Friday, March 26, 2021

ಗೊಂಚಲು - ಮುನ್ನೂರರ‍್ವತ್ನಾಕು.....

ಇರುಳನೂ ಚೂರು ಜೀವಿಸಬೇಕು.....

ಉಸಿರ ಸದ್ದಿನ ನಾಡಿ ಹಿಡಿದು ಅವಳ ಜೀವಾಭಾವ ಕೋಶವ ಸೇರುವಾಸೆಯಲಿ ಮೆಲ್ಲ ಸರಿಯುತ್ತೇನೆ ಅವಳಂಗಳಕೆ - ಸೋಂಬೇರಿ ಆಸೆಬುರುಕ ಮಳ್ಳ ಹೈದ ನಾನು...
ಅಲ್ಲೋ ಅವಳ ಗೊಣಗೆಲ್ಲ ಪಾತ್ರೆಗಳ ಢಣಬಣ ಸದ್ದಾಗಿ ಕಿವಿಯನೂ ಕುಕ್ಕುತ್ತದೆ...
ಸುಮ್ಮನೆ ಹಿಂದೆ ಸರಿದು ಭಗ್ನ ಪ್ರಣಯ ಕವಿತೆ ಬರೆದು ನಿಡಿ ಉಸಿರು ಬಿಡುತ್ತೇನೆ...
#ಪ್ರಾರಬ್ಧ...
💞💞💞 

ಗ್ರೀಷ್ಮದ ಬಾಗಿಲ ಅಂಟಂಟು ಸಂಜೆಗಳಿಗೂ ನಿನ್ನದೇ ಬಣ್ಣ ಬಳಿಯುತ್ತದೆ ನನ್ನದೀ ಎದೆಯ ತಾಪಮಾನ...
ಕತ್ತಲ ಕೌದಿಯೊಳಗೆ ಮೈ ಮನಸ ನಡುವೆ ನಿನ್ನ ನೂರು ನಖರೆಗಳ ಬಿಸಿ ಬಿಸಿ ಚರ್ಚೆಯಾಗಿ ಮೈಮನದ ಹಸಿಭಾವ ಬೆವರಾಗಿ ಕಲಸುವುದು ಹುಡುಗನ ತುಡುಗು ಹರೆಯದ ಸಹಜ ಜಾಯಮಾನ...
ಕೇಳಿಲ್ಲಿ -
ಇರುಳನೂ ಚೂರು ಜೀವಿಸಬೇಕು...
ಪ್ರತಿಪದೆಯ ಚಂದಮನ ಬೆಳುದಿಂಗಳ(ಳಂಥ) ಬೆನ್ನ ಸೆರಗ ಮೇಲೆ ನಿನ್ನ ಹೆಸರ ಬರೆದು ಕವಿತೆಯ ಹುಟ್ಟನು ಆಚರಿಸಬೇಕು...
ಕತ್ತಲಿದು ಕಂತುವ ಮುನ್ನ ಒಂದರೆಘಳಿಗೆ ಕನಸೇ ನೀ ಕನಸಿಗಾದರೂ ಬಂದು ತುಟಿಕಚ್ಚಿ ಪ್ರಣಯೋಂಕಾರದ ದೇವಸುರೆ ಕುಡಿಸಿ ಹೋಗಬೇಕು...
ಇರುಳನೂ ಚೂರು ಜೀವಿಸಬೇಕು ಮತ್ತದಕ್ಕೆ ನಿನ್ನ ತೋಳ ಬೆಂಕಿ ಬಳ್ಳಿಯ ಆಸರೆಯೇ ಬೇಕು...
ಬೇಲಿಯಿಲ್ಲದ ಜೀವಾಭಾವ ಬಯಲಿನ ಹೂವು ನೀಲಿ ನೀಲಿ...
__ಕಳ್ಳ ಹಸಿವು...
💞💞💞

ಪ್ರಾಯದ ಹುಚ್ಚು ಕಾತುರಗಳೆಲ್ಲ ಕರಗೋ ಮೊದಲ ರಾತ್ರಿಯ ಸಂಭ್ರಮದ ಗಲಿಬಿಲಿಯ ಗಲಗಲದ ಹೋರಿನಲ್ಲಿ ಚೂರು ಚೂರೇ ಬಿಚ್ಚಿಕೊಂಡ ನಾಚಿಕೆ ಬೆಳಗಿನ ಬಾಗಿಲಲ್ಲಿ ಮನೆಯವರೆದುರು ಮತ್ತೆ ಎದೆಯೇರಿ ಕುಳಿತು ಉಟ್ಟ ವಸ್ತ್ರದ ಮುದುರುಗಳನು ಮತ್ತೆ ಮತ್ತೆ ಸವರುತ್ತದೆ...
ಯಾರೇ ಎದುರಾಗಿ ಸುಳ್ಳೇ ನಕ್ಕರೂ ಹಿಂದಿನಿರುಳ ಆಮೋದ ಪ್ರಮೋದಗಳೇ ಕಳ್ಳ ಹಾದಿಯಲಿ ಮೈಮನದಿ ಕಿಲಕಿಲವೆಬ್ಬಿಸ್ತಾವೆ...
ಸುಖವೆಂದರೆ ಸುಖ ಸುರಿವ ಕ್ರಿಯೆಯಷ್ಟೇ ಅಲ್ಲ - ಮಿಗಿಲು, ಕ್ರಿಯೆ ಪ್ರಕ್ರಿಯೆಯ ಹಿಂಚುಮುಂಚಿನ ಭಾವದಲೆಗಳು ಎಬ್ಬಿಸೋ ಪುಳಕದುಲಿಗಳೂ ಸುಖವೇ ಅಂತ ಗದ್ದಲದ ಮರು ಸಂಜೆಯ ತಂಬೆಲರು ಕಣ್ಣು ಮಿಟುಕಿಸುತ್ತದೆ...
ತುಳುಕಿದ ಹಾಲ್ಬಟ್ಟಲು, ಮಗುವೊಂದು ರಂಗೋಲಿಯ ಅಳಿಸಿದಂತೆ ಅಲಂಕಾರಗಳನೆಲ್ಲ ತೀಡಿ ಕೆಡಿಸೋ ಅಂಗೈಯ್ಯ ಸ್ವೇದ ಬಿಸುಪಿನ ಆತುರ, ಒಪ್ಪಿತವೇ ಆದರೂ ಅಪ್ಪುವಾಗ ನಡುಗಿದ ಮೈ ಕೈ, ಉನ್ಮಾದಕೆದುರಾಗಿ ಸುಳಿಯೋ ಸಣ್ಣ ನೋವು, ಅರ್ಥ ಕಳಚಿಕೊಂಡ ಸೋಲು, ಗೆಲುವು, ತಪ್ಪು ತಪ್ಪು ಹೆಜ್ಜೆ, ನಾಭಿ ತೀರಕೆ ಅಪ್ಪಳಿಸೋ ಛಳಕು ಛಳಕು ಮಿಂಚಿನ ಹೋಳು, ಉಸಿರ ಸೆರಗು ಹಾರಿ ಹಾರಿ ಕಾದು ಕಾಯ್ವ ತೋಳ ತುಂಬಾ ಮತ್ತೆ ಮತ್ತ ಇರುಳು...
ಮಿಶ್ರ ಬೆವರ ಮಳೆಯ ಕುಡಿಕುಡಿದು ನಿತ್ಯ ಅರಳೋ ಹಾಸಿಗೆಯ ಹೂ ಚಿತ್ರ - ಅಮೃತ ಅಮಲೇರಿ ನಶೆಯಾದ ಹಾಂಗೆ ಮಂದ ಬೆಳಕಲ್ಲಿ ತೂಕಡಿಸೋ ತೂಲಿಕೆ...
____ ಮೊದಲಿರುಳ ಬಸಿರಿನಿಂದ ಮೊದಲಾಗಿ...
💞💞💞

ಪ್ರೇಮ ಕವಿತೆ ಬರೆಯೋ ಹುಡುಗೀರೆಲ್ಲರ ಭಾವದಲ್ಲಿನ ಪ್ರೇಮಿ ಅಥವಾ ಆ ಕವಿತೆಗಳ ಭಾವ ಸ್ಫೂರ್ತಿ ನಾನೇ ಅಂತ ಸುಳ್ಳೇಪಳ್ಳೆ ಆದ್ರೂ ನಂಬಿ ಒಳಗೊಳಗೇ ಖುಷಿಗೊಳ್ಳುತ್ತಿದ್ದರೆ ಪ್ರೇಮರಾಹಿತ್ಯದಿಂದ ನರಳುತ್ತಾ "ನಂಗೆಲ್ಲಾ ಯಾರ್ ಬೀಳ್ತಾರ್ ಗುರೂ" ಅನ್ನೋ ಅಭಾವ ವೈರಾಗ್ಯದ, ಸ್ವಯಂ ಕರುಣೆಯ ಭಾವದಿಂದ ಚೂರಾದರೂ ಸುಳ್ಳು ಸಮಾಧಾನವನಾದರೂ ಹೊಂದಲಾದೀತೇನೋ ಅಲ್ವೇ..‌.
#ಪ್ರಾರಬ್ಧ...
#ಅವಳ_ಕವಿತೆಗೆ_ಉತ್ತರ...
💞💞💞

ದೇವಕಣಗಿಲೆಯ ನವಿರು ಘಮ ಹಾಗೂ ಬೆಳುದಿಂಗಳ ಹಾಲು ಮಾರಲು ಹೊರಟ ಬಾನಂಗಳದ ಇರುಳ ಹೂವು...
ತಂಬೆಲರ ಡೋಲಿಯೇರಿ ಒಲಿದು ಬರುವ ನಿನ್ನ ಕಿರುಲಜ್ಜೆಯ ಸವಿನೆನಪು - ರುದಯ ಕಡಲಿನ ಭಾವ ಶಾಲೀನತೆ...
ಎದೆಯ ತೇಜಸ್ಸಲಿಲದಲಿ ಹೊಯ್ದಾಡಿ ತೇಲುವ ಹಾಯಿ ತುಂಬಾ ನಿನ್ನದೇ ತುಂಟ ಕಿಲಕಿಲದ ಕಾವ್ಯ ಕನಸು...
ಹಾಡ ಹಡೆಯುವ ಸಂಜೆಗಳು...
💞💞💞

ಎದೆ ತಂಬೂರಿಗೆ ಬೆರಳ ಸೋಕಿಸಿ ಹಬ್ಬವಾಗಿಸಿದವನೇ -
ಯಾಕೆ ಒಬ್ಬಳೇ ಕೂತದ್ದು, ಒಳಗೊಳಗೇ ಒಬ್ಬೊಬ್ಳೇ ನಗೋದು ಅಂತಾರೆ ನೋಡಿದವರು - ನನ್ನ ಬಿಗಿದಪ್ಪಿ ಕೂತ ನಿನ್ನ ಕನಸುಗಳು ಅವರಿವರಿಗೆ ಕಾಣಲ್ಲ ನೋಡೂ...
ಈಗೀಗ ಬೆಳುದಿಂಗಳಿಗೆ ಬಾಗಿಲು ತೆಗೆವ ನನ್ನ ಸಂಜೆಗಳೇ ಹೀಗೆ - ಪಾರಿಜಾತ ಪಕಳೆ ಬಿಡಿಸಿ ಮೈನೆರೆವ ಹಾಗೆ - ಸದ್ದಿಲ್ಲ ಗದ್ದಲವಿಲ್ಲ, ನೀನೂಡೋ ಅನುರಾಗದ ಅನುಯೋಗದ ಭಾವ ತಲ್ಲೀನತೆಯ ಅಯಾಚಿತ ನಗೆಯ ಎಸಳಿನ ಗಂಧ ಮೈಮನದ ಬೀದಿ ತುಂಬಾ...
ಮುಸ್ಸಂಜೆಯ ನೂರು ಬಣ್ಣ - ಬೆಳುದಿಂಗಳಿರುಳ ಕಪ್ಪು ಬಿಳುಪು - ಗೆಜ್ಜೆಯ ಕಚ್ಚಿ ಎಳೆದು ಪುಳಕದಲೆ ಎಬ್ಬಿಸೋ ಕಲ್ಯಾಣಿಯ ಮರಿ ಮೀನು - ನನ್ನ ಸಾನಿಧ್ಯದಲಿ ನಿನ್ನ ಕಣ್ಣ ಓಲೆಗರಿಯಲಿ ಹರಡಿಕೊಳ್ಳೋ ರಸಿಕ ಚಿತ್ರಗಳು - ಮಹಾ ಸಭ್ಯತೆಯಲಿ ಸೋತು ಅನುನಯಿಸೋ ನೀನು - ಸುಳ್ಳೇ ಅನುಮಾನಿಸೋ ಕಳ್ಳ ಗೆಲುವನು ಮೆಲ್ಲೋ ನಾನು...
ಉಫ್!!
ಎಷ್ಟೆಲ್ಲಾ ಬೆಡಗು, ಬಿಂಕ, ಬಿನ್ನಾಣದ ತಂತುಗಳ ತಂದು ತುಂಬಿಬಿಟ್ಟೆಯೋ ಗೂಬೆ ಈ ಬದುಕಿನ ಭಾವ ಭಿತ್ತಿಗೆ - ಊರ ಬಾಯಲ್ಲಿನ ಬಝಾರಿ ಹುಡುಗಿಯೂ ಸಂಜೆ ಕೆಂಪಲ್ಲಿ ಮೀಯುವಾಗ ಮೈಯ್ಯ ಸೊಂಪೆಲ್ಲ ಬಿರಿದರಳಿ ಮಾತು ಮರೆತು ಮನಸುಕ್ಕಿ ಮೆದುವಾಗೋ ಹಾಗೆ...
ಹೆಣ್ಣಾಗುವ ವಿಚಿತ್ರ ತಲ್ಲಣವ ಮೀರಿ ಕಲೆತು ಕಳಿತು ಹಣ್ಣಾಗುವ ಸಮ್ಮೋಹಕ ಆಸೆಯ ತುಂಬಿದ ಗಂಧರ್ವನೇ -
ಬದುಕು ಹಾಯಬೇಕಾದ ಹೊಳೆ ಹಾಳಿಯ ಹುಳಿ ಸಿಹಿ ಮಾತಿಗೆ, ಮೈಮನೋಭೂಮಿಕೆಯ ದಿವ್ಯ ಉರಿಗೆ ಬದುಕೇ ಆಗಿ ಜೊತೆ ಜೊತೆಗೆ ನೇರಾನೇರ ಕೈಗೆ ಸಿಗುವುದು ಯಾವಾಗಲೋ ಜೋಗೀ...
#ಹೆಸರಿಲ್ಲದ_ಛಾಯೆ...
💞💞💞

ನೆನಹಿನೊಂದು ಅಲೆ ಬಂದು ಪಾದ ತೊಳೆದು ಮೈಮನದ ತುಂಬಾ ಸಾಗರನ ಎದೆಗುದಿ...
#ನೀನೇ_ತುಳಿದಂತೆ_ಎದೆಬಾಗಿಲಾ...

ಇದು ಪ್ರೇಮಿಗಳ ತಿಂಗಳಂತೆ....
ಚಿರ ವಿರಹಿಗೋ ಅದು ಬರೀ ಅಂತೆ ಕಂತೆ...
#ಬೇರು_ಕಳಚಿದ_ಹೂಪಕಳೆ...

ಅವಳೆಂದರೇ ಕನಸು...
💞💞💞

ಇಲ್ಕೇಳು -
ಸಾಗರ ದಂಡೆಗೊಪ್ಪಿಸಿದ ಕಪ್ಪೆಚಿಪ್ಪುಗಳ ಸುಖಾಸುಮ್ಮನೆ ಹೆಕ್ಕುತ್ತ ಕೂತಿದ್ದೇನೆ, ಎದೆ ಕುಡಿಕೆಯ ತುಂಬಾ ನಿನ್ನ ನೆನಪು ಅಲೆಯಾಗಿ ಮರಳುತಿದೆ...

ಹೊಳೆ ಮಡುವಲಿ ಮಿಂದ ಎಳೆಗರು ಕಾಲಿಗೆ ಕೊರಳುಜ್ಜುವಾಗ ಹಿತವಾಗಿ ಕೊರೆವ ಛಳಿ ಛಳಿ ಕಂಪನದಂತೆ ನಿನ್ನ ನುಡಿ ಒನಪಿನ ನೆನಪು...
ಕೇದಗೆ ಬನದಲ್ಲಿ ಮಿಡಿನಾಗರ ಸರಸರ ಸರಿವಂಗೆ ಆಸೆಯ ಚಿಗುರು ಬಿಸಿ ಸೆಳಕಿಂದ ಮೈಯ್ಯೆಲ್ಲ ಸುಳಿಗಂಪನ...

ಶರಧಿಯಂಗಳ - ತೋಯ್ದ ಪಾದಗಳು - ಹುಣ್ಣಿಮೆ ಮಗ್ಗುಲಿನ ಬೆಳುದಿಂಗಳು - ಅಂಟಿ ಕೂತ ಹೆಗಲ ಬಿಸುಪು - ಬೆಸೆದ ಬೆರಳ ಹೆಣಿಗೆ ಬಂಧ - ಆಪಸ್ನಾತೀಲಿ ಎಂಬಂತೆ ಪರಸ್ಪರ ಎಂಜಲು ಸವಿದ ಅಧರಂ ಮಧುರಂ - ಬೆನ್ನ ಮೇಲೆ ಹೂ ಬಿಟ್ಟ ತುಂಟ ಕವಿತೆ - ಮರಳ ಮೈಗಂಟಿದ ಪ್ರಣಯ ಗಂಧ...
ಇಷ್ಟಕಿಂತ ಹೆಚ್ಚೇನು ಬೇಕೇ - ಶುಭ ಘಳಿಗೆಗೆ ಬೇರೆ ಅರ್ಥಾರ್ಥವುಂಟೇ...!!

ಉಸಿರ ನುಡಿಸುವ ಕಾವ್ಯವೇ -
ಕಾಯುತ್ತಾ ಕಾಯುತ್ತಾ ಕೂತಲ್ಲೇ ಕೂತಿದೇನೆ ಮತ್ತು ಕುಂತೇ ಇರುತ್ತೇನೆ ಇರುಳು ಕಂತುವ ಕವಲಿನಲ್ಲೂ - ಎದೆಗಡಲ ಹೋರಿಂಗೆ ಕಣ್ಣೊಡಲು ಕರಗೋ ಮುನ್ನ ಕೊರಳ ಹಬ್ಬಿ ಮುದ್ದಿಸು ಬಾ ಒಮ್ಮೆ...
ನಿನ್ನ ಹಾದಿಗೆ ದಿಟ್ಟಿ ಇಟ್ಟು ಎವೆ ಮುಚ್ಚದ ಕಂಗಳಲಿ ಇರುಳು ಉರಿಯುತ್ತಿದೆ - ತುಟಿ ಒತ್ತಿ ಬೆಳಕನೂಡು ಬಾ ಭಾವ ಜನ್ಮ ಕುಂಡಲೀ...
#ವಿರಹ_ಸೌರಭ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment