Sunday, March 27, 2011

ಗೊಂಚಲು - ಹತ್ತು...

ನಿದ್ದೆಗೆ  ವಿಚಿತ್ರ  ಕನಸುಗಳು  ಭೇಟಿ  ಕೊಡುತ್ತಿವೆ.

ರಾತ್ರಿಯ  ನಿಶೀಥದಲ್ಲಿ  ಕಂಡ  ಕನಸುಗಳಿಗೆ
ಹಗಲಿನ  ನಿಚ್ಛಳದಲ್ಲಿ  ಅರ್ಥ  ಹುಡುಕುತ್ತಿದ್ದೇನೆ.

ನಾನು  ಓಡುತ್ತಿದ್ದೇನೆ  ಧೋ  ಮಳೆಯಲ್ಲಿ.

ತಲೆ  ತಗ್ಗಿಸಿದ್ದೇನೆ - ಕಾರಣ  ನಾ  ಬೆತ್ತಲಿದ್ದೇನೆ.

ಬೆನ್ನ  ಹಿಂದೆ,  ತೀರ  ಸನಿಹದಲ್ಲಿ  ಯಾತರದೋ  ಹೆಜ್ಜೆ  ಸದ್ದು.

ತಿರುಗಿ  ನೋಡಲು  ಭಯವಾಗುತ್ತೆ. 

ನಾನು  ಬೆಚ್ಚಿ  ಎಚ್ಚರಾಗುತ್ತೇನೆ.

ಮನದಾಳದ  ಹಗಲಿನ  ತಲ್ಲಣಗಳೇ
ನಿದ್ದೆಯ  ರಾತ್ರಿಯ  ಸ್ವಪ್ನಗಳಂತೆ.

ಹಾಗಾದರೆ  ನನ್ನ  ಕಾಡುವ  ಸುಪ್ತ  ತಲ್ಲಣ  ಯಾವುದು.?

ರಾತ್ರಿಯ  ಸ್ವಪ್ನವನ್ನು  ವಿಶ್ಲೇಷಿಸಿದಂತೆಲ್ಲ 
ಮನದಿ  ದ್ವಂದ್ವಗಳ  ದೊಂಬರಾಟ.
ಎಲ್ಲ  ಪ್ರಶ್ನಾರ್ಥಕ.


ನಾನು  ಓಡುತ್ತಿದ್ದೇನೆ - ಯಾವುದರಿಂದ ?
ಯಾವುದರೆಡೆಗೆ ?

ಸುರಿವ  ಧೋ  ಮಳೆ - ಈಡೇರದ  ಆಸೆಗಳದಾ ?

ಬಯಸುತ್ತೇನೆ  ಯಾರೂ  ಇದಿರಾಗದಿರಲೆಂದು  -
ಎದುರಿಸಲಾಗದ  ಅಸಹಾಯಕತೆಯಾ ?
ಮನವೂ  ಬತ್ತಲಾದೀತೆಂಬ  ಭಯವಾ ?

ಕತ್ತನ್ನು  ಪೂರ್ಣ  ಬಾಗಿಸಿದ್ದೇನೆ  ಯಾರೂ  ಗುರುತಿಸದಿರಲೆಂದು - 
ಅನಾಮಧೇಯ  ಪಥಿಕನಾಗುವ  ಆಸೆಯಾ ?
ಮುತ್ತಿಕ್ಕುವ  ಹಳೆಯ  ನೋವ  ನೆನಪುಗಳಿಂದ  ತಪ್ಪಿಸಿಕೊಳ್ಳೋ  ವ್ಯರ್ಥ  ಪ್ರಯತ್ನವಾ ?

ಆದರೂ  ಯಾರೋ  ಇದಿರಾಗ್ತಾರೆ.
ಹಾಗೇ  ಗುರುತಿಸಿಯೂಬಿಡ್ತಾರೆ.
ಕೆಲವರು  ನನ್ನ  ಹೆಸರಿನಿಂದ - ಒಳಗೊಳಗೇ  ಏನೋ  ಖುಷಿ.
ಕೆಲವರು  ಅಪ್ಪನ  ಹೆಸರು, ವಂಶದ  ಹೆಸರಿಂದ -  ಅಸಹ್ಯವಾಗುತ್ತೆ.

ಓಡುತ್ತೇನೆ  ಇನ್ನಷ್ಟು  ವೇಗವಾಗಿ.
ಗಮ್ಯ  ಯಾವುದು ?
ಬರೀ  ಶೂನ್ಯ... 

ಯಾರದು  ಬೆನ್ನ  ಹಿಂದೆ  ಇಷ್ಟು  ಸನಿಹ ?

ನನ್ನ  ತಲ್ಲಣದ  ಮೂಲ - ಕನಸಿನ  ಮೂಲ  ಎಲ್ಲ  ಅದೇನಾ ?

ತಿರುಗಿ  ನೋಡಲೂ  ಭಯ. ಅಂದುಕೊಂಡದ್ದು  ನಿಜವಾಗಿಬಿಟ್ಟರೆ ?

ಬೆನ್ನ  ಹಿಂದೆ  ಇಷ್ಟೊಂದು  ಸನಿಹದಲ್ಲಿ  ನೆರಳಂತೆ  ಹಿಂಬಾಲಿಸಿ
ಬರುತ್ತಿರೋದು...
ಅದು...
: : : : :
: : : :
: : :
: :
:
ಸಾವಾ.....??????


Sunday, March 13, 2011

ಗೊಂಚಲು - ಒಂಭತ್ತು...



ಆಗಸದ  ಚಂದ್ರಮ  ಭುವಿಯ  ಮುತ್ತಿಕ್ಕಲು  ಬಾಗುವನಂತೆ...


ಹಸಿದ  ಧರಣಿ  ಬಾಯ್ಬಿರಿವುದಂತೆ...


ಆಸೆಯ  ಶರಧಿ  ಉಕ್ಕಿ  ತನ್ನ  ಮಿತಿಯ  ಮೀರುವುದಂತೆ...


ಸಹಜ  ಸಂದರ್ಭದಲ್ಲಿ  ರತಿ  ರಮ್ಯವಾದ  ಪ್ರಕೃತಿಯೇ -
ಮುನಿದಾಗ,


ಅಟ್ಟಹಾಸದಿ  ಜವರಾಯ  ತನ್ನ  ರಾಜ್ಯ  ವಿಸ್ತರಿಸುವನಂತೆ...


ಆಗ -
ಊರು - ಕೇರಿಗಳೆಲ್ಲ  ಬರೀ  ಸ್ಮಶಾನದಂತೆ...









































ಮುನಿದ  ಪ್ರಕೃತಿ  ಶಾಂತವಾಗಲಿ.


ಜಪಾನಿನ  ಆ  ನೆಲದಲ್ಲಿ  ಚೈತನ್ಯ  ಮತ್ತೆ  ಚಿಗುರಲಿ.


ಅಳುವ  ಕಡಲಲಿ  ಮತ್ತೆ  ತೇಲಿ  ಬರಲಿ
ನಗೆಯ  ಹಾಯಿ  ದೋಣಿ...

Sunday, March 6, 2011

ಗೊಂಚಲು - ಎಂಟು...

ಕೆಲವು  ಭಾವಗಳಿಗೆ

ಅರ್ಥ  ಮತ್ತು  ಮೂಲ

ಹುಡುಕಬೇಡಿ.

ಮರ್ಕಟ  ಮನಸಿನ 

   ವಿಕಾರ  ಗೋಚರಿಸೀತು...

Wednesday, March 2, 2011

ಗೊಂಚಲು - ಏಳು...

"ಜನಿಸಿದ  ಘಳಿಗೆಯ  ನಂತರದ  ಪ್ರತಿ  ಕ್ಷಣವೂ  ಸಾವಿನದಾಗಬಹುದಾದರೆ - ಈ  ಕ್ಷಣ  ನಾವು  ಬದುಕಿದ್ದೇವೆ  ಎನ್ನುವುದಕ್ಕಿಂತ  ದೊಡ್ಡ  ಕಾರಣ  ಇನ್ಯಾವುದು  ಬೇಕು  ಈ  ಬದುಕನ್ನು  ಪ್ರೀತಿಸಲು, ಆಸ್ವಾದಿಸಲು.  ಈ  ಜೀವನವ  ಆರಾಧಿಸಲು."

"ಸಾವು - ಅಂತಿಮ  ವಾಸ್ತವವಾದರೆ,  ಬದುಕು - ನಿತ್ಯ  ಸತ್ಯ..."

ಬದುಕನ್ನು  ಪ್ರೀತಿಸುವವರಿಗೆ  ಈ  ಬದುಕಿನ  ಬಗ್ಗೆ,  ಅದು  ಕೊಡಮಾಡಿದ  ಸುಖ - ದುಃಖಗಳ  ಬಗ್ಗೆ,  ಆಸೆ - ನಿರಾಸೆಗಳ  ಕಡೆಗೆ  ಯಾವೊಂದೂ  ತಕರಾರುಗಳಿರುವುದಿಲ್ಲ.  ಬದುಕನ್ನು  ಯಾವುದೇ  ಪೂರ್ವಾಗ್ರಹಗಳಿಲ್ಲದೆಯೇ ಪ್ರಾಮಾಣಿಕವಾಗಿ  ಪ್ರೀತಿಸಬಲ್ಲವನು  ಸಾವನ್ನು  ಕೂಡ  ಸಮಚಿತ್ತದಿಂದ  ನೋಡಬಲ್ಲವನಾಗುತ್ತಾನೆ.

ಬದುಕಿರುವ  ಪ್ರತಿ  ಘಳಿಗೆಯನ್ನೂ  ಅದಮ್ಯವಾಗಿ  ಪ್ರೀತಿಸುತ್ತಾ - ಸಾವನ್ನೂ  ಗೌರವದಿಂದ  ನಗುತ್ತ  ಸ್ವಾಗತಿಸಬಲ್ಲವನಾಗುವುದರೆಡೆಗೆ  ನನ್ನ  "ಪಯಣ..."

ಸಾವು - ಒಂದು  ನಿಲ್ದಾಣ ?????