಳಗೆ ಆತ್ಮಗತವಾಗಿ ಕೂತಿರುವ ನಿಮ್ಮೊಂದಿಗೆ ನಾನಿಂದಿಗೂ ಅದೇ ವಾಚಾಳಿ...

ಮಾತಿಗೆ ಕಡಿವಾಣ – ಅದ್ಯಾಕೆ ಅಂತ...?
ಅದು ನೀವೇ ಕಲಿಸುತಿರುವ ವಿದ್ಯೆ... 

ನಾವು ಅತಿಹೆಚ್ಚು ಮಾತಾಡೋದು – ಎಲ್ಲವನ್ನೂ ಹಂಚಿಕೊಳ್ಳುವುದು ನಿನ್ನೊಂದಿಗೆ ಮಾತ್ರ ಎಂಬುದು ಗೊತ್ತಲ್ಲವಾ ನಿಂಗೆ...
ಗೊತ್ತು... 
ಆದರೆ ಮಾತಲ್ಲಿ ಮಾತ್ರ ನೋವಲ್ಲೂ – ನಗುವಲ್ಲೂ ನೀನೇ ಮೊದಲಾಗಿ ನೆನಪಾಗೋದು ಅನ್ನೋ ನೀವೇ ನಿಮ್ಮ ನಗುವನ್ನು ಮಾತ್ರ ತಕ್ಷಣಕ್ಕೆ ಹಂಚಿಕೊಂಡು - ನಿಮ್ಮ ನೋವನ್ನು ನಿಮ್ಮಲ್ಲೇ ನುಂಗಿಕೊಂಡು, ಆ ನೋವ ನೀವಾಗಿ ಗೆದ್ದು ಹಗುರಾದಮೇಲಲ್ಲವಾ ನನ್ನಲ್ಲಿ ಹಂಚಿಕೊಳ್ಳೋದು - ರದ್ದಿಯಾದ ವಿಷಯದ ಮಾಹಿತಿಯ ನೀಡಿದಂತೆ... 
ನನ್ನಲ್ಲಿನ ಸಣ್ಣ ಕದಲಿಕೆಯನ್ನೂ ಗುರುತಿಸಿ, ನನ್ನದ್ಯಾವುದೋ ಪುಟ್ಟ ನೋವಿಗೂ ದಿನವೆಲ್ಲ ಕಳವಳಿಸೋ ನೀವು; ನೀಮ್ಮಗಳ ನೋವನ್ನು ನನ್ನೊಂದಿಗೂ ಹಂಚಿಕೊಳ್ಳಲಿ ಎಂದು ನಾನಂದುಕೊಂಡರೆ ಅದು ತಪ್ಪಾಗಲಾರದೆಂದುಕೊಳ್ಳುತ್ತೇನೆ...
ನಮ್ಮ ನೋವುಗಳೆಲ್ಲಾ ಹೇಳುವಷ್ಟು ದೊಡ್ಡದಲ್ಲ ಅಂತೀರಲ್ವಾ - ಆದರೆ ನನ್ ಪ್ರಕಾರ ನೋವೆಂದರೆ ನೋವಷ್ಟೇ, ಅದರಲ್ಲಿ ಚಿಕ್ಕದು ದೊಡ್ಡದೆಂಬ ಹೆಚ್ಚಿನ ಭೇದಗಳಿಲ್ಲ... 
ನೋವ ನಿಮ್ಮಲ್ಲೇ ನುಂಗಿ ಗೆಲ್ಲುವ ನಿಮ್ಮ ಮನಸಿನ ಗಟ್ಟಿತನದೆಡೆಗೆ ನಂಗೆ ಭಯ ಮತ್ತು ನಾನೂ ರೂಢಿಸಿಕೊಳ್ಳಬೇಕೆಂಬ ಬಯಕೆ... 
ಇನ್ನೂ ಒಂದು ಸತ್ಯವಿದೆ – ತಕ್ಷಣವೇ ಹಂಚಿಕೊಳ್ಳಬಹುದಾದಂತಹ, ಸುಳ್ಳಿನ ಪರದೆ ಕಟ್ಟಬೇಕಿಲ್ಲದಂತಹ ನಿರಾಳ, ಭಯ ಮುಕ್ತ ವಾತಾವರಣವನ್ನು ನಾ ನಿಮಗೆ ಕಟ್ಟಿಕೊಟ್ಟಿಲ್ಲವೇನೋ... 
ಅಷ್ಟು ನಿರಾಳ ವಿಶ್ವಾಸ ತುಂಬಲಾಗದೇ ಹೋದದ್ದು ನನ್ನ ಮಿತಿಯೂ ಇರಬಹುದು...

ಎಷ್ಟೆಲ್ಲ ಯೋಚಿಸ್ತೀಯಾ..? 
ಎಲ್ಲರೂ ನಿನ್ನಂತೆಯೇ ಇರಬೇಕೆಂದು ಏಕಂದ್ಕೋತೀಯಾ..?? 
ಎಲ್ಲವನ್ನೂ ನಿನ್ನ ಮೂಗಿನ ನೇರಕ್ಕೇ ನೋಡೋದು ಸರಿಯಾ..???
ಅದನ್ನೇ ಬಿಡುವ ಪ್ರಯತ್ನದಲ್ಲಿರೋದು ನಾನು... 
ನೀವು ಬದಲಾವಣೆ ಅನ್ನುತಿರುವುದೂ ನಾನದನ್ನ ಕಳಕೊಳ್ಳುತಿರುವ ಹಂತವನ್ನು...
ನಿಮ್ಮ ನಡೆಗಳನ್ನು ನಿರ್ದೇಶಿಸುವಂಥ ಮಾತುಗಳಿಗೇ ನಾನಿಂದು ಜರಡಿ ಹಿಡಿಯುವ ಪ್ರಯತ್ನದಲ್ಲಿರೋದು...
ಎಲ್ಲರೂ ನಡೆದುಬರುತಿರುವ ದಾರಿಗೆ ವಿರುದ್ಧವಾಗಿ ನಡೆಯುವುದನ್ನು ರೂಢಿಸಿಕೊಂಡವನು ನಾನು... 
ನಾ ರೂಢಿಸಿಕೊಂಡ ನನ್ನ ಬದುಕ ರೀತಿಯನ್ನು ಅತಿಯಾಗಿ ಪ್ರೀತಿಸುವವನು...
ಯಾವುದೋ ತಿರುವಲ್ಲಿ ಸಿಕ್ಕ ನಿಮ್ಮನ್ನೂ ನನ್ನೊಟ್ಟಿಗೆ ಅದೇ ದಾರೀಲಿ ಒಯ್ಯುವ ಹುಕಿಗೆ ಬಿದ್ದೆ... 
ಸ್ವಲ್ಪ ದೂರ ನಡೆಯುವ ಹೊತ್ತಿಗೆ ಅರಿವಾಯಿತು – ನೀವು ಒಟ್ಟಿಗೆ ಬರುತ್ತಿಲ್ಲ, ನಾನು ನಿಮ್ಮನ್ನು ಬಲವಂತವಾಗಿ ಎಳೆದೊಯ್ಯಲು ಹವಣಿಸುತ್ತಿದ್ದೇನಂತ... 
ಅದು ಅರಿವಾದ ಮೇಲೆ ನಿಮ್ಮನ್ನು ನಿಮ್ಮ ಪಾಡಿಗೆ ನೀವು ಪ್ರೀತಿಸೋ ಸಮಾಜದ ಅದೇ ಹಳೆಯ ಹರಿವಿಗೆ ಹರಿಯಲು ಬಿಡಲು ಪ್ರಯತ್ನಿಸುತ್ತಿದ್ದೇನೆ... 
ನಾನಂತೂ ಹಾಗೆ ಹರಿಯಲಾರೆ – ಹಾಗಂತ ನಿಮ್ಮ ಹರಿಯುವ ಖುಷಿಯ ಕೊಲ್ಲಲಾರೆ... 
ಪ್ರತೀ ಬಂಧವನ್ನೂ ಕುಹಕದ ಕಣ್ಣಿಂದ ನೋಡೋ ಸಭ್ಯ (?!) ಸಮಾಜದೆಡಗೆ ನಂಗೆ ದಿವ್ಯ ನಿರ್ಲಕ್ಷ್ಯ – ಹಾಗಂತ ನಿಮ್ಮನ್ನೂ ನನ್ನಂತೆಯೇ ಇರಿ ಅನ್ನೋದು ಎಷ್ಟು ಸರಿ...
ಯಾಕೆಂದ್ರೆ ಕುಹಕದಾಚೆ ಅಲ್ಲಿ ನನ್ನೊಡನಿರುವುದಕಿಂತ ತುಂಬಾನೆ ಅಧಿಕ ಖುಷಿಗಳಿವೆ, ನಗುವಿದೆ, ಬಣ್ಣಗಳಿವೆ, ನಾ ನೀಡಲರಿಯದ ಮೃದು ನಿರಾಳತೆಯಿದೆ... 
ಅದಕೇ ನಿಮಗೆ ಸಮಾಜದ ಮಾತು ಮುಖ್ಯವಾಗುತ್ತೆ - ನಂಗೆ ಕೇವಲ ನಿಮ್ಮ ಮಾತು ಮುಖ್ಯವಾಗುತ್ತೆ... 
ನೀವು ನೀವಾಗಿಯೇ ಆತ್ಮೀಯ ಅಂತಂದ ಸ್ನೇಹವನ್ನೂ ಸಮಾಜದ ಕಣ್ಣಲ್ಲಿ ಮತ್ತೆ ಮತ್ತೆ ಪರೀಕ್ಷಿಸುತ್ತಿರುತ್ತೀರಿ – ನನಗೆ ನಿಮ್ಮ ಮತ್ತು ನನ್ನ ಮನಸಿನ ಮಾತು ಮಾತ್ರ ಪ್ರಮಾಣ... 
ಪ್ರೀತಿಗೆ ಕೂಡ ಪ್ರಾಮಾಣಿಕತೆಯ ಪ್ರಮಾಣ ಕೇಳುವವ ನಾನು – ಪ್ರೀತಿ ಅದು ಹೇಗೇ ಬಂದರೂ ಒಳಗೆಳೆದುಕೊಂಡು ನೀವು ನೊಂದಾದರೂ ಅದರ ಸಲಹುವವರು ನೀವು... 
ನನ್ನ ನಾನು ಕಳೆದುಕೊಳ್ಳಲಾರೆ – ನಿಮ್ಮನೂ ಬಿಟ್ಟುಕೊಡಲಾರೆ... 
ಅದು ನನ್ನ ಮನಸು... 
ಅದಕೇ ನಿಮ್ಮಂತೆ ನಿಮ್ಮನ್ನು ಇರಲು ಬಿಟ್ಟು ನನ್ನನೂ ನಾ ಉಳಿಸಿಕೊಳ್ಳಬೇಕೆಂದಾದಾಗ ನಿಮ್ಮೊಡನೆ ನಿಮ್ಮಂತಿದ್ದು ನನ್ನೊಡನೆ ನಾ ನನ್ನಂತೆಯೇ ಉಳಿಯಲು ಯತ್ನಿಸುತ್ತಿದ್ದೇನೆ... 
ನಿಮ್ಮ ಪ್ರೀತಿ ಮತ್ತು ನನ್ನೊಳಗಿನ ಒಂಟಿತನ ಎರಡನ್ನೂ ಸಮಾನವಾಗಿ ಆಸ್ವಾದಿಸಲು ಕಲಿಯುತ್ತಿದ್ದೇನೆ... 
ಇದರಲ್ಲಿ ನನ್ನದು ಇನ್ನೂ ಒಂದು ಸ್ವಾರ್ಥವಿದೆ – ಎಲ್ಲ ಪ್ರೀತಿಗಳೂ ಅವವುಗಳ ಬದುಕ ತಿರುವುಗಳಲ್ಲಿ ದಾರಿ, ದಿಕ್ಕು ಬದಲಾಗಿ ಅನಿವಾರ್ಯವಾಗಿ ಮಸುಕಾಗಿ ಬದುಕು ನಿಜಕ್ಕೂ ದೀರ್ಘ ಅಂತನಿಸುವಾಗ ನನ್ನೊಂಟಿತನದೆಡೆಗಿನ ನನ್ನ ಪ್ರೀತಿಯೇ ನನ್ನ ಕಾಯುತ್ತದೆ... 
ಅಲ್ಲೆಲ್ಲೋ ನೀವು ನಕ್ಕ ಸುದ್ದಿ ಆಗಾಗ ಸಿಕ್ಕರೆ – ನಂಗಿಲ್ಲಿ ಬೋನಸ್ಸು ಖುಷಿ ಖುಷಿ...

ಆದರೂ ಸಮಾಜ ಅಂತ ಒಂದಿದೆಯಲ್ಲ...
ಹೌದು ಸಮಾಜ ಇದೆ ಮತ್ತು ನಾವೂ ಅದರ ಒಂದು ಪ್ರಮುಖ ಭಾಗವೇ... 
ನಮ್ಮನ್ನು ನಮ್ಮಂತೆಯೇ ಗುರುತಿಸಿ ಅದರ ಒಳಿತು ಕೆಡುಕುಗಳ ವಿಮರ್ಶಿಸುವ ಪ್ರಜ್ಞಾಪೂರ್ಣ ಸಮಾಜದೆಡೆಗೆ ನಂಗೂ ತುಂಬಾ ಗೌರವವಿದೆ... 
ಆದರೆ ನಾವಲ್ಲದ್ದನ್ನು -  ನಮ್ಮದಲ್ಲದ್ದನ್ನು ನಾವೆಂದು - ನಮ್ಮದೆಂದು ತಮ್ಮ ಕ್ಷುದ್ರ ಕಲ್ಪನೆಯಿಂದ ನಮ್ಮ ಮೇಲೆ ಆರೋಪಿಸಿ – ಸ್ನೇಹವನ್ನು ಪ್ರೇಮವೆಂದು – ಪ್ರೇಮವನ್ನು ವ್ಯಭಿಚಾರವೆಂದು ಆಡಿಕೊಂಡು ನಕ್ಕು ತನ್ನ ಕುಹಕವಾಡುವ ಮನೋಸ್ಥಿತಿಯನ್ನು ತೃಪ್ತಪಡಿಸಿಕೊಳ್ಳುವ ಸಮಾಜದೆಡೆಗೆ ನಂಗೆ ಕಿಂಚಿತ್ತೂ ಗೌರವವಿಲ್ಲ... 
ನಾನು ಅಂತ ಸಮಾಜವನ್ನು ಲಕ್ಷ್ಯಕ್ಕೂ ತೆಗೆದುಕೊಳ್ಳಲ್ಲ... 
ಯಾರಿಂದಲೋ ಸುಮ್ಮನೆ ವಿನಾಕಾರಣವಾಗಿ ಹರಿದುಬರುವ ಸ್ನೇಹದ ಆತ್ಮೀಯತೆಯನ್ನೂ ಸಂಪೂರ್ಣ ಖುಷಿಯಿಂದ ಆಸ್ವಾದಿಸದೇ ಅಕ್ಕ ಪಕ್ಕದ ಸಮಾಜ ಏನೆಂದುಕೊಳ್ಳುತ್ತೋ ಅಂತಲೇ ಜಾಸ್ತಿ ಚಿಂತಿಸುತ್ತೀರಲ್ಲ; ಅಂತ ನಿಮ್ಮೆಡೆಗೆ ನನಗೆ ನಿಜಕ್ಕೂ ಮರುಕವಿದೆ... 
ಸಮಾಜ ಹೇಳುವ ಕಾಳಜಿಯ ಪ್ರಜ್ಞಾವಂತ ಮಾತ್ಯಾವುದೋ ಅದನ್ನು ಗೌರವಿಸುವುದನ್ನೂ, ಕುಹಕವ್ಯಾವುದೋ ಅದನ್ನು ಗುರುತಿಸಿ ನಿರ್ಲಕ್ಷಿಸಿ ನಕ್ಕು ನಮ್ಮಂತೆ ನಾವು ಮುನ್ನಡೆಯುವುದನ್ನೂ ರೂಢಿಸಿಕೊಳ್ಳುವುದು ನಮ್ಮೊಳಗಿನ ಬೆಳವಣಿಗೆಗೆ, ಪ್ರಚ್ಛನ್ನ ಖುಷಿಗೆ ತುಂಬಾ ಅಗತ್ಯ ಅನ್ನಿಸುತ್ತೆ ನಂಗೆ...

ನಾವು ನಮ್ಮ ವೃತ್ತಗಳ ಮೀರಿ ನಿನ್ನ ಜೊತೆ ಬರಲಾರೆವು ನಿಜ ಹಾಗಂತ ನಿನ್ನ ಬಿಟ್ಟಿರಲೂ ಆಗದು...
ಬಿಟ್ಟು ಬಿಡಿ ಅಥವಾ ಬಿಡುತ್ತೇನೆ ಅಂತ ನಾನಂದಿಲ್ಲ... 
ನಿಜ ಏನಂದ್ರೆ ನೀವು ಬಿಡ್ತೀವಂದ್ರೂ ನಾ ನಿಮ್ಮ ಬಿಡಲಾರೆ... 
ಆದರೆ ನನ್ನೊಂದಿಗಿನ ಒಡನಾಟ ನಿಮ್ಮ ಉಳಿದ ಖುಷಿಗಳಿಗೆ ಎರವಾಗುವುದನ್ನು ಸಹಿಸಲಾರೆ... 
ನಾ ನಿಮ್ಮ ನೇರ ಒಡನಾಟಕ್ಕೆ ದಕ್ಕಿದಾಗ ಮಾತ್ರವಲ್ಲವಾ ನಿಮ್ಮ ಹಾಗೂ ನೀವು ಪ್ರೀತಿಸೋ ಸಮಾಜದ ಕಟ್ಟುಪಾಡುಗಳಿಗೆ ಪೆಟ್ಟು ಬೀಳುವುದು – ನನ್ನ ಬೇಲಿಗಳಿಲ್ಲದ ವಿಚಾರಗಳಿಂದ ನಿಮ್ಮ ಬದುಕಿನ ಮೂಲ ಭಾವಗಳನೇ ಪ್ರಶ್ನಿಸಿದಾಗಲಷ್ಟೇ ಅಲ್ಲವಾ ನೀವು ಕಂಗೆಡುವುದು... 
ನಿಮಗೆ ಸಂಬಂಧಿಸಿದವರೆಗೂ ಅವೆರಡರಿಂದ ನಾ ದೂರ ಉಳಿದೆನಾದರೆ ಇನ್ನಷ್ಟು ಕಾಲ ನಿಮ್ಮೊಡಗೂಡಿ ಸಾಗಬಹುದಲ್ಲಾ... 
ಅದು ನನ್ನ ಆಸೆ... 
ನೇರ ಒಡನಾಟವಿಲ್ಲದಿದ್ದರೂ ಮನಸಿನ ಒಡನಾಟಕ್ಕೇನು ಎಲ್ಲೆ ಇಲ್ಲವಲ್ಲ – ಮೂರುಘಂಟೆ ನಾನೊಬ್ಬನೇ ಮಾತಾಡಿ ನಿಮ್ಮ ಕಂಗೆಡಿಸಿ, ನಿಮ್ಮದೇನನ್ನೂ ಕೇಳದೇ ನೀವಾಗಿ ಏನೂ ಹೇಳದೇ ಸಮಯ ಕೊಲ್ಲವುದಕಿಂತ ಮೂರು ನಿಮಿಷದ ‘ಪರಸ್ಪರ’ ಕುಶಲೋಪರಿಯೇ ಸೂಕ್ತವಲ್ಲವಾ... 

ನಿನ್ನೊಂದಿಗೆ ವಾದಕ್ಕೆ ಬಿದ್ದು ಗೆಲ್ಲಲಾರೆವು – ಆದರೂ ನೀ ಮೊದಲಿನಂತೆಯೇ ಇದ್ದಿದ್ದರೆ ಚೆಂದವಿತ್ತು...
ವಾದವಲ್ಲ ಇದು ಮನದ ಭಾವ... 
ಬದುಕ ಬೀದಿಯಲ್ಲಿ ಒಂಟಿಯಾಗಿ ನಿಂತಾಗಲೆಲ್ಲಾ ನನ್ನ ಕಂಗೆಡದಂತೆ ಸಲಹಿದ್ದು ಗೆಳೆತನಗಳೇ... 
ಅಂಥ ಗೆಳೆತನಗಳ ಅಷ್ಟು ಸುಲಭಕ್ಕೆ ಕಳೆದುಕೊಳ್ಳುವ ಮನಸಿಲ್ಲ... 
ನನ್ನ ಅಪ್ರಿಯ ಸತ್ಯವ ಹೇಳುವ ಮಾತಿಗಿಂತ; ಅರ್ಥೈಸಿಕೊಳ್ಳೋ - ಅರ್ಥವಾಗೋ ಗೊಂದಲಗಳಿಲ್ಲದ, ಸರಿ – ತಪ್ಪುಗಳ ಹಂಗಿಲ್ಲದ ನಿಮ್ಮ ಮುಗುಳ್ನಗೆಯ ನಿಶ್ಯಬ್ದವೇ ಶ್ರೇಷ್ಠ ಎಂಬ ಅರಿವಿನಲ್ಲಿ ನನ್ನ ಪ್ರಲಾಪಗಳನೊಂದಿಷ್ಟು ನನ್ನೊಳಗೇ ಬಚ್ಚಿಟ್ಟು ಬೀಗ ಹಾಕುವ ಪ್ರಯತ್ನದಲ್ಲಿದ್ದೇನೆ... 
ನಿರೀಕ್ಷೆಗಳಿಲ್ಲದ ಸ್ನೇಹದ ಮಾತಾಡುತ್ತಲೇ ಒಂದಷ್ಟು ನಿರೀಕ್ಷೆಗಳಿಗೆ ಬಿದ್ದುಬಿಟ್ಟೆ ನಿಮ್ಮಗಳ ಒಡನಾಟದಲ್ಲಿ... 
ಆ ನಿರೀಕ್ಷೆಗಳಿಂದಾಗಿ ತುಂಬಾನೇ ಸತಾಯಿಸಿದೆ ನಿಮ್ಮಗಳ... 
ಈಗ ಮತ್ತೆ ಅದರಿಂದಾಚೆ ಬರುವ ತಯಾರಿಯಲ್ಲಿದ್ದೇನೆ... 
ಅದು ಬದಲಾವಣೆ ಅಂತಾದರೆ ಹೌದು ನಾ ಬದಲಾಗಿದ್ದೇನೆ... 
ಈ ಬದಲಾವಣೆ ಒಳ್ಳೆಯದೇ ತಾನೆ... 

ನಿನ್ನ ಮಾತುಗಳು ನಮಗೊಂದಿಷ್ಟು ಮಾರ್ಗದರ್ಶಕವಾಗಿತ್ತು ಬದುಕ ಬೆಳವಣಿಗೆಗೆ ಕಣೋ...
ನನ್ನ ಮಾತು ನಿಮ್ಮನ್ನೊಂದಿಷ್ಟು ಗಟ್ಟಿಗೊಳಿಸಿ ಬದುಕಿಗೆ ಭರವಸೆ ಕೊಡುತ್ತಿತ್ತು ಅನ್ನುವುದಾದರೆ ನೀವು; ಬದುಕಿನ ಅನುಭವಗಳನ್ನು ಓದಿದರೆ ಸಾಕು ಬದುಕು ತನ್ನಿಂದ ತಾನೇ ಗಟ್ಟಿಗೊಳ್ಳುತ್ತದೆ, ತನಗೆ ತಾನೇ ಭರವಸೆಯ ತುಂಬಿಕೊಳ್ಳುತ್ತದೆ ಮತ್ತು ಅದು ನನ್ನಂಥವರ ಸಾವಿರ ಮಾತುಗಳಿಗಿಂತ ಶ್ರೇಷ್ಠ ಅನ್ನುತ್ತೇನೆ ನಾನು...
ಬದುಕಿನ ಅನುಭವಗಳನ್ನು ಓದುವುದೆಂದರೆ ನಮ್ಮನ್ನು ನಾವು ಓದುವುದು ಜತೆಗೆ ಒಂಚೂರು ಪರಕಾಯ ಪ್ರವೇಶ... 
ನಮ್ಮನ್ನು ನಾವು ಓದುವುದು ಅಂದರೆ ಎಂದೋ ಒಂದೆಡೆ ಕೂತು ಹಿಂತಿರುಗಿ ನೋಡುವುದಷ್ಟೇ ಅಲ್ಲ – ಪ್ರತಿ ಕ್ಷಣ ನಮ್ಮ ನಡೆಗಳನ್ನು ನಾವೇ ಗಮನಿಸಿಕೊಳ್ಳುವುದು... 
ನಮ್ಮ ಆ ಕ್ಷಣದ ನಡೆಗಳಿಗೆ ನಮ್ಮಲ್ಲೇ ಕಾರಣಗಳ ಹುಡುಕಿಕೊಳ್ಳುವುದು – ಅದು ನಮಗಿಷ್ಟವಾಗುವಂತಲ್ಲ ಅದಿರುವಂತೆಯೇ ಕಾರಣಗಳ ನೋಡುವುದು... 
ಅಷ್ಟು ಸಾಕು ಎಷ್ಟೋ ಬದಲಾವಣೆಗಳಿಗೆ ಉತ್ತರ ಮಾತಿಲ್ಲದೆಯೇ ಸಿಕ್ಕಿಬಿಡುತ್ತೆ...

ಇನ್ನು ಕೊನೆಯದಾಗಿ ಇಷ್ಟು ಮಾತ್ರ ಪ್ರಾಮಾಣಿಕವಾಗಿ ಹೇಳಬಲ್ಲೆ – ಬದುಕಿನ ಎಂಥ ಬದಲಾವಣೆಗಳಲ್ಲೂ ನನ್ನ ಮನದಲ್ಲಿನ ನಿಮ್ಮೆಡೆಗಿನ ಸ್ನೇಹ ಭಾವ ಬದಲಾಗದು, ಅಲ್ಲಿ ಅದರ ಶ್ರೇಷ್ಠತೆ ಕುಂದಲಾರದು... 
ಈ ಬದಲಾವಣೆ ಬೇಡವೇ ಬೇಡ ಎನ್ನುವುದಾದರೆ ನೀವು; ನಿಮ್ಮೊಂದಿಗಿನ ನನ್ನ ಮಾತುಗಳ ಬೀಗದ ಕೀ ನಿಮ್ಮ ಕೈಯಲ್ಲೇ ಇದೆ... 
“ನೀವು ಬಯಲಾದರೆ ನಾನೂ ಬಯಲು – ನೀವು ಗುಹೆಯಾದರೆ ನಾ ಅದರೊಳಗಣ ಕತ್ತಲು...”

ಎಷ್ಟೆಲ್ಲ ವಿರೋದಾಭಾಸಗಳ, ಗೊಂದಲಗಳ ತುಂಬಿಕೊಂಡ ಪ್ರಾಣಿ ನಾನು...
ಅಷ್ಟೆಲ್ಲ ಒರಟುತನಗಳ ಮೂಟೆಯಾದ ನನ್ನೊಂದಿಗೂ ಒಂದು ಚಂದದ ಸ್ನೇಹ ಬಂಧವ ಈವರೆಗೆ ಸಲಹಿಕೊಂಡ ಹಿರಿಮೆ ನಿಮ್ಮದು... 
ಅದು ಮುಂದೆಯೂ ಬೇಕೆನ್ನುವ ನಿಮ್ಮಗಳ ಮನದ ಮೃದುತ್ವಕ್ಕೆ ಶರಣು...  
ಖುಷಿಯಾಗಿರಿ ಬದುಕ ತುಂಬಾ...

Saturday, December 21, 2013

ಗೊಂಚಲು - ನೂರೊಂದು.....

ಹೇಳಬಾರದ್ದು.....:)
(ಕೇಳಬೇಡಿ ಏನನ್ನೂ...)

ಬೆಳ್ಳಂಬೆಳಗ್ಗೆ ಸ್ನಾನದ ಮನೇಲಿ ನನ್ನವಳು ಮಿಂದ ಬಿಸಿನೀರ ಹಬೆಯಲ್ಲಿ ಮೀಯುತ್ತಾ ಅವಳು ಬಿಚ್ಚಿಟ್ಟ ಅವಳ ಕರಿಮಣಿ ಮತ್ತು ಕಾಲ್ಗೆಜ್ಜೆ ಪರಸ್ಪರ ಮಾತಿಗಿಳಿದಿದ್ದವು...

ಕರಿಮಣಿಯ ಮಾತು : –
ನಾನೆಂದರೆ ಇವಳಿಗೆ ಇವಳಷ್ಟೇ ಪ್ರೀತಿ... ಇವಳ ಕಣ್ಣಲ್ಲಿ ನಾನೆಂದರೆ ಅವನು ಮತ್ತು ಅವನ ಪ್ರೀತಿ... ನೂರಾರು ಹಿರಿಕಿರಿಯ ಹರಕೆ, ಹಾರೈಕೆಗಳ ಹೊತ್ತು ಅವಳ ಕೊರಳ ತಬ್ಬಿದ ಮಂಗಳ ಹಾರ ನಾನು... ಅವನ ಸೇರುವ ಇವಳ ಆಸೆಗೆ ಸಮಾಜ ತೋರಿದ ಸರ್ವರೊಪ್ಪಿತ ಮಾರ್ಗ ನಾನು... ಇವಳ ಉಸಿರಲ್ಲಿ ಬೆರೆತ ಅವನ ಉಸಿರ ಪ್ರೀತಿಗೆ ಜನ್ಮಾಂತರಗಳ ಸ್ವಂತಿಕೆಯ ಮುದ್ರೆ ಒತ್ತಿದ್ದು ನಾನೆಂಬುದು ಇವಳ ಭಾವ... ಅದಕೇ ನಾನವಳಿಗೆ ಅವಿನಾಭಾವ... ಇರುಳ ಮೊದಲಲ್ಲಿ ಹೊರಳು ಪ್ರೀತಿಯುತ್ತುಂಗದಲಿ ಹನಿವ ಕಣ್ಣ ಹನಿ ಹಾಗೂ ಕೊರಳ ಬೆವರ ಹನಿ ಸೇರಿ ನನ್ನ ತೋಯಿಸುತಿರುವಾಗ ಇವಳೆನ್ನನೊಮ್ಮೆ ಪ್ರೀತಿಯಿಂದ ಚುಂಬಿಸುತ್ತಾಳೆ – ಇದಕೆಲ್ಲ ನೀನೆ ಕಾರಣ ಎಂಬಂತೆ... ಆ ಕ್ಷಣ ನನ್ನಲ್ಲಿ ಜೀವ ಝಲ್ಲೆನ್ನುವ ರೋಮಾಂಚದ ಸಾರ್ಥಕ್ಯ... ಪ್ರತಿ ಹಗಲು ಅವನ ಸೇರೋ ವಿರಹದ ನೆನಪಲ್ಲೂ ಇವಳು ನನ್ನನೇ ಮುದ್ದಿಸುತಾಳೆ... ಇವಳ ಎದೆ ಗೊಂಚಲ ನಡುವ ಬಿಸಿಯಲ್ಲಿ ಹಗಲಿರುಳು ನಲಿವ ನನ್ನೆಡೆಗೆ ಅವನದು ಸದಾ ಹೊಟ್ಟೆಕಿಚ್ಚಿನ ನೋಟ... ಇವಳ ಕಪ್ಪು ಕೊರಳಿಗೆ ನಾನು ಕಪ್ಪು ಸೇರಿದ ಬಂಗಾರದ ದೃಷ್ಟಿಬೊಟ್ಟು... ಕೆಲವೊಮ್ಮೆ ರಕ್ಷಣಾ ಆಯುಧ ಕೂಡ... ಇವಳೊಂದಿಗಿನ ನನ್ನ ರೋಮಾಂಚಗಳು ಸಾವಿರಾರು... 

ಗೆಜ್ಜೆನಾದ : –
ಪ್ರತಿ ಮಿಲನದ ಮೊದಲಲ್ಲೂ ಅವನು ಇವಳ ಪಾದದೊಂದಿಗೆ ನನ್ನನೂ ತುಂಬು ಪ್ರೀತಿಯಿಂದ ಮುದ್ದಿಸುತ್ತಾನೆ... ಅವನಿಗೆ ನಾನೆಂದರೆ ಅವನೆದೆಯ ನಾದ... ನನ್ನ ದನಿಯ ವೇಗ ಅವನೆದೆಯ ಆವೇಗ... ನಾನೆಂದರೆ ಇವಳ ಇರುವಿಕೆಯ ಸಂಗೀತ... ಮೊನ್ನೆ ಇವಳೊಂದಿಗೆ ಅವನು ಅಂದಿದ್ದನ್ನು ನೀನೂ ಕೇಳಿದೆಯಲ್ಲ... “ಈ ಕಾಲಗೆಜ್ಜೆಗಳ ಮೇಲೆ ನಂಗೆ ನಿನ್ನೆಡೆಗಿನಷ್ಟೇ ಪ್ರೀತಿ ಕಣೇ... ಆ ಗುಡಿಯ ಕಲ್ಯಾಣಿಯ ಕಟ್ಟೆ ಬಳಿಯಲ್ಲಿ ಮೊದಲ ಸಲ ಈ ಗೆಜ್ಜೆ ದನಿಯಿಂದಲೇ ನಿನ್ನೆಡೆಗೆ ತಿರುಗಿ ನೋಡಿದ್ದು ಮತ್ತು ಆ ನೋಟವೇ ನಿನ್ನೆಡೆಗಿನ ಒಲವಿಗೆ ನಾಂದಿಯಾದದ್ದು... ಇಂದಿಗೂ ನಿನ್ನ ಗೆಜ್ಜೆ ದನಿ ನನ್ನಲ್ಲಿ ರೋಮಾಂಚವ ತುಂಬುತ್ತೆ... ಆ ದನಿ ಮನೆಯೊಳಿಲ್ಲದ ದಿನ ನಾ ಕಳೆದುಹೋಗಿರ್ತೀನಿ... ಮನೆತುಂಬ ಹಿತವಾಗಿ ಅನುರಣಿಸೋ ನಿನ್ನ ಸೀರೆಯ ಸರಬರ ಮತ್ತು ಈ ಗೆಜ್ಜೆಗಳ ಕಿಂಕಿಣಿ ನನ್ನಲೇನೋ ಹೊಸದಾದ ಮಧುರ ಚೈತನ್ಯ ತುಂಬುತ್ತಲಿರುತ್ತೆ ಪ್ರತಿ ಕ್ಷಣ... ನೀನು ನನ್ನವಳು ಅಲ್ಲಲ್ಲ ಕೇವಲ ನನ್ನವಳು ಎಂಬ ಭಾವ ಏನೋ ತೃಪ್ತ ಖುಷಿಯ ತುಂಬುತ್ತೆ... ಅಂಥ ಕೇವಲ ನನ್ನವಳಾದ ನಿನ್ನ ಇರುವಿಕೆಯ ಸಂದೇಶ ನೀ ಒಳಮನೆಯಲಿದ್ದರೂ ನನ್ನ ಸೇರುತ್ತೆ ಈ ಗೆಜ್ಜೆ ನಾದದೊಂದಿಗೆ... ನಿಂಗೊತ್ತಾ ನಿನ್ನ ಮನಸ್ಥಿತಿಯ ಅರಿವೂ ಒಮ್ಮೊಮ್ಮೆ ನಿನ್ನ ಗೆಜ್ಜೆ ನಾದದಿಂದಲೇ ನನ್ನರಿವಿಗೆ ಬರುತ್ತೆ... ಎರಡು ದಿನಗಳ ವಿರಹದ ನಂತರ ನನ್ನೆಡೆಗೆ ಬರುವಾಗಿನ ಘಲಘಲಕ್ಕೂ, ನಿನ್ನಲೇ ನೀ ನಗುತ ಓಡಾಡುವಾಗಿನ ಮಂದ್ರ ನಾದಕ್ಕೂ, ಸಿಟ್ಟು ಅಸಹನೆಗಳಲಿ ನೆಲ ತುಳಿದು ನಡೆವಾಗಿನ ಝೇಂಕಾರಕ್ಕೂ ಮತ್ತು ಹೀಗೆ ಮಿಲನಕೂ ಮುಂಚೆ ಪಾದದಡಿ ಬೆರಳಾಡಿಸಿ ನಾ ಕೆಣಕುವಾಗಿನ ಕಿಂಕಿಣಿಗೂ ಎಂಷ್ಟೊಂದು ವ್ಯತ್ಯಾಸವಿದೆ... ಸಣ್ಣ ಮಂದಹಾಸದೊಂದಿಗೆ ನೀ ಮಂಚದ ಮನೆಗೆ ನಡೆದು ಬರುತ್ತಿದ್ದರೆ ಮಾರು ದೂರದಿಂದಲೆ ನನ್ನ ತಲುಪುವ ಗೆಜ್ಜೆದನಿ ನನ್ನ ನಾಭಿಯಾಳದಲಿ ಆಸೆಯ ಝೇಂಕಾರವೆಬ್ಬಿಸಿ ಮುಂದಿನ ಕೆಲ ಕ್ಷಣಗಳು ನಾನು ಸುರಿವ ಮೇಘ ನೀನು ಎಲ್ಲ ಹೀರಿ ನಗುವ ವಸುಧೆ... ಎಷ್ಟೆಲ್ಲ ಮಧುರ ಭಾವಗಳೋ ಈ ಗೆಜ್ಜೆ ದನಿಯೊಂದಿಗೆ ನನ್ನಲಿ... ಗೆಜ್ಜೆಯಿಲ್ಲದ ನಿನ್ನ ಪಾದವ ನಾ ಕಲ್ಪನೆಯಲೂ ಕಾಣಲಾರೆ ಕಣೇ... ಅದಷ್ಟೇ ಅಲ್ಲ ನಂಗೆ ಮನೆ ತುಂಬ ನಿನ್ನ ಗೆಜ್ಜೆನಾದಕೆ ಪೈಪೋಟಿ ಕೊಡುವ ಪುಟ್ಟ ಕಿನ್ನರಿಯರು ಬೇಕು... ಕೊನೆಯ ಬಾರಿ ಮೈನೆರೆದು ದಿನವೆಷ್ಟಾಯಿತೆಂದು ಕಣ್ಣು ಮಿಟುಕಿಸಿದ್ದನಲ್ಲ...” ಎಷ್ಟು ಖುಷಿಯಾಯಿತು ಗೊತ್ತಾ... ನಾನಿವಳ ಕಪ್ಪು ಪಾದಗಳ ಬೆಳ್ಳಿ ಸಂಚಲನ... ಇವರೀರ್ವರ ಪ್ರೇಮ ಸಂಕಲನಕೆ ಓಂಕಾರ ಹಾಡಿದ ಅಂತಃಪುರ ಪುರೋಹಿತ... ಮಿಲನದಬ್ಬರದ ನಂತರ ಕಾಲ ಬೆರಳಲ್ಲೇ ನನ್ನೊಡನೆ ಆಡುತ್ತಾ ಇವಳಲ್ಲಿ ಪುಳಕದ ಅಲೆಗಳ ಹೊರಳಿಸುತ್ತಿರುತ್ತಾನಲ್ಲ ಆಗೆಲ್ಲ ನನಗೂ ಒಂಥರಾ ಸಾರ್ಥಕ ರೋಮಾಂಚನವಾಗುತ್ತೆ ಗೊತ್ತಾ...

ಕರಿಮಣಿ – ಕಾಲ್ಗೆಜ್ಜೆಗಳ ಲಜ್ಜೆ ಮರೆತ ಮಾತುಗಳ ಕೇಳುತಿದ್ದ ಕಾಲುಂಗುರ ತನ್ನೊಳಗೊಳಗೇ ನಗುತಿತ್ತು ಇವಳು ಸ್ನಾನದ ಮನೇಲಿ ಕೂಡ ತನ್ನ ಬಿಚ್ಚಿಟ್ಟಿಲ್ಲ ಎಂದು ಬೀಗುತ್ತಾ...

* ಗೆಜ್ಜೆ ಚಿತ್ರ ಅಂತರ್ಜಾಲದಿಂದ ಆಯ್ದದ್ದು...

Saturday, December 14, 2013

ಗೊಂಚಲು - ಒಂದು ಸೊನ್ನೆ ಸೊನ್ನೆ.....

ನೂರರ ಭಾವಗಳು.....
(ನಮನಗಳೊಂದಿಗೆ...)

ಎಮ್ಮೆ, ನಾಯಿ, ಬೆಕ್ಕುಗಳೇ ಅವಳ ನಿಜದ ಸಂಗಾತಿಗಳು - ತನ್ನವರೆಂಬುವ ಮನುಷ್ಯ ಜೀವಿಗಳು ಯಾರೂ ಇಲ್ಲದ ಮನೆಗೆ ತಾನೇ ಮಹಾರಾಣಿ ಎಂಬುದು ಅವಳ ವೇದನೆ... 
ಒಂದಷ್ಟು ಕಾಲ ನಾನಾಳಿದ್ದ, ನನ್ನದಾಗಿದ್ದ ಮನೆಗೆ ನಾನೇ ಇಂದು ಅಥಿತಿ ಎಂಬುವುದು ನನ್ನ ರೋದನೆ...
ಅವಳ ಕಣ್ಣಲ್ಲಿ ಕಣ್ಣಿಟ್ಟರೆ ಎಲ್ಲಿ ಅವಳ ಕಣ್ತುಂಬಿದ್ದು ಕಾಣಸುತ್ತೋ ಅನ್ನೋ ಧಾವಂತದಲ್ಲಿ ಕಣ್ತಪ್ಪಿಸುತ್ತೇನೆ...
ಅವಳ ತುಂಬಿದ ಕಂಗಳು ನನ್ನ ಕಂಗಳನೂ ತುಳುಕಿಸಿಬಿಟ್ಟರೆ ಎಂಬುದು ಭಯ...
ನನ್ನ ಕಂಗಳಲಿ ಹನಿಜಾರಿದ್ದು ಅವಳಿಗೆ ಕಂಡುಬಿಟ್ಟರೆ ಅವಳಿನ್ನೆಂದೂ ನಗಲಾರಳೆಂಬುದು ನಿಜವಾದ ಭಯ...
ಮನದ ಭಾರ ಹನಿಯಾದದ್ದು ಅವಳಿಗರಿವಾಗಬಾರದೆಂದು ನಾನೂ, ನನಗರಿವಾಗಬಾರದೆಂದು ಅವಳೂ ಒಬ್ಬರಿಗೊಬ್ಬರು ಗೊತ್ತಾಗದಂತೆ ಕಣ್ಣೊರೆಸಿಕೊಳ್ಳುತ್ತೇವೆ – ಪ್ರತಿ ವಿದಾಯದಲ್ಲೂ... ಅವಳು ಆಯಿ ನಾನವಳ ಕಂದ...

***

ಬದುಕೊಂದು ನಗೆ ಮಂಟಪ – ನಾನೊಬ್ಬ ವಿದೂಷಕ – ಆದರೆ ನನ್ನೊಳಗೆ ನಗು ಮರೀಚಿಕೆ – ನನ್ನಭಿನಯ ನೋಡಿ, ನನ್ನ ಮಾತ ಕೇಳಿ ಒಂದು ಕ್ಷಣ ನೀವಾದರೂ ನಕ್ಕರೆ ಅಷ್ಟೇ ಸಾರ್ಥಕ್ಯ ಬದುಕಿದ ಈವರೆಗಿನ ಬದುಕಿಗೆ...

***

“ನಗುವೇ ಬದುಕಾಗಲಿ” ಎಂಬುದು ಎಲ್ಲರಿಗೂ ನನ್ನ ಎಂದಿನ ಹಾರೈಕೆ...
ಆದರೆ ನಾ ರೂಢಿಸಿಕೊಂಡ ಬದುಕ ರೀತಿ, ಅತಿವಾಸ್ತವಿಕವಾದ ನನ್ನ ವರ್ತನೆ ಮತ್ತು ನನ್ನ ನೆನಪು ನನ್ನವರ ಕಣ್ಣಲ್ಲಿ ಹನಿ ಮೂಡಿಸುತ್ತೆ ಸದಾ...
ಅಕ್ಷಿಗಳ ಕಕ್ಷೆಯಲಿ ಹನಿದುಂಬಿ ಹರಿಯುವುದು ಅಭಿಮಾನದ ಆತ್ಮಸಂತೋಷದಿಂದಲೂ ಆಗಬಹುದಿತ್ತು; ಆದರದು ಎಲ್ಲ ಸಲವೂ ಅರ್ಥವಾಗದ ವೇದನೆಯಿಂದಲೇ ಆಗಿರುತ್ತೆ...
ಈ ವಿಪರ್ಯಾಸಕ್ಕೆ ನಿಮಗಿರಲಿ ನನಗೇ ನಾನು ಸಮಝಾಯಿಶಿ ಕೊಟ್ಟುಕೊಳ್ಳಲೂ ಆಗದೇ ಸೋತಿದ್ದೇನೆ...

***

ಆ ಕೋಣೆಯ ಎದುರಿನ ಜಗುಲಿಯಲ್ಲಿ ಸಾಲಾಗಿ ಅಷ್ಟೆಲ್ಲ ಜನರಿದ್ದಾರೆ... 
ಯಾರಿಗೂ ಕೆಲಸ ಇಲ್ಲ ಅಲ್ಲಿ... 
ಆದರೂ ಎಲ್ಲರಿಗೂ ಗಡಿಬಿಡಿ... 
ಎಲ್ಲರ ಮನಸಲ್ಲೂ ಬದುಕಿಗಿಂತ ಸಾವೇ ಸನಿಹವಾಗಿ ಬದುಕಿನ ದಿಕ್ಕೇ ಬದಲಾಗುವಂಥದ್ದೇನೋ ಆದೀತೆಂಬ ತೀವ್ರ ದುಗುಡ... 
ನಗು ಕೂಡ ಅಳುವಿನಂತೆ ಕೇಳುತ್ತೆ ಅಲ್ಲಿ... 
ಒಂದಾನುವೇಳೆ ನೀವು ಕೋಣೆಯಿಂದ ನಗುತ್ತ ಆಚೆ ಬಂದಿರಾದರೆ ಸಾವಿನ ನೆರಳ ಹೊತ್ತ ಕಣ್ಣುಗಳ ಸ್ವಾಗತ... 
ಹೌದು ಅದು ದೊಡ್ಡಾಸ್ಪತ್ರೆ... 
ಅಲ್ಲಿ ಹೋದಾಗಲೆಲ್ಲಾ ಬದುಕೂ ಒಂಥರಾ ದೊಡ್ಡಾಸ್ಪತ್ರೆಯೇ ಅಂತನ್ನಿಸುತ್ತೆ...

***

ಮನದ ಭಾವಗಳಿಗೆ ಪದಗಳ ಪೊಣಿಸುತ್ತ ಹೋದೆ... 
ಭಾವಗಳ ಗೊಂಚಲು ನೂರಾಯಿತು... 
ಸಾಧಿಸಿದ್ದೇನೆಂದರೆ :
ಮನಸು ಅಷ್ಟಿಷ್ಟು ಹಗುರಾಯಿತು...
ಅದಕೂ ದೊಡ್ಡ ಸಾಧನೆಯೆಂದರೆ ನಿಮ್ಮಗಳ ಸ್ನೇಹ ಬಂಧವ ದಕ್ಕಿಸಿಕೊಂಡ ಹೆಮ್ಮೆಯಿಂದು ಜೊತೆಯಾಗಿದೆ...
ಒಂದಷ್ಟು ಹೊಸ ಭಾವಗಳು - ಹೊಸ ಬಂಧಗಳು ಈ ಬದುಕ ದಾರಿಗೆ ಜೊತೆಯಾಲು ಈ "ಭಾವಗಳ ಗೊಂಚಲು" ಕಾರಣವಾಯಿತು...
ಏನು ಬರೆದೆ ಎನ್ನುವುದಕಿಂತ ಬರೆದುದರಿಂದ ಏನ ಪಡೆದೆ ಎಂಬುದು ಮುಖ್ಯವಾಗುವ ಹೊತ್ತಿಗೆ ಇದಕಿಂತ ಹೆಚ್ಚಿಗೆ ಇನ್ನೇನು ಬೇಕು ಬದುಕಿಗೆ ಅನ್ನುತ್ತೇನೆ...
ಈ ಬದುಕ ಮೇಲೆ ತುಂಬ ಅಂದರೆ ತುಂಬಾನೇ ಪ್ರೀತಿಯಾಗುತ್ತಿದೆ ಮತ್ತೆ ಮತ್ತೆ...
ನಿಮ್ಮಗಳ ಸ್ನೇಹಕ್ಕೆ - ನೀವು ನೀಡೋ ವಿನಾಕಾರಣದ ಪ್ರೀತಿಗೆ ಈ ಮೂಲಕ ನೂರು ನೂರು ನಮನ ನಿಮಗೆ...
ಪ್ರೀತಿಯಿರಲಿ - ವಿಶ್ವಾಸ ವೃದ್ಧಿಸಲಿ... 

Saturday, November 30, 2013

ಗೊಂಚಲು - ತೊಂಬತ್ತು ಮತ್ತು ಒಂಬತ್ತು.....

ಚಂದಮನ ಮಾತು...
(ಕೆಲ ಸಂಜೆಗಳ ಕಾಯುವ ಗೆಳೆಯನ ಬಗ್ಗೆ ತುಂಡು ತುಂಡು ಮಾತುಗಳು...)

ಮೇಲೆ ಮೋಡದ ಮರೇಲಿ ನಗೋ ಅರ್ಧ ಚಂದಿರ...ಕೆಳಗಿನ ಬೀದೀಲಿ ರಜೆಯ ಖುಷೀಲಿ ಕುಣಿದು ಕುಪ್ಪಳಿಸಿ ಬೀದಿ ತುಂಬ ಶೃಂಗಾರ ರಸ ಚೆಲ್ಲುತಿರೋ ಹೊಸ ಹರೆಯದ ಚಂದ್ರಮುಖಿಯರು... ಆಹಾ ಈ ಸಂಜೆಗೆಂಥ ಸೊಬಗು...;)
***
ಬಿಳಿ ಮೋಡದ ಹಿಂಡು – ನಡುವೆ ನಲಿವ ಚಂದಮ – ಆ ಮೂಲೆಯಲೊಂದು ಮಿನುಗೊ ಒಂಟಿ ತಾರೆ – ನಿನ್ನೊಡಗೂಡಿದ ಒಂದಿಷ್ಟು ಮಧುರ ನೆನಪುಗಳು – ಮೌನದ ಮುಸುಕಿನೊಳಗಿಂದ ಸಾವಿರ ಮಾತಾಡೊ ಮನಸು – ಸಂಜೆಯೊಂದು ಶೃಂಗಾರದ ಶೃಂಗವನೇರಿ ಸೊಬಗ ಸುರಿದು ನಗುತಲಿದೆ...
***
ಇದೀಗ ಜೊತೆಗೆ ನಿನ್ನ ನಗೆ ಬೆಳದಿಂಗಳೂ ಸೇರಿಕೊಂಡಿತು...
***
ಬಿಡುವಿದ್ರೆ ಆಚೆ ಬಂದು ಒಂದು ಕ್ಷಣ ಚಂದಮನ ನೋಡು... ನನ್ನ ನಗು ಕಾಣಿಸೀತು... ಬದುಕ ಪ್ರೀತಿ ಉಮ್ಮಳಿಸೀತು...
***
ಅಮ್ಮನ ಮಡಿಲಂಥ ತನ್ನ ತಂಪು ಹೊನಲಿನಿಂದ ನನ್ನ ಸಣ್ಣ ಕರುಳಿನಾಳದಲ್ಲಿ ಅವಳ (ನಿನ್ನ) ನಗೆಯ ನೆನಪ ಉರಿಯ ಹೊತ್ತಿಸೋ, ಅವಳ ಅಪರಿಮಿತ ಪ್ರೀತಿಯನೂ ಕೂಡ ಗೆದ್ದಿಟ್ಟುಕೊಂಡ ಈ ಚಂದಿರನೆಂದರೆ ನಂಗೆ ಒಮ್ಮೆಲೆ ಇನ್ನಿಲ್ಲದ ಪ್ರೀತಿ, ಈರ್ಶ್ಯೆ, ಸಿಟ್ಟು, ಉಲ್ಲಾಸ, ಬದುಕ ಪ್ರೀತಿ ಕಟ್ಟಿಕೊಡೋ ಸ್ನೇಹ ಎಲ್ಲವೂ...
***
ಗೆಳತೀ –
ಆಗಾಗ ಚಂದಿರ ನನ್ನ ಹೇಗೆಲ್ಲ ಕಾಡುತ್ತಾನೆ ಅಂದ್ರೆ – ಅಮ್ಮನ ಮಮತೆಯ ತಂಪಿನ ಹಾಗೆ, ಆಯಿಯ ಹಳೆ ಸೀರೆಯ ಘಮದ ಹಾಗೆ... ಬಾಲ್ಯದ ಮೊಣಕೈಯ ತರಚು ಗಾಯದ ಕಲೆಯ ಹಾಗೆ... ಆಗಾಗ ಕಾಡುವ ಛಳಿ ಜ್ವರದ ಹಾಗೆ.... ನಿನ್ನ ಕುಡಿನೋಟದ ಹಾಗೆ, ಹಸಿ ಪ್ರೀತಿಯ ಹಾಗೆ, ಹುಸಿ ಮುನಿಸಿನ ಹಾಗೆ, ಅಕಾರಣ ಮೌನದ ಹಾಗೆ, ನಿದ್ದೆ ಮಂಪರಿನ ನಿನ್ನ ಮುದ್ದು ನಗೆಯ ಹಾಗೆ ಮತ್ತು ಅರಿವೇ ಆಗದೆ ಬದುಕೇ ನೀನಾಗಿಹೋದ ಹಾಗೆ... 
***
ನೆನಪು ಕಾಡುವಾಗ – ಕನಸು ಹಾಡುವಾಗ – ಖುಷಿಯ ಹರಿವಿನಲಿ – ಹಸಿ ನೋವಿನಲಿ – ಸುಖದ ಅಮಲಿನಲಿ – ಎಲ್ಲ ಕಳಕೊಂಡು ಕಬೋಜಿಯಾದ ಭಾವ ಮನವ ಕದಡುತ್ತಿದ್ದಾಗ – ನೀ ಸಿಕ್ಕು ಮೊದ ಮೊದಲು ನಕ್ಕಾಗ – ನೀ ಅಲ್ಲೇಲ್ಲೋ ಕಳೆದು ಹೋದಾಗ – ಬದುಕ ಏರಿಳಿತದ ಎಲ್ಲ ಘಳಿಗೆಯಲೂ ನೆರಳಂತೆ ಜೊತೆಯಿದ್ದು ಮನವ ತುಂಬಿದ ನನ್ನ ಪ್ರೀತಿಯ ಗೆಳೆಯ – ಅವನು ನನ್ನ ಚಂದಮ... 
***
ಕಳೆದು ಹೋದ ಕನಸುಗಳ ನೆನಪಲ್ಲಿ ನಾ ಅಳುವಾಗ ಮೋಡದ ಮರೆ ಸೇರೋ ಆತನ ಕಂಡರೆ ನಂಗನ್ನಿಸುತ್ತೆ ಅವನೂ ಅಳುತಿರುವನೇನೋ... ತನ್ನಳುವ ತೋರಿ ನನ್ನಳುವ ಹೆಚ್ಚಿಸದಿರಲು ಮೋಡದ ಆಸರೆ ಪಡೆದನೇನೋ... ನಾನಳುವಾಗಲೆಲ್ಲ ಅವನೂ ಮಂಕಾದ ಭಾವ ನನ್ನಲ್ಲಿ – ಆತ ನನ್ನ ಚಂದಮ... 
***
ಚಂದಿರನೆಂದರೆ ನಂಗೆ ನನ್ನ ಕಾಡುವ ನನ್ನದೇ ಮನಸಿನ ಹಾಗೆ...  

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, November 27, 2013

ಗೊಂಚಲು - ತೊಂಬತ್ತೆಂಟು.....

ಮುಂಜಾನೆಯ ಹಾಡುಗಳು.....

ಇಬ್ಬನಿಯ ತಂಪಲ್ಲಿ ಬೆರೆತು ಸವಿ ನೆನಪುಗಳು ಮಾತಾಡುತಿವೆ...
ಈ ದಿನಕೊಂದು ಮಧುರ ಮುನ್ನುಡಿ...
****
ಈ ದಾರಿ, ಈ ಗಾಳಿ, ಪ್ರಕೃತಿಯ ಮಧುರ ಮೌನ, ಸಂತೆ ನಡುವೆಯೂ ಹಾಡುವ ಒಂಟಿ ಒಂಟಿ ಭಾವ...
ಈ ಬೆಳಗಿಗೆ ಒಂಥರಾ ಮಧುರ ಯಾತನೆ...
****
ಅದೇ ಬೆಳಗು – ಅದೇ ನಗು ಹೊಸ ಭಾವದಲಿ ಹೊರಹೊಮ್ಮಿ ಈ ಬೆಳಗಿಗೊಂದು ಹೊಸತನ...
****
ಬೆಳಕು ಕಾಯಲಿ ಬದುಕ... 
ಕಾವ ಕಾಣ್ಕೆಯ ಕನಸ ಈ ಬೆಳಗು...
****
ತುಂಬಿಕೊಳ್ಳುವ ತುಡಿತದ ಖಾಲಿ ಖಾಲಿ ಬೆಳಗು...
****
ಮತ್ತದೇ ಕಾಡುವ ಹಾಡಿನಂಥ ನಿನ್ನ ನೆನಪು ಈ ಬೆಳಗಿನ ಸೊಬಗು...
****
ನಿದಿರೆ ಮಡಿಲಿಂದೆದ್ದು ಕನಸ ಚಾದರ ಸರಿಸಿ ಮೈಮುರಿದು ಕಣ್ಬಿಟ್ಟ ನಿನ್ನಲ್ಲಿ; ಕಂಡ ಕನಸ ನನಸಾಗಿಸಿಕೊಂಡು ಹೆಮ್ಮೆಯ ನಗು ಬೀರಲು ಮುಂದಡಿಯಿಡುವ ಚೈತನ್ಯವ ತುಂಬಲಿ ಈ ಬೆಳಗು...
****
ಬೆಳಗೆಂದರೆ ನಂಗೆ - ನಿನ್ನ ನಗೆಯ ನೆನಪು - ದಿನವೆಲ್ಲ ಖುಷಿಯ ಒನಪು...
****
ಮುಂಬೆಳಗಲ್ಲಿ ನಿನ್ನ ಮುಗುಳ್ನಗೆಯ ಕನಸು – ನಚ್ಚಗಾದ ಮನಸು - ಮಂದಾರ ಅರಳಿದಂತೆ ಬಿಚ್ಚಿಕೊಂಡ ಈ ಮಧುರ ಮುಂಜಾನೆಗೊಂದು ಶುಭಾಶಯ...
****
ಬೆಳಗೆಂದರೆ ಭರವಸೆ - ಶುಭದಿನದ ಮುನ್ನುಡಿ...
ಚಂದದ ದಿನವೊಂದು ಹಸುಳೆಯ ನಗುವಂತೆ ಬಿಚ್ಚಿಕೊಳ್ಳಲಿ...

Sunday, November 24, 2013

ಗೊಂಚಲು – ತೊಂಬತ್ತು ಮತ್ತು ಏಳು.....

ಹಿಂಗೆಲ್ಲ ಅನ್ನಿಸುತ್ತೆ.....
(ಇವು ಕೇವಲ ನನ್ನ ಸತ್ಯಗಳು...)

ಮನಸಿಗೆ ರೂಢಿಸಬೇಕಾದದ್ದು ಪ್ರಖರ ಶಿಸ್ತನ್ನಲ್ಲವೇನೋ – ಬದಲಿಗೆ ಸಂಸ್ಕಾರವಂತ ಅನುಶಾಸನವನ್ನು ದಕ್ಕಿಸಿಕೊಟ್ಟರೆ ಚಂದವೇನೋ... ಶಿಸ್ತಿನಲ್ಲೊಂದು ಒತ್ತಡವಿದೆ – ಅನುಶಾಸನದಲ್ಲಿ ಒಲುಮೆಯಿದೆ... ಮನಸಿನ ಪ್ರಾಮಾಣಿಕ ಆತ್ಮೀಕತೆ ವಿಜೃಂಭಿಸಿ, ಮನದ ಭಾವ – ಬಂಧಗಳು ಬೆಳಗಲು ಯಾರದೋ ಅಥವಾ ಸಮಾಜದ ಶಿಸ್ತಿನ ಚೌಕಟ್ಟಿಗಿಂತ ಸ್ವಯಂ ಮನಸಿನ ಅನುಶಾಸನವೇ ಹೆಚ್ಚು ಸಹಕಾರಿ ಅನ್ಸುತ್ತೆ ನಂಗೆ... ಯಾಕೆಂದರೆ ಹೂವೊಂದು ಅರಳುವಂತೆ ಮನಸು ಅರಳಬೇಕು; ಮುಳ್ಳುಗಳು ಅಥವಾ ಕೀಳುವ ಕೈಗಳ ಭಯವಿಲ್ಲದೆ – ಆತ್ಮೀಯತೆಯ ಸನ್ನಿಧಿಯಲ್ಲಿ...

ಕನಸುಗಳಿಗೆಂದೂ ಬೇಲಿ ಹಾಕಲಾರೆ – ಬೇಲಿ ಜಿಗಿಯುವ ಕನಸುಗಳೆಡೆಗೆ ನಂಗೆ ವಿಪರೀತ ವ್ಯಾಮೋಹ... ನಿಜದ ಆನಂದಮಯ ಬದುಕು ಅಲ್ಲಿ ಆ ಬೇಲಿಗಳಾಚೆಯೇ ಇದೆ ಎಂಬುದು ನನ್ನ ಖಚಿತ ಅನುಮಾನ...

ಯಾವ ಮಿತಿಗಳಿಗೂ ಒಗ್ಗದ ಕನಸುಗಳು ನನ್ನವು... ಚೌಕಟ್ಟಿಲ್ಲದ ಕನಸಿನಂಥ ಆತ್ಮೀಕ ಗೆಳೆತನ ಸಾಧಿಸುವ ಹಂಬಲ ಈ ಬದುಕಿನೊಂದಿಗೆ ನನಗೆ ಮತ್ತು ನನ್ನೊಂದಿಗೆ ನನಗೆ - ಅಲ್ಲದೇ __________________ ಕೂಡ... 

ಒಂದಷ್ಟು ದೂರ ಒಂದಷ್ಟು ಹೆಜ್ಜೆ ಜೊತೆ ನಡೆವ ಹಂಬಲವಿತ್ತು ಮೊದಲು ಕೈಕುಲುಕಿದಾಗ... ಹಂಚಬೇಕಾದದ್ದನ್ನು ಹೇರಲು ಹೋಗಿ ಜೊತೆಯಾದ ಹೆಜ್ಜೆಗಳಲಿ ಭಾರ ತುಂಬಿದೆ... ಇಂದೀಗ ಒಂಟಿ ಹೆಜ್ಜೆಗಳ ದಾರೀಲಿ ಬೆಸೆದಿದ್ದ ಭರವಸೆಯ ಹಸ್ತಗಳ ಘನತೆ ಅರಿವಾಗಿ, ನಿನ್ನೆಗಳ ನೆನಪಲ್ಲಿ ಉಸಿರೂ ಭಾರವೆನಿಸುತಿದೆ... ಆದರೆ ನನ್ನೊರಟು ಭಾವಗಳ ಸುಳಿಗೆ ಸಿಕ್ಕಿ ಕಂಗಾಲಾಗಿರೋ ಆ ಮನಗಳ ಹಗುರಾಗಿಸೋ ವಿದ್ಯೆ ಗೊತ್ತಿಲ್ಲ ಹಾಗೂ ಬದುಕಿಗೋ ಹಿಮ್ಮುಖ ಚಲನೆಯ ಕಲ್ಪನೆಯೂ ಇಲ್ಲ... 

ಬೆಳಕೆಂದರೆ ಬೆಳಗುವುದೆನ್ನುವರು... ಬೆಳಕೆಂದರೆ ಬೆತ್ತಲು ಕೂಡ... ಒಮ್ಮೊಮ್ಮೆ ಹಗಲೆಂದರೆ ಕನಸುಗಳ ಹೆಣ ಹೂಳುವ ಖಾಲಿ ಖಾಲಿ ಬಯಲು ನಂಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, November 21, 2013

ಗೊಂಚಲು - ತೊಂಬತ್ತು ಮತ್ತಾರು.....

ಕಾಡುವ ಅಪೂರ್ಣ ಖುಷಿಯ ಭಾವಗಳು.....
(ಇಲ್ಲಿಯ ಭಾವಗಳು ಕೇವಲ ನನ್ನ ಕಲ್ಪನೆಗಳಷ್ಟೇ...)

ಗೆಳೆಯಾ -
ಸಂದು ಹೋದ ನಲವತ್ತರಾಚೆ ನಿಂತು ಹಿಂತಿರುಗಿ ನೋಡುತ್ತಿದ್ದೇನೆ ಕಳೆದ ಇಪ್ಪತ್ತು ಸಂವತ್ಸರಗಳ... ಅವು ಬದುಕಿಗೆ ನೀ ಸಿಕ್ಕ ಮೇಲಿನ ಸಂವತ್ಸರಗಳು...
ಮೊದಲ ರಾತ್ರೀಲಿ ಹಸಿದ ಮೈಯನ್ನು ಹರಿದು ಹೀರುವಂತೆ ನೀ ತಬ್ಬಿಕೊಂಡ ನೆನಪಿಗಿಂತ ನಂಗೆ ಅದಕೂ ಮುಂಚಿನ ದಿನಗಳಲ್ಲಿ ಆ ತಿರುವಿನಲ್ಲಿ   ಬೀಳ್ಕೊಡುವ ಮುನ್ನ ನೀ ಆತ್ಮೀಯ ಸ್ನೇಹಭಾವದಲ್ಲಿ ಆಲಂಗಿಸಿ ಹಣೆಯ ಮುದ್ದಿಸುತ್ತಿದ್ದೆಯಲ್ಲ ಅದೇ ಹೆಚ್ಚು ಹಿತವಾಗಿ ನೆನಪಾಗುತ್ತೆ ಕಣೋ... ನೀ ಸ್ನೇಹದಲ್ಲಿ ಚುಂಬಿಸಿದ ಹಣೆಯನ್ನು ಇನ್ನಿಲ್ಲದಂತೆ ಪ್ರೀತಿಸಿದವಳು ನಾನು... ಅದರ ಅಂದ ಹೆಚ್ಚಿಸಿಕೊಳ್ಳಲೆಂದೇ ಅದುವರೆಗೆ ಅಲರ್ಜಿಯಿಂದ ನೋಡುತ್ತಿದ್ದ ಬಿಂದಿಯನ್ನೂ ಪ್ರೀತಿಸತೊಡಗಿ ಹಣೆಯ ಅದರಿಂದ ಸಿಂಗರಿಸಿಕೊಂಡವಳು... ಈಗ ಎಷ್ಟು ಕಾಲವಾಗಿ ಹೋಯಿತು ನೀ ಮತ್ತದೇ ಆತ್ಮಬಂಧುತ್ವದ ಭಾವದಲ್ಲಿ ಈ ಹಣೆಯ ಮುದ್ದಿಸಿ... ಆ ತೋಳಲ್ಲಿನ ಆತ್ಮೀಯತೆ, ನನ್ನ ರೂಪ – ಅಂತಸ್ತು – ಅಸಹಾಯಕತೆಗಳ ಬಗೆಗಿನ ನನ್ನ ಕೀಳರಿಮೆಗಳೆಲ್ಲ ಕಳೆದು ಹೋಗಿ ನಂಗಲ್ಲಿ ಸಿಗುತ್ತಿದ್ದ ಭರವಸೆ ಹಾಗೂ ಹಗುರತೆ ಇಂದ್ಯಾಕೆ ಸಿಗುತ್ತಿಲ್ಲ... ಸಾವಿರ ಜನರೆದುರೂ ಆತ್ಮೀಯವಾಗಿ ಆಲಂಗಿಸುತ್ತಿದ್ದವನು ಇಂದು ನಿನ್ನದೇ ಮನೆಯಂಗಳದಲ್ಲೂ ಹಾಗೇ ಸುಮ್ಮನೆ ಎಂಬಂತೆ ಪ್ರೀತಿ ತೋರಲೂ ಸಿಡುಕುವುದೇತಕೆ.? ಅಂದಿನ ಆ ಪ್ರೀತಿ ಎಲ್ಲಿ ಕಳೆದುಹೋಯಿತು.? ಆಲಿಂಗನ ಎಂಬುದು ರಾತ್ರಿಯ ಸುಖದ ಮುಂಚಿನ ಕಸರತ್ತು ಮಾತ್ರವಾಗಿ ಬದಲಾದದ್ದೇಕೆ.? ಅಂದು ಆ ಪಾರ್ಕಿನ ನಡುಮಧ್ಯದ ಬೆಂಚಿನ ಮೇಲೆ ಕೂಡ ನಿನ್ನ ಹೆಗಲು ತಬ್ಬಿ ಅಳಬಹುದಿತ್ತಲ್ಲ ನಾನು – ಖುಷಿಗೂ, ನೋವಿಗೂ... ಇಂದು ಈ ಏಕಾಂತದಲ್ಲಿ ಕೂಡ ಕಣ್ಣೀರಾಗಲಾಗದಿದ್ದುದಕೆ ಕಾರಣ ಏನು.? ಅಂದು ಅಷ್ಟೆಲ್ಲ ರಹದಾರಿ ದೂರವಿದ್ದೂ ಇಬ್ಬರಿಗೂ ಒಬ್ಬರಲ್ಲಿನ ಚಿಕ್ಕ ಕದಲಿಕೆಯೂ ಅರಿವಾಗುತ್ತಿತ್ತಲ್ಲ ಇಂದು ಉಸಿರು ತಾಕುವಷ್ಟು ಹತ್ತಿರವಿದ್ದರೂ ನನ್ನ ನಿಟ್ಟುಸಿರು ಕೂಡ ನಿನ್ನ ತಾಕದಂತಾದದ್ದು ಹೇಗೆ.? ಈಗಲೂ, ಈ ಕ್ಷಣಕ್ಕೂ ಅಂದುಕೊಳ್ತೇನೆ ಇದನೆಲ್ಲ ಹೇಳಿ ಮನಸಾರೆ ಅತ್ತು ನಿನ್ನ ಕಣ್ಣಲ್ಲಿ ಕಣ್ಣಿಡಬೇಕೆಂದು... ಆ ಭಾವದಲ್ಲಿ ನಾ ನಿನ್ನ ತೋಳು ತಬ್ಬಿದರೆ ನೀನದನ್ನ ನನ್ನ ಆಹ್ವಾನ ಅಂದುಕೊಂಡು ಮಾತಾಡಲೆಂದು ಬಿರಿದ ತುಟಿಯ ಮಧುಪಾತ್ರೆಯಾಗಿಸಿಕೊಂಡುಬಿಡ್ತೀಯ... ಮತ್ತೆಲ್ಲಿ ಮಾತು... ಬೇಕೋ ಬೇಡವೋ ಮಾತಾಡಬೇಕಿದ್ದ ಮನಸು ಮೂಕವಾಗಿ ದೇಹ ಮಾತಿಗಿಳಿಯುತ್ತೆ... ಕೂಡಿ ಕಳೆವುದೆಲ್ಲ  ಮುಗಿದ ಮೇಲಾದರೂ ಮಾತಿಗಿಳಿಯೋಣವೆಂದರೆ ನಿಂಗೆ ಸುಖದ ಸುಸ್ತು – ಗಾಢ ನಿದ್ದೆ... ಎಲ್ಲ ಸುಖಗಳ ನಂತರವೂ ನನ್ನಲ್ಲುಳಿವುದು ಬರೀ ನಿಟ್ಟುಸಿರು... ಬದುಕಿನ ಯಾವುದೋ ತಿರುವಲ್ಲಿ ಆಕಸ್ಮಿಕ ಎಂಬಂತೆ ಎದುರಾಗಿ, ಎಷ್ಟೆಲ್ಲ ಭಾವಗಳು ಹೊಂದಿಕೊಂಡು  ಬೆಸೆದುಕೊಂಡಿದ್ದ ಮಧುರ ಸ್ನೇಹವನ್ನ ಬದುಕಿಡೀ ಸಲಹಿಕೊಳ್ಳುವ, ಆ ಸ್ನೇಹದ ನಡುವೆ ಇನ್ಯಾರಿಗೂ ಉಸಿರಾಡಲು ಅವಕಾಶ ಕೊಡದಿರುವ ತೀವ್ರ ಹಂಬಲದಿಂದಲ್ಲವಾ ನಾವು ಸ್ನೇಹವನ್ನು ಪ್ರೇಮವಾಗಿಸಿಕೊಂಡು ಮದುವೆಯ ಬಂಧದಲ್ಲಿ ಬೆಸೆದುಕೊಂಡದ್ದು... ಇಲ್ಲಿ ಬೆಸೆದ ಬಂಧವನ್ನು ಜನ್ಮಾಂತರಕ್ಕೂ ವಿಸ್ತರಿಸಿಕೊಳ್ಳುವ ಆಸೆಯಿಂದಲ್ಲವಾ ಮದುವೆಯಾದದ್ದು... ಹಾಗೆ ಜನ್ಮಾಂತರಗಳವರೆಗೂ ನಮ್ಮನ್ನು ಬೆಸೆಯಬೇಕಿದ್ದ ಮದುವೆಯ ಬಂಧ ಬರೀ ಎರಡು ಸಂವತ್ಸರಗಳಲ್ಲೇ ಹಳಸಿದ ಭಾವ ಕೊಡುತ್ತಿರುವುದೇತಕೆ... ದೇಹಗಳು ಬೆತ್ತಲಾಗುತ್ತ ಆಗುತ್ತ ಮನಸು ಕತ್ತಲೆಗೆ ಜಾರಿ ಹೋಯಿತಾ... ಹಾಗಂತ ನಿಂಗೆ ನನ್ನೆಡೆಗೆ ಪ್ರೀತಿ ಇಲ್ಲ ಅಂತ ಯಾರಾದರೂ ಅಂದರೆ ನಾ ಸುತಾರಾಂ ಒಪ್ಪಲಾರೆ... ಆದರೆ ನಡುವೆ ಕಳಚಿಹೋದ ಆತ್ಮೀಯ ತಂತು ಯಾವುದು ಎಂಬುದು ನನಗೂ ಅರಿವಾಗುತ್ತಿಲ್ಲ... ಕೂತು ಮಾತಾಡಿ ಹಗುರಾಗಲು ನೀ ಸಿಗುತ್ತಿಲ್ಲ... ನೀ ದುಡಿತದಲ್ಲಿ ಸಂಪೂರ್ಣ ಕಳೆದುಹೋಗಿದ್ದು ನನ್ನ ಮತ್ತು ಭವಿಷ್ಯದಲ್ಲಿ ಬರಬಹುದಾದ ನಮ್ಮ ಜೀವಕುಡಿಯ ಸಲುವಾಗಿ ಎನ್ನುವ ನಿನ್ನ ಮಾತನ್ನ ನಾನು ಒಪ್ಪದೇ ವಿಧಿಯಿಲ್ಲ... ಆದರೆ  ಬದುಕ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಭಾವಗಳ ಕೊಂದುಕೊಂಡದ್ದು ಸರಿಯಾ ಎಂಬುದು ಪ್ರಶ್ನೆ.? ನಾಳೆ ಒಂದಿಷ್ಟು ಆರ್ಥಿಕ ಸ್ವಾತಂತ್ರ್ಯ ದಕ್ಕಿದ ಮೇಲೆ ಬರಲಿ ಅಂದುಕೊಂಡ ಮಗು ಇಂದೇ ಬಂದಿದ್ದರಾಗುತ್ತಿತ್ತೇನೋ... ಒಂದಿಷ್ಟು ನನ್ನ ಖಾಲಿತನ ತುಂಬುತ್ತಿತ್ತೇನೋ... ಆದರೂ ನನ್ನ ಆಸೆ ಬರೀ ಮಗುವೊಂದೇ ಅಲ್ಲ – ನೀನೂ ಮಗುವಾಗಬೇಕು ನನ್ನ ಮಡಿಲಲ್ಲಿ ಆ ದಿನಗಳಲ್ಲಿಯಂತೆ... ಆ ದಿನಗಳು ಮತ್ತೆ ಬಂದೀತಾ..? ಬದುಕಿನ ಇಪ್ಪತ್ಮೂರನೇ ಸಂವತ್ಸರದ ಖಾಲಿ ಖಾಲಿ ಬೆಳಗು ಮತ್ತು ನೀರವ ರಾತ್ರಿಗಳಲ್ಲಿ ಕಾಡುತ್ತಿದ್ದ ಈ ಭಾವಗಳಲ್ಲಿ ಇಂದಿಗೂ ಈ ಅರ್ಧ ಶತಮಾನದಂಚಲ್ಲೂ ಹೆಚ್ಚೇನೂ ವ್ಯತ್ಯಾಸವಾಗಿಲ್ಲ... ಇಪ್ಪತ್ನಾಕಕ್ಕೆ ಮಗಳನ್ನು ಮತ್ತೆರಡು ವರ್ಷದಲ್ಲಿ ಮಗನನ್ನೂ ಕೊಟ್ಟದ್ದು ಬಿಟ್ಟರೆ... ನೀನು ಮತ್ತೆಂದೂ ಮಗುವಾಗಲೇ ಇಲ್ಲ ನನ್ನ ಮಡಿಲಲ್ಲಿ...

ಅಂಗಳದಲ್ಲಿ ನನ್ನದೇ ಕರುಳ ಬಳ್ಳಿಗಳು ನಲಿಯುತ್ತಿದ್ದ ಕಳೆದ ದಶಕವೇನೋ ಚೆಂದಗೇ ಕಳೆದು ಹೋಯಿತೆನ್ನಬಹುದು... ಆದರೆ ಮತ್ತೆ ಇಂದು ಅಂದಿನ ಆ ಭಾವಗಳು ಕೆರಳಿ ಕಾಡಹತ್ತಿವೆ... ಇಂದು ಮಕ್ಕಳೂ ಬೆಳೆದುಬಿಟ್ಟಿದ್ದಾರೆ ಅನ್ನಿಸ್ತಿದೆ... ಅವರ ಬದುಕುಗಳೂ ಕವಲೊಡೆಯುತ್ತಿವೆ... ಮಗಳು ಕನ್ನಡಿಯನ್ನೇ ಹೆಚ್ಚು ಪ್ರೀತಿಸುತ್ತಿದ್ದಾಳೆ – ಮಗ ಬಾತ್‌ರೂಮಲ್ಲೇ ಘಂಟೆಗಟ್ಟಲೆ ಕಳೀತಾನೆ... ಅವರಿಗೀಗ ನಾ ಸುಮ್ ಸುಮ್ಮನೆ ಬೇಡದ ಮಾತಾಡಿ ಕಾಡೋ ಹಳೆಯ ಜಮಾನಾದ ಅಮ್ಮ... ನನ್ನಲ್ಲಿ ಏನೇನೋ ದುಗುಡಗಳು... ನಾನು ನಿಜಕ್ಕೂ ಹಳೆಯ ಜಮಾನಾದ ಹೆಂಗಸಾ... ನಿನ್ನ ಮತ್ತು ಮಕ್ಕಳ ನೆರಳಾಗಿ ಉಳಿದು ಬದುಕಿನ ನಿಜದ ಸವಿಯ ಕಳೆದುಕೊಂಡಿದ್ದೇನಾ... ಪ್ರೇಮಪೂರ್ಣ ಸಂಸಾರದ ಕನಸಲ್ಲಿ ನಾಲ್ಕು ಗೋಡೆಗಳ ಮಧ್ಯದ ಬಂಧಿಯಾಗಿಬಿಟ್ಟೆನಾ – ನಿಂತ ನೀರಾಗಿಹೋದೆನಾ... ಏನೇನೋ ಗೊಂದಲಗಳು... ಅವುಗಳ ಮಧ್ಯವೇ ಇಣುಕೋ ಹೊಸ ಆಸೆಗಳು (ಹೊಸತೋ ಅಥವಾ ಹಾಗೇ ಉಳಿದ ಹಳೆಯದರ ವಿಸ್ತರಣೆಯೋ ಅಂತ ಅನುಮಾನವಿದೆ)... ಅವನೆಲ್ಲ ನಿನ್ನೆದುರು ಹರವೋಣವೆಂದರೆ ನನ್ನ ದುಗುಡಗಳೆಲ್ಲ ನಿಂಗಿಂದು ತಮಾಷೆಯಾಗಿ ಕಾಣುತ್ವೆ... ನಮ್ಮಿಬ್ಬರ ನಡುವೆಯಂತೂ ದೇಹಗಳು ಕೂಡ ಮಾತಾಡುವುದು ವಿರಳವಾಗಿದೆ ಸಹಜವಾಗಿಯೇ... ಏನೆಲ್ಲ ಇದ್ದೂ ಕಾಡುವ ಈ ಒಂಟಿ ಒಂಟಿ ಅದೇ ಬೆಳಗು ಮತ್ತು ಅದದೇ ಸಂಜೆಗಳಲ್ಲಿ ಮತ್ತೆ ಮದುವೆಗೂ ಮುಂಚಿನ ಆ ದಿನಗಳು ನೆನಪಾಗುತ್ತಿವೆ... ನೀ ಸಿಕ್ಕು, ಬದುಕಿಗೆ ಹೊಸ ಸಂತೋಷ ಧುಮ್ಮಿಕ್ಕಿದ್ದ ಮದುವೆಗೂ ಮುಂಚಿನ ಆ ದಿನಗಳು... ಸಾಮಾನ್ಯವೆಂಬಂತೆ ಆದ ಪರಿಚಯ ಬಿಟ್ಟಿರಲಾರದ ಸ್ನೇಹವಾಗಿ ಒಬ್ಬರೇ ಸಾಗಬೇಕಾದ ಆ ಕಾಲು ದಾರೀಲಿ ಇಬ್ಬರೂ ಹಸ್ತಗಳ ಬೆಸೆದು ನಡೆದದ್ದು – ಕಲ್ಲೊಂದು ನನ್ನ ಕಾಲು ನೋಯಿಸಿದಾಗ ನಿನ್ನ ಕಣ್ಣಂಚು ಒದ್ದೆಯಾದದ್ದು – ಆ ಬೆಟ್ವವನೇರುವಾಗ ಸುಸ್ತಾಗಿ ನಾ ಸೊಂಟದ ಮೇಲೆ ಕೈಯಿಟ್ಟರೆ ನೀ ಮುಚ್ಚಟೆಯಿಂದ ನೆತ್ತಿ ನೇವರಿಸಿದ್ದು – ಯಾವುದೋ ತಿರುವಲ್ಲಿ ನಿಂಗೆ ಅಮ್ಮ ನೆನಪಾಗಿ ನೀ ನನ್ನ ಮಡಿಲಲ್ಲಿ ಮಗುವಾದದ್ದು – ಆ ಸಂಜೆ ಸಾಯೋ ಹೊತ್ತಲ್ಲಿ ಯಾವುದೋ ಹಳೆಯ ನೋವೊಂದ ನೆನೆದು ನಾ ನಿನ್ನ ಹೆಗಲ ತೋಯಿಸಿದ್ದು - ಹಗುರಾಗಿ ತಬ್ಬಿದ ನಿನ್ನ ಬಾಹುಗಳಲ್ಲಿ ನಂಗೆ ಭರವಸೆಯ ನಾಳೆಗಳು ಗೋಚರಿಸಿದ್ದು - ಆ ರಾತ್ರಿ ಕಾವಳದಲ್ಲಿ ನಿದ್ದೆ ಕಣ್ಣನೆಳೆಯುತಿದ್ದರೂ ನಿದ್ದೆ ಬರುತ್ತಿಲ್ಲ ಅಂತ ನಾ ಹಟಹೂಡಿದಾಗ ನೀ ತಟ್ಟಿ ತಟ್ಟಿ ಮಾಡಿ ನನ್ನ ಮಲಗಿಸಿದ್ದು – ಆ ಪುಟ್ಟ ವಿದಾಯದಲ್ಲೂ ಇಬ್ಬರ ಗಂಟಲೂ ತುಂಬಿ ಬರುತ್ತಿದ್ದುದು – ಸುಮ್ಮನೇ ಎಂಬಂತೆ ಹಣೆಗೆ ತುಟಿಯೊತ್ತುತಿದ್ದುದು – ಅಲ್ಯಾರೋ ನನ್ನ ಮುಖದ ಬದಲು ಎದೆಯೆಡೆಗೆ ಬಿಡುಗಣ್ಣನೆಟ್ಟದ್ದ ಕಂಡು ನಾ ಕೋಪಗೊಂಡರೆ ನೀನದನ್ನ ಅದೆಷ್ಟು ಗಂಡಸಿನ ಪ್ರಾಕೃತಿಕ ಅಭಿಲಾಷೆ ಅಂತ ವಿವರಿಸಿ ನನ್ನ ಕೋಪವ ಹೆಚ್ಚಿಸಿದ್ದು – ಅದ್ಯಾರೋ ಹುಡುಗೀನ ನೀ ನನ್ನೆದುರೇ ಹೊಗಳಿ ಬೆನ್ನಿಗೆ ಗುದ್ದು ತಿನ್ನುತಿದ್ದುದು... ಬದುಕನ್ನ ಅಷ್ಟೆಲ್ಲ ಚಂದಗೆ ವಿವರಿಸುತ್ತಿದ್ದೆಯಲ್ಲೋ... ಎಂಥ ಸ್ನೇಹವಿತ್ತು ಅಲ್ಲಿ... ನಂಗೆ ಆ ಗೆಳೆಯ ಮತ್ತೆ ಸಿಕ್ಕಾನಾ... ಅಥವಾ ಆ ಸ್ನೇಹವನ್ನ ಶಾಶ್ವತವಾಗಿಸುವ ತರಾತುರಿಯಲ್ಲಿ ಪ್ರೇಮವಾಗಿಸಿದ್ದೇ ತಪ್ಪಾಗಿ ಹೋಗಿ ಗೆಳೆಯನನ್ನು ಕಳೆದುಕೊಂಡುಬಿಟ್ಟೆನಾ... ಶಾಶ್ವತತೆಯ ಹುಯಿಲಿಗೆ ಬೀಳಬಾರದಿತ್ತಾ... ತೀವ್ರವಾಗಿ ಬೇಕೇಬೇಕಿನಿಸುತ್ತಿದೆ ಈ ಗಂಡನಲ್ಲಿ ಆ ಗೆಳೆಯ... ಮತ್ತೆ ಒಂದೇ ಒಂದು ಬಾರಿಯಾದರೂ ಆ ಕ್ಷಣಗಳು ಮರುಕಳಿಸಬಾರದಾ...

ಕೂದಲು ನೆರೆಯುತ್ತಿರುವ ಈ ವಯಸಲ್ಲಿ ಇದೇನು ಮತ್ತೆ ಹರೆಯಕ್ಕೆ ಹೋಗೋ ಹುಚ್ಚು ಹಂಬಲ ಅಂತೀಯೇನೋ... ಹೌದು ನಂಗೆ ಒಂಥರಾ ಹುಚ್ಚೇ... ನಡೆಯುತ್ತ ನಡೆಯುತ್ತ ದಾರಿ ಮಧ್ಯೆ ಎಲ್ಲೋ ಅರಿವೇ ಆಗದೆ ಕಳೆದುಕೊಂಡ ಮಧುರ ಭಾವಗಳ, ಖುಷಿಗಳ ಮತ್ತೆ ಹುಡುಕುವ ಹುಚ್ಚು... ಆದರೂ ಆ ಹುಚ್ಚಲ್ಲಿ ನಂಗೆ ಒಂಥರಾ ಅಪರಿಮಿತ ಸುಖವಿದೆ... ವಯಸ್ಸು ದೇಹಕ್ಕೆ ಮನಸಿಗಲ್ಲವಲ್ಲ... ಅಲ್ಲಿನ್ನೂ ಕನಸು ಚಿಗುರೋ ಚೈತನ್ಯವಿದೆಯಲ್ಲ... ಆ ಹುಚ್ಚು ಕನಸನ್ನು ಕೂಡ ನಾ ನಿನ್ನೆಡೆಗೇ ಕಾಣುತ್ತಿದ್ದೇನೆ... ಕೂದಲಿಗೆ ಬಣ್ಣ ಹಚ್ಚಿದಂತೆ ಮನಸಿನ ಭಾವಗಳಿಗೂ ಒಂಚೂರು ಬಣ್ಣ ಹಚ್ಚೋಣವಂತೆ ಮತ್ತೆ ಆ ದಿನಗಳಲ್ಲಿಯಂತೆ... ಬದುಕು ಗರಿಗೆದರಿ ನಲಿದೀತು ಮತ್ತೊಮ್ಮೆ... ಮಾತಾಗು ಒಮ್ಮೆ, ಮಗುವಾಗು ಇನ್ನೊಮ್ಮೆ, ಒಂದೇ ಒಂದು ಬಾರಿಯಾದರೂ ಕಣ್ಣಲ್ಲಿ ಕಣ್ಣಿಟ್ಟು ಹಣೆಯ ಮುದ್ದಿಟ್ಟು ಮನಸ ಸಿಂಗರಿಸು ನಾ ನನ್ನ ಒಂಟಿತನದಲ್ಲಿ ಪೂರ್ತಿ ಹುಗಿದು ಹೋಗುವ ಮುನ್ನ... 

ಮನಸಿನಿಂದಲೂ ನಗುವ ಆಸೆಯಿಂದ ನಿನ್ನೊಳಗಣ ಸ್ನೇಹಿತನ ಮತ್ತೆ ಕಾಣುವ ಕನಸಿನೆಡೆಗೆ ಕಣ್ಣು ನೆಟ್ಟಿರೋ – 
ನಿನ್ನಾಕೆ...

Saturday, November 16, 2013

ಗೊಂಚಲು – ತೊಂಬತ್ತು ಮತ್ತೈದು.....

ಮತ್ತೆ ನನ್ನ ಮನಸು.....

ಮೌನದೊಂದಿಗೆ ಸದಾ ಪ್ರಶ್ನೆಗಳೇ ನನ್ನದು – ಮೌನವ ಸದಾ ವಿರೋಧಿಸಿದೆ – ಹಠಕ್ಕೆ ಬಿದ್ದು ಮೌನವ ದೂರವಿಡಲು ಬಡಿದಾಡಿದೆ – ಅದರೊಂದಿಗೆ ಜಗಳವಂತೂ ವಿಪರೀತ – ಆದರೆ, ಎಲ್ಲಕೂ ಉತ್ತರವಾಗಿ ಮತ್ತೆ ಮೌನವೇ ದಕ್ಕಿತು – ಕಂಗಾಲಾಗಿ ಉಸಿರನಾದರೂ ಉಳಿಸಿಕೊಳ್ಳುವ ಹಂಬಲದಿ ಸೋಲೊಪ್ಪಿಕೊಂಡುಬಿಟ್ಟೆ – ನನ್ನ ಬಹಿರಂಗದ ಮಾತೀಗ ಮೌನದ ಮನೆಯ ಕೈದಿ – ಅದು ನನ್ನ ಮನಸು...

ಸಾವಿರಾರು ಭಾವಗಳು ಒಳಗಿಣುಕುತ್ತವೆ – ಅಷ್ಟೇ ಗಡಿಬಿಡಿಯಿಂದ ಹೊರಗೋಡುತ್ತವೆ – ಒಂದಾದರೂ ಭಾವಕ್ಕೆ ಶಾಶ್ವತ ನೆಲೆ ನೀಡುವಾಸೆ – ಆದರೆ, ಕನವರಿಕೆಯ ಕಣ್ಣ ಹನಿಯ ಕರೆಯಾಗಿ, ಹೆಣಭಾರದ ನೆನಪಾಗಿ ಮಾತ್ರ ಜೊತೆಗಿರುತ್ತವೆ – ಕಾರಣ; ನಿಲ್ದಾಣವಾಗುವ ಅರ್ಹತೆ ಕಳಕೊಂಡ ಮುದಿ ಸೂಳೆಯ ಮನೆ – ಅದು ನನ್ನ ಮನಸು...

ಈಗಿರುವ ಬದುಕಿಗೆ ಅತಿ ಪ್ರಾಮಾಣಿಕನಾಗಿರುವ ತೀವ್ರ ಹಂಬಲ – ಹೊಸದನ್ನು ನೋಡದಿರಲಾಗದ ಮೋಹದ ಗೊಂದಲ – ಈ ಎತ್ತರವ (?) ಬಿಡಲಾಗದ, ಆ ರುದ್ರರಮಣೀಯ ಕಣಿವೆಯಲಿ ಜಾರಿ ಕಳೆದುಹೋಗುವ ಆಸೆಯ ತಡೆಯಲಾಗದ - ನನ್ನೊಳಗೇ ನನ್ನ ಹಿಂಡಿ ಕಂಗೆಡಿಸುವ ನಲವತ್ತರಾಚೆಯ ನಿಷಿದ್ಧ ಕಾಮ – ಅದು ನನ್ನ ಮನಸು...

ಕೆಲ ಕನಸುಗಳಿಗೆ, ಭಾವ ಬಂಧಗಳಿಗೆ ಕೈಯಾರೆ ಹುಲ್ಲು ನೀರನುಣಿಸಿ – ಅವು ಬೆಳೆದು, ಕೊಬ್ಬಿ, ಕಣ್ಣರಳಿಸಿ, ಮೈಯುಜ್ಜಿ ನನ್ನ ಪ್ರೀತಿಸಿ ನಗುವಾಗ – ನಾ ಬದುಕಲೋಸುಗ ಅವುಗಳ ಕತ್ತು ಕಡಿಯುವ – ಬೆಳೆಸುವ ಮತ್ತು ಕಡಿಯುವ ಅನಿವಾರ್ಯತೆಗೆ ಬಿದ್ದ ಅಸಹಾಯಕ ಕಟುಕನ ಒರಟುತನ – ಅದು ನನ್ನ ಮನಸು...

ಎದೆಯನೇ ಒದ್ದರೂ ಮಗು ಬೆಳೆಯುತಿದೆಯೆಂದು ಮುದ್ದಿಸುವ – ಕಂದನ ದೂರುವವರನೆಲ್ಲ ತನ್ನಿಂದಲೂ ದೂರ ಸರಿಸುವ – ಎಲ್ಲರಂತಿಲ್ಲದ ತಪ್ಪಿಗೆ ಊರೆಲ್ಲ ಹಳಿದರೂ ತನ್ನ ಕುಡಿಯ ಎದೆಗವುಚಿ ಪ್ರೀತಿಸುವ – ಭರವಸೆಯ ಹಣತೆ ಉರಿವ ಅಮ್ಮನ ಮಡಿಲು – ಅದು ನನ್ನ ಮನಸು...

Thursday, November 14, 2013

ಗೊಂಚಲು - ತೊಂಬತ್ನಾಕು.....

ನನ್ನ ಮನಸು.....

ಬೇಲಿಯ ಹಂಗಿಲ್ಲ - ಕಾವಲುಗಾರ ಬೇಕಿಲ್ಲ – ಕಾರಣ: ಕಾಯಬೇಕಾದದ್ದೇನೂ ಉಳಿದಿಲ್ಲ – ಫಸಲೆಲ್ಲ ಒಣಗಿಹೋದ ಖಾಲಿ ಖಾಲಿ  ಬಯಲು – ಅದು ನನ್ನ ಮನಸು...

ಹೊಸ ಕನಸೊಂದು ಕರೆ ಮಾಡಿ ಹಾಯ್ ಅನ್ನ ಬಂದರೆ – ಕರೆ ಸ್ವೀಕರಿಸಲು ಕಳಕೊಂಡ ಕನಸುಗಳ ನೆನಪು - ಮತ್ತೊಂದು ಕನಸನು ಆ ಸಾಲಿಗೆ ಸೇರಿಸಿ ಯಾದಿ ಬೆಳೆಸಿದಂತಾದೀತೆಂಬ ಭಯದ ಮಂಪರು – ಅದು ನನ್ನ ಮನಸು...

ನಿನ್ನೆ ಎಲ್ಲ ಇತ್ತು – ಇಂದೀಗ ಎಲ್ಲ ಶೂನ್ಯ – ನಾಳೆಗಳಲೂ ಶೂನ್ಯವೇ ಶಾಶ್ವತವಾದೀತೆಂಬ ಭಯದ; ಯಜಮಾನ ಅಳಿದ ಸಾವಿನ ಮನೆಯ ಹಗಲು – ಅದು ನನ್ನ ಮನಸು...

ನಾನೆಂಬ ನನ್ನಹಂಮ್ಮಿನ ಗುಂಗಲ್ಲಿ – ನಿನ್ನೆ ನಾಳೆಗಳ ಹಂಗಲ್ಲಿ – ಹಳಸಿದವುಗಳ, ಅಳಿದವುಗಳ - ನನ್ನೆಲ್ಲ ಒರಟುತನದಲ್ಲಿ ದಹಿಸಿಯೂ ಉಳಿಯಲು ಒದ್ದಾಡುವವುಗಳ ಲೆಕ್ಕಾಚಾರಗಳಲ್ಲಿ ನಿದ್ದೆ ಸತ್ತ ಇರುಳು – ಅದು ನನ್ನ ಮನಸು...

ಪ್ರೀತಿಯ ಉಣಿಸಲಾರದ – ಯಾರೋ ನನಗುಣಿಸಬಂದರೆ ಉಣ್ಣಲೂ ಬಾರದ ಉರುಟು ಬಂಡೆ – ಯಾರಿಗೂ ನೆರಳು ಕೂಡ ಆಗದ ಜಾಲಿ ಮರ – ಅದು ನನ್ನ ಮನಸು...

ಜೀವಂತಿಕೆ ಇಲ್ಲದ – ಒಣ ಮಾತುಗಳಲ್ಲಿ ನಗುವಿನ ಕಾರಣ ಹುಡುಕುತ್ತಾ; ಮೂಲ ಖುಷಿಯ ಭಾವವನೇ ಕೊಲ್ಲುವ – ಶವ ಪರೀಕ್ಷಕ ಅಥವಾ ಹೆಣದ ಮನೆಯ ಒಡೆಯನ ನಿರ್ಭಾವುಕತೆ – ಅದು ನನ್ನ ಮನಸು...

Friday, November 8, 2013

ಗೊಂಚಲು - ತೊಂಬತ್ತು ಮತ್ತು ಮೂರು.....

ಹೀಗೊಂದು ಪತ್ರ.....

ಸಾವೇ –
ಬದುಕು ಶುರುವಾಗೋ ಮುಂಚೆ ಕೂಡ ಬರಬಲ್ಲ ಅಥವಾ ಬದುಕಿನ ಯಾವುದೇ ತಿರುವಲ್ಲೂ ಪಕ್ಕನೆ ಎದುರಾಗಬಲ್ಲ ನಿನ್ನನು, ಕಣ್ಣಿಲ್ಲದವನೆಂದರು – ಕರುಣೆ ಸ್ವಲ್ಪವೂ ಇಲ್ಲವೇ ಇಲ್ಲವೆಂದರು – ಕರೆಯದೇ ಬರುವ ಏಕೈಕ ಅಥಿತಿ ಎಂದರು – ಕರೆದರೂ ಬಾರದೇ ಕಾಡುವ ಕಟುಕ ಎಂಬರು... ಎಲ್ಲವೂ ಸತ್ಯವೇ... ಅವರವರ ಪರಿಸ್ಥಿತಿಯ ಕಣ್ಣಲ್ಲಿ ನೀ ಅವರವರ ಭಾವದಂತೆ...

ಹೀಗಂತ ಗೊತ್ತಾಗಿರುತ್ತಿದ್ದಿದ್ದರೆ ಗರ್ಭದಿಂದಾಚೆಯೇ ದೂಡುತ್ತಿರಲಿಲ್ಲ ಅನ್ನುತ್ತಿದ್ದಳು ಆ ತಾಯಿ ನಿನ್ನ ಕ್ರೌರ್ಯಕ್ಕೆ ಶಪಿಸುತ್ತಾ...
ನಿನ್ನೆ ತಾನೆ ಹುಟ್ಟಿದ್ದಂತೆ ಕೂಸು – ಈಗಷ್ಟೇ ಮಣ್ಣು ಮಾಡಿ ಮನೆಗೆ ಬಂದಿದ್ದಾರೆ...

ಎಲ್ಲ ಇದ್ದೂ ಯಾರೂ ಇಲ್ಲದಂತಾಗಿ ಆ ಮೂಲೆಯಲ್ಲಿ ಕೂತು ದೀನತೆಯಿಂದ ನಿನ್ನ ಬರವಿಗಾಗಿ ಕಾತರಿಸುತ್ತಿದ್ದಾನೆ ಆ ತಾತ ಬಾಗಿಲೆಡೆಗೆ ಕಣ್ಣು ನೆಟ್ಟು – ನೀ ತಿರುಗಿಯೂ ನೋಡುತ್ತಿಲ್ಲ – ಜಾಣ ಕುರುಡನಂತೆ...

ನಾನೂ ಕರೆದಿರಲಿಲ್ಲ ನಿನ್ನ – ಆದರೂ ಬರುತ್ತಿರುವ ಸಂದೇಶ ನನ್ನ ತಲುಪಿತು... ಮೊದ ಮೊದಲು ಸುಳ್ಳೇ ಭ್ರಮೆ ಅಂದುಕೊಂಡೆ... ಇಲ್ಲ ಸತ್ಯವೇ ಅದು ಅಂತಂದರು ಸದಾ ನಿನ್ನಿಂದ ನಮ್ಮಗಳ ದೂರವಿಡಲು ದುಡಿವ ನರನಾರಾಯಣರು... ಸ್ವಲ್ಪ ಕಹಿ ಕಹಿ ಅನ್ನಿಸಿತು... ಆದರೂ ಎಂದಾದರೂ ನಿನ್ನ ಸೇರಲೇಬೇಕಲ್ಲ ಎಂಬ ಅರಿವಿತ್ತಲ್ಲ ಅದಕ್ಕೇ ಸರಿ ಬಂದುಬಿಡು ಅಂತಂದು ಬಾಗಿಲು ತರೆದಿಟ್ಟೆ... ನೀನೋ ಬಲೇ ಕಿಲಾಡಿ, ಬಾಗಿಲಿಗೆ ಬಂದು ನಿಂತು ಒಳಗಡಿಯಿಡದೇ ಮಜ ನೋಡುತ್ತ ನಿಂತುಬಿಟ್ಟೆ... ಆಗಲೇ ಶುರುವಾದದ್ದು ನಿಜವಾದ ಒದ್ದಾಟ – ಯಾವ ಅರಿವೂ ತಣಿಸಲಾರದ, ಮಣಿಸಲಾಗದ ಮನದ ಗುದ್ದಾಟ... 
ನನಗೆ ನೀನಿಲ್ಲ ಅಥವಾ ಎಲ್ಲೋ ದೂರದಲ್ಲಿದ್ದೀಯಾ ಅನ್ನೋ ಭಾವದಲ್ಲಲ್ಲವಾ ಎಳೆಯರ ನಾಳೆಗಳಿಗೆ ಬಲ - ಉಲ್ಲಾಸ, ಉನ್ಮಾದಗಳಿಗೆ ಜೀವ ಬಂದು ಮನದೊಳಗೆ ರಂಗುರಂಗಿನ ಕನಸುಗಳ ಜಾಲ... ಎಲ್ಲೋ ಇದ್ದು ಧೈರ್ಯ ತುಂಬಬೇಕಾದೋನು ಕಣ್ಣೆದುರೇ ದುಃಸ್ವಪ್ನದಂತೆ ನಿಂತುಬಿಟ್ಟರೆ ಕ್ಷಣ ಕ್ಷಣವೂ ___________ ... 

ಪ್ರಜ್ಞಾಪೂರ್ವಕವಾಗಿ ನಾಳೆಗಳಿಗೋಸ್ಕರ ಕನಸುಗಳ ಒಳಗೆಳೆದುಕೊಂಡರೆ, ಬಾಗಿಲಲ್ಲಿರುವ ನಿನ್ನ ಹಾದೇ ಒಳ ಬಂದ ಕನಸುಗಳಲೂ ನಿನ್ನದೇ ಕರಕಲು ವಾಸನೆ... 

ನಿನ್ನ ಅಸ್ಪಷ್ಟವಾಗಿ ಕಂಡ ಭಯದಲ್ಲಿ ಕೈಯಾರೆ ದೂಡಿ ದೂರವಿಟ್ಟ ಮಧುರ ಖುಷಿಯ ಭಾವಗಳು – ಕೈ ಕೊಡವಿ ಎದ್ದು ಬಂದ ಕೈ ಹಿಡಿದು ಆ ತೀರದವರೆಗೂ ನಡೆಯಬಹುದಾಗಿದ್ದ ಬಂಧಗಳೆಲ್ಲ ರಾತ್ರಿ ಕನಸಲ್ಲಿ ಪ್ರೇತಗಳಂತೆ ಕುಣಿಯುವಾಗ, ನೋವು ಎನ್ನಲಾಗದ – ಆದರೆ ಖುಷಿಯೂ ಇಲ್ಲದ ಒಂಥರಾ ಸ್ತಬ್ದತೆ ಸದಾ ಕಾಡುವಾಗ, ಜಂಗುಳಿಯ ನಡುವೆ ಸೂರು ಹಾರುವಂತೆ ನಗುತಿರುವಾಗಲೂ ಯಾವುದೋ ಮೂಲೆಯಲಿ ಒಂಟಿ ಒಂಟಿ ಅನ್ನಿಸೋ ಶಾಶ್ವತ ಖಾಲಿತನ ಹಿಂಡುವಾಗ, ಬಿಟ್ಟು ಬದುಕಲಾರೆನೆನ್ನಿಸೋ ಯಾರೂ ಸಹಿಸಲಾಗದ ಒರಟುತನ – ತೊಟ್ಟು ಉಳಿಯಲಾಗದ ಬಂಧ ಬೆಸೆಯಲು ಬೇಕೇ ಬೇಕಿದ್ದ ಮೃದುತನಗಳ ನಡುವೆ ಮನಸು ಹಾಗೂ ಮನಸ ಸಂತೈಸಬೇಕಿದ್ದ ಬುದ್ಧಿಯೂ ಕಂಗಾಲಾದಾಗ, ಕೈ ಮೀರಿ ನಿಶ್ಯಕ್ತನೆನಿಸೋ ಮುಂಚೆಯೇ ಮುಗಿದುಹೋಗಲಿ ಅಂದುಕೊಂಡ ಬದುಕ ದಾರಿ ಅಂದುಕೊಂಡದ್ದಕ್ಕಿಂತ ದೀರ್ಘವಾಯಿತು ಅಂತನ್ನಿಸಿದಾಗಲೆಲ್ಲ... ಆಗೆಲ್ಲ ಒಮ್ಮೊಮ್ಮೆ ಅನ್ನಿಸಿಬಿಡುತ್ತೆ – ಒಳಗೂ ಅಡಿಯಿಡದೇ, ಕಣ್ಣ ಹರಹಿನಿಂದಾಚೆಯೂ ಹೋಗದೇ, ನನ್ನ ಕನಸ ರಂಗೋಲಿಯನೆಲ್ಲ ತುಳಿಯುತ್ತ ನೀ ನಿಂತ ಮುಂಬಾಗಿಲಿಂದಾಚೆ ನಿನ್ನೆಡೆಗೆ ನಾನೇ ಅಡಿಯಿಟ್ಟುಬಿಡಲಾ...!!!

ಮರುಕ್ಷಣ ಅನ್ನಿಸುತ್ತೆ - ಸೋಲು ಸಹನೀಯ ಆದರೆ ಶರಣಾಗತಿ ಕಲ್ಪನೆಗೂ ನಿಲುಕದ್ದು... ಉಹುಂ – ಆಗದ ಮಾತು ಅದು; ನಾನಾಗಿ ನಾನು ನಿನ್ನೆಡೆಗೆ ಬರಲಾರೆ... ಗೊತ್ತು ನಿನ್ನ ಗೆಲ್ಲಲಾಗದು ಅಂತ – ಆದರೆ ಬದುಕ ಅಪ್ಪದೆಯೂ ಇರಲಾಗದು... ಅಲ್ಲಿ ಅವಳಿದ್ದಾಳೆ – ಮೊನ್ನೆ ಮೊನ್ನೆಯಷ್ಟೇ ಒಡೆದ ಕಿಟಕಿ ಮರೆಯಿಂದ ಅವಳು ಇಣುಕಿ ನೋಡಿಬಿಟ್ಟಿದ್ದಾಳೆ; ಸಣ್ಣಗೆ ನಗುತ್ತಾ... ಅವಳು ಕಪ್ಪಗಿದ್ದರೂ ಅವಳ ನಗು ತುಂಬ ಬೆಳ್ಳಗಿದೆ... ಆ ಒಂದು ನಗೆಯ ನೆನಪು ಸಾಕು ಈ ಕತ್ತಲ ಕೋಣೆಯ ಒಳಗೂ ನಗುತ್ತ ನಿನ್ನ ಎದುರಿಸಲು...

ಆದರೂ ನಿನ್ನ ಕೋರಿಕೊಳ್ಳದಿರಲಾರೆ – ಕರುಣೆ ತೋರಿ ನೀನೇ ಬೇಗ ಒಳಬಂದು ಎಳೆದೊಯ್ದುಬಿಡು – ಇಷ್ಟಾದರೂ ನಗು ನನ್ನಲ್ಲಿ ಬದುಕಿರುವಾಗಲೇ... ನಿನ್ನೆದುರು ಅಳಲು ಮನಸಿಲ್ಲ ನಂಗೆ...

ಇಂತಿ –
ಕನಸುಗಳ ಹೆಣಗಳ ನಡುವೆ ತೇಕುತ್ತಿರುವ ಉಸಿರು. 

Tuesday, November 5, 2013

ಗೊಂಚಲು - ತೊಂಬತ್ತೆರಡು.....

ಏನೇನೋ.....

ನನಗೆಂದೇ ಹೊಯ್ದಾಡುವ ಕಪ್ಪು ಹುಡುಗಿಯ ಕಪ್ಪು ಮುಂಗುರುಳು... 
ಸದಾ ನನ್ನಡೆಗೇ ತುಡಿಯುವ ಅವಳ ಆ ಕಡುಗಪ್ಪು ಕಂಗಳು... 
ತುಟಿಯ ತಿರುವಲ್ಲಿ ನಗೋ ಸಂಗಾತಿ ಮಚ್ಚೆ... 
ಬೆರಳುಗಳ ಬೆಸೆದು ಸಂಜೆಗೊಂದು ಸುತ್ತಾಟ – ನಡುವೆ ಜಿನುಗಿದ ತಿಳಿ ಬೆವರೊಂದಿಗೆ ಹಸ್ತರೇಖೆಗಳೂ ಬೆರೆತ ಭರವಸೆಯ ಭಾವ... 
ತುಂಬ ಒಲವುಕ್ಕಿದಾಗ ಒಂದು ಬಿಗಿಯಾದ ತಬ್ಬುಗೆ – ಜಾತ್ರೇಲಿ ಕೊಂಡ ಗಾಜಿನ ಬಳೆಗಳಿಗೆ ಮೋಕ್ಷ... 
ಯಾವುದೋ ನಸುಗತ್ತಲ ತಿರುವಲ್ಲಿ ಕದ್ದು ಸವಿದ ಮುತ್ತಿನೂಟ – ಆರದ ತುಟಿಯ ತೇವದಲ್ಲಿ ಸದಾ ಹಸಿಯಾಗಿರುವ ಆಸೆಯ ಝೇಂಕಾರ... 
ಹುಸಿ ಮುನಿಸಿನಲಿ ಖುಷಿಯ ಆರೋಪದ ಪ್ರೀತಿಯ ಗುದ್ದು - ಮುಚ್ಚಿದ ಕಣ್ಣ ಕೊನೆಯಲ್ಲಿ ಒಲವ ತೀರ ಸೇರೋ ಪ್ರಣವ ನಾದ... 
ರಾತ್ರಿಯ ಒಂಟಿ ಹೊರಳಾಟದಲ್ಲಿ ನೆನಪಾಗಿ ಕಾಡಿ ನಶೆಯೇರಿಸೋ ಅವಳ ಬೆವರ ಘಮ... 
ಎಂದೋ ಕದ್ದೊಯ್ದ ನನ್ನ ಹಳೆಯ ಅಂಗಿಯಲ್ಲಿ ನಿತ್ಯ ರಾತ್ರಿಯಲ್ಲಿ ಅವಳಿಗೆ ನಾ ದಕ್ಕುವುದು - ಎದೆಗವಚ ಬಿಗಿಯಾದ ಸುದ್ದಿ ಅವಳ ಪೋಲಿ ಸಂದೇಶವಾಗಿ ಮಧ್ಯರಾತ್ರಿಯಲಿ ನನ್ನ ತಲುಪಿ ಕೆಣಕಿದ್ದು...  
ಆ ವಿರಹದುರಿಯಲಿ ನನ್ನ ಸಂತೈಸೋ ಅವಳ ಹಳೆಯ ಒಂಟಿ ಕಿವಿಯೋಲೆ... 
ಇನ್ನೂ ಸಂಸಾರವನೇ ಹೂಡಿಲ್ಲ ಆಗಲೇ ಮಗಳಿಗೆ ಹೆಸರ ಹುಡುಕಿ ಡೈರೀಲಿ ಬರೆದಿಟ್ಟದ್ದು... 
ಸುರಿವ ಸೋನೆಯಲಿ ನೆನೆಯುತ್ತ ಒಂದೇ ಐಸ್‌ಕ್ರೀಮನ್ನು ಇಬ್ಬರೂ ತಿಂದದ್ದು...
ಕನ್ನಡಿಯೂ ಕಂಡಿರದ ಅವಳ ಕತ್ತಲ ತಿರುವುಗಳು ನನ್ನ ಕಂಗಳಲ್ಲಿ ಇಂಗದ ಹಸಿವಾಗಿ ಭದ್ರವಾಗಿದ್ದು... 
ಆಹಾ..!!! 
ಎಷ್ಟೆಲ್ಲ ಹುಚ್ಚುಚ್ಚು ಭಾವದ ಖುಷಿಗಳ ನನ್ನಲ್ಲಿ ತುಂಬಿದ್ದು ಆ ಕಪ್ಪು ಹುಡುಗಿಯ ಕನಸು...
ಅದು ಬರೀ ಕನಸೇ ಆದರೂ ಎಂಥ ಸೊಬಗು ಆ ಕನಸಿಗೆ... 
ಹೌದು ತುಸು ಹೆಚ್ಚೇ ಅನ್ನುವಷ್ಟು ಪೋಲಿಕನಸುಗಳು ನನ್ನಲ್ಲಿ ಅವಳೆಡೆಗೆ... ಆದರದು ಹರೆಯದ ಉನ್ಮಾದ ಅನ್ನಿಸೊಲ್ಲ ಯಾಕೋ... ಸಂಯಮ ಮೀರಿದ ಕ್ಷಣ ಮತ್ತು ಕ್ರಿಯೆಯಾಗಿ ದಕ್ಕುತಿರುವ ಕ್ಷಣಗಳನು ಹೊರತುಪಡಿಸಿ, ಪ್ರೇಮದಿಂದೊಡಗೂಡಿದ ಬರೀ ಮನೋಭೂಮಿಕೆಯ ಕಲ್ಪನೆಯಲಿ ಅರಳುತಿರುವಲ್ಲಿ ಕಾಮ ಕೂಡ ಮಧುರ ಭಾವವೇ ಅಂತನ್ನಿಸುತ್ತೆ ನಂಗೆ...
ಅಂಥವಳೊಬ್ಬ ಕಪ್ಪು ಹುಡುಗಿಯ ನನ್ನ ಕನಸಿಗೆ ಕೊಟ್ಟ ಮತ್ತು ಆ ಕನಸ ಇಂದಿಗೂ ಜೀವಂತವಾಗಿಟ್ಟ ಬದುಕೇ ನಿನ್ನ ಮೇಲೆ ಮತ್ತೆ ಹುಚ್ಚು ಪ್ರೀತಿಯಾಗ್ತಿದೆ...

*****

ಸಾಗರವೇ -
ನಿನ್ನ ಅಗಾಧತೆಯೆಡೆಗೆ ಬೆರಗಿನ ಕಣ್ಣ ನೆಟ್ಟು – ನಿನ್ನ ನಿಗೂಢತೆಯ ಕಂಡು ನಿಟ್ಟುಸಿರ ಬಿಟ್ಟು – ಗರಬಡಿದು ಸುಸ್ತಾಗಿ ಕುಳಿತಿದ್ದೇನೆ...
ಅಲೆಯೊಂದು ಬಂದು ಪಾದ ಸೋಕಿತು... 
ತಾಕಿದ ತೇವ ಮನಸಿಗೂ ಆವರಿಸಿ - ಕಳೆದುಹೋಗಿದ್ದ ಹಳೆ ಕನಸುಗಳೆಲ್ಲ ಮತ್ತೆ ಒಳನುಗ್ಗಿ – ಹೊಸ ರಾಗದಲಿ ಹೊರಹೊಮ್ಮಿ – ನವ ರೋಮಾಂಚನ ಮೈಮನದಲಿ ಝೇಂಕರಿಸಿ ಜೀವ ಭಾವಕ್ಕೆ ರೆಕ್ಕೆ ಮೂಡಿದೆ...
ಬದುಕೇ ನೀನೂ ಸಾಗರದಂತೆಯೇ...
ನಿನ್ನ ಅಗಾಧತೆ, ನಿಗೂಢತೆಗಳಲಿ ಹಲ ಕನಸುಗಳ ಕೊಂದು ಹೂತು ಮತ್ತದೇ ಮಸಣದ ನಡುವಿಂದ ಹೊಸ ಕನಸುಗಳ ಹೊತ್ತು ತಂದು ನನ್ನದೇ ಶಾಶ್ವತ ಒಂಟಿತನದಲೂ ನಗುತಿರಬಲ್ಲ ಜಿಗುಟಾದ ಒರಟುತನವ ಕರುಣಿಸಿದ ಬದುಕೇ ನಿನ್ನ ಮೇಲೆ ಮತ್ತೆ ಪ್ರೀತಿಯಾಗುತಿದೆ...

*****

ಗೆಳತೀ -
ಇರುವಿಕೆಯಿಂದ ಈ ಕ್ಷಣಕೊಂದು ಉನ್ಮಾದ ತುಂಬುವ...
ಅದೇ ಇರುವಿಕೆಯಿಂದ ಅರಗಿಸಿಕೊಳ್ಳಲಾರದ ಭಯ ತುಂಬೋ...
ಅರಿವಿನ ಹರಿವಿಗೆ ದಕ್ಕದೇ – ಮರೆತು ಹಗುರಾಗಲಾಗದೇ ಅಡಿಗಡಿಗೆ ಕಾಡುವ ವಾಸ್ತವದ ಭಾವ - ಸಾವು...
ಅಗೋಚರವಾಗಿದ್ದಷ್ಟು ಕಾಲವೂ ಸ್ಪೂರ್ತಿಯನ್ನು ಮತ್ತು ಪ್ರಕಟವಾಗಿ ನೋವನ್ನೂ ತುಂಬುವ, ಏಕಕಾಲಕ್ಕೆ ಶಕ್ತಿಯೂ – ದೌರ್ಬಲ್ಯವೂ ಆಗಬಲ್ಲ ಭಾವ ಅದು...
ಬದುಕಿನೊಂದಿಗೆ ನನ್ನದು ಮತ್ತು ನನ್ನೊಂದಿಗೆ ನಿನ್ನದೂ ಸಾವಿನಂಥ ಗೆಳೆತನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, October 23, 2013

ಗೊಂಚಲು - ತೊಂಬತ್ತು ಮತ್ತು ಒಂದು.....

ಭಾವ ಬಂಧಕ್ಕೆ ಹೆಸರಿಡುವ ಕುರಿತು.....

ಮೊದಲೇ ಹೇಳಿಬಿಡುತ್ತೇನೆ – ನಾನಿಲ್ಲಿ ಹೇಳಿರೋ ವಿಚಾರ ಮತ್ತು ಭಾವ ಕೇವಲ ನನ್ನ ಪ್ರಾಮಾಣಿಕ ಭಾವ ಮತ್ತು ನಂಬಿಕೆ ಅಷ್ಟೇ... ಇನ್ಯಾರದೇ ಭಾವಗಳ – ಬೆಸೆದ ಬಂಧಗಳ ಅವಹೇಳನೆ ಖಂಡಿತಾ ಅಲ್ಲ... ಯಾಕೆ ಇದನ್ನ ಹೇಳುತ್ತಿದ್ದೇನಂದ್ರೆ ನಾನಿಲ್ಲಿ ಈಗ ಭಿನ್ನ ಲಿಂಗದ ವ್ಯಕ್ತಿಗಳ ನಡುವಿನ ಸ್ನೇಹದ ಬಗ್ಗೆ ಮಾತಾಡುತ್ತಿದ್ದೇನೆ... ಅದರಲ್ಲೂ ಗಂಡು ಪ್ರಾಣಿಯ ಕಣ್ಣಿಂದ ಹೆಚ್ಚು ನೋಡುತ್ತಿದ್ದೇನೆ... ರಕ್ತ ಸಂಬಂಧವಲ್ಲದ ಭಾವನಾತ್ಮಕ ಬಂಧವೊಂದಕ್ಕೆ ರಕ್ತ ಸಂಬಂಧೀ ಹೆಸರಿಡುವುದು ಸ್ವಲ್ಪ ಕಷ್ಟ ನನಗೆ... ಬಂಧವೊಂದು ಬೆಳೆಯುತ್ತ ಬೆಳೆಯುತ್ತ ಸಹೋದರ ಭಾವಕ್ಕೆ ತಿರುಗುವುದು ಬೇರೆ ಮತ್ತು ಪರಿಚಯದ ಮೊದಲ ಹಂತದಲ್ಲಿಯೇ ಹಾಗಂತ ಕೂಗುವುದು ಬೇರೆ... ನಡುವೆ ತುಂಬ ವ್ಯತ್ಯಾಸ ಇದೆ ಅನ್ಸುತ್ತೆ ನಂಗೆ...

ರಕ್ತ ಸಂಬಂಧಗಳಲ್ಲಿ ಪ್ರತೀ ಸಂಬಂಧಕ್ಕೂ ಒಂದು ಸ್ಪಷ್ಟ ಹೆಸರಿದೆ... ಮತ್ತೆ ನಾವದನ್ನು ಹಾಗೆಯೇ ಗುರುತಿಸಿ ಕರೆಯುತ್ತೇವೆ ಕೂಡ... ಅಮ್ಮ, ಅಪ್ಪ, ಅಕ್ಕ, ತಂಗಿ, ಅಣ್ಣ, ತಮ್ಮ, ಅತ್ತೆ, ಮಾವ ಹೀಗೆ ಆ ಆ ಸಂಬಂಧಗಳಿಗೆ ಅದದೇ ಹೆಸರಿಂದ ಕರೆಯುವ ನಾವು ರಕ್ತ ಸಂಬಂಧವಲ್ಲದ ಭಾವನಾತ್ಮಕ ಬಂಧಕ್ಕಿರುವ ಹೆಸರು ‘ಸ್ನೇಹ’ವನ್ನು ಮಾತ್ರ ಬರೀ ಸ್ನೇಹ ಅಂತ ಒಪ್ಪಿಕೊಂಡು ಕರೆಯುವಲ್ಲಿ ಯಾಕೆ ಸೋಲುತ್ತೇವೆ..? ಅದರಲ್ಲೂ ಮುಖ್ಯವಾಗಿ ಭಿನ್ನ ಲಿಂಗದ ಸ್ನೇಹದಲ್ಲಿ.!! ಹೆಚ್ಚಿನ ಸಂದರ್ಭದಲ್ಲಿ ಭಿನ್ನ ಲಿಂಗದ ಸ್ನೇಹವನ್ನು ಸ್ನೇಹ ಅಂತಲೇ ಗುರುತಿಸದೇ ಅದಕ್ಕೂ ರಕ್ತ ಸಂಬಂಧೀ ಅಕ್ಕ, ತಂಗಿ, ಅಣ್ಣ, ತಮ್ಮ ಎಂಬ ಹೆಸರಿಡಲು ಹೋಗುತ್ತೇವೆ... ಅದಲ್ಲದಿದ್ದರೆ ಸ್ನೇಹವನ್ನು ಪ್ರೇಮವಾಗಿಸಲು ಹೊರಟುಬಿಡುತ್ತೇವೆ ಏಕೆ..?? ಭಿನ್ನ ಲಿಂಗದ ಗೆಳೆತನವೊಂದು ಇದು ಬರೀ ಗೆಳೆತನ ಅಂತ ಪ್ರತೀ ಕ್ಷಣ ಕೂಗಿ ಕೂಗಿ ಹೇಳಬೇಕಾದ ಅನಿವಾರ್ಯತೆ ಯಾಕಿದೆ..???

ಬಹುಶಃ ಸಹಜ ಮಧುರ ಬಂಧವೊಂದಕ್ಕೆ ಅನಗತ್ಯ ರೂಪ, ಬಣ್ಣಗಳ ಆರೋಪಿಸಿ ಬಾಯಿ ಚಪಲ ತೀರಿಸಿಕೊಳ್ಳೋ ಸಮಾಜ ನಮ್ಮ ಸುತ್ತ ಇರೋವರೆಗೂ (ಇಂಥ ಸಮಾಜ ಸೃಷ್ಟಿಯಲ್ಲಿ ನಾವೂ ಭಾಗಿಗಳೇ ಆಗಿರಬಹುದು) ಬಂಧವೊಂದಕ್ಕೆ ಸಂಬಂಧದ ಮುಖವಾಡದ ಹೆಸರಿಡುವ ಅನಿವಾರ್ಯತೆ ಚಾಲ್ತಿಯಿದ್ದೇ ಇರುತ್ತೇನೋ... ಅಲ್ಲೊಬ್ಬರು – ಇಲ್ಲೊಬ್ಬರು ಬೆಸೆದ ಎಲ್ಲ ಬಂಧಗಳಲ್ಲೂ ಗೆಳೆತನವನೇ ಕಾಣಹೊರಟು, ಸಮಾಜದ ಮಿತಿಯ ಮೀರಬಯಸಿದರೆ ಅದಷ್ಟು ಸುಲಭ ಸಾಧ್ಯವಲ್ಲ ಅನ್ನೋದು ನನ್ನ ಅನುಭವ... ಯಾಕೇಂದ್ರೆ ನಾವೂ ಇದೇ ಸಮಾಜದ ಒಂದು ಭಾಗ ತಾನೆ...

ಭಿನ್ನ ಲಿಂಗದ ಸ್ನೇಹಕ್ಕೆ ಅನೈತಿಕ ಭಾವದ ಆರೋಪ ತುಂಬುವುದು ಮನುಷ್ಯನ ಮೂಲ ಸ್ವಭಾವಗಳಲ್ಲೊಂದಾದ ತಾನು ನಿಭಾಯಿಸಲಾಗದ್ದನ್ನು ಇನ್ಯಾರೋ ನಿಭಾಯಿಸಿದಾಗ ಉಂಟಾಗೋ ಮಾತ್ಸರ್ಯದಿಂದಿರಬಹುದಾ.? ಸಮಾನ ಲಿಂಗದ ಸ್ನೇಹದಲ್ಲಾದರೆ ಅನೈತಿಕತೆಯ ಆರೋಪ ಇಲ್ಲದಿದ್ದರೂ ಅಲ್ಲೂ ಮಾತ್ಸರ್ಯ ಮತ್ತು ಇಗೋಗಳು ಆ ಸ್ನೇಹದ ಬಗೆಗೂ ಕೀಳಾಗಿ ಮಾತಾಡುವಂತೆ ಪ್ರೇರೇಪಿಸುತ್ತಾ.?? ಕಷ್ಟ ಕಷ್ಟ...

ಬಂಧವೊಂದನ್ನು ನಿಭಾಯಿಸೋ ತಾಕತ್ತು ನಮ್ಮ ಮನಸಿನ ಸಂಸ್ಕಾರದಿಂದ ಬರೋದು... ಪ್ರತೀ ಸಂಬಂಧಕ್ಕೂ ಅದರದೇ ಆದ ಭಾವನಾತ್ಮಕತೆ ಮತ್ತು ಜವಾಬ್ದಾರಿಗಳಿರುತ್ತವೆ... ಅಣ್ಣ, ತಮ್ಮ ಅಂತ ಕರೆಸಿಕೊಂಡವರೆಲ್ಲ ಆ ಸಂಬಂಧದ ಜವಾಬ್ದಾರೀನ ನಿಭಾಯಿಸೊಲ್ಲ... ನಿಭಾಯಿಸಬಲ್ಲವನು ತಂಗಿಯಲ್ಲೂ ಗೆಳತಿಯನ್ನು ಕಾಣಬಲ್ಲ... ನಿಭಾಯಿಸುವ ಸಂಸ್ಕಾರ ಇಲ್ಲದೇ, ಮನಸಿನ ವಿಕಾರ ಇದ್ದವನು ಎಂಥ ಸಂಬಂಧಕ್ಕೂ ಅಸಹ್ಯವನ್ನು ಮೆತ್ತಬಲ್ಲ... ತಂದೆಯೇ ಮಗಳನ್ನು ಭೋಗವಸ್ತುವಾಗಿಸಿಕೊಂಡ ಮನುಷ್ಯ ಸಮಾಜ ನಮ್ಮದು... ಅದು ಮನೋವಿಕಾರದ, ಕ್ರೌರ್ಯದ ಉತ್ತುಂಗ... ಸ್ವಸ್ಥ ಮನಸಿನ ಪ್ರಜ್ಞಾವಂತರಾದರೆ ಭಾವ ಬಂಧಕ್ಕೆ ಯಾವುದೇ ಹೆಸರಿಡದೆಯೂ ಸ್ನೇಹವಾಗಿಯೇ ಗೌರವಯುತವಾಗಿ ನಡಕೊಳ್ಳಬಲ್ಲ... ಗೆಳತಿ ವೇಶ್ಯೆಯೇ ಆದರೂ ಅವಳನ್ನು ಬರೀ ಗೆಳತಿ ಮಾತ್ರವಾಗಿಯೇ ನಡೆಸಿಕೊಳ್ಳಬಲ್ಲ... ಒಪ್ಪುತ್ತೇನೆ ಅಂಥವರು ಅಪರೂಪ ಮತ್ತು ಮೊದಲಲ್ಲೇ ಅಂಥ ಪ್ರಜ್ಞಾವಂತರನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆಯೂ ಇದೆ...

ನಾನಿಲ್ಲಿ ಪ್ರಾಮಾಣಿಕ ಭಾವನಾತ್ಮಕತೆಯಿಂದ ಅಣ್ಣ, ತಮ್ಮ, ಅಕ್ಕ, ತಂಗಿ ಅಂತ ಪರಿಭಾವಿಸಿ ಬಾಂಧವ್ಯ ಬೆಸೆದುಕೊಂಡವರನ್ನು ಅವಮಾನಿಸಿ ಅವಹೇಳನ ಮಾಡುತ್ತಿಲ್ಲ... ನನಗೂ ಅಂಥ ಎಷ್ಟೋ ಅಕ್ಕ, ತಂಗಿಯರಿದ್ದಾರೆ... ಮತ್ತು ನಾನವರನ್ನು ತುಂಬ ಗೌರವಿಸುತ್ತೇನೆ, ಪ್ರೀತಿಸುತ್ತೇನೆ ಕೂಡ...  ಆದರೆ ಅಪರಿಚಿತ ಭಿನ್ನಲಿಂಗಿಯೊಬ್ಬ ಎದುರಾಗಿ ಹಾಯ್ ಅಂದ ತಕ್ಷಣವೇ ಅದಕ್ಕೆ ರಕ್ತಸಂಬಂಧೀ ಸಂಬಂಧಗಳ ಹೆಸರಿಡುವುದನ್ನು ಪ್ರಶ್ನಿಸುತ್ತಿದ್ದೇನೆ... ಪರಿಚಯ ಹಳೆಯದಾಗಿ, ಅಭಿರುಚಿಗಳು, ಭಾವಗಳು ಬೆಸೆದುಕೊಂಡು ಇಂಥ ಅಣ್ಣನೋ, ತಮ್ಮನೋ, ಅಕ್ಕ – ತಂಗಿಯರೋ ನನಗೂ ಇದ್ದಿದ್ದರೆ ಚೆನ್ನಿತ್ತು ಎಂಬ ಭಾವ ಪ್ರಾಮಾಣಿಕವಾಗಿ ಮೂಡಿ ಆಗ ಸ್ನೇಹಕ್ಕೆ ರಕ್ತ ಸಂಬಂಧದ ನಾಮಕರಣ ಮಾಡಿದರೆ ಅದನ್ನು ಖಂಡಿತಾ ಮೆಚ್ಚುತ್ತೇನೆ ಮತ್ತು ಗೌರವಿಸುತ್ತೇನೆ... ಅದಿಲ್ಲದೇ ಎದುರಾದ ತಕ್ಷಣ ಒಬ್ಬ ಹೆಣ್ಣು ಅಣ್ಣನೋ ತಮ್ಮನೋ ಅಂತ ಕರೆದರೆ ನಂಗಲ್ಲಿ ಅವರ ಅಭದ್ರತಾ ಭಾವವೇ ಹೆಚ್ಚು ಕಾಣುತ್ತೆ... ಸಮಾಜಕ್ಕೆ ಉತ್ತರಿಸಬೇಕಾದ ಮತ್ತು ಎದುರಿನ ವ್ಯಕ್ತಿಯ ಅಪರಿಚಿತತೆಯ ಭಯದಿಂದ ಮೂಡಿದ ಅಭದ್ರತಾಭಾವದಿಂದ ತನ್ನನ್ನ ತಾನು ರಕ್ಷಿಸಿಕೊಳ್ಳಲು ಪಕ್ಕನೆ ಒಂದು ರಕ್ತಸಂಬಂಧೀ ಹೆಸರಿಟ್ಟುಬಿಡುವುದು... ಇಂದಿನ ಸಾಮಾಜಿಕ ಪರಿಸ್ಥಿತೀಲಿ ಅದು ಒಂದಷ್ಟು ಮಟ್ಟಿಗೆ ಅಗತ್ಯವೂ ಹೌದೇನೋ... ಆದರೆ ಪ್ರತೀ ಸಂಬಂಧದಲ್ಲೂ ಒಂದು ಶುದ್ಧ ಸ್ನೇಹಭಾವವನ್ನು ಹುಡುಕೋ ನಂಗದು ಆತ್ಮವಂಚನೆಯಂತೆ ಗೋಚರಿಸುತ್ತೆ... 

ಬೀದಿ ತಿರುವಿನಲ್ಲಿ ನಿಂತು ಎದುರಿಂದ ಬರ್ತಿರೋ ಹುಡುಗೀನ ವಯೋಸಹಜವಾದ ಆಸೆಗಣ್ಣಿಂದ ನೋಡ್ತಿರ್ತೇನೆ... ಆಕೆ ಎದುರು ಬಂದು ತಕ್ಷಣ ತನ್ನ ಸರಳ ರಕ್ಷಣಾ ತಂತ್ರ ಬಳಸಿ ಅಣ್ಣ ಅಂತ ಕೂಗ್ತಾಳೆ... ನಾನು ಅಪ್ರಯತ್ನವಾಗಿ ನಗ್ತೇನೆ... ನಾನೂ ಬಾಯ್ತುಂಬ ತಂಗೀ ಅಂತೀನಿ... ಹಾಗೆ ತಂಗಿ ಅಂದ ತಕ್ಷಣವೇ ಅವಳ ಹೆಣ್ತನದೆದುರಿನ ಆಸೆ ಕಮ್ಮಿ ಆಗಿಬಿಡುತ್ತಾ..? ಅಣ್ಣ ಅಂದ ಹುಡುಗಿಗೂ ತಕ್ಷಣದಿಂದಲೇ ಬೆನ್ನಿಗೆ ಬಿದ್ದ ಅಣ್ಣನೊಂದಿಗೆ ವರ್ತಿಸಿದಂತೆಯೇ ವರ್ತಿಸೋಕೆ ಸಾಧ್ಯವಾಗುತ್ತಾ..? ಹಾಗೆ ಆಗಲ್ಲ ಅಂದಾಗ ಅಣ್ಣ ತಂಗಿ ಎಂಬ ಸಂಬಂಧಕ್ಕೆ ಅಪಚಾರ ಮಾಡಿದಂತಲ್ಲವಾ..? ಭೌತಿಕವಾಗಿ ಅನಿವಾರ್ಯವೆನಿಸಿದರೂ ಭಾವನಾತ್ಮಕವಾಗಿ ಆತ್ಮವಂಚನೆಯ ಭಾವ ಕಾಡಲಾರದಾ..? ಮುಖವಾಡ ಅನ್ನಿಸದಾ..? 

ಒಬ್ಬ ಗೆಳೆಯ ಅಥವಾ ಗೆಳತಿ ಜೊತೆಗಿರ್ತಾ ಇರ್ತಾ ಒಡನಾಟದಲ್ಲಿ ಭಾವಗಳ ಬೆಸೆದುಕೊಳ್ತಾ ಅಣ್ಣ, ತಂಗಿ, ಅಕ್ಕ, ತಮ್ಮರಿಗಿಂತ ಆತ್ಮೀಯರಾಗಬಹುದು... ಒಬ್ಬ ಗೆಳತಿ ಒಮ್ಮೆ ತುಂಟ ತಂಗಿ, ಒಮ್ಮೆ ಕಣ್ಣೀರೊರೆಸೋ ಅಮ್ಮ, ಒಮ್ಮೆ ಕಿವಿ ಹಿಂಡೋ ಅಕ್ಕ ಎಲ್ಲ ಆಗಬಲ್ಲಳು... ಅಂತೆಯೇ ಗೆಳೆಯ ಕೂಡಾ ತಮ್ಮ, ಅಣ್ಣ, ಅಮ್ಮ ಎಲ್ಲ ಆಗಬಲ್ಲ... ಅದು ಸ್ನೇಹದ ತಾಕತ್ತು... ಸ್ನೇಹಭಾವಕ್ಕೊಂದು ವಿಶೇಷ ಬಲವಿದೆ... ಎಲ್ಲ ಹರವಿ ಹಗುರಾಗಬಹುದಾದ ಬಲ... ಅಮ್ಮನೆದುರು ಕೂಡ ಸ್ನೇಹಭಾವ ಮೇಳೈಸದೇ ಹೋದರೆ ಕೆಲವನ್ನು ಹಂಚಿಕೊಳ್ಳಲಾಗದೇನೋ... ಒಮ್ಮೆ ಪ್ರಾಮಾಣಿಕ ಸ್ನೇಹಭಾವ ಮೈಗೂಡಿದರೆ ನಮ್ಮ ತಪ್ಪುಗಳನ್ನು ಕೂಡ ಸುಲಭವಾಗಿಯೇ ಒಪ್ಪಿಕೊಂಡು ತಿದ್ದಿಕೊಳ್ಳಬಹುದು... ಅದಕ್ಕೇ ಎಲ್ಲ ಬಂಧಗಳಲ್ಲೂ ಸ್ನೇಹಭಾವದ ಪಾಲು ಜಾಸ್ತಿ ಇರ್ಲಿ ಅಂತೀನಿ ನಾನು... ರಕ್ತ ಸಂಬಂಧದಲ್ಲಿ ಕೂಡ ಸ್ನೇಹಭಾವದ ಪಾಲಿರ್ಲಿ ಅಂತೀನಿ... ಅದಕ್ಕೇ ಸ್ನೇಹವನ್ನು ಸ್ನೇಹವೆಂದೇ ಗುರುತಿಸಲು ಬಯಸ್ತೀನಿ... ಗೆಳೆತನಾನ ಗೆಳೆತನ ಅಂತಲೇ ಗುರುತಿಸಿದಾಗ ಹೆಚ್ಚು ಸಂತೋಷಪಡ್ತೇನೆ...

ಹಾಗೆಯೇ ನಮ್ಮದು ಪುರುಷ ಪ್ರಧಾನ ಸಮಾಜ ವ್ಯವಸ್ಥೆ... ಸಹಜವಾಗಿಯೇ ಎಲ್ಲ ಭೌತಿಕ ಸಂಬಂಧಗಳಲ್ಲೂ ಗಂಡು ಹಿರಿಯನಾಗಿರೋದು ವಾಡಿಕೆ... ಮನಸ್ಥಿತಿ ಕೂಡ ಹಾಗೆಯೇ ರೂಪುಗೊಂಡಿದೆ... ಹಾಗಾಗಿ ಎದುರಿನ ಹೆಣ್ಣು ಜೀವ ಹಿರಿಯಳು ಅಂತಾದ ಕೂಡಲೇ ಭಾವನಾತ್ಮಕ ಸಂಬಂಧದಲ್ಲಿ ಕೂಡ ಆಕೆ ತಮ್ಮ ಅಂತ ಕೂಗಿದಾಗ ಗಂಡಿಗೆ ಒಪ್ಪಿಕೊಳ್ಳೋದು ಸುಲಭ... ಯಾಕೇಂದ್ರೆ ಆಕೆಯ ಹಿರಿತನ ಹುಡುಗನಲ್ಲಿ ಆಕೆ ತನಗಿಂತ ಪ್ರಬುದ್ಧಳು, ಹೆಚ್ಚು ಬದುಕ ಕಂಡವಳು, ಬಂಧಗಳ ದೃಢವಾಗಿ ಸಲಹಬಲ್ಲವಳು, ತನಗೆ ಮಾರ್ಗದರ್ಶಕವಾಗಬಲ್ಲವಳು ಎಂಬ ಗೌರವ ಭಾವ ಮೂಡಿಸಿ ತಮ್ಮ ಅನ್ನಿಸಿಕೊಳ್ಳಲು ಸುಲಭವಾಗುತ್ತೆ ಕೂಡ... 

ಅದೇ ಹೆಣ್ಣು ತನಗಿಂತ ಚಿಕ್ಕವಳು ಎಂದಾಕ್ಷಣ ಮೊದ ಮೊದಲ ಪರಿಚಯದಲ್ಲಿ ಆಕೆ ಬರೀ ಹೆಣ್ಣಾಗಿ ಗೋಚರಿಸುವ ಸಂದರ್ಭವೇ ಹೆಚ್ಚು... ಬರೀ ಹೆಣ್ಣು ತಾನು ಗಂಡಿನ ಕಣ್ಣನ್ನು ಮಾತ್ರ ತುಂಬಬಲ್ಲಳು... 

ಇಲ್ಲಿ ಕಿರಿಯ ಹೆಣ್ಣು ಜೀವಗಳಿಗೆ ಇನ್ನೂ ಒಂದು ಸಮಸ್ಯೆ ಇದೆ... ಸ್ನೇಹವ ನಿಭಾಯಿಸುವಲ್ಲಿ ವ್ಯಕ್ತಿತ್ವದ ಗಟ್ಟಿತನ ಕಳಕೊಂಡ ಗಂಡು ಪ್ರಾಣಿಗಳು ಒಂದು ಚಂದದ ಗೆಳೆತನದ ನಡುವೆ ಅವಸರವಸರವಾಗಿ ಪ್ರೇಮದ ಪ್ರವೇಶ ಮಾಡಿಸಿಬಿಡೋದು... ಗೆಳತಿ ತಾನು ಸ್ತ್ರೀಸಹಜವಾದ ಅಮ್ಮನ ಮನಸಿನ ಮೃದುಮಾತಿನಿಂದ ಆತ್ಮೀಯತೆ, ಕಾಳಜಿ ತೋರಿದ ಕೂಡಲೇ ಅದನ್ನು ಅವಳ ಪ್ರೇಮ ಅಂದುಕೊಂಡು, ಕಾಯ್ದುಕೊಳ್ಳಬೇಕಿದ್ದ ಸ್ನೇಹಕ್ಕೆ ಪ್ರೇಮದ ಹೆಸರಿಟ್ಟು ನಿವೇದನೆ ಮಾಡಿಕೊಳ್ಳೋದು... ಒಬ್ಬ ಹುಡುಗಿಯ ಬದುಕಲ್ಲಿ ಒಂದೆರಡಾದರೂ ಇಂಥ ಸಂದರ್ಭಗಳಿದ್ದೇ ಇರುತ್ತೇನೋ... ಅಲ್ಲಿಗೆ ಹುಡುಗರೊಂದಿಗಿನ ಗೆಳೆತನದಲ್ಲಿ ಒಂದು ಸಣ್ಣ ಭಯ, ಅಭದ್ರತೆ ಸದಾ ಇರೋದು ಸಹಜ ಹೆಣ್ಣಿಗೆ... ಅದರಿಂದ ತಪ್ಪಿಸಿಕೊಳ್ಳಲಿಕ್ಕಾದರೂ ಮೊದಲಿಗೇ ಅಣ್ಣ - ತಮ್ಮ ಅಂತ ಕರೆದುಬಿಡೋದು ಉತ್ತಮ ಎಂಬ ಮನಸ್ಥಿತಿಗೆ ಹೆಣ್ಣು ಬಂದಿದ್ರೆ ಅದೂ ತಪ್ಪೆನ್ನಲಾಗದು ಇಂದಿನ ಸಾಮಾಜಿಕ ಪರಿಸ್ಥಿತೀಲಿ...

ಮನದಲ್ಲಿ ಪ್ರಾಮಾಣಿಕವಾಗಿ ಈತ/ಈಕೆ ಚಂದದ ಸ್ನೇಹಿತ/ಸ್ನೇಹಿತೆ ಅಂತ ಪರಿಭಾವಿಸಿಕೊಂಡು ಅಂತ ಸ್ನೇಹದ ಬಗ್ಗೆ ತುಂಬ ಗೌರವ ಇಟ್ಟುಕೊಂಡ ಹುಡುಗ/ಹುಡುಗಿ ಕೂಡ ಸಮಾಜದ ಯಾರೋ ಮೂರನೇ ವ್ಯಕ್ತಿಯೆದುರು ಆ ಸ್ನೇಹವನ್ನು ಪರಿಚಯಿಸಬೇಕಾಗಿ ಬಂದಾಗ ಸ್ನೇಹ ಅಂತಲೇ ಪರಿಚಯಿಸಲು ಇರುಸುಮುರುಸು ಅನುಭವಿಸುವುದನ್ನು, ಅವ್ಯಕ್ತ ಭಯದಿಂದ ವರ್ತಿಸುವುದನ್ನು ಕಂಡಿದ್ದೇನೆ... ಎಷ್ಟೋ ಬಾರಿ ನಾನೇ ಅನುಭವಿಸಿದ್ದೇನೆ... (ನನ್ನ ಬಗ್ಗೆ ಭಯವಿಲ್ಲದಿದ್ದರೂ ನನ್ನಿಂದಾಗಿ ಹೆಣ್ಣು ಜೀವಕ್ಕಾಗುವ ಇರುಸುಮುರುಸಿನ ಭಯ ನನ್ನನೂ ಕಾಡಿದ್ದಿದೆ)... ಭಯ ತಮ್ಮ ನಡುವಿನ ಸ್ನೇಹದ ಬಗೆಗಿನ ಅಪನಂಬಿಕೆಯಿಂದ ಮೂಡಿದ್ದಲ್ಲ... ಆ ಮೂರನೇ ವ್ಯಕ್ತಿ ತಮ್ಮದು ಗೆಳೆತನ ಅಂದಾಕ್ಷಣ ತಮ್ಮೆಡೆಗೆ ನೋಡುವ ನೋಟದ ಬಗ್ಗೆ... ಸ್ನೇಹವನ್ನು ಸ್ನೇಹ ಅಂತಲೇ ಪರಿಚಯಿಸಿದರೆ ಎದುರಿನ ವ್ಯಕ್ತಿ ಎದುರಲ್ಲಿ ಏನೆನ್ನದಿದ್ದರೂ ಆಚೆ ಇನ್ನೆಲ್ಲೋ ಈ ಭಾವಬಂಧಕ್ಕೆ ಇನ್ಯಾವುದೋ ಅನುಮಾನದ ಸಂಬಂಧದ ಹೆಸರಿಟ್ಟುಬಿಟ್ಟರೆ ಎಂಬ ಭಯ... ಅದವನ ಮನೋವಿಕಾರವೇ ಇರಬಹುದು ಅಥವಾ ಮಾತ್ಸರ್ಯದ ಪ್ರಭಾವವೇ ಇರಬಹುದು... ಆತ ಏನೋ ಅಂದದ್ದರಿಂದ ನೇರವಾಗಿ ಇವರ ಸ್ನೇಹಕ್ಕೆ ಯಾವುದೇ ತೊಂದರೆ ಬರದೆ ಕೂಡ ಇರಬಹುದು... ಆದರೆ ಆತ ಕುಟುಂಬ ವಲಯ ಅಥವಾ ಸುತ್ತಮುತ್ತಲ ವಲಯದಲ್ಲಿ ಒಂದು ಅಸಹನೀಯ ವಾತಾವರಣವನ್ನಂತೂ ಸೃಷ್ಟಿಸಿಡುತ್ತಾನೆ... ಅಂತ ಅಸಹನೀಯತೆಯನ್ನು ಎದುರಿಸಿಯೂ ಸ್ನೇಹವನ್ನು ಸ್ನೇಹ ಅಂತಲೇ ಪರಿಚಯಿಸಿಕೊಂಡು ಮುನ್ನಡೆಯೋಕೆ ಆ ಇಬ್ಬರು ಸ್ನೇಹಿತರಲ್ಲೂ ತುಂಬ ಗಟ್ಟಿಯಾದ ವ್ಯಕ್ತಿತ್ವ ಮೈಗೂಡಿರಬೇಕು... ಸಮಾಜದ ಕ್ಷುದ್ರತೆಯನ್ನು ಎದುರಿಸಿಕೊಂಡು ಬಂಧ ಬೆಸೆದುಕೊಂಡಿರಬಲ್ಲ ಸಾಮರ್ಥ್ಯ, ತಮ್ಮ ನಡುವಿನ ಸ್ನೇಹದ ಬಗ್ಗೆ ಅಪರಿಮಿತ ನಂಬಿಕೆ, ಸ್ನೇಹವನ್ನು ಸದಾಕಾಲ ಸ್ನೇಹವಾಗಿಯೇ ಕಾಯ್ದುಕೊಳ್ಳಬಲ್ಲ ಮನೋ ಸ್ಥಿರತೆ ಎಲ್ಲ ಮೇಳೈಸಿರಬೇಕು... ಅದನ್ನೆಲ್ಲ ಸಾಧಿಸೋದು ಅಷ್ಟು ಸುಲಭವಲ್ಲ ಕೂಡ...

ಇಲ್ಲಿ ಇನ್ನೂ ಒಂದು ಸೂಕ್ಷ್ಮವಿದೆ... ಸ್ನೇಹವು ಆತ್ಮೀಕತೆಯ ಉತ್ತುಂಗದಲ್ಲಿ ಪ್ರೇಮದಂತೆ ಕಾಣುವ ಅಪಾಯ ಕೂಡ ಇದೆ... ಅಲ್ಲದೇ ಸ್ನೇಹವೇ ಪ್ರೇಮದ ಮೂಲ ಮೆಟ್ಟಿಲು ಎಂಬ ಮಾತಿದೆ... ಮತ್ತದು ಸತ್ಯ ಕೂಡ... ಹಾಗಾಗಿ ಸ್ನೇಹವನ್ನು ಸ್ನೇಹವಾಗಿಯೇ ಸಲಹಿಕೊಳ್ಳೋದು ಸುಲಭವೇನೂ ಅಲ್ಲ... ಸಮಾಜದ ಕುಹಕವೊಂದೇ ಅಲ್ಲದೇ ನಮ್ಮದೇ ಮರ್ಕಟ ಮನಸಿನ ಭಾವಗಳಿಂದಲೂ ಸ್ನೇಹವನ್ನು ಸಲಹಿಕೊಳ್ಳಬೇಕಿರುತ್ತೆ... ಸ್ನೇಹ ಪ್ರೇಮದ ಮೆಟ್ಟಿಲಿರಬಹುದು ಆದರೆ ಸ್ನೇಹವೇ ಪ್ರೇಮವಲ್ಲ... ಆದರೆ ಸ್ನೇಹವೊಂದು ಕಾಲದ ಮತ್ತು ಒಡನಾಟದ ಸಂಘರ್ಷಗಳಲ್ಲಿ ಮಿಂದು ಪಕ್ವಗೊಂಡ ಮೇಲೆ ಆ ಎರಡೂ ಜೀವಿಗಳು ಬಯಸಿ ಸ್ನೇಹಕ್ಕೆ ಏನೇ ಹೆಸರಿಟ್ಟರೂ ಕೊನೆಗೆ ಪ್ರೇಮವೆಂತಲೇ ಅಂದರೂ ಅದು ಚಂದವೇ... ಯಾಕಂದ್ರೆ ಪಕ್ವಗೊಂಡ ಸ್ನೇಹದಲ್ಲಿ ಆ ಹೆಸರುಗಳು ಸ್ನೇಹದ ಆತ್ಮೀಯ ನಾಮಗಳಂತಾಗಿ (ನಿಕ್‌ನೇಮ್) ಸ್ನೇಹದ ವಿಸ್ತಾರದಂತೆನಿಸುತ್ತೆ... ಆಗ ಅಕ್ಕ, ತಂಗಿ, ಅಣ್ಣ, ತಮ್ಮ, ಪ್ರೇಮಿ – ಹೆಸರೇನೇ ಇರಬಹುದು ಅದರ ಮೂಲ ಭಾವ ಹಾಗೂ ಮೂಲ ಸೆಲೆ ಮಧುರವಾದ ಪಕ್ವ ಸ್ನೇಹವೇ ಆಗಿರುತ್ತೆ... ಅಂಥ ಬಾಂಧವ್ಯಗಳಲ್ಲಿ ಬದುಕು ಚಂದ ಕೂಡ...

ಯಾಕೆ ಹುಡುಗರು ಬರೀ ಗೆಳೆಯರಾಗಿ ಸಿಕ್ಕಲ್ಲ ಅಂತ ಮಧುರ ಸ್ನೇಹವನ್ನು ಪ್ರೇಮವಾಗಿಸಹೊರಟ ನಿಯಂತ್ರಣ ತಪ್ಪಿದ ಅಪಕ್ವ ಮನಸಿನ ಹುಡುಗರ ಪ್ರೇಮ ನಿವೇದನೆಗಳಿಂದ ಕಂಗಾಲಾದ ಕಿರಿಯ ಹೆಣ್ಣು ಜೀವಗಳು ಕೇಳಿದಾಗ ಅಯ್ಯೋ ಅನ್ನಿಸಿದ್ದಿದೆ ಎಷ್ಟೋ ಬಾರಿ...

ಅಂತೆಯೇ ಇದುವರೆಗೂ ರಕ್ತ ಸಂಬಂಧದಾಚೆಯ ಯಾವ ಭಾವ ಬಂಧಕ್ಕೂ ಒಂದುಮಟ್ಟಿನ ಒಡನಾಟ, ಅಭಿರುಚಿಯ ಇಲ್ಲವೇ ವ್ಯಕ್ತಿತ್ವದ ಕನಿಷ್ಠ ಅವಗಾಹನೆ ದಕ್ಕುವ ಮುನ್ನವೇ ಅಕ್ಕ, ತಂಗಿ ಅಂದದ್ದಿಲ್ಲದ, ಯಾವ ಹೆಣ್ಣು ಜೀವದೆದುರೂ ಪ್ರೇಮನಿವೇದನೆಗಿಳಿದಿದ್ದಿಲ್ಲದ, ಗೆಳತಿಯರನ್ನು ಕೇವಲ ಗೆಳತಿಯರಾಗಿ ಕಂಡು ಗೌರವಿಸುತ್ತಲಿದ್ದೂ (ಕೀಟಲೆಗಳಿಗಾಗಿ ಪ್ರತಿ ಗೆಳತಿಯನ್ನೂ ಕಾಲೆಳೆದು ಕಿಚಾಯಿಸುತ್ತೇನೆ ಆ ಮಾತು ಬೇರೆ), ಆತ್ಮೀಯ ಸ್ನೇಹಾನ ಅತಿಯಾಗಿ ಪ್ರೀತಿಸೋ ನನ್ನನ್ನು ಯಾವ ಹುಡುಗಿಯೂ - ನಾನೇನು ಎಂಬುದು ಸ್ಪಷ್ಟವಾಗಿ ಅರಿವಾದ ಮೇಲೂ, ಎಲ್ಲರೆದುರೂ ಧೈರ್ಯವಾಗಿ ಗೆಳೆಯ ಅಂತಲೇ ಪರಿಚಯಿಸಿದ್ದೂ ಇಲ್ಲ ಯಾಕೆ ಅನ್ನೋ ಪ್ರಶ್ನೆ ಕೂಡ ಮೂಡುತ್ತೆ...

ಎರಡಕ್ಕೂ ನಂಗೆ ಗೋಚರಿಸಿದ ಕಾರಣ ಒಂದೇ – ಹೆಣ್ಣು ಜೀವಗಳಲ್ಲಿ ಅಂತರ್ಗತವಾಗಿ ಅಚ್ಚೊತ್ತಿರುವ ವಿಕಾರ ಮನಸಿನ ಸಮಾಜದ ಭಯ... ಮತ್ತು ಇಬ್ಬರಲ್ಲೂ ಇರಬಹುದಾದ ತಮ್ಮದೇ ಮನಸು ಮರ್ಕಟವಾಗಿ ಸ್ನೇಹ ಪ್ರೇಮವಾಗಿಬಿಡಬಹುದಾದ ಭಯ... ನಂಗೆ ಈ ಎರಡೂ ಭಯಗಳಿಲ್ಲ... ಆದ್ದರಿಂದ ಸ್ನೇಹವನ್ನು ಸ್ನೇಹ ಎಂದೇ ಹೇಳಿ ಪರಿಚಯಿಸಬಹುದಾದ, ಹಾಗೆಯೇ ಗೌರವಿಸಬಹುದಾದ ಸಮಾಜದ ನಿರೀಕ್ಷೆ ಇದೆ ನನ್ನಲ್ಲಿ...

ಕೊನೆಯಲ್ಲಿ ಮತ್ತೆ ಹೇಳ್ತೇನೆ – ಇಲ್ಲಿರೋದು ಕೇವಲ ನಾ ನಂಬಿದ, ನನ್ನ ಮನದ ಪ್ರಾಮಾಣಿಕ ಭಾವ ಅಷ್ಟೇ.. ಈ ಭಾವದ ಭಾಷಣ ಬಿಗಿದು ಎಷ್ಟೋ ಬಂಧಗಳನ್ನು ಚಿಗುರೋ ಮೊದಲೇ ಕಳಕೊಂಡದ್ದೂ ಇದೆ... ಮುಂದೆಯೂ ಕಳಕೊಂಡೇನು... ಆದರೆ ಆ ಬಗ್ಗೆ ನಂಗೆ ಬೇಸರವಿಲ್ಲ... ನಿಜವೆಂದರೆ ನನ್ನ ಭಾವದಾಚೆ ನಾನು ನಿಮ್ಮ ಭಾವಗಳನ್ನೂ ಗೌರವಿಸುತ್ತೇನೆ... ಯಾರೋ ನಂಗೆ ಬಂಧ ಬೆಸೆಯೋ ಮುನ್ನವೇ ಅದಕೊಂದು ಸಂಬಂಧ ರೂಪದ ಹೆಸರಿಡುವುದರಲ್ಲೇ ಖುಷಿಯಿದೆ ಮತ್ತು ಭದ್ರತಾ ಭಾವವಿದೆ ಅಂದರೆ ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ... ಆದರೆ ನನ್ನಿಂದಲೂ ಅದನ್ನೇ ಬಯಸದಿದ್ದರಾಯ್ತು... ಕೂಗಿದ್ದು ಹೇಗೆಂಬುದಕಿಂತ ಕೂಗುವಾಗಿನ ಭಾವವೇ ಹೆಚ್ಚು ಮುಖ್ಯವೆನ್ನಿಸುತ್ತೆ ನಂಗೆ... ಬಂಧದ ಆಯಸ್ಸು ಮತ್ತು ವಿಸ್ತಾರ ಅದರಿಂದಲೇ ನಿರ್ಧಾರವಾಗುತ್ತೆ ನನ್ನಲ್ಲಿ... ಇನ್ನೇನಿಲ್ಲ... 

ಸ್ನೇಹ ಹಾಡಲಿ ಎಲ್ಲೆಲ್ಲೂ...

Saturday, October 19, 2013

ಗೊಂಚಲು - ಒಂಬತ್ತು X ಹತ್ತು.....

ಹಂಗಂಗೇ ಏನೇನೋ.....

ನಂಗೊತ್ತು ನಾನು ನಿನ್ನ ವ್ಯಕ್ತಿತ್ವದೆದುರು ತುಂಬ ಕುಬ್ಜ ಅಂತ... ಆದರೆ ಒಪ್ಪಿಕೊಳ್ಳಲಿ ಹೇಗೆ... ಮಗ ನಾನು... ಗಂಡು ಪ್ರಾಣಿ ತಾನೆ... ನನ್ನ ಅಸಹಾಯಕತೆ, ನನ್ನ ಕೈಲಾಗದತನಗಳೆಲ್ಲ ನಾ ನಿನ್ನೆದುರು ನಿಂತಾಗ ನಂಗೇ ಅಗತ್ಯಕ್ಕಿಂತ ಸ್ಪಷ್ಟವಾಗಿ ಗೋಚರಿಸಿ ಕಂಗಾಲಾಗುತ್ತೇನೆ... ನನ್ನ ಕುಬ್ಜತೇನ ನಿನ್ನೆದುರು ಕೂಗಾಡುವ ಮೂಲಕ ಮುಚ್ಚಲು ಹೊರಡುತ್ತೇನೆ... ನೀನು ಅಮ್ಮ ಎಂದಿನಂತೆ ನಕ್ಕು ಸುಮ್ಮನಾಗ್ತೀಯ... ನಾನು ನನಗೇ ಸಾವಿರ ಸುಳ್ಳೇ ಸಮರ್ಥನೆಗಳ ನೀಡಿಕೊಂಡು ಗೆದ್ದ ಭ್ರಮೆಯಲ್ಲಿ ನಿಸೂರಾಗ್ತೇನೆ... ನೀನು ನಿನ್ನ ಕಣ್ಣ ಹನಿ ಎಂದೂ ನನ್ನ ತಲುಪದಂತೆ ಅಲ್ಲೆಲ್ಲೋ ಮೂಲೆಯಲ್ಲಿ ಸೆರಗ ತೋಯಿಸಿಕೊಳ್ತೀಯ... ಆಗೊಮ್ಮೆ ಈಗೊಮ್ಮೆ ನಿನ್ನ ದೇಹ ಇಷ್ಟಿಷ್ಟೇ ಕೃಷವಾಗುತ್ತಿರುವ ಸುದ್ದಿ ನನ್ನ ತಲುಪುತ್ತೆ... ಬರೀ ನೋವನ್ನೇ ಉಂಡರೆ ಇನ್ನೇನಾಗುತ್ತೆ... ನಾನಿಲ್ಲಿ ಅಡಗಿಕೊಳ್ಳಲು ಮತ್ತೆ ಹೊಸ ಸಮರ್ಥನೆಗಳ ಮರೆಯ ಹುಡುಕತೊಡಗುತ್ತೇನೆ...
***
ಒಮ್ಮೊಮ್ಮೆ ಇಷ್ಟೆಲ್ಲ ಗೆಳೆತನಗಳಿಂದ, ಕರುಣೆಯ ಮಡಿಲುಗಳ ಇಷ್ಟೆಲ್ಲ ಪ್ರೀತಿಯಿಂದ, ಮುರಿದರೂ ಮತ್ತೆ ಚಿಗುರೋ ಕನಸುಗಳಿಂದ, ಒಂದ್ಯಾವುದೋ ಭರವಸೆಯಿಂದ, ಮುಗಿಯದ ಹಸಿ ಹಸಿ ಆಸೆಗಳಿಂದ ತುಂಬಿದ ಈ ಬದುಕು ಎಂದಿಗೂ ಮುಗಿಯಲೇ ಬಾರದು ಅಂತಲೂ ಅನ್ನಿಸಿ ಬದುಕಿನಾಸೆ ಅತಿಯಾಗುತ್ತೆ... ನಗೆಯ ಸನ್ನಿಧಿಯಲ್ಲಿ ಶಾಶ್ವತತೆಯ ಹುಚ್ಚು ಹಂಬಲ ತೀವ್ರ...

ಮರುಕ್ಷಣ ಅನ್ಸುತ್ತೆ – ಬದುಕು ತುಂಬ ದೀರ್ಘವಾಗ್ತಿದೆಯೇನೋ ಅಂತ... ಎಷ್ಟೆಲ್ಲ ಖುಷಿಗಳಿವೆ ಇತ್ತೀಚಿನ ಈ ಬದುಕಲ್ಲಿ... ಈ ಸ್ನೇಹಗಳು, ಅದರಿಂದ ದಕ್ಕಿದ ನಗು, ಖುಷಿ ಎಲ್ಲ ಕಳೆದುಹೋಗಿ ಬದುಕು ಬರಡಾಗುವ ಮುನ್ನ, ನನಗೇ ನಾನು ಬೋರಾಗುವ ಮುನ್ನ, ಇವೆಲ್ಲ ಹೀಗೆ ಹೀಗೇ ಇರುವಾಗಲೇ, ನಗುತಿರುವಾಗಲೇ, ಈ ನಗುವಿನೊಂದಿಗೇ ಫಕ್ಕನೆ ಮುಗಿದುಹೋಗಿ ಇಲ್ಲವಾಗಿಬಿಡಬೇಕು... ಖುಷಿಯಿಲ್ಲದ, ಕನಸಿಲ್ಲದ, ಭಯತುಂಬಿದ ಭವಿಷ್ಯದಲ್ಲಿ ನಾನೂ ಇರಬಾರದು... ಅಳುವ ಕಡಲಲ್ಲಿ ಮುಳುಗಿ ಉಸಿರುಗಟ್ಟುವುದಕಿಂತ ಅಳಿದು ಹೋಗುವುದೇ ಸುಖವಿರಬಹುದಾ.??? 
***
ಎಷ್ಟೆಲ್ಲ ಖುಷಿಗಳ ನಡುವೆ, ಸಣ್ಣದ್ಯಾವುದೋ ಒಂದು ನೋವಿನ ಎದುರು ನೀವೇ ಪಕ್ಕನೆ ನೆನಪಾಗೋದು ಯಾಕೆ.? ಮತ್ತೆ ಸಿಕ್ಕೇ ಸಿಗ್ತೀವಿ ಅಂತ ಗೊತ್ತಿದ್ರೂ ನಿಮ್ಮೊಂದಿಗಿನ ಪ್ರತೀ ವಿದಾಯದಲ್ಲೂ ಮನಸು ಭಾರ ಆಗೋದೂ ಯಾಕೆ.? ಅಷ್ಟೆಲ್ಲ ನಿಮ್ಮಗಳ ತಲೆ ತಿಂದ ಮೇಲೂ ಇನ್ನೂ ಮಾತು ಬಾಕಿ ಇತ್ತು ಅನ್ನಿಸುವುದ್ಯಾಕೆ.? ನಿಮ್ಮ ಮಾತಿನಾಚೆಯ ಮೌನದೊಳಗಿನ ಖುಷಿ ಮತ್ತು ನೋವುಗಳನೂ ಆಲಿಸಬೇಕು ಅನ್ನುವ ಹಂಬಲವ್ಯಾಕೆ.? ನಿಮ್ಮದೊಂದು ಸಣ್ಣ ನಗುವೂ ನನ್ನಲಿ ಖುಷಿಯ ಅಲೆಗಳ ಸೃಷ್ಟಿಸುವುದ್ಯಾಕೆ.? ಅಷ್ಟೆಲ್ಲ ಜಗಳವಾಡಿದರೂ ಜಗಳ ಮುಗಿದ ಮರುಕ್ಷಣ ನೋವೆಷ್ಟಾಯಿತೆಂದು ಹೇಳಿಕೊಂಡು ಮತ್ತೆ ನಗಲು ನೀವೇ ಬೇಕು ಅನ್ನಿಸುವುದ್ಯಾಕೆ.? ಮೌನವೆಂದರೆ ಕಡು ವಿರೋಧಿ ನಾನು, ನೀವು ಮಾತೇ ಆಡದಿದ್ದರೂ ನಿಮ್ಮ ಮೌನದ ಸನ್ನಿಧಿಯಲೂ ಹಿತವಾದ ಭಾವದಲಿ ತೇಲಬಲ್ಲೆ ಹೇಗೆ.? ಬೆನ್ನಿಗೆ ಬಿದ್ದೋರೂ ಅರ್ಥೈಸಿಕೊಳ್ಳದೇ ನೋವ ಹೆಚ್ಚಿಸುವಾಗ ಬರೀ ಭಾವಕ್ಕೆ ದಕ್ಕಿದ ನೀವು ನಗೆಯ ಉಣಿಸಲು ಹೆಣಗುತ್ತೀರ ಯಾಕೆ.? ನೀವೆಲ್ಲ ಯಾರು ನಂಗೆ.?  ಕಣ್ಣ ಹನಿ ಕೂಡಾ ಅಪ್ಯಾಯಮಾನ ಅನಿಸುವಂತೆ ಯಾವುದೀ ಸ್ನೇಹ ಬಂಧ ಕರುಳ ಬೆಸೆದು ಬಂಧಿಸಿದೆಯೋ ನಿಮ್ಮಗಳೊಂದಿಗೆ ಅಂತ ಆಶ್ಚರ್ಯದಿಂದ ಯೋಚಿಸುತ್ತೇನೆ ಪ್ರತಿ ಬಾರಿಯೂ... ಇಂಥ ಪ್ರಶ್ನೆಗಳ ಸರಮಾಲೆಯೇ ಎದುರು ನಿಂತು ಕುಣಿಯುವಾಗ ನಂಗೇ ನಾನು ಒಂದು ಪ್ರಶ್ನೆಯಾಗುತ್ತೇನೆ.. ಬಹುಶಃ ಅದು ಅತೃಪ್ತ ಬದುಕಿನ ಹಪಹಪಿಯೂ ಇರಬಹುದೇನೋ ಗೊತ್ತಿಲ್ಲ... ಕಳೆದುಕೊಂಡದ್ದೇ ಜಾಸ್ತಿ ಇರೋ ಬದುಕಲ್ಲಿ  ಕಳೆದುಕೊಳ್ಳುವ, ಕಳೆದುಹೋಗುವ ಭಯವೂ ಇರಬಹುದು... ಅದೆಲ್ಲಕ್ಕಿಂತ ಹೆಚ್ಚಾಗಿ ಅರಿವು ಮೂಡಿದಾಗಿನಿಂದ ಬಯಸಿದ್ದ ಅಪರೂಪದ ಗೆಳೆತನವನ್ನು ನಿಮ್ಮಗಳಲ್ಲಿ ಕಂಡದ್ದು ಮತ್ತು ನೀವದನ್ನು ನಿಭಾಯಿಸಿದ್ದು ನಿಮ್ಮೆಡೆಗಿನ ಆ ಆತ್ಮೀಯ ಭಾವಕ್ಕೆ ಮೂಲ ಎಂದರೆ ಹೆಚ್ಚು ಸರಿ ಅನ್ಸುತ್ತೆ... ಅದರಿಂದಾಗಿ ಮನಸಿಗೊಂದು ಸ್ವೇಚ್ಛೆ ಮತ್ತು ಬದುಕಿಗೊಂದು ಸ್ಫೂರ್ತಿಯುತ ದೃಷ್ಟಿ ದಕ್ಕಿಬಿಟ್ಟಿದೆ... ಬದುಕ ನಚ್ಚಗಿಟ್ಟ ಸಸ್ನೇಹಿಗಳಿಗೊಂದು ಸಲಾಮ್...  
***
ಎಷ್ಟೆಲ್ಲ ಪ್ರಶ್ನೆಗಳಿವೆ...  ಒಳಗಿನ ಮಾತೂ ಕೇಳದಷ್ಟು ಪ್ರಶ್ನೆಗಳ ಗದ್ದಲ... ಉತ್ತರ ಮಾತ್ರ ಶೂನ್ಯ... ಎಷ್ಟೇ ಹರಿದು ಹಂಚಿದರೂ ಖಾಲಿಯಾಗದ  ತಲ್ಲಣಗಳು... ಇವೆಲ್ಲವುಗಳ ಕಣ್ತಪ್ಪಿಸಿ ಮೌನದ ಚಿಪ್ಪಿನೊಳಗೆ ಹುದುಗಿ ಅಡಗಿಕೊಂಡು ಬಿಡಬೇಕೆನ್ನಿಸುವಷ್ಟು ಗೊಂದಲಗಳು... ಉತ್ತರವ ಕಾಲವೇ ಕೊಡುತ್ತೆ ಅನ್ನುತ್ತಾರೆ... ಆದರೆ ಉತ್ತರ ದಕ್ಕುವ ಮುನ್ನವೇ ಕಾಲ ಕಳೆದು ಹೋಗುತ್ತೇನೋ ಅನ್ನುವ ಭಯವೂ ಇದೆ... ಆದರೂ ಕಾಯಲೇ ಬೇಕು... ಕಾಲ ಕಾಯದಿದ್ದರೂ...
***
ಕಣ್ಣಲ್ಲಿನ ಕನಸುಗಳೆಲ್ಲ ಹನಿಗಳಾಗಿ ಉದುರಿ ಹೋಗಿ ಕೆನ್ನೆ ತೋಯಿಸಿ ಕರೆಯಾಗಿ ಉಳಿದವು... ಒಣ ನಗೆಯ ಸಾಬೂನಿಂದ ಕೆನ್ನೆ ಮೇಲಿನ ಕಣ್ಣೀರ ಕರೆಗಳ ತಿಕ್ಕಿ ತಿಕ್ಕಿ ತೊಳೆದಿದ್ದೇನೆ... ಯಾರಿಗೂ ಕಾಣಬಾರದು... ಕೆನ್ನೆಯೀಗ ತುಂಬ ನುಣುಪು... ಆದರೂ ಮನದ ಕಣ್ಣುಗಳಿಂದ ನನ್ನೊಳಗನ್ನೇ ಇಣುಕಿ ನೋಡಬಲ್ಲ ಕೆಲ ಕಣ್ಣುಗಳಿಗೆ ಒಳಗಣ ಗಾಯ ಕಾಣದಂತೆ ತಡೆಯಲಾರದೆ ಸೋತಿದ್ದೇನೆ... ಮತ್ತೆ ಸ್ನೇಹಕ್ಕೆ ಸಲಾಮ್... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, October 9, 2013

ಗೊಂಚಲು - ಎಂಬತ್ತೊಂಬತ್ತು.....

ಅಲ್ಲಲ್ಲಿ ಹೇಳಿದ್ದು.....
(ಯಾರಿಗೆ ಮತ್ತು ಯಾವಾಗ ಅಂತ ಕೇಳಬೇಡಿ...)

ಕನಸಿನೂರಿಗೂ ನಿನ್ನ ಕನಸಿನಾಸೆ ಮೂಡುವಂತೆ ನಗುತಲಿರು ನನ ಗೆಳತಿ...
@@@
ನಿದ್ದೆ ಮಡಿಲಿಂದ ಎದ್ದು ಮೈಮುರಿದು ಯಾವುದೋ ಸವಿಗನಸು ನೆನಪಾದವಳಂತೆ ಸುಮ್ಮನೇ ಹಿತವಾಗಿ ನಗುತಿದ್ದ ನಿನ್ನ ಮುಂಗುರುಳ ತಾಕಿ ಬಂದೆ ಅಂತಂದ ರವಿ ಕಿರಣದ ಮೇಲೆ ನಂಗೆ ಸಿಟ್ಟು, ಹೊಟ್ಟೆಕಿಚ್ಚು ಮತ್ತು ಪ್ರೀತಿ ಒಟ್ಟೊಟ್ಟಿಗೇ ಮೂಡಿ ಒಂಥರಾ ರೋಮಾಂಚನ ಕಣೇ...;) 
@@@
ಅಷ್ಟು ದೊಡ್ಡ ಕಲೆಯಿದ್ದೂ ಚಂದಕ್ಕೆ ಮತ್ತೊಂದು ಹೆಸರು ಚಂದ್ರಮ...
ಚಂದ ಅವನಲ್ಲ ಅವನ ತಂಪು ತಂಪು ಬೆಳದಿಂಗಳು...
ನಾನೂ ಅವನಂತಾಗಬೇಕಿತ್ತು; ವ್ಯಕ್ತಿತ್ವದ ಬೆಳಕಿಂದ ಬೆಳಗಬೇಕಿತ್ತು...
ಆದರಿದು ನನ್ನ ಮಟ್ಟಿಗೆ ಬರೀ ಬಯಕೆ ಅಷ್ಟೇ...
ಅಲ್ಲಿ ನೀನು ಆ ದಾರೀಲಿ ನಾಕು ಹೆಜ್ಜೆ ನಡೆದಾಗಿದೆ ಅಂತ ಸುದ್ದಿ ಬಂತು...
ಇಲ್ಲಿ, ಗೆಳೆಯನೆಂಬ ಹೆಮ್ಮೆಯ ಭಾವ ಎದೆಯ ತುಂಬಿ ನನ್ನದೇ ಬಯಕೆ ತೀರಿದಷ್ಟು ಅವ್ಯಕ್ತ ಖುಷಿ ನನ್ನಲ್ಲಿ......
@@@
ಎಲ್ಲಿಂದ ಎಲ್ಲಿಗೋ ಬೆಸೆದುಕೊಂಡು ಕೊರಳೆತ್ತಿ ಹಾಡುವ ಈ ಭಾವ ಬಂಧಗಳು ನೀಡುವ ಆತ್ಮೀಕ ಖುಷಿಗಳು ಈ ಬದುಕನ್ನು ಅದೆಷ್ಟು ಚಂದಗೆ ಶೃಂಗರಿಸುತ್ತವೆ ಅಂದರೆ ಅಂಥ ಬಂಧಗಳೆದುರು ಅರಿವೇ ಇಲ್ಲದೆ ಮನಸು ಹಕ್ಕಿ ಹಕ್ಕಿ... 
ತಾರೆ, ಚಂದಿರರು ಕಾಣದ ಗಾಢ ಕತ್ತಲಲೂ ಆ ಜೀವಗಳ ಸ್ನೇಹದ ಬೆಳಕೇ ದಾರಿ ತೋರಿಬಿಡುತ್ತೆ... 
ಅಂಥ ಬಂಧಗಳಿಗೆ ಋಣಿ...
@@@
ಗೆಳತೀ -
ಎಲ್ಲಾ ಸೋಲಿಗೂ ಗೆಲುವಿನ ಇನ್ನೊಂದು ಮುಖ ಇದ್ದೇ ಇದೆ...
ಒಂದು ನಗೆಯ ಕ್ಷಣದ ನೆನಪು ಸಾಕು ಸಾವಿರ ನೋವುಗಳ ಮರೆತು ಹಗುರಾಗಲು...
ನಕ್ಕು ಬಿಡು ಮಗುವಂತೆ... ನಿಶ್ಚಿಂತೆಯಿಂದ - ಎಲ್ಲಾ ಒಳಿತೇ ಆಗುವುದೆಂಬ ಭರವಸೆಯಲ್ಲಿ...
ಒಳಿತು ಪ್ರತ್ಯಕ್ಷವಾಗಿ ದಕ್ಕುತ್ತೋ ಇಲ್ಲವೋ ಒಳಿತಿನ ಭರವಸೆಯ ನಗು ಈ ಕ್ಷಣವ ಬೆಳಗಿಸಿ ನಾಳೆಯೆಡೆಗೆ ಅಡಿಯಿಡಲು ಚೈತನ್ಯವನ್ನಂತೂ ಕೊಟ್ಟೇ ಕೊಡುತ್ತೆ...
@@@
ಭಾಷೆಯೆಂದರೆ ಬರೀ ಮಾತಲ್ಲ – ಮಾಧ್ಯಮರೂಪಿ ಶಬ್ದಾಡಂಬರವೂ ಅಲ್ಲ...
ಶಬ್ದದ ಹಿಂದಿನ ಭಾವ...
ಹೇಳಿದ್ದರ ಹಿಂದಿರುವ ಹೇಳದೇ ಉಳಿದದ್ದು – ನಾಲಿಗೆ ಆಡದೆಯೂ ಮನಸಿಗೆ ಕೇಳಿದ್ದು ಮತ್ತು ಮನಸಲ್ಲಿ ಮರೆವಿರದೆ ಉಳಿದದ್ದು...
@@@

Monday, September 23, 2013

ಗೊಂಚಲು - ಎಂಬತ್ತು + ಎಂಟು.....

ಹೀಗೊಂದು ಮಾತು.....

ಕಳೆದ ಮಹಿಳಾ ದಿನಾಚರಣೆಗಾಗಿ ಒಂದು ಲೇಖನ ಬರೆದಿದ್ದೆ.
ಬರೆದ ವಿಷಯ ಸತ್ಯವೇ. ತುಂಬಾ ಜನ ಮೆಚ್ಚಿಕೊಂಡರು ಕೂಡ. ಆದರೆ ನನಗೇ ಯಾಕೋ ಸಂತೃಪ್ತ ಅನ್ನಿಸಿಲ್ಲ. ಬರೆದ ಬರಹದಲ್ಲಿ ದೇಹ ಸದೃಢವಾಗೇ ಇದ್ದರೂ ಯಾಕೋ ಆತ್ಮ ಇಲ್ಲ ಅನ್ನಿಸ್ತಾ ಇತ್ತು. ಕಾರಣ ಇಷ್ಟೇ ನನ್ನ ಮನಸು ಪುರುಷ ಪ್ರಧಾನ ಮತ್ತು ಸ್ತ್ರೀ ಪ್ರಧಾನ ಎಂಬ ಎರಡೂ ವಾದಗಳನ್ನು ಒಪ್ಪಲಾರದು. ನಾನೆನ್ನುತ್ತೇನೆ ನಮ್ಮನೆಲ್ಲ ಸಷ್ಟಿಸಿದ ಪ್ರಕೃತಿ ಮಾತ್ರ ಪ್ರಧಾನ. ಅದರ ಪ್ರಾಧಾನ್ಯತೆಯನ್ನು ಒಪ್ಪಿಕೊಳ್ಳದ ನಾವು, ಅದು ನೀಡಿದ ಮಿತಿಗಳನ್ನು ಮೀರಲು ಹವಣಿಸುವ ನಾವು, ಪುರುಷ ಮೇಲು ಇಲ್ಲಾ ಸ್ತ್ರೀ ಮೇಲು ಎಂದುಕೊಂಡು ಬಡಿದಾಡಿಕೊಂಡು ನಿಜವಾದ ನಮ್ಮನ್ನು ನಾವೇ ಕಳೆದುಕೊಳ್ಳುತ್ತಿದ್ದೇವೇನೋ ಅನ್ನಿಸುತ್ತೆ ನಂಗೆ. ದೌರ್ಜನ್ಯಗಳ ಮಾತು ಬಿಟ್ಟುಬಿಡಿ. ಅದು ಮನಸಿನ ಸಂಸ್ಕಾರ ಇಲ್ಲದವರು ಮತ್ತೊಬ್ಬರ ಮೇಲೆ ನಡೆಸೋ ಕ್ರೌರ್ಯ. ಮಿತಿಗಳ ಅರಿತುಕೊಂಡು ಹೊಂದಿ ಬಾಳುವ ಬಗ್ಗೆ ಯೋಚಿಸೋಣ...

ಇಷ್ಟೆಲ್ಲ ಜೀವರಾಶಿಗಳನ್ನು ಸೃಷ್ಟಿಸಿದ ಪ್ರಕೃತಿ ಪ್ರತಿ ಜೀವಕ್ಕೂ ಅದರದೇ ಆದ ವಿಶಷ್ಠ ಸಾಮರ್ಥ್ಯ ಮತ್ತು ಮಿತಿ ಎರಡನ್ನೂ ನೀಡಿದೆ. ಸುತ್ತಲಿನ ವಾತಾವರಣದ ಅನುಕೂಲತೆಯನ್ನು ಬಳಸಿಕೊಂಡು ತನ್ನ ಪ್ರಬೇಧಗಳನ್ನು ತಾನೇ ಸ್ವತಂತ್ರವಾಗಿ ವೃದ್ಧಿಸಿಕೊಳ್ಳಬಲ್ಲ ಸಾಮರ್ಥ್ಯ ನೀಡಿ ಸಸ್ಯ ಸಂಕುಲವನ್ನು ಸೃಷ್ಟಿಸಿ; ವಾತಾವರಣ ಮುನಿದರೆ ಉಳಿಯಲಾರದ ಮಿತಿಯನ್ನೂ ಅದಕೆ ನೀಡಿದ್ದು ಪ್ರಕೃತಿ...
ಅದೇ ಪ್ರಕೃತಿ ಪ್ರಾಣಿ ಪ್ರಪಂಚದಲ್ಲಿ ಪ್ರತ್ಯೇಕ ಗಂಡು - ಹೆಣ್ಣು ಎಂಬ ಎರಡು ಪ್ರಭೇದವನ್ನೇ ಸೃಷ್ಟಿಸಿತು. ಅದರಲ್ಲೂ ಮನುಷ್ಯ ಪ್ರಾಣಿಗೆ ವಿಶೇಷವಾದ ವಿವೇಚನಾ ಶಕ್ತಿಯನ್ನೂ ನೀಡಿತು. ಮನುಷ್ಯ ಸ್ವಲ್ಪ ಮುಂದುವರಿದ (?) ಪ್ರಾಣಿ ತಾನೇ...
ಈಗ ನಾವು ಪ್ರಕೃತಿಯ ಸೃಷ್ಟಿಯಲ್ಲಿನ ಮನುಷ್ಯ ಜಂತುವಿನ ಬಗ್ಗೆ ಮಾತಾಡೋಣ...
ಗಂಡು - ಹೆಣ್ಣು ಎರಡೂ ಬೌದ್ಧಿಕವಾಗಿ ಸಮಾನ ಪ್ರಾಭಲ್ಯವುಳ್ಳ ಶಕ್ತಿಗಳು. ದೈಹಿಕತೆಯಲ್ಲಿ ಮಿತಿಗಳನ್ನಿಟ್ಟದ್ದು ಪ್ರಕೃತಿ...
ದೈಹಿಕ ಮಿತಿಗಳ ಮೀರುತ್ತೇನೆಂದು ಹೊರಡುವವರಿಗೆ ಬೇಲಿಯಂತಹ ಸೃಷ್ಟಿಯೇ ಅಗೋಚರ ಮನಸು...
ಮನಸು ಇದು ಮನುಜನಿಗಾಗಿ ಪ್ರಕೃತಿ ನೀಡಿದ ಅದ್ಭುತ ಕೊಡುಗೆ ಮತ್ತು ಅಷ್ಟೇ ಪ್ರಭಾವಶಾಲಿ ಮಿತಿ ಕೂಡಾ...
ಎರಡು ಬೇರೆಯದೇ ಶಕ್ತಿಗಳು ಒಂದೇ ಭಾವದಲ್ಲಿ ಬೆಸೆದು ಹೊಳೆಯುವ ವಿಶಿಷ್ಟ ಜೀವನ ಪ್ರೀತಿಗೆ ಮೂಲ ಧಾತು ಈ ಮನಸೆಂಬೋ ಮನಸಿನ ಆಳದ ಒಲವ ಬಯಕೆ...
ಸುಂದರ - ಸದೃಢ ಕಾಯ, ಪ್ರಭಲ ಬುದ್ಧಿ ಶಕ್ತಿ ಇವೆರಡನ್ನೂ ನೀಡಿ ಅವುಗಳನ್ನು ನಿಯಂತ್ರಿಸಲು ಮನಸು ಮತ್ತು ಅದರೊಳಗೊಂದಿಷ್ಟು ಪ್ರಾಕೃತಿಕ ಬಯಕೆಗಳನ್ನು ನೀಡಿದ್ದು ಪ್ರಕೃತಿ. ತಾ ಮೇಲು ತಾ ಮೇಲು ಎಂದು ಸಾಧಿಸಲು ಹೊರಟಾಗ ಗಂಡು ಮತ್ತು ಹೆಣ್ಣು ಇಬ್ಬರೂ ಒಬ್ಬರ ಮೇಲೊಬ್ಬರು ಕಾಯ ಹಾಗೂ ಬುದ್ಧಿಯ ಮೀತಿಗಳನ್ನು ಮೀರಿಬಿಟ್ಟಾರು. ಆದರೂ ಮನಸಿನ ಮಿತಿಗಳನ್ನು ಮೀರಲಾಗದೇ ಸೋತದ್ದೇ ಹೆಚ್ಚು ಸಾರಿ...
ಎಲ್ಲ ಬಡಿದಾಟಗಳಿಂದ ತನ್ನ ಮೇಲರಿಮೆಯನ್ನು ಸಾಧಿಸಿದ ಮೇಲೆ ಮನಸಲ್ಲಿ ಪ್ರಕೃತಿ ಬಚ್ಚಿಟ್ಟ ಮೂಲ ಬಯಕೆ ತನ್ನ ಪ್ರತಿಕೃತಿಯ ಸೃಷ್ಟಿಯ ಮಾತು ಬಂದಾಗ ಎಲ್ಲ ಮೇಲರಿಮೆಗಳೂ ಸಾಯಲೇಬೇಕಾದ್ದು ಅನಿವಾರ್ಯ. ಅದು ನಮಗೆ ಪ್ರಕೃತಿ ನೀಡಿದ ಮಿತಿ...
ಗಂಡು ತನ್ನ ಪುರುಷ ಶಕ್ತಿಯ ಸದ್ಬಳಕೆಯ ಬಯಕೆ ತೀವ್ರವಾಗಿ ಕಾಡಿದ ಕ್ಷಣ ಹೆಣ್ಣು ಜೀವದ ಮಡಿಲ ಅರಸಿ ಚಡಪಡಿಸುತ್ತಾನೆ...
ಹೆಣ್ಣು ತನ್ನ ಮೂಲ ಭಾವವಾದ ತಾಯ್ತನದ ಪೂರ್ಣತ್ವ ಹೊಂದಲೋಸುಗ ಗಂಡಿನ ತೆಕ್ಕೆಗಾಗಿ ಹಂಬಲಿಸುತ್ತಾಳೆ...
ಒಂದು ಬೀಜ ಮತ್ತು ಇನ್ನೊಂದು ಕ್ಷೇತ್ರ...
ಒಂದನ್ನುಳಿದು ಇನ್ನೊಂದು ಅಪೂರ್ಣ...
ಬೀಜದ ಪೂರ್ಣತ್ವ ಅದು ಕ್ಷೇತ್ರದಲ್ಲಿ ಬೆರೆತು ಹೊಸ ಸಸಿಯಾಗಿ ನಕ್ಕಾಗ...
ಬೀಜವೊಂದಕ್ಕೆ ಮಡಿಲಲ್ಲಿ ತಾವು ನೀಡಿ - ನೀರು ಗೊಬ್ಬರ ಉಣಿಸಿ - ಬೀಜಕ್ಕೆ ಉಸಿರ ತುಂಬಿ ಜೀವ ನೀಡುವಲ್ಲಿ ಕ್ಷೇತ್ರದ ಗರಿಮೆ...
ಒಂದು ಇನ್ನೊಂದನ್ನು ಬೆರೆತು ಒಂದಾಗಿ (ಒಂದೇ ಆಗಿ) ಹೊಸದೊಂದು ನಗುವನ್ನು ಸೃಜಿಸಿ ಸಂತತಿಯೊಂದು ಹಸಿರಾಗಿ ಟಿಸಿಲೊಡೆಯಲು ಒಂದನ್ನೊಂದು ಸೇರಬೇಕಾದದ್ದು ಪ್ರಕೃತಿ ನಮಗೆ ನೀಡಿದ ಚಂದದ ಮಿತಿ ಹಾಗೂ ಪ್ರೀತಿ...

ಆ ಪ್ರಕೃತಿಯ ಮಿತಿಗಳ ಮನಸಾರೆ ಒಪ್ಪಿಕೊಂಡು - ನಮ್ಮ ಮನದ ಪ್ರೀತಿಯ ಪ್ರಾಮಾಣಿಕವಾಗಿ ಅಪ್ಪಿಕೊಂಡು - ‘ನೀನು’ ‘ನಾನು’ ಎಂಬ ಅಹಂಗಳಿಂದಾಚೆ ಬಂದು - ‘ನಾವಾ’ಗಿ ಬೆರೆತು ಈ ಪುರುಷ ಪ್ರಧಾನ, ಸ್ತ್ರೀ ಪ್ರಧಾನ, ಸಮಾನತೆ ಎಂಬೆಲ್ಲ ತಿಕ್ಕಾಟ ಬಡಿದಾಟಗಳನು ಮೀರಿ ಬರೀ ಪ್ರೇಮ ಪ್ರಧಾನವಾದ ಸಮಾಜವನ್ನು ನಿರ್ಮಿಸಲಾಗದಾ...
ಹಾಗೆ ಬಯಸೋದು ಅತಿಯಾಸೆಯಾದೀತಾ...
ಮನುಷ್ಯ ಸ್ವಲ್ಪ ಮುಂದುವರಿದ ಪ್ರಾಣಿ ಎಂಬುದು ಸತ್ಯವಾ...

ಆತ ಬೆವರಿಳಿಸಿ ಹಣ ದುಡಿದರೆ - ಆಕೆ ಅನ್ನ ಬೇಯಿಸಿ ಬೆವರಾಗುತ್ತಾಳೆ...
ಅನ್ನ ಹೊಟ್ಟೆಗಿಳಿಯದೇ ಆತ ದುಡಿಯಲಾರ - ಆತನ ಹಣವೇ ಆಕೆಯ ಅನ್ನಕ್ಕೆ ಆಧಾರ...
ಹಾಗಿರುವಾಗ (ಹಣ) ದುಡಿಯುವ ಕೈ ಮತ್ತು ಬಡಿಸುವ ಕೈಗಳ ನಡುವೆ ಗುದ್ದಾಟವೇಕೆ...
ನಾಲ್ಕೂ ಕೈಗಳು ಪ್ರೇಮದಲಿ ಬೆಸೆದುಕೊಂಡರೆ ಕುಟುಂಬವೊಂದು ಒಲವ ಬಂಧದಲ್ಲಿ ಬೆಳಗಲಾರದಾ...
ಅಂಥ ಕುಟುಂಬಗಳು ನಾಲ್ಕು ಸೇರಿದರೆ ಒಂದು ಪುಟ್ಟ ಭವ್ಯ ಪ್ರೇಮ ಪೂರ್ಣ ಸಮಾಜ...
ಅಂಥ ಕುಟುಂಬಗಳ ಸಮುಚ್ಛಯವೇ  ನೂರಾಗಿ, ಸಾವಿರವಾಗಿ....
ಆಸೆ ಅತಿಯಾಯಿತಾ...!!!
*** ಈ ಬರಹ "ಪಂಜು" ಇ-ಪತ್ರಿಕೆಯ  23-09-2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ... ಅಲ್ಲಿ ಓದಲು -http://www.panjumagazine.com/?p=4338