Thursday, December 24, 2015

ಗೊಂಚಲು - ಒಂದು ನೂರಾ ಎಪ್ಪತ್ತಾರು.....

ಮತ್ತಿಷ್ಟು ಬಿಡಿ ಭಾವಗಳು.....

ಕವಿತೆ - ಎದೆಯ ಕಪಾಟಿನೊಳಗೆ ಬಚ್ಚಿಟ್ಟ ಎಂದೂ ಕರಗದ ಒಲವಿನ ಒಡವೆ, ಅವಳ ನೆನಪಿನ ನಿರಂತರ ಒರತೆ...
ಬದುಕು - ಗತದ ಗತಿಯ ನೆನಪನೇ ನೇವರಿಸುತ್ತಾ ಅವಳಿಲ್ಲದೆಯೂ ನಗುತಿರುವ ಸುದೀರ್ಘ ಕವಿತೆ...
ಇದೀಗ - ಬದುಕೆಂದರೂ, ಕಪ್ಪು ಹುಡುಗಿಯೆಂದರೂ ಸಾವಿನ ಸಂಗದಲ್ಲಿ ಕಳೆದುಕೊಂಡ ಕಣ್ಣಂಚ ನಗೆಯ ಕನಸು...
^^^^^
ಜಡಿದು ಸುರಿವ ಅಡ್ಡ ಮಳೆಗೆ ನೆತ್ತಿ ಬಿರಿವಂತೆ ತೋಯ್ದರೂ, ಜೋರು ಗಾಳಿಯ ಕೊರೆವ ಛಳಿಗೆ ಒರಟು ಮೈಯಲೂ ನಡುಕವೆದ್ದರೂ ಒಳಗಿನ ಬೆಂಕಿ ಆರುವುದಿಲ್ಲ...
ಹೌದು - ಕರುಳ ಕುದಿಯ ಕ್ರುದ್ಧ ನೆನಪುಗಳಿಗೆಂದೂ ಸಾವಿಲ್ಲ...
ಅಂತೆಯೇ;
ನಿನ್ನೆಯ ಗಾಯಗಳ ಹಸಿ ರಕ್ತವ ಜೀರ್ಣಿಸಿಕೊಂಡು ಮತ್ತೆ ಹಸಿವಿಗೆ ಕೆರಳದ ಎದೆಯಲ್ಲಿ ಕನಸು ಹುಟ್ಟುವುದಿಲ್ಲ...
ನಿದಿರೆಯ ಅಡವಿಟ್ಟು, ಒಂದಿನಿತು ಕನಸುಗಳ ಸರಳ ಪಥ ಬದಲಿಸಿ ಏದುಸಿರಿನ ಕಾಲು ಹಾದಿಯಲಿ ಬೆವರಾಗಿ, ಕಣ್ಣೀರ ಕಂದಾಯ ಕಟ್ಟಿಯಾದರೂ ಬದುಕ ಗೆದ್ದುಕೊಳ್ಳದೇ ಹೋದರೆ ನನ್ನ ಕಣ್ಣ ನಗೆಯ ಶವ ಯಾತ್ರೆಗೆ ನಾನೇ ಹೆಗಲು ಕೊಡದೆ ವಿಧಿಯಿರುವುದಿಲ್ಲ...
ಸಾವಿಗೂ ನಗೆಯ ಸಾಲ ಕೊಡುವುದಾ..?
ನಗೆಯ ಸಾವಿಗೇ ಸಾಕ್ಷಿಯಾಗುವುದಾ..??
ಎತ್ತಿಡುವ ಪ್ರತಿ ಹೆಜ್ಜೆಗೂ ಮುನ್ನ ಕೇಳಿಕೊಳ್ಳಬೇಕಿದೆ ನಾನೇ ನನ್ನ - ಮನಸೇ ಯಾವುದು ನಿನ್ನ ಆಯ್ಕೆ...???
^^^^^
ಕನಸೆಂದರೆ ಮುಚ್ಚಿದ ಕಂಗಳೊಳಗೂ ಮಿರುಗುಡುವ ಬೆಳಕು...
ಹನಿದುಂಬಿದ ಕಂಗಳಲ್ಲಿ ಬೆಳಕು ಕೂಡಾ ಸದಾ ಅಸ್ಪಷ್ಟ...
ಎಷ್ಟೇ ಬೆಳೆದರೂ, ಬೆಳಕಲ್ಲಿ ನಡೆದರೂ ಲಡ್ಡಾಗಿ ಮುಡಿಯಿಂದ ಜಾರದ ಆರು ವಿಷಗಳ ಒಟ್ಟಾಗಿ ಕಟ್ಟಿರುವ 'ನಾನೆಂಬೋ ನಾರು...'
ಅಂಗಳದಲ್ಲಿ ಬೆಳದಿಂಗಳ ಸಾಯಲು ಬಿಟ್ಟು - ಹೊಸ್ತಿಲ ಹಣತೆಯ ಆರಿಸಿ ಇಟ್ಟು - ಕತ್ತಲಿಗಂಜುತ ಕಂಗಳ ಮುಚ್ಚಿ - ಒಂಟಿ ತಾನೆಂದು ಬದುಕಿಡೀ ಕನಲುತ್ತ ಕಳೆಯುವ ಸ್ವಯಂ ಕರುಣೆಯ ಪ್ರಿಯ ಮನುಜ ಪ್ರಾಣಿಗಳೆಡೆಗೆ ನಂಗೆ ಕರುಣೆಯೂ ಹುಟ್ಟದಷ್ಟು ತೀರದ ಅಸಮಾಧಾನ...
^^^^^
ಮತ್ತೆ ಮತ್ತೆ ಭಾವದ ಗೂಡು ಒಡೆಯುತ್ತಲೇ ಇರಬೇಕು - ಆ ಗಾಯವೇ ಜಡ್ಡುಗಟ್ಟಿ ನಡೆಗೆ ನಿರ್ಲಿಪ್ತಿ ಮೈಗೂಡಬೇಕು - ಅಂದಾಗ ಹದಗೊಂಡ ನಿರ್ಲಿಪ್ತಿಯೇ ಬೆಳೆದು ಸ್ಥಿತಪ್ರಜ್ಞೆಯಾದೀತು...
^^^^^
ಓ ಸ್ನೇಹವೇ - ಕನಸಿಲ್ಲದ ನನ್ನ ಕತ್ತಲ ಕಾಡು ದಾರಿಗೆ ನಿನ್ನ ಅಕ್ಕರೆಯ ತಂಪು ನೋಟವೇ ಕೈದೀವಿಗೆ...
ಈ ಎದೆ ಜೋಳಿಗೆಯ ತುಂಬಾ ನಿನ್ನ ಭರವಸೆಯ ತುಂಟ ಕಿರುನಗೆಯ ನೆನಪ ಹೋಳಿಗೆ...
ಹಗಲ ನೆರಳು, ಇರುಳ ಬೆಳಕು, ನಿನ್ನ ಆರೈಕೆಯ ಹೂದೋಟವೀ ಬದುಕು...
^^^^^
ಮಗುವ ಕಪ್ಪು ಕಂಗಳಲ್ಲಿ ನಗೆಯು ಚಂಡೆ ಮದ್ದಳೆಯಾಗಿ ಹೊಂಗನಸುಗಳ ಓಕುಳಿಯಾಟ - ಬಾಲ್ಯವದು ನೆನಪಲ್ಲಿಯೂ ಹೊಂಗೆ ನೆರಳಂಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, December 21, 2015

ಗೊಂಚಲು - ಒಂದು ನೂರಾ ಎಪ್ಪತ್ತು ಮತ್ತೈದು.....

ಅದದೇ ಬಿಡಿ ಬಿಡಿ ಭಾವಗಳು.....

ಇಂದು ಸಂಜೆ ಅಲ್ಲಲ್ಲಿ ಸುರಿದ ತುಂತುರಿನ ಪರಿಣಾಮ ಹರೆಯದೂರಿನ ಎದೆ ಕಾಲುವೆಗಳಲ್ಲಿ ಹಸಿ ಬಿಸಿ ಕನಸುಗಳ ಒಳ ಹರಿವು ದಿಢೀರ್ ಹೆಚ್ಚಾಗಿ ಪೋಲಿ ಪಲ್ಲಂಗಗಳಲ್ಲಿ ನೆಲ - ನೇಗಿಲ ಪೂಜೆಯ ಕಾರ್ಯಕ್ರಮಗಳಿಗೆ  ಚುರುಕು ಮೂಡಿರುವದರಿಂದ ಬೆವರಿನ ಪ್ರವಾಹ ಎದುರಿಸಲು ಕೋಣೆಗಳು ಸಜ್ಜಾಗುವಂತೆ ಪಡ್ಡೆಗಳ ಹವಾಮಾನ ಅಡ್ಡೆ ಸೂಚಿಸಿದೆ...
<3 <3 <3
ಮಳೆ ಹನಿದ ಮುಸ್ಸಂಜೆಯಲಿ ಅವಳ ನೇಹದ ನೆನಹಿನಾಟ ವಿಪರೀತ...
ಎನ್ನ ಹೃದಯದ ಒದ್ದೆ ಭಾವಗಳ ಗದ್ದೆಯಂಚಲಿ ಮಳೆಯ ರಾಗಕೆ ಗೆಜ್ಜೆ ಘಲಿರಿನ ಶ್ರುತಿ ಸೇರಿಸಿ ನಲಿವ ಅವಳ ಕೊರಳ ಕೊಂಕಿನ ಬಿಗುಮಾನಕೆ ಬೆಳ್ಳಕ್ಕಿ ಗೂಡಲ್ಲಿ ಮತ್ಸರದ ಹಾಡು...
ಜಗುಲಿ ಕಟ್ಟೆಯ ಪಡುವಣ ಮೂಲೇಲಿ ಗೋಡೆಗಾತು ಕೂತು ಎನ್ನೆದೆಯ  ಲಗಾಮಿಲ್ಲದ ಒಲವ ಕನವರಿಕೆಗಳ ಮಾತಿನ ಕೇಳಿಯನಾಲಿಸಿ ಮೆಲ್ಲುತಿರೋ ಆಯಿಯ ರಟ್ಟೆಗಳಲ್ಲಾಗಲೇ ತೊಟ್ಟಿಲ ತೂಗೋ ಮಧುರ ಚಡಪಡಿಕೆ...
ಅಷ್ಟಲ್ಲದೇ ಕನ್ನಡಕ ಮೇಲೇರಿಸಿಕೊಂಡು ನಾ ತನ್ನ ಮಡಿಲ ಅಂಬೆಗಾಲಿನ ಕೂಸಾಗಿದ್ದಾಗ ನನಗೆ ತೊಡಿಸಿದ್ದ ಕಂಚುಕವ ಕಪಾಟಿನ ಯಾವ ಖಾನೆಯಲ್ಲಿಟ್ಟಿದ್ದೇನೆಂದು ನೆನಪ ನೇವರಿಸಿಕೊಳ್ಳುತ್ತಾಳೆ...
ಕಪ್ಪು ಹುಡುಗಿ ಅವಳು - ಕಪ್ಪು ಮೋಡದ ತುಂಡು - ನನ್ನ ಪುಟ್ಟ ಚಾವಡಿಯ ಭರವಸೆಯ ಮೇಲ್ಛಾವಣಿಗವಳು ನಕ್ಷತ್ರ ಮಾಲೆಯಾಗುತಾಳೆ - ಆಯಿಯ ಕನಸುಗಳ ಹಿತ್ತಲಿನ ತೊಂಡೆ ಚಪ್ಪರದ ಬೇರಿಗೆ ಜೀವ ಜಲವಾಗಿ ಸುರಿಯುತಾಳೆ...
ಹೌದು, ಮಳೆ ಹನಿದ ಮುಸ್ಸಂಜೆಯಲಿ ಅವಳ ನೇಹದ ನೆನಹಿನಾಟ ವಿಪರೀತ...❤❤
<3 <3 <3
ಭುವಿಯೊಡಲ ಬೆವರ ಕಂಪಿಗೆ ಆಗಸ ಮತ್ತೇರಿ ಸುರಿಯುತಿದೆ...
ನೆನಪುಗಳು ಹಸಿವಿನಂತೆ ಬಿಟ್ಟೂ ಬಿಡದಂಗೆ ಮರಮರಳಿ ಹಾಡುತ್ತವೆ...
ನಾಭಿ ಮೂಲದಲ್ಲಿ ಮಡಿ ಮರೆತ ರಣ ಹಸಿವು...
ಕನಸಿನ ಹಕ್ಕಿಯ ರೆಕ್ಕೆಯ ತಬ್ಬಿ ಹಸಿ ಮೈಯ ಅವಳು ಬಿಸಿಯೇರಿ ನಗುತಾಳೆ...
ಮೊನ್ನೆ ತಾನೆ ಹೆಗಲ ಹಳೆಯ ಗಾಯದ ಮೇಲೆ ಮೂರುವರೆ ಮಾಸದ ಮುದ್ದು ಮಗಳು ಉಚ್ಚೆ ಹೊಯ್ದದ್ದು ಮತ್ತಿಲ್ಲಿಯೂ ಬೆಚ್ಚಗೆ ಕಾಡುತ್ತದೆ...
ಮುಂದಿನ ದಶಮಿಗೆ ಮನೆ ತುಂಬುವ ಮಗಳಿಗೆಂದೇ ಹೊಸ ಲಾಲಿಯೊಂದಕೆ ಪದ ಕಟ್ಟಬೇಕು...
ಅರೆ ಇದೇನೀಗ ಬಿಕ್ಕಳಿಕೆ - ಚಿನ್ನಿಗೆ ಹಾಲುಣಿಸುತ್ತ ಅವಳಲ್ಲಿ ಹೊಸ ಪುಳಕದಲ್ಲಿ ನನ್ನ ನೆನೆದಿರಬೇಕು...
ಅಲ್ಲವೇ - ಸಂಜೆಯೊಂದು ಇರುಳಿಗೆ ದಾಟುವ ಹಾದಿಯಲ್ಲಿ ವಿರಹಿ ಪಥಿಕನಿಗೆ ಸೋಬಾನೆಯಂತೆ ದನಿತೆರೆದು ಜಿಟಿಗುಡುವ ಮಳೆಯೊಂದು ಮಧುರ ಶಾಪ...
<3 <3 <3
ಕತ್ತಲೆಂದರೂ ಬೆಳಕೆಂದರೂ ದೀಪದ ಗರ್ಭದ ಕುಡಿಗಳೇ...
ತೆರೆದಿಟ್ಟರೆ ಬಾಗಿಲ, ಹಚ್ಚಿಟ್ಟರೆ ಹಣತೆಯ ಬಯಲು ಆಲಯವೆಲ್ಲ ಬೆಳಕೇ ಬೆಳಕು...
ಮುಚ್ಚಿಟ್ಟು ಕೂತ ಬಾಗಿಲ ವಾಡೆಯ ಮೂಲೆಯ ಸಂದಿನಿಂದ ಬೆಳಕ ಕುಡಿಯೊಂದು ಒಳ ಸೇರಲಿ - ಕತ್ತಲ ಕೋಟೆಯ ಒಡಲಿಗೂ ಬೆಳಕ ನಂಜೇರಲಿ...
ದೀಪವೆಂದರೆ ಅರಿವು - ಅರಿವೆಂದರೆ ಆತ್ಮದೆಚ್ಚರ...
ಹಬ್ಬವೆಂದರೆ ನಗು - ನಗುವೆಂದರೆ ಒಲವ ಆರೈಕೆಯ ಅಕ್ಕರದ ಕೂಸು ಕಂದಮ್ಮ...
ಪ್ರತಿ ದಿನವೂ ಹಬ್ಬವಾಗಲಿ - ಪ್ರತಿ ಘಳಿಗೆಯೂ ನಗೆಯ ಹಡೆಯಲಿ...
ಶುಭಾಶಯಗಳು...
<3 <3 <3
ಹೇ ಆತ್ಮದುರಿಯೇ -
ನಿನ್ನೂರಿನೆಡೆಗೆ ಹೊರಳುವ ದಾರಿಯಲ್ಲಿ ಯಾವ ಬೇಸರಕೂ ತಾವಿಲ್ಲ...
ಆ ಅಸೀಮ ದೂರ, ಸವೆಸಬೇಕಾದ ಒಂಟಿ ಹೆಜ್ಜೆ, ಇಕ್ಕೆಲದ ನಾಲಗೆಯ ಕುಹಕಗಳು, ನಿನ್ನೆಯ ಜಗಳದ ಮುನಿಸು, ಅರ್ಥವಾಗದೆ ಹೋದ ನಿನ್ನದದ್ಯಾವುದೋ ನಡೆಯ ಕಂಗಾಲು, ಉಹುಂ ಯಾವುದಕ್ಕೂ ಅಲ್ಲಿ ನೆರಳಿಲ್ಲ - ಅವೆಲ್ಲವೂ ನನ್ನಂತರಂಗದ ನಿನ್ನ ಸ್ನೇಹದೆಡೆಗಿನ ತುಡಿತದ ತೀವ್ರತೆಯ, ನಿಷ್ಠೆ, ನಿಯತ್ತಿನ ಬಿರುಸಿಗೆ ಆಪೋಶನವಾಗುತ್ತವೆ...
ಸಾಗರನೆಡೆಗಣ ಅದಮ್ಯ, ಅಪರಿಮಿತ ಅಥವಾ ಪರ್ಯಾಯವಿಲ್ಲದ ಸೆಳೆತದ ಉತ್ಕಟತೆಯೇ ಅಲ್ಲವಾ ನದಿಯ ಹರಿವಿನ ಮೂಲ ಶಕ್ತಿ...??
ನಾ ಇಲ್ಲಿಂದ ಹೊರಟಾಗಿದೆ - ಅಲ್ಲೆಲ್ಲೋ ನೀ ತೋಳ್ದೆರೆದು ಕಾಯ್ದಿರುವ ಸುದ್ದಿ ಈ ಜಿಟಿ ಮಳೆ, ತಂಪು ಗಾಳಿಯಲ್ಲಿ ಹಾಡಾಗಿ ಮತ್ತೆ ಮತ್ತೆ ನನ್ನ ಕರೆಯುತ್ತಿದೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, December 15, 2015

ಗೊಂಚಲು - ನೂರಾ ಎಪ್ಪತ್ನಾಕು.....

ಶುಭಾಶಯಗಳು..... 

ನನ್ನೊಳಗಿನ ಕನಸುಗಳನೆಲ್ಲ ಹೊಂಬೆಳಕಲ್ಲಿ ಮೀಯಿಸಿ, ಕಾಡಿಗೆಯ ಬೊಟ್ಟಿಟ್ಟು ಸಿಂಗರಿಸಿ ಗೆಲುವಿನಶ್ವಯಾಗಕೆ ಅಣಿಗೊಳಿಸಬೇಕಿದೆ - ಬೆಳಗಾಯಿತು...
!!!
ಒಂದು ಮುಟಿಗೆ ಬಾನ ಹೂಗಳು ಮತ್ತು ಒಂದು ಬೊಗಸೆ ಬೆಳದಿಂಗಳನು ಕಣ್ಣ ಬಟ್ಟಲಲ್ಲಿ ತುಂಬಿಕೊಂಡು ಮುಸುಕೆಳೆದುಕೊಂಡೆ... 
ಇರುಳ ಬೀದಿಯಲೀಗ ಕನಸುಗಳ ಕರಗೋತ್ಸವ...
ಶುಭರಾತ್ರಿ...
!!!
ನೆನಪು ಗೊಬ್ಬರ - ಕನಸಿನ ಹೊಸ ಚಿಗುರು - ಮತ್ತದೇ ಹಸಿ ಹಸಿ ಬೆಳಗು...ಶುಭದಿನ...
!!!
ಇರುಳ ಪ್ರಥಮ ಪಾದವಿದು ಪ್ರೇಮೋನ್ಮಾದದ ಕವಿತೆಯ ಕಸೂತಿಗೆ ದೇಹಗಳು ಹಲಗೆ ಬಳಪಗಳಾಗಿ ಕನಸಿನೂರಲ್ಲಿ ನಾವೀರ್ವರೂ ಸಲಿಗೆಯ ಸರಹದ್ದು ಮೀರುವ ಹೊತ್ತು ...
ಶುಭರಾತ್ರಿ...
!!!
ಇರುಳ ಕೌದಿಯೊಳಗಿಂದ ಇಣುಕೋ ನಿಟ್ಟುಸಿರ ಕನಸುಗಳದೂ ತಲೆ ನೇವರಿಸಿ ಶಕ್ತಿ ತುಂಬಬಲ್ಲನವ - ಕುಶಲ ಕೇಳಿ ಎದೆ ಗೂಡಿಗೊಂದಿಷ್ಟು ಕಸುವ ಸುರಿದು ಹೋಗಲು ಹೆಳವನ ಮನೆ ಬಾಗಿಲಿಗೂ ಬಂದೇ ಬರುವ - ಬೊಗಸೆ ಒಡ್ಡಿದವನ ಜೋಳಿಗೆ ತುಂಬಾ ಬೆಳಕ ಭಿಕ್ಷೆ ಅದು ದಿನಮಣಿಯ ಕರುಣೆ...
ಬೆಳಗಾಯಿತು - ಶುಭದಿನ...
!!!
ಇರುಳ ಮುಸುಕಿನೊಳಗೆ ಎದೆಗೂದಲ ಕೇದಗೆಯ ಪೊದೆಯಲ್ಲಿ ಮೂಗುತಿಯ ಮೊನೆಯಿಂದ ತನ್ನ ಹೆಸರ ಬರೆದು ನನ್ನೊಳಗಣ ಆಸೆಯ ತಾರೆಗಳಿಗೆ ಕಿಡಿ ಹೊತ್ತಿಸಿ ನಾಭಿಯಾಳದಿ ಸ್ಪೋಟಿಸೋ ಅವಳೆಂಬೋ ಮುಗಿಯದ ಕವಿತೆಯ ಕನಸಿಗೆ ಚಂದಮನ ನೆಂಟಸ್ತಿಕೆ...
ಶುಭರಾತ್ರಿ...
!!!
ರಾಧೆಯ ಮನೆಯಂಗಳದಿ ಕೃಷ್ಣ ಬೀರಿದ ಚುಕ್ಕಿ ಚೌಕಟ್ಟಿಲ್ಲದ ಪಾರಿಜಾತದ ರಂಗೋಲಿ...
ಒದ್ದೆ ಹೆರಳ ಕೊಡವುತ್ತ ಬೆಳಕಿಗೆ ಕದವ ತೆರೆದ ಗಂಧವತಿಯ ಕಣ್ಣ ಬಯಲಲ್ಲಿ ಇರುಳೆಲ್ಲ ಆ ಕರಿಯನ ಕೈಯ ಕೊಳಲಾಗಿ ನುಡಿದು ದಣಿದ ಅನುರಾಗದ ಸುವ್ವಾಲಿ...
ಹುಚ್ಚು ಜೀವನ್ಮೋಹಿಗಳ ಸನ್ನಿಧಿಯಲ್ಲಿ ಒಲವಿಗೋ ಪ್ರತೀ ಬೆಳಗಲೂ ಎದೆಯ ಹಿಗ್ಗಿನ ಪದಕವಾಗಿ ತಾ ಮತ್ತೆ ಮತ್ತೆ ಮೈನೆರೆವ ಖಯಾಲಿ...
ಶುಭದಿನ...
!!!
ನಿದಿರಮ್ಮನ ಮಡಿಲ ತುಂಬಾ ಕನಸುಗಳ ಬಿಡಿ ಬಿಡಿ ಹೂಗಳು - ನೆನಪುಗಳ ಕಣ್ಣೀರ ಕುಡಿದೂ ಅಳಿಯದೆ ಅರಳಿದ ಹೂಗಳಿಗೂ ಬಣ್ಣ ಬಣ್ಣದ ಹೊನಲಿದೆ ಅವಳಲ್ಲಿ...
ಒದ್ದೆ ದಿಂಬಿನ ಕಥೆ ಮುಸುಕಿನೊಳಗೇ ಮುಗಿದು ಹೋಗಲಿ - ಬೆಳಗಲ್ಲೂ ಹೂಗಳು ಬಾಡದಿರಲಿ...
ಶುಭರಾತ್ರಿ...
!!!
ಕರುಳು ತೂಗಿದ ಕನಸುಗಳನೆಲ್ಲ ತೊಟ್ಟಿಲಿನಿಂದೆತ್ತಿ ಒಂಚೂರು ಭರವಸೆಯ ಹಾಲನುಣಿಸಿ ಬದುಕಿಗಾಗಿ  ಯುದ್ಧಕ್ಕೆ ಅಣಿಮಾಡಿ ಬಯಲಿಗೆ ಅಟ್ಟುವುದು - ಬೆಳಕಲ್ಲೂ ಹೆಜ್ಜೆಯೂರಿ ನಿಲ್ಲಬಲ್ಲ, ಹಗಲ ಬಡಿವಾರಗಳಿಗೆ ಎದೆ ಕೊಡಬಲ್ಲ ಕಂದಮ್ಮಗಳು ಗೆದ್ದು ಬರುತ್ತವೆ - ಹಸಿವಿಲ್ಲದ, ಹದವಿಲ್ಲದ ಮರಿಗಳು ಮರೆಯಾಗಿ, ನೆನಪ ಹೊರೆಯಾಗಿ ಇರುಳ ಹನಿಯಾಗುತ್ತವೆ...
ಹಗಲೆಂದರೆ ಭರವಸೆ - ಇರುಳೆಂದರೆ ಸಾಂತ್ವನ...
ಶುಭದಿನ....

Thursday, December 10, 2015

ಗೊಂಚಲು - ನೂರೆಪ್ಪತ್ಮೂರು.....

ಸುಡುವ ಬಿಡಿ ಭಾವಗಳು.....

ಸಂಜೆ ಸೋನೆ - ಮರಳಿ ಮರಳಿ ನಿನ್ನ ನೇಹದ ನೆನಹು - ಕನಸ ಕೌದಿಯೊಳಗೆ ಕಾಡು ಸುರಗಿಯ ಕಂಪು - ಎದೆಯ ಗೂಡನಾವರಿಸಿದೆ ಹೊಡತ್ಲ ಕೆಂಡಕ್ಕೆ ಕೈಕಾಸಿದ ಸುಖದ ಬೆಚ್ಚನೆ ಭಾವ...
ಸವಿಭಾವ ನಿನ್ನಲೂ ಕನವರಿಸಿ ಸಹಕರಿಸಿದರೆ ಇರುಳ ಕಾವಲಿಯಲಿ ನಾಚಿಕೆಯ ಚಿಪ್ಪೊಡೆದು ಮೈಯ ಬೀದಿಯ ಉದ್ದಕೂ ಮುತ್ತಿನೋಕುಳಿಯಾಟ...
ಉಸಿರ ಹಾಡಿಯಲ್ಲಿ ಬಿಸಿ ಗಾಳಿ ಸುಳಿದಿರುಗಿ - ನಡುವಿನೂರಲ್ಲಿ ಸಕಾಲ ನೆರೆ...
ಅರುಣೋದಯದ ಸಾಕ್ಷಿಯಾಗಿ ಸವಿ ಸುಸ್ತಲಿ ಮೈಮುರಿವಾಗ ಜೋಡಿ ಕಂಗಳು ಬಿಡಿಗಾಸಿನ ಗೋಲಕವ ಅರಸುತ್ತವೆ - ತೊಟ್ಟಿಲ ಕೊಳ್ಳುವ ಕನಸಿಗಾಗಿ ದುಡಿದ ಮಧುರ ಇರುಳ ನೆನೆನೆನೆದು...
@@@@@
ಬಣ್ಣಗೆಟ್ಟ ಬಿಡಿ ಹೂಗಳಂಥ ನೆನಪುಗಳು - ಬಣ್ಣದ ಹಾಳೆಯ ಹೂ ಮಾಲೆಯಂಥಾ ಕನಸುಗಳು...
ಕರುಣೆ ಕಾಣದ ಹಸಿ ಹಸಿ ಮಾತು - ಕಾಲಕೂ ಕಾಡುವ ಶಾಪದಂಥಾ ಬಿಸಿ ಮೌನ...
ಎದೆಗಿಳಿಯದ ಮಳೆಯ ಹಾಡು...
ಮಲ್ಲಿಗೆ ಘಮಲಿಗೂ ಬೆವರದ ಖಾಲಿ ಖಾಲಿ ಕತ್ತಲು...
ಮುಂಬೆಳಗಿಗೆ ಬಳ್ಳು ನನಗೆಂದೇ ಕೂಗಿದ ಹಾಗಿದೆ...
(*** "ಬಳ್ಳು" - ರಾತ್ರಿ ಹೊತ್ತು ವಿಕಾರವಾಗಿ ಕೂಗೋ ಕಾಡು ಹಕ್ಕಿ; ಬೆಳಗಿನ ಜಾವ ಕೂಗಿದರೆ ಅನಿಷ್ಠ ಎಂಬುದು ನನ್ನೂರ ನಂಬಿಕೆ...)
@@@@@
ಆ ಕಣ್ಣ ಕೊಳದಲ್ಲಿ ನಗೆ ಹಾಯಿ ತೇಲಲಿ ಮತ್ತೆ ಮತ್ತೆ...
ಧನ್ವಂತರಿ ಕೇಳದಿರಲಿ ಯಾರದೇ ಕನಸುಗಳ ಒತ್ತೆ...
@@@@@
ಮತ್ತೆ ಮತ್ತದೇ ಬೆಳಕ ಬಿಂಬ ಆ ಅಕ್ಷಿ ಕಕ್ಷೆಯಲಿ ಮರಳಿ ಮೂಡಲಿ...
ಕನಸ ಕೆನ್ನೈದಿಲೆ ಅರಳೋ ಕೊಳಗಳಲ್ಲಿ ಝರಿ ಬತ್ತದಿರಲಿ...
ಧನ್ವಂತರಿಯ ಕರುಣೆಯ ಕಣ್ಣು ಎಲ್ಲಾ ಬದುಕುಗಳ ನಗುವ ಕಾಯಲಿ...
@@@@@
ಹಿಮ್ಮೇಳದ ಸಾರಥ್ಯಕ್ಕೆ ಕ್ಷುದ್ರ ನೆನಪುಗಳಷ್ಟೇ ಕೂತಿರುವಾಗ ಮುಸ್ಸಂಜೆಯ ಕನಸು, ಕನವರಿಕೆಗಳೆಲ್ಲ ಕಣ್ಣ ಹನಿಗಳ ಸಾಂಗತ್ಯದಲ್ಲಿ ಜಾರಿ ಹೋಗುತ್ತವೆ...
ಮತ್ತೊಂದು ಸಂಜೆ ಕಣ್ಣ ಹನಿಯ ಕರೆ ಉಳಿಸದ ಜೋರು ಮಳೆಗಾಗಿ ಕಾತರಿಸುತ್ತದೆ...
@@@@@
ಹಸಿವು:
ಎತ್ತಿಡುವ ಪ್ರತಿ ಹೆಜ್ಜೆಯ ತೂಕ, ಆವೇಗವನ್ನ ನಿರ್ಧರಿಸುವುದು ಆ ಹೆಜ್ಜೆ ಕರೆದೊಯ್ಯುವ ತೀರದೆಡೆಗಿನ ನನ್ನ ಹಸಿವು...
ಹಿಟ್ಟಿನ ಹಸಿವು...
ಮೋಹದ, ಕಾಮದ, ಕರ್ಮದ ಹಸಿವು...
ಪ್ರೀತಿ, ಪ್ರೇಮ, ಸ್ನೇಹವೆಂಬೋ ಭಾವಾನುಭಾವಗಳ ಹಸಿವು...
ಗೆಲುವಿನ ಹಸಿವು...
ಸೋಲಿಸುವ ಹಸಿವು...
ತರಹೇವಾರಿ ಮುಖಗಳು - ಹಸಿವಿಲ್ಲದಲ್ಲಿ ಒಲವು, ಒಡನಾಟಗಳೆಲ್ಲ ಒಣ ಮಾತಿನ ಶೃಂಗಾರಗಳಷ್ಟೇ...
ಒಟ್ಟಿನಲ್ಲಿ ನನ್ನ ನಡೆಯ ನಾಡಿಯ ಪ್ರತಿ ನುಡಿಯ ತುಡಿತವೂ ನನ್ನೊಳಗಿನ ಆ ರಾಗದೆಡೆಗಿನ ಹಸಿವಿನ ಹರಹಿನ ಕೂಸು...
ಕೊನೆಗೆ ಈ ಬದುಕು ಕೂಡಾ ಸಾವಿನಲ್ಲಿ ಮತ್ತು ಸಾವಿನಾಚೆಯ ಕರುಣೆಯೆಡೆಗಣ ಹಸಿವೇ ಇರಬೇಕು...!!!

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, December 5, 2015

ಗೊಂಚಲು - ನೂರಾ ಎಪ್ಪತ್ತೆರಡು.....

ಏನೇನೋ ಅನ್ನಿಸಿ.....

ಬದುಕೇ - ನಿನ್ನೊಲವೆಂದರೆ ಬೆತ್ತಲಿಗೂ ಅಸ್ಪಷ್ಟತೆಯ ಕರಿ ಪತ್ತಲ ಹೊದೆಸುವ ಈ ಕತ್ತಲಿನಂತೆಯೇ; ಒಳಗಿಳಿದಷ್ಟೂ ಗಾಢ, ಬಗೆದಷ್ಟೂ ನಿಗೂಢ...
***
ಎಷ್ಟೆಲ್ಲ ಭಾವಗಳ ಬಸಿರಲಿಟ್ಟುಕೊಂಡೂ ಯಾವ ಭಾವಕೂ ಸಾಕ್ಷಿ ಒದಗಿಸದು ಆ ತೀರದಲ್ಲಿನ ಮೌನ...
ಎಷ್ಟೇ ಸಿಂಗರಿಸಿಕೊಂಡು ಎದುರಾ ಎದುರಲ್ಲಿ ನರ್ತಿಸಿದರೂ ಪ್ರೀತಿ ಹುಟ್ಟಿಸದು ಪ್ರಾಮಾಣಿಕ ಭಾವದ ಸ್ರವಿಕೆಯಿಲ್ಲದ ಮಾತು...
ಮಾತಿರಲಿ, ಮೌನವೇ ಆಗಲಿ ಕರುಳ ಕರೆಯು ತೇಯ್ದ ಆಪ್ತತೆಯ ಗಂಧ ಬೆರೆತು ಅರಳುವಲ್ಲಿ ಮಾತ್ರ ಕಣ್ಣ ಹನಿಗೂ ಗಂಗೆಯ ಘನತೆ ಸಂದೀತು...
ಮಾತಿಗೂ ಮೌನಕೂ ನೇರಾ ನೇರ ಸಾಕ್ಷಿಯಾಗಿ ಸಾವಿರಾರು ಗಾವುದ ಜೊತೆ ನಡೆದರೂ ಆತ್ಮದ ಬೆಸುಗೆ ಕೂಡದ ಬಂಧ ಕಾಡುವ ಬಂಧನವೇ ಆಗುಳಿದೀತು ಉಸಿರ ಕೊನೆವರೆಗೂ...
***
ಹೆಚ್ಚಿನ ನೆನಪುಗಳು ಬಂದಳಕವಾಗಿ ಹಬ್ಬದೇ ಹೋಗಿದ್ದಿದ್ದರೆ ಕನಸ ಮರಕೆ ಗಗನವೇ ಗಮ್ಯವಾಗಿರುತಿತ್ತು...
ನಿನ್ನೆಯ ನೆನಹು ನೆರಳಾಗದಿದ್ದರೆ ಬೇಡ ಬಿಡಿ ಮುಳ್ಳಾಗಿ ಚುಚ್ಚದಿರೆ ಅಷ್ಟೇ ಸಾಕು ಅಂದರೆ ಜಾಲಿಯ ಮರಕೆ ಮುಳ್ಳೇ ಅಲಂಕಾರವಂತೆ...
ಕನಸಿಲ್ಲದ ದಾರಿಯಲಿ ಮುಂಬೆಳಗು, ಮುಸ್ಸಂಜೆ, ಸುಡು ಮಧ್ಯಾಹ್ನ, ನಟ್ಟಿರುಳು ಎಲ್ಲಕೂ ಒಂದೇ ಬಣ್ಣ...
ಇಷ್ಟಾದರೂ ಬದುಕ ಋಣ ಬಲು ಹಿರಿದು; ಕನಸಿಲ್ಲದ ಹಾದಿಯಲೂ ನೇಹಗಳ ಅರವಟ್ಟಿಗಳನಿಟ್ಟು ಸಲಹುತ್ತೆ - ಕನಸಿಲ್ಲದ ಪಯಣಕೆ ಸ್ನೇಹದ ಹಸ್ತವೇ ನೆರಳು - ಪ್ರತಿ ಹುಟ್ಟಿನ ಬೆನ್ನ ಮಚ್ಚೆಯಾಗಿ ಹುಟ್ಟಿದ ಸಾವಿನ ಹುಣ್ಣಿಗೂ ಬೆಚ್ಚದಂತೆ ನೇಹದ ನಗೆಯ ನೆರಳು ಪೊರೆಯಬಲ್ಲುದು...
ಆತ್ಮ ಸಂಗಾತಗಳಿಗೊಂದು ನಮನ..._/\_
***
ಈ ಕಣ್ಣ ಕಣಜದ ತುಂಬಾ ಎದೆಯ ತೋಟದ ಕನಸ ಬೆಳೆಯ ಬೆಳಕು ತುಂಬಿದೆ...
ಉಸಿರ ಧಾರೆ ನಿಂತ ಘಳಿಗೆಗೆ ಎದೆಯ ನೆಲ ಬರಡಾಗುವದಂತೆ...
ಉಹುಂ ದೇಹ ಕೊರಡಾದ ಮಾತ್ರಕ್ಕೆ ಆ ಕ್ಷಣಕೇ ತಾನೇನೂ ಬರಿದಾಗಿಬಿಡದು ಅಕ್ಷಿಯೆಂಬೋ ಬೆಳಕ ಅಕ್ಷಯ ಪಾತ್ರೆ...
ನಾ ನಡೆವ ಇದೇ ಹಾದಿಯ ಬದಿಯಲಿ ಕಣ್ಣ ಕೊಳಗದ ಆಸರೆಯೂ ಇಲ್ಲದ ಎಷ್ಟೆಲ್ಲಾ ಸಮೃದ್ಧ ಕನಸ ತೋಟಗಳೆದುರಾದವೋ...
ರಸ್ತೆ ದಾಟಿಸಿಯೋ, ಭಿಕ್ಷೆ ಎಸೆದೋ ಮುನ್ನಡೆದರಷ್ಟೇ ಸಾಲದು ಅನ್ನಿಸಿತು - ನೇತ್ರ ದಾನ ಮಾಡಿದೆ...
ಇಲ್ಲಿ ಬೇರು ಕಳೆದುಕೊಂಡ ಬೆಳಕು ಇನ್ಯಾರದೋ ಬದುಕ ಕನಸಿಗೆ ಉಸಿರ ತುಂಬಲೆಂಬಾಸೆಗೆ - ನನ್ನ ನೋಟಕೊಂದು ಸಾರ್ಥಕ್ಯ ಉಳಿಯಲೆಂಬ ಕನವರಿಕೆಗೆ...
ಇದ್ದೀತು ನಾನಳಿದ ಮೇಲೂ ನನ್ನ ಹಾಡು ಉಳಿಯಲೆಂಬ ದುರಾಸೆ ಕೂಡ (?)...
***
ನೋವು ಆತ್ಮ ಬಂಧು - ನಗೆಯು ಬದುಕ ಸಿಂಧು....
ಉಂಡ ಎಲ್ಲ ನೋವಿನನ್ನ ಜೀರ್ಣಗೊಂಡು ನಗೆಯ ಸಕ್ಕರೆಯಾಗಿ ಬದುಕ ಧಮನಿಗಳಲಿ ಸೇರಿ ನಾಳೆಗಳ ಬೆಳಕಾಗಿ ಸಂಚಯಿಸಲಿ...
ನೆನಪುಗಳೆಡೆಗಣ ಭಯವೇ ಕನಸ ಹಾದಿಯ ದೊಂದಿಯಾಗಲಿ...
***
ಮರುಭೂಮಿಯ ಗಾಳಿಯಲ್ಲಿ ತೇಲಿಬಿಟ್ಟ ಎನ್ನೆದೆಯ ಬೆವರ ಗಂಧ ಖರ್ಜೂರದ ಎಸಳಿನಲ್ಲಿ ನಿನ್ನ ಸೇರಿ, ಪೂರ್ವ ಜನ್ಮದ ಮಧುರ ಪಾಪದ ನೆನಹು ಕಾಡಿ, ಕಾಡಿಗೆ ಕಣ್ಣು ಮತ್ತೆ  ಮಿನುಗೀತೆಂಬ ಕನಸ ಕಾಯ್ವ ಬಂಡ ಯಾತ್ರಿಕ ನಾನು...
ಹೊಸ ಹಾಡು ಹುಟ್ಟದ ಹಾದಿಯಲ್ಲಿ ಈ ಒಂಟಿ ಪಥಿಕನ ನಿನ್ನ ಸೇರುವ ಹುಚ್ಚು ಮೋಹದ ಅದೇ ಹಳೆಯ ಕುಂಟು ಹೆಜ್ಜೆ ಗುರುತುಗಳೇ ಕವಿತೆಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, December 2, 2015

ಗೊಂಚಲು - ನೂರೆಪ್ಪತ್ತೊಂದು.....

ಎಂಥ ಚಂದ ಅವರ ಆ ಗೆಳೆತನ..... 
(ಮಧುರ ಹೊಟ್ಟೆಕಿಚ್ಚಿನೊಂದಿಗೆ... )

ಅವನೋ ಉರಿ ಮೋರೆಯ ಸುಡು ಬೆಳಕಿನ ಹುಡುಗ...
ದಿನವಿಡೀ ತನ್ನೊಳಗೆ ತಾ ಸುಟ್ಟು ಬೆಳಗುತ್ತಾನೆ ಇವಳಿಗೆಂದೇ...

ಇವಳಾದರೋ ಸುಟ್ಟಲ್ಲದೆ ಹುಟ್ಟುವುದಿಲ್ಲ ಎಂದು ನಂಬಿರುವ ಒಲವನುಟ್ಟು ಉಂಡು ನಗುವ ಹಸಿ ಮೈಯ ಹುಡುಗಿ...
ನಿತ್ಯ ಬಾಣಂತಿ ಹೆಣ್ಣಿವಳು ಆ ಬೆಂಕಿಯನೇ ಮೈಯ್ಯಾರ ಹೀರಿ ಹಸಿರಿಗೆ ಹಾಲುಣಿಸುತಾಳೆ, ಜೀವ ಜಾಲಕೆಲ್ಲ ಮಡಿಲೀಯುತಾಳೆ...

ಇವನೊಬ್ಬನಿದ್ದಾನೆ ಅವನಿಂದ ಉರಿಯನಿಷ್ಟು ಸಾಲ ತಂದು ಹಸಿ ಹಾಲಂತೆ ತಂಪಾಗಿಸಿ ಇವಳ ಹೆರಳ ತೊಳೆದು ಇವಳ ಭಾವದ ಕಡಲು ಉಕ್ಕುಕ್ಕಿ ಮೊರೆವಂತೆ ಮಾಡಿ ನಲಿವ ಬೆಳುದಿಂಗಳ ಮಾಯಕಾರ...
ಅವನ ಮತ್ತಿವಳ ನಡುವಿನ ಭಾವ ತಂತುವಂತೆ ಕಾಣುತಾನೆ...
ಅವನೇ ಇವಳ ಸುಟ್ಟ ಗಾಯಕೆ, ಹಡೆದ ನೋವಿಗೆ ತಂಪನೀಯಲು ಇವನ ನೇಮಿಸಿರಲೂಬಹುದೇನೊ...

ಅಥವಾ ಕಡು ಮೋಹಿ ಹೆಣ್ಣಿವಳು ಜೀವದ ನಡೆಗೆ ಅವನ ಸುಡು ಹೆಜ್ಜೆಯ ಜೊತೆಯಿರಲಿ, ಭಾವದ ನುಡಿಗೆ ಇವನ ತಂಪಿನ ಮಡಿಲಿರಲಿ ಎಂದು ಇವಳೇ ಈರ್ವರನೂ ಬೆಸೆದುಕೊಂಡಿರಲೂ ಸಾಕು...

ಅದೇನೇ ಇರಲಿ ಅವನು, ಇವಳು, ಇವನದು ಹುಟ್ಟಿನಿಂದಲೇ ಬೆಸೆದುಕೊಂಡ ಅಂತೆಲ್ಲಾ ಏರಿಳಿತಗಳಾಚೆಯೂ ಇಂತೆಯೇ ಉಳಕೊಂಡ ಕತ್ತಲಷ್ಟು ಆಳದ ಬೆಳಕಿನಷ್ಟು ವಿಸ್ತಾರದ ಸ್ನೇಹ...

ಆದರೂ ಯಾವುದೀ ಗಾಢ ಮೋಹವು ಒಬ್ಬರಿಗೊಬ್ಬರು ಮಾರಿಕೊಂಡವರಂತೆ ಒಬ್ಬರನೊಬ್ಬರು ಪ್ರೀತಿಸಿಕೊಳ್ಳುವಲ್ಲಿ ಕೂಡಿಕೊಂಡಿರೋ ಕೊಂಡಿ...!?
ಅವರವರೊಳಗಣ ಹುಸಿ ಮುನಿಸು ಕೂಡಾ ಪ್ರಳಯವನೇ ಸೃಷ್ಟಿಸುವ ಮೋಡಿ...!!!

ಪ್ರಕೃತಿಯೇ ನಿನಗಿದೋ ನಮನ...

Friday, November 27, 2015

ಗೊಂಚಲು - ನೂರೆಪ್ಪತ್ತು.....

ಸುಮ್ ಸುಮ್ನೆ.....
(ಅಂಗಳದಲ್ಲಿ ಆಡುತಾಳೆ ‘ಪ್ರತೀಕ್ಷಾ...’)

ಅಪ್ಪನ ತೋಳೇರಿ ಕೂಸುಮರಿಯಾಟದಲಿ
ಅಮ್ಮನ ಅಣಕಿಸುತ್ತಾ
ಮನೆ ಮನಸ ಬೆಳಗುತಿದೆ
ನಗೆಯ ಮರಿ ಮಿಂಚು...
ಕೂಸಿನ ಕಣ್ಣ ಬಯಲಲ್ಲಿ
ಚಂದಿರ - ಚುಕ್ಕಿಯರು ಹೊಳೆವ,
ಮಿಂದ ಮೈಯಲಿ ಪಾರಿಜಾತವು ಘಮಿಸುವ ಕಥೆಯ ಹೇಳಲೇನು ಕೇಳ...

ಅಂದು -
ಮಾತು ಒಗ್ಗದ ಕಪ್ಪು ಹುಡುಗಿ
ಅಧರಕೆ ಸ್ವೇಚ್ಛೆಯನಿತ್ತು
ಮುತ್ತಲ್ಲಿ ಕೆತ್ತಿದ ಕವಿತೆ
ಎನ್ನೆದೆಯ ಬಯಲ ಮಾಸದ ಮಚ್ಚೆಯಾಗಿ ಉಳಿದ, 
ಒಲವ ಉಡುಗೊರೆಯ ಹಸಿ ನೆನಪ ಒಡವೆಯಾಗಿ ಮೆರೆಯುತಿರುವ 
ಮಧುರ ಪಾಪದ ಕಥೆಯ ಹೇಳಲೇನು ಕೇಳ...

ಅವಳು - ಎನ್ನ ಆ ಕಪ್ಪು ಹುಡುಗಿ
ಎನ್ನ ಕೊರಳ ಹಾರವಾಗಿ
ನಾಚಿಕೆಯ ತೆರೆಯ ಮೀರಿ
ಎನ್ನೀ ಕೈಗಳ ವೀಣೆಯಾಗಿ
ಚಂದ್ರ - ತಾರೆ ಸಾಕ್ಷಿಯಾಗಿ
ಸೀಮಂತದ ಕನಸಿನಲ್ಲಿ ತವರೂರ ದಾರಿಯ ನೆನೆದ 
ಸಿರಿವಂತ ಇರುಳ ಕಥೆಯ ಹೇಳಲೇನು ಕೇಳ...

ಅಂಗಳದಂಚಿನ ಪಾರಿಜಾತ ಚೆಲ್ಲಿದ ಕಟ್ಟೆಯ ಮಧು ಮಂಚವಾಗಿಸಿ
ತೊಡೆಯ ಸಿಂಹಾಸನವನೇರಿ
ಬೆಳುದಿಂಗಳ ಮಿಂದು
ಹುಚ್ಚು ಹಸಿವಲ್ಲಿ ಹಿತವೇರಿ ಬೆಂದು
ಅರಳಿ ಉದುರುವ ಪಾರಿಜಾತದಂತೆಯೇ ಅವಳೂ ಅರಳಿ
ಬೆವರ ಖೋಡಿಯಾದ ಬೆತ್ತಲಿಂದು
ಬೆಳದಿಂಗಳನೇ ಹೆತ್ತ ಕಥೆಯ ಹೇಳಲೇನು ಕೇಳ...

ಅಪ್ಪನ ತೋಳೇರಿ ಕೂಸುಮರಿಯಾಟದಲಿ
ಅಮ್ಮನ ಅಣಕಿಸುತ್ತಾ
ಮನೆ ಮನಸ ಬೆಳಗುತಿದೆ
ನಗೆಯ ಮರಿ ಮಿಂಚು...
ಕೂಸಿನ ಕಣ್ಣ ಬಯಲಲ್ಲಿ
ಚಂದಿರ, ತಾರೆಯರು ಹೊಳೆವ
ಮಿಂದ ಮೈಯಲಿ ಪಾರಿಜಾತವು ಘಮಿಸುವ ಕಥೆಯ ಮತ್ತೆ ಹೇಳಲೇನು ಕೇಳ...

Saturday, November 21, 2015

ಗೊಂಚಲು - ನೂರು + ಅರವತ್ತು + ಒಂಬತ್ತು.....

ಹಂಗೇ ಸುಮ್ಮನೆ ಹಿಂಗೆಲ್ಲ ಅನ್ನಿಸ್ತದೆ.....

ಹೆಜ್ಜೆ ಎತ್ತಿಡದಂತೆ ಎದೆಯ ಹಿಂಡುವ ಛಳಿ (!) - ನಿನ್ನೆಡೆಗಿನ ಹಸಿವು ಹಾಗೇ ಉಳಿದು ಹೋದ ನೆನಪಿನ ಸುಳಿ - ಕನಸು ಕಳೆದು ಹೋದ ದಾರಿಯ ತುಂಬಾ ಇತಿಹಾಸದ ವೈಭವದ ಅಸ್ಥಿಯ ತುಂಡುಗಳು - ಕರೆಯೋಲೆಯ ದಕ್ಷಿಣ ಮೂಲೆಯಲ್ಲಿ ವಿಳಾಸ ಬರೆದು ಚಿತ್ರಗುಪ್ತ ನಟಿಗೆ ಮುರಿದ ಸದ್ದು - ಸಾವೆಂಬೋ ಅರೆಹುಚ್ಚು ಕುಂಬಾರನ ಒರಟು ಕೈಗಳಲ್ಲಿ ಅರ್ಧಂಬರ್ದ ಅರಳಿದ ಬದುಕೆಂಬೀ ಒಗಟೊಗಟು ಚಿತ್ತಾರದ ಮಡಕೆ...
@@@
ಕನಸುಗಳ ಹೊತ್ತಗೆಯ ಎದೆಗವುಚಿಕೊಂಡು, ಧಮನಿಯೊಳಗೇಳುವ ಹೊಸ ಭಾವ ಪುಳಕಗಳ ಹಿತದಮಲಿನಲ್ಲಿ ನಾಳೆಯೊಂದಿಗೆ ಪಿಸುನುಡಿಯನಾಡುತ್ತ ಜಿಗಿ ಜಿಗಿದು ನಡೆವಾಗ, ಜೀರ್ಣವಾಗದೇ ಉಳಿದ ಒಂದ್ಯಾವುದೋ ಹಳೆಯ ಬಿಕ್ಕಿನ ಹಾಡು ಸಣ್ಣ ಕರುಳಿಂದೆದ್ದು  ಗೋನಾಳಕೆ ಚುಚ್ಚಿ ಕಣ್ಣ ಮೊನೆಯ ಹನಿಯಾಗಿ ಇಳಿದು ಕನಸುಗಳೆಲ್ಲ ಬಣ್ಣ ಕಳಕೊಂಡು ಸಂಜೆಯೊಂದು ಇರುಳಿಗೆ ಜಾರುತ್ತದೆ...
ಇಂದು ನಾಳೆಗೆ ದಾಟುವಾಗ ನಿನ್ನೆ ಜೀರ್ಣವಾಗಬೇಕೇನೋ ಮರೆವು ವರವಾಗಿ ನಾಳೆ ಹೊಸತಾಗಿ ನಗಲು...
ಕನಸಿಗೆ ಬಲ ತುಂಬೋ ಅಲ್ಲಲ್ಲಿ ಉಲಿದಿದ್ದ ಸವಿ ನೆನಪುಗಳೂ ಅಳಿಸಿಹೋದಾವು - ಅವನಷ್ಟೇ ಉಳಿಸಿಕೊಂಬ ಆಸೆಯಾಚೆಯೂ ಮರೆವೆಯೇ ಹಿತವೇನೋ ಕೆಲ ಬದುಕುಗಳಿಗೆ...
@@@
...ನೋವಿನ ತಂಟೆ, ತಕರಾರುಗಳ್ಯಾವುದೂ ಇಲ್ಲದ ಸಂತೃಪ್ತ ಸಾವು - ಈ ಬದುಕಿನ ಅತಿ ದೊಡ್ಡ ಹಸಿವು ಮತ್ತು ಅಷ್ಟೇ ದೊಡ್ಡ ಭ್ರಮೆ ಕೂಡಾ...
@@@
ನಿನ್ನೆಗಳೇ ನಿಮ್ಮ ಕರುಳ ತಿಜೂರಿಯಲಿ ಕರಗದೇ ಉಳಿದ ನೆನಪುಗಳ ಖಾತೆಯಿಂದ ಹೇಗಾದರೂ ಹೊಂಚಿ ಒಂದಿನಿತು ನಗೆಯ ಸಾಲ ಕೊಡಿ...
ಅದರ ಕಿಡಿಯಿಂದ ಸೂಡಿ ಹಚ್ಚಿಕೊಂಡು ಈ ನಿಶೀತವ ದಾಟಿ ಆ ನಾಳೆಯ ಸೇರಿಕೊಳ್ಳುತ್ತೇನೆ...
ನೆನಪುಗಳಲಿ ನಗೆಯ ಹುಡುಕೋ ಯತ್ನದಲಿ ಕಿಂಚಿತ್ ಯಶ ಸಿಕ್ಕರೂ ಅಲ್ಲೆಲ್ಲೋ ಹೊಂಚಿ ಕೂತ ಅಂತಕನ ಕೈಗೂ ಒಂದು ಹಿಡಿಯಷ್ಟು ನಗೆಯನೇ ಸುರಿದು ಬದುಕ ಕರುಣೆಯ ಋಣ ಇನಿತಾದರೂ ಹರಿದುಕೊಳ್ಳುವಾಸೆಯಿದೆ...
@@@
ಯಾವ ಮಡಿಲಲ್ಲಿ ಕರುಣೆ ಕೆಡುಕೆನಿಸದೇ ಕರುಳ ವೇದನೆ ಕಣ್ಣ ಕನಿಯಾಗಿ ಹರಿವುದೂ ಸರಾಗವೋ - ಯಾರ ಎದುರಲ್ಲಿ ಬುದ್ಧಿಯ ಕಟ್ಟಳೆಗಳೆಲ್ಲ ಮುರಿದು, ನಾನೆಂಬೋ ಹುಸಿ ಹಿರಿತನದ ಸೊಕ್ಕೆಲ್ಲ ಅಳಿದು, ಮರುಳ ಪೊರೆಗಳೆಲ್ಲ ಕಳೆದು ನಿಗಿ ನಿಗಿಯಾಗಿ ಮನಸಿದು ಬತ್ತಲಾಗಬಲ್ಲುದೋ - ಆ ತೀರದಾಚೆಯೆಲ್ಲೋ ನನಗೆಂದೇ ಒಲವಿನಂಗಡಿಯ ಕದ ತೆರೆದು ಕೂತ ಯಾವ ಜೀವದ ಒಂದು ಮುಗುಳ್ನಗೆ, ಒಂದೇ ಒಂದು ಅಕ್ಕರೆಯ ಹಾರೈಕೆ ಎನ್ನಲ್ಲಿಯ ಸೋತ ಕನಸೊಂದರ ಹೆಜ್ಜೆಯ ಜಾಡು ಬದಲಿಸಿ ನಡೆಯ ಬಸಿರ ಪೊರೆಯಬಲ್ಲುದೋ - ಅಂಥದೊಂದೇ ಒಂದಾದರೂ ಹೆಗಲಿನ ಸ್ನೇಹ ಸನ್ನಿಧಿ ಎಲ್ಲರಿಗೂ ದಕ್ಕಿ ಪ್ರತಿ ಬದುಕನೂ ಕಾಯಲಿ - ಉಹುಂ, ಅಷ್ಟೇ ಅಲ್ಲ; ಈ ಉಸಿರ ಹಾಡು ನಿಲ್ಲುವ ಮುನ್ನ ಒಂದಾದರೂ ಜೀವಕ್ಕೆ ಒಂದರೆ ಘಳಿಗೆಯಾದರೂ ಆ ಭಾವ ಸನ್ನಿಧಿಯ ತುಂಬಿಕೊಡಬಲ್ಲ ಶಕ್ತಿ ಎನ್ನ ಹೆಗಲಲೂ ಸಂಚಯಿಸಲಿ...
ಹೇಳಬೇಕಿದ್ದದ್ದು ಇಷ್ಟೇ; ಆತ್ಮ ಸಾಂಗತ್ಯದ ಶೃಂಗಾರ ಸಿರಿಯಲ್ಲಿ ಬದುಕ ಬವಣೆಗಳೆಲ್ಲ ಕತ್ತಲ ಕುಹರದಲ್ಲಡಗಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, November 18, 2015

ಗೊಂಚಲು - ಒಂದು ನೂರಾ ಅರವತ್ತೆಂಟು.....

ಶಾನೆ ಕಷ್ಟಾ - ಗೆಳೆಯನಾಗೋದೂಂದ್ರೆ.....

ಆದರೂ,
ನೋವಲ್ಲಿ ತಬ್ಬಿ - ನಗೆಯಾಗಿ ಹಬ್ಬಿ - ಕರುಣೆಯ ಕರುಳಿರದ ನಿಗೂಢ ತಿರುವುಗಳ ಹಾದಿಯ ಏದುಸಿರ ನಡಿಗೆಗೆ ಜೊತೆಯಿರಲು ಹವಣಿಸುವ ಒಂದಾದರೂ ನೇಹ ಎಲ್ಲರ ಬದುಕ ಜೋಳಿಗೆಯಲ್ಲಿರಲಿ...

ನನಗಾಗಿ ಬರೀ ಹಿತವನ್ನಷ್ಟೇ ಆಡುವವನು ಹಿತೈಷಿಯಾದಾನು ಆದರೆ ಗೆಳೆಯನಾಗಲಾರ...
ನನ್ನೊಳಗಿನ ಹುಳುಕನ್ನಷ್ಟೇ ಕಾಣುವವನು ವಿರೋಧಿಯಾಗ್ತಾನೆ ಗೆಳೆಯನಾಗಲಾರ...
ನನ್ನೆಲ್ಲ ಭಾವಗಳಲ್ಲಿ ಏಕೀಭವಿಸುವಾಸೆಯಲ್ಲಿ ಪ್ರೇಮಿ ಹುಟ್ಟಿಯಾನು ಗೆಳೆಯನಲ್ಲ..
ಅಂದದ ಆಸೆಯ ಬೆನ್ನತ್ತಿ ಬಂದವನು ಹೆಚ್ಚೆಂದರೆ ಉನ್ಮಾದವನಿಳಿಸಿ ಹೋದಾನು ಕಾಲವೂ ಗೆಳೆಯನಾಗುಳಿಯಲಾರ...
ಕಿವಿಗಿಂಪೆನಿಸೋ ಬಂಧದ ಹೆಸರು ಕೂಗಿ ಜೊತೆ ಬರಲು ಅಣಿಯಾದವ ದಾರಿಯ ದೂರದ ಬೇಸರಕೆ ಒಂದಿನಿತು ಮಾತಿನ ಸರಕಾದಾನು ವಿನಃ ಎದೆಯಲಿಳಿದು ಉಳಿವ ಸ್ನೇಹವಾಗಲಾರ...
ನಗೆಯನಷ್ಟೇ ಅರುಹುವವನು ಎತ್ತರವನುಳಿಸಿಕೊಂಡು ದೇವನಂತಾದಾನು - ದೇವರು ಆದರ್ಶವಷ್ಟೇ ಗೆಳೆಯನಲ್ಲ, ನಗೆಯಲಷ್ಟೇ ಬಳಿ ಬರುವಾತ ಖುಷಿಯಲಷ್ಟೇ ಜೊತೆಯಾಗಿ ವಿದೂಷಕ ಅನ್ನಿಸಿಬಿಟ್ಟಾನು – ಪ್ರತಿಕೂಲಕ್ಕೂ ಜೊತೆ ನಿಲ್ಲಬಲ್ಲ ಆಸ್ಥೆಯ ಒಕ್ಕಲಾದ ಅಕ್ಕರೆಯ ಸ್ನೇಹಿಯಾಗಲಾರ...
ನೋವನಷ್ಟೇ ಮಾರುವಾತ ಅಳುವನಷ್ಟೇ ಉಳಿಸಿ ಕರುಣೆಯ ಪಾತ್ರವಷ್ಟೇ ಆದಾನು – ಕರುಣೆ ಹಿರಿತನವ ಕೊಟ್ಟೀತು ಸ್ನೇಹ ಭಾವವನಲ್ಲ...

ಗೆಳೆಯನಾಗುವುದೆಂದರೆ:
ಏನೂ ಆಗದಂತಿದ್ದು ಎಲ್ಲವನ್ನೂ ಒಳಗೊಳ್ಳುವಾತನಾಗುವುದು - ನೋವನೂ ನಗುವನೂ ಸಹ ಪಂಕ್ತಿಯಲಿ ಕೂತು ಉಣ್ಣುವುದು...

ಹಿತದ ಹಾರೈಕೆಯಲಿ ಕೆನ್ನೆ ತಟ್ಟಿ,
ನನ್ನೆಲ್ಲ ಹುಳುಕುಗಳ ಮೊದಲಾಗಿ ಗುರುತಿಸಿ ಕಿವಿ ಹಿಂಡಿ,
ವಿರೋಧವಿದ್ದೂ ನನ್ನೆಲ್ಲ ಭಾವಗಳ ಒಳಗೆಳಕೊಂಡು ಗೌರವಿಸಿ,
ಅಂದದ ವಿಕಲತೆಗೂ ಭಾವದ ಚಂದನವ ತೇಯ್ದ ಗಂಧ ಬಳಿಯುತ್ತಾ ನನ್ನ ನಾ ಪ್ರೀತಿಸಿಕೊಳ್ಳಲು ಪ್ರೇರಕ ಶಕ್ತಿಯಾಗುತ್ತಾ,
ಎತ್ತರಗಳ ಹಂಗು ತೊರೆದು ಬಳಿ ಕೂತು ನಕ್ಕು ನಲಿದು ನಲಿಸಿ ಅನುಗಾಲ ನಗೆಯ ಉಲಿಯನುಳಿಸಿ -  ಪ್ರತಿಕೂಲದಲಿ ಎಂಥ ದಾಳಿಗೂ ಎನಗಾಗಿ ಎದೆಯೊಡ್ಡಿ ನಿಂತು ಆಸರೆಯ ನೆರಳಾಗುವ ಆಸ್ಥೆಯ ಕರುಳ ಜೋಗುಳವಾಗೋ,
ಇರುವಲ್ಲಿಂದಲೇ ನನ್ನ ನೋವಿಗೆ ಸಾಂತ್ವನದ ಹೆಗಲಾಗುತ್ತಾ – ತನ್ನ ನೋವಿಗೆ ಮಗುವಂತೆ ಎನ್ನದೇ ಮಡಿಲ ಸೇರುವ ಹಸಿ ಮನದ ಜೀವಿಯಾಗುವುದು...
ನೋವಿಗೆ ಅಳುವಿಗೆ ನಂಬಿಕೆಯ ಕಿವಿಯಾಗದೆ - ನಗೆಯ ಹಸಿವಿಗೆ ಬಡಿಸಿದನ್ನವಾಗದೆ - ನೇಹದಾಲಯಕೆ ಧಣಿಯಾಗುವುದೆಂತು...

ಅಹುದು,
ಶಾನೆ ಕಷ್ಟವೇ ಇನ್ನಾರದೋ ನೆನಪು ಕನಸುಗಳ ನಡಿಗೆಗೆ ಪರಿಪೂರಕ ನಗೆಯ ಹೆಜ್ಜೆಯಾಗುವುದು...
ಒಬ್ಬರ ಮಡಿಲಲೊಬ್ಬರು ಭಾವದಿ ಬಯಲಾಗದೆ ಇದು ಸುಲಭವಲ್ಲ...
ಬಯಲು ಗೌಪ್ಯತೆಯನುಳಿಸುವುದಿಲ್ಲ, ಮುಚ್ಚಿಡದೇ ಕುತೂಹಲವಿಲ್ಲ...
ಇರಲಿ ಒಂದಷ್ಟು ಕುತೂಹಲಗಳು, ಕಾದಿಟ್ಟುಕೊಂಡಿರಿ ಒಂಚೂರು ಮೌನವ ಅಂದವರಿದ್ದಾರೆ...
ಆದರೆ ಮೌನ ಮತ್ತು ಗೌಪ್ಯತೆ ಕುತೂಹಲವನುಳಿಸಲು ಬೇಕಷ್ಟೇ ಇದ್ದರೆ ಚಂದ, ಅದಲ್ಲದೇ ನಿಗೂಢವೆನಿಸಿ ಭಯವ ಹುಟ್ಟುಹಾಕಿದರೆ...
ಸ್ನೇಹ ಪ್ರೀತಿಯಲ್ಲರಳಬೇಕಲ್ಲವಾ ಭಯದಲ್ಲಿ ನರಳದೇ...
ಒಬ್ಬರಲ್ಲಿ ಭಯವಿಲ್ಲದೆ, ಭಯವನುಳಿಸದೇ ಬಯಲಾಗುವ ಮಟ್ಟಿಗೆ ನಂಬಿಕೆಯ ತುಂಬಿ ಆಪ್ತತೆಯ ಬೆಳೆಸುಸುದು ಹಾಗೂ ಗಳಿಸುವುದು ಅದು ದೊಡ್ಡ ವ್ಯಕ್ತಿತ್ವದ ಮಾತು...
ಇಲ್ಲ -
ಸುಲಭವೇನಲ್ಲ ಆತ್ಮದ ಗೆಳೆಯನಾಗುವುದು...

ಆದರೂ,
ನೋವಲ್ಲಿ ತಬ್ಬಿ - ನಗೆಯಾಗಿ ಹಬ್ಬಿ - ಕರುಣೆಯ ಕರುಳಿರದ ನಿಗೂಢ ತಿರುವುಗಳ ಹಾದಿಯ ಏದುಸಿರ ನಡಿಗೆಗೆ ಜೊತೆಯಿರಲು ಹವಣಿಸುವ ಒಂದಾದರೂ ನೇಹ ಎಲ್ಲರ ಬದುಕ ಜೋಳಿಗೆಯಲ್ಲಿರಲಿ - ನಿದಿರೆಯಿಲ್ಲದ ಇರುಳಿಗೆ ನೆಲಕುರುಳೋ ತಾರೆಯ ತೋರಿ ಸುಳ್ಳೇ ಭರವಸೆಯ ನಗೆಯ ಜೋಗುಳವಾಗಲು...

Saturday, November 14, 2015

ಗೊಂಚಲು - ನೂರಾ ಅರವತ್ತೇಳು.....

ಏನೋ ಒಂದಿಷ್ಟು.....


ಹೌದು - ಬಾಲ್ಯವೆಂದರೆ ಬರೀ ನಗೆಯ ನೆನಪಷ್ಟೇ ಅಲ್ಲ...
ಆದರೆ ಸ್ವಚ್ಛಂದ ಹಾಗೂ ಪ್ರಾಮಾಣಿಕ ನಗೆಯ ನೆನಪಷ್ಟೂ ಅಲ್ಲಿಯೇ ಗುಡಿಯ ಕಟ್ಟಿಕೊಂಡಿದೆ...
ನಗುವಿನೆಡೆಗೊಂದು ಮಂಗ ಹಿಡಿತದ ಒಲವ ಸಲಹಿಕೊಂಡರೆ ಎಂಥ ಗಾಯದ ನೋವನೂ ಸಲೀಸಾಗಿ ದಾಟಬಹುದು ಎಂಬ ಸರಳ ಸತ್ಯವ ಹೇಳಿಕೊಟ್ಟದ್ದೂ ಅದೇ ಬಾಲ್ಯವೇ...
ಬೆಳೆದೆನೆಂದು ಬೀಗುತ್ತಾ ತೋಳೇರಿಸೋ ಹೊತ್ತಲ್ಲಿ ಅಲ್ಲಿಯೇ ಬಿಟ್ಟು ಬಂದ ಮುಗ್ಧತೆಯ ಮತ್ತೆ ನೆನೆದು ಒಂಚೂರು ಮನುಜರಾಗೋ ಸೌಜನ್ಯ ಮತ್ತು ಮಗು ಭಾವದ ನಗುವೊಂದು ಎಲ್ಲರ ಎದೆಯಲೂ ಅರಳಲಿ...
ಮನೆಯಂಗಳದಿ ಕನಸ ಕಂದ 'ಪ್ರತೀಕ್ಷಾ' ಆಡುತಿರುವ ಭಾವದಲ್ಲಿ ಮೆದುವಾಗುತ್ತಾ - ಶುಭಾಶಯಗಳು...❤ ❤
***
ಪ್ರಜ್ಞೆಯ ಎತ್ತರ, ಭಾವದ ಆಳ ಎರಡೂ ಒಟ್ಟಾಗಿ ನಗುವುದು ತೀರಾ ತೀರಾ ವಿರಳ...
ಆತ್ಮದಲ್ಲಿ ಅಖಂಡ ಪ್ರೇಮವಿಲ್ಲದೇ ಕಣ್ಣಲ್ಲಿ ಹನಿ ಹುಟ್ಟಲಾರದೇನೋ - ಹುಟ್ಟಿದಲ್ಲಿ ಅದು ಹೆಣದ ವಾಸನೆಯಂತೆ ಅಸಹನೀಯ...
ಅಲ್ಲಲ್ಲಿ ಕೈಕುಲುಕೋ ಅಪವಾದಗಳಂಥ ಪ್ರಜ್ಞೆಯ ಎತ್ತರವ ನಗುವಲ್ಲೂ, ಭಾವದಾಳವ ಮೌನದಿಂದಲೂ ಮುಚ್ಚಿಡುವ, ಎದೆಯ ಹನಿಗಳನು ಪಾಲ್ತು ಫಾಲ್ತು ಮಾತುಗಳಿಂದ ಒಳಗೇ ಇಂಗಿಸಿಕೊಳ್ಳುವ ಶ್ರೀಮಂತ ಹೃದಯಗಳ ಸ್ನೇಹ ಸನ್ನಿಧಿ ಇನ್ನಷ್ಟು ಮತ್ತಷ್ಟು ದಕ್ಕಲಿ ಎನಗೆ...
***
ಮೊದಲ ಹೆಜ್ಜೆಗೆ ಪ್ರೀತಿ ಶಕ್ತಿಯಾಗಿ ನಡಿಗೆ ಕಲಿಸಿದವಳ ಹೆಜ್ಜೆ ನಡುಗುವ ಹೊತ್ತಲ್ಲಿ ತುಸು ಕೈ ನೀಡಬಲ್ಲೆನಾದರೆ ಬದುಕ ಋಣ ಅಷ್ಟಾದರೂ ಸಂದಂತೆ ಲೆಕ್ಕ...
***
ನೋವು, ನಗುವು - ಒಂದರ ನೆರಳು ಇನ್ನೊಂದು...
ಪರಿಸ್ಥಿತಿಯ ಮೇಲಾಟದಲ್ಲಿ ಈ ಕ್ಷಣ ಮತ್ತು ಈ ಕ್ಷಣದ ಗೆಲುವು ಮಾತ್ರ ನಿರ್ಣಾಯಕ ಎದೆಯ ಹಾಡಿನ ಯಾವ ಭಾವದ ನೆರಳು ಯಾವುದೆಂಬುದಕೆ...
ಸದಾ ಕೂಸುಮರಿಯಾಟ ಬೆನ್ನು ತಬ್ಬಿಯೇ ಹುಟ್ಟಿದ ಭಾವಗಳದ್ದು...
ನೋವು ನಗುವಿನ ಬೆನ್ನಿಗಂಟಿದ ಶಾಪ - ನಗುವು ನೋವಿನ ಮಡಿಲ ಶ್ರೀಮಂತ ಕೂಸು...
***
ಪ್ರಶ್ನೆ:
ಆ ಬಂಧ ನಿಂಗೇನು...?
ತಡಕಾಟವಿಲ್ಲದ ನೇರ ಉತ್ತರ:
ಏನೂ ಅಲ್ಲ ಮತ್ತು ಎಲ್ಲವೂ ಹೌದು...
ಅದು ಬದುಕು ಮತ್ತಾಸಾವಿನ ನಡುವೆಯ ಸಾಮರಸ್ಯದಂಥಾ ಭಾವ ಬಾಂಧವ್ಯ...
ಬದುಕ ವಿಜ್ರಂಭಣೆಯಲ್ಲಿ ಸಾವಿನ ಶ್ರೀಮಂತಿಕೆ - ಸಾವಿನ ಅಸ್ತಿತ್ವದಲ್ಲಿ ಬದುಕಿಗೆ ಫಲವಂತಿಕೆ ಇದ್ದಂತೆ...
ನಿರ್ಬಂಧಗಳ ಮೀರಿದ ನೀರ ಹರಿವಿನಂತೆ ಈ ಮನ ಮನಗಳ ನಡುವೆಯ ಪ್ರೀತಿ...
***
ಅವಳಂತಾಳೆ : ತೀವ್ರ ಆತ್ಮೀಕತೆ ಭಯ ಮೂಡಿಸುತ್ತೆ ಕಣೋ ಈಗೀಗ - ಆದ್ರೂ ಪ್ರತಿ ಜಗಳದ ನಂತ್ರಾನೂ ಪ್ರೀತಿ ತುಸು ಹೆಚ್ಚೇ ಆಗುತ್ತೆ - ಈ ಹೃದಯದ ಜಾದೂ ಅರ್ಥವೇ ಆಗಲ್ಲ...!!!
ನಿಜದ ಆತ್ಮೀಯತೆ ಮನಕೆ ಗೆಲುವ ತುಂಬುತ್ತೆ - ಭಯವೂ ಗೆಲುವಿನ ಆಕರವೇ ಅಲ್ಲವಾ - ಜಗಳವೂ ಆತ್ಮದ ಒಲವಿನ ಮೂಲವೇ ಆದೀತು ಆತ್ಮೀಯತೆ ಮನದ ಪ್ರಾಮಾಣಿಕ ಅಭಿಲಾಷೆಯಾಗಿದ್ದಾಗ - ಮೋಡ ಸೂರ್ಯನನ್ನಲ್ಲ ಚಂದಿರನನ್ನೂ ಮುಚ್ಚಿಡಲಾರದಲ್ಲವಾ ಬಹುಕಾಲ - ಹೃದಯದ ಜಾದುವಿನ ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲವೂ ಪ್ರೀತಿಯೇ ಮತ್ತು ಪ್ರೀತಿಯೊಂದೇ; ಇದು ಎನ್ನೆದೆಯ ಪಿಸುಮಾತು...
ಪ್ರೀತಿಯ ನಮನಗಳು ಹೃದಯವಂತ ಸ್ನೇಹಿಗಳಿಗೆಲ್ಲ...❤ ❤ ❤

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, November 2, 2015

ಗೊಂಚಲು - ನೂರಾ ಅರವತ್ತರ ಮೇಲಾರು.....

ಮನದ ಖಜಾನೆಯಿಂದ.....
(ಹೀಗೆ ಬಂದು ಹಾಗೆ ಹೋಗುವ ಸಂಚಾರಿ ಭಾವಗಳು...)

ಇರುಳು ಮತ್ತು ನೆನಪುಗಳು ಸಂಭಾಷಣೆಗಿಳಿಯುತ್ತವೆ...
ಹನಿಗಳ ಹೀರಿಕೊಳ್ಳುತ್ತಾ ದಿಂಬು ಕಣ್ಣುಗಳ ಸಮಾಧಾನಿಸುತ್ತೆ...
ನೋವ ಕರಗಿಸಿಕೊಂಡು ಅಷ್ಟಿಷ್ಟು ಹಗುರಾದ ಮನಸು ಹಾಗೂ ಕನಸ ಸಲಹಿಕೊಂಡು ಒಂಚೂರು ಉಸಿರೆಳೆದುಕೊಳ್ಳಲು ತಾವು ಸಿಕ್ಕ ಪ್ರಜ್ಞೆ; ಎರಡರ ನಡುವೆಯ ಅನುಸಂಧಾನದಿಂದ ಮುಂಬೆಳಗಿಗೆ ದಕ್ಕಿದ ಕೊಡುಗೆ - ಅರೆಬರೆ ಪ್ರಶಾಂತ ನಗು...
ನಗುವೆಂದರೆ ಕನಸಿನ ಗೆಲುವಿನ ಭರವಸೆ...
ಬದುಕ ಗೆಲುವೆಂದರೆ ಇಷ್ಟೇ ಅಲ್ಲವಾ - ಹಗಲು, ಇರುಳಿನ ಸಮನ್ವಯ...
!!!
ದೇವನಾಗುವ ಬಯಕೆ - 
ಮೈಯ ತುಂಬ ರಕ್ಕಸ ರಕ್ತ - 
ಕೊನೇ ಪಕ್ಷ ಮನುಷ್ಯನೂ ಆಗಲು ಬಿಡದ ವ್ಯಾರ್ಘ ದೌರ್ಬಲ್ಯಗಳು - 
ಎಂಥ ಬಟ್ಟೆ ತೊಟ್ಟಿದ್ದರೂ ವಕೃ ದೃಷ್ಟಿಯ ಕಣ್ಣಲ್ಲಿ ಕಾಂಬುದೆಲ್ಲ ಬೆತ್ತಲೆಯೇ -
ಕೊಚ್ಚೆಯೇ ತೀರ್ಥ ಪ್ರಸಾದ ಹಂದಿ ಬದುಕಿಗೆ...
!!!
ನಗುವನುಳಿಸದ ನೆನಪುಗಳು - 
ಬೇರು ಸತ್ತ ಕನಸುಗಳು - 
ಬತ್ತಿದ ಕಣ್ಣ ಕೊಳ - 
ಭಾವಕ್ಕೆ ವೈಧವ್ಯ - 
ಮನಸಿಗೆ ಮಗು ಸತ್ತ ಸೂತಕ...
!!!
ಈ ಎದೆಯ ಗ್ರಹಿಕೆಯನೇ ಆ ಎದೆಗೂ ದಾಟಿಸಲಾರದ ಮಾತು - 
ನಗೆಹೊನಲ ಬಿತ್ತದ ಮಾತು - 
ಬಂಧ ಬೆಸೆಯದ ಮಾತು - 
ಭಾವ ಸ್ರವಿಸದ ಒಣ ಒಣ ಮಾತು ನನ್ನದು...
ಎದೆ ಎದೆಗಳ ನಡುವ ಬಯಲಿಗೆ ಕೋಟೆ ಕಟ್ಟುವ ಮೌನ - 
ಕರುಳ ಕೊರೆಯುವ ಮೌನ - 
ನಗುವಿಗೂ ಲೆಕ್ಕವಿಡುವ ಮೌನ - 
ಕಣ್ಣ ಹನಿಯನುಳಿದು ಮತ್ತೇನೂ ಬೆಳೆಯದ ಹಸಿ ಮೌನ ನನ್ನದು...
ಮಂತ್ರವಾಗದ ಮಾತು ಎಷ್ಟು ಹುಟ್ಟಿದರೇನು...
ಧ್ಯಾನವಾಗದ ಮೌನವ ಕಾಲವೂ ಧರಿಸಿದರೇನು...
ಫಲವಿಲ್ಲ ಜೀವಿತಕೆ...
ಇಷ್ಟೆಲ್ಲ ತಿಳಿದೂ ಹುಂಬ ದಡ್ಡ ನಾನು -
ಮಾತೆಂದರೆ ಜೀವಂತಿಕೆ, ಮೌನ ಮರಣ ನನಗೆ...
!!!
ಬೀದಿ ಬದಿಯ ಅನಾಥ ಕೂಸಿನಂತೆ ಹಳಸಿದನ್ನದಂಥ ನೆನಪುಗಳು, ಬಿಸಿ ತುಪ್ಪದಂತಹ ಕನಸುಗಳನುಂಡು ಜೀರ್ಣಿಸಿಕೊಂಡು ಹೆಣಗಾಟದ ನಗು ಬೀರುತ್ತಾ ಬೆಳೆದು ನಿಂತ ಬಯಲ ಪೈರು - ಬದುಕು...
ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ನುಗ್ಗುವ ಎಂದೂ ಹಿಂಗದ ಹಸಿವಿನ ಪುಂಡು ಪೋಕರಿ ದನ - ಸಾವು...
"ಸಾವಿನ ಅಸ್ತಿತ್ವ ಬದುಕಿನ ಶಕ್ತಿ - ಬದುಕಿನ ನಗು ಸಾವಿನ ಸೌಂದರ್ಯ..."
!!!
ಎಲ್ಲರ ಬದುಕಿಗೂ ಅರಿವಿನ ಬೆಳಕಲ್ಲಿ ಆತ್ಮದ ಹಸಿವು ನೀಗೋ ಕೃಷ್ಣನಂಥ ''ಗುರು''ವು ''ಗೆಳೆಯ''ನಾಗಿ ದಕ್ಕಲಿ... 
!!!
ಮನಸೆಂಬ ತುಂಟಾಟದ ಮಗು ಕಳೆದೋಗಿದೆ ಭಾವದ ಹಸಿವಿಲ್ಲದವರ ಸಂತೆ ಬೀದಿಯ ಯಾವುದೋ ಕಿರು ಮೂಲೆಯಲ್ಲಿ...
ಅದರ ಆರ್ತ ಕೀರಲು ಕೂಗಿಗೆ ದಾರಿಯೂ ಕಿವುಡು...
ಮಾತು ಸತ್ತ ಮನೆಯ ಅಂಗಳದಿಂದಲೇ ಹೊರಟಂತಿದೆ ಕುರುಡು ಮೌನದ ಅಡ್ಡ ಪಲ್ಲಕಿ ಉತ್ಸವ...
ಸಾವಿರ ಗಾವುದ ಹೆಜ್ಜೆ ಸವೆದ ಮೇಲೂ ಸಾವು ಅನಾಥವೇ...
ನಿಂತುದಾದರೆ ಕಣ್ದುಂಬಿ ಘೋರಿಯೆದುರು, ಬಾಕಿ ಉಳಿದ ಕರುಳ ಕುಂಡಲಿಯೊಳಗಣ ಮಾತುಗಳ ಕವಿತೆಗಳು ಕಿವಿ ಸುಟ್ಟಾವು... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, October 30, 2015

ಗೊಂಚಲು - ನೂರಾ ಅರವತ್ತೈದು.....

ಹೀಗಿಷ್ಟು ಮಾತು ಬಾಕಿ ಇತ್ತು.....
(ನನ್ನೊಂದಿಗೇ ನಾ ಆಡಿಕೊಳ್ಳಬೇಕಿದ್ದುದು...)

ಆತ್ಮೀಯತೆ : ಮನಸೊಂದು ಮತ್ತೊಂದು ಮನಸೊಂದಿಗೆ ಬೆಸೆದುಕೊಂಡ ಉನ್ನತ ಭಾವ ಸಾನ್ನಿಧ್ಯ...

ಆತ್ಮ ಸಾಂಗತ್ಯ : ಸುತ್ತಲಿನೆಲ್ಲ ಅಂಕೆಗಳ ಮೀರಿ ಆ ಮಡಿಲಿಗೋಡೋ ತುಡಿತವ ಹುಟ್ಟು ಹಾಕುವ, ಆ ಸನ್ನಿಧಿಯಲ್ಲಿ ನನ್ನತನದ ಹೆಸರಲ್ಲಿ ನಾನೇ ಕಟ್ಟಿಕೊಂಡ ಎಲ್ಲ ಗೋಡೆಗಳೂ ಉರುಳಿ ಬೀಳುವ, ಅಳುವಿಗೂ – ನಗುವಿಗೂ ಭರವಸೆಯ ಬೆಂಗಾವಲಾಗಿ ಮನಸ ಕಾಯುವ ಸ್ನೇಹದ ಹೆಗಲು...

ಆತ್ಮೀಯತೆ ಆತ್ಮದ ಸೌಂದರ್ಯ – ಸುಕ್ಕಾಗೋ ದೇಹದ ಹೊರ ಶೃಂಗಾರವಲ್ಲ...

ಅದು ಎದುರಿನವರ ದೂರ, ಆದರಗಳ ಹಂಗಿನಲ್ಲಿಲ್ಲ – ಪರಿಭಾವಿಸಿಕೊಂಡದ್ದು ನಾನು, ಕಾಲವೂ ಸಲಹಿಕೊಳ್ಳಬೇಕಾದದ್ದೂ ನಾನೇ...

ಸ್ನೇಹದ ದೀಪಕೆ ಗಾಳಿಗೆದುರಾಗಿ ಪ್ರೀತಿ ಬೊಗಸೆಯ ಆಸರೆ, ಬತ್ತಿಗೆ ಭಾವದೆಣ್ಣೆಯ ಪೂರೈಕೆ ನನ್ನಿಂದಲೇ ಆಗಬೇಕಲ್ಲವಾ – ನನ್ನ ಕರುಳ ಹಸಿವಿನ ಕೂಸಿನ ಆರೈಕೆಯ ಹೊಣೆ ನನ್ನದೇ ಅಲ್ಲವಾ...

ನನ್ನೊಳಗೆ ಹುಟ್ಟಿದ್ದು ನನ್ನೊಳಗೇ ಸಾಯಬೇಕು – ನನ್ನಾಳದ ಭಾವ ತೀವ್ರತೆ ಒಂದೇ ಅದರ ಮಾನದಂಡ...

ಈ ಅರಿವಿನೊಳಗೆ ಹುಟ್ಟಿದ ಆತ್ಮ ಸಖ್ಯತೆ ಅಡಿಗಡಿಗೂ ಎದುರಾಗೋ ಭಾವ ಭಿನ್ನತೆ, ದುಗುಡ, ಕಿತ್ತಾಟ, ಹುಚ್ಚಾಟಗಳ ನಡುವೆಯೂ ಅದೇ ತನ್ಮಯತೆಯ ಪ್ರಶಾಂತಿಯೊಂದಿಗೆ ಹರಿಯುತಿರಬಲ್ಲದು – ಅದು ಎದೆಯ ಮಂದಾಕಿನಿ...

ಅಂದಿನ ತೀವ್ರತೆ ಇಂದಿಲ್ಲ, ಮೋಹದ ಹಾಡಿಗೆ ಮೋಸವಾಯಿತು ಅನ್ನಿಸಿದರೆ ತಪ್ಪು ನನ್ನದೇ ಅನ್ನಬೇಕು – ಆ ದಾರಿಯ ಆಯ್ದುಕೊಂಡ ಪಥಿಕ ನಾನೇ ತಾನೆ...

ಅಹುದು, ಮನಸಿನ ಆತುರ ಆಯ್ಕೆಯ ಮೇಲೆ ಪ್ರಭಾವ ಬೀರದಿರಲಿ ಎಂಬುದು ಪ್ರಜ್ಞೆಯ ಮಾತು – ಅದನೂ ಮೀರಿ ಮನಸು ಆ ಕ್ಷಣವನಾಳಿದರೆ ಮಧುರ ಅನಾಹುತಗಳಿಗೆ ಬದುಕ ಮುಡಿ ಕೊಟ್ಟು ಸೆಳವು ಎಳೆದಂತೆ ತೇಲಿಬಿಡುವುದೊಳಿತು ಖುಷಿಯ ಹಸಿವಿಗೆ ಸೋತು...

ಹಾದಿಯ ಕಲ್ಲು ಮುಳ್ಳುಗಳಿಗೆ ಅಂಜಿದರೆ, ಸಣ್ಣ ಪುಟ್ಟ ಕವಲುಗಳಿಗೆಲ್ಲ ಕಂಗಾಲಾಗಿ ಹಿಂದಡಿಯಿಟ್ಟರೆ ಗಿರಿಯ ನೆತ್ತಿಯ ತಾಕಿ, ಮೋಡಕೆ ಮುತ್ತಿಕ್ಕಿ, ಇಬ್ಬನಿಯ ಮುಡಿಗೇರಿಸಿಕೊಂಡು ಖುಷಿಯ ನಿತ್ತರಿಸಿಕೊಳ್ಳಲಾಗದೇ ಬಿಕ್ಕುವುದು ಸಾಧ್ಯವಾ...

ಸ್ಪಂದನೆಗೆ ಒಡನಾಡೀ ಪ್ರತಿಸ್ಪಂದನೆ ಇಲ್ಲದೇ ಬಂಧ ನಗುವುದು ಹೇಗೆ, ಅದು ಬಂಧನವಾಗದೇ ಅನ್ನಿಸಿತು ಒಮ್ಮೆ; ಗೋಕುಲದಲ್ಲುಳಿದೇ ಒಲವನಾಳಿದ ರಾಧೆ, ಮಥುರೆಯ ರಾಜಕಾರಣಗಳ ನಡುವೆಯೂ ಕೊಳಲ ನಾದವ ಅವಳಿಗೆಂದೇ ಎತ್ತಿಟ್ಟ ಶ್ಯಾಮ, ಇಬ್ಬರೂ ಅಳಿದ ಮೇಲೂ ಅವರ ಸಾಂಗತ್ಯದ ಕಥೆ ಹೇಳುತ್ತ ಹರಿಯುತಲೇ ಇರುವ ಯಮುನೆ ಎಲ್ಲ ನೆನಪಾದರು...

ಸಾಂಗತ್ಯವೊಂದು ಭಾವವ ತಬ್ಬಿದಷ್ಟೇ ಉತ್ಕಟವಾಗಿ ಒಡನಾಟಕ್ಕೂ ದಕ್ಕಲಿ ಎಂದು ಬಯಸಿದರೆ ಅದು ಬರೀ ದುರಾಸೆಯಲ್ಲ ಹುಚ್ಚು ಮನಸಿನ ದುರಂತ ಕೂಡ ಅನ್ನುವುದು ಹಸಿ ಹಸಿ ಅನುಭವದ ಅಸಲೀ ಅರಿವು... 

ಹಾಗೊಂದುವೇಳೆ ಅಂಥದ್ದೇ ಒಡನಾಟವೂ ದಕ್ಕಿ ಬಿಟ್ಟರೆ; ಉಹುಂ ಅಂಥ ಬಾಂಧವ್ಯದ ನೆರಳು ಸೋಕಿದರೂ ಸಾಕು ನೋವೆಲ್ಲ ಶೇಷವುಳಿಯದಂತೆ ಭಾಗವಾಗಿ, ನಗುವು ತನ್ನಷ್ಟಕ್ಕೆ ತಾನು ಗುಣಿಸಿಕೊಂಡು ಬದುಕಿದು ಸ್ವರ್ಗವೂ ನಾಚುವ ನಾಟ್ಯ ಮಂಟಪವೇ ಸರಿ...

ನನ್ನ ಮಟ್ಟಿಗೆ ಆತ್ಮದೊಂದಿಗೇ ಸಖ್ಯ ಬೆಳೆಸಿಕೊಂಡ ಭಾವಕ್ಕೆ ಆಯಸ್ಸು ಆತ್ಮದಷ್ಟೇ – ಹಿರಿಯರ್ಯಾರೋ ಆತ್ಮ ಅವಿನಾಶಿ ಅಂದಂತೆ ಕೇಳಿದ ನೆನಪು... 

ಇದೀಗ ಅಲ್ಯಾರೋ ಆತ್ಮ ಸಾಂಗತ್ಯವೊಂದು ಸತ್ತು ಹೋಯಿತು ಅಂದರೆ ನಕ್ಕು ಬಿಡುತ್ತೇನೆ ಮತ್ತು ನನ್ನ ಎದೆಗೂಡಿನಲ್ಲಿ ಕಾಪಿಟ್ಟುಕೊಂಡ ಆತ್ಮೀಯ ಸಾಂಗತ್ಯಗಳನೆಲ್ಲ ಒಮ್ಮೆ ಮಾತಾಡಿಸಿ ಬರುತ್ತೇನೆ...

ಎಲ್ಲರ ಹಾದಿಗೂ (ನನ್ನಷ್ಟಲ್ಲದಿದ್ದರೂ) ಅಂಥ ಒಂದಾದರೂ ಸ್ನೇಹದ ಜಲಬಿಂದುವಿನಾರೈಕೆ ದಕ್ಕಿ ಬದುಕ ಹಸಿರಾಗಿಸಲಿ...

Sunday, October 4, 2015

ಗೊಂಚಲು - ನೂರು + ಅರವತ್ತು + ನಾಕು.....

ಆಗೀಗ _ ಏನೇನೋ.....

ಚಂದಿರ ಬೆಂಕಿ ಕಾರುತ್ತಾನೆ, ಬೆಳಕಿಗೆ ಕಣ್ಣು ಸಿಡಿಯುತ್ತದೆ - ನಗುವಿಲ್ಲದ ಹಗಲಿಗಿಂತ ಕಣ್ಣ ಹನಿ ಕಾಣದ ಇರುಳು ಹಿತವೆನಿಸುವಾಗ ಅನ್ನಿಸೀತು ಆಗೊಮ್ಮೆ ನಡೆದು ಬಿಡಬೇಕು ಬದುಕು - ಏನೂ ಕಾಡದ ಕಾಡು ದಾರಿಯಲ್ಲಿ - ತಿರುಗಿಯೂ ನೋಡದೆ...
ಆದರೆ,
ಹಾಳು ಕನಸುಗಳು ಇರುಳಲ್ಲಿ ಕಣ್ಣ ಬಟ್ಟಲಲ್ಲಿ ಒಡ್ಡೋಲಗ ನಡೆಸುತ್ತವೆ - ನೆನಪುಗಳು ಕಣ್ಣಿಂದ ಜಾರಿ ದಿಂಬಿನಂಚಲ್ಲಿ ಕರೆಯಾಗುತ್ತವೆ - ಮತ್ತೆ ಕಣ್ಣುಗಳು ಬೆಳಕಿಗೆ ಹೊಂದಿಕೊಳ್ಳಲು ಯುದ್ಧ ಸನ್ನದ್ಧವಾಗುತ್ತವೆ...
ಮತ್ತದೇ ದಿನದ ಪುನರಾವರ್ತನೆ...
ಮನಸು ಕಾಡಿನ ಕಡೆಗೆ - ಪ್ರಜ್ಞೆ ಊರಿನ ಕಡೆಗೆ - ಇರುಳಿಗೂ ಹಗಲಿಗೂ ಮುಗಿಯದ ಕಾಳಗ...

;;;;;

ಹೂತಿಟ್ಟ ಸತ್ಯಗಳಿಗೆ ಮೌನ ಕಾವಲು...
ಬಂಧದ ಗಾಂಧರ್ವ ಗಾನಕೆ ಮಾತೆ ಬಾಗಿಲು...
ನಿನ್ನ ಮೌನ ಅಬೇಧ್ಯವಾದಷ್ಟೂ ನನ್ನ ಮಾತು ಕ್ಷುದ್ರವಾಗುತ್ತೆ...
ಆಗಿಲ್ಲಿ ಬದುಕು ರಸಹೀನ; ಗಂಟಲು ಸತ್ತ ಕೋಗಿಲೆಯಂತೆ - ಗರಿಯೆಲ್ಲ ಉದುರಿ ಹೋದ ನವಿಲಂತೆ...
ಅರಿವಿನಳಲನು ಧಿಕ್ಕರಿಸಿದ ಮಾತು ಮತ್ತು ಮೌನಗಳ ತಿಕ್ಕಾಟದ ಹೀನ ಸಂತಾನವಾದ ಭಾವಹೀನತೆಯ ಬೆಂಕಿಯಲಿ ಬಾಂಧವ್ಯದ ಶವ ಸಂಸ್ಕಾರ...

;;;;;

ಬೆಳಕಿನೆಡೆಗೆ ಬಾಗಿಲು ತೆರೆದು ಕೂತೆ ಕತ್ತಲ ಭಯಕ್ಕೆ - ಎನ್ನದೇ ಒಳ ಹೊರಗಿನ ಬೆತ್ತಲು ಕಣ್ಕುಕ್ಕಿ ಮತ್ತಷ್ಟು ಭಯ ನನ್ನೊಳಗೀಗ...
ಬದುಕೇ -
ನಿನ್ನೆಡೆಗೆ, ನಿನ್ನ ವಿಚಿತ್ರ ನಡೆಗಳೆಡೆಗೆ ನನ್ನಲ್ಲಿ ವಿಸ್ಮಯವೊಂದೇ ಅಂತಿಮ...!!!

;;;;;

ತೆರೆದಿಟ್ಟರೂ ಬಾಗಿಲು - ಬೆಳಕ ಹುಟ್ಟಿಸದು ಇರುಳು...
ಕಾಯುತಿರುವ ಮಾತ್ರಕ್ಕೆ ಸಲೀಸು ಬಾರದು ಸಾವು - ದಕ್ಷಿಣಾಧಿಪತಿಯ ಕಛೇರಿಯಿಂದ ಬರದೆ ಅಂತಿಮ ಬುಲಾವು...

;;;;;

ಬದುಕ ಬೆರಳಿಗೆ ನಗೆಯ ಬೆಲ್ಲವ ಸವರಿಕೊಂಡು ಚೀಪುತ್ತಾ ಇರುಳ ದಾಟುವುದು ಎಂದಿನ ಕನಸು - ಆ ಸಾಕಾರಕ್ಕೆ ಮತ್ತೊಮ್ಮೆ ಮಗುವೇ ಆಗಬೇಕಿದೆ ಈ ಮನಸು...

;;;;;

ಕನಸಿಯೂ ಇಲ್ಲದ ಗೆಲುವು ಕೈಹಿಡಿದ ಹಾಗಿದೆ - ನಡೆವ ದಾರಿಯಲೊಂದು ನಗೆ ಹೂವು ಬಿರಿದಿದೆ...
ಬದುಕೇ ತೀರಿಸಲಾರದ ಋಣ ನಿನ್ನದು...
ಎತ್ತಿಡುವ ಪ್ರತಿ ಹೆಜ್ಜೆಯೂ ಹೊಸ ಕನಸಿಗೆ ಮುನ್ನುಡಿ...
ಬದುಕ ಉಡಿಯಲ್ಲಿ ಪ್ರತಿ ಕ್ಷಣಕೂ ಹೊಸ ಪಾಠದ ಹೂ ಅರಳುತ್ತೆ - ನಾ ಕಿತ್ತು ಮುಡಿಗೇರಿಸಿಕೊಂಡಷ್ಟೂ ನನ್ನದು...
ನಡಿಗೆಗೆ ಜೊತೆಯಾದವರ ಎದೆ ನೆಲದಲ್ಲಿ ನಾ ನೆಟ್ಟು ಹೋದ ನೆನಪುಗಳ ಮೈಲುಗಲ್ಲುಗಳು ನನ್ನ ದಾರಿ ಮುಗಿದ ಮೇಲೆ ಬೆನ್ನುಡಿಯ ಬರೆಯುತ್ತವೆ...
ಬೆನ್ನುಡಿಯ ಕೊನೆಯಲಿ ನಗೆಯ ಸಹಿಯಿರಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, September 10, 2015

ಗೊಂಚಲು - ನೂರಾ ಅರವತ್ಮೂರು.....

ಅವಳು ಹೇಳಿದ್ದು.....
(ಯಾರೆಂದು ಕೇಳಬೇಡಿ...)

ನಾನೇನೂ ಅಂಥ ಪರಿ ಮಹತ್ವಾಕಾಂಕ್ಷೆಯಗಳ ಹೊತ್ತು ಬೆಳೆದ ಹುಡುಗಿಯೇನೆಲ್ಲ - ನನ್ನದೇ ಒಂದು ಪುಟ್ಟ ಪ್ರಪಂಚದಲ್ಲಿ ಹೇಳುವಂಥ ಯಾವುದೇ ಅತೃಪ್ತಿಗಳಿಲ್ಲದೆ ನಿಸೂರಾಗಿದ್ದವಳು - ಆಗಷ್ಟೇ ಕಾಲೇಜಿನ ದಿನಗಳು ಮುಗಿದಿದ್ದವು - ಅಷ್ಟಿಷ್ಟು ತುಂಟಾಟದ ನಷೆ ಇನ್ನೂ ಇದ್ದೀತೇನೊ ಕಣ್ಣಲ್ಲಿ - ಮನೇಲಿ ನಿಂಗೆ ಮದುವೆ ಅಂದರು - ಸಣ್ಣದೊಂದು ಕನಸು ಚಿಗುರಿದ್ದು ಆಗಲೇ - ಇವನು ಬಂದ - ಬೇಕು ಅನ್ನೋಕಿಂತ ಬೇಡ ಅನ್ನೋಕೆ ಕಾರಣವೇನಿರಲಿಲ್ಲ ನನ್ನಲ್ಲಿ - ಆಗೀಗ ಅಷ್ಟಿಷ್ಟು ಮಾತು ಶುರುವಾಗಿದ್ದರೂ ಪ್ರೇಮ ಅನ್ನುವಂಥದ್ದೇನೂ ಅರಿವಿಗೆ ಬಂದಿರಲಿಲ್ಲ - ಮಾಂಗಲ್ಯ ಕೊರಳ ಬಳಸುವಾಗ, ಸಪ್ತಪದಿ ಜನ್ಮಗಳ ಬೆಸೆಯುವಾಗ ಕೂಡಾ ಒಂದು ರಾಶಿ ಮುಗಿಯದ ಗೊಂದಲಗಳ, ಹೇಳಲು ಬಾರದ ಕಂಗಾಲುಗಳ ಬಿಟ್ರೆ ನನ್ನಲ್ಲಿ ಇನ್ನೇನೂ ಇರಲಿಲ್ಲ ಅನ್ನಿಸುತ್ತೆ - ನಿಜ ಹೇಳೋದಾದ್ರೆ ಅಂದು ಇರುಳು ಕಾಲಿಡುವವರೆಗೂ ಮದುವೆ, ಸಂಸಾರ ಅಮಿತವಾದ ಭಯ ಮಿಶ್ರಿತ ಅಚ್ಚರಿ ಅಷ್ಟೇ ಆಗಿತ್ತು - ಆದ್ರೆ ಅದಕಿಂತ ದೊಡ್ಡ ಅಚ್ಚರಿ ಆ ಇರುಳಲ್ಲಿ ಹುದುಗಿತ್ತು - ನಂಗದರ ಕಲ್ಪನೆ ಕೂಡಾ ಇರಲಿಲ್ಲ...

ಅದು ಇರುಳ ಮೊದಲ ಜಾವ – ಆ ಹೊಸ ಬೀದಿಯ ತಿರುವುಗಳಲ್ಲಿ ಅವನೊಡನೆಯ ಏಕಾಂತ ನಡಿಗೆ – ಎನ್ನ ಎಡಗೈಯ ಬೆರಳುಗಳ ನಿರ್ವಾತವನ್ನು ತುಂಬಿದ್ದ ಅವನ ನಿಡಿದಾದ ಬೆರಳುಗಳು ಅಲ್ಲಿಂದಲೇ ದಾಟಿಸುತ್ತಿದ್ದ ಬದುಕ ತುಂಬುವ ಭರವಸೆ – ಕಿಬ್ಬೊಟ್ಟೆಯ ಬಯಲಿನಾಳದಲೆಲ್ಲೋ ಅರಿವಿಗೆ ನಿಲುಕದ, ಹಿಡಿತವ ಮೀರಿದ ಎಂಥದೋ ಹೊಸ ಕಂಪನ – ಹಣೆಯ ಬೆವರ ಬಿಂದುಗಳಲ್ಲಿ ಬೆರೆಯುತಿರೋ ಬೈತಲೆಯ ಕುಂಕುಮ – ಮೈಯ ಅರಿಸಿನವಿನ್ನೂ ಹಸಿಯೇ ಇದೆ – ಎದೆಯಾಳದ ಹೊಸ ಕನಸಿನ ಭಾವದ, ಎದೆ ಮಿದುವಿನ ಹಸಿ ಆಸೆಯ ಭಾರದ, ತಲ್ಲಣ, ಕಂಪನಗಳೆಲ್ಲ ತಳಕಂಬಳಕವಾಗಿ – ಒಟ್ನಲ್ಲಿ ನಂಗೆ ನಾನೇ ಹೊಸತೆಂಬಂತೆ...
ಎಷ್ಟೆಲ್ಲ ಕಂಗಾಲಿತ್ತು, ಏನೇನೆಲ್ಲ ಗೊಂದಲವಿತ್ತು ಆವರೆಗೂ ಗೊತ್ತಾ..? ಅವನ ಬಗ್ಗೆ, ಅವನ ಆ ಮನೆಯ ಬಗ್ಗೆ, ಅವನೊಡನೆಯ ಬದುಕ ಸಾಂಗತ್ಯದ ಬಗ್ಗೆ... 
ಅಬ್ಬಾ...!!!
ಆದರೆ ಆ ಘಳಿಗೆ ಇದೆಯಲ್ಲ – ಅವನೊಡನೆ ನಡೆದ ಆ ಇರುಳ ಘಳಿಗೆ...
ಅದು ನನ್ನಲ್ಲಿ ಎಂಥ ಪರಿ ಅನುರಾಗ ಮತ್ತು ಭರವಸೆಯ ಮೂಡಿಸಿಬಿಡ್ತು ಅಂದ್ರೆ; ಹೆಬ್ಬಾಗಿಲಲ್ಲಿಟ್ಟ ಅಕ್ಕಿಯ ಕೊಳಗವನ್ನು ಬಲಗಾಲ ಬೆರಳ ತುದಿಯಲ್ಲೇ ಒದ್ದು ಅವನ ಅರಮನೆಯ ಹೊಕ್ಕಂತೆಯೇ – ಅಷ್ಟೆಲ್ಲ ವಾರಗೆಯವರ ಕೀಟಲೆ, ಪೋಲಿ ಮಾತುಗಳನೂ ಕಿರುನಗೆಯಲ್ಲೇ ಗೆದ್ದು ಅವನವರು ನಮಗಾಗಿ ಸಿಂಗರಿಸಿಟ್ಟ ಮಂಚದ ಮನೆಯನ್ನೂ ಹಿತವಾಗಿಯೇ ಸೇರಿಬಿಟ್ಟೆ...

ನೆನೆಸಿಕೊಂಡರೆ ಇಂದಿಗೂ ನಡುವಲ್ಲಿ ಹಿತದ ನಡುಕ ಮೂಡುತ್ತೆ; ಅವನ ತೋಳಲ್ಲಿ ನನ್ನ ಇರುಳು ಮೊದಲ ಬಾರಿಗೆ ಸುಖದ ಬೆವರಾಗಿ ಕರಗಿದ ಆ ಉನ್ಮತ್ತ ಕತ್ತಲನ್ನು... 
ಈಗಲೂ ಆಶ್ಚರ್ಯ ನನಗೆ – ಮಹಾ ಮುಜುಗರದ ಪ್ರಾಣಿಯಾಗಿದ್ದೋಳು ಅಷ್ಟು ಸಲೀಸಾಗಿ ಹೇಗೆ ಬೆಳಗಿದೆ ಅವನೆದುರು ಕನ್ನಡಿಯೂ ಕಾಣದ ನನ್ನ ಬೆತ್ತಲನ್ನು...
ಮರಳಿ ಮರಳಿ ಕೆರಳಿ, ಹೊರಳಿ, ಅರಳಿ, ಒಬ್ಬರನೊಬ್ಬರು ಆಳಿ, ಆಳಿಸಿಕೊಳ್ಳುತಿದ್ದ ಉನ್ಮತ್ತ ಇರುಳು ಮತ್ತು ಸುಖದ ಸುಸ್ತಲ್ಲಿ ಮೈಮುರಿದೇಳುತಿದ್ದ ನಾಚಿಕೆಯ ಹಗಲುಗಳು ಕ್ಷಣಗಳಲ್ಲಿ ಕಳೆದು ಹೋಗುತಿದ್ದ ಹೊತ್ತಲ್ಲೇ, ತಿಂಗಳ ಚಕ್ರ ನಿಂತಿದ್ದೇ ಗೊತ್ತಾಗಲಿಲ್ಲ...
ಪ್ರೇಮೋನ್ಮಾದದ ಕುರುಹಾಗಿ ಎನ್ನ ಒಡಲಲ್ಲಿ ಹೊಸ ಕುಡಿಯ ಕಚಗುಳಿ – ಅವನ ಕಣ್ಣಲ್ಲಿ ಗಂಡೆಂಬ ಹೆಮ್ಮೆ, ನನ್ನ ನಡೆಯಲ್ಲಿ ಹೆಣ್ತನದ ತೃಪ್ತಿಯ ಗೈರತ್ತು – ಹಾಲೆದೆಯ ಹಾಗೂ ಫಲವಂತ ಮಡಿಲ ಭಾರ ಬೇರೆಯೇ ರೀತಿಯಲ್ಲಿ – ಮಡಿಲಲ್ಲಿ ನಗುವ ಮಗು ಹೆಣ್ಣೆಂಬ ಪಾತ್ರಕ್ಕೆ ಪೂರ್ಣತೆ ದಕ್ಕಿದ ಘಳಿಗೆ; ಮೊದಲಿರುಳ ಮರೆತರೂ ಮಗುವಿನಳುವು ಕಿವಿತುಂಬಿದ ಮೊದಲ ಘಳಿಗೆಯ ಮರೆಯಲಾಗದು ಹೆಣ್ಣಿಗೆ – ಪ್ರಕೃತಿಯ ಕರುಳ ಭಾವಕ್ಕೆ ಜೀವ ತುಂಬಿದ ಧನ್ಯತೆಗೆ ಒಬ್ಬರಿಗೊಬ್ಬರು ಜೊತೆಯಾದೆವಲ್ಲಾ ಒಲವು ಬಲಗೊಳ್ಳಲು, ದೀರ್ಘ ನಡಿಗೆಗೆ ಶಕ್ತಿ ಬರಲು ಇನ್ನೂ ದೊಡ್ಡ ಕಾರಣ ಬೇಕಾ...!!! 

ಉಹುಂ ಇದೆಲ್ಲ ಅಲ್ಲವೋ ನಾ ನಿಂಗೆ ಹೇಳಬೇಕಾದ್ದು – ನಿನ್ನ ಪ್ರಶ್ನೆಗೆ ಇದಷ್ಟೇ ಅಲ್ಲ ನಿಜದ ಉತ್ತರ...
ಆಗಲೇ ಹೇಳಿದೆನಲ್ಲ – ದೇಹಾನ್ವೇಷಣೆಯ ನಸುಗತ್ತಲ ಗೂಡಿಗೆ ಅಡಿ ಇಡುವ ತುಸು ಮುಂಚೆ, ಆ ನಿಶೆಯಲ್ಲಿ ಇಬ್ಬರೂ ತುಸು ದೂರ ಏಕಾಂತದ ಸಂಗಾತದಲ್ಲಿ ಕಳೆದು ಹೋಗಿದ್ದೆವಲ್ಲ – ಆ ನಾಕು ಹೆಜ್ಜೆಗಳ ಗುರುತು ಇಂದಿಗೂ ಎದೆಯಲ್ಲಿ ಭದ್ರ ಕಣೋ...
ಈ ಮುಂಚೆ ಹೇಳಿದ ಎಲ್ಲಾ ತಲ್ಲಣ, ಕಂಪನಗಳಾಚೆಯ ಆ ನಿರುಪಾಯ ಮೌನ ಸನ್ನಿಧಿ – ಆ ಕ್ಷಣ ಎದೆಗೂಡಲ್ಲಿ ಅಚ್ಚೊತ್ತಿದ ಭಾವ ಸಮೃದ್ಧಿ... 
ಅದರ ಬಗ್ಗೆ ಹೇಳಬೇಕು ನಿಂಗೆ...
ಒಂದೇ ಮಾತಲ್ಲಿ ನಿಂಗೆ ಉತ್ತರಿಸೋದಾದ್ರೆ:
ಆ ಮೌನ ಸಾಮೀಪ್ಯದಲ್ಲಿ ಬೆಸೆದ ಬೆರಳ ಸ್ಪರ್ಷ ಬರೆದ ಹೊಸ ಭಾವ ಭಾಷ್ಯ – ಆ ಮೂಲಕ ಇಬ್ಬರೆದೆಯಲೂ ಒಡಮೂಡಿದ ಅಪ್ಯಾಯ ಆಪ್ತತೆ – ನನ್ನ ಗೆಜ್ಜೆ ಕಾಲ್ಗಳ ಜೊತೆ ನಡೆದ ಅವನ ಹೆಜ್ಜೆಗಳಲ್ಲಿನ ದೃಢತೆ ಮೂಡಿಸಿದ ಭರವಸೆ...
ಅವೇ ಅನ್ನಿಸುತ್ತೆ ನಂಗೆ ನಮ್ಮಿಬ್ಬರ ದಶಕಗಳ ಕಾಲದ ಅನುರಾಗದ ಒಡನಾಟಕ್ಕೆ ನಾಂದಿಯಾದದ್ದು ಮತ್ತು ಒಲವು ಒಲವನೇ ಹೆರುತ್ತಾ, ಒಲವ ಸಮೃದ್ಧಿಯ ಬದುಕ ಪಯಣಕ್ಕೆ ಸಾರಥ್ಯವಹಿಸಿದ್ದು...
ಹಗಲುಗಳ ಕಾಯುವ ಹಿತವಾದ ಮಾತು, ಸೊಗಸಾದ ಮೌನ – ಇರುಳ ಬೆಳಗಿಸುವ ನಿತ್ಯವೂ ಹೊಸತೆನಿಸೋ ಅದೇ ಮಿಲನ – ಎಷ್ಟೆಲ್ಲ, ಏರಿಳಿತಗಳ ನಡುವೆಯೂ, ಏನೆಲ್ಲ ಭಿನ್ನತೆಗಳ ಒಳಗೊಂಡೂ ಬದುಕು ಶಾಂತ ಸಂಭ್ರಮ ಕಣೋ...
ಬದುಕು ಹರಿದ ಚಾದರದಂತಾದ ದಿನಗಳಲ್ಲೂ, ಕನ್ನಡಿಯೆದುರು ನಿಂತ ಹತ್ತರಲ್ಲಿ ಎಂಟು ಬಾರಿ ಮೊಗದ ಸಣ್ಣ ಸುಕ್ಕುಗಳಲ್ಲಿ ನಗು ಕಾಣಿಸಬಲ್ಲುದಾದರೆ ಅದಕಿಂತ ಇನ್ನೇನು ಬೇಕಲ್ಲವಾ ಸಾರ್ಥಕತೆ...
ಒಲವೇ ಊರುಗೋಲು ಬದುಕ ಏರು ದಾರಿಯ ನಿರಾಯಾಸ ನಡಿಗೆಗೆ...

ಮಹಾ ಪೋಲಿ ಗೆಳೆಯ ನೀನು – ಪ್ರಶ್ನೆಯ ಕೊನೇಲಿ ಕಣ್ಣು ಮಿಟುಕಿಸುತ್ತೀಯಾ...
ಹೌದೋ ಮಂಗೂ, 
ಅನುರಾಗದ ಬೆಂಕಿಗೆ ಪ್ರಣಯ ತುಪ್ಪ ಎಂಬ ನಿನ್ನ ಮಾತೂ ಸತ್ಯವೇ...
ನಿತ್ರಾಣ ಇರುಳಿಗೆ ಚೈತನ್ಯ ತುಂಬುವುದು ಸ್ವಸ್ಥ ಕಾಮವೇ - ಅದು ನನ್ನ ಅನುಭವವೂ ಹೌದು, ನನ್ನಾತನ ಆಯ್ಕೆಯೂ ಹೌದು...
ನಡಿಗೆ ಸುಸ್ತೆನಿಸಿ ಅವ ಮಡಿಲಿಗೆ ಬಂದಾಗ ನಾ ಎದೆಗೊರಗಿಸಿಕೊಂಡು ಅಮ್ಮನಾಗುತ್ತೇನೆ – ನಾ ದಾರಿಯ ಕವಲುಗಳ ಕಂಡು ಕಂಗಾಲಿಗೆ ಬಿದ್ದಾಗ ಅವ ನೆತ್ತಿ ಚುಂಬಿಸಿ ಭದ್ರತೆಯ ಹಾಯನು ತುಂಬಿ ಅಪ್ಪನಾಗುತ್ತಾನೆ...
ಭಾವದಲ್ಲಿ ಒಲವು ಶಿಖರದೆತ್ತರ...
ಉಳಿದಂತೆ ಅದೇ ಇರುಳ ಕೊನೆಯ ಜಾವದ ಪ್ರೇಮದ ಫಲವಂತಿಕೆಯಲ್ಲಿ ನಾವು ಭೌತಿಕದ ಅಮ್ಮ – ಅಪ್ಪ ಆದದ್ದು...
ಒಲವೆಂದರೆ ಎಲ್ಲವೂ – ಒಲವಿಂದಲೆ ಎಲ್ಲವೂ - ಒಲವೇ ಕಣೋ ನನ್ನ ನಗುವಿನ ಕಾರಣ...
ಅಲ್ಲಿಷ್ಟು ಇಲ್ಲಿಷ್ಟು ಸೇರಿ ಇಷ್ಟೇ ಹೇಳಬೇಕಾದದ್ದು...
ಸೂಕ್ಷ್ಮಸಂವೇದನೆಯ ಜಾಣ ನೀನು – ಇನ್ನಷ್ಟು ವಿವರ ಬೇಕಿಲ್ಲ ಅಲ್ಲವಾ ನಿಂಗೆ...

***

ಮೂಲ ಮಾತು – 
ಸಂಜೆ ಹೊರಳುವ ಹೊತ್ತಲ್ಲಿ ನಾ ಅವಳಲ್ಲಿ ಕೇಳಿದ ಪ್ರಶ್ನೆ:
ಹಿರಿಯರಾಶಯದ ಗಂಡಿನ ಕೈಯಲ್ಲಿ ಬದುಕನಿಟ್ಟವಳು, ಯಾವ ಘಳಿಗೇಲಿ ಕುಡಿಯೊಡೆಯಿತೆ ನಿನ್ನಲ್ಲಿ ಆ ಪರಿ ಅನುರಾಗ..? 
ಅದ್ಹೇಗೆ ಕಾಯ್ದುಕೊಂಡಿರೇ ದಶಕಗಳಷ್ಟು ಕಾಲ..?

ಅವಳುತ್ತರದ ನಂತರವೂ ನನ್ನಲ್ಲಿ ಉಳಿದುಕೊಂಡ ಅಲ್ಲ ಹುಟ್ಟಿಕೊಂಡ ಸಂದೇಹ: 
ಅನುರಾಗದಲ್ಲಿ ಬದುಕು ಈ ಪರಿ ನಗೆಯ ಹೊತ್ತು ತಲೆಯೆತ್ತಿ ನಿಲ್ಲುತ್ತಾ....!!!
ಒಂದ್ಯಾವುದೋ ಘಳಿಗೆಯ ಮೌನದಲ್ಲಿ ಮಿಂಚಂತೆ ಹುಟ್ಟಿ (?), ದೇಹಭಾವದ ಮಾತಲ್ಲಿ ಮಳೆಯಾಗಿ ಅರಳಿ, ಮಾಂಗಲ್ಯದ ಆಸರೆಯಿಂದ ಅನುಗಾಲ ಬಾಳುತಿರಬಹುದಾ ಅವಳು ಮತ್ತವಳಂಥವರ ಅನುರಾಗ...???
ಈ ಪ್ರೇಮಾನುರಾಗದ ಭಾವಗಳು ನಂಗೆಂದೂ ಅರ್ಥವಾಗಲ್ಲ ಬಿಡಿ...

Saturday, August 1, 2015

ಗೊಂಚಲು - ಒಂದು ನೂರಾ ಅರವತ್ತೆರಡು.....

ಈ ದಿನಕ್ಕೊಂದು ಮಾತು.....
(ಬದುಕಿನ ಮತ್ತೊಂದು ವರುಷ - ಸಾವಿನೆಡೆಗೆ ಇನ್ನೊಂದು ಹೆಜ್ಜೆ...)


ಒಡೆದ ಮನಸು – ಬಾಡಿದ ಭಾವಲೋಕ – ಮಡಿದ ಕನಸುಗಳ ಮಸಣದ ಮೂಲೆಯಲಿ ನಿಂತ ಕ್ರುದ್ಧ ಕಬೋಜಿ...
ಒಂದು ಹೆಜ್ಜೆ ಆಚೆ ಒಲವ ಶರಧಿ – ನಡುವೆ ನನ್ನದೇ ಕೂಸಾದ “ನಾನೆಂಬ” ಕಗ್ಗಲ್ಲ ಗೋಡೆ...

ದೇಹವೆಂಬುವದಿದು ಆಸೆಗಳು ಹರೆಯದ ಮದದಿಂದ ಕುಪ್ಪಳಿಸಿ ಕುಣಿವ ದೊಡ್ಡ ಇಮಾರತ್ತಿನ ಮನೆ – ಹೃದಯವೆಂಬೋ ಕೋಳ ಕಂಬಕ್ಕೆ ಗೆದ್ದಲು...

ಸತ್ತ ಬಂಧಗಳ ರಾಶಿಯೆದುರು ಶವ ಪರೀಕ್ಷೆಗೆಂದು ಕೂತರೆ ಎಲ್ಲ ಸಾವಿಗೂ ನನ್ನ ವ್ಯಕ್ತಿತ್ವದ ವೈಕಲ್ಯವೇ ಕಾರಣ ಅನ್ನಿಸಿ ಒಮ್ಮೊಮ್ಮೆ ಮೈಲೆಲ್ಲ ನಡುಕ...
ಬದ್ಧತೆ ಇಲ್ಲದ ಭಂಡ ಬಾಳು ನಿನ್ನದು ಎಂದು ಹಳಿಯುವವರೂ, ಬದುಕ ಹೊಸ ಕೋನದಲಿ ನೋಡುವುದ ಕಲಿಸಿದವ ನೀನು ಎಂದು ಕಂಣ್ತುಂಬಿಕೊಳ್ಳುವವರೂ ಇಬ್ಬರೂ ನನ್ನವರೇ...
ಕೆಲವೊಮ್ಮೆ ಆ ಎರಡೂ ಮಾತು ಒಬ್ಬರಿಂದಲೇ ಬಂದಿದ್ದಿದೆ - ಕಾಲದ ಸಮಾಧಿಯಲಿ ಎಂತೆಂಥ ವೈಪರೀತ್ಯಗಳೋ...
ಹಾಗಾಗಿ ಹೊಸ ಪ್ರೀತಿ ಕೈ ಹಿಡಿಯಲು ಹಳೆಯದರ ಕೃಪೆಯ ಹಂಗಿಲ್ಲ ಎಂಬ ನನ್ನ ಹುಂಬತನ ಮತ್ತು ಸಕಲಕ್ಕೂ ಸಾವು ಪೂರ್ವ ನಿಶ್ಚಿತ ಎಂಬ ಸಿದ್ಧ ಸೂತ್ರವನ್ನು ಮತ್ತೆ ಮತ್ತೆ ನಂಬಿಕೊಂಡು ನನ್ನೇ ನಾನು ಸಮಾಧಾನಿಸಿಕೊಳ್ಳಬೇಕು...

ಆಷಾಢದ ಬೆಳಗಿನ ವಿರಹಿ ಮಳೆ, ಗ್ರೀಷ್ಮದ ನಡು ಮಧ್ಯಾಹ್ನ ಸುಡುವ ಬಿಸಿ, ಹೇಮಂತ ಸಂಜೆಯ ತಂಪು ಈ ಎಲ್ಲಾ ಘಳಿಗೆಗಳಿಗೂ ಸಾಕ್ಷಿಯಾಗಿರುವ ನಿನ್ನೆಗಳ ಹಂಗಿಲ್ಲದೆ ಬದುಕೋದು ಸುಲಭವಿಲ್ಲ - ಹಾಗಂತ ನಿನ್ನೆಗಳಲೇ ಹೊರಳಾಡುತ್ತಿರೋದರಲ್ಲಿ ಅರ್ಥವಿಲ್ಲ...
ಕೈಯಾರೆ ನಗುವ ಗೆದ್ದು ತಂದು ತುಂಬಿಕೊಳ್ಳುವ ಆತ್ಮ ಚೈತನ್ಯದ ಒಲವಿನಾರೈಕೆಯಿಂದ ಪ್ರೇರಿತವಾದ ಹೊಸ ಭರವಸೆ, ಹೊಸ ಸಾಧ್ಯತೆಗಳ ತುಡಿತದ ನಾಳೆಗಳ ಕನಸಿಲ್ಲದೇ ಬದುಕಿಗೆ ಬಲವಿಲ್ಲ - ಆದರೆ ನಾಳೆಗಳಲಿ ನಾನಿದ್ದೇನಾ ಎಂಬುದು ನಿಶ್ಚಿತವಲ್ಲ...
ನಿನ್ನೆಯ ನೆನೆವಂತಿಲ್ಲ, ನಾಳೆಯ ನಂಬುವಂತಿಲ್ಲ ಅಲ್ಲಿಗೆ ನನಗುಳಿದದ್ದೇನು..?
ಉತ್ತರ : ಈ ಕ್ಷಣ...
ಅಂದರೆ: ನನ್ನ ನಗು – ನಲಿವು, ದುಗುಡ – ದುಮ್ಮಾನ, ಎದೆ ಶರಧಿಯ ಪ್ರೇಮದುಬ್ಬರ – ನಾಭಿ ಮೂಲದಲಿ ಕಿಡಿ ಸೋಕಿ ದೇಹದ ಕಾಡನೆಲ್ಲ ಆವರಿಸಿ ಅಬ್ಬರಿಸೋ ಕಾಮದ ಬೆಂಕಿ, ಕಣ್ಣ ಹನಿ – ಖುಷಿಯದ್ದೂ ಅಥವಾ ನೋವಿಂದೂ, ನೆತ್ತಿಯ ಕಾವೇರಿಸೋ ಹಸಿ ಹಸಿ ಕನವರಿಕೆಗಳನೆಲ್ಲ ಒಳಗೊಂಡ ಈ ಕ್ಷಣ, ಅವನೆಲ್ಲ ಹಾಗೆ ಹಾಗೇ ತೀವ್ರವಾಗಿ ಅನುಭವಿಸಲು ನಾ ಸಾಕಿಕೊಂಡ, ನನ್ನೊಳಗೆ ಉರಿಯುತ್ತಲಿರೋ ಮೃಗೋನ್ಮಾದದ ಈ ಪುಟ್ಟ ಪುಟ್ಟ ಘಳಿಗೆಗಳು ಇವು ಮಾತ್ರ ನನ್ನವೆನ್ನಿಸುತ್ತೆ – ಸಂಪೂರ್ಣ ನನ್ನವು...
ಮರಣದ ಗೂಡು ಸೇರಿ ಬಾಗಿಲು ಮುಚ್ಚುವ ಹೊತ್ತಲ್ಲಿ ಎದುರಿನ ವಿದಾಯವ ನುಡಿವ ಕೆಲ ಕಣ್ಣುಗಳಲ್ಲಿ ಮೂಡಿ ನಿಲ್ಲುತ್ತಲ್ಲ – ಪ್ರೀತಿ, ಕರುಣೆ, ಅಸಹನೆ, ಹಿಂಸೆ, ನಿರಾಳತೆ, ನಿಟ್ಟುಸಿರು, ಆಕ್ರೋಶ (ಅಸಹಾಯತೆಯಲ್ಲಿ ಹುಟ್ಟಿದ್ದು) ಅವೆಲ್ಲ ಖಂಡಿತಾ ನನ್ನವೇ...

ಬದುಕ ಕೌದಿಯೊಳಗೆ ಇನ್ನೆಷ್ಟು ಕ್ಷಣಗಳು ನನ್ನವಾಗಿ ದಕ್ಕಲು ಮುಗುಮ್ಮಾಗಿ ಮಲಗಿವೆಯೋ... 
ಕಳೆದದ್ದಷ್ಟನ್ನು ಮಾತ್ರ ಎಣಿಸಲು ಶಕ್ತ ನಾನು... 

ಈಗೊಂದಿಷ್ಟು ವರ್ಷಗಳ ಹಿಂದೆ ಜನ್ಮ ತಳೆದ ಈ ಜೀವ ನಿನ್ನೆಗಳ ದಾಟುತ್ತಾ, ಸುಭೀಕ್ಷ ನಾಳೆಗಳ ಭೇಟಿಗೆ ಕನವರಿಸುತ್ತಾ ಇಂದನ್ನು ಮರೆಯದಿರುವಂತೆ ಮನಸ ಅಣಿಗೊಳಿಸಿಕೊಂಡದ್ದೇ ಈ ಜೀವದ ಮಹಾ ಸಾಧನೆ... 
ಈ ಸಾಧನೆ ನಿರಂತರವಾಗಲೆಂದು ಮತ್ತೆ ಮತ್ತೆ ಬಯಸುತ್ತೇನೆ... 
ಹರಸಿ ಬಿಡಿ ನೀವೂ ಒಮ್ಮೆ ಹಾಗಂತ ಇಂದು – ಈ ಜನುಮ ದಿನದಂದು – ಉಸಿರ ಒಡನಾಟ ತಪ್ಪುವ ಹೊತ್ತಲ್ಲೂ ನಗೆಯ ಒಡನಾಟ ತಪ್ಪದಿರಲೆಂದು...

ಬೆಳುದಿಂಗಳ ತೋಟದ ಮೂಲೆಯಲಿ ಮಾತಿನ ಸಮಾಧಿ ಕಟ್ಟಿ - ಮೌನದ ಮುಂಗುರುಳ ಹಿಡಿದು ಜೀಕುತ್ತಾ - ಸುಳಿದಿರುಗಿ ಸುಳಿವ ನೆನಪುಗಳ ಕುಳಿರ್ಗಾಳಿಯಲಿ ಪೊರೆ ಕಳಚಿಕೊಂಡು ಮನಸು ಬತ್ತಲಾಗುವ ಹೊತ್ತಿಗೆ - ಪೂರ್ವದ ಮೋರೆಗೆ ಹೊಸ ಕನಸಿನ ಕೆಂಪಿನ ನಂಜೇರಲಿ...

                                                  ವಿಶ್ವಾಸ ವೃದ್ಧಿಸಲಿ – ಶ್ರೀವತ್ಸ ಕಂಚೀಮನೆ

Sunday, July 5, 2015

ಗೊಂಚಲು - ನೂರು + ಅರವತ್ತು ಮತ್ತು ಒಂದು.....

ಹಗಲಿಗೂ - ಇರುಳಿಗೂ ಒಂದಿಷ್ಟು ಕನಸು.....

ಕಣ್ಣ ಹನಿಗಳನೆಲ್ಲ ಇರುಳ ಕಾವಳದ ಉರಿಗೆ ಸುರಿದು ಬತ್ತಿಸಿಬಿಟ್ಟಿದ್ದೇನೆ...
ಮನಸೀಗ ಖಾಲಿ ಖಜಾನೆ...
ಹೊಸ ಖುಷಿಗಳ ನಗೆ ಹೊನ್ನನು ಗೆದ್ದು ತುಂಬಿಕೊಳ್ಳಬೇಕಿದೆ ಈ ಹಗಲಿಗೆ...
ಶುಭದಿನ...
❤❤❤
ನಿದ್ದೆ ಇಲ್ಲದ ಕ್ಷುದ್ರ ರಾತ್ರಿಯಿಡೀ  ನೆನಪುಗಳ ಕರಗೋತ್ಸವ -
ಮಾರನೇ ಹಗಲಿನ ಕನಸುಗಳ ತುಳಿಯದಿದ್ದರೆ ಅಷ್ಟೇ ಸಾಕು...
ಶುಭರಾತ್ರಿ... 
❤❤❤
ಬೆಳಗೆಂದರೆ ಕನಸಿನ ಮರುಹುಟ್ಟು...
❤❤❤
ಹರಿದ ಸೀರೆಯ ತೊಟ್ಟಿಲಲೂ ಕೂಸು  ಕುಪ್ಪಳಿಸುತ್ತದೆ ಕಿಲಕಿಲನೆ ನಲಿಯುತ್ತ...
ಚಂದ್ರ, ತಾರೆಗಳೆಲ್ಲ ಸೇವಕರು - ನಾಯಿ, ನರಿ, ಕಾಗೆ, ಗುಬ್ಬಿಯರೆಲ್ಲ ಬಂಧು  ಬಳಗ...
ಇರುಳಿದು ಅಮ್ಮನ ಹಾಡಲ್ಲಿ ಕಂದನಿಗೆ ಪಟ್ಟಾಭಿಷೇಕದ ಹೊತ್ತು...
ಶುಭರಾತ್ರಿ... 
❤❤❤
ಕನಸಿನ ಮರಿ ಹಕ್ಕಿಯೊಂದು ಮಗ್ಗಲು ಬದಲಿಸಿ ಆಕಳಿಸಿ ಮೈಮುರಿದು ಕಣ್ತೆರೆಯಿತು...
ಇನ್ನೂ ಹಾರಬೇಕಿರೋ ದೂರವ ಕಂಡು ಸಣ್ಣಗೆ ಕಂಪಿಸಿ ಮತ್ತೆ ರೆಕ್ಕೆ ತಡವಿಕೊಂಡು ಭರವಸೆಯಲಿ ಮೆಲು ನಕ್ಕಿತು...
ಬೆಳಗೆಂದರೆ ಕನಸಿನ ಗುಬ್ಬಿ ಮರಿಯ ಗರುಡ ಯಾನ... 
❤❤❤
ಕೃಷ್ಣನ ಕೊಳಲಿಗೆ ರಾಧೆಯ ನಗು ಉಸಿರ ತುಂಬಿದಂತೆ...
ಅವನ ನೆನಪಿನ ನೆಪವೇ ಅವಳ ಗೆಜ್ಜೆಗೆ ಜೀವ ತುಂಬಿದಂತೆ...
ಅಲ್ಲಲ್ಲ ಕೃಷ್ಣನ ಬಾಂನ್ಸುರಿ, ರಾಧೆಯ ಕಾಲಂದುಗೆಗಳು ಒಟ್ಟಾಗಿ ಮಿಡಿದಂತೆ - ಅವಳೆದೆಯ ಮಾತಿನ ಗಲಗಲ...
ಅವಳಂದದ್ದು:
ಎನ್ನೆದೆಯ ಹಕ್ಕಿನ ಪದಕ ನೀನು ಕಣೋ - ‘ನೀನು’ ‘ನಾನು’ ಎಂಬುದೆಲ್ಲ ಸುಳ್ಳು; ಈ ಇರುಳ ಸಾಂಗತ್ಯ, ಆ ನಾಳೆಯ ಸಾರಥ್ಯ ಎರಡೂ ಇನ್ನೀಗ ಜೊತೆ ಬೆರೆತ ‘ನಾವು...’  
ಇದೀಗ ಬೆಳದಿಂಗಳಿರುಳ ಶಾಂತ ನರ್ಮದೆಯ ದಂಡೆಯ ನಿರಾಳ ಮೌನ ಎನ್ನೆದೆಯಲಿ... 
ಈ ಮೌನ ನಿರಂತರವಾಗಲಿ...
ಶುಭರಾತ್ರಿ...
❤❤❤
ಬೆಳಗೆಂದರೆ ಕನಸಿನ ಸಾರೋಟಿನ ಕುಲುಕಾಟದ ಧೀರ ಚಲನೆ...

Saturday, June 20, 2015

ಗೊಂಚಲು - ನೂರರ ಮೇಲರವತ್ತು.....

ಮಳೆಯ ಮರಿ ಸಾಲುಗಳು.....
(ಮುಂಗಾರಿನಲಿ ನೆನೆವಾಗ ಚಿಗುರಿದ ಭಾವಗಳು...)

ಭ್ರಮೆಗಳ ಗೂಡಿಂದಾಚೆ ಬಂದು ಅರಿವಿನ ಹಾದಿಯ ಏರನೇರಬೇಕಿದೆ...
ಮೌನವೇ ಕಿರು ಬೆರಳ ಭರವಸೆಯಾದರೂ ಆಗು ಬಾ...
ತುಸು ದೂರ ನಗುವಿನಾಸೆಯಿದೆ...
@@@
ಗವ್ವೆನ್ನೋ ವಾಸ್ತವದ ಕ್ರುದ್ಧ ಕತ್ತಲು - ಕಂಗೆಡಿಸೋ ಚಿತ್ರ ವಿಚಿತ್ರ ತಿರುವುಗಳ ಹಾದಿ - ಎಲ್ಲಾ ಜಗಳ, ಜಂಜಡಗಳ ಆಚೆಯೂ ಬೆಸೆದ ಬೆರಳುಗಳ ಸಡಿಲಿಸದ ಸ್ನೇಹಗಳು - ಬದುಕಿದು ಎನ್ನದು ಸ್ನೇಹಾನುಬಂಧಗಳ ಕರುಣೆಯ ಕೈತುತ್ತು...❤ ❤
@@@
ನಿತ್ಯವೂ ಹೊಸ ಭಾವದಿ ಕಾಡುವ ಕನಸವಳು - ಕಪ್ಪು ಹುಡುಗಿ...
ನನ್ನ ಘೋರಿಯ ಮೇಲರಳೋ ನಿಂಬೆ ಹೂವಿಗೂ ಅವಳದೇ ಘಮವಿದ್ದೀತು...
@@@
ಮಳೆಯ ನಾಕು ಹನಿಗೆ ನೆತ್ತಿ ತೋಯಿಸಿಕೊಂಡೆ - ಎಷ್ಟೆಲ್ಲಾ ನೆನಪಿನ ಮರಿಗಳು ಚಿಂವ್ ಚಿಂವ್ ಅನ್ನುತಿವೆ ಎದೆಯಲ್ಲಿ...
ಆ ಕಾಡು - ಮುಗಿಯದ ಕರುಳ ತಿರುವಿನಂಥ ಹಾದಿಗಳು - ಅಲ್ಲಿನ ನಿರ್ಭೀತ ಮೌನ - ನನ್ನೊಳಗಿನ ಸಾವಿರ ಗದ್ದಲ - ಕೈ ಹಿಡಿದು ಜೊತೆ ಬರುತಿದ್ದ ಹುಚ್ಚು ಕನಸುಗಳು...
ಇಲ್ಲಿ, ಈ ಮಹಾ ನಗರದ ಇಕ್ಕಟ್ಟು ಬೀದಿಗಳಲ್ಲಿ ಮಳೆಯೂ ಬಂಜೆಯೇ ಅನ್ನಿಸುತ್ತದೆ...
@@@
ಆಯೀ -
ಬದುಕಿಗೊಂದು ಕಾರಣ ಬೇಕೆಂಬುದಾದರೆ ಮಮತೆಯ ನಿನ್ನೊಲವೇ ನನ್ನೀ ಬದುಕಿಗಿರೋ ಕೊನೆಯ ಉದ್ದೇಶ...
@@@
ಪ್ರಶ್ನೆಯಾಗುಳಿಯದ ಅಥವಾ ಪ್ರಶ್ನೆಯೇ ಹುಟ್ಟದ - ಎದುರಾದದ್ದನ್ನು ಎದುರಾದ ಹಾಗೆಯೇ ಎದೆ ತೆರೆದು ಅನುಭವಿಸಿ ಹಿತವಾಗಿ ನಕ್ಕು ಮುನ್ನಡೆಯಬಹುದಾದ ಕೆಲವಾದರೂ ಘಳಿಗೆಗಳು ದಕ್ಕಲಿ ಎಂಬಾಸೆ ಬದುಕಿಗೆ...
@@@
ನಿತ್ಯ ದಿಂಬಿನಂಚನು ತೋಯಿಸೋ ಕಣ್ಣ ಹನಿಗಳು ಈ ಬದುಕನು ನೀ ಆಳಿದ ಪಳೆಯುಳಿಕೆಯ ಕಥೆ ಹೇಳುತ್ತವೆ...
ಈ ಮಳೆಯ ರಾತ್ರಿಗಳಲ್ಲಿ ನಿದ್ದೆಯ ಕಾಡುವ ಹಾಸಿಗೆಯ ಹಸಿವಿನ ಉರಿಗೆ ನಿನ್ನ ನೆನಪು ತುಪ್ಪವ ಸುರಿಯುತ್ತದೆ...
ಹಗಲಿಗೆ ಆಗೀಗ ನಿನ್ನ ಮುಗುಳ್ನಗು ಜೊತೆಯಾದರೆ ಅಂದಿನ ಸಂಜೆಯ ತಂಪಿಗೆ ಸಾವಿರ ಬಣ್ಣ...
ಈ ಬದುಕಿಗೆ ಇದೀಗ ನೀನೆಂಬ ನೀನು ಮುಗಿದ ಮಹಾ ಸಂಭ್ರಮ ಮತ್ತು ಉಳಿದು ಹೋದ ವಿಚಿತ್ರ ತಳಮಳದ ಪ್ರಶ್ನೆ...

 *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, June 8, 2015

ಗೊಂಚಲು - ನೂರಾ ಐವತ್ತೊಂಬತ್ತು.....

ಹೀಗೆಲ್ಲ ಅನ್ನಿಸುವಾಗ.....
(ನನ್ನ ನೆನಪೇ ನನ್ನ ಕನಸ ಕೊಲ್ಲುವಾಗ...)

ಖುಷಿಗಳೆಲ್ಲಾ ಅಲ್ಪಾಯುಷಿಗಳೇ...!!!
ಯಾರೋ ಹರಸಿಬಿಟ್ಟಂತಿದೆ ನೋವಿಗೆ : ದೀರ್ಘಾಯುಷ್ಮಾನ್ ಭವ...!!!
***
ಹೇ ಸಂಜೆ ಮಳೆಯೇ -
ಭೋರ್ಗರೆದುಬಿಡು ಒಮ್ಮೆ ; ಸಾವಿಲ್ಲದ ನೆನಪುಗಳು, ಎಂದೂ ತೀರದ ಸಾವಿರ ಬಣ್ಣದ ಆಸೆಗಳು, ಬದ್ಧತೆ ಇಲ್ಲದ ಮನಸು ಹುಟ್ಟು ಹಾಕೋ ತೆವಲುಗಳೆಲ್ಲ ಕೊಚ್ಚಿ ಹೋಗಬೇಕಿದೆ ನಿನ್ನೊಡನೆ...
ಜನ್ಮದೊಡನೆ ನಂಟು ಬೆಸೆಯೋ ವಿಕಾರಗಳ ವೀರ್ಯಕ್ಕೆ ಹುಟ್ಟೋ ಒಂದಿಷ್ಟು ಕನಸುಗಳನೂ ಸಾಯಿಸಬೇಕಿದೆ ನಿನ್ನ ಸಾಂಗತ್ಯದಲ್ಲಿ...
ಹಳೆಯ ದಾರಿಗಳನೆಲ್ಲ ಅಳಿಸಿ ಬದುಕ ಸಾರೋಟಿಗೆ ಹೊಸ ಹಾದಿಯ ತೋರಬೇಕಿದೆ...
***
ಹೇ ಸಾವೆಂಬೋ ಮಹಾ ಗುರುವೇ -
ನಿನ್ನಷ್ಟು ಪರಮ ಶ್ರದ್ಧೆಯಿಂದ ಬದುಕಿನ ಪಾಠ ಹೇಳುವ ಮತ್ತೊಬ್ಬನಿಲ್ಲ ಕಣೋ...
ಗುರು ದಕ್ಷಿಣೆಯ ಹರಿವಾಣದಲ್ಲಿ ಉಸಿರಿನೊಂದಿಗೆ ನನ್ನ ಗಳಿಕೆಯ ಒಂದಿಷ್ಟು ನಗೆಯನೂ ಇಟ್ಟು ಕೊಡುವಾಗ ಸುಳ್ಳೇ ಆದರೂ ಕಂಪಿಸದಿರು - ಮತ್ತೆ ಬದುಕಿಗಾಗಿ ನಿನ್ನೊಡನೆ ಕುಸ್ತಿಗಿಳಿದುಬಿಟ್ಟೇನು...
ಮೊದಲೇ ಮಹಾ ವ್ಯಾಮೋಹೀ ಹುಂಬ ಹುಡುಗ ನಾನು...
***
ನನ್ನೀ ಮನಕೆ ಸ್ನೇಹ, ಪ್ರೀತಿಯ ಒಡನಾಟದ ಭಾವ ಬಂಧಗಳಾಚೆ ನಗುವಿದ್ದರೆ ಅದು ಮಸಣದ ಮನೆಯಲ್ಲೇ ಇದ್ದೀತು...
***
ಹೇ ಅಲೆಗಳೇ -
ಬರಸೆಳೆದು ಒಳತಳ್ಳಿ ಬಿಡಿ ಎನ್ನ ನಿಮ್ಮ ಗರ್ಭದ ಮೌನದಾಳಕೆ...
ಜಗದೆಲ್ಲ ತಂತುಗಳಾಚೆಯ ನಿಶ್ಚಿಂತ ನಿದ್ದೆಯಲಿ ಹಗುರಾಗುವ ಬಯಕೆ ಮನಕೆ...
***
ಒಲವು ಒಲವನ್ನ ಹೆರಬೇಕು...
ಕನಸೊಂದು ಹೊಸದಿನ್ನೊಂದಾದರೂ ಕನಸ ಹೊತ್ತು ತರಬೇಕು...
ಆದರೆ -
ನೆನಹುಗಳ ರಕ್ಕಸ ಸಂತತಿಗಳು ಮತ್ತು ವಾಸ್ತವದ ಒಡೆದ ಕನ್ನಡಿ ಚೂರುಗಳು ಸೇರಿ ಮನದ ಗರ್ಭಕೋಶವನೇ ಬಗೆಯುವಾಗ ಬದುಕಿದು ನಗೆಯ ಬೆಳಕ ಹಡೆದೀತಾದರೂ ಹೇಗೆ...!!!
***
ಮತ್ತೆ ಮತ್ತೆ ಅನ್ನಿಸುತ್ತೆ ಪ್ರೇಮದ ಸೌಂದರ್ಯ ಮತ್ತು ವೈಫಲ್ಯ ಎರಡೂ ತನ್ನದು ಅಲ್ಲಲ್ಲ ಕೇವಲ ತನ್ನದು ಎಂಬುವ ಭಾವದ ತೀವ್ರತೆಯಲ್ಲೇ ಇದೆಯೇನೋ...
***
ಈ ನೆನಪುಗಳೊಂದಿಷ್ಟು ರಜೆ ತೆಗೆದುಕೊಂಡರೆಷ್ಟು ಚಂದವಿತ್ತು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, June 5, 2015

ಗೊಂಚಲು - ನೂರು + ಐವತ್ತು + ಎಂಟು.....

ಸುಮ್ಮನೇ ಒಂದಿಷ್ಟು.....
(ಮನದ ಸುಸ್ತು ಅಕ್ಷರವಾಗಿ ಕರಗಿ...)

ಕಳೆಯಬೇಕಿದೆ ಸುಸ್ತು - ಇಳಿಸಿ ಮನದ ಭಾರ...
ನಿನ್ನೆ ಯಾವ ಯಾವುದೋ ಕಾರಣಗಳಿಂದಾಗಿ ಹುಟ್ಟಿಕೊಂಡ ಪ್ರೀತಿ ಇಂದು ಅವವೇ ಕಾರಣಗಳಿಗಾಗಿ ಹೆಳವಾಗಿ ಕೂತಾಗ ಮನಸು ಸೂತಕದ ಬಡ ಜೋಪಡಿ...
ತುಂಬಾನೇ ಭಾರ ಪ್ರೀತಿಯ ಹೆಣ - ಒಂಟಿಯಾಗಿ ಹೊತ್ತು ತಿರುಗಲು ಶಿವನೇ ಆಗಬೇಕೇನೋ...
ನಿಷ್ಕಾರಣ ಪ್ರೀತಿಯ ಮೂಲವ್ಯಾವುದು..??
ಹುಡುಕಿಕೊಳ್ಳಬೇಕಿದೆ ನನ್ನೊಳಗೆ - ಬಂಡೆ ಶಿಲ್ಪವಾಗೋದಷ್ಟು ಸುಲಭವಿಲ್ಲ...
ಆದರೂ....
***
ಈ ಸಂಜೆ ಮಳೆಯೇ ಹೀಗೆ - ಅರ್ಥವೇ ಆಗದ ಹೆಣ್ಣಿನ ಮೌನದ ಹಾಗೆ...
ಗೆಜ್ಜೆ ದನಿಯಲ್ಲಿನ ಒಲವು ಸೆಳೆಯುವ ಹೊತ್ತಲ್ಲೇ ಮಂದಹಾಸದ ಹಿಂದಿನ ನಿಶ್ಯಬ್ದ ಭಿಮ್ಮನೆ ಕಾಡುತ್ತದೆ...
ಕರುಳ ಕೊರೆಯುವ ನೆನಪೂ, ಅವಳೆಡೆಗಿನ ಬೆಚ್ಚನೆ ಕನಸೂ ಒಟ್ಟಿಗೇ ಬೇಯುತ್ತಾ ಎದೆಯ ಕುಲುಮೆಯಲಿ ದಟ್ಟ ಹೊಗೆಯಾಡುತ್ತದೆ...
ಕನಸಿನೋಲಗದ ಸದ್ದು, ಕರುಳಿನಳುವಿನ ನಿಶ್ಯಬ್ದ ಎರಡರ ಮೇಲಾಟದಲ್ಲಿ ಕಣ್ಣ ಕೊಳದ ಕಟ್ಟೆ ಒಡೆಯುತ್ತದೆ...
ಈ ಸಂಜೆ ಮಳೆಯೇ ಹೀಗೆ - ಮಸಣ ಕಟ್ಟೆಯೊಂದಿಗಿನ ಮರುಳನ ಬಡಬಡಿಕೆಯ ಹಾಗೆ.........
***
ಹೇಗೆಲ್ಲ ಅರಳಿ, ಊರೆಲ್ಲ ಸುತ್ತಿ ಸುಳಿದು, ದಕ್ಷಿಣ ಮೂಲೆಯ ಮೂರು ಮತ್ತಾರಡಿಯ ಗೂಡಲ್ಲಿ ಮುಗುಮ್ಮಾಗಿ ಮಲಗಿ ಸ್ಥಾವರವೆನಿಸೋ ಬದುಕು ಜಂಗಮ ಪಾತಳಿ - ನಾ ಹರಿದ ಜೋಳಿಗೆಯ ಜೋಗಿ - ನಡೆವುದೊಂದೆ ಕಾಯಕ - ದಾರಿ ಕರೆದಲ್ಲಿಗೆ, ಕರೆದಾಗ, ಕರೆದಂತೆ...
***
ಮತ್ತೇನಿಲ್ಲ -
ಇದ್ದಿರಬಹುದಾದ ಮನಸಿನ ಕಿಂಚಿತ್ ಒಳ್ಳೇತನ ಕೂಡ ಇರುಳ ಸಾಂಗತ್ಯದಲ್ಲಿ ನಿರ್ಗಹಿಸಲಾಗದ ತೊಡೆ ನಡುವಿನ ಉನ್ಮಾದದಲ್ಲಿ ಸೋರಿ ಹೋಗುವಾಗ ಸೂಳೆ ಮನೆಯ ಪಾವಿತ್ರ್ಯದ ಅರಿವಾಗುತ್ತೆ...
ಅವಳ ಹಸಿ ದೇಹದ ಮೇಲಿನ ನೀಲಿ ನೀಲಿ  ಕಲೆಗಳೆಲ್ಲಾ ಅವಳ ತೊಡೆಗಳ ಬಿರುಸಲ್ಲಿ ತಮ್ಮ ಶೌರ್ಯದ ಅಸ್ತಿತ್ವ ಕಳಕೊಂಡವರು ಉಳಿಸಿ ಹೋದ ಕ್ರೌರ್ಯದ ಗುರುತುಗಳಂತೆ ಕಾಣಿಸಿದರೆ ನಾನು ಅರಸಿಕನೆನಿಸಿಕೊಂಡೇನಲ್ಲವಾ...
ಆ ಕಲೆಗಳಂತೆಯೇ ಅವಳ ಕಣ್ಣ ಹನಿಗಳು ಕೂಡಾ ನೀಲಿಯಾಗಿ ಹರಳುಗಟ್ಟಿದಂತಿದೆ...
ಅವಳ ಅವುಡುಗಚ್ಚಿದ ಸ್ಪರ್ಷದ ಬೆಂಕಿಯಲ್ಲಿ ಆ ಸನ್ಯಾಸಿ ಕೂಡಾ ಮುಕ್ತ ಮುಕ್ತ...
ಇಷ್ಟಾದರೂ ಅವಳ ಹೊಟ್ಟೆಯ ಹಸಿವು ಇಂಗೀತಾ...
ಅವಳಲ್ಲವೆ ನಿಜದ ವಿರಕ್ತ...
***
ಹೇ ಅಮ್ಮನಂಥ ಸ್ನೇಹವೇ -
ನೀ ಏಕಾಂಗಿಯಾಗಿ ಇರುಳ ಗರ್ಭದಲ್ಲಡಗಿ ಕೂತು ಕೆನ್ನೆ ತೋಯಿಸಿಕೊಂಡು ಕರುಳ ಸಂತೈಸಿಕೊಳ್ಳುವಾಗೊಮ್ಮೆಯೂ ಮಡಿಲಾಗದೆ ಹೋದ ನಾನೆಂಬೋ ನನಗೆ ನಿನ್ನ ಉಸಿರ ಮರೆತ ಜಡ ದೇಹದೆದುರಲ್ಲಿ ಬಿಕ್ಕಳಿಸುವ ಹಕ್ಕಾದರೂ ಎಲ್ಲಿಯದು.....

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, June 1, 2015

ಗೊಂಚಲು - ನೂರೈವತ್ತೇಳು.....

ಹಗಲೂ, ಇರುಳೂ ಮತ್ತು ಅವಳು.....
(ಹೆಸರಿಡದ ನನ್ನಾಸೆ ಬಳ್ಳಿ - ಅವಳು...)

ಇರುಳೆಂದರೆ ನನ್ನ ಕಣ್ಣ ಕುಂಡದಲ್ಲಿ ಅವಳು ಹೂವಂತೆ ಅರಳುವ ಹೊತ್ತು...
ಕನಸಿನೂರಲ್ಲಿ ಚಿಣ್ಣರ ಸಂತೆ... 
ಶುಭರಾತ್ರಿ...
❤ ❤ ❤
ಬೆಳಗೆಂದರೆ ಅವಳೆದ್ದು ಮೈಮುರಿದು ನನ್ನ ನೆನಪಲ್ಲಿ ನಾಚಿ ಬೀರಿದ ಮುಗುಳ್ನಗುವಲ್ಲಿ ಕತ್ತಲು ಇಚ್ಛಾ ಮರಣಿಯಾದ ಘಳಿಗೆ...
ಶುಭದಿನ...
❤ ❤ ❤
ಇರುಳೆಂದರೆ -
ಮಂಚದ ಮನೆಯೆಂಬ ಪ್ರೇಮ ಯಾಗಶಾಲೆಯಲ್ಲಿ ಕಿಟಕಿಯಲ್ಲಿಣುಕೋ ಚಂದಿರನೆದೆಯಲೂ ಬಿಸಿಯುಸಿರು ಹೊರಳುವಂತೆ ನನ್ನವಳ ಪ್ರೇಮ ತಾರಕದಲ್ಲಿ ಮಿಡಿದು, ಉನ್ಮತ್ತ ಬೆತ್ತಲೆ ಯಜ್ಞದಲಿ ನಮ್ಮೀರ್ವರ ಮೈ ಮನಗಳೆರಡೂ ಬೆಂದು ಸ್ಪುಟಗೊಂಡು ನಾಳೆಯ ಹಗಲಿಗೆ ಪ್ರೇಮದ ಹೊಸ ಆಭರಣ ಸಿದ್ಧಗೊಳ್ಳೋ ಪರ್ವ ಕಾಲ...
ಶುಭರಾತ್ರಿ...
❤ ❤ ❤
ಬೆಳಗೆಂದರೆ -
ತನ್ನ ಮೈ ತಿರುವು ಏರುಗಳಲಿ ತನ್ನವ ಬಿಡಿಸಿಟ್ಟ ಹುಚ್ಚು ಚಿತ್ತಾರಗಳ ಒಂದೊಂದಾಗಿ ಕಂಡುಕೊಳ್ಳುತ್ತಾ ಇರುಳ ನೆನಹಲ್ಲಿ ಅವಳು ಮತ್ತೆ ಮತ್ತೆ ಕಂಪಿಸಿ ತುಟಿಕಚ್ಚೋ ಕಾಲ...
ರೋಮಾಂಚಿತ ಕನ್ನಡಿ ಕಣ್ ಮಿಟುಕಿಸುತ್ತಿದೆ...
ಶುಭದಿನ...
❤ ❤ ❤
ಅವಳ ತೋಳ್ಗಳು ಬೆಸೆದು ಎನ್ನ ಕೊರಳ ಹಾರವಾಗಿ, ಅವಳ ಬೆನ್ನ ಬಯಲು ಎನ್ನ ಕೈಯ ಕುಂಚದ ಚಮತ್ಕಾರಕೆ ಸಿಕ್ಕ ಖಾಲಿ ಹಾಳೆಯಾಗಿ, ಈ ಇರುಳೆಂದರೆ ಈಗ ಅಡಿಯಿಂದ ಮುಡಿವರೆಗೂ ಶೃಂಗಾರ ಯಾತ್ರೆ... 
ಇರುಳು ಇನ್ನಷ್ಟು ದೀರ್ಘವಾಗಲಿ - ಮುಗಿಯದಿರಲಿ ಎದೆ ಎದೆಗಳ ಕನಸುಗಳ ಪಿಸುಮಾತು...  
ಶುಭರಾತ್ರಿ...
❤ ❤ ❤
ತೋಳ ಬಂಧದಿಂದ ಹಿತವಾಗಿ ಕೊಸರಿ ಕಳಚಿಕೊಂಡು ಚಾದರದೊಳಗಿಂದಲೇ ಅವಳ ಕೈಗಳು ವಸನಗಳನರಸುತ್ತವೆ...
ಇರುಳ ಹಸಿ ಬಿಸಿ ಉತ್ಸವದಲ್ಲಿ ನಾ ತೊಡಿಸಿದ ಮುತ್ತಿನುಂಗುರಗಳ ಬೆಳಕಲ್ಲಿ ಮತ್ತೆ ನೋಡಿ ಮತ್ತೇರುವಾಸೆಯಲಿ ಕಣ್ದೆರೆಯುತ್ತೇನೆ...
ನನ್ನ ತೀರದ ಪೋಲಿತನ ಮತ್ತು ಅವಳ ನಾಚಿಕೆಗಳ ನಡುವೆ ಚಡಪಡಿಕೆಯ ಕದನ...
ಹೊದ್ದ ಚಾದರವನೇ ಸೀರೆಯಾಗಿಸಿಕೊಂಡ ಅವಳು ಗೆದ್ದ ಖುಷಿಯಲ್ಲಿ ಮೈಮುರಿಯುತ್ತಾಳೆ...
ಬೆಳಗಾಯಿತು...
ಅವಳ ತಬ್ಬಿದ ಚಾದರದೆಡೆಗೆ ಅಸೂಯೆಯಿಂದ ನೋಡುತ್ತಾ ಮತ್ತೊಂದು ವಸ್ತ್ರ ಸನ್ಯಾಸದ ರೋಮಾಂಚ ರಾತ್ರಿಗೆ ಕಾಯುತ್ತೇನೆ...
❤ ❤ ❤
ಕಣ್ಣ ಕಕ್ಷೆಯ ತುಂಬಾ ಅವಳ ತುಂಟ ನಗೆಯ ಕಂದೀಲು ಉರಿವಾಗ ಎದೆಯ ಗುಡಿಯಲೀಗ ಪ್ರತಿ ಘಳಿಗೆಯೂ ಪ್ರೇಮ ಪಾರಾಯಣ...
ಇರುಳು ಹೊರಳುತ್ತಿದೆ - ಕನಸಿನೂರಲ್ಲಿ ಮನ್ಮಥನ ಮೆರವಣಿಗೆ ಹೊರಡೋ ಹೊತ್ತು...
ಪ್ರಣಯ ಫಲಿಸಿದರೆ ಹೊಸ ಕನಸಿಗೆ ಜನ್ಮೋತ್ಸವ... 

Monday, May 25, 2015

ಗೊಂಚಲು - ನೂರೈವತ್ತಾರು.....

ಹೀಗೆಲ್ಲ ಅನ್ನಿಸಿ.....

ಓಡಿದರೆ ಅಟ್ಟಾಡಿಸೋ, ಹೊರಳಿ ನಿಂತು ಗುರಾಯಿಸಿದರೆ ಮಳ್ಳು ಮಳ್ಳಾಗಿ ಹಲ್ಕಿರಿಯೋ ತಿರುಬೋಕಿ ಕಂತ್ರಿ ಕುನ್ನಿಯಂಥ ಸಮಾಜವೆಂಬ ಅಸ್ವಸ್ಥರ ಗುಂಪಿನ ಮನ್ನಣೆಗಾಗಿ ಪ್ರೀತಿ, ಸ್ನೇಹಗಳಂಥ ಮಧುರ ಬಾಂಧವ್ಯಗಳೊಡನೆಯ ಆಪ್ತ ಒಡನಾಟಗಳನ್ನೂ ಇಂಚಿಂಚಾಗಿ ಕೊಲ್ಲುವ ಆರೋಪಿತ ಒಳ್ಳೆಯ ಮನಸುಗಳೆಡೆಗೆ ಸದಾ ಕೋಪ ಮಿಶ್ರಿತ ಮರುಕ ನನ್ನದು...
ಚಂದನೆಯ ಬಂಧ ಬೆಸೆಯುವ, ಯಾವ ಮಗ್ಗುಲಿಂದಲೂ ಸಮಾಜದ ಸ್ವಾಸ್ತ್ಯ ಕೆಡಿಸದ ಪ್ರೀತಿ, ಸ್ನೇಹ ಭಾವಗಳ ಪುಟ್ಟ ಪುಟ್ಟ ಅಭಿವ್ಯಕ್ತಿಗಳೆಡೆಗೂ ಕುಹಕದ ಮಾತಾಡೋ ಅಸ್ವಸ್ಥ ಮನಸುಗಳಿಗೆ ತಣ್ಣನೆಯ ನಿರ್ಲಕ್ಷವೇ ಮದ್ದು...
ನಾವು ಬೆಸೆದುಕೊಂಡ ಬಂಧಗಳೆಡೆಗೆ ಪ್ರಾಮಾಣಿಕ ಗೌರವ, ನಿಷ್ಠೆ ಮತ್ತು ನಮ್ಮ ಕ್ರಿಯೆಗಳೆಡೆಗೆ ಸ್ಪಷ್ಟತೆ ಇದ್ದಾಗ ಸಮಾಜದೆಡೆಗಿನ ನಮ್ಮ ನೋಟ ಬದಲಿಸಿಕೊಳ್ಳುವುದೊಳಿತಲ್ಲವಾ...
ಆಗ ಬೇರೆಯದೇ ನಗೆಯ ವಲಯ ದಕ್ಕೀತಲ್ಲವಾ...
ನಮ್ಮಂತೆ ನಾವು ಬದುಕಲಾದೀತು ಕೊಂಚ...
ಇನ್ನು ಸಮಾಜದ ಹೆಸರಲ್ಲಿ, ಅಂತರ್ಮುಖಿ ಎಂಬ ಅಜೆಂಡಾದಡಿಯಲ್ಲಿ ತಮ್ಮ ಮೊಂಡುತನಗಳಿಂದ ಆಪ್ತ ಬಾಂಧವ್ಯಗಳನ್ನು ದೂರ ನಿಲ್ಲಿಸಿಕೊಂಡು ನಂತರ ತಾನು ಒಂಟಿ ಎಂದಳುವ ಮುಗ್ಧ ಒಳ್ಳೇ ಜೀವಿಗಳಿಗೆ ಏನೆನ್ನಲಿ...
ಪ್ರೀತಿ ಇರುವ ಕಾರಣಕ್ಕೆ ಅವರೆಡೆಗೆ ಭರ್ತಿ ಮರುಕ ಹುಟ್ಟುತ್ತೆ ಅಷ್ಟೇ...
***
ಮದುವೆ, ಸಂಸಾರದ ಕನಸಿನ ಅಪೇಕ್ಷೆಯಲ್ಲಿ ಪ್ರೇಮಿಸುವುದಾದಲ್ಲಿ ಪ್ರೇಮದ ಹೊಸತರಲ್ಲಿಯೇ ಮದುವೆಯಾಗುವುದೊಳಿತು. ಯಾಕಂದ್ರೆ ಹೆಚ್ಚಿನ ಪ್ರೇಮಿಗಳು ಪ್ರೇಮವನ್ನಲ್ಲದೇ ಪ್ರೇಮಿಸ್ತೀನೆನ್ನೋ ಭಾವವ ಪ್ರೇಮಿಸೋದ್ರಿಂದ ಅವರ ಪ್ರೇಮ ಹಳತಾದಂತೆ ಹಳಸುವುದೇ ಜಾಸ್ತಿ..!! ಆಗದನ್ನು ಕಾಯಲು ಮದುವೆ ಎಂಬೋ ಬೇಲಿಯಾದರೂ ಇರುತ್ತೆ.
ಮನದ ಮಾತೇನು ಗೊತ್ತಾ -
ಶರಧಿಯ ಸೇರೋ ತೀವ್ರ ಹಂಬಲವಿದ್ದೂ, ಆದರೆ ಅದೊಂದೇ ಗುರಿಯಾಗದೇ ತನ್ನ ಹರಿವಿನಿಕ್ಕೆಲಗಳಲಿ ಅಲ್ಲಲ್ಲಿ ಇಷ್ಟಿಷ್ಟೇ ಇಂಗುತ್ತಾ ಹಸಿರಿಗುಸಿರಾಗುತ್ತಾ ಹರಿವಿಗೆ ಸಾರ್ಥಕ್ಯ ತಂದುಕೊಳ್ಳೋ ತೊರೆಯಂಥ ಪ್ರೇಮ ಕೆಲವರಲ್ಲಾದರೂ ಸ್ಫುರಿಸಲಿ. ಬೇಲಿಯ ಹಂಗಿಲ್ಲದೇ ಪ್ರೇಮವೇ ಪ್ರೇಮವ ಸಲಹಿಕೊಳ್ಳುವಂತಾಗಲಿ. ಹರಿಯುತ್ತ ಹರಿಯುತ್ತ ಶರಧಿ ದಕ್ಕಿದರೆ ಅದರೊಡಲ ತೆರೆಯಾಗಿ - ದಕ್ಕದಿರೆ ಹಸಿರ ಬೇರಿನ ಉಸಿರಾಗಿ ನಗುವ ಜೀವಿಸಲಿ ಪ್ರೇಮ. ಪ್ರೇಮಿ ಅಳಿದಲ್ಲೂ ಬದುಕ ಸೆಲೆಯಾಗಿ ಪ್ರೇಮ ಉಳಿದು ನಗುವುಳಿಯಬೇಕು. ಅದಕೆ ಬೇಲಿಯ ಆಸೆಯಾಚೆಯ ಪ್ರೇಮ ನಮ್ಮೊಳಗೆ ನಗಬೇಕು.
***
ಹೇ ಸಂಜೆ ಮಳೆಯೇ -
ಸುರಿದು ಹೋಗು ಎದೆಯ ಬೊಗಸೆಯೊಳಗೊಂದಿಷ್ಟು ಕಾಷ್ಠ ಮೌನವ...
ಅಲ್ಲಿನೆಲ್ಲ ಭಾವಗಳ ವ್ಯಕ್ತತೆಯಾಚೆ ನಿಂತು ನನ್ನ ನಾ ಸಲಹಿಕೊಳ್ಳಬೇಕಿದೆ - ಅವರಿವರಂತೆ...
ಬೇಸರಗಳನೆಲ್ಲ ಒಳಕೋಣೆಯಲಿ ಬಿಗಿದಿಟ್ಟು, ಬಾಗಿಲಿಗೆ ನಗೆಯ ತೋರಣವಿಟ್ಟು, ಸುತ್ತ ಸುಳಿವ ಬಂಧಗಳಿಗೆಲ್ಲ ಹೊರ ಬಾಗಿಲಲೇ ಮಂದಹಾಸವನುಣಿಸಿ ಕಳುಹುವುದ ಕಲಿಯಬೇಕಿದೆ...
ಅಂಟಿಯೂ ಅಂಟದ, ಅಂಟದೆಯೂ ಅಂಟಿದಂತೆ ತೋರುವ ನಂಟಿನ ನೆಂಟಸ್ತಿಕೆಯ ಸಾಧಿಸಬೇಕಿದೆ - ಮತ್ತೆ ಅವರಿವರಂತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, May 8, 2015

ಗೊಂಚಲು - ನೂರಾ ಐವತ್ತು ಮತ್ತೈದು.....

ಹೀಗೆಲ್ಲ ಅನ್ನಿಸಬಹುದಾ.....!!!
(ಇದು ಕೇವಲ ನನ್ನ ಭಾವ...)

ಸ್ನೇಹವೇ -
ಪ್ರೀತಿ ಹುಟ್ಟಲು, ಸ್ನೇಹಿಗಳಾಗಲು ಕಾರಣಗಳ ಹಂಗಿಲ್ಲ ಅಂತಾರೆ – ನಿಜವಿರಲೂಬಹುದು...(?!)
ಕಾರಣವಿಲ್ಲದೇ ಕುಡಿಯೊಡೆದ ಸ್ನೇಹ, ಪ್ರೀತಿ ಕಾಲಕೂ ಅದೇ ಚಂದವನುಳಿಸಿಕೊಂಡು ನಗಬೇಕೆಂಬುದಾದರೆ ಖಂಡಿತಾ ಒಂದಿಷ್ಟಾದರೂ ಕಾರಣಗಳು ಬೇಕೆನಿಸುತ್ತೆ ನಂಗೆ – ಕಾರಣ ಎನ್ನುವುದಕಿಂತ ತಯಾರಿ ಎಂಬುದು ಸೂಕ್ತವೇನೋ ಅಲ್ಲವಾ...
ಒಂದಿಷ್ಟಾದರೂ ಭಾವಗಳ ಸಾಮ್ಯತೆ ಬೇಕೇನೋ – ಉಹುಂ ಸಾಮ್ಯತೆಯೊಂದೇ ಸಾಲದು ಭಾವಗಳ ಪ್ರಾಮಾಣಿಕ ವ್ಯಕ್ತ ಅನುಸರಣೆಯೂ ಬೇಕು...
ಒಂದಷ್ಟು ಸಮಾನ ಅಭಿರುಚಿಗಳ ಒಡನಾಟ – ಆ ಅಭಿರುಚಿಯಿಂದ ಮೂಡಿದ ಪರಸ್ಪರ ಅಭಿಮಾನ – ಆ ಅಭಿಮಾನ ಹುಟ್ಟು ಹಾಕೋ ಜೀವೋತ್ಸಾಹ ಜೊತೆಗಿರಬೇಕೇನೋ...
ಅಲ್ಲೊಂದಿಷ್ಟು ಭಿನ್ನ ರುಚಿಗಳೂ ಇರಲಿ – ಆಗೀಗ ಸಣ್ಣ ಮುನಿಸೂ ಚಂದವೇ ಬಂಧದಲ್ಲಿ – ಕಾಡಿ ಕೂಡೋವಾಗ ಮೂಡುವ ಹಾಡು ಎಂಥ ಚಂದ ಚಂದ...
ಬಂಧವನ್ನು ಸಲಹಿಕೊಳ್ಳುವಾಗ ನಿಭಾಯಿಸುವ ನಿಟ್ಟಿನಲ್ಲಿ ತನ್ನತನವ ಕಾಯ್ದುಕೊಳ್ಳುತ್ತಲೇ ಒಂದಷ್ಟನ್ನ ಬಿಟ್ಟುಕೊಟ್ಟು ದೊಡ್ಡವರಾಗುವುದು – ‘ನಾನು’ ಕಳೆದು ‘ನಾವು’ ಆಗುವುದು ಎಲ್ಲವೂ ನಮ್ಮೊಳಗೆ ಚಂದವೆನಿಸಬೇಕು...
ಭೂತಾಯ ನಿಭಾವಣೆ ಇಲ್ಲದೇ ಹೋದರೆ, ಹಮ್ಮು ಬಿಟ್ಟು ಭೂಮಿಯಾಳಕೆ ಬೇರನಿಳಿಸದೇ ಹೋದರೆ ಅಷ್ಟು ಹಿರಿದಾದ ಆಲವೂ ಸಣ್ಣ ಸುಳಿ ಗಾಳಿಗೂ ಅಡ್ಡಡ್ಡ ಮಲಗೀತು ಅಲ್ಲವಾ...
ಪ್ರಜ್ಞೆಯ ಕೈಸಾರಣೆಯಲ್ಲಿ ಒಡನಾಟದ ನೀರು ಗೊಬ್ಬರದ ಆರೈಕೆ ನೀಡಿ ಸಲಹಿಕೊಳ್ಳದೇ ಹೋದರೆ ಸಾಗುತ್ತಾ ಸಾಗುತ್ತಾ ಆರಂಭದ ತೀವ್ರತೆ ಕಳಕೊಂಡ ಪ್ರೀತಿ ಸಲಿಗೆ ಸತ್ತು ಸದರಕ್ಕೆ ಬಿದ್ದು ನಿತ್ಯದ ನಾವೀನ್ಯ ಉಳಿಯದೇ ಅರಿವೇ ಆಗದೇ ಕಳೆದು ಹೋಗುತ್ತೆ – ಜತೆ ಜತೆಗೆ ಬದುಕಿನ ಅಮೂಲ್ಯ ಘಳಿಗೆಗಳು ಮತ್ತು ಭಾವಗಳನ್ನೂ ಕೊಂಡೊಯ್ದಿರುತ್ತೆ...
ಮೌನ ಮುರಿದು ಮಾತಾಗುವುದೆಂದರೆ, ಸರಾಗವಾಗಿ ಒಡನಾಡುವುದೆಂದರೆ ಬಯಲಲ್ಲಿ ಬೆತ್ತಲಾಗುವುದು ಎಂದರ್ಥವಲ್ಲ – ನಮಗೇ ಅಂತ ನಾವೇ ಸೃಷ್ಟಿಸಿಕೊಂಡ ಕೆಲವೇ ಕೆಲವು ಆತ್ಮ ಸಾಂಗತ್ಯಗಳೆದುರಾದರೂ ಮನಸ ಬಿಚ್ಚಿಡಬಲ್ಲವರಾಗುವುದು – ನಮ್ಮವರೆಂದು ನಾವು ಪ್ರಾಮಾಣಿಕವಾಗಿ ನಂಬಿದವರ ಎದುರಾದರೂ ಹಮ್ಮು ತೊರೆದು ಕಣ್ಣ ಹನಿಯಾಗಬಲ್ಲವರಾಗುವುದು...
ಪ್ರೀತಿ, ಸ್ನೇಹಗಳೆಲ್ಲ ಹುಟ್ಟಿದಷ್ಟು ಸುಲಭಕ್ಕೆ ಬದುಕಿ ಬಾಳಲಾರವು – ನಾವೇ ಶಕ್ತಿ ನೀಡಿ ಸಲಹಿಕೊಳ್ಳದೇ ಹೋದರೆ...
ಪ್ರೀತಿಸಲ್ಪಡುವುದನ್ನು ಪ್ರೀತಿಸುವುದಕ್ಕಿಂತ ಮಿಗಿಲಾಗಿ ಪ್ರೀತಿಯ ಹಂಚುವುದನ್ನು ಪ್ರೀತಿಸುವೆವಾದರೆ ಪ್ರಿತಿ ನಮ್ಮ ಶಕ್ತಿಯಾಗಿ ಬೆಳೆದೀತು...
ಈ ಹಂಚುವಿಕೆ ಎಂಬುವಲ್ಲಿ ನಮ್ಮೊಳಗಣ ನೈಜ ಭಾವವನ್ನ ಹಾಗೆ ಹಾಗೇ ಆ ಆ ಕ್ಷಣಕ್ಕೆ ಅದಿದ್ದಂತೆ ವ್ಯಕ್ತಪಡಿಸುವಿಕೆ ಅತಿ ಮುಖ್ಯ ಧಾತು...
ಪ್ರೀತಿ ನನ್ನ ಸಂಪತ್ತು – ಅದನ್ನು ನಾನು ಯಾರಿಗೂ ವ್ಯಕ್ತವಾಗಿ ತೋರಿ ದೊಡ್ಡವನೆನಿಸಿಕೊಳ್ಳಬೇಕಿಲ್ಲ – ನಾನದನ್ನ ಬಯಲಲ್ಲಿ ಬಿಕರಿಗಿಡಲಾರೆ (?) ಎಂದು ಗೋಡೆ ಕಟ್ಟಿಕೊಂಡು ಕೂತರೆ ಸ್ನೇಹದ, ಭಾವ ಬಂಧಗಳ ಒಡನಾಟದ ಆ ಎಲ್ಲ ಖುಷಿಗಳಿಂದ ನಿನ್ನನ್ನ ನೀನೇ ದೂರವಿಟ್ಟುಕೊಂಡು ನಿನಗೆ ನೀನೇ ವಂಚಿಸಿಕೊಂಡಂತೆ ಅನ್ನಿಸುತ್ತೆ ನಂಗೆ...
ವ್ಯಕ್ತವಾಗದೇ ಹೋದರೆ ನೀನೇನೆಂಬುದು ನನಗೂ, ನಾನು ನಿನಗೂ ಸ್ಪಷ್ಟವಾಗುವುದೆಂತು - ಪ್ರೀತಿ ವಿಸ್ತಾರವಾಗುವುದೆಂತು - ಪ್ರೀತಿಯಾಳದ ತಂಪು ಕೈಗೆಟುಕುವುದೆಂತು...
ಮೌನದ ಅರ್ಥ ನಮ್ಮಲ್ಲಿ ನಾವು ಸೃಷ್ಟಿಸಿಕೊಂಡಷ್ಟು - ಕಂಡುಕೊಂಡಷ್ಟು...
ಮಾತೂ ಅರ್ಥವಾಗದೇ ಹೋದೀತು - ಅನರ್ಥವೂ ಆದೀತು - ಆದರೆ ಪರಸ್ಪರ ಒಂದು ಸಂವಹನವನ್ನಾದರೂ ಜಾರಿಯಲ್ಲಿಡುತ್ತೆ - ಅಷ್ಟು ಸಾಕು ಬಂಧ ಉಳಿದುಕೊಳ್ಳಲು, ನಿಧಾನವಾದರೂ ಬೆಳೆದು ನಿಲ್ಲಲು...

ಕಾರಣ ಮತ್ತು ಆತ್ಮದ ತಯಾರಿ ಇಲ್ಲದ ಬದುಕು, ಭಾವ, ಬಂಧ ಯಾವುದಾದರೂ ಹಾಗೇ ಉತ್ಕಟ ಭಾವದ ಬೆಂಬಲ ಇಲ್ಲದ ಶುಷ್ಕ ಸಂಭೋಗದಂತೆ – ಕೊನೇಲಿ ಉಳಿಯುವುದು ಬರೀ ಸುಸ್ತು ಅಷ್ಟೇ...

ಅಲ್ಲೆಲ್ಲೋ ಬೀದಿ ಮೂಲೆಯಲಿ ಅಲೆದಾಡುತಿರೋ ಖುಷಿಗಳನೆಲ್ಲ ಒಂದೊಂದಾಗಿ ಹೆಕ್ಕಿ ತಂದು ಎದೆಯ ಹುಂಡಿಯಲ್ಲಿ ತುಂಬಿಟ್ಟುಕೊಳ್ಳುವಾಸೆ...
ಜೊತೆಗೆ ಬರ್ತೀಯಾ....???

ಬದುಕು ಮಹಾ ಜಿಪುಣ ವ್ಯಾಪಾರಿ – ದಾರಿ ತುಂಬ ಸುಂಕದ ಕಟ್ಟೆಗಳೇ – ಸುಂಕವಾಗಿ ಕಾಲನ ಮಡಿಲಿಗೂ ನಗೆಯನೇ ತುಂಬುವಾಸೆ...
ಕೈ ಜೋಡಿಸ್ತೀಯಾ...???

Sunday, April 19, 2015

ಗೊಂಚಲು - ನೂರೈವತ್ನಾಕು.....

ಸಂಜೆ ಮಳೆ - ಒದ್ದೆ ಭಾವ.....

ಕಿಟಕಿ ಮೂಲೆ - ನಾನು ಮತ್ತು ನನ್ನ ಏಕಾಂತ - ಹೊರಗೆ ಸುರಿವ ಸಂಜೆ ಸೋನೆ...
ಒಳಹೊರಗಾಡುವ ಅವಳ ನೆನಹು...
ನಾಭಿಸ್ಥಾನದಲೆಲ್ಲೋ ಬಯಕೆ ಹೊರಳುವ ಸದ್ದು...
ಕಣ್ಣ ಮೊನೆಯಲಿ ಸಿಂಗಾರ ಮಂಚ...
ಅವಳಿಗಲ್ಲಿ ಗರ್ಭ ಕಟ್ಟಿದ ಕನಸಂತೆ ನಿನ್ನೆ ...
ಬರೆದಿಡಬೇಕಿದೆ ಲಾಲಿ ಹಾಡೊಂದನು ಅವಳಾಸೆಯಂತೆ - ಬೇಕಂತೆ ಉಡುಗೊರೆ ಬೆತ್ತಲಿರುಳ ಮೊದಲ ಜಾವಕೆ...
ಹಹಹಾ...!!!
ಹುಚ್ಚು ಹುಡುಗಿ ಆಕೆ ಸೊನಗಾರನ ಕಾಣುವ ಮೊದಲೇ ಬಡಗಿಯ ಹುಡುಕುತ್ತಿದ್ದಾಳೆ ತೊಟ್ಟಿಲ ಕನಸಿಗೆ ಕಾವು ಕೊಡಲು...
ಕುಲಾವಿ, ಗಿಲಕಿಗಳೆಲ್ಲ ಅದಾಗಲೇ ಅವಳ ಅಂತಃಪುರ ಸಂಗಾತಿಗಳು...
ಮಲ್ಲಿಗೆ ನಲುಗದ ಹೊರತು ಮಗು ಹೊರಳಲಾರದು ಕಣೇ ಮಳ್ಳೀ ಹೂ ಅರಳೋ ಮುನ್ನವೇ ಕಾಯ ಹಂಬಲವೇಕೆ - ಮನದ ಮದುವೆಗೆ ಜಗದ ಬೆಂಬಲವಿಲ್ಲವೇ ಹುಡುಗೀ ಅಂತಂದರೆ;
ಮೋಡ ಕಾಣುವ ಮೊದಲೇ ನೆಲವ ಹದಗೊಳಿಸಿ ಬೀಜ ಎತ್ತಿಡದವನು ರೈತನಾದಾನೆಯೇ - ಮಳ್ಳ ನೀನು - ಕಂದನ ಕನಸೆಂದರೆ ನನಗೆ ನಾಳೆಯ ಎದುರ್ಗೊಳ್ಳಲೊಂದು ಭರವಸೆ, ಶಕ್ತಿ ಕಣೋ  - ನಿನ್ನೆಡೆಗೆ ನನ್ನದು ಚೌಕಟ್ಟುಗಳನೆಲ್ಲ ಮೀರಿದ ಆತ್ಮದ ಮೋಹ, ನಿನ್ನೆಡೆಗಿನ ತುಡಿತದಲ್ಲಿ ನನ್ನ ಮನಸಿದು ಜಗದೆಲ್ಲ ಬೇಲಿಗಳನೂ ಮುರಿದು ಮುನ್ನುಗ್ಗಿ ಕಾಲವೆಷ್ಟೋ ಸಂದುಹೋಯಿತು ಅಂತಾಳೆ...
ಅವಳಿಗೆ ನಾನೆಂದರೆ ಸ್ವಾರ್ಥಗಳ ಹಂಗಿಲ್ಲದ ಸ್ವಚ್ಛ ನಗು...
ಕಪ್ಪು ಹುಡುಗಿ ಅವಳು - ಆತ್ಮ ಅವಳದು ಶುದ್ಧ ಹಂಸೆ...

ಮಳೆ ನಿಂತೇ ಹೋಯ್ತು...

ಇರುಳ ಮೊದಲ ಜಾವದಲಿ ನನ್ನೊಳಗಿನ ಕನಸು ಕಳಚಿ ವಾಸ್ತವದರಿವಲ್ಲಿ ಕಣ್ತೆರೆದರೆ;
"ಎನ್ನೆದೆಯ ಮುಂಬಾಗಿಲಲೇ ಹೊಂಚಿ ಕೂತಿದೆ ನಸುನಗುತ ಬಂಗಾರ ಬಣ್ಣದ ಜಿಂಕೆ - ಅಪಹರಿಸಲು ಎನ್ನ ಉಸಿರ ದೀಪವ..."
ಕಿವಿಯ ಹಾಲೆಯ ಕಚ್ಚಿ ಆಸೆ ಕೆರಳಿಸಿದಷ್ಟು ಸುಲಭವಿಲ್ಲ ಮನಸ ಹಾಳೆಯ ಮೇಲೆ ನಗೆಯ ಕಾವ್ಯ ರಚಿಸುವುದು...
ಬದುಕು ಕಲ್ಪನೆಯಲಿನ ತಿಳಿ ಬೆಚ್ಚನೆ ಇರುಳಲ್ಲ - ಅದು ವಾಸ್ತವದ ಮಡಿಲ ಕೆಂಡ...
ಜಿಂಕೆಯ ಗೆಲುವು ಅವಳ ಕನಸುಗಳ ರಕ್ತ ಹೀರಬಾರದು - ನನ್ನ ತಬ್ಬಿದ ಒಂದೇ ತಪ್ಪಿಗೆ...
ಉಹುಂ ಅವಳ ಕನಸು ನನ್ನಲೂ ನಕ್ಕ ಈ ಘಳಿಗೆ ಅವಳರಿವನು ತಲುಪಲೇಬಾರದು...
ನಾನಿಲ್ಲದ ದಾರೀಲಿ ನಡೆದೂ ಕನಸ ಬೇಟೆಯಾಡೋದ ಕಲಿಸಬೇಕವಳಿಗೆ - ಜಿಂಕೆ ಗೆಲ್ಲುವ ಮುನ್ನ...