Thursday, May 2, 2013

ಗೊಂಚಲು - ಏಳು x ಹತ್ತು + ಎರಡು.....

ಅರೆಜ್ಞಾನಿಯ ಒಂದಷ್ಟು ತುಂಡು ಭಾವಗಳು.....
(ದಯವಿಟ್ಟು ಇಲ್ಲಿನ ಯಾವ ಭಾವಗಳಿಗೂ ಅರ್ಥ ಕೇಳಬೇಡಿ)


ಸಾವ ಭಯ ಗೆಲ್ಲೆಂದು ಬೋಧಿಸುವಾತನನ್ನು ಸನ್ಯಾಸಿಯೆಂದು ಗೌರವಿಸಿ ಸಾಷ್ಟಾಂಗವೆರಗುತ್ತೇವೆ.
ಸಾವ ಭಯವನ್ನು ನಿಜಕ್ಕೂ ಗೆದ್ದ ಸೈನಿಕನನ್ನು ನೆನೆಸಿಕೊಳ್ಳಲೂ ಪುರುಸೊತ್ತಿಲ್ಲ.
ನಿಜವಾದ ಸನ್ಯಾಸಿ ಯಾರು..?
ಸೈನಿಕನೇ ಅಲ್ಲವೇ..??

&&&

ಅವರವರ ಆಸಕ್ತಿಯಂತೆ ಅವರವರ ಬದುಕು.
ಪ್ರತಿಯೊಬ್ಬನೂ ತನ್ನ ಆಸಕ್ತಿಗಳಿಗೆ ತಕ್ಕಂತೆ, ಅವುಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲೇ ತನ್ನ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸ್ತಾನೆ.
ಒಬ್ಬೊಬ್ಬರ ಆಸಕ್ತಿ ಒಂದೊಂದರಲ್ಲಿ.
ಹೆಣ್ಣು, ಹೊನ್ನು, ಮಣ್ಣು, ದೇವರು, ದೆವ್ವ, ರಿಕಗ್ನಿಷನ್ ಹೀಗೆ ತರಹೇವಾರಿ ಆಸಕ್ತಿಗಳು.
ಅವರವರ ಆಸಕ್ತಿಗಳ ಸುತ್ತಲೇ ಅವರವರ ಬದುಕೂ ಗಿರಕಿಹೊಡೆಯುತ್ತಿರುತ್ತದೆ.
ಒಮ್ಮೆ ಮನಕ್ಕೆ ಒಪ್ಪಿದ ವೃತ್ತದಿಂದಾಚೆ ಹೆಜ್ಜೆಯಿಡಲು ಎಲ್ಲರೂ ಹಿಂಜರಿಯುತ್ತಾರೆ.
ಯಾಕೆ.? 
ಬಾವಿಯಿಂದಾಚೆ ಇಣುಕಿದರೆ ಸಾಗರ ಕಂಡೀತು ಎಂಬ ಭಯವಾ..?

&&&

ಕನಸು ಕಲ್ಪನೆಗಳನೆಲ್ಲ ಬದಿಗೊತ್ತಿ ಕೇವಲ ವಾಸ್ತವದ, ವರ್ತಮಾನದ ಚಿಂತನೆಯನ್ನು ಮಾತ್ರ ಮಾಡುತ್ತಲಿದ್ದರೆ ಬದುಕು ಯಾಂತ್ರಿಕವಾಗುತ್ತದಷ್ಟೇ.
ಬದುಕು ಯಾಂತ್ರಿಕವಾಗುವುದಕ್ಕಿಂತ ನರಕ ಮತ್ತೊಂದಿದೆಯಾ...
ಎಲ್ಲೋ ಓದಿದ ಗಾಲಿಬ್ ರ ಮಾತು ನೆನಪಾಗುತ್ತೆ - "ಒಬ್ಬ ಬ್ರಾಹ್ಮಣ ಹೇಳಿದ್ದಾನೆ. ಈ ವರ್ಷ ತುಂಬಾ ಚೆನ್ನಾಗಿದೆ ಎಂದು. ಈ ಮನಸನ್ನು ಇದೊಂದು ವರ್ಷ ಸಂತೋಷವಾಗಿಟ್ಟುಕೊಳ್ಳಲು ಅಷ್ಟು ನೆಪ ಸಾಕು..." ಎಂಬುದು ಆ ಮಾತಿನರ್ಥ.ಅವರ ಆ ಮಾತಿನಂತೆಯೇ ಈ ಕನಸು ಕಲ್ಪನೆಗಳೆಲ್ಲ. ಅವುಗಳ ಸಾರ್ಥಕ್ಯ ಅದಷ್ಟೇ. ಮನಸನ್ನು ಆ ಕ್ಷಣಕ್ಕೆ ಖುಷಿ ಖುಷಿಯಾಗಿಡುವುದು...

&&&

ಬದುಕೆಂಬ ಮೂರು ಚರಣಗಳ ಭಾವಗೀತೆಯಲ್ಲಿ ಪಲ್ಲವಿ ಜನನವಾದರೆ - ಕೊನೆಯ ಚರಣ ಮರಣ - ನಡುವಿನ ಅನುಪಲ್ಲವಿ ಜೀವನದಂತೆ. 
ಪಲ್ಲವಿ ಮತ್ತು ಕೊನೆ ಚರಣದ ನಡುವಣ 'ಅನುಪಲ್ಲವಿಯನ್ನು' ಎಷ್ಟು ಚೆನ್ನಾಗಿ ರಚಿಸಿ ಹಾಡಬಲ್ಲೆ ಎಂಬುದು ನಮ್ಮ ಬದುಕಿನ ಯಶಸ್ಸನ್ನು ಸೂಚಿಸುತ್ತದೆ.
ಅನುಪಲ್ಲವಿಯನ್ನು ಚಂದಗೆ ರಚಿಸಿ ಹಾಡಬಲ್ಲವರಾದಾಗ ಪಲ್ಲವಿಗೂ - ಕೊನೆ ಚರಣಕ್ಕೂ ಸಾರ್ಥಕ್ಯ ಒದಗಿಸಬಲ್ಲವರಾಗುತ್ತೇವೆ...

&&&

ಎಲ್ಲೋ ಅರಳುವ ಪ್ರೇಮ - ಇನ್ನೆಲ್ಲೋ ಕರಗುವ ಕಾಮ...
ಸನ್ನಿ ಲಿಯೋನ್ ಳ ಎದೆಯ ಸಂಪತ್ತಿಗೆ ರಾತ್ರಿ ಕನಸಲ್ಲಿ ಕಾಮ ಬೆವರುತ್ತಿದ್ದರೆ, ಮುಂಜಾನೆದ್ದು ಬಾಗಿಲಾಚೆ ಕಣ್ಬಿಟ್ಟರೆ ಎದೆಯ ಸೊಬಗೇ ಇಲ್ಲದ ಪಕ್ಕದ ಮನೆ ಮಾಧುರಿ ಕಣ್ಣಲ್ಲೇ ಪ್ರೇಮದ ರಂಗೋಲಿಗೆ ಚುಕ್ಕಿಯಿಡುತ್ತಿರುತ್ತಾಳೆ..
ಬದುಕೂ ಹಾಗೇ...
ಎಲ್ಲೋ, ಹೇಗೋ, ಯಾವುದರಲ್ಲೋ ಮೂಡುವ ಪ್ರೇಮ (ಇಷ್ಟ) - ಇನ್ನೆಲ್ಲೋ, ಇನ್ಹೇಗೋ, ಈಡೇರುವ ಕಾಮ (ಇಚ್ಛೆ)...
ಸಂತೆ ನಡುವೆ ಕೈಹಿಡಿವ ಪ್ರೇಮ - ಸಂಜೆ ಏಕಾಂತದಲಿ ಕಾಮವಾಗಿ ಕೆರಳುವ ಪರಿ ಏನೋ...
ಒಣ ಹುಲ್ಲ ಬಣವೆಯಲ್ಲಿ ಕಳೆದುಕೊಂಡ ಸೂಜಿಯಂಥ ನನ್ನವಳ ಪ್ರೇಮ - ಯಾರವಳೂ ಅಲ್ಲದ ಇನ್ನೊಬ್ಬಾಕೆಯ ಬೆವರಲ್ಲಿ ಲೀನವಾಗಿ ಸಂಭ್ರಮಿಸಿತು.
ಛೆ..
ಬದುಕು - ಪ್ರೇಮ - ಕಾಮಗಳೆಲ್ಲದರ ಅರ್ಥ ವೈಶಾಲ್ಯವನ್ನು ಮೊಟಕುಗೊಳಿಸಿಬಿಟ್ಟೆನೇನೋ ಅಲ್ಲವಾ..?

&&&&&


ಯಾರದೋ ಮನಸಿಗೆ, ಇನ್ಯಾರದೋ ಬದುಕಿಗೆ ಒಲ್ಲದ ಅಥಿತಿಯಾಗಿ ಅನಿವಾರ್ಯವಾಗಿ ಬದುಕಿರಬೇಕಾದ ಪರಿಸ್ಥಿತಿ, ವಿಚಾರಶೀಲ ಮನಸ್ಸು ಮತ್ತು ದೀರ್ಘಾಯಸ್ಸು ಈ ಮೂರನ್ನೂ ಕೊಟ್ಟು ಅಲ್ಲೆಲ್ಲೋ ಕುಳಿತು ಮಜ ನೋಡುವ ಆ ದೇವರು - ಅವನಿದ್ದದ್ದೇ ಆದರೆ ಆತನ ಹಿಂಸಾ ವಿನೋದದೆಡೆಗೆ ನನ್ನ ಧಿಕ್ಕಾರವಿದೆ...

&&&&&

ದೇಹದ ಉಸಿರು ನಿಂತ ಕಾರಣಕ್ಕೆ ಕಣ್ಗಳಲ್ಲಿನ ಕನಸುಗಳೂ ಸಾಯಬೇಕೆ.
ದೃಷ್ಟಿದಾನ ಮಾಡೋಣ...
ಇನ್ಯಾರದೋ ಕನಸುಗಳಿಗೆ ಜೀವ ಬಂದು ಅಲ್ಲಿ ನಮ್ಮ ಕನಸೂ ಜೀವಂತ...

@@@

ಬಂಡೆಯ ಭಾವ ಸುತ್ತುವರಿದ ಬೆಟ್ಟಕ್ಕೆ ಮತ್ತು ಸುತ್ತ ಮೊರೆವ ನೀರಿಗೆ ಮಾತ್ರ ಅರ್ಥವಾದೀತು... ದೂರ ನಿಂತು ಸ್ವಾರ್ಥದ ಕಣ್ಣಲ್ಲಿ ನೋಡುವವರ ಮೂದಲಿಕೆಗಳ ನೋವಿಗೆಲ್ಲಾ ನಿನ್ನ ಮನ ಬಂಡೆಯಾಗಲಿ...


@@@

ತುಂಬಾ ಪ್ರೀತಿಸುವ ನಿನ್ನೊಡನೆ ಪ್ರತಿ ಬಾರಿ ಜಗಳವಾಡಿದಾಗಲೂ ಇಬ್ಬರ ಮನಸ್ಸೂ ಇಷ್ಟಿಷ್ಟೇ ಬೆತ್ತಲಾಗುತ್ತಾ ಹೋಗಿ ಬಂಧವೊಂದು ಸದ್ದಿಲ್ಲದೇ ಸಾಯುತ್ತಿರುತ್ತದೆ. ನನ್ನೊಳಗಿನ ರಾಕ್ಷಸ ವಿಜಯದ ನಗು ನಗುತ್ತಾನೆ...


&&&

ಇನ್ನೂ ಏನೋ ಬೇಕಿದೆ ಎಂಬ ತುಡಿತದಲ್ಲೇ ಬದುಕ ಈ ಕ್ಷಣ ನಗುತಿದೆ ಮತ್ತು ಆ ತುಡಿತದಲ್ಲೇ ನಗಬೇಕಿದ್ದ ಬದುಕ ಹಲ ಕ್ಷಣಗಳು ನಲುಗಿದ್ದೂ ಇದೆ...

****

ಹುಡುಗ ಹುಡುಗಿಯರೆಂಬ ಬೇಧವಿಲ್ಲದೇ ಎಲ್ಲ ಒಟ್ಟಾಗಿ ಕೂಡಿ, ಕುಣಿದು, ಕುಪ್ಪಳಿಸುವ ಸುಂದರ ಬಾಲ್ಯದ ಹುಡುಗಾಟಗಳದ್ದು ಒಂದು ತೂಕವಾದರೆ; ಹುಡುಗ ಹುಡುಗಿಯನ್ನು - ಹುಡುಗಿ ಹುಡುಗನನ್ನು ಕಣ್ಣಂಚಲ್ಲೇ ಕದ್ದು ನೋಡುವ, ಒಬ್ಬರನ್ನೊಬ್ಬರು ವಿನಾಕಾರಣ ಹುಡುಕಿಕೊಳ್ಳುವ, ಕಣ್ಣಲ್ಲೇ ನಗುವ, ಮಾತಾಡುವ, ಸಿಟ್ಟಾಗುವ ತುಂಟ ಚೆಲ್ಲಾಟಗಳ ಯೌವನದ್ದೇ ಒಂದು ತೂಕ...

####


ಭರವಸೆಯನೇನೋ ಕೊಡಬಹುದು, ಜೊತೆ ನಡೆವುದು ಸೊಗಸೂ ಹೌದು... ಆದರೆ ನಿನ್ನ ಬದುಕೆಂಬುದು ಅಂತಿಮವಾಗಿ ನೀ ಮಾತ್ರ ನಡೆಯಬೇಕಾದ ಒಬ್ಬಂಟಿ ದಾರಿ ಅನ್ನೋದು ಬದುಕ ಕಟು ವಾಸ್ತವ ಕಣೋ... ನನ್ನೊಲವಿನ ಜೀವ ನೀನು ತಾನೇ ತಾನಾಗಿ ನಡೆವುದ ಕಲೀಬೇಕೆಂಬುದು ನನ್ನಾಸೆ ಕಣೋ ಮರೀ...

&&&

ಹುಚ್ಚಮ್ಮಾ... ಹಳೆಯ ಕೊಳೆಯ ತೊಳೆದುಕೊಂಡು ಹೊಳೆಯಬೇಕೆಂದರೆ ಹೊಸ ನೀರ ಆಳದಲ್ಲಿ ಮುಳುಗೇಳಬೇಕು ಕಣೇ ಚಿನ್ನಾ... ನಿನ್ನ ಬದುಕು ಭಾವ ಎರಡೂ ವಿಸ್ತರಿಸೀತು... ಹೊಸದರೆಡೆಗೆ ನಾಕು ಹೆಜ್ಜೆ ಇಡುವ ಬಾ ಜೊತೆ ಜೊತೆಗೆ... ನಾಕು ಹೆಜ್ಜೆ ನನ್ನೊಡನೆ ಬಂದೆಯಾದರೆ ಐದನೇ ಹೆಜ್ಜೆ ನಾನಿಲ್ಲದೆಯೂ ಖುಷಿಯಿಂದಲೆ ಹೊಸದರೆಡೆಗೆ ತುಡಿವಂತೆ ಬೆಳೆದು ನಿಲ್ಲುವಿಯಂತೆ...

@@@

ಮನಸು ಎಲ್ಲೋ ಕಳೆದು ಹೋಗಿದೆ. ಸಿಕ್ಕವರು ಹಿಂದುರುಗಿಸಿ...
ಹಿಂದಿರುಗಿಸಲು ಮನಸಾಗದಿದ್ದರೆ ನಿಮ್ಮದನ್ನಾದರೂ ನಂಗೆ ಕೊಡಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

8 comments:

  1. :)ಅನುಭಾವಿಗಳ ನುಡಿಮುತ್ತುಗಳಂತೆ ಅನುಭವದ ಸವಿನುಡಿಗಳಿವು! ಚಂದವಿದೆ! ಬಂಧವಿದೆ! ಮುಂದುವರೆಯಲಿ ಮತ್ತಷ್ಟು .....

    ReplyDelete
  2. ಬಿಡಿ ಬಿಡಿ ಚಿತ್ರಗಳು ನೂರು ಭಾವಗಳು.

    ReplyDelete
  3. ಬಿ ಎಂ ಟಿ ಸಿ ಬಸ್ಸಿನ ದಿನದ ಪಾಸ್ ತೆಗೆದುಕೊಂಡು ಯಾವ ಬಸ್ಸನ್ನು ಬೇಕಾದರೂ ಹತ್ತಿಳಿದ ಭಾವ ಮೂಡಿಬಂತು. ಪ್ರತಿಯೊಂದು ತುಂಡು ತುಂಡಾದ ಎರೆಹುಳುವಿನಂತೆ. ತಾನೇ ತಾನಾಗಿ ಬೆಳೆಯಬಲ್ಲ ಶಕ್ತಿ ಪ್ರತಿಯೊಂದು ತುಂಡಿಗೂ ಇದೆ. ಸೂಪರ್ ಗೆಳೆಯ.

    ReplyDelete
  4. ಅರ್ಥಪೂರ್ಣವಾಗಿದೆ. ಪ್ರತಿಯೊಬ್ಬರು ಕೂಡಾ ಅವರವರ
    ಬದುಕಿನ ಸಾಗುವಳಿಗೆ ಬೇಕಾದ್ದಷ್ಟನ್ನ ಅವರವರ ಸಾಮರ್ಥ್ಯಕ್ಕನುಗುಣವಾಗಿ
    ಮಾತ್ರ ಪಡೆಯಲೆತ್ನಿಸುತ್ತಾರೆ... ಮತ್ತು ಅದು ವಾಸ್ತವ ಕೂಡಾ....

    ಪ್ರತಿಯೊಬ್ಬರ ಮನಸ್ಸು ತತ್ ಕ್ಷಣದ ಪ್ರಕ್ರಿಯೆಗೆ ಪ್ರತಿಕ್ರಿಯಿಸುತ್ತೆ...
    ಎಲ್ಲೋ ಧ್ಯಾನ ಪೀಠದಲ್ಲಿ ಕುಂತಾಗ ಯಾವುದೋ ಸನ್ಯಾಸಿಯೆಡೆಗೆ ಭಕ್ತಿ....
    ವೀರ ಯೋಧ ಯುದ್ಧದಲ್ಲಿ ಮಡಿದಾಗ ಅವನಿಗೊಂದು ಭಾಷ್ಪ... ಆ ಕ್ಷಣಕ್ಕೆ ಅವನೇ
    ಸರ್ವೋತ್ತಮ...

    ನಾವು ಬುದ್ದಿವಂತರು.... ನಮ್ಮ ಮನದ ಕೊಳೆಯನ್ನು ತೆಗೆಯಬೇಕು.... ಗೊತ್ತಿದೆ...
    ಆದರೆ ಇನ್ನೊಂದು ಕೊಳೆಯ ಕೆಲಸ ಆಗುವುದಿದೆ... ಅದಾದ ನಂತರವೇ ಶುದ್ಧಿಯಾಗೋಣ
    ಅಂದುಕೊಳ್ಳುತ್ತೇವೆ.... ನಮ್ಮಲ್ಲಿ ನಾವು ಶುದ್ಧಿಯಾಗೋದಿಕ್ಕೂ ಒಂದು ಕಾರಣ ಹುಡುಕಿಕೊಳ್ಳುತ್ತೇವೆ...
    ಎಲ್ಲಾ ಕೊಳೆಯ ಕೆಲಸ ಆಗಿಬಿಡಲಿ... ಕೊನೆಗೆ ಒಂದೇ ಬಾರಿ ಶುದ್ದಿಯಾಗುವ ನ್ಯಾಸ...

    ಕೊನೆಗೂ ಸಿಗೋದು ನಿನ್ನ ಎರಡನೆಯ ವಾಕ್ಯವೇ ವತ್ಸಾ...
    ಅವರವರ ಆಸಕ್ತಿಯಂತೆ ಅವರವರ ಬದುಕು.......
    .................


    ಒಳ್ಳೆಯ ಪ್ರಯತ್ನ..... ಜೈ ಹೋ......

    ReplyDelete
  5. ಶ್ರೀ... ಒಂದು.. ಎರಡು... ಮೂರು... ಹೀಗೆ ಲೆಕ್ಕವಿಟ್ಟು ಈ ಸಾಲುಗಳು ಇಷ್ಟವಾಯ್ತು.. ನನ್ನೊಳಗಿನ ನನ್ನನ್ನು ಒಂದಿಷ್ಟು ಪ್ರಶ್ನಿಸಿತು... ಕಾಡಿಸಿತು ಅನ್ನುವ ಹಾಗೆ ಇಲ್ಲ ಇಲ್ಲಿ.. ಬರೆದ ಪ್ರತಿಯೊಂದು ಶಬ್ದವೂ, ಶಬ್ದಗಳು ಕೂಡಿ ಕಟ್ಟಿದ ಸಾಲುಗಳು ಹೃದಯದಳಾಕ್ಕೆ ಇಳಿದಿದೆ.. ತುಸು ಸಮಯ ನಿನ್ನ ತುಂಡು ಭಾವಗಳ ಸುತ್ತವೇ ಮನಸ್ಸು ಇವು ನನ್ನದೇ ಎಂಬ ಭಾವದಲ್ಲಿ ಗಿರಕಿ ಹೊಡೆಸಿದೆ....

    ReplyDelete
  6. ಸುಂದರ, ಅರ್ಥಪೂರ್ಣ ಸಾಲುಗಳು ಶ್ರೀ....

    ReplyDelete
  7. ಅರ್ಥಪೂರ್ಣ ಸಾಲುಗಳು ,, ಇಷ್ಟವಾಯ್ತು

    ReplyDelete