Saturday, November 3, 2018

ಗೊಂಚಲು - ಎರಡ್ನೂರಾ ಎಪ್ಪತ್ತು ಮತ್ತೆಂಟು.....

ಕಥೆಯಾಗದ ಪಾತ್ರ..... 

ಜವಾಬ್ದಾರಿಗಳ ಹೊರೆಯಿಲ್ಲ, ಭಾವಗಳ ನೆರೆ ಇಲ್ಲ, ನಡಿಗೆಗೊಂದು ಉದ್ದೇಶವಿಲ್ಲ, ಸ್ವಂತ ಕೃತಿ ಸ್ಮೃತಿಗಳಿಗೆ ಅರ್ಥ ಹುಡುಕಲಿಲ್ಲ - ನಡೆದದ್ದೇ ಹಾದಿ, ನುಡಿದದ್ದು ಮಂತ್ರ ಅಂತಂದು ಸ್ವಾರ್ಥಕ್ಕೆ ಸ್ವಂತಿಕೆಯ ಬಣ್ಣದ ಹೆಸರಿಟ್ಟು ಬದುಕಿದ್ದು ಕಾಲಕೂ; ಆದ್ರೂ ಆಖೈರು ಉಸಿರು ಯಾಕಿಷ್ಟು ಭಾರ ಭಾರ...
ಹೆಣ ಭಾರ ಅಂದರೆ ಇದೇನಾ...
ಹೆಣದ ಭಾರ ಬೂದಿಗಿಲ್ಲ - ಸುಟ್ಟು ಹೋಗಬೇಕು - ಸುಟ್ಟಲ್ಲದೆ ಸುಖವಿಲ್ಲ - ಆದರೆ ಸಲೀಸು ಸಾಯಲಾದೀತಾ...?
ಜವ ಕರೆಯದೇ ಯಾರು ಸಾಯುವುದು...??
#ಕಥೆಯಾಗದ_ಒಂದು_ಪಾತ್ರ...

ಭಾವ ಸತ್ತ ಮೇಲೂ ಬಾಯಿ ಹೊಲಿದುಕೊಳ್ಳದೇ ಬಡಬಡಿಸಿ ಬಂಧದ ಚಂದ ಕೆಡಿಸಿಕೊಳ್ಳೋ ಮನಸೇ ನೀ ಬಯಲ ದಾರಿಯಲ್ಲಿ ಮಾತು ಬಿದ್ದೋಗಿ ಬೆತ್ತಲೆ ಸಾಯಬೇಕು...
#ಕಥೆಯಾಗದ_ಒಂದು_ಪಾತ್ರ...

ಮುಸುಕಿದ ಕತ್ತಲ ಕರಿ ಪತ್ತಲದಡಿಯಲಿ ಅತ್ತದ್ದಕ್ಕೂ, ಅಳಿಸಿದ್ದಕ್ಕೂ, ನಗಿಸಿ ನಕ್ಕದ್ದಕ್ಕೂ, ಹಲಹಲಾ ಎಂದು ಸ್ವಚ್ಛಂದ ಕುಣಿವ ಎಲ್ಲ ಭಾವಕ್ಕೂ ಒಂದೇ ಗಾಢತೆ; ಕತ್ತಲೆಂದರೆ ಎಂಥ ಶುದ್ಧ ಬಣ್ಣ - ಅನಾಯಾಸದಿ ತಬ್ಬಿದ ಸಾವಿನಂತೆ...
#ಕಥೆಯಾಗದ_ಒಂದು_ಪಾತ್ರ...

....ಹಾಗೆಂದೇ ಮನಸಿನ ಮನೆಯ ಸೂತಕ ಕಳೆಯುವುದೇ ಇಲ್ಲ - ಅಂಗಳದಂಚಲ್ಲಿ ದಿನಕ್ಕಿಷ್ಟು ಕನಸುಗಳು ಅಡ್ಡಡ್ಡ ಮಲಗುತ್ತವೆ...
ಕಲ್ಪನೆಯ ಕಣ್ಣಿಗೂ ವಿಷದ ಹೂ ಬಿದ್ದಂತಿದೆ - ಇಲ್ಲೀಗ 'ನನಗೂ ಸೇರದ ನಾನು...'
ಬೊಜ್ಜದ ಮನೆಗೆ ಕರೆಯದೆಯೂ ಬಂದು ಸರತಿ ಊಟಕ್ಕೆ ಕೂರೋ ಮುದಿ ನೆನಪುಗಳ ಸಂಭಾಳಿಸಿಕೊಂಡು ಒಂಚೂರೂ ಕಸರುಳಿಯದಂತೆ ಬದುಕಿನೊಂದಿಗೆ ಕರಗುವುದು ಹೇಗೆಂದು ತಿಳಿಯದೆಯೇ ತಳಮಳಿಸುವ ಪಾಳುಬಿದ್ದ ಪಾಪದ ಮನಸಿನ ಉಸಿರೂ ಭಾರ - ಹಾಳಾದ್ದು ಈ ಬಡಪಾಯಿ ಭಾವಗಳ ಗೂಡಿನ ಸೂತಕ ಕಳೆಯುವುದೇ ಇಲ್ಲ...
#ಕಥೆಯಾಗದ_ಒಂದು_ಪಾತ್ರ...

ಬಿರಿದ ಎದೆಯ ಬಿರುಕಿನೇ ಕುಂಡವಾಗಿಸಿ - ತುಂಡು ಕನಸ ಕಿಡಿ ನೆಟ್ಟು - ಮರಳಿ ಬರಬೇಕಿದೆ - ಮತ್ತೆ ನಗಬೇಕಿದೆ - ನನ್ನೊಳು ನಾ ಹುಟ್ಟಿ...
ಬೀಜದ ಓಟೆ ಒಡೆದಾಗಲೇ ಅಲ್ಲವಾ ಚಿಗುರಿಗೆ ಹಾದಿ...
#ಕಥೆಯಾಗದ_ಒಂದು_ಪಾತ್ರ...

ಅರ್ರೇ!!! ನಾನಿನ್ನೂ ನೆನಪಲ್ಲಿದೀನಾ...??
ಹ್ಯಾಂಗ್ ಮರೀಲೀ - ಭಾವ ಸತ್ತದ್ದು ನಂದಲ್ವಲ್ಲಾ...
ಕಟುವಾಗಬೇಡ, ನನ್ನಲ್ಲೂ ಸತ್ತದ್ದಲ್ಲ - 'ನಿನ್ನಂತೆ' ಹರಿಯಲಾರದೇ ಹೋದದ್ದಷ್ಟೇ...
ಇದ್ದು 'ನಮ್ಮಂತೆ' ಬೆರೆಯಬಹುದಿತ್ತೇನೋ - ದುಡುಕಿದೆವಾ...??
ಸಿಹಿಯಾಗಿ ಹರಿದು ಸೇರಿದ್ದೂ, ಉಪ್ಪಾಗಿ ತೊನೆದು ಹೀರಿದ್ದೂ ಸೇರಿ ಮಳೆಯಾಗಿ ಮತ್ತೆ ಸಿಹಿಯೇ ಅಲ್ಲವಾ - ಕಾಯಬೇಕಿತ್ತಾ...??
ಎಷ್ಟು ಕಾಯುವುದು...? ಎಲ್ಲಿಯವರೆಗೆ...?? ಇಷ್ಟಕ್ಕೂ ಇಲ್ಲಿ ಆವಿಯಾದ ಹನಿ ಇಲ್ಲೇ ಮಳೆಯಾಗಿ ಸುರಿಯುತ್ತೆ ಅನ್ನೋ ಭರವಸೆ ಏನೂ...???
ಮಾತು, ಮೌನದ ಮಥನದಲ್ಲಿ ಬೆಂಕಿಯೇ ಹುಟ್ಟಬೇಕಾ - ಬೆಣ್ಣೆಯೂ ತೇಲಬಹುದಿತ್ತೇನೋ...
ಒಡೆದ ಕೊಳಲಲ್ಲಿ ಗಾಳಿ ಅಪಸ್ವರವೇ ಅಲ್ಲವಾ...?
ಕೃಷ್ಣ ಕಣ್ಣು ಬಿಚ್ಚಿದ - ರಾಧೆ ಚಿತ್ರವಾದಳು, ರಾಧೆ ನಿಡುಸುಯ್ದಲ್ಲಿ ಕೊಳಲು ಉಸಿರ ಮರೆಯಿತು; ದೂರವೇ ಕಾಯ್ದದ್ದಾss ಬಂಧವ...!?
ಉಪಸಂಹಾರವನ್ನು ಹೇಗೆ ಬರೆದರೆ ಚೆಂದವಿತ್ತು...? ಯಾರು ಬರೆಯಬೇಕಿತ್ತು...?? ಹೌದು, ಇಷ್ಟಾಗಿಯೂ ಉಪಸಂಹಾರ ಬರೆಯುವ ಅವಕಾಶ ಇದ್ಯಾ ಬದುಕಿಗೆ...???
ಪ್ರಶ್ನೆ ಪ್ರಶ್ನೆ ಬರೀ ಪ್ರಶ್ನೆಗಳೇ - ಉತ್ತರದಾಯಿತ್ವವನ್ನೂ ಪ್ರಶ್ನಿಸುವ ಪ್ರಶ್ನೆಗಳು...
ಕೊನೆಗೂ ಎಲ್ಲಿಗೂ ಮುಗಿಯದ ಸಂಭಾಷಣೆ - ಅದು ಆಳಕಿಳಿದಷ್ಟೂ ಸಂವೇದನೆ; ಅದಕೇ ಮುಗಿಯದಿರಲಿ ನನ್ನೊಳಗಣ ಸಂಭಾಷಣೆ - ಅದಷ್ಟೇ ಬದುಕಿನ ಆವೇದನೆ...
#ಕಥೆಯಾಗದ_ಒಂದು_ಪಾತ್ರ...

ನಾನಿನ್ನೂ ಹುಟ್ಟಿಯೇ ಇರಲಿಲ್ಲ, ಆಗಲೇ ಎದೆ ಗೂಡಿನ ಕನಸ ಕಣ್ಣೊಂದು ಊದಿಕೊಂಡು ಊನವಾಗಿತ್ತು; ಮೊದಲಾಗಿ ತಬ್ಬಿದ ಕೊನೆಯ ಸೋಲು - ಉಳಿದೆಲ್ಲ ಸರಣಿ ಅದರ ಬಣ್ಣ ಬಣ್ಣದ ಕವಲುಗಳಷ್ಟೇ...‌‌
ಅಥವಾsss
ನಾ ಹುಟ್ಟಿದ್ದು ನನ್ನ ಮೊದಲ ವೀರೋಚಿತ ಗೆಲುವು - ಬಹುಶಃ ಹೇಳಿಕೊಳ್ಳಬಹುದಾದ ಕೊನೆಯದೂ ಕೂಡಾ; ಉಳಿದಂತೆ ಅಲ್ಲಿಷ್ಟು ಇಲ್ಲಿಷ್ಟು ಕತ್ತಲ ಮಿಂದ ನೆರಳಿನಂಥವು ಸಿಕ್ಕಾವು...
#ನಾನೆಂಬ_ಕಥೆಯೊಂದು_ಹೀಗಿರಬಹುದು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment