Wednesday, August 29, 2012

ಗೊಂಚಲು - ನಲವತ್ತು + ಒಂದು.....



ಅಸಂಬದ್ಧ ಆಲಾಪಗಳು.....

ಮರಣಕ್ಕೆ ಮುಹೂರ್ತ ಇಟ್ಟ ದಿನದಿಂದ ಬದುಕಿಗೆ ಹೊಸ ಬಣ್ಣ ಬಂದಿದೆ - ಮದುಮಗನ ಸಂಭ್ರಮ ಮತ್ತು ತಲ್ಲಣದಂತದ್ದು...

ಆಸೆಯೇ ದುಃಖಕ್ಕೆ ಮೂಲವೆಂದಾದರೆ - ನಾನು ದುಃಖವನ್ನೂ ಪ್ರೀತಿಸುತ್ತೇನೆ.
ಕಾರಣ ಆಸೆ ಕನಸುಗಳೆಲ್ಲ ಮುಗಿದ ದಿನ ಬದುಕು ಜಡವೆನ್ನಿಸುತ್ತೆ ನನಗೆ.
ಮನದಲ್ಲಿ ಈಡೇರದ ಆಸೆಗಳು, ಕಣ್ಣ ಮುಂದೆ ನನಸಾಗದ ಕನಸುಗಳು ಒಂದಷ್ಟಾದರೂ ಇಲ್ಲದೇ ಹೋದರೆ ಬದುಕು ಶಲ್ಲಿಲ್ಲದ ಗಡಿಯಾರದಂತೆನಿಸುತ್ತೆ.

ಸನ್ಯಾಸಿಯ ಪಾರಮಾರ್ಥಿಕ ಚಿಂತನೆ ಕೂಡಾ ಒಂದು ಆಸೆಯೇ ಅಲ್ಲವಾ..?
ಸಾವಿನಾಚೆಯ ಸುಖದ ಭ್ರಮೆಯ ಬಯಕೆ ಅಂತನ್ನಿಸುತ್ತೆ ನನಗೆ.
ಸರ್ವಸಂಗ ಪರಿತ್ಯಾಗಿಯೊಬ್ಬ (?) ತನಗಾದ ಜ್ಞಾನೋದಯವನ್ನು ಹಂಚಹೊರಟದ್ದು ತಾನು ಇತರರಲ್ಲಿ ತನ್ನ ನಂತರವೂ ಬದುಕಿರಬೇಕೆಂಬ ಆಳದ ಆಸೆಯಿಂದಲೇ ಇರಬಹುದಾ...??

ಒಂದಿಷ್ಟು ಒಳ್ಳೇತನ, ಮನಸಿನ ಕಳ್ಳತನ, ಒಂಚೂರು ನಗು, ಎರಡು ಹನಿ ಕಣ್ಣೀರು, ಸಣ್ಣ ಈರ್ಷ್ಯೆ, ಇಷ್ಟೇ ಇಷ್ಟು ಉದಾರತೆ, ಸೋಲುವ ಭಯ, ಗೆಲ್ಲುವ ಖುಷಿ, ಎದೆ ಉಬ್ಬಿಸೋ ವಿಶ್ವಾಸ, ತಲೆ ತಗ್ಗಿಸೋ ವಿನಯ, ಆಗೀಗ ಅವರಿವರಿಗೆ ಹಂಚೋ ವಿನಾಕಾರಣದ ಪ್ರೀತಿ ಎಲ್ಲವನ್ನೂ ಒಳಗೊಳ್ಳೋ ಮನುಷ್ಯರೆಂದರೇ ನಂಗಿಷ್ಟ.

ಮನುಷ್ಯ ದೇವರೋ ಇಲ್ಲಾ ದಾನವರೋ ಆಗಲು ಹೋಗಿ ಎರಡನ್ನೂ ಒಳಗೊಂಡ ತನ್ನತನದ ಖುಷಿಗಳ ಕಳೆದುಕೊಳ್ಳುವುದು ಎಷ್ಟು ಸರಿ.?

ಸತ್ತ ಮೇಲೆ ಸ್ವರ್ಗ - ನರಕಗಳ ಆಯ್ಕೆ ನನಗೇ ಕೊಟ್ಟರೆ ನಾನು ನರಕವನ್ನೇ ಆಯ್ದುಕೊಂಡೇನು.
ವೈರುಧ್ಯಗಳಿಲ್ಲದ ಬರೀ ಸುಖಗಳೇ ತುಂಬಿರುವ, ನಿನ್ನೆ ನಾಳೆಗಳ ಹಂಗಿಲ್ಲದ ಸ್ವರ್ಗಕ್ಕಿಂತ - ಕಾವಲಿ ಎಣ್ಣೆಯ ಬಿಸಿ, ಮಂಜುಗಡ್ಡೆಯ ತಂಪು, ಶಿಕ್ಷೆಯ ವೈರುಧ್ಯದಲ್ಲಿನ ಕೊರಗು ಮತ್ತು ಖುಷಿ ಎರಡೂ ಇರುವ ನರಕವೇ ಚಂದವೆನಿಸುತ್ತೆ ನನಗೆ.
ಪ್ರಶ್ನಿಸಲಾಗದ ಇಂದ್ರನ ದೊಡ್ಡಸ್ತಿಕೆ, ಮೇನಕೆಯ ಅದೇ ನೃತ್ಯ, ಊರ್ವಶಿಯ ಸಖ್ಯಗಳಲ್ಲಿ ಎಷ್ಟೆಂದು ಸುಖ ಕಾಣುವುದು.
ವೈವಿಧ್ಯವಿಲ್ಲದ ಸುಖವೂ ಬೇಸರ ತಂದೀತು...

ನಗುವಿಗೆ ಭಾವುಕ ಶಕ್ತಿ ತುಂಬುವುದು ನೋವಿನ ಅರಿವೇ ಅಲ್ಲವೇ..?
ಹತ್ತು ಸೋಲುಗಳ ನಂತರದ ಒಂದು ಪುಟ್ಟ ಗೆಲುವು ಎಷ್ಟೆಲ್ಲ ಖುಷಿ ತಂದೀತು.
ಸಾವಿನ ಭಯವಿಲ್ಲದ ಬದುಕಿಗೆ ಥ್ರಿಲ್ ಎಲ್ಲಿಯದು...!!!
:::
ಯಾರೂ ಕೆಟ್ಟವರಲ್ಲ.
ಅವರವರ ಭಾವದಲ್ಲಿ ಎಲ್ಲರೂ ಸಂಭಾವಿತರೇ.
ನನ್ನ ಕಣ್ಣಲ್ಲೇ ಏನೋ ಐಬಿದೆ.
ನನ್ನ ಕಣ್ಣ ಹರಿವಿನಾಚೆಯೂ ಒಂದು ಬದುಕಿರಬಹುದೇ...
ಅದೂ ಸೊಗಸಾಗಿಯೇ ಇರಬಹುದೇ...
ಉಹುಂ ನಂಗೆ ನಂಬೋಕಾಗ್ತಿಲ್ಲ. ಅಲ್ಲಲ್ಲ ನಂಗೆ ನಂಬೋ ಮನಸಿಲ್ಲ.
ಸಾಗರವನ್ನು ಕಲ್ಪಿಸಿಕೊಳ್ಳಲೂ ನಂಗೆ ಇಷ್ಟವಿಲ್ಲ.
ನನ್ನ ಮನಸೊಂದು ಬಾವಿ.
ಸಾಗರ ವಿಶಾಲವಂತೆ, ಅಗಾಧವಂತೆ, ಆದರೆ ಉಪ್ಪಂತೆ...
ಅಲ್ಲಿಗೆ ದೊಡ್ಡವರ ಬಣ್ಣ ಬಯಲಾಯ್ತಲ್ಲ.
ಹಿಡಿದಾಹ ತಣಿಸದ ಅಗಾಧತೆಯಿದ್ದೇನು - ನೈದಿಲೆ ತಾ ನಗುವ ಕಲ್ಯಾಣಿಯು ನಾನು...
ಆದರೂ ಸಾಗರವನ್ನೊಮ್ಮೆ ನೋಡಬೇಕಿತ್ತು.

ದೊಡ್ಡವನಾಗಬೇಕೆಂದರೆ ಬೆಳೆಯಬೇಕು.
ಅಮ್ಮಮ್ಮಾ ಬೆಳೆಯೋದೆಂದರೇನು ಸುಲಭವಾ...
ಭೂಗರ್ಭ ಸೀಳಿ, ಆಳಕ್ಕೆ ಬೇರು ಬಿಟ್ಟು, ನೀರು ಗೊಬ್ಬರ ಹೀರಿ, ಕಾಂಡವ ಗಟ್ಟಿಗೊಳಿಸಿ, ಚಿಗುರನು ಆಗಸದೆಡೆಗೆ ಅರಳಿಸಬೇಕು.
ಬಿಸಿಲ ಬೇಗೆಗೆ ಸುಡದೆ, ಮಳೆಯ ತಂಪಿಗೆ ನಡುಗದೆ, ಗಾಳಿಗೆ ಬಾಗಿ ಹೇಗೆ ಹೇಗೋ ಉಸಿರ ಹಿಡಿದಿಡಬೇಕು.
ಬಿಸಿಲು, ಮಳೆ, ಗಾಳಿ ಎಲ್ಲ ಬೇಕು - ಯಾವುದೂ ಹೆಚ್ಚಾಗಬಾರದು.
ಹೌದು ಇಷ್ಟೆಲ್ಲ ಮಾಡಿ ಬೆಳೆದು ಸಾಧಿಸೋದೇನು..??
ಚಂದಿರನನ್ನು ಇನ್ನಷ್ಟು ಹತ್ತಿರದಿಂದ ನೋಡಬಹುದೇನೋ...
ಚಂದ್ರನ ಮೇಲೇ ನಡೆದಾಡಿದ ಸಮರ್ಥನೂ ಮೊನ್ನೆ ಇಹವ ತೊರೆದು ನಡೆದನಂತೆ.
ಆದರೂ ಚಂದಿರನ ಮೇಲೆ ಮೊದಲ ಹೆಜ್ಜೆ ಇಟ್ಟಾಗ ಅದ್ಭುತ ರೋಮಾಂಚಕ ಅನುಭೂತಿ ಆಗಿರುತ್ತಲ್ವಾ...!!!
ಅಲ್ಲೆಲ್ಲೋ ಬೆಟ್ಟದ ಮೇಲೆ ಮೋಡ ಕೈಗೇ ಸಿಗುತ್ತಂತೆ ನಾಳೆ ಹೋಗ್ಬೇಕು...
:::

ಪಡೆದುಕೊಂಡೆನೆಂಬ ಹೊತ್ತಿಗೇ ಕಳೆದುಕೊಂಡೇನೆಂಬ ಭಯ...
ಇಲ್ಲಿ ಚಿಗುರಿ ಇನ್ನೆಲ್ಲೋ ಕಮರುವ ಮಧುರ ಭಾವ ಬಂಧಗಳು...
ಕಂಗೆಡಿಸುತ್ತೆ -
ಬೆಳೆಸಿಕೊಳ್ಳಲೂ, ಉಳಿಸಿಕೊಳ್ಳಲೂ ಆಗದ ನನ್ನೊಳಗಿನ ನನ್ನದೇ ಅಸಮರ್ಥ ಮಾನಸಿಕತೆ...
:::
***ಇದು ಸಾಹಿತ್ಯವಲ್ಲ - 
ಕ್ಷಣ ಕ್ಷಣಕೂ ಅದಲುಬದಲಾಗುವ ಆಸೆ ನಿರಾಸೆಗಳ ಆಗರವಾದ ಮನದ ವೈರುಧ್ಯಭಾವಗಳ (ಸಂಚಾರಿ ಭಾವಗಳ) ಆಲಾಪವಷ್ಟೇ...

ಯಾರೋ ಅಂದರು ನಿನ್ನದೂ ಒಂಥರಾ ಸಾಹಿತ್ಯ ಸೇವೆಯೆಂದು. ಆಶ್ಚರ್ಯವಾಯಿತು. ನನ್ನ ಬರಹ ಸಾಹಿತ್ಯದ ಯಾವ ಪ್ರಕಾರದ್ದೆಂಬುದೂ ಗೊತ್ತಿಲ್ಲದ ನಾನು ನನ್ನ ತೆವಲಿಗೆ ಅಕ್ಷರಗಳನು ಸಾಲುಗಳಲಿ  ಗೀಚಿಕೊಂಡರೆ  ಅದು ಸಾಹಿತ್ಯ ಸೇವೆ ಹೇಗಾದೀತೆಂದು...



Monday, August 20, 2012

ಗೊಂಚಲು - ಹತ್ತು ಗುಣಿಸು ನಾಲ್ಕು.....


ಹತ್ತಿರವೋ..?
ದೂರವೋ..??


ಮನಸು ಮಾತಾಡುವುದ ನಿಲ್ಲಿಸಿಬಿಟ್ಟಿದೆ...

ಉಸಿರಾಟದಲ್ಲೂ ಜಾಗತೀಕರಣದ ಗಾಳಿ...

ಮನೆ ಬಾಗಿಲಲ್ಲೇ ಸಿಗುತ್ತವೆ
ವಿಶ್ವದರ್ಜೆಯ ಮುಖವಾಡಗಳು...

'ಅಮ್ಮ' - 'ಮಮ್ಮಿ'ಯಾಗಿ ಹೆಣವೆನಿಸಿಕೊಂಡಳು
ತೊದಲು ನುಡಿಯಲ್ಲೂ ಮಣ್ಣಗಂಧವಿಲ್ಲ...

ತುಟಿ - ನಾಲಿಗೆಗಳಿಗೆ ದಿನವಿಡೀ ಬಿಡುವಿಲ್ಲ 
ಕಿವಿ ಬಿಸಿಯಾಗಿ ಹೋಗಿದೆ 
ಕುಣಿಯುತ್ತಿವೆ
ಭಾವಸೆಲೆಯಿಲ್ಲದ ಸಾವಿರಾರು ಒಣ ಶಬ್ದಗಳು...

ಹಸುಳೆಯ ಕೈಯಲ್ಲೂ ಗಣಕಯಂತ್ರ 
ಬೆರಳುಗಳು ಮಾತಾಡುತ್ತವೆ ಅಜೀರ್ಣವಾಗುವಷ್ಟು
ಅಲ್ಲೂ ಕಡ ತಂದ ಸಂದೇಶಗಳದ್ದೇ ಮೇಲುಗೈ...

ಎಲ್ಲೋ ಯಾರೋ ಮಡಿದ ಸುದ್ದಿಗೆ
ಸಾಮಾಜಿಕ ಜಾಲತಾಣದಲ್ಲೊಂದು ತುಂಬ ನೋವಿನ (?)
ಗೋಡೆ ಬರಹ...
ವೃದ್ಧಾಶೃಮದಲ್ಲಿ ತನ್ನಮ್ಮ ನಿತ್ಯವೂ ಸಾಯುತಿರುವುದರೆಡೆಗೆ
ಜಾಣ ಮರೆವು...

ಕಾರು ಬಂಗಲೆಗಳೆಲ್ಲ ಸಾಧನೆಯ ಅಳತೆಗೋಲುಗಳಾಗಿ,
ಗಳಿಕೆ - ಹೂಡಿಕೆಗಳೇ ಬದುಕಾಗಿ ಹೋಗಿ,
ಜೀವಿಸುವ ಖುಷಿಯ ಕಳೆದುಕೊಂಡ 
ವಿಶ್ವ ಮಾರುಕಟ್ಟೆಯಲ್ಲಿ
ಭಾವ - ಬಂಧಗಳೆಲ್ಲ
ಅನಾಥ ಶವಗಳು...:::(((

ಚಿತ್ರ ಕೃಪೆ : ಅಂತರ್ಜಾಲದಿಂದ...
ಸೂಚನೆ: ಈ ಬರಹದ ಇನ್ನಷ್ಟು ವಿಸ್ತಾರವಾದ ಓದಿಗೆ ಗೆಳೆಯ ಹುಸೇನ್ ರ ಈ ಬ್ಲಾಗ್ ನೋಡಿ:
http://nenapinasanchi.wordpress.com/2012/09/21/%E0%B2%85%E0%B2%A8%E0%B2%BE%E0%B2%A5-%E0%B2%B6%E0%B2%B5%E0%B2%97%E0%B2%B3%E0%B3%81/

Thursday, August 16, 2012

ಗೊಂಚಲು - ಮೂವತ್ತ ಒಂಭತ್ತು.....

ಪ್ರೀತಿ ಮಳೆ -
ಮೈದುಂಬಿ ನಗುವ ಇಳೆ.....

ಅಲ್ಲಿ ನನ್ನೂರು -
ಆಕಾಶರಾಜನ ಪ್ರೇಮಧಾರೆಯಲಿ ಮಿಂದು -
ಹಸಿರು ಸೀರೆಯನುಟ್ಟು ಸರ್ವಾಲಂಕೃತ ಭೂಷಿತೆಯಾಗಿ ಕಂಗೊಳಿಸುತ್ತಿದೆ
ಸೀಮಂತದ ಸಂಭ್ರಮದಲ್ಲಿನ ತುಂಬು ಬಸುರಿಯಂತೆ...

ನಮ್ಮ ಮನೆಯ ಎಮ್ಮೆ ಚಂದ್ರಿಯೂ ಮತ್ತೊಮ್ಮೆ ಅಮ್ಮನಾಗುತ್ತಿದ್ದಾಳಂತೆ...

ದುಡಿವ ರೈತನ ಕಣ್ಣಲ್ಲಿ ಆನಂದ -
ಮೈಯ ಬೆವರಲ್ಲೂ ಮಣ್ಣ ಗಂಧ...

ಅಲ್ಲೀಗ
ಸಕಲ ಜೀವಗಳ ಸೃಷ್ಟಿ ವೈಭವ...
ನನ್ನಮ್ಮ ನಗುತಿದ್ದಾಳೆ...

:::

ಮಳೆ ಮತ್ತು ಪ್ರೀತಿ
ಚಿತ್ರಗಳಲ್ಲಿ...

ಸಂಕ...


ಹೆಜ್ಜೆ ಗುರುತು...


ಯಾರದೋ ಗೂಡು...


ಕಾಡಿನೆಡೆಗೆ ಪಯಣ...


ಮಳೆಯಲಿ ಮಿಂದ ಹಸಿರ ವೈಭವ...





ಅರಣ್ಯ ಇಲಾಖೆ ನಿರ್ಮಿಸಿದ ಕಾಡ ನಡುವಿನ ಸೂರು...

ಕಲ್ಲು ಬಾಳೆ...


ಎಲೆಗಳ ರಂಗೋಲಿ...


ಮಳೆಯು ತಬ್ಬಿದ ಇಳೆ...
ಕಂಚಿಕಲ್ಲು ಗುಡ್ಡದಿಂದ ಕಾಣುವ ಕಾಳಿ ನದಿ ಪಾತ್ರ...




ಕಾಡು ಮರಕೂ ಕಟ್ಟೆ...


ಕಾಡು ದಾರಿ...


ವಚನ ವನ...(ಉಳವಿ)


ಗದ್ದೆ ನೆಟ್ಟಿ...


ದೂರದ ಬೆಟ್ಟ...


ಯಾವುದೋ ತೊರೆ...


ಜೀವ ಧಾತೆ -ಕಾಳಿ ಮಾತೆ...(ಕಾಳಿ ಹಿನ್ನೀರು)


ತೆಪ್ಪ ತೇಲುತಿದೆ ಬಂಧ ಬೆಸೆಯಲು...(ಶಿವಪುರ - ಕುಂಬ್ರಾಳ)

ದೋಸೆಗೆ ಹಿಟ್ಟು ರೆಡಿ...

ಕರೆಂಟಿಲ್ಲೆ ಗ್ಯಾಸ್ ಹಚ್ತೆ ತಡೀರಿ...


ಮೀನುಗಾರನೊಬ್ಬನ ಗಾಡಿ ಶೆಡ್...

ಕಾಡ ಕುಸುಮ...

ದಾಸವಾಳದ ಅಂದ...

ಚಂದ್ರಿ...


ದಟ್ಟ ಕಾನನ, ಮುಗಿಲ ಚುಂಬಿಸೋ ಮರಗಳು, ಜಿಟಿ ಜಿಟಿ ಹನಿವ ಮಳೆ, ಜೀವ ಪಡೆದ ಝರಿ - ತೊರೆಗಳು, ಪಿಚಿ ಪಿಚಿ ರಾಡಿಯ ರಸ್ತೆಗಳು, ಹೆಜ್ಜೆ ಇಟ್ಟಲ್ಲೆಲ್ಲ ರಕ್ತ ಹೀರಲು ಸದಾ ಸನ್ನದ್ಧ ಉಂಬಳಗಳು, ಅಲ್ಲೆಲ್ಲೋ ಕಾಡ ನಡುವೆ ಅರಣ್ಯ ಇಲಾಖೆಯ ಸೂರು, ತುಂಬಿ ನಿಂತ ಕಾಳಿನದಿಯ ಹಿನ್ನೀರು, ನದಿಯಾಚೆಯ ಊರುಗಳ ಬೆಸೆಯಲು ತೇಲುವ ತೆಪ್ಪ, ದಾರಿಹೋಕರನೂ ಕರೆದು ಅನ್ನವಿಕ್ಕುವ ಆ ಜನರ ಪ್ರೀತಿ...

ಓಹ್....
ನಾಕು ದಿನ ದಾಂಡೇಲಿಯ ಗುಂದಾ ಎಂಬ ಊರಿನ ಕಾಡುಗಳಲ್ಲಿ ಅಲೆದಾಡಿ (ಸುಮಾರು 25 ಮೈಲುಗಳಿಗೂ ಹೆಚ್ಚು) ಪ್ರಕೃತಿಯ ಮತ್ತು ನನ್ನ ಬಂಧುಗಳ ಪ್ರೀತಿಯ ಮಳೆಯಲ್ಲಿ ಮಿಂದೆದ್ದ ಆ ಅನುಭವ ನೆನಪಾಗಿ ಕಾಡೀತು ಕೊನೆತನಕ...

Monday, August 6, 2012

ಗೊಂಚಲು - ಮೂವತ್ತೆಂಟು.....


ಕವಿಯಾಗುವ ಬಯಕೆಯಿಂದ.....

ನೂರಾರು ಕವನ ಸಂಕಲಗಳ ತಿರುವಿ ಹಾಕಿದೆ...

ಸಾವಿರಾರು ಹಾಡ ಕೇಳಿದೆ...

ಗಗನದ ವಿಶಾಲತೆಗೆ ಬೆರಗಾದೆ...
ಬೆಳದಿಂಗಳ ಸ್ನಾನ ಮಾಡಿದೆ...
ಚುಕ್ಕಿಗಳ ಚಿತ್ತಾರಕೆ ಚಕಿತನಾದೆ...

ಕಡಲ ಅಲೆಗಳ ಜೊತೆಗೆ ಸರಸವಾಡಿದೆ...

ಮಲೆನಾಡ ಧೋ ಮಳೆಯ ನೋಡುತ್ತಾ ಧ್ಯಾನಸ್ತನಾದೆ...

ಹೂವು ಅರಳುವ ಚಂದ ಸವಿದೆ...
ಅದರ ಗಂಧ ಹೀರಿದೆ...

ದುಂಬಿಯ ನಾದಕೆ ಕಿವಿಯಾದೆ...

ನಿದ್ದೆ ತೊರೆದು ಸೂರ್ಯೋದಯದೆದುರು ಹೃದಯ ತೆರೆದು ಕೂತೆ...
ಸೂರ್ಯಾಸ್ತದ ಕೆಂಪಿಗೆ ಕಣ್ಣಾದೆ...

ಮಗುವ ನಗುವಿಗೆ ಕಾರಣನಾಗಿ ನಲಿದಾಡಿದೆ...

ಹೆಣ್ಣ ಅಂದವ ಆರಾಧಿಸಿದೆ...
ಆಕೆಯ ಕಣ್ಣ ಕೊಳದಲಿ ಮಿಂದೆದ್ದೆ...

ದಟ್ಟಡವಿಯ ಹಸಿರ ಸಿರಿಯ ನಡುವೆ ಕಳೆದುಹೋದೆ...
ನವಿಲ ನಾಟ್ಯವ ಕಂಡೆ -
ಜಿಂಕೆ ಸಖ್ಯವನುಂಡೆ...

ಎಳೆಗರುವ ತುಂಟಾಟಕೆ ಸಾಕ್ಷಿಯಾದೆ...

ಜಲಪಾತದ ಧಾರೆಯೆದುರು ಮೌನಿಯಾದೆ...

ಚಿನ್ನಾರಿ ಮೀನ ಬಾಯಲ್ಲಿ ಕಾಲ್ಬೆರಳ ಕಚ್ಚಿಸಿಕೊಂಡೆ...

ತೆಂಗು ನೆಟ್ಟು - ನೀರನೆರೆದು - ಅದು ಬೆಳೆದು ಫಲವಂತವಾಗುವುದಕ್ಕೆ ಕಾಯುತ್ತಾ ಸಹನೆ ಕಲಿತೆ...

ಬದುಕ ಅಗಾಧತೆಗೆ ಬೆರಗಾದೆ...

ಕತ್ತಲ ಏಕಾಂತದಲಿ - ಬೆತ್ತಲ ಸುಖಾಂತದಲಿ...

ಕ್ಷಣ ಕ್ಷಣವನೂ ಅನುಭಾವಿಸಿ ಪದಗಳಾಗಿಸಲು ಎಷ್ಟೆಲ್ಲ ತಿಣುಕಾಡಿದೆ...
ಉಹುಂ...
ಒಂದಕ್ಷರವೂ ಪದವಾಗಿ ಹೊರಬರಲಿಲ್ಲ...

ಬೇಸತ್ತು - ಬಳಲಿ ಕಾಲೆಳೆಯುತ್ತ ಸಾಗಿದ್ದೆ - ಸೋತ ದ್ಯಾಸದಲಿ ಯಾವುದೋ ದೂರದೆಡೆಗೆ - ಅರಿವಿಲ್ಲದೇ...

ಇನ್ನೇನು ಒಂದು ಹೆಜ್ಜೆ ಆಚೆ...
ಸಾವಿನ ಮನೆಯ ಮುಂಬಾಗಿಲು...
ನಿನ್ನೆಗಳಿಗೆ ಜೀವ ಬಂದು -
ನಾಳೆಗಳ ಆಸೆ ಚಿಗುರಿ -
ಮನದಿ ಹೊಸ ಭಾವಗಳ ಸಂತೆ ನೆರೆದು -
ನೆನಪು, ಕನಸುಗಳೆಲ್ಲ ಪದಪುಂಜಗಳಾಗಿ -
ಇಳಿಗಾಲದಲಿ ಜ್ಞಾನದಂತ ಮೂಡಿದಂತೆ -
ಕವಿತೆಯೊಂದು ಜನ್ಮ ತಳೆಯಿತು.....

'ಗಲ್ಫ ಕನ್ನಡಿಗ' ಈ - ಪತ್ರಿಕೆಯಲ್ಲಿ  ಪ್ರಕಟಿತ 
http://gulfkannadiga.com/news/culture/13334.html