Thursday, December 24, 2015

ಗೊಂಚಲು - ಒಂದು ನೂರಾ ಎಪ್ಪತ್ತಾರು.....

ಮತ್ತಿಷ್ಟು ಬಿಡಿ ಭಾವಗಳು.....

ಕವಿತೆ - ಎದೆಯ ಕಪಾಟಿನೊಳಗೆ ಬಚ್ಚಿಟ್ಟ ಎಂದೂ ಕರಗದ ಒಲವಿನ ಒಡವೆ, ಅವಳ ನೆನಪಿನ ನಿರಂತರ ಒರತೆ...
ಬದುಕು - ಗತದ ಗತಿಯ ನೆನಪನೇ ನೇವರಿಸುತ್ತಾ ಅವಳಿಲ್ಲದೆಯೂ ನಗುತಿರುವ ಸುದೀರ್ಘ ಕವಿತೆ...
ಇದೀಗ - ಬದುಕೆಂದರೂ, ಕಪ್ಪು ಹುಡುಗಿಯೆಂದರೂ ಸಾವಿನ ಸಂಗದಲ್ಲಿ ಕಳೆದುಕೊಂಡ ಕಣ್ಣಂಚ ನಗೆಯ ಕನಸು...
^^^^^
ಜಡಿದು ಸುರಿವ ಅಡ್ಡ ಮಳೆಗೆ ನೆತ್ತಿ ಬಿರಿವಂತೆ ತೋಯ್ದರೂ, ಜೋರು ಗಾಳಿಯ ಕೊರೆವ ಛಳಿಗೆ ಒರಟು ಮೈಯಲೂ ನಡುಕವೆದ್ದರೂ ಒಳಗಿನ ಬೆಂಕಿ ಆರುವುದಿಲ್ಲ...
ಹೌದು - ಕರುಳ ಕುದಿಯ ಕ್ರುದ್ಧ ನೆನಪುಗಳಿಗೆಂದೂ ಸಾವಿಲ್ಲ...
ಅಂತೆಯೇ;
ನಿನ್ನೆಯ ಗಾಯಗಳ ಹಸಿ ರಕ್ತವ ಜೀರ್ಣಿಸಿಕೊಂಡು ಮತ್ತೆ ಹಸಿವಿಗೆ ಕೆರಳದ ಎದೆಯಲ್ಲಿ ಕನಸು ಹುಟ್ಟುವುದಿಲ್ಲ...
ನಿದಿರೆಯ ಅಡವಿಟ್ಟು, ಒಂದಿನಿತು ಕನಸುಗಳ ಸರಳ ಪಥ ಬದಲಿಸಿ ಏದುಸಿರಿನ ಕಾಲು ಹಾದಿಯಲಿ ಬೆವರಾಗಿ, ಕಣ್ಣೀರ ಕಂದಾಯ ಕಟ್ಟಿಯಾದರೂ ಬದುಕ ಗೆದ್ದುಕೊಳ್ಳದೇ ಹೋದರೆ ನನ್ನ ಕಣ್ಣ ನಗೆಯ ಶವ ಯಾತ್ರೆಗೆ ನಾನೇ ಹೆಗಲು ಕೊಡದೆ ವಿಧಿಯಿರುವುದಿಲ್ಲ...
ಸಾವಿಗೂ ನಗೆಯ ಸಾಲ ಕೊಡುವುದಾ..?
ನಗೆಯ ಸಾವಿಗೇ ಸಾಕ್ಷಿಯಾಗುವುದಾ..??
ಎತ್ತಿಡುವ ಪ್ರತಿ ಹೆಜ್ಜೆಗೂ ಮುನ್ನ ಕೇಳಿಕೊಳ್ಳಬೇಕಿದೆ ನಾನೇ ನನ್ನ - ಮನಸೇ ಯಾವುದು ನಿನ್ನ ಆಯ್ಕೆ...???
^^^^^
ಕನಸೆಂದರೆ ಮುಚ್ಚಿದ ಕಂಗಳೊಳಗೂ ಮಿರುಗುಡುವ ಬೆಳಕು...
ಹನಿದುಂಬಿದ ಕಂಗಳಲ್ಲಿ ಬೆಳಕು ಕೂಡಾ ಸದಾ ಅಸ್ಪಷ್ಟ...
ಎಷ್ಟೇ ಬೆಳೆದರೂ, ಬೆಳಕಲ್ಲಿ ನಡೆದರೂ ಲಡ್ಡಾಗಿ ಮುಡಿಯಿಂದ ಜಾರದ ಆರು ವಿಷಗಳ ಒಟ್ಟಾಗಿ ಕಟ್ಟಿರುವ 'ನಾನೆಂಬೋ ನಾರು...'
ಅಂಗಳದಲ್ಲಿ ಬೆಳದಿಂಗಳ ಸಾಯಲು ಬಿಟ್ಟು - ಹೊಸ್ತಿಲ ಹಣತೆಯ ಆರಿಸಿ ಇಟ್ಟು - ಕತ್ತಲಿಗಂಜುತ ಕಂಗಳ ಮುಚ್ಚಿ - ಒಂಟಿ ತಾನೆಂದು ಬದುಕಿಡೀ ಕನಲುತ್ತ ಕಳೆಯುವ ಸ್ವಯಂ ಕರುಣೆಯ ಪ್ರಿಯ ಮನುಜ ಪ್ರಾಣಿಗಳೆಡೆಗೆ ನಂಗೆ ಕರುಣೆಯೂ ಹುಟ್ಟದಷ್ಟು ತೀರದ ಅಸಮಾಧಾನ...
^^^^^
ಮತ್ತೆ ಮತ್ತೆ ಭಾವದ ಗೂಡು ಒಡೆಯುತ್ತಲೇ ಇರಬೇಕು - ಆ ಗಾಯವೇ ಜಡ್ಡುಗಟ್ಟಿ ನಡೆಗೆ ನಿರ್ಲಿಪ್ತಿ ಮೈಗೂಡಬೇಕು - ಅಂದಾಗ ಹದಗೊಂಡ ನಿರ್ಲಿಪ್ತಿಯೇ ಬೆಳೆದು ಸ್ಥಿತಪ್ರಜ್ಞೆಯಾದೀತು...
^^^^^
ಓ ಸ್ನೇಹವೇ - ಕನಸಿಲ್ಲದ ನನ್ನ ಕತ್ತಲ ಕಾಡು ದಾರಿಗೆ ನಿನ್ನ ಅಕ್ಕರೆಯ ತಂಪು ನೋಟವೇ ಕೈದೀವಿಗೆ...
ಈ ಎದೆ ಜೋಳಿಗೆಯ ತುಂಬಾ ನಿನ್ನ ಭರವಸೆಯ ತುಂಟ ಕಿರುನಗೆಯ ನೆನಪ ಹೋಳಿಗೆ...
ಹಗಲ ನೆರಳು, ಇರುಳ ಬೆಳಕು, ನಿನ್ನ ಆರೈಕೆಯ ಹೂದೋಟವೀ ಬದುಕು...
^^^^^
ಮಗುವ ಕಪ್ಪು ಕಂಗಳಲ್ಲಿ ನಗೆಯು ಚಂಡೆ ಮದ್ದಳೆಯಾಗಿ ಹೊಂಗನಸುಗಳ ಓಕುಳಿಯಾಟ - ಬಾಲ್ಯವದು ನೆನಪಲ್ಲಿಯೂ ಹೊಂಗೆ ನೆರಳಂಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment