Tuesday, June 1, 2021

ಗೊಂಚಲು - ಮುನ್ನೂರೆಪ್ಪತ್ತೆರಡು.....

ಮಣ್ಣ ವಾಸನೆ.....

ಸಾವಿನೆದುರು ಅತ್ತದ್ದೂ ಸುಳ್ಳಲ್ಲ...
ಬದುಕು ಮುನ್ಸಾಗಿದ್ದೂ ತಪ್ಪಲ್ಲ...

ಗ್ರೀಷ್ಮನ ಎದೆಯಲ್ಲೂ ವಸಂತನ ಕಾವಿದೆ...
ಹರಿದ್ವರ್ಣದ ಹಾದಿಯಲ್ಲೂ ಯಾರದೋ ಅಸ್ಥಿ ಬೆರಳ ಒಡೆದೀತು...

ಬೇಲಿಯಾಚೆಯ ಬಯಲ ತುಂಬಾ ಬೇಲಿ ಹೂವಿನ ಘಮ...
ಕಳಚಿ ಬಿದ್ದ ಕಾಡು ಹೂವಿಗೆ ದರಕು, ಗರಿಕೆಗಳೇ ದೇವ ಮುಡಿ...

ಸಾವು ಎಷ್ಟು ಹಗೂರ - ಹೆಣವಷ್ಟೇ ಮಣ ಭಾರ...
ಬೇಲಿ ಕಟ್ಟಿಕೊಂಡು ತಪ್ಪಲಲಿ ನಿಂತು ನಿಟ್ಟುಸಿರಿಟ್ಟರೆ ಬೇಲಿ ಬಳಸಿ ಬಯಲ ಸುಳಿವ ಗಾಳಿಗೆ ಸೂತಕವೇ...!?

ಎದೆಗಂಟಿದ ಒಂದು/ಒಂದೊಂದು ಉಸಿರಿನ ಪ್ರಾರ್ಥನೆ - ಕಾಡಿನಂದದಿ ಕಾಡುವ ನೀನು..‌.

ಮೌನವೊಂದು ಮಧುರ ಭಾಷೆ ಕಾಡೊಂದು ಎದೆಯಲಿದ್ದರೆ...
ಮೌನವೇ ಮರಣಗತ್ತಿ ಎದೆ ಉರಿ ಉರಿಯುತಿರೋ ಮಸಣವಾಗಿದ್ದರೆ...

ಕಾಯುತ್ತೇನೆ -
ಮಳೆ ಕಾಡು ಮಣ್ಣ ವಾಸನೆಗೆ,
ಮಣ್ಣು ಮಾಗುವ ವಾಸನೆಗೆ,
ಮತ್ತು
ಮಣ್ಣೇ ಆಗುವ ವಾಸನೆಗೆ...

ಎದೆಗೆ ಆನಿಕೊಂಡವರ ಹೆಗಲ ತಬ್ಬಿ ಆ ರುದಯದ ಹಸಿ ಗಾಯಕ್ಕೆ ಒಂದು ಚಿಟಿಕೆ ಪ್ರೀತಿ ಸ್ಪರ್ಶ‌ದ ಮುಲಾಮು ಸವರುವಷ್ಟಾದರೂ ಅಂತಃಕರುಣಿಯಾಗಿಸು ಎನ್ನ ಮತ್ತು ಎನ್ನವರಿಗೆ ಅಷ್ಟು ಮಾಡುವಷ್ಟಾದರೂ ಅವಕಾಶ‌ವ ಕರುಣಿಸು ಎನಗೆ ಬದುಕೇ...
ನೊಂದ ಆತ್ಮಗಳೆದುರು ಯೆನ್ನ ಕಣ್ಣು, ಕಿವಿ, ನಾಲಿಗೆ ಎಲ್ಲಾ ಚೂರು ಮಿದುವಾಗಲಿ...
_____ ಕಾಡು ಹುಡುಗನ ಪ್ರಾರ್ಥನೆ...
😐😑😐

ಅನಾಯಾಸೇನ ಮರಣಂ ಅನ್ನೋದು ಒಂದು ಕನಸೇ ಆಗಬಹುದು - ಆದ್ರೆ ಹೆಂಗೇ ದಕ್ಕಿದ್ರೂ ಅಕಾಲ ಸಾವು ಕಾಲನ ಕಾಟಕ್ಕೆ ಪರಿಹಾರ ಆಗಲಾರದು...
ಬದುಕನ್ನು ಯಥಾವತ್ ಸ್ವೀಕರಿಸಿದಾಗಲಷ್ಟೇ ಸಾವಿಗೊಂದು ಘನತೆ ತುಂಬಬಹುದು ಅನ್ನಿಸಿದರೂ ಮೃತ್ಯು ಬೋಧಿಸೋ ನಶ್ವರತೆಯ ಎದುರು ಎದೆ ಎತ್ತಿ ನಿಂತು ನಡೆವ ತ್ರಾಣವನು ಆ ನಶ್ವರತೆಯೇ ನೀಡಬೇಕೇನೋ ಈ ಬದುಕಿಗೆ...
ಸಾಯಲು ಸಾವಿರ ಕಾರಣಗಳಿದ್ದರೂ ಬದುಕಲಿರುವ ಒಂದೇ ಒಂದು ಕಾರಣಕ್ಕೆ ಜೋತು ಬೀಳಬೇಕೆಂದರೆ ಮಗ್ಗುಲಿನವರ ಸಾವು ತುಂಬಿ ಹೋಗುವ ಖಾಲಿತನವ ತುಂಬಿಕೊಳಲು ಸಾವೇ ಶಕ್ತಿ ಕೊಡಬೇಕು...
ಅಂತಕನ ಕ್ರೌರ್ಯ‌ವ ಪ್ರಶ್ನಿಸೋ ಶಕ್ತಿಯಿಲ್ಲದ ಅಸಹಾಯ ಬದುಕು ನಮ್ಮದಾದರೂ, ಬದುಕನ್ನು ಖುದ್ದು ಕೊಡವಿಕೊಂಡು ಸಾವನ್ನು ಅವಮಾನಿಸದೇ ಮರುದಿನವ ಹಾಯಲೇಬೇಕು...
_____ಜವನ ಮೋಸದಾಟಕೊಂದು ಕ್ರುದ್ಧ ಧಿಕ್ಕಾರವಿರಲಿ ಮತ್ತು ಇದ್ದ ಬದುಕು ಮೊದಲಿಂದ ಮತ್ತೆ ಮುನ್ಸಾಗಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment