Wednesday, June 25, 2014

ಗೊಂಚಲು - ನೂರಾ ಇಪ್ಪತ್ಮೂರು.....

ಅರ್ಧ ಬರೆದ ಸಾಲುಗಳು - ಅರ್ಥವಿದೆಯೋ ಇಲ್ಲವೋ ಗೊತ್ತಿಲ್ಲ.....

ಪ್ರತೀ ಇರುಳು ಹೊರಳುವ ಹೊತ್ತಲ್ಲಿ ಮನದ ನೋವ ನೆನಪ ಬಾಧೆಗಳೆಲ್ಲ ಕಣ್ಣಿಂದ ಸ್ಖಲಿಸುತ್ತವೆ - ಮುಂಬೆಳಗಿಗೆ ಕಣ್ತೆರೆವ ಹೊತ್ತಿಗೆ ನಗೆಯ ಕೂಸಿನ ಗರ್ಭ ಕಟ್ಟೀತೆಂಬ ಭರವಸೆಯಲ್ಲಿ...
ತುಂಬ ಪ್ರೀತಿಸುವಲ್ಲಿ ತುಂಬ ನೋವಿರುತ್ತೆ ಕಣೋ...
ಹಾಗಂತಾರೆ ಪ್ರೀತಿಸಿದವರು...
ಇರಬಹುದು...
ಈ ಬದುಕನ್ನು ತುಂಬಾ ಅಂದ್ರೆ ತುಂಬಾನೇ ಪ್ರೀತಿಸಿದೆ...
ಬದುಕಿನೊಂದಿಗೆ ನೋವೂ ತುಂಬಾನೇ ಸಿಕ್ಕಿದ್ದೂ ನಿಜವೇ, ನಾಳೆಯೂ ಸಿಕ್ಕೀತು ಮತ್ತೆ – ಮಾವನ ಮನೆಯ ಬಳುವಳಿಯೇನೋ ಎಂಬಂತೆ...
ಆದರೆ ಬದುಕನ್ನು ಕರಡಿಯ ಕಾಮದ ಹಾಗೆ ಇನ್ನಿಲ್ಲದಂತೆ ಪ್ರೀತಿಸಿದ್ದರಿಂದ ಸಿಕ್ಕ ಸುಖಕ್ಕೆ ಹೋಲಿಸಿದರೆ ನೋವುಗಳದ್ಯಾವ ಲೆಕ್ಕ ಅಂತೇನೆ...
ತೆರೆಗಳಿಲ್ಲದೆ ಹೋದಲ್ಲಿ ಸಾಗರಕೇನು ಚಂದವಿದೆ..?
ನಿನ್ನೆ ಉಂಡ ನೋವುಗಳಿಗಾಗಿ - ನಾಳೆ ಬರುವ ಸಾವಿಗಾಗಿ ಇಂದಿನ ಈ ಕ್ಷಣದ ಉಸಿರ ಸ್ವಾದವ ಹೀರದಿರಲಾರೆ...


ನನ್ನ ಯೊಚನೆಗಳು ನನ್ನೊಳಗನ್ನು ಆವರಿಸಿ ನನ್ನೊಡನೆಯ ನನ್ನ ಬಂಧವನ್ನು ರೂಪಿಸಿಕೊಡುತ್ತವೆ – ಹೊಳೆಯಬಹುದು ಇಲ್ಲಾ ಕೊಳೆಯಬಹುದು...
ನನ್ನ ಅಭಿವ್ಯಕ್ತಿ ನನ್ನ ಹೊರಗನ್ನು ಆವರಿಸಿ ನನ್ನ ಸುತ್ತಲಿನ ಬಂಧಗಳ ಬೆಸೆದುಕೊಡುತ್ತದೆ – ಇಲ್ಲೂ ಹೊಳೆಯಬಹುದು ಇಲ್ಲಾ ಕೊಳೆಯಬಹುದು...
ಒಳಗೊಂದ ಯೋಚಿಸಿ, ಹೊರಗೊಂದ ತೋರಿದರೆ ತೋರಿದ್ದು ಮಾತ್ರ ಸತ್ಯವೆನಿಸುವ ಹೊತ್ತಿಗೆ ನನ್ನ ಸುತ್ತ ನನ್ನಂಥಹುದೇ ಬಂಧಗಳ ಸಂತೆಯೇ ನೆರೆದೀತು ನಿಜ...
ಆದರೆ ಬದುಕ ಕೊನೆಯ ಸ್ತರದಲ್ಲಿ ನನ್ನ ನಾ ನೋಡುವಾಗ ನನ್ನೆಡೆಗೆ ನಂಗೆ ಪ್ರಾಮಾಣಿಕ ಗೌರವ ಮೂಡಬೇಕೆಂದರೆ ನಾ ನನ್ನ ಒಳ ಹೊರಗುಗಳ ನಡುವೆ ಸಮನ್ವಯ ಸಾಧಿಸಬೇಕಲ್ವಾ...
ಒಳಗೆ ಹೊಳೆಯುವುದಾದಲ್ಲಿ ಹೊರಗೊಂದಿಷ್ಟು ಕೊಳೆವುದೂ ಸಮ್ಮತವಾಗಬೇಕಿತ್ತೇನೋ...
ಆದರೆ ಒಳಗಿರುವುದನ್ನೇ ಅಲ್ಲಿದ್ದ ಹಾಗೆಯೇ ಹೊರಗೂ ತೋರುವುದೆನ್ನುವುದು ವಿಶೇಷ ಧೈರ್ಯ ಮತ್ತು ಮನೋಸಾಮರ್ಥ್ಯ ಬೇಡುತ್ತದೆ...
ಎಂದಿಗಾದರೂ ನನ್ನಲ್ಲಿ ನಾ ಸಾಕ್ಷಿಯಾದೇನಾ ಆ ಸಮನ್ವಯದ ಸಾಧನೆಗೆ – ಅದೇ ಹಾದಿಯಲ್ಲಿದ್ದರೂ ಕೊನೆಮುಟ್ಟುವ ಧೈರ್ಯ..?
ಉಹುಂ ಇದ್ದಂತಿಲ್ಲ...


ಆ ದಾರಿಯ ತೀರದಲಿ ನೊಂದ ಜೀವವೊಂದು ಇನ್ನೊಂದು ನೊಂದ ಜೀವವ ಸಂಧಿಸಿತು – ಅಷ್ಟಿಷ್ಟು ಮಾತುಕತೆಗೆ ನಿಟ್ಟುಸಿರ ನಗೆಯೊಂದು ಹುಟ್ಟಿತು – ಪುಟ್ಟ ಸಮಾಧಾನ – ನೋವ ಬಣ್ಣ ಬೇರೆ ಬೇರೆ – ಹಂಚಿಕೊಂಡು ಹಗುರಾದಾಗ ಮೂಡಿದ ಸಮಾಧಾನದ ಬಣ್ಣ ಬಿಳಿಯೇ ಇರಬೇಕು...
ಬದುಕ ಸಾಗರದ ನಟ್ಟನಡುವಲೆಲ್ಲೋ ಕನಸ ದೋಣಿಯ ಕಳಕೊಂಡ ಒಬ್ಬ ಇನ್ನೊಬ್ಬನ ಸಂಧಿಸಿ – ಓಹ್ ನೀನೊಬ್ಬನೇ ಅಲ್ಲ ಕನಸಿಲ್ಲದೆ ಈಜುತಿರುವವನು ಅಂತಂದು ಅಲ್ಲಿ ತೇಲುತಿರುವ ಇನ್ನೊಬ್ಬನ ಕೈಹಿಡಿದು ನಾನೂ ಇದ್ದೇನೆ ಜತೆ ಈಜುವ ಬಾ ತೀರದೆಡೆಗೆ ಅಂದು ಆ ಅವನಲ್ಲಿ ಸಣ್ಣ ಭರವಸೆಯನೊಂದ ಮೂಡಿಸಿದರೆ ಇವ ನೀಡಿದ ಆಸರೆಯ ಅವ ಒಪ್ಪದಿರಲಾದೀತಾ...
ಒಪ್ಪಿದರೆ ಅದು ತಪ್ಪು ಹೇಗಾದೀತು...
ಕ್ಷಮಿಸಿ -
ನನ್ನಂತ ಕುಂಟರು ಕುರುಡರೇ ತುಂಬಿರುವ ಈ ಬೀದಿಯಲಿ ದಾರಿ ಸವೆಸಬೇಕಾದಾಗ ನಿನ್ನ ನೋವು ನಿಂಗಿರಲಿ ನನ್ನದು ನಂಗೆ ಮಾತ್ರವಿರಲಿ ನನ್ನ ನೋಡಿ ನೀನು ನಿನ್ನ ನೋಡಿ ನಾನು ಸಮಾಧಾನ ಹೊಂದಿ ಜತೆ ನಡೆಯೋದು ತಪ್ಪು ಅಂತ ಹೇಗೆನ್ನಲಿ...
ನೋವ ನೋಡಿದ ನೋಟ, ಎದುರಿಸಿದ ರೀತಿ, ಗೆಲ್ಲಲು ಕಂಡುಕೊಂಡ ಮಾರ್ಗ ಎಲ್ಲ ಬೇರೆ ಬೇರೆಯೇ ಇದ್ದೀತು ಆದರೆ ಇನ್ನೊಂದು ಅಂಥದೇ ನೋವ ಕಂಡಾಗ ಅರೇ ನೋವಿದು ಕೇವಲ ನನ್ನೊಬ್ಬನದೇ ಅಲ್ಲ ನನ್ನಂಥದ್ದೇ ನೋವಿದ್ದೂ ನಗುತ ಜೀವಿಸುತಿರುವವರಿದ್ದಾರೆ ಅಂದಮೇಲೆ ನಾನು ಕೂಡ ನಗುತಲೇ ಜೀವಿಸಬಹುದು ಅಂತನ್ನಿಸಿ ಒಂದಿಷ್ಟು ನನ್ನ ಅಸಹಾಯ ಭಾವವ ಕಳಕೊಂಡು ಬದುಕಿನೆಡೆಗೆ ಸ್ಫೂರ್ತಗೊಂಡುದಾದರೆ ಅದನ್ನು ನೋವ ನೋಡಿ ನಗುವ ಪಡೆವ ನನ್ನ ಕೆಟ್ಟ ಮನೋಭಾವ ಅಂತ ಹೇಳಲಾರದಾಗುತ್ತೇನೆ...  

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment