Thursday, April 25, 2013

ಗೊಂಚಲು - ಏಳು X ಹತ್ತು + ಒಂದು.....

ಬಂಡೆಯಾಗೋ ಭಂಡ ಬಯಕೆಯಲ್ಲಿ ಒಂದಷ್ಟು.....

ಬಂಡೆಯಾಗಬೇಕು ನನ್ನೊಳಗು ಎಂಬ ಭಾವ ತೀವ್ರವಾಗಿ ಕಾಡುತಿದೆ...

ಬಂಡೆಗಾದರೆ ನೀರ ತಂಪು - ಬಿಸಿಲ ಬೇಗೆ ಎಲ್ಲ ಮೇಲ್ಮೈಯ ತಾಕೀತಷ್ಟೇ...
ಒಂದಷ್ಟು ಪಾಚಿ, ಇನ್ನೊಂದಿಷ್ಟು ಧೂಳಕಣ ಹೊರ ಮೈಯ ಸುತ್ತೀತಷ್ಟೇ...
ಆದರೆ ನೀರ ತಂಪು - ಬಿಸಿಲ ಬೇಗೆ ಇವ್ಯಾವುದೂ ಅದರ ಒಳಗನ್ನು ತಾಕಲಾರವು...
ಈ ಭಾವ ಸಂಬಂಧಗಳು ಬೆಸೆದುಕೊಳ್ಳುವ, ಬೆಸೆದುಕೊಂಡ ಬಂಧಗಳ ಸಲಹಿಕೊಳ್ಳುವಲ್ಲಿ ಸೋತೆ ಅನ್ನಿಸಿದಾಗಲೆಲ್ಲ (ಈ ಸಂಗತಿಯಲ್ಲಿ ನಾನು ಗೆದ್ದ ನೆನಪಿಲ್ಲ ನನ್ನಲ್ಲಿ) ಗೊಂದಲಕ್ಕೆ ಬೀಳುವ ಮನಸು ಬಂಡೆಯಾಗಲು ಬಯಸುತ್ತೆ...
ಆದರೇನ ಮಾಡಲಿ ನಾ ಸಾಗುವ ದಾರೀಲಿ ನಾನೊಬ್ಬನೇ ಇಲ್ಲ...
ದಾರಿ ತುಂಬ ಜನವೇ ಜನ...
ಕೆಲವರು ನನ್ನ ದಾಟಿ ಮುಂದೆ ಸಾಗುತ್ತಾರೆ... 
ಇನ್ಕೆಲವರು ಬೆನ್ನ ಹಿಂದೆ...
ಇನ್ನಷ್ಟು ಮಂದಿ ಜತೆಗೇ ಹೆಜ್ಜೆ ಜೋಡಿಸುತ್ತಾರೆ... 
ಹಿಂದು ಮುಂದಿನವರಿಂದ ಕಳಚಿಕೊಳ್ಳಬಹುದು...
ಆದರೆ
ಹಾಯ್ ಎಂದು ಕೈಕುಲುಕಿ ಜತೆಗೇ ಹೆಜ್ಜೆ ಇಡುತ್ತಾ ಹೆಗಲು ತಬ್ಬಿ ನಗುತ್ತಾರಲ್ಲ ಅವರನ್ನ ಕಳಚಿಕೊಂಡು ಬಂಡೆತನಾನ ಸಾಕಿಕೊಳ್ಳೋದು ಬಲು ಕಷ್ಟ ಕಷ್ಟ...
ನಾನಿವನು ನೀವಿವರಲ್ಲವಾ ಅಂತ ಮಾತಿಗಿಳಿಯುವ ಜೀವ ಇಷ್ಷಿಷ್ಟೇ ಮಾತುಗಳಲ್ಲಿ ನೀನು ನಾನುಗಳಾಗಿ ಚೂರು ಚೂರಾಗಿ ನೋವಿಗೆ ಕಿವಿ, ನಲಿವಿಗೆ ನಗುವಾಗುತ್ತಾ...
ಬಂಡೆಯ ಯಾವುದೋ ಮೂಲೆಯಲಿ ಕಂಡೂ ಕಾಣದಂತಿರೋ ಚಿಕ್ಕ ಬಿರುಕಿನಿಂದಲೇ ಒಳನುಗ್ಗಿ - ಮಾತು ಮೌನಗಳಲೆಲ್ಲ ಜತೆಗಿರುತ್ತಾ - ಹಂಚಿಕೊಳ್ಳುವ ಸುಖಕ್ಕೆ ನನ್ನನು ಪಕ್ಕಾಗುವಂತೆ ಮಾಡಿ ಅರಿವೇ ಆಗದಂತೆ ಒಳಗನೆಲ್ಲ ಆವರಿಸಿಬಿಡುತ್ತಾರೆ...
ಒಮ್ಮೆ ಒಳಬಂದು ನನ್ನವರೆನ್ನುವ ಭಾವ ಮೂಡಿಬಿಟ್ಟರೆ ಅಲ್ಲಿಗೆ ಮುಗಿಯಿತು... 
ಒಬ್ಬರೆಡೆಗೊಬ್ಬರಿಗೆ ನಿರೀಕ್ಷೆಗಳು ಸುತ್ತಿಕೊಂಡು ಮನಸು ಮತ್ತ ಕೋತಿ... 
ನಾನಿದನ್ನ ಹೇಳಿಕೊಂಡೆ, ಆತ ಇದನ್ನ ಹಂಚಿಕೊಂಡ...
ಅರೇ ಇದನ್ನಾತ ನಂಗೆ ಹೇಳಿಯೇ ಇಲ್ಲವಲ್ಲ... 
ಬಿಡು ಎಲ್ಲವನ್ನೂ ನಂಗೆ ಹೇಳೋಕೆ ಸಾಧ್ಯವಾ... 
ಅಲ್ಲ ನಂಗೆ ಹೇಳದಿದ್ದರೂ ಪರವಾಗಿರಲಿಲ್ಲ ಆದರೆ ಅವನಿಗೆ ಹೇಳಿದ...
ಅಂದರಾತ ನಂಗಿಂತ ಹತ್ತಿರದವನಾ...
ಅರೆ ನಾನ್ಯಾಕೆ ಇಷ್ಟು ಸಿನಿಕನಂತಾಡ್ತೀನಿ...
ಅವನ ಬದುಕಲ್ಲಿ ನಾನೂ ಒಂದು ಪಾತ್ರ ಅಷ್ಟೇ...
ಆದರೆ ನಾನೇ ಮುಖ್ಯಪಾತ್ರ ಆಗಬೇಕಿತ್ತಲ್ಲವಾ...
ಈಗೀಗ ಮಾತೇ ಇಲ್ಲ...
ಮನಸಾಗದಿದ್ದರೆ ಮಾತು ಬೇಡ ಬಿಡು - ಯಾವತ್ತೂ ಗೆಳೆತನ ಸಹಿಸಿಕೊಳ್ಳುವುದಾಗಬಾರದಲ್ಲವಾ...
ಆದರೂ ಹೀಗೆ ಸದ್ದೇ ಇಲ್ಲದೆ ಸಬೂಬುಗಳ ನೆರವು ಕೋರಿ ಇಂಚಿಂಚಾಗಿ ದೂರಾಗುವ ಬದಲು ಈಗಿತ್ತಲಾಗೆ ನೀನ್ಯಾಕೋ ಇಷ್ಟವಾಗುತ್ತಿಲ್ಲ ಕಣೋ ಗೂಬೆ ಅಂತ ನೇರಾ ನೇರ ಹೇಳಿ ಕಳಚಿಕೊಂಡರೆ ಎಷ್ಟೋ ಹಿತವೆನಿಸುತ್ತಿತ್ತು...
ಜೊತೆ ನಡೆವ ಖುಷಿ - ಬಿಟ್ಟು ಹೋದೀತೆಂಬ ಭಯ ಹೀಗೆ ಏನೇನೋ ಗೊಂದಲಗಳು...
ನಿರೀಕ್ಷೆಗಳಿಲ್ಲದ ವಿನಾಕಾರಣದ ಪ್ರೀತಿಯ ಮಾತಾಡುತ್ತಲೇ ಮನಸು ಗೆಳೆತನದ ಹುಟ್ಟು - ಸಾವಿಗೆ ಕಾರಣಗಳ ಹುಡುಕುತ್ತೆ... 
ಅಂದರೆ ನಿರೀಕ್ಷೆಗಳು ಉಸಿರಾಡುವುದರೊಂದಿಗೆ ಬಾಂಧವ್ಯದ ಸಾವಿಗೆ ಮುನ್ನುಡಿ ಸಿದ್ಧವಾಗುತ್ತೆ...
ಏನಂದ್ರೆ ನನ್ನ ಮನದಲ್ಲಿ ಬಂಧವೊಂದರ ಸಾವಿಗೆ ಮುನ್ನುಡಿ ಬರೆದ ನಾನೇ ಚೆಂದಗೆ ಬೆನ್ನುಡಿಯನ್ನೂ ಬರೆದು ನಿಸೂರಾಗಲಾರದೇ - ಬಂಧ ಸತ್ತಿದ್ದು ನನ್ನಿಂದಲ್ಲ ಎಂದು - ವಾದಗಳ ಮೂಲಕ, ಅಹಂನ ತೃಪ್ತಿಗಾಗಿ ಸಂಬಂಧವನ್ನು ಪ್ರಜ್ಞಾಪೂರ್ವಕವಾಗಿ ಹಿಡಿದಿಡಲು ಬಯಸುವದು ನನ್ನ ಮೂರ್ಖತನವಲ್ಲವಾ...
ಇಷ್ಟಕ್ಕೂ ಭಾವನಾತ್ಮಕ ಬಂಧಗಳ ಅಳಿವು - ಉಳಿವು ನಿಂತಿರುವುದು ನಡುವೆ ಕಚ್ಚಿಕೊಂಡಿರೋ ಭಾವತೀವ್ರತೆಯಲ್ಲಲ್ಲವಾ...
ಅಂದ್ರೆ ಭಾವಿಸಿಕೊಂಡಷ್ಟೇ ಬಂಧ...
ಭಾವವೆಂದರೆ ಮನೋ ಮೂಲದ್ದು ಮತ್ತು ಮನಸು ಎಂದಿಗಿದ್ದರೂ ಮರ್ಕಟವೇ...
ಈ ಹಾಳು ಮನಸು ತನ್ನ ಭಾವಗಳನ್ನ, ತಾನೇ ಬೆಸೆದುಕೊಂಡ ಬಂಧಗಳನ್ನ ಪ್ರೀತಿಯಿಂದ ನಿಭಾಯಿಸೋಕೆ ಕಲಿಯೋದು ಯಾವಾಗಲೋ...
ಇರುವ ಬಂಧಗಳನೇ ಸರಿಯಾಗಿ ನಿಭಾಯಿಸಲಾರದ ನಾನು ಹೊಸ ಬಂಧಗಳೆಡೆಗೆ ತುಡಿಯುವುದ್ಯಾಕೋ...
ಇಂಥ ಸಂಗತಿಗಳ ಸುಳಿಗೆ ಸಿಕ್ಕಿ ಮನಸು ಗೊಂದಲಗಳ ಗೂಡಾದಾಗಲೆಲ್ಲ ನಾನು ಮತ್ತೆ ಬಂಡೆಯಾಗಬೇಕೆನಿಸುತ್ತೆ - ಬಿರುಕುಗಳೇ ಇಲ್ಲದ ಉರುಟಾದ ಬಂಡೆ....
ಥುತ್ - ಒಳ್ಳೇ ಗರತಿಯ ವೇಷದಲ್ಲಿರೋ ಸೂಳೆಯಂತಾಡೋ ಈ ನನ್ನ ಮನಸಿಗೆ ಏನೆನ್ನಲಿ...

***

ನನಗೇ ಅರ್ಥವಾಗದ ನಾನು.... 
ಗೊಂದಲಗಳ ಗೂಡು...
ಇನ್ನಾರಿಗಾದರೂ ಅರ್ಥವಾದೇನಾ..?
ಅರ್ಥವಾಗುವ ಜರೂರತ್ತಿದೆಯಾ...??
ಉತ್ತರಗಳಿಲ್ಲದ ಅಡ್ನಾಡಿ (ಗೊಂದಲದ) ಪ್ರಶ್ನೆಗಳೇ ತಲೆತುಂಬ...
ಆದರೆ ಗೆಳೆತನದೆಡೆಗಿನ ನನ್ನ ಮನದ ಗೊಂದಲಗಳ ಬಗ್ಗೆ ಇಷ್ಟೆಲ್ಲ ಬರೆದ ಮೇಲೂ ಒಂದು ಮಾತು ಒಪ್ಪಿಕೊಳ್ಳಲೇ ಬೇಕಿದೆ...
ಪ್ರೀತಿ, ವಿಶ್ವಾಸ, ಗೆಳೆತನದ ಭಾವಗಳು ಮನಸಿಗೆ ಬೇಡವೆಂದರೂ ಖುಷಿಯನ್ನೇ ಕೊಡುತ್ತವೆ...
ಅದಕ್ಕೇ ಒಂದು ಗೆಳೆತನ ಕಳಚಿಕೊಂಡರೆ ಇನ್ನೊಂದರೆಡೆಗೆ ನಿಧಾನವಾಗಿಯಾದರೂ ಕೈಚಾಚಿ ನಗುತ್ತೇನೆ...
ಈ ಕ್ಷಣವನ್ನು ಮಾತ್ರ ಪ್ರೀತಿಸೋ ನಾನು - ಈ ಕ್ಷಣ ದಕ್ಕಿದ ಗೆಳೆತನಾನೂ ಅಷ್ಟೇ ಪ್ರೀತಿಸ್ತೇನೆ...
ಮತ್ತದೇ ಗೊಂದಲಗಳು ಹೊಸ ಮುಖದಲ್ಲಿ ನಗುತ್ತವೆ...


11 comments:

  1. ಬೇಸರದ ಭಾವಗಳು ಸುತ್ತಿಕೊಂಡು ಉಸಿರುಗಟ್ಟಿ ಸಾಉವ ಬದಲು ನಿರ್ಭಾವುಕ ಬಂಡೆಯಾಗುವುದೇ ಲೇಸೆನಿಸುತ್ತದೆ.
    ಆದರೆ ನೀವೇ ಹೇಳುವಂತೆ ಈ ಜೀವನ ಪಯಣದಲ್ಲಿ ನಾವು ಒಂಟಿಯಲ್ಲವಲ್ಲ.. ಮುಂದೆ ಸಾಗುವ ನಾಯಕರನ್ನು, ಹಿಂದೆ ಸಾಗೋ ಅನುಯಾಯಿಗಳನ್ನು ಮರೆತುಬಿಡಬಹುದು.. ಆದರೆ ಕೈ ಕೈ ಹಿಡಿದು , ಮನ ಹೃದಯಗಳಲ್ಲೇ ಹೆಜ್ಜೆ ಇಟ್ಟು ನಡೆಯೋ ಗೆಳೆಯರಿಂದ ನಿರ್ಭಾವುಕರಾಗಿ ಉಳಿಯುವುದು ಅಸಾಧ್ಯವೇ ಸರಿ.. ಮತ್ತೊಮ್ಮೆ ಚೆಂದದ ಭಾವಗೊಂಚಲು :-)

    ReplyDelete
  2. "ಸಾಯುವ" ಆಗ್ಬೇಕಿತ್ತು :-)

    ReplyDelete
  3. tumba chennagi barediddo maaraaya. nanna manassina bhavanegalannu nane barediddaroo ishtu chennaagi bareyalikke saadhya iralilla ennisuva mattige nanna manassina maatugalaagive. tumba ishtadinda odida baraha.

    ene irali, ishtu bicchu manassinda bareyovru kadime, haage odabekenisidaagalella ninna yaavdaadroo post odtene. tumba ishta aagatte. :)

    ReplyDelete
  4. ಬಂಡೆಯಾಗಬೇಕೆಂಬ ಬಯಕೆಯ ಸುತ್ತಲೂ ಕಾಡುವ ಭಾವಗಳ ಅದೆಷ್ಟು ಚೆಂದವಾಗಿ ಲೇಖನಿಗೆ ಇಳಿಸಿದ್ದೀರಿ! ನಿಮ್ಮ ಭಾವಗಳು ಸಾರ್ವತ್ರಿಕವಾಗುವುದು ಮತ್ತು ಭಾವಗಳ ಜೊತೆ ಪ್ರೀತಿ ಸಾಗುವುದು ಇವೆರಡು ಸಾಹಿತ್ಯದ ಜೀವಾಳವೆನ್ನಿಸುತ್ತದೆ ನನಗೆ. ಹೃದ್ಯ ಬರಹಗಳ ಗೊಂಚಲು.. ತೂಗಾಡಿ ತೊನೆಯಲಿ ಹೂಹೀಚು ಕಾಯಿಗಳಿಲ್ಲಿ. ಶುಭಾಶಯಗಳೊಂದಿಗೆ..

    ReplyDelete
  5. ನೆಲದಲ್ಲಿ ಹೂತು, ಆರೈಕೆ ಮಾಡಿ, ಗೊಬ್ಬರ ನೀರು ಗಾಳಿ ಬಿಸಿಲಿ ಏನೇ ಕೊಟ್ಟರೂ ಚಿಗುರದ ಬೀಜ ... ದೇವಸ್ಥಾನದ ಗೋಪುರದ ಬಿರುಕಲ್ಲಿ, ಬಂಡೆಯ ಸಂಧಿಯಲ್ಲಿ, ಎತ್ತರದ ಗೋಡೆಗಳ ಬಿರುಕಿನಲ್ಲಿ ಯಾವುದೋ ಹಕ್ಕಿಗಳು ತಿಂದು ಉಗುಳುವ ಬೀಜ.. ತನಗೆ ಅರಿವಿಲ್ಲದೆ ಸವಾಲನ್ನು ಸ್ವೀಕರಿಸಿ ಬೆಳೆಯುತ್ತದೆ. ಇದು ಅಲ್ಲವೇ ನಮಗೆ ಅರಿವಿರದೆ ಬೆಳೆಯುವ ಗೆಳೆತನ. ಕೆಲವೊಮ್ಮೆ ಬಿಟ್ಟು ಹೋಗುವ ಮನ ಮಾತಾಡಿದರೂ.. ಯಾವ ನಿರೀಕ್ಷೆಯಿಲ್ಲದೆ ಬೆಳೆದು ನಿಂತ ಮರದಂತ ಸ್ನೇಹವೆ ಮನಸ್ಸಿಗೆ ಮುದಕೊಡುತ್ತದೆ. ಇನ್ನೋದಷ್ಟು ಹೆಜ್ಜೆ ಹಾಕಿ ಗೆಳೆಯ.. ಅದೋ ದೂರದಲ್ಲಿ ಕಾಣುತ್ತಿರುವ ಹುಲ್ಲುಗಾವಲಿನ ಮರದಡಿ ತಂಗಾಳಿ ಬೀಸುತ್ತಿದೆ.
    ಸುಂದರ ಸ್ವಗತ ಲೇಖನ!

    ReplyDelete
  6. ಕಂಚೀಮನೆಯವರೇ ತುಂಬಾ ಇಷ್ಟವಾಯಿತು.

    ReplyDelete
  7. ವಾಹ್! ಒಂದೊಂದು ಬರಹದ ಮೂಲಕವೂ ಸೀದಾ ಒಳಗಿಳಿಯುವ ಭಾವ ನನ್ನದರೊಟ್ಟಿಗೆ ತನ್ನ ಕುರುಹುಗಳನ್ನ ತಾಳೆ ಹಾಕಿಕೊಳ್ಳಲಾರಂಭಿಸುತ್ತದೆ ಶ್ರೀವತ್ಸಾ.. ಎಷ್ಟು ಹೋಲಿಕೆಗಳು ಗೊತ್ತಾ, ತುಂಬಾ ನೈಜತೆಯುಳ್ಳ ಬರಹ. ಇಷ್ಟ ಆಯಿತು.

    ReplyDelete
  8. ಬಂಡೆಯಾಗಲೇ ಬೇಕೇ?
    ಆಗಿಬಿಡು.... ಆದರೆ ಶಿಲ್ಪಿಯ ಕೈಗೇ ಸಿಗಬೇಕು...
    ಮನಸ ಬಂಡೆಯಲ್ಲಿನ ಬೇಡದ ಚೂರುಗಳನ್ನು ಕಿತ್ತೊಗೆಯುವ
    ಶಿಲ್ಪಿಗಳು ಎಷ್ಟೆಲ್ಲ ನಮ್ಮ ಸುತ್ತ....
    ಒಬ್ಬೊಬ್ಬರು ಒಂದೊಂದು ಶಿಲ್ಪವನ್ನಾಗಿ ನಿನ್ನ ಕೆತ್ತಿಯಾರು...
    ಬೇಡದ ಚೂರುಗಳು ಹೋದ ಮೇಲೆ ಪರಿಪೂರ್ಣತೆ ಲಭಿಸಲೇ ಬೇಕಲ್ಲ....

    ಅಂದದ ಬರಹ... ಶುಕ್ರಿಯಾ....

    ReplyDelete
  9. ಒಂದಿಷ್ಟು ಗೊಂದಲಗಳು ಮನದಲ್ಲಿ.. !!

    ReplyDelete
  10. ಎಂತಹ ಮಾತುಗಳು ಗೆಳೆಯ ..ನಿಜಕ್ಕು ಬಾಳ ಖುಷಿ ಆತು ..ಎಲ್ಲರ ಮನಸಿನ ಭಾವಗಳು ಹೀಗೆ ಇರ್ತು .... ತುಂಬಾ ಚೊಲೊ ಬರುದ್ದೆ :)ಓದ್ತಾ ಹೋದ್ರೆ ಕಳ್ದೆ ಹೋಗ್ತಿದ್ದಿ ಅನುಸ್ತು .. ಹ್ಯಾಟ್ಸ್ ಆಫ್ :)

    ReplyDelete