Saturday, November 3, 2018

ಗೊಂಚಲು - ಎರಡ್ನೂರಾ ಎಪ್ಪತ್ತೊಂಭತ್ತು.....

ಅಳಿವಿಲ್ಲದ ಆತ್ಮದುಲಿಗಳು..... 

ಬುದ್ಧನ ಯರ್ರಾಬಿರ್ರಿ ಹಾಡಿ ಹೊಗಳುವ ನಾನು ಸಣ್ಣದೊಂದು ನೋವನ್ನೂ ಸ್ವಂತವಾಗಿ ಮೀರಿದ್ದಿಲ್ಲ...
ನಿತ್ಯವೂ ಹೊಸ ಹೊಸ ಮುಖದಲ್ಲಿ ತುಳಿಯ ಬರೋ ಎಲ್ಲ ಬೇಗುದಿಗಳಿಗೂ ಒಂಟಿಯಾಗಿಯೇ ಎದೆಕೊಟ್ಟು ನಿಡಿದಾಗಿ ನಗಬಲ್ಲ ಆಯಿಗೆ ಬುದ್ಧನ ಹೆಸರೂ ಗೊತ್ತಿಲ್ಲ...
ಭಗವದ್ಗೀತೆಯನೇ ವಿಮರ್ಶೆ ಮಾಡೋ ದೊಡ್ಡಸ್ತಿಕೆ ನಂದು - ಚಿತ್ತ ಭ್ರಾಂತಿಯ ತೊಳೆದುಕೊಂಡು ಯಾವ ಪ್ರೀತಿಯನೂ ಗೆದ್ದದ್ದಿಲ್ಲ...
ತನ್ನಿಷ್ಟ ದೈವ ಕೃಷ್ಣನ ಕಾಡುವ ಅಪವಾದಗಳಿಗೂ ಕಣ್ಣಹನಿಯಾಗುವ ಆಯಿ ಅವಳ ಹಾದಿಯ ತಡೆಯುವ ಎಂಥದೇ ಯುದ್ಧಕ್ಕೂ ಬೆನ್ನು ತೋರಿದ್ದಿಲ್ಲ...
ಅವಳ ಬದುಕೇ ಭಗವದ್ಗೀತೆಯ ಭಾಷ್ಯ - ಸಾಸಿವೆಯ ತರಲಾರಳು ನಿಜ, ಆದರೆ ಜೀವಕ್ಕೆ ಮೊದಲ ನಗು ಕಲಿಸಿದವಳು ಅವಳೇ; ಬುದ್ಧರಿಗೂ, ಕೃಷ್ಣರಿಗೂ...
#ಆಯೀ_ಅಂದರೆ_ಆಳ...😍#ಆಯಿ_ಅಂದರೆ_ಬೇರು...😘
^^^^

ತನ್ನ ಕಂದನ ಅಸಾಧ್ಯ ತುಂಟತನದೆಡೆಗಿನ ಆಕ್ಷೇಪಣೆಯ ಹೊತ್ತಲ್ಲೂ ಆ ಅಮ್ಮನ ಕಂಗಳಾಳದಿ ಮೆರೆವ ಗರ್ಭಸ್ಥ ಖುಷಿಯ ಪ್ರೀತಿ ದೀಪ; ಅದು ವ್ಯಾಸರ ಅಕ್ಷರ ಅಧ್ವರ್ಯಕ್ಕೂ ನಿಲುಕದ ಜಗದ ಅಮೂರ್ತ ಜೀವ ಕಾವ್ಯ...
ಯಾವ ಮಂತ್ರ, ಯಾವ ಶಬ್ದ, ಯಾವ ಮಾಂತ್ರಿಕ ಬಿಡಿಸಬಹುದು; ಬೈಗುಳಕ್ಕೂ ಕಣ್ಣ ಹನಿಯ ಭಾವ ಸ್ಪರ್ಶದ ಆ ಕರುಳ ಕರುಣೆಯ ಒಗಟನು...
#ಆಯಿಯೆಂಬೋ_ಹುಚ್ಚು_ಹುಡುಗಿ...
^^^^

.....ನಿಲ್ಲಿಸುವುದು ಎಲ್ಲಿಗೆ...??
.....ಹೊರಟದ್ದೆಲ್ಲಿಗೆ...??  ಯಾಕಂತ...!??
.....ನೆನಪು ಉಳಿದೇ ಹೋಗುತ್ತದೆ..‌‌... ಮತ್ತು ನೆನಪಷ್ಟೇ ಉಳಿಯುತ್ತದೆ.....
.....ಸವೆಸಿದ ಹಾದೀಲಿಷ್ಟು ಕಲ್ಲು ಮುಳ್ಳಿಲ್ಲದಿದ್ದರೆ, ಮೌನ ಚುಚ್ಚಿರದಿದ್ದರೆ ಗೆಲುವಿನ ವೇದಿಕೆಯಲ್ಲಿ ಮಾತು ಹುಟ್ಟುವುದು ಹೇಗೆ...
.....ಅವೆಲ್ಲದರಾಚೆಯೂ ಚಂದದೊಂದು ಬೆಳಗಿದೆ; ಬೇಲಿಸಾಲಿನ ಹೂವಿಗೂ ವಿಶೇಷ ಅಂದ ಗಂಧವಿದೆ... ಕಣ್ಣು ಮೀಯಲು - ಉಸಿರ ತುಂಬಿಕೊಳ್ಳಲು...
#ಮತ್ತೊಂದು_ದಿನ...
^^^^

ನೇಹವೇ -
ನಿನ್ನ ಕೊಟ್ಟ ಬದುಕಿಗೆ ಕೃತಜ್ಞ - ನೀ ಬಯಸದೇ ನಿನಗೆ ಕೊಟ್ಟ ಎಲ್ಲದಕ್ಕೂ ಕ್ಷಮೆಯಿರಲಿ...
ಸಾವು ಸಾರ್ವತ್ರಿಕ ಸತ್ಯವೆಂಬುದು ಸಾಮಾನ್ಯ ತಿಳುವಳಿಕೆ; ಆದರೆ ನನಗಿನ್ನೂ ದೂರವಿದೆ ಎಂಬುದು ಬದುಕಿನ ಪ್ರೇರಣೆ...
ಬದಲಾವಣೆ ಎಲ್ಲರ, ಎಲ್ಲದರ ಸಹಜ ನಿಯಮ ಎಂಬ ಸ್ಪಷ್ಟ ಅರಿವಿದೆ; ಆದರೂ ಎದುರುಗೊಳ್ಳುವಾಗ ಯಾಕಿಂತ ಯಾತನೆ...?
ವಿದಾಯದ ಘಳಿಗೆಯಲೊಮ್ಮೆ ತಿರುಗಿ ನೋಡುವಷ್ಟೂ ಸಣ್ಣ ತಳಮಳವೂ ಕರುಳ ಸೋಕದಿದ್ದರೆ ಅದು ಬದಲಾವಣೆಯ ಹಚ್ಚೆ ಗುರುತಾ...? ಭಾವದ ಸಾವಿನ ನೆರಳಲ್ಲವಾ...??
ಪ್ರತಿ ತಿರುವಲ್ಲೂ ನನ್ನದೇ ಹೆಸರಿನ ಘೋರಿಯೊಂದು ಎದ್ದು ನಿಲ್ಲುತ್ತದೆ - ಹೊಸ ಹೊಸ ಸಮರ್ಥನೆ, ಸಮಜಾಯಿಷಿ, ಸಬೂಬುಗಳ ಸಹಯೋಗದಲ್ಲಿ...
ಬದುಕನ್ನೇ ಕಳೆದುಕೊಂಡ ದಿಗಿಲಿಗಿಂತ ಆಪ್ತ ಜೀವದ ಪುಟ್ಟ ಪುಟ್ಟ ಕಕ್ಕುಲಾತಿಯ ಭಾವ ವಿನಿಮಯಗಳಿಂದ ದೂರಾದ ನೋವು ಹೆಚ್ಚು ಪ್ರಖರ ಎಂಬುದು ಈ ಹಾದೀಲಿ ಮತ್ತೆ ಮತ್ತೆ ಸಾಬೀತಾದ ಅನುಭವ...
ಬೆನ್ನಿನ ಚಿತ್ರವಷ್ಟೇ ಕಣ್ಣಿನ ದುಡಿಮೆಯಾದ ಕುರೂಪಿ ಹಾದಿ - ಖಾಲಿತನದ ಖಜಾನೆ...
#ಮತ್ತೆ_ಮತ್ತದೇ_ಮರಣ...
^^^^

ಕೇಳಿಲ್ಲಿ -
ನಿನ್ನ ನೆರಳಿದ್ದ ನಿನ್ನೆಗಳ ಎಳೆತಂದು ಎದೆಯ ಕಣ್ಣ ಸೀಳೋ ಮಳೆಯೆದುರು ಕಬೋಜಿಯಂತೆ ಪ್ರಕ್ಷುಬ್ಧನಾಗಿ ನಿಂತ ಸಂಜೆಗಳಲೆಲ್ಲ - "ಅಯ್ಯೋ ಶಿವನೇ, ಈ ರಣ ಮಳೆಗಾಲದಲ್ಲಿ ಸತ್ರೆ ಸುಡೋಕೆ ಸೌದೆ ಹೊಂದ್ಸೋದೂ ಕಷ್ಟ ಕಣೋ ನನ್ನಪ್ಪಾ; ಮುಂಗಾರೊಂದು ಕಳೆದರೆ ಸಾಕು" ಅಂತಿದ್ದ ಹಣ್ಣಣ್ಣು ಒಂಟೊಂಟಿ ಅಜ್ಜಿಯರ ಜೀವನಪ್ರೀತಿಯ ನೆನಪೊಂದು ವಿಚಿತ್ರ ಬೆರಗು...
#ಪಿಚಿಪಿಚಿ_ಅಂಗಳ...
^^^^
ಅನಂತ 💕 ಗೋದಾವರಿ 
ಕಳೆದುಕೊಂಡ ನೋವು - ಹಚ್ಚಿಟ್ಟು ಹೋದ ದೀಪ...
ನಿದ್ದೆ ಮಂಪಲ್ಲಿ ನಾನೇ ಬಿಟ್ಟದ್ದಾ ಅಥವಾ ಯಾವ ಮಾಯದಲ್ಲೋ ಬೆರಳ ಬಿಡಿಸಿಕೊಂಡು ಅವರೇ ಎದ್ದು ಹೋದದ್ದಾ - ನಡೆಸಿ ನುಡಿಸಿ ಕಾಯ್ದ, ಕನಸಿ ಹರಸಿ ಕಾಯ್ವ ಹಿರಿಯರೆಲ್ಲ ಉಳಿದದ್ದು ಇರುಳ ನೀಲಿ ಬಯಲ ನಕ್ಷತ್ರಗಳಂತೆ...
ಈಗಲೂ ಎದೆ ಕೂಗಿಗೆ ನಡಿಗೆ ನಡುಗಿದರೆ ಅವರ ಬೆನ್ಗಾವಲ ನೆರಳ ನೆನಪೊಂದು ಊರುಗೋಲು...
ನೆನಪು ಕಾಡಿದಷ್ಟೂ ಜೀವ ಜೀವಂತ...
ಈ ಬದುಕ 'ಅ ಆ ಇ ಈ'ಗಳ ಕೈ ಹಿಡಿದು ತಿದ್ದಿಸಿದ ಜೀವತಂತುಗಳು - ಅಳಿವಿಲ್ಲದ ಆತ್ಮದುಲಿಗಳು...
#ಅವಳು_ಗೋದಾವರಿ - #ಅವನು_ಅನಂತ...😍😘 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment