Saturday, October 19, 2013

ಗೊಂಚಲು - ಒಂಬತ್ತು X ಹತ್ತು.....

ಹಂಗಂಗೇ ಏನೇನೋ.....

ನಂಗೊತ್ತು ನಾನು ನಿನ್ನ ವ್ಯಕ್ತಿತ್ವದೆದುರು ತುಂಬ ಕುಬ್ಜ ಅಂತ... ಆದರೆ ಒಪ್ಪಿಕೊಳ್ಳಲಿ ಹೇಗೆ... ಮಗ ನಾನು... ಗಂಡು ಪ್ರಾಣಿ ತಾನೆ... ನನ್ನ ಅಸಹಾಯಕತೆ, ನನ್ನ ಕೈಲಾಗದತನಗಳೆಲ್ಲ ನಾ ನಿನ್ನೆದುರು ನಿಂತಾಗ ನಂಗೇ ಅಗತ್ಯಕ್ಕಿಂತ ಸ್ಪಷ್ಟವಾಗಿ ಗೋಚರಿಸಿ ಕಂಗಾಲಾಗುತ್ತೇನೆ... ನನ್ನ ಕುಬ್ಜತೇನ ನಿನ್ನೆದುರು ಕೂಗಾಡುವ ಮೂಲಕ ಮುಚ್ಚಲು ಹೊರಡುತ್ತೇನೆ... ನೀನು ಅಮ್ಮ ಎಂದಿನಂತೆ ನಕ್ಕು ಸುಮ್ಮನಾಗ್ತೀಯ... ನಾನು ನನಗೇ ಸಾವಿರ ಸುಳ್ಳೇ ಸಮರ್ಥನೆಗಳ ನೀಡಿಕೊಂಡು ಗೆದ್ದ ಭ್ರಮೆಯಲ್ಲಿ ನಿಸೂರಾಗ್ತೇನೆ... ನೀನು ನಿನ್ನ ಕಣ್ಣ ಹನಿ ಎಂದೂ ನನ್ನ ತಲುಪದಂತೆ ಅಲ್ಲೆಲ್ಲೋ ಮೂಲೆಯಲ್ಲಿ ಸೆರಗ ತೋಯಿಸಿಕೊಳ್ತೀಯ... ಆಗೊಮ್ಮೆ ಈಗೊಮ್ಮೆ ನಿನ್ನ ದೇಹ ಇಷ್ಟಿಷ್ಟೇ ಕೃಷವಾಗುತ್ತಿರುವ ಸುದ್ದಿ ನನ್ನ ತಲುಪುತ್ತೆ... ಬರೀ ನೋವನ್ನೇ ಉಂಡರೆ ಇನ್ನೇನಾಗುತ್ತೆ... ನಾನಿಲ್ಲಿ ಅಡಗಿಕೊಳ್ಳಲು ಮತ್ತೆ ಹೊಸ ಸಮರ್ಥನೆಗಳ ಮರೆಯ ಹುಡುಕತೊಡಗುತ್ತೇನೆ...
***
ಒಮ್ಮೊಮ್ಮೆ ಇಷ್ಟೆಲ್ಲ ಗೆಳೆತನಗಳಿಂದ, ಕರುಣೆಯ ಮಡಿಲುಗಳ ಇಷ್ಟೆಲ್ಲ ಪ್ರೀತಿಯಿಂದ, ಮುರಿದರೂ ಮತ್ತೆ ಚಿಗುರೋ ಕನಸುಗಳಿಂದ, ಒಂದ್ಯಾವುದೋ ಭರವಸೆಯಿಂದ, ಮುಗಿಯದ ಹಸಿ ಹಸಿ ಆಸೆಗಳಿಂದ ತುಂಬಿದ ಈ ಬದುಕು ಎಂದಿಗೂ ಮುಗಿಯಲೇ ಬಾರದು ಅಂತಲೂ ಅನ್ನಿಸಿ ಬದುಕಿನಾಸೆ ಅತಿಯಾಗುತ್ತೆ... ನಗೆಯ ಸನ್ನಿಧಿಯಲ್ಲಿ ಶಾಶ್ವತತೆಯ ಹುಚ್ಚು ಹಂಬಲ ತೀವ್ರ...

ಮರುಕ್ಷಣ ಅನ್ಸುತ್ತೆ – ಬದುಕು ತುಂಬ ದೀರ್ಘವಾಗ್ತಿದೆಯೇನೋ ಅಂತ... ಎಷ್ಟೆಲ್ಲ ಖುಷಿಗಳಿವೆ ಇತ್ತೀಚಿನ ಈ ಬದುಕಲ್ಲಿ... ಈ ಸ್ನೇಹಗಳು, ಅದರಿಂದ ದಕ್ಕಿದ ನಗು, ಖುಷಿ ಎಲ್ಲ ಕಳೆದುಹೋಗಿ ಬದುಕು ಬರಡಾಗುವ ಮುನ್ನ, ನನಗೇ ನಾನು ಬೋರಾಗುವ ಮುನ್ನ, ಇವೆಲ್ಲ ಹೀಗೆ ಹೀಗೇ ಇರುವಾಗಲೇ, ನಗುತಿರುವಾಗಲೇ, ಈ ನಗುವಿನೊಂದಿಗೇ ಫಕ್ಕನೆ ಮುಗಿದುಹೋಗಿ ಇಲ್ಲವಾಗಿಬಿಡಬೇಕು... ಖುಷಿಯಿಲ್ಲದ, ಕನಸಿಲ್ಲದ, ಭಯತುಂಬಿದ ಭವಿಷ್ಯದಲ್ಲಿ ನಾನೂ ಇರಬಾರದು... ಅಳುವ ಕಡಲಲ್ಲಿ ಮುಳುಗಿ ಉಸಿರುಗಟ್ಟುವುದಕಿಂತ ಅಳಿದು ಹೋಗುವುದೇ ಸುಖವಿರಬಹುದಾ.??? 
***
ಎಷ್ಟೆಲ್ಲ ಖುಷಿಗಳ ನಡುವೆ, ಸಣ್ಣದ್ಯಾವುದೋ ಒಂದು ನೋವಿನ ಎದುರು ನೀವೇ ಪಕ್ಕನೆ ನೆನಪಾಗೋದು ಯಾಕೆ.? ಮತ್ತೆ ಸಿಕ್ಕೇ ಸಿಗ್ತೀವಿ ಅಂತ ಗೊತ್ತಿದ್ರೂ ನಿಮ್ಮೊಂದಿಗಿನ ಪ್ರತೀ ವಿದಾಯದಲ್ಲೂ ಮನಸು ಭಾರ ಆಗೋದೂ ಯಾಕೆ.? ಅಷ್ಟೆಲ್ಲ ನಿಮ್ಮಗಳ ತಲೆ ತಿಂದ ಮೇಲೂ ಇನ್ನೂ ಮಾತು ಬಾಕಿ ಇತ್ತು ಅನ್ನಿಸುವುದ್ಯಾಕೆ.? ನಿಮ್ಮ ಮಾತಿನಾಚೆಯ ಮೌನದೊಳಗಿನ ಖುಷಿ ಮತ್ತು ನೋವುಗಳನೂ ಆಲಿಸಬೇಕು ಅನ್ನುವ ಹಂಬಲವ್ಯಾಕೆ.? ನಿಮ್ಮದೊಂದು ಸಣ್ಣ ನಗುವೂ ನನ್ನಲಿ ಖುಷಿಯ ಅಲೆಗಳ ಸೃಷ್ಟಿಸುವುದ್ಯಾಕೆ.? ಅಷ್ಟೆಲ್ಲ ಜಗಳವಾಡಿದರೂ ಜಗಳ ಮುಗಿದ ಮರುಕ್ಷಣ ನೋವೆಷ್ಟಾಯಿತೆಂದು ಹೇಳಿಕೊಂಡು ಮತ್ತೆ ನಗಲು ನೀವೇ ಬೇಕು ಅನ್ನಿಸುವುದ್ಯಾಕೆ.? ಮೌನವೆಂದರೆ ಕಡು ವಿರೋಧಿ ನಾನು, ನೀವು ಮಾತೇ ಆಡದಿದ್ದರೂ ನಿಮ್ಮ ಮೌನದ ಸನ್ನಿಧಿಯಲೂ ಹಿತವಾದ ಭಾವದಲಿ ತೇಲಬಲ್ಲೆ ಹೇಗೆ.? ಬೆನ್ನಿಗೆ ಬಿದ್ದೋರೂ ಅರ್ಥೈಸಿಕೊಳ್ಳದೇ ನೋವ ಹೆಚ್ಚಿಸುವಾಗ ಬರೀ ಭಾವಕ್ಕೆ ದಕ್ಕಿದ ನೀವು ನಗೆಯ ಉಣಿಸಲು ಹೆಣಗುತ್ತೀರ ಯಾಕೆ.? ನೀವೆಲ್ಲ ಯಾರು ನಂಗೆ.?  ಕಣ್ಣ ಹನಿ ಕೂಡಾ ಅಪ್ಯಾಯಮಾನ ಅನಿಸುವಂತೆ ಯಾವುದೀ ಸ್ನೇಹ ಬಂಧ ಕರುಳ ಬೆಸೆದು ಬಂಧಿಸಿದೆಯೋ ನಿಮ್ಮಗಳೊಂದಿಗೆ ಅಂತ ಆಶ್ಚರ್ಯದಿಂದ ಯೋಚಿಸುತ್ತೇನೆ ಪ್ರತಿ ಬಾರಿಯೂ... ಇಂಥ ಪ್ರಶ್ನೆಗಳ ಸರಮಾಲೆಯೇ ಎದುರು ನಿಂತು ಕುಣಿಯುವಾಗ ನಂಗೇ ನಾನು ಒಂದು ಪ್ರಶ್ನೆಯಾಗುತ್ತೇನೆ.. ಬಹುಶಃ ಅದು ಅತೃಪ್ತ ಬದುಕಿನ ಹಪಹಪಿಯೂ ಇರಬಹುದೇನೋ ಗೊತ್ತಿಲ್ಲ... ಕಳೆದುಕೊಂಡದ್ದೇ ಜಾಸ್ತಿ ಇರೋ ಬದುಕಲ್ಲಿ  ಕಳೆದುಕೊಳ್ಳುವ, ಕಳೆದುಹೋಗುವ ಭಯವೂ ಇರಬಹುದು... ಅದೆಲ್ಲಕ್ಕಿಂತ ಹೆಚ್ಚಾಗಿ ಅರಿವು ಮೂಡಿದಾಗಿನಿಂದ ಬಯಸಿದ್ದ ಅಪರೂಪದ ಗೆಳೆತನವನ್ನು ನಿಮ್ಮಗಳಲ್ಲಿ ಕಂಡದ್ದು ಮತ್ತು ನೀವದನ್ನು ನಿಭಾಯಿಸಿದ್ದು ನಿಮ್ಮೆಡೆಗಿನ ಆ ಆತ್ಮೀಯ ಭಾವಕ್ಕೆ ಮೂಲ ಎಂದರೆ ಹೆಚ್ಚು ಸರಿ ಅನ್ಸುತ್ತೆ... ಅದರಿಂದಾಗಿ ಮನಸಿಗೊಂದು ಸ್ವೇಚ್ಛೆ ಮತ್ತು ಬದುಕಿಗೊಂದು ಸ್ಫೂರ್ತಿಯುತ ದೃಷ್ಟಿ ದಕ್ಕಿಬಿಟ್ಟಿದೆ... ಬದುಕ ನಚ್ಚಗಿಟ್ಟ ಸಸ್ನೇಹಿಗಳಿಗೊಂದು ಸಲಾಮ್...  
***
ಎಷ್ಟೆಲ್ಲ ಪ್ರಶ್ನೆಗಳಿವೆ...  ಒಳಗಿನ ಮಾತೂ ಕೇಳದಷ್ಟು ಪ್ರಶ್ನೆಗಳ ಗದ್ದಲ... ಉತ್ತರ ಮಾತ್ರ ಶೂನ್ಯ... ಎಷ್ಟೇ ಹರಿದು ಹಂಚಿದರೂ ಖಾಲಿಯಾಗದ  ತಲ್ಲಣಗಳು... ಇವೆಲ್ಲವುಗಳ ಕಣ್ತಪ್ಪಿಸಿ ಮೌನದ ಚಿಪ್ಪಿನೊಳಗೆ ಹುದುಗಿ ಅಡಗಿಕೊಂಡು ಬಿಡಬೇಕೆನ್ನಿಸುವಷ್ಟು ಗೊಂದಲಗಳು... ಉತ್ತರವ ಕಾಲವೇ ಕೊಡುತ್ತೆ ಅನ್ನುತ್ತಾರೆ... ಆದರೆ ಉತ್ತರ ದಕ್ಕುವ ಮುನ್ನವೇ ಕಾಲ ಕಳೆದು ಹೋಗುತ್ತೇನೋ ಅನ್ನುವ ಭಯವೂ ಇದೆ... ಆದರೂ ಕಾಯಲೇ ಬೇಕು... ಕಾಲ ಕಾಯದಿದ್ದರೂ...
***
ಕಣ್ಣಲ್ಲಿನ ಕನಸುಗಳೆಲ್ಲ ಹನಿಗಳಾಗಿ ಉದುರಿ ಹೋಗಿ ಕೆನ್ನೆ ತೋಯಿಸಿ ಕರೆಯಾಗಿ ಉಳಿದವು... ಒಣ ನಗೆಯ ಸಾಬೂನಿಂದ ಕೆನ್ನೆ ಮೇಲಿನ ಕಣ್ಣೀರ ಕರೆಗಳ ತಿಕ್ಕಿ ತಿಕ್ಕಿ ತೊಳೆದಿದ್ದೇನೆ... ಯಾರಿಗೂ ಕಾಣಬಾರದು... ಕೆನ್ನೆಯೀಗ ತುಂಬ ನುಣುಪು... ಆದರೂ ಮನದ ಕಣ್ಣುಗಳಿಂದ ನನ್ನೊಳಗನ್ನೇ ಇಣುಕಿ ನೋಡಬಲ್ಲ ಕೆಲ ಕಣ್ಣುಗಳಿಗೆ ಒಳಗಣ ಗಾಯ ಕಾಣದಂತೆ ತಡೆಯಲಾರದೆ ಸೋತಿದ್ದೇನೆ... ಮತ್ತೆ ಸ್ನೇಹಕ್ಕೆ ಸಲಾಮ್... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

7 comments:

  1. ಖುಷಿಯನ್ನು.. ಕಣ್ಣೀರನ್ನೂ .. ಒಂದೇ ತೂಕದಲ್ಲಿ ಅನುಭವಿಸಬೇಕೆಂಬ ಭಾವವೊಂದು ನುಸುಳಿತು..
    ಚೆಂದವೋ ನಿನ್ನ ಭಾವಗಳು ..

    ReplyDelete
  2. ಒಣ ನಗೆಯ ಸಾಬೂನಿಂದ ಕೆನ್ನೆ ಮೇಲಿನ ಕಣ್ಣೀರ ಕರೆಗಳ ತಿಕ್ಕಿ ತಿಕ್ಕಿ ತೊಳೆದಿದ್ದೇನೆ... ಯಾರಿಗೂ ಕಾಣಬಾರದು...ಕೆನ್ನೆಯೀಗ ತುಂಬ ನುಣುಪು... ಈ ಸಾಲು ಸ್ವಲ್ಪ ವಿಭಿನ್ನವೆನಿಸಿತು....
    ಅಲಂಕಾರಿಕವಾಗಿ ತುಂಬಾ ಚಂದ...

    ಬದುಕಿನಲ್ಲಿ ಅನೇಕ ಸಾಂದರ್ಭಿಕ ಮಜಲುಗಳು...
    ಈರ್ಷ್ಯೆಯಿರುತ್ತೆ.... ದುಃಖವಿರುತ್ತೆ.... ನಗುವಿರುತ್ತೆ... ಮೌನವಿರುತ್ತೆ....
    ಗೊತ್ತಿದ್ದೂ ಅಳಿಸಲಾಗದ ಗಾಯಗಳು...
    ಗೊತ್ತೇ ಆಗದೇ ಅಳಿಸಿ ಹೋಗುವ ನೆನಪುಗಳು...

    ಒಂದೊಂದು ಮಜಲಿನಲ್ಲಿ ಒಂದೊಂದು ತೆರನಾದ ಭಾವಗಳು...
    ನಾವು ಎಲ್ಲ ಭಾವಗಳಿಗೂ ಮಣೆ ಹಾಕುತ್ತೇವೆ....

    ಅದರಲ್ಲಿ ಕೆಲವಷ್ಟು ಮನೆಗೆ ಬರುತ್ತವೆ...
    ಇನ್ನೆಷ್ಟೋ ಮನಕ್ಕೆ.....

    ಏನೇ ಆದರೂ ಕೊರತೆಯಿಲ್ಲದಷ್ಟು ಸ್ನೇಹಿತರು....
    ಅಪ್ಪಿಕೊಂಡಷ್ಟು ಮತ್ತೆ ಒಂದುಗೂಡುವ ಸ್ನೇಹ......
    ಮತ್ತೇನು ಬೇಕು....



    ReplyDelete
  3. ಸಾವಿರ ಖುಷಿಗಳ ನಡುವೆ ಅವ್ಯಕ್ತ ನೋವಿನ ಅನಾವರಣ.

    ReplyDelete
  4. ಹಾಯ್,
    ನಿಮ್ಮ ಮುದ್ದು ಭಾವದ ಲೇಖನ
    ನಂಗೆ ತುಂಭಾ ಮೇಚ್ಚುಗೆ ಆಯ್ತು.

    ReplyDelete
  5. ಹಾಯ್.. ಸಖತ್ತಾಗಿದ್ದು. ಎಲ್ಲಾ ಭಾವಗಳೂ ಇಷ್ಟ ಆತು. ಆದ್ರೆ ಮೊದಲಿದ್ದ ತಾಯ ಬಗೆಗಿನ ಭಾವ ಯಾಕೋ ಕಣ್ಣಂಚಲ್ಲಿ ನೀರು ತರಿಸಿ ಬಿಟ್ತು

    ReplyDelete
  6. ವತ್ಸಾ,

    ಕೆಲವೊಮ್ಮೆ ನಿನ್ನ ಭಾವಾಭಿವ್ಯಕ್ತಿಯ ಶಕ್ತಿಯ ಬಗ್ಗೆ ಒಂದು ಚಿಕ್ಕ ಅಸೂಯೆ ಮೂಡುವಷ್ಟು ಚೆನ್ನಾಗಿ ಬರುತ್ತವೆ ನಿನ್ನ ಭಾವಗೊಂಚಲು. ಪ್ರತೀ ಸಲ ಓದಿ ಒದಿ ಮುಗಿಸುವಷ್ಟರ ಹೊತ್ತಿಗೆ ಕೊನೆಪಕ್ಷ ಮನಸ್ಸು ಭಾರವಾಗಿರುತ್ತದೆಯೆಂಬಷ್ಟರ ಮಟ್ಟಿಗೆ ನಿನ್ನ ಬರಹ ಶಕ್ತಿಶಾಲಿ. ಬರಹ ಖುಷಿ ಕೊಡತ್ತೆ, ಭಾವ ಕಾಡತ್ತೆ.

    ಬರೆಯುತ್ತಿರು ಗೆಳೆಯ.

    ReplyDelete
  7. ಬಹಳ ಇಷ್ಟ ಆತು . ವಿಶೇಷವಾಗಿ ತಾಯಿಯ ಬಗ್ಗೆ ಬರೆದ ಸಾಲುಗಳು :)
    ಇಷ್ಟೊಳ್ಳೆ ಬರಹಗಳ್ನ ಕೊಡ್ತಾ ಇರೋ ನಿನಗೆ Hats off :)
    ವರ್ಷದ ಹಿಂದೆ ಬರೆದ ಕವಿತೆಯೊಂದು ನೆನಪಿಗೆ ಬಂತು :)

    Happy to share it with you...
    ಮನವೆಂಬ ಬತ್ತಿಯು ಬೆಂಕಿಯಲಿ ನಲುಗಿರಲು
    ಹೃದಯದಲಿ ಆಶಯದ ಎಣ್ಣೆಯದು ಕರಗಿರಲು
    ಪ್ರೀತಿ ಬೆಳಕಿನ ಧಾರೆ ಎರೆಯುತಿಹ ತಾಯಿ


    ಕಣ್ಣಂಚಿನಲಿ ನೀರು ಮತ್ತೆ ಮೂಡುತಲಿರಲು
    ಜಾರಿ ಬೀಳುತ ಸಾಗಿ ಪ್ರೀತಿ ಮೇಲೆರಗಿರಲು
    ತೊಳಲಾಡುತಲಿ ದೀಪ ಬೆಳಗುತಿಹ ಸ್ನೇಹಿ


    ಬೆಂಕಿಯಲಿ ಬೆರೆಯುತಲಿ ಬತ್ತಿ ಇಂಗುತಲಿರಲು
    ಅಂಧಕಾರದ ಛಾಯೆ ಮತ್ತೆ ತಂಗುತಲಿರಲು
    ಪರಿತಪಿಸಿ ಬೆಳಗಿದಳು ನಮ್ಮ ಬಾಳ ದೀವಿಗೆ


    ಅನವರತ ಸೇವೆಯಲಿ ಎಣ್ಣೆ ಬರಿದಾಗಿರಲು
    ಒಡನಾಡಿ ಬಂಧುಗಳ ಕಣ್ಣೆ ಕುರುಡಾಗಿರಲು
    ಸವೆಸಿದಳು ಜೀವವನು ನಮ್ಮಗಳ ಸೇವೆಗೆ


    ಬದುಕೆಂಬ ಬಯಲಲ್ಲಿ ಬಿರುಗಾಳಿ ಬೀಸಿರಲು
    ಹೃದಯದ ದೀವಿಗೆಯು ಜೀವಿಸಲು ಬಯಸಿರಲು
    ನಲುಗುತಲಿ ಸಲಹಿದಳು ನಮ್ಮಯಾ ಜೀವ


    ಉರಿವ ಬೆಂಕಿಯ ಧಗೆಗೆ ಎದೆಗೂಡು ಸುಡುತಿರಲು
    ಹೆಜ್ಜೆಹೆಜ್ಜೆಗು ಕಾಡೊ ನೂರೆಂಟು ತೊಡಕಿರಲು
    ಉರಿಯುತಲಿ ಬೆಳಗಿದಳು ಹಣತೆಯಂತೆ ಜಗವ...

    ReplyDelete