Monday, April 24, 2017

ಗೊಂಚಲು - ಎರಡ್ನೂರಾ ಹದ್ನೇಳು.....

ಮನವಿದು ಭಾವಕಾಶಿ.....

ಹಾದಿ ಕವಲಾದಂತೆ ಆದ್ಯತೆಗಳು ಬದಲಾಗುವಾಗ, ಆದ್ಯತೆಗಳು ಹೊಸದಾದಂತೆ ನಡಿಗೆಯ ಕಸುವನೆಲ್ಲ ಹೊಸತೇ ಹೀರುವಾಗ, ಹಳೆ ಬೀದಿಯ ಒಡನಾಟದ ಹರಿವು ತನ್ನ ವೇಗ ಆವೇಗಗಳ ಕಳಕೊಳ್ಳುವ ಅಥವಾ ನಿಂತೇ ಹೋಗುವ ಸಾಧ್ಯತೆಗಳನ್ನು ಸಹಜ ಅಂತಲೇ ಅಂದುಕೊಳ್ಳಬೇಕೇನೊ...

ಇಷ್ಟಾಗಿಯೂ ಪಾದಕ್ಕೆ ಮೆತ್ತಿದ ಆ ಹಾದಿಯ ಧೂಳ ಕಣದ, ಆ ಆಪ್ತತೆಯ ಆಳದ ಮೂಲ ಭಾವ ಸೆಲೆಯ ಸೆಳೆತವೂ ಬತ್ತಿ ಹೋಗದೇ ಇದ್ದರೆ ಅಥವಾ ಬತ್ತಿ ಹೋಗದಂತೆ ನಾ ಕಾಯ್ದುಕೊಂಡರೆ ಅದೇ ಪುಣ್ಯ...

ಉಹುಂ - ಕಳೆದು ಹೋಗುವ ಚೈತನ್ಯ ಇಲ್ಲ ನನ್ನಲ್ಲಿ - ಎಷ್ಟೇ ರೆಂಬೆ ಕೊಂಬೆ ಬೆಳೆದರೂ ಬೇರು ನಿಮ್ಮಗಳ ಮಡಿಲಲೇ - ಎದುರ್ಗೋಳ್ಳುವಲೇ ಎದೆ ಭಾರ ಜಾರುವಂತ, ವಿದಾಯಕೊಂದು ಕಣ್ಣ ಹನಿ ಉಳಿಸುವಂತ ನೇಹದ ಸನ್ನಿಧಿಯ ಒಡನಾಟದಲಿ ಮೌನದಲೂ ಯಾವುದೋ ಹಿತವಿದೆ...💕

ಇಷ್ಟಕ್ಕೂ ಬದುಕೆಂದರೆ ನೆನಪುಗಳ ಸೃಷ್ಟಿಸಿಕೊಳ್ಳುತ್ತಾ ಸಾಗುವ ಕ್ರಿಯೆ ಪ್ರಕ್ರಿಯೆ ಅಷ್ಟೇ ಅನ್ನಿಸುತ್ತೆ - ನಾನು ನನಗಾಗಿ ಸೃಷ್ಟಿಸಿಕೊಂಡ ನೆನಹುಗಳು ನನ್ನಳಿವಿನಾಚೆ ತುಸುವಾದರೂ ನಿಮ್ಮಗಳ ಕರುಳ ಕಳಮಳವಾಗಿ ಕಾಡಿದರೆ ಅದು ನನ್ನ ಪಾಲಿನ ಸಾಧನೆಯೇ ಸರಿ...
#ಜೋಗಿಯ_ಬದುಕ_ಜೋಳಿಗೆಯಲ್ಲಿ_ಭಾವ_ಬಂಧ_ಸಂಬಂಧ_ಆನಂದ...
---_---

ಬದುಕ ಸೋಕಿದ ಸ್ನೇಹ ಗಂಧವ ಎದೆಯ ಸಂಚಿಯ ನಿಧಿಯನಾಗಿಸಿ ಕರಗದಂದದಿ ಕಾಯ್ದು ಜನ್ಮಾಂತರ ಹಾಯುವಾಸೆ... 
ಅನುಕ್ಷಣದ ಭೇಟಿಗೆ ವರ್ಷಗಳ ಲೆಕ್ಕ ತಪ್ಪಲಿ...
---_---

ಮನವಿದು ಭಾವಕಾಶಿ...
ಕಾರ್ಯ ಕಾರಣ ಮೀರಿ ಮುಟಿಗೆಯಷ್ಟು ಹೆಗಲು ತಬ್ಬೋ ಅಕ್ಕರೆ, ಬೊಗಸೆಯಷ್ಟು ನೆತ್ತಿ ನೇವರಿಸೋ ಕಾಳಜಿ, ಇಷ್ಟನ್ನ ಜೊತೆ ನಡೆವ ಜೀವಗಳಿಗೆ ಸದಾ ಆಸ್ಥೆಯಿಂದ ಹಂಚಬಲ್ಲವನಾದರೆ...............
ನನ್ನೊಳಗೂ ಒಲವು ಅವಿನಾಶಿ...💓

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment