Thursday, January 7, 2016

ಗೊಂಚಲು - ನೂರಾ ಎಪ್ಪತ್ತು ಮೇಲೆಂಟು.....

ಎಲ್ಲಾ ಬಿಡಿ ಭಾವಗಳೇ.....

ಈ ಸುಳಿವ ಚಳಿ ಗಾಳಿಗೆ ರವಿ ರಾಯನೂ ಹೊತ್ತೇರಿದ ಮೇಲೂ ಮೋಡವ ಹೊದ್ದು ಮಲಗಿದಂತಿದೆ...
ನನಗೋ ಎದೆಯ ಹೊದಿಕೆಯಾದವಳ ಬಿಚ್ಚು ಹೆರಳ ಮರೆಯಲಿ ತುಟಿ ಮಧುವ ಇಷ್ಟಿಷ್ಟೇ ಹೀರಿ ಮತ್ತೇರುತ್ತಾ, ಬೆಸೆದ ಬೆತ್ತಲೆ ಹೊತ್ತಿಸಿದ ಬೆಂಕಿಯಲಿ ತೇಕುವ ಬಿಸಿಯುಸಿರ ಹಿತದಲ್ಲಿ, ವಕ್ಷ ಸಂಪತ್ತಿನ ಸೊಂಪಲ್ಲಿ, ನಾಭಿ ಸುಳಿಯ ಹಸಿವಲ್ಲಿ, ಮತ್ತೇರಿದ ಅವಳ ಕಟಿಯ ಬಿರುಸಿನ ಬಿಸಿಯಲ್ಲಿ ಮಂಡಿಯೂರಿ ಕಳೆದು ಹೋದ ಕಳೆದಿರುಳ ಕನಸಿನದೇ ಗುಂಗು...
=_=_=
ಪವಿತ್ರ ಪ್ರೇಮ, ಆದರ್ಶ ಪ್ರೇಮದ ಮಾತು ಕೇಳುತ್ತೆ ಅಲ್ಲಲ್ಲಿ...
ಪ್ರೇಮದಲ್ಲಿ ಸುಖವಾಗಿರುವುದು, ಖುಷಿ ಖುಷಿಯಾಗಿ ಇರುವುದು ಖಂಡಿತ ಬೇರೆ ಬೇರೆ...
ಆದರ್ಶ ಪುರುಷ ರಾಮನ ರಾಜ್ಯದಲ್ಲಿ ಸುಖಕ್ಕೆ ಕೊರತೆಯೇ..?
ಆದರೂ ಏಕೈಕ ಪತ್ನಿ ಕೂಡಾ ಅಳುತ್ತಲೇ ಭೂಮಿಯೊಡಲ ಸೇರಿದಳಂತೆ...
ರಾಮನಿಗೋ ಪ್ರೇಮವೂ ಆದರ್ಶವೇ ಆಗಿತ್ತೇನೊ...
ಇವನೊಬ್ಬನಿದ್ದಾನೆ ಕೃಷ್ಣ - ಮಹಾ ಲಂಪಟನಂತೆ (?)...
ರಾಜ್ಯದ ತುಂಬಾ ಅವನ ಹೆಣ್ಣುಗಳೇ...
ಆದರೂ 'ಕೃಷ್ಣನಿಗಾಗಿ' ಅತ್ತವರೇ ಎಲ್ಲರೂ - 'ಕೃಷ್ಣನಿಂದಾಗಿ' ಅತ್ತವರ ಸುದ್ದಿ ಇಲ್ಲ ಎಲ್ಲೂ...
ಕೃಷ್ಣಂಗೆ ಪ್ರೇಮ ಬದುಕಿನ ಸ್ಫೂರ್ತಿ ಸೆಲೆಯಂತೆ ಕಾಣುತ್ತೆ...
ಪ್ರೇಮಕ್ಕೆ ಆದರ್ಶದ ಅಥವಾ ಆರೋಪಿತ ಪಾವಿತ್ರ್ಯದ ಬಣ್ಣ ಬಂದಾಗ ಅದು ಕೇವಲ ನಾಲ್ಕು ಗೋಡೆಗಳ ನಡುವಿನ ಸುಖವಾಗಿ ಅಷ್ಟೇ ಉಳಿಯುತ್ತೆ ಅನ್ನಿಸುತ್ತೆ ನಂಗೆ...
ಪ್ರೇಮ ಜೀವನ ದೃಷ್ಟಿಯಾದಾಗ ಅಲ್ಲವೇ ಬದುಕ ಪ್ರೀತಿಯ ಸ್ಫೂರ್ತಿ ಚಿಲುಮೆಯಾದಾಗ ಬೃಂದಾವನದ ಬಯಲು ಸರಸವೂ ಪ್ರೇಮದುತ್ತುಂಗದ ಅಭಿವ್ಯಕ್ತಿಯಷ್ಟೇ; ಬೆಸೆದುಕೊಂಡು, ಬಸಿದುಕೊಂಡು ಯಮುನೆಯಂತೆ ಹರಿದ, ಬೆಳದಿಂಗಳಂತೆ ಮೆರೆದ ಖುಷಿಯಷ್ಟೇ ಅಂತಿಮ ಅಲ್ಲಿ...
ಪ್ರೇಮ ಆದರ್ಶವಾ..?
ಬದುಕಿನ ಸ್ಫೂರ್ತಿ ಸೆಲೆಯಾ..??
ಯಾವುದಾದರೆ ಚಂದ...???
ಪ್ರೇಮದ ಪಾವಿತ್ರ್ಯವನ್ನ ಕೊಲ್ಲುವುದು ಕಾಮವಲ್ಲ - ಭಾವದೊರತೆಯ ಅಭಿವ್ಯಕ್ತಿಯ ಅಭಾವ ಎನ್ನಿಸುತ್ತೆ ನಂಗೆ - ಹಾಗಾಗಿ ನನ್ನ ಆಯ್ಕೆ ಕೃಷ್ಣ...
ಇಷ್ಟಾಗಿಯೂ ಕೊನೇಲಿ ನನ್ನಲುಳಿದ ಪ್ರಶ್ನೆ: ರಾಮ, ಸೀತೆಯರಂತೆಯೇ ರಾಧೆ ಮತ್ತು ಕೃಷ್ಣರನ್ನೂ ದೇವರಾಗಿಸಿ ಕೂರಿಸಿದ್ದು ಮತ್ಯಾರೂ ಅವರಂತಾಗಬಾರದು ಎಂಬುದಕ್ಕಿರಬಹುದಾ...?
(*** ಇಲ್ಲಿ ರಾಮ, ಕೃಷ್ಣರು ಕೇವಲ ಉದಾಹರಣೆಗಷ್ಟೇ... ಇಬ್ಬರ ಮೇಲೂ ಯಾವುದೇ ಪೂರ್ವಗ್ರಹಗಳಿಲ್ಲ...)
=_=_=
ಎಷ್ಟು ಗಾಢ ಈ ನಗೆಯ ಬಣ್ಣ - ಏದುಸಿರಿನ ಭಾರವೂ ಕಾಣದಷ್ಟು...
ಎಷ್ಟೊಂದು ಹಗುರ ಈ ಬದುಕ ಬಟ್ಟೆಯ ನೇಯ್ಗೆ - ನಗೆಯ ಕಿರು ಅಲೆಗೂ ತೇಲುವಷ್ಟು, ಅದೇ ಹೊತ್ತಿಗೆ ಉಸಿರ ಭಾರಕೂ ನಲುಗುವಷ್ಟು...
ಅಬ್ಬಾ ಅದೆಷ್ಟು ಪ್ರಖರ ಆ ಸಾವಿನ ಬೆಳಕು - ಉಸಿರಿದು ಕುಸಿದು, ನಗೆಯ ಕಣ್ಣು ಇಂಗಿ, ಬದುಕು ಮತ್ತೇಳದಂತೆ ಬೆತ್ತಲಾಗುವಷ್ಟು...
=_=_=
ತುಳಸಿ ಕಟ್ಟೆಯೆದುರು ಬೆತ್ತಲೆ ಬಿದ್ದವನ ಸುತ್ತ ಅಳುವ (?) ನೂರಾರು ಮಂದಿ - ಬದುಕ ಬಟ್ಟೆಯ ನೂಲನು ಮಾತ್ರ ನಾನೊಬ್ಬನೇ ನೇಯಬೇಕು...
(*** ಇದು ಎಲ್ಲರ ಸತ್ಯ...)
=_=_=
ಎದುರು ಕೂತ ಸಾವು ಹೊಟ್ಟೆ ಉರಕೊಂಡು ಸಾsssಯಬೇಕು ಹಂಗೆ ಎಲ್ಲಾ ಬಿಗುಮಾನಗಳ ಬಿಟ್ಟು ಈ ಬದುಕಿನೊಡನೆ ಸರಸಕ್ಕೆ ಬೀಳಬೇಕು...
ಕೊಡಬೇಕೆನಿಸಿದ ಪ್ರೀತಿಯ ಅದಿದ್ದಂತೆಯೆ ಆಗಿಂದಾಗ್ಗೆ ಅದು ಸಲ್ಲಬೇಕಾದವರೆದು ಇಟ್ಟುಬಿಡಬೇಕು - ಇಲ್ಲದಿರೆ, ಬದುಕಿನ ಹಾಡಿಂಗೆ ಜೊತೆಯಾಗದೇ ಇದ್ದು ಸಮಾಧಿಯೆದುರು ಅಳಬೇಡ ಅಂತಿದ್ದ ನನ್ನದೇ ಮಾತು ನನ್ನ ಚುಚ್ಚುವಂತಾಗುತ್ತದೆ...
ಸಾವಿಗಿಲ್ಲದ ಬಿಗುಮಾನ, ಸಮಯದ ಅಭಾವವ ಬದುಕ ಪ್ರೀತಿಗೆ ಆರೋಪಿಸಿಕೊಂಡು ಕೊನೆಗೆ ನನ್ನದೇ ಆತ್ಮದೆದುರು ಆರೋಪಿಯಾಗಿ ಕೊರಗುವ ಚಂದವೇನು..??
(*** ಆ ಬೊಗಸೆಯಲ್ಲಿಡಬೇಕಿದ್ದ ಪ್ರೀತಿಯ ತುಂಡೊಂದು ಸಾವಿನ ನಿಷ್ಕರುಣೆಗೆ ಸಿಕ್ಕಿ ನನ್ನ ಕಿಸೆಯಲ್ಲೇ ಉಳಿದೇ ಹೋದ ಹೊತ್ತಲ್ಲಿ...)
=_=_=
ಓ ಇರುಳೇ ಆರೋಪಿಸಲಾರೆ ನಿನ್ನ, ಕಣ್ಣೀರಿನಲ್ಲಿ ಬೊಗಸೆ ತುಂಬಿಸಿಯಾದರೂ ಸರಿ ಕನಸಿನ ದಾರೀಲಿ ಕರುಳ ಇರಿಯುವ ವಿಷ ಲೇಪಿತ ನೆನಪುಗಳ ತೊಳೆದುಬಿಡು ನಿರ್ಭಯ ನಾಳೆಗಾಗಿ...
ಹೇ ಬೆಳಕೇ ಋಣಿಯಾಗುವೆ ನಿನಗೆ, ಮೀರಲಾಗದ ದೌರ್ಬಲ್ಯಗಳಿಂದಾದ ಭಾವಗಳ ಮಾಲಿನ್ಯವ ಮತ್ತೆ ಮತ್ತೆ ಪ್ರಜ್ಞೆಯ ಕುಲುಮೆಯ ಕಾವಿನ ಸ್ಪರ್ಷಕೊಡ್ಡಿ ತೊಡೆದುಬಿಡು ಸ್ವಚ್ಛಂದ ಇಂದಿಗಾಗಿ...
...ಕಾರಣವಿಷ್ಟೇ,
ನನ್ನ ಕಾಮದಷ್ಟೇ ಹುಚ್ಚು ತೀವ್ರತೆಯಲ್ಲೇ ಈ ಬದುಕ ಪ್ರತಿ ಕ್ಷಣಗಳನೂ ಜೀವಿಸಬೇಕಿದೆ ನಾನು - ಸಾವು, ನೋವುಗಳ ಅಸ್ತಿತ್ವವನೇ ಕಡೆಗಣಿಸಿ ಅಣಕಿಸಬಲ್ಲ ಶ್ರೀಮಂತ ನಗೆಯ ಪಕ್ಷಪಾತಿಯಾಗಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment