Thursday, January 29, 2015

ಗೊಂಚಲು - ಒಂದುನೂರಾ ನಲವತ್ತು.....

ಈ ಹಗಲಿದು ಮುಗಿಯಲೇಬಾರದು.....
(ಮಲೆನಾಡ ಮನದ ಒಂದು ಒಲವ ಬೆಳಗು...)
ಹೀಗಿತ್ತು ಅಲ್ಲಿಯ ಒಡೆತನ...
ದಿನಮಣಿಯ ಮೊದಲ ಸ್ಪರ್ಶಕೆ ಕಂಪಿಸಿ ಇಬ್ಬನಿ ಹನಿಯೊಂದು ಅಡಿಕೆ ಹೆಡೆಯ ತುದಿಯಿಂದ ಕೆಳಜಾರುವ ಘಳಿಗೆಗೆ ಸರಿಯಾಗಿ ನಿದಿರೆಯ ತೋಳಿಂದ ಕೊಸರಿಕೊಂಡು ಮೆಲ್ಲಗೆ ಕಣ್ದೆರೆದೆ...

ಮುಂಬೆಳಗಿನ ಬಂಗಾರದೋಕುಳಿಯ ಹೊತ್ತಲ್ಲಿ ಗೋಪಿ ಹಕ್ಕಿಯೊಂದು ಕಳೆದಿರುಳಲಿ ನನ್ನ ಕನಸಿನೂರ ರಾಜಬೀದಿಯ ತುಂಬ ನಿನ್ನ ಹೆಜ್ಜೆ ಗುರುತು ಮೂಡಿ ನಗೆಯ ಗಂಧವೊಂದು ಸುರುಳಿ ಸುತ್ತಿದ ಸುದ್ದಿಯ ಊರಿಗೆಲ್ಲ ಸಾರುತ್ತಿತ್ತು...

ಆ ಹಕ್ಕಿಗೊರಳನು ಹಿತ ಮುನಿಸಿಂದ ಶಪಿಸುತ್ತ ಮಂಚ ಬಿಟ್ಟಿಳಿದರೆ ಅಂಗಳದ ತುಂಬಾ ಚೆಲ್ಲಿ ರಂಗವಲ್ಲಿಯಂತಾಗಿರುವ ಪಾರಿಜಾತದ ಕುಸುಮ ವಿದಾಯದ ಘಳಿಗೆಯಲೂ ನನ್ನ ನೋಡಿ ಎಲ್ಲ ಅರಿವಾದಂತೆ ನವಿರಾಗಿ ತುಂಟ ನಗೆಯ ಬೀರಿತು...

ಹಲಸಿನ ಮರದ ಕೊಂಬೆಯ ತುದಿಯಲಿ ಅತ್ತಿಂದಿತ್ತ ಬಾಲವನೆತ್ತಿಕೊಂಡು ಸುಳಿದಾಡುತಿದ್ದ ಅಳಿಲಮರಿಯೊಂದರ ಗಡಿಬಿಡಿಯಲೂ ಎಂಥದೋ ಅವ್ಯಕ್ತ ಸಂಭ್ರಮವಿದ್ದಂತಿದೆ...

ಕರುಳಿಗೆ ಕಚಗುಳಿಯಿಡುವ ಹಿತವಾದ ಚಳಿಯೊಂದಿಗೆ ಬೆರೆತ ನಿನ್ನ ಒನಪಿನ ನೆನಪಿನ ಕಾವು ಹಬ್ಬಿ ತಬ್ಬಿ ಮನಸಿದು ಮೈನೆರೆದು ಹೋಯ್ತು...

ನಿದ್ದೆ ಮರುಳಲೇ ಆಯಿಯ ಹೂ ಹಿತ್ತಲಿಗೆ ಹೋದರೆ ಮುತ್ಮಲ್ಲಿಗೆ ಹೂವಿಗೆ ಮುತ್ತಿಟ್ಟು ಅದರೊಡಲ ಜೇನ ಹೀರುತಲಿದ್ದ ದುಂಬಿಯ ಕಂಡು ಕಾಲ ಬೆರಳ ತುದಿಯಿಂದ ನಾಚಿಕೆಯಂಥ ಒಲವ ಸೆಳಕೊಂದು ನೆತ್ತಿಗೇರಿದ ಮೃದುಕಂಪನದನುಭಾವ...

ಗಂಗೆ ಕರುವಿನ ಘಂಟೆ ದನಿಗೆ ಕನಸಲ್ಲಿ ಪಿಸುನುಡಿದ ಮಾತೊಂದು ಮತ್ತೆ ಹೊರಳಿದಂತಾಗಿ ಒಡಲಿನಾಳದಲೇನೋ ಹೊಸದಾದ ಉದ್ವೇಗದುದ್ಗಾರ...

ಹಿಂದಿರುಗಿ ನೋಡಿದರೆ ಪಾಲಿ ಬೆಕ್ಕನು ಗದರುತಿದ್ದ ಪಾಂಡು ಕುನ್ನಿಯ ಕಣ್ಣಲ್ಲೂ ಅಚ್ಚರಿ ಬೆರೆತ ಅಕ್ಕರೆ ನನ್ನೆಡೆಗೆ...

ಅಮ್ಮನ ಕೈಬಳೆಗಳ ಕಣ ಕಣದೊಂದಿಗೆ ಕಲೆತ ನೊರೆ ನೊರೆ ಹಾಲು ಬಿಂದಿಗೆ ತುಂಬೋ ಸದ್ದಿಗೆ ಕಿವಿಗಳನೊಪ್ಪಿಸಿ, ಹಂಡೆಯೊಲೆಯ ಬೆಂಕಿ ನರ್ತನದೆಡೆ ಕಣ್ಣ ನೆಟ್ಟು ಕೂತ ಈ ಬೆಳ್ಳಂಬೆಳಗಲೇ ಹುಚ್ಚೆದ್ದ  ಭಾವಗಳ ಸಂತೆ ನೆರೆದ ಮನದ ಮುಗಿಲು...

ಆಹಾ ಮುಗಿಯಲೇ ಬಾರದು ಈ ಹಗಲು...

*** ಎಂದಾದರೂ ಮತ್ತೆ ಮರಳಿ ಹೊರಳೀತು.... 

Sunday, January 25, 2015

ಗೊಂಚಲು - ಒಂದು ನೂರಾ ಮೂವತ್ತೊಂಬತ್ತು.....

ಭಾವ ನಮನ.....

ಬದುಕ ಜೀವನ್ಮುಖೀ ಭಾವಗಳೆಲ್ಲ ಸದಾ ಹೊತ್ತಿ ಉರಿಯುತಲಿದ್ದು; ಆತ್ಮದ ಬೆಂಕಿ ಆರುವ ಮುನ್ನ ನನ್ನೀ ಬಂಡೆಯೆದೆಯ ಸಿಬಿರಿನೊಳಗೂ ಬೇರನಿಳಿಸಿ ಭಾವದ ಹಸಿರು ಚಿಗುರಲೆಂಬ ಹಾರೈಕೆಯಿರಲಿ...

::::::

ಸಾಹಿತ್ಯದ ಗಂಧವಿಲ್ಲದೇ, ಬರೆದದ್ದರ ಪರಿಣಾಮ ಮತ್ತು ಓದುಗನ ಮನಸಿನ ಕಳಕಳಿಯ ಹಂಗಿಲ್ಲದೇ, ನಾ ಕಂಡಂತೆ, ನಂಗೆ ತೋಚಿದಂತೆ, ನನ್ನೊಳಗೆ ಮೂಡಿದ ಭಾವಗಳಿಗೆ ಪದಗಳ ರೂಪ ಕೊಡುತ್ತಾ ಹೋದೆ... 
ಪದಗಳಿಗೆ ದಕ್ಕಿದ ಭಾವಗಳನೇ ನಂಬಿ, ಅವು ನನ್ನಲ್ಲಿ ಮೂಡಿದ್ದು ಮೂಡಿದಂತೆ ಗೀಚುತ್ತಾ ಹೋದೆ... 
ಹಾಗೆ ತೋಚಿದ್ದು ಗೀಚಿದ್ದನ್ನೆಲ್ಲ ಕೂಡಿಡುತ್ತ ಹೋದ ಸಾರ್ವಜನಿಕ ಡೈರಿಯಂಥ “ಭಾವಗಳ ಗೊಂಚಲು” ಎಂಬ ನನ್ನೀ ಬ್ಲಾಗಿಗೆ ಅದಾಗಲೇ ನಾಲ್ಕು ವರ್ಷಗಳು ಸಂದು ಹೋದವು...!!!

ಎದೆಯಂಗಳವಿದು ನೈತಿಕ ಅನೈತಿಕತೆಗಳ ಬೇಲಿಯಿಲ್ಲದೆ, ಅಸ್ಪ್ರಶ್ಯತೆಯ ಹಂಗಿಲ್ಲದೆ, ಏನೇನೆಲ್ಲ ಭಾವಗಳು ಹುಟ್ಟುವ ಪ್ರಸೂತಿ ತಾಣ – ಅದೇ ಹೊತ್ತಿಗೆ ಅವೆಲ್ಲ ಭಾವಗಳನೂ ಹೂಳುವ ಸುವಿಶಾಲ ಸ್ಮಶಾನ ಕೂಡ... 
ಅಲ್ಲಿ ಭಾಷೆಗೆ ದಕ್ಕದ ಭಾವಗಳ ನಗೆಯ ಕೇಕೆ ಮತ್ತು ನೋವ ಆರ್ತನಾದ ಎರಡೂ ಒಟ್ಟೊಟ್ಟಿಗೇ ಕಿವಿಗೆ ಬೀಳುತ್ತಿರುತ್ತವೆ... 
ಹೆಚ್ಚಿನ ಬಾರಿ ಹೂತ ಭಾವಗಳ ನಾತವೇ ರಮ್ಯ ಭಾವದಂತೆ ಪದಗಳ ಗುಚ್ಛವಾಗಿ ಆಚೆ ಬಂದದ್ದಿದೆ...

ಹುಟ್ಟು - ಸಾವು, ನಕ್ಕಿದ್ದು - ಅತ್ತಿದ್ದು, ಕಿತ್ತಾಡಿದ್ದು, ಹುಡುಕಾಡಿದ್ದು, ಕಾಡಿದ್ದು - ಹಾಡಿದ್ದು, ನಿರಾಭರಣ ಪ್ರೇಮ, ಕರಡಿಯ ಉನ್ಮಾದದ ಕಾಮ, ಮಲೆನಾಡು - ಮಳೆ - ಬೆಳದಿಂಗಳು, ಅಮ್ಮ ಮತ್ತು ಅವಳು, ಸಂಬಂಧಗಳು - ಒಳ ಒಪ್ಪಂದಗಳು, ನೋವಿನ - ಕಣ್ಣೀರಿನ ವಿಜೃಂಭಣೆ, ಬದುಕ ಕರುಣೆಯಿಂದ ಕಂಡದ್ದು - ಕಾಣಲು ಬಯಸಿದ್ದು... 
ಓಹ್ !!!
ಏನೇನೆಲ್ಲ ಬರೆದು ತುಂಬಿದೆ ನಾನಿಲ್ಲಿ...
ನನ್ನೊಳಗಿಳಿದ, ಉಳಿದ, ಅಳಿದ, ನನ್ನದೆನಿಸಿದ ಎಲ್ಲಾ ಭಾವಗಳನೂ ಬರೆದೇ ಬರೆದೆ... 
ಓದಿದ ನಿಮ್ಮಗಳ ಸಹನೆ ನಿಜಕ್ಕೂ ದೊಡ್ಡದು... 
ಮೆಚ್ಚುಗೆಯ ಮಾತುಗಳನೂ ಆಡಿ ಪ್ರೋತ್ಸಾಹಿಸಿದ ನಿಮಗಿದೋ ಋಣದ ನಮನ...

ಬರೆಯುತ್ತ ಬರೆಯುತ್ತ ಕಳಕೊಂಡವುಗಳೆಂದರೆ ಎದೆಯಾಳದ ಒಂದಷ್ಟು ದುಗುಡ, ದುಮ್ಮಾನ, ಭಾರ, ನೋವುಗಳು...
ಪಡಕೊಂಡದ್ದು ಒಂದಿಷ್ಟು ಹಗುರತೆ ಮತ್ತು ಎಲ್ಲಕಿಂತ ಮಿಗಿಲಾದ ನಿಮ್ಮಗಳ ಸ್ನೇಹ...

ನನಗೆಂದಿಗೂ ಇಷ್ಟವಾಗದ ಆದರೆ ಹೆಜ್ಜೆ ಹೆಜ್ಜೆಗೂ ಎಡತಾಕುವ ವಿಶಾದದ ಭಾವ ಸ್ಪರ್ಶವಿಲ್ಲದ ಒಣ ಒಣ ಸಾರಿಗಳು - ಕಣ್ಣಂಚಲ್ಲಿ ನಗು ಮೂಡದೇ ನಾಲಿಗೆ ತೊದಲುವ ಥ್ಯಾಂಕ್ಸ್‌ಗಳೂ (ಬಂಧದಲ್ಲಿ ಭಾವ ಇಲ್ಲದಿದ್ದುದು ಅಥವಾ ಇದ್ದ ಭಾವ ಸತ್ತದ್ದು  ಈ ಒಣ ಥ್ಯಾಂಕ್ಸ್ ಮತ್ತು ಸಾರಿಗಳಿಂದಲೇ ಅರಿವಿಗೆ ಬರುತ್ತೆ ಹೆಚ್ಚಿನ ಸಲ... ಭಾವಪೂರ್ಣವಾಗಿ ನುಡಿದ ಒಂದು ಥ್ಯಾಂಕ್ಸ್ ಅಥವಾ ಸಾರಿ ಬಂಧವೊಂದರ ಉಳಿವಿಗೆ ಕಾರಣವಾಗೋದು ಎಷ್ಟು ಸತ್ಯವೋ ಭಾವದ ಹಂಗಿಲ್ಲದಿರುವಾಗ ಇಷ್ಟಿಷ್ಟಾಗಿ ಬಂಧವ ಕೊಲ್ಲುವುದೂ ಅಷ್ಟೇ ದೊಡ್ಡ ಸತ್ಯ...) - ಮಧುರ ಬಂಧವೊಂದು ಸ್ವತಂತ್ರವಾಗಿ ಒಡನಾಡಿಕೊಂಡು ಬೆಳೆಯಲು ಬಿಡದ ಪರಿಸರ ಇವುಗಳೆಲ್ಲದರ ನಡುವೆ ಒಂದಿಷ್ಟು ಆಪ್ತ ಅನ್ನಿಸೋ ಬಾಂಧವ್ಯಗಳ ಬೆಸೆದು ಕೊಟ್ಟದ್ದು ಈ ಬ್ಲಾಗ್ ಎಂಬೋ ಜಾಲ ತಾಣ...

ಇಲ್ಲೂ ಒಂದಷ್ಟು ವಿಪರ್ಯಾಸವಿದೆ... 
ಏನ್ಗೊತ್ತಾ – ಯಾವೆಲ್ಲ ಭಾವಗಳಿಂದಾಗಿ, ಯಾವುದೆಲ್ಲ ಕಾರಣಗಳಿಗಾಗಿ ಒಂದಷ್ಟು ಸ್ನೇಹಗಳ ಪಡೆದೆನೋ ಅದದೇ ಭಾವ, ಕಾರಣಗಳಿಗಾಗಿ ಅದೇ ಸ್ನೇಹಗಳ ಕಳಕೊಂಡದ್ದೂ ಇದೆ... 
ನನ್ನ ಭಾವ, ಅನುಭವ, ಅನುಭಾವಗಳ ಓದುವಾಗ ಅಥವಾ ದೂರದಿಂದ ಕಾಣುವಾಗ ತುಂಬಾ ತುಂಬಾ ಇಷ್ಟವಾಗಿ ನಂಗೆ ಹತ್ತಿರವಾದ - ಅವನ್ನೇ ಆದರಿಸಿ, ಅನುಸರಿಸಿ ಅಂತಂದಾಗ ಕಷ್ಟವಾಗಿ ನನ್ನಿಂದ ದೂರ ನಿಂತ – ಮತ್ತೆಷ್ಟೋ ಕಾಲದ ನಂತರ ಆ ಅವವೇ ಭಾವಗಳನು ಸದ್ದೇ ಇಲ್ಲದೆ, ನನಗಿಂತ ಚೊಕ್ಕವಾಗಿ ಜೀವಿಸತೊಡಗಿದ ಸ್ನೇಹಗಳ ಕಂಡು ದಂಗಾಗಿ ನಿಂತದ್ದಿದೆ... 
ಆಶ್ಚರ್ಯವಾಗುತ್ತೆ ನಂಗೆ ಯಾವ ಭಾವ ಇಷ್ಟವಾಗದೇ ಒಡನಾಟದಿಂದಾಚೆ ನಿಂತರೋ ಅದೇ ಭಾವವ ಇನ್ಯಾವುದೋ ತಿರುವಿನಲ್ಲಿ  ತಾವೇ ಜೀವಿಸತೊಡಗಿದಾಗ ಅಥವಾ ಆ ಭಾವದ ಸತ್ಯ ಅರಿವಿಗೆ ಬಂದಾಗ ಬಿಟ್ಟು ಬಂದವನೆಡೆಗೆ ತಿರುಗಿ ಬಂದು ಅದೇ ಹಳೆಯ ಪ್ರೀತಿಯಿಂದ ಮಾತಾಡಿಸುವವರೂ ಕಡಿಮೆಯೇ...
ಆಗೆಲ್ಲ ಪಡೆದ ಖುಷಿ, ಕಳಕೊಂಡ ಬೇಸರ ಎರಡನ್ನೂ ಮತ್ತೆ ಇಲ್ಲೇ ಬರೆದು ನಿಸೂರಾಗಿದ್ದೇನೆ... 
ಅದಕೇ ಅಂದದ್ದು ಈ ಬ್ಲಾಗ್ ಒಂಥರಾ ನನ್ನ ಸಾರ್ವಜನಿಕ ಡೈರಿ ಅಂತ...:)

ನಾಲ್ಕು ವರ್ಷಗಳೆಂದರೆ ನನ್ನ ಮಟ್ಟಿಗೆ ಸುದೀರ್ಘ ನಡಿಗೆಯೇ... 
ಬರೆದ ಸಾಲುಗಳ ತೂಕ ಎಷ್ಟಿದೆಯೋ ಅರಿವಿಲ್ಲ ಎನಗೆ...
ಸಾಹಿತ್ಯದ ಪ್ರಕಾರಗಳ ತಿಳುವಳಿಕೆ, ಹಂಗು, ಗುಂಗು ಒಂದೂ ಇದ್ದವನಲ್ಲ... 
ಆದರೆ ಬರೆದಾದ ಮೇಲೆ ಮೂಡಿದ ಎದೆಯ ಹಗುರತೆಗೆ ಬೆಲೆ ಕಟ್ಟಲಾರೆ ನಾನು... 
ಆ ಕ್ಷಣದ ಎನ್ನೆದೆಯ ಸತ್ಯಗಳಿಗೆ, ಭಾವಗಳಿಗೆ ಪದಗಳ ಚೌಕಟ್ಟು ಕೊಟ್ಟ ಪ್ರತೀ ಬಾರಿಯೂ ನಿರಾಳವಾಗಿದ್ದೇನೆ...
ಅಲ್ಲದೇ ಹೊಸ ಭಾವಕ್ಕೆ, ಹೊಸ ಆತ್ಮಶಕ್ತಿಗೆ ಪಕ್ಕಾಗಿದ್ದೇನೆ...
ಅದೇನು ಅಂಥ ಸಣ್ಣ ಸಾರ್ಥಕ್ಯ ಅಂತನ್ನಿಸಲ್ಲ ನನಗೆ...

ಆ ಅಂತೆಲ್ಲ ನನ್ನೆದೆಯ ಭಾವಗಳು ನಿಮ್ಮದೂ ಅಂತನ್ನಿಸಿ, ಅಲ್ಲಿ ನಿಮ್ಮೆದೆಯಲ್ಲಿ ಇನ್ನಷ್ಟು ವಿಸ್ತಾರವಾಗಿ ಬೆಳೆದದ್ದಿದ್ದರೆ, ನೀವು ಓದಿದ ಆ ಕ್ಷಣ ನಿಮ್ಮೆದೆಯ ಭಾರ ಏರಿಳಿದಿದ್ದಿದ್ದರೆ ಇನ್ನೇನು ಬೇಕು ಬರೆದ ಜೀವಕ್ಕೆ...........

ಎದೆಯ ಭಾವಗಳ ಒರತೆಗೂ ವಸಂತ, ಗ್ರೀಷ್ಮಗಳ ಒಡನಾಟವಿದೆ...
ನನ್ನೆದೆಯ ಹೆಚ್ಚಿನ ಒಡನಾಟ ಗ್ರೀಷ್ಮದೊಂದಿಗೇ...
ಅದಕೇ ನೋವನೇ ಹೆಚ್ಚು ಬರೆದಿದ್ದರೆ ತಪ್ಪು ನನ್ನದಲ್ಲ...
ಅದು ಬದುಕಿನ ಕರುಣೆಯ ಪ್ರಸಾದ...
ನೋವನೇ ಹೆಚ್ಚು ಬರೆದಿದ್ದರೂ ಜೀವಿಸಿದ್ದು ನೋವ ಕೊಂದು ಮೆರೆದ ನಗುವನ್ನ ಎನ್ನುವುದು ನನ್ನೆಡೆಗೆ ನನಗಿರೋ ಅಭಿಮಾನ...
ನೋವು ಮೌನವಾಗಿ ಹೆಪ್ಪುಗಟ್ಟಿ ಹಿಮವಾಗಿ ದೂರನಿಲ್ಲುವ ಬದಲು ಮಾತಾಗಿ ನದಿಯಾಗಿ ಹರಿದು ಇಕ್ಕೆಲಗಳಲಿ ನಗೆಯ ಹಸಿರ ಚಿಮ್ಮಿಸಲಿ ಅಂದುಕೊಳ್ತೇನೆ...
ಈ ನಾಲಕ್ಕು ವರ್ಷಗಳನು ಅದನೇ ನಂಬಿ ಅದನೇ ಬರೆದು ಹಗುರಾಗುತ್ತ ಬಂದೆ...
ನನ್ನೊಳಗಿಂದು ಒಂದಿಷ್ಟು ನಗುವಿದೆ...
ಓದಿದ ನಿಮ್ಮೊಳಗೇನು ಮೂಡಿತೋ ಅಷ್ಟಾಗಿ ಅರಿವಿಲ್ಲ...
ನಿಮ್ಮ ಓದಿನ ಪ್ರೋತ್ಸಾಹ ಹಾಗೇ ಇರುವುದ ಕಂಡು ನಿಮ್ಮಲೂ ನಗುವೇ ಮೂಡಿದೆ ಎಂಬ ನಂಬಿಕೆಯಲಿದ್ದೇನೆ...

ಇನ್ನೆಷ್ಟು ಕಾಲ ಬರೆದೇನೋ ಗೊತ್ತಿಲ್ಲ...
ಗೊತ್ತಿರುವುದು, ಹೇಳಬೇಕಿರೋದು ಇಷ್ಟೇ - 
ಭಾವ ಪದವಾಗಿ ಆಚೆ ಬಂದ ಮರು ಘಳಿಗೆ ಅದು ಕೇವಲ ನನ್ನದು ಮಾತ್ರವಾಗಿರುವುದಿಲ್ಲ...
ಅದಿಲ್ಲಿ ಭಾವಗಳ ಗೊಂಚಲಿನ ಒಂದು ಗೊಂಚಲಾಗಿ ನಿಮ್ಮ ಸೇರುತ್ತಲಿರುತ್ತದೆ...
ನಿಮ್ಮ ಪ್ರೀತಿಯ ಮಡಿಲ ಬಗ್ಗೆ ಪೂರ್ಣ ನಂಬಿಕೆ ನನ್ನಲ್ಲಿ...
ಆ ನಿಮ್ಮಗಳ ಮಡಿಲ ತಂಪು ನನ್ನ ಸದಾ ಕಾಯುತ್ತಲೇ ಇರುತ್ತೆ... 
ಭಾವ ತೀರದ ಪಯಣ...
                                                        ವಿಶ್ವಾಸ ವೃದ್ಧಿಸಲಿ – ಶ್ರೀವತ್ಸ ಕಂಚೀಮನೆ.

Thursday, January 15, 2015

ಗೊಂಚಲು - ನೂರಾ ಮೂವತ್ತು ಮತ್ತೆಂಟು.....

ಜಂಗಮ ಭಾವಗಳು.....

ಸಾವನ್ನು ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳೋ ನರಕ ಸುಖಕ್ಕೆ ನಿತ್ಯ  ಸಾಕ್ಷಿಯಂತೆ ಕಾಣೋ ಉದ್ದುದ್ದ ಕಾರಿಡಾರು...
ಬಾಗಿಲಾಚೆ ಕಾಯುತ್ತ ಕುಂತ ಆತಂಕದ ಬೆಂಕಿ ಉರಿವ ಹತ್ತಾರು ಕಂಗಳು...
ಒಳ ಕೋಣೆಯಿಂದ ಭರವಸೆಯ ಮಾತೊಂದು ತೂರಿ ಬರಲೆಂದು ಕಾತರಿಸೋ ಹಸಿದ ಎಷ್ಟೆಲ್ಲ ಕಿವಿಗಳು...
ಅದು ವೈದ್ಯ ನಾರಾಯಣರ ಭವನ...
ವೈದ್ಯ ರಾಜ ನಮಸ್ತುಭ್ಯಂ...

###

ಬದುಕ ಪಾತಳಿಯಲ್ಲಿ ಎಡವಿಬಿದ್ದ, ಎದ್ದು ನಿಂತ ಹಸಿ ಬಿಸಿ ಅನುಭವಗಳೆಲ್ಲವ ಸೋಸುತ್ತ ನಡೆದೆ – ಅಲ್ಲೆಲ್ಲೋ ಮಸ್ತಕದಾಳದಲ್ಲಿ ಒಂಚೂರು ತಿಳುವಳಿಕೆಯ ಕಿಟಕಿ ತೆರಕೊಂಡಿತು...
ಕಿಟಕಿಯಿಂದ ಬರೋ ವಿಚಾರಗಳ ಕಿರು ಬೆಳಕ ಪ್ರಖರತೆಗೇ ಕಣ್ಣು ಕುಕ್ಕುವಾಗ ಅನ್ನಿಸುತ್ತಿದೆ ಈಗ – ಮುಗ್ಧತೆಯ ಹೆಸರು ಹೊದ್ದ ಅಜ್ಞಾನದ ಸೆಳವಿನಲ್ಲಿ ತೇಲಿದಷ್ಟು ಸುಲಭವಿಲ್ಲ ಜ್ಞಾನದ ಕಿರುದಾರಿಯಲಿ ತೆವಳುವುದು...!!!

###

- ಜಂಗಮನ ಜೋಳಿಗೆಯ ತುಂಬಾ ಹಾದಿ ತಪ್ಪಿದ ಕಥೆಗಳು...
- ಮತಿಹೀನ ಅಲೆಮಾರಿಯ ಕೈಯಲ್ಲಿ ಸ್ನೇಹದ ಭಿಕ್ಷಾಪಾತ್ರೆ...
- ಕರುಣೆಯ ಹಂಗಿಲ್ಲದ ಪ್ರೀತಿಯ ಒಡನಾಟದ ನಿರಂತರ ಹುಡುಕಾಟ...
- ಬದುಕಿದು ಬರೀ ವೈರುಧ್ಯಗಳನೇ ಮಾರುವ ವಿಚಿತ್ರ ತೆವಲಿನ ವ್ಯಾಪಾರೀ ಮಳಿಗೆ...


###

ಮನದ ಜಗುಲಿಯ ತುಂಬೆಲ್ಲಾ ಸೂತಕದ ಮುನ್ಸೂಚನೆಯ ಗಾಢ ವಾಸನೆ...
ಸಾವು ದೇಹದ್ದೇ ಆಗಬೇಕಿಲ್ಲ, ಭಾವದ್ದೂ ಆಗಬಹುದು...
ನೋವಿನ ತೀವ್ರತೆಯಲ್ಲಿ ಎರಡೂ ಸಮಾನ ಸ್ಥಾಯಿಯಲ್ಲಿ ನಿಲ್ಲುತ್ತವೆ - ಎದುರಲ್ಲೇ ನಿಂತು ಸಾವ ನೋಡುತ್ತಲಿರಬೇಕಾದವರ ಕಣ್ಣಲ್ಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, December 17, 2014

ಗೊಂಚಲು - ಒಂದು ನೂರಾ ಮೂವತ್ತೇಳು.....

ಹೊತ್ತು ಹೋಗದ ಹೊತ್ತಲ್ಲಿ ಹೊತ್ತಿ ಉರಿವ ಭಾವಗಳು.....

ಬದುಕ ಅಪ್ಪುವೆನೆಂದವಳ ಬದುಕ ಬೆಳಕ ಕಸಿದ ಹಸಿ ಹಸಿ ನೆನಪುಗಳ ನರಳಿಕೆಯ ಸದ್ದಲ್ಲಿ   ನಿದಿರೆಯ ಸಖ್ಯವಿಲ್ಲದ ಮಾಗಿಯ ಚಳಿಯ ನಸುಕು - ಎದೆಯ ಗರ್ಭದ ಗೋಡೆಯ ಆಗೀಗ ಒದೆಯೋ ಕಸುವಿಲ್ಲದ  ಕನಸ ಕೂಸು - ಕರುಳ ದಿಬ್ಬವ ತಬ್ಬಿದ ರುದ್ರ ಮೌನ - ದಿಂಬಿನ ಮೇಲೆ ಹೊರಳುತಲಿರೋ ಅವಳ ಒಂಟಿ ಕೂದಲೊಂದಿಗೆ ಮಾತಿಗಿಳಿದ ಎಂಥಾ ಚಳಿಗೂ ಹೆಪ್ಪುಗಟ್ಟದ ಕಣ್ಣ ಹನಿ - ಹೆಬ್ಬಾಗಿಲ ಮರೆಯಲ್ಲಿ ಸಾವಿನ ಹೆಜ್ಜೆ ಸಪ್ಪಳ...
***
ಬದುಕ ಜೀವನ್ಮುಖೀ ಭಾವಗಳಿಗೆ ಕಾವನ್ನಿತ್ತು ಉಸಿರ ತುಂಬಿ ಎದೆ ನೆಲದ ಹಸಿವನ್ನು ಹಿಂಗಿಸಬೇಕಿದ್ದ ಕನಸ ಊಟದ ಶಕ್ತಿಯ ಸಖ್ಯವಿಲ್ಲದ ಸಂಜೆಗಳಿಲ್ಲಿ ನಡು ಮುರಿದುಕೊಂಡು ತೆವಳುತಿವೆ...
***
ದೊಡ್ಡಾಸ್ಪತ್ರೆಯ ಖಾಲಿ ಖಾಲಿ ಕಾರಿಡಾರು - ನೋವ ನಗುವಾಗಿಸೋ ಪುಟ್ಟ ಯತ್ನ...
ಮನದ ಮನೇಲಿ ಅದೇ ಹಳೆಯ ವಾಸನೆ - ನೋವು, ಸಾವಿನದ್ದು... :-)
***
ಕನಸೇ -
ಮಕ್ಕಳ ಕೇಕೆಯ ಕಸಿದ ಇರುಳು ಹಗಲನ್ನು ಇಷ್ಟಿಷ್ಟಾಗಿ ನುಂಗುವ ಮುಸ್ಸಂಜೆಯ ಹೊತ್ತಲ್ಲಿನ ಬಯಲ ಮೂಲೆಯ  ನಿರಂಕುಶ ನೀರವ ಮೌನ (?)  ದಟ್ಟವಾಗಿ ನನ್ನೆದೆಯನೂ ಆವರಿಸುತ್ತೆ ನೀ ಬದುಕಿಂದ ಮತ್ತೆ ಬಾರದಂತೆ ಎದ್ದು ಹೋದ ನೆನಪು ಕಾಡುವಾಗ...
***
ಎಷ್ಟೆಲ್ಲಾ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರವೀಯುತಿದ್ದ ಚಂದಿರನಲ್ಲೂ ಈಗೀಗ ಉತ್ತರ ಖಾಲಿಯಾದಂತಿದೆ ನನ್ನ ಎಂದೂ ಮುಗಿಯದ ಗೊಂದಲದ ಪ್ರಶ್ನೆಗಳಿಗೆ...:-(
***
ಬಾಲರ ಕೇಕೆ, ಹರೆಯದ ಹುಚ್ಚಾಟ, ನಡುಗಾಲದ ಬೇಗುದಿ, ಮುಪ್ಪಿನ ನಿಟ್ಟುಸಿರು ಎಲ್ಲವಕ್ಕೂ ಕಿವಿಯಾದ ಊರಾಚೆಯ ಬಯಲು... 
ಅವರೆಲ್ಲರ ಮಾತು ಮೌನಗಳಿಗೆಲ್ಲ ಸಾಕ್ಷಿಯಾಗಿಯೂ ನಾ ಯಾರಿಗೂ ಸ್ವಂತವಲ್ಲ...
ಪಾದಗಳಿಗಂಟಿದ ಎನ್ನೆದೆಯ ಧೂಳಿಗೂ ಅವರುಗಳ ಒಳಮನೆಗೆ ಪ್ರವೇಶವಿಲ್ಲ; ಹೊಸ್ತಿಲಲಿ ಕಾಲು ಕೊಡವಿಯೇ ಒಳಗಡಿಯಿಡುವುದು ಎಲ್ಲ...:-)
***
ಅಮ್ಮನ ಗರ್ಭದಲ್ಲಿನ ಮೌನವೀಗ ಮತ್ತೆ ದಕ್ಕುವಂತಿದ್ದಿದ್ದರೆ; 
ನಗೆಯ ತೊಟ್ಟಿಲಲಿ ಬದುಕನಿಟ್ಟು, ಭರವಸೆಯ ಗಿಲಕಿಯ ಕುಲುಕಿನ ಹಿಮ್ಮೇಳದಲಿ ಗೆಲುವಿನ ಲಾಲಿ ಹಾಡುತ್ತ, ಹೊಸ ಕನಸಿನ ಕುಲಾವಿಗೆ ನೂಲು ನೇಯಬಹುದಿತ್ತೇನೋ ನೀನಿರದ ಈ ಪ್ರಕ್ಷುಬ್ಧ ಸಂಜೆಗಳಲೂ... 
ಮತ್ತೆಲ್ಲವನೂ ಮೊದಲಿಂದ ಶುರು ಮಾಡುವಂತಿದ್ದಿದ್ದರೆ; ಮಾತಿನೆಡೆಗಿನ ನನ್ನ ಅತೀವ ಹಪಹಪಿಯ ನಡುವೆಯೂ, ಮಾತು ಎದೆಯ ಸುಡುವಲೆಲ್ಲ ಮೂಗನಾಗಿ ಒಂಚೂರು ಒಲವ ಸಲಹಬಹುದಿತ್ತೇನೋ ನನ್ನೀ ಬಂಜರೆದೆಯಲೂ...
***
ಎದೆಯಾಳದಿ ಕನಸುಗಳ ಸೋಲಿನ ಬೇಗುದಿ - ಸುಡುವ ಚಳಿ - ನೆನಪುಗಳ ಅಗ್ಗಿಸ್ಟಿಕೆ - ಮಾತುಗಳ ಹವಿಸ್ಸು - ಮೌನ ಯಜ್ಞ...
***
ಮೌನ (?) ... 
ಅಲ್ಲಲ್ಲ ಮಾತು ಕೋಮಾದಲ್ಲಿರುವಂತಿದೆ...
***
ನೋವು, ಸಿಟ್ಟು, ದ್ವೇಷ, ಅಸೂಯೆ, ಹತಾಶೆಗಳು ಬದುಕಿಸುವುದಕಿಂತ ಪ್ರೀತಿ ಕೊಲ್ಲಲಿ ಎನ್ನ... 
ಒಲವ ತೋಳಲ್ಲಿ ಸಾವಿಗೂ ಶೃಂಗಾರ ಸಂಭ್ರಮ...
***
ಬದುಕ ಪ್ರೀತಿ ಮತ್ತು ಬದುಕಿಗೆ ಸ್ಫೂರ್ತಿ ಎರಡನ್ನೂ ಬದುಕಿನಿಂದಲೇ ಬಸಿದುಕೊಳ್ಳಬೇಕು... 
ಹುಟ್ಟಿದಲ್ಲಿಯೇ ಕೊನೆಗೊಂಡು ಮತ್ತಲ್ಲಿಂದಲೇ ಪರಿಭ್ರಮಣಕೆ ಮೊದಲಿಡುವ ಶೂನ್ಯದ ಖಾಲಿತನ ಮತ್ತು ಬಿಂದುವಿನ ಪೂರ್ಣತೆ ಎರಡೂ ಬದುಕಿನ  ಉನ್ನತ ಧ್ಯಾನಸ್ಥ ಸ್ಥಿತಿಗಳೇ...
ಪಡಕೊಂಡೆ, ಕಳಕೊಂಡೆ ಎಂಬುದೆಲ್ಲ ವೃತ್ತದೊಳಗಣ ಕಾಲುದಾರಿಯ ಇಬ್ಬದಿಯ ಆಗು ಹೋಗುಗಳಷ್ಟೇ...
ಹೊರಚೆಲ್ಲುತ್ತಾ ಹಿರಿದಾಗಿ ಶೂನ್ಯವಾಗುವುದೂ, ತುಂಬಿಕೊಳ್ಳುತ್ತಾ ಕಿರಿದಾಗಿ ಬಿಂದುವಾಗುವುದೂ ಎರಡೂ ಕೂಡಾ ವೃತ್ತದೊಳಗಣ ಸಂಪತ್ತುಗಳೇ...
ಅದಕೇ ಬದುಕಿಗೇನೆಲ್ಲ ಬೇಕೋ ಅದೆಲ್ಲವನ್ನೂ ಅಲ್ಲಿಂದಲೇ ಬಸಿದುಕೊಳ್ಳಬೇಕು ಅಂತನ್ನಿಸುತ್ತೆ... 
ಅದು ಕರುಣಿಸಿದಷ್ಟು - ಅಲ್ಲಲ್ಲ ನಮ್ಮ ಬೊಗಸೆಯ ವಿಸ್ತಾರದಷ್ಟು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, November 28, 2014

ಗೊಂಚಲು - ಒಂದು ನೂರಾ ಮೂವತ್ತು ಮತ್ತು ಆರು.....

ಹಗಲಿಗೊಂದಷ್ಟು - ಇರುಳಿಗಿನ್ನೊಂದಿಷ್ಟು ನಲ್ನುಡಿಗಳು.....

ಕಣ್ಣ ಮಡಿಲಲ್ಲಿ ಕನಸುಗಳು ಮಾತಾಗೋ ಸವಿ ಹೊತ್ತಲ್ಲವಾ ಇರುಳೆಂದರೆ...
ರೆಪ್ಪೆ ಮುಚ್ಚಿ ನಕ್ಕುಬಿಡಿ...
ಇರುಳಿಗೂ ಬಣ್ಣದ ಮೆರಗು...

ವಸುಧೆಯ ಮಡಿಲ ತುಂಬಾ ದಿನಮಣಿಯ ಮುತ್ತಿನ ಮಾಲೆ - ಅದು ಬೆಳಗು....

ಇರುಳೆಂದರೆ ಈಗ ಸ್ನೇಹವು ಹಾಡುವ ಜೋಗುಳ...

ಹೊಸ ಊರಿನ ಹಾದಿ ಬೀದಿಗಳಲೂ ಅದೇ ಬೆಳಗು - ನನಗಾದರೋ ಇನ್ನಿಲ್ಲದ ಬೆರಗು...

ಬಯಲ ನಡುವಿನ ಹಣತೆ - ಗಾಳಿಯ ಕುಹಕ...
ಇರುಳಿಗೆ ಬೆಳಕಿನ ತವಕ...
ಭರವಸೆಯ ಶುಭರಾತ್ರಿ...

ನಾ ಹೋದಲ್ಲೆಲ್ಲಾ ಬಂದು ಬೆಳಗುತ್ತಾನೆ ಅವನು - ಅದ್ಯಾವ ಪರಿ ಪ್ರೀತಿ ಉರಿಯುತ್ತೋ ಅವನ ಒಡಲಲ್ಲಿ...
ಶುಭದಿನವಲ್ಲದೇ ಇನ್ನೇನು...

ಇರುಳೆಂದರೆ ಈಗ -
ಕಣ್ಣ ರೆಪ್ಪೆಗಳಡಿಯಲ್ಲಿ ಕದ್ದು ಕೂಡಿಟ್ಟುಕೊಂಡ ಕನಸುಗಳೆಲ್ಲಾ ಸೇರಿ ಕಲರ್ ಕಲರ್ ವಾಟ್ ಕಲರ್ ಎಂದು ಆಡುವ ಸಮಯ...

ಬೆಳಗೆಂದರೆ ಭರವಸೆಯ ಹಬ್ಬ...
ಪ್ರತಿ ಕ್ಷಣವೂ ಹಬ್ಬವಾಗಲಿ...
ನಗೆಯ ಸುಗ್ಗಿಯಾಗಲಿ...

ಇರುಳೆಂದರೆ ಈಗ -
ನೆನಪು ಹಾಗೂ ಕನಸುಗಳ ಕರುಳ ಸುವ್ವಾಲಿ...
ಕಣ್ಣ ರೆಪ್ಪೆಗಳಡಿಯಲ್ಲಿ ಜೀಕಲಿ ಒಲವ ಜೋಕಾಲಿ...

ನಗುವಿರಲಿ ನಯನದಲಿ...
ಮುಂಬೆಳಗಿಗದೇ ರಂಗೋಲಿ...

ನೆತ್ತಿ ಸುಡೋ ಸೂರ್ಯನಿಗಿಂತ ಎದೆಯ ಬೆಂಕಿಗೆ ತುಪ್ಪ ಸುರಿಯುವ ಚಂದಿರನೆಡೆಗೆ ಮಹಾ ಕೋಪ – ಜತೆಗೆ ಅಷ್ಟೇ ಪ್ರೀತಿ ಕೂಡ...
ತಾರೆಗಳೊಡನೆ ಸರಸವಾಡ್ತಾನೋ ಇಲ್ಲವೋ ಗೊತ್ತಿಲ್ಲವಾಗಲೀ ಅವುಗಳ ಮಿನುಗಿನ ಗೋಚರೆತೆಯ ಕೊಲ್ಲುವುದಂತೂ ಸತ್ಯ...
ಚಂದಿರ ಸಿಹಿ ನಗೆಯ ಸುರಿಯಲಿ ಇರುಳಿಗೆ...

ಬೆಳಗೆಂದರೆ ಸ್ನೇಹದ ತೊಟ್ಟಿಲ ದಾರಕೆ ಕಟ್ಟಿದ ಗಿಲಕಿಯ ಕಿಣಿ ಕಿಣಿ...
ಬೆಳಗೆಂದರೆ ಅಮ್ಮನೆಡೆಗೆ ಕೈಚಾಚೋ ನಿದ್ದೆಗಣ್ಣಿನ ಕಂದನ ಕಿಲ ಕಿಲ...
ಬೆಳಗೆಂದರೆ ಕಂದನ ತಬ್ಬುವ ಅಮ್ಮನೆದೆಯ ಒಲವಾಮೃತ...
ಬೆಳಗೆಂದರೆ ಪಾರಿಜಾತದ ರಂಗೋಲಿ...

ಚಂದಮಾಮನನ್ನೊಮ್ಮೆ ಮಾತಾಡಿಸಿ, ಬೆಳದಿಂಗಳಲ್ಲೊಂದಿಷ್ಟು ಮೈತೋಯಿಸಿಕೊಂಡು, ಹೊಸತೊಂದು ಕನಸ ಸುರತಕ್ಕೆ ಕರೆದುಕೊಂಡು, ಹಿತವಾದ ಭಾವದಲಿ, ಹೊಸ ಗೆಲುವಿನ ಭರವಸೆಯ ಹೊದ್ದು ಮಲಗು... 
ನಲಿವಿನ ನಾಳೆಯ ಬೆಳಕಿನುತ್ಸವಕೆ ನಾಂದಿಯಾಗುವ ಪ್ರಚ್ಛನ್ನ, ಪ್ರಶಾಂತ ಇರುಳು ನಿನ್ನ ತಬ್ಬಲಿ... 
ಶುಭರಾತ್ರಿ...

ಇರುಳ ಕಣ್ಣಿಂದ ಜಾರಿದ ಹನಿಗಳನು ಶೇಷವೂ ಉಳಿಯದಂತೆ ಹೀರಿ ನಗು ಚೆಲ್ಲುತಾನೆ ದಿನಕರ... 
ಬೆಳಗಾಯಿತು... 
ಬೆಳಗೆಂದರೆ ಕಣ್ಣಹನಿಗಳ ಅವಸಾನ... 
ಶುಭದಿನ...

Friday, November 21, 2014

ಗೊಂಚಲು - ಒಂದು ನೂರಾ ಮೂವತ್ತು ಮತ್ತು ಐದು.....

ಆಗೀಗ ಅಲ್ಲಲ್ಲಿ ಅರ್ಧಂಬರ್ಧ ಗೀಚಿಟ್ಟ ಸಾಲುಗಳು.....
(ಬದುಕಿದು ಎಂದಿಗೂ ಪೂರ್ಣವಾಗದು ಬಿಡಿ...)

ಗೆಳತೀ -
ಮನಸಿದು ಕಳೆದು ಹೋದರೆ ಇಂದಲ್ಲ ನಾಳೆ ಸೆರೆಸಿಕ್ಕೀತು - ನಿನ್ನಂತ ಒಳಗಣ್ಣು ತೆರಕೊಂಡು ಹುಡುಕೋ ಜೀವಗಳಿಗೆ...
ಕಲ್ಲಾಗಿ ಹೋದರೆ...?
ಶಿಲ್ಪವಾಗಿಸಿಕೊಳ್ತೀಯಾ...?
***
ನೀ ಇರುವಾಗ ಮನದಲ್ಲಿ - ಕನಸೆಲ್ಲವೂ ಸಿಹಿಯೇ ಕಣ್ಣಲ್ಲಿ...
ಮನದ ಕದವ ತೆರೆದಿಟ್ಟು ಮಲಗು ನನ್ನ ನೆನಪ ಗುಂಗಲ್ಲಿ - ಕನಸಾಗಿ ಹೋಗೋ ಮುನ್ನ ಬಂದೇನೊಮ್ಮೆ ನಿನ್ನ ಕನಸಲ್ಲಿ...
***
ನನ್ನದು ಅನುಶಾಸನದ ಹಾದಿ - ಶಿಸ್ತು, ಶಿಕ್ಷೆ ಎರಡೂ ಗೊತ್ತಿಲ್ಲ...
ಬದುಕಿದು ಮಹಾಗುರು - ಜತೆಯಾದವರು ಸಹಪಾಠಿಗಳು...
ಸಹಪಾಠಿಗಳೂ ಗುರುಗಳಾಗಿ ದಾರಿಗೆ ಕೈದೀಪವಾಗಿದ್ದಾರೆ...
ಮಹಾಗುರುವಿಗೂ - ಜತೆ ನಡೆಯುತ್ತಾ ಪಾಠ ಕಲಿಸಿದ ಜೀವಗಳಿಗೂ ಋಣದ ಸಾಸ್ಟಾಂಗ...
***
ಬಾಗಿಲು ಮುಚ್ಚಿಟ್ಟು ಕೂತರೆ ಒಳಮನೆಯ ಮಬ್ಬು ಬೆಳಕಷ್ಟೇ ನಿನ್ನದು...
ತೆರದೊಮ್ಮೆ ನೋಡು ಬಯಲ ಬೆಳಕೆಲ್ಲ ನಿನ್ನ ಕಣ್ಣಲ್ಲೇ...
ಕಣ್ಮುಚ್ಚಿ ಕೂತವಗೆ ನಿಗಿ ನಿಗಿ ಬೆಳಕಲ್ಲೂ ದಾರಿ ಅಗೋಚರ...
ಮನದ ಕಣ್ಣ ತೆರೆದು ಹೊರಟವಗೆ ಕಾರಿರುಳ ಬಾನ ಬೆಳಕಲ್ಲೇ ಗಮ್ಯವದು ಸ್ಪಷ್ಟ ಗೋಚರ...
***
ಅಂತರಂಗವಿದು ಹರೆಯ ಉಕ್ಕುವ ಆಸೆಗಳೆಂಬ ತಾರೆಗಳಾಡುವ ವಿಶಾಲ ಬಯಲು...
ಅಂತರಾತ್ಮನ ಅರೆ ಘಳಿಗೆಯ ನಗುವಿಗಾಗಿ ಉಸಿರನೇ ಅಡವಿಟ್ಟು ನಡೆದೇನು ಆ ತೀರದೆಡೆಗೆ.....
***
ನೆನಪುಗಳು ಕೂಡಾ ನಮ್ಮದೇ ಆಯ್ಕೆ ಅಲ್ಲವಾ..?
ಮರೆತು ಮುನ್ನಡೆಯಬೇಕಾದದ್ದನ್ನು ಮತ್ತೆ ಮತ್ತೆ ನೆನೆಸಿಕೊಂಡು ಕೊರಗುತ್ತೇವೆ, ಅಲ್ಲಲ್ಲೇ ಹೊರಳಾಡುತ್ತಾ ಕೊಳೆಯುತ್ತೇವೆ...
ಮರೆಯಬಾರದ್ದನ್ನು ಎಲ್ಲಿ ಕಳೆದುಕೊಂಡೆವೆಂಬುದೂ ನೆನಪಾಗುವುದಿಲ್ಲ...
***
ಎಲ್ಲೆಂಲ್ಲಿಂದಲೋ ನನ್ನೆಡೆಗೆ ನಲಿದು ಬರುವ ವಿನಾಕಾರಣದ ಪ್ರೀತಿಯ ಸನ್ನಿಧಿಯಲ್ಲಿ ಈ ಮನಸೆಂಬುದು ಸದ್ದಿಲ್ಲದೇ ಖುಷಿಯ ಚೈತನ್ಯ ತುಂಬಿಕೊಂಡು ಅರಳುತ್ತದೆ - ಅಂಥ ಸ್ನೇಹಾನುಬಂಧಗಳ ಹೆಜ್ಜೆ ಗುರುತೇ ನನ್ನೀ ಮನದ ಮನೆಯ ಶ್ರೀಮಂತ ಶೃಂಗಾರ...
ಋಣದ ನಮನಗಳು ನಿನಗೆ ಓ ಸ್ನೇಹವೇ...
***
ಹಸಿದ ಎದೆಯ ಬೀದಿಯಲಿ ತೆವಳುವ ಕಾಲಿಲ್ಲದ ಕನಸುಗಳ ಹೆಗಲ ಮೇಲೆ  ಕೂತು ಘರ್ಜಿಸುವ ಹೆಣಭಾರದ ನೆನಪುಗಳು... 
ಇಳಿಸುವ ಪರಿಯೆಂತೋ ಅರಿವಿಲ್ಲ ... 
ಕಾರಣ - ಕನಸೆಂದರೆ ನಾಳೆ; ಈಗಿನ್ನೂ ನೆಲೆ ಕಂಡುಕೊಂಡಿರದ ಮತ್ತು ನೆಲೆಯೂರೀತೆಂಬ ಸ್ಪಸ್ಟತೆಯಿಲ್ಲದ ಜಂಗಮ ಭಾವ...
ನೆನಪಾದರೋ ನಿನ್ನೆಯ ಅನುಭವಗಳ ಸಾಕ್ಷಿಯ ಹರವಿಟ್ಟುಕೊಂಡು ವಾದಕ್ಕೆ ಕೂರೋ ಜಿದ್ದಿನ ವಕೀಲ...
***
ಕಾಡು ಕರೆಯುತಿದೆ...
ನೆನಪುಗಳ ಹೊರೆಯ ಭಾರ ಹೊತ್ತ ಭುಜದ ಹುಣ್ಣಿಗೆ ಕನಸುಗಳ ಉಪ್ಪು ಖಾರ - ಕಣ್ಣಲ್ಲಿ ಯಾತನೆಯ ಗಡ್ಡೆ...
ಕಳೆದು ಹೋಗಬೇಕು ಯಾರ ಕೈಗೂ ಸಿಗದ ಹಾಗೆ, ಕೊನೆಗೆ ನನ್ನ ಕೈಗೂ ನಾ ಸಿಗದಂತೆ, 
ಆ ಕತ್ತಲಲ್ಲಿ ಹೊರೆಯಿಳಿಸಿ, ಗಡ್ಡೆ ಕರಗಿಸಿ ಹೊಸದಾಗಿ ಹುಟ್ಟಬೇಕೆಂಬ ಆಸೆಗೆ - ಕಾಡು ಸೆಳೆಯುತಿದೆ...
***
ಮಾತಿನ ಆಂತರ್ಯದ ಶಕ್ತಿಯಾಗಿ, ಮಾತೆಂಬೋ ಮಾತಿನ ಚಿತ್ರಕೆ ಬಣ್ಣ ತುಂಬಲಾರದ ಮೌನದೆದೆಯಲಿ  ಸದಾ ನಿಜ ನಗುವಿನ ಸೂತಕದ ನಿಟ್ಟುಸಿರು...
***
ಅಂಗಳದಲಿ ನೆನಪುಗಳ ಜಾತ್ರೆ - ಒಳ ಮನೇಲಿ ಕನಸುಗಳ ಸ್ಮಶಾನ ಮೌನ...
ಹೆಬ್ಬಾಗಿಲಲಿ ಎಣ್ಣೆ ಬತ್ತಿದಮೇಲೂ ನಂದದಿರಲು ಹೆಣಗುತಿರೋ ಭರವಸೆಯ ಪುಟ್ಟ ಪ್ರಣತಿ - ಅದು ಆರಿದ ಕ್ಷಣ ಮನದ ಮುಸ್ಸಂಜೆಯ ಸಾವು...
***
ಮನಸು ಮತ್ತು ಪ್ರಜ್ಞೆಯ ನಡುವಿನ ನಿತ್ಯ ಗುದ್ದಾಟದಲ್ಲಿ ನೆನಪುಗಳು ಹಾಗೂ ವಾಸ್ತವದ ಬೆಂಬಲ ದಕ್ಕಿದ ಪ್ರಜ್ಞೆಯೇ ಸದಾ ಗೆಲ್ಲುವುದು ಈ ಬದುಕಿನ ದುರಂತ ಅನ್ನಿಸುತ್ತೆ...
ಸೋತು ಬರಡಾದ ಮನದ ನೆಲದಲ್ಲಿ ಕನಸುಗಳ ಬೆಳೆ ಬೆಳೆದೀತು ಹೇಗೆ...
ಆಗೀಗ ಅಷ್ಟಿಷ್ಟು ಭಾವಗಳ ಮಳೆಯಾದರೂ ಅಲ್ಲಿ ಬಿತ್ತಿದ ಕನಸ ಬೀಜದಿಂದ ಫಲದ ನಿರೀಕ್ಷೆ ಹುಸಿಯೇ...
ಕನಸುಗಳ ಬೆಂಬಲ ಅಥವಾ ಕನಸಿಗಾಗಿನ ಬಡಿದಾಟ ಇಲ್ಲದ ಸಾವೂ ಹೀನಾಯವೇ ಅನ್ನಿಸುತ್ತೆ ಈಗೀಗ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, November 19, 2014

ಗೊಂಚಲು - ಒಂದು ನೂರಾ ಮೂವತ್ನಾಕು.....

ನೀನೆಂದರೆ.....

ನೀನೆಂದರೆ ಮಾತು ಮಾತಿನ ನಡುವೆಯ ನಿರ್ವಾತದಲಿ ಗುಣುಗುಣಿಸೋ ಎದೆಯ ಹಾಡು...

ನೀನೆಂದರೆ ನಿತ್ಯ ಉರಿದೂ ಖಾಲಿಯಾಗದ ದಿನಮಣಿಯ ಭೂರಮೆಯೆಡೆಗಿನ ಮತ್ತು ಕ್ಷಣ ಕ್ಷಣವೂ ಬೆಂದೂ ಬಾಡದ ಭೂತಾಯಮ್ಮನ ರವಿಯೆಡೆಗಿನ ಒಡಲಾಳದ ಪ್ರೀತಿ...

ನೀನೆಂದರೆ ಋಣ ತೀರಿದ ಮೇಲೂ ಶಂಖದ ಎದೆಗೂಡಲಿ ಸುಪ್ತವಾಗಿ ಮೊಳಗುತಲೇ ಉಳಿದ ಸಾಗರದ ಮೊರೆತದನುರಣನ...

ನೀನೆಂದರೆ ಹೂವ ಅಂದ, ಗಂಧದಲಿ ಮತ್ತು ಹಣ್ಣ ರುಚಿಯಲ್ಲಿ ನಗುವ ಅಲ್ಲೆಲ್ಲೋ ಭೂಗರ್ಭದಲಿ ಅವಿತು ಕೂತ ನಿಸ್ವಾರ್ಥಿ ಬೇರು...

ನೀನೆಂದರೆ ಅಮ್ಮನ ಭಯ ತುಂಬಿದ ಮುನಿಸು, ಅಜ್ಜಿಯ ಕಥೆಗಳಲ್ಲಿನ ಸುಳ್ಳು ಮತ್ತು ಅಜ್ಜನ ಊರುಗೋಲಿನ ಪೆಟ್ಟು ಇವೆಲ್ಲವುಗಳಲೂ ಹಾಸುಹೊಕ್ಕಾಗಿರೋ ನನ್ನ ಹಿತ...

ನೀನೆಂದರೆ ಇರುಳ ಏಕಾಂತ ಸಾಂಗತ್ಯದಲಿ ತಪ್ಪದೇ ಕೆರಳುವ ನನ್ನ ವ್ಯಭಿಚಾರೀ ಮನಸಿನ ತೊಡೆ ನಡುವಿನ ಮೃಗೋನ್ಮಾದದಲೂ ಒಳ್ಳೆಯತನವನೇ ಹುಡುಕಲೆಳಸುವ ಹುಚ್ಚು ಪ್ರೇಮ...

ನೀನೆಂದರೆ ಅರಿವಿಗೆ ದಕ್ಕಿದರೆ ತಪ್ಪು ಒಪ್ಪುಗಳ ಹಂಗನೆಲ್ಲ ಮೀರಿ ಬದುಕಿಗೆ ಅರ್ಥ ತುಂಬುವ ಎದೆಗೂಡನೆ ತಬ್ಬಿ ಕೂತ ಸಾವು...

ಮತ್ತು

ನೀನೆಂದರೆ ನನ್ನಂಥ ನನ್ನಲೂ ಅಷ್ಟಿಷ್ಟು ಮನುಷ್ಯ ಭಾವಗಳ ಉಗಮಕ್ಕೆ ಕಾರಣವಾದ ಆತ್ಮ ಸಾಂಗತ್ಯದ ಸವಿ ಸ್ನೇಹ...

Thursday, October 9, 2014

ಗೊಂಚಲು - ಒಂದು ನೂರಾ ಮೂವತ್ಮೂರು.....

ಅರ್ಥವಿದ್ದೀತೆನಿಸದ ಅಪೂರ್ಣ ಭಾವಗಳು.....
(ಭಾವಕ್ಕೆ ಬದ್ಧನಾಗಿರಲಾಗದವನ ಅಡ್ನಾಡಿ ಭಾವಗಳು...)

ಬಿಡಿ ಬಿಡಿಯಾದ ಥರ ಥರದ ಹೂವುಗಳನು ಆಯ್ದು ಒಂದೆ ದಾರದಲಿ ಚಕಚಕನೆ ಕಟ್ಟಿ ಮಾಲೆ ಮಾಡುವ ಆ ಹೂವು ಮಾರುವ ಹೂವಂಥ ಹುಡುಗಿಯ ಅತ್ತಿತ್ತ ಓಲಾಡುವ ಕಪ್ಪು ಕಂಗಳಲಿ ಬಣ್ಣ ಬಣ್ಣದ ಕನಸುಗಳ ಮಾಲೆ ಇರುವಂತಿದೆ...
ಸುರಿವ ಬಿಸಿಲಿಗೆ ತನ್ನ ಮುಖ ಬಾಡಿದರೂ ಹೂ ಬಾಡದಿರುವಂತೆ ನೀರ ಸಿಂಪಡಿಸೋ ಅವಳ ಕೈಗಳಲ್ಲಿ ನಂಗೆ ಬದುಕಿನೆಡೆಗಿನ ಅವಳ ಪ್ರೀತಿಯ ತೀವ್ರತೆ ಕಾಣುತ್ತದೆ...
ಹೂವ ಕಟ್ಟುತ್ತ ಕಟ್ಟುತ್ತಲೇ ಒರಟಾದ ಅವಳ ಬೆರಳುಗಳಲ್ಲಿ ಬದುಕ ಮಧುರವಾಗಿ ಕಟ್ಟಿಕೊಳ್ಳೊ ಮುಚ್ಚಟೆಯ ಹಂಬಲದ ಹಾಡಿರುವಂತಿದೆ...
ಹೂವ ಮಾರಿ ಕನಸುಗಳ ಕೊಂಡು ಜೋಪಾನ ಮಾಡೋ ಆ ಹುಡುಗಿ ನನ್ನಲ್ಲಿ ನನ್ನ ಕಪ್ಪು ಹುಡುಗಿಯಷ್ಟೇ ಅಕ್ಕರೆಯ ಉಕ್ಕಿಸುತ್ತಾಳೆ...
ಅವಳ ಕಂಗಳಲ್ಲಿನ ಕನಸುಗಳಿಗೆ ಬೆಳೆದು ಬಾಳಲು, ಬೆಳೆಯುವಲ್ಲಿ ಮತ್ತು ಬಾಳುವಲ್ಲಿನ ಕಾಡಿನ ಸ್ವಾತಂತ್ರ‍್ಯ ಹಾಗೂ ಉದ್ಯಾನವನಕೆ ಸಿಗುವ ಆರೈಕೆ ಎರಡೂ ಸಿಗಲಿ ಎಂಬುವುದೆನ್ನ ಹಾರೈಕೆ...

***

ಸ್ನೇಹವೇ -
ಮನದ ಸುತ್ತ ಅಷ್ಟು ಭದ್ರವಾಗಿ ಕಟ್ಟಿಕೊಂಡ ನಾನೆಂಬ ನನ್ನಹಮ್ಮಿನ ಕೋಟೆ ನಿನ್ನ ಒಂದೇ ಒಂದು ಮುಗುಳ್ನಗೆಯ ನೆನಪಿನ ದಾಳಿಗೆ ಕುರುಹೂ ಇಲ್ಲದಂತೆ ಮುರಿದು ಬೀಳುತ್ತೆ ಪ್ರತಿ ಬಾರಿಯೂ...
ಅರಿವಾಗುತಿದೆ ಈಗೀಗ ಒಳಗಿನ ದಂಗೆಯ ಮೆಟ್ಟುವುದಷ್ಟು ಸುಲಭವಲ್ಲ...
ಕತ್ತಿ ಹಿಡಿದ ಕೈಯ ಕತ್ತರಿಸಿ ಗೆದ್ದಷ್ಟು ಸುಲಭವಲ್ಲ, ಹೂವ ಹಿಡಿದು ಎದುರು ನಿಂತ ಕೈಯ ಕಿರುಬೆರಳನೂ ಸೋಕದೇ ನಿಲ್ಲುವುದು ಅಥವಾ ಆ ಕೈಯ ಕುಲುಕಿ ಸಲಹುವುದು...
ಪ್ರೀತಿಯ ಹೂಗಿಡವ ನೆಡುವಾಸೆಯ ಪಡಬೇಡಿ ಭಾವಜೀವಗಳೇ ನೀರುಣಿಸಿ ಸಲಹಲಾರದ ಬರಡು ನೆಲ ನನ್ನೀ ಮನಸು...
ಹೊರಕಾಂಬುದೆಲ್ಲ ಒಳಗಿರುವುದಿಲ್ಲ...
ಒಳಗಿರಿವುದನೇ ಹೊರಗೂ ತೋರಿಯೂ ಪ್ರೀತಿಯ ಗೆಲ್ಲುವುದು ನನ್ನಂಥವರಿಗಲ್ಲ...
ಎಷ್ಟು ಹೂಗಿಡಗಳು ಬಾಡಿದವೋ ನನ್ನ ನಿಷ್ಠುರ ಭಾವಹೀನತೆಯ ಮನದ ಬಯಲಲಿ ಉಸಿರಾಡೋ ಆಸೆಗೆ ಬಿದ್ದು...
ಅರಳಿ ನಗುವಾಸೆಯ ಸ್ನೇಹಗಳೇ ದೂರವೇ ಇದ್ದುಬಿಡಿ ಮರಳುಗಾಡಿದು ನನ್ನ ಮನಸು - ಹಬ್ಬಿ ಹರಡಲು ದಕ್ಕಲಿ ನಿಮಗೆಲ್ಲ ಮಲೆನಾಡ ಕಾಡಲೊಂದು ತಾವು...

***

ಕೂಸೇ -
ಕೊಳೆತ ಕನಸುಗಳ ಗಬ್ಬು ನಾರುವ ಮನದ ಬೀದಿಯಲಿ ಅರೆ ಹುಚ್ಚ ಕುನ್ನಿಯಂತೆ ಅಂಡಲೆಯುವ ಅಳಿದುಳಿದ ಅತೃಪ್ತ ಭಾವಗಳನೆಲ್ಲ ನಿರ್ಭಾವದ ಮಬ್ಬುಗಣ್ಣಲ್ಲಿ ದಿಟ್ಟಿಸುತ್ತ ಕೂತವನು ನಾನು...
ನೀನೋ ಅಂದ ಗಂಧಗಳ ಆಯಸ್ಸು ಮುಗಿಯುತಿರೋ ಅದೇ ಭಾವಗಳನು ನನಗೆ ಕೊಡು; ಯಾರೋ ಭಗವಂತನ ಪ್ರಸಾದವೆಂಬಂತೆ ದಂಡೆಯಾಗಿಸಿ ಮುಡಿಗೆ ಮುಡಿದು ನಗುತ್ತೇನೆನ್ನುತ್ತೀಯ...
ಗೊತ್ತು ನಿನಗೂ ಹೂವೆಂದೂ ಎರಡನೇ ಹಗಲನ್ನು ಕಂಡದ್ದಿಲ್ಲ...
ಅಂತೆಯೇ ನನ್ನೊಳಗೆ ಜೀವ ತಳೆದ ಒಂದೇ ಒಂದು ಕನಸು ಕೂಡ ಹಗಲಲ್ಲಿ ನಗದೇ ದಶಕಗಳೇ ಕಳೆಯುತ್ತ ಬಂದವು...
ಹುರಿದು ಮುಕ್ಕುವ ವಾಸ್ತವಗಳು ಹಗಲಿಗೆ ಎದೆಕೊಟ್ಟು ನಿಲ್ಲದಂತೆ ಬಡಿದು ಮಲಗಿಸಿರುವಾಗ ಯುದ್ಧಕ್ಕೆ ಹುರಿಗೊಳಿಸೋ ಮಾತಾಡುತ್ತೀಯ...
ಕತ್ತಲನೇ ಉಸಿರಾಡುವವಗೆ ಹೊಸ ಹಗಲ ತೋರುವೆನೆಂಬ ನಿನ್ನ ಹುಂಬ ಧೈರ್ಯಕೆ ಏನೆನ್ನಲಿ...
ಹೋಗಲಿ ಭಾವಗಳಾದರೂ ಏಕೀಭವಿಸುತ್ತಾವಾ ಅಂದರೆ ಅದೂ ಇಲ್ಲ...
ನೀನು ಮನಸನ್ನು ಮುದ್ದಿಸು ಅನ್ನುತ್ತೀಯ - ನಾನೋ ದೇಹದ ಮೇಲೆ ಕಣ್ಣು ನೆಟ್ಟು ಕೂತ ಮೃಗ...
ಭಾವಗಳೇ ನೋವ ಕಳೆವ ನಲಿವ ಬೆಳೆವ ಜೀವ ಸೆಲೆ ಎನ್ನುವ ನೀನು - ನಿರ್ಭಾವವೇ ಬದುಕಿನೋಘದ ಮೂಲ ಸೆಲೆ ಎಂಬುವ ನಾನು...
ನಾನೋ ಮಿತಿಗಳ ಹಂಗಿಲ್ಲದೆ ಸುಖಗಳ ಸವಿಯನರಸಿ ಹೊಂಟ ಪುಂಡು ಮನಸಿನ ಮಹಾ ವ್ಯಾಮೋಹಿ - ನೀನಾದರೋ ನಿನ್ನ ಮತ್ತು ನೀನಿರೋ ಸಮಾಜದ ಮಿತಿಗಳೊಳಗೇ ಆನಂದವ ತುಂಬಿಕೊಳ್ಳ ಬಯಸೋ ಮುಚ್ಚಟೆಯ ಮೃದು ಮನಸಿನ ನಿರ್ಮೋಹಿ...  
ಇಷ್ಟಾಗಿಯೂ ಮುದಿ ಸೂಳೆಯೊಬ್ಬಳು ಮಗುವ ಹಡೆದಂತೆ ಕನಸಾದದ್ದನ್ನು ಊರಿಗೆಲ್ಲ ಹೇಳಿಕೊಂಡು ಸಂಭ್ರಮಿಸಿದಂತೆ ನಿನ್ನ ಪ್ರೇಮವ ಕೂಗಿ ಕೂಗಿ ಸಂಭ್ರಮಿಸುತ್ತೇನೆ...
ಕೊಡಲು ನನ್ನಲಿ ಒಂದಿನಿತು ಪ್ರೇಮವಿಲ್ಲ - ನಿನ್ನ ಭಾವವ ಸಲಹಿ ಕಾಯಲು ಮನದಿ ತಾವೂ ಇಲ್ಲ...
ಪ್ರೇಮ ಹುಟ್ಟದ, ಕಾಮ ಸಾಯದ ಹುಚ್ಚಾಟದ ಗಂಡು ಕರಡಿ ನಾನು...
ಆದರೂ ನಿನ್ನ ಮಡಿಲಿಂದ ದೂರನಿಲ್ಲಲಾರದ ಸ್ವಾರ್ಥ ನನ್ನದು - ಪ್ರೇಮವಿಲ್ಲದ, ಮಿತಿಗಳೂ ಇಲ್ಲದ ಸ್ನೇಹವ ಬೇಡುತ್ತ ನಿಲ್ಲುತ್ತೇನೆ ...
ನನ್ನ ನಾಲಿಗೆಯ ಸ್ವಾರ್ಥದ ಜೊಲ್ಲಿನ ಒಣ ಅಕ್ಕರೆಯ ಮಾತುಗಳು ನಿನ್ನ ಬದುಕ ಬಲಿ ತೆಗೆದುಕೊಳ್ಳದಂತೆ ನಿನ್ನನು ನೀನೇ ಕಾಯ್ದುಕೊಳ್ಳಬೇಕೀಗ...
ಪುಟ್ಟಾ - ಪ್ರೇಮಕ್ಕೆ ಭಾವಗಳ ಸಮರ್ಪಿಸಬಹುದೇನೋ ಆದರೆ ಬದುಕನ್ನಲ್ಲ ಕಣೋ...
ಬದುಕ ನಾವೆ ತೇಲುತ್ತಲೇ ಇರಬೇಕು ಪ್ರೇಮಜಲದ ಮಂದಾಕಿನಿಯ ಮೇಲೆ...
ದಕ್ಕದ ಪ್ರೇಮಿಯ ತೊರೆದುಬಿಡು - ಪ್ರೇಮಭಾವವ ಸಾಯಗೊಡದೆ ಬಚ್ಚಿಟ್ಟುಕೊಂಡು...
ಬದುಕ ಅದಿರುವಂತೆಯೇ ತಬ್ಬಿಕೋ - ನೀ ಬಯಸುವಂತೆ ಬದುಕು ಬಗ್ಗಲ್ಲವೆಂದಾದಾಗ...
ಸಮರ್ಪಣೆ ಬದುಕಿನೆಡೆಗಿರಲಿ - ಪ್ರೇಮಿ ಬದುಕಿನೊಂದು ಮಧುರ ಯಾತನೆಯಾಗಿ ನೆನಪಿನ ಕಣಜದ ಒಳಮನೆಗೆ ಸೇರಲಿ...
ಹೊಸ ಪ್ರೇಮ ಆಡಿ ನಗಲಿ ಮನದರಮನೆಯ ಅಂಗಳದಲಿ...
ಶುಭಾಶಯವು ನಿನಗೆ...

***

ಉರಿವ ಕಾರಿರುಳ ಗರ್ಭದಲಿ ನೆನಪುಗಳನೆಲ್ಲಾ ಸುಟ್ಟು ಅಂತ್ಯಕ್ರಿಯೆ ಮಾಡಬೇಕಿದೆ - ಮತ್ತೆಂದಿಗೂ ಎದ್ದು ಬಂದು ಕಾಡದಂತೆ...
ಜತೆಗೊಂದಿಷ್ಟು ಕೈಗೂಡದೇ ಕರುಳ ಕೊರೆಯುವ, ಸದಾ ಅಶಾಂತ ಅಲೆಗಳನೆಬ್ಬಿಸಿ ಕಣ್ಣ ಕೊಳವ ಬಗ್ಗಡವಾಗಿಸುವ ಕನಸುಗಳದೂ ದಹನವಾಗಬೇಕಿದೆ ಅದೇ ಚಿತೆಯಲ್ಲಿ...
ಕಾಯುತಿದೆ ಮನಸ ಕಣ್ಣು - ನೆನಪು ಕನಸುಗಳ ಹಂಗಿಲ್ಲದ ಪ್ರಶಾಂತ ಇರುಳ ಸಾಂಗತ್ಯಕ್ಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, September 20, 2014

ಗೊಂಚಲು - ಒಂದು ನೂರಾ ಮೂವತ್ತೆರಡು.....

ಆಗೀಗ ಹಿಂಡುವ ತುಂಡು ತುಂಡು ಭಾವಗಳು.....
(ಬದುಕ ಕಾಡುವ ಸಂಚಾರಿ ಭಾವಗಳಿವು - ಒಂದಕೊಂದು ವಿರುದ್ಧವೆನಿಸಿದರೆ ತಪ್ಪು ನನ್ನದಲ್ಲ...)

ಆತ್ಮ ಸಾಂಗತ್ಯವೇ - 
ಹೊಸ ಹೆಸರಿಡುವ ಹಂಗನು ಮರೆತು ಹಸನಾಗಿ ಹಬ್ಬಿರುವ ಸ್ನೇಹದ ಅನುಭಾವದಾಲಯದ ನಡುಮನೆಯಲ್ಲಿ ಈ ಬದುಕೆಂಬೋ ಬದುಕನು ಹಣತೆಯಾಗಿಸಿ ಹಚ್ಚಿಟ್ಟುಕೊಂಡು ಇಷ್ಟಿಷ್ಟೇ ಕರಗೋಣ... 
ಕರಗೋ ನೋವು ಮತ್ತು ಬೆಳಗೋ ನಗು ಎರಡೂ ನಮ್ಮದಾಗಲಿ...

ಕರುಳ ಜೋಗುಳವೇ -
ಎನ್ನ ಮೊಗದ ನಿತ್ರಾಣ ನಗುವನ್ನೂ, ಮನದ ಜೀವಂತ ಅಳುವನ್ನೂ ನಿನ್ನೆದೆಯ ಒಲವ ದಾರದಲ್ಲಿ ಕಟ್ಟಿ ಮಾಲೆಯಾಗಿಸಿ ಮುಡಿವ ನಿಸ್ವಾರ್ಥ ಮತ್ತು ತಂತಿ ಹರಿದ ವೀಣೆಯಿಂದ ಜೀವೋನ್ಮಾದದ ಮೇಘ ಮಲ್ಹಾರದ ನಾದ ಹೊಮ್ಮಿಸುವ ಹುಚ್ಚು ಹಂಬಲ ನಿನ್ನೊಳಗೆ ಮೂಡಿದ್ದು ಹೇಗೆ ಮತ್ತು ಏಕೆ..?? 
ಈಗಲೂ ಸೋಜಿಗವೆನಗೆ... 
ನೀನು -
ನಾ ಅರಿಯಲಾರದೆ ಹೋದ, ಬರೆಯಲಾಗದೆ ಸೋತ ಒಂದು ಮಹಾ ಕವಿತೆ...

ನಗುವಿಲ್ಲದ ಸ್ಮಶಾನ ಮೌನ - 
ಒಲವಿಲ್ಲದ ಪಿಶಾಚ ಧ್ಯಾನ - 
ರೆಪ್ಪೆಗಳು ಒಂದಾಗದ ಪರಿತ್ಯಕ್ತ ಕಾರಿರುಳು - 
ಒಂದಾದರೂ ಘನ ಕನಸು ಹುಟ್ಟದ ದರಿದ್ರ ಹಗಲು - 
ಆತ್ಮಗಳ ಬೆಸೆದು ಬೆಳಗದ ಶವ ಸಂಭೋಗದಂಥ ಕ್ಷುದ್ರ ಮಿಲನ - 
ಕೋಟಿ ಆಸೆಗಳ ಸಂಚಯಿಸೋ ಬಣ್ಣದ ಕಿರಣಗಳ ಹೊತ್ತು ಪ್ರತಿಫಲಿಸೋ ಮುಂಜಾವಿನ ಮಂಜಿಗೂ, ಪ್ರೇಮದ ನಂಜೇರಿ ಶೃಂಗಾರ ರಂಗೇರಬೇಕಿದ್ದ ಚುಮು ಚುಮು ಮುಸ್ಸಂಜೆಗೂ ಸ್ಪಂದನೆಯ ಹಂಗೇ ಇಲ್ಲದಂತೆ ಮುಖ ತಿರುವಬೇಕಾದ ಅಸಹಾಯ ಮನಸು - 
ಉಸಿರಿದ್ದೂ ಸಾಯುವುದೆಂದರೆ ಇಷ್ಟೆ ತಾನೆ... 
ಅಂಥ ಬದುಕುಗಳನ್ನು ಘೋರಿಯೊಳಗಣ ಬದುಕುಗಳೆನ್ನಬಹುದೇನೋ ಅಲ್ಲವಾ...........  

ಅವಳ ಸ್ನೇಹದ ಕಣ್ಣಂಚಿಂದ ಭರವಸೆಯ ಕಿಡಿಯೊಂದ ಬಸಿದುಕೊಂಡೆ... 
ಕಂಪಿಸೋ ಕಿರುಬೆರಳಿಂದ ಹೃದಯಕ್ಕೆ ಜೀವ ಸಂಚಾರ...
ಹೊತ್ತಿದ ಹೊಸ ಉತ್ಸಾಹದ ಉರಿಯ ಸುತ್ತ ಬದುಕಿನದೀಗ ಸಂಭ್ರಮದ ತಕಧಿಮಿತ...

ಹೊಟ್ಟೇಲಿ ಕರುಳ ಕೊಯ್ಯುವಷ್ಟು ಹಸಿವನಿಟ್ಟು - ತಟ್ಟೇಲಿ ರುಚಿಯಾದ ಅನ್ನವನಿಟ್ಟು - ಮೂಗು, ಕಣ್ಣುಗಳ ಸ್ವೇಚ್ಛೆಯಾಗಿ ಬಿಟ್ಟು - ಉಣ್ಣಲು ಬೇಕಾದ ಬಾಯಿ ಮತ್ತು ಕೈಗಳನು ಕಟ್ಟಿ - ಸಾವಿನ ಮನೆಯ ಜೀತಕ್ಕೆ ಅಟ್ಟಿದ ‘ಕರುಣಾಳು’ ಬದುಕಿನೆಡೆಗೆ ಯಾಕೋ ಸಣ್ಣ ಅಸಹನೆ ಈಗೀಗ...
ಕಸಿದುಕೊಂಡ ಸ್ವಾತಂತ್ರ‍್ಯವನೆಲ್ಲ ಮರಳಿ ಕೊಡೆಂದು ಕೊರಳ ಪಟ್ಟಿ ಹಿಡಿದು ಕೇಳೋಣ ಅಂದುಕೊಂಡರೆ - ಕ್ಷಣ ಕ್ಷಣಕೂ ಬಣ್ಣ ಬದಲಿಸೋ ಮೂಲ ಸ್ವಭಾವದ ಊಸರವಳ್ಳಿಯನ್ನು ಹಿಡಿದು ಪಳಗಿಸಿಕೊಳ್ಳುವುದಷ್ಟು ಸುಲಭವಾ...???

ಎನ್ನಾತ್ಮಲತೆಯೇ -
ನೀ ನನ್ನೀ ಬದುಕ ತಬ್ಬಿದ ಪರಿಗೆ ಎದೆಯ ಚಿಪ್ಪಿನಲ್ಲಿ ಒಲವು ಗರ್ಭಧರಿಸಿದೆ...
ಹುಟ್ಟಲಿರೋ ಹೊಸ ಕನಸ ಕಂದಮ್ಮನಿಗಾಗಿ ಕಣ್ಣ ಪಾಪೆಯಂಚಲಿ ತೊಟ್ಟಿಲು ಕಟ್ಟಿ ಕಾಯುತ್ತಿದ್ದೇನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, September 1, 2014

ಗೊಂಚಲು - ಒಂದು ನೂರಾ ಮೂವತ್ತು + ಒಂದು.....

ಅರ್ಧರ್ಧ ಬರೆದ ಸಾಲುಗಳು...
ಅರ್ಥ......................????

ನೆನಪು -
ಮನದಲ್ಲಿ ನಿಂತ ನೆನಪುಗಳು ನಾಳೆಗೆ ಪಾಠವಾದರೆ ಬದುಕು ನಗುತ್ತೆ - ಇಲ್ಲದೇ ಹೋದಲ್ಲಿ ನಮ್ಮನ್ನು ನಿನ್ನೆಯಿಂದಾಚೆ ನಡೆಯಗೊಡದೇ, ನಾಳೆಗಳನೂ ನಿನ್ನೆಗಳಲೇ ಬೆರೆಸಿ, ಕೊಳೆಸಿ, ನಿಜವಾದ ಹೊಸ ನಾಳೆಗಳೇ ಇಲ್ಲದಂತಾಗಿಸಿಬಿಡುತ್ತವೆ - ಬದುಕು ನಿಂತಲ್ಲೆ ನಿಂತು ಪಾಚಿಗಟ್ಟಿದ ನಿರುಪಯುಕ್ತ ನೀರಾಗುತ್ತೆ... 
ಯಾವ ದಾರಿ ನಾನೇ ನನ್ನ ಕೀಳಾಗಿ ಕಾಣುವಷ್ಟು ಅವಮಾನಿಸಿತೋ, ಯಾವ ದಾರಿ ನನ್ನ ಆತ್ಮಾಭಿಮಾನವನ್ನೇ ಅಲುಗಾಡಿಸಿತೋ ಅದೇ ದಾರೀಲಿ ಮತ್ತೆ ನಡೆಯುವಂತೆ ಆಸೆ ಹುಟ್ಟಿಸೋ ಕೆಲ ನೆನಪುಗಳೆಡೆಗೆ; ಅವೆಷ್ಟೇ ಸಿಹಿ ಅನ್ನಿಸಿದರೂ ಅಂಥ ನೆನಪುಗಳ ಮತ್ತೆ ಮತ್ತೆ ಎದುರು ತಂದು ನಿಲ್ಲಿಸಿ ತನ್ನಾಸೆಯ ಶಕ್ತಿ ಹೆಚ್ಚಿಸಿಕೊಳ್ಳ ಬಯಸೋ ನನ್ನದೇ ಮನದ ದೌರ್ಬಲ್ಯದೆಡೆಗೆ ನನ್ನ ಧಿಕ್ಕಾರವಿದೆ...
ಪ್ರಜ್ಞೆ ತಾನು ಎತ್ತರದ ಗೆಲುವಿನ ಕನಸು ಕಂಡರೆ ಈ ಮನಸೋ ಬದುಕಿನೊಳಮನೆಯ ಗಬ್ಬೆಬ್ಬಿಸಿದ ಅದೇ ಹಳೆಯ ಆಸೆಗಳ (ನೆನಪು) ಸುತ್ತ ಗಿರಕಿಹೊಡೆಯುತ್ತಿರುತ್ತೆ...
ನಾಚಿಕೆಯಿಲ್ಲದ ಹಂದಿಯಂಥ ಮನಸು - ಕೊಳಚೆಯೆಂದರೆ ಅದೇನು ಪ್ರೀತಿಯೋ...



ರೂಪದರ್ಶಿ: ಮುದ್ದು ಸೊಸೆ ‘ಅಭಿಜ್ಞಾ
ದುರುಳ ಜನಗಳ ಕಲ್ಲೇಟಿನ ನೋವನೂ ನಗುವಿಂದಲೇ ಅರಗಿಸಿಕೊಂಡು, ಆ ನಗುವಿಂದಲೇ ಕಲ್ಲೆಸೆದ ಜನರನು ಅಣಕಿಸಬಲ್ಲ ಮರುಳನ ಮನದ ನಗುವೂ ಯಾಕೋ ಶ್ರೇಷ್ಠವೇ ಅಂತೆನಿಸುತ್ತೆ... ನಿದ್ದೆ ಹೊರಳಲ್ಲಿನ ಮಗುವ ನಗುವಂಥ ನಗುವಲ್ಲಿ ಎಲ್ಲವನೂ ಕೊನೆಗೆ ತನ್ನನೇ ತಾನೂ ಮರೆತವನ ನಗುವನ್ನು ಹೀಗಳೆಯಲಿ ಹೇಗೆ... ಅಹಂನ ಕೋಟೆಯೊಳಗಿನ ಒಣ ಗಾಂಭೀರ್ಯದ ಸಭ್ಯತೆಗಿಂತ - ಬಯಲ ತುಂಬುವ ಶುದ್ಧ ಮನದ ಸ್ವಚ್ಛ ನಗು ಹೆಚ್ಚು ಹಿತಕರ ಅಲ್ಲವಾ... ನಗು ದಕ್ಕಿದಾಗ ನಕ್ಕುಬಿಡಿ ಮನಸಾರೆ - ಕಣ್ಣಲಿ ಹೊಸ ಬೆಳಕು ಮೂಡಲಿ... ಜನ ಹುಚ್ಚು ಅಂದರೆ ಅನ್ನಲಿ... ಹಂಚಬಹುದಾದ ನಗುವಾದರೆ ಒಂಚೂರು ಹಂಚಿಬಿಡಿ ಅವರೂ ಹುಚ್ಚರಾಗಲಿ... ನಗುವೆಂಬುದು ಎಲ್ಲರ ಆತ್ಮದ ದೀಪವಾಗಲಿ... :)  

                                                                  
ಹಾಳಾದ್ದು ಈ ಸಾವಿಗೆ ಸ್ವಲ್ಪವೂ ಕರುಣೆಯೆಂಬುದಿಲ್ಲ...
ಅಲ್ಲೇಲ್ಲೋ ಅಕಾಲದಲ್ಲೂ ಬಂದು ಕಂಗೆಡಿಸುವುದು - ಇನ್ನೆಲ್ಲೋ ಅದಕೆಂದೇ ಕಾಯುತಿರುವವರೆಡೆಗೆ ತಿರುಗಿಯೂ ನೋಡದೇ ಕಾಡುವುದು...
ಬದುಕೆಂಬ ಹಾಡಿನ ಸ್ವರ, ಲಯ, ತಾಳಗಳ ಹದ ತಪ್ಪಿಸಿ ವಿನೋದ ನೋಡುವ ಸಾವೆಂಬ ಸಾವಿನ ಎಲ್ಲ ನಡೆಗಳೂ ವಿಪರೀತಗಳೇ...


ಮಳೆಗಾಲದ ಹಬ್ಬಗಳ ಒಂದು ನೆನಪು -
ಮುಂಬೆಳಗಲ್ಲಿ ಹನಿವ ಸೋನೆಯ ಲಾಸ್ಯ...
ಅಂಗಳದ ನೀರಲ್ಲಿ ರಂಗೋಲಿ ಹುಡಿಯ ನಾಟ್ಯ...
ಒಳಮನೇಲಿ ಅಮ್ಮನ ಬಳೆಗಳ ತಾರಕ ಸಂಗೀತ...
ನನ್ನ ನಾಲಿಗೆಗೆ ಕಜ್ಜಾಯದ ಆಸೆಯ ತುರಿಕೆ...


ಸಾವಿನ ಮನೆಯಂಗಳದಲ್ಲೂ ಎಂದಿನಂತೆ ಮತ್ತು ಎಲ್ಲಿನಂತೆ ಸೂರ್ಯ ಅದೇ ನಗು ನಗುತ್ತಾನೆ...
ಕಣ್ಣೀರಲ್ಲೂ ಕಾಮನಬಿಲ್ಲನು ಬಿಂಬಿಸಬಲ್ಲನಾತ - ಬೆಳಕಿನಾಗರ...
ಎತ್ತರದಲ್ಲಿರುವವರಿಗೆ (ಪ್ರಕೃತಿಗೆ) ಸೂತಕಗಳ ಹಂಗಿಲ್ಲವೆನ್ನಿಸುತ್ತೆ...!!!


ಅಬ್ಬರಿಸಿ ನಗುತ್ತೇನೆ -
ಅಳಬಾರದೆಂಬ ಅಹಂಕಾರ ಮತ್ತು ಅಳು ಕೂಡ ಬಾರದಷ್ಟು ಅಸಹಾಯಕತೆ ಕಾಡುವಾಗಲೆಲ್ಲ...
ಹೃದಯದ ಬಿಕ್ಕಳಿಕೆಗಳ ಹಕ್ಕುಗಳನ್ನೆಲ್ಲ ಇರುಳಿಗೆ ಮಾರಿದ್ದೇನೆ...
ಹೃದಯ ಮತ್ತು ಕಣ್ಣುಗಳ ಅನುಸಂಧಾನದಲ್ಲಿ ಭಾವಗಳು ಬೆತ್ತಲಾಗಲು ಕೂಡ ಇರುಳೇ ಹಿತವಂತೆ...
ಹಗಲಿಗೆಂದೂ ಕಣ್ಣ ಹನಿ ಕಾಣಬಾರದು - ಹಗಲೇನಿದ್ದರೂ ನಗುವ ಮಾರುವ ಸಂತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)