Friday, September 11, 2020

ಗೊಂಚಲು - ಮುನ್ನೂರಾ ನಲವತ್ತು ಮತ್ನಾಕು.....

ಶಬ್ದಾಡಂಬರದ ಖಟ್ಪಟಿ.....

ಶಬ್ದಗಳು ಕೊಲ್ಲುತ್ತವೆ - ಶಬ್ದಗಳು ಗೆಲ್ಲುತ್ತವೆ...
ಮೊದಲ ಪಾದದಲ್ಲಿಯೋ, ಒಟ್ರಾಶಿ ಗೊಣಗೊಣ ಗುಪ್ಪೆಯ ನಟ್ಟ ನಡುವಲೆಲ್ಲೋ, ಇಲ್ಲಾ ನಿಲ್ಲಿಸಿದರೂ ಮುಗಿಯದ ಕೊನೇಯ ಆ(ವಿ)ಲಾಪದಲ್ಲೋ ಅಥವಾ ಸಾಲು ಸಾಲಿನ ನಡುವಿನ ಕಾಲ್ಸಂಕದಂಥ ಖಾಲಿಯಲ್ಲೋ ಎಲ್ಲೋ ಒಂದ್ಬದಿಗೆ ಒಂದ್ಯಾವುದೋ ಭಾವ ಎದೆಯ ಜಗ್ಗಿ ನಿಲ್ಲಿಸಿ ಮರುದನಿಯ ಉದ್ಗಾರ ಎಬ್ಬಿಸುತ್ತದಲ್ಲ ಅದು, ಅದಷ್ಟೇ ಶಬ್ದ ಸಾರಥ್ಯದ (ಓದು, ಬರಹ, ಮಾತು, ಮೌನ ಇಂಥವೇ ಇತ್ಯಾದಿ) ಸಾರ್ಥಕತೆ - ನಿನ್ನ ಅರಸುವ ನಶೆ... 

ಶಬ್ದಗಳು ಮಡಿದಲ್ಲಿ ಕವಿತೆ ಹುಟ್ಟುತ್ತದೆ...
ಎದೆಕಟ್ಟಿ ದನಿಯಾಗದೇ ನೀ ದಾಟಿದ ಹಾದಿಯ ತೊಳೆವ 
ತೀರ ತಲುಪದ ಶಬ್ದ ಜೋಗಿ ಕೊರಳಿನ ಏಕನಾದವಾದಂತೆ...
ಕಾಲು ಸೋತ ಹಾದಿಯ ನಿಟ್ಟುಸಿರ ಮಗ್ಗುಲಲಿ ಜೊಂಪೆ ಜೊಂಪೆ ಉದುರೋ ಬೊಕ್ಳ್ಹೂಗಿಗೆ ಮಡಿಲೊಡ್ಡಿ ನಿಂತು ನೀನು ಅಬೋಧ ನಕ್ಕಂತೆ - ಮಸಣದಲಿ ಶಿವ ಸಿಕ್ಕಂತೆ...

ಮೌನದಾಸರೆಯ ಶಬ್ದ ಅಂತರಂಗದ ತಪನೆ...
ಉದ್ದಕೆ ಖಾಲಿ ಬಿದ್ದ ಏಕಾಂಗಿ ಹಾದಿಯ ಅನಾಮಿಕ ತಿರುವಲ್ಲಿ ನನ್ನ ಕಣ್ಣಲ್ಲಿ ನಿನ್ನ ಕಣ್ಣ ಬೆಳಕು ಬಿದ್ದು ಉಸಿರಲ್ಲಿ ಕಿಡಿ ಹೊತ್ತಿದ ದಿವ್ಯ ಘಳಿಗೆಯ ಶುದ್ಧ ತೀವ್ರತೆ, ಅದು ಬದುಕಿನ ನೈಜ ಧನ್ಯತೆ - ನನಗೆ ನಾನೇ ದಕ್ಕಿ ನನ್ನೊಳಗೆ ನೀನರಳಿದಂತೆ...

ನಿಶ್ಯಬ್ದವೂ ಶಬ್ದದೂರನೇ ತಪಿಸುತ್ತದೆ...
ಬದುಕು ಓದಿಸಿದ ಅತಿ ಪುಟ್ಟ ಕವಿತೆ - ಕಣಿ ಹೇಳುವ ನಿನ್ನುಸಿರು...
ಕನಸು ಬರೆಸಿದ ಸುದೀರ್ಘ ಕಾವ್ಯ - ನಿನ್ನ ಕಣ್ಣ ಕುಂಚದ ಕುಸುರಿ...
ಮತ್ತು 
ನನ್ನೆಲ್ಲಾ ಶಬ್ದಾಡಂಬರದ ವಸ್ವಂತವೂ ನಿನ್ನ ತಲುಪುವ ಖಟ್ಪಟಿ ಅಷ್ಟೇ - ಮೌನ ಸಾಗರ ಒಡೆದು  ಮುತ್ತು ಮಾತಾದ ತುಟಿ ತೇವದಂತೆ... 
ಶಬ್ದ ಇತಿಹಾಸವಾಗುತ್ತದೆ, ಶಬ್ದ ಇತಿಹಾಸವ ಹಾಡುತ್ತದೆ - ನಿರ್ವಾಣವು ನಿರ್ಮಾಣದ ದಿಕ್ಸೂಚಿ ಅಂದಂತೆ...
#ಮಾತು_ಹುಟ್ಟದ_ಸಂತೆಯ_ರಣ_ಗದ್ದಲದಲಿ_ಕಳೆದುಹೋದ_ಎದೆಯ_ರೇಖೆಯ_ಶಬ್ದ_ನಾನು...

No comments:

Post a Comment