Monday, June 23, 2014

ಗೊಂಚಲು - ನೂರಾ ಇಪ್ಪತ್ತೆರಡು.....

ಮನಸು ನೊಂದ ಮಾತ್ರಕ್ಕೆ ಬದುಕು ನೋಯದಿರಲಿ.....
(ಅರ್ಧ ಬರೆದ ಸಾಲುಗಳು - ಅರ್ಥವಿದೆಯೋ ಇಲ್ಲವೋ ಗೊತ್ತಿಲ್ಲ.....)

ಹಗಲ ದಾರಿಯ ತುಂಬಾ ಕನಸೆಂಬೋ ಬಿಡಿ ಬಿಡಿ ಮಲ್ಲಿಗೆ...
ಯಾವುದ ಮುಡಿಯಲಿ – ಇನ್ಯಾವುದ ತುಳಿಯಲಿ – ಉಸಿರ ತೇಕುತ್ತ ನಡೆವ ಗಡಿಬಿಡಿಯಲಿ...


ಮನಸು ಕನಸ ಕಾಣುತ್ತೆ... 
ಬರೀ ಕಾಣುತ್ತೆ... 
ನನಸಾಗಿಸಿಕೊಳ್ಳೋ ಹೊಣೆ ಮತ್ತು ನನಸಾಗಿಸುವಾಗಿನ ಕಷ್ಟ ಸುಖಗಳು ಪ್ರಜ್ಞೆಯದ್ದು... 
ಮತ್ತೆ ಮನಸು ಗೆದ್ದರೆ ಅರಳುತ್ತೆ – ಸೋತರೆ ಮರುಗುತ್ತೆ...
ಮನಸಿನದೇನಿದ್ದರೂ ಭಾವ ಸಂಚಲನ – ಪ್ರಜ್ಞೆಯದ್ದು ನಿರ್ಭಾವದ ಸಂಘಟನ...
ಪ್ರಜ್ಞೆಗೆ ಶಕ್ತಿ ತುಂಬು ಬದುಕು ನಿನ್ನ ಕಾಲಾಳು...


ಬದುಕ ಬಿರುಗಾಳಿಗೆ ಸಿಕ್ಕ ಹಲವಾರು ತಾಕತ್ತಿಲ್ಲದ ಕನಸುಗಳು ಸತ್ತಂತನಿಸೀತು ಆದರೆ ಕನಸು ಗಟ್ಟಿ ಇದ್ದದ್ದಾದರೆ ಸಾಯಲಾರದು ಬದಲಿಗೆ ತನ್ನ ಪಥ ಬದಲಿಸೀತು ಅಷ್ಟೇ...
ಪ್ರಜ್ಞೆ ತಾನು ಪ್ರಯತ್ನಪಟ್ಟರೆ ತಾಕತ್ತಿಲ್ಲದ ಕನಸುಗಳಿಗೂ ಅಷ್ಟಿಷ್ಟು ಜೀವ ತುಂಬಬಹುದು...
ಇಂದು ಈ ನೋವ ತೀವ್ರತೆಯಲ್ಲಿ ಅದೆಲ್ಲ ನಿನ್ನ ಕನಸುಗಳು ನಿರ್ಜೀವ ಅನ್ನಿಸಿಯಾವು – ಪ್ರಜ್ಞೆಯ ಬಲದಿಂದ ಬರುವ ಸಮಯಕ್ಕಾಗಿ ಪ್ರೀತಿಯಿಂದ ಕಾದಿಟ್ಟುಕೊಂಡರೆ ಖಂಡಿತಾ ಅವನೆಲ್ಲ ಮತ್ತೆ ಸಾಧಿಸಬಲ್ಲೆ...
ಹೌದು ಒಪ್ಪುತ್ತೇನೆ ಒಂದಿಷ್ಟು ಬದಲಾವಣೆ ಇದ್ದೇ ಇರುತ್ತೆ ಇಂದು ಸಿಗಬೇಕಿದ್ದ ಗೆಲುವು ನಾಳೆ ಸಿಕ್ಕಲ್ಲಿ...
ಆದರೆ ಮೂಲದಲ್ಲಿ ನಗುವಿದ್ದೇ ಇರುತ್ತೆ ಅನ್ನೋದು ನನ್ನ ನಂಬಿಕೆ ಮತ್ತು ಅನುಭವ... ಅಷ್ಟೇ...


ಪ್ರತಿ ನೋವಿಗೂ ಒಂದು ಪರ್ಯಾಯ ಇದ್ದೇ ಇದೆ ಎಂಬುದು ನನ್ನ ಬಲವಾದ ನಂಬಿಕೆ... 
ಬದುಕು ಮುಗಿದೇ ಹೋಯಿತು ಅಂದುಕೊಂಡಲ್ಲಿಂದಲೇ ಬದುಕು ಮತ್ತೆ ಹೊಸದಾಗಿ ನಗುತ್ತೆ ಕಣೋ... 
ಹೌದು ಹೇಳಬೇಕಾದದ್ದನ್ನು ಪ್ರೀತಿಯಿಂದ ಹೇಳಲು ಬಾರದ ಒರಟ ನಾನು – ಆದ್ರೆ ಬದುಕೂ ಒರಟು ಒರಟೇ ಅಲ್ವಾ... 
ಉಸಿರುಗಟ್ಟುವಂತೆ ಗಟ್ಟಿಯಾಗಿ ತಬ್ಬದೇ ಹೋದರೆ ಅದು ಅರಳೋದು ಕಷ್ಟ ಅಂತನ್ನಿಸುತ್ತೆ ನಂಗೆ... 
ಆತ್ಮದೊಳಗಿಂದ ಹೊಮ್ಮುವ ಭರವಸೆಯೊಂದೇ ಬದುಕ ಮುನ್ನಡೆಸುವ ಕೀಲಿಕೈ – ಕನಸುಗಳೆಡೆಗಿನ ಮತ್ತು ನಿನ್ನೆಡೆಗಿನ ನಿನ್ನ ಅಚಲ ಪ್ರೀತಿಯೊಂದೇ ಅದನ್ನ ಕಾಯಬಲ್ಲುದು... 
ಪ್ರೀತಿಸಿಕೋ ಇನ್ನಷ್ಟು ನಿನ್ನ ನೀನು... 
ತಪ್ಪಿಲ್ಲ ಅತ್ತುಬಿಡು ಒಮ್ಮೆ ಒಳಗೆ ಹೆಪ್ಪಾದ ನೋವೆಲ್ಲ ಕರಗಿ ಹೋಪಂತೆ ನಿನ್ನೆದುರು ನೀನು - ಹೊಸ ದೃಷ್ಟಿಕೋನವೊಂದು ಹುಟ್ಟಲಿ ಕಣ್ಣಹನಿಯೊಳಗಿಂದ... 
ನೋವ ಗೆದ್ದು ನಲಿವ ಹೊದ್ದು ಮುದ್ದಿಸು ಕನಸುಗಳನ್ನ ಮತ್ತೇನೂ ಕಾಣದಂತೆ...
ನೋವು ನಲಿವಿನ ಮಿಲನದುತ್ತುಂಗದಲ್ಲಿ ಜಿನುಗೋ ಕಣ್ಣೀರೇ ಅಲ್ಲವಾ ಬದುಕಿನೊಳಮನೆಗೆ ಶೃಂಗಾರ...


ಮನದ ಕಣ್ಣಲ್ಲಿ ಭಾವಗಳು ಮಿನುಗಲಿ – ಹಾಗಂತ ಭಾವಗಳ ಬಾಹುಗಳಲಿ ಬದುಕು ಬಳಲದಿರಲಿ...
ಭಾವಗಳು ಮನದ ಕಂದಮ್ಮಗಳು – ಪ್ರಜ್ಞೆ ಅವಕೆ ಲಾಲಿ ಹಾಡಿ ದಿಕ್ಕು ತೋರಲಿ...
ಮನಸು ಒಲವಿನೆದೆಹಾಲನುಣಿಸೋ ತಾಯಿ – ಪ್ರಜ್ಞೆ ಆತ್ಮಾಭಿಮಾನವ ಕಾಯ್ದು ಕೊಡೋ ತಂದೆ...
ಬದುಕಿದು ಮನಸು ಮತ್ತು ಪ್ರಜ್ಞೆಗಳ ಸಮರಸ ಪ್ರೇಮದ ಕೈಗೂಸಾಗಲಿ...
ನಿನ್ನೆಗೂ – ನಾಳೆಗೂ ಸ್ನೇಹವಾಗಿ ಈ ಕ್ಷಣ ಬದುಕಿನೊಡನೊಂದು ಆತ್ಮಾನುಸಂಧಾನ ಏರ್ಪಡಲಿ...


ನೋವೊಂದಕೆ ನೀ ಹೇಗೆ ಪ್ರತಿಕ್ರಿಯಿಸುತ್ತೀಯಾ ಎಂಬುದರ ಮೇಲಲ್ಲವಾ ಆ ನೋವಿನ ಆಯಸ್ಸಿನ ನಿರ್ಧಾರ...
ಯಾವುದಕ್ಕೆ ಎಷ್ಟು ನೋಯಬೇಕು ಮತ್ತು ಯಾರಿಗಾಗಿ ಎಷ್ಟು ಮರುಗಬೇಕು ಎಂಬುದು ನಮ್ಮ ಮನದ ಅಲ್ಲಲ್ಲ ಪ್ರಜ್ಞೆಯ ನಿರ್ಧಾರವಾಗಬೇಕಲ್ವಾ...
ನಗೆಯ ಪ್ರೀತಿಸು ನೋವೇ ನೋಯುವ ಹಾಗೆ - ಹೀನಾಯವಾಗಿ ಸೋತ ಭಾವದಲ್ಲಿ...
ಆತ್ಮ ಶಕ್ತಿಯನೆತ್ತಿ ನಿಲ್ಲಿಸು - ಯಾವ ಸೋಲೂ ಬದುಕ ಸೋಲಿಸದ ಹಾಗೆ -ಗೆಲುವೊಂದೇ ಬದುಕನಾಳುವ ಹಾಗೆ... 
ಬದುಕನಾವರಿಸಿ ಅಪ್ಪಿಕೋ - ಸಾವು ಕೂಡ ತನ್ನಿರುವಿಕೆಯ ಬಗೆಗೆ ತಾನೇ ನಾಚುವ ಹಾಗೆ...
ಬದುಕೊಂದು ಯುದ್ಧರಂಗವಾದರೆ ನಿನ್ನಾತ್ಮಬಲವೇ ನಿನ್ನಡಿಗೆ ಗೆಲುವ ತಂದಿಡುವ ದಂಡನಾಯಕ - ನಗೆಯು ಪಾರಿತೋಷಕ...
ನೋವ ಕಡೆದು - ನಲಿವ ಹಡೆದು - ಬದುಕನಾಳುವ ಕನಸು ಮೂಡಲಿ ಮನದ ಗರ್ಭದಲ್ಲಿ...
ಅಂತಿಮವಾಗಿ ನೀ ಮಾತ್ರ ಗೆಲ್ಲಬೇಕು - ನಿನ್ನ ಕನಸುಗಳ ಆಳುತ್ತ ಆಳುತ್ತ ನಿನ್ನ ಬದುಕನೂ ನೀ ಮಾತ್ರ ಆಳಬೇಕು - ಅದೂ ನಗೆಯ ಝೇಂಕಾರದೊಂದಿಗೆ...
ಪ್ರೀತಿಯಾಗಲಿ ಹೊಸದಾಗಿ - ಈ ನಂತರದ ಕ್ಷಣಗಳ ಮೇಲೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

2 comments:

  1. ನಗೆಯ ಪ್ರೀತಿಸು ನೋವೇ ನೋಯುವ ಹಾಗೆ ... :-)

    ReplyDelete
  2. ದಿನಂಪ್ರತಿ ಸುದ್ದಿ ವಾಹಿನಿಗಳಲ್ಲಿ ಆತ್ಮಹತ್ಯೆಯ ಸರಮಾಲೆಗಳನ್ನೇ ನೋಡಿದಾಗ, ನಿಮ್ಮ ಸಾಲುಗಳು ಅರ್ಥಗರ್ಭಿತವಾಗಿದೆ ಎನಿಸುತ್ತದೆ.
    'ಬದುಕು ಮುಗಿದೇ ಹೋಯಿತು ಅಂದುಕೊಂಡಲ್ಲಿಂದಲೇ ಬದುಕು ಮತ್ತೆ ಹೊಸದಾಗಿ ನಗುತ್ತೆ ಕಣೋ..'

    ReplyDelete