Monday, June 8, 2015

ಗೊಂಚಲು - ನೂರಾ ಐವತ್ತೊಂಬತ್ತು.....

ಹೀಗೆಲ್ಲ ಅನ್ನಿಸುವಾಗ.....
(ನನ್ನ ನೆನಪೇ ನನ್ನ ಕನಸ ಕೊಲ್ಲುವಾಗ...)

ಖುಷಿಗಳೆಲ್ಲಾ ಅಲ್ಪಾಯುಷಿಗಳೇ...!!!
ಯಾರೋ ಹರಸಿಬಿಟ್ಟಂತಿದೆ ನೋವಿಗೆ : ದೀರ್ಘಾಯುಷ್ಮಾನ್ ಭವ...!!!
***
ಹೇ ಸಂಜೆ ಮಳೆಯೇ -
ಭೋರ್ಗರೆದುಬಿಡು ಒಮ್ಮೆ ; ಸಾವಿಲ್ಲದ ನೆನಪುಗಳು, ಎಂದೂ ತೀರದ ಸಾವಿರ ಬಣ್ಣದ ಆಸೆಗಳು, ಬದ್ಧತೆ ಇಲ್ಲದ ಮನಸು ಹುಟ್ಟು ಹಾಕೋ ತೆವಲುಗಳೆಲ್ಲ ಕೊಚ್ಚಿ ಹೋಗಬೇಕಿದೆ ನಿನ್ನೊಡನೆ...
ಜನ್ಮದೊಡನೆ ನಂಟು ಬೆಸೆಯೋ ವಿಕಾರಗಳ ವೀರ್ಯಕ್ಕೆ ಹುಟ್ಟೋ ಒಂದಿಷ್ಟು ಕನಸುಗಳನೂ ಸಾಯಿಸಬೇಕಿದೆ ನಿನ್ನ ಸಾಂಗತ್ಯದಲ್ಲಿ...
ಹಳೆಯ ದಾರಿಗಳನೆಲ್ಲ ಅಳಿಸಿ ಬದುಕ ಸಾರೋಟಿಗೆ ಹೊಸ ಹಾದಿಯ ತೋರಬೇಕಿದೆ...
***
ಹೇ ಸಾವೆಂಬೋ ಮಹಾ ಗುರುವೇ -
ನಿನ್ನಷ್ಟು ಪರಮ ಶ್ರದ್ಧೆಯಿಂದ ಬದುಕಿನ ಪಾಠ ಹೇಳುವ ಮತ್ತೊಬ್ಬನಿಲ್ಲ ಕಣೋ...
ಗುರು ದಕ್ಷಿಣೆಯ ಹರಿವಾಣದಲ್ಲಿ ಉಸಿರಿನೊಂದಿಗೆ ನನ್ನ ಗಳಿಕೆಯ ಒಂದಿಷ್ಟು ನಗೆಯನೂ ಇಟ್ಟು ಕೊಡುವಾಗ ಸುಳ್ಳೇ ಆದರೂ ಕಂಪಿಸದಿರು - ಮತ್ತೆ ಬದುಕಿಗಾಗಿ ನಿನ್ನೊಡನೆ ಕುಸ್ತಿಗಿಳಿದುಬಿಟ್ಟೇನು...
ಮೊದಲೇ ಮಹಾ ವ್ಯಾಮೋಹೀ ಹುಂಬ ಹುಡುಗ ನಾನು...
***
ನನ್ನೀ ಮನಕೆ ಸ್ನೇಹ, ಪ್ರೀತಿಯ ಒಡನಾಟದ ಭಾವ ಬಂಧಗಳಾಚೆ ನಗುವಿದ್ದರೆ ಅದು ಮಸಣದ ಮನೆಯಲ್ಲೇ ಇದ್ದೀತು...
***
ಹೇ ಅಲೆಗಳೇ -
ಬರಸೆಳೆದು ಒಳತಳ್ಳಿ ಬಿಡಿ ಎನ್ನ ನಿಮ್ಮ ಗರ್ಭದ ಮೌನದಾಳಕೆ...
ಜಗದೆಲ್ಲ ತಂತುಗಳಾಚೆಯ ನಿಶ್ಚಿಂತ ನಿದ್ದೆಯಲಿ ಹಗುರಾಗುವ ಬಯಕೆ ಮನಕೆ...
***
ಒಲವು ಒಲವನ್ನ ಹೆರಬೇಕು...
ಕನಸೊಂದು ಹೊಸದಿನ್ನೊಂದಾದರೂ ಕನಸ ಹೊತ್ತು ತರಬೇಕು...
ಆದರೆ -
ನೆನಹುಗಳ ರಕ್ಕಸ ಸಂತತಿಗಳು ಮತ್ತು ವಾಸ್ತವದ ಒಡೆದ ಕನ್ನಡಿ ಚೂರುಗಳು ಸೇರಿ ಮನದ ಗರ್ಭಕೋಶವನೇ ಬಗೆಯುವಾಗ ಬದುಕಿದು ನಗೆಯ ಬೆಳಕ ಹಡೆದೀತಾದರೂ ಹೇಗೆ...!!!
***
ಮತ್ತೆ ಮತ್ತೆ ಅನ್ನಿಸುತ್ತೆ ಪ್ರೇಮದ ಸೌಂದರ್ಯ ಮತ್ತು ವೈಫಲ್ಯ ಎರಡೂ ತನ್ನದು ಅಲ್ಲಲ್ಲ ಕೇವಲ ತನ್ನದು ಎಂಬುವ ಭಾವದ ತೀವ್ರತೆಯಲ್ಲೇ ಇದೆಯೇನೋ...
***
ಈ ನೆನಪುಗಳೊಂದಿಷ್ಟು ರಜೆ ತೆಗೆದುಕೊಂಡರೆಷ್ಟು ಚಂದವಿತ್ತು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

2 comments:

  1. ಹುಡುಕಾಟದಲಿ ಸ್ವಗತ ಚೆನ್ನಾಗಿದೆ ಅಣ್ಣಯ್ಯ

    ReplyDelete
  2. ಸಾವೆಂಬೋ ಮಹಾಗುರು.. ಸೂಪರ್..

    ReplyDelete