Monday, February 17, 2014

ಗೊಂಚಲು - ಒಂದು ಸೊನ್ನೆ ಒಂಬತ್ತು.....

ನನಗೇ ಅರ್ಥವಾಗದೆ ಹೋದದ್ದು.....

ಸಾವಿರ ಮಾತುಗಳ ನಡುವೆಯೂ ತಿರುಳಿಲ್ಲದ ಹೀನ ಒಂಟಿ ಪೈಶಾಚ ಮೌನವೊಂದು ರಾತ್ರಿಗಳ ನಿದ್ದೆಯ ಕತ್ತು ಹಿಸುಕುತ್ತಿದೆ...
ಬಲವಂತವಾಗಿ ಮುಚ್ಚಿದ ರೆಪ್ಪೆಗಳಡಿಯಲ್ಲಿ ಕನಸುಗಳ ಹೆಣಗಳ ಬಯಲಾಟ...
ಆದರೂ ರಾತ್ರಿ ಮುಗಿಯಲೇ ಬಾರದೆನಿಸುತ್ತೆ – ಮುಚ್ಚಿದ ಕಣ್ಣು ತೆರೆಯಲೇ ಬಾರದು...
ಕಾರಣ – ಹಗಲಲೂ ಈ ಮೌನವ ಸಹಿಸಲಾಗದೆಂಬ ಮತ್ತು ಹೆಣಗಳ ರಾಶಿಯ ಬೆಳಕಲ್ಲಿ ನೋಡಲಾರೆನೆಂಬ ಮನದ ಕಂಗಾಲು...
ನಿಜಕ್ಕೂ ಈ ಬದುಕ ದಾರಿ ತುಂಬ ದೀರ್ಘವಾಯಿತೆನಿಸುತ್ತದೆ ಆಗೀಗ...

***

ಸೋತ ರಟ್ಟೆಗಳಲಿ ಹುಟ್ಟು ನಡುಗುತಿದೆ...
ಇನ್ನೆಷ್ಟು ಸುಳಿಗಳ ಹಾಯಬೇಕೋ ಬದುಕ ನಾವೆ ದಡ ಸೇರಲು...
ಕನಸ ಹುಟ್ಟು ಕೈಜಾರಿದರೆ ನಾವೆ ದಿಕ್ಕು ತಪ್ಪೋದು ದಿಟ...
ಸೋತ ಬಲಗೈಗೆ ಮುರಿದ ಎಡಗೈಯ ಆಸರೆ ನೀಡಿ, ಇಲ್ಲದ ಕನಸನು ಇದೆಯೆಂದು ಮನಸ ನಂಬಿಸಿ ತೇಲಲು ಹೆಣಗುತ್ತಿದ್ದೇನೆ... 
ನಾವೆ ಮಗುಚಿದರೆ ಬದುಕು ಜಲಸಮಾಧಿ – ನಂಗೆ ಈಜು ಬಾರದು...
ಆದರೂ –
ನಾಳೆ ಮುಳುಗುವ ಭಯಕಿಂತ ಇಂದೇ ಉಸಿರುಗಟ್ಟುವುದು ಲೇಸೇನೋ...

***

ಬುದ್ಧಿ ಎಷ್ಟೇ ವಾದಗಳ ಹೂಡಿದರೂ,
ಮನಸು ಅದೆಷ್ಟೇ ಸಬೂಬುಗಳ ಕಲೆ ಹಾಕಿದರೂ,
ನನ್ನ ಒಂದೇ ಒಂದು ತಪ್ಪು ನಡವಳಿಕೆಯನೂ, ನೋವನುಣಿಸಿದ ಕ್ರೌರ್ಯವನ್ನೂ ಸರಿಯೆಂದು ಸಾಬೀತುಗೊಳಿಸಲಾಗದು
ನನ್ನಂತರಾತ್ಮನ ನ್ಯಾಯಾಲಯದಲ್ಲಿ...
ಪಾಪಪ್ರಜ್ಞೆ ಸಾವಿಗಿಂತ ದೊಡ್ಡ ಶಿಕ್ಷೆ...

***

ಗೆಳತೀ -
ಕನಸುಗಳು ಸತ್ತಷ್ಟು ಸುಲಭಕ್ಕೆ ಕೆಲ ನೆನಪುಗಳೇಕೆ ಸಾಯಲಾರವೋ...
ಕನಸುಗಳ ಜತೆ ಜತೆಗೆ ಒಂದಿಷ್ಟು ಕೆಟ್ಟ ನೆನಪುಗಳೂ ಸಾಯುತ್ತಿದ್ದರೆ ಇನ್ನಷ್ಟು ನಿರಾಳವಾಗಿ ಉಸಿರಾಡಬಹುದದಿತ್ತೇನೋ ಅನ್ನಿಸುತ್ತೆ...
ಹಿಂಡುವ ನೆನಪುಗಳ ಹೂಳಿನಿಂದಾಚೆ ಬಂದು ಕೊಳೆ ತೊಳಕೊಂಡು ಹಗುರಾಗಬೇಕಿದೆ...
ಹಾಗೆ ಹಗುರಾಗಬೇಕೆಂದರೆ ನಿನ್ನಂತ ಆತ್ಮಬಂಧುಗಳೊಂದಿಗೂ ತುಂಬ ತುಂಬ ಜಗಳವಾಡಬೇಕು...
ಆದರೆ –
ನಿನ್ನೆಡೆಗೆ ನನ್ನ ಮನದ ಹುಚ್ಚು ನಿರೀಕ್ಷೆಗಳು ಹೆತ್ತ ತಪ್ಪು ಮತ್ತು ನೋವುಗಳಿಗಾಗಿ ನಿನ್ನಂಥ ಯಾರ್ಯಾರೆಲ್ಲರೊಂದಿಗೆ ಎಷ್ಟೂಂತ ಜಗಳವಾಡಲಿ...
ನನ್ನದೇ ಪ್ರಜ್ಞೆ ನನ್ನ ಮನವ ಅಣಕಿಸುವಾಗ ನಿನ್ನ ತಪ್ಪುಗಳ (?) ಅದ್ಹೇಗೆ ಎತ್ತಿ ಆಡಲಿ...

***

ತೊರೆದ ಆ ಊರಿಂದ ಪೊರೆಯುತಿರುವ ಈ ಊರವರೆಗೆ ಸಾಗಿ ಬಂದ ಆ ಖಾಲಿ ದಾರಿಯ ಧೂಳ ಕಣಗಳ ನಡುವೆ ಬಿದ್ದು ಹೊರಳಾಡುತಿರುವ ನನ್ನ ಕನಸುಗಳನೆಲ್ಲಾ ಮತ್ತೆ ಎತ್ತಿ ಮನದ ಖಜಾನೆಗೆ ತುಂಬಿಕೊಳ್ಳುವಂತಿದ್ದಿದ್ದರೆ.............

***

ಇಲ್ಲೊಂದಷ್ಟು ಸದ್ದಿಲ್ಲದೆ ಕೊಲೆಯಾಗುವವುಗಳನ್ನೂ, ಇನ್ನೆಲ್ಲೋ ಒಂದು ಮಾತಾಗಿ ಬೆರಳ ತಾಕುವುದನ್ನೂ – ಎರಡನ್ನೂ ಒಂದೇ ಆತಂಕದಿಂದ ನೋಡುತ್ತಿದ್ದೇನೆ...
ನಿರ್ಲಿಪ್ತನಾಗಿ ನೋಡುತ್ತಿರಬಹುದಾದದ್ದಷ್ಟೇ ಇಂದೀಗ ನಾ ಮಾಡಬಹುದಾದದ್ದು ಅನ್ನಿಸುತ್ತೆ...
ನಗಲಾದರೆ ನಗಬಹುದಷ್ಟೇ...
ಹೊಸದರ ಹುಟ್ಟು ಭಯವನ್ನೂ, ಆಪ್ತವಾದದ್ದರ (?) ಸಾವು ಬೆರಗನ್ನೂ ಮೂಡಿಸಿದರೆ ಅದು ನನ್ನದೇ ಮನಸಿನ ವೈಕಲ್ಯವಲ್ಲವಾ...
ಬೆಳಕಿಗಿಂತ ಕತ್ತಲೆಯೆ ಸಹನೀಯ ಈಗೀಗ...
ನಿರ್ಲಿಪ್ತತೆ ವರವೋ, ಶಾಪವೋ ಎಂಬುದನ್ನು ಕಾಲವೇ ಹೇಳಬೇಕು...
ಕಾಯುತ್ತ ಕೂತಿದ್ದೇನೆ ಸಹಜ ನಗುವಿಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

8 comments:

  1. ಚೆನ್ನಾಗಿವೆ ಎಲ್ಲವೂ... ಕನಸು ಭಯ ಭಾವನೆ ಎಲ್ಲವೂ ವ್ಯಕ್ತವಾಗಿವೆ. ಕೆಲವು ನೆನಪುಗಳು ಮರೆವಿಗೆ ಸರಿಯುವುದೇ ಇಲ್ಲ ಕಾಡುತ್ತಲೂ ಇರುತ್ತವೆ ಕೆಲವು ಖುಷಿಯನ್ನೂ ನೀಡುತ್ತಲಿರುತ್ತವೆ.

    ReplyDelete
  2. "ಸರಿಯೆಂದು ಸಾಬೀತುಗೊಳಿಸಲಾಗದು
    ನನ್ನಂತರಾತ್ಮನ ನ್ಯಾಯಾಲಯದಲ್ಲಿ...
    ಪಾಪಪ್ರಜ್ಞೆ ಸಾವಿಗಿಂತ ದೊಡ್ಡ ಶಿಕ್ಷೆ..."

    ಈ ಸಾಲುಗಳು ಒಮ್ಮೊಮ್ಮೆ ನನ್ನನ್ನು ಕಾಡುವುದಿದೆ.......!

    ReplyDelete
  3. Very nice lines... "ನನ್ನಂತರಾತ್ಮನ ನ್ಯಾಯಾಲಯದಲ್ಲಿ...
    ಪಾಪಪ್ರಜ್ಞೆ ಸಾವಿಗಿಂತ ದೊಡ್ಡ ಶಿಕ್ಷೆ..." - Superb!

    ReplyDelete
  4. ಬೇಡದ ಭಾವಗಳೇ ಒಮ್ಮೆ ಮತ್ತೊಮ್ಮೆ ಮಲಗಿದ್ದವನ
    ಮನ ಹತ್ತಿ ಕುಣಿದು ತುಳಿದು ಉಸಿರುಗಟ್ಟಿಸುತ್ತೆ.....
    ಮನಸ್ಸಿಗೆ ಮತ್ತದೇ ಸತ್ತ ಹೆಣಗಳ ಮಾಲೆಯೇ ಶೃಂಗಾರವೋ ಎನ್ನುವಂತೆ...
    ಮನಸ್ಸಿಗೆ ಕಾಡಿಸಿಕೊಳ್ಳಲು ಇಷ್ಟು ಸಾಕು....
    ಆದರೆ ಇಷ್ಟಕ್ಕೇ ಕಾಡಿಸಿಕೊಳ್ಳುವಷ್ಟರ ಮಟ್ಟಿಗೆ ನಮ್ಮ ಮನಸ್ಸನ್ನು ಸಡಿಲಗೊಳಿಸಬಾರದಲ್ಲಾ....!!!

    "ಸೋತ ಬಲಗೈಗೆ ಮುರಿದ ಎಡಗೈಯ ಆಸರೆ ನೀಡಿ, ಇಲ್ಲದ ಕನಸನು ಇದೆಯೆಂದು ಮನಸ ನಂಬಿಸಿ ತೇಲಲು ಹೆಣಗುತ್ತಿದ್ದೇನೆ"

    ::-- ನಮ್ಮ ಕಲ್ಪನೆಗಳು ನಮ್ಮನ್ನು ಮತ್ತಷ್ಟು ಇನ್ನಷ್ಟು ಕುಬ್ಜರನ್ನಾಗಿ ಮಾಡುತ್ವೆ.....

    {{{{{{{{{{{{{{{{ ಬರಹ ಚನ್ನಾಗಿದೆ........}}}}}}}}}}}}}}}}}}}}}

    ReplyDelete
    Replies
    1. ಭಾವದ ಬಗೆಗೆ ಬರಹದ ಬಗೆಗೆ ಪದಗಳ ಬಗೆಗೆ ಮಾತಿಲ್ಲ ನನ್ನಲ್ಲಿ.
      ಎಂದಿನಂತೇ ಭಾವೋದ್ವೇಗದಲ್ಲಿಯೇ ಇವೆಯೇನು ಅವು.

      ರಾಘವಣ್ಣಾ,
      ಯಾಕೋ ನಿಮ್ಮ ಕಾಮೆಂಟ್ ಗಳೆಲ್ಲವೂ ನನ್ನಲ್ಲೇನೋ ಮೋಡಿ ಮಾಡುತ್ತೆ...ಇಷ್ಟ,ಆಪ್ತ,ಸಮಾಧಾನ ಎಲ್ಲವೂ ಆಯ್ತು ಇದ ನೋಡಿ :)

      ಬರೀತಿರಿ....ಕಾಮೆಂಟಿಸ್ತಿರಿ

      Delete
  5. ಈ ಸಂಗ್ರಹ ಭಾವೋತ್ಕರ್ಷದ ಗ್ರಂಥಾಲಯ.

    ReplyDelete