Monday, December 10, 2018

ಗೊಂಚಲು - ಎರಡ್ನೂರೆಂಬತ್ತಾರು.....

ಮರುಳನ ವ್ಯರ್ಥಾಲಾಪಗಳು.....

ನಟ್ಟ ನಡು ಸಂತೆಯ ಮಟ ಮಟ ಮಧ್ಯಾಹ್ನ ಗಕ್ಕನೆ ಎದೆಯ ಹೊಕ್ಕೋ ಮಸಣ ಮೌನ - ನಿನ್ನ ನೆನಪು...

ಕಣ್ಣ ತೀರದ ಹನಿಯಾಗಿ ಇಳಿದು ಹೋದ ಕನಸಿಗೊಂದು ಹೆಣಭಾರದ ಪತ್ರ ಬರೆದು ಮಳೆಯ ಮೋಡದ ಬೆನ್ನಿಗಂಟಿಸಿದ ಮರುಳತನ ನನ್ನ ಕವಿತೆ...

ಪ್ರೀತಿಯ ದೀಪವಾಗಬೇಕಿತ್ತು - ಅಷ್ಟಿಷ್ಟು ಕೊಟ್ಟು ತುಂಬಿಕೊಳ್ಳುತ್ತಾ.....
ಬಂಜರು ದ್ವೀಪವಾದೆ - ಎಗ್ಗುಸಿಗ್ಗಿಲ್ಲದೇ ಪಡೆಪಡೆದು ಖಾಲಿಯಾಗುತ್ತಾ.....

ಒಂದು ಸಣ್ಣ ನೋವನ್ನಾದರೂ ಬಿತ್ತುತಿರು - ಇರುವಿಕೆಯ ಅರಿವಿನ ಸಮಾಧಾನ...
#ಬದುಕು_ಭಾವ...
ππ¡¡¡ππ

ಗಿಜಿಗುಡುವ ರಸ್ತೇಲಿ ಹೆಜ್ಜೆಗೊಮ್ಮೆ ಕಾಲ್ತೊಡರಿ ಮುಗ್ಗರಿಸ್ತೇನೆ - ಕಾಲ್ತುಳಿತಕ್ಕೆ ಕಣ್ಣಿಲ್ಲದ ಭಯ; ಅದೇ ಖಾಲಿ ಖಾಲಿ ಹಾದಿಯೆಂದರೆ ನನ್ನ ಕಾಲ ಸಪ್ಪಳಕೆ ನಾನೇ ಬೆಚ್ಚಿ ಸಣ್ಣ ಕರುಳಿನಾಳದಿಂದ ವಿಪರೀತ ಭೀತಿ...
ಹೇಗೆ ನಡೆಯುವುದಿಲ್ಲಿ ಎದೆ ನಡುಗದೇ...
#ನೆನಪ_ಕೈಚೀಲ_ಕನಸ_ಕಂದೀಲು...
#ಭಾವ_ಬಂಧ_ಸಂಬಂಧ...
ππ¡¡¡ππ

ಒಂದೊಂದು ಮುರ್ಕಿಯಲ್ಲೂ ಯಾವ್ಯಾವುದೋ ಹಿಂದುಮುಂದಿನ ಎಳೆತಕ್ಕೆ ಒಂದೊಂದೇ ಕೊಂಡಿ ಕಳಚಿಕೊಳ್ಳುತ್ತದೆ...
ನನ್ನ ಮಾತಿನ ಆಖೈರು ಪೀಕನೆಲ್ಲ ತನ್ನ ಮೌನದ ಕಣಜದಲ್ಲಿ ದಾಸ್ತಾನು ಮಾಡಿಟ್ಟುಕೊಂಡ ಬಿಕನಾಸಿ ಬದುಕಿನೆದುರು ಅರೆಪಾವು ನಗುವಿಗಾಗಿ ಕೈಚಾಚಿ ನಿಲ್ಲುತ್ತೇನೆ ಪ್ರತಿ ಹೆಜ್ಜೆಗೂ...
ಕೂಡುವುದೊಂದು ಕಾಲ - ಕಳೆಯುವುದೊಂದು ಕಾಲ; ಕೊರಳ ಘಂಟೆ ಕಟ್ಟಿಕೊಂಡು ತುಡುಗು ಮೇಯಲು ಹೊರಟ ಕಳ್ಳ ದನದಂತ ಮನಸು...
#ನಾನು...
ππ¡¡¡ππ

ಹಿಂತಿರುಗಿ ನೋಡಿದರೆ ಬರೀ ಹಾಯ್ದು ಬಂದ ಕಲ್ಲು ಮುಳ್ಳುಗಳ ರಾಶಿ ರಾಶಿಯಷ್ಟೇ ಕಾಣುತ್ತೆ - ಮುಂದಾದರೋ ಅಸೀಮ ಕತ್ತಲ ಬಯಲು...
ಹೇ ಜೀವವೇ ನೀ ಅಲ್ಲಲ್ಲಿ ಆಗೀಗ ದಾಟಿದ ಮೀಟಿದ ಚೂರುಪಾರು ನಗೆಯ ಬೆಳಕನ್ನೇಕೆ ನೆನೆದು ಹಾಡುವುದೇ ಇಲ್ಲ...!!!
ಮನಸಿದು ಹಾದಿ ತಪ್ಪಿದ್ದೆಲ್ಲಿ; ಹರಿದ ಪಾದದ ರಕ್ತದ ಕಲೆಯಲ್ಲಾ, ಮಂಜುಗಣ್ಣಿನ ಹನಿಯ ಕರೆಯಲ್ಲಾ...???
ಜೀರ್ಣವಾಗದ ನಿನ್ನೆಗಳು ಹರಳುಗಟ್ಟಿ ಸಣ್ಣ ಕರುಳಿನಾಳದಲ್ಲಿ ಮುಳ್ಳು ಮುರಿವ ಮೃತ ಸಂಜೆ...
#ಮಸಣ_ಮೌನದ_ಮನಸು...

ತೀಕ್ಷ್ಣ ನಾಲಿಗೆ, ಮಂದ ಕಿವಿ, ವಿಕ್ಷಿಪ್ತ ತರ್ಕಗಳ ವಿಲೋಮ ಹಾದಿ...
#ನಾನು...

ಕಾಲು ಎಡವಿದ್ದು ಹಿಂತಿರುಗಿ ನೋಡಿದ್ದಕ್ಕಾ ಅಥವಾ ಮುಂದಿಟ್ಟ ಅಡಿಗೆ ಅನುಭವದ ಆಸರೆ ಇಲ್ಲದ್ದಕ್ಕಾ...??
ಬದಲಾವಣೆ ಜಗದ ನಿಯಮ - ಅದ್ನಾ ಅರಗಿಸ್ಕೊಳ್ಳೋಕಾಗ್ದೇ ಇದ್ದಿದ್ದು ನನ್ ಕರ್ಮ...
#ಹಾದಿ...
ππ¡¡¡ππ

...............ಪಾಪಿ ಚಿರಾಯುವಂತೆ - ನನ್ನಂತೆ, ನಿನ್ನಂತೆ.....

ಬಂದ ದುಪ್ಪಟ್ಟು ವೇಗ ಹೋಗುವಾಗ ಪ್ರೀತಿಗೆ...
ಅದಕೇ ವೇಗವೆಂದರೆ ಭಯ ಈಗ ಈ ಪಾಪಿ ಪ್ರಾಣಿಗೆ...
ಸಾವಧಾನವ ಕಲೀರೋ ಅನ್ನೋಳು ಅಜ್ಜಿ ಮಾತಿಗೊಮ್ಮೆ - ಸೋತ ಹಾದೀಲಿ ನೆನಪೀಗ ಅಜ್ಜಿ ಹೆಜ್ಜೆಗೊಮ್ಮೆ...

ಅಳುವಾತನ ಜತೆ ಕೂತು ಅಳುವುದು ಎನಗೊಗ್ಗದ ಮಾತು...
ಅಳು ಅಳುವನ್ನೇ ಹಡೆವ ಭಯವಿದೆ ನೋವಿಗೆ ನಗೆಯೊಂದು ಭರವಸೆಯ ಹೆಗಲಾಗದ ಹೊರತು...
ಬರೀ ಕರುಣೆಗೆ ಹುಟ್ಟಿದ ಕೂಸು ಬಾಳಿದ್ದು ಭ್ರಾಂತು...
ಪ್ರೀತಿ ಪ್ರೀತಿಗೇ ಹುಟ್ಟಬೇಕಾದ ತಂತು...

ಇನ್ನಾಗದೂ ಅನ್ನಿಸಿದಾಗ ಬಾಂಧವ್ಯದ ಕೊಂಡಿ ಹರಿದದ್ದು ಅಥವಾ ಹರಿದುಕೊಂಡದ್ದಲ್ಲ ಸೋಲು; ಬದಲಿಗೆ ಬಿಡಿ ಬಿಡಿಯಾಗೋ ಪ್ರಕ್ರಿಯೆಯಲ್ಲಿ ಇನ್ನಿಲ್ಲದಂತೆ ಭಾವದ ಸೆಲೆಯ ಕಲುಷಿತಗೊಳಿಸಿದ್ದು ಅಥವಾ ಗಬ್ಬೆಬ್ಬಿಸಿಕೊಂಡದ್ದು ನಿಜದ ಸೋಲು...
#ನಾನು...

ಇರಲಿ ಕೋಟೆ ಗೋಡೆಗೊಂದು ಕಳ್ಳಗಂಡಿ - ಒಂದು ಹೆಜ್ಜೆ ಬಯಲಿಗೆ; ಮಸಣ ಮೌನ ಕಾಡುವಾಗ ರಣ ಕೇಕೆಯೂ ತುಸು ಜೀವಂತಿಕೆ...

#ಅರ್ಥ_ಕೇಳಬೇಡಿ_ಮರುಳನ_ವ್ಯರ್ಥಾಲಾಪಗಳಿಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment