Monday, March 21, 2016

ಗೊಂಚಲು - ನೂರಾ ಎಂಬತ್ತೇಳು.....

ಪ್ರೇಮ ಕಾಮದ ಅಂಟು.....
(ಕೆಲವೆಲ್ಲ ಹುಚ್ಚಿಗೆ ಮದ್ದಿಲ್ಲವೇನೊ...)

ನಿಜಕ್ಕೂ ಹಾಸಿಗೆ ಹಂಚಿಕೊಂಡಷ್ಟು ಸುಲಭವಲ್ಲ ಬದುಕ ಹಂಚಿಕೊಳ್ಳುವುದು...

ಹಾಸಿಗೆಯಲಿನ ಅವಳ ನರಳಾಟ ಸುಖದ್ದಾ ಅಥವಾ ನೋವಿನದ್ದಾ ಎಂಬುದರೆಡೆಗೆ ಮನಸ ಹಾಯಿಸದ ನಿರ್ಲಜ್ಜ ಹಸಿವಿನ ಗಂಡು...

ಅವನ ಹಾಸಿಗೆ ಹಸಿವಿಗೆ ಭಿಕ್ಷೆ ನೀಡಿದರೆ ಬದುಕನೇ ಮಡಿಲಿಗಿಟ್ಟು ವಿಧೇಯನಾಗಿರುತಾನೆ ಎಂದು ಅಗಾಧವಾಗಿ ಭ್ರಮಿಸುವ ಐಚ್ಛಿಕ ಬಯಕೆಯ ಹೆಣ್ಣು...

ಬದಲಾಗದ ಮನೋಭೂಮಿಕೆ; ಕಾಮಕ್ಕೆ ಅಪವಿತ್ರತೆಯ ಆರೋಪ...

ಪ್ರೇಮದ ಸೆರಗಿನೊಳಗೆ ತೋಳ ಬಲ, ನಡುವಿನಾಳ ಅಳೆದರೆ ಸ್ವಚ್ಛವಂತೆ...!!!

ಆಸೆ ಆಸೆ ಬೆರೆತು ಬೆವರಿಳಿದರೆ ಸ್ವೇಚ್ಛೆಯಂತೆ...!!!

ಪ್ರಕೃತಿಗೊಂದು ಮುಸುಕನೆಳೆದು ಮಧುರ ಹೆಸರಿನಲ್ಲಿ ಕೂಗಿದರೆ ಸುರತಕೂ ದೈವತ್ವವಂತೆ...!!!

ಪ್ರಕೃತಿ ಸಹಜ ದೈತ್ಯ ಹಸಿವನು ಅದರದೇ ಹೆಸರಲ್ಲಿ ನೀಗಿಕೊಂಬವರು ದೈತ್ಯರಂತೆ...!!!

ಪ್ರೇಮದ ಉನ್ಮಾದ ಕಾಮನ ಬೆವರಲ್ಲಿ ಕರಗದೇ ಹೋದರೆ ಬದುಕಿಂಗೆ ಹರಿವಿರುವುದಿಲ್ಲ - ಹರಿವಿನ ಶೃಂಗಾರವಿಲ್ಲದೇ ಲೌಕಿಕಕೆ ಸೊಗಸಿಲ್ಲ...

ಪ್ರೇಮ ಬೂದಿ - ಕಾಮ ಕೆಂಡ - ಹೊಗೆ ನಿರಂತರ...

ಅಲ್ಲದೇ ಎಲ್ಲವಕ್ಕೂ ಅಪವಾದ ಎಂಬುದೊಂದಿದೆಯಂತೆ; ಬಿಡಿ ಜಗದ ಸೂತಕಗಳ್ಯಾವುದೂ ಈ ಜಂಗಮಂಗೆ ಅರ್ಥವೇ ಆಗುವುದಿಲ್ಲ...

<69>   <69>   <69>

ಸುಡುವ ತೊಡೆ ನಡುವ ಹಸಿಯಲ್ಲಿ ಗಂಡಾಗಿ ಜೀಕಿ ಬೆವರಲ್ಲಿ ಹಮ್ಮನಿಳಿಸಿ ಅವಳ ಕನಸುಗಳ ಆಳುವ ಖೂಳ ಬಯಕೆಯ ಕೆರಳುವಾಟದಿ ಮೊಲೆತೊಟ್ಟನು ತುಟಿಗಳಲಿ ತುಂಬಿಕೊಂಡೆ...
ಆತ್ಮದ ಹಸಿವಿಗೆ ಕಿಡಿ ಸೋಕಿದ ಅನುಭಾವದಾನಂದದಲಿ ಕಂದಾ ಎಂದುಸುರಿ ನೆತ್ತಿ ನೇವರಿಸಿದಳು...
ಪುರುಷಾಹಂಕಾರದ ಹಸಿವಿನಮಲೆಲ್ಲ ಅವಧಿಗೂ ಮುನ್ನ ಸ್ಖಲಿಸಿ ನಿತ್ರಾಣದಲಿ ನಿದ್ದೆಗೆ ಬಿದ್ದೆ ಅವಳದೇ ಮಡಿಲಲಿ...
ಅವಳೆಂದರೆ ಅಮ್ಮ ಕೂಡಾ - ಅವಳ ಕಾಮಕ್ಕೂ ಆತ್ಮದ ನಂಟು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, March 7, 2016

ಗೊಂಚಲು - ಒಂದು ನೂರಾ ಎಂಬತ್ತರ ಮೇಲೆ ಮತ್ತಾರು.....

ಇದು ಬರಹ - ಅವ ಬರಹಗಾರ.....

ಬರೆದವನು ಅವನ ಬರಹದಂತಿಲ್ಲ ಎಂಬುದು ಸಾಮಾನ್ಯ ಆರೋಪ ಮತ್ತು ಅವ ಹಾಗಿಲ್ಲದೇ ಹೋದದ್ದು ತೀರ ಸಾಮಾನ್ಯ ವಿಷಯ... (ಅಪವಾದಗಳ ಹೊರತುಪಡಿಸಿ...)

"ಅದಕೇ ಬರಹಗಳ ಪ್ರೀತಿಸಿ ಬರಹಗಾರನನ್ನಲ್ಲ..." 

ಎಂಥ ಭಾವವೂ ಬರಹ ಆಗುವಾಗ ಅಷ್ಟಿಷ್ಟು ಬಣ್ಣ ಬಳಿದುಕೊಳ್ಳುವುದು ಸಹಜ ಅಲ್ವಾ...
ಗೊತ್ತಿಲ್ಲ -
ನನ್ನ ತಿಳುವಳಿಕೆ ಪ್ರಕಾರ ಬರೆಯುವ ಹೊತ್ತಲ್ಲಿ ಒಂದಿಷ್ಟಾದರೂ ಭಾವದ ಸ್ರವಿಕೆ ಇದ್ದೇ ಬರೆದಿರ್ತಾರೆ ಅಂದ್ಕೋತೀನಿ... 
ಆದ್ರೆ ಎನ್ಗೊತ್ತಾ ಬರೆದ ಭಾವ ಬರೆದು ಆಚೆಯಿಟ್ಟ ಮೇಲೆ ಮತ್ತೆ ಬದಲಾಗಲ್ಲ... 
ಅದು ಬರಹಗಾರನ ಕೈಯಿಂದಲೂ ಕಳಚಿಕೊಂಡು ಮುಕ್ತವಾದ ಭಾವಮಾಲೆ...
ಓದುಗನೊಳಗೆ ಅರಳಿ ಬೆಳೆದೀತು ಇನ್ನಷ್ಟು ಅಷ್ಟೇ... 
ಆದ್ರೆ ಬರಹಗಾರ ಹಾಗಲ್ಲ... 
ಆತ ಮತ್ತು ಆತನ ಭಾವವಲಯ ಪ್ರತಿ ಕ್ಷಣ ಅದಲು ಬದಲಾಗುತ್ತಾ, ಹಳತು ಹೊಸತಾಗುತ್ತಾ, ಅಳಿಯುತ್ತಾ, ಬೆಳೆಯುತ್ತಾ ಇರುತ್ತೆ... 
ಅಲ್ಲದೇ, ಹಲ ಬಾರಿ ಆತ ತಾನಲ್ಲದ ಅಥವಾ ತನ್ನದಲ್ಲದ ವಿರುದ್ಧ ಭಾವಗಳೆಡೆಗಿನ ತನ್ನ ಗುದ್ದಾಟ ಮತ್ತು ಗುದ್ದಾಡುವ ಅದೇ ಭಾವಗಳೆಡೆಗಿನ ಅದ್ಯಾವುದೋ ಸೆಳೆತಗಳನು ಕೂಡ ಅಕ್ಷರೀಕರಿಸುತ್ತಿರುತ್ತಾನೆ ಅವೂ ತನ್ನವೇ ಎಂಬಂತೆ... 
ಬರೆವಾಗ ಇದ್ದ ಅವನದೇ ಮನಸ್ಥಿತಿ ಅವನಿಗೇ ಮತ್ತೆ ದಕ್ಕದೇ ಹೋದೀತು...
ಅದೂ ಅಲ್ಲದೇ ಪ್ರತಿ ವ್ಯಕ್ತಿಯಲ್ಲೂ ಅಂತರಂಗದ ಮತ್ತು ಬಹಿರಂಗದ ಬೇರೆ ಬೇರೆಯೇ ಮಜಲುಗಳಿರುತ್ತೆ ಮತ್ತದು ವೈಜ್ಞಾನಿಕವಗಿಯೂ ಸತ್ಯ ಅಲ್ವಾ... 
ಬರಹ ಅಂತರಂಗದ ಭಾವಗಳ ಸಣ್ಣ ಸಂವಾದೀ ರೂಪ ಅಷ್ಟೇ - ಆಂತರ್ಯದ ಭಾವಾವೇಶದ ವಿಸ್ತಾರ ಅಕ್ಷರಗಳ ಮೀರಿದ್ದಲ್ಲವಾ; ಬದುಕು ವಾಸ್ತವದ ಹೊಣೆಗಾರಿಕೆಗಳ ವ್ಯಕ್ತ ರೂಪ - ಭಾವಕ್ಕೂ ಬದುಕಿಗೂ ಕಲ್ಪನೆ ಮತ್ತು ವಾಸ್ತವಗಳ ನಡುವೆಯ ವ್ಯತ್ಯಾಸ ಇದೆ ಅಲ್ಲವಾ...
ಹಾಗಾಗಿ ಬರಹ ಮತ್ತು ಬರಹಗಾರ ಬೇರೆ ಬೇರೆಯಾಗಿಯೇ ನಿಲ್ಲುತ್ತಾರೆ ಹೆಚ್ಚಿನ ಸಲ... 
ಬದುಕು ಮತ್ತು ಬರಹ ಎರಡರಲ್ಲೂ ಸಮನ್ವಯ ಮತ್ತು ಸಾಮ್ಯತೆ ಸಾಧಿಸುವುದು ಅಷ್ಟು ಸುಲಭದ ಮಾತಲ್ಲ ಅನ್ಕೋತೀನಿ...
ಅದಕ್ಕೆ ವಿಶೇಷವಾದ ಮನೋ ಸಾಮರ್ಥ್ಯ ರೂಢಿಸಿಕೊಳ್ಳಬೇಕಿರುತ್ತೆ - ಅದು ಸಾಮಾನ್ಯರಿಗೆ ನಿಲುಕುವ ಎತ್ತರವಲ್ಲ... 
ಆದರೂ ಅಲ್ಲೊಬ್ಬ ಇಲ್ಲೊಬ್ಬರಾದರೂ ಎರಡರಲ್ಲೂ ಒಂದೇ ಆಗಿರುವವರು ಇದ್ದಾರೆ ಅನ್ನುವುದು ಖುಷಿಯ ಸಂಗತಿ... 

ವ್ಯಕ್ತಿಯನ್ನ ವ್ಯಕ್ತಿಯಾಗಿ ನೋಡಿ ತಿಳಿದು ಆತನ ಬಗ್ಗೆ ನಮ್ಮೆದೆಯಲ್ಲಿ ಚಿತ್ರ ಬರೆದುಕೊಳ್ಳುವುದು ಜಾಣತನ.... 
ಅದಲ್ಲದೇ ಆತನ ಕಲೆಯನ್ನೇ ಆತ ಎಂದು ನಮ್ಮಲ್ಲೇ ನಾವು ನಂಬಿ, ಆತನ ಕಲೆಯ ಪಾತ್ರಗಳನ್ನೇ ಅವನಿಗೂ ಆರೋಪಿಸಿ ನಮ್ಮೊಳಗೆ ಆತನೆಡೆಗೆ ವಿಶೇಷ ಭಾವ ಬೆಳೆಸಿಕೊಳ್ಳುವುದು ಎಷ್ಟು ಸರಿ...?
ರಾಕ್ಷಸನ ಪಾತ್ರ ಮಾಡುವವ ರಾಕ್ಷಸ ಗುಣಗಳ ಹೊಂದಿರಬೇಕಿಲ್ಲ ಅಲ್ಲವಾ...
ರಾಮನ ಆರಾಧಿಸುವಾತನ ಎದೆಯಲ್ಲೂ ಇದ್ದೇ ಇದ್ದೀತು ಒಂದಿನಿತು ದೌರ್ಬಲ್ಯ...
ಅಂತೆಯೇ ಬರಹವೂ ಒಂದು ಕಲೆ... 
ಪ್ರೇಮವನ್ನು ಸೃಷ್ಟಿಸಿದ ಬರಹಗಾರನೇ ಕಾಮವನ್ನೂ ರಂಜನೀಯವಾಗಿ ಸೃಷ್ಟಿಸಬಲ್ಲ... 
ಪ್ರೇಮದ ಸಾಲುಗಳಲ್ಲಿ ಮನಸು ಅರಳುವಂತೆ ಮಾಡಬಲ್ಲವನೇ ಕಾಮದ ಸಾಲುಗಳಲ್ಲಿ ಮೈಬಿಸಿಯ ಏರಿಸಬಲ್ಲ... 
ಯುದ್ಧದ ಕ್ರೌರ್ಯ - ಒಳಮನೆಯ ಶೃಂಗಾರ ಎರಡರ ವರ್ಣನೆಯೂ ಅದೇ ಲೇಖನಿಯ ಕೂಸುಗಳಲ್ಲವಾ...
ನಮಗ್ಯಾವುದು ಬೇಕೋ ಅದನ್ನ ನಾವೆತ್ತಿಕೊಳ್ಳಬೇಕಲ್ಲವಾ... 
ಆದ್ರೆ ನಾವು ಇದು ನನ್ನದೂ ಭಾವ ಅಂತ ಓದಿ ಆಸ್ವಾಧಿಸಿ ಅಷ್ಟಕ್ಕೇ ಸುಮ್ಮನಾಗಲ್ಲ... 
ಬರಹದ ಜೊತೆಗೇ ಬರಹಗಾರನನ್ನೂ ನಮ್ಮಿಷ್ಟದಂತೆ ಆರಾಧಿಸಿ ಅವರ ಇಗೋ ಬೆಳೆಸಿ ದೇವರೋ ಇಲ್ಲಾ ಬುದ್ಧಿಜೀವಿಯೋ ಮಾಡ್ತೀವಿ ಅನ್ನಿಸುತ್ತೆ ನಂಗೆ... 
ಆ ಬರಹಗಾರನ ಬರಹದ ನಮ್ಮಿಷ್ಟದ ಪಾತ್ರಗಳ ಗುಣಗಳನ್ನ ಬರಹಗಾರನಿಗೂ ಆರೋಪಿಸಿಕೊಂಡು ನಮ್ಮಲ್ಲಿ ನಾವೇ ಅವನನ್ನ ನಮಗೆ ಬೇಕಾದಂಗೆ ಚಿತ್ರಿಸಿಕೊಂಡು ಕೊನೆಗೆ ಅವನೆದುರು ನಿಂತ ಘಳಿಗೆಯಲ್ಲಿ ಅಯ್ಯೋ ಮೋಸ ಹೋದೆ ಎನ್ನುವುದು ಎಷ್ಟು ಸರಿ...? 
ಅಭಿಮಾನ ಮತ್ತು ಅಂದಾಭಿಮಾನದ ನಡುವಿನ ವ್ಯತ್ಯಾಸದ ಅರಿವು ನಮಗಿರಬೇಕಲ್ಲವಾ... 
ನಮ್ಮ ಅಭಿಮಾನವನ್ನ ನಿರ್ವಹಿಸುವ ರೀತಿಯನ್ನು ಕಲಿಯದೇ, ನಮ್ಮ ಅಭಿಮಾನದ ಮೇಲೆ ನಮಗೆ ಹಿಡಿತ ಇಲ್ಲದೇ ಹೋಗಿ ಅವರದನ್ನು ಬಳಸಿಕೊಳ್ಳೋಕೆ ನಾವೇ ಅವಕಾಶ ಮಾಡಿ ಕೊಟ್ಟು ನಮ್ಮ ಸ್ವಯಂಕೃತಾಪರಾಧಕ್ಕೆ ಆಮೇಲೆ ಬರೆದವನ ಬದುಕ ಬೈಯ್ಯೋದು ಎಂತು ಸರಿ...

ತನ್ನ ಬರಹದ ಬಗ್ಗೆ ಬರಹಗಾರನಲ್ಲಿ ಬದ್ಧತೆ ಇರಬೇಕು ಎನ್ನುವುದು ಸತ್ಯವೇ – ಆತನಿಗೆ ಸಾಮಾಜಿಕ ಬದ್ಧತೆ ಇರತಕ್ಕದ್ದು ಎಂಬುದನ್ನು ಕೂಡ ಅಗತ್ಯವಾಗಿ ಒಪ್ಪೋಣ... 
ಆದರೆ ಅದು ಯಾವುದೋ ಬಹಿರಂಗದ ಘಟನೆಯನ್ನೋ, ಕ್ರಿಯೆಯನ್ನೋ ಕುರಿತು ಹೇಳುವಾಗ ಅಥವಾ ಅವುಗಳ ಬಗ್ಗೆ ‘ಹೇಳಿಕೆಗಳನ್ನು’ ಕೊಡುವಾಗ ಸರಿಯೇ ಹೊರತೂ; ಒಂದು ಕಲೆ ಅಂದರೆ ತನ್ನ ಅಂತರಂಗದಲ್ಲಿ ಸಂಚಾರಿಯಾಗಿ ಚಲಿಸೋ ಒಂದು ಭಾವವನ್ನ ಹೇಳುವಾಗ ಅರ್ಥಾತ್  ‘ಭಾವ ಪ್ರಧಾನವಾದ’ ಕಥೆ, ಕವಿತೆ, ಕಾದಂಬರಿಗಳಲ್ಲಿ ಅನ್ವಯ ಆಗಲಾರದು ಎನ್ನಿಸುತ್ತೆ... 
ಅಲ್ಲಿ ಅವ ಆ ಕ್ಷಣದ ಆ ಭಾವಕ್ಕಷ್ಟೇ ಬದ್ಧ ಆದರೆ ಸಾಕು ಅನ್ನಿಸುತ್ತೆ ನಂಗೆ... 
ಇಲ್ಲದೆ ಹೋದಲ್ಲಿ ‘ಭಾವ ಪ್ರಧಾನ ಬರಹ ಹುಟ್ಟುವುದೇ ಕಷ್ಟ...
ಯಾಕೆಂದರೆ ಅಲ್ಲಿ ಬರಹಗಾರ ತನ್ನ ಸೃಷ್ಟಿಯ ಹತ್ತಾರು ಪಾತ್ರಗಳಲ್ಲಿ ಹಂಚಿ ಹೋಗಿರುತ್ತಾನೆ... 
ತನ್ನದಷ್ಟೇ ಅಲ್ಲದೇ ತನ್ನ ಸುತ್ತಲಿನ ಅಥವಾ ತನ್ನದಕ್ಕೆ ತನ್ನ ಕಲ್ಪನೆಯ ವ್ಯಕ್ತಿ, ಶಕ್ತಿಗಳ ಭಾವವಲಯವನ್ನು ತನ್ನೊಳಗೇ ಆರೋಪಿಸಿಕೊಂಡು ನಿರೂಪಿಸಿರುತ್ತಾನೆ... 
ಹಾಗಿದ್ದಾಗ ಯಾವುದನ್ನು ಅವನಿಗೆ ಆರೋಪಿಸುವುದು...? 
ಮತ್ತು ಯಾಕೆ ಹಾಗೆ ಆರೋಪಿಸಬೇಕು...??
ಭಾವಲೋಕದಂತೆ ಅಥವಾ ಭಾವಿಸಿಕೊಂಡಂತೆ ವಾಸ್ತವದ ಬದುಕು ಯಾರದ್ದೂ ಇರುವುದಿಲ್ಲ ಅಲ್ಲವಾ... 
ಭಾವಸ್ರಾವಕ್ಕೆ ಕಲ್ಪನೆಯ ವಿಸ್ತಾರ ದಕ್ಕಿ ಇನ್ನೊಂದು ಹೊಸ ಭಾವ ಲೋಕ ಸೃಷ್ಟಿ ಆಗುವಲ್ಲಿ ಯಾವ ಸಮಾಜ ನೆನಪಾಗುತ್ತೆ...
ಕಲ್ಪನೆಯ ಆಗಸದಲ್ಲಿ ಅದೆಷ್ಟು ಭಾವಗಳಿಗವನು ಬದ್ಧನಾದಾನು...

ಇಷ್ಟಕ್ಕೂ ಆತ ಕೂಡ ನಮ್ಮಂತೆಯೇ ಒಬ್ಬ ಮನುಷ್ಯ... 
ಎಲ್ಲ ರಾಗ ದ್ವೇಷ ತ್ವೇಷಗಳ ಒಳಗೊಂಡ ಸಾಮಾನ್ಯ ಮನುಷ್ಯ... 
ಒಂದ್ಯಾವುದೋ ಕಲೆ ಸಿದ್ಧಿಸಿದೆ ಅಷ್ಟೇ - ಭಾವಲೋಕವನ್ನು ಅಕ್ಷರಗಳಲ್ಲಿ ಕಟ್ಟಿಕೊಡಬಲ್ಲ ಕಲೆ... 
ಅದರಾಚೆ ಆತನೂ ನಮ್ಮಂತೆಯೇ – ಹೆಚ್ಚಿನ ಸಲ ನಮಗಿಂತ ಎಡಬಿಡಂಗಿ ಮನುಷ್ಯ... 
"ಅದಕೇ ಬರಹಗಳ ಪ್ರೀತಿಸಿ ಬರಹಗಾರರನ್ನಲ್ಲ..." ಅಂತೀನಿ... 
ವ್ಯಕ್ತಿ ಮುಖ್ಯ ಆಗಬಾರದು ನಮಗೆ ವಿಚಾರ ಮುಖ್ಯವಾಗಬೇಕು... 
ವಿಚಾರದ ಸತ್ಯಾಸತ್ಯತೆ ಮತ್ತು ಪ್ರಸ್ತುತತೆಯ ಮೇಲೆ ಬರಹದ ತೂಕ ನಿರ್ಧಾರವಾಗಬೇಕು ನಮ್ಮೊಳಗೆ ಅಲ್ಲವಾ...
ವಿಚಾರವ ಬಿಟ್ಟು ವ್ಯಕ್ತಿಯ ಹಿಂದೆ ಬೀಳುವ ಮನಸ್ಥಿತಿಯಿಂದಲೇ ಇದ್ದೀತು ಇಲ್ಲಿ ಇಷ್ಟೆಲ್ಲ ಬುದ್ಧಿಜೀವಿಗಳು, ದೇವಮಾನವರೆಲ್ಲ ಹುಟ್ಟಿಕೊಳ್ಳುವುದು ಅನ್ನಿಸಲ್ಲವಾ...
ಸೈದ್ಧಾಂತಿಕ ಭಿನ್ನತೆಗಾಗಿ ‘ವೈಯಕ್ತಿಕ ಪ್ರೀತಿಯ’ ಕೊಂದುಕೊಳ್ಳುವುದು ಮತ್ತು ವೈಯಕ್ತಿಕ ಆಪ್ತತೆಗಾಗಿ ತಪ್ಪನ್ನೂ ಹಾಡಿ ಹೊಗಳುವುದು ಎರಡೂ ಅಪದ್ಧವೇ ಅನ್ನಿಸಲ್ಲವಾ...
ಬರಹ ಮತ್ತು ಬರಹಗಾರ ಎರಡನ್ನೂ ಬೇರೆ ಬೇರೆ ನೋಡುವ ಪ್ರಜ್ಞಾವಂತಿಕೆಯನ್ನು ಬದುಕನ್ನು ಓದುವುದನರಿತ ಕೆಲವರಾದರೂ ರೂಢಿಸಿಕೊಂಡರೆ ಒಳ್ಳೆಯದು ಮತ್ತು ಆದಷ್ಟು ಅದನ್ನ ಮತ್ತೊಬ್ಬರಲ್ಲೂ ಮೂಡಿಸೋ ಪ್ರಯತ್ನ ಮಾಡಿದರೆ ಇನ್ನೂ ಒಳ್ಳೆಯದು ಅನ್ನಿಸುತ್ತೆ ನಂಗೆ - ಅದು ಅನಿವಾರ್ಯ ಅಂತಲೂ ಅನ್ನಿಸುತ್ತೆ...

"ಬರಹಗಾರನ ಪ್ರೀತಿಸುವುದಾದರೆ ಅದಕೆ ಅವನ ಬರಹಗಳ ಆಚೆಯ ಬೇರೆಯದೇ ಆಪ್ತತೆಯ ಕಾರಣಗಳಿರಲಿ - ಆಗ ಬರಹ ಮತ್ತು ಬಂಧಕ್ಕೆ ಬೇರೆಯೇ ಚೆಂದವಿದ್ದೀತು..."

ಏನೋ ಹೀಗೆಲ್ಲ ಅನ್ನಿಸುತ್ತೆ...
ಇವು ನನ್ನ ತಿಳುವಳಿಕೆ ಅಥವಾ ಭಾವ ಅಷ್ಟೇ... 
ಅಲ್ಪನ ಅತಿ ಮಾತು ಅನ್ನಿಸಿದರೆ ಕ್ಷಮಿಸಿ...

ಆದರೂ ಒಂದು ಕಿವಿಮಾತು ಏನೆಂದರೆ -
"ಬರಹಗಳ ಪ್ರೀತಿಸಿ ಬರಹಗಾರರನ್ನಲ್ಲ..." 

Wednesday, March 2, 2016

ಗೊಂಚಲು - ನೂರಾ ಎಂಬತ್ತೈದು.....

ಅಸಹಾಯ ಆಕ್ರೋಶದಲ್ಲಿ ಉಳಿವುದು ಕಣ್ಣ ಹನಿಯ ಕರೆಯೊಂದೆ.....

ಪ್ರೇಮ, ಪ್ರಣಯ ಅಷ್ಟೇ ಅಲ್ಲ ಕೊನೆಗೆ ಪ್ರೀತಿ, ಸ್ನೇಹ, ಕಾಳಜಿಗಳು ಕೂಡ ಕತ್ತಲಲ್ಲೇ ಪ್ರಕಟವಾಗಬೇಕು, ಬಾಗಿಲ ಮರೆಯಲ್ಲಿಯೇ ವ್ಯಕ್ತವಾಗಬೇಕು - ಕತ್ತಲೆಯ ತೊತ್ತಾಗಬೇಕು...

ಬೆಳಕಲ್ಲಿ ಬಿಚ್ಚಿಟ್ಟಿರೋ ಅಸ್ಪ್ರಶ್ಯರಾಗುತ್ತೀರಿ - ಬಾಗಿಲ ಮರೆಯ ಕ್ರೌರ್ಯವೂ ಸಮ್ಮತ ಪ್ರೇಮ ಅನ್ನಿಸಿಕೊಳ್ಳುತ್ತದೆ; ಬಾಗಿಲಾಚೆ ಹೆಗಲು ತಬ್ಬಿದ ಕಾಳಜಿಯೂ ಅನೈತಿಕ ಕಾಮ ಇಲ್ಲಿ...

ಬಾಗಿಲಾಚೆಯ ಸ್ವಚ್ಛ ಬೆಳಕಲ್ಲೂ ತೋರುವುದಾದರೆ ಅದಕೆ ಗಾಢ ಬಣ್ಣದ ಮುಖವಾಡ ತೊಡಿಸಿ ತೋರಬೇಕು – ಪ್ರತಿ ಬಂಧಕ್ಕೂ ಸಂಬಂಧದ ಹೆಸರು ಬೇಕು – ಪ್ರತಿ ಭಾವಕ್ಕೂ ನಕಲಿ ಮುಖವೊಂದು ಬೇಕು...

ತರಹೇವಾರಿ ಮುಖವಾಡಗಳು ಸಿಕ್ಕುತ್ತವೆ ಈ ಸಾಮಾಜವೆಂಬೋ ಜಾತ್ರೆಯ ಬಯಲಲ್ಲಿ...

ನೀ ನಿನ್ನಂತೆ ಬಾಳು ಎನ್ನುತ್ತಲೇ ನೀನೆಂದರೆ ಇದು ಎಂದು ನನದೊಂದು ಚಿತ್ರವನ್ನೂ ಅವರೇ ಕಟ್ಟಿಕೊಡುತ್ತಾರೆ - ಅದರಾಚೆ ನನ್ನ ದಾರಿಯ ನಾ ಕಂಡುಕೊಳ್ಳುವುದು ಅಪರಾಧ ಇಲ್ಲಿ... 

ಎಂಬಲ್ಲಿಗೆ ಅಪ್ರಾಮಾಣಿಕನಾಗುವುದನ್ನು ನಮ್ಮವರೇ ನಮಗೆ ಕಲಿಸುತ್ತಾರೆ...

ಉಹುಂ – ಅಪ್ರಾಮಾಣಿಕ ಆಗಲಾರೆ ಅಂತ ಹೊರಟೆನೋ, ಮುಖವಾಡಗಳ ತೊಡದೇ ಓಡಾಡುವ ಧೈರ್ಯ ತೋರಿದೆನೋ ಅಲ್ಲಿಗೆ ಮುಗಿಯಿತು; ಅಲ್ಲಿಂದಾಚೆ ನನ್ನ ನಗು, ನನ್ನ ಖುಷಿಗಳೆಲ್ಲ ಅನೈತಿಕತೆಯ ಬಣ್ಣದ ಕೂಸಾಗಿ ಬದುಕಬೇಕು ತಲೆ ತಗ್ಗಿಸಿ...

ಬದುಕ ಮಡಿಲಿಗೆ ಕಿಂಚಿತ್ತಾದರೂ ನಗೆಯ ಸುರಿಯದವರೂ, ನನ್ನೊಳಗಣ ಒಳಿತುಗಳನೆನಿತು ಗುರುತಿಸದವರೂ ನನ್ನದೊಂದು ಕೆಡುಕನ್ನ ಹುಡುಹುಡುಕಿ ನಡು ಬೀದಿಯಲ್ಲಿ ಪಾರಾಯಣ ಮಾಡುತ್ತಾರೆ...

ಇಡುವ ಪ್ರತಿ ಹೆಜ್ಜೆಗೂ ಸಾವಿರ ಕಣ್ಣುಗಳ ಅನುಮಾನದ ಕಾವಲು...

ಉಸಿರಾಟಕ್ಕೂ ಪ್ರಶ್ನೆಗಳಿವೆ ಇಲ್ಲಿ; ಉತ್ತರಕೂ ಇಂಥದ್ದೇ ಇರಬೇಕೆಂಬ ಆರೋಪಿತ ನಿರೀಕ್ಷೆಗಳಿರುತ್ತವೆ - ನೇರ ಉತ್ತರಕ್ಕೆ ಮತ್ತೆ ಅನುಮಾನದ ಹೊಗೆಯ ವಾದಗಳ ಬೇಗೆ...

ಯಾರವರು ಅಂತರಂಗ ಶುದ್ಧಿ ಶ್ರೇಷ್ಠ ಅಂದವರು – ಇಲ್ಲಿ ಬಹಿರಂಗಕ್ಕೆ ಮಾತ್ರ ಹಾರ ತುರಾಯಿ...

ಯಾವುದೇ ಹಂಗುಗಳ ಮೀರಿದ ಸ್ವತಂತ್ರ ಭಾವಗಳು ಬೆಳೆದು ನಿಲ್ಲುತ್ತವೆ ಅಂತರಂಗದಲ್ಲಿ; ಆ ಭಾವಗಳಿಗೂ ಹೊಸ ಬೇಲಿಗಳು ಸೃಷ್ಟಿಯಾಗುತ್ತವೆ ಬಹಿರಂಗದಲ್ಲಿ...

ಅಂತರಂಗ ಕೊಳೆತು ನಾರಿದರೂ ಯಾರಿಗೂ ಬೇಸರವಿಲ್ಲ – ಬಹಿರಂಗ ಘಮಘಮಿಸುತಿದ್ದರಾಯಿತು...

ಆತ್ಮಶುದ್ಧಿಯ ಪ್ರವರವೇನಿದ್ದರೂ ಪುರೋಹಿತನ ಬಾಯಿ ಚಪಲ ಮತ್ತು ಗರುಡ ಪುರಾಣದ ಅಧ್ಯಾಯವಷ್ಟೇ...

ನೇರವಂತಿಕೆಯ ಧೈರ್ಯ ಎನ್ನುವುದು ವಿಪರೀತದ ಸ್ವೇಚ್ಛೆಯಂತೆ ಕಾಣುತ್ತೆ ಮಡಿವಂತ (?) ಕಣ್ಣುಗಳಿಗೆ – ಅಂತೆಯೇ ನನ್ನಾತ್ಮದ ಪ್ರಾಮಾಣಿಕತೆ ಮೊಂಡುವಾದ...

ಹಂಚಿಕೊಂಡ ಯಾವುದೋ ನೋವು ಆಪ್ತತೆಯ ಬಾಗಿಲ ನಂಬಿಕೆಯ ಕೀಲಿಯಾಗಲ್ಲದೇ ಸಹಾನುಭೂತಿಯ (ಸಹಾನುಭೂತಿ: ಈ ಶಬ್ದವೇ ಹಿಂಸಾತ್ಮಕ ಸ್ವಸ್ಥ ಮನಸಿಗೆ) ನಿರೀಕ್ಷೆಯ ಹಂಬಲವಾಗಿ ಗೋಚರಿಸುವಲ್ಲಿ; ಬಂಧವೊಂದರ ಪ್ರೀತಿಯ ಮೂಲ ಪ್ರೀತಿ ಆಗಿರದೇ ಯಾವುದೋ ನೋವಿನೆಡೆಗಿನ ಸಹಾನುಭೂತಿ ಎಂದಾದಲ್ಲಿ ಕನಸಿನುಸಿರ ಕರುಳಿಗೆ ಕತ್ತರಿಯಾಡಿಸಿದಂತ ಭಾವ ಎದೆಯಲ್ಲಿ...

ಮಹಾ ಹುಂಬ ಧೈರ್ಯದ ಭಂಡ ಪ್ರಾಣಿ ನಾನು – ಆದರೂ ಕೊನೆಗೆ ಗೆಲ್ಲುವುದು ಸಮಾಜವೇ...

ಯಾಕೆಂದರೆ ನಾನಿರುವುದೂ ಅದೇ ಸಮಾಜದಲ್ಲಿ – ಅದರ ಒಂದು ಭಾಗವಾಗಿ; ಅಷ್ಟೇ ಅಲ್ಲ ಅದೇ ಸ್ವಸ್ಥ (?) ಸಮಾಜದ (ಈ ಶಬ್ದದ ಬಗೆಗೇ ಮಹಾ ಗೊಂದಲವಿದೆ ನಂಗೆ) ಮುಖ್ಯ ಭೂಮಿಕೆಯಲ್ಲಿ ನಾ ಎದೆಯಲಿಟ್ಟುಕೊಂಡ ನನ್ನದೂ ಎಂದುಕೊಂಡ ಜೀವಗಳೂ ಇವೆ...

ಅಲ್ಲಿಗೆ ತೊಟ್ಟು ನೆಮ್ಮದಿಯಿಲ್ಲ – ಬಿಟ್ಟು ಬದುಕಿಲ್ಲ...

ನನ್ನಂತೆ ನನ್ನ ಇರಗೊಡದ ಶ್ರೇಷ್ಠ ಸಮಾಜವೇ ನಿನ್ನೊಡನೆ ಏಗುವುದಕಿಂತ ಸಾವಿನೊಡನೆ ಸರಸ ಹಿತವೆನಿಸುತ್ತೆ – ಹಾಗಂತ ನಾ ಹೇಳಿದರೆ ಕಿಂಚಿತ್ತೂ ಅತಿಶಯೋಕ್ತಿ ಇಲ್ಲ...

ತುಂಬಾನೇ ಸುಸ್ತೆನಿಸುತ್ತೆ ಈ ನಡೆಗಳು; ಆಯ್ದುಕೊಂಡ ದಾರಿ ತಪ್ಪೋ ಸರಿಯೋ ಎಂಬಲ್ಲಿ ಗೊಂದಲಗಳಿಗಿಂತ ಇಲ್ಲೀಗ ಅದೆಷ್ಟೋ ಪ್ರಶ್ನೆಗಳಿಗೆ ಸಾವಿಗಿಂತ ಸಮರ್ಥ ಉತ್ತರ ಬೇರಿಲ್ಲ ಎಂಬುದು ಸತ್ಯ ಅನ್ನಿಸಿಬಿಡುತ್ತೆ – ಪಕ್ಕನೆ ನಿಂತುಬಿಡಬೇಕು ಉಸಿರು ಯಾರದೇ ಹಂಗಿಗೂ ಅರೆಕ್ಷಣವೂ ಸಿಗದೇ...

ಉರುಳಿಬಿದ್ದ ಮಾಂತ್ರಿಕನ ಶಕ್ತಿ ಕೇಂದ್ರವೀಗ ಭಾವಗಳ ರುದ್ರಭೂಮಿ; ಮುರಿದ ನಗೆಯ ಮಂತ್ರದಂಡವೇ ವ್ಯಾಸಪೀಠವಾಗಿ ಅದರ ಮೇಲೀಗ ಗರುಡ ಪುರಾಣ – ಅದನ್ನೂ ಮುಖ ಅರಳಿಸಿಕೊಂಡೇ ಕೇಳಬೇಕು; ಸ್ವಂತಿಕೆಗೆ ಎಳ್ಳು ನೀರು...

ಸ್ವಂತಿಕೆ ಸತ್ತ ಬದುಕಲ್ಲಿ ಮಾತಿಗೇನು ಕೆಲಸ - ನಗೆಯೂ ಕ್ರುದ್ಧ ಮೌನದ ಗುಲಾಮ ಅಲ್ಲಿ - ಬದುಕು ಅಗತ್ಯಕಿಂತ ಅಧಿಕ ದೀರ್ಘವಾಗುತಿರುವ ಭಾವ ಈಗಿಲ್ಲಿ...

Monday, February 15, 2016

ಗೊಂಚಲು - ನೂರಾ ಎಂಬತ್ನಾಕು.....

ಏನೇನೋ ಹೇಳಬೇಕನ್ನಿಸಿ.....

ಆರು ವೈರಿಗಳಂತೆ,
ಒಂಭತ್ತು ರಸಗಳಂತೆ,
ನಾಲ್ಕು ಪುರುಷಾರ್ಥಗಳಂತೆ,
ಮತ್ತೆ ನಾಲಕ್ಕು ಆಶ್ರಮಗಳಂತೆ...
ಇರುವ ಐದೇ ಇಂದ್ರಿಯಗಳಲಿ ಈ ಕೆಲವನ್ನು ನಿಗ್ರಹಿಸಬೇಕಂತೆ, ಇನ್ಕೆಲವನ್ನು ನಿರ್ವಹಿಸಬೇಕಂತೆ...
ಇವುಗಳಿಂದೆಲ್ಲ ನಾಕ, ನರಕಗಳಂತೆ...
ಇವಕೆಲ್ಲ ಜನ್ಮಗಳು ಏಳಂತೆ...!!!
ಇಷ್ಟೇ -
ತೀರದ ತೀವ್ರ ಹಸಿವಿನ ಬದುಕ ಮಹಾ ಯಜ್ಞಕ್ಕೆ ಸಾವಿನ ಪ್ರಶ್ನಾತೀತ ಪೌರೋಹಿತ್ಯ...
^^^<>^^^
ಅವನು:
ಶತ ಶತಮಾನಗಳ ಮೌನ ಹೊದ್ದ ದಂಡೆ - ಅಬ್ಬರದ ಮಾತಿನ ಶರಧಿ - ಇಬ್ಬರನೂ ತಬ್ಬುವ ಬೆಳುದಿಂಗಳು ಎಲ್ಲ ಹಾಗೇ ಇವೆ...
ನಾನೋ ಬೆಳದಿಂಗಳಲ್ಲೂ ಅಡಗಲು ನೆರಳ ಮರೆಯ ಹುಡುಕುತ್ತೇನೆ ಈಗೀಗ...
ನಿನ್ನ ಕಣ್ಣ ಮೊನೆಯಲ್ಲಿನ ನನ್ನೆಡೆಗಿನ ಕರುಣೆಯ ರಂಗೋಲಿಯ ಅಳಿಸಲು ಹೇಳಿದ್ದು ನಾನೇ ನಿಜ...
ನನ್ನ ಹಸಿ ಹಸಿ ವಾಸ್ತವದ ಬಿರು ನುಡಿಗಳಿಗೆ ನೀ ನಿನ್ನ ಮೌನವ ಕಲಿಸಿದ್ದೂ ಸೂಕ್ತವೇ ಅನ್ನಿಸುತ್ತೆ ಒಮ್ಮೊಮ್ಮೆ...
ಆದರೆ ಇವೆಲ್ಲದರ ನಡುವೆ ಸ್ನೇಹದ ಒಳಮನೆಯಲ್ಲಿ ನಗು ಅಸ್ತಿತ್ವ ಕಳಕೊಂಡದ್ದು ಯಾವಾಗ ಅಥವಾ ನಗು ಇದ್ದಿದ್ದೇ ಭ್ರಮೆಯಾ...!?
ಸ್ನೇಹಗಳ ಮುಖಾ ಮುಖಿ ಮಿಲನದಲ್ಲಿ ಮಾತು ಗೈರಾದರೆ ಒಪ್ಪಬಹುದು, ಒಪ್ಪವಾದ ಮೌನವ ಅಪ್ಪಬಹುದು; ಆದರೆ ನಗುವಿನ ಹರಿವಿದು  ನಿಂತುದಾದಲ್ಲಿ ಭಾವ ಬಾಂಧವ್ಯದ ಉಸಿರು ಕಟ್ಟೀತು...
ಕಾಲವೂ ಕಾಯುತಿದೆ ನನ್ನೊಡನೆ - ಆ ನಗೆಯ ಪಾರಿಜಾತವಿಲ್ಲಿ ಮತ್ತೆ ಅರಳೀತಾ...?

ಅವಳು:
ಹೆಜ್ಜೆ ಹೆಜ್ಜೆಗೂ ಕವಲೊಡೆವ ದಾರಿ...
ಜಾಲಿಯ ಬನದಲ್ಲಿ ನೆರಳ ಹುಡುಕುವ ಪರಿ...
ನಿನ್ನ ಅಕ್ಕರೆಯ ತಂಗಾಳಿಯ ಇದಿರು ನಿಂತು ಎದೆಯ ಮೌನದ ಮೋಡವ ಕರಗಲು ಬಿಟ್ಟರೆ ಕಣ್ಣು ಜೋಗಿಯ ಎದುರು ಧುಮ್ಮಿಕ್ಕೋ ಜೋಗವಾಗುತ್ತೆ ಮತ್ತು ನಾನೇ ಸಲಹಿಕೊಂಡ ಸ್ನೇಹದೆದುರಲ್ಲೇ ಆದರೂ ಅಳುವುದೆಂದರೆ ಅಭಿಮಾನದ ಸಾವು ಎಂಬೆನ್ನ ಭ್ರಮೆಯ ಮೀರಲಾರದ ಭಯ...
ಅದಕೇ ಎನ್ನೆದೆ ತೊಟ್ಟಿಲ ಕನಸ ಕೂಸಿನ ಬಿಕ್ಕಳಿಕೆಯ ಕಥೆಯ ಎನ್ನ ಕಿವಿಯೂ ಕೇಳದಿರಲೆಂದು ಅವುಡುಗಚ್ಚಿ ಹೆಣಗುತ್ತೇನೆ...
ಹಾಗಂತ ಕರುಳ ಹಸಿ ಹುಣ್ಣನು ಮುಚ್ಚಿಟ್ಟು ಸುಳ್ಳು ನಗೆಯ ಬಣ್ಣದ ಅರಿವೆಯ ಹೊದೆಯಲಿ ಹೇಗೆ ಆತ್ಮೀಕವೆಂದು ನಾನೇ ನಂಬುವ ಸ್ನೇಹದೆದುರಲ್ಲಿ - ಅಲ್ಲದೇ ಬದುಕಿಗೆ ಮುಖವಾಡವ ತೊಡಿಸಲಾರೆ ಕಣೋ...
ನೆನಪ ಚಿತ್ತಾರಗಳ ಹೊತ್ತು ದೂರವಿದ್ದೇ ಹತ್ತಿರವೆನಿಸೋ ಬಂಧಕಿಲ್ಲಿ ಮೌನವೊಂದೆ ಆಶ್ರಯವೀಗ...
ಕಣ್ಣಲ್ಲಿ ಕಣ್ಣಿಟ್ಟು, ನೆತ್ತಿಗೆ ಕೈಯಿಟ್ಟು ಬಯಸಬೇಡ ನಗೆಹೊನಲ ಒಡನಾಟದೂಟ...
ಇದ್ದುಬಿಡಲಿ ಬಿಡು ಈ ನೇಹ ಹೀಗೇ - ಅರೆಬಿರಿದ ಹೂವಿನ ಹಾಗೆ...
 --- (ಮುಂದುವರಿದೀತು...)
^^^<>^^^
ಕೊಳಲನೂದುವ ಕರಿಯನ ಕೈಯ ಮುದ್ರೆಯುಂಗುರದ ಕಡುಗೆಂಪು ಹರಳಲ್ಲೂ ರಾಧೆಯ ಹೂವೆದೆಯ ನೀರಜ ಒಲವ ಹೊಳಪು...
^^^<>^^^
ಮನದ ಮನೆಯ ದೇವಭಾವದೊಡವೆಗಳ ಕಾವಲಿಗೆ 'ಕ್ಷಮೆ' ನಿಂತಿರುವ ತನಕ ಯಾವ ನೇಹಕೂ ಸಾವಿಲ್ಲ...
ಅಹಮಿಕೆಯ ಮೀರಿ ಕೇಳದೆಯೆ ಕೊಡುವ, ಅದೇ ಅಹಮಿಕೆಯ ಕಳಕೊಂಡು ಕೇಳಿ ಪಡೆವ ಹಿರಿದು ಭಾವವದು ಕ್ಷಮೆ...
ಎದೆಯ ಕಲ್ಯಾಣಿಯಲ್ಲಿ ಕ್ಷಮೆಯ ಒರತೆ ಬತ್ತಿದ ಮರು ಘಳಿಗೆ ಸ್ನೇಹ, ಪ್ರೀತಿ, ಪ್ರೇಮ, ಒಲುಮೆ, ಕಾಮ ಎಂಬಿತ್ಯಾದಿ ಯಾವ ಭಾವಗಳಿಗೂ ಜೀವ ಇರುವುದಿಲ್ಲ - ನನ್ನಲ್ಲೂ, ನಿನ್ನಲ್ಲೂ - ಯಾರಲ್ಲೂ...
ಕ್ಷಮೆಯ ಕಾವಲಿದ್ದಾಗ ಒಳಗುಡಿಯ ಯಾಜಮಾನ್ಯ ಪ್ರೀತಿಯದ್ದಿರುತ್ತೆ - ಕ್ಷಮೆ ಎದೆಬಾಗಿಲಿಂದಾಚೆ ಕಾಲಿಟ್ಟ ಘಳಿಗೆಯಿಂದ ಒಳಮನೆಯ ತುಂಬ ಕ್ರುದ್ಧ ಮೌನದ್ದೇ ಪಾರುಪತ್ಯ...
ಪ್ರೀತಿಯ ಕತ್ತು ಹಿಸುಕಲಾಗಿ ಕ್ಷಮೆ ಪಥ ಬದಲಾಯಿಸುತ್ತೆ - ಕ್ಷಮೆ ಕಳೆದು ಹೋಗಲಾಗಿ ಪ್ರೀತಿ ಮರುಹುಟ್ಟಿನ ಸಣ್ಣ ಶಕ್ತಿಯನ್ನೂ ಕಳೆದುಕೊಂಡು ಮರಣದೆಡೆಗೆ ಸಾಗುತ್ತೆ... 
ಇದಕಿಂತ ದೊಡ್ಡ ದುರಂತ ಇನ್ನೇನಿದೆ ಭಾವ ಬಾಂಧವ್ಯಕ್ಕೆ...
ಎಲ್ಲರೆದೆಯಲೂ ಒಂಚೂರು ಪ್ರೀತಿ ಹಸಿವು, ಒಂದಿನಿತಾದರೂ ಕ್ಷಮೆ ನಿರುದ್ದಿಶ್ಯವಾಗಿ ನಿರಂತರ ಉಸಿರಾಡಿಕೊಂಡಿರಲಿ ತಮ್ಮ ಭಾವ ಬಂಧಗಳೆಡೆಗೆ... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, February 7, 2016

ಗೊಂಚಲು - ನೂರಾ ಎಂಬತ್ಮೂರು.....

ಎದೆಯ ಹಾಲಿನ ಋಣ...
- ಹೌದು ಇದು ನಿನ್ನದೇ ಕನವರಿಕೆಯಲ್ಲಿ.....

...ಕರುಳ ಗಂಟಿನ ಗೆಳತೀ -
ಎದೆಯ ಕಳವಳವನೆಲ್ಲ ಕಣ್ಣು ಕಥೆಯಾಗಿ ಹೇಳುವಾಗ ನಿನ್ನ ಹೆಗಲ ದೃಢತೆಯ ನೆನಪಾಗುತ್ತೆ...

ಬೆಳದಿಂಗಳ ದಾರಿಯಲೂ ಆನೇ ಎನ್ನ ನೆರಳಿಗಂಜಿ ಹೆಜ್ಜೆ ನಡುಗುವಾಗ ನಿನ್ನ ಮಡಿಲ ತಂಪಿನ ನೆನಪಾಗುತ್ತೆ...

ಬೆಳಕ ಪ್ರಖರತೆಯಲ್ಲಿ ಹಾದಿ ತಪ್ಪಿ ಎಡವಿದ ಭಾವಗಳ ಗಾಯ ಚುರ್ರೆನ್ನುವಾಗ ನೀ ಒಳಮನೆಯಲಿ ಗುಣುಗುತಿದ್ದ ಮಾತಿನ ಸತ್ಯ ಅರಿವಾಗುತ್ತೆ...

ಮೌನದೆತ್ತರದ ಅರಿವಿದ್ದೂ ಮಾತಿನ ಮೋಹದಲಿ ಬಿದ್ದು ಹೊರಳುವಾಗ ನೀನಲ್ಲಿ ಸದಾ ಸವೆಸುವ ಒಂಟಿ ದಾರಿಯ ನೆನಪಾಗಿ ದಿಗಿಲಾಗುತ್ತೆ...

ಇರುಳ ಹೊದಿಕೆಯೊಳಗೆ ಸುಖದ ಹಸಿವಿನಿಂದ ನಾಭಿಯಾಳದ ನಾಡಿ ಸಿಡಿದು ಚಡಪಡಿಸುವಾಗ ನಿನ್ನ ಪರಿತ್ಯಕ್ತ ಬದುಕಿನ ಶುಭ್ರತೆ ನನ್ನೊಳಗಿನ ಅಲ್ಪತೆಯನ್ನ ಎತ್ತಿ ತೋರುತ್ತೆ...

ನೆನಪುಗಳ ಮೆಟ್ಟಿ ಕೇವಲ ನನ್ನ ಇಂದಿನ ನಗುವಿಗಷ್ಟೇ ನಾ ತುಡಿಯುವಾಗ ಎಲ್ಲ ಇದ್ದೂ ಅನಾಥವಾದ ನಿನ್ನ ಕನಸುಗಳ ನಿಟ್ಟುಸಿರ ಬಿಸಿ ಕಿವಿಯ ಸುಡುತ್ತೆ...

ಒಂದೇ ಒಂದು ನೇರ ನುಡಿಗೆ ಭಾವ ಭಿನ್ನತೆಯ ಹೆಸರಲ್ಲಿ ಸದ್ದೇ ಇಲ್ಲದೆ ಎದ್ದು ಹೋಪುವರ ನಡುವೆ ನಿನ್ನೆಲ್ಲ ನಿಲುವುಗಳ ಜೊತೆ ಕಿತ್ತಾಡಿ ಹೊರಟು ಸೋತು ಮರಳಿದಾಗಲೂ ಮತ್ತದೇ ಮೆಲುನಗೆಯಿಂದ ಮುದ್ದಿಸೋ ನಿನ್ನ ಬೇಶರತ್ತಾದ ಮಮತೆಯ ನೆನಪಾಗುತ್ತೆ...

ಕೊನೆಯ ಮಾತೊಂದ ಹೇಳಲಾ -
ಈ ಬದುಕ ಮುನ್ನಡೆಯ ಎಕೈಕ ಉದ್ದೇಶ ನೀನು; ಬದುಕಿಗೆ ಮುನ್ನುಡಿ ಬರೆದವಳು - ನಿನ್ನೊಡನೆಯ ಮಾತು ಮಾತಿನ ಜಗಳ, ಮರಳಿ ಮರಳಿ ತೋರುವ ಮರುಳ ಮನಸಿನ ಮುನಿಸು ಎಲ್ಲವೂ ನಿನ್ನೆಡೆಗಿನ ಪ್ರೀತಿಯ ಮತ್ತೊಂದು ಮಗ್ಗುಲಷ್ಟೇ...

ಲವ್ ಯೂ ಕಣೇ ಹುಡುಗೀ...
ಜಗದ ಚೆಲುವೆಲ್ಲ ಇವಳ ಕಣ್ಣಲ್ಲೇ...

ಹ್ಯಾಪಿ ಹುಟ್ದಬ್ಬ ಆಯೀ...

Monday, February 1, 2016

ಗೊಂಚಲು - ನೂರೆಂಬತ್ತೆರಡು.....

ಮತ್ಕೆಲವು ಬಿಡಿ ಭಾವಗಳು.....

ಬಿಟ್ಟು ಬಂದೂರ ಕನವರಿಕೆಯಲಿ.....
ಸಾವು ಕೂಡಾ ಒಂದು ನಿಲ್ದಾಣ ಅಷ್ಟೇ ಎಂದು ನಂಬುವ ಹೊತ್ತಲ್ಲಿ ಬದುಕಿಗೆ ನಿರಂತರ ಚಲನೆ ಒಂದೇ ಅಂತಿಮ - ನಿಲ್ಲಬಾರದು ನಡಿಗೆ...
ಈ ಕ್ಷಣ ನಾ ಭಾವಿಸಿಕೊಂಡದ್ದು ಅಲ್ಲಲ್ಲ ಭಾವಿಸಿಕೊಂಡದ್ದಷ್ಟೇ ನನ್ನ ಬದುಕು - ಅಳುವೆಂದರೆ ಅಳು, ನಗುವೆಂದರೆ ನಗು...
ಮನದ ಭಾವ ಮತ್ತು ಪರಿಸ್ಥಿತಿಯ ಚಿತ್ರ ವಿಚಿತ್ರ ಗತಿಗೆ ತಕ್ಕಂತೆ ನಡಿಗೆ ನಿರ್ಧಾರ...
ಭಾವ ಮತ್ತು ಪರಿಸ್ಥಿತಿಯ ನಿಭಾವಣೆಯಷ್ಟೇ ವ್ಯಕ್ತಿ ವಿಶೇಷಣ...
ಹಾಗಿದ್ದಾಗ ಶ್ರೇಷ್ಠ ಅಥವಾ ನಿಕೃಷ್ಠ ಎಂಬ ಸಾಮಾನ್ಯ ವಿಭಜನೆ ಮತ್ತು ಸಾಧನೆಯ ಮಾನದಂಡವೇ ಗೊಂದಲಮಯ ಎನ್ನಿಸುತ್ತದೆ - ಹೆಚ್ಚಿನ ಸಲ ಅರ್ಥ ಕಳಕೊಳ್ಳುತ್ತದೆ...
ಚಿಗುರಿನ ಮುಖ ಆಗಸಕಿದ್ದರೂ ಮರ ಬೇರು ತಬ್ಬಿದ ನೆಲಕ್ಕೆ ಸ್ವಂತ...
ಅಷ್ಟಾಗಿಯೂ ನನ್ನ ಅನ್ನವಿದ್ದಲ್ಲೇ ನನ್ನ ನೆಲೆ; ಇಲ್ಲಿದ್ದು ಅಲ್ಲಿಗಾಗಿ ಬಿಕ್ಕಳಿಸೋದು, ಅಲ್ಲಿದ್ದು ಇಲ್ಲಿಗಾಗಿ ಹಂಬಲಿಸುವುದಕಿಂತ ಇದ್ದಲ್ಲೇ ನಗುವರಳಿಸಿಕೊಂಬುದು ಬದುಕಿನ ಜಟಿಲ ಆದರೆ ಅಷ್ಟೇ ಅನುಪಮ ಕಲೆ...
ಮೈಮುರಿದೇಳುವ ಕನಸಿನೆದುರು ಬಿಕ್ಕಳಿಸೋ ನೆನಪುಗಳು ಆಕಳಿಸಿದರೆ ಇದ್ದಲ್ಲೇ ಸಿದ್ಧ ಸಮೃದ್ಧ ನಗೆಯ ಹೋಳಿಗೆ - ಕ್ಷಣ ಕ್ಷಣದ ಹಸಿ ನಗುವೇ ಬದುಕ ಏಳಿಗೆ - ಅಂತರಂಗದ ಕಸುವಿನ ನಗು ಒಲಿಯಲಿ ಪ್ರತಿ ಬದುಕ ಪಾಲಿಗೆ...
***
ಕೊಬ್ಬಿದ ಹೋರೀನ ಹಿಡಿದು ಪಳಗಿಸ ಹೋದರೆ ಪ್ರಾಣಿ ಹಿಂಸೆ - ಅದನ್ನೇ ಕಡಿದು ತಿಂದರೆ ಆಹಾರ ಸಂಹಿತೆ...
"ಹೊಡೆದರೆ ಹಿಂಸೆ - ಕಡಿದರೆ ಹಸಿವು" ಇದ್ಯಾವ ನ್ಯಾಯವೋ ಕಾಣೆ...
ಎತ್ತಿನ ಗಾಡೀನ ಓಡಿಸಿ ಗೆದ್ದರೆ ಪ್ರಾಣಿ ದಯೆಗೆ ಮಾರಕ - ಕುದುರೆ ಬಾಲಕ್ಕೆ ಕೋಟಿಗಳ ಸುರಿದು ಚಪ್ಪಾಳೆ ಹೊಡೆದರೆ ಮನರಂಜನೆ...
"ಗ್ರಾಮೀಣವಾದರೆ (ಬಹುತೇಕ ಬಡವರದ್ದು) ಹಿಂಸೆ - ನಗರದವರದ್ದು (ಬರೀ ಸಿರಿವಂತರದ್ದು) ಮನರಂಜನೆ" ಇದ್ಯಾವ ನೀತಿಯೊ ಅರಿಯೆ...
ಎಲ್ಲಾ ಪ್ರಾಣಿಗಳ ಜೀವಾನೂ ಒಂದೇ ಅಲ್ವಾ..??!!
ಈ ಬುದ್ಧಿಜೀವಿಗಳ ಬುದ್ಧಿಯ ಮರ್ಮ ಅರ್ಥವೇ ಆಗಲ್ಲಪ್ಪ...:(
(*** ಕ್ಷಮಿಸಿ ಬುದ್ಧಿಜೀವಿಗಳೇ ಹಿಂಗೆಲ್ಲಾ ಅಂದೆ ಅಂತ ಮನಸು ನೋಯಿಸಿದ ಕೇಸು ಝಡಿದು ಕೊಲ್ಬೇಡಿ ಆಯ್ತಾ...)
***
ಮನದೊಳಮನೆಯ ಪ್ರಶಾಂತಿಯಿಂದ ಬದುಕ ನಗೆಯ ಸಮೃದ್ಧಿಯಾ ಅಥವಾ ನಗೆಯ ಸಮೃದ್ಧಿಯಿಂದ ಶಾಂತಿಯಾ..? ಗೊಂದಲವಾಗುತ್ತೆ ಕಣೋ...
ಆದರೆ ಒಂದನೊಂದು ತಬ್ಬಿದ ಒಲವ ಕೂಸುಗಳಾದ ಶಾಂತಿ ಮತ್ತು ನಗುವಿಗಾಗಿ ಒಂದಿನಿತು ಕನಸುಗಳ ಬಿಟ್ಟು ಕೊಟ್ಟುದಾದರೆ ಅದಕೆ ತ್ಯಾಗದ ಗಾಢ ಬಣ್ಣ ಬಳಿಯಲಾರೆ...
ಒಲವ ಮಂದಾಕಿನಿಯಂತೆ ಬದುಕ ಬಿಂದಿಗೆಯ ತುಂಬಿದವ ನೀನು - ನಿನ್ನಿಂದಲೇ ಅಲ್ಲವಾ ಈ ಶಾಂತಿ, ಈ ನಗೆಯ ಸಮೃದ್ಧಿ ಈ ಬದುಕಿಗೆ...
ನಿನ್ನೊಲವ ಋಣಕೆ ನಿನ್ನ ನಾಳೆಯ ಖುಷಿಗೆ ನಿನ್ನನೇ ಬಿಟ್ಟು ಕೊಡುವ ನೋವಿಗೂ ತ್ಯಾಗದ ಹೆಸರಿಡಲಾರೆ...
ಆದರೆ ನನ್ನ ಬದುಕಿನ ಲಭ್ಯತೆ ಇಷ್ಟೇ ಎಂಬುದ ನೆನೆವಾಗ ಹನಿಯೆರಡು ಜಾರಿದರೆ ನೀ ನೋಯದಿರು ಅಷ್ಟೇ...
ಪ್ರೀತಿಯಿಂದ - ನಿನ್ನವಳು...
***
ಹಿಮ ಮೌನ:
ಹಿಮ ಕರಗಿದರೆ ಜೀವ ನದಿ - ನಾಗರಿಕತೆಗಳೇ ಬೆಳೆದಾವು...
ಮೌನ ಕರಗಿದರೆ ಭಾವ ಹುಚ್ಚು ಹೊಳೆ - ಬದುಕ ಕೈತೋಟದ ತುಂಬಾ ನೇಹದ ಹೂಗಳ ಸಮೃದ್ಧ ಬೆಳೆ...
ಕರಗದೆ ನಿಂತರೆ.........
ಮೌನದ ಭಾರಕ್ಕೆ ಮಾತು ಹರಳುಗಟ್ಟುವಲ್ಲಿ, ಒಳಗಿನಳಲಿಗೆ ಸ್ವಚ್ಛ ಹೊರ ಹರಿವಿನ ಸೆಳವಿಲ್ಲದಲ್ಲಿ ಕರುಳ ಜೋಗುಳವೂ ತಪ್ತ ಗುಪ್ತ ಗಾಮಿನಿ...
***
ಅಲ್ಲಿ ನಿನ್ನ ಕಾಲ್ಗೆಜ್ಜೆಗಳೊಂದಿಗೆ ಅಲೆಗಳು ಮಾತಿಗಿಳಿದಿವೆಯಂತೆ...
ನಿನ್ನೆದೆಯ ಬಿರು ಮೌನವ ನಿನ್ನ ಆ ಗೆಜ್ಜೆಗಳಿಗೂ ಕಲಿಸುವಲ್ಲಿ ನೀ ಸೋತ ಸುದ್ದಿಯ ಚಂದಮ ನನಗೆ ಕೇಳುವಂತೆ ತಾರೆಗಳಿಗೆ ಹೇಳಿ ಪುಳಕಗೊಳ್ಳುತಿದ್ದ...
ನಿತ್ಯವೂ ಒಂಟಿ ಅಲೆಯುವ ಬೀದಿ ಕೊನೆಯ ತಿರುವಿನ ಪಾರಿಜಾತದ ಕೊಂಬೆ ತುದಿಯಲ್ಲಿ ಈಗಷ್ಟೇ ಅರಳಿದ ಮೊಗ್ಗೊಂದ ಹಿತವಾಗಿ ಚುಂಬಿಸಿದೆ ನಾನಿಲ್ಲಿ...
ಇದಕೆಲ್ಲ ಪ್ರತ್ಯಕ್ಷ ಸಾಕ್ಷಿಯಾದ ಗಾಳಿಯ ರೋಮಾಂಚಿತ ಮೃದು ಮೊರೆತಕ್ಕೆ ನಿನ್ನೆದೆ ನಸುಗಂಪಿಸುವಾಗ ನನ್ನ ನೆನಪಾಗಿಲ್ಲವೆಂದು ಹುಸಿನುಡಿಯಬೇಡ...
ಕಪ್ಪು ಹುಡುಗೀ -
ಮುಚ್ಚಿಡಲು ಒಲವು ಕಳ್ಳ ಬಸಿರಲ್ಲ - ಒಲವೆಂದರದು ತಾಯ್ಗರುಳ ತೊಟ್ಟಿಲ ಸಂಗೀತ - ನೀ ಹೇಳದೆಯೂ ನಾ ಕಾಣಬಲ್ಲ ಆರ್ದ್ರ ಭಾವದ ಕಣ್ಣಿನ ಆರದ ದೀಪ...
ಏಳು ಏಳೇಳು ಎಂಬೆಲ್ಲ ಲೆಕ್ಕಗಳು ತಪ್ಪುವಷ್ಟು ಜನ್ಮಗಳ ಮರು ಹುಟ್ಟಿನ ಅತಿ ಹುಚ್ಚು ಅಭಿಲಾಶೆ ಈಗ; "ನಿನ್ನೆದೆಯ ಒಲವ ಅನುಭಾವದ ಸನ್ನಿಧಿಯೆಡೆಗಿನ ನನ್ನೊಳಗಿನ ಹಸಿವಿಗೆ..."

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, January 25, 2016

ಗೊಂಚಲು - ನೂರಾ ಎಂಬತ್ತು + ಒಂದು.....

ಆಗೊಂದು ಹುಚ್ಚು ನಗು - ಅಲ್ಲೊಂದು ಕರುಳ ಹನಿ 
ಸವೆಸಿದ ಈ ದಾರಿಯಲ್ಲಿ ಉಳಿದ ಹೆಜ್ಜೆ ಗುರುತು.....
(ಈ ಭಾವದಂಗಳಕೀಗ ಭರ್ತಿ ಐದು ವಸಂತಗಳು...)

ಬದುಕಿದು ಫಕ್ಕನೆ ಪಥ ಬದಲಿಸಿ ಪೂರ್ವದಿಂದ ದಕ್ಷಿಣದೆಡೆಗೆ ಹೊರಳಿದ ಸಂಧಿಕಾಲ... 
ಒಮ್ಮೆಲೆ ಹತ್ತಾರು ಕಂಗಾಲುಗಳು... 
ಬೆಳದಿಂಗಳಲಿ ಮಿಂದು, ಕನಸುಗಳ ಹೊದ್ದು ಬೆಚ್ಚೆಗೆ ಮಲಗಿದ್ದವನು ಬೆಚ್ಚಿಬಿದ್ದಿದ್ದೆ... 
ಒಂದು ಮುಟಿಗೆ ಬೆಳದಿಂಗಳು ದಕ್ಕಬೇಕೆಂದರೂ ಸುತ್ತ ಹತ್ತು ಬೀದಿಗೆ ಕರೆಂಟ್ ಹೋಗಬೇಕಾದ ಈ ಊರನ್ನ ನೆನೆದೇ ದಂಗಾಗಿದ್ದೆ...  

ಮಹಾನಗರಿಯಲ್ಲಿ ಹೊಟ್ಟೆ ತುಂಬೀತು, ಆದರೆ ಭಾವದ ಹಸಿವಿಗೇನ ಮಾಡಲಿ ಕಂಗಾಲಿನಿಂದ ಕೇಳಿದ್ದೆ ಗೆಳೆಯನ...
ಅಕ್ಷರವಾಗಿಸು ಭಾವಗಳ – ಸ್ನೇಹಗಳು ಬಳಸುತ್ತವೆ ಬದುಕನ್ನ ಅಂದಿದ್ದ ಜೀವದ ಗೆಳೆಯ... http://kanasukangalahuduga.blogspot.in/ 
ಇಲ್ಲಿ ಬಂದು ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ಹೊತ್ತಲ್ಲೇ ನಿನ್ನ ಆಂತರ್ಯಕ್ಕೊಂದು ವಿಸ್ತಾರ ಸಿಗಲಿ, ನಗು ಸುಲಭವಾದೀತು ಅಂತಂದು ಹೀಗೊಂದು ಅಂಗಳ ಸೃಷ್ಟಿಸಿಕೊಟ್ಟ ಇನ್ನೊಬ್ಬ ಆತ್ಮದ ಗೆಳೆಯ... http://samudrateera.blogspot.in/

ಕಾದಿಟ್ಟುಕೊಂಡ ಹಾಗೂ ಆಗೀಗ ಅಲ್ಲಲ್ಲೇ ಹುಟ್ಟಿ ಅಲ್ಲೇ ಸಾಯುವ ಅಷ್ಟಿಷ್ಟು ಆಪ್ತ ಭಾವಗಳಿಗೆಲ್ಲ ಅಕ್ಷರದ ಅಂಗಿ ತೊಡಿಸುತ್ತ ಹೋದೆ...
ಕನಸಿಲ್ಲದ ದಾರಿಯನ್ನೂ ಆಪ್ತವಾಗಿಸುವ ಕಾಲನೂ ಅಳಿಸದೆ ಉಳಿಸಿದ ಮಧುರ ನೆನಪುಗಳು – ಒಡೆದ ಕನ್ನಡಿಯ ಚೂರುಗಳಲ್ಲೂ ಅರೆಬರೆಯಾಗಿಯಾದರೂ ಮೂಡುವ ಪ್ರತಿಬಿಂಬದಂತೆ ವಾಸ್ತವತೆಯ ವಿರೋಧದ ನಡುವೆಯೂ ಹುಟ್ಟೋ ಪುಟ್ಟ ಪುಟ್ಟ ಕನಸುಗಳು – ಬಯಲ ಮೌನಕ್ಕೂ, ಗವಿಯ ಮಾತಿಗೂ, ನಗೆ ಬೆಳಕಿಗೂ, ನೋವ ಕತ್ತಲ ಮೂಲೆಗೂ ಜೊತೆನಿಲ್ಲುವ ಸ್ನೇಹಭಾವಗಳು – ಒಟ್ಟಾರೆಯಾಗಿ ನನ್ನೊಳಗೆ ಆ ಆ ಕಾಲಕ್ಕೆ ರೂಪು ತಳೆದ ಕಾಮದಿಂದ ಹಿಡಿದು ಕೈವಲ್ಯದವರೆಗಿನ ಎಲ್ಲಾ ಭಾವಗಳನೂ ಯಾವುದೇ ಪೂರ್ವಗ್ರಹ ಮತ್ತು ಮಡಿವಂತಿಕೆಯನು ಮೀರಿ ಅದಿದ್ದಂತೆಯೇ ಅಕ್ಕರೆಯಿಂದ ಇಲ್ಲಿಯ ಗೊಂಚಲುಗಳನಾಗಿಸಿದೆ...
ಅಂಥ ನನ್ನ ಭಾವಲೋಕದ ಅಕ್ಷರ ರೂಪದ ಹೊರಾಂಗಣಕ್ಕೆ ನಾನಿಟ್ಟುಕೊಂಡ ಹೆಸರು:
“ಭಾವಗಳ ಗೊಂಚಲು...”

ಮಹಾನಗರಕ್ಕೆ ಬಂದು ಏನು ಕಡಿದು ಕಟ್ಟೆ ಹಾಕಿದೆ ಅಂತ ಕೇಳಿದ್ರೆ ಹೇಳೋಕಿರೋ ದೊಡ್ಡ ಸಾಧನೆ ಇದೊಂದೇ... 
ನನ್ನೊಳಗಣ ನನ್ನನೂ ಖುಷಿಯಾಗಿಟ್ಟ, ಶಾಂತವಾಗಿಟ್ಟ ಏಕೈಕ ಸಾಧನೆ...
ಇನ್ನಷ್ಟು ಆತ್ಮ ಸಾಂಗತ್ಯದ ಸ್ನೇಹಗಳು ಮತ್ತು ನಿಮ್ಮೆಲ್ಲರ ಪ್ರೀತಿ ಜೊತೆಯಾದದ್ದು ಈ ಅಂಗಳದಿಂದಲೇ...

ಏನನ್ನ ಬರೆದು ತುಂಬಿದೆ ಅಂತಂದರೆ ಹೊಸದೇನೂ ಇಲ್ಲ...
ಮತ್ತೆ ಮತ್ತೆ ಕಾಡುವ ಅದದೇ ಭಾವಗಳ ಬೇರೆ ಬೇರೆ ಶಬ್ಧಾಲಂಕಾರದಿಂದ ಒಂದೊಂದೇ ಎಳೆಯಾಗಿ ಪೋಣಿಸಿದ್ದಷ್ಟೇ...
ಬೇರೆ ಬೇರೆ ಬಣ್ಣದ ಶಬ್ದಗಳ ಅಂಗಿ ತೊಟ್ಟ ಅದೇ ಹಳೆಯ ಭಾವಗಳು - ಅದೇ ಅಡಿಗೆ ಆದರೆ ಉಪ್ಪು ಖಾರದ ಮಿಶ್ರಣದಲ್ಲಷ್ಟೇ ವ್ಯತ್ಯಾಸ...
ಅಷ್ಟಾದರೂ ಓದಿ ಮೆಚ್ಚಿ ಅಭಿಮಾನವ ಸುರಿಸಿದ ನಿಮ್ಮ ಪ್ರೀತಿ ಬಲು ದೊಡ್ಡದು – ಆಗೀಗ ಇದು ನನ್ನದೂ ಭಾವ ಕಣೋ ಅಂತ ನೀವಂದದ್ದು ಈ ಜೀವ ಭಾವಕ್ಕೆ ಸಿಕ್ಕ ಬಹು ದೊಡ್ಡ ಪುರಸ್ಕಾರ...
ನಿಮ್ಮಗಳ ಆ ಪ್ರೀತಿಗೊಂದು ನಮನ...

ಹೌದು ಇಷ್ಟೆಲ್ಲ ಹೇಳಲು ಕಾರಣ ಏನೆಂದರೆ; ಮತ್ತೇನಿಲ್ಲ “ಭಾವಗಳ ಗೊಂಚಲು...” ಎಂಬ ನನ್ನೀ ಅಕ್ಷರಯಾನಕ್ಕೆ ಇಂದು ಭರ್ತಿ ಐದು ವಸಂತ ತುಂಬಿತು...!!!
ಮುಂದೆಯೂ ಬರೆದೇನು ಭಾವ ಕಾಡಿದರೆ – ಜೀವ ಹಾಡಿದರೆ...
ಬರೆದುದಾದರೆ ಇರಲಿರಲಿ ಹೀಗೆಯೇ ನಿಮ್ಮ ಓದಿನ ಆರೈಕೆ...



                                               




ವಿಶ್ವಾಸ ವೃದ್ಧಿಸಲಿ – ಶ್ರೀವತ್ಸ ಕಂಚೀಮನೆ.

Thursday, January 14, 2016

ಗೊಂಚಲು - ನೂರಾ ಎಂಬತ್ತು.....

ಮತ್ತೂ ಅಷ್ಟು ಬಿಡಿ ಭಾವಗಳು.....

ಆ ಸೂರ್ಯನೂ ಪಥ ಬದಲಿಸುವನಂತೆ; ಆದರೆ ಜಗ ಬೆಳಗುವುದ ಬಿಡಲಾರ – ನಿತ್ಯ ನೈಮಿತ್ಯಕ್ಕೆ ತಡೆಯಿಲ್ಲ...
ಹಿಗ್ಗಿದರೂ ಕುಗ್ಗಿದರೂ ಬೆಳದಿಂಗಳು ಅಳಿಯುವುದಿಲ್ಲ – ಚಂದಿರನ ಇರುಳಿನ ಹಾಡಿಗೆ ಕೊನೆಯಿಲ್ಲ...
ಋತು ಋತುವಿಗೂ ವಸುಧೆಯ ವಸನ ಬದಲಾಗುವುದು – ಒಮ್ಮೆ ಮದುಮಗಳ ಸಿಂಗಾರ ಮಗದೊಮ್ಮೆ ಕಿಲುಬು ಹಿಡಿದ ಬಂಗಾರ...
ಸೂರ್ಯ - ಚಂದಮರ ಕರುಣೆ, ವಸುಧೆಯೊಡಲ ಮಮತೆಯ ಕೂಸು ನಾನು...
ನನ್ನೀ ಬದುಕೂ ಜಾಡು ಬದಲಿಸುತ್ತದೆ - ಹಾಗಂತ ಅದೇ ಕಾರಣಕ್ಕೆ ನಡಿಗೆ ನಿಲ್ಲಬಾರದಲ್ಲವಾ; ಬದುಕಿನ ನಡಿಗೆ ಅಂದರೆ ನನ್ನ ನಡಿಗೆ...
ನೆನಪು ಮುಚ್ಚಟೆಯ ಮುಗುಳ್ನಗುವಾದೀತು ಅಥವಾ ಕರುಳಿನಾಳದ ಕರಗದ ಬಿಕ್ಕಳಿಕೆಯೂ ಆದೀತು...
ಕನಸು ಎದೆಯುಬ್ಬಿಸುವ ಗೆಲುವಿನಾಲಯವಾದೀತು ಇಲ್ಲವೇ ಬಯಲ ಗಾಳಿಯ ಗುಲಾಮ ತರಗೆಲೆಯಂತೆ ಕಸುವಿಲ್ಲದೆ ನರಳೀತು...
ಆ ಎಲ್ಲ ಸಂದರ್ಭಗಳಲೂ ನಗೆಯೊಂದೇ ಎದೆಯ ಹಾಡು ಮತ್ತು ಕರುಳ ಹಸಿವಾದಲ್ಲಿ ಬದುಕು ಸಾವಿರ ಕವಲುಗಳ ಎದುರಲ್ಲೂ ಶೃತಿ ಮೀರದ ನನ್ನ ಆಣತಿಗನುವಾಗಿ ಮಿಡಿವ ನನ್ನ ಕೈಯ ಕೂಸೇ... 
ಬದುಕ ಕಣಜದ ತುಂಬ ನಗೆಯೇ ತುಂಬಲಿ - ಪ್ರತಿ ಹೆಜ್ಜೆಯಲೂ ನಲಿವು ಸಂಕ್ರಮಣದ ಸುಗ್ಗಿಯ ಪೈರಾಗಲಿ...
ಶುಭಾಶಯಗಳು...
=\=/=\=/=
ಸ್ನೇಹವೇ -
ಬೀಜದೆದೆಯ ಒಗಟ ಬಿಡಿಸ ಹೋಗಿ
ನಕ್ಕ ಹಸಿರಿಗೆ ಮರುಳಾಗಿ
ಬಿಕ್ಕಳಿಸುತ್ತ ನಿಂತ ಹಸಿ ಮಣ್ಣಂತೆ ಈಗ ನಾನು...
ಒಗಟು ಮರೆತೇ ಹೋಗಿದೆ...
ಒಲವು ಎದೆಯ ಬೆಳಕಾಗಿದೆ...
ನಗೆಯೀಗ ಕಣ್ಣ ಸಿಂಗರಿಸಿದ ಕಾಡಿಗೆ...
ಋತುಗಳ ನಡಿಗೆಯಲ್ಲಿ ಉದುರೀತಾದರೂ ಎಲೆ
ಬಿಡದೆ ಕಾಯ್ದುಕೊಳ್ಳುವೆ  ಹಿಡಿಯದಂತೆ ಗೆದ್ದಲು ಹಸಿರ ತಾಯಿ ಬೇರಿಗೆ...
ಸದಾ ಹಸಿ ಮಣ್ಣು ನಿನ್ನೆದುರು ನಾನು...
=\=/=\=/=
ಸಾಗರನ ಅವಿರತ ಒಳಗುದಿಯ ಮೊರೆತ - ದಂಡೆಯ ಕದಡದ ಕಡು ಮೌನ - ಕಾಡಿನ ಗರ್ಭಸ್ಥ ಧ್ಯಾನ - ಮಳೆಯ ಸ್ವರ ಸಲ್ಲಾಪ - ಹಣೆ ನೇವರಿಸೋ ಆಯಿಯ ಬೆಚ್ಚನೆ ಮಡಿಲು - ಎದೆ ಬಾಗಿಲಲ್ಲಿ ನೀ ಉಳಿಸಿ ಹೋದ ಹೆಜ್ಜೆ ಗುರುತು...
ಎಂಥ ದಿವ್ಯ ಸಾನಿಧ್ಯಗಳೋ - ನಾನು ನಾನಾಗಿ ನನ್ನೊಳಗೆ ಕಳೆದು ಹೋಗಲು ಇಲ್ಲಲ್ಲದೆ ಬೇರೆಲ್ಲಿ ಸಾಧ್ಯ...
ಹೇ ಕನಸೇ,
ಅಮ್ಮನ ಹಾರೈಕೆಯ ಹಣೆ ತಿಲಕವನಿಟ್ಟು, ನಿನ್ನ ಕಾಲ್ಗೆಜ್ಜೆಯಿಂದ ಎತ್ತಿಕೊಂಡ ಒಂದು ಪುಟ್ಟ ಗಿಲಕಿಯ ಎದೆಬೀದಿಯಲಿ ಆಡಲು ಬಿಟ್ಟು, ಅಲೆಗಳ ನಾಟ್ಯಕೆ ಕಣ್ಣಾಗಿ, ಮರಳ ಮೌನಕೆ ಕಿವಿಯಾಗಿ, ಮಳೆಗೆ ನೆತ್ತಿಯ ತೆರೆದಿಟ್ಟು, ಕಾಡಿನಾಳವ ಅಳೆಯುತ್ತ ಆವಾಹಿಸಿಕೊಂಡು ಆರಾಧಿಸಬೇಕು ನಿನ್ನ - ಅಳಿಯಲೇಬಾರದು ನನ್ನೊಳಗಣ ನಿನ್ನೆಡೆಗಿನ ಹುಚ್ಚು ಹಾಗೇ ಜೀವಿತದೆಡೆಗಿನ ಕರುಳ ಮೋಹ...
=\=/=\=/=
ಹೇ ನೇಹವೇ -
ನನ್ನೊಳಿದೆಯಾ ಎಂಬ ಅರ್ಹತೆಯ ಲೆಕ್ಕಾಚಾರವ ಮೀರಿ ನೀ ಕೈಯೆತ್ತಿ ಸುರಿದ ಪ್ರೀತಿ ನಿನ್ನೆದೆ ಗುಡಿಯ ಬತ್ತದ ಔದಾರ್ಯದ ದೊರೆತನ...
ನಾನೆಂಬೋ ನನ್ನಹಂಮ್ಮಿನ ಕೋಟೆಯ ದಾಟಿ ನೀನೀವ ಪ್ರೀತಿ ಪ್ರಸಾದಕ್ಕೆ ತಲೆ ಬಾಗಿ ಬೊಗಸೆಯೊಡ್ಡಿದೆ ಎಂಬುದಷ್ಟೇ ನನ್ನ ಹಿರಿತನ...
ಕೊಟ್ಟು ಗರ್ವವಿಲ್ಲ - ಪಡೆದು ಸಂಕೋಚವಿಲ್ಲ...
ಹೇಳು -
ಕೊಟ್ಟವನಲ್ಲೂ, ಪಡೆದಾತನಲ್ಲೂ ಹಿಗ್ಗಿನ ಸುಗ್ಗಿಯ ಸಗ್ಗದ ಸಿರಿ ಭಾವವೊಂದನೆ ಉಳಿಸಿ ನಗುವುದು ಸವಿ ಸ್ನೇಹದ ಅಕ್ಕರೆಯೊಂದೇ ಅಲ್ಲವೇ...
=\=/=\=/=
ಕೂಸಿನ ಬದುಕಿಗೆ ಬಣ್ಣ ತುಂಬುವುದೆಂದರೆ ಇಷ್ಟೇ ಅಲ್ಲವಾ - ಮಗುವಾಗಿ ಮಗುವ ಮುಂಗೈಗಿಷ್ಟು ನಗೆಯ ಮದರಂಗಿಯ ಬಳಿಯುವುದು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, January 10, 2016

ಗೊಂಚಲು - ನೂರೆಪ್ಪತ್ತೊಂಬತ್ತು.....

ಕಾಡಿದರೆ ಕಾಡಬೇಕು ಪ್ರೀತಿ ಹಸಿವು.....
** "ಪ್ರೀತಿ" ಶಕ್ತಿ - ಬಲಹೀನತೆಯಲ್ಲ...

ಬದುಕಿನ ಎಂಥಾ ಯುದ್ಧವನ್ನೂ ಸಲೀಸಾಗಿ ಗೆದ್ದು ಮುನ್ನಡೆಯಬಹುದೇನೋ "ಪ್ರೀತಿ" ಕೈಯಲ್ಲಿನ ಆಯುಧವಾದರೆ...

ಎಂಥಾ ದಾಳಿಯೂ ಎದೆ ಸೀಳಲಾರದೇನೋ "ಪ್ರೀತಿ" ರಕ್ಷಣೆಯ ಗುರಾಣಿಯಾದರೆ...

ಎಂಥಾ ಬರಡು ಎದೆನೆಲದಲೂ ನಗೆಯ ಹಸಿರು ಚಿಗುರೀತೇನೋ "ಪ್ರೀತಿ" ಉಳುವ ನೇಗಿಲಾದರೆ; "ಪ್ರೀತಿ" ಮಳೆಯಾದರೆ...

ಬದುಕಿಗೊಂದು ದಿವ್ಯ ಉನ್ಮಾದದ ಚಂದ ದಕ್ಕೀತು ನನ್ನೆಲ್ಲಾ ಹಸಿವಿನ ಆಳದಲ್ಲಿ "ಪ್ರೀತಿ" ಹಾಸುಹೊಕ್ಕಾಗಿದ್ದರೆ...

ಕೊನೆಯಲೊಮ್ಮೆ ನನ್ನೊಳಗನು ನಾ ನೋಡಿಕೊಂಡರೆ ನೆಮ್ಮದಿಯ ಉಸಿರು ಹೆಮ್ಮೆಯನುಸುರೀತು ಸಾಧನೆಯ ದಾರಿಗೆ "ಪ್ರೀತಿ" ಬೆಳಕಾದರೆ...

ಓ ಅಂತರಾತ್ಮವೇ,
ಪ್ರೀತಿಗಿಂತ ಹಿರಿಯ ಉಡುಗೊರೆಯಿಲ್ಲ ಅಂದೆಯಲ್ಲ...
ಕಲಿಸಬಾರದೇ ಬದುಕ ಪ್ರೀತಿಸುವುದ...
ಬೆಳೆಸಬಾರದೇ ಪ್ರೀತಿ ಹಂಚುವ ಭಾವ ಶಕ್ತಿಯ...
ಪ್ರೀತಿ ಉಡುಗೆ ತೊಡಿಸಿ ಈ ಬದುಕನೇ ಪ್ರೀತಿಯಾಗಿಸಬಾರದೇ - ಬಣ್ಣ ತುಂಬಬಾರದೇ...

Thursday, January 7, 2016

ಗೊಂಚಲು - ನೂರಾ ಎಪ್ಪತ್ತು ಮೇಲೆಂಟು.....

ಎಲ್ಲಾ ಬಿಡಿ ಭಾವಗಳೇ.....

ಈ ಸುಳಿವ ಚಳಿ ಗಾಳಿಗೆ ರವಿ ರಾಯನೂ ಹೊತ್ತೇರಿದ ಮೇಲೂ ಮೋಡವ ಹೊದ್ದು ಮಲಗಿದಂತಿದೆ...
ನನಗೋ ಎದೆಯ ಹೊದಿಕೆಯಾದವಳ ಬಿಚ್ಚು ಹೆರಳ ಮರೆಯಲಿ ತುಟಿ ಮಧುವ ಇಷ್ಟಿಷ್ಟೇ ಹೀರಿ ಮತ್ತೇರುತ್ತಾ, ಬೆಸೆದ ಬೆತ್ತಲೆ ಹೊತ್ತಿಸಿದ ಬೆಂಕಿಯಲಿ ತೇಕುವ ಬಿಸಿಯುಸಿರ ಹಿತದಲ್ಲಿ, ವಕ್ಷ ಸಂಪತ್ತಿನ ಸೊಂಪಲ್ಲಿ, ನಾಭಿ ಸುಳಿಯ ಹಸಿವಲ್ಲಿ, ಮತ್ತೇರಿದ ಅವಳ ಕಟಿಯ ಬಿರುಸಿನ ಬಿಸಿಯಲ್ಲಿ ಮಂಡಿಯೂರಿ ಕಳೆದು ಹೋದ ಕಳೆದಿರುಳ ಕನಸಿನದೇ ಗುಂಗು...
=_=_=
ಪವಿತ್ರ ಪ್ರೇಮ, ಆದರ್ಶ ಪ್ರೇಮದ ಮಾತು ಕೇಳುತ್ತೆ ಅಲ್ಲಲ್ಲಿ...
ಪ್ರೇಮದಲ್ಲಿ ಸುಖವಾಗಿರುವುದು, ಖುಷಿ ಖುಷಿಯಾಗಿ ಇರುವುದು ಖಂಡಿತ ಬೇರೆ ಬೇರೆ...
ಆದರ್ಶ ಪುರುಷ ರಾಮನ ರಾಜ್ಯದಲ್ಲಿ ಸುಖಕ್ಕೆ ಕೊರತೆಯೇ..?
ಆದರೂ ಏಕೈಕ ಪತ್ನಿ ಕೂಡಾ ಅಳುತ್ತಲೇ ಭೂಮಿಯೊಡಲ ಸೇರಿದಳಂತೆ...
ರಾಮನಿಗೋ ಪ್ರೇಮವೂ ಆದರ್ಶವೇ ಆಗಿತ್ತೇನೊ...
ಇವನೊಬ್ಬನಿದ್ದಾನೆ ಕೃಷ್ಣ - ಮಹಾ ಲಂಪಟನಂತೆ (?)...
ರಾಜ್ಯದ ತುಂಬಾ ಅವನ ಹೆಣ್ಣುಗಳೇ...
ಆದರೂ 'ಕೃಷ್ಣನಿಗಾಗಿ' ಅತ್ತವರೇ ಎಲ್ಲರೂ - 'ಕೃಷ್ಣನಿಂದಾಗಿ' ಅತ್ತವರ ಸುದ್ದಿ ಇಲ್ಲ ಎಲ್ಲೂ...
ಕೃಷ್ಣಂಗೆ ಪ್ರೇಮ ಬದುಕಿನ ಸ್ಫೂರ್ತಿ ಸೆಲೆಯಂತೆ ಕಾಣುತ್ತೆ...
ಪ್ರೇಮಕ್ಕೆ ಆದರ್ಶದ ಅಥವಾ ಆರೋಪಿತ ಪಾವಿತ್ರ್ಯದ ಬಣ್ಣ ಬಂದಾಗ ಅದು ಕೇವಲ ನಾಲ್ಕು ಗೋಡೆಗಳ ನಡುವಿನ ಸುಖವಾಗಿ ಅಷ್ಟೇ ಉಳಿಯುತ್ತೆ ಅನ್ನಿಸುತ್ತೆ ನಂಗೆ...
ಪ್ರೇಮ ಜೀವನ ದೃಷ್ಟಿಯಾದಾಗ ಅಲ್ಲವೇ ಬದುಕ ಪ್ರೀತಿಯ ಸ್ಫೂರ್ತಿ ಚಿಲುಮೆಯಾದಾಗ ಬೃಂದಾವನದ ಬಯಲು ಸರಸವೂ ಪ್ರೇಮದುತ್ತುಂಗದ ಅಭಿವ್ಯಕ್ತಿಯಷ್ಟೇ; ಬೆಸೆದುಕೊಂಡು, ಬಸಿದುಕೊಂಡು ಯಮುನೆಯಂತೆ ಹರಿದ, ಬೆಳದಿಂಗಳಂತೆ ಮೆರೆದ ಖುಷಿಯಷ್ಟೇ ಅಂತಿಮ ಅಲ್ಲಿ...
ಪ್ರೇಮ ಆದರ್ಶವಾ..?
ಬದುಕಿನ ಸ್ಫೂರ್ತಿ ಸೆಲೆಯಾ..??
ಯಾವುದಾದರೆ ಚಂದ...???
ಪ್ರೇಮದ ಪಾವಿತ್ರ್ಯವನ್ನ ಕೊಲ್ಲುವುದು ಕಾಮವಲ್ಲ - ಭಾವದೊರತೆಯ ಅಭಿವ್ಯಕ್ತಿಯ ಅಭಾವ ಎನ್ನಿಸುತ್ತೆ ನಂಗೆ - ಹಾಗಾಗಿ ನನ್ನ ಆಯ್ಕೆ ಕೃಷ್ಣ...
ಇಷ್ಟಾಗಿಯೂ ಕೊನೇಲಿ ನನ್ನಲುಳಿದ ಪ್ರಶ್ನೆ: ರಾಮ, ಸೀತೆಯರಂತೆಯೇ ರಾಧೆ ಮತ್ತು ಕೃಷ್ಣರನ್ನೂ ದೇವರಾಗಿಸಿ ಕೂರಿಸಿದ್ದು ಮತ್ಯಾರೂ ಅವರಂತಾಗಬಾರದು ಎಂಬುದಕ್ಕಿರಬಹುದಾ...?
(*** ಇಲ್ಲಿ ರಾಮ, ಕೃಷ್ಣರು ಕೇವಲ ಉದಾಹರಣೆಗಷ್ಟೇ... ಇಬ್ಬರ ಮೇಲೂ ಯಾವುದೇ ಪೂರ್ವಗ್ರಹಗಳಿಲ್ಲ...)
=_=_=
ಎಷ್ಟು ಗಾಢ ಈ ನಗೆಯ ಬಣ್ಣ - ಏದುಸಿರಿನ ಭಾರವೂ ಕಾಣದಷ್ಟು...
ಎಷ್ಟೊಂದು ಹಗುರ ಈ ಬದುಕ ಬಟ್ಟೆಯ ನೇಯ್ಗೆ - ನಗೆಯ ಕಿರು ಅಲೆಗೂ ತೇಲುವಷ್ಟು, ಅದೇ ಹೊತ್ತಿಗೆ ಉಸಿರ ಭಾರಕೂ ನಲುಗುವಷ್ಟು...
ಅಬ್ಬಾ ಅದೆಷ್ಟು ಪ್ರಖರ ಆ ಸಾವಿನ ಬೆಳಕು - ಉಸಿರಿದು ಕುಸಿದು, ನಗೆಯ ಕಣ್ಣು ಇಂಗಿ, ಬದುಕು ಮತ್ತೇಳದಂತೆ ಬೆತ್ತಲಾಗುವಷ್ಟು...
=_=_=
ತುಳಸಿ ಕಟ್ಟೆಯೆದುರು ಬೆತ್ತಲೆ ಬಿದ್ದವನ ಸುತ್ತ ಅಳುವ (?) ನೂರಾರು ಮಂದಿ - ಬದುಕ ಬಟ್ಟೆಯ ನೂಲನು ಮಾತ್ರ ನಾನೊಬ್ಬನೇ ನೇಯಬೇಕು...
(*** ಇದು ಎಲ್ಲರ ಸತ್ಯ...)
=_=_=
ಎದುರು ಕೂತ ಸಾವು ಹೊಟ್ಟೆ ಉರಕೊಂಡು ಸಾsssಯಬೇಕು ಹಂಗೆ ಎಲ್ಲಾ ಬಿಗುಮಾನಗಳ ಬಿಟ್ಟು ಈ ಬದುಕಿನೊಡನೆ ಸರಸಕ್ಕೆ ಬೀಳಬೇಕು...
ಕೊಡಬೇಕೆನಿಸಿದ ಪ್ರೀತಿಯ ಅದಿದ್ದಂತೆಯೆ ಆಗಿಂದಾಗ್ಗೆ ಅದು ಸಲ್ಲಬೇಕಾದವರೆದು ಇಟ್ಟುಬಿಡಬೇಕು - ಇಲ್ಲದಿರೆ, ಬದುಕಿನ ಹಾಡಿಂಗೆ ಜೊತೆಯಾಗದೇ ಇದ್ದು ಸಮಾಧಿಯೆದುರು ಅಳಬೇಡ ಅಂತಿದ್ದ ನನ್ನದೇ ಮಾತು ನನ್ನ ಚುಚ್ಚುವಂತಾಗುತ್ತದೆ...
ಸಾವಿಗಿಲ್ಲದ ಬಿಗುಮಾನ, ಸಮಯದ ಅಭಾವವ ಬದುಕ ಪ್ರೀತಿಗೆ ಆರೋಪಿಸಿಕೊಂಡು ಕೊನೆಗೆ ನನ್ನದೇ ಆತ್ಮದೆದುರು ಆರೋಪಿಯಾಗಿ ಕೊರಗುವ ಚಂದವೇನು..??
(*** ಆ ಬೊಗಸೆಯಲ್ಲಿಡಬೇಕಿದ್ದ ಪ್ರೀತಿಯ ತುಂಡೊಂದು ಸಾವಿನ ನಿಷ್ಕರುಣೆಗೆ ಸಿಕ್ಕಿ ನನ್ನ ಕಿಸೆಯಲ್ಲೇ ಉಳಿದೇ ಹೋದ ಹೊತ್ತಲ್ಲಿ...)
=_=_=
ಓ ಇರುಳೇ ಆರೋಪಿಸಲಾರೆ ನಿನ್ನ, ಕಣ್ಣೀರಿನಲ್ಲಿ ಬೊಗಸೆ ತುಂಬಿಸಿಯಾದರೂ ಸರಿ ಕನಸಿನ ದಾರೀಲಿ ಕರುಳ ಇರಿಯುವ ವಿಷ ಲೇಪಿತ ನೆನಪುಗಳ ತೊಳೆದುಬಿಡು ನಿರ್ಭಯ ನಾಳೆಗಾಗಿ...
ಹೇ ಬೆಳಕೇ ಋಣಿಯಾಗುವೆ ನಿನಗೆ, ಮೀರಲಾಗದ ದೌರ್ಬಲ್ಯಗಳಿಂದಾದ ಭಾವಗಳ ಮಾಲಿನ್ಯವ ಮತ್ತೆ ಮತ್ತೆ ಪ್ರಜ್ಞೆಯ ಕುಲುಮೆಯ ಕಾವಿನ ಸ್ಪರ್ಷಕೊಡ್ಡಿ ತೊಡೆದುಬಿಡು ಸ್ವಚ್ಛಂದ ಇಂದಿಗಾಗಿ...
...ಕಾರಣವಿಷ್ಟೇ,
ನನ್ನ ಕಾಮದಷ್ಟೇ ಹುಚ್ಚು ತೀವ್ರತೆಯಲ್ಲೇ ಈ ಬದುಕ ಪ್ರತಿ ಕ್ಷಣಗಳನೂ ಜೀವಿಸಬೇಕಿದೆ ನಾನು - ಸಾವು, ನೋವುಗಳ ಅಸ್ತಿತ್ವವನೇ ಕಡೆಗಣಿಸಿ ಅಣಕಿಸಬಲ್ಲ ಶ್ರೀಮಂತ ನಗೆಯ ಪಕ್ಷಪಾತಿಯಾಗಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)