Saturday, March 27, 2021

ಗೊಂಚಲು - ಮುನ್ನೂರರ‍್ವತ್ತೈದು.....

ಕಾಡು ಕತ್ತಲ ಧ್ಯಾನ......

ಕೇಳಿಲ್ಲಿ -
ಸಾವನ್ನು ಹೆಗಲ ಮೇಲೆ ಹೊತ್ತೇ ಬದುಕನ್ನು ಪ್ರೀತಿಸಬೇಕು...
ಅದು ಅನಿವಾರ್ಯ ಮತ್ತು ಅದೇ ಬದುಕ ಹಾದಿ/ಬೇಗುದಿ...
ಹೆಗಲ ಮೇಲಿನ ಭಾರದ ನೆರಳು ಬಾಳನೆಳೆವ ರಟ್ಟೆಗೆ ರೊಚ್ಚು ತುಂಬಬೇಕು...
ಅನುಕ್ಷಣದ ಕಣಕಣವನೂ ಜೀವಿಸಲು ಅದು ಅಗತ್ಯ ಮತ್ತು ಅದೇ ಜೀವಂತಿಕೆಯ ಮೂಲ ಧಾತು...
___ ಪಲ್ಲವಿಸು ಹೊಸತೇ ಭಾವ ಧಾರೆಯಲಿ ಪ್ರತೀ ಹೊಸ ಘಳಿಗೆಯಲೂ...
↫↜⇕↝↬

ಕೊಟ್ಟ ಕೊನೇಯಲ್ಲಿ ಬಾಯಿಗಿಟ್ಟುಕೊಳ್ಳಲು ಉಳಕೊಂಡ ಸಣ್ಣ ಚೂರಿನ ರುಚಿಯಿರುತ್ತಲ್ಲ ಅದು ಬಲು ಗಾಢ ಬಲು ಗಾಢ - ಸಿಹಿಯದಾದರೂ, ಕಹಿಯದಾದರೂ...
ಕೊನೇಯ ತಿರುವಲ್ಲಿನ ಬದುಕಾದರೂ ಅಷ್ಟೇ...
#ಮತ್ತೇನಿಲ್ಲ...
↫↜↝↬

ಅವನ ಮೌನವ ನಂಬಿ ಉಸಿರಿದ್ದೂ ಹೆಣದಂತಾದ ನಿಷ್ಪಾಪಿ ಜೀವಗಳ ಕಣ್ಣೊಳಗೆ ಕುಣಿವ ಸಾವಿನ ಪಾಪವ ಯಾರ ತಲೆಗೆ ಕಟ್ಟಲಿ...
#ದೇವರು_ದೇವರಂಥವರು... 
↫↜↝↬

ಅನೂಹ್ಯ ಕತ್ತಲಿಗೂ ಬರಗಾಲ ಇಲ್ಲಿ...
ಹಗಲಿರುಳೂ ಬೆಳಕೇ ಬೆಳಕು ಉರಿವ ಊರಲ್ಲಿ ಊರುಗೋಲು ಕಳಕೊಂಡು ತೆವಳುತಿರುವ ಹುಲುಜೀವಿ ನಾನಿಲ್ಲಿ...
ಹೊಟ್ಟೆ ಹರುಕು ಚೀಲ, ಸೋತು ಪದಹಾಡುವ ಪಾದ, ಅಪಾಂಗ ಮನದ ಕನಸುಗಳ ಪ್ರೇತಾತ್ಮ, ಏನೆಲ್ಲಾ ಎಷ್ಟೆಲ್ಲಾ ಹಲುಬಾಟಗಳು ಬಿಮ್ಮಗೆ ಮಲಗಿವೆ ಎದೆ ಗೂಡಲ್ಲಿ...
ಬಾ ಕತ್ತಲೇ, ಕನವರಿಕೆಯಾ ಮರೆಸು -
ಕಳೆದೇ ಹೋಗಬೇಕು, ಮುಳುಗಿ ಕರಗಬೇಕು ನಿನ್ನೊಡಲಾ ಕಡಲಲ್ಲಿ...
___ಕಾಡು ಕತ್ತಲ ಧ್ಯಾನ...
↫↜↝↬

ಇಲ್ಲಿ ಇರುಳ ಬೀದಿಯಲೂ ಕತ್ತಲು ಸಿಕ್ಕುವುದಿಲ್ಲ - ಕಣ್ಣ ಪಾಪೆಯಲಿ ಹೆಕ್ಕಿಕೊಳ್ಳಬೇಕಷ್ಟೇ ಅಷ್ಟಿಷ್ಟು ದಕ್ಕಿದಷ್ಟು ನೆರಳನ್ನೇ...
ಹಾಗಂತ ಬೆಳಕೇನೂ ಬೀಗಬೇಕಿಲ್ಲ - ಎಲ್ಲಾ ಪಾಳಿಯಲೂ ದುಡಿಸಿಕೊಂಡ ಮಾತ್ರಕ್ಕೆ ಎಲ್ಲರೂ ಬೆಳಕನ್ನು ಪ್ರೀತಿಸುತ್ತಾರೆಂದೇನೂ ಅರ್ಥವಲ್ಲ...
ಬಿಡು ಬೆಳಕೇ -
ಅಗತ್ಯಕ್ಕೆ ಅಪ್ಪಿಕೊಂಡವರು ಅಕ್ಕರೆಯ ತಂಪಿಗೆ ಎದೆಕೊಡುವುದು ಬಲು ದುರ್ಲಭ...
#ಮಹಾನಗರ...
↫↜↝↬

ಎಲ್ಲಾ ದೀಪಗಳೂ ಆರುವುದೇ ನಿಜ...
ಕೆಲವು ಗಾಳಿಯ ಸುಳಿ ರಭಸಕ್ಕೆ, ಇನ್ಕೆಲವು ಎಣ್ಣೆ ಖಾಲಿಯಾದ ಕಾರಣಕ್ಕೆ...
ಬತ್ತಿಯ ಮೈಯ್ಯ ತುಂಬಾ ಸುಟ್ಟ ಕಲೆಗಳು...
ಇಲ್ಲಿ ಯಾರು ಯಾರ ಹೆಗಲೇರಿ ನಡೆದದ್ದೋ, ಯಾವುದರ ಚಿತಾವಣೆಗೆ ಇನ್ಯಾವುದರ ಬಲಿಯೋ ಯಾರು ಹೇಳೋರು...
___ಸುಟ್ಟಲ್ಲದೇ ಬೆಳಕೂ ಇಲ್ಲದಲ್ಲಿ ಕತ್ತಲೆಯೊಂದೇ ಸತ್ಯವಿರಬಹುದಾ ಶ್ರೀ...
↫↜↝↬

ಸಾವಿಗೆ ಮಣ್ಣು ಕೊಟ್ಟಷ್ಟು ಸುಲಭ ಅಲ್ಲ ನೋವಿಗೆ ಹೆಗಲು ಕೊಡೋದು...
___ಬಲು ಬೆರಕಿ ಈ ಬದುಕು...
↫↜↝↬

ಕೆಲವೆಲ್ಲ 
ಬದುಕುಗಳನು ಕಿತ್ತು ತಿನ್ನುವ ಇಲ್ಲಿನ ನೋವುಗಳು ಮಾಡಿಸೋ ನರಕ ದರ್ಶನಕ್ಕಿಂತ ಆ ಮೇಲೆಲ್ಲೋ ಇರುವ ಯಮನ ನರಕ ಅಂಥ ಪರಿ ಏನೂ ಕೆಟ್ಟದಿರಲಿಕ್ಕಿಲ್ಲ ಬಿಡು...
ಹೀಗನ್ನಿಸಿ 
ಕಿವಿಯಾದ ನೋವಿಂಗೆ ಹೆಗಲಾಗಲಾರದ ಗೆಳೆತನ ನಾನೆಂಬ ಹತಾಶ ಭಾವ ಕಾಡುವ ಹೊತ್ತಿಗೇನೇ -
ಮತ್ತೆಲ್ಲೋ 
ದೊಡ್ಡಾಸ್ಪತ್ರೆಗಳ ವರಾಂಡಗಳು ಖಾಲಿ ಖಾಲಿಯಾಗಿದ್ದುದು ಕಂಡರೆ ನೋಡೋಕೆ ಏನೋ ಸಮಾಧಾನ...
ಶನಿ ಮಹಾರಾಜರ ಖಾಸಾ ಬಂಟರೆಲ್ಲ ಚೂರು ನಿದ್ದೆ ಹೋಗಿರೋ ಸಣ್ಣ ನಿರಾಳ ಭಾವ... 
#ಒಂದು_ಹಿಡಿ_ಕಾಳಜಿ...
#ಆರೋಗ್ಯ(ವೇ)_ಭಾಗ್ಯ...
↫↜↝↬

ಹಾಗಂತಾರೆ, 
ಅಲ್ಲಿ ಮೇಲೆಲ್ಲೋ ನಿಜ ಸ್ವರ್ಗ ಇದೆಯಂತೆ...
ಖರೇನೇ ಹೌದು, ನಂಬಿದೆ...
ಇಲ್ಲಿಯೇ ನರಕವ ಕಂಡ ಮೇಲೆ...
ಯಮನ ಮನೆಯ ಅತೃಪ್ತ ಕಿಂಕರರೆಲ್ಲ ಆಜುಬಾಜಲ್ಲೇ ಭೇಟಿಗೆ ಸಿಕ್ಕಮೇಲೆ...
____ ಮತ್ತೆ ಮತ್ತೆ ಮೂಕ ಶೋಕ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment