Tuesday, July 31, 2012

ಗೊಂಚಲು - ಮೂವತ್ತು ಮೇಲೇಳು.....


ಜನುಮ ದಿನ.....

ಈ ಸಂಜೆ ಸರಿದು - ಈ ರಾತ್ರಿ ಕಳೆದರೆ ನಾಳೆ ಹುಟ್ಟುತ್ತದೆ.
ಆ ನಾಳೆಯೊಂದಿಗೆ ನನ್ನ ಬದುಕಿನ ಹೊಸ ವರ್ಷ ಪ್ರಾರಂಭವಾಗುತ್ತೆ.
ಅಂದರೆ ಆ ನಾಳೆ ನನ್ನ ಹುಟ್ಟು ಹಬ್ಬ.
ಅದು ನಂಗೆ ನನ್ನ ಆಯುಷ್ಯವನ್ನು ನೆನಪಿಸುತ್ತೆ.
ಹಾಂ..!!
ನನ್ನ ಆಯುಷ್ಯದ ಖಾತೆಯಿಂದ ಇನ್ನೂ ಒಂದು ವರ್ಷ ಕಡಿಮೆ ಆಯ್ತು.
ಹೊಸದೇನೂ ಸಂಭವಿಸದೆ - ಏನೇನೂ ಸಾಧಿಸದೇ.
ಆಯುಷ್ಯದ ಖಾತೆಯಲ್ಲಿ ಎಷ್ಟು ವರ್ಷಗಳು ಬಾಕಿ ಉಳಿದಿವೆಯೋ ನಂಗೊತ್ತಿಲ್ಲ.
ಖರ್ಚಾದದ್ದಷ್ಟೇ ಲೆಕ್ಕಕ್ಕೆ ಸಿಗೋದು.
ಅದಕ್ಕೇ ಭಯವಾಗೋದು.
ಏನಂದ್ರೆ ಏನೂ ಸಾಧಿಸದೇ ಹೀಗೇ ವೈಫಲ್ಯಗಳೊಂದಿಗೆ ನಿರರ್ಥಕವಾಗಿ ಬದುಕಿ ಕೊನೆಗೊಂದು ದಿನ ಖಾತೇಲಿನ ಶಿಲ್ಕು ಖಾಲಿಯಾಗಿ ಹಾಗೇ.........


ಕಳೆದ ಮೂರು ದಶಕಗಳ ಹಿಂದೆ ಇದೇ ಆಗಸ್ಟ್ ಒಂದನೇ ತಾರೀಖಿನ ಭಾನುವಾರದ ಮುಂಜಾವಿನಲ್ಲಿ ಆಯಿಯ ಗರ್ಭ ಸೀಳಿ ಮೊದಲಬಾರಿಗೆ ಈ ಬದುಕಿಗೆ ಕಣ್ತೆರೆದಿದ್ದೆ. 
ಒಂದೇ ಸಮ ಅಳುತ್ತಲಿದ್ದೆನಂತೆ. ಆಯಿ ಹೇಳಿದ್ದು.
ಕಾರಣ ನೆನಪಿಲ್ಲ.
ಇಂದಿಗೂ ಅಳುತ್ತಲೇ ಇದ್ದೇನೆ. ಆಯಿಗೆ ಗೊತ್ತಾಗದಂತೆ.
ಕಾರಣ ಇಂತದ್ದೇ ಅಂತ ಹೇಳಲಾಗುತ್ತಿಲ್ಲ.
ಅಂದಿನ ಸಣ್ಣ ಅಳುವಿಗೂ ಅಮ್ಮ ಎತ್ತಿ ಎದೆಗವುಚಿಕೊಳ್ಳುತ್ತಿದ್ದಳು.
ನನ್ನ ಹಸಿವಿಗೆ ಅವಳೆದೆಯಲ್ಲಿ ಸದಾ ಅಮೃತ ಜಿನುಗುತ್ತಿರುತ್ತಿತ್ತು.
ಆ ಅಮೃತವ ಹೀರಿ ಬಹು ಬೇಗ ಬೆಳೆದುಬಿಟ್ಟೆ ಅನ್ನಿಸುತ್ತೆ.
ಅದಕ್ಕೇ ಅಮ್ಮನ ಮಡಿಲಿಂದ ಜಾರಿ ಬದುಕ ಸಾಗರಕ್ಕೆ ಬಿದ್ದುಬಿಟ್ಟೆ.
ಅಮ್ಮನ ಹಾರೈಕೆ ಇದ್ದೇ ಇದೆ ಬೆನ್ನಿಗೆ.
ಆದರೂ ಸಲಹುವ ಹಕ್ಕೀಗ ಬದುಕಿನದು.
ಬದುಕು ಅಮ್ಮನಷ್ಟು ಕರುಣಾಳುವಲ್ಲ ಅನ್ನಿಸುತ್ತೆ.
ಒಮ್ಮೊಮ್ಮೆ ನಾ ತುಂಬ ರಚ್ಚೆ ಹಿಡಿದಾಗ ತನ್ನೊಡಲಿಂದ ಸಣ್ಣಪುಟ್ಟ ಗೆಲುವುಗಳ ಗೊಂಬೆಯ ಎತ್ತಿಕೊಟ್ಟರೂ ಹೆಚ್ಚಿನ ಸಲ ನನ್ನ ಹಸಿವನ್ನು ಅರಿತೂ ಸುಮ್ಮನಿದ್ದುಬಿಡುತ್ತದೆ ಬದುಕು.
ನನಗೋ ಬಕಾಸುರನ ಹಸಿವು.


ಸುದೀರ್ಘ ಮೂವತ್ತು ವಸಂತಗಳು ಕಳೆದು ಹೋದವು -
'ಹಂಗೇ ಸುಮ್ಮನೇ...'
ಇನ್ನೆಷ್ಟು ವರುಷಗಳು ಕಳೆದು ಹೋಗುತ್ವೇನೋ -
'ಹೀಗೇ ಸುಮ್ ಸುಮ್ಮನೇ...'
ಏನಂದ್ರೆ ಏನೂ ಘಟಿಸದೇ.
ಹೇಳಿಕೊಳ್ಳೋಕೆ ಒಂದೂ ಸಾಧನೆಗಳಿಲ್ಲದೆ.
ಬದುಕಿ ಬಿಡಬಹುದು ಹಾಗೆ - ಹೀಗೆ ಸಾವು ಬರೋ ತಂಕಾ.
ಆದ್ರೆ ಹಾಗೆ - ಹೀಗೆ ಅಂತ ಸುಮ್ಮನೆ ಕಳೆದ್ಬಿಡೋದು ಎಷ್ಟು ಸರಿ.
ಹುಟ್ಟಿದ್ದು ಮನುಷ್ಯ ಜನ್ಮದಲ್ಲಿ.
ಆಮೇಲೆ ಸಾವಿನಾಚೆ ಯಮಧರ್ಮ [:)] ಏನ್ಮಾಡಿದೆ ಇಷ್ಟು ಕಾಲದ ಬದುಕಲ್ಲಿ ಅಂತ ಕೇಳಿದ್ರೆ ಹೇಳೋಕೊಂದು ಪುಟ್ಟ ಸಾಧನೆಯಾದ್ರೂ ಬೇಡ್ವಾ.
ಸಾಯೋತಂಕಾ ಬದ್ಕೊಂಡಿದ್ದೆ ಅನ್ನೋದೂ ಒಂದು ಸಾಧನೆಯಾ..??
ನನ್ನ ಆಲಸ್ಯ, ಅಸಮರ್ಥತೆಗಳಿಗೆ ಯಾವುದೋ ಕಾಣದ ದೈವವನ್ನೋ - ಓದಲಾಗದ ಹಣೆಬರಹವನ್ನೋ ದೂಷಿಸ್ತಾ, ಹಾಗಂತಲೇ ನನ್ನನ್ನು ನಾನೇ ನಂಬಿಸಿಕೊಳ್ತಾ, ಉಳಿದವರನ್ನು ನಂಬಿಸಲು ಒದ್ದಾಡುತ್ತಾ ಸುಳ್ಳೇ ಭ್ರಮೆಗಳಲ್ಲಿ ಇನ್ನೆಷ್ಟು ಕಾಲ ತಳ್ಳೋದು..??
ಎಲ್ಲ ಪ್ರಶ್ನೆಗಳೇ...


ಉತ್ತರ..???
ಇದ್ದೀತು ನನ್ನಲ್ಲೇ...
ಆದ್ರೆ ಹುಡುಕಿಕೊಳ್ಳೋಕೆ ಅಡ್ಡಿ ಬೆನ್ನಿಗಂಟಿದ ಆಲಸ್ಯ ಮತ್ತು ಉತ್ತರ ಸಿಕ್ಕಿಬಿಟ್ಟರೆ ಎಂಬ ಭಯ.


ಬದುಕು = ನಿನ್ನೆಗಳ ಕನವರಿಕೆ ಮತ್ತು ನಾಳೆಗಳ ವೈಭವದ ಕನಸುಗಳಲ್ಲಿ ನಿದ್ದೆ ಹೋದ ಈ ದಿನ...


ರಾತ್ರಿ ಕಳೆದು ಬೆಳಗಾದರೆ ಬದುಕಿಗೆ ಹೊಸ ಸಂವತ್ಸರದ ಸಂಭ್ರಮ.
ಕಳೆದ ಬದುಕ ವಿಮರ್ಶಿಸಿಕೊಂಡಾಗ ವ್ಯಥೆಯಾದರೂ - ಬರುವ ನಾಳೆಗಾಗಿ, ಅದು ತರಬಹುದಾದ ನಗುವಿನ ಆಸೆಗಾಗಿ ಮನಸು ಮುದಗೊಳ್ಳುತ್ತೆ.
ಹೌದು
ಬರುವ ನಾಳೆ ನಗುವಿನೊಂದಿಗೆ ನೋವನ್ನೂ ಹೊತ್ತು ತಂದೀತು.
ಬೇಸರವೇನಿಲ್ಲ.
ಬರುವ ಆ ನೋವು ಹೋಗುವಾಗ ಒಂದು ದಿವ್ಯ ನಗುವನ್ನು ಉಳಿಸಿಹೋಗುತ್ತಲ್ಲ.
ಪ್ರತಿ ರಾತ್ರಿಯ ನಂತರವೂ ಒಂದು ಹಗಲಿದ್ದೇ ಇದೆಯಲ್ಲ.
ಇಂದಿನವರೆಗಿನ ಸೋಲು - ನೋವುಗಳನೆಲ್ಲ ರಾತ್ರಿಯ ಕಾವಳದಲ್ಲಿ ಹೂತು ಗೆಲುವು - ನಲಿವುಗಳನ್ನು ಹೊತ್ತು ನಾಳೆಯ ಸೂರ್ಯ ಉದಯಿಸುತ್ತಾನೆ.
ಈ ಭರವಸೆಯ ಭಾವ ಮನಸಿಗೆ ಹೊಸ ಶಕ್ತಿ ನೀಡುತ್ತೆ ಮತ್ತು ನಾಳೆಯ ಬಗ್ಗೆ ನಂಬಿಕೆಯನ್ನು ಮೂಡಿಸುತ್ತೆ.
ನಾಳೆಗಳೆಡೆಗಿನ ಭರವಸೆಗಳೇ ಅಲ್ಲವಾ ಬದುಕಿನ ಮೂಲಾಧಾರವಾದ ಒಳಸೆಲೆ.


"ಬದುಕ ಶರಧಿಯ ಅನಿಶ್ಚಿತ ಅಲೆಗಳ ಮೇಲೆ ಭರವಸೆಯ ದೋಣಿಯಲಿ ಕೂತು ನಗುವಿನ ಹುಟ್ಟು ಹಾಕುತ್ತಾ ಸಾಗುತಿದೆ ಒಬ್ಬಂಟಿ ಪಯಣ..."
ಭರವಸೆಯ ದೋಣಿಗೆ ತೂತಾದರೆ ಬದುಕು ಮಗುಚಿ ಬಿದ್ದಂತೆಯೇ ಸರಿ.


ನಾಳಿನ ಸೂರ್ಯ ಒಂದಿಷ್ಟು ಹೊಸ ಭರವಸೆಗಳ ಕಿರಣಗಳ ಹೊತ್ತು ಮುಂಬಾಗಿಲಲಿ ಬಂದು ನಿಲ್ತಾನೆ.
ಒಂದಷ್ಟು ಹೊಸ ನಲಿವು - ನಗುವುಗಳು ನನ್ನದಾಗುತ್ತವೆಂಬ ಆಸೆಯಿಂದ...


ಬದುಕಿನ ಮರದ ರೆಂಬೆಗಳು ಆಲದಂತೆ ಅಗಲಗಲ ವಿಶಾಲವಾಗಿ ಹಬ್ಬಿ ಬೆಳೆಯಲಿ - ಸಾವಿರ ಖಗ, ಮೃಗಗಳಿಗೆ ಗೂಡಿಗೆ ತಾವು ಮತ್ತು ನೆರಳಾದೀತು - ಅವೆಲ್ಲವುಗಳ ಅನುಭವವೂ ನನ್ನದೇ ಆದೀತೆಂಬ ಬಯಕೆ ಹೊತ್ತು...
ಇಂದಿಗೆ - ಈ ವರ್ಷಕ್ಕೆ ವಿದಾಯ ಹೇಳುವೆ...


ಬದುಕಿನ ಸಾಧ್ಯತೆಗಳ ವಿಸ್ತಾರದ ನಿರಂತರ ನಿರೀಕ್ಷೆಯಲ್ಲಿ ಹೊಸ ಮುಂಜಾವಿಗೆ ಕಣ್ತೆರೆಯುವೆ...


ದಯನೀಯವಾಗಿ ಉರುಳದಿರಲಿ ನಿರೀಕ್ಷೆಗಳ ಕನಸ ಸ್ತಂಭ ಎಂಬ ಸದಾಶಯದೊಂದಿಗೆ ನನ್ನೊಳಗಿನ ನನಗೆ ನಾನೇ ಜನ್ಮದಿನಕ್ಕೆ - ನವ ಸಂವತ್ಸರಕ್ಕೆ ಶುಬಕೋರಿಕೊಳ್ಳುತ್ತೇನೆ.....


ನಿಮ್ಮದೂ ಒಂದು ಪ್ರೀತಿಯ ಹಾರೈಕೆಯಿರಲಿ.....



Friday, July 27, 2012

ಗೊಂಚಲು - ಮೂವತ್ತಾರು.....

ಚಿತ್ರಗಳು ಮಾತಾಡುತ್ತವೆ.....

ಮಳೆಯಂತೆ ಇಬ್ಬನಿಯು ಇಳೆಯ ತಬ್ಬುವ ಸೊಬಗು...
ಹುಚ್ಚೆದ್ದು ಬೀಸುವ ತಂಗಾಳಿ...
ಕೈಯ ಎತ್ತಿದರೆ ಸಿಕ್ಕೇಬಿಟ್ಟೀತೆನಿಸುವ ಆಗಸ...
ಕಣ್ಣ ನಿಲುಕಿನವರೆಗೂ ಸುತ್ತೆಲ್ಲ ಪಸರಿಸಿದ ಹಸಿರ ಸಿರಿ...
ಸ್ವರ್ಗವನೇ ಸೂರೆಗೊಂಡಂತ ಭಾವಗಳ ಕೋಲಾಹಲ...
ಮನ ಯಾವುದೋ ಲೋಕದಲ್ಲಿ ವಿಹರಿಸುತಿತ್ತು...
ಬಾನೆತ್ತರ ಬೆಳೆದು ನಿಂತ ಗಿರಿಯ ಶಿಖರದ ಮೇಲೆ
ಭಾನುವಾರವೊಂದು ಮೆಲ್ಲಗೆ ಕಣ್ತೆರೆದಿತ್ತು...


:::


ಅದು ಮೈಸೂರಿನಿಂದ ಆಚೆ ಸುಮಾರು 90 ಕಿ.ಮೀ. ದೂರದಲ್ಲಿ ಮೈಚಾಚಿ ನಿಂತ ಬೆಟ್ಟ...
ಹೆಸರು 'ಹಿಮವದ್ ಗೋಪಾಲ ಸ್ವಾಮಿ' ಬೆಟ್ಟ...
ನಾನು ನನ್ನವರೊಂದಿಗೆ ಅಲ್ಲಿ ಕಳೆದು ಬಂದ ಕ್ಷಣಗಳ ಖುಷಿಯ ಇನ್ನೂ ಉಸಿರಾಡುತಿದ್ದೇನೆ...
ಹಸಿರ ಸೀರೆಯನುಟ್ಟು ಕಂಗೋಳಿಪ ಇಳೆಯ ಇಬ್ಬನಿಯು ತಬ್ಬಿ ಸೃಷ್ಟಿಸುವ ಪ್ರಕೃತಿ ವೈಭವ - ಅದು ಅಕ್ಷರಕ್ಕೆ ದಕ್ಕುತ್ತಿಲ್ಲ...


:::


ನನ್ನ ಕ್ಯಾಮರಾ ಕಣ್ಣಗೆ ಸಿಕ್ಕ ಒಂದಷ್ಟು ಪ್ರಕೃತಿ ಭಾವಗಳು...





Thursday, July 19, 2012

ಗೊಂಚಲು - ಮೂವತ್ತು ಮತ್ತೈದು.....



ಗೆಳತೀ -


ನಾನೇನೂ ಹೇಳದೇ
ನಿನಗೆಲ್ಲ ಕೇಳಿಸುವ...


ನಿನ್ನಲ್ಲಿ ಚಿಗುರೊಡೆದು
ನನ್ನಲ್ಲಿ ಆಲವಾಗುವ...


ನಿನ್ನ ಕಣ್ಣ ನಗೆಯಿಂದ ಹೊರಹೊಮ್ಮಿ
ನನ್ನೆದೆಯಲಿ ಬೆಳಗುವ...


ಈ ಮಧುರ ಭಾವ ಬಾಂಧವ್ಯಕೆ
ಹೊಸ
ಹೆಸರಿಡುವ ಹಂಗೇಕೆ..???




ಚಿತ್ರ ಕೃಪೆ : ಅಂತರ್ಜಾಲದಿಂದ...

Friday, July 13, 2012

ಗೊಂಚಲು - ಮೂವತ್ನಾಕು.....



ಆಷಾಡದ ಹಾಡು.....


ವಿರಹ : 
ಎರಡು ಪ್ರೇಮಿಸುವ ಜೀವಗಳು ದೇಹದಿಂದ ದೂರವಿದ್ದು - ನೆನಪು, ಕನಸುಗಳಾಗಿ ಮಾನಸಿಕವಾಗಿ ಒಬ್ಬರ ಮನಸೊಳಗೊಬ್ಬರು ಕೂತು ಕಾಡುವ ಭಾವನಾತ್ಮಕ ಸನಿಹ...


ಸಭ್ಯರೆನಿಸಿಕೊಂಡ ನವ ದಂಪತಿಗಳು ಹಾಗೂ ಪ್ರೇಮಿಗಳು ಕೂಡ ವಿರಹವೆಂದರೆ ಯಾಕಿಷ್ಟು ಭಯಬೀಳ್ತಾರೆ.?
ಆ ಕ್ಷಣಗಳ ಚಡಪಡಿಕೆಯ ಒಳಗಿನ ಒತ್ತಡ ಯಾವುದು.??
ಬರೀ ದೇಹದ ಬಯಕೆ - ಕಾಮದ ಒತ್ತಡ ಅಷ್ಟೇ ಆಗಿರಲಾರದು.
ಕಾಮದ ಉನ್ಮಾದವನ್ನು ನಿಗ್ರಹಿಸುವುದು ಸಭ್ಯ ಜೋಡಿಗಳಿಗೆ ಅಂಥ ಕಷ್ಟವೇನಲ್ಲ.
ಆದರೂ ವಿರಹ ಯಾಕಿಷ್ಟು ಕಾಡುತ್ತೆ.?
ಕಾಡುವ ವಿರಹದ ಹಿಂದಿನ ಭಾವ ಪ್ರೇಮವಿರಬಹುದಾ.??
ಹಾಗಾದರೆ ಇನ್ನೂ ಪ್ರೇಮಭಾವ ಪಕ್ವಗೊಂಡಿರದ ಹಿರಿಯರು ನಿಶ್ಚಯಿಸಿ ಜೊತೆಯಾದ ನವ ಜೋಡಿಗಳನ್ನೂ ವಿರಹ ಕಾಡುವ ಪರಿ ಎಂತು...
ಬಹುಶಃ ದೇಹದೊಂದಿಗೆ ಬೆಸೆದುಕೊಂಡಿರುವ ಮನದ ಮಧುರಾನುಭೂತಿಗಳ ನೆನಪಿನ ಬಿಸಿ ವಿರಹ ಕಾಲದಲ್ಲಿ ಹೆಚ್ಚಾಗಿ ಕಾಡುತ್ತೇನೋ...


ಮನೆತುಂಬ ಹರಿದಾಡುವ ಅವಳ ಗೆಜ್ಜೆ, ಬಳೆಗಳ ರಿಂಗಣ - ಸೀರೆಯ ಸರಬರ...


ಎಲ್ಲರ ಕಣ್ತಪ್ಪಿಸಿ ಅವಳನೇ ಹುಡುಕಿಕೊಳ್ಳುವ ಅವನ ಚಡಪಡಿಕೆಯ ಕಣ್ಣೋಟ...


ಸುಳ್ಳೇ ಸಿಟ್ಟು...


ಹುಚ್ಚುಚ್ಚು ನಗು...


ತೋಳುಗಳ ತಬ್ಬಿ ಅಷ್ಟು ದೂರ ನಡೆವ ಹಿತವಾದ ಆಯಾಸ...
ಅವಳ ಬೆಚ್ಚನೆ ಮಡಿಲ ಆಸರೆ...


ತಲೆಯ ನೇವರಿಸೋ ಆಕೆಯ ಚಿಗುರು ಬೆರಳುಗಳು...


ಅಮಾವಾಸ್ಯೆಗೆ ಹುಟ್ಟಿದಂತಿರುವವಳೂ ಅವನ ಕಣ್ಣಲ್ಲಿ ಚಂದ್ರಿಕೆ...
ಜೋಪಡಿಯ ಒಡೆಯನೂ ಇಂದ್ರಕುಮಾರ ಅವಳ ಪಿಸುಮಾತಲ್ಲಿ...


ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು - ನೋಟಗಳ ಮೌನ ಸಂಭಾಷಣೆಯಲ್ಲಿ ತಮ್ಮ ಒಳಗನೆಲ್ಲ ಬಿಚ್ಚಿಟ್ಟು ಬರಿದಾಗಿ - ಭಾವ ಶೂನ್ಯದಲಿ ತೇಲುವ ಹೃದಯಗಳ ಸಂಭ್ರಮ ಸುಖ...


ನಿದ್ದೆಯ ಮರುಳಲ್ಲಿರುವ ನಲ್ಲೆಯ ಚೆಂದುಟಿಗಳಿಂದ ಅಮೃತವ ಕದಿಯುವ ಮಧುರ ಕಳ್ಳತನದ ಖುಷಿ...


ಖುಷಿಯಲೂ - ಬೇಸರದಲೂ ಸಿಗುವ ಸಂಗಾತಿಯ ಹಿತವಾದ ತಬ್ಬುಗೆ...


ಹಾಗೇ ಸುಮ್ಮನೆ ಎಲ್ಲವನೂ ಮರೆತವರಂತೆ ಬೆತ್ತಲೆ ತಬ್ಬಿ ಮಲಗುವ ಆಹ್ಲಾದ...


ನಲ್ಲೆಯ ಎದೆ ಗೊಂಚಲ ನಡುವೆ ಬೇಕೆಂತಲೇ ಉಸಿರುಗಟ್ಟುವ ಉತ್ಸಾಹ...


ನಲ್ಲನ ಎದೆರೋಮವ ಕಚ್ಚಿ ಕಚಗುಳಿಯಿಡುವ ಆಕೆಯ ತುಟಿಗಳ ತುಂಟತನ...


ಬೆತ್ತಲೆ ಬೆನ್ನ ಮೇಲೆ ಬೆರಳಲೇ ಬರೆವ ತನ್ನ ಹೆಸರು...


ಹೊಕ್ಕಳ ಹೂವಿನೊಂದಿಗೆ ಉಸಿರಿನ ಸರಸ...


ಅಮ್ಮನಿಲ್ಲದ ಹೊತ್ತು ಒಟ್ಟಿಗೊಂದು ಅಭ್ಯಂಜನ...


ಹೆರಳ ಶಾಂಪೂವಿನೊಂದಿಗೆ ಬೆರೆತ ಕಂಕುಳ ಘಮ...


ತನ್ನ ಕಾಮದ ಕುಡಿಯ ಒಡಲಲ್ಲಿ ತುಂಬಿಕೊಂಡ ತನ್ನಾಕೆಯ ಕಿಬ್ಬೊಟ್ಟೆಗೆ ಕೆನ್ನೆ ತಾಕಿಸಿ ಬಿಸಿಯನಾಸ್ವಾದಿಸಿ, ಕಿವಿಯಿಟ್ಟು ಒಳಗಿರುವ ಕಂದನ ಎದೆ  ಬಡಿತಕೆ ಮಿಡಿವ ಉಲ್ಲಾಸ...


ಈ ಎಲ್ಲ ಮಧುರಾನುಭೂತಿಗಳ ಸವಿ ನೆನಪು ಸೇರಿ ಅಗಲಿಕೆಯ ಕಾಲದಲಿ ವಿರಹದುರಿಗೆ ತುಪ್ಪ ಸುರಿಯುತ್ತವೆ.
ಜೊತೆಯಿರುವಾಗ ಎಲ್ಲರೂ ಇವೆಲ್ಲವನ್ನೂ ಅನುಭವಿಸಿ ಆಸ್ವಾದಿಸ್ತಾರೋ ಇಲ್ಲವೋ ಆಗಲೀ ದೂರವಿರುವಾಗ ಅನುಭವಿಸಬೇಕೆನಿಸುವ ಈ ಭಾವಗಳಿಂದ ದೂರವಿರುವುದಂತೂ ಕಷ್ಟ ಕಷ್ಟ...


ಉನ್ಮಾದಿತ ಕಾಮಕ್ಕಿಂತ ಇಂಥ ಸಂಪೂರ್ಣ ಕಾಮವಲ್ಲದ ಕಾಮದ ಹಿಂಚುಮುಂಚಿನ ಮಧುರಾನುಭೂತಿಗಳೇ ಜೋಡಿಗಳನ್ನು ಹೆಚ್ಚಾಗಿ ಕಾಡುತ್ತೇನೋ ಅಲ್ಲವಾ...


ಹಾಗಾದರೆ ಪ್ರೇಮವೆಂದರೆ ಇದೇನಾ..??
ಅಲ್ಲದಿರಬಹುದು.
ಆದರೆ ಅವ್ಯಕ್ತ ಪ್ರೇಮದ ವ್ಯಕ್ತ ರೂಪವಂತೂ ಹೌದು.
ಇರುವ ಪ್ರೇಮವನ್ನು ಬಲಪಡಿಸುವ ಶಕ್ತಿಮದ್ದೂ ಹೌದು.
ದಾಂಪತ್ಯದ ದಶಮಾನೋತ್ಸವದ ನಂತರ ಕೂಡ ಹೊಸತು ಹಳತಾಗದಂತೆ ಇದೇ ಭಾವತೀವ್ರತೆಯ ವಿರಹ ಒಂದು ಜೋಡಿಯನ್ನು ಕಾಡುವುದಾದರೆ ಆ ಜೀವಗಳ ಪ್ರೇಮಕ್ಕೆ ಸಲಾಮ್.
ದೇಹದ ಉನ್ಮಾದ ಇಳಿದ ಮೇಲೂ ತಬ್ಬಿ ಮಲಗುವ ಪ್ರೇಮ ನಿಜಕ್ಕೂ ಮಧುರಾ ಮಧರಾ...


ದೇಹದ ಉನ್ಮಾದ ಕಳೆಯಲು ಒಂದು ಹಸ್ತಮೈಥುನ ಸಾಕು...
ಆದರೆ ಮನದ ಭಾವೋನ್ಮಾದಕ್ಕೆ ಸಂಗಾತಿಯ ಸಾಂಗತ್ಯವೇ ಬೇಕು...


ಹಾಗಾದ್ರೆ 
ಮನದ ಪ್ರೇಮವನ್ನು ದೇಹದ ಬಿಸಿಯಲ್ಲಿ ಕರಗಿಸುವ - ಹಾಗೇ ಸುಮ್ಮನೆ ತಬ್ಬಿ ಮಲಗುವ ಕಾಲವನ್ನೂ ಮೀರಿನಿಂತ ವಯೋವೃದ್ಧರು ಕೂಡ ಸಂಗಾತಿಯ ವಿರಹದಿಂದ ಬಳಲುತ್ತಾರಲ್ಲ...
ಇದಕೇನು ಕಾರಣ..??


ಬಹುಶಃ ಸಂಗಾತಿಯೊಡನೆ ಬೆಸೆದುಕೊಂಡ ದೀರ್ಘ ಕಾಲದ ಬದುಕು...
ಅಭ್ಯಾಸವಾಗಿಹೋದ ಸಾಂಗತ್ಯ...
ಮನದಿ ಹೆಪ್ಪುಗಟ್ಟಿ ನಿಂತ ಆ ಕಾಲದ ಮಧುರ ನೆನಪುಗಳು...
ಇಳಿಗಾಲದ ಆದ್ಯತೆ, ಆಸರೆಯ ಅವಶ್ಯಕತೆಗಳು ಸಂಗಾತಿಯ ಅನುಪಸ್ಥಿತಿಯಲ್ಲಿ ಖಾಲಿತನವಾಗಿ ಕಾಡುತ್ತವೇನೋ...
ಅಥವಾ ಇಳಿಗಾಲದ ವಿರಹಕ್ಕೆ ಬೇರೆಯದೇ ಆಯಾಮವೂ ಇದ್ದೀತು...


ಈ ವಿರಹ ಭಾವದಲ್ಲಿ ಇನ್ನೂ ಏನೇನಿವೆಯೋ...
ನಿಜಕ್ಕೂ ವಿರಹ ನೂರು ನೂರು ತರಹ...


ಈ ಬರಹ ಅನನುಭವಿಯೊಬ್ಬನ ಕಲ್ಪನಾ ಪ್ರಲಾಪ...
ಈ ಬರಹದ ಸತ್ಯಾಸತ್ಯತೆಯನ್ನು ಮಿಲನದ ಸವಿ ಮತ್ತು ವಿರಹದ ಕಹಿ ಎರಡನ್ನೂ ಉಂಡ ಅನುಭವಿಗಳು ವಿವರಿಸಬೇಕಷ್ಟೇ...


ಚಿತ್ರ ಕೃಪೆ : ಚಿತ್ರಸಂತೆಯಲ್ಲಿ ನನ್ನ ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದು...
                  ಕಲಾವಿದನ ಕ್ಷಮೆಕೋರಿ...

Sunday, July 1, 2012

ಗೊಂಚಲು - ಮೂವತ್ತು + ಮೂರು.....


ಮಳೆ ಹಾಗೂ ಬೆಳದಿಂಗಳು ಬೆರೆತ
ಒಂದು ಹಳೆಯ ನೆನಪು.....





ಅಂದು 2006ನೇ ಇಸವಿಯ ಮಾರ್ಚ್ ತಿಂಗಳ ಹತ್ತನೇ ದಿನ.
ಆಗಿನ್ನೂ ನಾನು ಮಲೆನಾಡಿನ ಪುಟ್ಟ ಹಳ್ಳಿಯೊಂದರಲ್ಲಿ ಕೃಷಿಕನಾಗಿ  ಪ್ರಕೃತಿಯೊಡನೆ ಭಾವಗಳ ಬೆಸಗೊಂಡು  ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದ ಕಾಲ.
ಆಗ ಮಧ್ಯ ಬೇಸಿಗೆಯಲ್ಲಿ ಸುರಿದ ಅಕಾಲ ಮಳೆಯ ದಿನದ ನನ್ನೊಳಗಿನ ಭಾವಾವೇಶಗಳಿಗೆ ಅಕ್ಷರ ರೂಪ ನೀಡುವ ಪ್ರಯತ್ನ ಮಾಡಿದ್ದೇನೆ.
ಓದಿ...
ನಕ್ಕು...
ಮರೆತು ಬಿಡಿ...

ಮೂಗನ್ನರಳಿಸುತ್ತಿದೆ - ಮಣ್ಣ ಕಂಪು.
ಮೊದಲ ಮಳೆಗೆ ಭೂಮಿ ಸ್ಪಂದಿಸುತ್ತಿದೆ.
ವರ್ಷದ ಮೊದಲ ಮಳೆ ತುಂಬಾ ಮುಂಚಿತವಾಗಿ ಅಕಾಲದಲ್ಲಿ ಅತಿವೃಷ್ಟಿ ಎಂಬಂತೆ ಸುರಿದು ಬಿಟ್ಟಿದೆ.
ಭುವಿಗೆ ಮೊದಲ ಮಿಲನದ ಸಂಭ್ರಮ.
ಪಾಪ ಭಯವೂ ಆಗಿದ್ದೀತು - ಅನಿರೀಕ್ಷಿತ ಆರ್ಭಟ ಅಲ್ಲವಾ.
ಆಗಸ ಹುಚ್ಚೆದ್ದುಬಿಟ್ಟಿದೆಯೇನೋ - ಭುವಿಯ ಯಾವುದೋ ಚೆಲುವ ಕಂಡು.
ಬೆಳಿಗ್ಗೆ ಎರಡು ತಾಸುಗಳ ಕಾಲ ಒಂದೇ ಸಮ ಮುಸಲಧಾರೆ.
ಆಗಸ ಮತ್ತು ವಸುಧೆಯ ಪ್ರೇಮೋನ್ಮಾದ ಏನೋ ಖುಷಿ ಮತ್ತೇನೋ ಆತಂಕ ಎರಡನ್ನೂ ಮೂಡಿಸುತ್ತದೆ ರೈತನ ಮನದಲ್ಲಿ.
ಮಳೆ ಯಾವತ್ತಿದ್ದರೂ ಸಂಭ್ರಮವೇ.
ಆದರೆ ಅಕಾಲದಲ್ಲಾದ್ದರಿಂದ ಸಣ್ಣ ಆತಂಕ.

ಸಂಜೆ ಕೂಡಾ ಮೋಡ ಮುಸುಕಿದ ವಾತಾವರಣ.
ಸೂರ್ಯ ಮುಳುಗುವ ಮುಂಚೆಯೇ ಮಧುರ ಕತ್ತಲು.
ಬೆಳಗಿನ ಮಳೆಯ ತಂಪು ಮತ್ತು ಮಣ್ಣ ಗಂಧ ಗಾಳಿಯಲ್ಲಿ ಇನ್ನೂ ಜೀವಂತ...
ಅವುಗಳನ್ನು ಆಸ್ವಾದಿಸ್ತಾ ಅಂಗಳದಲಿ ನಿಂತಿದ್ದೆ.
ಎದುರಿನ ಫಲವಂತ ಹಲಸಿನ ಮರದ ಹಸಿರೆಲೆಗಳ ನಡುವೆ ಎರಡು ಹೆಸರರಿಯದ ಚಂದದ ಹಕ್ಕಿಗಳು ಸರಸವಾಡ್ತಾ ಇದ್ವು.
ನಂಗದು ಪ್ರಣಯದಾಟದಂತೆ ತೋರಿ ನನ್ನಲ್ಲೂ ಎಲ್ಲೋ ಏನೋ ಸಣ್ಣ ಕಂಪನ.
ಒಂದು ಮಳೆಹನಿ ಮೈಮೇಲೆ ಬಿತ್ತು.
ಬೇಜಾರಾಯ್ತು.
ಯಾಕ್ ಗೊತ್ತಾ -
ಬಾನಾಡಿಗಳ ಮಿಲನ ಸಂಭ್ರಮಕ್ಕದು ಅಡ್ಡಿ ಮಾಡುತ್ತೇನೋಂತಾ.
ಆದ್ರೆ ಅಷ್ಟರಲ್ಲಾಗಲೇ ಅವು ದೂರ ಹಾರಿ ಹೋದ್ವು.
ಆಮೇಲೆ ಶುರುವಾಯ್ತು ನೋಡಿ ನನ್ನೊಳಗೆ ಬೆಚ್ಚಗಿನ ಕನಸುಗಳ ಓಕುಳಿ.
ಪ್ರಕೃತಿಯ ಪ್ರತೀ ಚರ್ಯೆಯೂ ಪ್ರಣಯದಾಟದಂತೆ ಕಂಡು ಮನಸಿಗೇನೋ ಹಿತವಾದ ರೋಮಾಂಚನ.
ಗಾಳಿಯ ತಂಪಿಗೆ ಬಾಗಿ ತೂಗಾಡಿ ಒಂದಕ್ಕೊಂದು ತಾಕುವ ದೂರದ ಬೆಟ್ಟದ ಮೇಲಿನ ತರುಲತೆಗಳು ಒಂದನ್ನೊಂದು ಮುತ್ತಿಟ್ಟು ಸರಸವಾಡಿ ಆನಂದಿಸ್ತಿವೆಯೇನೋ ಎಂಬ ಭಾವ.
ಅದರಲ್ಲೂ ಬೆಟ್ಟದ ತಲೆಯ ಮೇಲೆ ಎಲ್ಲಕ್ಕೂ ಎತ್ತರದಲ್ಲಿ ತಲೆದೂಗುವ ಬಿದಿರ ಮೆಳೆಗಳಂತೂ... 
ಓಹ್.!! 
ಮಾತಲ್ಲಿ ಹೇಳಲಾಗದ ಭಾವಗಳ ಸಂಕ್ರಾಂತಿ.

ಬಿರು ಬೇಸಿಗೆ ಇರಬೇಕಾದ ಒಂದು ದಿನದಲ್ಲಿ
ಜಡಿ ಮಳೆಯ ಬೆಳಗು - ಮೋಡಗಟ್ಟಿದ ಸಂಜೆ - ಈಗ ರಾತ್ರಿ ನಿಚ್ಛಳ ಬೆಳದಿಂಗಳು...
ಎಲ್ಲ ಸೇರಿ ಮನಕೆ ಅರಳು ಮರಳು.
ಪ್ರಕೃತಿಯ ಆಟ ಎಂಥ ವಿಚಿತ್ರ...
ಎಂಥ ಸೊಗಸು...

ಅದು ಚಾಲಿ ಅಡಿಕೆಯ ಕೆಲಸದ ಸಮಯ.
ನಾನು ಒಬ್ಬಂಟಿ ಕೆಲಸಗಾರ.
ನನ್ನ ಕೆಲಸಕ್ಕೆ ಸಾಥಿಯಾಗಿ ಟೇಪ್ ರೆಕಾರ್ಡಿನಲ್ಲಿ ಹದವಾಗಿ ಗುನುಗುವ ಮಧುರ ಪ್ರೇಮ ಗೀತೆಗಳು...
ಅದು ಹಳೆಯದಾದಷ್ಟೂ ಸೊಗಸು ಹೆಚ್ಚು.

ಬೆಳಗಿನಿಂದ ರಾತ್ರಿಯವರೆಗೂ ಅಡಿಕೆ ಕೆಲಸದೊಂದಿಗೆ ಜೊತೆಯಾದ ಏಕಾಂತ...
ಮನಸಿಗೂ ಮೈಗೂ ತುಂಬು ಹರೆಯ...
ಸಹಜವಾಗಿ ಮನದಲ್ಲಿ ಜೀಕುವ ಪ್ರೇಮ, ಪ್ರಣಯ ಭಾವಗಳ ಕನಸಿನ ಜೋಕಾಲಿ...
ಜೊತೆಗೆ ಎಲ್ಲೋ ಓದಿದ ಯಾವುದೋ ಪೋಲಿ ಪುಸ್ತಕದ ಸಾಲುಗಳ ನೆನಪು...
ಸಣ್ಣಗೆ ಕಿವಿಯಲ್ಲಿ ಮೊರೆವ ಪ್ರೇಮಗೀತೆಯ ಇನಿದನಿ...
ಮನಕೆ ಎಂಥಾ ಮುದವಿತ್ತು.

ಪ್ರೇಮ ಭಾವದ ಕಲ್ಪನೆಯೇ ಮೈಮನಗಳಲ್ಲಿ ಪುಳಕವೆಬ್ಬಿಸುವ ವಯಸಲ್ಲಿ - ಹಿತವಾದ ಏಕಾಂತದಲ್ಲಿ ಮಧುರ ಪ್ರೇಮ ಗೀತೆಗಳ ಕೇಳುತ್ತಾ ಕೆಲಸ ಮಾಡ್ತಾ ಇದ್ರೆ ಎಂಥ ಕೆಲಸವೂ ನಿರಾಯಾಸ...
ಕಣ್ಣಲ್ಲಿ  ಪ್ರೇಮಸೌಧ...
ಮೈಯಲ್ಲಿ ಪ್ರಣಯ ಝೇಂಕಾರ...

ಅಂತಹುದರಲ್ಲಿ ಇಂದು ಮಳೆಯೂ - ಬೆಳದಿಂಗಳೂ ಜತೆಯಾಗಿಬಿಟ್ಟಿವೆ...
ಎರಡೂ ನನ್ನ ಬಹು ಇಷ್ಟದ ವಿಷಯಗಳು...
ಹಾಗಾಗಿ ಅಕಾಲ ಮಳೆಯ ಆತಂಕವನ್ನೂ ಮೀರಿ ಮನದಲ್ಲಿ ಎಷ್ಟೆಲ್ಲ ಆನಂದಮಯ ಭಾವಗಳ ಸಮ್ಮಿಲನ...

ಕಣ್ತುಂಬ ಬೆಳದಿಂಗಳ ತುಂಬಿಕೊಂಡು ದಿಂಬಿಗೆ ತಲೆಯಿಟ್ಟರೆ ಮನದೊಳಗಣ ಎಷ್ಟೆಲ್ಲ ಆಸೆಗಳು ಕನಸುಗಳಾಗಿ ಜಾತ್ರೆ ನೆರೆದಿದ್ದವು ಕಣ್ಣ ಮುಂದೆ...
ಕನಸು ತುಂಬಿದ ಸಣ್ಣ ನಿದ್ದೆಯ ನಂತರದ ಮಧ್ಯ ರಾತ್ರಿಯ ಕಥೆ ಕೇಳ್ತೀರಾ...
ಅದು
ಪ್ರೇಮದ ಕನಸು ಪ್ರಣಯದ ಹಾದಿ ತುಳಿವ ಪ್ರೇಮಭಾವದ ಪರಾಕಾಷ್ಠೆಯ ಸಮಯ...
ಬೆಳಗಿನಿಂದ ಪ್ರೇಮಭಾವದ ರೋಮಾಂಚನದಿಂದ ಮೈಯಲೆಲ್ಲ ಗಡಿಬಿಡಿಯಿಂದ ಹರಿದಾಡುತ್ತಿದ್ದ ಒಳಗೇ ಕೆರಳಿದ ರಕ್ತ
ಒಮ್ಮೆಲೆ ತನ್ನ ಮಿತಿಗಿಂತ ಹೆಚ್ಚು ಬಿಸಿಯಾಗಿ
ದೇಹದ ಕೆಳಭಾಗಕ್ಕೆ ಹರಿದು
ನಾಭಿಯಾಳದ ಯಾವುದೋ ನರಕ್ಕೆ ನುಗ್ಗಿ -
ಒತ್ತಡದಿಂದ -
ಅಲ್ಲೇಲ್ಲೋ ಹೆಪ್ಪುಗಟ್ಟಿದ ಸೃಷ್ಟಿಜಲ ಕರಗಿ -
ಛೀ..!!
ಒಳ ಚೆಡ್ಡಿಯಲ್ಲಿ ಮಳೆ...
ಅಂಗುಷ್ಠದಿಂದ ನೆತ್ತಿಯವರೆಗೂ ಬೆವರ ಧಾರೆ...
ಏನೋ ಅರಿಯದ ಸುಖದ ಸುಸ್ತು...
ಸುಸ್ತಿನಿಂದಾಗಿ ಬೆಳಗಿನವರೆಗೆ ಮತ್ತೆ ಕನಸುಗಳೂ ಬಾರದ ಗಾಢ ನಿದ್ದೆ...
ಎಂಥ ಹೊಸತನದ ಸೊಬಗಿತ್ತು ದಿನಗಳಿಗೆ...

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪ್ರಕೃತಿ ಮಡಿಲಲ್ಲಿ ಒಡನಾಟ -
ರಾತ್ರಿಯ ಮೊದಲ ಜಾವವೆಲ್ಲ ಅಂಗಳದಲ್ಲಿ ನಿಂತು ಚಂದಿರನ ಬೆಳಕಲ್ಲಿ ಕಾಣುವ ಚಂದ್ರಿಕೆಯೆಡೆಗಿನ ಕನಸು -
ಎರಡೂ ಸೇರಿ ಬಡಿದೆಬ್ಬಿಸಿದ ಕಲ್ಪನಾ ಪ್ರೇಮಭಾವ ಹಾಸಿಗೆ ಸೇರುವ ಹೊತ್ತಿಗೆ ಉತ್ಕಟ...
ಮನದ ಪ್ರೇಮ ದೇಹದ ಜೊತೆ ಸೇರಿ ಮಧ್ಯರಾತ್ರಿಯಲ್ಲಿ ಅರಿವೇ ಆಗದೇ ಕನಸಲ್ಲೇ ಬ್ರಹ್ಮಚರ್ಯದ ಅರ್ಧ ಸಾವು...

ನಂತರ ಪ್ರೇಮದ ಉತ್ಕಟತೆ ಕಾಮನ ಆವೇಶದಲ್ಲಿ ಕರಗಿ,
ಪ್ರೇಮ - ಕಾಮಗಳೇ ಜೋಗುಳವಾಗಿ,
ಮನಸೂ - ದೇಹವೂ ಸುಖದ ಸುಸ್ತಿನಿಂದ ವಿರಾಮವ ಬಯಸಿ,
ಏನೇನೂ ಇಲ್ಲದ ನಿರುಮ್ಮಳ ಭಾವದ ಮತ್ತೊಂದು ರೀತಿಯ ಸುಖದ -
ಪ್ರಚ್ಛನ್ನ ನಿದ್ರೆಯ ಕಾಲ.
ಮುಂದಿನ ಬೆಳಗಿನವರೆಗೆ...

ಮಲೆನಾಡ ಮಣ್ಣಲ್ಲಿ ಬೆಳೆದ ಹುಡುಗರಲ್ಲಿ ಇಂಥ ಎಷ್ಟೆಷ್ಟು ಅನುಭವಗಳೋ...
ಅದರಲ್ಲೂ ಮಳೆಗಾಲದಲ್ಲಿ...
ಪ್ರಕೃತಿಯ ಭಾವಗಳನ್ನು ತನ್ನದಾಗಿಸಿಕೊಂಡು ಆಸ್ವಾದಿಸಬಲ್ಲ ಸ್ವಲ್ಪೇ ಸ್ವಲ್ಪ ರಸಿಕತೆ ಇರುವ ಯಾರೇ ಮಲೆನಾಡ ಕೂಸು, ಮಾಣಿಗಳನ್ನು ಕೇಳಿ ನೋಡಿ -
ಹೊರಗೆ ಧೋ ಮಳೆ ಸುರಿಯುತಿರುವಾಗ -
ಒಳಗೆ - ತಮ್ಮ ಮನದೊಳಗೆ
ಸುರಿದು ಕಾಡುತ್ತಿದ್ದ ಬೆಚ್ಚನೆ ಭಾವಗಳ ನೂರು ಕಥೆ ಹೇಳಿಯಾರು...

@@@ % @@@

ಆದ್ರೆ ಇಂದು ನನ್ನಂಥ ಎಷ್ಟೋ ಹಳ್ಳಿ ಬಿಟ್ಟು ಪೇಟೆ ಸೇರಿದ ಮಲೆನಾಡಿಗರಿಗೆ ಇವೆಲ್ಲ ಬರೀ ನೆನಪಷ್ಟೇ ಎಂಬುದು ನೋವಿನ ಸಂಗತಿ.
ನಾನಂತೂ ಮಲೆನಾಡ ಜಡಿಮಳೆಯಲ್ಲಿ ಮನಸೋ ಇಚ್ಛೆ ಮೈತೋಯಿಸಿಕೊಂಡು ಮೂರು ವರ್ಷಗಳೇ ಸಂದು ಹೋದವು.
ಬೆಂದಕಾಳೂರಲ್ಲಿ ಸುರಿವ ಮಳೆಯೂ ಶುದ್ಧ ಅಂತ ಮನಸಿಗನ್ನಿಸಲ್ಲ.
ಮಲೆನಾಡ ಮಳೆಯಲ್ಲಿ ತೋಯ್ದು ತೊಪ್ಪೆಯಾಗುತ್ತಿದ್ದ ದೇಹ - ಮನಸುಗಳು ಅನುಭವಿಸುತ್ತಿದ್ದ ಸುಖವೇ ಬೇರೆ.
ಮಳೆಯೊಂದಿಗೆ ಗಾಳಿಯೂ ಬೆರೆತು ತೋಯ್ದ ದೇಹದಲ್ಲಿ ಹೊಟ್ಟೆಯೊಳಗಿಂದ ನಡುಕ...
ಮಳೆಯ ಸದ್ದು ಮನದಿ ಅರಳಿಸುವ ಮೌನ -
ಹೊಯ್ದಾಡುವ ತರವೆ ಗಿಡಗಳು
ವಿಚಿತ್ರ ಶಬ್ದ ಮಾಡುವ ತೆಂಗಿನ ಗರಿಗಳು
ಅಲ್ಲೆಲ್ಲೋ ಗುಡ್ಡದ ತುದೀಲಿ ಒಂಟಿ ಒಣಗಿದ ಮರದ ಮೇಲೆ ಒಮ್ಮೆ ಮೈಕೊಡವಿ ಹಾಗೇ ಕೂತ ಗಿಡುಗ...
ಜೊತೆಗೆ ಜಾಸ್ತಿ ತೋಯಬೇಡ ಎಂಬ ಅಮ್ಮನ ಕಾಳಜಿಯ ಗದರಿಕೆ...
ಇವನೆಲ್ಲಾ ನೋಡುತ್ತಾ, ಆಸ್ವಾದಿಸ್ತಾ ಪಡೆವ ಅನಿರ್ವಚನೀಯ ಸುಖ ಅದು ಭಾಷೆಗೆ ನಿಲುಕದ ಭಾವ ಗೀತೆ.
ಯಾವ ಕೊಪ್ಪೆ - ಯಾವ ಕಂಪನಿ ಕೊಡೆಗಳೂ ಅಲ್ಲಿಯ ಮಳೆಯಲ್ಲಿ ಸಂಪೂರ್ಣವಾಗಿ ಮೈತೋಯದಂತೆ ತಡೆಯಲಾರವು.
ಮಳೆಯಲಿ ನೆನೆದು ಭಾವಗಳ ಬೆಳೆ ಬೆಳೆವ ಹಸಿವಾಗುತಿದೆ...