Saturday, January 2, 2016

ಗೊಂಚಲು - ನೂರಾ ಎಪ್ಪತ್ತೇಳು.....

ಮತ್ತದೇ ಬಿಡಿ ಭಾವಗಳು.....

ಬಿದಿರಿನೆದೆಯ ಖಾಲಿಯಲ್ಲಿ ಗೊಲ್ಲನೊಬ್ಬ ತನ್ನೆದೆಯ ಭಾವಗಳ ಉಸಿರಾಗಿ ತುಂಬಿದ;
ಒಲವ ನಾದ ಹೊಮ್ಮಿತು - ಬಿದಿರು ಕೊಳಲಾಯಿತು...
ಕಾರು ಮೋಡದಂಥವಳೇ -
ಎನ್ನ ಒಣ ಎದೆಯ ಬಾಗಿಲಲ್ಲಿ ನಿನ್ನ ಒದ್ದೆ ಹೆಜ್ಜೆಯ ರಂಗೋಲಿ...
ನಿನ್ನಾ ಮುಂಗುರುಳ ತೀಡುವ ಚಿಗುರು ಕಿರುಬೆರಳು, ಕಣ್ಣಂಚ ಕುಡಿಯಲ್ಲಿನ ನಾಚಿಕೆಯ ಉಂಗುರ, ನೆಲ ಕೊರೆವ ಕಾಲ್ಬೆರಳ ಹಸಿ ಬಿಸಿಯ ಹಂಬಲ ಎಲ್ಲ ಒಟ್ಟಾಗಿ ಪಿಸುಗುಟ್ಟಿದ್ದು:
" ಮಳ್ಳಾ,
ಬಿದಿರಾಗು ಉಸಿರಾಗುತೇನೆ - ನಮ್ಮೀರ್ವರ ಒಳ ಮನೆಯ ಖಾಲಿಯನೂ ಒಲವು ತುಂಬಲಿ - ಬದುಕಿದು ಕೊಳಲಾಗಲಿ..."
ಬೀಜ ಬಿರಿಯದೆ ಇದ್ದೀತೆ ಹಸಿ ಮಣ್ಣ ಬಿಸಿಗೆ - ಮನಸೀಗ ಕನಸುಗಳ ಫಲ ಹೊತ್ತ ಮಾಮರ...
!!!
ಹಸಿವು ಹಸಿ ಹಸಿಯಾಗಿ ಕಾಡದೇ ಬದುಕು ದಕ್ಕುವುದಿಲ್ಲ - ಎದೆಯ ಧ್ಯಾನಸ್ಥ ನೆಮ್ಮದಿ ಬದುಕಿನ ಮಹಾ ಹಸಿವು...
ಕನಸ ಹಸಿವು ಸಾಯದೇ ನೆಮ್ಮದಿ ಹುಟ್ಟುವುದಿಲ್ಲ - ಉಸಿರ ಹಸಿವಿಗಿಲ್ಲಿ ಜನ್ಮಾಂತರದ ಕನಸ ನಂಟು...
ಸನ್ಯಾಸವೂ ಹಸಿವಿನ ಮುಖವೇ ಅನ್ನಿಸುವಲ್ಲಿ ಶಾಂತಿ ಅಲ್ಲಿಷ್ಟು ಇಲ್ಲಿಷ್ಟು ಸಿಕ್ಕಂತೆ ಭಾಸವಾಗೋ ಆದರೆ ಒಟ್ಟಾರೆ ಸ್ಥಾಯಿಯಾಗದೆ ಸತಾಯಿಸೋ ಒಂದು ಸಂಚಾರೀ ಭಾವವಷ್ಟೇ ಅನ್ನಿಸಿ ನಿಟ್ಟುಸಿರ ನಗು ಮೂಡುತ್ತೆ...
!!!
ಬದುಕೇ - 
ನಿನ್ನೊಲವೆಂದರೆ ಬೆತ್ತಲಿಗೂ ಅಸ್ಪಷ್ಟತೆಯ ಕರಿ ಪತ್ತಲ ಹೊದೆಸುವ ಈ ಕತ್ತಲಿನಂತೆಯೇ; ಒಳಗಿಳಿದಷ್ಟೂ ಗಾಢ, ಬಗೆದಷ್ಟೂ ನಿಗೂಢ...
!!!
ಬಂಧವೆನ್ನಿ ಸಂಬಂಧವೆನ್ನಿ ಏನೆಂದು ಕೂಗಿದರೂ ಅದು ಹತ್ತಾರು ಭಾವಗಳು ಅಷ್ಟಿಷ್ಟು ಬೆರೆತು ಇಷ್ಟಾದ ಒಟ್ಟು ಮೊತ್ತವೇ ತಾನೆ...
ಒಂದು ಬಾಂಧವ್ಯದ ಸೌಂದರ್ಯ ಮತ್ತು ಆಯಸ್ಸು ನಾವು ಹೇಗೆ ಆ ಭಾವಗಳನೆಲ್ಲ ನಿಭಾಯಿಸುತ್ತೇವೆ ಎಂಬುದನ್ನ ಅವಲಂಭಿಸಿದೆ ಅಲ್ಲವಾ...
ಅಪ್ಪ ಕೈಲಿಡುವ ಪುಡಿಗಾಸಲ್ಲೇ ಪೂರ್ತಾ ಸಂಸಾರದ ಬೇಕು ಬೇಡಗಳ ನಿಭಾಯಿಸೋ ಆಯಿಯ ಬದುಕಿನೆಡೆಗಿನ ಬದ್ಧತೆಯಂಥ ಬದ್ಧತೆಯನ್ನ ನಾವು ಸಲಹಿಕೊಂಡ ಎಲ್ಲ ಬಾಂಧವ್ಯಗಳೆಡೆಗೂ ಪ್ರದರ್ಶಿಸಬಲ್ಲೆವಾದರೆ ಬಂಧ ಎಷ್ಟು ಚಂದ ಗೊತ್ತಾ - ಬದುಕು ಕೂಡಾ...
!!!
ನಡುರಾತ್ರಿ ಮಸಣದ ಮೂಲೆಯಲಿ ನರಿಯೊಂದು ಊಳಿಟ್ಟು ಹೂತ ಹೆಣಗಳಿಗೆ ಲಾಲಿ ಹಾಡಿದೆನೆಂದುಕೊಂಡರೆ ನಗಬೇಡಿ; ನಿದ್ದೆ ಬಾರದ ಕಾವಲು ಮುದುಕಂಗೆ ಇರುಳ ಸಂಗಾತಗಳೆಂದರೆ ನರಿಯ ಹಾಡು ಮತ್ತು ಅರೆಪಾವು ಹುಳಿ ಹೆಂಡ ಅಷ್ಟೇ...
(***ದಯವಿಟ್ಟು ಅರ್ಥ ಕೇಳಬೇಡಿ...)
!!!
ಪೂರ್ವಗ್ರಹಗಳಲ್ಲೇ ಜೀವಿಸುವವರಲ್ಲಿ ಘಟನೆಗಳು ಮಾತ್ರ ಜೀವಂತ - ಘಟನೆಯ ಹಿಂದು ಮುಂದಿನ ಭಾವಗಳಿಗಲ್ಲಿ ಅಸ್ತಿತ್ವವಿಲ್ಲ - ಅಲ್ಲಿ ಪ್ರೀತಿಯೂ ಒಂದು ಘಟನೆ ಅಷ್ಟೇ - ಪೂರ್ವಗ್ರಹ ಅನುಮಾನದ ಅಮ್ಮನಿರಬೇಕೆನಿಸಲ್ಲವಾ...
ಗೆಲುವನಷ್ಟೇ ಎದೆಯಲಿಟ್ಟುಕೊಂಡವಗೆ ಆ ದಾರಿಯ ತಿರುವು, ಕವಲು, ಹಸಿರಿನ ಸೊಬಗೆಲ್ಲಾ ಕಣ್ಣ ಪಟಲದಿಂದಾಚೆಯ ಮಿಥ್ಯೆಗಳೇ - ಅಲ್ಲಿ ಪ್ರೀತಿ ಒಂದು ಮೆಟ್ಟಿಲು ಮಾತ್ರ...
ಅಂತರಂಗದ ಕನ್ನಡಿಗೆ ಕಳ್ಳ ನಗೆಯ ಬೀಗ ಜಡಿದು ಮುಖವಾಡಗಳಲೇ ಬದುಕ ರೂಢಿಸಿಕೊಂಡವರ ನಡುವೆ ಸತ್ಯಕ್ಕೇನೂ ಕೆಲಸವಿಲ್ಲ - ಹೂಸು ಬಿಟ್ಟವ ಮೊದಲು ಮೂಗು ಮುಚ್ಚಿಕೊಳ್ಳುವಂತೆ ಸುಳ್ಳಿಗಲ್ಲಿ ಅಗ್ರ ಪಂಕ್ತಿಯ ಮಣೆ - ಪ್ರೀತಿ ಅಲ್ಲಿ ಬರೀ ಉನ್ಮಾದ...
ಉಳಿದಂತೆ ಎಲ್ಲ ಕುಶಲ...
!!!
ಮನಸೆಂಬೋ ಪಾಳು ಭವಂತಿಯಲ್ಲಿ ಪ್ರೀತಿ, ಸ್ನೇಹ, ಬಂಧಗಳನೂ ಸೇರಿದಂತೆ ಇನ್ನೂ ಸಾಕಷ್ಟು ಕನಸುಗಳ ಕೊಲೆಯಾಗಿದೆ...
ಆರೋಪಿಗಳಾದ ನಾನೇ ಸಾಕಿಕೊಂಡ ದೌರ್ಬಲ್ಯಗಳು ಹಾಗೂ ನೆನಪುಗಳ ದೌರ್ಜನ್ಯವ ಮೀರಲಾಗುತ್ತಿಲ್ಲ...
ಹಾಗಾಗಿ ನನ್ನ ಭಾವಗಳ್ಯಾವುದರ ಮೇಲೂ ಯಾರ್ಯಾರದೋ ಹೊಣೆಯಿಲ್ಲ...
ಮೌನ ಕಣಿವೆಯಲ್ಲಿ ನಗೆಯ ಅಸ್ಥಿ ವಿಸರ್ಜನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment