Wednesday, June 25, 2014

ಗೊಂಚಲು - ನೂರಾ ಇಪ್ಪತ್ಮೂರು.....

ಅರ್ಧ ಬರೆದ ಸಾಲುಗಳು - ಅರ್ಥವಿದೆಯೋ ಇಲ್ಲವೋ ಗೊತ್ತಿಲ್ಲ.....

ಪ್ರತೀ ಇರುಳು ಹೊರಳುವ ಹೊತ್ತಲ್ಲಿ ಮನದ ನೋವ ನೆನಪ ಬಾಧೆಗಳೆಲ್ಲ ಕಣ್ಣಿಂದ ಸ್ಖಲಿಸುತ್ತವೆ - ಮುಂಬೆಳಗಿಗೆ ಕಣ್ತೆರೆವ ಹೊತ್ತಿಗೆ ನಗೆಯ ಕೂಸಿನ ಗರ್ಭ ಕಟ್ಟೀತೆಂಬ ಭರವಸೆಯಲ್ಲಿ...
ತುಂಬ ಪ್ರೀತಿಸುವಲ್ಲಿ ತುಂಬ ನೋವಿರುತ್ತೆ ಕಣೋ...
ಹಾಗಂತಾರೆ ಪ್ರೀತಿಸಿದವರು...
ಇರಬಹುದು...
ಈ ಬದುಕನ್ನು ತುಂಬಾ ಅಂದ್ರೆ ತುಂಬಾನೇ ಪ್ರೀತಿಸಿದೆ...
ಬದುಕಿನೊಂದಿಗೆ ನೋವೂ ತುಂಬಾನೇ ಸಿಕ್ಕಿದ್ದೂ ನಿಜವೇ, ನಾಳೆಯೂ ಸಿಕ್ಕೀತು ಮತ್ತೆ – ಮಾವನ ಮನೆಯ ಬಳುವಳಿಯೇನೋ ಎಂಬಂತೆ...
ಆದರೆ ಬದುಕನ್ನು ಕರಡಿಯ ಕಾಮದ ಹಾಗೆ ಇನ್ನಿಲ್ಲದಂತೆ ಪ್ರೀತಿಸಿದ್ದರಿಂದ ಸಿಕ್ಕ ಸುಖಕ್ಕೆ ಹೋಲಿಸಿದರೆ ನೋವುಗಳದ್ಯಾವ ಲೆಕ್ಕ ಅಂತೇನೆ...
ತೆರೆಗಳಿಲ್ಲದೆ ಹೋದಲ್ಲಿ ಸಾಗರಕೇನು ಚಂದವಿದೆ..?
ನಿನ್ನೆ ಉಂಡ ನೋವುಗಳಿಗಾಗಿ - ನಾಳೆ ಬರುವ ಸಾವಿಗಾಗಿ ಇಂದಿನ ಈ ಕ್ಷಣದ ಉಸಿರ ಸ್ವಾದವ ಹೀರದಿರಲಾರೆ...


ನನ್ನ ಯೊಚನೆಗಳು ನನ್ನೊಳಗನ್ನು ಆವರಿಸಿ ನನ್ನೊಡನೆಯ ನನ್ನ ಬಂಧವನ್ನು ರೂಪಿಸಿಕೊಡುತ್ತವೆ – ಹೊಳೆಯಬಹುದು ಇಲ್ಲಾ ಕೊಳೆಯಬಹುದು...
ನನ್ನ ಅಭಿವ್ಯಕ್ತಿ ನನ್ನ ಹೊರಗನ್ನು ಆವರಿಸಿ ನನ್ನ ಸುತ್ತಲಿನ ಬಂಧಗಳ ಬೆಸೆದುಕೊಡುತ್ತದೆ – ಇಲ್ಲೂ ಹೊಳೆಯಬಹುದು ಇಲ್ಲಾ ಕೊಳೆಯಬಹುದು...
ಒಳಗೊಂದ ಯೋಚಿಸಿ, ಹೊರಗೊಂದ ತೋರಿದರೆ ತೋರಿದ್ದು ಮಾತ್ರ ಸತ್ಯವೆನಿಸುವ ಹೊತ್ತಿಗೆ ನನ್ನ ಸುತ್ತ ನನ್ನಂಥಹುದೇ ಬಂಧಗಳ ಸಂತೆಯೇ ನೆರೆದೀತು ನಿಜ...
ಆದರೆ ಬದುಕ ಕೊನೆಯ ಸ್ತರದಲ್ಲಿ ನನ್ನ ನಾ ನೋಡುವಾಗ ನನ್ನೆಡೆಗೆ ನಂಗೆ ಪ್ರಾಮಾಣಿಕ ಗೌರವ ಮೂಡಬೇಕೆಂದರೆ ನಾ ನನ್ನ ಒಳ ಹೊರಗುಗಳ ನಡುವೆ ಸಮನ್ವಯ ಸಾಧಿಸಬೇಕಲ್ವಾ...
ಒಳಗೆ ಹೊಳೆಯುವುದಾದಲ್ಲಿ ಹೊರಗೊಂದಿಷ್ಟು ಕೊಳೆವುದೂ ಸಮ್ಮತವಾಗಬೇಕಿತ್ತೇನೋ...
ಆದರೆ ಒಳಗಿರುವುದನ್ನೇ ಅಲ್ಲಿದ್ದ ಹಾಗೆಯೇ ಹೊರಗೂ ತೋರುವುದೆನ್ನುವುದು ವಿಶೇಷ ಧೈರ್ಯ ಮತ್ತು ಮನೋಸಾಮರ್ಥ್ಯ ಬೇಡುತ್ತದೆ...
ಎಂದಿಗಾದರೂ ನನ್ನಲ್ಲಿ ನಾ ಸಾಕ್ಷಿಯಾದೇನಾ ಆ ಸಮನ್ವಯದ ಸಾಧನೆಗೆ – ಅದೇ ಹಾದಿಯಲ್ಲಿದ್ದರೂ ಕೊನೆಮುಟ್ಟುವ ಧೈರ್ಯ..?
ಉಹುಂ ಇದ್ದಂತಿಲ್ಲ...


ಆ ದಾರಿಯ ತೀರದಲಿ ನೊಂದ ಜೀವವೊಂದು ಇನ್ನೊಂದು ನೊಂದ ಜೀವವ ಸಂಧಿಸಿತು – ಅಷ್ಟಿಷ್ಟು ಮಾತುಕತೆಗೆ ನಿಟ್ಟುಸಿರ ನಗೆಯೊಂದು ಹುಟ್ಟಿತು – ಪುಟ್ಟ ಸಮಾಧಾನ – ನೋವ ಬಣ್ಣ ಬೇರೆ ಬೇರೆ – ಹಂಚಿಕೊಂಡು ಹಗುರಾದಾಗ ಮೂಡಿದ ಸಮಾಧಾನದ ಬಣ್ಣ ಬಿಳಿಯೇ ಇರಬೇಕು...
ಬದುಕ ಸಾಗರದ ನಟ್ಟನಡುವಲೆಲ್ಲೋ ಕನಸ ದೋಣಿಯ ಕಳಕೊಂಡ ಒಬ್ಬ ಇನ್ನೊಬ್ಬನ ಸಂಧಿಸಿ – ಓಹ್ ನೀನೊಬ್ಬನೇ ಅಲ್ಲ ಕನಸಿಲ್ಲದೆ ಈಜುತಿರುವವನು ಅಂತಂದು ಅಲ್ಲಿ ತೇಲುತಿರುವ ಇನ್ನೊಬ್ಬನ ಕೈಹಿಡಿದು ನಾನೂ ಇದ್ದೇನೆ ಜತೆ ಈಜುವ ಬಾ ತೀರದೆಡೆಗೆ ಅಂದು ಆ ಅವನಲ್ಲಿ ಸಣ್ಣ ಭರವಸೆಯನೊಂದ ಮೂಡಿಸಿದರೆ ಇವ ನೀಡಿದ ಆಸರೆಯ ಅವ ಒಪ್ಪದಿರಲಾದೀತಾ...
ಒಪ್ಪಿದರೆ ಅದು ತಪ್ಪು ಹೇಗಾದೀತು...
ಕ್ಷಮಿಸಿ -
ನನ್ನಂತ ಕುಂಟರು ಕುರುಡರೇ ತುಂಬಿರುವ ಈ ಬೀದಿಯಲಿ ದಾರಿ ಸವೆಸಬೇಕಾದಾಗ ನಿನ್ನ ನೋವು ನಿಂಗಿರಲಿ ನನ್ನದು ನಂಗೆ ಮಾತ್ರವಿರಲಿ ನನ್ನ ನೋಡಿ ನೀನು ನಿನ್ನ ನೋಡಿ ನಾನು ಸಮಾಧಾನ ಹೊಂದಿ ಜತೆ ನಡೆಯೋದು ತಪ್ಪು ಅಂತ ಹೇಗೆನ್ನಲಿ...
ನೋವ ನೋಡಿದ ನೋಟ, ಎದುರಿಸಿದ ರೀತಿ, ಗೆಲ್ಲಲು ಕಂಡುಕೊಂಡ ಮಾರ್ಗ ಎಲ್ಲ ಬೇರೆ ಬೇರೆಯೇ ಇದ್ದೀತು ಆದರೆ ಇನ್ನೊಂದು ಅಂಥದೇ ನೋವ ಕಂಡಾಗ ಅರೇ ನೋವಿದು ಕೇವಲ ನನ್ನೊಬ್ಬನದೇ ಅಲ್ಲ ನನ್ನಂಥದ್ದೇ ನೋವಿದ್ದೂ ನಗುತ ಜೀವಿಸುತಿರುವವರಿದ್ದಾರೆ ಅಂದಮೇಲೆ ನಾನು ಕೂಡ ನಗುತಲೇ ಜೀವಿಸಬಹುದು ಅಂತನ್ನಿಸಿ ಒಂದಿಷ್ಟು ನನ್ನ ಅಸಹಾಯ ಭಾವವ ಕಳಕೊಂಡು ಬದುಕಿನೆಡೆಗೆ ಸ್ಫೂರ್ತಗೊಂಡುದಾದರೆ ಅದನ್ನು ನೋವ ನೋಡಿ ನಗುವ ಪಡೆವ ನನ್ನ ಕೆಟ್ಟ ಮನೋಭಾವ ಅಂತ ಹೇಳಲಾರದಾಗುತ್ತೇನೆ...  

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, June 23, 2014

ಗೊಂಚಲು - ನೂರಾ ಇಪ್ಪತ್ತೆರಡು.....

ಮನಸು ನೊಂದ ಮಾತ್ರಕ್ಕೆ ಬದುಕು ನೋಯದಿರಲಿ.....
(ಅರ್ಧ ಬರೆದ ಸಾಲುಗಳು - ಅರ್ಥವಿದೆಯೋ ಇಲ್ಲವೋ ಗೊತ್ತಿಲ್ಲ.....)

ಹಗಲ ದಾರಿಯ ತುಂಬಾ ಕನಸೆಂಬೋ ಬಿಡಿ ಬಿಡಿ ಮಲ್ಲಿಗೆ...
ಯಾವುದ ಮುಡಿಯಲಿ – ಇನ್ಯಾವುದ ತುಳಿಯಲಿ – ಉಸಿರ ತೇಕುತ್ತ ನಡೆವ ಗಡಿಬಿಡಿಯಲಿ...


ಮನಸು ಕನಸ ಕಾಣುತ್ತೆ... 
ಬರೀ ಕಾಣುತ್ತೆ... 
ನನಸಾಗಿಸಿಕೊಳ್ಳೋ ಹೊಣೆ ಮತ್ತು ನನಸಾಗಿಸುವಾಗಿನ ಕಷ್ಟ ಸುಖಗಳು ಪ್ರಜ್ಞೆಯದ್ದು... 
ಮತ್ತೆ ಮನಸು ಗೆದ್ದರೆ ಅರಳುತ್ತೆ – ಸೋತರೆ ಮರುಗುತ್ತೆ...
ಮನಸಿನದೇನಿದ್ದರೂ ಭಾವ ಸಂಚಲನ – ಪ್ರಜ್ಞೆಯದ್ದು ನಿರ್ಭಾವದ ಸಂಘಟನ...
ಪ್ರಜ್ಞೆಗೆ ಶಕ್ತಿ ತುಂಬು ಬದುಕು ನಿನ್ನ ಕಾಲಾಳು...


ಬದುಕ ಬಿರುಗಾಳಿಗೆ ಸಿಕ್ಕ ಹಲವಾರು ತಾಕತ್ತಿಲ್ಲದ ಕನಸುಗಳು ಸತ್ತಂತನಿಸೀತು ಆದರೆ ಕನಸು ಗಟ್ಟಿ ಇದ್ದದ್ದಾದರೆ ಸಾಯಲಾರದು ಬದಲಿಗೆ ತನ್ನ ಪಥ ಬದಲಿಸೀತು ಅಷ್ಟೇ...
ಪ್ರಜ್ಞೆ ತಾನು ಪ್ರಯತ್ನಪಟ್ಟರೆ ತಾಕತ್ತಿಲ್ಲದ ಕನಸುಗಳಿಗೂ ಅಷ್ಟಿಷ್ಟು ಜೀವ ತುಂಬಬಹುದು...
ಇಂದು ಈ ನೋವ ತೀವ್ರತೆಯಲ್ಲಿ ಅದೆಲ್ಲ ನಿನ್ನ ಕನಸುಗಳು ನಿರ್ಜೀವ ಅನ್ನಿಸಿಯಾವು – ಪ್ರಜ್ಞೆಯ ಬಲದಿಂದ ಬರುವ ಸಮಯಕ್ಕಾಗಿ ಪ್ರೀತಿಯಿಂದ ಕಾದಿಟ್ಟುಕೊಂಡರೆ ಖಂಡಿತಾ ಅವನೆಲ್ಲ ಮತ್ತೆ ಸಾಧಿಸಬಲ್ಲೆ...
ಹೌದು ಒಪ್ಪುತ್ತೇನೆ ಒಂದಿಷ್ಟು ಬದಲಾವಣೆ ಇದ್ದೇ ಇರುತ್ತೆ ಇಂದು ಸಿಗಬೇಕಿದ್ದ ಗೆಲುವು ನಾಳೆ ಸಿಕ್ಕಲ್ಲಿ...
ಆದರೆ ಮೂಲದಲ್ಲಿ ನಗುವಿದ್ದೇ ಇರುತ್ತೆ ಅನ್ನೋದು ನನ್ನ ನಂಬಿಕೆ ಮತ್ತು ಅನುಭವ... ಅಷ್ಟೇ...


ಪ್ರತಿ ನೋವಿಗೂ ಒಂದು ಪರ್ಯಾಯ ಇದ್ದೇ ಇದೆ ಎಂಬುದು ನನ್ನ ಬಲವಾದ ನಂಬಿಕೆ... 
ಬದುಕು ಮುಗಿದೇ ಹೋಯಿತು ಅಂದುಕೊಂಡಲ್ಲಿಂದಲೇ ಬದುಕು ಮತ್ತೆ ಹೊಸದಾಗಿ ನಗುತ್ತೆ ಕಣೋ... 
ಹೌದು ಹೇಳಬೇಕಾದದ್ದನ್ನು ಪ್ರೀತಿಯಿಂದ ಹೇಳಲು ಬಾರದ ಒರಟ ನಾನು – ಆದ್ರೆ ಬದುಕೂ ಒರಟು ಒರಟೇ ಅಲ್ವಾ... 
ಉಸಿರುಗಟ್ಟುವಂತೆ ಗಟ್ಟಿಯಾಗಿ ತಬ್ಬದೇ ಹೋದರೆ ಅದು ಅರಳೋದು ಕಷ್ಟ ಅಂತನ್ನಿಸುತ್ತೆ ನಂಗೆ... 
ಆತ್ಮದೊಳಗಿಂದ ಹೊಮ್ಮುವ ಭರವಸೆಯೊಂದೇ ಬದುಕ ಮುನ್ನಡೆಸುವ ಕೀಲಿಕೈ – ಕನಸುಗಳೆಡೆಗಿನ ಮತ್ತು ನಿನ್ನೆಡೆಗಿನ ನಿನ್ನ ಅಚಲ ಪ್ರೀತಿಯೊಂದೇ ಅದನ್ನ ಕಾಯಬಲ್ಲುದು... 
ಪ್ರೀತಿಸಿಕೋ ಇನ್ನಷ್ಟು ನಿನ್ನ ನೀನು... 
ತಪ್ಪಿಲ್ಲ ಅತ್ತುಬಿಡು ಒಮ್ಮೆ ಒಳಗೆ ಹೆಪ್ಪಾದ ನೋವೆಲ್ಲ ಕರಗಿ ಹೋಪಂತೆ ನಿನ್ನೆದುರು ನೀನು - ಹೊಸ ದೃಷ್ಟಿಕೋನವೊಂದು ಹುಟ್ಟಲಿ ಕಣ್ಣಹನಿಯೊಳಗಿಂದ... 
ನೋವ ಗೆದ್ದು ನಲಿವ ಹೊದ್ದು ಮುದ್ದಿಸು ಕನಸುಗಳನ್ನ ಮತ್ತೇನೂ ಕಾಣದಂತೆ...
ನೋವು ನಲಿವಿನ ಮಿಲನದುತ್ತುಂಗದಲ್ಲಿ ಜಿನುಗೋ ಕಣ್ಣೀರೇ ಅಲ್ಲವಾ ಬದುಕಿನೊಳಮನೆಗೆ ಶೃಂಗಾರ...


ಮನದ ಕಣ್ಣಲ್ಲಿ ಭಾವಗಳು ಮಿನುಗಲಿ – ಹಾಗಂತ ಭಾವಗಳ ಬಾಹುಗಳಲಿ ಬದುಕು ಬಳಲದಿರಲಿ...
ಭಾವಗಳು ಮನದ ಕಂದಮ್ಮಗಳು – ಪ್ರಜ್ಞೆ ಅವಕೆ ಲಾಲಿ ಹಾಡಿ ದಿಕ್ಕು ತೋರಲಿ...
ಮನಸು ಒಲವಿನೆದೆಹಾಲನುಣಿಸೋ ತಾಯಿ – ಪ್ರಜ್ಞೆ ಆತ್ಮಾಭಿಮಾನವ ಕಾಯ್ದು ಕೊಡೋ ತಂದೆ...
ಬದುಕಿದು ಮನಸು ಮತ್ತು ಪ್ರಜ್ಞೆಗಳ ಸಮರಸ ಪ್ರೇಮದ ಕೈಗೂಸಾಗಲಿ...
ನಿನ್ನೆಗೂ – ನಾಳೆಗೂ ಸ್ನೇಹವಾಗಿ ಈ ಕ್ಷಣ ಬದುಕಿನೊಡನೊಂದು ಆತ್ಮಾನುಸಂಧಾನ ಏರ್ಪಡಲಿ...


ನೋವೊಂದಕೆ ನೀ ಹೇಗೆ ಪ್ರತಿಕ್ರಿಯಿಸುತ್ತೀಯಾ ಎಂಬುದರ ಮೇಲಲ್ಲವಾ ಆ ನೋವಿನ ಆಯಸ್ಸಿನ ನಿರ್ಧಾರ...
ಯಾವುದಕ್ಕೆ ಎಷ್ಟು ನೋಯಬೇಕು ಮತ್ತು ಯಾರಿಗಾಗಿ ಎಷ್ಟು ಮರುಗಬೇಕು ಎಂಬುದು ನಮ್ಮ ಮನದ ಅಲ್ಲಲ್ಲ ಪ್ರಜ್ಞೆಯ ನಿರ್ಧಾರವಾಗಬೇಕಲ್ವಾ...
ನಗೆಯ ಪ್ರೀತಿಸು ನೋವೇ ನೋಯುವ ಹಾಗೆ - ಹೀನಾಯವಾಗಿ ಸೋತ ಭಾವದಲ್ಲಿ...
ಆತ್ಮ ಶಕ್ತಿಯನೆತ್ತಿ ನಿಲ್ಲಿಸು - ಯಾವ ಸೋಲೂ ಬದುಕ ಸೋಲಿಸದ ಹಾಗೆ -ಗೆಲುವೊಂದೇ ಬದುಕನಾಳುವ ಹಾಗೆ... 
ಬದುಕನಾವರಿಸಿ ಅಪ್ಪಿಕೋ - ಸಾವು ಕೂಡ ತನ್ನಿರುವಿಕೆಯ ಬಗೆಗೆ ತಾನೇ ನಾಚುವ ಹಾಗೆ...
ಬದುಕೊಂದು ಯುದ್ಧರಂಗವಾದರೆ ನಿನ್ನಾತ್ಮಬಲವೇ ನಿನ್ನಡಿಗೆ ಗೆಲುವ ತಂದಿಡುವ ದಂಡನಾಯಕ - ನಗೆಯು ಪಾರಿತೋಷಕ...
ನೋವ ಕಡೆದು - ನಲಿವ ಹಡೆದು - ಬದುಕನಾಳುವ ಕನಸು ಮೂಡಲಿ ಮನದ ಗರ್ಭದಲ್ಲಿ...
ಅಂತಿಮವಾಗಿ ನೀ ಮಾತ್ರ ಗೆಲ್ಲಬೇಕು - ನಿನ್ನ ಕನಸುಗಳ ಆಳುತ್ತ ಆಳುತ್ತ ನಿನ್ನ ಬದುಕನೂ ನೀ ಮಾತ್ರ ಆಳಬೇಕು - ಅದೂ ನಗೆಯ ಝೇಂಕಾರದೊಂದಿಗೆ...
ಪ್ರೀತಿಯಾಗಲಿ ಹೊಸದಾಗಿ - ಈ ನಂತರದ ಕ್ಷಣಗಳ ಮೇಲೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, June 12, 2014

ಗೊಂಚಲು - ನೂರು + ಇಪ್ಪತ್ತು + ಮತ್ತೊಂದು.....

ಸುಮ್ ಸುಮ್ನೇ.....

‘ನಾನು’ ಸಾಯಬೇಕು...
‘ನಾ’ ಇಲ್ಲದ ನಾನು ಮರುಹುಟ್ಟು ಪಡೆಯಬೇಕು...
‘ನಾನು ನೀನು ಅಂತ ಬೇರೆ ಬೇರೆ ಇಲ್ಲ’ ಅಂತಂದು ನೀನು ನೀನಾಗಿಯೇ ಜಗಕೆಲ್ಲ ಕೂಗಿ ಹೇಳುವಂತೆ ನಾ ನಿನ್ನ ಪ್ರೀತಿಸಬೇಕು...
‘ನಾನು’ ಎಂಬ ಗುಂಗಿಲ್ಲದ ‘ನಮ್ಮ’ ಸ್ನೇಹ ನಾಳೆಗಳಲಿ ನಗೆಯ ಶರಧಿಯಾಗಿ ತೊನೆಯಬೇಕು...
ಹೀಗೆಲ್ಲ ಅನ್ನಿಸುತ್ತಿರುತ್ತದೆ ಬಲವಾಗಿಯೇ...
ಆದ್ರೆ ಸತ್ಯ ಗೊತ್ತಾ –
ನನ್ನಲ್ಲಿನ ‘ನಾನು’ ಸತ್ತು ನಿನ್ನನ್ನು ‘ನೀನಾಗಿಯೇ’ ಮನದ ಪ್ರಾಮಾಣಿಕತೆಯಿಂದ ಪ್ರೀತಿಸಲು ನಾನು ಇನ್ನೆಷ್ಟು ಸಾವಿರ ಜನ್ಮಗಳನೆತ್ತಿ ಬರಬೇಕೋ...
‘ನಾನಿ’ರುವ ನಾನು ಅಳಿವುದಾದರೆ ಆ ಅಳಿವಿಗಾಗಿ ನಾನಂಬದಾತನೆದುರೂ ಮಂಡಿಯೂರಿ ಪ್ರಾರ್ಥಿಸಿಯೇನು...

***

ಕಪ್ಪು ಹುಡುಗೀ –
ಕಪ್ಪಂತೆ ಕಾಡಿಗೆ – ಆದರೇನು ಚೆಲುವೆಯರ ಹೊಳೆವ ಕಂಗಳಿಗೆ ಕಾಡಿಗೆಯೇ ಅಲಂಕಾರವಂತೆ....
ನನ್ನೊಲವ ಕಂದೀಲೇ -
ನನ್ನ ಬೆಳಗೆಂದರೆ ನಿನ್ನ ಕಣ್ಣಂಚಿನ ಮುಗುಳ್ನಗು – ನೀ ಮೈಮುರಿಯುವ ಸದ್ದು – ನಾ ಕಂಡದ್ದನ್ನು ಸೂರ್ಯನೂ ಕಂಡುಬಿಟ್ಟನಾ ಎಂಬ ಧಾವಂತದಲಿ ನೀ ಹೊದಿಕೆ ಹುಡುಕುವಾಗ ನಿನ್ನ ಮೈಲೆಲ್ಲ ಹರಿದಾಡುವ ಮೆಲು ನಾಚಿಕೆ........;)
ನನ್ನ ಮುಸ್ಸಂಜೆಯೆಂದರೆ ಬಿಡಲಾರದಂತೆ ಬೆರೆತ ಹಸ್ತ ರೇಖೆಗಳ ಮಾತುಕತೆ – ಕಣ್ಣ ಬೆಳಕಲ್ಲಿ ಮನದ ಕನಸುಗಳ ವಿನಿಮಯ – ಎಂಜಲು ತುಟಿಗಳು ಮತ್ತು ನಡುಗೋ ತೊಡೆಗಳಲಿ ಗರ್ಭಾದಾನದ ಹಸಿವು... :p
ನನ್ನ ಇರುಳೆಂದರೆ ನಿನ್ನ ಕಣ್ಣೆವೆಗಳಲಿನ ಅಮಲು – ನಿನ್ನ ಮೈಯ ಹೊಳಪಲ್ಲಿ ಮಿಂದು ಆ ಬಿಸುಪಲ್ಲಿ ನಾ ಹಸಿಯಾಗುವ ಹೊತ್ತು – ನೀ ನನ್ನ ಬಳ್ಳಿಯಾಗಿ ತಬ್ಬಿ, ಹೂವಾಗಿ ಅರಳಿ, ‘ಫಲವಂತ’ ಕನಸಲ್ಲಿ ಕಣ್ಣು ಹನಿಯುವ ಘಳಿಗೆ... ;)
ಕಪ್ಪು ಮಣ್ಣಿನ ಹಣತೆ ನೀನು – ನಿನ್ಮನದ ಒಲವಿನೆಣ್ಣೆಯ ಉರಿಸಿ ನೀ ಸುರಿವ ಬೇಳಕಲ್ಲಿ ನನ್ನೀ ಕ್ಷಣಗಳು ಹೊಳೆಯುತಿವೆ ಕಣೇ ಗೆಳತೀ...

***

ಜೊತೆಯಿದ್ದು ಕೆಲವು - ಜೊತೆ ನಿಲ್ಲದ ಹಲವು ಉಪದ್ವ್ಯಾಪಿ ಭಾವಗಳು ಮನದ ಅಂಗಳವ ಇನ್ನಿಲ್ಲದಂತೆ ರಾಡಿಯೆಬ್ಬಿಸುತ್ತಿವೆ...
ಅಲ್ಲಿಯ ಗದ್ದಲಗಳಿಂದಾಚೆ ಬಂದು ಒಂದಷ್ಟನ್ನು ಕಳಕೊಳ್ಳಬೇಕಿದೆ – ಹೊಸದೊಂದಿಷ್ಟನ್ನು ತುಂಬಿಕೊಳ್ಳಬೇಕಿದೆ...
ಹೊಸದು ಸಿಗದೇ ಹೋದರೂ ಪರವಾಗಿಲ್ಲ ತುಕ್ಕು ಹಿಡಿದ ಹಳೆಯವುಗಳನ್ನು ಒಂದಿಷ್ಟು ತಿಕ್ಕಿ ತೊಳೆದು ಬೆಳಗಿಸಿಕೊಳ್ಳಬೇಕಿದೆ...
ಅದಕೆಂದೇ –
ಭೋರಿಡುವ ಶರಧಿಯ ಸನ್ನಿಧಿಯಲಿ ತೆರೆಗಳಿಗಭಿಮುಖವಾಗಿ ಒಂದಿಷ್ಟು ಹೊತ್ತು ಮೌನವಾಗಿ ಕೂತಿರಬೇಕು....
ಗಂವ್ವೆನ್ನೋ ಕಾಡಿನ ಮಡಿಲ ಗಾಢ ಮೌನದ ನಡುವೆ ನಡೆದಾಡುತ್ತಾ ತುಂಬ ತುಂಬ ಮಾತಾಗಬೇಕು – ನನ್ನೊಳಗೆ ನಾನು...
ಬಿಡದೆ ಬೋರೆಂದು ಸುರಿವ ಮಲೆನಾಡ ಮಳೆಯಲ್ಲಿ ಮೈ ಮುದುಡುವಂತೆ ನೆನೆದು ತಂಪಾಗುತ್ತಾ ಗಂಟಲು ಹರಿಯುವಂತೆ ಕಿರುಚಬೇಕು....
ಈ ಮೂರರಲ್ಲಿ ಒಂದರೊಂದಿಗಾದರೂ ಬೆರೆತು – ನನ್ನ ನಾನೊಂದಿಷ್ಟು ಅರಿತು – ಮನಸಿಗೊಂದು ಹೊಸ ನಗೆಯ ಕೊಡಬೇಕು...
ಅದಕೇ -
ಶರಧಿಯ ದಡದಲ್ಲಿ ನಿಮ್ಮ ಗೂಡಿದೆಯಾ ನಂಗೊಂದು ಆಥಿತ್ಯ ನೀಡಿ...:)
ನಿಮ್ಮೂರಲ್ಲಿ ಕಾಡಿದೆಯಾ ನಂಗೆ ದಾರಿ ತೋರಿಸಿ....
ಮಳೆಯಾಗುತ್ತಿದೆಯಾ ಅಲ್ಲಿ ನನ್ನನೊಮ್ಮೆ ನೆನೆಸಿಕೊಳ್ಳಿ...
ಇಷ್ಟೇ ಇಷ್ಟಾದರೂ ಖುಷಿಯಾದೇನು...

Tuesday, June 3, 2014

ಗೊಂಚಲು - ನೂರಿಪ್ಪತ್ತು.....

ಹಲ ಭಾವ ಮಿಶ್ರಣ.....

ನೆನಪು ನಿನ್ನೆಗಳನ್ನ ಹಸಿರಾಗಿಡುತ್ತೆ...
ಕನಸು ನಾಳೆಗಳ ನಿರ್ದೇಶಿಸುತ್ತೆ...
ಯಾರದೇ ಬದುಕ ಕನಸಾಗೋ ಹಂಬಲವಿಲ್ಲ...
ಯಾರಲ್ಲಾದರೂ ಖುಷಿಯ ನೆನಪಾಗಿ ಉಳಿದೇನಾ...???
ಖಂಡಿತ ಆ ನಂಬಿಕೆಯಿಲ್ಲ...
ನಿನ್ನೆ ನಾಳೆಗಳಲ್ಲಿ ಉಳಿಯದೇ ಇಂದೆಂಬ ಈ ಕ್ಷಣದೊಂದಿಗೆ ಅದಿದ್ದಂತೆ ಕಳೆದು ಹೋಗುವುದಷ್ಟೇ ಉಳಿದಿರುವ ಹಂಬಲ...

ಇಳಿ ಸಂಜೆಯೆಂದರೂ, ಕಾರಿರುಳೆಂದರೂ ಅದೇ ತಾನೆ -
ಬಂಧಿಸಿಟ್ಟ ಕಣ್ಣ ಹನಿಗಳಿಗೆಲ್ಲ ಸ್ವಾತಂತ್ರ‍್ಯ ಸಿಗುವ ಕಾಲ...
ಮನಸು ಹಗುರಾಗಿ, ಹೊಸದಾಗಿ ನಗುವ ಹುಡುಕುವ ಕಾಲ...
ಹಗಲಲ್ಲಿ ಕಳಕೊಂಡದ್ದು ಇರುಳಲ್ಲಿ ಸಿಕ್ಕೀತಾ......???

ಪ್ರೀತಿ ಕೊಡುವುದೆಂದರೆ ಸ್ವಾತಂತ್ರ‍್ಯ ಕೊಡುವುದಲ್ವಾ...
ನಿನ್ನಿಷ್ಟದಂತೆ ನೀ ಬದುಕು ಅಂತಂದು ಹಾರಾಡಲು ಬಿಟ್ಟೆ...
ಎನ್ನೆದೆಯ ಗೂಡಿನಲಿ ನಿನ್ನ ಬಂಧಿಸುವುದೆ ನನ್ನಿಷ್ಟವೆಂದು ಬದುಕ ತಬ್ಬಿಬಿಟ್ಟಳು...
ನಾನಿಂದು ಅವಳ ಒಲವ ಗೃಹಬಂಧಿ...

ಪ್ರೀತಿಗೇನು ಕಾರಣ ಎಂದು ಕೇಳಲಾರೆ...
ಗೊತ್ತೆನಗೆ -
ಮುಂಬೆಳಗಿನ ಕನಸಿನಂಥ ಕವಿತೆ ನಿನ್ನ ಪ್ರೀತಿ...

ಕಪ್ಪು ಹುಡುಗೀ -
ನೀನು ಕತ್ತಲು ಮತ್ತು ಮಳೆ ಜತೆಯಾಗಿ ಸೇರಿದಂಥವಳು...
ನನ್ನ ಕಣ್ಣ ಹನಿಯ ನಾನೂ ಕಾಣದಂತೆ ನಿನ್ನುಡಿಯಲಿ ಹುದುಗಿಸಿಕೊಂಡು, ಕರೆಯೂ ಉಳಿಯದಂತೆ ತೊಳೆದು ಬೆಳಗಿನೆದುರು ಶುಭ್ರ ನಗೆಯೊಂದನೇ ಉಳಿಸುವವಳು...
ನಿನ್ನ ಹಗಲಿಗೆ ನಗೆಯ ನಂಜೇರಲಿ - ದಿನಕೆ ರಂಗೇರಲಿ...

ಕಂದನ ತುಟಿಯಂಚಿಂದ ಜಾರಲಾರೆನೆಂಬ ಹಸಿ ಹಾಲಿನ ಹನಿ ಮುತ್ತು ಮತ್ತು ನಿನ್ನ ನಗೆಯ ಸಿಹಿ ತುತ್ತು - ಈ ಬೆಳಗು...

ಗೆಳತೀ -
ಬದುಕಿನೊಂದಿಗೆ ಮುಗಿಯದ ಸಾವಿರ ಪ್ರಶ್ನೆಗಳಿತ್ತು - ನಿನ್ನ ಮುಗುಳ್ನಗುವ ಹೀರಿ ನನ್ನೆಲ್ಲ ಪ್ರಶ್ನೆಗಳ ಮರೆತೆ...
ಉತ್ತರಗಳ ಮೀರಿದ ಭಾವಗಳ ಸನ್ನಿಧಿಯಲಿ ನಗುವೊಂದೆ ಉತ್ತರ ಅನ್ನಿಸಿ - ನಿನ್ನೆಲ್ಲ ಪ್ರಶ್ನೆಗಳೆದುರು ನಗುತ್ತ ನಿಂತೆ...
ಬದುಕೀಗ ಅಷ್ಟಿಷ್ಟು ನಗುತ್ತಿರುವಂತಿದೆ...

ನಂಗಾದರೋ ನನ್ನ ಸಣ್ಣ ಬೇಸರದ ಎದುರೂ ಸದಾ ಗುರಾಣಿ ಹಿಡಿದು ಯುದ್ಧ ಸನ್ನದ್ಧರಾಗಿ ನಿಲ್ಲಲು ತಾವೇ ತಾವಾಗಿ ದಕ್ಕಿದ ಸ್ನೇಹಗಳ ಜೊತೆಯಿದೆ...
ಅವಳಿಗೋ ಅವಳ ಕಣ್ಣ ಹನಿಯೊಂದೆ ಆಸರೆ...
ಆದರೂ ಮಾತಿಗೆ ಮುನ್ನ ನೀ ಚೆನ್ನಾಗಿದ್ದೀಯೇನೋ ಅಂತಾಳೆ - ನಾನು ‘ಹಾಂ’ ಅನ್ನುವುದಕ್ಕಾಗಿ ಕಾಯುತ್ತಾಳೆ; ‘ಹಾಂ’ ಅಂದಾಗ ಸಮಾಧಾನದ ಉಸಿರ ಚೆಲ್ಲುತ್ತಾಳೆ... 
ಅವಳು ಅಮ್ಮ - ನಾನು ಸ್ವಾನುಕಂಪದಲ್ಲಿ ತೇಲೋ ಸ್ವಾರ್ಥಿ ಮಗರಾಯ...
ನೆನಪಾದರೆ ಮುಸ್ಸಂಜೆ ಮುಳ್ಳಾಗಿ ಎದೆಯ ಚುಚ್ಚುತ್ತದೆ...  

ಇರುಳು ಅರಳುವ ಹೊತ್ತು, ಅದೇ ತಾರಸಿ, ಅಲ್ಲಿರೋ ಬಟ್ಟೆ ಒಗೆಯೋ ಎರಡೂವರೆ ಅಡಿಯ ಹಾಸುಗಲ್ಲು, ಮೇಲೆ ಮುದುಡಿ ಮಲಗಿರೋ ಹೆಣದಂಥ ನಾನು ಮತ್ತು ನನ್ನ ಮನಸು, ಸುತ್ತ ಬಣ್ಣದ ಬಲ್ಬುಗಳ ಬೆಳಕಲ್ಲಿ ಲಕಲಕ ಅನ್ನೋ ಕಟ್ಟಡಗಳು, ಅಲ್ಯಾವುದೋ ಕಟ್ಟಡದ ಬಾಗಿಲಲ್ಲಿ ಯಾವುದಕ್ಕೋ ಕಾಯುವ ಒಂಟಿ ಹೆಣ್ಣು, ಮನಸಿನ ಬೆವರ ಒಣಗಿಸುವಲ್ಲಿ ಸೋತ ತಂಗಾಳಿ, ಮನದ ಮೂಗ ಹಿಂಡುವ ಕೊಳಕು ವಾಸನೆ ಚರಂಡಿಯದ್ದಲ್ಲ ನನ್ನದೇ ಬದುಕಿನದ್ದು...

 *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)