Thursday, December 13, 2012

ಗೊಂಚಲು - ಐವತ್ತು ಮತ್ತೈದು.....


ಗೊಂದಲದ ಹಾಡು.....

ನನ್ನ ಮನದ ಒಳನೋಟದಂತೆ ನನ್ನ ಕ್ಷಣಗಳು...

"ಕನಸ ಹಕ್ಕಿ ಹಾರುತಿದೆ" 
ಎಂಬ ನನ್ನದೇ ಸಾಲುಗಳು ಮನಸು ನಗುತಿದ್ದಾಗ - ಕನಸುಗಳಿಗೆ ರೆಕ್ಕೆ ಮೂಡಿ ಗಗನಗಾಮಿ ಎಂಬರ್ಥವನ್ನು ಮೂಡಿಸಿದರೆ,
ಮನಸು ಮಗುಚಿ ಬಿದ್ದಾಗ - ಕನಸುಗಳೆಲ್ಲ ನನ್ನ ತೊರೆದು ಹಾರಿ ಹೋಗುತಿವೆ ಎಂಬಂತೆ ಭಾಸವಾಗಿ ಇನ್ನಷ್ಟು ಖಿನ್ನವಾಗಿಸುತ್ತವೆ.

ಎಲ್ಲ ಸರಿಯಿದ್ದಾಗ ಸಣ್ಣ ಸೋಕುವಿಕೆಯೂ ಝೇಂಕಾರವೇ.
ಒಂದು ತಂತಿ ಹರಿದರೂ ಪ್ರತಿ ಸ್ವರವೂ ಅಪಸ್ವರವೇ.
ಬದುಕೂ ಹಾಗೆಯೇ...
ಅದೇ ವೀಣೆ, ಅದೇ ತಂತಿ...
ಮಿಡಿವ ರಾಗಗಳು ನೂರಾರು - ಹೊಮ್ಮಿಸುವ ಭಾವಗಳು ಸಾವಿರಾರು...
ಒಮ್ಮೆ ನಗೆಯ ಝೇಂಕಾರ - ಇನ್ನೊಮ್ಮೆ ನೋವ ಹೂಂಕಾರ...

ಕಾಯುತ್ತ ನಿಂತಾಗಲೆಲ್ಲ ನಾನು ಹೋಗಬೇಕಾದ ಬಸ್ಸೊಂದನ್ನುಳಿದು ಬೇರೆ ಬಸ್ಸುಗಳೆ ಜಾಸ್ತಿ ಬರುತ್ವೆ ಯಾವಾಗಲೂ ಅಥವಾ ನಂಗೇ ಹಂಗನ್ನಿಸುತ್ತಾ...

ಇನ್ನೂ ಏನೋ ಬೇಕಿದೆ ಎಂಬ ತುಡಿತದಲ್ಲೇ  ಬದುಕ ಈ ಕ್ಷಣ ನಗುತಿದೆ 
ಮತ್ತು
ಆ ತುಡಿತದಲ್ಲೇ ನಗಬೇಕಿದ್ದ ಬದುಕ ಹಲ ಕ್ಷಣಗಳು ನಲುಗಿದ್ದೂ ಇದೆ...
ನಿನ್ನೆ ಅದ್ಭುತವಾಗಿ ಕಂಡ ಕನಸು ಇಂದು ನನಸಾಗಿ ಕೈಸೇರಿದಾಗ ಕ್ಷುಲ್ಲಕ.
ನಿನ್ನೆ ಇದೇನು ಹೊಳೆಯಾ ಅಂತಂದು ಅಣಕಿಸಿ ನಾ ದಾಟಿ ಬಂದಿದ್ದ ಪುಟ್ಟ ತೊರೆ - ಇಂದು ಹೊಸ ಝರಿಗಳ ಒಳಗೊಂಡು ದೊಡ್ಡ ಹಳ್ಳವಾಗಿ ಬೆರಗು ಮೂಡಿಸಿ, ದಾಟಿ ಹೋಗದಂತೆ ತನ್ನ ಸುಳಿಗಳಲಿ ಎನ್ನ ಮುಳುಗೇಳಿಸುತ್ತೆ...

ಕಣ್ಣಿಂದ ಜಾರಿದ ಹನಿ -
ಕನಸೊಂದು ಅರ್ಧಕ್ಕೇ ಸತ್ತುಹೋದದ್ದಕ್ಕೆ ಶ್ರದ್ಧಾಂಜಲಿಯಾ ಅಥವಾ ಹೊಸಕನಸಿಗೆ ಬಾಗಿಲು ತೆರೆಯಬಹುದಾದ ಖುಷಿಗಾ ಎಂದರ್ಥವಾಗದೇ ಕಂಗಾಲಾಗ್ತೇನೆ...

ಗೊಂದಲಗಳ ತೆರೆಗಳ ಮೇಲೆ ಹೊಯ್ದಾಡುತಿದೆ ಜೀವನ ನೌಕೆ...
ಸದಾ ನನ್ನ ಕಾಡುವ ನನ್ನದೇ ಮನಸಿನ ಮಾಯೆಗಳಿಗೆ ಏನೆನ್ನಲಿ...

Wednesday, December 5, 2012

ಗೊಂಚಲು - ಐವತ್ನಾಕು.....

ಕ್ಷಮಿಸು.....
ಹೇಳಬಾರದ ಕೆಲವು ಸತ್ಯಗಳು ಹೀಗಿಲ್ಲಿ ಹೇಳಲ್ಪಟ್ಟಿವೆ..

ನೋವು ಕಾಡಲಿ, ನಗುವು ಹಾಡಲಿ, ನಾನಾದರೆ ಬರೆದು ನಿಸೂರಾಗುತ್ತೇನೆ.
ಯಾವುದ ಬರೆದರೂ ನಂಗೊಂದಿಷ್ಟು ಶಹಬ್ಬಾಶ್ಗಿರಿ ಸಿಗುತ್ತೆ. 
ಮುಖವೇ ಕಾಣದ 'ಮುಖಪುಟ'ದಲ್ಲಿ ನನ್ನ ನೋವಿಗೊಂದಿಷ್ಟು ಸಾಂತ್ವನ. 
ನಗುವಿಗೆ ಅವರೂ ಕಾರಣ...
ನೀನೇನು ಮಾಡ್ತೀಯ ಅಷ್ಟೈಶ್ವರ್ಯಗಳ ನಡುವೆಯೂ ಒಬ್ಬಂಟಿ ಜೀವಿ.
ಮಗನಿದ್ದೂ, ಮನೆಯಿದ್ದೂ ಜೊತೆಯಿಲ್ಲದ ಬದುಕು.
ಸುತ್ತ ಹಸಿರಿದ್ದರೇನು ನಗುವ ಗಾಳಿ ಬೆಳಕು ಮನೆಯ ಪಡಸಾಲೆಯಲಿ ಕುಣಿಯದಿದ್ದರೆ...
ಎಲ್ಲ ಇದ್ದೂ ನಿನಗಲ್ಲಿ ಉಪವಾಸ. 
ನಿನ್ನ ನೆನಪು ತೀವ್ರವಾದಾಗ ಹುಣ್ಣಿಮೆ ಚಂದಿರನೂ ನನ್ನೊಡನೊಮ್ಮೆ ಅಳುತ್ತಾನೆ. 
ಮಾರನೆ ಬೆಳಗು ಆ ನೋವೆಲ್ಲ ಅಕ್ಷರವಾಗುತ್ತೆ. 
ಅಲ್ಲಿಗೆ ನಾನು ಮತ್ತೆ ಎಂದಿನಂತೆ. 
ನನ್ನ ದುಡಿಮೆ, ನನ್ನ ರಿಕಗ್ನಿಷನ್, ನನ್ನ ಪದವಿ, ನನ್ನ ನಿತ್ಯದ ಒಡ್ಡೋಲಗದಲ್ಲಿ ನಾನು ಪರಮ ಬ್ಯೂಸಿ. 
ನಿನ್ನ ನೆನಪ ನೋವೂ ನನ್ನ ಬ್ಲಾಗ್ ನ ಹಲವು ಗೊಂಚಲುಗಳಲ್ಲಿ ಒಂದು. 
ಅಲ್ಲೆಲ್ಲಿಂದಲೋ ನೀನು ಫೋನಾಯಿಸಿ ಚೆನ್ನಾಗಿದೀನಿ ಅನ್ನುವ ನಿನ್ನ ಮಾತಲ್ಲಿ ಮತ್ತು ನೀನು ಚೆನ್ನಾಗೇ ಇದೀಯಾ ಅಂತ ನಾನು ನಂಬುವುದರಲ್ಲಿ; ಎರಡರಲ್ಲೂ ನಂಗೆ ನನ್ನ ಸುಖದ ಸ್ವಾರ್ಥವೇ ಕಾಣುತ್ತೆ.
ನಿನ್ನೆ ನಿನ್ನ ನೆನಪಲ್ಲಿ ಅತ್ತಿದ್ದು ನಾನೇನಾ ಮತ್ತು ಆ ಅಳು ಪ್ರಾಮಾಣಿಕವಾ ಎಂದು ಅನುಮಾನ ಇಂದು ನನಗೆ. 
ಇಂತಿಪ್ಪ ನಾನು ಇಲ್ಲಿ ತಿಂದುಂಡು, ತಿರುಗಿ ನನ್ನದೇ ಸುಖಗಳಲ್ಲಿ ಲೀನ. 
ನನ್ನ ಬೇರು ನೀನಲ್ಲಿ ಇಂಚಿಂಚಾಗಿ ಪ್ರಾಣ ಹೀನ. 
ನಾನು ಊರ ತೊರೆದ, ಪರವೂರಲ್ಲಿ ಮೆರೆದ ಸುದ್ದಿಗಳ ನಡುವೆ ನಡುಗುವ ನಿನ್ನ  ಮುಪ್ಪಿನ ಕೈಗಳ ಊರುಗೋಲು ಮುರಿದ ಸದ್ದು ಯಾರಿಗೂ ಕೇಳಲೇ ಇಲ್ಲ. 
ಹೆಜ್ಜೆ ಎತ್ತಿಡುವಾಗಲೆಲ್ಲ ಹೊರಬರುವ ನಿನ್ನ ನಿಟ್ಟುಸಿರು ನನ್ನ ತಾಕಲೇ ಇಲ್ಲ.
ತನ್ನ ನೋವನ್ನು ಹೇಳಿದರೆ ಎಲ್ಲಿ ನಾನು ನೊಂದುಕೊಳ್ತೀನೋ ಅಂತ ನಿನ್ನಲ್ಲೇ ಬಚ್ಚಿಟ್ಟುಕೊಂಡು ನೋವ ಹೀರಿ ಬದುಕುತಲಿರುವ ನೀನು ನಲಿವ ಕೊಲ್ಲುವ ಬದುಕಿಗೊಂದು ಸವಾಲು.
ಅಷ್ಟೆಲ್ಲ ನೋವುಗಳ, ಅವಮಾನಗಳ - ಹಂಚಿಕೊಳ್ಳದೇ, ಹರವಿಕೊಳ್ಳದೇ ನಿನ್ನಲ್ಲೇ ಹೀರಿಕೊಂಡು ಅದ್ಹೇಗೆ ನಗುತ್ತೀಯ.
ಅದ್ಯಾವ ಮೂಲದಲ್ಲಿ ಒಸರುತ್ತೆ ನಿನ್ನಲ್ಲಿ ಅಂತ ಪರಿ ಜೀವನ ಪ್ರೀತಿ. 
ನಿನ್ನದೇ ಮುಂದುವರಿಕೆ ನಾನು; ಆದರೆ ಕಂಗೆಡುತ್ತೇನೆ ಸಣ್ಣ ಅವಘಡಕ್ಕೂ.
ನಗುವಲ್ಲಿ ನೆನೆಯದೇ ನನ್ನ ನೋವಲ್ಲಿ ನಿನ್ನ ಮರೆಯದ ನನ್ನ ಕ್ರೌರ್ಯ ನನ್ನನ್ನೇ ಕಾಡುತ್ತದೆ ಆಗಾಗ; ಕಟುಕನ ಮನದ ಪಾಪಪ್ರಜ್ಞೆಯಂತೆ. 
ಎಲ್ಲ ತಿಳಿದೂ ಏನೂ ಮಾಡಲಾರದ ನನ್ನ ಅಸಹಾಯಕತೆ ಯಾವಾಗಲೂ ಅಣಕಿಸುತ್ತದೆ ನನ್ನ ಗಂಡೆಂಬ ಅಹಂಕಾರವ. 
ಹಸಿರ ಸಿರಿಯ ನಡುವೆ ನೀನಲ್ಲಿ ಒಂಟಿ. 
ಜನಜಾತ್ರೆಯ ನಡುವೆ ನಾನಿಲ್ಲಿ ಏಕಾಂಗಿ.
ಹೇಳಬಲ್ಲೆ ಇಷ್ಟನ್ನೇ - 
ಅಮ್ಮಾ ಕ್ಷಮಿಸಿಬಿಡು ಈ ನಿನ್ನ ಮಗನನ್ನು ಹಡೆದ ನಿನ್ನದೇ ತಪ್ಪಿಗೆ.

Saturday, December 1, 2012

ಗೊಂಚಲು - ಐವತ್ಮೂರು.....


'ಮಾಯಾ' ಜಾಲ.....

ಮೆಜೆಸ್ಟಿಕ್ಕಿನ ಜನ ಜಾತ್ರೆಯ ಜಂಗುಳಿ ನಡುವೆ 
ಸುಮ್ಮನೆ ಸಣ್ಣಗೆ ನಕ್ಕು ಮರೆಯಾಗುವ 
ಆ 
ಅರಳು ಕಂಗಳು...

ಹಳೆಯ ಯಾವುದೋ ಮಧುರ ನೆನಪೊಂದು
ಕೈಜಗ್ಗಿ
ಹೆಗಲು ತಬ್ಬಿ
ನೆತ್ತಿ ನೇವರಿಸಿ
ಹಣೆಯ ಮುದ್ದಿಸಿ 
ಇನ್ಯಾವುದೋ ಬೆಚ್ಚನೆ ಕನಸಿನ ಲೋಕಕ್ಕೆ ಒಯ್ದಂತೆ
ಯಾವುದೋ ಭಾವ ಲೋಕಕ್ಕೆ ನನ್ನ ಮನವ 
ಹೊತ್ತೊಯ್ಯುತ್ತವೆ...
ಕಂಡ ಪ್ರತಿ ಬಾರಿಯೂ...

ಮನವಾಗ 
ಸುರಿಯಲು
ಇಳೆಯ ಇಶಾರೆಗೆ ಕಾಯುತಿರುವ
ಮೋಡಗಟ್ಟಿದ ಬಾನು...

ಅವಳ ಕಣ್ಗಳ ಭಾವಗಳ ಓದಲು ಒದ್ದಾಡುತ್ತಾ
ಕಣ್ಗಳ ಒಡತಿಯ ಅಪರಿಚಿತತೆಯನ್ನು ಮರೆತು
ಹೊಸ ಕವನಕ್ಕೆ ಕಾವು ಕೊಟ್ಟ ಕವಿಯಂತೆ ನಲಿಯುತ್ತೇನೆ...

ಅವಳದೊಂದು ಕಿರುನಗೆಗೆ ಕಾಯುತ್ತ ಕಾಯುತ್ತ
ಹಸುಳೆಯ ಎಳೆ ದವಡೆಯಿಂದ ಕೆನ್ನೆ ಕಚ್ಚಿಸಿಕೊಂಡ
ಹಿತವಾದ ಯಾತನೆಯ ಖುಷಿಯ ಸವಿಯುತ್ತೇನೆ...

ಬಳುಕಿ ನಡೆವಾಗಿನ ಅವಳ ನೀಳವೇಣಿಯ ವೈಯಾರವ ಕಂಡು
ಒಂದು ಕ್ಷಣದ ಎನ್ನೆದೆಯ ಏರಿಳಿತ
ಪಕ್ಕ ಕುಳಿತ ಯಾರೋ ತಾತನ ಬೊಚ್ಚು ಬಾಯಲ್ಲಿ 
ಮುಗುಳ್ನಗೆಯಾಗಿ ತೋರುತ್ತದೆ...

ಅವಳೆದೆಯ ಗೊಂಚಲ ನಡುವೆ ಬೆಚ್ಚಗೆ
ಮೈಮರೆಯುವ ಆಸೆಗೆ
ಕನಸಲ್ಲೂ ಉಸಿರುಗಟ್ಟುತ್ತೇನೆ...

ನಕ್ಕೂ ನಗದಂತಿರುವ ಅವಳು
ಕುಡಿನೋಟಕ್ಕೂ ಚಡಪಡಿಸುವ ನಾನು
ಎನ್ನ ಮನದಿ ಕುಣಿದಾಡುವ ಭಾವ
ಅದು
ಬರೀ ಮೋಹವೋ
ಪ್ರೇಮವೋ - ಕಾಮವೋ
ಇವೆಲ್ಲ ಸೇರಿದ ಇನ್ಯಾವುದೋ
ಏನೆಂದು ಅರ್ಥೈಸಿಕೊಳ್ಳಲಾಗದೇ
ಹೊರಚೆಲ್ಲುವ ಭಾವಗಳ ಹಿಡಿದಿಟ್ಟುಕೊಳ್ಳಲು ಒದ್ದಾಡುತ್ತಾ
ಒಂದಿಷ್ಟು ಪುಳಕಗಳೊಂದಿಗೆ
ಕಾಲ ತಳ್ಳುತ್ತಿದ್ದೇನೆ...
ಹಾಗೇ ಸುಮ್ಮನೆ...

ಒಂದಂತೂ ಸತ್ಯ...
ಮನಸನ್ನು ಅವಳ ಉಡಿಯಲ್ಲಿ ಅಡವಿಟ್ಟು ಬಹುಕಾಲ ಸಂದು ಹೋಯಿತು...
ಬಿಡಿಸಿಕೊಳ್ಳುವ ಪರಿಯ ತಿಳಿಯದೇ ಬುದ್ಧಿ ಕಂಗಾಲು ಕಂಗಾಲು...
ಬಿಟ್ಟೇನೆಂದರೂ ಬಿಡದೀ ಮನಕೆ ಕವಿದ ಮರುಳ 
'ಮಾಯೆ...'

Monday, November 26, 2012

ಗೊಂಚಲು - ಐವತ್ತು ಮತ್ತೆರಡು.....

ದ್ವೀಪ.....

ಆಗಿರುವೆ -
ಸುತ್ತ ಮೊರೆವ ಸಾಗರದ ನಡುವೆ ನಾನೊಂದು ಏಕಾಂಗಿ ಕಲ್ಲು ದ್ವೀಪ...
ಯಾಕಿಲ್ಲಿ ಇನ್ನೂ ಇದ್ದೇನೆ..
ಒಡೆದು ಚೂರಾಗಿ ಹೋಗದೇ...

ಆಸೆಯಾಗುತ್ತೆ ನಂಗೂ ಭಾವಬಂಧಗಳ ಒಳಗೊಂಡು ಹಿಗ್ಗಬೇಕೆಂದು...
ಆದರೇನ ಮಾಡಲಿ 
ಒಡಲ ಗೀತೆ ಹಾಡಲರಿಯದ ಮೂಕ ನಾನು...

ಎಲ್ಲೋ ಕಣ್ಣು ಹಾಯದ ದೂರದಲ್ಲಿ ನಾವೆಯೊಂದು ತೇಲಿದರೆ
ಅದು ನನ್ನನೇ ಅರಸಿ ಬಂತೆಂದು ಭ್ರಮಿಸಿ,
ನಾನಿಲ್ಲಿ ಹೊಸ ಕನಸಿಗೆ ಕಣ್ಣರಳಿಸುತ್ತೇನೆ...
ಬಳಿ ಬಂತೆಂದುಕೊಂಡ ನಾವೆ ಮಾರು ದೂರದಿಂದಲೇ ತಿರುಗಿಯೂ ನೋಡದೆ ನನ್ನಿಂದ ಮುಂದೆ ಸರಿದು ಹೋಗುತ್ತೆ...
ಆಗೆಲ್ಲ ಮನ ಬಿಕ್ಕಳಿಸುತ್ತೆ...
ಸಾಗರನ ಮೊರೆತದಬ್ಬರಕೆ ಬಿಕ್ಕಳಿಸಿದ ಸದ್ದು ನನಗೂ ಕೇಳಿಸದಂತಾಗಿ,
ನಾನತ್ತದ್ದು ನನಗೇ ಸುಳ್ಳೆನಿಸಿ ಮತ್ತಷ್ಟು ಕಂಗೆಡುತ್ತೇನೆ...
ಅಪಾರ ಜಲರಾಶಿಯಲ್ಲಿ ಲೀನವಾದ ಕಣ್ಣ ಹನಿಗೇನೂ ವಿಶೇಷ ಅಸ್ತಿತ್ವವಿಲ್ಲ...
ನನ್ನ ಕಣ್ಣ ಹನಿಯಿಂದೇನೂ ಸಾಗರದ ಪಾತ್ರ ವ್ಯತ್ಯಾಸವಾಗಲ್ಲ...
ಮನಸೂ ಬಂಡೆಯಾಗಿರುವ ಮಾತ್ರಕ್ಕೆ  ಇನ್ನೂ ನಿಂತಿದ್ದೇನೆ ಅಚಲವಾಗಿ...
ಹೊಸ ಕನಸಿನ ನೌಕೆ ಬಳಿ ಸುಳಿಯದಿದ್ದರೂ - ಒಂದಲ್ಲ ಒಂದು ದಿನ ನಾನಿರುವಲ್ಲಿ ನನಗಾಗಿಯೇ ಬಂದೇ ಬರುವುದು ಕಾಲನ ನಾವೆ...
ಅಲ್ಲಿಯವರೆಗೆ ಮೊರೆತಕ್ಕೆ ಮೈಯೊಡ್ಡಿ ಅದೇ ಸುಖವೆಂದುಕೊಂಡು ಕಾಯುತ್ತಲೇ ಇರುತ್ತೇನೆ - 
ಒಂಚೂರು ಒಲವಿಗೆ, ಸಣ್ಣ ಗೆಲುವಿಗೆ, ಮಗುವ ನಗುವಿಗೆ, ನಾನೂ ಜೀವಂತ ಅಂತ ನನಗೂ ಅನ್ನಿಸುವಂತೆ ಒಂದು ಕ್ಷಣವಾದರೂ ಜೀವಿಸುವ ಕನಸಿಗೆ...

Tuesday, November 20, 2012

ಗೊಂಚಲು - ಐವತ್ತೊಂದು.....


ಬದುಕ ಖುಷಿಯ ಒಳಸೆಲೆಯ ಚಿಲುಮೆಗಳು.....

ಅಕ್ಷರ ಪ್ರೀತಿ...
                      ಭಾವ ಧಾರೆಯ ಹಾಡು...
                                                         ಸ್ನೇಹ ಗಂಗೆಯ ಹರಿವು.....


ಅಲೌಕಿಕ ಆನಂದ ಅಂತ ಒಂದಿದ್ದರೆ 
ಅದು 
ನಮ್ಮಿಷ್ಟದ ವಿಷಯದ ಹೊತ್ತಿಗೆಯೊಂದನ್ನ ಒಂದೇ ಗುಕ್ಕಿನಲ್ಲಿ ಓದುವುದರಲ್ಲಿ...
ತಾದಾತ್ಮ್ಯದಿಂದ ಚಂದನೆಯದೊಂದು ಹಾಡು ಕೇಳುವುದರಲ್ಲಿ...
ಆತ್ಮೀಯ ಗೆಳೆಯರೊಂದಿಗಿನ ಮೌನದಲ್ಲಿ  ಮಾತ್ರ ಇದೆಯೇನೋ.
ನನ್ನ ಮಟ್ಟಿಗಂತೂ ಅದು ಸತ್ಯ.
ನನ್ನಲ್ಲೂ ಒಬ್ಬ ಭಾವುಕನನ್ನು ನಾನು ಕಾಣೋದು ಈ ಸಂದರ್ಭಗಳಲ್ಲಿ ಮಾತ್ರ.
ಹಗಲ ಏಕಾಂತದಲ್ಲಿ ಒಂದು ಪುಸ್ತಕ...
ರಾತ್ರಿಯ ಕತ್ತಲ ನೀರವತೆಯಲ್ಲಿ ಒಂದಿಷ್ಟು ಭಾವಗೀತೆ...
ಆಗಾಗ ಹೃನ್ಮಿತ್ರರೊಂದಿಗೆ ಧುಮ್ಮಿಕ್ಕುವ ಮಾತು...
ದಿನಗಳೆಲ್ಲ ಕ್ಷಣಗಳಲ್ಲಿ ಕಳೆದು ಹೋದಾವು.

ಅಕ್ಷರ :


ಪುಸ್ತಕ - ಅದು ನಮ್ಮಿಂದ ಯಾವುದೇ ರೀತಿಯ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೇ ಖುಷಿಯನ್ನು ಪಡೆದಷ್ಟೂ ಮೊಗೆಮೊಗೆದು ಕೊಡುವ, ನಮ್ಮಲ್ಲಿ ಜ್ಞಾನದಸೆಲೆ ಉಕ್ಕುವಂತೆ ಮಾಡುವ ಏಕೈಕ ಮಿತ್ರ.

ಓದಿನ ಬಳುವಳಿಯಾದ ಅರಿವಿನಿಂದ ನಮ್ಮ ಜೀವನಾನುಭವವನ್ನು ವಿಮರ್ಶಿಸಿಕೊಳ್ಳುವಂತಾದಾಗ ಸಹಜವಾಗಿ ನಮ್ಮೊಳಗೊಂದು ಪ್ರಭುದ್ಧತೆ ಮೇಳೈಸಿ ಬದುಕು ಇನ್ನಷ್ಟು ಆನಂದದಿಂದ ಕೂಡಿ ಚೆಂದವೆನಿಸುತ್ತದೆ.

ಓದು ತೀರ ನಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತೋ ಇಲ್ಲವೋ ಗೊತ್ತಿಲ್ಲವಾಗಲೀ,
ಆದರೂ
ಮನಸಿನಾಳದಲ್ಲಿ ಎಲ್ಲೋ ಏನೋ ಕದಲಿದಂತಾಗಿ ಸ್ವಲ್ಪೇ ಸ್ವಲ್ಪಾದರೂ ನಮ್ಮನ್ನೇ ನಾವು ವಿಮರ್ಶಿಸಿಕೊಳ್ಳುವಂತೆ ಮಾಡುವುದಂತೂ ಸತ್ಯ.
ನಿಧಾನವಾಗಿಯಾದರೂ ಸರಿ ಆತ್ಮ ವಿಮರ್ಶೆ ನಮ್ಮನ್ನು ಬೌದ್ಧಿಕವಾಗಿ, ಮಾನಸಿಕವಾಗಿ ಚಿಂತನಶೀಲವಾಗಿ ಬೆಳೆಯುವಂತೆ ಮಾಡುತ್ತದೆ.
ನಿಧಾನವೇ ಆದರೂ ಬೆಳವಣಿಗೆ ಬೆಳವಣಿಗೆಯೇ ತಾನೆ...
ಕಲ್ಲು ಬೆಳೆಯುವುದು ನಿಧಾನ ಅಂತ ಅದು ವಿಕಾಸವಾಗುತ್ತಲೇ ಇಲ್ಲ ಎನ್ನಲಾಗದಲ್ಲ.
ನಿಧಾನಗತಿಯ ಪರಿವರ್ತನೆಯನ್ನು ಗುರುತಿಸುವುದು ಕಷ್ಟವಾಗಬಹುದು...
ಹಾಗಂತ ಆಗುತ್ತಿರುವ ವಿಕಾಸವನ್ನು ಅಲ್ಲಗಳೆಯಲಾಗದಲ್ಲ.
ಯಾರೋ ಬರೆದ ಯಾವುದೋ ಒಂದು ಸಾಲು 
ಓದಿನಿಂದ ನಮ್ಮದೇ ಆಗಿ ನಮ್ಮಲ್ಲಿ ವಿಕಸಿತವಾಗುವುದು ಅಕ್ಷರದ ಸಾಮರ್ಥ್ಯ...

ಪುಸ್ತಕದ ಮಾತು ಬಂದಾಗ ವಾಲ್ಮೀಕಿಯ - ಪ್ರಥಮ ಪ್ರಿಯ ಸಮಾಗಮದಲ್ಲಿ ಹೆಣ್ಣು ನಾಚಿಕೆ, ಸಂಕೋಚಗಳಿಂದ, ಪ್ರಿಯಕರನ ಪ್ರೋತ್ಸಾಹದಿಂದ ಇಷ್ಟಿಷ್ಟೇ ಬೆತ್ತಲಾಗುತ್ತ ಹೋಗುತ್ತಾಳೆಂಬರ್ಥದ ಮಾತು ನೆನಪಾಗುತ್ತೆ.
ಕಾರಣ -
ಇಷ್ಟಪಟ್ಟು ತಂದಿಟ್ಟುಕೊಂಡ ಪುಸ್ತಕಗಳನ್ನು ಮತ್ತೆ ಮತ್ತೆ ಓದಿದಾಗ ಆಗುವ ಅನುಭೂತಿ.
ಈ ಪುಸ್ತಕಗಳೂ ವಾಲ್ಮೀಕಿಯ ಹೆಣ್ಣಿನಂತೆಯೇ ಅಂತನ್ನಿಸುತ್ತೆ.
ಪ್ರತೀ ಬಾರಿ ಓದಿದಾಗಲೂ ಬೇರೆ ಬೇರೆ ರೀತಿಯಲ್ಲಿ ಇಷ್ಟಿಷ್ಟಾಗಿ ಅರ್ಥವಾಗ್ತಾ ಹೋಗುತ್ತವೆ.
ಓದಿದ ಒಂದೇ ಸಾಲು ಅದು ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಹೊಸ ಹೊಸ ಅರ್ಥ ಮತ್ತು ಭಾವಗಳನ್ನು ಮೂಡಿಸಿ ಬೆರಗುಗೊಳಿಸುತ್ತೆ.
ನಮ್ಮ ಅನುಭವಗಳ ನೆಲೆಯಲ್ಲಿ ಓದಿನ ಹೊಳಹು ಬದಲಾಗುತ್ತ ಸಾಗುತ್ತದೆ.
ಹೊಸದಾದ ಮನೋ ಮಂಥನಕ್ಕೆ ಎಡೆಮಾಡಿ ಬದುಕನ್ನು ಇನ್ನಷ್ಟು ಪಕ್ವವಾಗಿಸುತ್ತದೆ.
ಒಮ್ಮೆ ಗೆಳತಿಯಾಗಿ, ಇನ್ನೊಮ್ಮೆ ಪ್ರಿಯತಮೆಯಾಗಿ, ಮತ್ತೊಮ್ಮೆ ಬರೀ ಹೆಣ್ಣಾಗಿ, ಹಲವೊಮ್ಮೆ ತಾಯಂತೆ ಸಲಹುವ ಅದೇ ಹೆಂಡತಿಯಂತೆ...

ಹಾಡು :


ಖುಷಿಯ ಘಳಿಗೆಯಲಿ ಖುಷಿಯ ಇಮ್ಮಡಿಸಿ, ಯಾವುದೋ ನೋವಿಗೆ ಏನೋ ಸಾಂತ್ವನವಾಗಿ ಮನವ ಮೃದುವಾಗಿಸುವ ಮನದ ಗೆಳೆಯ ಹಾಡು.
ಯಾರದೋ ಗೀತೆ ಇನ್ನಾರದೋ ಕಂಠದಲಿ ಹಾಡಾಗಿ ನಲಿದು - ಕೇಳುಗನ ಕಿವಿಯ ಸೇರಿ - ಮನವನಾಲಂಗಿಸಿ ಲಾಲೈಸುವ ಆ ಪರಿ ಎಂಥ ಸೊಗಸು.

ತಲೆಯದೂಗಿಸುವ ಹಾಡು, ಸದಾ ಗುಣುಗುಣಿಸುವ ಹಾಡು, ತಕಥೈ ಕುಣಿಸುವ ಹಾಡು, ಕಣ್ಣ ಹನಿಗಳ ಹಾಡು, ನಗೆಯ ಚಿಮ್ಮುವ ಹಾಡು ಎಷ್ಟೆಲ್ಲ ವೈವಿಧ್ಯದ ಹಾಡುಗಳು...

ಯಾವ ಹಾಡಾದರೇನು - 
ಹಾಡೆಂದರೆ ಖುಷಿ, ಹಾಡೆಂದರೆ ಮಮತೆ, ಹಾಡೆಂದರೆ ಪ್ರೀತಿ, ಹಾಡೆಂದರೆ ವಿರಹ, ಹಾಡೆಂದರೆ ಏನೇನೋ ಭಾವ ಸಮ್ಮಿಲನ...

ಪುಸ್ತಕ ಮತ್ತು ಹಾಡು ಇವೆರಡಕ್ಕೆ ಕೊರತೆ ಆಗದಿದ್ರೆ ಒಂದಿಡೀ ಬದುಕನ್ನು ಒಂಟಿಯಾಗಿ ಕಳೆದುಬಿಡಬಹುದೇನೋ...
ಜೊತೆಗೆ ಸಮಾನ ಅಭಿರುಚಿಯ ಸ್ನೇಹಿತರೂ ಸೇರಿಕೊಂಡರೆ ಬದುಕೊಂದು ನಳನಳಿಸುವ ಹೂವಿನ ತೋಟವೇ ಸರಿ...

ಸ್ನೇಹ :


ಎರಡು ಜೀವಗಳ ನಡುವೆ ಹಬ್ಬಿ ನಗುವ ಆತ್ಮೀಯ ಭಾವ ಸಂಬಂಧ ಸ್ನೇಹವೆಂದರೆ.

ಗೆಳೆತನವೊಂದು ಹಬ್ಬಿ ನಿಲ್ಲುತ್ತದೆ -
ಅಂಗಳದ ಕಂಬಕ್ಕೆ ಮಲ್ಲಿಗೆಯ ಬಳ್ಳಿಯೊಂದು ತಬ್ಬಿ ಹಬ್ಬಿ ನಿಂತಂತೆ ಸೊಗಸಾಗಿ...
ಸಮಾನ ಅಭಿರುಚಿಗಳ ನೀರು ಗೊಬ್ಬರ ಸಿಕ್ಕರೆ.

ಒಂದು ಚಂದನೆಯ ಸ್ನೇಹವನ್ನು ಬದುಕಿನ ಯಾವುದೇ ಕ್ಷಣದಲ್ಲಾದರೂ ಮರೆಯೋಕೆ ಸಾಧ್ಯವಾ..??

ಇಂದು ಜೀವದ ಸ್ನೇಹಿತರಾದ ಇಬ್ಬರು ಮುಂದೆಂದೋ ಬದುಕಿನ ಅನಿರೀಕ್ಷಿತ ತಿರುವುಗಳಲ್ಲಿ ಕವಲೊಡೆದ ದಾರಿಯಲ್ಲಿ ನಡೆಯಬೇಕಾದೀತು.
ಅರಿವೇ ಇಲ್ಲದೆ ಮತ್ತೆಂದೂ ಮುಖಾಮುಖಿಯಾಗದೇ ಹೋಗುವಷ್ಟು ದೂರಾಗಬಹುದು. 
ಕೊನೆಗೆ ಪರಿಸ್ಥಿತಿಯ ಒತ್ತಡದಲ್ಲಿ ಶತ್ರುಗಳೂ ಆಗಿಬಿಡಬಹುದೇನೋ.
ಆದರೂ ಆ ಶತ್ರುತ್ವದ ಆಳದಲ್ಲೂ ಮನದ ಮೂಲೆಯಲ್ಲಿ ಗೆಳೆತನದ ನರುಗಂಪು ಸುಳಿದಿರುಗದಿದ್ದೀತಾ...
ಮಿತ್ರರಾಗಿದ್ದಾಗ ಜೊತೆಯಾಗಿ ಕಳೆದ ಘಳಿಗೆಗಳ ಮರೆಯಲಾದೀತಾ..??
ಅದು ಸ್ನೇಹದ ತಾಕತ್ತು ಮತ್ತು ಶ್ರೇಷ್ಠತೆ.

ಮುಂಜಾನೆ ಮಂಜಲ್ಲದ್ದಿದ ಸೂರ್ಯಕಿರಣವನ್ನು ನೋಡುವಾಗ ಫಕ್ಕನೆ ನೆನಪಾಗಿಬಿಡುವ ಪ್ರೀತಿಯ ಗೆಳೆಯನ ಯಾವುದೋ ಖುಷಿಯ ಮಾತು ಆ ದಿನವೆಲ್ಲ ನಮ್ಮನ್ನ ಶಾಂತಿಯಿಂದ, ಸಂತೃಪ್ತಿಯಿಂದ ಕಳೆಯುವಂತೆ ಮಾಡಲಾರದೇ...
ನಮ್ಮನ್ನು ಇನ್ನಷ್ಟು ಉತ್ಸಾಹಿತರನ್ನಾಗಿಸದೇ...
ಸೋತ ಜೀವಕ್ಕೆ ಚೈತನ್ಯಧಾರೆಯೆರೆಯಲಾರದೇ...
ನಮ್ಮನ್ನು ಹೊಸ ಗೆಲುವಿನೆಡೆಗೆ ತುಡಿವಂತೆ, ಹೊಸ ಎತ್ತರಕ್ಕೆ ಏರುವಂತೆ ಪ್ರೇರೇಪಿಸಲಾರದೇ...
ಅಂಥದೊಂದು ಸ್ನೇಹಭಾವವನ್ನು, ಆ ಭಾವವನ್ನು ಕೊಡಮಾಡಿದ ಆತ್ಮಬಂಧುವಿನಂತ ಸ್ನೇಹಿತನನ್ನು ಎಂದಿಗಾದರೂ ಮರೆಯುವುದು ಸಾಧ್ಯವಾ..??
ಮರೆತವನು ಮನುಜನೆನಿಸಿಕೊಂಡಾನಾ..??

"ಶುಭ ಹಾರೈಕೆಗಳೊಂದಿಗೆ ವಿದಾಯವನ್ನು ಕೋರುತಿರುವ ಸ್ನೇಹಿತನ ಕಣ್ಣುಗಳೊಳಕ್ಕೆ ಇಣುಕು. ಅಲ್ಲಿ ಮನದಾಳದಲ್ಲಿ ಮೂಡಿದ ವಿದಾಯದ ವೇದನೆ ಹೆಪ್ಪುಗಟ್ಟಿರುತ್ತದೆ. ಭಾವಾವೇಷ ಕಣ್ಣ ಹನಿಯಾಗಿ ಹೊರಜಾರಲು ಸಿದ್ಧವಾಗಿ ಕಂಗಳನ್ನು ಮಂಜಾಗಿಸಿರುತ್ತದೆ."

"ತುಂಬು ಜೀವನ್ಮುಖೀ ವ್ಯಕ್ತಿಯಲ್ಲಿ ಕೂಡ ಸ್ನೇಹಿತನ ಅಗಲುವಿಕೆ ಮನದ ತುಂಬ ಒಂದು ಶೂನ್ಯಭಾವವನ್ನು ಸೃಷ್ಟಸಿರುತ್ತದೆ. ಆ ಅಗಲುವಿಕೆ ತಾತ್ಕಾಲಿಕದ್ದಾದರೂ ಕೂಡ. ಅದು ಪಕ್ವಗೊಂಡ ಸ್ನೇಹದ, ಮನಸು ಮಾತ್ರ ಅರ್ಥೈಸಿಕೊಳ್ಳಬಲ್ಲ, ವಿವರಿಸಲಾಗದ ಅನುಭಾವದ ಭಾವ ಶೂನ್ಯತೆ."
ಅಂಥ ಒಲವಧಾರೆಯ ಗೆಳೆತನದ ಕಲ್ಪನೆಯೇ ಎಷ್ಟು ಚಂದ.

ಅಹಂನ್ನು ಮರೆತು ಬೆರೆಯಬಲ್ಲೆವಾದರೆ, ಪ್ರಜ್ಞಾವಂತಿಕೆಯನ್ನು ಹೀರಿ ಬೆಳೆಯಬಲ್ಲೆವಾದರೆ, ಚಂದವಾಗಿ ಗೆಳೆತನವೊಂದನ್ನು ನಿಭಾಯಿಸಬಲ್ಲ ತಿಳುವಳಿಕೆ ನಮಗಿದ್ದರೆ ಖಂಡಿತಾ ಗೆಳೆತನವೊಂದು ನಮ್ಮ ಬದುಕ ಬೆಳಗಿಸಬಲ್ಲದು.

ಓದು ನಮ್ಮನ್ನು ಇನ್ನಷ್ಟು ಬೆಳೆಸಲಿ...
ಅಕ್ಷರ ಪ್ರೀತಿ ಹೊಸ ಬಾಂಧವ್ಯಗಳ ಬೆಸೆಯಲಿ...
ಮನದ ಮಡಿಲಲ್ಲಿ ಹೊಸ ಹಾಡು ಹುಟ್ಟಲಿ...
ಬದುಕ ತೋಟ ಹೂವಂತ ಗೆಳೆಯರಿಂದ ನಳನಳಿಸಲಿ...

ಈ ಬರಹ "ಕಹಳೆ ಆವೃತ್ತಿ - 2"ರಲ್ಲಿ 20-11-2012ರಂದು ಪ್ರಕಟವಾಗಿದೆ.
http://www.kahale.gen.in/2012/11/blog-post_20.html#comment-form

ಚಿತ್ರ ಕೃಪೆ : ಅಂತರ್ಜಾಲ.

Wednesday, November 7, 2012

ಚಿನ್ನದ ಗೊಂಚಲಿದು.....

ಕಾಲನ ಕುಣಿಕೆ.....

ಹೋಗುವವರೆಲ್ಲ
ಹೋಗುತ್ತಲೇ ಇರುತ್ತಾರೆ
ಕಳೆದುಕೊಂಬ ಇಚ್ಛೆ ಇರದಿದ್ದರೂ
ಉಳಿಸಿಕೊಂಬ ಸಾಮರ್ಥ್ಯ ನಮಗಿಲ್ಲ...



ಕಾಲನ ಕೈಯ ಕುಣಿಕೆಗೆ
ದಯೆಯ ಹಂಗಿಲ್ಲ
ಧರ್ಮದ ದರ್ದಿಲ್ಲ
ಯಾವ ಜಪ 
ಯಾವ ಜನಿವಾರವೂ
ಅವನ ಗೆದ್ದದ್ದಿಲ್ಲ...


ಎಂಥ ಕುಲ
ಯಾವ ಗೋತ್ರ
ಗಂಜಿಯೂ ಸಿಗದ ಬಡವ
ಸುಪ್ಪತ್ತಿಗೆ ಬಿಟ್ಟಿಳಿಯದ ಬಲ್ಲಿದ
ಅವನ ರಾಜ್ಯದಲ್ಲಿ 
ಎಲ್ಲರೂ ಸಮಾನ...
ಎಲ್ಲರಿಗೂ ಒಂದೇ
ನ್ಯಾಯದಾನ...


ಕಣ್ತೆರೆಯುತಿರುವ ಶಿಶು
ಕಣ್ಣು ಮಂಜಾದ ವೃದ್ಧ
ಯಾವುದು ಅಕಾಲ
ಯಾರದು ಸಕಾಲ
ಕಾಲನಿಗೆ ವಯಸೊಂದು
ಲೆಕ್ಕವೇ ಅಲ್ಲ...
ಅವನ ತೂಗುಗತ್ತಿ 
ನಮ್ಮ ತಲೆಮೇಲೆ
ಸದಾಕಾಲ... 

ನಮ್ಮ ಮುಂಚಿನವರು ಹೋದರು
ಹಿಂಚಿನವರೂ ಹೋದಾರು
ನಮ್ಮ ಸರದಿಗೆ ಕಾಯುತ್ತಾ
ನಾವು ಸಾಲಾಗಿ ನಿಂತಿದ್ದೇವಷ್ಟೇ...
ಅವನ ಬತ್ತಳಿಕೆ ಖಾಲಿಯಾದದ್ದಿಲ್ಲ
ಅಂಬಿಗೆ ಗುರಿ ಯಾರೆಂಬುದೂ
ತಗಲುವವರೆಗೆ 
ಅನಿಶ್ಚಿತ...


ಎಲ್ಲ ಹೋಗುವುದು ನಿಶ್ಚಿತ
ಹೋದವರ ನೆನಪೊಂದೇ ಶಾಶ್ವತ...
ನೆನಪು ಸಿಹಿಯಾ.? 
ಇಲ್ಲ ಕಹಿಯಾ.??
ಅದು
ಬದುಕಿದ್ದರ ಮೇಲೆ ಅವಲಂಬಿತ...

ಹೋಗುವ ಮುನ್ನ
ಸುತ್ತಲಿನ ನಾಕು ಮನಗಳಲಿ
ಸಿಹಿ ಭಾವಗಳ ಬಿತ್ತಿ ಹೋಗೋಣ...
ಅಳಿದ ಮೇಲೂ
ಉದುರೀತು ಎರಡು ಹನಿ
ಉಳಿದವರ ಕಣ್ಣಂಚಲ್ಲಿ...
ಸಾರ್ಥಕ್ಯ ಅಷ್ಟೇ
ಇಲ್ಲಿ ಬಂದಿದ್ದಕ್ಕೆ...
ಇಷ್ಟು ಕಾಲ ಬದುಕಿದ್ದಕ್ಕೆ...

ಚಿತ್ರ ಕೃಪೆ : ಅಂತರ್ಜಾಲ...

Thursday, November 1, 2012

ಗೊಂಚಲು - ನಲವತ್ತು ಮತ್ತೆ ಒಂಭತ್ತು.....

ಅರ್ಥವಾಗದ
ಸಂಬಂಧಗಳ ಒಳಸುಳಿ...

ಮನುಷ್ಯ ಮನುಷ್ಯನ ನಡುವಿನ ಸಂಬಂಧದ ಆಳ ವಿಸ್ತಾರಗಳ ಬಗ್ಗೆ, ವಿಚಿತ್ರ ವಾಸ್ತವತೆಯ ಬಗ್ಗೆ, ಆಶ್ಚರ್ಯಕರ ಹೊಂದಾಣಿಕೆಗಳ ಬಗ್ಗೆ, ಹಳಸಿದ ಸಂಬಂಧವೊಂದು ಯಾವುದೋ ಒಂದು ನೋವಿನಲ್ಲಿ ಮತ್ತೆ ಬೆಸೆದುಕೊಂಬ ಅದರ ಒಳ ತುಡಿತದ ಬಗ್ಗೆ, ಹತ್ತಿರವಿದ್ದೂ ದೂರ ನಿಲ್ಲುವ ಮಾನಸಿಕ ಅಪರಿಚಿತತೆಯ ಬಗ್ಗೆ, ಸಪ್ತ ಸಾಗರದಾಚೆಯಿದ್ದೂ ಆತ್ಮಿಕವೆನಿಸುವ ಭಾವನಾತ್ಮಕ ಬೆಸುಗೆಯ ಬಗ್ಗೆ - ಒಟ್ಟಾರೆಯಾಗಿ ಈ ಸಂಬಂಧಗಳೆಂಬ ಹೆಸರಲ್ಲಿ ಬೆಸೆದುಕೊಂಡ ಬಾಂಧವ್ಯಗಳ ವಿಷಯದಲ್ಲಿ ಎಷ್ಟು ಯೋಚಿಸಿದ್ರೂ ನಂಗಿನ್ನೂ ಒಂದು ನಿಲುವಿಗೆ ಬರೋಕಾಗಿಲ್ಲ.
ಈ ಸಂಬಂಧ ಹೀಗೇ ಅಂತ ಯಾವುದೇ ಒಂದು ಬಾಂಧವ್ಯವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸೋಕೆ ಆಗದಿರೋದು ವ್ಯಕ್ತಿಗಳ ವ್ಯಕ್ತಿತ್ವದ ವಿವಿಧ ಮಜಲುಗಳ ವೈಶಿಷ್ಟ್ಯವೇ ಸರಿ.
ಸಮಯ ಸಂದರ್ಭಕ್ಕನುಸಾರವಾಗಿ ಈ ಸಂಬಂಧಗಳ ಒಳ ಹೊರಗುಗಳಲ್ಲಿ ಅಷ್ಟಿಷ್ಟು ಬದಲಾವಣೆಗಳಾಗುವುದೂ ಇದೆ.
ಯೋಚಿಸ್ತಾ ಹೋದ್ರೆ ಎಲ್ಲವೂ ಗೋಜಲು ಗೋಜಲು...

ಈ ಸಂಬಂಧಗಳು - ಅಂದ್ರೆ ವ್ಯಕ್ತಿ ವ್ಯಕ್ತಿಗಳ ನಡುವಿನ ನಾವು ಗುರುತಿಸೋ ಸಂಬಂಧಗಳು - ಇವೆಲ್ಲ ಕೇವಲ ಮಾನವ ನಿರ್ಮಿತ.
ಮನುಷ್ಯ ತನ್ನ ಅವಶ್ಯಕತೆಗಳಿಗೋಸ್ಕರ - ತಾನು ಈ ಭುವಿಯ ಇತರ ಪ್ರಾಣಿ ಸಂಕುಲಕ್ಕಿಂತ ಮೇಲೆಂದು ನಿರೂಪಿಸಿಕೊಳ್ಳಲೋಸುಗ ರೂಪಿಸಿಕೊಂಡಂತವು.

ತಾಯಿ ಮತ್ತು ಮಗುವಿನ ಸಂಬಂಧವೊಂದನ್ನುಳಿದು ಉಳಿದ ಯಾವುದೇ ಸಂಬಂಧಗಳಿರಬಹುದು - ಅದು ಅಣ್ಣ - ತಮ್ಮ, ಅಕ್ಕ - ತಂಗಿ, ಬಂಧು - ಬಳಗ ಯಾವುದೂ ಇರಬಹುದು, ಯಾವ ತರಹದ್ದೇ ಇರಬಹುದು ಅವೆಲ್ಲವೂ ಕೇವಲ ನಾವು ಭಾವಿಸಿಕೊಂಡಂತಹವು.
ನಮ್ಮ ಭಾವದ ತೀವ್ರತೆ ಮತ್ತು ಸ್ವಚ್ಛತೆಯನ್ನವಲಂಬಿಸಿದಂತಹವು.
ಆಳವಾಗಿ ಯೋಚಿಸಿದ್ರೆ ತಾಯಿ - ಮಗುವಿನ ಸಂಬಂಧ ಕೂಡ ಮಾನವ ಸೃಷ್ಟಿಯೇ.
ಆದರೂ ಭಾವನಾತ್ಮಕ ದೃಷ್ಟಿಯಿಂದ ನೋಡಿದ್ರೆ ತಾಯಿ ಮತ್ತು ಮಗುವಿನ ಸಂಬಂಧಕ್ಕೆ ಜಾಸ್ತಿ ಶ್ರೇಷ್ಠತೆಯಿದೆ ಹಾಗೂ ಅದು ಹೆಚ್ಚು ನೇರ ಮತ್ತು ಸ್ಪಷ್ಟ ಸಂಬಂಧ.
ಆದರೆ ಪ್ರಕೃತಿಯ ಸನ್ನಿಧಿಯಲ್ಲಿ ಎರಡೇ ಬೇಧ.
ಎರಡೇ ಸಂಬಂಧ.
ಅದು ಪ್ರಕೃತಿ ಮತ್ತು ಪುರುಷ ಸಂಬಂಧ - ಗಂಡು ಮತ್ತು ಹೆಣ್ಣು ಎಂಬ ಸಂಬಂಧ.
ಉಳಿದೆಲ್ಲ ಸಂಬಂಧಗಳೂ ಮಾನವ ಸಂಶೋಧನೆ.
ಕುಟುಂಬ ಪರಿಕಲ್ಪನೆಗೆ ಪಕ್ಕಾದ ಮಾನವ ಆ ಮೂಲಕ ಸಂಬಂಧಗಳ ಹೆಸರು ಕೊಟ್ಟು ಭಿನ್ನ ಭಿನ್ನ ಬಾಂಧವ್ಯಗಳನ್ನೂ ರೂಪಿಸಿಕೊಂಡ.
ತನ್ನ ಬುದ್ಧಿಶಕ್ತಿಯಿಂದ ತನ್ನ ಮೇಲರಿಮೆಯನ್ನು ಕಾಪಾಡಿಕೊಳ್ಳಲೋಸುಗ ತನ್ನ ಸುತ್ತ ತಾನೇ ಸಂಬಂಧಗಳ ಬೇಲಿ ಕಟ್ಟಿಕೊಂಡ.
ಹಾಗೇ ತಾನೇ ಕಟ್ಟಿಕೊಂಡ ಸಂಬಂಧದ - ಬಾಂಧವ್ಯದ - ನೈತಿಕತೆಯ ಬೇಲಿಯನ್ನು ಹಾರಲೂ ಆಗದೇ, ಒಳಗೇ ಬದುಕಲೂ ಆಗದೇ ಮುಖವಾಡಗಳನ್ನು ಧರಿಸಿ ಬದುಕಹತ್ತಿದ್ದಾನೆ.
ಇದಕ್ಕೆ ಉದಾಹರಣೆಯೆಂದರೆ : ಮಾನವ ಕುಟುಂಬ ವ್ಯವಸ್ಥೆ ರಚಿಸಿಕೊಂಡ ಲಕ್ಷಾಂತರ ವರ್ಷಗಳ ನಂತರ ಕೂಡ, ತುಂಬ ಮುಂದುವರಿದ ನಾಗರೀಕ ಸಮಾಜದಲ್ಲಿ ಬದುಕುತ್ತಿದ್ದೇವೆ ಅಂದ್ಕೋತಿರುವ ಈ ಕಾಲಘಟ್ಟದಲ್ಲೂ ಇನ್ನೂ ಉಳಿದುಕೊಂಡಿರುವ Incestಗಳು.
ಪ್ರತಿ ವ್ಯಕ್ತಿಯೂ ನೈತಿಕತೆಯ ಮುಸುಕಿನ ಒಳಗೇ ತನ್ನ ಆಸೆಗಳನ್ನು ತೀರಿಸಿಕೊಳ್ಳೋಕಾಗುತ್ತಾ ಅಂತ ಯೋಚಿಸ್ತಾನೆ.
ಮಾನಸಿಕವಾಗಿ ಸಾವಿರ ಬಾರಿ ಮೀರಿದ ಎಲ್ಲೆಯನ್ನು ದೈಹಿಕವಾಗಿ ಮೀರದೇ ಇರಲು ಒದ್ದಾಡುತ್ತಾ ತಾನು ಸಂಬಂಧಗಳ ಎಲ್ಲೆ ಮೀರಿಲ್ಲ ಅಂತ ತನ್ನನ್ನು ತಾನೇ ನಂಬಿಸಿಕೊಂಡು ಭ್ರಮೆಯ ಬದುಕು ಬದುಕ್ತಾನೆ. ಹಾಗಂತ ಮನಸಲ್ಲೇ ಮಂಡಿಗೆ ತಿನ್ನುವುದನ್ನೂ ನಿಲ್ಲಿಸಲಾರ.
ಅವನಿಗೆ ಸಂಬಂಧಗಳ ಬೇಲಿಯೂ ಬೇಕು - ಅವಕಾಶವಾದರೆ ಅದರಾಚೆಗಿನ ಸುಖಭೋಗಗಳೂ ಬೇಕು.
ತಾನು ಹತ್ತಿರದ ಸಂಬಂಧಗಳಲ್ಲಿ ತನ್ನ ಆಸೆಗಳನ್ನು ತೀರಿಸ್ಕೊಂಡಿಲ್ಲ ಅನ್ನುವುದು ಅದರಾಚೆ ತನ್ನಾಸೆಗಳನ್ನು ತೀರಿಸ್ಕೊಂಡವನ ಸಮರ್ಥನೆ ಮತ್ತು ಹಿರಿಮೆ.

ನಿಜ ಮನುಷ್ಯ ಸಂಘಜೀವಿ. 
ಸಮಾಜ ಜೀವಿ. 
ಒಂದು ಸುಂದರ ಸಮಾಜದ ಸ್ವಾಸ್ಥ್ಯಕ್ಕೆ ಕಟ್ಟುಪಾಡುಗಳ ಬೇಲಿ ಅತ್ಯಗತ್ಯ. ಎಲ್ಲ ವ್ಯಕ್ತಿಗಳನ್ನು ಕಾಮ ಸಂಬಂಧ ಮಾತ್ರ ಆಳಹತ್ತಿದರೆ ಅದು ಹೇಯ.
ಏಕೆಂದರೆ ಮನುಷ್ಯ ಉಳಿದ ಪ್ರಾಣಿಗಳಂತೆ ಸಂತಾನಾಭಿವೃದ್ಧಿಗೆ ಮಾತ್ರವಲ್ಲದೇ ಮನೋರಂಜನೆಗಾಗಿಯೂ ಕಾಮದಾಟ ನಡೆಸುವ ಪ್ರಾಣಿ.
ಹಾಗಾಗಿ ಒಂದಷ್ಟು ಸಹಜ ನಿರ್ಬಂಧಗಳು ಅಗತ್ಯವೇ.
ಆದರೆ ನೈತಿಕ ಕಟ್ಟುಪಾಡುಗಳು ಹೆಚ್ಚಿನ ಸಲ ಪ್ರಭಲರು ನಿರ್ಬಲರ ಮೇಲೆ ಹೇರುವ ಕಟ್ಟುಪಾಡುಗಳಾಗಿಯಷ್ಟೆ ಬಳಕೆಯಾಗುವುದು ಕರುಣಾಜನಕ.
ಉದಾಹರಣೆಗೆ - ತುಂಬ ನಾಗರೀಕ ಎನ್ನಿಸಿಕೊಂಡ ಈ ಕಾಲಘಟ್ಟದಲ್ಲೂ ಪತಿಯಿಂದ ವಿನಾಕಾರಣ ಪರಿತ್ಯಕ್ತರಾದ ಹೆಂಗಳೆಯರನ್ನು, ಎಳೆಯ ವಿಧವೆಯರನ್ನು ನಮ್ಮ ಸಮಾಜ ನಡೆಸಿಕೊಳ್ಳುವ ರೀತಿ, ಅವರುಗಳ ಸಣ್ಣ ಸ್ನೇಹ ಸಂಬಂಧವನ್ನೂ ಅನುಮಾನದಿಂದ ನೋಡುವ ಪರಿ, ಇಂದಿಗೂ ಬಳಕೆಯಲ್ಲಿರುವ "ನಾಯಿ ಹಸಿದಿತ್ತು - ಅನ್ನ ಹಳಸಿತ್ತು" ಎಂಬಂತ ನುಡಿಗಟ್ಟುಗಳು.
ಒಂದು ಸಮಾಜಕ್ಕೆ ಚೌಕಟ್ಟು ಎಷ್ಟು ಅಗತ್ಯವೋ - ಒಬ್ಬ ವ್ಯಕ್ತಿಗೆ ತನ್ನ ಸಹಜ ಸುಖವೂ ಅಷ್ಟೇ ಅಗತ್ಯವಲ್ಲವೇ...??

ಇಲ್ಲಿ ಇನ್ನೂ ಒಂದು ಸೂಕ್ಷ್ಮವಿದೆ -
ನಿಯಮಗಳ ಸಡಿಲಿಸುವುದಾದರೆ ಎಷ್ಟರಮಟ್ಟಿಗೆ ಸಡಿಲಿಸಬಹುದು..?
ಯಾವ ಸಂದರ್ಭದಲ್ಲಿ, ಯಾವ ಹಿನ್ನೆಲೆಯಲ್ಲಿ, ಹೇಗೆ ಮೀರಿದರೆ ಸರಿ..??
ಬೇಲಿ ಹಾರಿಯಾದರೂ ಫಸಲು ಮೇಯುತ್ತಾರೆಂದು ಬೇಲಿಯನ್ನೇ ಹಾಕದಿರುವುದು ಎಷ್ಟು ಸಮಂಜಸ..???
ಒಪ್ಪಿಗೆಯಿಲ್ಲದೆ ಗಂಡನೊಬ್ಬ ಹೆಂಡತಿಯನ್ನು ಸೇರುವುದೂ ಅತ್ಯಾಚಾರವೆನಿಸುತ್ತೆ ಅಂತಾದರೆ ನೈತಿಕತೆ ಅನೈತಿಕ ಎನ್ನಿಸಿಕೊಳ್ಳುವ ಸೂಕ್ಷ್ಮ ಬಿಂದು ಯಾವುದು..????
ಪ್ರತೀ ಸಂಬಂಧಕ್ಕೂ ಶುದ್ಧ ಮತ್ತು ಕ್ಷುದ್ರ ಮುಖಗಳೆರಡೂ ಇಲ್ಲವಾ..??
ಅಷ್ಟಕ್ಕೂ ಕಾಮ ಕ್ಷುದ್ರವಾ..??
ನೈತಿಕತೆಯ ಪರಿಧಿಯಲ್ಲೇ ಬರುವ ಮದುವೆಗಾಗಲೀ - ಪ್ರೇಮಕ್ಕಾಗಲೀ ಮೂಲ ಸೆಲೆ ಕಾಮವೇ ಅಲ್ಲವಾ...???
ಎಲ್ಲವೂ ಅಯೋಮಯ ಎನ್ನಿಸುವ ಪ್ರಶ್ನೆಗಳೇ...

ಇನ್ನು ಭಿನ್ನ ಲಿಂಗದ ವ್ಯಕ್ತಿಗಳ ನಡುವಿನ ಪ್ರೇಮ - ಕಾಮದ ವಿಷಯದಲ್ಲೂ ಅಷ್ಟೇ.
ಪ್ರೇಮ ಮಾನವನ ಭಾವನಾತ್ಮಕ ಪರಿಕಲ್ಪನೆ.
ಕಾಮ ಪ್ರಕೃತಿಯ ಮೂಲ ಗುಣ.
ಅದಕ್ಕೇ ಕಾಮದ ಹಂಗಿಲ್ಲದ ಪ್ರೇಮ ತುಂಬ ಕಾಲ ಜೀವಿಸಲಾರದೇ ನರಳೋದು. (ಕೆಲವು ಅಪವಾದಗಳೂ ಇದ್ದೀತು)
ಪ್ರೇಮ ಇದ್ದಲ್ಲಿ ಪ್ರಣಯ ಇದ್ದೇ ಇರುತ್ತೆ.
ಕೆಲವೊಮ್ಮೆ ಅದು ಮಾನಸಿಕ ಮಟ್ಟದಲ್ಲಿ ಮಾತ್ರ ಇದ್ದೀತು.
ದೈಹಿಕತೆಯ ಅವಕಾಶ ಇಲ್ಲದಾಗ.
ಇಷ್ಟಕ್ಕೂ ನಮ್ಮ ಪ್ರೇಮವನ್ನು ವ್ಯಕ್ತಪಡಿಸಲು ನಮಗಿರೋ ಅತೀ ಶಕ್ತ ಮಾಧ್ಯಮ ಅಂದ್ರೆ ದೇಹ ಒಂದೇ.
ಸ್ಪರ್ಶ, ಚುಂಬನ, ಆಲಿಂಗನಗಳು, ನಮ್ಮ ಪ್ರೇಮವನ್ನು - ಆತ್ಮೀಯ ಭಾವವನ್ನು ವ್ಯಕ್ತಪಡಿಸುವ ಮಧುರ ಮಾಧ್ಯಮವಷ್ಟೇ.
ಪ್ರಕೃತಿಗೆ ತಿಳಿದಿರೋದು ಕಾಮ ಮಾತ್ರ.
ಅದು ತನ್ನ ಅಭಿವೃದ್ಧಿಗೆ, ತನ್ನ ಸೃಷ್ಟಿಗಳ ಉಳಿವಿಗೆ ಪ್ರಕೃತಿ ರೂಪಿಸಿಕೊಂಡ ಚಂದನೆಯ ವ್ಯವಸ್ಥೆ.
ಅದಕ್ಕೆ ಮನುಷ್ಯ ಪ್ರೇಮದ ಬೇಲಿ ಹೆಣೆದ.
ಮದುವೆಯ ಬಂಧ ರಚಿಸಿದ.
ಆ ಬೇಲಿ ತುಂಬ ಶ್ರೇಷ್ಠವಾದದ್ದು ಎಂದು ತಾನೇ ಸಾರಿಕೊಂಡ.
ಕೊನೆಗೆ ಅಂಥ ಶ್ರೇಷ್ಠ ಪ್ರೇಮದ ಪರಾಕಾಷ್ಠೆಯ ಹೆಸರಿನಲ್ಲಿ ಕಾಮದಲ್ಲೇ ತೊಡಗಿಕೊಂಡ.
ತನ್ನ ಕಾಮದ ಇಚ್ಛೆಯನ್ನು ಸಭ್ಯತೆಯ ಸೋಗಿನಲ್ಲಿ ಈಡೇರಿಸಿಕೊಳ್ಳುವುದಕ್ಕೆ ಇಟ್ಟುಕೊಂಡ ಹೆಸರು ಪ್ರೇಮ ಅಂತನ್ನಿಸಲ್ಲವಾ..??
ತಾನೇ ರೂಪಿಸಿಕೊಂಡ ಬೇಲಿಯ ಮುರಿಯುವ ಬಯಕೆಯಿಂದಲೇ ಇರಬೇಕು ಪ್ರಕೃತಿ ಸಹಜವಾದ ಕಾಮವನ್ನು ಕತ್ತಲಲ್ಲಿ ಪಡೆವ ಕ್ಷುದ್ರ ಸುಖವಾಗಿ ಬಿಂಬಿಸಿದ...

ಏಕೇನೋ ಗೊತ್ತಿಲ್ಲ.
ಪ್ರೇಮ - ಕಾಮ - ಸಂಬಂಧಗಳ ವಿಚಾರದಲ್ಲಿ ಎಂದಿನಿಂದಲೂ ನನ್ನಲ್ಲಿ ದ್ವಂದ್ವವೇ ತುಂಬಿ ಕಾಡುತ್ತದೆ.
ಒಟ್ನಲ್ಲಿ ಸಂಬಂಧಗಳ ಬಗ್ಗೆ ಸಂಬಂಧವಿಲ್ಲದ ವಿಚಾರಗಳು ಸದಾ ತಲೆಯಲ್ಲಿ ಸುಳಿದಿರುಗುತ್ತಿರುತ್ತವೆ.
ನಂಗನಿಸಿದಂತೆ ನಾವು ಭಾವಿಸಿಕೊಂಡಂತೆ ನಮ್ಮ ಸಂಬಂಧ...
ಸ್ವಚ್ಛ ಮನದಲ್ಲಿ ಎಂಥ ಮಿಲನವೂ ಪವಿತ್ರವೇ...
ವಿಕಾರವಿದ್ದಲ್ಲಿ ಪ್ರೇಮವೂ 'ಕ್ಷುದ್ರ ಕಾಮದ' ಮತ್ತೊಂದು ಹೆಸರಷ್ಟೇ...
ಪ್ರೇಮದ ಹೆಸರಲ್ಲಿನ ಅತ್ಯಾಚಾರಕ್ಕಿಂತ ಶುದ್ಧ ಕಾಮದ ಅನೈತಿಕತೆಯೇ ಲೇಸೇನೋ...
ಮನಸುಗಳ ವ್ಯಭಿಚಾರಕ್ಕಿಂತ ದೇಹಗಳ ಪ್ರೇಮ ಉತ್ತಮವೇನೋ...???

Thursday, October 25, 2012

ಗೊಂಚಲು - ನಲ್ವತ್ತೆಂಟು.....

ಮಾತಿಲ್ಲ ನನ್ನಲ್ಲಿ.....


ನನ್ನೆದೆಯಾಳದಲಿ ಒಸರುವ ಮಧುರ ಭಾವಗಳ
ಒರತೆಯ ಮೂಲ ಸೆಲೆ ನೀನೇ...

ಹಾಗಂತ ನಾ ಮಾತಲ್ಲಿ ಹೇಳಲಾರೆ...

ನಿನ್ನೆಡೆಗೆ ಬರುವಾಗಿನ ನನ್ನ ಕಾಲ್ಗಳ ವೇಗ
ಜೊತೆ ನಡೆವಾಗ ಹಿಡಿದ ಕೈಗಳ ಬಿಸುಪು
ನನ್ನ ಕಣ್ಗಳಲಿ ಹೊಳೆವ ನಿನ್ನ ಚಿತ್ರ
ನಿನ್ನೆದುರು ದೈನ್ಯವಾಗುವ ನಾನೆಂಬ ನನ್ನ ಅಹಂಕಾರ
ಒಮ್ಮೆಲೇ ಜಾಗೃತವಾಗುವ ನನ್ನ ಸಾಚಾತನ
ಇವೆಲ್ಲ ಸೇರಿಯೂ ಅರ್ಥಮಾಡಿಸಲಾಗದೇ ಹೋದ 
ನಿನ್ನೆಡೆಗಿನ ನನ್ನ ಒಲವ...

ನಿನಗೆ ನಾನು
ಬರೀ ಶಬ್ದಾಡಂಬರದ ಒಣ ಮಾತುಗಳಲ್ಲಿ ಅರುಹಿದರೆ
ಅರ್ಥವಾದೀತಾ...???

ಮೌನದಲೂ ಸಂಭಾಷಿಸಬೇಕಾದ ಪ್ರೇಮಕ್ಕೆ
ಶಬ್ದಗಳ ಅಲಂಕಾರ ಮಾಡಲಾ...

ಇಷ್ಟಕ್ಕೂ ಶಬ್ದಗಳಾದರೂ ಎಲ್ಲಿವೆ ನನ್ನಲ್ಲಿ
ಒಲವ ವರ್ಣಿಸಲು...

ಹಾಗೇ ಅಜ್ಞಾತವಾಗಿ ಇದ್ದು ಬಿಡಲಿ ಬಿಡು
ಇದೊಂದು ಪ್ರೇಮ
ನನ್ನೆದೆಯ ಗರ್ಭಗುಡಿಯಲ್ಲಿ...

ಮೌನವಾಗಿ...

ಗಂಧ ತೇಯ್ದಾದ ಮೇಲಿನ ಕೊರಡಿನಂತೆ...

ಹೊಳೆವ ದೇವರುಗಳ ನಡುವೆ ಸುಮ್ಮನೆ ಕೂತ
ಕಪ್ಪು ಸಾಲಿಗ್ರಾಮದಂತೆ...

ಮನದೇ ಆಶಿಸುವೆ...

ನನಗಿಂತ ಹಿರಿಮೆ ಇರುವ
ನನಗಿಂತ ಒಲುಮೆ ಹರಿಸಬಲ್ಲ ಜೀವ
ನಿನ್ನ ಜೀವನ ಸಾಥಿಯಾಗಲಿ...

ನಿನ್ನ ಬದುಕು ಹಸನಾಗಲಿ...

ಸೊಗಸಾದ ನಾಳೆಗಳು ಎದುರ್ಗೊಳ್ಳಲಿ...

ನಂಗೇನಿದ್ರೂ -
ಈ ಕ್ಷಣಗಳವರೆಗೆ ಖುಷಿ ನೀಡಿದ ನಿನ್ನ
ಗೆಳೆತನದ ಒಡನಾಟವೇ ಸಾಕು...

ಈ ಬದುಕಿಗೆ ಅದಕಿಂತ ದೊಡ್ಡ ನಿರೀಕ್ಷೆಗಳುಳಿದಿಲ್ಲ
ಯಾರಿಂದಲೂ...

ಎನ್ನೆದೆಯ ಹಸಿ ನೆಲದಲ್ಲಿ
ಅಚ್ಚೊತ್ತಿದ ನಿನ್ನ ಹೆಜ್ಜೆಯ ಗುರುತ
ಹಾಗೆಯೇ ಕಾಪಿಟ್ಟುಕೊಂಡು
ಬದುಕಿ ಬಿಡುತ್ತೇನೆ ಒಂದಿಡೀ ಜನ್ಮವ
ಸಾಯದ ನಿನ್ನ ನೆನಪುಗಳೊಂದಿಗೆ...

ಹಾಗೇ ಸುಮ್ಮನೆ...

Monday, October 15, 2012

ಗೊಂಚಲು - ನಲವತ್ತು ಮೇಲೇಳು.....

ಪ್ರಕೃತಿ ಮಡಿಲಲ್ಲಿ ಮಗುವಾಗಿ.....





ಕೆಲವು ಕ್ಷಣಗಳ ಹಿಂದೆ ತಂಗಿ ದನಿತುಂಬಿ ಹಾಡುತ್ತಿದ್ದ ನನ್ನ ಪ್ರೀತಿಯ ಹಾಡು ಮನದಲಿನ್ನೂ ರಿಂಗಣಿಸುತಿತ್ತು...
"ಮಾನವನೆದೆಯಲಿ ಆರದೆ ಉರಿಯಲಿ
ದೇವರು ಹಚ್ಚಿದ ದೀಪ..
ರೇಗುವ ದನಿಗೂ ರಾಗವು ಒಲಿಯಲಿ
ಮೂಡಲಿ ಮಧುರಾಲಾಪ..."
ಆ ಹಾಡಿನ ಗುಂಗು,
ಅಮಾವಾಸ್ಯೆಯ ಹಿಂದಿನ ಕಪ್ಪು ಸುರಿಯುವ ಇರುಳು,
ಕತ್ತಲೆಯ ಚಾದರ ಹೊದ್ದ ಹಸಿರು ವನರಾಜಿ,
ಕಿವಿಯ ತುಂಬ ಪ್ರಕೃತಿ ನುಡಿಸುವ ಜಲತರಂಗಿಣಿ,
ಬಾನಿಂದ ನೇರ ಪಾತಾಳಕ್ಕೆ ಧುಮುಕುತಿರುವ ಹಾಲಹೊಳೆಯಂಥ ಜಲಧಾರೆ,
ಜಲಪಾತದೆಡೆಯಿಂದ ಬೀಸಿಬಹ ಗಾಳಿ ಹೊತ್ತು ತರುವ ತುಂತುರುವಿಗೆ ಮೈಯೊಡ್ಡಿ ನಿಂತಿದ್ದೆ ಕೆಲವು ಕ್ಷಣ ಒಬ್ಬಂಟಿಯಾಗಿ,
ಕಾಲ ಬುಡದಲ್ಲಿ ಸತ್ತುಬಿದ್ದ ಹಾವಿನಂಥ ರೈಲುಕಂಬಿ,
ಮನದಲ್ಲಿ ಹೆಪ್ಪುಗಟ್ಟಿದ್ದ 'ನಾನೆಂಬ' ನನ್ನಹಂಮ್ಮಿನ ಭಾವಗಳೆಲ್ಲ ಆಚೆಬಂದು ಇಂಚಿಂಚಾಗಿ ಬೆತ್ತಲಾಗುತ್ತ - ಇಷ್ಟಿಷ್ಟಾಗಿ ಮೌನದಲ್ಲಿ ಲೀನವಾಗುತ್ತ ಹೋಗಿ ನನ್ನ ನಾ ಕಳೆದುಕೊಂಡು ಎಲ್ಲಾ ಇರುವಲ್ಲೇ ಎಲ್ಲವನೂ ಮರೆತ ಆ ಘಳಿಗೆ ನಾನು ಧ್ಯಾನಸ್ತ...
ಕೆಲವು ಅನುಭೂತಿಗಳಿಗೆ ವ್ಯಕ್ತರೂಪ ಕೊಡಲು ಶಬ್ದಗಳಿಲ್ಲ ನನ್ನಲ್ಲಿ.
ಒಂದಂತೂ ಸತ್ಯ -
ಒಂದು ಕ್ಷಣ ನಿರ್ಭಾವ, ಮರುಕ್ಷಣ ಭಾವಾವೇಶ,
ನಿನ್ನೆ ನಾಳೆಗಳೆಲ್ಲ ಮರೆತು ಹೋಗಿ, ಜೀವಭಾವಗಳೆಲ್ಲ ಅನುಭಾವದ ಭಾವಶೂನ್ಯತೆಯಲಿ ತೇಲಿ ಹೋಗಿದ್ದ ಆ ಕ್ಷಣ ಹೀಗೇ ಇದ್ದು ಬಿಡಲಿ ಅನ್ನಿಸಿತ್ತು.
ಇರಲಾರದು ಎಂಬುದೂ ಗೊತ್ತಿದ್ದ ಕಾರಣ ಆ ಭಾವಗಳನೆಲ್ಲ ನೆನಪಾಗಿ ಕಾದಿಟ್ಟುಕೊಂಡು ಬಂದಿದ್ದೇನೆ. ಮೆಲ್ಲುತಿರಲು ಸವಿಬೆಲ್ಲದಂತೆ ಬದುಕ ಕೊನೆವರೆಗೆ...

*****

ಬೆಳಿಗ್ಗೆಯಿಂದ ಕ್ಯೂ ನಿಂತದ್ದೆ ಬಂತು ಕೊನೆಗೂ ರೈಲು ಟಿಕೇಟ್ ಸಿಕ್ಕಿದ್ಲೆ.
ಇರ್ಲಿ ಬಿಡು ಹುಬ್ಳಿತಂಕಾ ಬಸ್ಸಿಗೆ ಹೋದರೆ ಆತು.
ಸರಿ ರಾತ್ರಿ ಹುಬ್ಳಿ ಕಡೆ ಪಯಣ. ದಂಡು ದೊಡ್ಡದೇ ಇತ್ತು. ಗಲಾಟೆ ಇರಲೇ ಬೇಕುತಾನೆ. ಇದು ಸರ್ಕಾರಿ ಬಸ್ಸು ಸುಮ್ನೆ ಕೂತ್ಕೋಳ್ರೋ ಅಂತ ಹಿರಿಯರಾರೋ ರೇಗಿದ ಮೇಲೇನೇ ನಮ್ಮ ಗಲಾಟೆ ಚಿಕ್ಕದಾಗಿದ್ದು. 
ಬೆಳಿಗ್ಗೆ ಟೈಮ್ ಆಗ್ತಾ ಬಂತು ಹುಬ್ಳಿ ಇನ್ನೂ ಬಂದಿಲ್ಲ ರೈಲು ಸಿಗುತ್ತೋ ಇಲ್ವೋ ಅಂತ ಗಡಿಬಿಡಿ ಶುರು. ಹುಬ್ಬಳ್ಳಿಯಲ್ಲಿ ನಮ್ಮ ಗುಂಪಿಗೆ ಸೇರೋರ ಹತ್ರ ಟಿಕೇಟ್ ತಕೋ ಬರ್ತಾ ಇದೀವಿ ಅಂದ್ರೆ, ನಿಧಾನ ಬನ್ನಿ ಟ್ರೈನು ಲೇಟಂತೆ ಅಂದ್ಲು. ಅಂತೂ ಇಂತೂ ಹುಬ್ಳಿ ತಲುಪಿದ್ರೆ 6.45ಕ್ಕೆ ಬರೋ ರೈಲು ಬರೋಬ್ಬರಿ 4 ತಾಸು ಕಾಯಿಸಿ ಆಮೇಲೆ ಬಂತು. ಅಂತ ಬೇಸರವೇನೂ ಆಗಿಲ್ಲ. ಯಾಕೇಂದ್ರೆ ನಮ್ಮಲ್ಲಿ ಮಾತಿಗೆ ಮತ್ತು ನಗುವಿಗೆ ಬರವಿಲ್ಲ. ಅವು ಭರಪೂರ.
ಶ್ರೀಕಾಂತನ ಮಾತು ಅರ್ಧದಲ್ಲೇ ತಡೆದು ಭಾಸ್ಕರ ಪೂರ್ಣ ಮಾಡ್ತಾನೆ. ಅದಕ್ಕಿನ್ನೊಂದಿಷ್ಟು ಸ್ವಾನಂದನ ಒಗ್ಗರಣೆ. ತಂಗ್ಯಮ್ಮಗಳ ಸ್ವಚ್ಛ ನಗು.  ಯಾವುದೇ ನಿರ್ಣಯ ಪೆಂಡಿಂಗ್ ಆದ್ರೆ ರಘು ಫೈಸಲು ಮಾಡ್ತಾನೆ. ಅದಕ್ಕೆ ನನ್ನ ಕೊನೆಯ ಅಂಕಿತ. ಮೂರು ತಿಂಗಳ ಹಿರಿಯ ನಾನು ಗುಂಪಿನಲ್ಲಿ ಹಿರಿಯ ನಾಗರಿಕ (ರಾಷ್ಟ್ರಪತಿ ಹುದ್ದೆ)...

ಅಂತೂ ಇಂತೂ ರೈಲು ಬಂತು. ಜನರಲ್ ಬೋಗಿಯ ಟಿಕೇಟ್ ತಕೊಂಡು ಅಲ್ಲಿ ಹತ್ತಲು ಜಾಗವಿಲ್ಲದೇ ಶಯನಯಾನದಲ್ಲಿ ನಾವು ಆಸೀನ. ಅರೆ ಬರಲ್ಲ ಅಂದ್ಕೊಂಡ ಟಿಟಿ ಬಂದೇ ಬಿಟ್ಟ. ದಂಡಾನೇ ಕಟ್ಟೋಹಂಗಿದ್ರೆ ಎಲ್ಲಾರ ಕಿಸೇನೂ ಖಾಲಿಯಾಗ್ಬಿಡುತ್ತೆ. ಟಿಟಿಯ ಹೊಟ್ಟೆಗೊಂದಿಷ್ಟು ಕೊಟ್ಟು ಅಬ್ಬ ಬಚಾವು ಅಂದ್ಕೋತಾ, ದೇಶದಲ್ಲಿರೋ ಲಂಚಗುಳಿತನದ ಬಗ್ಗೆ ವಿಶಾದ ವ್ಯಕ್ತಪಡಿಸಿ ನಿಸೂರಾದದ್ದು..:):)

ಹೋಓಓಓಓಓಓ...
ಸೇರಿಕೊಂಡ ಹೊಸಬರಿಗೆ ಭವ್ಯ ಸ್ವಾಗತ. ಕ್ಯಾಸಲ್ ರಾಕ್ ನಲ್ಲಿ ಸೇರಿಕೊಂಡ ನಾಲ್ವರನ್ನೂ ಸೇರಿ ನಮ್ಮ ಟೀಮಿನ ಸಂಖ್ಯೆ ಹದಿನಾಲ್ಕರಲ್ಲಿ ಸಮಾಪ್ತಿ...

ರೈಲು ಸುರಂಗದಲ್ಲಿ ಹೊಕ್ಕ ತಕ್ಷಣ ಒಂದೇ ಸಮನೆ ಶೀಟಿ ಬಜಾನಾ...
ಕೊನೆಗೂ ಇಳಿಯೋಕಾಯ್ತು. ಆಗ ಮಟಮಟ ಮಧ್ಯಾಹ್ನದ 2 ಘಂಟೆ.
ಗೂಡಂಗಡಿಯಂಥ ಕಛೇರೀಲಿ ಕೂತಿದ್ದ ರೈಲ್ವೆ ಅಧಿಕಾರೀನ ಮಾತಾಡ್ಸಿ ಒಂದು ಕಿ.ಮೀ. ನಡೆದು ನಮ್ಮ ಗಮ್ಯ ತಲುಪಿದ್ದಾಯ್ತು.
ಅಬ್ಬಾ ತೆರೆದ ಬಾಯಿ ಮುಚ್ಚಲು ಒಂದರೆ ಕ್ಷಣ ಬೇಕಾಯ್ತು. ಒಂದು ಸುತ್ತು ಅಲ್ಲಿ ಹಾರಿ - ಇಲ್ಲಿ ನೋಡಿ, ಅವನ್ಜೊತೆ - ಇವನ್ಜೊತೆ ಒಂದೊಂದು, ಎಲ್ರೂ ಸೇರಿರೋದು ಇನ್ನೊಂದು ಅಂತ ಹೇಳ್ತಾ ಪೋಟೋ ಕ್ಲಿಕ್ಕಿಸಿದ್ದಾಯ್ತು.


ಅರೇ ಇಷ್ಟೊತ್ತೂ ಹೊರಟದ್ದೆಲ್ಲಿಗೆ ಅಂತಾನೇ ಹೇಳಿಲ್ಲ ಅಲ್ವಾ. ನಾವುಗಳು ನೋಡೋಕೆ ಹೋಗಿದ್ದು ಗೋವಾದ ಗಡೀಲಿರೋ "ದೂದ್ ಸಾಗರ" ಎಂಬ ಜಲಪಾತಕ್ಕೆ. ಅದೊಂದು ಪ್ರಕೃತಿ ನಿರ್ಮಿತ ಅದ್ಭುತ ವೈಭವ.

ಯಾರೋ ಕೂಗಿದ್ರು ಹೊಟ್ಟೆ ತಾಳ ಹಾಕ್ತಾ ಇದೆ ಅಂತ. ಆಗ ಎಲ್ರಿಗೂ ಊಟದ ನೆನಪಾಯ್ತು. ಇನ್ನೊಂದು ಸುತ್ತು ಆಮೇಲೆ ನೋಡೋಣ. ಸಂಜೆತನಕ ಸಮಯ ಇದೆ ಅಂತ ಎಲ್ರೂ ಕಟ್ಟಿಕೊಂಡು ಹೋದ ಬುತ್ತಿ ಬಿಚ್ಚಿ ಕೂತ್ವಿ. ಹೊಟ್ಟೆಪರಮಾತ್ಮ ತಣ್ಣಗಾದ ಮೇಲೆ ಮತ್ತೆ ಶುರು. ಸಣ್ಣ ಪುಟ್ಟ ಸಾಹಸಗಳು, ನೀರಿನ ಚೆಲ್ಲಾಟ...ಬೇಡದ ಸಾಹಸಕ್ಕೆ ಹೋಗ್ಬೇಡ್ರೋ ಅನ್ನೋ ತಂಗಿಯರು, ಅಲ್ಲಿಗೆ ಹೇಗೆ ಹೋಗೋದು ನೋಡೋ ಅನ್ನೋ ಗೆಳೆಯ...
ರೈಲುಹಳಿಯ ಮೇಲೆ ಅಷ್ಟುದೂರದ ವಾಕಿಂಗು..ಸಂಜೆಗೆ ಒಂದೇ ಇರೋ ಪ್ಯಾಸೆಂಜರ್ ರೈಲಿನ ಪ್ರಯಾಣಿಕರಿಗೊಂದು ಟಾಟಾ...ಮಾತು, ನಗು, ಕಾಡಿನ ಸಂಗೀತ...ಅರೇ ಸಂಜೆ ಇಳಿದದ್ದೇ ಗೊತ್ತಾಗಿಲ್ಲ. ಆಗಲೇ ಸಣ್ಣ ಕತ್ತಲು...


ಚುಕುಬುಕು ರೈಲು...

ನೀರ ಓಕುಳಿಯಾಟ...
ಬಿದ್ದೀರಿ ಜೋಕೆ...

ರಾತ್ರಿ ಕೂತಿರೋಕೆ ಇರುವ ಎರಡು ಅರಣ್ಯಇಲಾಖೆ ಕುಟೀರಗಳಲ್ಲಿ ಒಂದನ್ನು ಚೊಕ್ಕ ಮಾಡ್ಕೊಂಡು, ಮತ್ತೊಂದು ಸುತ್ತು ಜಲಪಾತದೆದುರು ಹೋಗಿ ಕೂತು ಸಂಜೆಯ ಸೊಬಗನ್ನು ಸವಿದು ಬರುವುದರೊಳಗೆ ನಾವಿರಬೇಕೆಂದುಕೊಂಡ ಸ್ಥಳ ಮತ್ತೊಂದು ಪ್ರವಾಸೀ ತಂಡದ ಪಾಲಾಗಿತ್ತು. ಇರ್ಲಿ ಬಿಡಿ ಅಲ್ಲೇ ಕೆಳಗಡೆ ಇದ್ರಾಯ್ತು ಅಂತ ನಮ್ಮ ಲಗೇಜನ್ನೆಲ್ಲ ಇಳುಕಿ ಒಂದು ಚಾದರಾನ ಹಾಸಿಕೊಂಡು ಕೂತದ್ದು. ಕುಟೀರದಿಂದಾಚೆ ಸಣ್ಣ ಹೊಡತ್ಲು (ಬೆಂಕಿ) ಹಾಕ್ಕೊಂಡು ಕೂತು ರಾತ್ರಿಯ ಊಟದ ಶಾಸ್ತ್ರ ಮುಗಿಸಿದೆವು. ಎಲ್ಲರ ನೆನಪು, ಕನಸುಗಳ ಬುತ್ತೀನ ಹರವಿಕೊಂಡು ಕೂತರೆ ರಾತ್ರಿ ಚಿಕ್ಕದಾಯ್ತು ಅಂತನ್ನಿಸ್ತು.
ಮಧ್ಯೆ ಮಧ್ಯೆ ಕೆಲವರು ಅಲ್ಲೇ ಮಲಗಿ, ಇನ್ಕೆಲವರು ಕೂತಲ್ಲೇ ತೂಕಡಿಸಿ ನಿದ್ದೇನ ತಣಿಸಿಕೊಂಡರು. ನಾನೊಂದಷ್ಟು ಹೊತ್ತು ಒಂಟಿಯಾಗಿ ಜಲಧಾರೆಯೆದುರು ನಿಂತು ಬಂದೆ. ಆಮೇಲೊಂದಷ್ಟು ಹೊತ್ತು ನಾನು, ಶ್ರೀಕಾಂತ, ರಘು, ಸ್ವಾನಂದ ಜಲಧಾರೆಯೆದುರು ಭಾವಗಳ ವಿನಿಮಯ ಮಾಡಿಕೊಂಡ್ವಿ.


ಮತ್ತೆ ಬೆಂಕಿಯೆದುರು ಎಲ್ಲ ಸೇರಿ ದೊಂಬರಾಟ...
ಯಾರದು ಸಿಗರೇಟು ಹಚ್ಚಿದ್ದು..?
ನಾನಂತೂ ಒಳ್ಳೇ ಹುಡ್ಗ ಹಾಗೆ ಎಲ್ಲಾರೆದ್ರೂ ಸೇದಲ್ಲಾ ಎಂಬ ಉತ್ತರ...

ಅರೇ ಆಗಲೇ ನಾಲ್ಕು ಘಂಟೆ. ಎದ್ದೇಳಿ ಹೊರಡಬೇಕು ಅಂತ ಎಲ್ರನ್ನೂ ಎಬ್ಬಿಸ್ಕೊಂಡು ಹೊರಟದ್ದು ರೈಲು ಹಳಿಯಗುಂಟ ಕ್ಯಾಸಲ್ ರಾಕ್ ಕಡೆಗೆ...
14 ಕಿಲೋಮೀಟರುಗಳ ನಿರಂತರ ನಡಿಗೆಗೆ ನಾಂದಿ...ಒಂದಷ್ಟು ದೂರ ಬ್ಯಾಟರಿ ಬೆಳಕಲ್ಲಿ ಬಂದರೆ ಮಧ್ಯ ಮಧ್ಯ ಗೂಡ್ಸ್ ರೈಲಿನ ಬೆಳಕು.. ಸುರಂಗ ಮುಗಿದಿಲ್ಲ ಆಗಲೇ ರೈಲು ಬಂತು. ತುಂಬ ಜಾಗವಿಲ್ಲ. ಎಲ್ಲಾ ಕಿವಿಮುಚ್ಕೊಂಡು  ಸುರಂಗದ ಗೋಡೆಗೆ ಹಲ್ಲಿಗಳಂತೆ...


ಈ ಸೇತುವೆ ಹತ್ತಿರ ಸೂರ್ಯನುದಯ...
ನಡಿಗೆಗೆ ಸಣ್ಣ ವಿಶ್ರಾಂತಿ...
ಅದ್ಯಾವುದೋ ಕಣಿವೆಯ ನಡುವಿನ ಸೇತುವೆಯೆದುರು ಸೂರ್ಯೋದಯವಾಯ್ತು.
ಇನ್ಯಾವುದೋ ಪುಟ್ಟ ತೊರೆಯ ದಡದಲ್ಲಿ ಕೆಲವರ ನಿತ್ಯವಿಧಿ..
ದಾರಿ ನಡುವಿನ ಸಣ್ಣ ಬಳುಕು ಜಲಧಾರೆಯ ಸಮ್ಮುಖದಲ್ಲಿ ಬಿಸ್ಕತ್ತು, ಬ್ರೆಡ್ಡು, ಜಾಮು...ಸ್ವಲ್ಪ ಎನರ್ಜಿ...
















ಆಗಲೇ ಸಮಯ ಆಯ್ತು. ಇನ್ನೂ ಅರ್ಧದಾರಿ 
ಬಾಕಿ ಇದೆ. ಸಣ್ಣ ವೇಗ. ಸ್ವಲ್ಪ ಸಮಯ ಮಾತ್ರ. ಮತ್ತೇನೋ ಹೊಸತು ಕಂಡ ತಕ್ಷಣ ಎಲ್ಲರ ನಡಿಗೆಯೂ ನಿಂತೇ ಹೋಗುತ್ತೆ. ನಮ್ಮ ಮಾತು, ಮೌನಗಳಿಂದ ನಿರ್ಜೀವ ರೈಲು ಕಂಬಿಗಳಿಗೂ ಮುಂಜಾನೆಯಲಿ ಜೀವ ಬಂದಂತೆ ಭಾಸ...
ಮುಕ್ತಾಯದ ಹಂತದಲ್ಲಿ ನಮ್ಮ ಪ್ರವಾಸ...


ರೈಲು ದಾರಿಯ ಗುಂಟ...
ಅದೋ ಕ್ಯಾಸಲ್ ರಾಕ್ ಸ್ಟೇಷನ್ ಯಾರೋ ಕಿರುಚಿದ್ರು..
ಎಲ್ಲರ ಮೊಗದಲ್ಲೂ ಬಂದೇ ಹೋಯ್ತಾ ಎಂಬ ಬೇಸರ ಮತ್ತು ರೈಲು ಹೋಗುವ ಮುಂಚೆಯೇ ತಲುಪಿದೆವಲ್ಲಾ ಎಂಬ ಖುಷಿ ಎರಡೂ ಮನೆ ಮಾಡಿತ್ತು...
ಒಬ್ಬೊಬ್ಬರಾಗಿ ವಿದಾಯ ಹೇಳ್ತಾ ಹೇಳ್ತಾ ಕೊನೇಲಿ ಎಲ್ಲರ ಮನಗಳಲ್ಲೂ ನೆನಪುಗಳು ಮನೆಮಾಡಿಕೊಂಡವು...
ನನ್ನವರು
ವಿದ್ಯಾ, ರಘು, ವಿನಾಯಕ, ಶ್ರೀಕಾಂತ, ರಾಘು, ಸ್ವಾನು, ವಿಶು, ರಂಜನ್, ಶಕು, ಪವಿ, ರಾಜಮಾತಾ, ಬಾಚು, ಸತೀಶ
ಒಂದಷ್ಟು ಛಾಯಾ ಚಿತ್ರಗಳು - ನನ್ನ ಕ್ಯಾಮರಾ ಕಣ್ಣಲ್ಲಿ...









ಗಮ್ಯದ ಜಲಪಾತವ ಸೇರುವ ದಾರೀಲಿ ಸಿಗುವ ಸಣ್ಣ ಪುಟ್ಟ ಝರಿ, ತೊರೆಗಳ ಚೆಲುವನ್ನೂ ಸವಿದರೆ ಪ್ರಯಾಣ ಎಷ್ಟು ಸೊಬಗೇರುತ್ತೆ ಅಲ್ಲವಾ...
ಪ್ರವಾಸದ್ದೂ ಮತ್ತು ಬದುಕಿನದ್ದೂ.....

Monday, October 8, 2012

ಗೊಂಚಲು - ನಲವತ್ತಾರು.....

ನನ್ನ ಸ್ವಾರ್ಥ.....

ಎಂಥ ದುರಾಸೆ
ಬಯಸುತ್ತೇನೆ -
ಎನ್ನೆಲ್ಲ ದೌರ್ಬಲ್ಯಗಳ ಸಹಿಸಿ
ಎನ್ನ ನೋವುಗಳನೆಲ್ಲ ಹೀರಿ
ಎನ್ನ ಹಿಂದೆ ನೆರಳಂತೆ ಉಳಿದು
ಖುಷಿಯ ಮೇರೆ ಮೀರುವಂತೆ ಮಾಡಿ
ಜೀವಿಸಲು ಸ್ಫೂರ್ತಿ ಮೂಡುವಂತೆ
ಅವಳೆನ್ನ ಪ್ರೀತಿಸಲೆಂದು...

ಆದರೆ 
ಒಂದು ಕ್ಷಣ ಕೂಡ ಯೋಚಿಸಲೊಲ್ಲೆ
ಹಾಗೆಲ್ಲ ನಾನೂ ಅವಳ ಪ್ರೀತಿಸಬಹುದೆಂದು...

ಪ್ರೀತಿಸಬಲ್ಲ ಮನಸಿಲ್ಲ
ಪ್ರೀತಿಸಲ್ಪಡುವ ಬಯಕೆ ಬೆಟ್ಟದಷ್ಟು...

ಎಂಥ ಕ್ರೌರ್ಯ
ಬಯಕೆ ದೇಹಕೆ -
ಬಿಗಿದ ತೆಕ್ಕೆ ಸಡಿಲದಂತೆ
ಅವಳಂಗಾಂಗಗಳ ಅಂದವನೆಲ್ಲ ಒಂದೇಟಿಗೇ ಹೀರಬೇಕೆಂದು
ಹೀರುತ್ತಲೇ ಇರಬೇಕೆಂದು...

ಆದರೆ
ಚಿಂತಿಸಲೊಲ್ಲೆ ಒಮ್ಮೆಯೂ
ಅವಳ ಕಣ್ತಣಿಸಲು ನನ್ನಲೇನಿದೆ ಅಂದವೆಂದು...
ಕೇಳಲೊಲ್ಲೆ
ಅವಳ ಸುಖದ ಕಲ್ಪನೆ ಏನೆಂದು...

ಸುಖ ಕೊಡುವ ತೋಳ ಬಲ
ವೀರ್ಯವಂತ ಸ್ಖಲನ ಶಕ್ತಿ
ಮೈಯಲ್ಲಿದೆಯಾ ಎಂಬ ಅರಿವಿಲ್ಲ...
ನಾಭಿಯಾಳದಲ್ಲಿ ಮಾತ್ರ
ಎಂದೂ ಹಿಂಗದ ಸದಾ ವ್ಯಗ್ರ ನಿರ್ಲಜ್ಜ ಕಾಮ...

Monday, October 1, 2012

ಗೊಂಚಲು - ನಲವತ್ತು ಮತ್ತೈದು.....

ಸಮಾಧಾನ.....

ಅಂದು -
ಆಗಷ್ಟೇ ರುದ್ರಭೂಮಿಯಿಂದ ಹಿಂತಿರುಗಿದ್ದೆ. ನನ್ನ ಮಗ ಅಳುತ್ತಳುತ್ತಲೇ ಕೇಳಿದ್ದ, ಅಮ್ಮಾ ತಾತ ಎಲ್ಲಿ ಹೋದ್ರು.?
ಆಗಿನ್ನೂ ಮಗನಿಗೆ ನಾಲ್ಕು ವರ್ಷ. 
ದೇವರ ಹತ್ರ ಪುಟ್ಟಾ ಅಂದಿದ್ದೆ. 
ಮತ್ತೆ ಪ್ರಶ್ನೆ - ಯಾಕೆ.?
ದೇವರಿಗೆ ತಾತ ಅಂದ್ರೆ ತುಂಬಾ ಪ್ರೀತಿಯಂತೆ. ಅದಕ್ಕೇ ತಾತನ್ನ ತನ್ನಹತ್ರ ಕರೆಸಿಕೊಂಡಿದಾನೆ, ಇನ್ನು ಮೇಲೆ ತಾತ ಆಕಾಶದಲ್ಲಿನ ನಕ್ಷತ್ರವಾಗಿ ನಮ್ಮ ನೋಡ್ತಿರ್ತಾರೆ ಅಂತೆಲ್ಲ ಏನೇನೋ ಹೇಳಿ ಸಮಾಧಾನಿಸಿದ್ದೆ. ಅಂದಿನಿಂದ ನನ್ನಷ್ಟೇ ತಾರೆಗಳನ್ನೂ ಪ್ರೀತಿಸಹತ್ತಿದ್ದ.

ಈಗ ಅದೇ ಮಗನಿಗೆ ಕನಸು ಬಿಚ್ಚಿಕೊಳ್ಳುವ ಹದಿನಾರರ ವಯಸು.
ನನ್ನನ್ನೇ ಸಮಾಧಾನಿಸುತ್ತಿದ್ದಾನೆ.
ಅಮ್ಮಾ - ಉಹುಂ ಅಮ್ಮ ಅಲ್ಲ ನೀನು. ಈ ಬದುಕು ನೀಡಿದ ಮೊದಲ ಜೀವದ ಗೆಳತಿ. ನೀ ನೊಂದು ಕಣ್ಣೀರಾದರೆ ನಾ ಕಂಗೆಡುತ್ತೇನೆ. ಮತ್ತೇನಿಲ್ಲ ಆ ನಿನ್ನ ದೇವರಿಗೆ ನಾನೆಂದರೆ ತುಸು ಹೆಚ್ಚೇ ಪ್ರೀತಿಯಂತೆ. ಅದಕೇ ಸ್ವಲ್ಪ ಮುಂಚಿತವಾಗಿ ಬಾ ಅಂತಿದಾನೆ. ನಂಗೊತ್ತು - ನಿನ್ನ ಮಡಿಲ ಬಿಸುಪು ಮತ್ತು ಕಂಪು ಅಲ್ಲೆಲ್ಲೂ ಇಲ್ಲ. ಆದರೂ ನೀನಿಲ್ಲಿ ನಗುತಿದ್ದರೆ ಅಲ್ಲೂ ನಾನು ನಚ್ಚಗಿದ್ದೇನು. ನಿನ್ನ ಈ ಪುಟ್ಟ ತಾರೆ ಮನೆಯಂಗಳದಿಂದ ಆಗಸಕೆ ಹಾರಿ ಕೋಟಿತಾರೆಗಳ ನಡುವೆ ಮಿನುಗುವದಂತೆ. ಇಲ್ಲಿ ಜಿನುಗುವ ನಿನ್ನ ಪ್ರೀತಿಯ ಅಲ್ಲಿಂದಲೇ ಸವಿದೇನು...

ಆದರೂ ಅಮ್ಮಾ -
ಎಲ್ಲ ನೀಡುವವ ಅವನೇ ಆದರೆ, ನೋವ ನುಂಗಿ ನಗೆಯ ಹಂಚು ಎಂಬ ನಿನ್ನ ಎಂದಿನ ಮಾತು ಅವನಿಗೇಕೆ ಅನ್ವಯಿಸುವುದಿಲ್ಲ.?
ಈ ಜಗದಿ ಯಾಕಿಷ್ಟು ನೋವಿದೆ.??
ಅವನೇ ಬಿಡಿಸಿದ ಅವನದೇ ಚಿತ್ರಕೆ ಬಣ್ಣ ತುಂಬುವ ವೇಳೆ ಹರಿದೆಸೆವ ಹಂಬಲವೇಕೆ.???
ತಾನೇ ಬಿಡಿಸಿದ್ದು ಎಂಬ ಅಹಮಿಕೆಯಾ...????


ನಗೆಯ ಹರಡಬೇಕಿದ್ದವನು ನಿನ್ನ ಕಣ್ಣಲ್ಲಿ ಹನಿಯನಿಳಿಸಿ ಹೋಗುತಿರುವ ನನ್ನ ಕ್ರೌರ್ಯವ ಕ್ಷಮಿಸಿಬಿಡಮ್ಮಾ....


ಇಂದು - 
ವೈದ್ಯರುಗಳೆಲ್ಲ ಸೋಲೊಪ್ಪಿಕೊಂಡು ನನ್ನ ಕರುಳಿನ ಸಾವಿಗೆ ಮಾರುದ್ದದ ಖಾಯಿಲೆಯ ಹೆಸರಿಟ್ಟು ಬದುಕಿಗೆ ಗಡುವು ನೀಡಿದ ದಿನ...

Thursday, September 20, 2012

ಗೊಂಚಲು - ನಲವತ್ನಾಕು.....

ಸಾಗರದ ಸಾವಿರ ಪ್ರಶ್ನೆಗಳಿಗೆ
ದಂಡೆಯ ನಸುನಗೆಯ
ಮೌನವೇ ಉತ್ತರ.....

ಆಯೀ -
ಇದೊಂದು ಪ್ರಶ್ನೆ ಕೇಳಬೇಡ. 
ಉತ್ತರ ಖಂಡಿತಾ ಗೊತ್ತಿಲ್ಲ. 
ಉತ್ತರ ಹುಡುಕುವ ಮನಸೂ ಈಗ ನಂಗಿಲ್ಲ. 
ಅವನನ್ನು ಯಾಕೆ ಪ್ರೀತಿಸಿದೆ.? 
ಅವನನ್ನೇ ಯಾಕೆ ಪ್ರೀತಿಸಿದೆ.??
ಈವರೆಗೆ ನನ್ನನ್ನೇ ನಾನು ಕೇಳೀಕೊಂಡದ್ದು ಅದೆಷ್ಟು ಬಾರಿಯೋ...
ಉತ್ತರ ದಕ್ಕಿಲ್ಲವಾಗಲೀ ಪ್ರೀತಿಸದೇ ಇರಲು ಸಾಧ್ಯವೇ ಇಲ್ಲ ಎನ್ನುವುದು ಮಾತ್ರ ಮತ್ತೆ ಮತ್ತೆ ಋಜುವಾಗಿದೆ.

ಸಾಗರದಲೆಗಳ ಕೇಳಿದೆ ಒಮ್ಮೆ - ಒಂದಿನಿತೂ ಪ್ರತಿಸ್ಪಂದಿಸದಿರುವ ದಂಡೆಯನೇಕೆ ಅಷ್ಟೊಂದು ಪ್ರೀತಿಸುವಿರಿ.?
ದಂಡೆಯನು ಪ್ರೀತಿಸಲು ಒಲ್ಲೆನೆನುವ ಅಲೆ ಮರಳ ಒರಟನ್ನು ತಾಕುವ, ದಡದಲಾಡುವ ಕಂದನ ಅಂಬೆಗಾಲ ಮುದ್ದಿಸುವ ಸುಖಗಳ ಕಳಕೊಂಡು ಮಧ್ಯದಲೇ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ನಕ್ಕಿತು ಸಾಗರ.
ಅವನ ಎದೆ ರೋಮಕೆ ಮೂಗನುಜ್ಜುವ ಸುಖವ, ಅವನ ಮಗುವಿಗೆ ಒಡಲಾಗುವ ತಾಯ ಸುಖವ ನಾ ಕಳೆದುಕೊಳ್ಳಲಾರೆ ಅಮ್ಮ...

ದಂಡೆಯನೂ ಕೇಳಿ ನೋಡಿದೆ.
ಪ್ರೀತಿಗೆ ನೀನೇಕೆ ಮೌನಿ ಎಂದು.
ನನ್ನ ಮೌನ ಸಮ್ಮತಿಯೇ ಸಾಗರದ ಪ್ರೀತಿಗೆ ಪ್ರೇರಣೆ.
ಸ್ವಚ್ಛ ಮೌನವೂ ಪ್ರೇಮವೇ ಕಣೇ ಎಂದಿತು ದಂಡೆ.
ಅಂದಿನಿಂದ ಅವನ ಮೌನವನೂ ಅದಮ್ಯವಾಗಿ ಪ್ರೀತಿಸಲಾರಂಭಿಸಿಬಿಟ್ಟೆ.

ಒಮ್ಮೆ ಅವನನ್ನೇ ಕೇಳಿಬಿಟ್ಟೆ.
ಯಾಕೆ ನಾನಿನ್ನ ಇಷ್ಟೊಂದು ಪ್ರೀತಿಸ್ತೇನೆ.??
ಒಂದು ಕ್ಷಣ ಭಯದಿಂದ ನನ್ನ ನೋಡಿ, ಅದೇ ಭಯದ ದನಿಯಲ್ಲಿ ಹೇಳಿದ್ದ -
ಪ್ರೀತಿಗೆ ಕಾರಣವ ಹುಡುಕ ಹೋಗ್ಬೇಡ.
ಹುಡುಕ ಹೊರಟರೂ ಉತ್ತರ ಸಿಗದಂತೆ ನೋಡಿಕೋ.
ಯಾಕೇಂದ್ರೆ ಉತ್ತರ ಸಿಕ್ಕ ದಿನ ಪ್ರೀತಿ ಸತ್ತಂತೆಯೇ ಸರಿ.
ಬದುಕನೇ ಕಳಕೊಂಡು ಬದುಕಿರುವ ಶಕ್ತಿ ನಂಗಿಲ್ಲಾ ಕಣೇ.
ಅಲ್ಲಿಂದ ಮುಂದೆ ಆ ಪ್ರಶ್ನೇನ ನನ್ನಲ್ಲಿ ನಾನೂ ಕನಸಲ್ಲಿ ಕೂಡಾ ಕೇಳಿಕೊಂಡಿಲ್ಲ.

ಆಯೀ -
ಅಷ್ಟಕ್ಕೂ ಯಾರನ್ನಾದ್ರೂ ಯಾಕಾದ್ರೂ ಪ್ರೀತಿಸ್ತೇವೆ ಅನ್ನೋದಕ್ಕೆ ನಿಂಗಾದ್ರೂ ಉತ್ತರ ಗೊತ್ತಾ.?
ಅಪ್ಪ ಅಮ್ಮ ತೋರಿಸಿದ, ಆವರೆಗೆ ಸರಿಯಾಗಿ ನೋಡಿಯೂ ಇರದವನೊಂದಿಗೆ ಇಷ್ಟೆಲ್ಲ ವರ್ಷ ಬದುಕ ಹರವಿಕೊಂಡೆಯಲ್ಲ...
ನಿನ್ನದೆಂಬುದೆಲ್ಲವನೂ ನೀಡಿ ಪ್ರೀತಿಸಿದೆಯಲ್ಲ ಯಾಕೆ.??
ಅಂಥ ಸಿಡುಕಿನ ಅಪ್ಪ (ಅಪ್ಪ ನಿನ್ನೊಂದಿಗೆ ಸರಸವಾಗಿದ್ದದ್ದನ್ನ ನಾನಂತೂ ನೋಡಿಲ್ಲ) ಕೂಡ ಪ್ರತಿ ಬಾರಿ ಪೇಟೆಗೆ ಹೋದಾಗಲೂ ಎರಡಾದರೂ ಉತ್ತಪ್ಪವನ್ನು ನಿನಗಿಷ್ಟ ಅಂತ ತರ್ತಾರಲ್ಲ ಯಾಕೆ.?
ಹೂವೆಂದರೆ ನಂಗೆ ಎಷ್ಟಿಷ್ಟ ಎಂದು ನಿಂಗೊತ್ತು. ಚಿನ್ನು ಬೆಕ್ಕು, ಜೂಲಿ ನಾಯಿ, ಕೊಟ್ಟಿಗೆಯ ಚಂದ್ರಿ ಕರು, ರಾಡಿ ಗದ್ದೆ, ಗುಡಿಯ ಗಣಪನೆದುರಿನ ದೊಡ್ಡ ಘಂಟೆಯ ಸದ್ದು ಎಲ್ಲ ನಂಗಿಷ್ಟ. ಅವೆಲ್ಲಕ್ಕಿಂತ ಈಗಲೂ ನಂಗಿಂತ ಸುಂದರಿ ಆಗಿರೋ ನೀನಂದ್ರೆ ಎಷ್ಟೊಂದು ಪ್ರೀತಿ. ಆಗೆಲ್ಲ ಯಾಕೇಂತ ಕೇಳದೇ ನನ್ನ ಇಷ್ಟಗಳಲ್ಲಿ ಖುಷಿಪಟ್ಟ ನೀನು ಈಗ ಮಾತ್ರ ಕಾರಣ ಕೇಳುವ ಹಂಗೇಕೆ.?
ನಂಗರ್ಥವಾಗುತ್ತೆ ಅಮ್ಮಾ ನಿನ್ನ ಧಾವಂತ. ಆದರೆ ನಾನು ನಿನ್ನ ಮಗಳು. ಹಾಗೆಲ್ಲ ಸುಲಭಕ್ಕೆ ಎಡವುವಳಲ್ಲ ಭಯಬೀಳದಿರು.
ನನ್ನ ಹುಡುಗ ನನಗಿಂತ ನನ್ನ ಜಾಸ್ತಿ ಪ್ರೀತಿಸ್ತಾನೆ ಎಂಬ ಖಾತ್ರಿ ನಂಗಿದೆ.
ಅವನದು ಮರಳ ದಂಡೆಯ ಸಹನೆಯಂಥ ಪ್ರೀತಿ...
ಒಂದೇ ಬೇಸರ ಕೆಲವೊಮ್ಮೆ ಸಾಗರದ ಸಾವಿರ ಪ್ರಶ್ನೆಗಳಿಗೆ ದಂಡೆಯ ನಸುನಗೆಯ ಮೌನವೇ ಉತ್ತರ ಅಷ್ಟೇ.
ಆ ಮೌನವೇ ಕಾಯ್ದೀತು ನಮ್ಮಿಬ್ಬರ ಬದುಕುಗಳ.

ಆಯೀ ಯಾಕೆ ಪ್ರೀತಿಸಿದೆ ಅಂತ ಹೇಳಲಾರೆನಾದರೂ ನಮ್ಮಿಬ್ಬರ ನಡುವಿನ ಒಂದಷ್ಟು ಭಾವಗಳ ನಿಂಗೆ ಹೇಳ್ಬೇಕು.
ನನ್ನ ಬಿಟ್ಟೂ ಬಿಡದ ಬಡಬಡಿಕೆಗಳನ್ನೆಲ್ಲ ಮೌನವಾಗಿ ಆಲಿಸುವ ಅವನ ಸಹನೆ ಮುದ್ದು ಬರಿಸುತ್ತೆ ಒಮ್ಮೊಮ್ಮೆ. 
ಅವನ ಕೈಹಿಡಿದು ಬೀದಿಯಲಿ ನಡೆವಾಗ ದಾರಿಯಲ್ಲಿನ ಹುಡುಗೀರೆಲ್ಲಾ ಆಸೆ ಕಣ್ಣಿಂದ ಅವನ ನೋಡುವಾಗ ಹೆಮ್ಮೆ ಅನ್ನಿಸುತ್ತೆ ನಂಗೆ.
ಏಕಾಂತದಲಿ ಅವನ ಮಡಿಲ ಸೇರುವ ನನ್ನ ಮಗುವಂತೆ ದಿಟ್ಟಿಸುವ ಅವನ ಕಂಗಳು ನಂಗೆ ಆಯೀ ನಿನ್ನನ್ನೇ ನೆನಪಿಸುತ್ತೆ.
ಒಮ್ಮೊಮ್ಮೆ - ನಿನ್ನೆ  ಮೊನ್ನೆ ಸತ್ತ, ಇಂದೂ ಸಾಯುತಿರುವ, ಅರ್ಧಕ್ಕೇ ಆತ್ಮಹತ್ಯೆ ಮಾಡ್ಕೊಂಡ, ನಾಳೆಗಳಲ್ಲೂ ಸಾಯಲಿರುವ ಕನಸುಗಳ ಬಗ್ಗೆ ಮಾತಾಡ್ತಾ ಅವನು ಭಾವುಕನಾದಾಗ ನನ್ನಂತೇ ಅವನೂ ಅತ್ತು ಬಿಡಲಿ ಎದೆಗವುಚಿಕೊಂಡು ಸಂತೈಸಿಯೇನು ಅಂತನಿಸುತ್ತೆ.
ಆದರವನು ಮಹಾ ಸ್ವಾಭಿಮಾನಿ ಪ್ರಾಣಿ.
ಎದೆಯ ನೋವನೆಂದೂ ಕಣ್ಣ ಹನಿಯಾಗಲು ಬಿಡಲೊಲ್ಲ.
ಅತ್ತು ಬಿಡು ಮನಸು ಹಗುರಾದೀತು ಅಂದರೆ ಗಂಡಸು ಕಣೇ ಎಂಬ ಉತ್ತರ.
ಆಗೆಲ್ಲ ನಂಗೆ ನಾನು ಹೆಣ್ಣಾಗಿದ್ದರ ಬಗ್ಗೆ ಖುಷಿಯಾಗುತ್ತೆ.
ಯಾಕಮ್ಮ ಗಂಡಸು ಅಳಲೇ ಬಾರದಾ...??
ತನ್ನ ಪ್ರೀತಿಯ ಮುಂದೆಯೂ...???

ಅರಳಿದ ಹುಣ್ಣಿಮೆಯಂದು ಉಕ್ಕುವ ಕಡಲನ್ನು ನೋಡಿ ಮುದಗೊಳ್ಳುತ್ತಿದ್ದರೆ ನಾನು - ನನ್ನನೇ ನೋಡುತ್ತಾ ಮೈಮರೆಯುತ್ತಾನೆ ಅವನು...
ಮಲ್ಲಿಗೆ ಬಿಳುಪಿನ ಹತ್ತಾರು ಚೆಲುವೆಯರ ನಡುವೆಯೂ ಈ ಕಪ್ಪು ಹುಡುಗಿಯನೇ ಹುಡುಕಾಡಿ, ಸುಳ್ಳೇ ನಗುವಾಗ ನಾನು  ಚಡಪಡಿಸುತ್ತಾನೆ ಅವನು...
ಬಚ್ಚಲ ಏಕಾಂತದಲಿ ನನ್ನ ನಾ ಕಾಣುವಾಗ - ಅವನ ನೋಟದ ನೆನಪಾಗಿ ಸಣ್ಣಗೆ ಕಂಪಿಸಿ ನಾಚುತ್ತೇನೆ ನಾನು...

ದೂರ ನಿಂತೇ ನನ್ನಲೇನೋ ಹುಡುಕುವಂತಿರುವ ಆ ಅವನ ಶಾಂತ ಕಂಗಳಲ್ಲಿರುವುದು ಆಸೆಯಾ.? ಸ್ನೇಹಾಭಿಮಾನವಾ.?? ಪ್ರೀತಿಯಾ.??? ಆರಾಧನೆಯಾ.???? ಇವುಗಳೆಲ್ಲದರ ಮಿಶ್ರಣದ ಇನ್ಯಾವುದೋ ಭಾವವಾ.?????
ಏನೊಂದೂ ಅರ್ಥವಾಗದೇ ಒದ್ದಾಡುತ್ತೆ ನನ್ನ ಮನಸು ಒಮ್ಮೊಮ್ಮೆ...
ಆದರೆ ಈ ಕ್ಷಣ -
ಕನಸುಗಳ ಜೋಕಾಲಿಯಲಿ ಜೀಕುವ ರೋಮಾಂಚನವಷ್ಟೇ ನನ್ನದು...

ನನ್ನ ಪ್ರೀತಿ, ನನ್ನ ಭಾವ ನಿನಗರ್ಥವಾಗಲು ಇಷ್ಟು ಸಾಕೆಂದುಕೊಳ್ತೇನೆ.
ಬೇಡದೆಯೂ ಸಿಗುವ ನಿನ್ನ ಹಾರೈಕೆ ನನ್ನ ಕಾಯುತ್ತೆ ಅನವರತ...
ಅಪ್ಪನ್ನ ಒಪ್ಪಿಸುವ ಕೆಲಸವೂ ನಿಂದೇನೆ.
ಆಯೀ - ಪ್ಲೀಸ್ ಪ್ಲೀಸ್ ಪ್ಲೀಸ್...

Thursday, September 13, 2012

ಗೊಂಚಲು - ನಲವತ್ತರ ಮೇಲೆ ಮೂರು.....

ದಾರಿ.....




ಸಾವಿನ ಮನೆ ಕಡೆಗೆ ಮುಖ ಮಾಡಿ
ಉದ್ದಕ್ಕೂ ಬಿದ್ದುಕೊಂಡಿದೆ 
ಬದುಕ ದಾರಿ...

ಅದು ಒಮ್ಮುಖ ಪಥ...

ಒಂದು ಕ್ಷಣಕೂ ತಿರುಗಿ ಬರುವಂತಿಲ್ಲ
ಜೀವನ ರಥ...

ತೋಚಿದಂತೆ ಸಾಗುತಿರುವುದಷ್ಟೇ ಕೆಲಸ...

ಕಷ್ಟಗಳೆಂಬ ಕಲ್ಲು ಮುಳ್ಳುಗಳ
ಭರವಸೆಯ ಚಪ್ಪಲಿ ತೊಟ್ಟು ಹಾಯುತಿರಬೇಕಷ್ಟೇ...

ಅಲ್ಲಲ್ಲಿಯ ತಗ್ಗು - ದಿಣ್ಣೆಗಳ ಏರಿಳಿಯಲು
ಸಹನೆಯೇ ಶಕ್ತಿ ಕವಚ...

ದಾರಿಪಕ್ಕ ಸಿಗುವ ನೋವಿನ ಬಯಲುಸೀಮೆಯ ಬಿಸಿಲು,
ನಲಿವಿನ ಮಲೆನಾಡ ನೆರಳುಗಳ ಕಂಡು
ಮೈಮರೆಯುವಂತಿಲ್ಲ...
ಹಾಗಂತ 
ನೋವು - ನಲಿವುಗಳಿಗೆ ಸ್ಪಂದಿಸದಿದ್ದರೆ
ಬದುಕಿಗೆ ಸೊಬಗೂ ಇಲ್ಲ...

ನಮ್ಮ ದಾಟಿ ಹೋಗುವವರೆಡೆಗೆ ಮತ್ಸರ,
ನಾವು ದಾಟಿದವರೆಡೆಗೆ ಕರುಣೆ
ಉಹುಂ
ಅವಕೆಲ್ಲ ಸಮಯವಿಲ್ಲ...
ಆದರೆ
ಇವೆಲ್ಲ ಕಾಡದೇ ಹೋದರೆ
ನಡೆವ ತುಡಿತ ಮೂಡುವುದಿಲ್ಲ...

ನಾವು ನಿಲ್ಲಬಯಸಿದರೂ
ರಥ ನಿಲ್ಲುವುದಿಲ್ಲ...
ಚಲನೆಯೊಂದೇ ಅದರ ನಿಯಮ...

ಗೊತ್ತಿಲ್ಲ -
ಯಾವ ತಿರುವಿನಲ್ಲಿ
ಯಾರ ಮೈಲಿಗಲ್ಲು...

ತನ್ನ ಪಯಣ ಮುಗಿದ ಕ್ಷಣ
ಆಳಿದವನಿಗೂ - ಆಳಿಸಿಕೊಂಡವಗೂ
ಸಿಗುವುದು
ಮೂರು ಹಿಡಿ ಮಣ್ಣು 
ಮತ್ತು
ಮೂರು - ಆರು ಅಡಿಯ ಅದೇ ಮಸಣದ ಮನೆ...

ಉಳಿದವರ ಮನದಲ್ಲಿ ಉಳಿದದ್ದು ನೆನಪಾಗಿ -
ಮಂದಹಾಸದ ನವಿರು
ಅಥವಾ
ವಿಕಟಾಟ್ಟಹಾಸದ ಕಸರು...

ಹಿಮ್ಮುಖ ಚಲನೆಯಿಲ್ಲದ ಹಾದಿಯಲಿ ನಡಿಗೆ ಜೋಪಾನ...

***@@@***

ದಾರೀಲಿ ಒಂದು ಚಿಟ್ಟೇನ ಕಂಡೆ.
ನಾನಿನ್ನೂ ನೋಡದಿದ್ದಂತ ಚೆಂದದ ಚಿಟ್ಟೆ.
ದೊಡ್ಡ ದೊಡ್ಡ ರೆಕ್ಕೆಗಳ ಬೂದು ಬಣ್ಣದ ಚಿಟ್ಟೆ.
ಒಂದು ಕ್ಷಣ ಬಿಟ್ಟ ಕಂಗಳಿಂದ ನೋಡುತ್ತ ನಿಂತೆ.
ಒಮ್ಮೆ ಮೃದುವಾಗಿ ಮುಟ್ಟಿದೆ.
ಅದರ ರೆಕ್ಕೆಗಳ ಹುಡಿ ಬೆರಳಿಗೆ ಅಂಟಿತು.
ಖುಷಿಯಾಯ್ತು.
ತಕ್ಷಣ ಆ ಚಿಟ್ಟೆ ಉಚ್ಚೆ ಹೊಯ್ದಿತು.
ಎಷ್ಟು ಖುಷಿಯಾಯ್ತು ಗೊತ್ತಾ...
ಪ್ರಕೃತಿಯ ಮಡಿಲ ವೈವಿಧ್ಯವ ಆಸ್ವಾದಿಸ್ತಾ ಅಲೆಯುತಿದ್ದರೆ ಎಂತೆಂಥ ರೋಮಾಂಚನಗಳೋ...
ಬದುಕು ಕರುಣಿಸುವ ಇಂಥ ಪುಟ್ಟ ಪುಟ್ಟ ಖುಷಿಗಳ ಮನಸಾರೆ ಆಸ್ವಾದಿಸಿದಾಗಲೇ ದಾರಿ ಸುಗಮ ಮತ್ತು ಸಹನೀಯ ಅನ್ನಿಸೀತು...
ಕೊನೆಯ ಉಸಿರಲ್ಲಿ ಸಾರ್ಥಕ್ಯದ ನಗು ಅರಳೀತು...

ಚಿತ್ರ : ನನ್ನ ಕ್ಯಾಮರಾ ಕಣ್ಣಲ್ಲಿ ಯಾವುದೋ ದಾರಿಯ ತಿರುವು...