Tuesday, September 3, 2013

ಗೊಂಚಲು - ಎಂಬತ್ತು ಮತ್ತು ಮೂರು.....

ಮತ್ತೊಂದಿಷ್ಟು ತುಂಡು ಭಾವಗಳು.....


ಪಾಪಪ್ರಜ್ಞೆಯ ನಿಟ್ಟುಸಿರು: 
ಗೆಳೆಯಾ –
ನೋವಲ್ಲೂ - ನಗುವಲ್ಲೂ ಮೊದಲು ನೆನಪಾಗೋದು ನೀನು; ಅದಕೆಂದೇ ನನ್ನ ನೋವುಗಳ ನಿನ್ನಲ್ಲಿ ಕೊನೇಲಿ ಹಂಚಿಕೊಳ್ತೇನೆ; ಹೆಚ್ಚಿನ ಸಲ ನನ್ನೊಳಗೇ ಬಚ್ಚಿಟ್ಟುಕೊಳ್ತೇನೆ...
ಕಾರಣ ಇಷ್ಟೇ –
ನನ್ನ ನೋವುಗಳಿಂದ ನೀನು ನೋಯಬಾರದು...
ಹಾಗಂದುಕೊಂಡು ನೋವ ನುಂಗಿ ನಗುವ ತೋರುವ ಮತ್ತು ಅದೇ ಹೊತ್ತಿಗೆ ನಂದ್ಯಾವುದೋ ಮಾಮೂಲಿ ನೋವಿಗೆ ಕಣ್ಣೀರಾಗಿ ಸಾಂತ್ವನದ ಮದ್ದಾಗುವ ನಿನ್ನ ಮನದ ಹಿರಿತನದೆದುರು ಗೆಳತೀ ನಾನೆಷ್ಟು ಕುಬ್ಜ ಅಲ್ಲವಾ...:(

ಚಂದ್ರ - ತಾರೆ - ನೀಲಿ:
ತುಂತುರಾಗಿ ಸುರಿದು ಖಾಲಿಯಾಗಿ - ನಿಚ್ಚಳ ನೀಲಿಯಾದ ಬಾನ ಬಯಲಲ್ಲಿ ಚಂದಮ ತಾ ನಗುತಿರುವ ತಾರೆಗಳೊಡಗೂಡಿ - ಎನ್ನೀ ಮನವ ಮರಳು ಮಾಡಿ...
ನಿನ್ನೊಲವ ನೆನಪ ಮೋಡಿ ಜತೆಗೂಡಿದ ಈ ಇರುಳಿಗೆಂಥ ಸೊಬಗು...

ನಗು:

ಚಂದಿರ ಎಂದಿಗಿಂತ ಜಾಸ್ತಿ ನಗ್ತಾ ಇದಾನೆ...
ನನ್ನಹಂಕಾರದ ಕೋಟೆ ಮುರಿದದ್ದು ಕಂಡು ಖುಷಿಯಾಗ್ತಿದೆಯೇನೋ ಪಾಪಿಗೆ...
ನಾನೂನು ನಗುತಿದ್ದೇನೆ...
ನಗುವುದ ಬಿಟ್ಟು ಬೇರೇನೂ ಮಾಡಲಾಗದ್ದಕ್ಕೆ...

ರಾತ್ರಿ ಹಾಡು:

ಕಣ್ರೆಪ್ಪೆ ಸೆಳೆಯುತಿದೆ ಕತ್ತಲೆಡೆಗೆ ಹರುಷದಲಿ...
ಸಣ್ಣಗೆ ಗುನುಗಿದಂತಿದೆ ಅಲ್ಲಿ - ನಿದಿರಮ್ಮನ ಊರಲ್ಲಿ
ಹೊಸ ಕನಸಿನ ಸುವ್ವಾಲಿ...

ಕೃಷ್ಣ ಸನ್ನಿಧಿ:

ಹಿಡಿಯಷ್ಟು ಸಿಕ್ಕಿ - ಬೆಟ್ಟದಷ್ಟು ಕಾಡಿ...
ಇಷ್ಟ ಕಷ್ಟಗಳಲೆಲ್ಲ ಜೊತೆಯಾಗಿ
ಗುಟ್ಟಾಗಿ ಮನದಲ್ಲೇ ಗಟ್ಟಿಯಾಗುವ ಭಾವ ಕೃಷ್ಣ...
ಸದಾ ಕೊಳಲಿನ ಉಯಿಲಂತೆ - ಬೇಕೆಂದಾಗ ಪಾಂಚಜನ್ಯದ ಹುಯಿಲಂತೆ ಜತೆಗಿರಲು ಎಲ್ಲರಿಗೂ ಕೃಷ್ಣನಂಥಹ ಗೆಳೆಯನೊಬ್ಬ ದಕ್ಕಲಿ...
ಬಾಹ್ಯಕ್ಕೆ ದಕ್ಕದಿರೆ ಅಂತರಂಗಕ್ಕಾದರೂ...

ಅರಿವಿನಲೆ:

ಬರಹಗಾರರ ಪ್ರೀತಿಸುವುದರಿಂದ ಆಚೆಬಂದು ಕೇವಲ ಬರಹಗಳ ಮಾತ್ರ ಆರಾಧಿಸುವುದ ಕಲಿತಂದಿನಿಂದ ನನ್ನೊಳಗು ಇನ್ನಷ್ಟು ತೆರೆದುಕೊಂಡು; ನನ್ನ ಅರಿವಿನ ಪರಿಧಿ ಇಷ್ಟಿಷ್ಟಾಗಿ ಹಿಗ್ಗುತ್ತಿರುವುದರ ಅರಿವಾಗಿ ಮನಸಿಗೀಗೀಗ ಅರಳುವಿಕೆಯ ಹಿಗ್ಗು...
ಆ ಹಿಗ್ಗಿನಿಂದ ನನ್ನ ಮೇಲೆ ನನಗೇ ಇನ್ನಷ್ಟು ಪ್ರೀತಿಯಾಗುತ್ತಿದೆ...:)


ವಿದ್ಯೆಯ ಕೊಲೆ – ಶಿಕ್ಷಣವೆಂಬ ವ್ಯಾಪಾರ:
ಸಂದಿಗೊಂದಿಗಳಲೊಂದೊಂದು ರಂಗುರಂಗಿನ ಬಣ್ಣಗಳಲಿ ನಳನಳಿಸೋ, ಹೆಸರಲೇ ಹಣದ ವಾಸನೆ ಹೊಂದಿರೋ, ಅಂತರರಾಷ್ಟ್ರೀಯ ಮುದ್ರೆ ಹೊತ್ತಿರೋ ಭವ್ಯ ಪಂಜರಗಳಿವೆ ಇಲ್ಲಿ...
ಅಲ್ಲಿ ಆ ಪಂಜರಗಳ ಬಾಗಿಲಲ್ಲಿ ಈ ನೆಲದ ಗಂಧವಿಲ್ಲದ ಭಾಷೆಯ ಠುಸ್ಸು ಪುಸ್ಸು ಮಾತುಗಳಿಂದ, ಜೀವಸೆಲೆ ಇಲ್ಲದ – ಭಾವಸೆಲೆ ಉಕ್ಕಿಸದ ಹೆಪ್ಪಿಡೆಂಟ್ ನಗುವಿಂದ, ವಿನಾಕಾರಣ ಬಾಗಿ ಬಳುಕಿ ವಿಧ ವಿಧದ ಪ್ರಾಣಿಗಳ ಸೆಳೆಯುವ (ಅಲ್ಲಲ್ಲ ಆ ಪ್ರಾಣಿಗಳ ಖಿಸೆಯೊಳಗಣ ನೋಟುಗಳ ಸೆಳೆಯುವ) ರಿಂಗ್ ಮಾಸ್ಟರ್‌ಗಳಿದ್ದಾರೆ...
ಅವರ ಕೈಯಲ್ಲಿ ಅನುಶಾಸನದ ಹಂಗಿಲ್ಲದ ಶಿಸ್ತೆಂಬ ಹೆಸರಿನ ಬಾರುಕೋಲೂ ಇದೆ...
ಜೀವಿಸೋ ಆನಂದವ ಮರೆತು ಸುಖದ ಅಮಲಲ್ಲಿ ಕೊಳೆತ ಭಾವಗಳಲ್ಲಿ ಯಂತ್ರಗಳೆದುರು ಯಂತ್ರಗಳಾಗಿ ದುಡಿ ದುಡಿದು ಹೊಟ್ಟೆಯಷ್ಟೇ ಜೇಬನ್ನೂ ಉಬ್ಬಿಸಿಕೊಂಡು ಬರೋ ಮೂವತ್ತಕ್ಕೇ ಮುದುಕರಾದ ಅಪ್ಪಂದಿರು...
ಸೌಂದರ್ಯವೆಂದರೆ ಲಿಪ್‌ಸ್ಟಿಕ್ಕು, ಪೌಡರ‍್ರು ಮತ್ತು ತುಂಡುಬಟ್ಟೆ ಅಂದುಕೊಂಡಿರೋ; ಬೆತ್ತಲೆ ಬಂದಿದ್ದರೇ ಇನ್ನೂ ಸಹ್ಯವಾಗಿರುತ್ತಿತ್ತೇನೋ ಅನ್ನಿಸುವಂತೆ ಸಿಂಗರಿಸಿಕೊಂಡು ಬರೋ ದಸರಾ ಮೆರವಣಿಗೆಯ ಆನೆಗಳಂಥ ಅಮ್ಮಂದಿರು (ಅಲ್ಲಲ್ಲಿ ಬೋರೇಗೌಡನ ಬಡ ಎತ್ತಿನಂಥ ಝೀರೋ ಸೈಜುಗಳೂ ಇರುತ್ತವೆ)...
ನಿದ್ದೆಗಣ್ಣಲ್ಲಿ ಕಣ್ಣಿರಿಡುವ ತಮ್ಮ ಹಸುಕಂದಗಳನು ಅಂಥ ಆ ಸ್ಕೂಲುಗಳೆಂಬ ಪಂಜರಕ್ಕೆ ಎಳೆತಂದು ಗೇಟಿನೊಳಗೆ ನೂಕಿ, ಒಂದು ದಿನದ ಕಷ್ಟ ಕಳೆಯಿತೆಂಬ ನಿಟ್ಟುಸಿರೊಂದಿಗೆ ತಮ್ಮ ಮಹಲುಗಳಿಗೆ (ಅದೂ ಮತ್ತೊಂದು ಪಂಜರದಂತೆಯೇ ಇರುತ್ತೆ ಇಲ್ಲಿ)  ಹಿಂತಿರುಗುವುದ ನೋಡಿದಾಗಲೆಲ್ಲ ಶಿಕ್ಷಣದ ಹೆಸರಲ್ಲಿ ನಾವು ಎಂಥ ನಾಳೆಗಳ ಸೃಷ್ಟಿಸುತ್ತಿದ್ದೇವಪ್ಪಾ ಅಂತ ದಿಗಿಲಾಗುತ್ತದೆ...

** ಇಷ್ಟೆಲ್ಲ ಹೇಳಿದ ನಾನೂ ಇಂಥದೇ ಒಂದು ಪಂಜರದ ಕೂಲಿಯಾಳುಗಳಲ್ಲಿ ಒಬ್ಬ ಎಂಬುದು ನಿಮಗೆ ಹೇಳಲೇಬೇಕಾದ ಸತ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

3 comments:

  1. ಹಿಗ್ಗುತ್ತಿರುವುದರ ಅರಿವಾಗಿ ಮನಸಿಗೀಗೀಗ ಅರಳುವಿಕೆಯ ಹಿಗ್ಗು... ultimate :)

    ReplyDelete