Thursday, December 29, 2016

ಗೊಂಚಲು - ಎರಡ್ನೂರೆರ್ಡು.....

ಉನ್ಮಾದಿಯಲ್ಲದ ಹಾದಿ ಜಾಳೋ ಜಾಳು.....

ಇದುವರೆಗೂ
ಆಗೀಗ ಹಾಗೆ ನಟ್ಟ ನಡು ರಾತ್ರಿ
ಕನಸು ಸ್ಖಲನ - ಸಳ ಸಳ ಬೆವರು
ತುಪುಕ್ಕನೆ ಮುಸುಕೆಳೆದುಕೊಳ್ಳುವಾಗ
ಸುಖದೆ ಸಿಡಿವ ನೆತ್ತಿಯಲಷ್ಟೇ
ಅರೆಚಣ ನಾನು ನನಗೆ ನಾನಾಗಿ ದಕ್ಕಿದ ಜೀವಂತ ಭಾವ...

ಉಳಿದಂತೆ
ಬಟಾ ಬಯಲು
ನಿಗಿ ನಿಗಿ ಬೆಳಕು
ಸಮಾಜ ಕೃಪಾವಲಂಬಿತ ಮುಖವಾಡದ ನಶೆ
ನಾನೇ ನೇಯ್ದುಕೊಂಡ ಮಹಾ ಸಭ್ಯತೆಯ ಸರಪಳಿ
ಆರೋಪಿತ ನಿರಾಳ, ಅಷ್ಟೇ ನೀರಸ ಹಾದಿ
ಶವದ ನಡಿಗೆ...
;;;;;
ಮೊನ್ನೆ ದಿನ ಮೂರು ಸಂಜೆಯ ಗುಂಗಲ್ಲಿ
ಆ ಷರಾಬು ಖಾನೆಯ ಇಷ್ಟೇ ಇಷ್ಟು ಅಮಲು
ಸಣ್ಣ ಕರುಳನು ತಬ್ಬಿತು
ಅದೆಷ್ಟೋ ನೋವುಗಳು ಹಸಿವ ನೀಗಿಕೊಂಡವು...

ಈ ದಿನ ಮಟ ಮಟ ಮಧ್ಯಾಹ್ನದುರಿ
ಕತ್ತಲನು ಬಂಧಿಸಿಟ್ಟ ಕಿರು ಕೋಣೆ
ಎಲ್ಲಾ ಎಲ್ಲೆಗಳ ಹೆಡೆಮುರಿ ಕಟ್ಟುವ ಅವಳೆಂಬೋ ಅವಳ ರಕ್ಕಸ ಪ್ರೇಮೋತ್ಸವ 
ಅವಳ ಪೀಚಲು ಮೊಲೆಗಳ ಬೆಂಕಿಯಲಿ ನನ್ನ ಸಂಯಮದ ಭಾಷೆ - ಭಾಷಣಗಳೆಲ್ಲ ಇಷ್ಟಿಷ್ಟೇ ಕರಗಿ,
ಸುಡು ಸುಡು ತೊಡೆಗಳ ವೃತ್ತಿಪರ ಬಿರುಸಿಗೆ ಮುಷ್ಟಿಯೊಳಗಣ ಹರೆಯ ಉಕ್ಕುಕ್ಕಿ
ಸರಕ್ಕನೆ ಮೈನೆರೆದ ಜೀವನ ಪ್ರೇಮ...

ಇದೀಗ
ಹಿತವಾಗಿ ಚೂರೇ ಚೂರು ಕೆಟ್ಟು ಹೋದೆ (?)
ಮಸಣದ ನಿಂಬೆ ಗಿಡ ಹೂಬಿಟ್ಟಿದೆ
ಸಭ್ಯತೆಯ ಅರ್ಥಾಂತರದಿ ಸ್ವತಂತ್ರ ನಡಿಗೆಗೀಗ ಚಿರತೆ ವೇಗ...

ಮತ್ತೀಗ 
ಸೀಳು ನಾಲಿಗೆಯ ಸಮಾಜದ ಕುಹಕಕ್ಕೆ ಬೆಲೆಯಾಗಿ ಪಡೆದ ಪ್ರೀತಿಯ ಜಾಣತನದಿ ಮರೆಯುವ, ಕೊಡಬೇಕಿದ್ದ ಪ್ರೀತಿಯ ಕರುಳಲ್ಲೇ ಕೊಲ್ಲುವ, ಅಷ್ಟಲ್ಲದೇ ಮತ್ತದೇ ಸಮಾಜದ ಹಲುಬಾಟಕ್ಕಂಜಿ ತರಿಯಬೇಕಿದ್ದ ತಣ್ಣನೆಯ ಕ್ರೌರ್ಯವ ಕರೆದು ತಬ್ಬಿ ಬದುಕುವ ಮಹಾ ಸಭ್ಯರ ಪಡಿಪಾಟಲುಗಳೆಡೆಗೆ ಕರುಣೆಯ ನಗೆ ನನ್ನದು...
ಅಂತಹ ಸ್ವಯಂ ಘೋಷಿತ ಸಭ್ಯತೆ ನನ್ನ ಮತಿಯ ಸೋಕದಷ್ಟು ಸುರಕ್ಷಿತ ಅಂತರ ಕಾಯ್ದುಕೊಂಡ ಖುಷಿಯ ಸೊಕ್ಕಿನ ನಡೆ ನನ್ನದು...

Thursday, December 15, 2016

ಗೊಂಚಲು – ಎರಡು ಸೊನ್ನೆ ಒಂದು...

ನೆನಪು ಹುಣ್ಣಿಮೆ.....
(ಹಂಗೇ ಎಲ್ಲ ನೆನಪಾಯಿತು - ಒಂದಿಷ್ಟನ್ನ ಅಕ್ಷರದಲಿ ಹೆಪ್ಪಾಕಿಟ್ಟೆ...)

ಆ ಗುಡ್ಡದ ನೆತ್ತಿಯ ಬೋಳು ಮರಕಿಷ್ಟು ನೀರು ಹೊಯ್ಯಬೇಕಿತ್ತು ಎಂದು ಬಯಸಿದ್ದು...
ಅಪರಿಚಿತ ಹಕ್ಕಿಯ ಕುಕಿಲಿಂದ ಹಾಡೊಂದ ಕಡ ತಂದು ಅನುಕರಿಸಿದ್ದು...
ಕಟ್ಟಿರುವೆಯ ಸಾಲನ್ನು ಎಂಜಲಾಗಿಸಿ ಅವರ ಪಂಕ್ತಿ ಮುರಿದದ್ದು...
ಅದರ ಚಂದದ ಗೂಡಿಂದ ನೆಲಗುಬ್ಬಿಯನ್ನು ಆಚೆ ತಂದು ಅಂಗೈಯ್ಯಲ್ಲಿಟ್ಟುಕೊಂಡು ಆ ಕಚಗುಳಿಗೆ ಕಂಪಿಸಿದ್ದು...
ಬಸವನ ಹುಳವ ಮುಟ್ಟಿ ಉಂಡೆ ಆಗಿಸಿ ತಂಗಿಯ ಮಡಿಲಿಗೆ ಹಾಕಿ ಅಳಿಸಿದ್ದು..
ಕಾಗೆ ಮುಟ್ಟಿ ಅಕ್ಕ ಮುಟ್ಟಾಗುತಿದ್ದ ಪರಿ ಹುಟ್ಟಿಸಿದ್ದ ಬೆರಗು...
ಸಮವಸ್ತ್ರದ ಮೇಲೆಲ್ಲ ಸಳ್ಳೆ ಹಣ್ಣು, ಸಂಪಿಗೆ ಹಣ್ಣು, ಹಲಗೆ ಹಣ್ಣುಗಳ ರಸದ ಬಣ್ಣದ ಚಿತ್ತಾರ...
ಅವಳಾಸೆಯ ಸೀತಾ ದಂಡೆಯ ಹೂವು ನನ್ನ ಕೈಯಿಂದ ಅವಳ ಮೋಟು ಜಡೆಯ ಅಲಂಕರಿಸಿದ್ದು...
ಶ್ರೀಲಂಕಾ ನಕಾಶೆಯಂಥ ಮುರುಗನ ಹುಳದ ಗೂಡಿಗೆ ಕಲ್ಲೆಸೆದು ಓಡುವಾಗ ಎಡವಿ ಬಿದ್ದು ಬೆರಳು ಒಡೆದು, ಹುಳ ಕಚ್ಚಿ ಮುಖ ಊದಿ – ಉಫ್...
ಮರೆತು ಹೋಗುವ ಮಗ್ಗಿಗೆ ಮರೆಯದಿರಲು ಯಾವ್ಯಾವುದೋ ದೇವರಿಗೆ ಕಪ್ಪ ಕಾಣಿಕೆಯ ಆಮಿಷ...
ಕಡ್ಡಿ ಮುರಿದ ಕೊಡೆಯೊಳಗೆ ನೆನೆಯದಿದ್ದುದು ತಲೆಯೊಂದೇ...
ಸುಳ್ಳೇ ಬರುವ ಹೊಟ್ಟೆ ನೋವು – ಶಾಲೆಗೆ ಚಕ್ಕರ್ ಆಟಕೆ ಹಾಜರ್...
ಕುತ್ರಿ ಒಕ್ಕುವಾಗಿನ ನಡು ರಾತ್ರಿಯ ಅವಲಕ್ಕಿ ಗೊಜ್ಜು, ಉದ್ದಿನ ದೋಸೆಯ ಕಂಬಳದ ರುಚಿ...
ಬಿರು ಬೇಸಗೆಯ ಮೂರು ಸಂಜೆಯ ಹೊತ್ತಲ್ಲಿ ಇದ್ದಕ್ಕಿದಂಗೆ ಗೆದ್ದಲ ಹುಳುಗಳೆಲ್ಲ ಗೂಡಿಂದಾಚೆ ಬಂದು ಪಟಪಟನೆ ರೆಕ್ಕೆ ಕಟ್ಟಿಕೊಂಡು ಆಗಸಕೆ ಹಾರಿ ಮಳೆಯ ಕರೆಯುವ ಪರಿಗೆ ಬೆರಗಾಗಿದ್ದು (ಇಂದಿಗೂ ಅದು ಬೆರಗೇ)...
ಉಂಬಳದ ಹಲ್ಲು, ನೊರ್ಜಿನ ರೆಕ್ಕೆಗಳ ಹುಡುಕಲು ಹರಸಾಹಸ...
ಹಿಡಿದು ದಾರ ಕಟ್ಟಿ ಹಾರಿಬಿಟ್ಟ ಬಿಂಬಿರಿಯ ಜೀವಂತ ಗಾಳಿಪಟ...
ಪಕ್ಕದ ಮನೆಯ ತೋಟದಿಂದ ಕದ್ದ ಮಾವು, ಕೋಕೋ, ಗೇರು ಹಣ್ಣು, ಸೌತೆಕಾಯಿಗಳ ರುಚಿಯೇ ಬೇರೆ (ಅವರ ಮನೆಯ ಮಕ್ಕಳೊಂದಿಗೇ ಹಂಚಿ ತಿನ್ನೋದು)...
ನಮ್ಮ ಊಟಕ್ಕಾಗಿ ಹಸಿವನೆ ನುಂಗುತಿದ್ದ ಅತ್ತೆ, ಅಮ್ಮ – ಅವರುಗಳ ಕನಸಲೂ ಕಾಡುತಿದ್ದ ನಮ್ಮ ಹಸಿವಿನ ಗುಮ್ಮ...
ಹಲಸಿನ ಹಸಿ ಹಪ್ಪಳ ಜೊತೆಗೊಂದು ಕೊಬ್ಬರಿ ತುಂಡು, ಹುಳಿಸಪ್ಪು ಸಣ್ಣ ಮೆಣಸು ಸಕ್ಕರೆ ಸೇರಿದ ಗುಡ್ನ (ಚಟ್ನಿ) - ಈಗಲೂ ಬಾಯಲ್ಲಿ ನೀರೂರುತ್ತೆ...
ಅಗಾಧ ಕೌತುಕ ಮೂಡಿಸ್ತಿದ್ದ ಅಂಗಳದ ಮೂಲೆಯ ನಾಯಿಗಳ ಮೈಥುನ ಮತ್ತು ದಣಪೆಯಾಚೆಯ ದನಗಳ ಮಿಲನ...
ಅರ್ಥವಾಗದೇ ಹೋದರೂ ಮೊಗದಿ ನಾಚಿಕೆ ಮೂಡಿಸುತಿದ್ದ ಹಿರಿಯರ ಪೋಲಿ ಪೋಲಿ ಮಾತು...
ಬದುಕ ಎದುರಿಸದೇ ಮಧ್ಯದಲ್ಲೇ ಎದ್ದು ಹೋದವರು ನಮ್ಮಲುಳಿಸಿ ಹೋದ ಕಂಗಾಲು ಮತ್ತು ಎಂದೂ ತುಂಬದ ಎದೆಯ ಖಾಲಿತನ...
ತಮ್ಮ ಲೋಲುಪತೆಗೆ ನಮ್ಮ ಖುಷಿಗಳ ಉಂಡು ತೇಗಿದವರು ಹಣೆಯ ಮೇಲೆ ಕೆತ್ತಿಟ್ಟು ಹೋದ ಶಾಶ್ವತ ಅವಮಾನಗಳ ಮಚ್ಛೆ...
ತುಪ್ಪ ಮತ್ತು ಕಡಬು ಕದಿಯೋಕೆ ಹೆಣಗಾಡಿ, ಸಾಹಸದ ಕಥೆ ಹಂಚಿಕೊಳ್ಳೋಕೆ ವೇದಿಕೆ ಆಗ್ತಾ ಇದ್ದ ಬೂದಗಳು ಹಬ್ಬ...
ಹೆಕ್ಕಿ ತಂದ ಮುಳ್ಳು ಹಂದಿಯ ಅಂಬು ಪಾಟೀಚೀಲವ ತೂತು ಮಾಡಿದ್ದೀಗ ನಗೆಯ ನೆನಪು...
ಭಯ ಹುಟ್ಟಿಸುತಿದ್ದ ಕಣಕು ನೀರಿನ ಹಳ್ಳ, ಕೊಳ್ಳಿ ದೆವ್ವದ ಕಥೆ, ಓಡು ನಡಿಗೆಯ ಕತ್ತಲ ಹಾದಿ...
ರಾತ್ರಿ ಪಯಣದಲಿ ಕೈಯಲ್ಲಿನ ಸೂಡಿಯ ಬುರು ಬುರು ಶಬ್ಧವೇ ಭಯದ ಮೂಲವಾಗಿದ್ದು, ಬೆಳದಿಂಗಳಲಿ ಬೆಳ್ಳಗೆ ಹೊಳೆವ ಸತ್ತ ಮರದ ತೊಗಟೆ ಭೂತವೆನಿಸಿದ್ದು...
ಆಟದ ಮನೆಯ ಸಂಸಾರದಲ್ಲಿ ಸೂರು ಹಾರುವ ನಗು...
ಒಡೆದ ಬೆರಳು, ತರಚಿದ ಮಂಡಿಗೆಲ್ಲಾ ಕಾಂಗ್ರೆಸ್ ಗಿಡದ ಎಲೆಯ ರಸವೇ ಮದ್ದು...
ಅಣ್ಣ ಬಳಸಿ ಬಿಟ್ಟ ಅಂಗಿ – ಚಡ್ಡಿಗಳೇ ನನಗೆ ಹೊಸ ಬಟ್ಟೆ, ಅವನ ಚಿಗುರು ಮೀಸೆ ನನಗೂ ಕನ್ನಡಿಯನ್ನ ನೆಂಟನನ್ನಾಗಿಸಿದ್ದು...
ಅಜ್ಜನ  ಕಣ್ಣಂಕೆಯ ನೆರಳು, ಅಮ್ಮನ ಹಳೆ ಸೀರೆಯ ಘಮಲು, ಒಡಹುಟ್ಟಿನ ನಗೆಯ ಅಮಲು ಒಟ್ಟು ಸೇರಿದ ಮಮತೆ...
ಬಿಟ್ಟೂ ಬಿಡದ ಸೋನೆ, ಅಂಗಳದ ಕಿಚಡಿ ಮಣ್ಣು, ಯಾರೆಲ್ಲರ ವಾತ್ಸಲ್ಯದ ತೊಟ್ಟಿಲಲ್ಲಿ ಅರಳಿದ್ದಿದು ಬದುಕು...

ಖುಷಿ, ರುಚಿ, ಕುತೂಹಲ, ಎಲ್ಲವನೂ ಒಳಗೊಳ್ಳುವ ಲವಲವಿಕೆಗಳೇ ಆದ್ಯತೆಯಾಗಿದ್ದ ಆ ದಾರಿಯಲ್ಲಿ ಮತ್ತೊಮ್ಮೆ ನಡೆಯಬೇಕಿತ್ತು ಅದೇ ಹಚ್ಚ ಹಳೆಯ ಭಾವದಲ್ಲಿ...

ಹೌದು - ಬಾಲ್ಯವೆಂದರೆ ಬರೀ ನಗೆಯ ನೆನಪಷ್ಟೇ ಅಲ್ಲ...
ಆದರೆ ಸ್ವಚ್ಛಂದ ಹಾಗೂ ಪ್ರಾಮಾಣಿಕ ನಗೆಯ ನೆನಪಷ್ಟೂ ಅಲ್ಲಿಯೇ ಗುಡಿಯ ಕಟ್ಟಿಕೊಂಡಿದೆ...
ನಗುವಿನೆಡೆಗೊಂದು ಮಂಗ ಹಿಡಿತದ ಒಲವ ಸಲಹಿಕೊಂಡರೆ ಎಂಥ ಗಾಯದ ನೋವನೂ ಸಲೀಸಾಗಿ ದಾಟಬಹುದು ಎಂಬ ಸರಳ ಸತ್ಯವ ಹೇಳಿಕೊಟ್ಟದ್ದೂ ಅದೇ ಬಾಲ್ಯವೇ...
ಬೆಳೆದೆನೆಂದು ಬೀಗುತ್ತಾ ತೋಳೇರಿಸೋ ಹೊತ್ತಲ್ಲಿ ಅಲ್ಲಿಯೇ ಬಿಟ್ಟು ಬಂದ ಮುಗ್ಧತೆಯ ಮತ್ತೆ ನೆನೆದು ಒಂಚೂರು ಮನುಜರಾಗೋ ಸೌಜನ್ಯ ಮತ್ತು ಮಗು ಭಾವದ ನಗುವೊಂದು ಎಲ್ಲರ ಎದೆಯಲೂ ಅರಳಲಿ...

*** ಈ ಬರಹ "ಪ್ರತಿಲಿಪಿ ಕನ್ನಡ" ಇ-ಪತ್ರಿಕೆಯಲ್ಲಿ ಪ್ರಕಟವಾಗಿದೆ...
ವಿಳಾಸ: http://kannada.pratilipi.com/shrivatsa-kanchimane/nenapu-hunnime

Friday, December 2, 2016

ಗೊಂಚಲು - ಎರಡು ಸೊನ್ನೆ ಸೊನ್ನೆ.....

ಏನೋ ನಾಕು ಸಾಲು..... 
(ಇನ್ನೂರನೇ ಗೊಂಚಲಿನ ಸಂಭ್ರಮದ ಸರಿಗಮ...) 

"ಬದುಕು..."

ಅಲ್ಲೊಂದು ಕಡಲು - 
ಇಲ್ಲೊಂದು ಬಯಲು - 
ಮಂಜು ಮುಸುಕಿನ ಹಾದಿ ಕನಸ ಸುಡುವಂತೆ - 
ಹಗಲಲ್ಲಿ ಇರುಳ ಮಣಿ ಇದ್ದರೂ ಇಲ್ಲದಂತೆ - 
ಕನ್ನಡಿಯು ತೋರಿದಷ್ಟೇ ನನಗೆ ನಾ ಕಾಂಬುವುದು...

ಅಲ್ಯಾರೋ ಸತ್ತು - 
ಇಲ್ಯಾರೋ ಹಡೆದು - 
ಅಲ್ಲಿಗಿಲ್ಲಿಗೆ ಕಾಲನ ಲೆಕ್ಕ ಚುಕ್ತಾ - 
ಬೆನ್ನ ಕಾಣದ ಕಣ್ಣು ಹಿಡಿವ ಜಾಡು - 
ಅಲೆ ತೊಳೆವ ತೀರದಲಿ ಮರಳ ಗೂಡು...

ನನ್ನ ಬೊಗಸೆ - 
ನನ್ನ ನಡಿಗೆ - 
ಕನಸೊಂದು ದಡೆ - 
ನೆನಪಿನದೊಂದು ದಡೆ - 
ಯಾರೋ ಇಟ್ಟ ಎಡೆ - 
ಕಾಗೆಗೊಂದಗುಳು ಪಿತೃ ಋಣವಂತೆ...
_*_*_

ತಾರೆಗಳೊಕ್ಕಲು,
ಚಂದಿರ ಕಂದೀಲು,
ಖಾಲೀ ಖಾಲಿ ಸಾಗರ ಕಿನಾರೆ,
ಚೂರೇ ಚೂರು ಮದಿರೆ
ಮತ್ತು ಪೂರಾ ಪೂರಾ ನೀನು...
ಎದೆಗೇರುವ ನಶೆಯಲಿ
ಸಾವಿನಂಥ ಸಾವೂ ಹೊಟ್ಟೆ ಉರ್ಕೊಂಡು ಸಾಯುವಂತೆ
ಬದುಕನೇ ಆ ಇರುಳಿಗೆ ಬರೆದಿಟ್ಟೇನು...
_*_*_

ನಗು: ಹಿರಿ ಕಿರಿಯ ನೋವನೆಲ್ಲ ಹೆಪ್ಪಿಟ್ಟು ಬಚ್ಚಿಡುವ ಚಂದನೆ ಕುಸುರಿಯ ಭದ್ರ ತಿಜೋರಿ...
ನಗು: ಸಾವನೇ ಸಾಕ್ಷಿಯಾಗಿಸಿಕೊಂಡೂ ಬದುಕ ಉತ್ತಲು ಮತ್ತೆ ಮತ್ತೆ ಹೊಸ ಕನಸ ಹಡೆಯುವ ಅಕ್ಷಯ ಗರ್ಭ...
ನಕ್ಕುಬಿಡು ಉಕ್ಕುಕ್ಕಿ ನದಿಯಾಗಲಿ ಕಣ್ಣು - ಬರಿದಾಗಿ ಮತ್ತೆ ಹಸಿವಾಗಿ, ಗೆಲುವಾಗಲಿ ಎದೆಯ ಮಣ್ಣು...
_*_*_

ಮಲೆನಾಡು - ಬೆಳಗು - ಒಂಟಿ ನಡಿಗೆ ಮತ್ತು ಪೋಲಿ ಮನಸು...
(ನಿನ್ನೆ ಇಳಿಸಂಜೆಯಲೊಂದು ಸಣ್ಣ ಮಳೆಯಾಗಿದೆ...)

ಬಿಸಿಲ ಬೆಳಕನೂ ಸೋಸಿ ತುಸುವೇ ನೆಲಕುಣಿಸೋ ದಟ್ಟ ಕಾಡು - ಕಾಡುತ್ತದೆ ಥೇಟು ಅವಳ ಕಂಗಳಂತೆ...
ನಟ್ಟ ನಡುವಲೊಂದು ಸೊಟ್ಟ ಕಾಲು ಹಾದಿ - ಇರುಳೆಲ್ಲ ಕಾಡಿದವನ ಕೊರಳ ಘಮದಿಂದ ಕೊಸರಿ ಎದ್ದು ಸುಖೀ ಆಲಸ್ಯದಲಿ ಹೆಣೆದ ಅದೇ ಅವಳ ಹೆರಳ ಬೈತಲೆಯಂತೆ...
ನಾಚುತಲೇ ಚುಚ್ಚುತ್ತದೆ ನಾಚಿಕೆ ಮುಳ್ಳು - ನಿತ್ಯವೂ ಅವಳು ಕಣ್ಮುಚ್ಚಿ ನಗುತ ಆಸೆ ಬೆಂಕಿಯ ಬೆಚ್ಚನೆ ತುಟಿಗಳಲಿ ಅವನ ಎದೆ ರೋಮವ ಕಚ್ಚುವಂತೆ...
ಕಾಡು ಹೂವೊಂದು ತೊಟ್ಟು ಕಳಚಿ ಮೈಮೇಲಿಂದ ನೆಲಕ್ಕುರುಳುತ್ತೆ - ನಾಲ್ಕನೆ ದಿನದ ಮುಂಜಾನೆಯ ಸ್ನಾನ ಮುಗಿಸಿ ಕಮ್ಮಗಿನ ಒದ್ದೆ ಹೆರಳನು ಇನ್ನೂ ಮಲಗೇ ಇದ್ದವನ ಮುಖದ ಮೇಲಾಡಿಸೋ ಅವಳ ತುಂಟ ಹಸಿವಿನಂತೆ...
ಅಪರಿಚಿತ ಹಕ್ಕಿಯೊಂದರ ಕುಕಿಲು ಕಾಡಿನಾಳದಿಂದ - ಸುಖದ ಸುಷುಪ್ತಿಯಲಿನ ನಗುವಲ್ಲದ ಅಳುವಲ್ಲದ ಅವಳ ತೃಪ್ತ ಝೇಂಕಾರದಂತೆ...
ಕಾಗೆಯೊಂದು ಕೊಕ್ಕಿನಿಂದ ಬಿಂಕದ ಸಂಗಾತಿಯ ರೆಕ್ಕೆಗಳ ಸವರುತ್ತೆ - ಕಳೆದಿರುಳ ಬೆತ್ತಲೆ ಉತ್ಸವದಲಿ ಅವಳ ಮೈಯ ಏರು ತಿರುವುಗಳಲೆಲ್ಲ ಹುಚ್ಚನಂತೆ ಅಲೆದಲೆದು ನಾನೇ ಬಿಡಿಸಿದ ಮತ್ತ ಮುತ್ತಿನ ರಂಗೋಲಿಗಳ ಈಗ ಸ್ನಾನದ ಮನೆಯಲ್ಲಿ ನಾನೇ ಹುಡುಕುತ್ತೇನೆ ಹೊಸ ಆಸೆಯೊಂದಿಗೆ; ಅವಳೋ ಸುಳ್ಳೇ ನಾಚುತ್ತಾಳೆ...
ಇನ್ನೂ ಏನೇನೋ - ಹೇಳೋಕೆ ನಂಗೂ ಒಂಥರಾsss... ;)
_*_*_

ಸೋತು ಉಸಿರ ತುಂಬಲು - ಎಂದೋ ಮುರಿದಾಗಿದೆ ಕೊಳಲು; ಧಮನಿಯಲಿ ಬಲವಿಲ್ಲ ಪಾಂಚಜನ್ಯವ ಊದಲು...

ಕೊಳಲು: ಬದುಕಿನ ಸೌಂದರ್ಯ - ಬೆಚ್ಚನೆ ಕನಸು - ಮನಸಿನ ಬೆಳಕು...
ಪಾಂಚಜನ್ಯ: ಬದುಕಿನ ವಾಸ್ತವ - ಕಣ್ಣೆದುರಿನ ಸತ್ಯ - ಬುದ್ಧಿಯ ಘರ್ಜನೆ...
ಕೃಷ್ಣನೂ ಸೋತದ್ದೇ ಅಲ್ಲವಾ ಎರಡನೂ ಒಟ್ಟಿಗೇ ಸಲಹಲು...???

ಇಷ್ಟಾಗಿಯೂ - ಸದಾ ವಿರಹಿ ರಾಧೆ, ವಿಧಾತ ಕೃಷ್ಣ ಈರ್ವರೂ ಕನಲುತ್ತಾರೆ ನನ್ನೊಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, November 11, 2016

ಗೊಂಚಲು - ನೂರಾ ತೊಂಭತ್ತು ಮೇಲೆ ಒಂಭತ್ತು.....

ಇನ್ನೂ ಎನೇನೋ..... 

ಇಲ್ಲೆಲ್ಲೋ ವೃದ್ಧರ ಗೂಡಿನ ಅಜ್ಜಿಯರ ತಬ್ಬುವಾಗ ಎದೆಯಲಿ ರಕ್ತ ತಂಪಾಗಿ ಉಸಿರು ಹೆಪ್ಪುಗಟ್ಟುತಿರೋ ಭಾವ - ಅಲ್ಲೆಲ್ಲೋ ಆಯಿ ನಕ್ಕಂತೆ ಭಾಸ...
ಬದುಕ ಹೊರಲಾರದ ಅಸಹಾಯ ಹೆಗಲ ಗಾಯದ ಘಾಟಿಗಿಂತ ಸಾವಿನ ವಾಸನೆಯೇ ಸಹನೀಯವೇನೋ...
{{*}}

ನನ್ನ ವ್ಯಕ್ತಿತ್ವದ ಬಗೆಯ ಪ್ರಾಮಾಣಿಕ ಪ್ರಮಾಣ ಪತ್ರ ನನ್ನದೇ ಅಂತರಾತ್ಮದ ನ್ಯಾಯಾಲಯದಲ್ಲಿ ಮಾತ್ರ ಸಿಗಲು ಸಾಧ್ಯ...
ಆಚೆಯಿಂದ ಸಿಗುವ ಎಲ್ಲಾ ಬಿರುದು, ಬಾವಲಿ, ಗುಣವಾಚಕಗಳೂ ನನ್ನ ಮಾತು, ಮೌನ, ಕ್ರಿಯೆ, ಪ್ರತಿಕ್ರಿಯೆಗಳಿಗೆ ಮತ್ತು ಅವನೆಲ್ಲ ನಿಯಂತ್ರಿಸಿ ನಿಭಾಯಿಸುವ ನನ್ನ ಸುಂದರ (?) ಮುಖವಾಡಕ್ಕೆ ಸಮಾಜ ದಯಪಾಲಿಸುವ ಬಿನ್ನವತ್ತಳೆ ಅಷ್ಟೇ...
{{*}}

ಬಿರುಕು ಪಾದ - ಬಳಸು ಹಾದಿ - ಆ ನೀಲಿ ಕನಸು - ಈ ಕೆಂಪು ಕಲೆ - ಚೆಲ್ಲಿ ಹೋದ ಶಾಯಿಯೆಡೆಗಿನ ಹಳಹಳಿಕೆ ಬದುಕು...
ಯಾವ ಮುರ್ಕಿ - ಇನ್ಯಾವ ಶಾಪ - ಯಾವ್ಯಾವುದೋ ರೂಪ - ಎಂಥ ಹೆಜ್ಜೆಯ ಗುರುತನೂ ಅರೆ ಚಣದಲಿ ಅಳಿಸುವ ಬಿರು ಬೀಸಿನಲೆ ಸಾವು...
{{*}}

ನಿಭಾಯಿಸಲರಿಯದ ಅಹಮಿಕೆ ಕೊಂದಷ್ಟು ಕ್ರೂರವಾಗಿ ಸಾವು ಕೂಡ ಬಂಧಗಳ ಕೊಲ್ಲಲಿಕ್ಕಿಲ್ಲ; ಅಹಂನ ಆರ್ಭಟದಲಿ ನೆನಪುಗಳಿಗೂ ಕಹಿ ಕಹಿಲೇಪ...
ಪ್ರೀತಿ ಹೆಣದ ಬೂದಿಯಲಿ ತುಂಡು ಬೆರಳ ಮೂಳೆಗೆ ತಡಕಾಡುತ್ತೇನೆ; ನೋವ ಅಸ್ತಿಯನು ಕಣ್ಣತೀರ್ಥದಲಿ ತೊಳೆದು ನಾಳೆ ನಾ ಮತ್ತೆ ನಗಬೇಕಿದೆ...
{{*}}

"ಪ್ರಜ್ಞೆಯ ಸಾರತ್ಯವಿಲ್ಲದೇ ಮನಸಿನ ಸಾರೋಟನ್ನು ಹಾದಿಗಿಳಿಸಿದಾತ ತನ್ನೆಲ್ಲ ಸೋಲಿಗೂ ಯಾರ್ಯಾರನ್ನೋ ದೂರುತ್ತಾ, ಹಳಹಳಿಕೆಗಳಲೇ ಬದುಕ ಸವೆಸುತ್ತಾನೆ..."
ಈ ಮಾತು ಮನಸಿನಾತುರಕೆ ಆಯ್ಕೆಯ ಅಡವಿಟ್ಟು ಕೊನೆಗೆ ಅಳುತ್ತ ಕೂರುವ ಎಲ್ಲಾ ಪ್ರೇಮಿಗಳಿಗೆ ಇನ್ನೂ ಹೆಚ್ಚು ಅನ್ವಯಿಸುತ್ತೆ...
ಪ್ರೇಮ ಕುರುಡು; ಗುಣಾವಗುಣಗಳನೆಲ್ಲ ಪರೀಕ್ಷಿಸಿ ಆಯ್ದುಕೊಳ್ಳೋಕೆ, ಒಪ್ಕೊಳ್ಳೋಕೆ ಪ್ರೇಮವೇನು ಒಪ್ಪಂದವಾ? ಪ್ರೇಮ ವ್ಯಕ್ತಿ ವ್ಯಕ್ತಿತ್ವಕ್ಕೆ ಜರಡಿ ಹಿಡಿದು ಕಾಯ್ದು ಮಾಡುವುದಲ್ಲ ಅದು ಸಹಜವಾಗಿ ಸಂಭವಿಸಿಬಿಡುವುದು; ಪ್ರೇಮದ ಗೆಲುವಿರೋದು ಮದುವೇಲಿ ಮಾತ್ರ... ಯಪ್ಪಾ ಎಂತೆಥಾ ಭ್ರಮೆಗಳು...!!!
ಅತ್ತು ಪ್ರೇಮವ ಒಲಿಸಿಕೊಳ್ಳುವುದಕ್ಕೂ ಒಲಿದ ಪ್ರೇಮದೆದುರು ಕಣ್ತುಂಬಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸ ಇದೆ...
ಮದುವೆಯ ಯಶಸ್ಸು, ಆಯಸ್ಸು ಪ್ರೇಮದಲ್ಲಿದೆ ನಿಜ; ಆದರೆ ಪ್ರೇಮದ ಸಾರ್ಥಕ್ಯ ಮದುವೆಯಲ್ಲಿ ಮಾತ್ರ ಅನ್ನೋದು ಬಯಲಿಗೆ ಬೇಲಿ ಹಾಕಿದಂತೆನಿಸುತ್ತೆ ನಂಗೆ...
- ಇನ್ನೂ ಎನೇನೋ...
*** ಭಗ್ನ ಮತ್ತು ಆದರ್ಶ (?) ಪ್ರೇಮಿಗಳ ಕ್ಷಮೆಕೋರಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, November 2, 2016

ಗೊಂಚಲು - ನೂರಾ ತೊಂಭತ್ತೆಂಟು.....

ಒಂದಿಷ್ಟು ತುಂಡು ಭಾವಗಳು..... 

ಈಗಿನ್ನೂ ಬಾಳೆಲೆ ಹರವಿ, ನಾಕು ಹನಿ ಚಿಮುಕಿಸಿ ಧೂಳು ಕೊಡವಿ, ಬಡಿಸಿಕೊಳ್ಳಬೇಕು ಊಟವ.......
...... ಬದುಕು ತುತ್ತೆತ್ತಿಕೊಳುವ ಮುನ್ನವೇ ಬಾಗಿಲಲಿ ಸಾವು ತೇಗಿತ್ತು...
(**ಎಲ್ಲ ಹಸಿವಿಗೂ ತರ್ಪಣ...)
<<^>>

***ಮಿಂಚಿನಂದದೊಳಾದರೂ, ತುಸುವೇ ಆದರೂ ಸುರಿದು ಹೋಗೊಮ್ಮೆ ಈ ಎದೆಯ ಹಾದಿಯಲಿ ಕನಸ ಬೆಳಕೇ...
***ನೀಗದ ನಿರ್ಲಜ್ಜ ಹಸಿವುಗಳ ಮಗ್ಗುಲಲೇ ನಿನಗಾಗಿ ನೀನಾಗಿ ನೀನೊಮ್ಮೆ ನಗು ಬದುಕೇ...
*** ಪ್ರೀತಿಯೂ ಹಸಿವೇ - ಕಾಮವೂ ಕನಸೇ - ಹೆಜ್ಜೆ ಭಾರವಾದಷ್ಟೂ ಸಾವು ಹಗುರ...
<<^>>

ಏಕಾಂಗಿ ನಿಲ್ಲಬೇಕು ಸಂತೆಯಲ್ಲಿ - ಏಕಾಂತ ತಬ್ಬಬೇಕು ಅಂಕದಲ್ಲಿ...!!!
<<^>>

ಯಾರದೋ ನಗೆಯ ಹಿಂದಿನ ತೀವ್ರ ನೋವಿಗೂ ಸಾಂತ್ವನದ ಮದ್ದಾಗಬಹುದು - ನಮ್ಮವರದೇ ನಗೆಯ ಹಿಂದಿನ ಗುದ್ದಿಗೂ ಸಿಗದ ತಣ್ಣನೆ ಕ್ರೌರ್ಯವ ಸಹಿಸಬೇಕಾಗಿ ಬರುವುದು ಅಸಹನೀಯ...
<<^>>

ಕನಸೊಂದು ಕನಸ ಕೈ ಹಿಡಿದು ನಡೆದಂತೆ, ಸೇರಲಾರದ ಮಿತಿಯ ಅರಿತೂ ಕುಗ್ಗದ ಅದೇ ಒಲವ ಮಿಡಿತಗಳ ಹೊತ್ತು ಬಹುದೂರ ದಾರಿ ಜೊತೆ ಜೊತೆಗೆ ಸಾಗೋ ರೈಲು ಕಂಬಿಗಳ ನಿರೀಕ್ಷೆಗಳಾಚೆಯ ಅನುಸಂಧಾನದ ಪ್ರೇಮ ಹಬ್ಬಿ ನಿಂತಿದೆ ನನ್ನೀ ಬದುಕು ಮತ್ತು ನೀನೆಂಬೋ ನನ್ನೊಳಗಿನ ಕನಸಿನ ನಡುವೆ...
<<^>>

ಒಂದು ಮುಖ:
ದುಂಬಿ ಮಲಗಿದ ಮೇಲೆ ಅರಳೋ ಪಾರಿಜಾತವೂ ಮನ ಅರಳಿಸೋ ಘಮ ಬೀರುತ್ತೆ...
ತಂಪಿನಲಿ ತಟ್ಟಿ ಮಲಗಿಸೋ ಚಂದಿರನೂ ಒಂದ್ಯಾವುದೋ ಕನಸಿಗೆ ಅಪ್ಪನಾಗುತ್ತಾನೆ...
ಬೆಳದಿಂಗಳ ತೋಪಲ್ಲೂ ಮೈಮುರಿವ ವಸುಧೆ ಬೆಳಗ ರವಿ ಕಿರಣಕೆ ಮತ್ತೆ ಹೊಸತೆಂಬಂತೆ ಮೈನೆರೆಯುತ್ತಾಳೆ...
ಬ್ರಹ್ಮ ಕಮಲ - ಸೂರ್ಯಕಾಂತಿ - ಹೆಸರಿಲ್ಲದ ಬಸಿರಲ್ಲಿ ಉಸಿರಾಡೋ ತರಹೇವಾರಿ ಹಣ್ಣುಗಳು...
ಪ್ರಕೃತಿ ಪ್ರೀತಿಗೆ ಹೀನತೆಯ ಕುರುಹಿಲ್ಲ, ಶ್ರೇಷ್ಠತೆಯ ಹಮ್ಮಿಲ್ಲ, ಬೇಲಿಗಳ ಹಂಗಿಲ್ಲ, ಪಾಪಗಳ ಗುಂಗಿಲ್ಲ...
ನೀನಾದರೋ ಅವರಿವರಂತೆ "ಪ್ರಶ್ನಿಸಿ ಕಾಮವ ಕ್ರಿಯೆಯಾಗಿಸಬೇಡ - ಪೂಜಿಸಿ ಪ್ರೇಮವ ಕಲ್ಲಾಗಿಸಬೇಡ..."
ಪ್ರಶ್ನೆಗಳನೆಲ್ಲ ಹಸಿವಿಗೆ ಬಲಿಕೊಟ್ಟು, ಪ್ರೇಮವ ಆ ತೋಳಲ್ಲಿ ಕರಗಿಸಿ, ಈ ಒಡಲಲ್ಲಿ ಹೊಸ ಕನಸ ಸ್ಖಲಿಸು...
ಪಾಪವಾದರೆ ಮಿಲನ; ಪಾಪವಾಗದೇ ಜನನ...!!??
<<^>>

ಆ ನಗುವಿಗೆ ಹೆಸರಿಡುವ ಹಂಗಿಲ್ಲದೆ ನನ್ನೆಡೆಗೊಂದು ನಿರ್ವ್ಯಾಜ್ಯ ಆಪ್ತತೆಯನು ಸಾಕಿಟ್ಟುಕೊಂಡ ಜೀವಗಳ ಕಣ್ಣಲ್ಲಿನ ಖುಷಿಯ ಮಿಂಚಿಗೆ ಸಾಕ್ಷಿಯಾಗಿ ಎದೆ ತೆರೆದು ಮಿಂದ ಗರಿ ಗರಿ ಹಗುರತೆಯ ಕ್ಷಣಗಳ ಬಾಚಿ ಭಾವ ಜೋಳಿಗೆಗೆ ತುಂಬಿಕೊಳ್ಳಲಾದರೂ ನಾನಾಗಿ ನನ್ನವರ ಮುಖಾಮುಖಿ ನಿಲ್ಲಬೇಕು ಆಗೀಗಲಾದರೂ - ನೆಪ ಹೇಳದೇ - ನೆಪ ಹುಡುಕಿಕೊಂಡು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, October 9, 2016

ಗೊಂಚಲು - ನೂರಾ ತೊಂಭತ್ತು ಮೇಲೇಳು.....

ಸಾವಿತ್ರಿ.....

ಅವಳ ಕನಸು
ಒಡಲಲ್ಲಿ ಬಿರಿವಾಗಲೂ
ಇನ್ನಾರದೋ ಮನೆಯ ಕಣಜ ತುಂಬಲು
ನೆಟ್ಟಿಗೆ ಹೋಗುತಿದ್ದಳು...
ಕರುಳ ಮೂಲೆಗೆಲ್ಲೋ
ಒದ್ದದ್ದಿರಬೇಕು ನಾನು
ನಕ್ಕ ಅವಳ ಬೆವರಲೂ
ಬೆಳಕ ವಾಸನೆ (?)

ನೋವೆಲ್ಲ ಮರೆತದ್ದು ಅಲ್ಲೇ ಇರಬೇಕು
ಗದ್ದೆ ರಾಡಿಯಲಿ
ತೋಟದ ಮೂಲೆಯಲಿ
ಹೊದ್ದ ಪ್ಲಾಸ್ಟೀಕು ಕೊಪ್ಪೆ ಅಡಿಯ ಬಿಕ್ಕಿನಲಿ...
ಮಧ್ಯಾಹ್ನದ ಕಿರು ನಿದ್ದೆಯೂ ಸಾಯುತ್ತದೆ
ಆಚೆ ಮನೆಯ ಕಳ್ಳ ದನದ ಗೆಂಟೆ ಸದ್ದಿಗೆ...
ಘನತೆ ಮರೆತ ಅವನು
ಪ್ರೇಮ ಕಾಣದ ಮದುವೆ
ಕರಗಿದ ಕುಂಕುಮ
ಸವೆದು ಹೋದ ತಾಳಿ...

ಕಿಟಕಿಯಿಂದ ಇಣುಕುತಿದ್ದೇನೆ
ಉದ್ದಕೂ ಬಿದ್ದಿದೆ
ಖಾಲಿ ಖಾಲಿ ಹಾದಿ
ಅವಳ ಬದುಕಿನಂತೆ...
ನೆಡಬೇಕಿದೆ ಇಕ್ಕೆಲಗಳಲಿ
ನನ್ನ ಕನಸುಗಳ
ಸಾವಿಗೂ ನೆರಳನೂಡುವಂತೆ...
ಮತ್ತೆ ನಕ್ಕಾಳೊಮ್ಮೆ
ನಿನ್ನೆ ನಾಳೆಗಳು ಬೆಚ್ಚಿ ಬೀಳುವಂತೆ...
ಹೂವರಳುವಾಗ
ಬೇರು ಸಂಭ್ರಮಿಸದಿದ್ದೀತೆ...
;;;;
ಮೊನ್ನೆ ಅಲ್ಲಾರೋ
ಕಥೆ ಹೇಳ್ತಿದ್ರು 
ಅವಳ್ಯಾರೋ ಯಮನ ಗೆದ್ದಳಂತೆ
ಸಾವಿತ್ರಿ...
ಜವರಾಯ ಸಾಯ್ಲಿ
ಮುಟಿಗೆ ಪ್ರೀತಿಯಾದರೂ
ದಕ್ಕಬಹುದಿತ್ತಲ್ಲ ಬದುಕಿಗೆ
ಇವಳ ಹೆಸರೂ
ಸಾವಿತ್ರಿ...

Saturday, October 1, 2016

ಗೊಂಚಲು - ನೂರು + ತೊಂಬತ್ತು ಮತ್ತು ಆರು.....

ಕೇಳಿಸ್ತಾssss.....

ಎತ್ತಿ ಆಡಲಾಗದ ಅಂತಃಪುರದ ಆಸೆ ಅಲೆಗಳ ಹೊಡೆತಕ್ಕೆ ಹೃದಯ ದಂಡೆಗೆನೋ ಸುಸ್ತಂತೆ...!! 
ಹೊರಟು ಬಿಡಬೇಕು ಸದ್ದಿಲ್ಲದೆ - ಹೆಜ್ಜೆ ಗುರುತನೂ ಉಳಿಸದೆ - ಇರುಳ ಸಂಧಿಸದ ಹೂವಿನಂತೆ...
ಅಷ್ಟಾಗಿಯೂ ಘಮದ ನೆನಪುಳಿದರೆ ಅದು ಉಳಿಸಿಕೊಂಡ ಗಾಳಿಯ ಹಿರಿತನ...
)!(_)!(

ಅಲ್ಲಿ ಒಳಗೆ ಕೊಡದ ತುಂಬಾ ಹಲವರ ಹಸಿವು ನೀಗಬಹುದಿದ್ದ ಹಾಲು ಕುಡಿದೂ ಉಸಿರಾಡದ ಕಲ್ಲು ದೇವರು... 
ಇಲ್ಲಿ ಅಂಗಳದಲಿ ಬೊಗಸೆಯಷ್ಟು ಬರಿ ನೀರು ಕುಡಿದೂ ನಮ್ಮೆಲ್ಲರ ಉಸಿರಿಗೆ ಶಕ್ತಿ ತುಂಬೋ ತುಳಸೀ ಗಿಡ...
ಕಟ್ಟೆಯ ಮೇಲಣ ಭಿಕ್ಷುಕನನು ಧ್ವಜಗಂಬದ ನೆರಳೂ ಸೋಕುವುದಿಲ್ಲ - ಪುಟ್ಟ ಗಿಡದಲ್ಲಿನ ಪ್ರೀತಿ ಹಸಿರು ಸಕಲ ಜೀವಜಾಲಕೂ ಮುಫತ್ತು...
ತುಳಸಿಯ ಕರುಣೆಯ ಪಾವಿತ್ರ್ಯ ಗುಡಿಯೊಳಗಿದ್ದಂಗಿಲ್ಲ - ನನ್ನ ನಮನ ಸದಾ ತುಳಸಿಗೆ...
)!(_)!(

ಕೇಳಿಸ್ತಾ -
ಈ ಬದುಕು ಅಷ್ಟೊಂದು ಕನಿಷ್ಟವೇನಲ್ಲ - ಬದುಕಲೇಬಾರದು ಅನ್ನುವಷ್ಟು; ಸಾವಿಗೇ ಕಣ್ಹೊಡೆದು, ಕುಂಡೆ ಕುಣಿಸಿ ಧಿಮಾಕು ತೋರಬಲ್ಲಷ್ಟು ಬದುಕೇ ಹುಚ್ಚು ಪ್ರೀತಿಯಾದರೆ...
ಯಾವ ಬದುಕೂ ಅಷ್ಟೇನೂ ಸರಳವೂ ಅಲ್ಲ - ನಗುವಾಗ ಕಂಡಷ್ಟು; ಅಳು ಕಾಣುವಷ್ಟು ಒಳಗಿಣುಕೋ ವ್ಯವಧಾನ ಎನಗಿದ್ದರೆ...
ನೋವು ಕರಗಿ ನಗುವಾಗಲು ಜೊತೆಯಾಗದಿದ್ದರೂ, ನಗುವ ಹಿಂದಿನ ನೋವ ಅಣಕಿಸದಿರುವಷ್ಟಾದರೂ ಕರುಣೆ ಬೆಳೆಯಲಿ ಎನ್ನೆದೆ ನೆಲದಲ್ಲಿ...
ಹಾಗಂತ ಯಾರ ಕರುಣೆಯೂ ನನ್ನ ದೌರ್ಬಲ್ಯವಾಗದಿರಲಿ - ನಮ್ಮ ನೇಹದ ಮೂಲ ಉಂಡಷ್ಟೂ ಅರಳೋ ನೇಹದ ಸವಿ ಹಸಿವೇ ಆಗಿರಲಿ...
)!(_)!(

ಗೋಕುಲಕೆಲ್ಲಾ ಆತ ಪರಮಪ್ರಿಯ - ಆದರೆ ರಾಧೆಗೆ ಒಲಿದ ಮಾಧವ ಮತ್ಯಾವ ಗೋಪಿಗೂ ಸಿಗಲಿಲ್ಲ...
ನೇಹದಲ್ಲಾಗಲಿ, ಪ್ರೇಮದಲ್ಲಾಗಲಿ "ಪಡೆವ" ಹಸಿವನು ಮೀರಿದ "ಕೊಡುವ" ಖುಷಿಯ ತೀವ್ರತೆಯಲ್ಲಿ ಪ್ರೀತಿ ಯಮುನೆಯಾಚೆಗೂ ಹರಿವ ಜೀವವೇಣು ರಾಗ...
ಉಹುಂ, ಬರೀ ಭಾವ ಬಂಧಗಳಿಗಷ್ಟೇ ಅಲ್ಲ ಅವುಗಳಾಚೆಯ ಬದುಕಿಗೂ ಇದು ಅನ್ವಯ - ತಕರಾರುಗಳ ತೊರೆದು ತುಂಟರಂತೆ ಬದುಕ ಜೀವಿಸುವಲ್ಲಿ...
ನೋವೇ ಹೆಚ್ಚು ವಾಸ್ತವ ಅನ್ನಿಸಿದರೂ, ಅದ ಹೀರಿ ನಾವೇ ನಮ್ಮೊಳಗೆ ಬಿತ್ತಿ ಬೆಳೆದುಕೊಂಡ ನಗು ಹೆಚ್ಚು ಆಪ್ತ ಎನ್ನುತ್ತೇನೆ - ರಾಧೆಯ ಪ್ರೇಮದಂತೆ, ಕೃಷ್ಣನ ನೇಹದಂತೆ...
ಅಗಲಿಕೆ ಅನಿವಾರ್ಯದ ವಾಸ್ತವ,  ಕೈಯಾರೆ  ತುಂಬಿಟ್ಟುಕೊಂಡ ನೆನಪು ಮತ್ತು ಹುಚ್ಚು ಕನಸುಗಳು ಅದಕೂ ಅಧಿಕ ಆಪ್ತ...
ಮತ್ತೇನೆಂದರೆ, ಆಪ್ತತೆ ಹುಟ್ಟಲು ಎಲ್ಲ ನೆನಪೂ ಸಿಹಿ ಇರಬೇಕಿಲ್ಲ, ಕಂಡೆಲ್ಲಾ ಕನಸೂ ನನಸಾಗಲೂ ಬೇಕಿಲ್ಲ; ಏನಿದ್ದರೂ ಅದು ನನ್ನದೂ ಎಂಬೋ ಭಾವ ತೀವ್ರವಿದ್ದರೆ ಸಾಕು...
)!(_)!(

ಮೌನ – ಅಂತರಂಗದ ಕೊಳಲು,  ಏಕಾಂತದ ಶೃಂಗಾರ...
ಮಾತು – ಬಹಿರಂಗದ ನಗು, ಬಾಂಧವ್ಯದ ಒಕ್ಕಲು...
ಮೌನ – ಭಾವದ ವಿರಕ್ತ ಅನುರಕ್ತಿ...
ಮಾತು – ಬದುಕ ಹಸಿವಿನ ಅಭಿವ್ಯಕ್ತಿ...
ಮೌನ – ಮಾತು ಮಾತಿನ ನಡುವೆ ಅಳಿದುಳಿದ ಸತ್ಯ...
ಮಾತು – ಮೌನದ ಗೋಡೆಗೆ ಆತು ನಿಂತ ಅರ್ಧ ಸತ್ಯ...
ಒಂದು ನೆರಳು, ಇನ್ನೊಂದು ಕೊರಳು – ಕಾಲ ಕಾಲಕ್ಕೆ ಪಾತ್ರಗಳು ಅದಲು ಬದಲು...
ಇಂತಿಪ್ಪ ಭಾವದೆರಡು ಕೂಸುಗಳನು ವಿರುದ್ಧ ಪದಗಳೆಂದು ಕಾಣುವ ಗ್ರಹಿಕೆ ವಿಶಾದನೀಯ...
ವಾಚಾಳಿಯ ಎದೆಯ ಮೌನದೊಳು ಇಣುಕು, ಮೌನಿಯ ಕಣ್ಣಿನಾಳದ ಮಾತನೊಮ್ಮೆ ಕೆಣಕು – ಆ ಬದುಕ ಸಾವಿರ ಸತ್ಯಗಳು ನಿನ್ನ ಹೆಗಲ ತೋಯಿಸಿಯಾವು...
)!(_)!(

ನನ್ನ ಮಾತುಗಳು - ಅರ್ಥ, ಅನರ್ಥ, ಅಪಾರ್ಥ, ಅಪಾರಾರ್ಥ, ಭಿನ್ನಾರ್ಥಗಳ ಗೋಜಲುಗಳಲಿ ಮತ್ತು ನನ್ನದೇ ಹಿರಿಯಾರ್ಥವೆಂಬ ಅಹಂ ಏವಂಗಳಲಿ ಎಲ್ಲೂ ಸಲ್ಲದ ನನ್ನ ಮಾತುಗಳು, ಮೌನದ ಗೂಡಲ್ಲಿ ಕೊಳೆಯಬೇಕಿದ್ದಂತವುಗಳು, ಅಕ್ಷರಗಳಾಗಿ ಅಸುನೀಗಬಯಸಿದವು...
ಒಳಗಿನ ಗದ್ದಲಕೆ ಬಣ್ಣ ಸವರಿ ಭಾವದ ಹೆಸರಿಟ್ಟು ಉದ್ದುದ್ದಕೊಂದಷ್ಟು, ಅಡ್ಡಡ್ಡಕಿನ್ನೊಂದಿಷ್ಟು ಒಂದರ ಪಕ್ಕ ಒಂದನಿಟ್ಟು ಎದೆಯ ಭಾರ ಇಳುಕಿಕೊಂಡೆ...
ಲೋಕ ಕವಿ ಪಟ್ಟ ಕೊಟ್ಟು ಕಾವ್ಯಧಾರಿಯಾಗಿಸಿತು...!!!
ಇದೀಗ ಭಾವ ದಾಸೋಹದ ಹಮ್ಮಿನಲ್ಲಿ ಅಲ್ಲಿಯದೇ ಅದದೇ ಮಾತುಗಳನು ಬರಹದಲ್ಲಿ ಬಡಬಡಿಸುತ್ತೇನೆ...
 . . . ಇಂತಿ - ಶ್ರೀವತ್ಸ ಕಂಚೀಮನೆ

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, September 1, 2016

ಗೊಂಚಲು - ನೂರ್ತೊಂಬತ್ತೈದು.....

ಸುಮ್‌ಸುಮ್ನೆ.....

ಹೆಚ್ಚೇನಿಲ್ಲ -
ಒಲವ ಸೆರಗಿನ ಅಂಚ ಹಿಡಿದು, ಮಂದಹಾಸದ ಮಿಂಚ ಮಿಡಿದು, ಎದೆಯ ಕನಸಿಗೆ ಜೋಗುಳ, ಬರೆವ ಜೋಗಿಯ ಹಂಬಲ...
    --ಆ ಮುಂಬೆಳಗಲಿ ಬಾಗಿಲ ವಾಡೆಯ ಸಂದಿಯಿಂದ ಅವಳ ಕಂಗಳಾಡಿದ ಮಾತು...
<<>>

ಇರುಳ ಕೌದಿಯ ಸರಿಸಿ ರವಿರಾಯ ಕಣ್ತೆರದ...
ವಸುಧೆ ಬೆಳಕ ವಸನವನುಟ್ಟಳು...
ಹೂವೊಂದು ಅರಳಿ
ಅಂದ ಗಂಧವ ಬೀರಿ
ದುಂಬಿಗಾಹಾರವನಿತ್ತು
ಕಾಯೊಂದಕೆ ಕಾಯವನಿತ್ತು
ದಿನಮಣಿಯು ದಣಿವ ನೀಗಿಕೊಳ್ಳಲು ಧರೆಯ ಮಡಿಲಿಗೊರಗೋ ಹೊತ್ತಿಗೆ ತನ್ನ ಧರಿಸಿದ ಗಿಡಕೇ ಗೊಬ್ಬರವಾಗುತ್ತೆ...
ಮರು ಬೆಳಗು ಅದೇ ಗಿಡದಲ್ಲಿ ಹೊಸ ಚಿಗುರಿನ ಮರೆಯಲ್ಲಿ ಹೊಸ ಹೂವ ನಗು...
ಅವನು - ಇವಳು - ಹೂವು - ದುಂಬಿ; ಉಹುಂ, ಇನಿತು ಗದ್ದಲವಿಲ್ಲ...
ಹೂವಂತಿರಬಾರದಿತ್ತೇ ನನ್ನದೂ ಬದುಕು...
<<>>

**ಪ್ರೇಮವನ್ನು ದಾರದಲ್ಲಿ ಬಂಧಿಸಿದೆ - ಕಾಮ ನೈತಿಕವಾಯ್ತು...
**ನಡುವಿನಬ್ಬರದ ಕಾಮನುಬ್ಬರಕೆ ನಡುಮನೆಯಲ್ಲಿ ತೊಟ್ಟಿಲು ನಗುತಿದೆ - ಪ್ರೇಮ ವಿಸ್ತಾರವಾಯ್ತು...
<<>>

ಬೃಂದಾವನದಲ್ಲಿ ಕೃಷ್ಣನ ಕೊಳಲಿಗೆ ನಿರ್ಬಂಧವೇ...
ರಾಧೆಯ ಪ್ರೇಮದಲ್ಲಿ ಸವತಿ ಮತ್ಸರವೇ...
ಇಷ್ಟಕ್ಕೂ ದುಂಬಿಯ ರೆಕ್ಕೆಗೆ ಬೇಲಿಯ ನೇಯ್ದ ಹೂವಿನ ಕಥೆಯನೆಲ್ಲಾದರೂ ಕೇಳಿದ್ದೀರಾ...
ಹಬ್ಬಿ ತಬ್ಬಲಿ ಅಂಥ ಪ್ರೇಮ ತಬ್ಬಲಿ ಬದುಕುಗಳ...
<<>>

ಯಾವಾಗ್ಲೂ ಹೇಳ್ತಿರ್ತೀನಿ ಎಲ್ಲರ ಬದುಕಿಗೂ ಕೃಷ್ಣನಂಥಾ ಒಬ್ಬ ಗೆಳೆಯ ದಕ್ಕಲಿ...
ಆದರೆ,
ಸೂರೆಗೊಳ್ಳಲಾಗದ ಪ್ರೀತಿ ವಸನ - ಖಾಲಿಯೇ ಆಗದ ಕಾಳಜಿಯ ಅನ್ನದಗುಳು - ರೂಪ, ಕುರೂಪ, ಕುಲ, ನೆಲೆ, ವಯಸು, ಅಂತಸ್ತುಗಳ ಹಂಗನು ಮೀರಿ ಯಾವ ನೋವಿನ ಯುದ್ಧಕೂ ಮೊಳಗಿ ಪಾಂಚಜನ್ಯವ ಮುನ್ನಲೆಯಲೆ ನಿಲ್ಲುವ ನೇಹದ ಸಾರಥ್ಯ - ಜೊತೆ ನಲಿಯುವಾಗ ಅಂಗಳಕೆ ಪಾರಿಜಾತದ ರಂಗೋಲಿಯ ಚೆಲ್ಲಿ, ಹಾದಿ ಕವಲಾದಾಗ ತನ್ನುಸಿರ ಹಸಿವಾದ ಕೊಳಲನೂ ತೊರೆದು ಸಾಗುವ ಪ್ರೇಮದ ಸಾಂಗತ್ಯ - ಪಡೆವ ಇಚ್ಛೆಯ ಆಚೆಯ ಕೊಡುವ ಮನಸಿನ ಸ್ವಚ್ಛತೆ...
ಉಹುಂ - ಸುಲಭವೇನಲ್ಲ ಕೃಷ್ಣನಾಗುವುದು...
ಬರೀ ಲಂಪಟನಾದರೆ ಸಿದ್ಧಿಸುವುದಿಲ್ಲ ಆತ್ಮಸಾಂಗತ್ಯ...
<<>>

ಎದೆಯ ನೋವನ್ನು ಅನುವಾದಿಸಲಿ ಹೇಗೆ...?
ಬರೆದ ಎಲ್ಲ ನಗೆಯ ಹಾಡುಗಳ ಶಬ್ಧ ಶಬ್ಧಗಳ ನಡುವಿನ ನಿರ್ವಾತದ ನಿಶ್ಯಬ್ಧದಲ್ಲಿ ಮುಪ್ಪಿಲ್ಲದೆ ಮುಗುಮ್ಮಾಗಿ ಕುಳಿತ ನೋವ ನಾಡಿಯ ಮಿಡಿತದ ಜಾಡನು ದನಿ ನಡುಗದೆ ದಾಟುವುದು ಹೇಗೆ...??
ಅಂತೆಯೇ -
ಕಣ್ಣ ಮೊನೆಯಿಂದ ಸುರಿವ ಮೌನವೂ ಎದೆಯಾಗ್ನಿ ಕಾವ್ಯವ ಅರುಹಲು ಸೋಲುವಲ್ಲೂ ಕೂಡಾ ಈ ಬದುಕೇ ಹಿರಿದೆನ್ನಿಸುವಾಗ ಸಾವನ್ನು ಅನುಮೋದಿಸಲಿ ಹೇಗೆ...???

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, August 1, 2016

ಗೊಂಚಲು - ನೂರಾ ತೊಂಬತ್ತರ ಮೇಲೆ ನಾಕು.....

ಅರೆ ಹೊಟ್ಟೆಯ ಬದುಕುಗಳು.....
(ಅರ್ಥವಾಗದ ಅಪೂರ್ಣ ಸಾಲುಗಳು...)

ಸುಡು ನೋಟ, ತುದಿ ಮೂಗಿನ ಬಿಗುಮಾನ, ಬೈತಲೆಯ ಬಿರು ಮೌನ; ಕನಸಲೂ ಅದದೇ ಮುಖ - ಆದರೂ ಕಾಯುವಂತೆ ಕಾಡುತ್ತಾಳೆ ಅವಳು...

ಹಸಿ ಹಸಿ ನೋವಿನ ಬಸಿರಿಗೆ ಹುಟ್ಟಿದ ಉಪದ್ವ್ಯಾಪಿ ಕನಸುಗಳು...
ನಗೆಯ ತುತ್ತನಿತ್ತು ತೂಗಿ ಸಲಹಿಕೊಂಬ ಬಲವಿಲ್ಲದವನಿಗೆ ಪ್ರೀತಿ ಕೂಸಿನ ಹಂಬಲದ ಹಕ್ಕೆಲ್ಲಿಯದು...

ಮನಸು ಕಲ್ಲಾಗಿದ್ದೂ, ಮತ್ತೆ ಮತ್ತೆ ಒದ್ದೆಯಾಗೋ ಸೂಳೆಯ ದೇಹದ ವೃತ್ತಿ ನಿಷ್ಠೆ...

ಶುೃತಿ ಮಾಡಿದ ಕೊಳಲು, ಭಾವದುಂಬಿಯ ಕೊರಳು - ಸುತ್ತ ನರ್ತಿಸೋ ಕಿವುಡು ಸಂತೆ...

ಮಾತಿಗಾದರೋ ಸಾವಿರ ಬಣ್ಣ - ಎಲ್ಲ ನುಂಗಿದ ಮೌನ ಕಪ್ಪೇ ಇದ್ದೀತು...!!

ಹಾದಿಯ ನಡುಮಧ್ಯೆ ಫಕ್ಕನೆ ನಿರ್ವಾತವೊಂದು ಹುಟ್ಟಿಕೊಂಡು ಕಂಗಾಲಾಗಿ ನಿಲ್ಲುತ್ತೇನೆ - ಅದೇ ಹೊತ್ತಿಗೆ ಪಕ್ಕದ ಕವಲಿನಿಂದ ನೇಹದ ಕಾಳಜಿಯ ನಗುವೊಂದು ಹೆಗಲು ತಬ್ಬುತ್ತೆ - ಅಲ್ಲಿಗೆ ಮೌನ ಮನೆ ಕಳಕೊಂಡು ನಡೆವ ಕಾಲ್ಗಳಿಗೆ ಮತ್ತೆ ಹೊಸ ಹುರುಪು...

ಹಸಿವು ಎದೆಯ ಸುಡುವಾಗಲೆಲ್ಲ ಆಯಿ ನೆನಪಾಗುತ್ತಾಳೆ - ತುಟಿ ಕಚ್ಚಿದ ಬಿಕ್ಕುಗಳನೆಲ್ಲ ಸೆರಗ ಅಂಚಲ್ಲೆ ಕರಗಿಸಿ, ನಗೆಯ ತೊಟ್ಟಿಲಲ್ಲಿ ನನ್ನ ಬದುಕ ತೂಗಿದವಳು...

ಮೊನ್ನೆ ಮೊನ್ನೆಯಷ್ಟೇ ಹುಟ್ಟಿದಂತಿದೆ - ಆಗಲೇ ತಲೆಯಲ್ಲಿ ಬೆಳ್ಳಿ ಕೂದಲು...

ಅಮ್ಮನ ಹಳೆ ಸೀರೆಯ ಘಮಲು, ಒಡಹುಟ್ಟಿನ ನಗೆಯ ಅಮಲು ಒಟ್ಟು ಸೇರಿದ ಮಮತೆ - ಬಿಟ್ಟೂ ಬಿಡದ ಸೋನೆ, ಅಂಗಳದ ಕಿಚಡಿ ಮಣ್ಣು, ಹಸಿರ ವಾತ್ಸಲ್ಯದ ಜೋಕಾಲಿ - ಹುಟ್ಟಿದ್ದು ಬಿರು ಮಳೆಯ ನಾಡಿನ ಜೋರು ಮಳೆಯಲ್ಲಿ - ಆದರೇನು ಬದುಕ ಬಯಲು ಶುದ್ಧ ಬಂಜರು...!!!

ಪಡೆಯಲಾಗದ ಹೆಣ್ಮನದ ಒಲವ ಘಮಲು - ತೊರೆಯಲಾಗದ ಹೆಣ್ಣ ದೇಹದೆಡೆಗಿನ ಅಮಲು - ಎದೆಯಿದು ಯಾವುದ ಮೀರಿ, ಯಾವುದ ಪಡೆದು, ಎಲ್ಲಿಗೆ ಸೇರಬೇಕೆಂಬ ಗೊಂದಲದ ಗೂಡು...

ಸುಸ್ತಿನ ಘಳಿಗೆಯಲ್ಲಿ ಬರುವುದಾದರೆ ಸುಖದ ಸುಸ್ತಿನಲ್ಲಿಯೇ ಬರಲಿ - ನಗುವಿನ ಸಾಕ್ಷಿಯಾಗಿ; ಉಳಿಯದಿರಲಿ ಹೆಜ್ಜೆ ಗುರುತು ಸಾವಿನಲ್ಲೂ ನೋವಿನದ್ದು...

ಕನಸೇ -
ಹಸಿದೆದೆಯ ಬಿಸಿ ಕರುಳ ಹಾಡಾಗು ಬಾ... 
ಶ್ರಾವಣದ ಮಲೆನಾಡ ಕಾಡಾಗು ಬಾ... 
ಉಕ್ಕುಕ್ಕಿ ಮುತ್ತಿಕ್ಕೊ ದಡದ ದಾಹದ ಸೊಕ್ಕಿದಲೆಗಳ ಕಡಲಾಗು ಬಾ... 
ಮೌನದ ಬಿಕ್ಕುಗಳ ಕಲೆ ಅಳಿಸೋ ನೇಹದಾ ಭರವಸೆಯ ಮಾತಾಗು ಬಾ... 
ಕರುಳ ಹುಣ್ಣಾಗಿ ಕೊರಳ ಸೆರೆಯುಬ್ಬಿಸಿ ಕಾಡೋ ನೆನಪುಗಳ ಕಿತ್ತೆಸೆವ ಅರಿವಿನ ಬೆಳಕಾಗು ಬಾ... 
ಸಾವಿನ ಹಾದಿಯ ಭಯವಳಿಸಿ ಬೆವರಿಳಿಸೊ ಹುಚ್ಚು ಮೋಹದ ಬದುಕಾಗು ಬಾ...

ಮೂವತ್ನಾಕು ವಸಂತಗಳ ಹಿಂದೆ ನಾ ಅಳುವಾಗ ಅವಳ ಮೊಲೆಗಳಲಿ ಹಾಲುಕ್ಕಿ, ಅವಳ ಕಂಗಳಂಗಳದಿ ತೃಪ್ತ ನಗುವರಳಿದ್ದು ಇಂಥದ್ದೇ ನಡು ಮಳೆಗಾಲದ ಒಂದು ದಿನ - ನಾ ಹೇಳಿಕೊಂಡು ಬೀಗಬಹುದಾದ ನನ್ನ ಕಾರಣಕ್ಕೆ ಅವಳು ಮನದುಂಬಿ ನಕ್ಕ ಮೊದಲ ಮತ್ತು ಕೊನೆಯ (?) ದಿನ... 
ಇಂದು ಆ ದಿನದ ನೆನಪಲ್ಲಿ ಅಂಥದ್ದೇ ಇನ್ನಷ್ಟು ದಿನಗಳೆಡೆಗೆ ಬಯಕೆ...

ಆಗೀಗ ಮನದ ಮುಡಿಗೆ ಕನಸಿನ ಬಿಡಿ ಹೂಗಳ ಮುಡಿಸೋ ನಲಿವಿನ ಹಸಿ ಘಳಿಗೆಗಳು – ನಡೆವ ಹಾದಿಯ ನಡುವಿನ ನಗೆಯ ಅರವಟಿಗೆಗಳು - ಮತ್ತೆ ಮತ್ತೆ ನೆನಪಾಗುವ ಆ ನೀಲಿ ನೀಲಿ ಕಲೆಗಳೇ ತುಂಬಿದ್ದ ಅಂಗಿ ತೊಟ್ಟು ಕುಣಿಯುತಿದ್ದ ದಿನಗಳು...
ತುಸು ನಿಲ್ಲು ಕಾಲವೇ ಇಲ್ಲೇ – ಹೀರಿಕೊಳ್ಳುವೆ ದಣಿವಿಗಿಷ್ಟು ಪ್ರೀತಿಯ ನೀರು ಬೆಲ್ಲ – ಸವೆಸಬೇಕಾದ ಉಳಿದ ಹಾದಿಯ ದೂರ ಇನಿತೂ ಗೊತ್ತಿಲ್ಲ...

Saturday, July 2, 2016

ಗೊಂಚಲು - ನೂರಾ ತೊಂಬತ್ಮೂರು.....

ಕಂತು ಕಂತು ಕನವರಿಕೆಗಳು.....

ಕಂತು ಕಂತಾಗಿ ಎದೆಬಾಗಿಲ ಬಡಿದು ಕೈಸೇರುವ ಸಾವು - ಕುಂತುಂಡರೂ ಕಂತದ ತರಹೇವಾರಿ ಹಸಿವಿನ ಬದುಕು...
ಯಾವುದಕ್ಕಾಗಿ ನಗುವಿನೊತ್ತೆಯಿಡಲಿ...
***
ಪ್ರಶ್ನೆ ಪ್ರಶ್ನೆಗಳ ನಡುವಿನ ಮೌನ, ಉತ್ತರಗಳು ಹುಟ್ಟಿಸೋ ಮಾತಿನ ತತ್ತರ...
ಥತ್,
ಉತ್ತರದ ಹಿಂದಿನ ಪ್ರಶ್ನೆಯೇ ಹೊಸ ರೂಪದಲ್ಲಿ ಕಾಡುತ್ತದೆ ಉತ್ತರದ ಮುಂದೆ - ಎಲ್ಲಾ ಪ್ರಶ್ನೋತ್ತರಗಳ ಎಲ್ಲೆಗಳ ಮೀರಿದ ಬದುಕಿನೋಟ, ಸಾವಿನಾಟದ ಮಹಾನಾಟಕದಲ್ಲಿ...
***
ಹೇ ರುದ್ರ ಅಲೆಗಳೇ -
ಬರಸೆಳೆದು ಒಳತಳ್ಳಿ ಬಿಡಿ ಎನ್ನ ನಿಮ್ಮ ಗರ್ಭದ ಮೌನದಾಳಕೆ...
ಜಗದೆಲ್ಲ ತಂತುಗಳಾಚೆಯ ನಿಶ್ಚಿಂತ ನಿದ್ದೆಯಲಿ ಹಗುರಾಗುವ ಬಯಕೆ ಮನಕೆ...
***
ಸುಖೋನ್ಮಾದದುಸಿರಲ್ಲು ಅಂತಕನ ಜಾಡು - 
ಒಡೆದ ಕನಸಿನ ಗೂಡು - 
ಶುೃತಿ ತಪ್ಪಿದೀ ಬದುಕಿನೋಲಗದ ಹಾದಿಯ ಹಾಡು - 
ಎದೆಯ ಕುಹರದ ತುಂಬ ನಿಶ್ಯಬ್ಧದನುರಣನ...
***
ಜಡಿ ಮಳೆಯೊಂದಿಗೆ ಕಣ್ಣಿಂದ ಜಾರಿದ ಬಿಸಿ ಹನಿಯೂ ಎದೆಯ ತೋಯಿಸುತ್ತೆ - ಸುಡುವ ನೆನಪುಗಳು... 
ಬೊಗಸೆಯಲ್ಲಿನ ಆಲಿಕಲ್ಲು ತಣ್ಣಗೆ ಕೊರೆಯುತ್ತ ಕರಗುತ್ತೆ - ನಿಡುಸುಯ್ಯೋ ಕನಸುಗಳು...
ಯಮನೂರಿನ ಹಾದಿಯಲಿ ಸಂಕೋಚದಿ ಅರಳಿದ ಒಂಟಿ ಹೂವಿದು ಬದುಕು...
***
ಎದೆಯ ಸಂಚಿಯಿಂದೆತ್ತಿ ಮಡಚಿ ಕೈಗಿತ್ತ ಪ್ರೀತಿ ತಾಂಬೂಲ - ಸವಿದ ಕಣ್ಣಲ್ಲಿನ ನಗುವಿಗೀಗ ಬಲು ಗಾಢ ಬಣ್ಣ...
ಕಾಳಜಿ ಎಂಬೋ ಚಿಗುರು ಚಿಗುರು ವೀಳ್ಯದೆಲೆ, ನಂಗ್ನಂಗೇ ಅನ್ನೋ ಭಾವದ ಇಷ್ಟೇ ಇಷ್ಟು ಸುಣ್ಣ, ಎಷ್ಟೇ ಜಗಿದರೂ ಇಷ್ಟಾದರೂ ಶೇಷ ಉಳಿಯುವ ಮತ್ತು ಉಳಿಯಬೇಕಾದ ಗಟ್ಟಿ ನಂಬಿಕೆಯ ಅಡಿಕೆ, ಎರಡು ಕಾಳು ಏಲಕ್ಕಿಯಷ್ಟು ತುಂಟಾಟ, ಚೂರೇಚೂರು ಹುಸಿ ಕೋಪದ ಲವಂಗ, ಚಿಟಿಕೆಯಷ್ಟು ತುರಿದ ಕೊಬ್ಬರಿಯ ಹುಡಿ ಹುಡಿ ಮೌನ, ಹಿತ ತುಂಬುವಷ್ಟು ಮಾತಿನ ಸಕ್ಕರೆ ಎಲ್ಲ ಬೆರೆಸಿ ಎದೆಯ ಸಂಚಿಯಿಂದೆತ್ತಿ ಮಡಚಿ ಕೈಗಿತ್ತ ಪ್ರೀತಿ ತಾಂಬೂಲ - ಸವಿದ ಕಣ್ಣಲ್ಲಿನ ನಗುವಿಗೀಗ ಬಲು ಗಾಢ ಬಣ್ಣ...
ತುಸು ಆಸೆ ಬೆರೆತ ತಂಬಾಕಿನ ಕವಳ ರಸಿಕ ಪಟ್ಟಾಂಗದ ತುಂಟ ಸಂಜೆಗಳಿಗಿರಲಿ... 
ಬಾಳ ಜಗುಲಿಯ ಮಂಚದಲಿ ಬಂಧಗಳ ಸಂತೆಯೇ ಸೇರಲಿ - ಎನ್ನೆದೆಯ ಸಂಚಿ ಬರಡಾಗದಿರಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, June 6, 2016

ಗೊಂಚಲು - ನೂರಾ ತೊಂಬತ್ತು ಮತ್ತೆರಡು.....

ಹೀಗಿಷ್ಟು ಆಲಾಪ ಕಲಾಪ.....

ಎರಡು ಜಗಳಗಳ ನಡುವಿನ ಬಿರು ಮೌನದಲ್ಲಿ ಸ್ನೇಹದ ಹಸಿವಿದೆ - ಮತ್ತೆ ಬಾಗಿಲ ಬಡಿಯೋ ಪಿಸುಮಾತಲ್ಲಿ ನಗೆಯ ಹಸಿರಿದೆ...

((@))

ತೆಂಗಿನ ಗರಿಯ ಅಂಚಿಂದ ಜಾರುವ ಆಡ್ಮಳೆಯ ಬಿಡಿ ಹನಿಗಳಿಗೆ ಕೈಯೊಡ್ಡಿದೆ - ಬೊಗಸೆ ತುಂಬಿದ ಸ್ಪಟಿಕ ಹನಿಗಳಲಿ ನಿನ್ನೊಲವ ನೆನಪ ಬಿಂಬ...

((@))

ಹುಡುಗೀ - ಮರುಜನುಮದ ಕನಸನು ನಿನ್ನ ಹೆಸರಿಗೆ ಬರೆದಿಟ್ಟೆ - ಇದೀಗ ಸಾವಿನ ದಾರಿಯಲೂ ಬೆಚ್ಚಗಿನ ನಸುಗಂಪನಗಳು...

((@))


ಪೌರ್ಣಮೀ ರಾಗ -
ಎದೆಯ ಬಿಂದಿಗೆ ತುಂಬಾ ಬೆಳದಿಂಗಳ ಹಾಲು...
ಆ ನೊರೆ ಹಾಲ ಹೀರಿ ಬಿರಿದ ಭಾವ ಪಾರಿಜಾತ...
ಅಂಟಿದ ಹಮ್ಮಿನ ಗಂಟನು ಬಿಡಿಸಿದೆ ಬಾನ್ಬಯಲ ಹಗುರ ಬೆಳಕಿಗೆ ತಾರೆಗಳ ಮಿಣುಕು ಸ್ಪಂದನ...
ಮೌನ ತೇಯ್ದ ಮಾತು ಚಂದನ...
ಅವಳ ಕಣ್ಣ ಕಡಲಲೀಗ ಮೈನೆರೆದುಕ್ಕುವ ಒಲವ ಅಲೆಗಳು...
ಏನು ದಿವ್ಯವೋ ಉಣಿಸಿ ಉಂಬುವಾ ಪ್ರೀತಿ ರಸಾಯನ...❤❤

((@))


ಸ್ನೇಹ, ಪ್ರೀತಿ, ಪ್ರೇಮದ ಭಾವಗಳ್ಯಾವುವೂ ಆದರ್ಶಗಳಲ್ಲ; ಅವೆಲ್ಲ ಈ ಬದುಕೆಂಬೋ ಬದುಕಿನ ಅರಿವಿನ ಹಾದಿಗಳು - ಎಲ್ಲೋ ಎತ್ತರದಲಿಟ್ಟು ಪೂಜಿಸುವುದಲ್ಲ; ಎದೆಗೆಳೆದುಕೊಂಡು ತಲೆ ಸವರಿ, ಹಣೆಯ ಚುಂಬಿಸಿ ಅವುಗಳ ಕಣ ಕಣಗಳನೂ ಆಸ್ವಾದಿಸುವುದರಲ್ಲಿದೆ ಎಲ್ಲ...
ಕಾಮ ವಿಷವೇನಲ್ಲ, ಅದಕೆ ಅಪವಿತ್ರತೆಯ ನಂಜನು ಆರೋಪಿಸಬೇಕಿಲ್ಲ; ಅದು ಬದುಕಿನ ಉಳಿದೆಲ್ಲ ಹಸಿವುಗಳ ಮೂಲಧಾತು ಮತ್ತು ಪ್ರಕೃತಿ ತನ್ನುಳಿವಿಗೆ ಈ ಜೀವಾಂಶಗಳಲಿ ತುಂಬಿಸಿಟ್ಟ ಶಕ್ತಿ ಸುಧೆ - ತುಳಿದಿಡುವುದೇನೂ ಸುಲಭವಲ್ಲ; ತೋಳ್ದೆರೆದು ಆವರಿಸಿ, ಅನುಭವಿಸಿ ಅನುಭಾವದೆತ್ತರಕೊಯ್ಯುವುದರಲ್ಲಿದೆ ಸೊಗಸೆಲ್ಲ...
ಆತ್ಮದಲ್ಲಿ ನೆಲೆ ನಿಲ್ಲದ ದೈವತ್ವವನ್ನ ದೇಹ ನಿಗ್ರಹದ ಮಾತಿನಲ್ಲಿ ಸಾಧಿಸ ಹೊರಡುವ ಆದರ್ಶವಾದಕಿಂತ ಸುಳ್ಳೇ ಹೆಣಗಾಟಗಳಿಲ್ಲದ ಸಮ್ಮತಿಯ ರಕ್ಕಸ ಸ್ವೇಚ್ಛೆಯೇ ಹೆಚ್ಚು ಆಪ್ತ ಎನಗೆ...

((@))


ಆ ಮುಂಜಾವಿನಲಿ ನನ್ನ ಬಿಸಿ ಉಸಿರ ದಾಳಿಗೆ ಅವಳ ಒದ್ದೆ ಹೆರಳು ಇಷ್ಟಿಷ್ಟೇ ಒಣಗುತಿರುವಾಗ ಮಿಂದ ಹಸಿ ಮೈಯಲಿ ಕಮ್ಮಗೆ ಪುಟಿದ ಹೊಸ ಬೆವರಲಿ ಸೃಷ್ಟಿ ಹಸಿವಿನ ಮಹಾ ವಿಲಾಸ...

((@))


ಬೇಲಿಗಳ ಕಿತ್ತಿಟ್ಟು ಪ್ರೀತಿಸು, 
`ಮಿಸ್ ಯೂ' ಅನ್ನದೆಯೂ ಮಿಸ್ ಮಾಡಿಕೊಳ್ಳಬಹುದು - ಅಳದಿರುವ ಮಗುವ ಹಸಿವೂ ಆಯಿಗರಿವಾಗುವಂತೆ...
ಜಗಳದ ನಂತರವೂ ಹೆಗಲು ತಬ್ಬಬಹುದು - ಬಾಲ್ಯದ ಇಳಿಸಂಜೆಗೆ ಜೊತೆಯಾದ ಸಾಥೀ ಮಗುವಿನಂತೆ...
ಮಗ್ಗುಲಲೇ ಇರುವವನೂ ಅರೆ ಘಳಿಗೆಯ ಅಗಲುವಿಕೆಯಲೇ ಮಿಸ್ ಯೂ ಅನ್ನಿಸಿಕೊಂಡಾನು, ಮಿತಿಗಳಿಲ್ಲದ ಪ್ರೀತಿಯಲ್ಲಿ...

((@))


ಕಪ್ಪು ಹುಡುಗೀ -
ಮಳೆ ಬಂದ ಇರುಳ ಮದವೆತ್ತ ಹೊರಳಲಿ ನಿನ್ನ ಎದೆ ಗೊಂಚಲ ಮಿದುವಲಿ ನನ್ನ  ಬಿಸಿ ಉಸಿರ ಹಸಿ ಹಸಿ ಕವಿತೆ...
ಹದಿಬದೆಯ ಉನ್ಮತ್ತ ಸುಖದಮಲಿನ ತೊಡೆ ಕಣಿವೆಯ ಉತ್ಖನನದುತ್ತುಂಗದ ಆಘಾತದಲಿ ಉಮ್ಮಳಿಸೋ ನಿನ್ನುಸಿರಲಿ ಆಹಾಕಾರದ ರತಿರಾಗ ಚರಿತೆ...
ರತಿರಂಗಲಿ ವಯಸನುತ್ತುತೆ, ಬೆವರಿದ ಮೈಮನದ ಬಯಲಲಿ ಒಲವ ಬಿತ್ತುತೆ ಬದುಕು ಶೃಂಗಾರರಂಜಿತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, May 24, 2016

ಗೊಂಚಲು - ನೂರಾ ತ್ತೊಂಬತ್ತರ ಮೇಲೆ ಮತ್ತೊಂದು.....

ಹೀಗೆಲ್ಲ ಅನ್ನಿಸಿ..... 

ಕಾಮಕ್ಕೆ ಅಪವಿತ್ರತೆಯನ್ನು ಆರೋಪಿಸುವ ಪ್ರೇಮಕ್ಕೆಂದಿಗೂ ರಾಧೆಯ ಎದೆ ಮಾಳದ ಉನ್ಮುಕ್ತ ಭಾವೋತ್ಕರ್ಷದ ಅಸೀಮ ತನ್ಮಯತೆ ಸಿದ್ಧಿಸಲು ಸಾಧ್ಯವೇ ಇಲ್ಲ...
ತಾನೇ ಹಾಕಿಕೊಂಡ ಸರಗೋಲನು ಸರಿಸಿ ಆಚೆ ಬರಲಾರದೇ, ಅವನ ತೆಕ್ಕೆಯಲಿ ತಲೆಯಿಟ್ಟು ಭಯವ ಮೀರಿದ ಹೆಣ್ಣುಗಳ ಸಂಖ್ಯೆಗಳಲಿ ಎಣಿಸುತ್ತ ಕೂತ ಮನಸುಗಳಿಗೆಂದಿಗೂ ರಾಧೆಯ ಪ್ರೇಮಕ್ಕೆ ಕೊಳಲ ಗಾನವನೊತ್ತೆಯಿಟ್ಟ, ದ್ರೌಪದಿಯ ಸ್ನೇಹಕ್ಕೆ ಆತ್ಮ ಸಾಂಗತ್ಯದ ಎತ್ತರವನಿತ್ತ, ಗೋಪಿಯರ ಅಕ್ಕರೆಗೆ ನಗೆಯ ಕನಸುಗಳನಿತ್ತ ಕೃಷ್ಣ ದಕ್ಕುವುದೇ ಇಲ್ಲ...
ನನಗಾದರೋ ರಾಮ ಅಲ್ಲೆಲ್ಲೋ ಕೂತು ರಾಜ್ಯವಾಳುವ ಆದರ್ಶ ಪುರುಷ - ಕೃಷ್ಣನೋ ಬದುಕಿನ ಸಹಜ ಸೌಂದರ್ಯ, ರೌದ್ರ ರಮಣೀಯತೆಗಳನೆಲ್ಲ ಆಡಾಡುತ್ತಲೇ ತೋರುವ ನನ್ನದೇ ಬೀದಿಯ ಗೆಳೆಯ...  
------
ಮರೆಯಲಾರದ ನೋವುಗಳಿಗಾಗಿ ಇರುಳ ತುಂಬಾ ಬಿಕ್ಕಳಿಸಿದ್ದಿದ್ದೀತು - ಅನುಮಾನ, ಅವಮಾನ, ಅಸಹಾಯಕತೆಗಳಲಿ ಕಚ್ಚಿದ ತುಟಿಗಳಲಿ ರಕ್ತ ಜಿನುಗಿದ್ದಿದ್ದೀತು...
ಹಾಗಂತ ತಕರಾರುಗಳೇನಿಲ್ಲ ಈ ಬದುಕಿನೆಡೆಗೆ...
ಮಗು ಒದ್ದದ್ದು ನೋವೇ, ಆದರದು ಮಗು ಬೆಳೆಯುತಿರೋ ಖುಷಿ ಕೂಡಾ ಅಂತಾಳೆ ಆಯಿ...
ಅಳಿಸುತ್ತಳಿಸುತ್ತಲೇ ಬಂಡೆಯಂತೆ ಬೆಳೆಸಿದ ಬದುಕಿನ ಋಣ ದೊಡ್ಡದು...
ಕಡ ತಂದ ಬೆಳಕಲ್ಲಿ ತಂಪನೀವ ಚಂದಿರ ನಿದ್ದೆಗೆ ಜೋಗುಳವಾದಾನು; ಆದರೆ ಹಸಿರಿಗುಸಿರು ದಕ್ಕುವುದು ಸ್ವಯಂ ಪ್ರಕಾಶದ ಉರಿ ಬಿಸಿಲಲ್ಲೇ ಎಂಬ ಅರಿವಿಗೆ ಎದೆ ತೆರೆದು ನಿಲ್ಲುವ ದೃಢತೆ ತುಂಬಿದ್ದು ಸಾವಿನ ನಿಷ್ಠಾವಂತ ರಖಾವಿನಂತಾಡುವ ಈ ಬದುಕೇ ಅಲ್ಲವಾ...
ತನ್ನನ್ನು ತಾನು ಹಾಗೂ ತನ್ನೀ ಬದುಕನ್ನು ತಾನು ವಿನಾಕಾರಣ ಅಪರಿಮಿತವಾಗಿ ಪ್ರೀತಿಸಿಕೊಳ್ಳುವ ತೀವ್ರ ಒಳತುಡಿತ ಇಲ್ಲದವ ಮತ್ತು ಬದುಕು ಆ ಹಾದಿ ಬದಿಯಲ್ಲಿ ಅಲ್ಲಲ್ಲಿ ಎಸೆದಿಟ್ಟ ಚಿಕ್ಕ ಚಿಕ್ಕ ಬಿಡಿ ಬಿಡಿ ಖುಷಿಗಳನು ಆಸ್ಥೆಯಿಂದ ಹುಡುಕಿ ಜೋಳಿಗೆ ತುಂಬಿಕೊಂಡು ನಗೆಯ ಸಾಕಿಕೊಳ್ಳುವ ವ್ಯವಧಾನವಿಲ್ಲದವನಲ್ಲಿ ಮಾತ್ರ 'ನಂಗೆ ಒಂದಿನಿತಾದರೂ ಪ್ರೀತಿಯೇ ಸಿಕ್ಕಿಲ್ಲ ಈ ಬದುಕಲ್ಲಿ' ಎಂಬ ತೀರದ ಹಳಹಳಿಕೆಯಿರಲು ಸಾಧ್ಯ ಸದಾ...
ಮೃಷ್ಟಾನ್ನದ ಕನಸಲ್ಲಿ ಸಿಕ್ಕ ಗಂಜಿಯ ದೂರ ತಳ್ಳಿ ಹಸಿವಿಂದ ನರಳುವ ಇಲ್ಲವೇ ಮನದ ಮನೆಯ ಬಾಗಿಲಿಗೆ ಚಿಲಕವಿಕ್ಕಿ ಕೂತು ನಗುವಿಲ್ಲವೆಂದಳುವ ಚೆಂದಕೇನೆನ್ನುವುದು...
ಅರ್ಥವಾಗಬೇಕಾದದ್ದಿಷ್ಟೇ, ಪ್ರೀತಿ ಸಂತೆಯಲ್ಲಿ ಸಿಗುವ ಸರಕಲ್ಲ - ಆನೇ ಎನ್ನೀ ಬದುಕಿನೊಡನೆ ನಿರಂತರ ಸುರತಕ್ಕೆ ಬಿದ್ದು, ಬಸಿರ ತಲ್ಲಣಗಳು, ಪ್ರಸವ ವೇದನೆಗಳಲಿ ಮಿಂದೆದ್ದು ಹಡೆದು ಸಲಹಿಕೊಳ್ಳಬೇಕಾದ ಎನ್ನದೇ ಎದೆಮಡಿಲ ಭಾವಕೋಶದ ಕೂಸು...
ಎನ್ನ ತರಹೇವಾರಿ ಹಸಿವುಗಳಿಗಾಗಿ ಎನ್ನನೇ ಕಳೆದುಕೊಳ್ಳುವ ಮಳ್ಳಾಟ ಈ ಬದುಕು - ಪ್ರೀತಿ ಕೂಡಾ ಒಂದು ಹಸಿವು ಅಷ್ಟೇ...
------
ಆನೂ ಎನೇನೋ ಅಪ್ಲಾಯ್ತ್ತು; "ಆದ್ರೆ .........." ಎಂಬಲ್ಲಿ, 
ಆದರೆ ಎಂಬ ಆ ನಿತ್ರಾಣ ರಾಗದಲ್ಲೇ ನಾ ಸಾಗದೇ ಉಳಿದ ಸಾವಿರ ಹಾದಿಗಳಿಗೆ ಸಬೂಬು ಮತ್ತು ಕನಸ ತೊಟ್ಟು ಕಳಚಿದ ಎನ್ನೆದೆಯ ನಿಟ್ಟುಸಿರು ಎರಡೂ ಅಡಗಿದೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, May 2, 2016

ಗೊಂಚಲು - ನೂರಾ ತ್ತೊಂಬತ್ತು.....

ಹೀಗಿಷ್ಟು.....

ಮುದ್ದಿಗೆ ಮುದಗೊಂಡ ಕಂದನಮ್ಮನ ಕೈಯ ತುಂಟಾಟಕೆ ಅಮ್ಮನ ಮುಡಿ ಬಿಚ್ಚಿಕೊಂಡಂತೆ ಬೆಚ್ಚನೆ ಹಗಲೊಂದು ಬಿಚ್ಚಿಕೊಳ್ಳುತ್ತೆ...
ಕೂಸಿನ ಕಿಲಕಿಲದ ಉಸುರಿಗೆ ಅಮ್ಮನ ನಿಶಾಂತ ಮೊಗದ ಮೇಲೆ ಕುರುಳು ಕುಣಿವಂತೆ ಬೆಳಕ ಕೋಲ್ಗಳು ವಸುದಮ್ಮನಡಿಮುಡಿಯನೆಲ್ಲ ಆವರಿಸಿ ಅರಳುತ್ತವೆ...
ಶುಭ ಮುಂಜಾವು...

((()))

ನೋವ ಕರುಳನು ಕಡೆದು ನಗೆಯ ರಾಗವ ಮಿಡಿವ ನಿನ್ನ ನೇಹದ ಕಸುವು ನನ್ನ ಜನ್ಮಾಂತರಗಳ ಹಸಿವು... 
ಸ್ನೇಹ ಸ್ವಾರ್ಥವಾದರೆ ನಾ ಮಹಾ ಸ್ವಾರ್ಥಿ...

((()))

ಚಲನಶೀಲತೆಯೇ ಹಾಗೆ - ಅದರ ಕೈಯ ತಕ್ಕಡಿಯಲಿ ಒಂದ್ಕಡೆ ಹೊಸ ಆಗಸಕೆ ಬಿಚ್ಚಿಕೊಳ್ಳುವ ಉತ್ಸವದ ಉತ್ಸಾಹೀ ಖುಷಿ ಮತ್ತು ಇನ್ನೊಂದ್ಕಡೆ ಕಳೆದುಕೊಂಡ ಹಳೆಯದರ ಕಳೆದು ಹೋಗದೆ ಕಾಡುವ ಕರುಳ ಹಳಹಳಿಕೆಯ ಬಿಸಿ ಸದಾ ತೂಗುತ್ತಲೇ ಇರುತ್ತೆ...
ಯಾವುದರ ತೂಕ ಹೆಚ್ಚು ಅಥವಾ ಎಷ್ಟು...?
ನಿರ್ಧಾರ ಬಹುಶಃ ಯಾವುದನ್ನ ಮೀರಿ ಯಾವುದು ಬದುಕನಾಳುತ್ತೆ ಎಂಬುದರ ಮೇಲಿದೆ...
...ಇಷ್ಟಕ್ಕೂ ಕಣ್ಣ ಕಡಲಲಿ ಕರಗಿ ಕದಲುವ ಎದೆಯ ಭಾವ ಬಿಂದುಗಳ ತೂಕಕ್ಕಿಡಬಹುದೇ...??

((()))

ಕ್ಷಮಿಸಿ ಹೀಗೆಲ್ಲ ಅನ್ನಿಸುತ್ತೆ:
ಆತ್ಮೀಕವಾಗಿ ಬೆಸಗೊಂಡ ಬಂಧಗಳಲಿ ಯಾವುದೋ ಭಾವ ಸ್ಫೂರ್ತಿಯ ಧನ್ಯತೆಯ ಹೇಳುವಾಗ ಅಥವಾ ಬೆಂದ ಭಾವದಿ ಕ್ಷಮೆಯ ಕೇಳುವಾಗ ಕರುಳ ಮಿಡಿತದ ತೀವ್ರತೆಯ ವ್ಯಕ್ತವಾಗಿಸಲು ಈ 'ಥ್ಯಾಂಕ್ಯೂ' ಮತ್ತು 'ಸಾರಿ'ಗಳು ತೀರಾ ಕೆಳಸ್ತರದ ಒಣ ಒಣ ಶಬ್ಧಗಳಂತೆ ಭಾಸವಾಗುತ್ತೆ.
ಆಪ್ತತೆಯಲಿ ನಾವು ಮಾತ್ರವೇ ಕೂಗಲು ಇಟ್ಟುಕೊಂಡ ಅಡ್ಡ ಹೆಸರನು ಉದ್ದಕೆ ಉಸುರಿದರೂ ಸಾಕು; ಆ ಒಂದು ಕರೆ ಈ ಥ್ಯಾಂಕ್ಸ್, ಸಾರಿಗಳಿಗಿಂತ ಸಾವಿರ ಪಾಲು ಹೆಚ್ಚು ಸಂವೇದನಾಶೀಲ ಎನ್ನಿಸುತ್ತೆ ನಂಗೆ.
ಅಪರಿಚಿತತೆಯಲಿ ಸೌಜನ್ಯ ಸೂಚಕ ಎನಿಸೋ ಇದೇ ಪದಗಳು ಆಪ್ತರ ನಡುವೆ ಭಾವೋತ್ಕರ್ಷದಲ್ಲಲ್ಲದೇ ನಿತ್ಯ ನೈಮಿತ್ಯಗಳಲೂ ಮತ್ತೆ ಮತ್ತೆ ನುಸುಳುವಾಗ ಭಾವ ಮಾಲಿನ್ಯದ ದ್ಯೋತಕ ಅಥವಾ ಬಾಂಧವ್ಯದ ಸೂತಕದಂತೆ ತೋರಿ ಕಂಗೆಡುತ್ತೇನೆ.
ಜಗಳವೂ ಜೀವಂತಿಕೆಯ ದಾರಿ ಅನ್ನಿಸೋ ಪ್ರೀತಿ, ಸ್ನೇಹಗಳ ನಡುವೆ ನಾಲಿಗೆಯ ಸೌಜನ್ಯದ ಶಬ್ಧ ಸಂಚಯಕೂ ಮೀರಿದ ಕರುಳ ತಂತಿಯ ರಾಗಾಲಾಪವೇ ತಾರಕದಲಿ ಉಲಿಯಲಿ ಸದಾ.

((()))

ನಂಗೆ ತಾರೀಖುಗಳು ನೆನಪಿರುವುದಿಲ್ಲ - ಎಂಥಾ ದೊಡ್ಡ ವರವೆಂದರೆ, ಕನಸ ಸಾವಿನ ಶ್ರಾದ್ಧಕೆ ನೆಪವೇ ಇರುವುದಿಲ್ಲ...

((()))

ಸಂವಹನದಲ್ಲಿ ಶಬ್ಧ ವಿನಿಮಯದ ಬೌದ್ಧಿಕ ಪಕ್ವತೆಯ ಶ್ರೀಮಂತಿಕೆಗಿಂತ ಭಾವ ವಿನಿಮಯದ ಮುಗುಳ್ನಗೆಯ ಮುಗ್ಧತೆ ಹೆಚ್ಚು ಆಪ್ತವೆನ್ನಿಸುತ್ತೆ...
ಯಾರದೇ ಭೇಟಿಯ ಖುಷಿಯನ್ನು ಅವರ ಸಮ್ಮುಖದಲ್ಲಿಯೂ ಕೂಡ ಶಬ್ಧಕು ಮೀರಿದ ಭಾವ ಭಾಷೆಯಲ್ಲಿ ವ್ಯಕ್ತಪಡಿಸಲಾಗದ ನನ್ನೊಳಗಿನ ಖಾಲಿತನಕ್ಕೆ ನಾ ಇಟ್ಟುಕೊಂಡ ಹೆಸರು ನಾಗರೀಕ ನಡವಳಿಕೆ...

((()))

ಪ್ರೀತಿ ಕೂಡ ಸಾವಿನಂತೆಯೇ - ಗೆಲ್ಲಲಾರದ ಯುದ್ಧ...
ಇರಲಿರಲಿ ಜಾರಿಯಲಿ ಬಡಿದಾಟ, ತುಂಬಿಕೊಳಲು ಸೋಲಿಗೂ ಮುಟಿಗೆಯಷ್ಟಾದರೂ ಮಾಧುರ್ಯ... 
ಬದುಕಿನೊಡನೆ ಹುಚ್ಚು ಪ್ರೀತಿಗೆ ಬಿದ್ದೆ - ಇದೀಗ ತೋಳ್ದೆರೆದ ಸಾವೂ ಮಗುವಂತೆ ಕಾಣುತಿದೆ...  

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, April 29, 2016

ಗೊಂಚಲು - ನೂರಾ ಎಂಬತ್ತೊಂಬತ್ತು.....

ಒಂಟಿ ಸಂಜೆಯ ಎರಡು ಭಾವಗಳು.....

ಅಮ್ಮಾ ಪುಟ್ಟ ಗೆಳತೀ - ನೇಹದ ಒಡಲಿನ ಹಿಂಗದ ನಗುವಿನ ಹಸಿವಿದ್ದಲ್ಲಿ ಬೈಗುಳದಲ್ಲೂ ಅಸ್ತಿತ್ವವದ ಮೊಹರಿದೆ, ಜಗಳದಲ್ಲೂ ಸ್ನೇಹಿಯ ಆತ್ಮೀಕ ಒಳತುಡಿತದ ಆರೈಕೆಯ ಚಲುವಿದೆ...
ಕೂಗಿ ನೋಡೊಮ್ಮೆ, ಬದುಕ ಹಾದಿಯಲಿ ಮುಳ್ಳ ತುಳಿದೂ ನಗಬೇಕಾದಾಗ ನೀನು...
ಬೆನ್ನಲ್ಲೇ ನಿಂತಿರುತೀನಿ ನೇಹದ ಬುಟ್ಟಿಗೆ ಹೆಗಲ ಅಡವಿಟ್ಟ ಹಮಾಲ ನಾನು...

/\_\/_/\

ಆ ತಿರುವಿನ ಬಹು ಮಹಡಿ ಮಹಲಿನಾಚೆ ಬೆಳಕ ಮಣಿ ಮೋರೆ ಮರೆಸಿಕೊಂಡ...
ಕಾಗೆಯೊಂದು ಗಡಬಡಿಸಿ ಕೊನೆಯದಾಗಿ ಬಳಗವ ಕೂಗಿ ಗೂಡು ಸೇರಿತು...
ಅಲ್ಲಲ್ಲಿ ಹೊತ್ತಿಕೊಂಡ ಬೀದಿ ದಿಪಗಳೊಡನೆ ಅಮಾವಾಸ್ಯೆಯ ಇರುಳು ಮಾತಿಗಿಳಿಯುವ ಹೊತ್ತು...
ನಾ ನನ್ನ ನೆನಪ ಕೋಶದ ಹರಕು ಜೋಳಿಗೆಯಲಿ ನಗೆಯ ನಿಧಿಗಾಗಿ ತಡಕಾಡುತ್ತೇನೆ...
ಕನಸ ಕೋಶದ ಮುರುಕು ತೊಟ್ಟಿಲಲಿ ಚಂದಿರನ ತೂಗಲು ಹವಣಿಸುತ್ತೇನೆ...

ನಡೆದ ದೂರ, ನಡೆಯಬೇಕಾದದ್ದರ ದೂರ - ಯಾವುದು ಕಮ್ಮಿಯೋ ಗೊತ್ತಿಲ್ಲ...
ಹಿಮ್ಮಡಿಯ ಸೀಳಿನಲಿ ಬರಿಗಾಲ ನಿನ್ನೆಯ ವ್ಯಥೆಗಳು...
ಎಡವಿ ಒಡೆದ ಹೆಬ್ಬೆರಳಲಿ ಹೆಪ್ಪುಗಟ್ಟುತಿರೋ ನಾಳೆಗಳ ಕಥೆಗಳು...

ಅಮಾವಾಸ್ಯೆ -
ಚಂದಿರ -
ಹರಕು ಜೋಳಿಗೆ -
ಮುರುಕು ತೊಟ್ಟಿಲು...

ಎದೆಯ ಕಡಲ ತಳದಲ್ಲಿ ನಸುನಗೆಯ ಮುತ್ತೊಂದ ಹಡೆಯಬೇಕಿದ್ದ ಕಪ್ಪೆಚಿಪ್ಪಿನ ಗರ್ಭಪಾತ...
ಕಣ್ರೆಪ್ಪೆಯ ತಡೆಗೋಡೆಯ ಮೀರಲೆಳಸುವ ಅಲೆಗಳು...

ಹೆಳವನ ಇರುಳ ಸ್ವಪ್ನದ ನಗೆಯ ಕೂಸಿಗೆ ಬೆಳಕಲ್ಲಿ ನೆರಳಿಲ್ಲ...

Monday, April 11, 2016

ಗೊಂಚಲು - ನೂರಾ ಎಂಬತ್ತೆಂಟು.....

ಸಾವಿನೊಡೆತನದ ಬಯಲಲ್ಲಿ ಛಾವಣಿ ಇಲ್ಲದ ಗೂಡು - ಬದುಕು.....

ಒಂದಾದರೂ ಘನ ಉದ್ದೇಶವಿಲ್ಲದೆಯೂ ತುಡಿಯುತ್ತಲೇ ಇರುತ್ತೆ ಉಸಿರಿಗಾಗಿ ಈ ನಿರುಪಯೋಗಿ, ನಿರ್ಲಜ್ಜ ಬದುಕು...
ಹಿಡಿದಿಟ್ಟದ್ದು ಯಾವುದು...?
ಯಾವ ಮಹತ್ಕಾರ್ಯಕ್ಕೆ...??
ಮಹಾ ಮೌನದ ದಾರಿ ಅಷ್ಟು ದುರ್ಗಮವಾ...???
ಸಾವಿರ ನದಿಗಳ ಕುಡಿದೂ ಹಿಂಗದು ಸಾಗರದ ದಾಹ...
ಯಾವುದಕ್ಕೆ ಹೋಲಿಸಲಿ ಸಾಗರವ - ಅತಿ ಮಾತಿನ ಬದುಕಿಗಾ, ಅದರಾಚೆಯ ಮಹಾ ಮೌನಕ್ಕಾ...??
ಇಂಥ ಹೋಲಿಕೆಗಳನೆಲ್ಲ ಮೀರಿದ್ದಲ್ಲವಾ ಬದುಕು ಸಾವುಗಳೆಲ್ಲ ಅಂತೀರೇನೊ...
ಆದರೂ, ಮಾತಿಗೆ ನಗೆಯ ಬಣ್ಣ ತುಂಬುವುದು ಮತ್ತು ಮಹಾ ಮೌನಕೂ ಮಾರ್ದವತೆಯ ಕಣ್ಣ ಬಿಡಿಸುವುದು ಈ ಹೊತ್ತಿನ ಉದ್ದೇಶವಾಗಿ ತೋರುತ್ತೆ - ನಡಿಗೆ ಸಹನೀಯವೆನಿಸಲು...
---
ಎಣ್ಣೆ ಬತ್ತಿದ ಮೇಲಿನ ಬತ್ತಿಯ ಮೃಗೋನ್ಮಾದ - ಆರುವ ದೀಪದ ಉರಿ ಉರಿಯ ಆರ್ಭಟ; ಉಳಿದದ್ದಿಷ್ಟೇ ಚಿಟಿಕೆ ಬೂದಿ, ಕಮಟು ವಾಸನೆ - ಸಾವಿನೊಂದಿಗೆ ಚೌಕಾಶಿ ಸಾಧ್ಯವಿಲ್ಲ...
---
ತಬ್ಬಿ ಬಿಡು ಸಾವೇ -
ಹಚ್ಚಿಟ್ಟುಕೊಂಡ ಮುಗುಳ್ನಗೆಯ ಚಂದೀವಿಗೆಯ ಎಣ್ಣೆ ತೀರುವ ಮುನ್ನ; ಹರೆಯದ ಮುಂಬೆಳಗಿನ ತಿಳಿ ನಿದ್ದೆ ಮರುಳಿನ ಹಸಿ ಬಿಸಿ ಕನಸಂತೆ...
---
ಸಾವಿನ ಅಸ್ತಿತ್ವವೇ ಬದುಕ ಕುಡಿಕೆಗೆ ನಗೆಯ ಮಧುವ ಸುರಿಯುವಲ್ಲಿ ಕತ್ತಲ ಕಣ್ಣಲ್ಲಿ ಹಗಲ ಬೆರಗೆಲ್ಲ ಕನಸಾಗುತ್ತೆ - ಬೆಳಕ ಬಯಲಲ್ಲಿ ಇರುಳ ಸುಖದ ಸೆರಗು ನೆರಳಾಗುತ್ತೆ...
ಬಡ ಜೋಗಿಯ ಪ್ರತಿ ಹೆಜ್ಜೆಯಲೂ ಖುಷಿಯ ಉನ್ಮತ್ತ ಅಮಲು...
ಇಲ್ಲೀಗ ಸಾವಿಗೂ ನಗೆಯದೇ ಘಮಲು...
---
ಹಾಯ್ದು ಬಂದ ತಿರುವುಗಳೆಲ್ಲ ಮರೆತು ಹೋಗಲಿ...
ನೆನಪಿನ ಹಸಿಬೆ ಚೀಲ ಪೂರ್ತಾ ಖಾಲಿಯಾಗಲಿ...
ಹಾದಿಯ ಆ ಬದಿಯ ಹಸಿರಿಗೆ ನಿನ ಕಣ್ಣು ಕುರುಡಾಗಲಿ...
ಹೊಸ ಹುಟ್ಟಿಗೆ ನಿನ್ನೊಡಲು ಬಂಜರಾಗಲಿ...
ಹೇ ಮನಸೇ ಕ್ಷಮಿಸಿಬಿಡು -
ನಿನ್ನ ಹಸಿವಿನ ಅರಿವಿದ್ದೂ ಕಲಿಸಲೇಬೇಕಿದೆ ನಾ ನಿನಗೆ ಮುಟಿಗೆಯಷ್ಟಾದರೂ ಭಾವ ನಿರ್ಲಿಪ್ತಿ; ಅಳುವಿನಾಚೆಯ ನಿನದೇ ಸಣ್ಣ ನಗುವಿಗಾಗಿ...
---
ಸಾವು ತಾನು ಬಡ್ಡಿ ರಹಿತವಾಗಿ ಕೈಗಿಟ್ಟ ಸಾಲ ಈ ಬದುಕು...
ಪ್ರೀತಿಸಿಬಿಡು ಅಮ್ಮನ ಎದೆ ಹಾಲ ಹೀರುತ್ತಾ ನಗುವ ಕಂದನ ಮುಗ್ಧತೆಯಂತೆ...
ಮೋಹಿಸು ತನ್ನವಳ ಎದೆ ಏರಿಯ ಮೆದುವಿಗೆ ಸೋಲುತ್ತಾ, ತೊಡೆ ಕಣಿವೆಯ ಬಿಸಿಯಲಿ ಕಾಲನ ಮರೆವ ಕಾಮನಂತೆ...
ಸಾಲವ ಸಾವು ಮರಳಿ ಕೇಳುವ ಮುನ್ನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, March 21, 2016

ಗೊಂಚಲು - ನೂರಾ ಎಂಬತ್ತೇಳು.....

ಪ್ರೇಮ ಕಾಮದ ಅಂಟು.....
(ಕೆಲವೆಲ್ಲ ಹುಚ್ಚಿಗೆ ಮದ್ದಿಲ್ಲವೇನೊ...)

ನಿಜಕ್ಕೂ ಹಾಸಿಗೆ ಹಂಚಿಕೊಂಡಷ್ಟು ಸುಲಭವಲ್ಲ ಬದುಕ ಹಂಚಿಕೊಳ್ಳುವುದು...

ಹಾಸಿಗೆಯಲಿನ ಅವಳ ನರಳಾಟ ಸುಖದ್ದಾ ಅಥವಾ ನೋವಿನದ್ದಾ ಎಂಬುದರೆಡೆಗೆ ಮನಸ ಹಾಯಿಸದ ನಿರ್ಲಜ್ಜ ಹಸಿವಿನ ಗಂಡು...

ಅವನ ಹಾಸಿಗೆ ಹಸಿವಿಗೆ ಭಿಕ್ಷೆ ನೀಡಿದರೆ ಬದುಕನೇ ಮಡಿಲಿಗಿಟ್ಟು ವಿಧೇಯನಾಗಿರುತಾನೆ ಎಂದು ಅಗಾಧವಾಗಿ ಭ್ರಮಿಸುವ ಐಚ್ಛಿಕ ಬಯಕೆಯ ಹೆಣ್ಣು...

ಬದಲಾಗದ ಮನೋಭೂಮಿಕೆ; ಕಾಮಕ್ಕೆ ಅಪವಿತ್ರತೆಯ ಆರೋಪ...

ಪ್ರೇಮದ ಸೆರಗಿನೊಳಗೆ ತೋಳ ಬಲ, ನಡುವಿನಾಳ ಅಳೆದರೆ ಸ್ವಚ್ಛವಂತೆ...!!!

ಆಸೆ ಆಸೆ ಬೆರೆತು ಬೆವರಿಳಿದರೆ ಸ್ವೇಚ್ಛೆಯಂತೆ...!!!

ಪ್ರಕೃತಿಗೊಂದು ಮುಸುಕನೆಳೆದು ಮಧುರ ಹೆಸರಿನಲ್ಲಿ ಕೂಗಿದರೆ ಸುರತಕೂ ದೈವತ್ವವಂತೆ...!!!

ಪ್ರಕೃತಿ ಸಹಜ ದೈತ್ಯ ಹಸಿವನು ಅದರದೇ ಹೆಸರಲ್ಲಿ ನೀಗಿಕೊಂಬವರು ದೈತ್ಯರಂತೆ...!!!

ಪ್ರೇಮದ ಉನ್ಮಾದ ಕಾಮನ ಬೆವರಲ್ಲಿ ಕರಗದೇ ಹೋದರೆ ಬದುಕಿಂಗೆ ಹರಿವಿರುವುದಿಲ್ಲ - ಹರಿವಿನ ಶೃಂಗಾರವಿಲ್ಲದೇ ಲೌಕಿಕಕೆ ಸೊಗಸಿಲ್ಲ...

ಪ್ರೇಮ ಬೂದಿ - ಕಾಮ ಕೆಂಡ - ಹೊಗೆ ನಿರಂತರ...

ಅಲ್ಲದೇ ಎಲ್ಲವಕ್ಕೂ ಅಪವಾದ ಎಂಬುದೊಂದಿದೆಯಂತೆ; ಬಿಡಿ ಜಗದ ಸೂತಕಗಳ್ಯಾವುದೂ ಈ ಜಂಗಮಂಗೆ ಅರ್ಥವೇ ಆಗುವುದಿಲ್ಲ...

<69>   <69>   <69>

ಸುಡುವ ತೊಡೆ ನಡುವ ಹಸಿಯಲ್ಲಿ ಗಂಡಾಗಿ ಜೀಕಿ ಬೆವರಲ್ಲಿ ಹಮ್ಮನಿಳಿಸಿ ಅವಳ ಕನಸುಗಳ ಆಳುವ ಖೂಳ ಬಯಕೆಯ ಕೆರಳುವಾಟದಿ ಮೊಲೆತೊಟ್ಟನು ತುಟಿಗಳಲಿ ತುಂಬಿಕೊಂಡೆ...
ಆತ್ಮದ ಹಸಿವಿಗೆ ಕಿಡಿ ಸೋಕಿದ ಅನುಭಾವದಾನಂದದಲಿ ಕಂದಾ ಎಂದುಸುರಿ ನೆತ್ತಿ ನೇವರಿಸಿದಳು...
ಪುರುಷಾಹಂಕಾರದ ಹಸಿವಿನಮಲೆಲ್ಲ ಅವಧಿಗೂ ಮುನ್ನ ಸ್ಖಲಿಸಿ ನಿತ್ರಾಣದಲಿ ನಿದ್ದೆಗೆ ಬಿದ್ದೆ ಅವಳದೇ ಮಡಿಲಲಿ...
ಅವಳೆಂದರೆ ಅಮ್ಮ ಕೂಡಾ - ಅವಳ ಕಾಮಕ್ಕೂ ಆತ್ಮದ ನಂಟು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, March 7, 2016

ಗೊಂಚಲು - ಒಂದು ನೂರಾ ಎಂಬತ್ತರ ಮೇಲೆ ಮತ್ತಾರು.....

ಇದು ಬರಹ - ಅವ ಬರಹಗಾರ.....

ಬರೆದವನು ಅವನ ಬರಹದಂತಿಲ್ಲ ಎಂಬುದು ಸಾಮಾನ್ಯ ಆರೋಪ ಮತ್ತು ಅವ ಹಾಗಿಲ್ಲದೇ ಹೋದದ್ದು ತೀರ ಸಾಮಾನ್ಯ ವಿಷಯ... (ಅಪವಾದಗಳ ಹೊರತುಪಡಿಸಿ...)

"ಅದಕೇ ಬರಹಗಳ ಪ್ರೀತಿಸಿ ಬರಹಗಾರನನ್ನಲ್ಲ..." 

ಎಂಥ ಭಾವವೂ ಬರಹ ಆಗುವಾಗ ಅಷ್ಟಿಷ್ಟು ಬಣ್ಣ ಬಳಿದುಕೊಳ್ಳುವುದು ಸಹಜ ಅಲ್ವಾ...
ಗೊತ್ತಿಲ್ಲ -
ನನ್ನ ತಿಳುವಳಿಕೆ ಪ್ರಕಾರ ಬರೆಯುವ ಹೊತ್ತಲ್ಲಿ ಒಂದಿಷ್ಟಾದರೂ ಭಾವದ ಸ್ರವಿಕೆ ಇದ್ದೇ ಬರೆದಿರ್ತಾರೆ ಅಂದ್ಕೋತೀನಿ... 
ಆದ್ರೆ ಎನ್ಗೊತ್ತಾ ಬರೆದ ಭಾವ ಬರೆದು ಆಚೆಯಿಟ್ಟ ಮೇಲೆ ಮತ್ತೆ ಬದಲಾಗಲ್ಲ... 
ಅದು ಬರಹಗಾರನ ಕೈಯಿಂದಲೂ ಕಳಚಿಕೊಂಡು ಮುಕ್ತವಾದ ಭಾವಮಾಲೆ...
ಓದುಗನೊಳಗೆ ಅರಳಿ ಬೆಳೆದೀತು ಇನ್ನಷ್ಟು ಅಷ್ಟೇ... 
ಆದ್ರೆ ಬರಹಗಾರ ಹಾಗಲ್ಲ... 
ಆತ ಮತ್ತು ಆತನ ಭಾವವಲಯ ಪ್ರತಿ ಕ್ಷಣ ಅದಲು ಬದಲಾಗುತ್ತಾ, ಹಳತು ಹೊಸತಾಗುತ್ತಾ, ಅಳಿಯುತ್ತಾ, ಬೆಳೆಯುತ್ತಾ ಇರುತ್ತೆ... 
ಅಲ್ಲದೇ, ಹಲ ಬಾರಿ ಆತ ತಾನಲ್ಲದ ಅಥವಾ ತನ್ನದಲ್ಲದ ವಿರುದ್ಧ ಭಾವಗಳೆಡೆಗಿನ ತನ್ನ ಗುದ್ದಾಟ ಮತ್ತು ಗುದ್ದಾಡುವ ಅದೇ ಭಾವಗಳೆಡೆಗಿನ ಅದ್ಯಾವುದೋ ಸೆಳೆತಗಳನು ಕೂಡ ಅಕ್ಷರೀಕರಿಸುತ್ತಿರುತ್ತಾನೆ ಅವೂ ತನ್ನವೇ ಎಂಬಂತೆ... 
ಬರೆವಾಗ ಇದ್ದ ಅವನದೇ ಮನಸ್ಥಿತಿ ಅವನಿಗೇ ಮತ್ತೆ ದಕ್ಕದೇ ಹೋದೀತು...
ಅದೂ ಅಲ್ಲದೇ ಪ್ರತಿ ವ್ಯಕ್ತಿಯಲ್ಲೂ ಅಂತರಂಗದ ಮತ್ತು ಬಹಿರಂಗದ ಬೇರೆ ಬೇರೆಯೇ ಮಜಲುಗಳಿರುತ್ತೆ ಮತ್ತದು ವೈಜ್ಞಾನಿಕವಗಿಯೂ ಸತ್ಯ ಅಲ್ವಾ... 
ಬರಹ ಅಂತರಂಗದ ಭಾವಗಳ ಸಣ್ಣ ಸಂವಾದೀ ರೂಪ ಅಷ್ಟೇ - ಆಂತರ್ಯದ ಭಾವಾವೇಶದ ವಿಸ್ತಾರ ಅಕ್ಷರಗಳ ಮೀರಿದ್ದಲ್ಲವಾ; ಬದುಕು ವಾಸ್ತವದ ಹೊಣೆಗಾರಿಕೆಗಳ ವ್ಯಕ್ತ ರೂಪ - ಭಾವಕ್ಕೂ ಬದುಕಿಗೂ ಕಲ್ಪನೆ ಮತ್ತು ವಾಸ್ತವಗಳ ನಡುವೆಯ ವ್ಯತ್ಯಾಸ ಇದೆ ಅಲ್ಲವಾ...
ಹಾಗಾಗಿ ಬರಹ ಮತ್ತು ಬರಹಗಾರ ಬೇರೆ ಬೇರೆಯಾಗಿಯೇ ನಿಲ್ಲುತ್ತಾರೆ ಹೆಚ್ಚಿನ ಸಲ... 
ಬದುಕು ಮತ್ತು ಬರಹ ಎರಡರಲ್ಲೂ ಸಮನ್ವಯ ಮತ್ತು ಸಾಮ್ಯತೆ ಸಾಧಿಸುವುದು ಅಷ್ಟು ಸುಲಭದ ಮಾತಲ್ಲ ಅನ್ಕೋತೀನಿ...
ಅದಕ್ಕೆ ವಿಶೇಷವಾದ ಮನೋ ಸಾಮರ್ಥ್ಯ ರೂಢಿಸಿಕೊಳ್ಳಬೇಕಿರುತ್ತೆ - ಅದು ಸಾಮಾನ್ಯರಿಗೆ ನಿಲುಕುವ ಎತ್ತರವಲ್ಲ... 
ಆದರೂ ಅಲ್ಲೊಬ್ಬ ಇಲ್ಲೊಬ್ಬರಾದರೂ ಎರಡರಲ್ಲೂ ಒಂದೇ ಆಗಿರುವವರು ಇದ್ದಾರೆ ಅನ್ನುವುದು ಖುಷಿಯ ಸಂಗತಿ... 

ವ್ಯಕ್ತಿಯನ್ನ ವ್ಯಕ್ತಿಯಾಗಿ ನೋಡಿ ತಿಳಿದು ಆತನ ಬಗ್ಗೆ ನಮ್ಮೆದೆಯಲ್ಲಿ ಚಿತ್ರ ಬರೆದುಕೊಳ್ಳುವುದು ಜಾಣತನ.... 
ಅದಲ್ಲದೇ ಆತನ ಕಲೆಯನ್ನೇ ಆತ ಎಂದು ನಮ್ಮಲ್ಲೇ ನಾವು ನಂಬಿ, ಆತನ ಕಲೆಯ ಪಾತ್ರಗಳನ್ನೇ ಅವನಿಗೂ ಆರೋಪಿಸಿ ನಮ್ಮೊಳಗೆ ಆತನೆಡೆಗೆ ವಿಶೇಷ ಭಾವ ಬೆಳೆಸಿಕೊಳ್ಳುವುದು ಎಷ್ಟು ಸರಿ...?
ರಾಕ್ಷಸನ ಪಾತ್ರ ಮಾಡುವವ ರಾಕ್ಷಸ ಗುಣಗಳ ಹೊಂದಿರಬೇಕಿಲ್ಲ ಅಲ್ಲವಾ...
ರಾಮನ ಆರಾಧಿಸುವಾತನ ಎದೆಯಲ್ಲೂ ಇದ್ದೇ ಇದ್ದೀತು ಒಂದಿನಿತು ದೌರ್ಬಲ್ಯ...
ಅಂತೆಯೇ ಬರಹವೂ ಒಂದು ಕಲೆ... 
ಪ್ರೇಮವನ್ನು ಸೃಷ್ಟಿಸಿದ ಬರಹಗಾರನೇ ಕಾಮವನ್ನೂ ರಂಜನೀಯವಾಗಿ ಸೃಷ್ಟಿಸಬಲ್ಲ... 
ಪ್ರೇಮದ ಸಾಲುಗಳಲ್ಲಿ ಮನಸು ಅರಳುವಂತೆ ಮಾಡಬಲ್ಲವನೇ ಕಾಮದ ಸಾಲುಗಳಲ್ಲಿ ಮೈಬಿಸಿಯ ಏರಿಸಬಲ್ಲ... 
ಯುದ್ಧದ ಕ್ರೌರ್ಯ - ಒಳಮನೆಯ ಶೃಂಗಾರ ಎರಡರ ವರ್ಣನೆಯೂ ಅದೇ ಲೇಖನಿಯ ಕೂಸುಗಳಲ್ಲವಾ...
ನಮಗ್ಯಾವುದು ಬೇಕೋ ಅದನ್ನ ನಾವೆತ್ತಿಕೊಳ್ಳಬೇಕಲ್ಲವಾ... 
ಆದ್ರೆ ನಾವು ಇದು ನನ್ನದೂ ಭಾವ ಅಂತ ಓದಿ ಆಸ್ವಾಧಿಸಿ ಅಷ್ಟಕ್ಕೇ ಸುಮ್ಮನಾಗಲ್ಲ... 
ಬರಹದ ಜೊತೆಗೇ ಬರಹಗಾರನನ್ನೂ ನಮ್ಮಿಷ್ಟದಂತೆ ಆರಾಧಿಸಿ ಅವರ ಇಗೋ ಬೆಳೆಸಿ ದೇವರೋ ಇಲ್ಲಾ ಬುದ್ಧಿಜೀವಿಯೋ ಮಾಡ್ತೀವಿ ಅನ್ನಿಸುತ್ತೆ ನಂಗೆ... 
ಆ ಬರಹಗಾರನ ಬರಹದ ನಮ್ಮಿಷ್ಟದ ಪಾತ್ರಗಳ ಗುಣಗಳನ್ನ ಬರಹಗಾರನಿಗೂ ಆರೋಪಿಸಿಕೊಂಡು ನಮ್ಮಲ್ಲಿ ನಾವೇ ಅವನನ್ನ ನಮಗೆ ಬೇಕಾದಂಗೆ ಚಿತ್ರಿಸಿಕೊಂಡು ಕೊನೆಗೆ ಅವನೆದುರು ನಿಂತ ಘಳಿಗೆಯಲ್ಲಿ ಅಯ್ಯೋ ಮೋಸ ಹೋದೆ ಎನ್ನುವುದು ಎಷ್ಟು ಸರಿ...? 
ಅಭಿಮಾನ ಮತ್ತು ಅಂದಾಭಿಮಾನದ ನಡುವಿನ ವ್ಯತ್ಯಾಸದ ಅರಿವು ನಮಗಿರಬೇಕಲ್ಲವಾ... 
ನಮ್ಮ ಅಭಿಮಾನವನ್ನ ನಿರ್ವಹಿಸುವ ರೀತಿಯನ್ನು ಕಲಿಯದೇ, ನಮ್ಮ ಅಭಿಮಾನದ ಮೇಲೆ ನಮಗೆ ಹಿಡಿತ ಇಲ್ಲದೇ ಹೋಗಿ ಅವರದನ್ನು ಬಳಸಿಕೊಳ್ಳೋಕೆ ನಾವೇ ಅವಕಾಶ ಮಾಡಿ ಕೊಟ್ಟು ನಮ್ಮ ಸ್ವಯಂಕೃತಾಪರಾಧಕ್ಕೆ ಆಮೇಲೆ ಬರೆದವನ ಬದುಕ ಬೈಯ್ಯೋದು ಎಂತು ಸರಿ...

ತನ್ನ ಬರಹದ ಬಗ್ಗೆ ಬರಹಗಾರನಲ್ಲಿ ಬದ್ಧತೆ ಇರಬೇಕು ಎನ್ನುವುದು ಸತ್ಯವೇ – ಆತನಿಗೆ ಸಾಮಾಜಿಕ ಬದ್ಧತೆ ಇರತಕ್ಕದ್ದು ಎಂಬುದನ್ನು ಕೂಡ ಅಗತ್ಯವಾಗಿ ಒಪ್ಪೋಣ... 
ಆದರೆ ಅದು ಯಾವುದೋ ಬಹಿರಂಗದ ಘಟನೆಯನ್ನೋ, ಕ್ರಿಯೆಯನ್ನೋ ಕುರಿತು ಹೇಳುವಾಗ ಅಥವಾ ಅವುಗಳ ಬಗ್ಗೆ ‘ಹೇಳಿಕೆಗಳನ್ನು’ ಕೊಡುವಾಗ ಸರಿಯೇ ಹೊರತೂ; ಒಂದು ಕಲೆ ಅಂದರೆ ತನ್ನ ಅಂತರಂಗದಲ್ಲಿ ಸಂಚಾರಿಯಾಗಿ ಚಲಿಸೋ ಒಂದು ಭಾವವನ್ನ ಹೇಳುವಾಗ ಅರ್ಥಾತ್  ‘ಭಾವ ಪ್ರಧಾನವಾದ’ ಕಥೆ, ಕವಿತೆ, ಕಾದಂಬರಿಗಳಲ್ಲಿ ಅನ್ವಯ ಆಗಲಾರದು ಎನ್ನಿಸುತ್ತೆ... 
ಅಲ್ಲಿ ಅವ ಆ ಕ್ಷಣದ ಆ ಭಾವಕ್ಕಷ್ಟೇ ಬದ್ಧ ಆದರೆ ಸಾಕು ಅನ್ನಿಸುತ್ತೆ ನಂಗೆ... 
ಇಲ್ಲದೆ ಹೋದಲ್ಲಿ ‘ಭಾವ ಪ್ರಧಾನ ಬರಹ ಹುಟ್ಟುವುದೇ ಕಷ್ಟ...
ಯಾಕೆಂದರೆ ಅಲ್ಲಿ ಬರಹಗಾರ ತನ್ನ ಸೃಷ್ಟಿಯ ಹತ್ತಾರು ಪಾತ್ರಗಳಲ್ಲಿ ಹಂಚಿ ಹೋಗಿರುತ್ತಾನೆ... 
ತನ್ನದಷ್ಟೇ ಅಲ್ಲದೇ ತನ್ನ ಸುತ್ತಲಿನ ಅಥವಾ ತನ್ನದಕ್ಕೆ ತನ್ನ ಕಲ್ಪನೆಯ ವ್ಯಕ್ತಿ, ಶಕ್ತಿಗಳ ಭಾವವಲಯವನ್ನು ತನ್ನೊಳಗೇ ಆರೋಪಿಸಿಕೊಂಡು ನಿರೂಪಿಸಿರುತ್ತಾನೆ... 
ಹಾಗಿದ್ದಾಗ ಯಾವುದನ್ನು ಅವನಿಗೆ ಆರೋಪಿಸುವುದು...? 
ಮತ್ತು ಯಾಕೆ ಹಾಗೆ ಆರೋಪಿಸಬೇಕು...??
ಭಾವಲೋಕದಂತೆ ಅಥವಾ ಭಾವಿಸಿಕೊಂಡಂತೆ ವಾಸ್ತವದ ಬದುಕು ಯಾರದ್ದೂ ಇರುವುದಿಲ್ಲ ಅಲ್ಲವಾ... 
ಭಾವಸ್ರಾವಕ್ಕೆ ಕಲ್ಪನೆಯ ವಿಸ್ತಾರ ದಕ್ಕಿ ಇನ್ನೊಂದು ಹೊಸ ಭಾವ ಲೋಕ ಸೃಷ್ಟಿ ಆಗುವಲ್ಲಿ ಯಾವ ಸಮಾಜ ನೆನಪಾಗುತ್ತೆ...
ಕಲ್ಪನೆಯ ಆಗಸದಲ್ಲಿ ಅದೆಷ್ಟು ಭಾವಗಳಿಗವನು ಬದ್ಧನಾದಾನು...

ಇಷ್ಟಕ್ಕೂ ಆತ ಕೂಡ ನಮ್ಮಂತೆಯೇ ಒಬ್ಬ ಮನುಷ್ಯ... 
ಎಲ್ಲ ರಾಗ ದ್ವೇಷ ತ್ವೇಷಗಳ ಒಳಗೊಂಡ ಸಾಮಾನ್ಯ ಮನುಷ್ಯ... 
ಒಂದ್ಯಾವುದೋ ಕಲೆ ಸಿದ್ಧಿಸಿದೆ ಅಷ್ಟೇ - ಭಾವಲೋಕವನ್ನು ಅಕ್ಷರಗಳಲ್ಲಿ ಕಟ್ಟಿಕೊಡಬಲ್ಲ ಕಲೆ... 
ಅದರಾಚೆ ಆತನೂ ನಮ್ಮಂತೆಯೇ – ಹೆಚ್ಚಿನ ಸಲ ನಮಗಿಂತ ಎಡಬಿಡಂಗಿ ಮನುಷ್ಯ... 
"ಅದಕೇ ಬರಹಗಳ ಪ್ರೀತಿಸಿ ಬರಹಗಾರರನ್ನಲ್ಲ..." ಅಂತೀನಿ... 
ವ್ಯಕ್ತಿ ಮುಖ್ಯ ಆಗಬಾರದು ನಮಗೆ ವಿಚಾರ ಮುಖ್ಯವಾಗಬೇಕು... 
ವಿಚಾರದ ಸತ್ಯಾಸತ್ಯತೆ ಮತ್ತು ಪ್ರಸ್ತುತತೆಯ ಮೇಲೆ ಬರಹದ ತೂಕ ನಿರ್ಧಾರವಾಗಬೇಕು ನಮ್ಮೊಳಗೆ ಅಲ್ಲವಾ...
ವಿಚಾರವ ಬಿಟ್ಟು ವ್ಯಕ್ತಿಯ ಹಿಂದೆ ಬೀಳುವ ಮನಸ್ಥಿತಿಯಿಂದಲೇ ಇದ್ದೀತು ಇಲ್ಲಿ ಇಷ್ಟೆಲ್ಲ ಬುದ್ಧಿಜೀವಿಗಳು, ದೇವಮಾನವರೆಲ್ಲ ಹುಟ್ಟಿಕೊಳ್ಳುವುದು ಅನ್ನಿಸಲ್ಲವಾ...
ಸೈದ್ಧಾಂತಿಕ ಭಿನ್ನತೆಗಾಗಿ ‘ವೈಯಕ್ತಿಕ ಪ್ರೀತಿಯ’ ಕೊಂದುಕೊಳ್ಳುವುದು ಮತ್ತು ವೈಯಕ್ತಿಕ ಆಪ್ತತೆಗಾಗಿ ತಪ್ಪನ್ನೂ ಹಾಡಿ ಹೊಗಳುವುದು ಎರಡೂ ಅಪದ್ಧವೇ ಅನ್ನಿಸಲ್ಲವಾ...
ಬರಹ ಮತ್ತು ಬರಹಗಾರ ಎರಡನ್ನೂ ಬೇರೆ ಬೇರೆ ನೋಡುವ ಪ್ರಜ್ಞಾವಂತಿಕೆಯನ್ನು ಬದುಕನ್ನು ಓದುವುದನರಿತ ಕೆಲವರಾದರೂ ರೂಢಿಸಿಕೊಂಡರೆ ಒಳ್ಳೆಯದು ಮತ್ತು ಆದಷ್ಟು ಅದನ್ನ ಮತ್ತೊಬ್ಬರಲ್ಲೂ ಮೂಡಿಸೋ ಪ್ರಯತ್ನ ಮಾಡಿದರೆ ಇನ್ನೂ ಒಳ್ಳೆಯದು ಅನ್ನಿಸುತ್ತೆ ನಂಗೆ - ಅದು ಅನಿವಾರ್ಯ ಅಂತಲೂ ಅನ್ನಿಸುತ್ತೆ...

"ಬರಹಗಾರನ ಪ್ರೀತಿಸುವುದಾದರೆ ಅದಕೆ ಅವನ ಬರಹಗಳ ಆಚೆಯ ಬೇರೆಯದೇ ಆಪ್ತತೆಯ ಕಾರಣಗಳಿರಲಿ - ಆಗ ಬರಹ ಮತ್ತು ಬಂಧಕ್ಕೆ ಬೇರೆಯೇ ಚೆಂದವಿದ್ದೀತು..."

ಏನೋ ಹೀಗೆಲ್ಲ ಅನ್ನಿಸುತ್ತೆ...
ಇವು ನನ್ನ ತಿಳುವಳಿಕೆ ಅಥವಾ ಭಾವ ಅಷ್ಟೇ... 
ಅಲ್ಪನ ಅತಿ ಮಾತು ಅನ್ನಿಸಿದರೆ ಕ್ಷಮಿಸಿ...

ಆದರೂ ಒಂದು ಕಿವಿಮಾತು ಏನೆಂದರೆ -
"ಬರಹಗಳ ಪ್ರೀತಿಸಿ ಬರಹಗಾರರನ್ನಲ್ಲ..." 

Wednesday, March 2, 2016

ಗೊಂಚಲು - ನೂರಾ ಎಂಬತ್ತೈದು.....

ಅಸಹಾಯ ಆಕ್ರೋಶದಲ್ಲಿ ಉಳಿವುದು ಕಣ್ಣ ಹನಿಯ ಕರೆಯೊಂದೆ.....

ಪ್ರೇಮ, ಪ್ರಣಯ ಅಷ್ಟೇ ಅಲ್ಲ ಕೊನೆಗೆ ಪ್ರೀತಿ, ಸ್ನೇಹ, ಕಾಳಜಿಗಳು ಕೂಡ ಕತ್ತಲಲ್ಲೇ ಪ್ರಕಟವಾಗಬೇಕು, ಬಾಗಿಲ ಮರೆಯಲ್ಲಿಯೇ ವ್ಯಕ್ತವಾಗಬೇಕು - ಕತ್ತಲೆಯ ತೊತ್ತಾಗಬೇಕು...

ಬೆಳಕಲ್ಲಿ ಬಿಚ್ಚಿಟ್ಟಿರೋ ಅಸ್ಪ್ರಶ್ಯರಾಗುತ್ತೀರಿ - ಬಾಗಿಲ ಮರೆಯ ಕ್ರೌರ್ಯವೂ ಸಮ್ಮತ ಪ್ರೇಮ ಅನ್ನಿಸಿಕೊಳ್ಳುತ್ತದೆ; ಬಾಗಿಲಾಚೆ ಹೆಗಲು ತಬ್ಬಿದ ಕಾಳಜಿಯೂ ಅನೈತಿಕ ಕಾಮ ಇಲ್ಲಿ...

ಬಾಗಿಲಾಚೆಯ ಸ್ವಚ್ಛ ಬೆಳಕಲ್ಲೂ ತೋರುವುದಾದರೆ ಅದಕೆ ಗಾಢ ಬಣ್ಣದ ಮುಖವಾಡ ತೊಡಿಸಿ ತೋರಬೇಕು – ಪ್ರತಿ ಬಂಧಕ್ಕೂ ಸಂಬಂಧದ ಹೆಸರು ಬೇಕು – ಪ್ರತಿ ಭಾವಕ್ಕೂ ನಕಲಿ ಮುಖವೊಂದು ಬೇಕು...

ತರಹೇವಾರಿ ಮುಖವಾಡಗಳು ಸಿಕ್ಕುತ್ತವೆ ಈ ಸಾಮಾಜವೆಂಬೋ ಜಾತ್ರೆಯ ಬಯಲಲ್ಲಿ...

ನೀ ನಿನ್ನಂತೆ ಬಾಳು ಎನ್ನುತ್ತಲೇ ನೀನೆಂದರೆ ಇದು ಎಂದು ನನದೊಂದು ಚಿತ್ರವನ್ನೂ ಅವರೇ ಕಟ್ಟಿಕೊಡುತ್ತಾರೆ - ಅದರಾಚೆ ನನ್ನ ದಾರಿಯ ನಾ ಕಂಡುಕೊಳ್ಳುವುದು ಅಪರಾಧ ಇಲ್ಲಿ... 

ಎಂಬಲ್ಲಿಗೆ ಅಪ್ರಾಮಾಣಿಕನಾಗುವುದನ್ನು ನಮ್ಮವರೇ ನಮಗೆ ಕಲಿಸುತ್ತಾರೆ...

ಉಹುಂ – ಅಪ್ರಾಮಾಣಿಕ ಆಗಲಾರೆ ಅಂತ ಹೊರಟೆನೋ, ಮುಖವಾಡಗಳ ತೊಡದೇ ಓಡಾಡುವ ಧೈರ್ಯ ತೋರಿದೆನೋ ಅಲ್ಲಿಗೆ ಮುಗಿಯಿತು; ಅಲ್ಲಿಂದಾಚೆ ನನ್ನ ನಗು, ನನ್ನ ಖುಷಿಗಳೆಲ್ಲ ಅನೈತಿಕತೆಯ ಬಣ್ಣದ ಕೂಸಾಗಿ ಬದುಕಬೇಕು ತಲೆ ತಗ್ಗಿಸಿ...

ಬದುಕ ಮಡಿಲಿಗೆ ಕಿಂಚಿತ್ತಾದರೂ ನಗೆಯ ಸುರಿಯದವರೂ, ನನ್ನೊಳಗಣ ಒಳಿತುಗಳನೆನಿತು ಗುರುತಿಸದವರೂ ನನ್ನದೊಂದು ಕೆಡುಕನ್ನ ಹುಡುಹುಡುಕಿ ನಡು ಬೀದಿಯಲ್ಲಿ ಪಾರಾಯಣ ಮಾಡುತ್ತಾರೆ...

ಇಡುವ ಪ್ರತಿ ಹೆಜ್ಜೆಗೂ ಸಾವಿರ ಕಣ್ಣುಗಳ ಅನುಮಾನದ ಕಾವಲು...

ಉಸಿರಾಟಕ್ಕೂ ಪ್ರಶ್ನೆಗಳಿವೆ ಇಲ್ಲಿ; ಉತ್ತರಕೂ ಇಂಥದ್ದೇ ಇರಬೇಕೆಂಬ ಆರೋಪಿತ ನಿರೀಕ್ಷೆಗಳಿರುತ್ತವೆ - ನೇರ ಉತ್ತರಕ್ಕೆ ಮತ್ತೆ ಅನುಮಾನದ ಹೊಗೆಯ ವಾದಗಳ ಬೇಗೆ...

ಯಾರವರು ಅಂತರಂಗ ಶುದ್ಧಿ ಶ್ರೇಷ್ಠ ಅಂದವರು – ಇಲ್ಲಿ ಬಹಿರಂಗಕ್ಕೆ ಮಾತ್ರ ಹಾರ ತುರಾಯಿ...

ಯಾವುದೇ ಹಂಗುಗಳ ಮೀರಿದ ಸ್ವತಂತ್ರ ಭಾವಗಳು ಬೆಳೆದು ನಿಲ್ಲುತ್ತವೆ ಅಂತರಂಗದಲ್ಲಿ; ಆ ಭಾವಗಳಿಗೂ ಹೊಸ ಬೇಲಿಗಳು ಸೃಷ್ಟಿಯಾಗುತ್ತವೆ ಬಹಿರಂಗದಲ್ಲಿ...

ಅಂತರಂಗ ಕೊಳೆತು ನಾರಿದರೂ ಯಾರಿಗೂ ಬೇಸರವಿಲ್ಲ – ಬಹಿರಂಗ ಘಮಘಮಿಸುತಿದ್ದರಾಯಿತು...

ಆತ್ಮಶುದ್ಧಿಯ ಪ್ರವರವೇನಿದ್ದರೂ ಪುರೋಹಿತನ ಬಾಯಿ ಚಪಲ ಮತ್ತು ಗರುಡ ಪುರಾಣದ ಅಧ್ಯಾಯವಷ್ಟೇ...

ನೇರವಂತಿಕೆಯ ಧೈರ್ಯ ಎನ್ನುವುದು ವಿಪರೀತದ ಸ್ವೇಚ್ಛೆಯಂತೆ ಕಾಣುತ್ತೆ ಮಡಿವಂತ (?) ಕಣ್ಣುಗಳಿಗೆ – ಅಂತೆಯೇ ನನ್ನಾತ್ಮದ ಪ್ರಾಮಾಣಿಕತೆ ಮೊಂಡುವಾದ...

ಹಂಚಿಕೊಂಡ ಯಾವುದೋ ನೋವು ಆಪ್ತತೆಯ ಬಾಗಿಲ ನಂಬಿಕೆಯ ಕೀಲಿಯಾಗಲ್ಲದೇ ಸಹಾನುಭೂತಿಯ (ಸಹಾನುಭೂತಿ: ಈ ಶಬ್ದವೇ ಹಿಂಸಾತ್ಮಕ ಸ್ವಸ್ಥ ಮನಸಿಗೆ) ನಿರೀಕ್ಷೆಯ ಹಂಬಲವಾಗಿ ಗೋಚರಿಸುವಲ್ಲಿ; ಬಂಧವೊಂದರ ಪ್ರೀತಿಯ ಮೂಲ ಪ್ರೀತಿ ಆಗಿರದೇ ಯಾವುದೋ ನೋವಿನೆಡೆಗಿನ ಸಹಾನುಭೂತಿ ಎಂದಾದಲ್ಲಿ ಕನಸಿನುಸಿರ ಕರುಳಿಗೆ ಕತ್ತರಿಯಾಡಿಸಿದಂತ ಭಾವ ಎದೆಯಲ್ಲಿ...

ಮಹಾ ಹುಂಬ ಧೈರ್ಯದ ಭಂಡ ಪ್ರಾಣಿ ನಾನು – ಆದರೂ ಕೊನೆಗೆ ಗೆಲ್ಲುವುದು ಸಮಾಜವೇ...

ಯಾಕೆಂದರೆ ನಾನಿರುವುದೂ ಅದೇ ಸಮಾಜದಲ್ಲಿ – ಅದರ ಒಂದು ಭಾಗವಾಗಿ; ಅಷ್ಟೇ ಅಲ್ಲ ಅದೇ ಸ್ವಸ್ಥ (?) ಸಮಾಜದ (ಈ ಶಬ್ದದ ಬಗೆಗೇ ಮಹಾ ಗೊಂದಲವಿದೆ ನಂಗೆ) ಮುಖ್ಯ ಭೂಮಿಕೆಯಲ್ಲಿ ನಾ ಎದೆಯಲಿಟ್ಟುಕೊಂಡ ನನ್ನದೂ ಎಂದುಕೊಂಡ ಜೀವಗಳೂ ಇವೆ...

ಅಲ್ಲಿಗೆ ತೊಟ್ಟು ನೆಮ್ಮದಿಯಿಲ್ಲ – ಬಿಟ್ಟು ಬದುಕಿಲ್ಲ...

ನನ್ನಂತೆ ನನ್ನ ಇರಗೊಡದ ಶ್ರೇಷ್ಠ ಸಮಾಜವೇ ನಿನ್ನೊಡನೆ ಏಗುವುದಕಿಂತ ಸಾವಿನೊಡನೆ ಸರಸ ಹಿತವೆನಿಸುತ್ತೆ – ಹಾಗಂತ ನಾ ಹೇಳಿದರೆ ಕಿಂಚಿತ್ತೂ ಅತಿಶಯೋಕ್ತಿ ಇಲ್ಲ...

ತುಂಬಾನೇ ಸುಸ್ತೆನಿಸುತ್ತೆ ಈ ನಡೆಗಳು; ಆಯ್ದುಕೊಂಡ ದಾರಿ ತಪ್ಪೋ ಸರಿಯೋ ಎಂಬಲ್ಲಿ ಗೊಂದಲಗಳಿಗಿಂತ ಇಲ್ಲೀಗ ಅದೆಷ್ಟೋ ಪ್ರಶ್ನೆಗಳಿಗೆ ಸಾವಿಗಿಂತ ಸಮರ್ಥ ಉತ್ತರ ಬೇರಿಲ್ಲ ಎಂಬುದು ಸತ್ಯ ಅನ್ನಿಸಿಬಿಡುತ್ತೆ – ಪಕ್ಕನೆ ನಿಂತುಬಿಡಬೇಕು ಉಸಿರು ಯಾರದೇ ಹಂಗಿಗೂ ಅರೆಕ್ಷಣವೂ ಸಿಗದೇ...

ಉರುಳಿಬಿದ್ದ ಮಾಂತ್ರಿಕನ ಶಕ್ತಿ ಕೇಂದ್ರವೀಗ ಭಾವಗಳ ರುದ್ರಭೂಮಿ; ಮುರಿದ ನಗೆಯ ಮಂತ್ರದಂಡವೇ ವ್ಯಾಸಪೀಠವಾಗಿ ಅದರ ಮೇಲೀಗ ಗರುಡ ಪುರಾಣ – ಅದನ್ನೂ ಮುಖ ಅರಳಿಸಿಕೊಂಡೇ ಕೇಳಬೇಕು; ಸ್ವಂತಿಕೆಗೆ ಎಳ್ಳು ನೀರು...

ಸ್ವಂತಿಕೆ ಸತ್ತ ಬದುಕಲ್ಲಿ ಮಾತಿಗೇನು ಕೆಲಸ - ನಗೆಯೂ ಕ್ರುದ್ಧ ಮೌನದ ಗುಲಾಮ ಅಲ್ಲಿ - ಬದುಕು ಅಗತ್ಯಕಿಂತ ಅಧಿಕ ದೀರ್ಘವಾಗುತಿರುವ ಭಾವ ಈಗಿಲ್ಲಿ...

Monday, February 15, 2016

ಗೊಂಚಲು - ನೂರಾ ಎಂಬತ್ನಾಕು.....

ಏನೇನೋ ಹೇಳಬೇಕನ್ನಿಸಿ.....

ಆರು ವೈರಿಗಳಂತೆ,
ಒಂಭತ್ತು ರಸಗಳಂತೆ,
ನಾಲ್ಕು ಪುರುಷಾರ್ಥಗಳಂತೆ,
ಮತ್ತೆ ನಾಲಕ್ಕು ಆಶ್ರಮಗಳಂತೆ...
ಇರುವ ಐದೇ ಇಂದ್ರಿಯಗಳಲಿ ಈ ಕೆಲವನ್ನು ನಿಗ್ರಹಿಸಬೇಕಂತೆ, ಇನ್ಕೆಲವನ್ನು ನಿರ್ವಹಿಸಬೇಕಂತೆ...
ಇವುಗಳಿಂದೆಲ್ಲ ನಾಕ, ನರಕಗಳಂತೆ...
ಇವಕೆಲ್ಲ ಜನ್ಮಗಳು ಏಳಂತೆ...!!!
ಇಷ್ಟೇ -
ತೀರದ ತೀವ್ರ ಹಸಿವಿನ ಬದುಕ ಮಹಾ ಯಜ್ಞಕ್ಕೆ ಸಾವಿನ ಪ್ರಶ್ನಾತೀತ ಪೌರೋಹಿತ್ಯ...
^^^<>^^^
ಅವನು:
ಶತ ಶತಮಾನಗಳ ಮೌನ ಹೊದ್ದ ದಂಡೆ - ಅಬ್ಬರದ ಮಾತಿನ ಶರಧಿ - ಇಬ್ಬರನೂ ತಬ್ಬುವ ಬೆಳುದಿಂಗಳು ಎಲ್ಲ ಹಾಗೇ ಇವೆ...
ನಾನೋ ಬೆಳದಿಂಗಳಲ್ಲೂ ಅಡಗಲು ನೆರಳ ಮರೆಯ ಹುಡುಕುತ್ತೇನೆ ಈಗೀಗ...
ನಿನ್ನ ಕಣ್ಣ ಮೊನೆಯಲ್ಲಿನ ನನ್ನೆಡೆಗಿನ ಕರುಣೆಯ ರಂಗೋಲಿಯ ಅಳಿಸಲು ಹೇಳಿದ್ದು ನಾನೇ ನಿಜ...
ನನ್ನ ಹಸಿ ಹಸಿ ವಾಸ್ತವದ ಬಿರು ನುಡಿಗಳಿಗೆ ನೀ ನಿನ್ನ ಮೌನವ ಕಲಿಸಿದ್ದೂ ಸೂಕ್ತವೇ ಅನ್ನಿಸುತ್ತೆ ಒಮ್ಮೊಮ್ಮೆ...
ಆದರೆ ಇವೆಲ್ಲದರ ನಡುವೆ ಸ್ನೇಹದ ಒಳಮನೆಯಲ್ಲಿ ನಗು ಅಸ್ತಿತ್ವ ಕಳಕೊಂಡದ್ದು ಯಾವಾಗ ಅಥವಾ ನಗು ಇದ್ದಿದ್ದೇ ಭ್ರಮೆಯಾ...!?
ಸ್ನೇಹಗಳ ಮುಖಾ ಮುಖಿ ಮಿಲನದಲ್ಲಿ ಮಾತು ಗೈರಾದರೆ ಒಪ್ಪಬಹುದು, ಒಪ್ಪವಾದ ಮೌನವ ಅಪ್ಪಬಹುದು; ಆದರೆ ನಗುವಿನ ಹರಿವಿದು  ನಿಂತುದಾದಲ್ಲಿ ಭಾವ ಬಾಂಧವ್ಯದ ಉಸಿರು ಕಟ್ಟೀತು...
ಕಾಲವೂ ಕಾಯುತಿದೆ ನನ್ನೊಡನೆ - ಆ ನಗೆಯ ಪಾರಿಜಾತವಿಲ್ಲಿ ಮತ್ತೆ ಅರಳೀತಾ...?

ಅವಳು:
ಹೆಜ್ಜೆ ಹೆಜ್ಜೆಗೂ ಕವಲೊಡೆವ ದಾರಿ...
ಜಾಲಿಯ ಬನದಲ್ಲಿ ನೆರಳ ಹುಡುಕುವ ಪರಿ...
ನಿನ್ನ ಅಕ್ಕರೆಯ ತಂಗಾಳಿಯ ಇದಿರು ನಿಂತು ಎದೆಯ ಮೌನದ ಮೋಡವ ಕರಗಲು ಬಿಟ್ಟರೆ ಕಣ್ಣು ಜೋಗಿಯ ಎದುರು ಧುಮ್ಮಿಕ್ಕೋ ಜೋಗವಾಗುತ್ತೆ ಮತ್ತು ನಾನೇ ಸಲಹಿಕೊಂಡ ಸ್ನೇಹದೆದುರಲ್ಲೇ ಆದರೂ ಅಳುವುದೆಂದರೆ ಅಭಿಮಾನದ ಸಾವು ಎಂಬೆನ್ನ ಭ್ರಮೆಯ ಮೀರಲಾರದ ಭಯ...
ಅದಕೇ ಎನ್ನೆದೆ ತೊಟ್ಟಿಲ ಕನಸ ಕೂಸಿನ ಬಿಕ್ಕಳಿಕೆಯ ಕಥೆಯ ಎನ್ನ ಕಿವಿಯೂ ಕೇಳದಿರಲೆಂದು ಅವುಡುಗಚ್ಚಿ ಹೆಣಗುತ್ತೇನೆ...
ಹಾಗಂತ ಕರುಳ ಹಸಿ ಹುಣ್ಣನು ಮುಚ್ಚಿಟ್ಟು ಸುಳ್ಳು ನಗೆಯ ಬಣ್ಣದ ಅರಿವೆಯ ಹೊದೆಯಲಿ ಹೇಗೆ ಆತ್ಮೀಕವೆಂದು ನಾನೇ ನಂಬುವ ಸ್ನೇಹದೆದುರಲ್ಲಿ - ಅಲ್ಲದೇ ಬದುಕಿಗೆ ಮುಖವಾಡವ ತೊಡಿಸಲಾರೆ ಕಣೋ...
ನೆನಪ ಚಿತ್ತಾರಗಳ ಹೊತ್ತು ದೂರವಿದ್ದೇ ಹತ್ತಿರವೆನಿಸೋ ಬಂಧಕಿಲ್ಲಿ ಮೌನವೊಂದೆ ಆಶ್ರಯವೀಗ...
ಕಣ್ಣಲ್ಲಿ ಕಣ್ಣಿಟ್ಟು, ನೆತ್ತಿಗೆ ಕೈಯಿಟ್ಟು ಬಯಸಬೇಡ ನಗೆಹೊನಲ ಒಡನಾಟದೂಟ...
ಇದ್ದುಬಿಡಲಿ ಬಿಡು ಈ ನೇಹ ಹೀಗೇ - ಅರೆಬಿರಿದ ಹೂವಿನ ಹಾಗೆ...
 --- (ಮುಂದುವರಿದೀತು...)
^^^<>^^^
ಕೊಳಲನೂದುವ ಕರಿಯನ ಕೈಯ ಮುದ್ರೆಯುಂಗುರದ ಕಡುಗೆಂಪು ಹರಳಲ್ಲೂ ರಾಧೆಯ ಹೂವೆದೆಯ ನೀರಜ ಒಲವ ಹೊಳಪು...
^^^<>^^^
ಮನದ ಮನೆಯ ದೇವಭಾವದೊಡವೆಗಳ ಕಾವಲಿಗೆ 'ಕ್ಷಮೆ' ನಿಂತಿರುವ ತನಕ ಯಾವ ನೇಹಕೂ ಸಾವಿಲ್ಲ...
ಅಹಮಿಕೆಯ ಮೀರಿ ಕೇಳದೆಯೆ ಕೊಡುವ, ಅದೇ ಅಹಮಿಕೆಯ ಕಳಕೊಂಡು ಕೇಳಿ ಪಡೆವ ಹಿರಿದು ಭಾವವದು ಕ್ಷಮೆ...
ಎದೆಯ ಕಲ್ಯಾಣಿಯಲ್ಲಿ ಕ್ಷಮೆಯ ಒರತೆ ಬತ್ತಿದ ಮರು ಘಳಿಗೆ ಸ್ನೇಹ, ಪ್ರೀತಿ, ಪ್ರೇಮ, ಒಲುಮೆ, ಕಾಮ ಎಂಬಿತ್ಯಾದಿ ಯಾವ ಭಾವಗಳಿಗೂ ಜೀವ ಇರುವುದಿಲ್ಲ - ನನ್ನಲ್ಲೂ, ನಿನ್ನಲ್ಲೂ - ಯಾರಲ್ಲೂ...
ಕ್ಷಮೆಯ ಕಾವಲಿದ್ದಾಗ ಒಳಗುಡಿಯ ಯಾಜಮಾನ್ಯ ಪ್ರೀತಿಯದ್ದಿರುತ್ತೆ - ಕ್ಷಮೆ ಎದೆಬಾಗಿಲಿಂದಾಚೆ ಕಾಲಿಟ್ಟ ಘಳಿಗೆಯಿಂದ ಒಳಮನೆಯ ತುಂಬ ಕ್ರುದ್ಧ ಮೌನದ್ದೇ ಪಾರುಪತ್ಯ...
ಪ್ರೀತಿಯ ಕತ್ತು ಹಿಸುಕಲಾಗಿ ಕ್ಷಮೆ ಪಥ ಬದಲಾಯಿಸುತ್ತೆ - ಕ್ಷಮೆ ಕಳೆದು ಹೋಗಲಾಗಿ ಪ್ರೀತಿ ಮರುಹುಟ್ಟಿನ ಸಣ್ಣ ಶಕ್ತಿಯನ್ನೂ ಕಳೆದುಕೊಂಡು ಮರಣದೆಡೆಗೆ ಸಾಗುತ್ತೆ... 
ಇದಕಿಂತ ದೊಡ್ಡ ದುರಂತ ಇನ್ನೇನಿದೆ ಭಾವ ಬಾಂಧವ್ಯಕ್ಕೆ...
ಎಲ್ಲರೆದೆಯಲೂ ಒಂಚೂರು ಪ್ರೀತಿ ಹಸಿವು, ಒಂದಿನಿತಾದರೂ ಕ್ಷಮೆ ನಿರುದ್ದಿಶ್ಯವಾಗಿ ನಿರಂತರ ಉಸಿರಾಡಿಕೊಂಡಿರಲಿ ತಮ್ಮ ಭಾವ ಬಂಧಗಳೆಡೆಗೆ... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)