Wednesday, November 2, 2016

ಗೊಂಚಲು - ನೂರಾ ತೊಂಭತ್ತೆಂಟು.....

ಒಂದಿಷ್ಟು ತುಂಡು ಭಾವಗಳು..... 

ಈಗಿನ್ನೂ ಬಾಳೆಲೆ ಹರವಿ, ನಾಕು ಹನಿ ಚಿಮುಕಿಸಿ ಧೂಳು ಕೊಡವಿ, ಬಡಿಸಿಕೊಳ್ಳಬೇಕು ಊಟವ.......
...... ಬದುಕು ತುತ್ತೆತ್ತಿಕೊಳುವ ಮುನ್ನವೇ ಬಾಗಿಲಲಿ ಸಾವು ತೇಗಿತ್ತು...
(**ಎಲ್ಲ ಹಸಿವಿಗೂ ತರ್ಪಣ...)
<<^>>

***ಮಿಂಚಿನಂದದೊಳಾದರೂ, ತುಸುವೇ ಆದರೂ ಸುರಿದು ಹೋಗೊಮ್ಮೆ ಈ ಎದೆಯ ಹಾದಿಯಲಿ ಕನಸ ಬೆಳಕೇ...
***ನೀಗದ ನಿರ್ಲಜ್ಜ ಹಸಿವುಗಳ ಮಗ್ಗುಲಲೇ ನಿನಗಾಗಿ ನೀನಾಗಿ ನೀನೊಮ್ಮೆ ನಗು ಬದುಕೇ...
*** ಪ್ರೀತಿಯೂ ಹಸಿವೇ - ಕಾಮವೂ ಕನಸೇ - ಹೆಜ್ಜೆ ಭಾರವಾದಷ್ಟೂ ಸಾವು ಹಗುರ...
<<^>>

ಏಕಾಂಗಿ ನಿಲ್ಲಬೇಕು ಸಂತೆಯಲ್ಲಿ - ಏಕಾಂತ ತಬ್ಬಬೇಕು ಅಂಕದಲ್ಲಿ...!!!
<<^>>

ಯಾರದೋ ನಗೆಯ ಹಿಂದಿನ ತೀವ್ರ ನೋವಿಗೂ ಸಾಂತ್ವನದ ಮದ್ದಾಗಬಹುದು - ನಮ್ಮವರದೇ ನಗೆಯ ಹಿಂದಿನ ಗುದ್ದಿಗೂ ಸಿಗದ ತಣ್ಣನೆ ಕ್ರೌರ್ಯವ ಸಹಿಸಬೇಕಾಗಿ ಬರುವುದು ಅಸಹನೀಯ...
<<^>>

ಕನಸೊಂದು ಕನಸ ಕೈ ಹಿಡಿದು ನಡೆದಂತೆ, ಸೇರಲಾರದ ಮಿತಿಯ ಅರಿತೂ ಕುಗ್ಗದ ಅದೇ ಒಲವ ಮಿಡಿತಗಳ ಹೊತ್ತು ಬಹುದೂರ ದಾರಿ ಜೊತೆ ಜೊತೆಗೆ ಸಾಗೋ ರೈಲು ಕಂಬಿಗಳ ನಿರೀಕ್ಷೆಗಳಾಚೆಯ ಅನುಸಂಧಾನದ ಪ್ರೇಮ ಹಬ್ಬಿ ನಿಂತಿದೆ ನನ್ನೀ ಬದುಕು ಮತ್ತು ನೀನೆಂಬೋ ನನ್ನೊಳಗಿನ ಕನಸಿನ ನಡುವೆ...
<<^>>

ಒಂದು ಮುಖ:
ದುಂಬಿ ಮಲಗಿದ ಮೇಲೆ ಅರಳೋ ಪಾರಿಜಾತವೂ ಮನ ಅರಳಿಸೋ ಘಮ ಬೀರುತ್ತೆ...
ತಂಪಿನಲಿ ತಟ್ಟಿ ಮಲಗಿಸೋ ಚಂದಿರನೂ ಒಂದ್ಯಾವುದೋ ಕನಸಿಗೆ ಅಪ್ಪನಾಗುತ್ತಾನೆ...
ಬೆಳದಿಂಗಳ ತೋಪಲ್ಲೂ ಮೈಮುರಿವ ವಸುಧೆ ಬೆಳಗ ರವಿ ಕಿರಣಕೆ ಮತ್ತೆ ಹೊಸತೆಂಬಂತೆ ಮೈನೆರೆಯುತ್ತಾಳೆ...
ಬ್ರಹ್ಮ ಕಮಲ - ಸೂರ್ಯಕಾಂತಿ - ಹೆಸರಿಲ್ಲದ ಬಸಿರಲ್ಲಿ ಉಸಿರಾಡೋ ತರಹೇವಾರಿ ಹಣ್ಣುಗಳು...
ಪ್ರಕೃತಿ ಪ್ರೀತಿಗೆ ಹೀನತೆಯ ಕುರುಹಿಲ್ಲ, ಶ್ರೇಷ್ಠತೆಯ ಹಮ್ಮಿಲ್ಲ, ಬೇಲಿಗಳ ಹಂಗಿಲ್ಲ, ಪಾಪಗಳ ಗುಂಗಿಲ್ಲ...
ನೀನಾದರೋ ಅವರಿವರಂತೆ "ಪ್ರಶ್ನಿಸಿ ಕಾಮವ ಕ್ರಿಯೆಯಾಗಿಸಬೇಡ - ಪೂಜಿಸಿ ಪ್ರೇಮವ ಕಲ್ಲಾಗಿಸಬೇಡ..."
ಪ್ರಶ್ನೆಗಳನೆಲ್ಲ ಹಸಿವಿಗೆ ಬಲಿಕೊಟ್ಟು, ಪ್ರೇಮವ ಆ ತೋಳಲ್ಲಿ ಕರಗಿಸಿ, ಈ ಒಡಲಲ್ಲಿ ಹೊಸ ಕನಸ ಸ್ಖಲಿಸು...
ಪಾಪವಾದರೆ ಮಿಲನ; ಪಾಪವಾಗದೇ ಜನನ...!!??
<<^>>

ಆ ನಗುವಿಗೆ ಹೆಸರಿಡುವ ಹಂಗಿಲ್ಲದೆ ನನ್ನೆಡೆಗೊಂದು ನಿರ್ವ್ಯಾಜ್ಯ ಆಪ್ತತೆಯನು ಸಾಕಿಟ್ಟುಕೊಂಡ ಜೀವಗಳ ಕಣ್ಣಲ್ಲಿನ ಖುಷಿಯ ಮಿಂಚಿಗೆ ಸಾಕ್ಷಿಯಾಗಿ ಎದೆ ತೆರೆದು ಮಿಂದ ಗರಿ ಗರಿ ಹಗುರತೆಯ ಕ್ಷಣಗಳ ಬಾಚಿ ಭಾವ ಜೋಳಿಗೆಗೆ ತುಂಬಿಕೊಳ್ಳಲಾದರೂ ನಾನಾಗಿ ನನ್ನವರ ಮುಖಾಮುಖಿ ನಿಲ್ಲಬೇಕು ಆಗೀಗಲಾದರೂ - ನೆಪ ಹೇಳದೇ - ನೆಪ ಹುಡುಕಿಕೊಂಡು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ಸದಾ ವಿಭಿನ್ನ ಶೈಲಿಯ ಬರಹ ನಿಮ್ಮದು.

    ReplyDelete