Thursday, December 12, 2019

ಗೊಂಚಲು - ಮೂರು ನೂರಾ ಹದ್ನೈದು.....

ಮುಗಿದಿಲ್ಲ ಇನ್ನೂ ಇಲ್ಲಿಯ ಬಡಿವಾರ..... 

ನಗುವುದಕ್ಕೂ ನಶೆಯೊಂದು ಬೇಕು - ಆ ನಶೆ ನೋವಿನದಾದರೆ ನಗೆ ಇನ್ನೂ ಚುರುಕು...
#ಹೊಸ_ರುಚಿಯ_ಕಣ್ಣೀರು...

ನನ್ನಲ್ಲಿ ನನ್ನನ್ನ ಹುಡುಕಿಕೊಂಡರೆ ನಿನ್ನನ್ನು ಪಡೆಯಬಹುದಾ ಅಥವಾ ಬೇಶರತ್ ನಿನ್ನನ್ನು ಪಡೆದರೆ ನಂಗೆ ನಾನು ಹೂಬೇಹೂಬು ಸಿಗಬಹುದಾ...
ಮನಸಿನ ಇಂಥಾ ಹುಚ್ಚು ಗೊಂದಲಗಳಿಗೆ ಪ್ರಜ್ಞೆಯ ಉತ್ತರ ಯಾವತ್ತೂ ಖಾಲಿ ನೋಟವಷ್ಟೇ...
ಹಾಗೆಂದೇ,
ನಾನೆಂದರಿಲ್ಲಿ ಹಸಿದ ಹಳೆಯ ಮುದಿ ನೋವೊಂದರ ಹಪ್ಪು ಪಿರಿ ಪಿರಿ...
#ಮುಗಿದಿಲ್ಲ_ಇನ್ನೂ_ಇಲ್ಲಿಯ_ಬಡಿವಾರ...

ಎದೆಯ ಮೇಲಣ ಗಾಯದ ನೋವು ಮಾಯಲೇ ಇಲ್ಲ...
#ನಿನ್ನ_ಗುರುತು...

ಬಗೆದರೆ ಸಾವನ್ನೇ ಬಗೆಯಬೇಕು - ಬದುಕನ್ನು ಬಗೆದರೂ ಸಿಗೋದು ಅದೇ ಅಲ್ಲವೇ...
#ಪ್ರಶ್ನಾತೀತ_ಪ್ರಶ್ನೆ...

ನೋವಿನ, ಸಾವಿನ ಜಾತಕವ ಉದ್ಘೋಷಿಸುವವನೊಬ್ಬ - ಹೋಮ ಧೂಮದಲಿ ದೇವರ ಹುಡುಕೋ ಇನ್ನೊಬ್ಬ - ಇಬ್ಬರದ್ದೂ ಕಾಲು ತೊಳೆದರೆ ಮಾತ್ರ ನಾನು ಸಾಚಾ...
ಸ್ವಂತ ಹಾದಿಯಾಸೆಯ ಹುಂಬ ನಾನು, ನನ್ನ ಕೊಂದುಕೊಂಡು ಸುಭಗನಾಗಲಾ - ಅವರ ಧಿಕ್ಕರಿಸಿ ರಕ್ಕಸನಾಗಲಾ...
#ಬಯಲಲ್ಲೂ_ಉಸಿರುಗಟ್ಟುವಂತಿದೆ...
#ಹರಸುವುದಾದರೆ_ಸಾವನ್ನೇ_ಹರಸಿ..‌.
↨↤↥↦↨

#ಪ್ರವಚನ...

*ಶಾಶ್ವತತೆಯ ಅಮಲಿಳಿದ ಮೇಲೆಯೇ ಬದುಕಿನ ಈ ಕ್ಷಣದ ರುಚಿ ಸಿಕ್ಕಿವುದು...

**ಪೂರಾ ಪೂರಾ ಖಾಲಿಯಾಗುವುದೊಂದೇ ಪರಿಹಾರ - ಹೇಗೆಂಬುದನ್ನು ನಿಮ್ಮಲ್ಲಿ ನೀವೇ ಕಂಡುಕೊಳ್ಳಿ...

***ಯಾರನ್ನೂ ಹುಡುಕಬೇಡಿ ನಿಮಗೆ ನೀವೂ ಸಿಗ್ಲಿಕ್ಕಿಲ್ಲ...

****ನನ್ನ ನಾ ಹುಡುಕುತ್ತಿದ್ದೆ, ಪಕ್ಕನೆ ದೇವರು ಸಿಕ್ಕಿಬಿಟ್ಟ - ಇಲ್ಲೇ ರಕ್ಕಸ ಪ್ರೀತಿಯ ಹಾಡಿಯಲ್ಲಿ...
↨↤↥↦↨

ನಾ ಹೇಳಿದ್ದನ್ನು ಮರೆತಷ್ಟು ಸುಲಭ ನಿನ್ನಿಂದ ಕೇಳಿಸಿಕೊಂಡದ್ದನ್ನು ಮರೆಯಲಾಗುವುದೇ ಇಲ್ಲ...!!!
#ಮಾತು...
↨↤↥↦↨

ಹಾರು ಹಕ್ಕಿಯ ರೆಕ್ಕೆ ಬಂಧಿಸಿ ಮನೆಯಂಗಳದ ಮೂಲೆ ಅಂದವೆನ್ನುವಾಗ ಹುಟ್ಟದ ಪಾಪಪ್ರಜ್ಞೆ, ಸುಳ್ಳೇ ತಂದು ತಂದು ಒಟ್ಟಿ ಕಪಾಟು ತುಂಬಿಸಿಟ್ಟ ರಂಪ ರಾಮಾಯಣದ ಪುಸ್ತಕಗಳ ಮಗ್ಗುಲಲಿನ್ನೂ ಅಲೆದಿಲ್ಲ ಎಂಬುದು ನೆನಪಾದಾಗ ಕಾಡುತ್ತೆ...!!!
#ದೊಡ್ಡಸ್ತಿಕೆ...
↨↤↥↦↨

ಊಟದಲ್ಲಿ ಸಿಕ್ಕ ಕಲ್ಲು ಹಲ್ಲು ಮುರಿಯದೇ ಹೋದರೂ ರುಚಿಯ ಆಸ್ವಾದಕ್ಕೆ ಬಾಧೆಯಂತೂ ಹೌದೇ ಹೌದು...
ಅಂತೆಯೇ,
ಮನದ ಆಪ್ತತೆಗೊಂದು ಪ್ರಜ್ಞಾಪೂರ್ವಕ ಬೇಲಿ - ನಡುವೆ ತೊಡುವ ಅನಗತ್ಯ ಔಪಚಾರಿಕತೆ...
#ನೇಹ_ಮತ್ತು.........
↨↤↥↦↨

ಕರುಳಿಗೆ ಪ್ರೀತಿಯೊಂದೇ ಮಾಪಕ - ಹಾಗೆಂದೇ ಕರುಳು ಮಾತು ಮರೆತು ಕೂತಿದೆ...
ನಾಲಿಗೆಗೆ ತನ್ನ ಹಿತ ಮತ್ತು ಗೆಲುವೊಂದೇ ಸಾಧನೆ - ಹಾಗಾಗಿಯೇ, ಸುಳ್ಳಲ್ಲ ಖರೆಯಲ್ಲ ಎಂಬಂತೆ ಸಮಯಾ ಸಮಯಕ್ಕೆ ಗಂಟಲ ಮೇಲಿನ ಮಾತಿಗೆ ನೂರು ಬಣ್ಣ...
ಕರುಳಾಳದಿಂದ ದನಿ ಬಿರಿದು ಕೂಗಬಾರದೇ ಒಳಗಿನ ಸತ್ಯವನ್ನೇ; ಕಹಿಯಾದರೂ ಕರುಳ ಸ್ಪರ್ಶದಲಿ ನಾಲಿಗೆ ಮಿಡಿದರೆ ಹೆಸರಿಲ್ಲದ ಭಾವಾನುಸಂಧಾನಕೆ ಹಿಡಿ ಉಸಿರು ಸಿಕ್ಕೀತು - ಬಂಧವೊಂದು ಹುಟ್ಟಿನ ಹಸಿ ಪ್ರೀತಿಯ ಘಮದೊಂದಿಗೇನೆ ಕಾಲಕೂ ಉಳಿದೀತು...
#ನೇಹ_ಪ್ರೀತಿ_ಇತ್ಯಾದಿ...
↨↤↥↦↨

ಕಳೆದು ಹೋದರು ಅನ್ನಿಸಿ ನೋವಾಯ್ತು...
ನೆನಪಾಗಿ ಉಳಿದು ಹೋದರು ಅನ್ಕೊಂಡೆ - ಸಣ್ಣ ಸಮಾಧಾನ ಈಗ...

ಪ್ರೀತಿ ಸಾಯುವುದಿಲ್ಲ ಅಂದರು - ಸೂತಕ ಕಳೆದುಕೊಂಡೆ...

ಭಾವ ಸ್ಖಲನಕ್ಕೆ ಕಾಲನೂ ಬೇಲಿಯಾಗಲಾರನೇನೋ...
ಹುಡಿ ಹುಡಿ ಭಾವಗಳ ಅಕ್ಷಯಾಂಬುಧಿ ಈ ಮನಸಿನ ನಡೆಯ ಪ್ರಶ್ನಿಸಲೆಂತು...
#ಸೋತ_ಕಥೆಗಳೇ_ಎಲ್ಲ...
↨↤↥↦↨

ಅಷ್ಟೆಲ್ಲ ಆಗಿಯೂ ಕೊನೇಲಿ ನಮ್ಗೆ ನೆನಪಲ್ಲುಳಿಯೋದು 'ನಾವು ಕೊಟ್ಟ', ಯಾವ್ಯಾವುದೋ ಕಾರಣಕ್ಕೆ "ನಾವು ಕೊಟ್ಟ" ಪ್ರೀತಿ ಒಂದೇ...
#ನಾನು...
↨↤↥↦↨

ಹಾದಿ ಹೇಳಿದ ಪಾಠ: ಒಳಗಿಳಿದು ನೋಡು - ಮುಳುಗಿದಷ್ಟು ಆಳ; ಹೊರ ನಿಂತು ಆಲಿಸು - ತೇಲಿದಷ್ಟು ವಿಸ್ತಾರ...
ಆದ್ರೆ -
ಸ್ವಾನುಭವದಿಂದಲೂ ಪಾಠ ಕಲಿಯಲೊಲ್ಲದವರೆದುರು ಬದುಕೂ ಸೋಲುತ್ತದೇನೋ ಶಿಕ್ಷಕನಾಗಿ...
ಶಿಕ್ಷೆಗೂ ಬಗ್ಗದ ಖಡ್ಡ ನಾನು...
....... ಅದಷ್ಟೇ ಸತ್ಯ, ಉಳಿದದ್ದೆಲ್ಲ ಬರೀ ಪೊಳ್ಳು ಸಮಾಧಾನಗಳಷ್ಟೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment