Thursday, June 14, 2012

ಗೊಂಚಲು - ಮೂವತ್ತೆರಡು.....

ದೇವರ ನೋಡುವ ಕಣ್ಣು.....

ಸಕಲ ಜೀವ ಜಂತುಗಳಲ್ಲಿ ಮನುಷ್ಯ ಪ್ರಾಣಿಯೊಂದೇ ಇರಬೇಕು...
ಮನದಲ್ಲಿರಬೇಕಾದ ದೇವರನ್ನು ಒಯ್ದು ಗುಡಿಯ ಗೋಡೆಗಳ ಮಧ್ಯೆ ಇಟ್ಟು...
ದಿನಕ್ಕೆರಡು ಬಾರಿ ಊಟವಿಕ್ಕಿ ಬಿದ್ದಿರು ಸುಮ್ಮನೇ ಅಂತಂದು ಬಾಗಿಲು ಹಾಕಿ ತನ್ನ ಕರ್ಮ ಕೂಪಕ್ಕೆ ಧೈರ್ಯದಿಂದ ಸಾಗಬಲ್ಲವನು...
ಗುಡಿಯ ಹುಂಡಿಗೆ ನಾಕು ಕಾಸು ಹಾಕಿ ಕೆನ್ನೆ ತಟ್ಟಿಕೊಳ್ಳುತ್ತಾ ಪಾಪ ಪರಿಹಾರವಾಯಿತೆಂದುಕೊಂಡು ಹೊಸ ಪಾಪಕ್ಕೆ ಅಣಿಯಾಗಬಲ್ಲವನು...
ಎಂಥ ದುರಂತ...

ದೇವರಿದ್ದಾನಾ..? 
ಗೊತ್ತಿಲ್ಲ.
ಆದ್ರೆ ಈ ದೇವರ ಕುರಿತು ಎಷ್ಟೊಂದು ನಂಬಿಕೆಗಳು, ಮೂಢನಂಬಿಕೆಗಳು ತುಂಬಿ ತುಳುಕುತ್ತಿವೆ. ಆತನನ್ನು ಸಂಪ್ರೀತಗೊಳಿಸಲೋಸುಗ ಏನೆಲ್ಲ ಪಾಡು ಪಡ್ತಾರೆ ಈ ಮಂದಿ. 
ಎಲ್ಲೋ ಗುಡಿಯಲ್ಲಿನ ಕಲ್ಲ ಶಿಲೆಯಲ್ಲಿ, ಎಂತೆಂಥದೋ ಅರ್ಥ ಕಾಣದ ಆಚರಣೆಗಳಲ್ಲಿ, ಉರುಹೊಡೆದ ಮಂತ್ರಗಳಲ್ಲಿ, ಎರಗುವ ಸಾಷ್ಟಾಂಗಗಳಲ್ಲಿ, ಪ್ರದರ್ಶನದ ಭಕ್ತಿಯಲ್ಲಿ, ಸಂಖ್ಯೆಗಳ ಜಾಲಕ್ಕೆ ಸಿಕ್ಕ ಭಕ್ತಿಯಿರದ ಪ್ರದಕ್ಷಿಣೆಗಳಲ್ಲಿ ಅಲ್ಲೆಲ್ಲ ಭಗವಂತನ ಹುಡುಕುವ ಉಹುಂ ಹೊಂದಬಯಸುವ ಭ್ರಮೆ ತುಂಬಿದ ವ್ಯರ್ಥಾಲಾಪ. 
ಇಷ್ಟರ ನಡುವೆ ಯಾವ ದೇವರು ಶ್ರೇಷ್ಠ ಎನ್ನುವ ದ್ವಂದ್ವ ಬೇರೆ.
ಕಾಣದಿರುವ ದೇವನಿಗೂ ಜಾತಿ ಮತಗಳ ಸೋಂಕು.

ಇಷ್ಟಕ್ಕೂ ನಾನು ದೇವರ ಅಸ್ತಿತ್ವವನ್ನು ವಿಮರ್ಷಿಸ್ತಿರೋದು ನಾಸ್ತಿಕನೆನಿಸಿಕೊಳ್ಳಬೇಕೆಂಬ ಹಮ್ಮಿನಿಂದಲ್ಲ. 
ಒಪ್ಪುತ್ತೇನೆ ದೇವರೆಡೆಗಿನ ನಂಬಿಕೆಯಲ್ಲೂ ಒಂದಿಷ್ಟು ಧನಾತ್ಮಕ ಅಂಶಗಳಿವೆ.
ಆದರೆ ದೇವರೆಡೆಗಿನ ಭಕ್ತಿ ಹಾಗೂ ಆಚರಣೆಗಳ ಹೆಸರಲ್ಲಿ ನಡೆಯುವ ಆಡಂಬರ, ಅನಾಚಾರಗಳು ಮತ್ತು ಕಳೆಯಂತೆ ಬೆಳೆಯುವ ಮೌಢ್ಯದೆಡೆಗೆ ನನಗೆ ತೀವ್ರ ಅಸಮಾಧಾನವಿದೆ.
ದಾನ ಧರ್ಮದ ಹೆಸರಲ್ಲಿ ಭಗವಂತನಿಗೇ ಕೊಡಮಾಡುವ ಲಂಚ, ಒಳಿತನ್ನು ಮಾತ್ರ ಮಾಡಬೇಕಾದವನ ಹೆಸರು ಬಳಸಿಕೊಂಡು ನಡೆಸುವ ಕೆಡುಕುಗಳನೆಲ್ಲ ಕಂಡಾಗ ಮನ ಹೇಸುತ್ತದೆ.
100/-ರೂ ಕೊಡಬಲ್ಲವನಿಗೆ ದೇವರ ನೇರ ಹಾಗೂ ಶೀಘ್ರ ದರ್ಶನ ಮತ್ತು ಕಿಸೆಯಲ್ಲಿ 20/-ರೂ ಮಾತ್ರ ಇರುವವನಿಗೆ ಸರತಿಯಲ್ಲಿ ನಿಂತದ್ದೇ ಭಾಗ್ಯ ಅಂತನ್ನುವ ದೊಡ್ಡ ದೊಡ್ಡ ದೇಗುಲಗಳಲ್ಲಿ ಖಂಡಿತಾ ದೇವನಿರಲು ಸಾಧ್ಯವಿಲ್ಲ.

ದೇವರೆಂದರೆ ನನ್ನ ಕಣ್ಣಲ್ಲಿ ಒಂದು ಅದೃಶ್ಯ ಶಕ್ತಿಯ (ವ್ಯಕ್ತಿ ಎಂದರೂ ಆದೀತು) ಕಲ್ಪನೆ. 
ನಾವು ಮಾಡಬಯಸುವ ಆದರೆ ಮಾಡಲಾಗದ ಕಾರ್ಯಗಳನ್ನು ಮಾಡಬಲ್ಲ,  ನಮ್ಮ ಅಸಹಾಯಕತೆಯನ್ನು ಆರೋಪಿಸಬಹುದಾದ, ನಾವೇ ನಮಗಾಗಿ ಸೃಷ್ಟಿಸಿಕೊಂಡ ಒಂದು ಅಸೀಮ ಸಾಮರ್ಥ್ಯದ ಕಲ್ಪಿತ ಶಕ್ತಿ. 
ನಮ್ಮ ಮನಸಿನ ಎಲ್ಲ ತುಮುಲಗಳನ್ನು, ಕಂಗಾಲುಗಳನ್ನು, ಕೊನೆಗೆ ವಿಕಾರಗಳನ್ನೂ ಕೂಡ ನಿರ್ಭಯವಾಗಿ, ನಿಸ್ಸಂಕೋಚವಾಗಿ ಪೂರಾ ಪೂರಾ ಹೇಳಿಕೊಂಡು ಮನಸನ್ನು ನಿರಾಳಗೊಳಿಸಿಕೊಳ್ಳಬಲ್ಲ ಸುಲಭ (?) ಸಾಧನವಷ್ಟೇ. 

ಆತ ನಮಗೆ ಕಾಣಲಾರ ಮತ್ತು ನಾವು ಹೇಳಿದ್ದನ್ನು ಇನ್ನೊಬ್ಬರ ಹತ್ತಿರ ಹೇಳಲಾರ. ಹಾಗಾಗಿ ಅವನೆಡೆಗೆ ನಿರ್ಭಯತೆ.

ಆತ ನಮ್ಮ ಮನದಾಳದ ನೋವು, ವೇದನೆ, ವಿಕಾರ, ಒಳಿತು, ಕೊಳಕುಗಳೆಲ್ಲವನ್ನು ಕಂಡೂ, ಕೇಳಿಯೂ ನೀನಿಷ್ಟೇ ಅಂತ ಲೇವಡಿ ಮಾಡಿ ನಗಲಾರ ಮತ್ತು ಬಿಟ್ಟಿ ಸಲಹೆಗಳನ್ನು ನೀಡಿ ನಮ್ಮ ತಲೆ ತಿನ್ನಲಾರ. 
ಆ ಕಾರಣ ಅವನೆಂದರೆ ನಿಸ್ಸಂಕೋಚ.

ಆತ ಅಗೋಚರಿ. 
ಅಂತಲೇ ಅವನಿಗೆ ಸಾಷ್ಟಾಂಗವೆರಗಿದರೂ ನಮ್ಮಲ್ಲಿ ಕೀಳರಿಮೆ ಮೂಡಲಾರದು - ನಮ್ಮ ಅಹಂಕಾರ ಕೆಣಕಲಾರದು. 
ಹಾಗಾಗಿ ದೇವರು ಅಷ್ಟೆಲ್ಲ ಆಕರ್ಷಕ...
ಅವನೆಂದರೆ ಆ ಪರಿ ಪ್ರೀತಿ.

ಭಗವಂತ ಎಲ್ಲೋ ಇರುವನೆಂದು ಸುಳ್ಳೇ ಕಲ್ಪಿಸಿಕೊಂಡು ನಂಬುತ್ತೇವೆ. 
ಆತ ಇಲ್ಲೇ ನಮ್ಮಲ್ಲೇ ಇದ್ದಾನೆಂದುಕೊಂಡರೆ ಅಲ್ಲಿಗೆ ಮುಗೀತು - ಮರ್ಕಟ ಮನಸಿನ ಸ್ವೇಚ್ಛೆಗೆ ಲಗಾಮು ಬಿದ್ದಂತೆಯೇ ಸರಿ. 
ಅದಕ್ಕೇ ಅವನು ಅಲ್ಲೆಲ್ಲೋ ಗುಡಿಯ ಬಂಧನದಲ್ಲಿದ್ದರೇನೇ ನಮಗೆ ಖುಷಿ.

ದೇವರು -
ನಮಗಿರುವ ಮಿತಿಗಳನ್ನು ಮೀರಬಲ್ಲ ನಾವೇ ರೂಪಿಸಿಕೊಂಡ ನಮ್ಮದೇ ಕಲ್ಪನೆಯ ಕೂಸು. 
ಕಲ್ಪನೆ ಯಾವತ್ತಿಗೂ ವಾಸ್ತವಕ್ಕಿಂತ ಸುಂದರ. 
ವಾಸ್ತವವನ್ನು ಎದುರಿಸಲಾಗದ ಹೇಡಿಗಳಾದ ನಾವು, ತಪ್ಪೆಂದು ಗೊತ್ತಿದ್ದೂ ಮಾಡದೇ ಇರಲಾರದ ನಾವು, ಬಲಹೀನತೆಗಳನ್ನು ಮೀರಲಾರದೇ ಹೋಗುವ ನಾವು, ನಮ್ಮೊಳಗೇ ಎದ್ದು ನಿಲ್ಲುವ ಅಪರಾಧೀ ಭಾವದಿಂದ ಹೊರ ಬರುವ ಸುಳ್ಳೇ ಸಮಾಧಾನಕ್ಕಾಗಿ ದೇವರನ್ನು ಗಾಢವಾಗಿ ನಂಬಬಯಸುತ್ತೇವೆ. 
ಆ ಮೂಲಕ ಹೆಚ್ಚಾಗಿ ನಮ್ಮಂಥವರೇ ತುಂಬಿರುವ ಸಮಾಜದೆದುರು ನಾವು ಅವರಿಗಿಂತ ಸಾತ್ವಿಕರಂತೆ ತೋರಿಸಿಕೊಳ್ಳಲು ಹೆಣಗುತ್ತೇವೆ. 
ದೈವ ಭಕ್ತಿಯ ಹೆಸರಲ್ಲಿ ಮುಖವಾಡಗಳನ್ನು ಧರಿಸಿಕೊಂಡು ಬದುಕುತ್ತೇವೆ. 
ತಪ್ಪೆಂದು ಗೊತ್ತಾಗಿದ್ದನ್ನು ಮಾಡದೇ ಇರುವ ಬದಲು ತಪ್ಪು ಮಾಡಿ, ಮಾಡಿದ ತಪ್ಪಿಂದ ಹುಟ್ಟಿದ ಅಪರಾಧೀ ಭಾವವ ಮರೆಯಲು ದೇವರ ಮೊರೆ ಹೋಗ್ತೇವೆ.
ಹರಕೆಗಳ ಮೊರೆ ಹೋಗ್ತೇವೆ. 
ತಪ್ಪಿನ ಒಂದಂಶವನ್ನು ಹರಕೆ ಸಲ್ಲಿಸಿ ಪ್ರಾಯಶ್ಚಿತ್ತವಾಯ್ತೆಂದು ಹೊಸ ತಪ್ಪು ಮಾಡಲು ಆಸೆಯಿಂದ ಹೊರಡ್ತೇವೆ. 
ಕದ್ದ  ಚಿನ್ನದಲ್ಲಿ ಗುಡಿಗೆ ಹೊನ್ನ ಕಳಶವಿಟ್ಟು ದಾನಶೂರನೆನಿಸಿಕೊಂಡು ಬೀಗಿದರೆ ಕದ್ದ ಪಾಪ ಪರಿಹಾರವಾಗುತ್ತಾ..???

ಪಾಪ ಪ್ರಾಯಶ್ಚಿತ್ತಾಂಗವಾಗಿ ಹರಕೆ ಸಲ್ಲಿಸುವ ದಾನ ಭೀರುಗಳ ಗುಂಪು ಒಂದಾದರೆ - 
ಪಾಪದ ಅರ್ಥ ಗೊತ್ತಿಲ್ಲದಿದ್ದರೂ ಜನ್ಮಾಂತರಗಳ ಪಾಪ ಪುಣ್ಯಗಳ ಭ್ರಮೆಯ ಭಯದಲ್ಲಿ ಮೌಢ್ಯದಿಂದ ಹರಕೆ ಹೊರುವವರದ್ದು ಇನ್ನೊಂದು ದೊಡ್ಡ ಗುಂಪು.
ಇವರಿಬ್ಬರನ್ನೂ ತಮ್ಮ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿರುವ ಅರ್ಥವಾಗಲಾರದ ಶಬ್ದಾಡಂಬರಗಳ ವಾಗ್ಝರಿಯಿಂದ ಸೆಳೆದುಕೊಂಡು ಹೊಟ್ಟೆ ತುಂಬಿಕೊಳ್ಳುವವರದ್ದೇ ಮತ್ತೊಂದು ಸಮೂಹ.
ಇವರೆಲ್ಲರ ದೊಂಬರಾಟಗಳ ನಡುವೆ ದೇವರು ಇದ್ದುದೇ ಆದರೂ ಕಂಗಾಲಾಗಿರುತ್ತಾನೆ - ಗುಡಿಯಿಂದೆದ್ದು ಓಡಿ ತಲೆಮರೆಸಿಕೊಂಡಿರುತ್ತಾನೆ...:):):)

ದೇವರೇ ಇಲ್ಲ ಎನ್ನುವ ನಾಸ್ತಿಕನಿಗೆ ಮಾಡಿದ ತಪ್ಪಿಗೆ ಸುಲಭ ಪ್ರಾಯಶ್ಚಿತ್ತಗಳಿಲ್ಲ. 
ಹರಕೆಯ ಸವಲತ್ತುಗಳಿಲ್ಲ. 
ತಪ್ಪೇ ಮಾಡದಿರಲಂತೂ ಸಾಧ್ಯವಿಲ್ಲ. 
ಹಾಗೆಂದೇ ಜಗದಲ್ಲಿ ನಾಸ್ತಿಕರ ಸಂಖ್ಯೆ ವಿರಳ. 
ತತ್ಪರಿಣಾಮ ಎಲ್ಲ ದೇಗುಲಗಳ ಸುತ್ತ ಜನ ಜಂಗುಳಿ. 
ಒಮ್ಮೊಮ್ಮೆ ಕಾಲ್ತುಳಿತಕ್ಕೆ ಸಿಕ್ಕಿ ಕೆಲವರಿಗೆ ಅಲ್ಲೇ ಮುಕ್ತಿ ಸಿಗುವುದೂ ಉಂಟು. 
ಕೂತಲ್ಲೇ ತಿಮ್ಮಪ್ಪ ಕೋಟ್ಯಾಧಿಪತಿ...
ಮಲಗಿಯೂ ಶ್ರೀಮಂತ ಪಧ್ಮನಾಭ...

ನಮಗೆ ಇನ್ನೊಬ್ಬರೆದುರು ಅಳಲಿಕ್ಕೆ ಅಹಂ ಅಡ್ಡಿ ಬರುತ್ತೆ. 
ಆದರೆ ಅಳಲು ಒಂದು  ಹೆಗಲು ಬೇಕು. 
ಆ ಹೆಗಲು ದೇವರು. 
ಅದಕ್ಕೇ ದೇವನೆದುರು ನಿಂತು ಕೈಮುಗಿದು ಮನದಲ್ಲೇ ಅತ್ತು ಮನಸು ಹಗುರಾಯ್ತೆಂದುಕೊಂಡು ನಗಲು ಪ್ರಯತ್ನಿಸುತ್ತಾ ಗುಡಿಯಿಂದ ಹೊರ ಬೀಳ್ತೇವೆ. 

ಪ್ರಸಿದ್ಧನಲ್ಲದ ದೇವನ ಊರಾಚೆಯ ಗುಡಿಯಾದರೆ ಅಲ್ಲೊಂದು ಪ್ರಶಾಂತತೆ ಇರುತ್ತೆ. 
ಘಂಟೆಯ ನಿನಾದ, ಕಲ್ಯಾಣಿಯ ತಂಪು, ಕಲ್ಯಾಣಿಯೊಳಗಿನ ನೈದಿಲೆಯ ಮೇಲಿಂದ ಸುಳಿದಿರುಗಿ ಬರುವ ತಂಗಾಳಿಯಲ್ಲಿನ ನೈದಿಲೆಯ ಕಂಪು. 
ಎಲ್ಲ ಸೇರಿ ಒಂದು ಅನಿರ್ವಚನೀಯ ಆನಂದ ಭಾವ ಸಮ್ಮಿಲನ. 
ಅದಕ್ಕೆ ಪೂರಕವಾಗಿ ಅರ್ಚಕರ ಮಂತ್ರ ಘೋಷ ಜೋಗುಳದಂತೆ ಕೇಳಿಸಿ ಏನೋ ಮಂಪರು ಮಂಪರು.
ಯಾವುದೋ ಭಾವ ಧ್ಯಾನ.
ಜೊತೆಗೆ ದೇವಸ್ಥಾನದ ಮುಂದಿನ ಧ್ವಜಗಂಭಕ್ಕೋ, ಅರಳೀಕಟ್ಟೆಗೋ ಪ್ರದಕ್ಷಿಣೆ ಹಾಕುವ ಹರೆಯದ ಚೆಲುವಿನ ಗೆಜ್ಜೆನಾದವಿದ್ದರೆ ದೇವಸ್ಥಾನ ಒಂದು ಸುಂದರ ತಾಣವೇ ಸರಿ...
ಅಂತಲ್ಲಿ ದೇವರಿಲ್ಲದಿದ್ದರೂ ಒಂದು ಸ್ವಚ್ಛ ಮೌನವಿದೆ...
ಪ್ರಕೃತಿಯ ನಿನಾದವಿದೆ...
ಆದರೆ ಪ್ರಸಿದ್ಧ ದೇವಾಲಯಗಳಲ್ಲೆಲ್ಲ ಬರೀ ಗದ್ದಲ ಮತ್ತು ದಕ್ಷಿಣೆಯದ್ದೇ ಕಾರುಬಾರು.

ಎಲ್ಲ ಕಡೆ ಸೋತು ಸುಣ್ಣವಾಗಿದ್ದ ದುರ್ಬಲ ಮನಸಿಗೆ ಯಾವುದೋ ಒಂದು ದೇವರ ಕಾರ್ಯ (ಜಪ, ತಪ, ಹೋಮ, ಹವನ ಇತ್ಯಾದಿ) ಮಾಡುವುದರಿಂದ ನಾಳೆಯಿಂದ ಒಳ್ಳೆಯದಾಗುತ್ತೆ ಬಿಡು, ಗೆಲುವು ದಕ್ಕತ್ತೆ ಬಿಡು ಎಂಬಂತಹ ತಾತ್ಕಾಲಿಕ ಭರವಸೆ ಸಿಕ್ಕಿ ಮನಸು ಉತ್ಸಾಹಿತವಾಗಿ, ಒಂದಿಷ್ಟು ಆತ್ಮವಿಶ್ವಾಸ ಚಿಗುರಿಬಿಡಬಹುದು. 
ಹೆಚ್ಚಿನ ಸಲ ಈ ಆತ್ಮವಿಶ್ವಾಸವೇ ಚೈತನ್ಯದಾಯಿಯಾಗಿ ಗೆಲುವನ್ನು ದಕ್ಕಿಸಿಕೊಟ್ಟುಬಿಡುತ್ತದೆ. 
ಮನಸು ಸೋತಾಗ ಮನಸಿನೆಲ್ಲ ಭಾರವನ್ನೂ ಯಾರೋ ದೇವರಿಗೊಪ್ಪಿಸಿ ಆತ ಕಾಯ್ತಾನೆ ಬಿಡು ಎಂಬ ಸಮಾಧಾನವನ್ನು  ನಮ್ಮ ಮನಸಿಗೆ ನಾವೇ ನೀಡಿಕೊಂಡು ನಿಸೂರಾಗುತ್ತೇವೆ. 
ಅಷ್ಟರ ಮಟ್ಟಿಗೆ ಸಮಸ್ಯೆ ಬಗೆಹರಿದಂತೆಯೇ. 
ಏಕೆಂದರೆ ಒತ್ತಡ ಮುಕ್ತವಾದ ಮನಸಿಗೆ ಸಮಸ್ಯೆಯಿಂದ ಹೊರಬರಲು ಸಾವಿರ ದಾರಿಗಳು ಗೋಚರಿಸುತ್ತವೆ. 
ಅಷ್ಟರ ಮಟ್ಟಿಗೆ ದೇವರ ಅಸ್ತಿತ್ವದ ಕಲ್ಪನೆ ಸಾರ್ಥಕ.

ಇನ್ನು ದೇವರ ಪೂಜೆ, ಆಚರಣೆಗಳ ಹೆಸರಲ್ಲಿ ಬಂಧು ಬಾಂಧವರು, ಆತ್ಮೀಯರು, ಇನ್ನೇನು ಸಂಬಂಧದ ಕೊಂಡಿ ಕಳಚಿ ಹೋಗೇ ಬಿಡಬಹುದು ಎಂಬಂತಾದ ನೆಂಟರು ಎಲ್ಲ ಒಂದೆಡೆ ಸೇರುತ್ತೇವೆ. 
ಕಷ್ಟ ಸುಖ ಹಂಚಿಕೊಂಡು ಹಗುರಾಗ್ತೇವೆ. 
ನಕ್ಕು ಬಾಂಧವ್ಯ ವೃದ್ಧಿಸಿಕೊಳ್ತೇವೆ. 
ಮರೆತ ಮುಖವನ್ನು ನೆನಪಿಸಿಕೊಳ್ತೇವೆ. 
ಇವೆಲ್ಲ ಚೆಂದ ಚೆಂದ.  

ಆಚರಣೆಗಳ ಗೆಲುವಿದ್ದರೆ ಅದು ಬಾಂಧವ್ಯ ಬೆಸೆವ ನಗುವಿನಲ್ಲಿ ಮಾತ್ರ.
ಇವಿಷ್ಟೇ ದೇವರ ಹಾಗೂ ಪೂಜೆ ಪುನಸ್ಕಾರಗಳ ಕಲ್ಪನೆಯೆಡೆಗಿನ ಸಾರ್ಥಕತೆ ಮತ್ತು ಧನಾತ್ಮಕ ಅಂಶಗಳೇನೋ....

ನನಗನ್ನಿಸಿದಂತೆ -

ದೇವರೆಂದರೆ ನಂಬಿಕೆ : 
ತನ್ನ ಮೇಲೆ ತನಗಿರುವ ನಂಬಿಕೆ (ತನ್ನ ಮೇಲೆ, ತನ್ನ ಕಾರ್ಯಗಳ ಮೇಲೆಯೇ ನಂಬಿಕೆಯಿರದವನನ್ನು ದೇವರು ಕೂಡ ಸಲಹಲಾರನೇನೋ) ಮತ್ತು ತನ್ನ ಸುತ್ತಲಿನ ಜೀವಿಗಳ ಮೇಲಿನ ನಂಬಿಕೆ.

ದೇವರೆಂದರೆ ಪ್ರೀತಿ : 
ತನ್ನ ಮೇಲೆ ತಾನಿಟ್ಟುಕೊಂಡ ಪ್ರೀತಿ ( ತನ್ನನ್ನ ತಾನು ಪ್ರೀತಿಸಿಕೊಳ್ಳಲಾರದವನು ಇನ್ನೊಬ್ಬರನ್ನು ಅಥವಾ ದೇವರನ್ನು ಹೇಗೆ ಪ್ರೀತಿಸಿಯಾನು) ಮತ್ತು ತನ್ನ ಸುತ್ತಲಿನ ಜೀವ ಜಂತುಗಳೊಂದಿಗೆ ಬೆಸೆದುಕೊಳ್ಳುವ ಬೇಷರತ್ತಾದ ಪ್ರೀತಿ.

ದೇವರೆಂದರೆ ವಾತ್ಸಲ್ಯ : 
ಒಬ್ಬ ತಾಯಿಗೆ ತನ್ನ ಮಗುವಿನ ಮೇಲಿರುವಂಥ ನಿಷ್ಕಲ್ಮಶವಾದ ವಾತ್ಸಲ್ಯ. ಆ ನಿಷ್ಕಪಟ ವಾತ್ಸಲ್ಯವನ್ನು ಪರರ ಮಗುವಿನ ಮೇಲೆಯೂ ತೋರಿಸಬಲ್ಲ ಹೆಣ್ಣು ಜೀವದಲ್ಲಿ ಖಂಡಿತಾ ದೇವರಿದ್ದಾನೆ.

ದೇವರೆಂದರೆ ವಿಶ್ವಾಸ : 
ತಾನು ಮಾಡ ಹೊರಟ ಕಾರ್ಯದ ಉದ್ದೇಶ ಉತ್ತಮವಿರುವಾಗ, ಕಾರ್ಯ ಸಾಧಿಸುವ ವಿಧಾನ - ಮಾರ್ಗ ನ್ಯಾಯಯುತವಾದುದು ಎಂಬ ದೃಢವಾದ ನಂಬಿಕೆ ಇದ್ದಾಗ, ಆದ್ದರಿಂದ ತಾನು ಗೆದ್ದೇ ಗೆಲ್ತೇನೆಂಬ ವಿಶ್ವಾಸ ಮೊಗದಲ್ಲಿ ನಗುವಾಗಿ ಮೂಡಿ ನಿಲ್ಲುತ್ತಲ್ಲ ಅಲ್ಲಿ ದೇವರಿದ್ದಾನು.

ದೇವರೆಂದರೆ ಆದರ್ಶ : 
ಮಾತನಾಡದೇ ಸ್ವಚ್ಛ ಮೌನದಲ್ಲೇ ಸ್ವರ್ಗವಿದೆ ಎನ್ನುವಂಥ ಆತನ ಪ್ರಶಾಂತತೆ, ಎಲ್ಲ ಕೇಳಿಸಿಕೊಂಡೂ ಏನೂ ಕೇಳದಂತಿರುವ ಆತನ ಒಳ್ಳೆಯತನ, ಎಲ್ಲರಿಂದ ಸಾಷ್ಟಾಂಗವೆರಗಿಸಿಕೊಂಡೂ ಅಹಂಕಾರಿಯಾಗದ ಅವನ ವಿನಯ, ನಮ್ಮೆಲ್ಲ ದೊಂಬರಾಟಗಳ ಕಂಡೂ ವ್ಯಘ್ರನಾಗದ ಆತನ ವಿನೋದ, ತನ್ನನ್ನ ನಂಬಿದವರನ್ನೂ ನಂಬದವರನ್ನೂ ಒಂದೇ ತೆರನಾಗಿ ನೋಡಬಲ್ಲ ಆತನ ಸ್ಥಿತಪ್ರಜ್ಞತೆ - ಈ ಎಲ್ಲ ಆದರ್ಶ ಗುಣಗಳಲ್ಲಿ ದೇವರಿದ್ದಾನೆ.

ದೇವರೆಂದರೆ ಕರುಣೆ : 
ಪರರ ನೋವಿಗೆ ತಾನೂ ನೊಂದು - ತನ್ನ ನೋವ ಮರೆತು - ಅವರಿವರ ಮೊಗದ ಕಿರುನಗೆಗಾಗಿ ಮಿಡಿದು ಶ್ರಮಿಸುವ ನಿಸ್ವಾರ್ಥ ಹೃದಯದ ಕರುಣೆ.

ದೇವರೆಂದರೆ ಧೈರ್ಯ :

ಎದುರು ಬರುವ ಸಾವಿರ ಕಷ್ಟಗಳ ಸಾಗರವ ಈಜಿ ನೋವ ಪಂಜರದಲ್ಲಿ ಬಂಧಿಯಾಗಿರುವ ನಗುವ ಗಿಣಿಯನು ಬಿಡಿಸಿ ತಂದು ಬದುಕ ರಾಜಕುಮಾರಿಯ ಗೆಲ್ಲುತ್ತೇನೆಂಬ ಧೈರ್ಯ.

ದೇವರೆಂದರೆ ವಿಜ್ಞಾನ :
ಸದಾ ಹೊಸದಕ್ಕಾಗಿ ತುಡಿಯುವ, ಹೊಸ ಏಳ್ಗೆಗಾಗಿ ದುಡಿಯುವ, ಕುತೂಹಲದ ಕೂಸಾದ ವಿಜ್ಞಾನ.

ನಗುವ ಹಸುಳೆಯ ಅಬೋಧ ಕಂಗಳಲ್ಲಿ....
ಮಗುವನ್ನು ತಬ್ಬಿ ವಿನಾಕಾರಣ ಖುಷಿಪಡುವ ತಾಯ ಮಮತೆಯ ಮಡಿಲಲ್ಲಿ...
ಸಾವನ್ನು ಎದುರು ನೋಡುತ್ತಿರುವ ವೃದ್ಧೆಯ ಒಳಿತನ್ನು ಹರಸುವ ನಡುಗುವ ಕೈಗಳಲ್ಲಿ...
ತನ್ನೆಲ್ಲ ಜ್ಞಾನವನ್ನೂ ಧಾರೆಯೆರೆದು ಶಿಷ್ಯನನ್ನು ತನಗಿಂತ ಜ್ಞಾನಿಯಾಗಿಸಲು ತುಡಿಯುವ ಗುರುವಿನ ಮನದ ವೈಶಾಲ್ಯದಲ್ಲಿ...
ಪ್ರತಿಫಲಾಪೇಕ್ಷೆಯಿಲ್ಲದೇ ನಿರಂತರ ಜಗವ ಬೆಳಗುವ ಸೂರ್ಯ ಚಂದ್ರರಲ್ಲಿ...
ಕಡಿವ ಕಟುಕನಿಗೂ ನೆರಳನೀವ ಮರಗಿಡಗಳ ನಿಸ್ವಾರ್ಥತೆಯಲ್ಲಿ...
ಅರಳುವ ಹೂವು ಚೆಲ್ಲುವ ಚೆಲುವು ಹಾಗೂ ಸುಗಂಧದಲ್ಲಿ...
ಬೀಸುವ ಗಾಳಿಯಲ್ಲಿ...
ಸುರಿವ ಜಲಧಾರೆಯಲ್ಲಿ...
ಹಸಿರುಣಿಸುವ ಭೂತಾಯ ಕರುಣೆ ಕಡಲಲ್ಲಿ...
ಅಲ್ಲೆಲ್ಲ ದೇವರಿದ್ದೇ ಇದ್ದಾನು...

ಯಾವುದೋ ಗುಡಿಯ ಶಿಲೆಯ ಪೂಜಿಸುವುದಕ್ಕಿಂತ...
ಇನ್ಯಾವುದೋ ಸ್ವಾಮಿಯ ಪಾದಪೂಜೆ ಮಾಡಿ ದಕ್ಷಿಣೆ ಬಟ್ಟಲ ತುಂಬುವುದಕ್ಕಿಂತ... 
ಪ್ರಕೃತಿಯ ಪ್ರೀತಿ ಮಡಿಲಲ್ಲಿ - ನಮ್ಮ ನಿಮ್ಮ ಮನ ಮಂದಿರಗಳಲ್ಲೇ ದೇವರ ಕಾಣುವುದು ಎಷ್ಟೊಂದು ಒಳಿತಲ್ಲವಾ...

***!!!!!***

ಭಾವ - ಭಕ್ತಿ.....

ಭಕ್ತಿ ಅಂದರೇನು..???
ಕಂಡ ಕಂಡ ಸಕಲ ದೇವರುಗಳಿಗೂ ಶಿರಬಾಗೋದಾ.?
ಪ್ರದಕ್ಷಿಣೆಯ ಹೆಸರಲ್ಲಿ ಎಲ್ಲ ದೇವಸ್ಥಾನಗಳಿಗೂ ನೂರಾರು ಸುತ್ತು ಹಾಕೋದಾ.??
ಬಹು ವಿಜೃಂಭಣೆಯಿಂದ ಯಜ್ಞ ಯಾಗಾದಿಗಳನ್ನು ನಡೆಸೋದಾ.??
ಮೂರು ಹೊತ್ತೂ ದೇವನಾಮ ಸ್ಮರಣೆಯ ಹೆಸರಲ್ಲಿ ಕಣ್ಣು ಮೂಗು ಮುಚ್ಚಿಕೊಂಡು ತುಟಿಯಲುಗಿಸುತ್ತಾ ಕೂತಿರೋದಾ.???
ಇವುಗಳಲ್ಲಿ ಯಾವುದು ಭಕ್ತಿ.?
ಯಾವ ಭಕ್ತಿಯಿಂದ ನಮಗೆ ಮುಕ್ತಿ.??
ಇವೆಲ್ಲ ಭಕ್ತಿ ಅಂತಾದ್ರೆ, ಇವೆಲ್ಲವುಗಳಿಂದ ದೇವನೊಲಿದು ನಮ್ಮ ಕಷ್ಟ ಕಾರ್ಪಣ್ಯಗಳೆಲ್ಲ ಕಳೆಯೋದೇ ಆಗಿದ್ರೆ ಜಗದಲ್ಲಿ ಇಷ್ಟೆಲ್ಲ ನೋವುಗಳು, ಬಡತನ, ಆಸ್ಪತ್ರೆಗಳು ಯಾಕಿರಬೇಕು.
ಪೂಜಾರಿಗೂ ಬವಣೆ ತಪ್ಪಿಲ್ಲ...
ಸ್ವಾಮಿಗೂ ಸಾವು ತಪ್ಪಿದ್ದಲ್ಲ...

ನಂಗನಿಸಿದಂತೆ ಭಕ್ತಿ ಅಂದ್ರೆ -
ತನ್ನದೊಂದು ಗಮ್ಯವನ್ನು ಸೇರಲಿಕ್ಕಾಗಿ ತನ್ನೆಲ್ಲ ಶಕ್ತಿಯನ್ನೂ ಒಟ್ಟಾಗಿಸಿಕೊಂಡು, ಸರ್ವ ಪ್ರಯತ್ನ ಮಾಡಿ ಕೊನೆಗೆ ಗೆಲುವನ್ನು ತನ್ನದಾಗಿಸಿಕೊಂಡು, ಆಮೇಲೆ ತಾನೇ ತನ್ನ ಸಾಮರ್ಥ್ಯದಿಂದ ದಕ್ಕಿಸಿಕೊಂಡ ಗೆಲುವಿಗೆ ವಿನಯದಿಂದ ದೇವರ ಆಶೀರ್ವಾದವೇ ಕಾರಣ ಅಂತಾನ/ಳಲ್ಲ ಒಬ್ಬ ಯಶಸ್ವೀ ಸಾಧಕ/ಕಿ ಅವರದು ಭಕ್ತಿ ಅಂದರೆ.

ಇರುವ ಸಾವಿರದಲ್ಲಿ ಹತ್ತನ್ನು ದೇವರ ಹುಂಡಿಗೆ ಹಾಕಿ ಬೀಗೋದಲ್ಲ ಭಕ್ತಿ ಅಂದರೆ. 
ಇರೋ ಹತ್ತರಲ್ಲೇ ಒಂಭತ್ತನ್ನು ತನಗಿಂತ ದುಃಸ್ಥಿತಿಯಲ್ಲಿರುವವರಿಗೆ ಹಂಚಿ ತೃಪ್ತಿಯಿಂದ ನಗ್ತಾ  ಹಾಯಾಗಿ ನಿದ್ರಿಸ್ತಾನಲ್ಲ ಒಬ್ಬ ಆತನದು ನಿಜದ ಭಕ್ತಿ. 

ಮಳೆಯಾಗುತ್ತೋ - ಬೆಳೆ ಹಸನಾಗಿ ಲಾಭ ತರುತ್ತೋ ಒಂದೂ ಗೊತ್ತಿಲ್ಲದಿದ್ರೂ ಬೀಜ ಬಿತ್ತನೆ ಮಾಡಿ ತನ್ನ ಕೆಲಸವನ್ನು ತಾನು ನಿರ್ವಂಚನೆಯಿಂದ ಮುಗಿಸಿ ಆಗಸಕ್ಕೆ ಕೈಯೆತ್ತಿ ನಮಸ್ಕರಿಸುತ್ತಾನಲ್ಲ ಒಬ್ಬ ಬಡ ರೈತ ಅವನದು ಭಕ್ತಿ ಅಂದ್ರೆ.

ವರ್ಷವಿಡೀ ಬೆವರ ಹರಿಸಿ ಶ್ರಮಿಸಿ ಬೆಳೆದ ಫಸಲೆಲ್ಲ ಒಂದಿನಿತೂ ಉಳಿಯದೇ ತೊಳೆದು ಹೋದಾಗಲೂ ನೆಲವನ್ನಾದ್ರೂ ಉಳಿಸಿದೀಯಲ್ಲ ಭಗವಂತಾ ಅಂತ ದೇವರನ್ನ ಸ್ಮರಿಸ್ತಾನಲ್ಲ ಒಬ್ಬ ನೆರೆಪೀಡಿತ ನಿರಾಶ್ರಿತ ಆತನದು ಶ್ರೇಷ್ಠ ಭಕ್ತಿ.
ಆ ದೇವರು ಕೂಡ ಅಂಥ ಭಕ್ತನನ್ನೇ ಇಷ್ಟಪಟ್ಟಾನು...
ನಂಗೆ ಅಜ್ಜ ಹೇಳ್ತಿದ್ದ ಆ ಕಥೆ ನೆನಪಾಗುತ್ತೆ. 
ನಿಮಗೂ ಗೊತ್ತಿರೋದೇ.
ದಿನದ ಇಪ್ಪತ್ನಾಲ್ಕು ಘಂಟೆಯೂ ನಾರಾಯಣ ನಾರಾಯಣ ಎಂದು ಜಪಿಸ್ತಾ ಲೋಕ ತಿರುಗೋ ನಾರದನಿಗಿಂತಲೂ - ಹಗಲಿಡೀ ದುಡಿದು ದಣಿದು ರಾತ್ರಿ ಮಲಗೋ ಮುನ್ನ ಒಮ್ಮೆ ಮಾತ್ರ ಹೇ ನಾರಾಯಣಾ ಪಾಲಿಸು ಅಂತ ಬೇಡ್ಕೊಂಡು ಮಲಗ್ತಿದ್ದ ಬಡ ರೈತನೇ ಭಗವಂತನಿಗೆ ಪ್ರಿಯವಾಗಿದ್ನಂತೆ...

ನಾವೆಲ್ಲ ಪ್ರದರ್ಶನಪ್ರಿಯ ಧರ್ಮಭೀರುಗಳಾಗುವ ಬದಲು - ಕಾಯಕಪ್ರಿಯ ಭಕ್ತರಾಗೋದು ಒಳಿತಲ್ಲವಾ...


'ಗಲ್ಫ ಕನ್ನಡಿಗ' ಈ - ಪತ್ರಿಕೆಯಲ್ಲಿ 15-06-2012 ರಂದು ಪ್ರಕಟಿತ 

Tuesday, June 5, 2012

ಗೊಂಚಲು - ಮೂವತ್ತು + ಒಂದು.....

ಕತ್ತಲು.....


ಅಂದೂ -
ಮನೆಯ ತಾರಸಿಯ ಮೇಲೆ ಹೀಗೆಯೇ ಅಲೆಯುತ್ತಿದ್ದೆ...
ಆಗೆಲ್ಲ -
ನಿಶೆ ಬೆಳಕ ನುಂಗುವ ಮುನ್ನಿನ ಸಂಜೆಗತ್ತಲ ನನ್ನ ಮೌನಕ್ಕೆ ಎಂಥದೋ ಸೊಗಸಿತ್ತು...
ಬಾನಾಡಿಗಳ ಬಳಗ ಸೇರಿ ಬಾನೆತ್ತರ ಹಾರುತಿತ್ತು ಬಯಕೆ ತುಂಬಿದ ಮನ...
ಗೂಡು ಸೇರುವ ಮುನ್ನ ಕಿರುಚಾಡುತಿದ್ದ ಕಾಗೆ ಕೂಡ ನನ್ನ ಮೌನ ಮುರಿಯುವ ಕೀಟಲೆಯ ಮಿತ್ರನಂತೆ ಕಾಣುತಿತ್ತು...
ಪಿಳಿ ಪಿಳಿ ಬೆಳಕು ಚೆಲ್ಲುತ್ತಾ ನೂರಾರು ಬದುಕುಗಳ ಒಡಲಲ್ಲಿ ತುಂಬಿಕೊಂಡು ದೂರ ತೀರ ಯಾನ ಹೊರಟ ಲೋಹದ ಹಕ್ಕಿ ಬೆರಗು ಮೂಡಿಸ್ತಿತ್ತು...
ನಿದ್ದೆ ಬರಿಸುವ ಕತ್ತಲಿಗೂ ಯಾವುದೋ ಅಪರಿಚಿತತೆಯ ಸೊಗಡಿನ ಸೊಬಗಿತ್ತು...


ಕಾರಣ -
ಅಂದು ಮೊದಲಾಗಿ ನಕ್ಕಿದ್ದಳು
ನೋಡಿ ನನ್ನೆಡೆಗೆ...
ಎನ್ನ ಮನದಿ ಒಲವ ನವಿಲು ಗರಿಬಿಚ್ಚಿತ್ತು...
ಆ ನಗೆ ಬೆಳದಿಂಗಳಲಿ ನನ್ನ ಬದುಕ ಕತ್ತಲೆಲ್ಲ ಕರಗಿ ಹೋದೀತು,
ಆ ಕಣ್ಣ ನಗೆಯ ಪನ್ನೀರಲಿ ಬರಡಾದ ಎನ್ನ ಎದೆಯ ನೆಲ ತುಸು ನೆಂದು ಮಿದುವಾದೀತು,
ಮಿದುವಾದ ಎದೆ ನೆಲದಿಂದ ಹೊಸ ಜೀವೋನ್ಮಾದದ ಸ್ಫೂರ್ತಿ ಗಂಧ ಹೊಮ್ಮೀತು,
ಬದುಕ ಬಳ್ಳಿಯಲಿ ಹೊಸ ಮೊಗ್ಗು ಅರಳೀತು...
ಹೀಗೇ ಎಷ್ಟೆಷ್ಟೋ, ಇನ್ನೂ ಏನೇನೋ ಆಸೆ ತುಂಬಿದ ಭಾವೋನ್ಮಾದ...
ಏಕಾಂತ ಸೀಮೆಯನೇರಿ ಮೌನ ಗಾನ...
ಹಾರು ಹಕ್ಕಿಯ ರೆಕ್ಕೆಯಲಿ, 
ಜೀವ ಸೆಲೆ ಬತ್ತಿದ ಮೇಲೂ ಹಕ್ಕಿಗೆ ತಾವು ಕೊಡುವ ಬೋಳು ಮರದ ಪ್ರೀತಿಯಲಿ, 
ಹಸಿರ ಸಿರಿಯಲಿ, 
ಖಾಲಿ ಬಾನ ಬಯಲಲ್ಲಿ,  
ಕೊನೆಗೆ ನಿರ್ಜೀವ ಕಟ್ಟಡದಲಿ ಕೂಡ,  
ಒಟ್ಟಿನಲ್ಲಿ ನೋಟ ಹರಿದಲ್ಲೆಲ್ಲ ಖುಷಿಯ ಒಲವಿನ ಬಣ್ಣ...


           ~ * ~ & ~ * ~

ಇಂದೂ -
ಅದೇ ಮನೆಯ ಅದೇ ತಾರಸಿಯ ಮೇಲೆ ಅಂದಿನಂತೆಯೇ ಅಲೆಯುತ್ತಿದ್ದೇನೆ...
ಎದುರಿನ ಇಪ್ಪತ್ತಂತಸ್ತಿನ ಕಟ್ಟಡದಾಚೆ ಸೂರ್ಯ ಮೆಲ್ಲಗೆ ತಲೆ ಮರೆಸಿಕೊಳ್ಳುತ್ತಿದ್ದಾನೆ...
ಸುತ್ತಲೂ ನಿಧಾನವಾಗಿ ಜೀವ ತಳೆಯುತಿರುವ ಕತ್ತಲು..
ಇಷ್ಟಿಷ್ಟಾಗಿ ಸಂಜೆಯೊಂದು ಸಾಯುತ್ತಿದೆ...
ನನ್ನೊಳಗೆ ಸಾವಿನಂಥ ಮೌನ...
ಹಾಡುವ ಕೋಗಿಲೆ ದನಿಯೂ ಕರ್ಕಶ...
ಸುಡುವ ಬೆಳದಿಂಗಳು...

ಕಾರಣ -
ನನ್ನ ನಾಳೆಗಳಿಗಾಗಿ ಕಾಯದೇ ಕಳೆದು ಹೋದ ಅವಳು
ಮತ್ತು
ಕಳೆದು ಹೋಗದೇ ಕಾಡುವ ಅವಳ ನೆನಪುಗಳು...


 ~ * ~ & ~ * ~


ಮೊನ್ನೆ ಅಲ್ಲೆಲ್ಲೋ ಮತ್ತೆ ಸಿಕ್ಕಳು...
ಕಣ್ಣಲ್ಲಿ ಸಣ್ಣ ನೀರ ಅಲೆ...
ಕಾರಣ ಗೊತ್ತಾಗಿಲ್ಲ...
ಮತ್ತೆ ನೋಡಿದ ಖುಷಿಗಾ..?
ತನ್ನ ಕಳಕೊಂಡ ಮೇಲೂ ಬದುಕಿರುವನಲ್ಲಾ ಎಂಬ ನೋವಿಗಾ..??

ಹಾಂ -

ಅವಳೆಂದರೆ - 
"ನಿನ್ನೆ ನಾನು ಕಂಡಿದ್ದ ನಾಳೆಗಳೆಡೆಗಿನ ಕನಸುಗಳು....."

^### %%% ###^

'ಗಲ್ಫ ಕನ್ನಡಿಗ' ಈ - ಪತ್ರಿಕೆಯಲ್ಲಿ 08-06-2012 ರಂದು ಪ್ರಕಟಿತ

Tuesday, May 1, 2012

ಗೊಂಚಲು - ಹತ್ತು + ಹತ್ತು + ಹತ್ತು.....

ಬಾಲ್ಯ ಹಾಗೂ ಬಾಲಮಿತ್ರರು.....

ಬಾಲ್ಯ ಅಂದರೆ -


ಅಮ್ಮನ ಮಡಿಲು, ಅಜ್ಜನ ಕಥೆ, ಅಜ್ಜಿಯ ಸೀರೆ ಹಾಸಿಗೆ, ಮಾವನ ಮೈಮೇಲೆ ಕೂಸುಮರಿ...
ಅಜ್ಜನ ಕಥೆಗಳಲ್ಲಿನ ಕಾಗೆ, ಗುಬ್ಬಿ, ಹುಲಿ, ಸಿಂಹ, ಮೊಲಗಳ ಜೊತೆಗೆ 'ಬಾಲಮಂಗಳ'ದ ಡಿಂಗ, ಫಕ್ರು, ಲಂಬೋದರ 'ಚಂದಮಾಮ'ದ ರಾಜಕುಮಾರ, ಬಡಬ್ರಾಹ್ಮಣ ಮತ್ತು ತ್ರಿವಿಕ್ರಮನ ಬೇತಾಳ ಕೂಡ ಗೆಳೆಯರಾಗಿ ಪರಿಣಮಿಸಿದ್ದು...
ಹಗಲೆಲ್ಲ ಆಟ, ಸಂಜೆ ಬಾಯಿ ಪಾಠ... 
ಕನಸಲ್ಲೂ ಚಿಣ್ಣಿ - ದಾಂಡು, ಲಗೋರಿ...
ಮಂಡಿಯ ತರಚು ಗಾಯಕ್ಕೆ ಕಾಂಗ್ರೆಸ್ ಗಿಡದ ಎಲೆಯ ಮದ್ದು...
ಪಕ್ಕದ ಮನೆಯ ಹಿತ್ತಲ ಸೌತೆ ಮಿಡಿ, ಮಾವಿನ ಮಿಡಿಗಳು ನಮ್ಮನೆಯ ಉಪ್ಪು ಖಾರದೊಂದಿಗೆ ಸದ್ದಿಲ್ಲದೆ ನಮ್ಮ ಬಾಯಲ್ಲಿ ಕರಗಿದ್ದು...
ತರುತ್ತಲಿದ್ದ ಲಿಂಬು ಪೆಪ್ಪರ್ಮೆಂಟಿನ ಆಸೆಗೆ ಮನೆಗೆ ಬರುವ ನೆಂಟರಿಗಾಗಿ ಕಾಯುತ್ತಿದ್ದದ್ದು...
ರಾತ್ರಿ ಒಬ್ಬನೇ ಎದ್ದು ಧೈರ್ಯವಾಗಿ ಬಚ್ಚಲಿಗೆ ಹೋಗಿ ಉಚ್ಚೆ ಹೊಯ್ದದ್ದು ಕನಸು ಎಂಬುದು ಗೊತ್ತಾದದ್ದು ಹಾಸಿಗೆ ಒದ್ದೆಯಾಗಿ ಬೆಚ್ಚಗಾಗಿ ಎಚ್ಚರಾದಾಗ...
ರಾಡಿ ನೀರಲ್ಲಿ ಎಮ್ಮೆಗಳೊಂದಿಗೆ ಈಜು ಕಲಿತದ್ದು...
ಹುಲಿಮನೆ ಆಟದಲ್ಲಿ ಅಜ್ಜನ ಗೆದ್ದು ರಾಜ್ಯವನ್ನೇ ಗೆದ್ದಂತೆ ದಿನವಿಡೀ ಬೀಗಿದ್ದು...
ಕವಡೆ ಆಟದಲ್ಲಿ ಅಮ್ಮ ಸೋತಾಗ ಯಾಕೋ ನೋವಾಗಿದ್ದು...
ಬೆಟ್ಟೆ ಆಟದಲ್ಲಿ ಐದನೇ ಮನೆಯ ಗೆಲ್ಲುವುದೇ ಬಹು ದೊಡ್ಡ ಕನಸಾಗಿದ್ದದ್ದು...
ತಂಗಿ ನಿದ್ದೆಯಲ್ಲೂ ಕನವರಿಸಿದ್ದು ಕಲರ್ ಕಲರ್ ವಾಟ್ ಕಲರ್...
ನೆಲ್ಲಿ ಕಾಯಿ, ಸಂಪಿಗೆ, ನೇರಳೆ, ಮುಳ್ಳೆಹಣ್ಣುಗಳಿಗಾಗಿ ದಿನವೆಲ್ಲ ಮರಿ ಸೈನ್ಯದಂತೆ ಗುಂಪಾಗಿ ಕಾಡು ಅಲೆದದ್ದು...
ಮನೆಯಲ್ಲೇ ಕದ್ದು ತಿಂದ ಕೊಬ್ಬರಿ, ಬೆಲ್ಲದುಂಡೆ...
ಗೆಳೆಯರೊಂದಿಗೆ ಕುಸ್ತಿ - ತಪ್ಪಿದ ಮಗ್ಗಿ - ಮಾಸ್ತರರ ಕೈಯ ನಾಗ ಬೆತ್ತದ ರುಚಿ - ರಾತ್ರಿ ಮಲಗುವ ಮುನ್ನ ದೇವರಲ್ಲಿ ಮೇಷ್ಟ್ರ ಬಗ್ಗೆ ಕಂಪ್ಲೇಂಟು...
ವರ್ಷಕ್ಕೊಮ್ಮೆ ಶಾಲೆಗೆ ಭೇಟಿ ಕೊಡುತ್ತಿದ್ದ ಸಾಯ್ಬ್ರು (ಶಿಕ್ಷಣಾಧಿಕಾರಿ) ಹುಟ್ಟಿಸ್ತಿದ್ದ ಭಯ...(ಈ ಭಯ ನಮ್ಮಷ್ಟೇ ನಮ್ಮ ಮೇಷ್ಟ್ರಿಗೂ ಇರ್ತಾ ಇತ್ತೇನೋ ಎಂಬ ಅನುಮಾನ ನನಗೀಗಲೂ ಇದೆ)
ಪರೀಕ್ಷೆಯ ಭಯವ ಹೋಗಲಾಡಿಸಲು ವಿಫಲವಾಗಿ ಗಣಿತ ಪಟ್ಟಿಯ ನಡುವೆ ಸುಮ್ಮನೆ ಒಣಗುತ್ತಿದ್ದ ಬೇರು ಬಿಡುವ ಎಲೆ ಮತ್ತು ಮರಿಹಾಕುವ ನವಿಲುಗರಿ...
ಎರಡು ಮೂರು ವರ್ಷಕ್ಕೊಮ್ಮೆ ಹೊರಡುತ್ತಿದ್ದ ಶಾಲೆಯ ಪ್ರವಾಸದ ತೀರದ ಸಂಭ್ರಮ - ಆ ಪ್ರವಾಸದ ದಾರೀಲಿ ಜನ ಕಂಡಲ್ಲೆಲ್ಲ ಎಸೆಯಲೆಂದು ತಿಂಗಳ ಮುಂಚಿನಿಂದ ಬರೆಯಲು ಶುರುವಿಡುತ್ತಿದ್ದ ------ ಶಾಲೆಯ ----- ಪ್ರವಾಸಕ್ಕೆ ಜಯವಾಗಲಿ ಎಂಬ ವಿಧವಿಧ ವಿನ್ಯಾಸಗಳ ಚೀಟಿಗಳು...(ಹಿಂತಿರುಗಿ ಬರುವಾಗ ಎಸೆಯಲು -----ಪ್ರವಾಸಕ್ಕೆ ಜಯವಾಯಿತು ಎಂಬ ಚೀಟಿಯನ್ನೂ ಮುಂಚೆಯೇ ಬರೆದಿರುತ್ತಿದ್ದೆವು. ನಮ್ಮ ಗೆಲುವಿನ ಬಗ್ಗೆ ಎಂಥ ಭರವಸೆ...)
ಹುಟ್ಟು ಹಬ್ಬದಂದು ಹೊಸ ಅಂಗಿ ಹಾಕ್ಕೊಂಡು ಎದೆ ಉಬ್ಬಿಸ್ಕೊಂಡು ಶಾಲೆಗೆ ಹೊರಟಾಗ ಸುರಿದ ಮಳೆ - ಮಳೆ ನೀರಿನೊಂದಿಗೆ ಕರಗಿ ಹೋದ ಅಂಗಿಯ ಬಣ್ಣ ಹುಟ್ಟಿಸಿದ ನಿರಾಸೆ...
ಮಲೆನಾಡಿನ ಧೋಮಳೆ - ಎಲ್ಲೆಲ್ಲೂ ಹರಿವ ಕೆಂಪು ನೀರು - ಪ್ಲಾಸ್ಟಿಕ್ ಕೊಪ್ಪೆ - ಅರಲು ಗದ್ದೇಲಿ ಹೊರಳಾಟ...
ಮುಸ್ಸಂಜೆಯಲಿ ಹೊಡತ್ಲ ಸುತ್ತ ಕನಸುಗಳು ಬೆಚ್ಚಗೆ - ಸುಟ್ಟ ಹಲಸಿನ ಬೇಳೆ, ಗೇರು ಬೀಜಗಳ ಘಮ - ಅಜ್ಜ ಹೇಳುವ ಕಥೆಗಳ ಸಂಭ್ರಮ...
ರೇಡಿಯೋದಲ್ಲಿ 'ಯುವವಾಣಿ'ಯ ಚಿತ್ರ ಗೀತೆಗಳ ಸರಿಗಮ...
ನಿಮ್ಮ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ 'ಅಭಿಲಾಷಾ' ಅಂತನ್ನುವುದ ಕೇಳಿ ಒಂದಿಲ್ಲೊಂದು ದಿನ ನಮ್ಮ ಹೆಸರೂ ಬಂದೀತೆಂದು ಕಾಯುತ್ತಿದ್ದುದು...(ನಮ್ಮ ಹೆಸರನ್ನೆಂದೂ ನಾವು ಆಕಾಶವಾಣಿಗೆ ಕಳಿಸಿಯೇ ಇರಲಿಲ್ಲ. ನಾವೇ ಕಳಿಸಬೇಕೆಂಬುದು ಗೊತ್ತೂ ಇರಲಿಲ್ಲ...)
ನಾಗರಪಂಚಮಿಯ ಬೇಳೆ ಒಬ್ಬಟ್ಟನ್ನು ವಿಪರೀತ ತಿಂದು - ಅದು ಹೊಟ್ಟೇಲಿ ಮಾರನೇ ದಿನವೂ ಹಾಗೇ ಉಳಿದು - ಹೂಸು ಬಿಟ್ಟದ್ದು ನಾನಲ್ಲ ಎಂದು ತೋರಿಸಿಕೊಳ್ಳಲು ಬಿಡುವ ಮುನ್ನವೇ ಮೂಗು ಮುಚ್ಚಿಕೊಂಡು ನಗೆಪಾಟಲಾದದ್ದು...
ಚೌತಿಯ ಚಂದ್ರನ ಕಂಡು ಬರುವ ಅಪವಾದಕ್ಕೆ ಹೆದರಿ ಅಜ್ಜಿ ಎಂದೋ ಹೇಳಿದ್ದು ನೆನಪಾಗಿ ಅಮ್ಮನ ಹಿತ್ತಲಲ್ಲಿನ ಕರಿಕೆಸುವಿನ ಗಿಡಗಳನೆಲ್ಲ ಕಡಿದು ಹಾಕಿ ಆಯಿಯ ಕೈಲಿ ಲತ್ತೆ ತಿಂದದ್ದು...(ಕರಿಕೆಸುವ ಕಡಿದರೆ ಅಪವಾದ ಬರಲ್ಲ ಎಂಬುದೊಂದು ನಂಬಿಕೆ)
ದೀಪಾವಳಿಯಂದು ಹಬ್ಬದ ಗುಬ್ಬಿಯ ಕಾಡಿಗೆಯಲ್ಲಿ ಗಡ್ಡ ಮೀಸೆಗಳ ಬಿಡಿಸಿಕೊಂಡು ಊರೆಲ್ಲ ಸುತ್ತಿದ್ದು...
ಅಜ್ಜನ ಸಂಚಿಯಿಂದ ಕದ್ದು ಹಾಕಿದ ಕವಳದಿಂದ ಕೆಂಪಾದ ನಾಲಿಗೆಯ ರಂಗು ಕಂಡು ಪುಳಕಗೊಂಡದ್ದು...
ಮಾವ ಸೇದಿ ಎಸೆದ ಮೋಟು ಬೀಡಿಯ ಕದ್ದು ಸೇದಿ ಕೆಮ್ಮಿ ಕೆಮ್ಮಿ ಸುಸ್ತಾಗಿ ಕಣ್ಣೀರು ಸುರಿದದ್ದು...
ಅಕ್ಕ ದೊಡ್ಡವಳಾದಳೆಂದಾಗ ದೊಡ್ಡವಳಾಗುವುದೆಂದರೆ ಏನೆಂಬುದರ ಬಗ್ಗೆ ವರ್ಷಗಳ ಕಾಲ ತಲೆ ಕೆಡಿಸಿಕೊಂಡದ್ದು...
ಪ್ರೀತಿಯ ದೊಡ್ಡತ್ತೆ ಕಾರಣವನೇ ಹೇಳದೆ ನೇಣಿಗೆ ಶರಣಾದದ್ದು - ಬದುಕು ಕಂಡ ಮೊದಲ ಸಾವು - ಉರಿವ ಚಿತೆಯ ಎದುರು ಸಾವಿನ ಅರ್ಥ ಅಸ್ಪಷ್ಟ...
ಬಾಲ್ಯದ ಬದುಕ ಕಣಜದಲ್ಲಿ ಎಷ್ಟೆಲ್ಲ - ಏನೇನೆಲ್ಲ ಸಿಹಿ ಕಹಿ ನೆನಪುಗಳ ತೆನೆಗಳು...

***&&&***

ಆಲದ ಬಿಳಲಿನ ಜೋಕಾಲಿಯಲಿ ಜೀಕುತ್ತ ಜೀಕುತ್ತಲೇ ಕಳೆದು ಹೋದ ಬಾಲ್ಯ ಮತ್ತು ಬಾಲ್ಯದ ಗೆಳೆಯರನ್ನು ಎಂದಿಗಾದರೂ ಮರೆಯೋಕೆ ಸಾಧ್ಯವಾ..? 
ನೋ ಛಾನ್ಸ್.
ನಾವೆಷ್ಟೇ ದೊಡ್ಡೋರಾದ್ರೂ - ಬದುಕು ನಮ್ಮನ್ನು ಎಷ್ಟೇ ಎತ್ತರಕ್ಕೊಯ್ದು ನಿಲ್ಲಿಸಿದ್ರೂ - ವರ್ಷ ನೂರಾಗಿ ಮೃತ್ಯುಮುಖಿಯಾಗಿ ಕುಳಿತು ಕ್ಷಣಗಣನೆ ಮಾಡುತ್ತಿರುವಾಗಲೂ ನೆನಪಾದರೆ ಮೊಗದಿ ಮಂದಹಾಸವೊಂದನು ಮೂಡಿಸಬಲ್ಲದ್ದು ಹೆಚ್ಚಾಗಿ ಬಾಲ್ಯ ಮತ್ತು ಬಾಲಮಿತ್ರರೊಂದಿಗೆ ಬೆಸೆದ ಮಧುರ ಕ್ಷಣಗಳ ನೆನಪುಗಳೇನೇನೋ...
ನೋಡಿದ್ದೆಲ್ಲ ನವನವೀನವಾಗಿ ಕಾಣುತ್ತಿದ್ದ ಆ ಕಾಲ ಎಷ್ಟು ಚೆಂದಗಿತ್ತಲ್ಲವಾ...
ಎಲ್ಲ ಕಿತ್ತಾಟಗಳ ನಡುವೆಯೂ ಹಬ್ಬಿ ನಿಲ್ಲುತ್ತಿದ್ದ ಸುಂದರ ಗೆಳೆತನಕ್ಕೆ ಎಂಥ ಕಸುವಿತ್ತಲ್ಲವಾ...
ನೆನೆಸಿಕೊಳ್ಳುತ್ತಿದ್ದರೆ ಎಂಥದೋ ಅರಿಯದ ರೋಮಾಂಚನ...

ಬಾಲ್ಯ ಕಳೆದು ಪ್ರೌಢರಾಗಿ, ಯೌವನವಂತರಾಗಿ ಬದುಕಿನ ಸಾಧ್ಯತೆಗಳ ವಿಸ್ತಾರದ ನಿರಂತರ ನಿರೀಕ್ಷೆಯಲ್ಲಿ - ನಿರೀಕ್ಷೆಗಳ ಕನಸ ಸ್ತಂಭ ಉರುಳದಂತೆ ಕಾಪಾಡಿಕೊಳ್ಳಬೇಕಾದ ಒತ್ತಡದಲ್ಲಿ - ಸ್ವಂತ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಬಾಲ್ಯದ ಮಿತ್ರರೆಲ್ಲ ದಿಕ್ಕಿಗೊಬ್ಬರಾಗಿ ಬೇರಾಗಿ ಚೆದುರಿ ಹೋದರೂ, ವರ್ಷಾಂತರಗಳ ಕಾಲ ಭೆಟ್ಟಿಯೇ ಆಗದಿದ್ದರೂ, ಯಾವುದೇ ಸಂವಹನ ಸಾಧ್ಯವಾಗಿಲ್ಲದಿದ್ದರೂ, ಬದುಕಿನ ಜಂಜಡಗಳು ಹಣ್ಣಾಗಿಸಿದ್ದರೂ ಬಾಲ್ಯ ಮತ್ತು ಆ ಕಾಲದ ಗೆಳೆಯರೊಂದಿಗೆ ಕಳೆದ ಮಧುರ ಕ್ಷಣಗಳ ನೆನಪು ಸದಾ ಹಚ್ಚ ಹಸಿರು...
ಎಲ್ಲ ಅನಿಶ್ಚಿತತೆಗಳ ನಡುವೆ ನೆನಪೊಂದೇ ಶಾಶ್ವತ ಅನ್ನಿಸಿಬಿಡುತ್ತಲ್ಲವಾ...
ನೆನಪು ಪ್ರಕೃತಿ ನಮಗಿತ್ತ ವರ...(ಕೆಲವೊಮ್ಮೆ ಶಾಪ ಕೂಡ - ಆ  ಮಾತು ಬೇರೆ)

ಬಾಲ್ಯದಲ್ಲಿ ನಾವೂ ಶಕ್ತಿವಂತರಾಗಬೇಕು - ನಾವೂ ಸ್ವತಂತ್ರ ನಿರ್ಧಾರಗಳನ್ನ ತಗೋಬೇಕು - ನಮ್ಮ ಮಾತನ್ನ ಎಲ್ರೂ ಕೇಳೋಹಂಗಾಗ್ಬೇಕು - ಹಾಗೆಲ್ಲ ಆಗ್ಬೇಕೂಂದ್ರೆ ಆದಷ್ಟು ಬೇಗ ನಾವು ದೊಡ್ಡೋರಾಗ್ಬೇಕು ಅಂತೆಲ್ಲ ಅಂದ್ಕೋತಿದ್ದ ನಾವುಗಳೇ  ಈವತ್ತು ಹಾಗೆಲ್ಲ ಆದ ಮೇಲೆ ಯೋಚಿಸಿದ್ರೆ ಬಾಲ್ಯದ ಆ ದಿನಗಳೇ ಎಷ್ಟು ಚೆನ್ನಾಗಿತ್ತು ಅನ್ನಿಸುತ್ತಲ್ಲವಾ..???
ಅದೇ ಏನೋ ಬದುಕಿನ ವೈಚಿತ್ರ್ಯ...
ಸಿಗೋದಿಲ್ಲ ಅಂತ ಖಾತ್ರಿ ಇದ್ದೂ ಅದಕಾಗಿ (ಕಳೆದುಹೋದದ್ದಕ್ಕಾಗಿ) ಹಂಬಲಿಸೋದು - "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ಎಂಬ ಕವಿವಾಣಿಯಂತೆ...

ಆದರೂ ಈ ನೆನಪುಗಳಿಗೊಂದು ಸಲಾಮ್...


ಚಿತ್ರ ಕೃಪೆ : ಅಂತರ್ಜಾಲದಿಂದ ಪಡೆದದ್ದು.



Wednesday, April 11, 2012

ಗೊಂಚಲು - ಇಪ್ಪತ್ತು + ಒಂಭತ್ತು...


ಭಯವಾಗುತ್ತಿದೆ - ಅಮ್ಮ
ಬದುಕೆಂಬ ಗುಮ್ಮನ ವಿವಿಧ ರೂಪಗಳ ಕಂಡು...


ಸದ್ದೇ ಇಲ್ಲದೆ ಒಂದಷ್ಟು ದೂರ ಜೊತೆ ನಡೆದು -
ಅಷ್ಟೇ ನಿಶ್ಯಬ್ದವಾಗಿ ಸರಿದು ಹೋಗುವ 
ಎಷ್ಟೊಂದು ಸಂಗತಿಗಳು ಈ ಪುಟ್ಟ ಬದುಕಲ್ಲಿ...
ಕೆಲವು ಬಣ್ಣ ತುಂಬಿ ಹೋಗುತ್ತವೆ...
ಇನ್ಕೆಲವು ಬಣ್ಣ ಅಳಿಸಿ...


ಹುಡುಕುತ್ತೇನೆ ನನ್ನ ನಾನು 
ಇಡಿಯಾಗಿ 
ಒಡೆದ ಗಾಜಿನ ಚೂರುಗಳಲ್ಲಿ...
ಕಂಡದ್ದು - ಸಾವಿರ ಮುಖಗಳು...
ಯಾವುದೂ ನನ್ನದಲ್ಲ - ಎಲ್ಲವೂ ನನ್ನದೇ...


ಘೋರಿ ಸೇರಿದ ಆಸೆ...
ಗರ್ಭ ತಳೆದ ಹೊಸ ಕನಸು...
ನಿನ್ನೆಯ ಹಳವಂಡ - ನಾಳೆಯ ಕನವರಿಕೆಗಳಲ್ಲಿ...
ಈ ಕ್ಷಣ -
ಅರ್ಧ ಜಗಿದುಗಿದ ತಾಂಬೂಲ...


ನನಗೇ ಅರ್ಥವಾಗದ ನನ್ನ ಬೇಕುಗಳು...
ಕೂಡುವ - ಕಳೆಯುವ
ಗುಣಿಸಿ - ಎಣಿಸುವ...
ಗೊತ್ತಿಲ್ಲದ - ಗುರಿಯಿಲ್ಲದ...
ಕೊನೆ ಕಾಣದ ಅಲೆದಾಟದಲ್ಲಿ...
ಕಳೆದು ಹೋಗುತಿದೆ ಬದುಕು
ಹಾಗೇ ಸುಮ್ಮನೆ...


*****


ಭಯವಾಗುತ್ತಿದೆ - ಅಮ್ಮ
ಬದುಕೆಂಬ ಗುಮ್ಮನ ವಿವಿಧ ರೂಪಗಳ ಕಂಡು...


ಅಂದು - ನೀ ಹೇಳುತ್ತಿದ್ದ ಕತ್ತಲ ಗುಮ್ಮನ ಬಗೆಗೆ ಭಯವಾದರೆ ಅಡಗಿಕೊಳ್ಳಲೆನಗೆ ನಿನ್ನ ಸೆರಗ ಮರೆಯಿತ್ತು.
ನಿನ್ನ ಮಡಿಲ ಕಂಪಿಗೆ ಎಂಥ ಗುಮ್ಮನ ಭಯವನ್ನೂ ಓಡಿಸಬಲ್ಲ ಬೆಚ್ಚನೆಯ ಬಿಸುಪಿತ್ತು.
ನೋವಾದರೆ ಸಂತೆಯ ನಡುವೆಯೂ ದನಿ ತೆರೆದು ಅತ್ತು ಬಿಡಬಹುದಿತ್ತು.
ಏನೋ ಬೇಕೆನಿಸಿದರೆ ನಿನ್ನೆಡೆಗೆ ಕೈಚಾಚಿ ರಚ್ಚೆ ಹಿಡಿಯಬಹುದಿತ್ತು.
ನಿನ್ನ ಮುದ್ದಿಗೆ - ನನ್ನ ನಗುವಿಗೆ ಊರನೆಲ್ಲ ಸೆಳೆವಂಥ ಸ್ವಚ್ಛ ಸೊಬಗಿತ್ತು.
ಹರಿದ ಮಂಡಿಗೆ, ತರಚು ಗಾಯಕ್ಕೆ -  ನಿನ್ನ ಮಮತೆಯ ಮುಲಾಮಿತ್ತು.

ಸೋತ ಆಟ, ಪಾಠಗಳ ನೋವಿಗೆ - ನಿನ್ನ ಭರವಸೆಯ ತಬ್ಬುಗೆಯಿತ್ತು.

ಆಡುತ್ತಾಡುತ್ತಲೇ ಓಡುವ ದಿನಗಳೊಂದಿಗೆ ಅರಿವೇ ಆಗದೆ ಬೆಳೆದುಬಿಟ್ಟೆ.
ನಿನ್ನ ಮಡಿಲಿಂದ ಕೊಸರಿ ಜಗದ ಬಯಲಿಗೆ ಬಿದ್ದುಬಿಟ್ಟೆ.

ಈಗ - 
ನಡೆಯಲೇ ಬೇಕಾದ ಬದುಕಿನ ಕೊನೆ ಕಾಣದ ದಾರಿಯ ನಡುವಿನ ವಿಚಿತ್ರ ತಿರುವು, ಕವಲುಗಳ ಎದುರು ಉಸಿರು ಸಿಕ್ಕಂತಾಗಿ ತಡವರಿಸುತ್ತ ನಿಂತಿದ್ದೇನೆ.
ಇಂದು -
ಬೆಳೆದ ಹಮ್ಮು - ತೋರಲೇ ಬೇಕಾದ ಬಿಮ್ಮುಗಳಲಿ
ಎಂಥ ನೋವಿಗೂ ಅಳುವಂತೆಯೂ ಇಲ್ಲ.
ಎಷ್ಟೇ ಖುಷಿಯಾದರೂ ನಗುವು ಸಲ್ಲ.
ಕಾರಣ -
ನಾನತ್ತರೆ ಜಗವೆಲ್ಲ ಒಳಗೇ ನಗುತ್ತೆ.
ನಾ ನಗುತಿದ್ದರೆ ಸುತ್ತಣ ಕಣ್ಣುಗಳಲಿ ಈರ್ಷ್ಯೆ.

ಯಾರ್ಯಾರೋ ಅಂತಾರೆ ಇದೆಯಂತೆ ಬದುಕ ಅಂತ್ಯದಲ್ಲಿಯೂ ಶಾಂತಿ.
ಆದರೆ ನನಗನಿಸುತ್ತೆ ಅಲ್ಲಿರುವುದು ಬರೀ ಸ್ಥಬ್ದತೆ.
ಒಂದಾನುವೇಳೆ ಇದ್ದರೂ ಇರಲಾರದು ಬಿಡು
ನಿನ್ನೆದೆಗೇ ಒದೆಯುತ್ತ ನಿನ್ನೆದೆಯ ಅಮೃತವ ಹೀರುವಾಗ ಇದ್ದಿರುತ್ತಿದ್ದ ಪ್ರಶಾಂತಿ.

ಅಮ್ಮಾ -
ಒಮ್ಮೆ ಈ ಜಗದುಡಿಯಿಂದ ಸೆಳೆದುಕೋ ನನ್ನ ನಿನ್ನ ಮಡಿಲಿಗೆ.
ನಿನ್ನ ಅಂತಃಕರಣದ ಹಾರೈಕೆಯೊಂದೇ ಭರವಸೆಯು ಭವಿತವ್ಯಕೆ...










ಚಂದದ ಪ್ರತಿಕ್ರಿಯೆಗಳಿವೆ... ಒಮ್ಮೆ ಕಣ್ಣಾಡಿಸಿ...

Wednesday, March 14, 2012

ಗೊಂಚಲು - ಇಪ್ಪತ್ತೆಂಟು....

ಮೌನ ಕನವರಿಕೆ.....




ಮನಸುಗಳ ಅರಳಿಸುವಂಥ ಕನಸುಗಳ ಹೊತ್ತು ತರುವ ಚಂದಿರ -
ಬಾನ ತುಂಬೆಲ್ಲ ಹಾಲು ಚೆಲ್ಲಿ ನಗುತಲಿರುವ...
ಯಾವ ಮಧುರ ನೆನಪಿನ ಕಚಗುಳಿಯೋ ಅವನ ಮನದಾಳದಲ್ಲಿ...
ಪಾಪಿ -
ನನ್ನ ನಿದ್ದೆ ಕೊಲ್ಲುವ...


ರಾತ್ರಿ ಇಳಿಯುವ ಹೊತ್ತಲ್ಲಿ - 
ಚಂದ್ರ ಮುಗುಳ್ನಗುವಾಗ -
ತಾರೆಗಳು ಕಣ್ ಮಿಟುಕಿಸುವಾಗ -
ತುಂಟ ತಂಗಾಳಿ ನನ್ನ ಹೆರಳ ಮುದ್ದಿಸುವಾಗ -
ಇಬ್ಬನಿ ಇಳೆಯ ತಬ್ಬುವಾಗ -
ಯಾರದೋ ತೊಟ್ಟಿಲ ಕಂದ ನಿದ್ದೇಲಿ ನಕ್ಕದ್ದು ಕಂಡಾಗ -
ಅಮ್ಮನ ಕೈಬಳೆಯ ಸದ್ದು, ತಂಗಿಯ ಕಾಲ್ಗೆಜ್ಜೆಯ ನಾದ, ತಮ್ಮನ ತುಂಟಾಟದ ಗದ್ದಲ, ಅಪ್ಪನ ಓಂಕಾರದ ಝೇಂಕಾರ ಕಿವಿಯ ಸೋಕಿದಾಗ -
ರಾತ್ರಿ ರಾಣಿ  ಪಾರಿಜಾತದೊಂದಿಗೆ ಅರಳಿ ಗಂಧ ಚೆಲ್ಲುವ ಸ್ಪರ್ಧೆಗೆ ಬಿದ್ದ ಹೊತ್ತಲ್ಲಿ...
ಗೆಳೆಯಾ -
ಅಂದುಕೊಳ್ಳುತ್ತೇನೆ ನಿನ್ನೆದುರು ಮಾತಾಗಬೇಕೆಂದು...
ನಿನ್ನೆಡೆಗಿನ ನನ್ನ ಕನಸುಗಳಿಗೆ ದನಿ ನೀಡಬೇಕೆಂದು...
ಆದರೇನು ಮಾಡಲಿ -
ಮೊದಲ ಮಳೆಗೆ ನೆನೆದ ಗಂಧವತೀ ವಸುಂಧರೆಯ ನಾಚಿಕೆಯಂಥ ಮೌನ ನನ್ನನಾವರಿಸುತ್ತದೆ ನಿನ್ನ ಸನ್ನಿಧಿಯಲ್ಲಿ...
                                  
                                                ***&^&***

Tuesday, February 21, 2012

ಗೊಂಚಲು - ಇಪ್ಪತ್ತು ಮತ್ತೇಳು....

ಈವರೆಗೂ...!!!
ಉಂಡ ಬದುಕ ಬುತ್ತಿ.....


ಕನ್ನಡಿಯೆದುರು ಕೀಳರಿಮೆಯಾಗಿ...
ಹೆಣ್ಣಿನೆದುರು ಕಾಮವಾಗಿ...
ರೋಗಗಳ ನೆಚ್ಚಿನ ಗೂಡಾಗಿ...
ಮನದಾಸೆಗಳ ನೀಸಲಾರದ ಅಸಹಾಯ ನಿಟ್ಟುಸಿರ ಸ್ಥಾವರವಾಗಿ...
ಬದುಕೆಲ್ಲ ಇನ್ನಿಲ್ಲದಂತೆ ಕಾಡಿದ ಈ ದೇಹವೆಂಬ ಮೂಳೆ ಮಾಂಸಗಳ ಹಂದರ...
ಉಸಿರು ಚೆಲ್ಲಿ ಕೊರಡಾದ ಮೇಲಾದರೂ
ಒಂದಿಷ್ಟು ಉಪಯೋಗವಾದೀತೆಂಬ ಬಯಕೆಯಿಂದ ದೇಹದಾನಿಯಾದೆ...
ಇದ್ದೀತು - ಸತ್ತ ಮೇಲೂ ಬದುಕಿರುವ ಬಯಕೆ..!!!

                                        *\/*)(s)(s)(s)(*\/*

ಬದುಕೊಂದು ದ್ವಂದ್ವ..
ಬದುಕಿ ಸಾಧಿಸಿದ್ದೇನು...???
ಬದುಕಿ ಸಾಧಿಸಲಾಗದ್ದೇನು...???



ಒಂದು ಕ್ಷಣ - ಬದುಕು ದೀರ್ಘವಾಯ್ತೇನೋ ಎಂಬ ನೋವ ಭಾವ...
ಮರುಕ್ಷಣ - ಬದುಕು ನಂಗೆ ನನ್ನ ಅರ್ಹತೆಗಿಂತ ಹೆಚ್ಚಾಗೇ ಒಲವ ಕರುಣಿಸಿದೆಯೇನೋ ಎಂಬ ಖುಷಿಯ ಭಾವ...
ಈ ಕ್ಷಣದ ನೋವು - ಮರುಘಳಿಗೆ ನಲಿವು...
ಇದೇ ಬದುಕಿನ ಚೆಲುವೇನೋ..!!!



                                      """@@@"""


ಸತ್ತ ಕನಸುಗಳ ಘೋರಿಯ ಮೇಲೆ ಕುಳಿತು ಬದುಕಿನ ದಿನಗಳನ್ನೆಣಿಸುತ್ತಾ ದೇಹದ ಸಾವಿಗೆ ಕಾಯುವ ಯಾತನಾದಾಯಕ ನಿರೀಕ್ಷೆಯ ಬದುಕಿನ ಬಗ್ಗೆ...


ಸಾವು ಬರುವ ದಾರಿಯತ್ತ ಕಣ್ಣು ನೆಟ್ಟು
ನಗೆಯ ಎಣ್ಣೆ ಬತ್ತಿದ ದೊಂದಿ ಹಿಡಿದು
ಅಕಾಲದಲ್ಲಿ ಸತ್ತ ಭೂತ ಭವಿಷ್ಯಗಳ ಮೋಹದ ಘೋರಿಯ ಮೇಲೆ ಕೂತು
ವರ್ತಮಾನದ ಬದುಕನ್ನು ಪ್ರಯತ್ನಪೂರ್ವಕವಾಗಿ ತಳ್ಳುತ್ತಿದ್ದೇನೆ...



ಸಾವು : ಕರುಣೆಗೆ ಕುರುಡು - ಖುಷಿಯ ಕೇಕೆಗೆ ಕಿವುಡು...


ಎಂಥ ವಿಸ್ಮಯ.
ಈಗಿದ್ದು ಈಗಿಲ್ಲದಂತಾಗುವ ವೈಚಿತ್ರ್ಯ. 
ಮನುಷ್ಯ ಎಷ್ಟೆಲ್ಲ ಬೆಳೆದರೂ, ಏನೆಲ್ಲ ಸಾಧಿಸಿದರೂ, ವೈಜ್ಞಾನಿಕವಾಗಿ - ವೈಚಾರಿಕವಾಗಿ ಪ್ರಕೃತಿಗೇ ಎದುರಾಗಿ ಏನೇನೆಲ್ಲ ವಿಕ್ರಮಗಳನ್ನು ತನ್ನದಾಗಿಸಿಕೊಂಡರೂ, ಇನ್ನೂ ಬೇಧಿಸಲಾಗದ ಒಂದು ವಿಸ್ಮಯವೆಂದರೆ ಸಾವು.
ಸಾವನ್ನು ಬೇಧಿಸೋದಿರಲಿ ಅದಕ್ಕೊಂದು ಪರಿಪೂರ್ಣವಾದ ವ್ಯಾಖ್ಯಾನವನ್ನೂ ನಮ್ಮಿಂದ ಕೊಡಲಾಗಿಲ್ಲ ಈವರೆಗೂ.
"ಸಾವೆಂದರೆ ನಮ್ಮನ್ನು ಹೊರತುಪಡಿಸಿ ಉಳಿದಂತೆ ಪ್ರಪಂಚವೆಲ್ಲ ಹಾಗೇ ಇರುವುದು."
ಇದು ನಾನೋದಿದ ಸಾವಿನ ಬಗೆಗಿನ ಒಳ್ಳೇ ವ್ಯಾಖ್ಯಾನ.
ಅದು ಯಂಡಮೂರಿ ವೀರೇಂದ್ರನಾಥರ ಮಾತು.


ಹೃದಯ ಬಿಕ್ಕಳಿಸುತ್ತದೆ - ಕನಸುಗಳು ಸತ್ತ ಮೇಲೂ ಬದುಕಿರುವುದಕ್ಕಾಗಿ...
ಪ್ರಜ್ಞೆ ಸಂತೈಸುತ್ತದೆ - ಹೊಸ ಕನಸುಗಳ ಹೆಕ್ಕಿ ತರುವೆನೆಂದು...
ಆದರೂ 
ಸತ್ತ ಕನಸುಗಳ ಬದುಕಿರುವ ನೆನಪುಗಳ ದಾಳಿಯಿಂದ ತಾಳುವುದೆಂತು..???


ಒಂದು ವೇಳೆ ಇಲ್ಲದ ದೇವರನ್ನು ಇದ್ದಾನೆಂದು ನಂಬಿ ಎಂದಾದರೊಮ್ಮೆ ಆತನನ್ನು ಪ್ರಾರ್ಥಿಸುವುದೇ ಆದರೆ - ನೋವು ಮತ್ತು ಸಾವನ್ನು ಅನಿರೀಕ್ಷಿತವಾಗಿ ಸುಳಿವಿಲ್ಲದೇ ಬಂದೆರಗುವಂತೆ ಮಾಡೆಂದು ಬೇಡಿಕೊಳ್ಳುತ್ತೇನೆ.
ಕಾರಣ - ಅನಿರೀಕ್ಷಿತವಾದ ಆಕಸ್ಮಿಕ ನೋವು ಮತ್ತು ಸಾವನ್ನಾದರೂ ಅರಗಿಸಿಕೊಳ್ಳಬಹುದೇನೋ ಆಗಲೀ ಸುಳಿವು ನೀಡಿ ಬರುವ ನೋವು, ನೋಟೀಸ್ ಕೊಟ್ಟು ಬರುವ ಸಾವು ಅವಕ್ಕಾಗಿ ಕಾಯುವವನನ್ನು ತುಂಬ ಹಿಂಸೆಗೀಡು ಮಾಡುತ್ತವೆ.
ನೋವು ಬರುತ್ತದೆಂದು ಗೊತ್ತು.
ಬರುವ ನೋವಿನ ಪ್ರಮಾಣ ಮತ್ತು ಅದು ತರುವ ಯಾತನೆ ಎಂಥದ್ದು ಎಂದು ತಿಳಿಯದೇ ನೋವು ಬರುವವರೆಗೆ ಕಾಯುತ್ತ ಒದ್ದಾಡುವುದು ತುಂಬ ಕಷ್ಟ.
ಇನ್ನು ಸಾವು - ಹತ್ತಿರದಲ್ಲೇ ಇದೆ ಎಂದು ಗೊತ್ತು, ಹೀಗೇ ಬರಬಹುದೆಂಬ ಮಾಹಿತಿಯೂ ಸಿಕ್ಕಿ, ಇರುವ ಆಸೆಗಳನ್ನು ಕೊಂದು, ಕಂಡ ಕನಸುಗಳನ್ನು ಹೂತು, ಬರಲಿರುವ ಸಾವಿಗಾಗಿ ನಿಸ್ಸಹಾಯಕನಾಗಿ ಕಾಯುವುದು ನಿಜಕ್ಕೂ ಘೋರ.
ಇನ್ನು ನಗುವುದಕ್ಕೆಂದೇ ಹುಟ್ಟಿದವನಂತಿರುವ, ನಗುವು ಅಭ್ಯಾಸವಾಗಿ ಹೋಗಿರುವ ವ್ಯಕ್ತಿಗಾದರೆ ಅದು ಇನ್ನೂ ಕಷ್ಟ.
ಯಾಕಂದ್ರೆ ಆತನಿಗೆ ಅಳುವ ಅವಕಾಶವೂ ಇಲ್ಲ.
ಅತ್ತು ಹಗುರಾಗೋಣ ಅಂದುಕೊಂಡರೆ, ಸ್ವಭಾವಜನ್ಯವಾದ ನಗು ಹಾಗೂ ಆ ನಗು ಸೃಷ್ಟಿಸಿಕೊಟ್ಟ ಇಮೇಜ್ ಆತನನ್ನು ಎಲ್ಲರೆದುರು ಅಳದಂತೆ ತಡೆಯುತ್ತದೆ.
ಆತನದೇನಿದ್ದರೂ ಎದೆಯೊಳಗೇ ಬಿಕ್ಕುವ ಮೌನ ರೋದನ.
ಸಾವಿಗೊಂದು ಸೌಂದರ್ಯ ತಂದುಕೊಡುವ ವ್ಯರ್ಥ ಪ್ರಯತ್ನ.


ಪ್ರಜ್ಞಾಪೂರ್ವಕವಾಗಿ ಕೊಂದ ಆಸೆಗಳು, ಅರಳುವ ಮೊದಲೇ ಕಮರಿಹೋದ ಕನಸುಗಳು, ಬರುವ ಸಾವಿನ ಭಯ, ಅದಕ್ಕೂ ಮುಂಚೆ ಅನುಭವಿಸಬೇಕಾಗಬಹುದಾದ ನೋವಿನ ಯಾತನೆಯ ಕಲ್ಪನೆ ಎಲ್ಲ ಸೇರಿ ಇರುವ ನಾಲ್ಕು ದಿನಗಳನ್ನೂ ಖುಷಿಯಿಂದ ಕಳೆಯದಂತೆ ಮಾಡಿಬಿಡುತ್ತವೆ.
ಎಂಥ ಘಟ್ಟಿ ವ್ಯಕ್ತಿತ್ವದವನಾದರೂ ನೋವು ಮತ್ತು ಸಾವಿಗಾಗಿ ಕಾಯಬೇಕಾದಾಗಿನ ಯಾತನೆಯೆದುರು ಆಗೀಗಲಾದರೂ ಮಂಡಿಯೂರಲೇಬೇಕು.
ಸಾವಿನೆದುರು ಎಂಥ ಅಹಂಕಾರವೂ ತಲೆಬಾಗಲೇಬೇಕು.


ನಗೆಯು ಯಾಂತ್ರಿಕವಾಗುವುದಕ್ಕಿಂತ ದೊಡ್ಡ ಯಾತನೆ ಇನ್ನೇನಿದೆ.
ಕನಸು ಕಾಣಲು ಧೈರ್ಯ ಮೂಡದಂತಹ ಮನಸಿನೊಂದಿಗೆ ಜೀವಿಸುವುದು ಸುಲಭ ಸಾಧ್ಯವಾ..???
ಮೈಮನಗಳಲಿ ಸಿಡಿದೇಳುವ ವಿಧವಿಧದ ಸಹಜ ಸುಂದರ ಆಸೆಗಳನ್ನೂ ಮೇಲೇಳದಂತೆ ಹಾಗೇ ಗರ್ಭದಲ್ಲೇ ಹಿಸುಕಿ ಹೂಳುವುದು ಹೇಳಿದಷ್ಟು ಸುಲಭವಾ..???
ಅದಕ್ಕೇ ಅಂದಿದ್ದು ನೋವು ಹಾಗೂ ಸಾವು ಆಕಸ್ಮಿಕವಾಗಿದ್ದರೇ ಚಂದ ಎಂದು...

                                                ***/\/\/\***

ಬೇರು : ಇದೀಗ ನೆನಪಷ್ಟೇ...

ಮಲೆನಾಡಿನ ದಟ್ಟ ಕಾನನದ  - 
ಅಡಿಕೆ, ತೆಂಗುಗಳ - 
ಮಾವು, ಹಲಸುಗಳ - 
ಭತ್ತ, ಕಬ್ಬುಗಳ - 
ಹಚ್ಚ ಹಸುರಿನ - 
ತುಂಬಿ ತುಳುಕುವ ಝರಿ, ತೊರೆಗಳ - 
ಗುಡ್ಡಗಾಡಿನ ಮಡಿಲ ನಡುವಿನ ಪುಟ್ಟ ಹಳ್ಳಿಯ -
ಅರಮನೆಯಂಥ ಗೂಡಿನ - 
ದೊಡ್ಡ ಅಂಗಳದ ಅಂಚಲ್ಲಿ - 
ಮರಗಳ ಕೊಂಬೆಗಳೆಡೆಯಿಂದ ತೂರಿ ಬರುವ ಎಳೆ ಬಿಸಿಲಿಗೆ ಮೈಯೊಡ್ಡಿ ಕೂತು - 
ಕಣ್ಣ ತುಂಬಿದ ಕನಸುಗಳಿಗೆ ಕಾವು ಕೊಟ್ಟು - 
ಕಾವು ಕೊಟ್ಟ ಪುಟ್ಟ ಕನಸೊಂದು ಸಾಕಾರಗೊಂಡು ಬೆನ್ತಟ್ಟಿದಾಗ ಬೆಟ್ಟದಷ್ಟು ಖುಷಿಪಟ್ಟು
ಅದೇ ಅಂಗಳದ ನಡುವೆ ಕುಣಿದಾಡುತ್ತ - 
ಕನಸು ಕೈಸುಟ್ಟಾಗ ಮತ್ತದೇ ಅಂಗಳದ ನಡುವೆ ಕೂತು ನಿಟ್ಟುಸಿರಿಟ್ಟು -
ಹೊಸ ಕನಸಿಗೆ ಜೀವ ತುಂಬುತ್ತಾ -
ಆಸೆ, ನಿರಾಸೆ, ಕನಸು, ನನಸುಗಳ ನಡುವೆ ತುಯ್ಯುತ್ತಾ - 
ಅಂಥ ಮಹತ್ವಾಕಾಂಕ್ಷೆಗಳೇನೂ ಇಲ್ಲದೇ - 
ಬದುಕಿನ ಬಗ್ಗೆ ಅಂಥ ತಕರಾರುಗಳೂ ಇಲ್ಲದೇ ಎಲ್ಲ ಸಾಮಾನ್ಯರಂತೆ -
ಹತ್ತರೊಡನೆ ಹನ್ನೊಂದು ಎಂಬ ಮಾತಿನಂತೆ ಎಲ್ಲರೊಡನೊಂದಾಗಿ ನಗುನಗುತ್ತಾ ಬದುಕಿನ ಇಪ್ಪತ್ತೇಳು ವಸಂತಗಳನ್ನು ಹಾಗೇ ಸುಮ್ಮನೆ ಎನ್ನುವಂತೆ ಕಳೆದು ಬಿಟ್ಟಿದ್ದೆ...


ಹಳ್ಳಿಯ ಎಲ್ಲ  ಏಕತಾನತೆಗಳ ನಡುವೆಯೇ ಒಂದಷ್ಟು ಪುಟ್ಟ ಪುಟ್ಟ ಖುಷಿಗಳಿದ್ದವು.
ಗೆಳತಿಯಂಥ ಅಮ್ಮ - ಅಮ್ಮನಂಥ ಅಕ್ಕಂದಿರು - ಭಾವ ತುಂಬಿದ ಬಂಧುಗಳ ಬಂಧಗಳಿದ್ದವು.
ಎಂದೋ ಬರಬಹುದಾಗಿದ್ದ  ಚಂದಮಾಮದ ಕಥೆಗಳ ರಾಜಕುಮಾರಿಯಂಥ ಸಂಗಾತಿಯೆಡೆಗಿನ ಮೈಮನಗಳ ಪುಳಕಗೊಳಿಸುವ ಒಲವ ಕನಸುಗಳಿದ್ದವು.
ಅಲ್ಲಿ ಜೋಕಾಲಿಯಿದೆ.
ಗಾಳಿಯ ಜೋಗುಳವಿದೆ.
ಮಣ್ಣ ಗಂಧವಿದೆ.
ಹೂವ ಮಕರಂದ ಹೀರುವ ದುಂಬಿಯ ಖುಷಿಯ ನಾದವಿದೆ.
ಹಾಡುವ ಹಕ್ಕಿ - ಕಾಡುವ ಕಾಡು - ಅಂಬಾ ಎಂಬ ಕರು - ಕಾವಲಿನ ನಾಯಿ - ಹಾಲು ಕದಿವ ಬೆಕ್ಕು ಎಷ್ಟೆಲ್ಲ ಜೀವ ವೈವಿಧ್ಯ.
ಅಲ್ಲಿಯ ಜನಕ್ಕೆ ಅನ್ನ ಇಕ್ಕುವ ಔದಾರ್ಯ - ಸುಖವ ಕದಿವ ಮಾತ್ಸರ್ಯ ಎರಡೂ ಇದೆ.
ಸೆಖೆಯಾದರೆ ಬರಿಮೈಯಲ್ಲಿ ಬರಿ ನೆಲಕ್ಕೆ ಹೊರಳಾಡಬಹುದಿತ್ತು.
ಛಳಿಗೆ ಮೈಕಾಸಲು ಸೌದೆ ಒಲೆಯಿತ್ತು.
ಇನ್ನು ಮಳೆಯೆಂದರೆ ಅಂಗಳಕ್ಕಿಳಿದರೆ ರಕ್ತ ಹೀರಲು ಸದಾ ಸನ್ನದ್ಧ ಉಂಬಳ, ಸಂಜೆಯಾದರೆ ಮೈಯೆಲ್ಲ ಉರಿ ಎಬ್ಬಿಸುವಂತೆ ಸಾಮೂಹಿಕ ದಾಳಿ ನಡೆಸುವ ನೊರ್ಜು(ಸೊಳ್ಳೆಗಿಂತ ತುಂಬ ಚಿಕ್ಕದಾದ ರಕ್ತ ಹೀರುವ ಒಂದು ಕೀಟ ಜಾತಿ), ಸಿಮೆಂಟು ನೆಲದಲ್ಲೂ ಜಿನುಗುವ ನೀರು, ನಂಜಿನಿಂದ ಕೊಳೆಯುವ ಕಾಲ ಚರ್ಮ...
ಆದರೂ ಮಲೆನಾಡ ಮಳೆಯಲ್ಲಿ ನೆನೆಯುವ ಸುಖವೇ ಬೇರೆ...
ನಾಲಿಗೆಯ ಹಂಬಲಕ್ಕೆ ಹಲಸಿನ ಬೇಳೆ, ಹಪ್ಪಳ, ಸಂಡಿಗೆ, ಸುಟ್ಟ ಗೇರು ಬೀಜ.
ಸಮೃದ್ಧ ಊಟಕ್ಕೆ ಹಲಸಿನ ಕಾಯಿ ಹುಳಿ, ಮಾವಿನಕಾಯಿ ಗೊಜ್ಜು, ಅಪ್ಪೆಹುಳಿ.
ಸಿಹಿಯ ಚಪಲಕ್ಕೆ ಹಲಸಿನ ಹಣ್ಣಿನ ಇಡ್ಲಿ, ಬಕ್ಕೆಹಣ್ಣಿನ ಮುಳಕ.
ಮಾತಿನ ಚಟಕ್ಕೆ, ಇಸ್ಪೀಟಿನ ಪಾರಾಯಣಕ್ಕೆ ಸದಾ ಸಜ್ಜಾಗಿರುತ್ತಿದ್ದ ಹಿರಿ - ಕಿರಿಯ ಗಂಡು ಪ್ರಾಣಿಗಳು...
ಬಾಯ್ತುಂಬ ತಂಬಾಕಿನ ಕವಳ - ನಡುನಡುವೆ ಚಹಾದ ಸಮಾರಾಧನೆ...
ಎಲ್ಲರನ್ನೂ ನಿದ್ದಂಡಿಗಳೆಂದು (ಸೋಮಾರಿಗಳು) ಬಯ್ಯುತ್ತಾ ಮಂಚ ನಡುಗುವಂತೆ ಹೊರಕೆ ಹೊಡೆಯುವ ಅಜ್ಜಂದಿರು - ಮುಸಿ ಮುಸಿ ನಗುವ ಮಕ್ಕಳು...
ಸದಾ ಗೊಣಗುವ ಗಂಡ ಸತ್ತ ಅಜ್ಜಿಯರು (ಅವರೇ ಮೊಮ್ಮಕ್ಕಳನ್ನು ಅತೀ ಹೆಚ್ಚು ಪ್ರೀತಿಸುವವರು ಕೂಡಾ).
ಅಡಿಗೆ ಮನೆ, ಕೊಟ್ಟಿಗೆ, ಪಕ್ಕದ ಮನೆಯವಳೊಂದಿಗೆ ಆಚೆ ಮನೆಯವಳ ಬಗೆಗಿನ ಹರಟೆಯಲ್ಲೇ ಸಂತೃಪ್ತರಾದ ಹೆಂಗಸರು.
ರೇಡಿಯೋದ ಚಿತ್ರಗೀತೆಗಳು, ಕರೆಂಟಿದ್ದರೆ ಟಿ.ವಿಯ ಧಾರಾವಾಹಿ - ಸಿನೆಮಾಗಳು...
ವಾರಕ್ಕೊಮ್ಮೆ ಬರುವ ಬಸ್ಸು - ಕಣ್ಣಾಮುಚ್ಚಾಲೆ ಆಡೋ ಕರೆಂಟು - ಹಾಳುಬಿದ್ದ ರಸ್ತೆ - ಇಲ್ಲದ ಮೂಲ ಸೌಕರ್ಯ ಇವ್ಯಾವುವೂ  ಹಳ್ಳಿ ಬದುಕಿನಲ್ಲಿ ಅಂಥ ವ್ಯತ್ಯಾಸವನ್ನುಂಟುಮಾಡಲಾರವು.
ಆಗಾಗ ಬರುವ ಚುನಾವಣೆಗಳು ಮತ್ತು ಸುಳ್ಳೇ ಸದ್ದು ಮಾಡುವ ಸಾಲ ಮನ್ನಾದ ಸುದ್ದಿ ಹಳ್ಳಿಗರಲ್ಲಿ ಒಂದಷ್ಟು ದಿನ ಗಡಿಬಿಡಿ ಉಂಟುಮಾಡಬಹುದೇನೋ ಅಷ್ಟೇ..
ಉಳಿದಂತೆ ಎಲ್ಲ ವ್ಯತ್ಯಯಗಳ ನಡುವೆಯೂ ಬದುಕು ಸಂತೃಪ್ತ ಅನ್ನಿಸುತ್ತೆ ಹಳಿಯಲ್ಲಿ...
ಮನಸು ಪ್ರಶಾಂತ - ನಿದ್ದೆ ಸಮೃದ್ಧ - ಊರು ಧ್ಯಾನಸ್ತ...


ಆ ಮನೆಗೆ ನಾನೇ ಯಜಮಾನ.
ಒಂದೇ ಒಂದು ಗಂಡು ಜೀವ.
ಅಮ್ಮ - ಅಕ್ಕಂದಿರೇ ನನ್ನ ಬದುಕ ರೂಪಿಸಿದ ಜೀವಗಳು.
ನೋವು ಅವಮಾನಗಳ ಮೀರಿ ನಿಂತು ಬದುಕಲು ಕಲಿಸಿದ ಪ್ರಾಣಗಳು.
ಸೀಮೆ ಎಣ್ಣೆಯ ಬುಡ್ಡಿ ದೀಪದ ಬೆಳಕಲ್ಲಿ - ರೇಡಿಯೋದಲ್ಲಿನ ಚಿತ್ರಗೀತೆಗಳ ಕೇಳುತ್ತಾ - ಒಂಟಿಯಾಗಿ ಚಾಲಿ ಅಡಿಕೆ ಸುಲಿಯುತ್ತಾ -  ಹಸಿ ಬಿಸಿ ಕನಸು ಕಾಣುವ ಮಾಣಿ.
ಅದೇ ಬುಡ್ಡಿ ದೀಪದ ಬೆಳಕಲ್ಲಿ - ಬಾಲಮಂಗಳ, ಚಂದಮಾಮದ ಕಥೆಗಳಿಂದಾರಂಭಿಸಿ - ಯಂಡಮೂರಿ ವಿರೇಂದ್ರನಾಥ್, ರವಿ ಬೆಳಗೆರೆ, ಎಸ್.ಎಲ್.ಭೈರಪ್ಪ, ಶಿವರಾಮ ಕಾರಂತರ ಬರಹಗಳನ್ನು ಓದಿ ಅರ್ಥೈಸಿಕೊಳ್ಳಲು ಒದ್ದಾಡುತ್ತಾ - ಏಕಾಂತವ ಸವಿಯುತ್ತಾ ಜೀವಿಸಿಕೊಂಡಿದ್ದ ಸಾಮಾನ್ಯ ಹಳ್ಳಿ ಹುಡುಗ. 
ಖುಷ್ವಂತ್ ಸಿಂಗ್, ಪ್ರೋತಿಮಾ ಬೇಡಿಯರ ಪೋಲಿ ಪುಸ್ತಕಗಳ ಓದಿ - ರಾತ್ರಿಗಳಲ್ಲಿ ಕರೆಂಟಿದ್ದರೆ ಫ್ಯಾಶನ್ ಟಿ.ವಿಯ ಅರೆಬೆತ್ತಲೆ ಲಲನೆಯರ ನೋಡಿದ ಪರಿಣಾಮವಾಗಿ ನಿದ್ದೆ ಬಾರದೆ ಹೊರಳಾಡಿ - ಏನೇನೋ ಆಗಿ ಮೈಯೆಲ್ಲ ಬೆವರಿ - ಸಣ್ಣಗೆ ಭಯವಾಗಿ - ಗಾಢ ನಿದ್ದೆ ಆವರಿಸಿ - ಬೆಳಗೆದ್ದಾಗ ಮತ್ತೆ ಅದೆಲ್ಲ ನೆನಪಾಗಿ ಅಮ್ಮನೆದುರು ಸಣ್ಣ ಮುಜುಗರ ಅನುಭವಿಸಿದ ಸಂಭಾವ್ಯ ಪೋಲಿ...


ಮೂಗನರಳಿಸುವ ಕಾಡು ಹೂವಿನ ಕಂಪು, ನಾನು ನಡೆದರೆ ನಡೆಯುವ ಓಡಿದರೆ ಓಡುವ ಮರದ ಮರೆಯಿಂದ ಇಣುಕಿ ಕಣ್ಣಾಮುಚ್ಚಾಲೆಯಾಡುತ್ತಾ ಮುದನೀಡುವ ಚಂದಿರ ನೆನಪಿಸುವ ನನ್ನೊಲವಿನ ನಾಚಿಕೆಯ ಮುಖಾರವಿಂದ, ಉರಿಯುತ್ತಾ ಉದುರುವ ಉಲ್ಕೆಯ ಕಂಡು ಬೆರಗು ಮತ್ತು ಭಯದಿಂದ ಕಣ್ಣರಳಿಸುವ ಸೋಜಿಗದ ರಾತ್ರಿಗಳು ಹಾಗೂ ತೋಟದೆಡೆಯಿಂದ ಬೀಸುವ ಗಾಳಿಯ ತಂಪು, ಮಾಡಿನ ಮರೆಯಲ್ಲಿ ನಗುವ ಸೂರ್ಯ ಕಿರಣ, ಗೋಪಿ ಹಕ್ಕಿಯ ಸುಪ್ರಭಾತದೊಂದಿಗೆ ಆರಂಭವಾಗುವ ಪ್ರಚ್ಛನ್ನ ಬೆಳಗು...
ಇವುಗಳ ನಡುವೆ ಕಳೆದ ಬದುಕಿಗೆ ಎಂಥ ಸೊಬಗಿತ್ತು ಗೊತ್ತಾ..!!


ಅಂತಿದ್ದ ಬದುಕನ್ನು ಅಸಹಾಯಕನಾಗಿ ಬಲಿಕೊಟ್ಟು - ಅಲ್ಲಿ ಕಂಡ ಕನಸುಗಳನ್ನು ಅನಿವಾರ್ಯವಾಗಿ ಕೊಂದು, ಹುಟ್ಟಲಿದ್ದ ಕನಸುಗಳಿಗೆ ಗರ್ಭಪಾತವ ಮಾಡಿಸಿ ಅವನ್ನೆಲ್ಲ ಆ ನೆಲದಲ್ಲೇ ಹೂತು ಸಮಾಧಿ ಮಾಡಿ - ಸಮಾಧಿಯ ಕಾವಲಿಗೆ ಆಯಿಯನ್ನು ಕೂರಿಸಿ ಆ ಊರ ತೊರೆದು ಈ ಊರ ಸೇರಿದೆ...


ಹೃದಯದಿ ಮಿಡಿವ ಮರಣ ಮೃದಂಗ...
ಮನದಲ್ಲಿ ವಾಲಗದ ಕನಸು...
                                              
ಇನ್ನೂ ಮುಂಚೆ : ಬದುಕು ಚಿಗುರೊಡೆದದ್ದು...


ನೆನಪು ಕೂಡ ಅಸಹ್ಯ ಮೂಡಿಸುವಂಥ ಬೇಜವಾಬ್ದಾರಿಯುತ ಬದುಕು ರೂಢಿಸಿಕೊಂಡ ಅಪ್ಪ - ದಾಯಾದಿ ಕಲಹ - ಅಸಹಾಯಕ ಅಮ್ಮನ ಮಡಿಲಲ್ಲಿ ಇನ್ನೂ ಅರಿವು ಮೂಡದ ಮೂರು ಮಕ್ಕಳು - ಅಜ್ಜನ ಮನೆಯ ಔದಾರ್ಯದಲ್ಲಿ ಬದುಕು ಆರಂಭ.
ರಕ್ತ ಸುರಿಸಿ ದುಡಿಯುವುದು ಮಾತ್ರ ಗೊತ್ತಿದ್ದ ಆಯಿಯ ಬೆವರ ನದಿಯಲ್ಲಿ ನನ್ನ ಮತ್ತು ಇಬ್ಬರು ಅಕ್ಕಂದಿರ ಬದುಕು ತೇಲಿದ್ದು.
ಅಮ್ಮ ತಾನು ಗಂಡಿನಂತೆಯೇ ಗೇಯ್ದು ನಮಗೆ ವಿದ್ಯೆ ನೀಡಿದ್ದು.
ಅಜ್ಜನ ಮನೆಯ ಪ್ರೀತಿ ಔದಾರ್ಯ ಬೆನ್ನಿಗಿದ್ದೇ ಇತ್ತು.
ಹೀಗೆ ಬದುಕಿನ ಆರಂಭದ 15 ವರ್ಷಗಳು ಎಲ್ಲೆಲ್ಲೋ ಯಾರ ಯಾರದೋ ಪ್ರೀತಿ - ಔದಾರ್ಯಗಳಲ್ಲೇ ಅರಳಿನಿಂತಿತ್ತು.
ಆ ಜೀವಗಳ ಔದಾರ್ಯ - ಪ್ರಯತ್ನಗಳಿಂದಲೇ ನ್ಯಾಯವಾಗಿ ನಮ್ಮ ಬದುಕಿಗೆ ದೊರಕಿದ್ದು ನಮ್ಮದೇ ಒಂದು ಸ್ಥಾವರ - ನೆಲೆ.
ನಂತರವೂ ಸಿಕ್ಕ ಭೂಮಿಯಲ್ಲಿ ಬೆವರು ಹರಿಸಿದ್ದು - ನನ್ನ ಬದುಕಿಗೊಂದು ಭದ್ರ ಬುನಾದಿ ರೂಪಿಸಿದ್ದು ಅಕ್ಕರೆಯ ಆಯಿ ಮತ್ತು ಅಕ್ಕಂದಿರು. 
ಅಪ್ಪ ಎಂದಿನಂತೆ ಬದುಕಿದ್ದಾನೆ ಈಗಲೂ - ನಮ್ಮಗಳ ಬದುಕಿನ ಸಾಮಾಜಿಕ ಅವಮಾನಗಳ ಮೂಲವಾಗಿ.
ನನ್ನ ಮತ್ತು ಅಕ್ಕಂದಿರ ಬದುಕ ರೂಪಿಸಿದ್ದು ಆಯಿಯ ಬೆವರು, ಸಮಾಜ ಕರುಣಿಸಿದ ಅವಮಾನಗಳು, ಅದೇ ಸಮಾಜದಲ್ಲಿ ಅಲ್ಲಲ್ಲಿ ಸಿಕ್ಕ ವಿನಾಕಾರಣದ ಪ್ರೀತಿ, ನಮ್ಮ ಓದು (ಶಾಲೆಯ ಓದಿನಿಂದಾಚೆಯ ಓದು) ಮತ್ತು ಅವೆಲ್ಲವುಗಳಿಂದ ದಕ್ಕಿದ ಬದುಕಿನೆಡೆಗಿನ ಗ್ರಹಿಕೆಗಳೇ...


                                       ***##$##***


ಸದ್ಯದ ನಿಲ್ದಾಣ : ಹೊಸ ಸಾಧ್ಯತೆಗಳನರಸಿ...


ಆಗಸವ ಚುಂಬಿಸ ಹೊರಟ ಕಟ್ಟಡಗಳ ಕಂಡು ಬೆರಗಾಗುತ್ತಾ -
ಸಣ್ಣ ತುಂತುರು ಮಳೆಗೂ ರಸ್ತೆ ತುಂಬ ಹರಿವ ಕೊಚ್ಚೆಯ ಕಂಡು ಮೂಗು ಮುರಿಯುತ್ತಾ -
ಲಾಲ್ಬಾಗು, ಕಬ್ಬನ್ ಪಾರ್ಕುಗಳೇ ಮಹಾ ಕಾಡುಗಳೆಂದು ಮತ್ತೆ ಮತ್ತೆ ಅವನ್ನೇ ನೋಡಿ ಸಂಭ್ರಮದ ಸೋಗು ಹಾಕುತ್ತಾ -
ಹಗಲಿರುಳೆನ್ನದೆ ರಸ್ತೆ ತುಂಬ ಓಡಾಡುವ ಪ್ರೇತಗಳಂಥ ಜನರ ಜಾತ್ರೆಯ ನಡುವೆ ಅಷ್ಟೇ ಸಂಖ್ಯೆಯಲ್ಲಿ ಹರಿದಾಡುವ ವಾಹನಗಳ ಚಕ್ರಗಳಡಿಯಲ್ಲಿ ಸಿಲುಕದಂತೆ ನನ್ನನ್ನು ನಾನು ರಕ್ಷಿಸಿಕೊಳ್ಳಲು ಒದ್ದಾಡುತ್ತಾ -
ಮೆಜೆಸ್ಟಿಕ್ಕಿನ ಪ್ಲಾಟ್ ಫಾರಮ್ಮುಗಳಲ್ಲಿ ಜನಜಂಗುಳಿ ನಡುವೆ ಸಹಜವಾಗಿ ಮೈಸೋಕಿದ ಚೆಲುವೆಯ ಕೈಗಳ ಮೃದುತ್ವಕ್ಕೇ ರೋಮಾಂಚಿತನಾಗುತ್ತಾ -
ತುಂಬಿ ತುಳುಕುವ ಬಿ.ಎಂ.ಟಿ.ಸಿ ಬಸ್ಸಲ್ಲಿ ಸೀಟು ಸಿಕ್ಕಿದ್ದೇ ಪುಣ್ಯ ಎಂದುಕೊಂಡು, ನಿಂತಿರುವ ವಯಸ್ಸಾದ ಅಜ್ಜನನ್ನು ಕಂಡರೂ ಕಾಣದಂತೆ ಕಿಟಕಿಯಿಂದಾಚೆಯ ಕಟ್ಟಡಗಳ ಕಾಡು ನೋಡುತ್ತಾ ಕೂತು -
ನೈಜ ಸಂಗೀತ ಕಾರ್ಯಕ್ರಮಗಳಿಗೆ ಹೋಗಲು ಸಮಯ ಸಾಲದೇ ಎಪ್.ಎಂಗಳ ಅಬ್ಬರವೇ ಸಂಗೀತವೆಂದುಕೊಂಡು ತಲೆದೂಗುತ್ತಾ -
ಮೊಬೈಲ್ ಕಂಪನಿಗಳು, ರೇಡಿಯೋ ಜಾಕಿಗಳು, ಟಿ.ವಿ.ನಿರೂಪಕರುಗಳಿಂದ ಮಾತು ಕಲಿತು ಮೌನದ ಮಾಧುರ್ಯ ಮರೆತು -
ಸಮಯ ಮುಗಿದರೂ ಕೆಲಸ ಬಿಟ್ಟೇಳಲು ಕೊಡದ ಮೇಲಧಿಕಾರಿಯನ್ನು ಮನದಲ್ಲೇ ಶಪಿಸುತ್ತಾ -
ಯಾರಮೇಲೆಂದು ಅರ್ಥವಾಗದ ಸಿಟ್ಟನ್ನು ಸದಾ ಮೊಗದಲ್ಲಿ ತುಂಬಿಕೊಂಡು -
ನಗುವ ನವಿರು ಭಾವಗಳನೆಲ್ಲಾ ಯಾಂತ್ರಿಕವಾಗಿಸಿಕೊಂಡು -
ನೀಗಿಕೊಳ್ಳಲಾಗದ ಒತ್ತಡದಲ್ಲಿ ಸದಾ ಬೇಯತ್ತಾ -
ತಿಂಗಳ ಕೊನೆಯಲ್ಲಿ ನನ್ನದೇ ಖಾಲಿ ಖಿಸೆಯನ್ನು ನೋಡಿಕೊಂಡು ಸ್ವಾನುಕಂಪದಲ್ಲಿ ತೇಲುತ್ತಾ -
ದಾರಿ ಬದಿಯ ಭಿಕ್ಷುಕರನ್ನು ಬೈದು ಪುಡಿಗಾಸಿಗೆ ಮಾಲೀಕನೆದುರು ಕೈಚಾಚಬೇಕಾದ ನೋವನ್ನು ಮರೆಯುತ್ತಾ -
ನಿದ್ದೇಲಿ ಕಂಡ ಬದುಕನ್ನು ನನಸಾಗಿಸಿಕೊಳ್ಳಲು ಖಾಲಿ ಖಿಸೆಯೇ ಅಡ್ಡಗೋಡೆಯಂತೆನಿಸಿ, ಇನ್ಯಾರದೋ ತುಂಬಿದ ಖಿಸೆ ಅಣಕಿಸಿದಂತೆನಿಸಿ ಅವರೆಡೆಗೆ ಈರ್ಷ್ಯೆ ಪಡುತ್ತಾ -
ಆ ಈರ್ಷ್ಯೆ ಕ್ರಮೇಣ ವ್ಯವಸ್ಥೆಯೆಡೆಗೆ ತಿರುಗಿ ಇಡೀ ವ್ಯವಸ್ಥೆಯನ್ನೇ ಅವಕಾಶವಾದಾಗೆಲ್ಲ ಹಳಿಯುತ್ತಾ -
ಚಂದಮಾಮದ ರಾಜಕುಮಾರಿಯನ್ನು ಸಪ್ತ ಸಾಗರ ದಾಟಿ ಗೆದ್ದು ತರುವುದಿರಲಿ ಕನಸಿಗೂ ಕರೆಯಲಾಗದ ಅಸಹಾಯ ನಿಟ್ಟುಸಿರೊಂದಿಗೆ -
ಒಂದು ಸಾಮಾನ್ಯ ಬದುಕನ್ನು ರೂಪಿಸಿಕೊಳ್ಳಲೂ ಪರದಾಡುತ್ತಾ -
ಎಲ್ಲ ಬಣ್ಣ ಬಣ್ಣದ ಪ್ರೇತಗಳ ನಡುವೆ ನಾನೂ ಒಂದು ಬಣ್ಣದ ಪ್ರೇತವಾಗಿ ಜೀವಿಸುತ್ತಿದ್ದೇನೆ...


ಇಲ್ಲಿ ಚಂದ್ರನಿರುತ್ತಾನೆ - ಆದರೆ ಬೆಳದಿಂಗಳ ತಂಪಿಲ್ಲ...
ನಗುವಿದೆ - ಆದರೆ ಆನಂದದ ಸೊಬಗಿಲ್ಲ...
ಸುಖವಿದೆ - ಆದರೆ ನೆಮ್ಮದಿಯ ಸಂತೋಷವಿಲ್ಲ...
ಕನಸುಗಳನ್ನೂ ನಿರ್ಭಾವುಕವಾಗಿಸಿ - ಬದುಕನ್ನು ಯಾಂತ್ರಿಕವಾಗಿಸುವ ಮಾಂತ್ರಿಕ ಶಕ್ತಿಯ ಮಹಾನಗರದ ಕಡೆಗೊಂದು ಭಯದ ನೋಟ ಬೀರುತ್ತಾ ಅದೇ ಮಹಾನಗರದ ಅಂಗವಾಗಿ ಜೀವಿಸುತ್ತಿದ್ದೇನೆ...


ಮಹಾನಗರದೆಡೆಗೆ ಹೆಜ್ಜೆ ಇಡುವಾಗ ಒಂದು ಕನಸು ಮೂಡಿತ್ತು.
ಅಜ್ಞಾತ ಬೀದಿಗಳಲ್ಲಿ ಅಲೆಮಾರಿಯಾಗುವ ಕನಸು.
ಬೆಂಗಳೂರು ಮಹಾನಗರದ ರಸ್ತೆಯ ತಿರುವುಗಳಲ್ಲಿ ಆ ಕನಸು ನನಸಾಯ್ತು.
ಮಹಾನಗರಗಳ ವೈಶಿಷ್ಟ್ಯವೇ ಅದು.
ಅಲ್ಲಿ ನಿತ್ಯ ಓಡಾಡುವ ದಾರಿಗಳಲ್ಲೂ ನಾವು ಅಜ್ಞಾತರೇ - ಶುದ್ಧ ಅಪರಿಚಿತರೇ.
ಮಹಾನಗರಗಳು ಕೊಡುವ ಸುಖಗಳಲ್ಲಿ ಅದೂ ಒಂದು.
ವಿಪರ್ಯಾಸವೆಂದರೆ ದುಃಖವೂ ಅದೇ.


ಬೇರು ಹರಿದುಕೊಂಡು ಆ ಊರ ಬಿಟ್ಟು ಈ ಊರ ಸೇರಿ ಹೊಸ ಸಾಧ್ಯತೆಗಳ ಅರಸಿ ಬದುಕಿಗಾಗಿ ಇಲ್ಲ ಬದುಕಿರುವುದಕ್ಕಾಗಿ ಬಡಿದಾಡಲು ಕಾರಣ - ಬದುಕು ಕರುಣಿಸಿದ ಹಠಾತ್ ತಿರುವು.


ದೇಹ ಜವರಾಯನ ಊಳಿಗದ ಆಳು...
ಮನಸಿಗೆ ಬದುಕಿನ ಹಂಬಲ ತೀವ್ರ...
ಒಂದು ವಾಸ್ತವ - ಇನ್ನೊಂದು ಕನಸು...
ಎರಡರ ನಡುವೆ ಬುದ್ಧಿ ಅತಂತ್ರ.....
                     
                                             ***)(%)(%)(***


ಅಲ್ಲಿ - ಇಲ್ಲಿಗಳ ನಡುವೆ : ಕತ್ತಲು ಕವಿದ ಬದುಕು...


ವಾಸ್ತವದ ಸುನಾಮಿಗೆ ಸಿಕ್ಕಿ ನಿಷ್ಪಾಪಿ ಕನಸುಗಳ ಸಾವು...


ನಿತ್ಯ ನಿರಾಯಾಸವಾಗಿ ಏರುವ ಗುಡ್ಡ - ಇಂದೇಕೋ ಏದುಸಿರು.
ನಿತ್ಯ ಎತ್ತುವ ಭಾರ - ಇಂದು ಹೆಗಲೇರಲೊಲ್ಲದು.
ಎಲ್ಲೋ ಉಸಿರ ನಾಳದಲ್ಲಿ ಅಡಿಕೆ ಸಿಕ್ಕಂಥ ಭಾವ.
ಮೊದಲಾಗಿ ಎದೆಯ ಮೂಲೆಯಲ್ಲಿ ಸಣ್ಣ ನೋವು - ಅದು ನಿಧಾನವಾಗಿ ಮೈಯೆಲ್ಲ ವ್ಯಾಪಕ.
ಬೆನ್ನು ಮೂಳೆಯಲ್ಲಿ ಸಣ್ಣ ನಡುಕ.
ನರನರಗಳಲ್ಲೂ ಅಸಹಜ ಎನಿಸುವ ಕಂಪನ.
ಏನೂ ಇಲ್ಲದಿದ್ದರೂ ತಲೆಯೆಲ್ಲ ಭಾರಭಾರ.
ಸುತ್ತ ಸುತ್ತುವ ಭೂಮಿ.
ಹಾಡ ಹಗಲಲ್ಲೇ ಕಣ್ಣ ಮುಂದೆ ನಕ್ಷತ್ರಗಳು.
ಕಳೆದ ಹತ್ತಾರು ವರ್ಷ ಕಾಲ ನಡೆದ ಬಿಡುಬೀಸು ನಡಿಗೆ, ದಿನದ ಹತ್ತಾರು ಘಂಟೆ ದೇಹದಲ್ಲಿ ಸಣ್ಣ ನಸನಸೆಯೂ ಇಲ್ಲದೇ ದುಡಿದ ದುಡಿಮೆ ಎಲ್ಲ ಸುಳ್ಳು ಎನ್ನಿಸುವಂತೆ ಈಗೀಗ ಸಣ್ಣ ಕೆಲಸಕ್ಕೂ, ಮಾರು ದೂರದ ನಡಿಗೆಗೂ ಕಾಡುವ ಆಯಾಸ.
ಕೂತವನು ತಕ್ಷಣ ಎದ್ದಾಗಲೂ, ಬಾಗಿದವನು ತಕ್ಷಣ ನೆಟ್ಟಗೆ ನಿಂತಾಗಲೂ ಚಡಪಡಿಸಿ ಒದ್ದಾಡುವ ದೇಹ.
ಒಂದು ಕ್ಷಣ ನಿಂತಂತಾಗುವ ಉಸಿರು.
ಕಣ್ಣ ಮುಂದೆ ಬರೀ ಕತ್ತಲು.
ದೇಹದಲ್ಲಿ ಎಲ್ಲಿ ಏನಾಯ್ತೆಂದು ತೋಚದೇ ಬುದ್ಧಿ ಅಸ್ತವ್ಯಸ್ತ.
ಆಸ್ಪತ್ರೆಯೆಡೆಗೆ ಹೆಜ್ಜೆ...
ಮೊದಲು ಇ.ಸಿ.ಜಿ. ಆಮೇಲೆ ಸ್ಕ್ಯಾನಿಂಗು ಇನ್ನೂ ಏನೇನೋ...
ಅರ್ಥವಾದದ್ದು ಈ ಎಲ್ಲ ಬೆಳವಣಿಗೆಗಳ ಮೂಲ ಹೃದಯ ಎಂಬುದಷ್ಟೇ...
ಹಾಗಾದರದಕ್ಕೆ ಉತ್ತರ ಎಂದು ವೈದ್ಯರನ್ನು ಕೇಳಿದರೆ ಸಿಕ್ಕಿದ್ದು ಬರೀ ಅವರ ಅಸಹಾಯಕ ನೋಟ ಮತ್ತು ಹಾರಿಕೆಯ ಭರವಸೆ.
ಅಲ್ಲಿಂದ ಶುರುವಾದದ್ದು ದವಾಖಾನೆಯಿಂದ ದವಾಖಾನೆಗೆ, ವೈದ್ಯರಿಂದ ವೈದ್ಯರೆಡೆಗೆ ಅಲೆದಾಟ...
ಆಯುರ್ವೇದದ ಅರಿಷ್ಠಗಳಿಂದ (ಅರ್ಜುನಾರಿಷ್ಠಗಳಂಥ ಔಷಧಿಗಳು), ಹೋಮಿಯೋಪತಿಯ ಸಕ್ಕರೆ ಗುಳಿಗೆಗಳಿಂದ, ಹಳ್ಳಿ ವೈದ್ಯರ ಕಹಿಮದ್ದಿನವರೆಗೆ ಎಷ್ಟೆಲ್ಲ ಏನೇನೆಲ್ಲ ಆರೈಕೆಗಳು - ಪಥ್ಯಗಳು.
ಅವೆಲ್ಲವುಗಳಿಂದ ಔಷಧಿ ಅಂದರೆ ದೇಹ ಸಂಕುಚಿತವಾಗುವಂತಾದದ್ದು ಬಿಟ್ಟರೆ ಇನ್ನೇನೂ ಸಾಧನೆಯಾಗಿಲ್ಲ...
ವೈದ್ಯರ ಭರವಸೆಗಳೂ ನಂದುತ್ತ ಬಂದವು.
ಪಾಪ ಅವರುಗಳಿಗೇ ಇಲ್ಲದ ಭರವಸೆಯನ್ನು ನನಗೆಲ್ಲಿಂದ ತುಂಬಿಯಾರು...
ಎಲ್ಲ ಹೇಳಿದ್ದು ಒಂದೇ ಮಾತು ಇದು ತುಂಬ ಅಪರೂಪದ ಖಾಯಿಲೆ.
ಇದಕ್ಕೆ ಸರಿಯಾದ ಮದ್ದು ವೈದ್ಯಲೋಕಕ್ಕಿನ್ನೂ ದಕ್ಕಿಲ್ಲ.
ಜೀವನ ವಿಧಾನ ಬದಲಿಸಿಕೊಳ್ಳಿ ಅಷ್ಟೆ.
ಆನಂತರ ಗೆಳೆಯನ ಒತ್ತಾಯಕ್ಕೆ ತಜ್ಞ ವೈದ್ಯರನ್ನರಸಿ ಮಹಾನಗರದ ದೊಡ್ಡಾಸ್ಪತ್ರೆಯೆಡೆಗೆ ನನ್ನ ಸವಾರಿ...


ಚಟ್ಟದ ಮೇಲೆ ಮಲಗಿ ಪ್ರಸ್ಥದ ಕನಸು ಕಾಣುವ ಮನಸು ...


'ಜಯದೇವ' : ಸಾವಿಗೆ ನಾಮಕರಣ...


ಬೆಂಗಳೂರು ಮಹಾನಗರದ ದೊಡ್ಡಾಸ್ಪತ್ರೆಯ ಅಂಗಳದಲ್ಲಿ ಅಬ್ಬೆಪಾರಿಯಂತೆ ನಿಂತಿದ್ದೆ. 
'ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ'ಯ ಆವರಣದಲ್ಲಿ ಶಿವರಾತ್ರಿಯಂದು ನಮ್ಮೂರ ಜಾತ್ರೆಯಲ್ಲಿ ಸೇರುವಷ್ಟೇ ಜನ ಸೇರಿದ್ದರು.
ರೋಗಿಗಳು, ರೋಗಿಗಳ ಜೊತೆ ಬಂದವರು, ವೈದ್ಯರು, ದಾದಿಯರು ಎಷ್ಟೊಂದು ಜನ...
ರೋಗಿಗಳು ಮತ್ತವರ ಬಂಧುಗಳ ಮುಖಗಳಲ್ಲಿ ಏನೋ ದುಗುಡ ಧಾವಂತವಿದ್ದರೆ, ವೈದ್ಯರು ದಾದಿಯರೆಲ್ಲ ಏನೋ ಗಡಿಬಿಡಿಯಿಂದ ಓಡಾಡುತ್ತಿದ್ದರೆ, ಅವನ್ನೆಲ್ಲ ಮೊದಲ ಬಾರಿ ನೋಡ್ತಿರೋ ನನ್ನಲ್ಲಿ ಏನೋ ಅವ್ಯಕ್ತ ಶೂನ್ಯ ಆವರಿಸಿತ್ತು.
ಇಲ್ಲಿಯೂ ಮತ್ತದೇ ಪರೀಕ್ಷೆಗಳ ಪುನರಾವರ್ತನೆ..
ಸಾಮಾನ್ಯ ಪರೀಕ್ಷೆಯಿಂದ ಪ್ರಾರಂಭವಾಗಿ ಇ.ಸಿ.ಜಿ., ಸ್ಕ್ಯಾನಿಂಗುಗಳ ನಂತರ ವೈದ್ಯರೆಂದದ್ದು ಇನ್ನೂ ದೊಡ್ಡ ಮತ್ತು ಅಂತಿಮ ಪರೀಕ್ಷೆ ನಡೆಸಬೇಕು. ಮತ್ತದಕ್ಕೆ ಒಳರೋಗಿಯಾಗಿ ಸೇರಿಕೊಳ್ಳಬೇಕೆಂದು..


ಎರಡನೆ ದಿನ ಒಳರೋಗಿಯಾಗಿ ಹೋಗುವ ಹೊತ್ತಿಗೆ ನಾನು ಆ ವಾತಾವರಣಕ್ಕೆ ಹೊಂದಿಕೊಂಡಿದ್ದೆ.
ಕಾರಣ ನಂಗೆ ರೋಗ ಹಳೆಯದು.
ಪರೀಕ್ಷೆಯಷ್ಟೇ ಹೊಸತು.
ಮನದಲ್ಲಿದ್ದ ಶೂನ್ಯದ ಜಾಗದಲ್ಲಂದು ಬರೀ ಕುತೂಹಲವಷ್ಟೇ ಉಳಕೊಂಡಿತ್ತು.
ರೋಗದ ತೀವ್ರತೆ ಮತ್ತು ಹೆಸರಿನೆಡೆಗಿನ ಕುತೂಹಲ.
ಮಾರನೆ ದಿನ ಆಸ್ಪತ್ರೆಯ ವಸ್ತ್ರ ತೊಡಿಸಿ ನನ್ನನ್ನು ನನ್ನವರಿಂದ ಬೇರ್ಪಡಿಸಿ ಕೇವಲ ಪರೀಕ್ಷಾಪೂರ್ವ ರೋಗಿಗಳಿರುವ ಕೊಠಡಿಗೊಯ್ದು ಕೂರಿಸಿದಾಗ ನೋವೆನಿಸಿದ್ದು ಅಲ್ಲಿದ್ದ ನನಗಿಂತ ಚಿಕ್ಕ, ಇನ್ನೂ ಮುಗ್ಧತೆ ಆರದ ಅಬೋಧ ಕಂಗಳ ಮಕ್ಕಳನ್ನು ನೋಡಿ.
ಆಗಷ್ಟೇ ಹುಟ್ಟಿದ ಮಗುವನ್ನು ನೋಡಿ.
ಕನಸು ಕಾಣುವ ವಯಸು ಮೂಡುವ ಮುನ್ನವೇ ಆಸ್ಪತ್ರೆಗಳೊಂದಿಗೆ ಸರಸ - ಆ ಮಕ್ಕಳನ್ನು ಕಂಡು ನನ್ನಲ್ಲಿ ಇರಬಹುದಾಗಿದ್ದ ಅಲ್ಪ ಸ್ವಲ್ಪ ಭಯ, ನೋವುಗಳೂ ಸತ್ತು ಹೋದವು.
ಮೊದಲಿನವರ ಪಾಳಿ ಮುಗಿದು ನನ್ನ ಸರದಿ ಬರುವಾಗ ಮಧ್ಯಾಹ್ನ ಮಗ್ಗಲು ಬದಲಿಸಿತ್ತು...


ಆಂಜಿಯೋಗ್ರಾಮ್ ನ (angiogram) ಪರೀಕ್ಷಾ ಕೊಠಡಿ ಮತ್ತು ಆಸುಪಾಸಿನ ಪರೀಕ್ಷಾ ಕೊಠಡಿಗಳಲ್ಲಿರುವ ಬುಲ್ಡೋಜರ್ ಗಳಂಥ ದೊಡ್ಡ ದೊಡ್ಡ ಯಂತ್ರಗಳನ್ನು ನೋಡಿಯೇ ರೋಗಿಯ ಅರ್ಧ  ಉಸಿರು ನಿಂತಿರುತ್ತೆ.
ಆ ಯಂತ್ರಗಳಡಿಯಲ್ಲಿ ನಾವೇ ಮಲಗಬೇಕಾಗಿ ಬಂದಾಗ..???


ತೊಡೆಯ ನರವನ್ನು ಕೊಯ್ದು - ಎರಡು ಮಾರುದ್ದದ ನಳಿಕೆಯನ್ನು ಅಲ್ಲಿಂದ ಹೃದಯದವರೆಗೆ ತೂರಿಸಿ ನನ್ನ ಹೃದಯಾನ ನನಗೇ ತೋರಿಸಿ ಓಹ್...ಅಮೇಜಿಂಗ್..!!!
ವೈದ್ಯರು ಮಾತಾಡಿಕೊಳ್ಳುವ ವೈದ್ಯಕೀಯ ಭಾಷೆ ಅರ್ಥವಾಗದಿದ್ದರೂ ಅದರ ಭಾವ ಅರ್ಥವಾಗಿ - ಸಮಸ್ಯೆ ನಾನಂದುಕೊಂಡದ್ದಕ್ಕಿಂತ ಜಟಿಲವಿದೆ ಮತ್ತು ಈವರೆಗೆ ಅನುಭವಿಸಿದ್ದಕ್ಕಿಂತ ಹೆಚ್ಚಿನದನ್ನು ಇನ್ನು ಮೇಲೆ ಅನುಭವಿಸಬೇಕಿದೆ ಎಂಬುದಷ್ಟು ಗೊತ್ತಾಯ್ತು.
ವೈದ್ಯರನ್ನು ಅಲ್ಲೇ ಕೇಳಿದ್ದಕ್ಕೆ ಎಲ್ಲಾ ನಾಳೆ ಹೇಳ್ತೀನಿ ಈಗ ವಿಶ್ರಾಂತಿ ತಕೋ ಅಂದರಷ್ಟೇ.
ಮತ್ತೆ ಸಸ್ಪೆನ್ಸ್...


ಒಳರೋಗಿಯ ಮಂಚದಲ್ಲಿ ಅಲ್ಲಾಡದಂತೆ ಮಲಗಿರುವಾಗ ಕಂಡದ್ದೆಂದರೆ - ಎಲ್ಲ ರೋಗಿಗಳ ನೋವಿಗೂ ಸಮಾನವಾಗಿ ಮಿಡಿಯುವ ದಾದಿಯರ ಹೃದಯವಂತಿಕೆ, ನೂರಾರು ರೋಗಿಗಳನ್ನು ಸಂಭಾಳಿಸಿದ ಮೇಲೂ ನಗುತ್ತ ಮಾತಾಡುವ ವೈದ್ಯರ ಸಹನೆ, ತಾಯಂತೆ ಸಲಹಿದ ಗೆಳೆಯನ ಹಾಗೂ ಬಂಧುಗಳ ಪ್ರೀತಿ...


ಮರುದಿನ ಆಸ್ಪತ್ರೆಯಿಂದ ಹೊರಬರುವ ಮುನ್ನ ವೈದ್ಯರು ನಮ್ಮಗಳ ಮುಂದೆ (ನಾನು,ಅಕ್ಕ,ಚಿಕ್ಕಪ್ಪ ಮತ್ತು ಮಿತ್ರ) ನನ್ನ ಪರೀಕ್ಷಾ ಫಲಿತಾಂಶ ಹಿಡಿದು ಹೇಳಿದ್ದು ಮೊದಲಿನ ವೈದ್ಯರುಗಳು ಹೇಳಿದ್ದನ್ನೇ - ಇನ್ನಷ್ಟು ಕರಾರುವಾಕ್ಕಾಗಿ.
ಖಡಾಖಂಡಿತವಾಗಿ.
ನಮ್ಮ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರಿಸುವಾಗ ಅಂಥ ಅನುಭವೀ ತಜ್ಞ ವೈದ್ಯರು ಕೂಡ ಅಸಹಾಯ ನೋಟ ಬೀರಿ, ತಡವರಿಸಿದ್ದು, ಅಕ್ಕನ ಕಣ್ಣಲ್ಲಿನ ನೀರಿಗಾಗಿ ಅವರು ಕ್ಷಮೆಯಾಚಿಸಿದ್ದು ನನ್ನ ಬದುಕಿನ ಕಡೆಗಾಲಕ್ಕೆ ವಿಷಾದ ವ್ಯಕ್ತ ಪಡಿಸಿದಂತಿತ್ತು...


ವೈದ್ಯಲೋಕದಲ್ಲಿ ಶಾಶ್ವತ ಪರಿಹಾರವಿಲ್ಲದ, 2 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳೋ, ಹೆಚ್ಚಿನ ಸಂದರ್ಭಗಳಲ್ಲಿ ಹಠಾತ್ ಮರಣ ಕಲ್ಪಿಸುವ, ಬದುಕಿರುವಷ್ಟು ಕಾಲ ಸಣ್ಣ ಪುಟ್ಟ ಕಿರಿಕಿರಿಗಳಿಂದ - ನೋವುಗಳಿಂದ ಕಾಡಿ, ಮನಸು ದೇಹಗಳ ಜರ್ಜರಿತವಾಗಿಸುವ, ಮೇಲ್ನೋಟಕ್ಕೆ ಕಾಣಿಸದೇ ಒಳಗೇ ಕೊಲ್ಲುವ ಅಪರೂಪದ ರೋಗಕ್ಕೆ ಪರಿಹಾರವೆಂದರೆ ಜೀವನ ವಿಧಾನದ ಬದಲಾವಣೆ.
ಹೇಗೆಂದರೆ ದೇಹ ಮತ್ತು ಮನಸಿಗೆ ಒತ್ತಡವಾಗುವಂತಹ ಶ್ರಮದ ಕೆಲಸಗಳನ್ನು ಬಿಟ್ಟು - ಸಣ್ಣ ಪುಟ್ಟ ಕಾರ್ಯಗಳನ್ನು ಮಾಡಿಕೊಂಡು - ವೇಗದ ದಿನಮಾನದಲ್ಲಿ ನಿಧಾನ ಗತಿಯ ಬದುಕ ರೂಢಿಸಿಕೊಂಡು - ದುಡಿದ ದುಡ್ಡಲ್ಲಿ ಹೆಚ್ಚಿನ ಪಾಲನ್ನು ಆಸ್ಪತ್ರೆ ಮತ್ತು ಗುಳಿಗೆಗಳಿಗೇ ವ್ಯಯಿಸುತ್ತಾ - ಸಾವನ್ನು ಮುಂದೂಡುವ ಪ್ರಯತ್ನದಲ್ಲಿ ಇರುವಷ್ಟು ಕಾಲ ನಗುನಗುತ್ತಾ ಬದುಕಿರುವುದು.

ದಿನಕ್ಕೊಂದು ಹೊಸ ಆಸೆ ಕನಸುಗಳು ಹುಟ್ಟಿ ನಿಲ್ಲುವ ವಯಸಲ್ಲಿ ಎಲ್ಲ ಆಸೆ ಕನಸುಗಳನ್ನು ಪ್ರಯತ್ನಪೂರ್ವಕವಾಗಿ ಅದುಮಿಟ್ಟು ಬದುಕಿರುವುದು...
ಈ ಬದುಕು ನನ್ನದಲ್ಲ ಎನ್ನುವಂತೆ...

ಬದುಕಿನೆಡೆಗೆ ಕಡು ವ್ಯಾಮೋಹಿ ಹುಡುಗ ನಾನು.
ನನ್ನ ಮೋಹವೆಲ್ಲ ಕಳಚಿಬೀಳುವಂತೆ - 
ನನ್ನ ಕನಸುಗಳ -
ನನ್ನ ಆಸೆ ಆಕಾಂಕ್ಷೆಗಳೆಲ್ಲದರ ಸಾವಿಗೆ -
ವೈದ್ಯಲೋಕ ಇಟ್ಟ ಮಾರುದ್ದದ ಹೆಸರು - - -
HYPERTROPHIC OBSTRUCTIVE CARDIOMYOPATHY.....
ಈ ಹೆಸರು ನಂಗಿನ್ನೂ ಕಂಠಸ್ತವಾಗಿಲ್ಲ...:):):)

ಸ್ವಾವಲಂಬಿ ಸಾವಿನೆಡೆಗೆ ಭಯವಿಲ್ಲ.
ಪರಾವಲಂಬಿಯಾಗುವ ಬದುಕಿನೆಡೆಗೆ ಸಣ್ಣ ಕಂಪನ...



                                             {s}{s}{s}{s}{s}



ಮರೆಯಲಾಗದ ಚಿತ್ರಗಳು.....
ಹೊಸ ಕನಸುಗಳ ಹೆಣೆಯಲಾರದ ಮನಸಲ್ಲಿ...
ಹಳೆ ನೆನಪುಗಳದೇ ಗದ್ದಲ - 
ಬರೀ ಗೊಂದಲ.....












ನಿಮ್ಮನ್ನೂ ಸೇರಿದಂತೆ ಒಲವ ಧಾರೆ ಹರಿಸಿ -

ಬದುಕಿಗೆ ಬಣ್ಣತುಂಬಿ -
ಹೊಸ ಕನಸಿಗೆ ಜೀವ ನೀಡಲು ಪ್ರೇರಕ ಶಕ್ತಿಯಾದ ಎಲ್ಲ ಜೀವಗಳಿಗೆ -
ನನ್ನ ನೆನಕೆಗಳು ಸಲ್ಲುತ್ತವೆ...
ಈ ಪ್ರೀತಿ ಹೀಗೇ ಇರಲಿ ಸದಾ...


\\\***@@@@@***///

Wednesday, January 25, 2012

ಗೊಂಚಲು - ಇಪ್ಪತ್ತಾರು....

ಅಕ್ಷರ ಸಂಹಾರಕ್ಕೀಗ ಒಂದು ಸಂವತ್ಸರ...


ಸ್ನೇಹಿತರೇ -


ಬರವಣಿಗೆ ಗೊತ್ತಿಲ್ಲ - ಆದರೆ ಅಕ್ಷರ ವ್ಯಾಮೋಹಿ ನಾನು...
ಓದು ನನ್ನ ಆಸಕ್ತಿ - ಆದರೂ ಅಷ್ಟೊಂದು ಓದಿಕೊಂಡಿಲ್ಲ...
ಮಾತೆಂದರೆ ಅತಿ ಪ್ರೀತಿ - ಹಾಗಂತ ಒಳ್ಳೆಯ ಮಾತುಗಾರನೇನಲ್ಲ...

ಕಾವ್ಯವಂತೆ - ಕವನವಂತೆ...
ಗದ್ಯವಂತೆ - ಪದ್ಯವಂತೆ...
ನವ್ಯವಂತೆ - ನವೋದಯವಂತೆ...
ಇನ್ನೂ ಏನೇನೋ ವಿಧವಿಧದ ವಿಚಾರಗಳಂತೆ - ಎಲ್ಲ ಸೇರಿ ಸಾಹಿತ್ಯವಂತೆ...
ಆದರೆ ಅವೆಲ್ಲ ನನ್ನ ಬುದ್ಧಿಯ ನಿಲುಕಿನವಲ್ಲ.


ಬದುಕಿನ ವಿಚಿತ್ರ ವೈರುಧ್ಯಗಳು - ಸಾವಿನ ನಿಗೂಢತೆ - ಪ್ರಕೃತಿಯ ಹರಹು ಮತ್ತು ಚೆಲುವು - ಓದಿದ ಓದು - ನೋಡಿದ ನೋಟ - ಯಾರು ಯಾರೋ ನೀಡಿದ ನಿಷ್ಕಾರಣ ಒಲವು - ಬದುಕು ಕರುಣಿಸಿದ ವೈವಿಧ್ಯಮಯ ಅನುಭವಗಳೆಲ್ಲ ಸೇರಿ ಮನದಿ ಗಿಜಿಗುಡುವ ಭಾವಗಳಾಗಿ ರೂಪು ತಳೆದು - ಒಳಗೆ ಭಾವಗಳ ಒತ್ತಡ ತಾಳದಾದಾಗ - ಆ ಭಾವಗಳನೆಲ್ಲ ಅಭಿವ್ಯಕ್ತಿಸಲು ಅಕ್ಷರದ ಮೊರೆ ಹೋದದ್ದಿದೆ...
ಮನಸಿಗೆ ತೋಚಿದ್ದನ್ನ ಕಾಗದದಿ ಗೀಚಿದ್ದಿದೆ...


ಹಾಗೆ ತೋಚಿದ್ದು - ಗೀಚಿದ್ದನ್ನೆಲ್ಲ ಈಗೊಂದು ಸಂವತ್ಸರದ ಹಿಂದೆ ಸಾರ್ವಜನಿಕ ಡೈರಿಯಂಥ ತಾಣ ಬ್ಲಾಗ್ ನ ಮಾಲೀಕನಾಗಿ ಅದರಲ್ಲಿ ಬರೆದು ಪ್ರಕಟಿಸುವ ಹಂಬಲವಾಯ್ತು.
ಹಾಗೆ ಬ್ಲಾಗ್ ಪ್ರಾರಂಭಿಸುವಾಗ ಖಂಡಿತ ಅಂದುಕೊಂಡಿರಲಿಲ್ಲ - ನಾನು ಇಷ್ಟೊಂದು ದಿನ ಬರೆದೇನು,ಅದನ್ನು ಇಷ್ಟೆಲ್ಲ ಜನ ಓದಿಯಾರೆಂದು.
ಬರೆದ ಬರಹಗಳಲ್ಲಿ ಹೆಚ್ಚಿನವು ಬರೀ ಜೊಳ್ಳೆಂದು ನಂಗೂ ಗೊತ್ತು...
ಎಷ್ಟೋ ಬಾರಿ ನಾ ಬರೆದದ್ದು ನನಗೇ ಅರ್ಥವಾಗದೇ ಹೋದದ್ದಿದೆ...
ಹೇಳಬೇಕಾದದ್ದನ್ನ ಸ್ಪಷ್ಟ ಮತ್ತು ಪೂರ್ಣವಾಗಿ ಹೇಳಿಲ್ಲ ಅನ್ನಿಸಿದ್ದಿದೆ...
ಬರಹಾನ ಬರೀ ದ್ವಂದ್ವ ಕಾಡಿದ್ದಿದೆ...  
ಏನೋ ಬರೆಯ ಹೋಗಿ ಇನ್ನೇನೋ ಬರೆದದ್ದಿದೆ... 
ಆದರೂ ಬರೆಯುವ ಹಂಬಲ ಕಡಿಮೆಯಾಗಿಲ್ಲ...
ಕಾರಣ - 
ಮನಸನ್ನು ಬೆತ್ತಲಾಗಿಸಿ ನನ್ನೊಳಗನ್ನು ತೋರುವ ಹಂಬಲವಾ.? 
ಗುರುತಿಸಿಕೊಳ್ಳಬೇಕೆಂಬ ಚಡಪಡಿಕೆಯಾ.? 
ಅಕ್ಷರ ವ್ಯಾಮೋಹವಾ.? 
ಅಥವಾ ಇವೆಲ್ಲ ಸೇರಿದ ಇನ್ಯಾವುದೋ ಭಾವದ ಒತ್ತಡವಾ.?
ಗೊತ್ತಾಗುತ್ತಿಲ್ಲ...

ಇದೀಗ ನನ್ನೊಳಗಣ ಹುಚ್ಚು ಭಾವಗಳ ಹಂಚಿಕೊಳ್ಳುವ ನನ್ನ "ಭಾವಗಳ ಗೊಂಚಲು" ಬ್ಲಾಗಿಗೆ ಒಂದು ವರ್ಷದ ಪ್ರಾಯ...


ಮೊದಮೊದಲು ಭಯವಿತ್ತು ನನ್ನ ಬರಹದ ಓದುಗ ನಾನೊಬ್ಬನೇ ಆದೇನಾ ಅಂತ...
ಆದರೆ
ನಿಮ್ಮ ಪ್ರೀತಿ ಔದಾರ್ಯ ತುಂಬ ದೊಡ್ಡದು.
ನನ್ನ ಬರಹಗಳನ್ನೂ ಓದಿದ್ದೀರಿ...
ಮೆಚ್ಚಿ ಬೆನ್ತಟ್ಟಿದ್ದೀರಿ...
ಬಹುಶಃ ಇಷ್ಟವಾಗದ್ದನ್ನ ಹೇಳದೇ ಮುಚ್ಚಿಟ್ಟು ಔದಾರ್ಯ ತೋರಿದ್ದೀರಿ...
ನಿಮ್ಮ ಈ ಒಲವ ಔದಾರ್ಯಕ್ಕೆ ನಾನು ಸದಾ ಋಣಿ...

ಅಕ್ಷರ ಪ್ರೀತಿ ನಮ್ಮನ್ನು ಬೆಳೆಸಲಿ...
ಈ ಸ್ನೇಹ ಬಾಂಧವ್ಯ ಸದಾ ಜಾರಿಯಿರಲಿ...

ವಿಶ್ವಾಸ ವೃದ್ಧಿಸಲಿ...
                        
















 ಕೃತಜ್ಞತೆಗಳೊಂದಿಗೆ -
                                                                  ಶ್ರೀವತ್ಸ ಕಂಚೀಮನೆ.