Sunday, September 11, 2011

ಗೊಂಚಲು - ಇಪ್ಪತ್ತು...

"ನಿನ್ನ ಬೆಳಕು ನೀನಾಗು..."


ತನ್ನಿಂದ - ತನ್ನ ಇರುವಿಕೆಯಿಂದ ಯಾರಿಗೂ ಸುಖವಿಲ್ಲ ಎಂಬ ಹತಾಶ ಭಾವ ಕಾಡದಂಥ ಬದುಕ ಜೀವಿಸಬಲ್ಲವರು ಎಷ್ಟೊಂದು ಸುಖಿಗಳು...!!!
ಕ್ಷಮಿಸಿ ಅಂಥ ಬದುಕುಗಳೆಡೆಗೆ ಸಣ್ಣದೊಂದು ಹೊಟ್ಟೆಕಿಚ್ಚಿದೆ ನನಗೆ...
ಹಾಗಂತ ನಾನೇ ಬರೆದೆ ಒಮ್ಮೆ...
ಹಿರಿಯರೊಬ್ಬರು ಅಂಥ ಬದುಕುಗಳೆಡೆಗೆ ಹೊಟ್ಟೆಕಿಚ್ಚಿನ ಬದಲು ಮೆಚ್ಚುಗೆ ಬೆಳೆಸಿಕೊಳ್ಳಬೇಕು,ಹಾಗಾದಾಗ ನಾವೂ ಹಾಗೆ ಬದುಕಬಲ್ಲ ಮನಸ್ಥಿತಿ ಹೊಂದಬಹುದೇನೋ ಅಂತ ಪ್ರತಿಕ್ರಿಯಿಸಿದರು...
ಯಾರದೋ ಸುಖಕ್ಕಾಗಿ ಜೀವಿಸುವಷ್ಟು ದೊಡ್ಡದಲ್ಲ ಬದುಕು, ನಮ್ಮ ಸುಖಕ್ಕಾಗಿ ಬದುಕೋಣ, ಅದು ಸುತ್ತಲಿನವರಿಗೂ ಸುಖ ನೀಡೀತು ಎಂದ ಕಿರಿಯ ಮಿತ್ರ...

ಎರಡೂ ಸತ್ಯವೇ...


ಘಟಿಸಿದ ಪ್ರತಿ ಸಣ್ಣ ಸಂಗತಿಯನ್ನೂ - ಎದುರಾಗುವ ಪುಟ್ಟ ಪುಟ್ಟ ಖುಷಿಗಳನ್ನೂ ಮನಸಾರೆ ಅನುಭಾವಿಸಿ ಜೀವಿಸುವುದರಲ್ಲಿ ಬದುಕಿನ ಸೌಂದರ್ಯದ ಮತ್ತು ಸಂಭ್ರಮದ ಶ್ರೀಮಂತಿಕೆ ಅಡಗಿದೆ. ನೆನಪಾಗಿ ಬದಲಾದಾಗ ಕಣ್ಣೀರು ಕೂಡ ನಗುವನ್ನೆ ಮೂಡಿಸುತ್ತದೆ. ಹುಡುಕಿಕೊಳ್ಳಬೇಕಿದೆ ನಾನು ಪುಟ್ಟ ಖುಷಿಯಲ್ಲಿ ಬೆಟ್ಟದಷ್ಟು ಸಂಭ್ರಮ...


"ಆಪೋದೀಪ್ ಆಪ್ ಭವ" = ನಿನ್ನ ಬೆಳಕು ನೀನಾಗು. ಇದು ಬುದ್ಧನಾಡಿದ ಮಾತು.
ಹಾಗಾಗಲು ಸಾಧ್ಯವಿದ್ದರೆ..!!
ಬದುಕೆಷ್ಟು ಚೆಂದವಿರುತ್ತಿತ್ತು...

ಎಲ್ಲವೂ ಖರೆ...

ಆದರೂ...

ಹಾಗೆ ಬದುಕುವುದು ಅಷ್ಟು ಸುಲಭವಾ..?
ಬದುಕು ಎಲ್ಲರಿಗೂ ಹಾಗೆ ಜೀವಿಸಬಲ್ಲ ಅವಕಾಶ ಕಲ್ಪಿಸುತ್ತಾ...???

ಒಂದಷ್ಟು ಬದುಕುಗಳು ಹೇಗಿರುತ್ತೆ ಗೊತ್ತಾ..!!

ಮನದ ಬೀದಿಯಲ್ಲಿ - ಕರಗದ ಮೋಹದ, ಫಲಿಸದ ಪ್ರೇಮದ, ಈಡೇರದ ಆಸೆಗಳ ಯಾತನೆಯ ಮೆರವಣಿಗೆ...
ಮತ್ತೆ ಮತ್ತೆ ನೆನಪಾಗಿ ಮನವ ಹಿಪ್ಪೆ ಮಾಡುವ ಮತ್ತೆ ಬರಲಾರದ ಆ ದಿನಗಳು...
ಬದುಕುವ ಆಸೆಯನ್ನೇ ಕೊಲ್ಲುವಂಥ ಖಟು ವಾಸ್ತವ - ಅದರ ಕುಲುಮೆಯಲ್ಲಿ ಬೆಂದು ಹೋಗುವ ಸ್ವಪ್ನಗಳ ಸೊಣಕಲು ವಾಸನೆ...
ಸತ್ತು ಹುಟ್ಟಿದ ಮಗುವಿನಂಥ ಬದುಕು...

ದುಡ್ಡು ಮಾತ್ರ ಒದಗಿಸಬಲ್ಲ ಸುಖಗಳೆಡೆಗೆ ತೀವ್ರ ಹಂಬಲ...
ಆದರೆ - ದುಡ್ಡನ್ನು ದುಡಿಯಲಾರದ ಅಸಹಾಯಕತೆ...
ದುಡ್ಡು ದುಡಿದವರೆಡೆಗೆ ಮತ್ಸರ...
ಅದರಿಂದ ಮೂಡುವ, ನನ್ನ ಸೋಲಿಗೆ ಇನ್ಯಾರನ್ನೋ ಹೊಣೆ ಮಾಡುವ ಮನಸ್ಥಿತಿ...


ಸದಾ ರೋಗಗ್ರಸ್ಥ ಮನಸು ಮತ್ತು ದೇಹ...
ರೋಗ ತರುವ ನೋವು, ಅಸಹಾಯಕತೆ ಮತ್ತು ಸಾವಿನ ಭಯ - ಆತಂಕ...
ಸಮಾಜ ತೋರುವ ಅನುಕಂಪ...
ಅನುಕಂಪದೆಡೆಗೆ ಆಸೆ ಮತ್ತು ಕೋಪ...

ಅಸ್ವಸ್ಥ ದೇಹದಲ್ಲೂ ಕೆರಳುವ, ಧಗಧಗಿಸುವ ಬೆಂಕಿಯಂಥ ಕಾಮ - ಹೊರ ತೋರಲಾರದೆ, ಒಳಗಿನ ಒತ್ತಡ ತಡೆಯಲೂ ಆಗದಂತೆ ಕಾಡಿ ಒಳಗೇ ಸುಡುತ್ತದೆ...
ರಾತ್ರಿ ರೆಪ್ಪೆ ಮುಚ್ಚಿದ ಕೂಡಲೆ - ಹಗಲು ಕಣ್ಣು ಕಂಡ ಹೆಣ್ಣು ದೇಹಗಳ ಬೆತ್ತಲೆ ಬೆಕ್ಕಿನ ನಡಿಗೆ...
ಹಾಸಿಗೆಯಲ್ಲಿ ಅತೃಪ್ತ ಒಂಟಿ ಹೊರಳಾಟ...
ತೋಳ ತೆವಲಿಗೆ ದಿಂಬಿನೊಂದಿಗೆ ಶುಷ್ಕ ಸರಸ...
ಹಸ್ತ ಮೈಥುನದುತ್ತುಂಗದಲ್ಲಿ ಬೆವರಿಳಿದ ದೇಹಕ್ಕೆ ಶೀಘ್ರ ಸ್ಖಲನದ ಭಯ...
ಮಾರನೆಯ ಹಗಲೆಲ್ಲ ಒಳ್ಳೆಯವನಾಗುವ ಶಪಥ...
ರಾತ್ರಿ ಮತ್ತದೇ ಪುನರಾವರ್ತನೆ...

ಇವೆಲ್ಲ ಬೆರೆತು ನನ್ನ ಬಗೆಗೇ ನನಗೆ ಮೂಡುವ ವಿನಾಕಾರಣದ ಅಪರಾಧೀ ಭಾವ ಮತ್ತು ಅಸಹಾಯಕತೆಯಿಂದ ಮೂಡುವ ನಿಷ್ಪ್ರಯೋಜಕನೆಂಬ ಭಾವ...
ಇದು ಪ್ರತಿನಿತ್ಯದ ಏಳು - ಬೀಳು...

ನನ್ನೊಳಗೇ ಅಶಾಂತಿ, ಸುಖದ ಭಾವದ ಕೊರತೆ...
ಇನ್ನು ಸುತ್ತಲಿನವರಿಗೆ ಸುಖ ಕೊಡುವುದೆಲ್ಲಿಂದ...
ಇಂಥ ಮನಸ್ಥಿತಿಯಿಂದ ಪ್ರಾರಂಭದಲ್ಲಿ ಹೇಳಿದ ಮನಸ್ಥಿತಿಯೆಡೆಗೆ ಪಯಣ ಅಷ್ಟು ಸುಲಭ ಸಾಧ್ಯವಾ...???
ಹಸ್ತ ಮೈಥುನಕ್ಕೂ ಪಾಪಪ್ರಜ್ಞೆಯಿಂದ ಬಳಲುವ ಮನಸ್ಥಿತಿಯಿಂದ ಮೇಲೇರಿ ಸುತ್ತಲಿನ ಸಕಲರ ಸುಖದಲ್ಲೂ ಭಾಗಿ ಎಂಬ ತೃಪ್ತ ಭಾವದ ಬದುಕನ್ನು ಜೀವಿಸಬಲ್ಲ ಬದುಕುಗಳೆಡೆಗೆ ನನಗೆ ನಿಜಕ್ಕೂ ಒಂದು ಸಣ್ಣ ಮಧುರ ಹೊಟ್ಟೆಕಿಚ್ಚಿದೆ...
ಅಂಥ ಬದುಕುಗಳ ಗೆಳೆತನ ದಕ್ಕಿದರೂ ನನ್ನ ಬದುಕು ಸಾರ್ಥಕ...


"ನನ್ನ ಬೆಳಕು ನಾನಾಗುವುದು" ಹೇಗೆ...???
ಅರ್ಥವಾಗುತ್ತಿಲ್ಲ...




Monday, August 22, 2011

ಗೊಂಚಲು - ಹತ್ತೊಂಬತ್ತು...

"ರಂಗ್ ದೇ ಬಸಂತಿ..."




ಸ್ವಾತಂತ್ರ್ಯ ಉದ್ಯಾನವನದಲ್ಲಿ ಎರಡನೇ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಸತ್ಯಾಗ್ರಹಿಗಳ ಜತೆಗೆ ಒಂದಿಡೀ ದಿನವನ್ನು ಜೀವಿಸಿದ್ದು ಮನಸಿಗೆ ಹೆಮ್ಮೆಯ ಭಾವವನ್ನು ಮೂಡಿಸಿದ್ದು ಸತ್ಯವೇ ಆದರೂ...




ನನಗೀಗಲೂ ಅನ್ನಿಸುತ್ತಿಲ್ಲ -
ನಾನು ದೇಶ ಸೇವೆ ಅಥವಾ ಸಮಾಜ ಸೇವೆಯಲ್ಲಿ ತೊಡಗಿಕೊಂಡೆನೆಂದು...


ಅನ್ನಿಸಿದ್ದಿಷ್ಟೇ -




ನಾನು - ನನ್ನ ನಾಳೆಗಳ ಒಳಿತಿಗಾಗಿ ನನ್ನ ಸುತ್ತಲಿನ ಪರಿಸರವನ್ನು ಶುದ್ಧವಾಗಿಸಿಕೊಳ್ಳಲೋಸುಗ ನನ್ನ ಇಂದಿನ ಒಂದಷ್ಟು ಘಂಟೆಗಳನ್ನು
ಸದ್ವಿನಿಯೋಗಪಡಿಸಿಕೊಂಡೆನೆಂದು.




ಅಲ್ಲಿ - 
ಅಣ್ಣಾ ಹಜಾರೆಯವರಂಥ ಅಷ್ಟೆಲ್ಲ ಹಿರಿಯ ಜೀವಗಳು ನಮ್ಮ ನಾಳೆಗಳಿಗಾಗಿ ಊಟ, ನಿದ್ದೆ ಬಿಟ್ಟು ಕೂತಿದ್ದಾರೆ.




ಬದುಕಿನ ಕೊನೆಯ ಘಟ್ಟದಲ್ಲಿರುವ ಅವರುಗಳ ನಾಳೆಗಳೆಂದರೆ ನಾವುಗಳೇ ತಾನೆ...!!!
ಅವರನ್ನು ಬೆಂಬಲಿಸಿ ಅವರ ಪರಿಶ್ರಮ ವಿಫಲವಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಹೊಣೆ ಅಲ್ಲವಾ...!!!


ನಂಗೊತ್ತು - 
ನಮ್ಮ ನಿತ್ಯದ ಬದುಕಿನ ಜಂಜಡಗಳು ನಮಗೆ ನಿತ್ಯವೂ ಅವರೊಂದಿಗೆ ನೇರವಾಗಿ ಬೆರೆತಿರುವಷ್ಟು ಸಮಯ ಮತ್ತು ಅವಕಾಶ ಕೊಡಲಾರವು ಅಂತ.
ಆದರೂ,
ಎಲ್ಲ ಜಂಜಡಗಳ ನಡುವೆಯೇ ಒಂದಿಷ್ಟು ಸಮಯಾನ ಹೆಕ್ಕಿ ಸತ್ಯಾಗ್ರಹಿಗಳಿರುವಲ್ಲಿ ಹೋಗಿ 
ಅವರ ಜಯಘೋಷದೊಂದಿಗೆ ನಮ್ಮದೂ ದನಿ ಸೇರಿಸಿ 
ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಬಂದರೆ
ಉಪವಾಸದಿಂದ ಬಳಲಿದ ಆ ಜೀವಗಳಲ್ಲಿ ಒಂದಷ್ಟು ಚೈತನ್ಯ ಮೈಗೂಡೀತು...
ಗೆಲುವು ಸುಲಭಸಾಧ್ಯವಾದೀತು...ಅಲ್ಲವಾ...!!!


ಹೇಗಾದರಾಗಲಿ -
ನಮ್ಮ ನಮ್ಮ ಅವಕಾಶಗಳ ಪರಿಧಿಯಲ್ಲಿ
ನಮ್ಮ ನಮ್ಮ ಅರಿವಿನ ವ್ಯಾಪ್ತಿಯಲ್ಲಿ
ಯಾವುದೇ ರೀತಿಯಲ್ಲಾದರೂ
ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿಯಾದರೂ
ಹೋರಾಟವನ್ನು ಬೆಂಬಲಿಸೋಣ...
ನಾಳೆಗಳನ್ನು ಚೆಂದವಾಗಿಸಿಕೊಳ್ಳವ ಕನಸಿಗೆ ಜೀವತುಂಬೋಣ...


ದಯವಿಟ್ಟು ಸತ್ಯಾಗ್ರಹವನ್ನು ಬೆಂಬಲಿಸಿ...




ವಿಶ್ವಾಸ ವೃದ್ಧಿಸಲಿ...

 ಜೈ ಹೋ...

Sunday, August 7, 2011

ಗೊಂಚಲು - ಹದಿನೆಂಟು...



ಗುಡಿಯ ತಲೆ ಮೇಲೆ ಹೊಳೆವ ಚಿನ್ನದ ಗೋಪುರ...


ಮೆಟ್ಟಿಲ ಮೇಲಿನ ಭಕ್ತನ ಕೈಯಲ್ಲಿ ವಿಧ ವಿಧ ಭಿಕ್ಷಾ ಪಾತ್ರೆ...




ಶಿಲೆಯ ಮೂರ್ತಿಗೆ ಕ್ಷೀರಾಭಿಷೇಕ


ಪಂಚ ಭಕ್ಷ - ಫಲ ತಾಂಬೂಲ ನೈವೇಧ್ಯ...


ಹೂವ ಮಾರುವ ಹುಡುಗಿ,


ಹಣ್ಣ ಮಾರುವ ಹುಡುಗರಿಗೆ ದಿನವೂ ಅರೆಹೊಟ್ಟೆ...


ಹಸಿವು ಕಾಡುವ ನಿದ್ದೆ...




ರಸ್ತೆ ನಡುವೆ ಭಕ್ತನಿಗೆ ಭಗವಂತನ ನೆನಪು...


ಉಕ್ಕಿದ ಭಕ್ತಿ, ಅಲ್ಲೇ ಭಗವಂತನಿಗೆ ಉದ್ದಂಡ...


ಗಾಡಿ ಚಕ್ರದಡಿ ಭಕ್ತನಿಗೆ ಮೋಕ್ಷ...


ಪಾಪ ಅಕಾಲ ಅವಸಾನ...




ಮನುಷ್ಯನ ಸೋಲು - ಸೋಲು ತರುವ ನೋವು,ಭಯ,ಅಸಹಾಯಕತೆ - ಅದರಿಂದ ಮೂಡುವ ಮೌಢ್ಯ - ದೇವರ ಶ್ರೀಮಂತಿಕೆ ಮತ್ತು ಜನಪ್ರಿಯತೆಯ ಗುಟ್ಟು...




ಇರುವನೋ - ಇಲ್ಲವೋ ...
ಇದ್ದೂ ಇರದಂತಿರುವನೋ ...
ಇಲ್ಲದೆಯೂ ಇದ್ದಂತೆ ಕಾಡುವನೋ ...
ಇಂಥ ಅನಿಶ್ಚಿತತೆಯೇ ದೇವರ ಅಸ್ತಿತ್ವದ ಬಂಡವಾಳ...




ಮನದ ಮಾತು :
ಏನೇ ಅಂದರೂ ಅವನ ಇರುವಿಕೆಯ ಮೇಲೆ ನಂಬಿಕೆ ಮೂಡುತಿಲ್ಲ...
ಒಂದಾನುವೇಳೆ ಆತನಿರುವುದೇ ಸತ್ಯವಾದರೆ ಅವನ ಕಾರ್ಯವೈಖರಿಯನ್ನು ಮನಸಾರೆ ಧಿಕ್ಕರಿಸುತ್ತೇನೆ... 

Monday, August 1, 2011

ಗೊಂಚಲು - ಹದಿನೇಳು...

ಹುಟ್ಟುಹಬ್ಬ -
ನನಗೇ ಅರ್ಥವಾಗದ ನನ್ನ ಭಾವಗಳು :~


ಸದ್ದಿಲ್ಲದೆ ಮುಗಿದು ಹೋದ ಇಪ್ಪತ್ತು ಮೇಲೊಂಭತ್ತು ವಸಂತಗಳು...
ಆಯುಷ್ಯದ ಅಕೌಂಟಿನಿಂದ ಬರೀ ಸುಮ್ಮನೇ ಖಾಲಿಯಾದ
ಬದುಕಿನ ಅಮೂಲ್ಯವಾಗಬಹುದಿದ್ದ ಕಾಲು ಭಾಗ...
ಬಯಲಿನಲಿ ಬಿಡಿ ಬಿಡಿಯಾಗಿ ಬಿದ್ದಿರುವ 
ಅನಾಥ ಶವಗಳಂತೆ ಗೋಚರಿಸುತ್ತೆ...


ಪ್ರತೀ ಹುಟ್ಟು ಹಬ್ಬವೂ
ಜವರಾಯನರಮನೆಯೆಡೆಗೆ
ಜೋರು ನಡಿಗೆಯಂತೆ ಭಾಸವಾಗುತ್ತೆ...
ಭಯ - ಸಣ್ಣ ಕುತೂಹಲ ಕೂಡ
ಬದುಕು ಹೀಗಿದೆ...
ಸಾವು ಹೇಗಿರತ್ತೆ..?


ಪ್ರಸವದ ಕೋಣೆ - ಮಸಣದ ಬಯಲು
ನಡುವೆ 
ಬೆತ್ತಲೆ ಕುಳಿತ ಮುದಿ ಸೂಳೆಯಂಥ ಬದುಕು...
ವಿಟರಿಗಾಗಿ ಕಾಯುವುದರಲ್ಲೂ ಸುಖವಿಲ್ಲ
ವಿಟರೊಂದಿಗೆ ಸ್ಖಲಿಸುವುದರಲ್ಲೂ ಸುಖವಿಲ್ಲ...
ವಿಚಿತ್ರ ದೊಂಬರಾಟಗಳ ಭಂಡ ಬಾಳು...


ಜೋಗುಳದ ಹಾಡಿಗೂ - ಚರಮ ಗೀತೆಗೂ
ಉರಿವ ಒಂದೇ ಪ್ರಣತಿ
ಬದುಕ ಇಬ್ಬಂದಿ ಭಾವಗಳ ಪ್ರತಿರೂಪ...


ಹುಟ್ಟಿದ ಆ ದಿನ -
ನೋವು ನುಂಗಿ ಜನ್ಮ ನೀಡಿದ ಅಮ್ಮನ ಕಣ್ಣಲ್ಲಿ
ನಗೆಯ ನಿಟ್ಟುಸಿರು...
ಸುತ್ತ ಜತೆಗೆ ನಗುವ ಸಾವಿರ ಕಣ್ಣ ದೀಪಗಳು...
ಬಯಲಿಗೆ ಬಿದ್ದ ಭಯದಲ್ಲಿ 
ನಾನು ಅಳುತಲಿದ್ದೆ...
ಬದುಕ ಬಡಿವಾರಗಳೆಲ್ಲ ತೀರಿ
ಚಿರ ಮೌನಕೆ ಜಾರುವ ಘಳಿಗೆಯಲ್ಲಿ 
ನಗುತಲಿರುವ ಆಸೆ ನಂಗೆ...
ಸುತ್ತಲಿರುವ ನಾಲ್ಕು ಕಂಗಳಲ್ಲಿ
ಹನಿಗಳೆರಡು ಜಾರಿದರೆ
ಬದುಕಿದ್ದಕ್ಕೆ ಸಾರ್ಥಕವೆಂಬ ಭಾವ ಮನಕೆ...


ಕಾಡುವ ಸಾವಿರಾರು ಆಸೆಗಳು...
ಎಚ್ಚರದಲ್ಲೂ ಕಾಣುವ ಕನಸುಗಳು...
ಬದುಕುವುದು ಮೂಲ ಆಸೆ...
ಬದುಕಿರುವುದರಿಂದ ಸಾವಿರ ಸುಖಗಳೆಡೆಗಿನ ಆಸೆ...
ಬತ್ತಲಾರದ ಮನಸಿನ ಬಯಕೆ...
ಬೆತ್ತಲಾಗುವ ದೇಹದ ಬಯಕೆ...
ತೀರದ ಮೋಹದ ದಾಹ...
ಕೀರ್ತಿಯ ಮೋಹ
ಹಣದ ದಾಹ...
ಗೆಲುವು-ನಲಿವುಗಳ ತೀವ್ರ ಹಂಬಲ...
ಅಭ್ಯಾಸವಾಗಿ ಹೋದ ಆಲಸ್ಯ...
ಸದಾ ನೆರಳಂತೆ ಜೊತೆ ಬರುವ ಸೋಲುಗಳು...
ಅವು ಮೂಡಿಸುವ ನಿಸ್ಸಹಾಯಕತೆ...
ಸುಮ್ಮನೆ ಮುಗಿದು ಹೋದ ನಿನ್ನೆಗಳು...
ಭರವಸೆಯಿಲ್ಲದ ನಾಳೆಗಳಿಗಾಗಿ
ಕಳೆದು ಹೋಗುವ ಈ ಕ್ಷಣ...
ನಿತ್ಯ ನರಕ...


ಆ ಊರ ಬಿಟ್ಟು ಈ ಊರ ಸೇರಿ ಸಾಧಿಸಿದ್ದೇನು..?
ನೋವ ಗೆದ್ದೆನಾ..?
ಸಾವ ಗೆದ್ದೇನಾ..?
ಸಾವಿರ ಸಾವಿರ ಉತ್ತರವಿಲ್ಲದ ಪ್ರಶ್ನೆಗಳು...
ಸಿಗಲಾರದೆಂದು ಗೊತ್ತಿದ್ದೂ ಉತ್ತರಕ್ಕಾಗಿ 
ವ್ಯರ್ಥ ಹುಡುಕಾಟ...
ಶಾಂತಿಯ ಹುಡುಕಾಟ...
ನೆಮ್ಮದಿಯ ಬದುಕಿನ ಹುಡುಕಾಟ...
ಹುಡುಕಿ ಹುಡುಕಿ ಬಂದು ನಿಲ್ಲುವುದು
ಮತ್ತದೇ ಪ್ರಶ್ನೆಗೆ -
ಹೊರಟ ಬಿಂದುವಿನೆಡೆಗೆ...
ಕೊನೆಗೆ 
ಎಲ್ಲ ಹುಡುಕಾಟಗಳಿಗೂ ಪೂರ್ಣವಿರಾಮವಿಡುವುದು
ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಿ ನಿಲ್ಲುವುದು
ಸರ್ವಶಕ್ತ  
ಸಾವು...???


ಅರ್ಥವಾದದ್ದು ಒಂದೆ...
ಎಲ್ಲೇ ಹೋದರೂ ಯಾತನೆ ಒಂದೇ...
ಅನುಭವಿಸುವ ವಾತಾವರಣ ಬದಲಾಗುವುದಷ್ಟೇ...
ಬದುಕು ಇಷ್ಟೇ...
ಬದುಕುವುದಕ್ಕಾಗಿ ರೂಢಿಸಿಕೊಂಡ ಧನಾತ್ಮಕ ಚಿಂತನೆ
ಇನ್ನೂ ಬದುಕಿದ್ದೇವೆ ಎನ್ನುವ ಖುಷಿಯಿಂದಾಗಿ ಮೂಡಿದ
ಬದುಕಿನೆಡೆಗಿನ ಪ್ರೀತಿ
ಇವಿಷ್ಟೇ ಬದುಕನ್ನು ಜೀವಿಸಲು ಪ್ರೇರಣೆ...


ಕೊನೆ ಮಾತು :
ಹುಟ್ಟು ಹಬ್ಬದಂದು ಶ್ರಾದ್ಧದ ಚಿಂತೆ...
ಬದುಕು -
ದ್ವಂದ್ವಗಳ ಬಿಕರಿಗಿಟ್ಟ ಮಾರುಕಟ್ಟೆ...

ನಗಬೇಕಾದಾಗ ಅಳುತಿದ್ದು
ಅಳಬೇಕಾದಾಗ ನಗಬೇಕೆಂಬ
ಬರಡು ಆಸೆಗಳ ಬೀಳು ಬದುಕು...

ಅವರವರ ಭಾವಕ್ಕೆ ದಕ್ಕಿದ್ದಷ್ಟೇ ಬದುಕು...
ಈ ಲೇಖನ ಬರೆದವನ ಭಾವ ಅಷ್ಟೇ...







Sunday, July 10, 2011

ಗೊಂಚಲು - ಹದಿನಾರು...

ಕಣ್ಣ ಸಲಿಗೆಯಲಿ
ಭಾವಗಳ ಸುಲಿಗೆ...



"ಮನಸು ತನ್ನ ಭಾವನೆಗಳ ತೀವ್ರತೆಯನ್ನು ಮಾತಿನಿಂದಲ್ಲದೇ ಮೌನದಲ್ಲೇ ಹೇಳಬೇಕೆಂದುಕೊಂಡಾಗ ಕಂಗಳ ಆಸರೆ ಬೇಡುತ್ತದೆ. ಹನಿದುಂಬಿದ ಕಂಗಳು ಮನದ ಭಾವ ತೀವ್ರತೆಯ ಸಂಕೇತ. ಹಾಗೆ ಹನಿದುಂಬಿದ ಕಂಗಳು ಆನಂದದ ಅತಿರೇಕಕ್ಕೆ ಸೂಚನೆ.ಅದು ದುಃಖದ ಅತಿರೇಕಕ್ಕೂ ಸೂಚನೆಯೇ...!"

"ಹೃದಯ ತೀವ್ರತರ ಭಾವಗಳ ಗಂಗೋತ್ರಿ.
ಕಣ್ಣು ಧುಮ್ಮಿಕ್ಕುವ ಗಂಗೆಯ ಜಲಪಾತ..."

ಹೃದಯದಲ್ಲಿ ಆವಿರ್ಭವಿಸುವ ಭಾವನೆಗಳನ್ನು ಕರಾರುವಾಕ್ಕಾಗಿ ವ್ಯಕ್ತಪಡಿಸುವ ಸಾಧನ ಕಣ್ಣು ಮಾತ್ರ. ಎದುರಿನ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಆತ್ಮವಿಶ್ವಾಸಕ್ಕೆ ಪ್ರತೀಕವಾದರೆ, ಆ ಕಂಗಳ ಮೂಲಕ ಮನದ ಭಾವಗಳ ಓದಬಲ್ಲವರಾಗುವುದು ಆಪ್ತ ಸಂವಹನ ಸಾಧಿಸಲು ಉತ್ತಮ ಮಾರ್ಗ.
ವ್ಯಕ್ತಿತ್ವದ ಸಾರವೆಲ್ಲ ಕಂಗಳಲ್ಲಿನ ಜೀವಂತಿಕೆಯಲ್ಲಿದೆ.ಅರ್ಥೈಸಿಕೊಳ್ಳುವ ತಾಕತ್ತಿದ್ದರೆ ಕಣ್ಣುಗಳೇ ಎದುರಿನ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು ಬಿಡಿಸಿಡುತ್ತವೆ. ಹಾಗಾಗೇ ನಂಗೆ ಕಂಗಳಡೆಗೆ ವ್ಯಾಮೋಹ ಮತ್ತು ಸಣ್ಣ ಭಯ ಕೂಡ.

ನಯನ - ಚೆಲುವನ್ನೂ ಮತ್ತು ಒಲವನ್ನೂ ಚೆಲ್ಲುವ ಕಾವ್ಯ ಸ್ಫೂರ್ತಿಯ ಅಂಗ.
ಚೆಲುವೆಯರ ಚೆಲುವ ಕಂಗಳು ಕವಿಯ ಕಾವ್ಯಕೆ ಸದಾ ಸ್ಫೂರ್ತಿ.
ಹಾಗಾಗೇ  ಕಂಗಳನು ವರ್ಣಿಸದ ಕಾವ್ಯಗಳಿಲ್ಲ.

ಕಮಲಾಕ್ಷಿ - ಮೀನಾಕ್ಷಿ - ನಳಿನಾಕ್ಷಿಯರು ತಮ್ಮ ಕಣ್ಗಳಲ್ಲೇ ನಗುವ - ನಕ್ಕು ಸೆಳೆಯುವ, ಕಂಣ್ಣಂಚಲ್ಲೇ  ಗದರುವ, ಕಡೆಗಣ್ಣ ಕುಡಿನೋಟಗಳಲ್ಲೇ ಕಾಡುವ ಆ ಪರಿಯನ್ನು ಮೆಚ್ಚದಿರಲಾದೀತೇ...!


ತನ್ನವಳ ಕಣ್ಣಲ್ಲಿ ತನ್ನ ಚಿತ್ರವ ಕಾಣ ಬಯಸದ ಪ್ರೇಮಿ ಇಲ್ಲವೇನೋ...
ಮನದಲ್ಲಿ ಪ್ರೇಮ ಪಡಿಮೂಡುವುದೇ ಕಣ್ಣ ರಾಯಭಾರಿಕೆಯಲ್ಲಿ...(ಹಾಗಾದ್ರೆ ಅಂಧರ ಪ್ರೀತಿಗೆ ಏನಂತೀಯಾ ಅಂತ ಕೇಳಬೇಡಿ. ಅವರ ಪ್ರೀತಿ ಸಂಪೂರ್ಣ ಅಲೌಕಿಕ.)
ಪ್ರೇಮ - ಕಣ್ಣಲ್ಲಿ ಹುಟ್ಟಿ, ಮನದಲ್ಲಿ ಹೆಪ್ಪುಗಟ್ಟಿ, ಕಣ್ಣ ಹನಿಯಾಗಿ ಹೊರಬರುವ ತೀವ್ರತರವಾದ ಅಲೌಕಿಕ ಭಾವ.
ಕಣ್ಣಿಗೂ ಪ್ರೇಮಕೂ ಸಂಬಂಧ ಅವಿನಾಭಾವ...

ಮಗುವ ಕಂಗಳ ಮುಗ್ಧತೆ  
ತಾಯ ಕಣ್ಣಲ್ಲಿನ ಮಮತೆ  
ಗೆಳತಿಯ ಪ್ರೀತಿಯ ನೋಟ  
ಹಿರಿಯರ ಹಾರೈಕೆಗಳ ದೃಷ್ಟಿ  
ಅಕ್ಕಂದಿರು,ಅಣ್ಣಂದಿರು ಕಣ್ಣಲ್ಲೇ ತುಂಬುವ ಭರವಸೆ 
ತಂಗಿಯ ತುಂಟ ಕೀಟಲೆಯ ನೋಟ  
ಗೆಳೆಯನೊಬ್ಬ ನೋಟದಲ್ಲೇ ತುಂಬುವ ಧೈರ್ಯ  
ಇವೆಲ್ಲ ಕಣ್ಣ ರಾಯಭಾರಿಕೆಯಲ್ಲಿ ನಮ್ಮ ಬದುಕನ್ನು ಶ್ರೀಮಂತಗೊಳಿಸುವ,ನಮ್ಮನ್ನು ಮುನ್ನಡೆಸುವ ಮಧುರ ಭಾವಗಳು...

ಭಾವಗಳ ಬಡಿದೆಬ್ಬಿಸುವ ಕಂಗಳಿಗೊಂದು
ಪ್ರೀತಿಯ ಪಪ್ಪಿ...

Sunday, June 19, 2011

ಗೊಂಚಲು - ಹದಿನೈದು...

ನಗೆಯ ಸಂತೆಯ ನಡುವೆ ನಿಂತು
ಅಳುವ ಮಾರುವ ಬಯಕೆ
ಯಾಕೆ ಈ ಮನಕೆ...

                           ಉಸಿರ ವೇಗಕೆ ಸ್ಪಂದಿಸುವ
                           ಎದೆಗೂಡ ಸಣ್ಣ ನೋವ ಕದಲಿಕೆಯಲ್ಲೂ
                           ನನ್ನ ಕನಸುಗಳ ಗರ್ಭಪಾತ...

ಒಂದು ಘಳಿಗೆಯ ಹೃದಯ ಸ್ತಂಭನ
ಬದುಕಿನದೇ ಅಕಾಲ ಅವಸಾನ...

ಓ ಹೃದಯವೇ
ನೀ
ಮಿಡಿತವ ನಿಲ್ಲಿಸದಿರು.....
                                    ಸೋಲುಗಳ ಸುಳಿಯಿಂದ ಎದ್ದು
                                    ಗೆಲುವಿನ ತೆಪ್ಪವೇರಿ ತೇಲುವ ಆಸೆ
                                    ಇನ್ನೂ ಉಸಿರಾಡುತಿದೆ...


                                    ಅವಳ ಮಡಿಲಲ್ಲಿ ಮಲಗಿ
                                    ನನ್ನ ನಾ ಕಳೆದುಕೊಳ್ಳುವ ಬಯಕೆ
                                    ಇನ್ನೂ ಹಾಗೇ ಉಳಿದುಕೊಂಡಿದೆ...
 ಒಲವಿನೊರತೆಯ
                                    ಹನಿಗಳ ಹೀರಿ
                                    ಬಾಳ ಚಪ್ಪರದ 
                                    ತುಂಬೆಲ್ಲ ಹಬ್ಬಿ ನಿಂತ
                                    ನಗೆ ಬಳ್ಳಿಯ
ಘಮಘಮಿಸುವ
ಹೂವಾಗಿ ಅರಳುವ ಆಸೆ
ಇನ್ನೂ ಬಾಕಿ ಇದೆ...
                                                                                   
.....Pleas   give  me   some  time.....

Sunday, May 29, 2011

ಗೊಂಚಲು - ಹದಿನಾಕು...

ಬರೀ  ಕನಸು...
     ಮತ್ತು
ಮುಖವಾಡಗಳ  ಬದುಕು...


"ಕನಸುಗಳಿಗೆ ಬಸಿರಾಗದ ಮನಸಿಲ್ಲವೇನೋ.! ಆದರೆ ಎಂದೂ ನನಸಾಗದ 

ಕನಸುಗಳಿಗೆ ಬಸಿರಾಗಿ ಆ ಹುಸಿ ಬಸಿರನ್ನು ಬರಿದೇ ಹೊತ್ತು ಅಂಡಲೆಯುವ 

ಮನಸಿನ ಬೋಳೇತನಕ್ಕೆ ಏನೆನ್ನಬೇಕು.? ಅರ್ಥವಿಲ್ಲದ ಕನಸುಗಳನ್ನೇ 

ಅಲ್ಲವಾ ಹಗಲ್ಗನಸು ಅನ್ನೋದು. 

ಓ ಮನಸೇ.....ಬರಿದೇ ಭ್ರಮೆಯ ಸೃಷ್ಠಿಸುವ ಹಗಲ್ಗನಸುಗಳಿಗೆ ಬಸಿರಾಗಿ       

ಆ ಬಸಿರು ಹುಸಿಯಾದಾಗ ರೋಧಿಸದಿರು.

 ಮನಸೇ...ಪ್ಲೀಸ್...ತಿಳಿಯಾಗು...  

ತಿಳಿಯಾಗಿ ನಕ್ಕುಬಿಡು...

ಆ ಮುಗುಳ್ನಗು ನನಸಾಗಬಲ್ಲ ಕನಸುಗಳನ್ನು ಹೊತ್ತು ತರಲಿ...
                                               
                                               *****
                                                 ***
                                                   *  


"ನಾಳೆಯ ಕನಸುಗಳಲ್ಲಿ ಇಂದಿನ ವರ್ತಮಾನವನ್ನು ನಗ್ತಾ ನೂಕೋದು 

ಸುಲಭ."

 ಆದ್ರೆ ನಾಳೆಗಳ ಬಗೆಗೆ ಸಿಹಿಗನಸು ಕಾಣುವ ಅವಕಾಶವೇ 

ಇಲ್ಲದಾದಾಗ - ಭವಿಷ್ಯದೆಡೆಗಿನ ಭರವಸೆಗಳೇ ಸತ್ತು ಹೋದಾಗ, ನಿನ್ನೆಯ ಕಹಿ  

ಘಟನೆಗಳನ್ನೇ ಸವಿ ನೆನಪೆಂದುಕೊಂಡು ಶುಷ್ಕ ನಗು ನಕ್ಕು ಇಂದನ್ನು 

ತಳ್ಳಬೇಕಾಗಿ ಬರುವುದು ಬದುಕಿನ ಎಂಥ ಯಾತನಾದಾಯಕ  ವಿಪರ್ಯಾಸ 

ಅಲ್ವಾ? ಅಳಬೇಕೆನಿಸಿದಾಗಲೂ ನಗೆಯ ಮುಖವಾಡ ಧರಿಸ್ತಾ - ಹೇಗೋ 

ಜೀವಿಸಬೇಕೆಂದ್ಕೊಂಡು ಇನ್ಹೇಗೋ ಜೀವಿಸ್ತಾ ಕಾಲ ಕಳೆಯೋದೇನಾ 

ಬದುಕೆಂದರೆ.? ಸುತ್ತಲಿನ ಸಮಾಜದೆದುರು ನಾವು ಚೆನ್ನಾಗಿದೀವಿ 

(ಸಂತೋಷವಾಗಿ) ಅಂತ ತೋರಿಸ್ಕೊಳ್ಳೋದು ಒಂದಷ್ಟು ಮಟ್ಟಿಗೆ ಅಗತ್ಯ 

ಮತ್ತು ಅನಿವಾರ್ಯ ಕೂಡಾ. ಯಾಕಂದ್ರೆ, ಎಷ್ಟೇ ಸ್ವಾವಲಂಬಿ ಮನುಷ್ಯ 

ಅಂತಂದ್ಕೊಂಡ್ರೂ ಆತ ಜೀವಿಸಬೇಕಾದದ್ದು - ಬದುಕು ಸವೆಸಬೇಕಾದ್ದು ಇದೇ 

ಸಮಾಜದ ನಡುವೆ. ಇದೇ ಸಮಾಜದ ಒಂದು ಅಂಗವಾಗಿ.


ಮನುಷ್ಯಂಗೆ 'ಮುಖವಾಡಗಳು' ಎಷ್ಟೊಂದು ಅಗತ್ಯ ಅಲ್ವಾ...!


Sunday, May 8, 2011

ಗೊಂಚಲು - ಹದಿಮೂರು...

ಆಯಿ...



ಅವಳೆದೆಯ ಅಮೃತವ ಕುಡಿದೆ
ಜೀವ ಇನ್ನೂ ಉಸಿರಾಡುತಿದೆ.
ಅವಳ ಕೈತುತ್ತನುಂಡು ಬೆಳೆದೆ
ಹಸಿವ ಸಹಿಸುವ ಚೈತನ್ಯ ಮೈದುಂಬಿದೆ.

ನನ್ನ ಬಾಲ್ಯದಲ್ಲಿ ಅವಳು ಮುಟ್ಟಾದಾಗ
ಬೆತ್ತಲಾಗಿ ಅವಳ ಮಡಿಲಲ್ಲಿ ಕುಳಿತಾಗ
ಅವಳ ಸೆರಗು ಹೊದಿಕೆಯಾದದ್ದು ನೆನಪಾದರೆ
ಮತ್ತೆ ಮಗುವಾಗುವ ಆಸೆಯಾಗುತ್ತೆ.
ಹಿಮದ ನಾಡಲ್ಲೂ 
ಛಳಿಯ ಸಹಿಸುವ ಶಕ್ತಿ ಮೈಗೂಡತ್ತೆ.

ನನ್ನ ಖುಷಿ ಅವಳ ನಗುವು ಎಂಬುದು
ನನ್ನ ಬೆರಗು.
ನನ್ನ ಗಾಯ ಅವಳ ಕಣ್ಣೀರೆಂಬುದು
ನನ್ನ ಬೇಗುದಿ.

ನಾನು ಬಿದ್ದಾಗ ತಬ್ಬಿ ಸಂತೈಸಿದ ಆಯಿ
ನಾನು ಗೆದ್ದಾಗ ಬರೀ ನಕ್ಕು ಸುಮ್ಮನಾದ ಪರಿ
ನನಗಿನ್ನೂ ಅರ್ಥವೇ ಆಗಿಲ್ಲ.

ಈ ಆಯಂದಿರೇ ಹೀಗೆ
ತಮಗೆ ಹಸಿವಾದರೆ ನಮಗೆ ಉಣಬಡಿಸುವ
ತಮಗೆ ಛಳಿಯಾದರೆ ನಮಗೆ ಕಂಬಳಿ ಹೊದೆಸುವ
ವಿಚಿತ್ರ ಜೀವಗಳು.

ಅವಳ ಮಮತೆಗೆ ಕಾರಣ
ಅವಳ ಒಡಲ ಪ್ರೀತಿಯ ಆಳ
ಗಂಡು ಪ್ರಾಣಿಯಾದ ನನ್ನ ತಿಳಿವಿಗೆ ಇನ್ನೂ ಅರಿವಾಗುತ್ತಲೇ ಇಲ್ಲ.

ಜೊತೆಯಲಿರುವಾಗ ಅವಳೆಂದರೆ ಸದರ ಭಾವ
ಇಂದು ಒಳ್ಳೆಯ ಮಗನಾಗಲಿಲ್ಲವೆಂಬ ನೋವ ಭಾವ.

ಆಯೀ...
ಹೇಳದಿರಲು ಕಾರಣ 
ಗಂಡೆಂಬ ಅಹಂಭಾವವಾ..? ಇಲ್ಲಾ
ಹೇಳಬೇಕಿಲ್ಲವೆಂಬ ಸದರ ಭಾವವಾ..? ಗೊತ್ತಿಲ್ಲ.
ಆದರೂ
ನಿನ್ನೆದುರಿಗೆ ಎಂದೂ ಹೇಳದ ಮಾತೊಂದ 
ಇಂದು ಹೇಳುತ್ತೇನೆ

ಆಯೀ...
             I  LOVE  YOU... 

ಜಗದೆಲ್ಲ ಅಮ್ಮಂದಿರಿಗೆ - ಅಮ್ಮಂದಿರಂಥ ಹೆಣ್ಣು ಜೀವಗಳಿಗೆ
ನನ್ನದೊಂದು  ಸಲಾಮ್...

Sunday, April 17, 2011

ಗೊಂಚಲು - ಹನ್ನೆರಡು...

ಪ್ರೇಮದ  ಘೋರಿಯ  ಮೇಲೆ  ಕುಳಿತು.....


ಪ್ರೇಮ - 'ಮನದ ಯಾವುದೋ ಒಂದು ಮೂಲೆಯಲ್ಲಿ ಗೊತ್ತೇ ಆಗದೆ ಹುಟ್ಟಿ, ಅಷ್ಟೇ ನಿಶ್ಯಬ್ದವಾಗಿ ಸತ್ತೂ ಹೋಗಬಹುದಾದ ಮಧುರ ಭಾವ...'

ಪ್ರೇಮ - 'ಸಂಪೂರ್ಣ ಅಭಿವ್ಯಕ್ತಿಸಲಾಗದ ಅವ್ಯಕ್ತ ಭಾವಗಳ ಗೊಂಚಲು...'

ಪ್ರೇಮ - ಅದು ನನ್ನಲ್ಲಿ ಹುಟ್ಟಿದ ಭಾವ ಬಿಂದು ಯಾವುದು ?
             ಸತ್ತ ಕಾರಣವೇನು ?
ಉತ್ತರ ಸಿಗದ ಪ್ರಶ್ನೆಗಳಿಗೆ ಸಿಲುಕಿ ಬಳಲಿ ಹೋಗಿದ್ದೇನೆ.

ಸತ್ತ ಪ್ರೇಮ ಉಳಿಸಿ ಹೋದ ಸ್ತಬ್ಧತೆಯಿಂದ ಆಚೆ ಬರಲಿ ಹೇಗೆ...?

ಒಮ್ಮೊಮ್ಮೆ ಆಸೆ ಆಗುತ್ತೆ...
ಮನಸಾರೆ ಬಿಕ್ಕಳಿಸಬೇಕೆಂದು - ಪ್ರೇಮದ ನಿಶೆಯೆಲ್ಲ ಇಳಿದುಹೋಗುವಂತೆ...
ಮನದ ಭಾವಗಳನೆಲ್ಲ ಆಚೆಸುರಿದು ಮಾತಾಗಬೇಕೆಂದು...
ಮತ್ತೆ ನಗಬೇಕೆಂದು - ಜಗದ ನಗುವೆಲ್ಲ ನನ್ನೊಬ್ಬನದೇ  ಎನುವಂತೆ...

ಒಮ್ಮೊಮ್ಮೆ ಹೀಗೂ ಅನ್ನಿಸತ್ತೆ...
ಈ ಸಮಾಜದ ಮಿತಿಗಳನೆಲ್ಲ ಮೀರಬೇಕೆಂದು...
ಸೂಳೆ ಮನೆಯಲ್ಲಾದರೂ ಸರಿ ಗಂಡಸಾಗಬೇಕೆಂದು...
ಒಂದಿಷ್ಟು ಕೆಟ್ಟವನಾಗಬೇಕೆಂದು...

ಎಲ್ಲಕ್ಕಿಂತ ತೀವ್ರವಾಗಿ ಆಸೆ ಆಗ್ತಿದೆ...
ಮತ್ತೆ ಬದುಕಬೇಕೆಂದು - "ನಾನಾಗಿ ನಾನು"
                                     ಕೇವಲ
                                  "ನನಗಾಗಿ ನಾನು"


ಎದೆಯಂಗಳ ಖಾಲಿಯಿದೆ. ಅಲ್ಲ ಮತ್ತೆ ಖಾಲಿಯಾಗಿದೆ.
ಕನಸ ಗಿಡ ನೆಡ ಬಯಸುವವರು ಸಂಪರ್ಕಿಸಬಹುದು...

Monday, April 4, 2011

ಗೊಂಚಲು - ಹನ್ನೊಂದು...

ದೋಸ್ತಿ.....

ಸಮಾನ ಅಭಿರುಚಿಗಳಿಂದ ಹುಟ್ಟಿದ ಗೆಳೆತನ ದೀರ್ಘಕಾಲ ಉಳಿಯುತ್ತೆ ಹಾಗೂ ಗಾಢವಾಗಿ ಬೆಳೆಯುತ್ತೆ ಮತ್ತು ತುಂಬಾ ತುಂಬಾ ಬದುಕನ್ನು ಪ್ರೀತಿಸುವಂತೆ ಮಾಡುತ್ತೆ. ಯಾಕೇಂದ್ರೆ ಅಭಿರುಚಿಯಿಂದ ಹುಟ್ಟಿ ಬಂದ ಗೆಳೆತನದಲ್ಲಿ ಸಣ್ಣ ಸಣ್ಣ ಅಪಸವ್ಯಗಳೆಲ್ಲ ಲಕ್ಷಕ್ಕೆ ಬರಲಾರವು. ನಮ್ಮ ಇತರೆ ಖುಷಿಗಳಿಗೆ ಅವರು ಎರವಾಗದಿದ್ದಾಗಲೂ ಕೂಡ ಅದೊಂದು ಗೆಳೆತನ ಬೆಳೆಯುತ್ತಲೇ  ಇರುತ್ತದೆ. ಅಭಿರುಚಿಯೇ ಆ ಗೆಳೆತನವನ್ನು ಗಟ್ಟಿಯಾಗಿಡುತ್ತದೆ. ಒಳ್ಳೆಯ ಅಭಿರುಚಿಯ ಅಂತರ್ಗತ ಸೆಳವಿನಿಂದಾಗಿಯೇ, ವಯಸ್ಸಿನ ಅಂತರ ಮತ್ತು ಆರ್ಥಿಕ ಅಂತರಗಳಿದ್ದಾಗ್ಯೂ, ಬದುಕಿನುದ್ದಕ್ಕೂ ಒಂದು ಚೆಂದನೆಯ ಸ್ನೇಹದ ಬಳ್ಳಿ ಹಸಿರಾಗಿ ಹಬ್ಬಿ ಹರಡಿರುತ್ತೆ.

ಒಂದು ಚಂದನೆಯ ಗೆಳೆತನವನ್ನು ನಿಭಾಯಿಸಬೇಕಾದಾಗ ಆ ಗೆಳೆಯನ ಸಣ್ಣ ಪುಟ್ಟ ದೌರ್ಬಲ್ಯಗಳನ್ನು ಸಹಿಸುವುದು ಅನಿವಾರ್ಯ. ತೀರ ಅದು ನಮ್ಮ ವ್ಯಕ್ತಿತ್ವಕ್ಕೇ ಮತ್ತು ಸಾಧನೆಗಳಿಗೇ ಅಡ್ಡಿಯಾಗುತ್ತೆ ಅಂದಾಗ ಆ ಗೆಳೆಯನನ್ನು ಧಿಕ್ಕರಿಸೋದು ಅನಿವಾರ್ಯವಾದರೂ ಉಳಿದ ಸಂದರ್ಭಗಳಲ್ಲಿ ಅವನ ಆ ದೌರ್ಬಲ್ಯಗಳೆಡೆಗೆ ನಿರ್ಲಿಪ್ತರಾಗಿರೋದು ಅವಶ್ಯಕ. ಆತ ಆತನ ದೌರ್ಬಲ್ಯಗಳನ್ನು ನಮ್ಮ ಮೇಲೆಯೂ ಹೇರುವಂತೆ ಕಂಡಾಗ ನಯವಾಗಿ ನಕ್ಕು ತಿರಸ್ಕರಿಸಿ ಅದರಿಂದ ನಾವು ಹೊರಗುಳಿದು ನಮ್ಮನ್ನು ರಕ್ಷಿಸಿಕೊಂಡರಾಯಿತಷ್ಟೇ. ಹಾಗಂತ ಅವನ ದೌರ್ಬಲ್ಯಗಳನ್ನು ಖಂಡಿಸಬಾರದೆಂತಲ್ಲ. ಅಗತ್ಯವಾಗಿ ಖಂಡಿಸಬೇಕು ಮತ್ತು ದೃಢ ಅಭಿಪ್ರಾಯಗಳಿಂದ ಮನಗಾಣಿಸಲು ಪ್ರಯತ್ನಿಸಬೇಕು. ಅದು ಗೆಳೆತನಕ್ಕೆ ಅಗತ್ಯ ಕೂಡ. ಹಾಗಾದಾಗಲೇ, ಅಭಿಪ್ರಾಯಗಳು ಘರ್ಷಿಸಿದಾಗಲೇ, ಅವರವರ ವ್ಯಕ್ತಿತ್ವಗಳು ಹೊರಹೊಮ್ಮಲು ಮತ್ತು ಗಟ್ಟಿಗೊಳ್ಳಲು ಸಾಧ್ಯ.


"ಎರಡು ಬೆಳೆದ ವ್ಯಕ್ತಿತ್ವಗಳ ನಡುವಿನ ಸ್ನೇಹಕ್ಕೆ 'Celebration of Personalities' ಅನ್ನಬಹುದೇನೋ..."


ಎರಡು ಬೆಳೆದ ವ್ಯಕ್ತಿತ್ವಗಳ ಮಧ್ಯದ ಸ್ನೇಹದಲ್ಲಿ ಅಭಿಪ್ರಾಯ ಭೇದಗಳು ಸರ್ವೇಸಾಮಾನ್ಯ. ಅದರಿಂದಾಗಿ ಖಂಡನೆ ಮಂಡನೆಗಳು ಅನಿವಾರ್ಯ. ಆ ಎಲ್ಲ ಖಂಡನೆ ಮಂಡನೆಗಳ, ಅಭಿಪ್ರಾಯ ಭೇದಗಳ, ಭಿನ್ನ ವಿಚಾರ ಧಾರೆಗಳ ನಡುವೆಯೂ ಸ್ನೇಹವನ್ನು ಚೆನ್ನಾಗಿಟ್ಟುಕೊಳ್ಳಬೇಕು ಅಂದರೆ - ಇಬ್ಬರ ನಡುವೆಯೂ ಆತ್ಮೀಯತೆ ಮತ್ತು ಒಬ್ಬರೆಡೆಗೆ ಇನ್ನೊಬ್ಬರಿಗೆ ಪ್ರೀತಿ ಮಿಶ್ರಿತ ಗೌರವವಿರಬೇಕು. ಅಭಿಪ್ರಾಯಗಳನ್ನು ಆಲಿಸುವ ಮತ್ತು ಗೌರವಿಸುವ ಮನಸ್ಥಿತಿಯಿರಬೇಕು. ಗೆಳೆಯನ ಒಂದು ಆರೋಪಕ್ಕೆ ಪ್ರತ್ಯಾರೋಪ ಮಾಡದೇ ಆತನ ಖಂಡನೆಯನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳುವ ವೈಶಾಲ್ಯತೆ ಇಬ್ಬರ ಮನಸಿಗೂ ಇರಬೇಕು. ಆತನ ಆರೋಪದಲ್ಲಿನ ಸತ್ಯಾಸತ್ಯತೆಯನ್ನು ವಿಶ್ಲೇಷಿಸುವ ಗುಣವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಾಡಬೇಕಾಗಿರುವ ಖಂಡನೆಯನ್ನು ಸರಿಯಾದ ಸಮಯದಲ್ಲಿ, ಸಂದರ್ಭೋಚಿತವಾಗಿ, ನಯವಾದ ಶಬ್ದಗಳಲ್ಲಿ, ನಾಜೂಕಾಗಿ, ಮನಮುಟ್ಟುವಂತೆ ಮಾಡುವ ಕಲೆಯಿರಬೇಕು.


"ಸ್ನೇಹ ಅಂದರೆ - ಎರಡು ವ್ಯಕ್ತಿತ್ವಗಳು, ಎರಡು ಭಿನ್ನ ಅಭಿಪ್ರಾಯಗಳು, ಅಭಿರುಚಿಗಳು, ಭಿನ್ನ ವಿಚಾರಧಾರೆಗಳು ತಮ್ಮೆಲ್ಲ ವೈರುಧ್ಯಗಳ ನಡುವೆಯೇ  ಒಟ್ಟಾಗಿ ಬೆಸೆದು ಎರಡು ಜೀವಗಳ ಜೀವನವನ್ನು ಆಹ್ಲಾದಮಯವನ್ನಾಗಿಸುವ, ಎರಡು ಮನಸುಗಳ ನಡುವಿನ ಅಲೌಕಿಕ ಬಾಂಧವ್ಯ." ಹಾಗಂತ ನಾನು ನಂಬಿದೀನಿ. ಅಂಥ ಆಹ್ಲಾದಮಯ ಅಲೌಕಿಕ ಅನುಭೂತಿಯನ್ನ ನಾನು ತುಂಬ ಅನುಭವಿಸಿದ್ದೇನೆ - ರಘು ಮತ್ತು ರಾಘು ಇವರುಗಳ ಬೆಚ್ಚನೆಯ ಗೆಳೆತನದ ಸನ್ನಿಧಿಯಲ್ಲಿ.


ಗೆಳೆತನದ ಸನ್ನಿಧಿಯಲ್ಲಿ - ಶುದ್ಧ ಕಾಡು ಹರಟೆ, ನಗೆಯ ವಿಸ್ಫೋಟ, ಪ್ರಬುದ್ಧ ವೈಚಾರಿಕ ವಿಶ್ಲೇಷಣೆ, ಪುಟ್ಟ ಜಗಳ, ಜಗಳದ ನಂತರದ ಹ್ಯಾಂಗೋವರ್,ಕೊನೆಗೆ ಕಣ್ಣುಗಳಲ್ಲೇ ಕೇಳಿಕೊಳ್ಳುವ ಅಪಾಲಜಿ ಎಲ್ಲ ಸಮ್ಮತವೇ ಮತ್ತು ಸುಂದರವೇ.


ಎಂದೋ ಸುಮ್ಮನೆ ಕುಳಿತು ಕಳೆದ ಬದುಕಿನ ಪುಟಗಳನ್ನು ತಿರುವಿ ಹಾಕುವಾಗ, ತಕ್ಷಣ ಮುಖವರಳಿ, ತುಟಿಯಂಚಿನಲ್ಲಿ ತಂತಾನೇ ಮುಗುಳು ನಗೆಯೊಂದು ಮಿಂಚಿದರೆ ಅದಕ್ಕೆ ಕಾರಣ ಒಂದ್ಯಾವುದೋ ಮಧುರ ಗೆಳೆತನದ ನೆನಪಿನ ನರುಗಂಪೇ ಆಗಿರುತ್ತದೆ. ಅಂಥದೊಂದು ಬಿಸುಪು ಗೆಳೆತನಕ್ಕೆ ಮಾತ್ರ ಇರೋಕೆ ಸಾಧ್ಯ. ಮನಸು ಮಗುಚಿ ಬಿದ್ದಂತಾದ ಒಂದು ಘಳಿಗೆಯಲ್ಲಿ ಗೆಳೆತನದ ನೆನಪು ಎಷ್ಟೋ ಹಾಯಾಗಿರುತ್ತದೆ. ಮನಸು ಮತ್ತೆ ಚೇತರಿಸಿಕೊಳ್ಳುವಂತಾಗುತ್ತೆ. ಇವೆಲ್ಲ ಅನುಭವಜನ್ಯ ಸತ್ಯಗಳು.


"ಉಷಃ ಕಾಲದಲ್ಲಿ ಬಾಲ ಭಾಸ್ಕರನ ಹೊಂಗಿರಣದಂತೆ, ಇರುಳ ಬೆಳಗುವ ಚಂದಿರನ ಬೆಳದಿಂಗಳಂತೆ - ಬಾಳ ಪ್ರತಿ ಕ್ಷಣವೂ ಆಹ್ಲಾದಕರವಾಗಿರಲು ಸದಾ ನನ್ನ ಜೊತೆಗಿರಲಿ - ಒಲವು ತುಂಬಿದ ಗೆಳೆತನದ ನರುಗಂಪು."


"ನಮ್ಮನ್ನು ಪ್ರೀತಿಸುವ ಗೆಳೆಯರಿರೋರು ಅದೃಷ್ಟವಂತರು. ಅವರಿಗಿಂತ ಅದೃಷ್ಟವಂತರು - ನಮ್ಮನ್ನು ಪ್ರೀತಿಸುತ್ತಲೇ ನಮ್ಮ ತಪ್ಪುಗಳನ್ನು ದೃಢ ಅಭಿಪ್ರಾಯಗಳ ಮೂಲಕ ಖಂಡಿಸಿ, ನಮ್ಮ ವ್ಯಕ್ತಿತ್ವದ ವಿಕಾಸಕ್ಕೆ ನೆರವಾಗಬಲ್ಲಂಥ ಮಿತ್ರರಿರೋರು."


ನಾವು ದೌರ್ಬಲ್ಯಗಳೆಡೆಗೆ ಜಾರಿದಾಗಲೆಲ್ಲ ತಮ್ಮ ಶುದ್ಧ ಹಸ್ತದಿಂದ ನಮ್ಮ ಕೈ ಹಿಡಿದು ಜಗ್ಗಿ, ಕಿವಿ ಹಿಂಡಿ ಎಚ್ಚರಿಸಿ, ಸಾಧನೆಯ ಮಾರ್ಗದೆಡೆಗೆ ಮುಖ ತಿರುಗಿಸಿ ನಿಲ್ಲಿಸಬಲ್ಲಂಥ ಗೆಳೆಯರನ್ನು, ತಮ್ಮ ಕ್ಷುಲ್ಲಕ ದೌರ್ಬಲ್ಯಗಳಿಗಾಗಿ ಕಳೆದುಕೊಳ್ಳುವಂಥವರು ಮೂರ್ಖರೇ ಸರಿ.


ನನ್ನ ಸನ್ಮಿತ್ರರಿಗೆ - ಒಂದ್ಯಾವುದೋ ಒಳ್ಳೆಯ ವಾಕ್ಯ ಓದಿದಾಗ, ಒಂದು ನಗೆಯ ಸಮ್ಮುಖದಲ್ಲಿ, ಬಾಳ ಮುಸ್ಸಂಜೆಯ ಒಂದು ಮೌನ ಸಂಜೆಯಲ್ಲಿ - ಕಳೆದ ಬದುಕಿನ ಮಧುರ ಘಳಿಗೆಗಳನ್ನು ನೆನಪಿಸಿಕೊಂಡು ಮುದಗೊಳ್ಳುವಾಗ - ಜೊತೆಗೆ ಅವನಿದ್ದಿದ್ದರೆ ಅಂತ ಈ ಮಿತ್ರನ ನೆನಪಾದರೆ ಈ ಜೀವಕ್ಕೆ, ಈ ಜೀವದೊಂದಿಗಿನ ಸ್ನೇಹಕ್ಕೆ ಅಷ್ಟೇ ಸಾರ್ಥಕ್ಯ.




"ಗೆಳೆತನದ ನರುಗಂಪು ನೆರಳಂತೆ ಜೊತೆಗಿರಲಿ.


ಸ್ನೇಹದ ಗಂಗೆ ಜಗದೆಲ್ಲೆಡೆಯಿಂದ ನನ್ನೆಡೆಗೆ ಹರಿದು ಬರಲಿ.


ನನ್ನ ಮನದ ಖುಷಿಯ ಭಾವಗಳ ಕಣಜಾನ ಶ್ರೀಮಂತಗೊಳಿಸಲಿ.


ಭವಿಷ್ಯದ ಪ್ರತಿ ದಿನವೂ ಹೇಮಂತದ ಪೌರ್ಣಿಮೆಯಾಗಲಿ."