Thursday, October 9, 2014

ಗೊಂಚಲು - ಒಂದು ನೂರಾ ಮೂವತ್ಮೂರು.....

ಅರ್ಥವಿದ್ದೀತೆನಿಸದ ಅಪೂರ್ಣ ಭಾವಗಳು.....
(ಭಾವಕ್ಕೆ ಬದ್ಧನಾಗಿರಲಾಗದವನ ಅಡ್ನಾಡಿ ಭಾವಗಳು...)

ಬಿಡಿ ಬಿಡಿಯಾದ ಥರ ಥರದ ಹೂವುಗಳನು ಆಯ್ದು ಒಂದೆ ದಾರದಲಿ ಚಕಚಕನೆ ಕಟ್ಟಿ ಮಾಲೆ ಮಾಡುವ ಆ ಹೂವು ಮಾರುವ ಹೂವಂಥ ಹುಡುಗಿಯ ಅತ್ತಿತ್ತ ಓಲಾಡುವ ಕಪ್ಪು ಕಂಗಳಲಿ ಬಣ್ಣ ಬಣ್ಣದ ಕನಸುಗಳ ಮಾಲೆ ಇರುವಂತಿದೆ...
ಸುರಿವ ಬಿಸಿಲಿಗೆ ತನ್ನ ಮುಖ ಬಾಡಿದರೂ ಹೂ ಬಾಡದಿರುವಂತೆ ನೀರ ಸಿಂಪಡಿಸೋ ಅವಳ ಕೈಗಳಲ್ಲಿ ನಂಗೆ ಬದುಕಿನೆಡೆಗಿನ ಅವಳ ಪ್ರೀತಿಯ ತೀವ್ರತೆ ಕಾಣುತ್ತದೆ...
ಹೂವ ಕಟ್ಟುತ್ತ ಕಟ್ಟುತ್ತಲೇ ಒರಟಾದ ಅವಳ ಬೆರಳುಗಳಲ್ಲಿ ಬದುಕ ಮಧುರವಾಗಿ ಕಟ್ಟಿಕೊಳ್ಳೊ ಮುಚ್ಚಟೆಯ ಹಂಬಲದ ಹಾಡಿರುವಂತಿದೆ...
ಹೂವ ಮಾರಿ ಕನಸುಗಳ ಕೊಂಡು ಜೋಪಾನ ಮಾಡೋ ಆ ಹುಡುಗಿ ನನ್ನಲ್ಲಿ ನನ್ನ ಕಪ್ಪು ಹುಡುಗಿಯಷ್ಟೇ ಅಕ್ಕರೆಯ ಉಕ್ಕಿಸುತ್ತಾಳೆ...
ಅವಳ ಕಂಗಳಲ್ಲಿನ ಕನಸುಗಳಿಗೆ ಬೆಳೆದು ಬಾಳಲು, ಬೆಳೆಯುವಲ್ಲಿ ಮತ್ತು ಬಾಳುವಲ್ಲಿನ ಕಾಡಿನ ಸ್ವಾತಂತ್ರ‍್ಯ ಹಾಗೂ ಉದ್ಯಾನವನಕೆ ಸಿಗುವ ಆರೈಕೆ ಎರಡೂ ಸಿಗಲಿ ಎಂಬುವುದೆನ್ನ ಹಾರೈಕೆ...

***

ಸ್ನೇಹವೇ -
ಮನದ ಸುತ್ತ ಅಷ್ಟು ಭದ್ರವಾಗಿ ಕಟ್ಟಿಕೊಂಡ ನಾನೆಂಬ ನನ್ನಹಮ್ಮಿನ ಕೋಟೆ ನಿನ್ನ ಒಂದೇ ಒಂದು ಮುಗುಳ್ನಗೆಯ ನೆನಪಿನ ದಾಳಿಗೆ ಕುರುಹೂ ಇಲ್ಲದಂತೆ ಮುರಿದು ಬೀಳುತ್ತೆ ಪ್ರತಿ ಬಾರಿಯೂ...
ಅರಿವಾಗುತಿದೆ ಈಗೀಗ ಒಳಗಿನ ದಂಗೆಯ ಮೆಟ್ಟುವುದಷ್ಟು ಸುಲಭವಲ್ಲ...
ಕತ್ತಿ ಹಿಡಿದ ಕೈಯ ಕತ್ತರಿಸಿ ಗೆದ್ದಷ್ಟು ಸುಲಭವಲ್ಲ, ಹೂವ ಹಿಡಿದು ಎದುರು ನಿಂತ ಕೈಯ ಕಿರುಬೆರಳನೂ ಸೋಕದೇ ನಿಲ್ಲುವುದು ಅಥವಾ ಆ ಕೈಯ ಕುಲುಕಿ ಸಲಹುವುದು...
ಪ್ರೀತಿಯ ಹೂಗಿಡವ ನೆಡುವಾಸೆಯ ಪಡಬೇಡಿ ಭಾವಜೀವಗಳೇ ನೀರುಣಿಸಿ ಸಲಹಲಾರದ ಬರಡು ನೆಲ ನನ್ನೀ ಮನಸು...
ಹೊರಕಾಂಬುದೆಲ್ಲ ಒಳಗಿರುವುದಿಲ್ಲ...
ಒಳಗಿರಿವುದನೇ ಹೊರಗೂ ತೋರಿಯೂ ಪ್ರೀತಿಯ ಗೆಲ್ಲುವುದು ನನ್ನಂಥವರಿಗಲ್ಲ...
ಎಷ್ಟು ಹೂಗಿಡಗಳು ಬಾಡಿದವೋ ನನ್ನ ನಿಷ್ಠುರ ಭಾವಹೀನತೆಯ ಮನದ ಬಯಲಲಿ ಉಸಿರಾಡೋ ಆಸೆಗೆ ಬಿದ್ದು...
ಅರಳಿ ನಗುವಾಸೆಯ ಸ್ನೇಹಗಳೇ ದೂರವೇ ಇದ್ದುಬಿಡಿ ಮರಳುಗಾಡಿದು ನನ್ನ ಮನಸು - ಹಬ್ಬಿ ಹರಡಲು ದಕ್ಕಲಿ ನಿಮಗೆಲ್ಲ ಮಲೆನಾಡ ಕಾಡಲೊಂದು ತಾವು...

***

ಕೂಸೇ -
ಕೊಳೆತ ಕನಸುಗಳ ಗಬ್ಬು ನಾರುವ ಮನದ ಬೀದಿಯಲಿ ಅರೆ ಹುಚ್ಚ ಕುನ್ನಿಯಂತೆ ಅಂಡಲೆಯುವ ಅಳಿದುಳಿದ ಅತೃಪ್ತ ಭಾವಗಳನೆಲ್ಲ ನಿರ್ಭಾವದ ಮಬ್ಬುಗಣ್ಣಲ್ಲಿ ದಿಟ್ಟಿಸುತ್ತ ಕೂತವನು ನಾನು...
ನೀನೋ ಅಂದ ಗಂಧಗಳ ಆಯಸ್ಸು ಮುಗಿಯುತಿರೋ ಅದೇ ಭಾವಗಳನು ನನಗೆ ಕೊಡು; ಯಾರೋ ಭಗವಂತನ ಪ್ರಸಾದವೆಂಬಂತೆ ದಂಡೆಯಾಗಿಸಿ ಮುಡಿಗೆ ಮುಡಿದು ನಗುತ್ತೇನೆನ್ನುತ್ತೀಯ...
ಗೊತ್ತು ನಿನಗೂ ಹೂವೆಂದೂ ಎರಡನೇ ಹಗಲನ್ನು ಕಂಡದ್ದಿಲ್ಲ...
ಅಂತೆಯೇ ನನ್ನೊಳಗೆ ಜೀವ ತಳೆದ ಒಂದೇ ಒಂದು ಕನಸು ಕೂಡ ಹಗಲಲ್ಲಿ ನಗದೇ ದಶಕಗಳೇ ಕಳೆಯುತ್ತ ಬಂದವು...
ಹುರಿದು ಮುಕ್ಕುವ ವಾಸ್ತವಗಳು ಹಗಲಿಗೆ ಎದೆಕೊಟ್ಟು ನಿಲ್ಲದಂತೆ ಬಡಿದು ಮಲಗಿಸಿರುವಾಗ ಯುದ್ಧಕ್ಕೆ ಹುರಿಗೊಳಿಸೋ ಮಾತಾಡುತ್ತೀಯ...
ಕತ್ತಲನೇ ಉಸಿರಾಡುವವಗೆ ಹೊಸ ಹಗಲ ತೋರುವೆನೆಂಬ ನಿನ್ನ ಹುಂಬ ಧೈರ್ಯಕೆ ಏನೆನ್ನಲಿ...
ಹೋಗಲಿ ಭಾವಗಳಾದರೂ ಏಕೀಭವಿಸುತ್ತಾವಾ ಅಂದರೆ ಅದೂ ಇಲ್ಲ...
ನೀನು ಮನಸನ್ನು ಮುದ್ದಿಸು ಅನ್ನುತ್ತೀಯ - ನಾನೋ ದೇಹದ ಮೇಲೆ ಕಣ್ಣು ನೆಟ್ಟು ಕೂತ ಮೃಗ...
ಭಾವಗಳೇ ನೋವ ಕಳೆವ ನಲಿವ ಬೆಳೆವ ಜೀವ ಸೆಲೆ ಎನ್ನುವ ನೀನು - ನಿರ್ಭಾವವೇ ಬದುಕಿನೋಘದ ಮೂಲ ಸೆಲೆ ಎಂಬುವ ನಾನು...
ನಾನೋ ಮಿತಿಗಳ ಹಂಗಿಲ್ಲದೆ ಸುಖಗಳ ಸವಿಯನರಸಿ ಹೊಂಟ ಪುಂಡು ಮನಸಿನ ಮಹಾ ವ್ಯಾಮೋಹಿ - ನೀನಾದರೋ ನಿನ್ನ ಮತ್ತು ನೀನಿರೋ ಸಮಾಜದ ಮಿತಿಗಳೊಳಗೇ ಆನಂದವ ತುಂಬಿಕೊಳ್ಳ ಬಯಸೋ ಮುಚ್ಚಟೆಯ ಮೃದು ಮನಸಿನ ನಿರ್ಮೋಹಿ...  
ಇಷ್ಟಾಗಿಯೂ ಮುದಿ ಸೂಳೆಯೊಬ್ಬಳು ಮಗುವ ಹಡೆದಂತೆ ಕನಸಾದದ್ದನ್ನು ಊರಿಗೆಲ್ಲ ಹೇಳಿಕೊಂಡು ಸಂಭ್ರಮಿಸಿದಂತೆ ನಿನ್ನ ಪ್ರೇಮವ ಕೂಗಿ ಕೂಗಿ ಸಂಭ್ರಮಿಸುತ್ತೇನೆ...
ಕೊಡಲು ನನ್ನಲಿ ಒಂದಿನಿತು ಪ್ರೇಮವಿಲ್ಲ - ನಿನ್ನ ಭಾವವ ಸಲಹಿ ಕಾಯಲು ಮನದಿ ತಾವೂ ಇಲ್ಲ...
ಪ್ರೇಮ ಹುಟ್ಟದ, ಕಾಮ ಸಾಯದ ಹುಚ್ಚಾಟದ ಗಂಡು ಕರಡಿ ನಾನು...
ಆದರೂ ನಿನ್ನ ಮಡಿಲಿಂದ ದೂರನಿಲ್ಲಲಾರದ ಸ್ವಾರ್ಥ ನನ್ನದು - ಪ್ರೇಮವಿಲ್ಲದ, ಮಿತಿಗಳೂ ಇಲ್ಲದ ಸ್ನೇಹವ ಬೇಡುತ್ತ ನಿಲ್ಲುತ್ತೇನೆ ...
ನನ್ನ ನಾಲಿಗೆಯ ಸ್ವಾರ್ಥದ ಜೊಲ್ಲಿನ ಒಣ ಅಕ್ಕರೆಯ ಮಾತುಗಳು ನಿನ್ನ ಬದುಕ ಬಲಿ ತೆಗೆದುಕೊಳ್ಳದಂತೆ ನಿನ್ನನು ನೀನೇ ಕಾಯ್ದುಕೊಳ್ಳಬೇಕೀಗ...
ಪುಟ್ಟಾ - ಪ್ರೇಮಕ್ಕೆ ಭಾವಗಳ ಸಮರ್ಪಿಸಬಹುದೇನೋ ಆದರೆ ಬದುಕನ್ನಲ್ಲ ಕಣೋ...
ಬದುಕ ನಾವೆ ತೇಲುತ್ತಲೇ ಇರಬೇಕು ಪ್ರೇಮಜಲದ ಮಂದಾಕಿನಿಯ ಮೇಲೆ...
ದಕ್ಕದ ಪ್ರೇಮಿಯ ತೊರೆದುಬಿಡು - ಪ್ರೇಮಭಾವವ ಸಾಯಗೊಡದೆ ಬಚ್ಚಿಟ್ಟುಕೊಂಡು...
ಬದುಕ ಅದಿರುವಂತೆಯೇ ತಬ್ಬಿಕೋ - ನೀ ಬಯಸುವಂತೆ ಬದುಕು ಬಗ್ಗಲ್ಲವೆಂದಾದಾಗ...
ಸಮರ್ಪಣೆ ಬದುಕಿನೆಡೆಗಿರಲಿ - ಪ್ರೇಮಿ ಬದುಕಿನೊಂದು ಮಧುರ ಯಾತನೆಯಾಗಿ ನೆನಪಿನ ಕಣಜದ ಒಳಮನೆಗೆ ಸೇರಲಿ...
ಹೊಸ ಪ್ರೇಮ ಆಡಿ ನಗಲಿ ಮನದರಮನೆಯ ಅಂಗಳದಲಿ...
ಶುಭಾಶಯವು ನಿನಗೆ...

***

ಉರಿವ ಕಾರಿರುಳ ಗರ್ಭದಲಿ ನೆನಪುಗಳನೆಲ್ಲಾ ಸುಟ್ಟು ಅಂತ್ಯಕ್ರಿಯೆ ಮಾಡಬೇಕಿದೆ - ಮತ್ತೆಂದಿಗೂ ಎದ್ದು ಬಂದು ಕಾಡದಂತೆ...
ಜತೆಗೊಂದಿಷ್ಟು ಕೈಗೂಡದೇ ಕರುಳ ಕೊರೆಯುವ, ಸದಾ ಅಶಾಂತ ಅಲೆಗಳನೆಬ್ಬಿಸಿ ಕಣ್ಣ ಕೊಳವ ಬಗ್ಗಡವಾಗಿಸುವ ಕನಸುಗಳದೂ ದಹನವಾಗಬೇಕಿದೆ ಅದೇ ಚಿತೆಯಲ್ಲಿ...
ಕಾಯುತಿದೆ ಮನಸ ಕಣ್ಣು - ನೆನಪು ಕನಸುಗಳ ಹಂಗಿಲ್ಲದ ಪ್ರಶಾಂತ ಇರುಳ ಸಾಂಗತ್ಯಕ್ಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, September 20, 2014

ಗೊಂಚಲು - ಒಂದು ನೂರಾ ಮೂವತ್ತೆರಡು.....

ಆಗೀಗ ಹಿಂಡುವ ತುಂಡು ತುಂಡು ಭಾವಗಳು.....
(ಬದುಕ ಕಾಡುವ ಸಂಚಾರಿ ಭಾವಗಳಿವು - ಒಂದಕೊಂದು ವಿರುದ್ಧವೆನಿಸಿದರೆ ತಪ್ಪು ನನ್ನದಲ್ಲ...)

ಆತ್ಮ ಸಾಂಗತ್ಯವೇ - 
ಹೊಸ ಹೆಸರಿಡುವ ಹಂಗನು ಮರೆತು ಹಸನಾಗಿ ಹಬ್ಬಿರುವ ಸ್ನೇಹದ ಅನುಭಾವದಾಲಯದ ನಡುಮನೆಯಲ್ಲಿ ಈ ಬದುಕೆಂಬೋ ಬದುಕನು ಹಣತೆಯಾಗಿಸಿ ಹಚ್ಚಿಟ್ಟುಕೊಂಡು ಇಷ್ಟಿಷ್ಟೇ ಕರಗೋಣ... 
ಕರಗೋ ನೋವು ಮತ್ತು ಬೆಳಗೋ ನಗು ಎರಡೂ ನಮ್ಮದಾಗಲಿ...

ಕರುಳ ಜೋಗುಳವೇ -
ಎನ್ನ ಮೊಗದ ನಿತ್ರಾಣ ನಗುವನ್ನೂ, ಮನದ ಜೀವಂತ ಅಳುವನ್ನೂ ನಿನ್ನೆದೆಯ ಒಲವ ದಾರದಲ್ಲಿ ಕಟ್ಟಿ ಮಾಲೆಯಾಗಿಸಿ ಮುಡಿವ ನಿಸ್ವಾರ್ಥ ಮತ್ತು ತಂತಿ ಹರಿದ ವೀಣೆಯಿಂದ ಜೀವೋನ್ಮಾದದ ಮೇಘ ಮಲ್ಹಾರದ ನಾದ ಹೊಮ್ಮಿಸುವ ಹುಚ್ಚು ಹಂಬಲ ನಿನ್ನೊಳಗೆ ಮೂಡಿದ್ದು ಹೇಗೆ ಮತ್ತು ಏಕೆ..?? 
ಈಗಲೂ ಸೋಜಿಗವೆನಗೆ... 
ನೀನು -
ನಾ ಅರಿಯಲಾರದೆ ಹೋದ, ಬರೆಯಲಾಗದೆ ಸೋತ ಒಂದು ಮಹಾ ಕವಿತೆ...

ನಗುವಿಲ್ಲದ ಸ್ಮಶಾನ ಮೌನ - 
ಒಲವಿಲ್ಲದ ಪಿಶಾಚ ಧ್ಯಾನ - 
ರೆಪ್ಪೆಗಳು ಒಂದಾಗದ ಪರಿತ್ಯಕ್ತ ಕಾರಿರುಳು - 
ಒಂದಾದರೂ ಘನ ಕನಸು ಹುಟ್ಟದ ದರಿದ್ರ ಹಗಲು - 
ಆತ್ಮಗಳ ಬೆಸೆದು ಬೆಳಗದ ಶವ ಸಂಭೋಗದಂಥ ಕ್ಷುದ್ರ ಮಿಲನ - 
ಕೋಟಿ ಆಸೆಗಳ ಸಂಚಯಿಸೋ ಬಣ್ಣದ ಕಿರಣಗಳ ಹೊತ್ತು ಪ್ರತಿಫಲಿಸೋ ಮುಂಜಾವಿನ ಮಂಜಿಗೂ, ಪ್ರೇಮದ ನಂಜೇರಿ ಶೃಂಗಾರ ರಂಗೇರಬೇಕಿದ್ದ ಚುಮು ಚುಮು ಮುಸ್ಸಂಜೆಗೂ ಸ್ಪಂದನೆಯ ಹಂಗೇ ಇಲ್ಲದಂತೆ ಮುಖ ತಿರುವಬೇಕಾದ ಅಸಹಾಯ ಮನಸು - 
ಉಸಿರಿದ್ದೂ ಸಾಯುವುದೆಂದರೆ ಇಷ್ಟೆ ತಾನೆ... 
ಅಂಥ ಬದುಕುಗಳನ್ನು ಘೋರಿಯೊಳಗಣ ಬದುಕುಗಳೆನ್ನಬಹುದೇನೋ ಅಲ್ಲವಾ...........  

ಅವಳ ಸ್ನೇಹದ ಕಣ್ಣಂಚಿಂದ ಭರವಸೆಯ ಕಿಡಿಯೊಂದ ಬಸಿದುಕೊಂಡೆ... 
ಕಂಪಿಸೋ ಕಿರುಬೆರಳಿಂದ ಹೃದಯಕ್ಕೆ ಜೀವ ಸಂಚಾರ...
ಹೊತ್ತಿದ ಹೊಸ ಉತ್ಸಾಹದ ಉರಿಯ ಸುತ್ತ ಬದುಕಿನದೀಗ ಸಂಭ್ರಮದ ತಕಧಿಮಿತ...

ಹೊಟ್ಟೇಲಿ ಕರುಳ ಕೊಯ್ಯುವಷ್ಟು ಹಸಿವನಿಟ್ಟು - ತಟ್ಟೇಲಿ ರುಚಿಯಾದ ಅನ್ನವನಿಟ್ಟು - ಮೂಗು, ಕಣ್ಣುಗಳ ಸ್ವೇಚ್ಛೆಯಾಗಿ ಬಿಟ್ಟು - ಉಣ್ಣಲು ಬೇಕಾದ ಬಾಯಿ ಮತ್ತು ಕೈಗಳನು ಕಟ್ಟಿ - ಸಾವಿನ ಮನೆಯ ಜೀತಕ್ಕೆ ಅಟ್ಟಿದ ‘ಕರುಣಾಳು’ ಬದುಕಿನೆಡೆಗೆ ಯಾಕೋ ಸಣ್ಣ ಅಸಹನೆ ಈಗೀಗ...
ಕಸಿದುಕೊಂಡ ಸ್ವಾತಂತ್ರ‍್ಯವನೆಲ್ಲ ಮರಳಿ ಕೊಡೆಂದು ಕೊರಳ ಪಟ್ಟಿ ಹಿಡಿದು ಕೇಳೋಣ ಅಂದುಕೊಂಡರೆ - ಕ್ಷಣ ಕ್ಷಣಕೂ ಬಣ್ಣ ಬದಲಿಸೋ ಮೂಲ ಸ್ವಭಾವದ ಊಸರವಳ್ಳಿಯನ್ನು ಹಿಡಿದು ಪಳಗಿಸಿಕೊಳ್ಳುವುದಷ್ಟು ಸುಲಭವಾ...???

ಎನ್ನಾತ್ಮಲತೆಯೇ -
ನೀ ನನ್ನೀ ಬದುಕ ತಬ್ಬಿದ ಪರಿಗೆ ಎದೆಯ ಚಿಪ್ಪಿನಲ್ಲಿ ಒಲವು ಗರ್ಭಧರಿಸಿದೆ...
ಹುಟ್ಟಲಿರೋ ಹೊಸ ಕನಸ ಕಂದಮ್ಮನಿಗಾಗಿ ಕಣ್ಣ ಪಾಪೆಯಂಚಲಿ ತೊಟ್ಟಿಲು ಕಟ್ಟಿ ಕಾಯುತ್ತಿದ್ದೇನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, September 1, 2014

ಗೊಂಚಲು - ಒಂದು ನೂರಾ ಮೂವತ್ತು + ಒಂದು.....

ಅರ್ಧರ್ಧ ಬರೆದ ಸಾಲುಗಳು...
ಅರ್ಥ......................????

ನೆನಪು -
ಮನದಲ್ಲಿ ನಿಂತ ನೆನಪುಗಳು ನಾಳೆಗೆ ಪಾಠವಾದರೆ ಬದುಕು ನಗುತ್ತೆ - ಇಲ್ಲದೇ ಹೋದಲ್ಲಿ ನಮ್ಮನ್ನು ನಿನ್ನೆಯಿಂದಾಚೆ ನಡೆಯಗೊಡದೇ, ನಾಳೆಗಳನೂ ನಿನ್ನೆಗಳಲೇ ಬೆರೆಸಿ, ಕೊಳೆಸಿ, ನಿಜವಾದ ಹೊಸ ನಾಳೆಗಳೇ ಇಲ್ಲದಂತಾಗಿಸಿಬಿಡುತ್ತವೆ - ಬದುಕು ನಿಂತಲ್ಲೆ ನಿಂತು ಪಾಚಿಗಟ್ಟಿದ ನಿರುಪಯುಕ್ತ ನೀರಾಗುತ್ತೆ... 
ಯಾವ ದಾರಿ ನಾನೇ ನನ್ನ ಕೀಳಾಗಿ ಕಾಣುವಷ್ಟು ಅವಮಾನಿಸಿತೋ, ಯಾವ ದಾರಿ ನನ್ನ ಆತ್ಮಾಭಿಮಾನವನ್ನೇ ಅಲುಗಾಡಿಸಿತೋ ಅದೇ ದಾರೀಲಿ ಮತ್ತೆ ನಡೆಯುವಂತೆ ಆಸೆ ಹುಟ್ಟಿಸೋ ಕೆಲ ನೆನಪುಗಳೆಡೆಗೆ; ಅವೆಷ್ಟೇ ಸಿಹಿ ಅನ್ನಿಸಿದರೂ ಅಂಥ ನೆನಪುಗಳ ಮತ್ತೆ ಮತ್ತೆ ಎದುರು ತಂದು ನಿಲ್ಲಿಸಿ ತನ್ನಾಸೆಯ ಶಕ್ತಿ ಹೆಚ್ಚಿಸಿಕೊಳ್ಳ ಬಯಸೋ ನನ್ನದೇ ಮನದ ದೌರ್ಬಲ್ಯದೆಡೆಗೆ ನನ್ನ ಧಿಕ್ಕಾರವಿದೆ...
ಪ್ರಜ್ಞೆ ತಾನು ಎತ್ತರದ ಗೆಲುವಿನ ಕನಸು ಕಂಡರೆ ಈ ಮನಸೋ ಬದುಕಿನೊಳಮನೆಯ ಗಬ್ಬೆಬ್ಬಿಸಿದ ಅದೇ ಹಳೆಯ ಆಸೆಗಳ (ನೆನಪು) ಸುತ್ತ ಗಿರಕಿಹೊಡೆಯುತ್ತಿರುತ್ತೆ...
ನಾಚಿಕೆಯಿಲ್ಲದ ಹಂದಿಯಂಥ ಮನಸು - ಕೊಳಚೆಯೆಂದರೆ ಅದೇನು ಪ್ರೀತಿಯೋ...



ರೂಪದರ್ಶಿ: ಮುದ್ದು ಸೊಸೆ ‘ಅಭಿಜ್ಞಾ
ದುರುಳ ಜನಗಳ ಕಲ್ಲೇಟಿನ ನೋವನೂ ನಗುವಿಂದಲೇ ಅರಗಿಸಿಕೊಂಡು, ಆ ನಗುವಿಂದಲೇ ಕಲ್ಲೆಸೆದ ಜನರನು ಅಣಕಿಸಬಲ್ಲ ಮರುಳನ ಮನದ ನಗುವೂ ಯಾಕೋ ಶ್ರೇಷ್ಠವೇ ಅಂತೆನಿಸುತ್ತೆ... ನಿದ್ದೆ ಹೊರಳಲ್ಲಿನ ಮಗುವ ನಗುವಂಥ ನಗುವಲ್ಲಿ ಎಲ್ಲವನೂ ಕೊನೆಗೆ ತನ್ನನೇ ತಾನೂ ಮರೆತವನ ನಗುವನ್ನು ಹೀಗಳೆಯಲಿ ಹೇಗೆ... ಅಹಂನ ಕೋಟೆಯೊಳಗಿನ ಒಣ ಗಾಂಭೀರ್ಯದ ಸಭ್ಯತೆಗಿಂತ - ಬಯಲ ತುಂಬುವ ಶುದ್ಧ ಮನದ ಸ್ವಚ್ಛ ನಗು ಹೆಚ್ಚು ಹಿತಕರ ಅಲ್ಲವಾ... ನಗು ದಕ್ಕಿದಾಗ ನಕ್ಕುಬಿಡಿ ಮನಸಾರೆ - ಕಣ್ಣಲಿ ಹೊಸ ಬೆಳಕು ಮೂಡಲಿ... ಜನ ಹುಚ್ಚು ಅಂದರೆ ಅನ್ನಲಿ... ಹಂಚಬಹುದಾದ ನಗುವಾದರೆ ಒಂಚೂರು ಹಂಚಿಬಿಡಿ ಅವರೂ ಹುಚ್ಚರಾಗಲಿ... ನಗುವೆಂಬುದು ಎಲ್ಲರ ಆತ್ಮದ ದೀಪವಾಗಲಿ... :)  

                                                                  
ಹಾಳಾದ್ದು ಈ ಸಾವಿಗೆ ಸ್ವಲ್ಪವೂ ಕರುಣೆಯೆಂಬುದಿಲ್ಲ...
ಅಲ್ಲೇಲ್ಲೋ ಅಕಾಲದಲ್ಲೂ ಬಂದು ಕಂಗೆಡಿಸುವುದು - ಇನ್ನೆಲ್ಲೋ ಅದಕೆಂದೇ ಕಾಯುತಿರುವವರೆಡೆಗೆ ತಿರುಗಿಯೂ ನೋಡದೇ ಕಾಡುವುದು...
ಬದುಕೆಂಬ ಹಾಡಿನ ಸ್ವರ, ಲಯ, ತಾಳಗಳ ಹದ ತಪ್ಪಿಸಿ ವಿನೋದ ನೋಡುವ ಸಾವೆಂಬ ಸಾವಿನ ಎಲ್ಲ ನಡೆಗಳೂ ವಿಪರೀತಗಳೇ...


ಮಳೆಗಾಲದ ಹಬ್ಬಗಳ ಒಂದು ನೆನಪು -
ಮುಂಬೆಳಗಲ್ಲಿ ಹನಿವ ಸೋನೆಯ ಲಾಸ್ಯ...
ಅಂಗಳದ ನೀರಲ್ಲಿ ರಂಗೋಲಿ ಹುಡಿಯ ನಾಟ್ಯ...
ಒಳಮನೇಲಿ ಅಮ್ಮನ ಬಳೆಗಳ ತಾರಕ ಸಂಗೀತ...
ನನ್ನ ನಾಲಿಗೆಗೆ ಕಜ್ಜಾಯದ ಆಸೆಯ ತುರಿಕೆ...


ಸಾವಿನ ಮನೆಯಂಗಳದಲ್ಲೂ ಎಂದಿನಂತೆ ಮತ್ತು ಎಲ್ಲಿನಂತೆ ಸೂರ್ಯ ಅದೇ ನಗು ನಗುತ್ತಾನೆ...
ಕಣ್ಣೀರಲ್ಲೂ ಕಾಮನಬಿಲ್ಲನು ಬಿಂಬಿಸಬಲ್ಲನಾತ - ಬೆಳಕಿನಾಗರ...
ಎತ್ತರದಲ್ಲಿರುವವರಿಗೆ (ಪ್ರಕೃತಿಗೆ) ಸೂತಕಗಳ ಹಂಗಿಲ್ಲವೆನ್ನಿಸುತ್ತೆ...!!!


ಅಬ್ಬರಿಸಿ ನಗುತ್ತೇನೆ -
ಅಳಬಾರದೆಂಬ ಅಹಂಕಾರ ಮತ್ತು ಅಳು ಕೂಡ ಬಾರದಷ್ಟು ಅಸಹಾಯಕತೆ ಕಾಡುವಾಗಲೆಲ್ಲ...
ಹೃದಯದ ಬಿಕ್ಕಳಿಕೆಗಳ ಹಕ್ಕುಗಳನ್ನೆಲ್ಲ ಇರುಳಿಗೆ ಮಾರಿದ್ದೇನೆ...
ಹೃದಯ ಮತ್ತು ಕಣ್ಣುಗಳ ಅನುಸಂಧಾನದಲ್ಲಿ ಭಾವಗಳು ಬೆತ್ತಲಾಗಲು ಕೂಡ ಇರುಳೇ ಹಿತವಂತೆ...
ಹಗಲಿಗೆಂದೂ ಕಣ್ಣ ಹನಿ ಕಾಣಬಾರದು - ಹಗಲೇನಿದ್ದರೂ ನಗುವ ಮಾರುವ ಸಂತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, August 19, 2014

ಗೊಂಚಲು - ಒಂದು ನೂರಾ ಮೂವತ್ತು.....

ಮನಸಿನ ಹೊಸ ನಡಿಗೆ.....
(ಅವಳೆದೆಯ ಕಲ್ಪಿತ ಭಾವಗಳು – ನನ್ನ ಶಬ್ದಗಳಲ್ಲಿ... ಅವಳಾರೆಂದು ಕೇಳಬೇಡಿ...)


‘ರೂಪ’ದರ್ಶಿ: ಸ್ನೇಹಿತೆ “ಊಪಿ...”
ಒಳಮನೆಯ ಕತ್ತಲಲಿ ಕಾಡುವ ನೆನಪು – ನೇವರಿಕೆ...
ವಾಡೆಯ ಬಾಗಿಲ ತೆರೆದಿಟ್ಟೆ...
ತೂರಿ ಬರೋ ಬೆಳಕಲ್ಲಿ ಕಂಡದ್ದೂ ಮತ್ತದೇ ನಿನ್ನಂದ, ಎದೆ ಬಯಲ ಚೆಂದ...
ಕಾರಣ - ಅಕ್ಷಿ ಅಕ್ಷದ ತುಂಬಾ ನಿನ್ನದೇ ಕನವರಿಕೆ...
ಸುಳಿವ ಹೊಸ ಗಾಳಿಯಲೂ ನಿನ್ನ ಬೆವರ ಗಂಧ...
ಜೀವ ಭಾವದೊಳೆಲ್ಲ ರೋಮಾಂಚದ ಭಾವಾನುಬಂಧ...


ನೆನಪಾಗಬಾರದೇ ನಿನಗೊಮ್ಮೆ  - ತುಟಿಯಂಚಿಂದ ನೀ ಕೆಡಿಸುತಿದ್ದ ನನ್ನ ಕಣ್ಣ ಕಾಡಿಗೆ, 
ಆಗೆಲ್ಲ ಖುಷಿಯಿಂದಲೇ ಗದರುತಿದ್ದ ನನ್ನ ತುಟಿಯ ಕೊಂಕು, 
ಹೆಣ್ಣೆದೆಯ ಅರಳುವಿಕೆಯ ನಸುಗಂಪನ,
ಭಯ ಬೇಡವೇ ಹುಡುಗೀ ಅಂತಂದು ನೀನೇ ಒರೆಸುತಿದ್ದ ಎನ್ನ ಹಣೆಯ ಬೆವರ ಮಣಿ, 
ಆ ನಸುಗತ್ತಲಲೂ ಎನ್ನ ಕಣ್ಣಲ್ಲಿ ಹೊಳೆಯುತಿದ್ದ ಆರಾಧನೆಯ ಆರದ ದೀಪ...


ಮನಸಿನದಿದು ಹೊಸ ನಡಿಗೆ – ಒಲವೇ ನಿನ್ನೆಡೆಗೆ...
ಅನುಕ್ಷಣವೂ ನಿನ್ನದೇ ಘಂಟೆ ಜಾಗಟೆ ಎದೆ ಗುಡಿಯ ಮಂಟಪದಲ್ಲೀಗ - ನಿದ್ದೆ ಮರುಳಲ್ಲೂ ಘಲಿ ಘಲಿರೆನ್ನುವ ಹಸುಕಂದನ ಅಂಬೆಗಾಲಿಗೆ ಕಟ್ಟಿದ ಗೆಜ್ಜೆಯಂತೆ...
ಹೂವ ಜೊತೆ ಸೇರಿ ಹಾಡಬೇಕಿದ್ದ ಹಾಡಿನ ಝಲಕೊಂದು ದುಂಬಿಯ ಕಾಯುತ್ತ ಇಲ್ಲೇ ಸುಳಿಯುತಿದೆ...
ಎನ್ನೆದೆಯ ಹಾಳೆಯ ಮೇಲೆ ನೀ ಅರ್ಧ ಬರೆದಿಟ್ಟು ಹೋದ ಕವನದ ಸಾಲು ಪೂರ್ಣತೆಯ ಚುಕ್ಕಿಯಿಡಲು ನಿನ್ನ ಬರವನೇ ಕಾಯುತಿದೆ...


ಪೆದ್ದು ಹುಡುಗಾ - ಬಾಲ್ಯ ಕಳೆದು ಹೆಣ್ಣಾಗಿ ಬೆಳೆದು ಎದೆಯ ಭಾವಗಳಿಗೆ ಹೊಸ ಬಣ್ಣ ಬಂದ ಮೇಲೆ ಹೆಣ್ಣಾಸೆಯ ಕೋಮಲ ಭಾವಗಳಿಗೆ ಕಿರುಬೆರಳಲೇ ಕಿಡಿ ಹಚ್ಚಿ, ಜಂಗಮ ಭಾವಗಳಿಗೆಲ್ಲ ಸ್ಥಾವರದ ಬಯಕೆ ತುಂಬಿದ ಮೊದಲ ಗಂಡು ಪ್ರಾಣಿ ಕಣೋ ನೀನು...


ಬೆರಳ ಬೆಸೆದು, ಕಣ್ಣಲ್ಲೇ ನನ್ನಾಳವನೆಲ್ಲ ಅಳೆದು, ಚಿತ್ತ ಸೋಲುವಂತ ಪ್ರಣಯದ ಕಲ್ಪನಾ ಚಿತ್ರಗಳಿಗೆ ಒಳಗೇ ಜೀವಬರಿಸಿ, ಎದೆ ಭಾರ ಏರಿಸಿ, ನಿನ್ನ ಕಣ್ಣ ತಪ್ಪಿಸಲು ಹೆಣಗುವಂತೆ ಮಾಡಿ, ನನ್ನ ಸಂಜೆಗಳಿಗೆಲ್ಲ ರಂಗೇರಿಸಿ, ಮೀಸೆ ಅಡಿಯಲ್ಲೇ ನಸುನಗುತ್ತ ನನ್ನೊಡನೆ ನೀ ಕೂರುತ್ತಿದ್ದ ನಿನ್ನ ಪ್ರೀತಿಯ ಜಾಗ ಅಂಗಳದ ಆ ಕಲ್ಲು ಮಂಚ ಕೂಡ ಈಗ ನಿನ್ನ ತುಂಟ ತುಂಟ ಪಿಸುನುಡಿಯ ದನಿಯ ಕೇಳದೇ ಒಂಟಿ ಭಾವದಲ್ಲಿ ನರಳುತಿರುವಂತೆ ಕಾಣುತಿದೆ ಕಣೋ...  


ತಲೆ ಸ್ನಾನ ಮಾಡಿ ಬಂದು ಎಳೆ ಬಿಸಿಲಲ್ಲಿ ಕೂದಲ ಕೊಡವುತ್ತ ನಿಂತಿದ್ದರೆ ನಾನು, ಹಿಂದಿನಿಂದ ಬಂದ ನೀನು ಸೋನೆ ಮಳೇಲಿ ನೆಂದ ಹಂಸೆ ಮಳೆ ನಿಂತ ಮೇಲೆ ಗರಿಕೊಡವಿಕೊಂಡಂತಿದೆ ಕಣೇ ಅಂದಿದ್ದೆ... ಎಣ್ಣೆ ಗಪ್ಪು ಹುಡುಗಿ ನಾನು, ಕಡುಗಪ್ಪು ಕೂದಲ ಕೊಡವಿದರೆ ಹಂಸೆಯಂತೆ ಕಾಣ್ತೀನಾ ಮೊದಲು ಕಣ್ಣು ತಪಾಸಣೆ ಮಾಡ್ಕೋ ಅಂದರೆ; ನಿನ್ನ ಮನದ ಬಿಳುಪಲ್ಲಿ ಬದುಕ ಬೆಳಗಿಸಿಕೊಳ್ಳ ಹೊರಟ ಮಹಾ ಸ್ವಾರ್ಥಿ ನಾನು ನಂಗೆ ನೀನೆಂದಿಗೂ ಹಂಸೆಯೇ, ಬೇಕಿದ್ದರೆ ಎಣ್ಣೆಗಪ್ಪು ಹಂಸೆ ಅಂತ ಕರೀತೀನಿ ಅಂತಂದು ಎಂದಿನ ನಿನ್ನ ದೊಡ್ಡ ನಗೆಯ ನಕ್ಕು ಅಂಗಳದಲೇ ಅರಳಿದ್ದ ಬಿಡಿ ಮಲ್ಲಿಗೆಯೊಂದ ನೀಡಿದ್ದು ನೆನಪಾದರೆ ಈಗಲೂ ಏನೋ ಅವ್ಯಕ್ತ ನಾಚಿಕೆ ಜೀವದಲಿ ಜೋಕಾಲಿಯಾಡುತ್ತೆ...


ತಲೆ ನೋವೆಂದು ಸಪ್ಪೆ ಮುಖ ಮಾಡಿದರೆ ನಾನು – ಎಂದಿನ ಪೋಲಿತನವನೆಲ್ಲ ಮರೆತು ಪ್ರೀತಿಯಿಂದ ತಲೆಗೆ ಎಣ್ಣೆ ತಟ್ಟಿ ಬಿಸಿ ಬಿಸಿ ನೀರೆರೆದ ಸಾಧು ಗೆಳೆಯ ನೀನು... ಆಗೆಲ್ಲ ಕೇವಲ ಹುಡುಗಿಯಲ್ಲಿ ಮಾತ್ರವಲ್ಲ ಅಮ್ಮನಿರೋದು ಒಬ್ಬ ಶುದ್ಧ ಮನದ ಗೆಳೆಯನಲ್ಲೂ ಅಮ್ಮನಿರ್ತಾಳೆ ಅನ್ನಿಸಿದ್ದಿದೆ... ಅದಕೇ ಅಮ್ಮ ನೆನಪಾದಾಗಲೆಲ್ಲ ಬೆಳ್ಳಂಬೆಳಗ್ಗೆಯೇ ನಿನ್ನ ಮನೆಯಂಗಳದಲಿ ಪ್ರತ್ಯಕ್ಷವಾಗುತ್ತಿದ್ದುದು ನಾನು... ತಲೆ ನೇವರಿಸಿ ಏನೇ ಆಯ್ತು ಅಂತ ಆ ಶಾಂತ ಕಣ್ಗಳಲ್ಲೊಮ್ಮೆ ನನ್ನ ನೋಡಿದರೂ ನನ್ನ ನೋವೆಲ್ಲ ಅಂದಿನ ಮಟ್ಟಿಗೆ ಸತ್ತವೆಂದೇ ಲೆಕ್ಕ... ಅದೆಲ್ಲ ನೆನಪಾದರೆ ಕೊರಳ ಸೆರೆಯುಬ್ಬಿ ಬರುತ್ತೆ...


ನಿನ್ನ ಮಾತಿನೆದುರಿನ ಯಾವ ಮೌನ – ಯಾವುದದು ಪುಟ್ಟ ಬೇಸರ – ಎಲ್ಲ ಸ್ನೇಹಗಳ ನಡುವೆಯೂ ಇರಬಹುದಾದ ಇಷ್ಟಿಷ್ಟು ಭಿನ್ನಾಭಿಪ್ರಾಯ - ನನ್ನ ಬಿಟ್ಟು ನೀನೆಲ್ಲಿ ಹೋಗ್ತೀಯಾ ಎಂಬ ನನ್ನ ಸಣ್ಣ ಅಸಡ್ಡೆ ಇನ್ನೆಷ್ಟು ಕಾಲ ದೂರ ನಿಲ್ಲಿಸಲಿದೆಯೋ ನಿನ್ನಿಂದ ನನ್ನನ್ನ... ನೀ ಅಷ್ಟೆಲ್ಲ ಪ್ರೀತಿಸೋ, ಮುದ್ದಿಸೋ ನನ್ನ ಕಂಗಳಿಂದ ಇನ್ನೆಷ್ಟು ಹನಿ ಜಾರಿದರೆ ನೀ ಸಮಾಧಾನಿಸಲು ಬರ್ತೀಯಾ..? ಅಷ್ಟೆಲ್ಲ ಕಾಲ ನನ್ನದೇ ತಪ್ಪಿದ್ದರೂ ನೀನೇ ಕ್ಷಮೆ ಕೇಳ್ತಿದ್ದೆಯಲ್ಲ ಇಂದು ನಾನೇ ಮಂಡಿಯೂರಿದರೂ ಯಾಕಿಷ್ಟು ಕಠೋರ... ಅರ್ಥವಾಗುತ್ತಿಲ್ಲ...


ನಂಗೆ ಅವರಿವರಿಂದ ಗೊತ್ತಾಗಿದ್ದಿಷ್ಟೇ ಕಣೋ – ಯಾವುದೋ ನೋವೊಂದು ನಿನ್ನ ಬದುಕ ತನ್ನ ತೆಕ್ಕೆಗೆಳೆದುಕೊಂಡಿದೆ - ನಿನ್ನ ಕಾಡುವ ನೋವು ನನ್ನದೂ ಅಲ್ಲವೇನೋ – ನನ್ನ ನೋವುಗಳಿಗೆಲ್ಲ ಜತೆಯಿದ್ದು, ನನ್ನೆಷ್ಟೋ ನಗುವಿಗೆ ಕಾರಣನಾದ ನೀ ನಿನ್ನೊಳಗೆ ಅಳುವಾಗ ನನ್ನ ದೂರ ಸರಿಸಿದ್ದು ಸರಿಯಾ - ನಗುವಷ್ಟೇ ನನಗಿರಲಿ ಎಂದು ನಿನ್ನ ನೋವಲ್ಲಿ ಜತೆ ನಿಲ್ಲದೇ ದೂರ ಓಡುವಷ್ಟು ಕ್ಷುಲ್ಲಕಳಾ ನಿನ್ನೀ ಸ್ನೇಹಿತೆ - ನಿನ್ನ ನೋವು ನನ್ನ ತಾಕದಿರಲೆಂದು ನೀ ದೂರ ನಿಂತ ಈ ನೋವೇ ನನ್ನ ಇನ್ನಿಲ್ಲದಂತೆ ಹಿಂಸಿಸುತ್ತದೆ ಕಣೋ - ನೀನಾಗಿ ಒಮ್ಮೆ ಎಲ್ಲವನೂ ಹಂಚಿಕೊಂಡು ಹಗುರಾಗಿ ನಕ್ಕುಬಿಡು ಬದುಕೆಲ್ಲ ಎದೆಯ ಗೂಡಲ್ಲಿ ಗುಬ್ಬಚ್ಚಿಯಂತೆ ಬಚ್ಚಿಟ್ಟುಕೊಂಡುಬಿಡ್ತೀನಿ ನಿನ್ನ... ಹಟ ಹೂಡದೇ, ತಂಟೆ ತಕರಾರು ಮಾಡದೇ... ಸಾವೇ ಎದುರು ನಿಂತರೂ ನಿನ್ನಿಂದ ದೂರ ಸರಿಯದಂತೆ ಜತೆಯಿದ್ದು ಬದುಕ ತಬ್ಬಿ ನಿಲ್ಲುತ್ತೇನೆ... ಒಮ್ಮೆ ಮಾತಾಗು – ಇಬ್ಬರೂ ಸೇರಿ ನೋವನೇ ಹರಿದು ತಿಂದು ಬದುಕ ಕಟ್ಟಿಕೊಳ್ಳೋಣ... ಸಾವಿಗೂ ನಗುವ ಕಲಿಸೋಣ...


ಮುದ್ದು ಗೆಳೆಯಾ - 
ಅದೇ ಮುಚ್ಚಟೆಯ ಭಾವದಲಿ ಬರಬಾರದೇ ಇನ್ನೊಮ್ಮೆ ಈ ಬೀದಿಯೊಳಗೆ – ನಿನ್ನೊಲವ ಮೆರವಣಿಗೆ...
ನೀ ಬಂದರೂ, ಬರದಿದ್ದರೂ ನಿನ್ನ ಹೆಸರಿನದೇ ನಿರಂತರ ಮರ್ಮರ - ಇನ್ನೀಗ ಎನ್ನೆದೆಯ ಒಳಮನೆಯೊಳಗೆ...


***ಚಿತ್ರಗಳು: ನನ್ನದೇ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕವುಗಳು... 

Saturday, August 2, 2014

ಗೊಂಚಲು - ನೂರಿಪ್ಪತ್ತೊಂಬತ್ತು.....

ಭಯ.....
(ಇವೆಲ್ಲ ಕೇವಲ ನನ್ನ ಭಾವಗಳಷ್ಟೇ... ನಿಮಗುಪಯೋಗವಾಗುವಂತೆನಿಸಿದರೆ ಎತ್ತಿಕೊಳ್ಳಿ...)

ನಂಗೆ ನೀರೆಂದರೆ ಬಹಳವೇ ಭಯ...
ಈಜು ಕಲಿಯಲಾಗದೇ ಹೋದ, ಮುಳುಗಿ ಉಸಿರುಗಟ್ಟುವ ಭಯ...
ಅದಕೇ ಮತ್ತೆ ಮತ್ತೆ ಅಲೆಗಳೊಂದಿಗೆ ಸರಸಕ್ಕೆಂದು ಶರಧಿಯ ಮಡಿಲಿಗೆ ಹೋಗುತ್ತೇನೆ...

ನಂಗೆ ಗಾಳಿಯೆಂದರೆ ಒಂದಷ್ಟು ಭಯ...
ಅದರ ಓಘಕ್ಕೆ ಸಿಕ್ಕಿ ಅರಿವಿಲ್ಲದೂರಿಗೆ ತೂರಿ ಹೋಗುವ ಭಯ...
ಅದಕೇ ಗಿರಿಗಳ ನೆತ್ತಿಯನರಸಿ ಹೋಗಿ ತೋಳ್ದೆರೆದು ನಿಲ್ಲುತ್ತೇನೆ ಪವನಚುಂಬನಕಭಿಮುಖವಾಗಿ...

ನಂಗೆ ಬೆಂಕಿಯೆಂದರೆ ತುಂಬಾನೇ ಭಯ...
ಅದರ ಉರಿಯಲ್ಲಿ ಬದುಕೇ ಬೆಂದು ಹೋಗುವ ಭಯ...
ಅದಕೇ ನೆತ್ತಿಯ ಕಾಯಿಸುತ್ತಾ ಉರಿಬಿಸಿಲ ಬೀದಿಗಳಲಿ ಅಂಡಲೆಯುತ್ತಿರುತ್ತೇನೆ, ಅಂತೆಯೇ ಎದೆಯೊಳಗೂ ಒಂದಷ್ಟು ದ್ವಂದ್ವಗಳ ಬೆಂಕಿಯನಿಟ್ಟುಕೊಂಡು ಕೂತಿದ್ದೇನೆ...

ಆಗೀಗ ಮಾತೆಂದರೆ ವಿಪರೀತ ಭಯ...
ಎಲ್ಲ ಹಲುಬಿ ಬೆತ್ತಲಾಗುವ, ಮೌನದ ವಿರೋಧ ಕಟ್ಟಿಕೊಳ್ಳುವ ಭಯ...
ಅದಕೇ ಯಾರೋ ಅಪರಿಚಿತ ದಾರಿ ಬದಿಯಲ್ಲಿ ಹಾಯ್ ಅಂದರೂ ನಾಲಗೆ ತುರಿತದ ರೋಗ ಇರುವವನಂತೆ ವಾಚಾಳಿಯಾಗುತ್ತೇನೆ...

ನಂಗೀಗ ಸ್ನೇಹವೆಂದರೂ ಭಯವೇ...
ಸ್ನೇಹಿಗಳ ಭಾವಗಳಲ್ಲಿ ಏಕೀಭವಿಸಲಾಗದ, ಭಿನ್ನಾಭಿಪ್ರಾಯಗಳನೆಲ್ಲ ನಿಷ್ಠುರವಿಲ್ಲದೆ ಹಿತವಾಗುವಂತೆ ಹೇಳಿ ಅಥವಾ ನಿಷ್ಠುರವಾಗುವ ಹೊತ್ತಲ್ಲಿ ಮೌನವಹಿಸಿ ಸ್ನೇಹವ ದೀರ್ಘಕಾಲ ಸಲಹಿಕೊಳ್ಳಲಾಗದ ಭಯ...
ಅದಕೇ ಹೊಸ ಹೊಸ ಸ್ನೇಹಗಳಿಗೆ ಕೈಚಾಚಿ ಗೆಳೆತನದ ಶ್ರೇಷ್ಠತೆಯ ಸವಿಯಲು, ಮಧುರ ಸ್ನೇಹಗಳ ಮಡಿಲ ಕೈಗೂಸಾಗಲು ಹೆಣಗುತ್ತಿರುತ್ತೇನೆ...

ನಂಗೀಗ ಪ್ರೇಮವೆಂದರೆ ಭಯವೋ ಭಯ...
ನಿಭಾಯಿಸುವ ಅರ್ಹತೆಯಿಲ್ಲದ, ಆ ತೀರದವರೆಗೂ ಭದ್ರತೆಯ ನೀಡಿ ಕೈಹಿಡಿದು ನಡೆಸಲಾಗದ ಅಸಹಾಯಕತೆಯ ಭಯ...
ಅದಕೇ ಎದೆಗುಡಿಯಲಿ “ಕಪ್ಪು ಹುಡುಗಿಯ” ಕಲ್ಪನಾ ಮೂರ್ತಿಯನಿಟ್ಟುಕೊಂಡು ಆರಾಧಿಸುತಾ ನಗುತಿರುತ್ತೇನೆ...

ಈಗೀಗ ಕಾಮವೆಂದರೆ ತೀವ್ರ ಭಯ...
ಗೆಲ್ಲಲಾಗದ, ಸೃಷ್ಟಿಸಲಾಗದ ನಿರ್ವೀರ್ಯತೆಯ ಭಯ...
ಅದಕೇ ಕಂಡರಿಯದ ಹೆಣ್ಣುಗಳ ಎದೆಗೊಂಚಲ ಕಣಿವೆಯ ಕತ್ತಲಲ್ಲಿ ಕೂಡ ಮುಖ ಹುದುಗಿಸಿ ಉಸಿರುಗಟ್ಟುವ ಭಾವದಲ್ಲಿ ಇರುಳೆಲ್ಲ ಬೆವರುತ್ತಿರುತ್ತೇನೆ...

ನಂಗೀಗ್ಯಾಕೋ ಬದುಕೆಂದರೇ ದೊಡ್ಡ ಭಯ...
ಘನತೆಯಿಂದ ಬದುಕಲಾಗದ, ಹೂವ ನಗೆಯ ಸದ್ದನಾಲಿಸುವ ತನ್ಮಯತೆಯಿಂದ ಒಂದರೆಘಳಿಗೆಯೂ ಮನಸಾರೆ ಜೀವಿಸಲಾಗದ ಭಯ...
ಅದಕೇ ಹುಚ್ಚಾಗಿ ಪರಿತಪಿಸಿ ಪ್ರೇಮಿಸಿದವಳೊಡನೆಯ ಮೊದಲ ಮಿಲನೋತ್ಸವದುತ್ತುಂಗದ ಸುಸ್ತಲ್ಲಿ ಕಣ್ಮುಚ್ಚಿ ಅವಳ ಹಣೆಯ ಚುಂಬಿಸಿ ಮತ್ತೆ ತಬ್ಬಿ ಮಲಗಿದಂತೆ ಬದುಕ ತಬ್ಬಿದ್ದೇನೆ...

ನಂಗೋ ಸಾವೆಂದರೆ ಇನ್ನಿಲ್ಲದ ಭಯ...
ಈಗಿದ್ದು ಇನ್ನಿಲ್ಲದಂತಾಗುವ, ನೆರಳೇ ಉರುಳಾಗುವ, ಅದರ ವಿರೋಧಿಸಿ ಒಂದು ಮಾತಾಡಲೂ ಆಗದ, ಶಾಶ್ವತ ಮೌನದ ಭಯ...
ಅದಕೇ ಅವಳ ಹೊಕ್ಕುಳಿನಾಳವ ಅಳೆಯುತ್ತಾ ಒಳಗೊಳಗೇ ನಗುತ್ತಾ ಮೈಮರೆತು ತಬ್ಬಿ ಮಲಗಿದಂತೆ ಸಾವನ್ನು ಎದೆಯ ಬಿತ್ತಿಯಲ್ಲಿ ಬಚ್ಚಿಟ್ಟುಕೊಂಡು ಬದುಕಿದ್ದೇನೆ...

ಮನಸೆಂಬುದೊಂದು ಭಯಗಳ ಮೂಟೆ... ಬದುಕನ್ನ ಅದರ ಮರ್ಜಿಗೇ ಬಿಟ್ಟು ಬಿಟ್ಟರೆ ಅದು ಮತ್ತಷ್ಟು ಹೊಸ ಭಯಗಳನನ್ನೇ ಸೃಜಿಸುತ್ತಾ ಬದುಕನ್ನೇ ಬಡಿದು ಮೂಲೆಗೆ ಕೂರಿಸಿಬಿಡುತ್ತೆ... ಅದಾಗಬಾರದೆಂದರೆ ಮನಸಿನೊಂದಿಗೆ ಪ್ರಜ್ಞೆಯ ಪ್ರಿಯ ಸಾಂಗತ್ಯವನೇರ್ಪಡಿಸಬೇಕಷ್ಟೇ... ಮನದ ಭಾವಗಳಿಗೆ ಪ್ರಜ್ಞೆಯ ಮೇಲುಸ್ತುವಾರಿ ಒದಗಿಸಿ ಯಾವುದು ಭಯ ಮೂಡಿಸುತ್ತೋ ಅದರೊಂದಿಗೇ ಆಡುತ್ತಿರು – ಹೋಗಬೇಡ ಅಂದಲ್ಲಿ ಮಗು ಮುದ್ದಾಂ ಹೋಗುವಂತೆ... ಭಯವೇ ನಿನ್ನಿಂದ ಓಡಿಹೋಗುತ್ತೆ... ಓಡಿ ಗೆಲ್ಲುವ ಬದಲು ಕಾದಾಡಿ ಮತ್ತೆ ಸೋಲುವುದು ಮೇಲಲ್ಲವಾ... ಸೋಲಿಗೆ, ನೋವಿಗೆ, ಭಯಗಳಿಗೆ ಬೆನ್ನಾಗಿ ಓಡುವ ಬದಲು ಅವುಗಳ ಜತೆ ಜತೆಗೇ ಆಡುತ್ತ, ಕುಣಿಯುತ್ತ, ಮಲಗುತ್ತ, ಏಳುತ್ತ, ಬೀಳುತ್ತ, ಅಳುತ್ತ, ನಗುನಗುತ್ತ ನಾಳೆಗಳೆಡೆಗೆ ಹೆಜ್ಜೆ ಎತ್ತಿಡುವುದು ಒಳಿತಲ್ಲವಾ... 

ನೋವುಗಳ ಜತೆಗೇ ಸಾಗುವುದೆಂದರೆ ಅವುಗಳಿಗೆ ಶರಣಾಗುವುದೆಂದಲ್ಲ ಅರ್ಥ... ನೋವುಗಳನು ಅವುಗಳಿರುವಂತೆಯೇ ವಾಸ್ತವಿಕ ನೆಲೆಯಲ್ಲಿ ಒಪ್ಪಿಕೊಳ್ಳುವುದು  – ಒಪ್ಪಿಕೊಳ್ಳುತ್ತಲೇ ನಮ್ಮದೇ ಆದ ನೆಲೆಯಲ್ಲಿ ಅವುಗಳ ಮೀರುವುದು - ನೋವ ಸುಳಿಯ ಸುತ್ತ ಸುತ್ತುತ್ತಲೇ ನಗೆಯ ಮೀನಿನೊಂದಿಗೆ ಚಿನ್ನಾಟವಾಡುವುದು – ಆ ಮೂಲಕ ಬದುಕ ಪೂರ್ತಿ ಜತೆ ಬರುವ, ಅಪರಿಹಾರ್ಯವಾದ ನೋವು ಕೂಡ ನಮ್ಮ ಮೂಲ ನಗೆಯ ಚಿಲುಮೆಯನ್ನು ಬತ್ತಿಸದಂತೆ ನಮ್ಮನ್ನು ನಾವು ಕಾಯ್ದುಕೊಳ್ಳುವುದು... 

ಹೌದು ಬದುಕೇ ಬರೀ ನೋವುಗಳ ಸಂತೆ ಅಂತನ್ನಿಸುವ ಹೊತ್ತಿಗೆ ಎಲ್ಲ ಸಾಕು, ಯಾರೂ - ಯಾವುದೂ ಬೇಡ ಅನ್ನಿಸುವುದು ಸತ್ಯ... ಆಗೆಲ್ಲ ಅಳಬೇಕೆನಿಸಿದರೆ ಅತ್ತುಬಿಡಿ ಒಮ್ಮೆ... ಅಳುವ ಹಿಡಿದಿಟ್ಟು ಒಳಗೇ ಒಡೆದು ಹೋಗುವ ಬದಲು ಬಿಕ್ಕಿ ಬಿಕ್ಕಿ ಅತ್ತು ಹರಿವ ಕಣ್ಣೀರಲ್ಲಿ ಕಾಗದದ ದೋಣಿ ಬಿಟ್ಟು ಮಗುವಂತೆ ನಕ್ಕುಬಿಡುವುದು ಲೇಸೆನಿಸುತ್ತೆ... ನಮ್ಮಳುವ ನೋಡಿ ನಗುವವರೆದುರಿಗಲ್ಲದೇ ಅಳುವ ನಗುವಾಗಿಸಬಲ್ಲ ಅಮ್ಮನಂಥವರ ಮಡಿಲನ್ನ ಅಥವಾ ನಿಮಗೆ ನೀವೂ ಕಾಣದಂತ ನಿಚ್ಚಳ ಇರುಳನ್ನ ಆಯ್ಕೆ ಮಾಡಿಕೊಳ್ಳಬೇಕಷ್ಟೇ ಅಳುವುದಕ್ಕೆ... ಮೌನವಾಗಿ ಎಲ್ಲವನೂ ಒಳಗೇ ಇಟ್ಟುಕೊಂಡು ನಗುವುದು ಹಿತವೇ ಆ ಮೌನದಲಿ ಮಾಧುರ್ಯವಿದ್ದಾಗ... ಆದರೆ ನೋವ ಹಿಡಿದಿಟ್ಟ ಮೌನ ಮತ್ತೆ ನೋವನೇ ಹಿಗ್ಗಿಸುತ್ತೆ ಅಂತನ್ನಿಸುತ್ತೆ ನಂಗೆ... ಪ್ರಶಾಂತವಾಗಿ ಕೂತು ಮಾತಾಡಿ - ಸೋಲುಗಳೊಂದಿಗೆ, ನೋವುಗಳೊಂದಿಗೆ, ಭಯಗಳೊಂದಿಗೆ... ಅರ್ಧ ನೋವಿಗೆ ಅಲ್ಲೇ ಮೋಕ್ಷ...

ಸೋತು ಸುಸ್ತಾದ ಕನಸುಗಳೆಲ್ಲವನ್ನೂ ಎದುರಿಗೆ ಕೂರಿಸಿಕೊಂಡು ಗೆಲುವಿನ ಪರ್ಯಾಯ ಮಾರ್ಗಗಳ ಪಾಠ ಮಾಡಿಕೊಳ್ಳೋಣ ನಮ್ಮೊಳಗೆ ನಾವು... 
ಓಡುವ ಓಘದಲ್ಲಿ ಗೆದ್ದವನಿಗೂ ಸೋತವನಿಗೂ ತುಂಬ ದೂರದ ವ್ಯತ್ಯಾಸವೇನಿಲ್ಲ - ಗೆರೆಯ ಆಚೆ ಅವನು, ಗೆರೆಯ ಈಚೆ ಇವನು ಅಷ್ಟೇ...
ಇನ್ನೊಂದೇ ಒಂದು ಹೆಜ್ಜೆ ಮುಂಚಿತವಾಗಿ ಎತ್ತಿಟ್ಟಿದ್ದಿದ್ದರೆ ಗೆಲುವು ನನ್ನದೂ ಆಗಬಹುದಿತ್ತಲ್ಲವಾ... ಮತ್ತೆ ಪ್ರಯತ್ನಿಸೋಣ - ಹೊಸ ದಾರಿಯಲ್ಲಿ - ಹೊಸ ಶಕ್ತಿಯೊಂದಿಗೆ... ಓಡುವುದರಲ್ಲಿ ಸೋತವನು ನಡೆಯುವುದರಲ್ಲೂ ಸೋಲಬೇಕೆಂದಿಲ್ಲವಲ್ಲ... ಬದುಕು ನಮ್ಮನ್ನು ಪ್ರೀತಿಸದೇ ಹೋದರೇನಂತೆ ಬದುಕನ್ನು ನಾವು ಇನ್ನಿಲ್ಲದಂತೆ ಪ್ರೀತಿಸಬಹುದಲ್ಲವಾ... ಮನಸಿಗೆ ಪ್ರಜ್ಞೆ ತುಂಬಬಹುದಾದ ಶಕ್ತಿ ಅದೇ ಆ ಭರವಸೆ... 

ಪ್ರಜ್ಞೆಯ ತೋಳಿಂದ ಸೋಲನ್ನು ಅದೇ ಉಸಿರುಗಟ್ಟಿ ಬೆವರಾಗುವಂತೆ ತಬ್ಬಿ ಮಲಗಲಾರದವನು ಗೆಲುವನ್ನು ಸೃಷ್ಟಿಸಲಾರನೆನಿಸುತ್ತದೆ... 

ನೋವಿನ ಮೈದಡವಿ ನಗುವ ಮೂಡಿಸಲಾದರೆ ಆಗ ಕಾಲನ ಕುಣಿಕೆಗೂ ನಗುತ್ತಲೇ ಕತ್ತನೊಡ್ಡಬಹುದೇನೋ... ನಾವೆಲ್ಲ ಸಾಮಾನ್ಯರು ನಿಜ... ಆದರೆ ಸಾವಿನಂಥ ಸಾವೂ ನಾಚುವಂತೆ ಸಾವಲ್ಲೂ ನಗುತಿರಬಲ್ಲ ಆತ್ಮಶಕ್ತಿಯ ಸಾಧಿಸುವುದೇನು ಸಣ್ಣ ಸಾಧನೆಯಾ....???

ಈಗ ಗೊತ್ತಾಯ್ತಲ್ಲಾ ನಾನ್ಯಾಕೆ ಭಯವಿರುವಲ್ಲೇ ಮತ್ತೆ ಮತ್ತೆ ಹೋಗುತ್ತೇನಂತ....:)

Friday, August 1, 2014

ಗೊಂಚಲು - ನೂರು + ಇಪ್ಪತ್ತು + ಎಂಟು.....

ಚಿತೆಯೂರಿನ ದೂರ ನೆನಪಿಸುವ ದಿನಕ್ಕೊಂದಿಷ್ಟು.....
(ಎಂಥ ಮಳೆಯಲಿ ನೆನೆದರೂ ಆರದ ಮನದ ಬೆಂಕಿ...)

ಆದರೂ - ಜನ್ಮ ದಿನವೇನೂ ಮೊದಲಿನಂತೆ ತೀವ್ರತರ ಖುಷಿಯ ಕೊಡುತ್ತಿಲ್ಲ ಈಗೀಗ...
ಕಳೆದದ್ದೇ ಚಂದವಿತ್ತು ಮತ್ತು ನಾಳೆಗಳೆಲ್ಲವೂ ನನ್ನನ್ನ ಈ ಬದುಕಿನಿಂದ ಇಷ್ಟಿಷ್ಟೇ ದೂರ ಒಯ್ಯುವ ಸಾಧನಗಳು ಅನ್ನಿಸುವಾಗ - ಖಾಲಿಯೂ ಆಗದೇ, ಹೊಸ ನಗುವಾಗಿಯೂ ಹೊಮ್ಮದೇ ಅದದೇ ಕಂಗಾಲುಗಳಲ್ಲಿ ಕೊಳೆಯುತ್ತಿದೆ ಆಯಸ್ಸು ಅನ್ನಿಸುವ ಹೊತ್ತಿಗೆ ಜನ್ಮದಿನಗಳ ನೆನಹು ಖುಷಿತರಲಾರದಲ್ಲವಾ...
ದಿನಾಂಕವ ಮರೆತು ಬಿಡಬಹುದು – ವರ್ಷವೊಂದು ಹೆಚ್ಚಾದದ್ದು ಗೊತ್ತಾಗದಿರಲಿ ಅಂತ...
ಆದರೆ ಬೆಳೆಯುತಿರೋ ಹೊಟ್ಟೆ, ಕಡಿಮೆಯಾದ ತಲೆಗೂದಲು, ಇದ್ದವುಗಳಲ್ಲಿ ಅಲ್ಲಲ್ಲಿ ಇಣುಕೋ ಬೆಳ್ಳಿಗೂದಲು, ಇಷ್ಟಿಷ್ಟೇ ಜೀವ ಕಳಕೊಳ್ತಾ ಇರೋ ಚರ್ಮ, ಕಳೆದು ಹೋಯ್ತಾ ಅನ್ನಿಸಿ ಭಯ ಮೂಡಿಸೋ ಕಿಬ್ಬೊಟ್ಟೆಯಾಳದ ಉನ್ಮಾದ ಎಲ್ಲ ಸೇರಿ ಬೇಡ ಬೇಡ ಅಂದರೂ ವಯಸು ಏರುತಿರುವದನ್ನ ನೆನಪಿಸಿ ಕಂಗಾಲಾಗಿಸುತ್ತವೆ – ಮತ್ತೆ ಶುರು ಸಂದ ವರ್ಷಗಳ ಲೆಕ್ಕಾಚಾರ ಮನದಲ್ಲೇ...
ನಿನ್ನೆಯ ನೆನಪುಗಳ ಮತ್ತು ಇಂದಿನ ವಾಸ್ತವತೆಯ ಬೆಂಕಿಯಲಿ ನಾಳೆಯ ಕನಸುಗಳು ಬೇಯುತಿವೆ...
ನಿನ್ನೆಗಳ ದಾರಿಯಲೂ ಕಲ್ಲು ಮುಳ್ಳುಗಳಿದ್ದವು...
ಆದರೆ ನಡೆವ ಕಾಲುಗಳಿಗೆ ಕನಸುಗಳ ಚಪ್ಪಲಿಯ ರಕ್ಷಣೆಯಿತ್ತು...
ಇಂದೀಗ ಹರಿದ ಚಪ್ಪಲಿ ಕಾಲನು ಅಣಕಿಸುತಿದೆ...
ನಾನಿನ್ನೂ ಸಾಗಬೇಕಿರುವ ಆ ದುರ್ಗದ ದಾರಿ ಬಲು ದುರ್ಗಮ...
ಚಪ್ಪಲಿಯಿಲ್ಲದ ಅನಾಥ ಕಾಲಲ್ಲಿ ನಡೆವುದೇನೂ ಸುಲಭವಲ್ಲ...
ಹಾಗಂತ ಕಾಲನ ಅನುಮತಿ ಇಲ್ಲದೇ ನಡಿಗೆ ನಿಲ್ಲಿಸುವಂತಿಲ್ಲ...
ಕನಸುಗಳಿಗೆ ಕಾವು ನೀಡಿ ಉಸಿರ ತುಂಬಲು ನಿಚ್ಚಳ ಹಗಲ ಆಸರೆ ಇಲ್ಲದವನು ಇರುಳಿಗೆ ಕಣ್ಣು ಹೊಂದಿಸಿಕೊಳ್ಳಬೇಕಷ್ಟೇ...
ಹೊಯ್ದಾಡುವ ಆತ್ಮದೀಪ ಆರುವಷ್ಟರವರೆಗೆ ಅದು ತೋರಿದಷ್ಟು ದೂರ ತೆವಳುತಿರುವುದು...
ಅದಷ್ಟು ಬೇಗ ಆರಲಾರದು – ಅದಕೆ ನಿಮ್ಮಗಳ ವಿನಾಕಾರಣದ ಪ್ರೀತಿಯ ಹರಕೆ, ಹಾರೈಕೆಗಳ ಕೈಬೊಗಸೆಯ ಮರೆಯ ಆಸರೆಯಿದೆ...
ಅದಕೇ –
ನೆನಪ ಜೋಳಿಗೆಯ ಬಿಚ್ಚಿಟ್ಟುಕೊಂಡು ಅದರೊಳಗಣ ಖುಷಿಯ ಕ್ಷಣಗಳನು ಹುಡುಕಿ ಹುಡುಕಿ ಮೆಲ್ಲುತ್ತಾ ಈ ಕ್ಷಣ ನಗಬೇಕಿದೆ – ಅದೇ ಖುಷಿಗಳ ಕಣ್ಣಲ್ಲೇ ನಾಳೆಗಳ ಕನಸನೂ ಹೊಸೆಯಬೇಕಿದೆ; ನಿನ್ನೆ ಮರಳಿ ಬಂದು ನಾಳೆಯಾಗದು ಎಂಬ ಸ್ಪಷ್ಟ ಅರಿವಿದ್ದೂ...

ಮತ್ತೀಗ ನನಗೆ ನಾನೇ ಹಾರೈಸಿಕೊಳ್ಳುತ್ತೇನೆ:
“ನನಗಾಗಿ ನನ್ನ ಕಣ್ಣು ತುಳುಕುವ ಕ್ಷಣಕೂ ಒಂದು ಕ್ಷಣ ಮುಂಚೆಯೇ ಉಸಿರ ದೀಪ ಆರಿ ಹೋಗಲಿ - ನಗುವೇ ಬದುಕಾಗಲಿ ಮತ್ತು ಮೃತ್ಯುವಿಗೂ ನಗುವೇ ನನ್ನ ಉತ್ತರವಾಗಲಿ – ಜನುಮ ದಿನದ ಶುಭಾಶಯಗಳು..........” 

Thursday, July 24, 2014

ಗೊಂಚಲು - ನೂರಾ ಇಪ್ಪತ್ತೇಳು.....

ಸುಮ್ಮನೇ ಒಂದಿಷ್ಟು.....

ನೋವುಗಳೇ ಜಾಸ್ತಿ ನೆನಪಲ್ಲಿ ಉಳಿಯುತ್ತವೆ ಮತ್ತು ನೋವುಗಳು ಕಳೆದ ಮೇಲೆ ನಾಳೆಗಳಲ್ಲಿ ಅವು ನಿಟ್ಟುಸಿರ ನಗುವಾಗಿ ಬದಲಾಗುತ್ತವೆ...
ಅಲ್ಲದೇ ಆತ್ಮೀಕವಾದ ಪ್ರೀತಿ ಜತೆಯಿದ್ದಾಗ ನೋವು ಕೂಡ ಹಿತವೇ ಅನ್ನಿಸುತ್ತಂತೆ...
ಯಾಕೋ ಎದೆಯ ಗೂಡಲ್ಲಿ ಉಸಿರು ಖಾಲಿಯಾಗುವ ಮುನ್ನ ಎಲ್ಲರನ್ನೂ ಒಂದಿಷ್ಟು ನೋಯಿಸಿ ಶಾಶ್ವತ ನೆನಪಾಗಿ ಹೋಗಲಾ ಎಂಬ ಕೆಟ್ಟ ಬಯಕೆ ಮೂಡುತ್ತೆ ಆಗೀಗ...
(ಕ್ಷಮಿಸಿ ಈಗೇನು ಕಡಿಮೆ ನೋಯಿಸಿದ್ದೀಯಾ ಅಂತ ಕೇಳುವವರಿಗೆ ಉತ್ತರ ಇಲ್ಲ ನನ್ನಲ್ಲಿ...)


ಕಪ್ಪು ಬಿಳುಪಿನ ಬದುಕಿಗೆ ಬಣ್ಣದ ಕನಸುಗಳ ಮದರಂಗಿ ಮೆರಗಿನ ಕೈಯ ಆಸರೆ ನೀಡಿ - ನನ್ನಲ್ಲಿ ಸಾವಿನಂಥ ಸಾವಿನೆದುರೂ ನಗೆಯ ತಂಬಿಟ್ಟಿನ ಬುತ್ತಿ ಬಿಚ್ಚಿ ಕೂರಬಲ್ಲ ಶಕ್ತಿ ತುಂಬಿ - ತಾನೇನೂ ಮಾಡಿಲ್ಲ, ತನಗೇನೂ ಗೊತ್ತಿಲ್ಲ, ನಿನ್ನ ಗೆಲುವೆಲ್ಲ ಕೇವಲ ನಿನ್ನ ಬದುಕ ಪ್ರೀತಿಯ ಫಲ ಅಂತಂದು ಅಲ್ಲೆಲ್ಲೋ ಮೂಲೆಯಲಿ, ಮೌನ ಮುಸ್ಸಂಜೆಯಲಿ ಖುಷಿಯ ಕಣ್ಣ ಹನಿ ಜಾರಿಸುವ ನನ್ನಾತ್ಮ ದೀಪಕ್ಕೆ ನಾನಿಟ್ಟ ಪ್ರೀತಿ ಹೆಸರು "ನನ್ನ ಕಪ್ಪು ಹುಡುಗಿ..."


ಅಲ್ಯಾವುದೋ ದೂರದ ಊರಿನ ಕಾಡ ದಾರೀಲಿ ಓಡಾಡುತಿರುವ ಗೆಳೆಯ ಸಂದೇಶ ಕಳಿಸ್ತಾನೆ: ನವಿಲೊಂದು ಹಾರುವುದ ಕಂಡು ಮುದಗೊಂಡೆ ಅಂತಂದು...
ನಿದ್ದೆ ಮರುಳಲ್ಲಿ ನಗುತಿದ್ದ ಅವಳ ನೆನಪ ಖುಷಿಯ ಕಚಗುಳಿಯಿಂದ ನಾನಿಲ್ಲಿ ಮುಗುಳ್ನಗುತ್ತೇನೆ ನನ್ನರಿವನ್ನು ಮೀರಿ...
ಈ ಬದುಕೆಂಬ ಬದುಕೇ ಸುಸ್ತಾಗಿ ದಕ್ಷಿಣಕೆ ತಲೆಯಿಟ್ಟು ಅಡ್ಡಡ್ಡ ಮಲಗೋಕೆ ಹವಣಿಸುತಿರೋ ಹೊತ್ತಲ್ಲಿ ಗೆಳೆಯನದೊಂದು ಸಂದೇಶ, ಗೆಳತಿಯ ಗುಳಿ ಕೆನ್ನೆ ನೆನಪು ಜೊತೆಯಾದ ಆ ಕ್ಷಣ ಮನದ ಅದ್ಯಾವುದೋ ಮೂಲೆಯಿಂದ ಪುಟ್ಟ ಕನಸೊಂದು ಸೂರ್ಯ ಮುಖಿಯಾಗಿ ಗರಿಬಿಚ್ಚಲು ಹೆಣಗಾಡುತ್ತೆ...!!
ಅಚ್ಚರಿಯ ಆ ಕನಸಿಗೆ ನಾ "ನನ್ನ ಕಪ್ಪು ಹುಡುಗಿ" ಎಂದು ಹೆಸರಿಟ್ಟು ನಗುತ್ತೇನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, July 16, 2014

ಗೊಂಚಲು - ನೂರಿಪ್ಪತ್ತಾರು.....

ಹೀಗೆಲ್ಲ ಅನ್ನಿಸಿದರೆ ತಪ್ಪಾ.....

ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗುತ್ತೆ ಅಂತಾರೆ...
ಮಧುರ ಬಂಧಗಳ ನಡುವೆ ಈ ಮಾತು ಹೆಚ್ಚಾಗಿ ನೋವನೇ ಧ್ವನಿಸುತ್ತೆ...
ತುಂಬ ಸಲ ಗೆಳೆತನಗಳ ನಡುವೆ ಈ ಮಾತು ಬಂದು ಹೋಗುತ್ತಿರುತ್ತೆ - ಒಮ್ಮೊಮ್ಮೆ ಸುಮ್ಮನೇ ತಮಾಷೆಯಾಗಿ, ಇನ್ನೊಮ್ಮೆ ಮನದ ವೇದನೆಯ ಕುರುಹಾಗಿ...
ನನ್ನೆದುರು ಈ ಮಾತು ಬಂದಾಗ ನನ್ನ ನಾನು ಹೀಗೆ ಸಮರ್ಥಿಸಿಕೊಳ್ಳ ಹೊರಡುತ್ತೇನೆ:

ನೀರ ಪ್ರತಿ ಹನಿಯ ಪರಮೋಚ್ಛ ಗುರಿ ಸಾಗರ ಸಂಗಮ...

ಹನಿ ನಿಂತಲ್ಲೇ ಸಾಗರ ತಾನು ಬರಲಾರದಲ್ಲ...
ಹೊಸ ನೀರ ಹನಿ ಬಂದು ಈ ನೀರ ಹನಿಯ ಮುಂದೆ ತಳ್ಳಿದಾಗ ಈ ಹನಿ ತಾನೇ ತಾನಾಗಿ ಒಂದು ಹೆಜ್ಜೆ ಸಾಗರದೆಡೆಗೆ ಸಾಗುವುದು ದಿಟ ತಾನೆ...

ನೀರ ಪ್ರತಿ ಬಿಂದುವಿನ ನೈಜ ಸಾರ್ಥಕ್ಯ ಹಸಿರ ವಿಹಂಗಮಕೆ ಉಸಿರಾಗಿ ನಕ್ಕದ್ದು...
ಬಿಂದು ತಾನು ಭುವಿಯಾಳದ ನಿಧಿಯಾಗಿ ಶೇಖರವಾಗದೆ ಹೋದಲ್ಲಿ ಹಸಿರ ಬೇರು ಆಳಕಿಳಿದು ಬಲವಂತವಾಗದಲ್ಲ...

ಹೊಸ ಹನಿಯೊಂದಿಗೆ ಬೆರೆತು ಹೊಸ ಹುರುಪು ಹೊಂದಿ ಹರಿವನು ಮೈಗೂಡಿಸಿಕೊಳ್ಳಲಾರೆನೆಂಬ ಅಥವಾ ಭುವಿಯೆದೆಯಲಿ ಇಂಗಿ ಹೊಸ ಝರಿಯಾಗಿ ಚಿಮ್ಮಲಾರೆನೆಂಬ ಹನಿ ಸಾಗರದ ಅಗಾಧತೆಯ ಕಾಣುವ ಇಲ್ಲವೇ ಭುವಿಯೊಡಲ ಒಲವ ಹೀರಿ ಹಸಿರ ಉಸಿರಲ್ಲಿ ನಗುವ ಸೊಬಗಿಂದ ವಂಚಿತವಾಗದಾ...

ಹೊಸದರೊಂದಿಗೆ ಬೆರೆತು ಸ್ಫುಟಗೊಂಡು ಹೊಸದಕೂ ಆಸರೆಯಾಗಿ ಹರಿದಾಗಲೇ ಅಲ್ಲವಾ ಹಳೆಯದರ ಹಿರಿತನಕೆ ಹೊಸ ಬೆಲೆ ಮತ್ತು ಅಸ್ತಿತ್ವಕ್ಕೆ ಹೊಸ ಚೈತನ್ಯ ದಕ್ಕುವುದು...

ಇಷ್ಟಕ್ಕೂ ಈ ಹನಿ ಕೂಡ ಹಳೆಯದಾಗುವ ಮುನ್ನ ಹೊಸದಾಗಿಯೇ ಇತ್ತಲ್ಲವಾ...

ಇನ್ಯಾವುದೋ ಹನಿಯ ಮುಂದೆ ತಳ್ಳಿಯೇ ಅಲ್ಲವಾ ಇದಿಲ್ಲಿ ಅಸ್ತಿತ್ವ ಸ್ಥಾಪಿಸಿದ್ದು...

ಹೊಸ ನೀರು ನನ್ನ ದಾರೀಲಿ ಮಾತ್ರವೇ ಹರಿಯುವುದಿಲ್ಲ ಅಲ್ಲವಾ – ಎದುರಿನ ದಾರೀಲೂ ಭರದಿಂದಲೇ ಹರಿದೀತು ತಾನೆ...

ಇಂಗಿ ಒಳಹರಿವಾಗಿ ಅನುಗಾಲವೂ ಉಳಿವ ಅಥವಾ ಹರಿದು ಶರಧಿ ಸೇರಿ ಮೆರೆವ ಜೀವನ ಪ್ರೀತಿಯ ಹನಿ ತಾನು ಹೊಸದರೊಂದಿಗೆ ಎಂದಿಗೂ ಜಿದ್ದಿಗೆ ಬೀಳದೇನೋ - ಹೊಸದನ್ನು ತನ್ನ ಸ್ಥಾನ ಕದ್ದ ಕಳ್ಳನೆಂಬಂತೆ ಕಾಣದೇನೋ – ಜಿದ್ದಿಗೆ ಬದಲಾಗಿ ಹೊಸದರೊಂದಿಗೆ ಪ್ರೀತಿಗೆ ಬಿದ್ದೀತು – ಹೊಸ ಹನಿಯನು ಪ್ರೀತಿಯಿಂದ ತಬ್ಬಿ ತನ್ನ ಕಕ್ಷೆಯ ನಕ್ಷೆಯ ಹಿಗ್ಗಿಸಿಕೊಂಡೀತು...

ಬಂಧವೊಂದು ಸಾಯುವುದಕೆ ಹೊಸ ಬಂಧ ಕಾರಣವಾಗುವುದೆಂಬ ಮಾತು ಪೂರ್ತಿ ಸತ್ಯವೆನಿಸಲ್ಲ ನನಗೆ – ಹೊಸದನ್ನು ಅದಿರುವಂತೆ ಹೀರಿ ತನ್ನಂತಾಗಿಸಿಕೊಂಡು ನಗಬಲ್ಲ ಮಾತೃ ಮನದ ಹಿರಿತನವಿದ್ದಲ್ಲಿ (ನನಗಿದೆಯಾ ಆ ಹಿರಿತನ ಎಂದು ಕೇಳಬೇಡಿ)...

ಒಂಟಿಯಾಗಿಯೇ ಉಳಿದು ಒಂಟಿಯಾಗೇ ಅಳಿವೆನೆಂದು ಪಣ ತೊಟ್ಟು ಎಲ್ಲೂ ಬೆರೆಯದೇ ಬಿಸಿಲಿಗೆ ಮೈಯ್ಯೊಡ್ಡಿದ ಹನಿ ತಾನು ಒಂಟಿಯಾಗಿಯೇ ಆವಿಯಾಗಿ ಅಳಿದರೂ; ಮೋಡವಾಗಿ, ಮಳೆಯಾಗಿ ಮತ್ತೆ ಭುವಿಯೆದೆಯ ಮುತ್ತಾಗಲೇಬೇಕಲ್ಲವಾ...

ಅದರ ಬದಲು ಹೊಸದರೊಡನೆ ಕಲೆತು, ಹೊಸದಾಗಿ ಹೊಳೆದು, ಹೊಸತಕೂ ಮೆರಗು ತುಂಬಿ ಇನ್ನಷ್ಟು ಕಾಲ ನಗುವುದು ಮೇಲಲ್ಲವಾ...

ಅದಕೇ ಯಾರದೇ ಹೊಸ ಬಂಧವನೂ ಮನಸಿಂದ ಶಂಕಿಸಲಾರೆ...
ಅಲ್ಲಿ ಬಂಧಗಳು ಸಾವಿರ ಸಾವಿರವಾದರೂ ನನ್ನ ಸ್ಥಾನ ನನಗಿದ್ದೇ ಇದೆ ಅಂದುಕೊಳ್ತೇನೆ - ಸಾಗರಕೆ ಒಂದು ಹನಿ ಏನೂ ಅಲ್ಲದಿರಬಹುದು ಆದರೆ ಹನಿ ಹನಿ ಸೇರಿಯೇ ಸಾಗರ ಆದದ್ದು - ಹಸಿರು ನಗಲು ಪ್ರತಿ ಬಿಂದುವೂ ಊಟವೇ - ಉಬ್ಬರದ ಒಂದು ಹನಿ, ಹಸಿರಿನೂಟದ ಒಂದು ಬಿಂದು ನಾನೆಂಬ ಖುಷಿಯೇ ಆ ಬಂಧದೊಂದಿಗೆ ನಾ ನಗುತಿರಲು ಪ್ರೇರೇಪಿಸುತ್ತೆ ನನ್ನ...

ನನ್ನೊಡನೆಯ ಬಂಧಗಳು ನನ್ನ ತೊರೆಯಲು ನನ್ನ ಸ್ವಭಾವಜನ್ಯ ತಪ್ಪುಗಳು ಮತ್ತು ನನಗಿಲ್ಲದ ಯೋಗ್ಯತೆ ಕಾರಣವೇ ಹೊರತು ಅಲ್ಲೆಲ್ಲೋ ಹೊಸ ನೀರು ಹರಿದದ್ದಲ್ಲ ಎಂಬುದು ನನ್ನ ನಂಬಿಕೆ ಮತ್ತು ನನ್ನ ಪಾಲಿನ ಸತ್ಯ ಕೂಡ...

ಇವೆಲ್ಲ ಕೇವಲ ನನ್ನ ಪಾಲಿನ ಸತ್ಯಗಳು - ನಿಮ್ಮ ಸತ್ಯಗಳೇನಿವೆಯೋ....

Tuesday, July 8, 2014

ಗೊಂಚಲು - ನೂರು + ಇಪ್ಪತ್ತೈದು.....

ಅರ್ಧ ಬರೆದ ಸಾಲುಗಳು...
ಅರ್ಥ - ಅವರವರ ಭಾವಕ್ಕೆ.....

ಮಳೆ ಹನಿದ ನಂತರದ ಸಾವಿರ ಕವಲುಗಳ ಒದ್ದೆ ಒದ್ದೆ ದಾರಿ - ಇರುಳ ಮೊದಲ ಜಾವದಲ್ಲಿನ ಒಂಟಿ ಒಂಟಿ ಅಲೆದಾಟ – ನೆನಪುಗಳ ಚರಮಗೀತೆ – ಕನಸುಗಳ ಸೋಬಾನೆ ಹಾಡು – ಹುಟ್ಟು ಸಾವಿನ ನಡುವೆ ಬದುಕೆಂಬ ಹೆಳವನ ಕುಂಟು ಮೆರವಣಿಗೆ...
ಆ ಮೆರವಣಿಗೆಯ ನಡುವೆಯೇ ಈಗೊಂದಿಷ್ಟು ಕಾಲದಿಂದ ಸವಿ ಸ್ನೇಹಗಳ ಮಡಿಲ ತಂಪಲ್ಲಿ ನಾ ಎಂದಿನಿಂದಲೋ ಪ್ರೀತಿಯಿಂದ ಸಾಕಿಕೊಂಡು ಬಂದಿದ್ದನ್ನ ನಾನೇ ಮರೆತು ಹೋಗಿದ್ದ, ನಾ ಮರೆಯಬಾರದಾಗಿದ್ದ ನನ್ನ ಒಂಟಿ ಒಂಟಿ ಏಕಾಂತವ ನಾಳೆಗಳಿಗಾಗಿ ಮತ್ತೆ ದಕ್ಕಿಸಿಕೊಂಡೇನಾ...


ಅವಳೆಡೆಗಿನ ನನ್ನ ಒಲವು ನನ್ನ ಬದುಕಿನ ಮೂಲಾಧಾರ ಶಕ್ತಿಯಾಗಿ ನನ್ನೊಳಗೇ ಉಳಿದು ನನ್ನೊಂದಿಗೇ ಸಮಾಧಿ ಸೇರಲಿ...
ಕಾರಣ -
ಪ್ರೇಮವೆಂದರೆ ಬದುಕನ್ನೂ ಹಂಚಿ ತಿನ್ನುವುದಲ್ಲವಾ..?
ಹಳಸಿದ್ದನ್ನ ಹಂಚಿ ತಿನ್ನುವ ಬಾ ಅಂತ ಯಾರನ್ನಾದರೂ ಕೇಳಲಾದೀತಾ..?
ಹಸಿವಿದೆ ಅಂತ ಹೇಸಿಗೆಯ ತಿನ್ನಲಾರೆವಲ್ಲಾ...
ಅಲ್ಲಿಗೆ ಬರಡು ಬದುಕಿಗೆ ಪ್ರೇಮ ನಿಶಿದ್ಧ ಅಲ್ವಾ...
ದೂರವಿರಿ ಮಧುರ ಭಾವಗಳೇ ನನ್ನಿಂದ ದಯವಿಟ್ಟು...
ನಾನು ಸಲಹಲು ಅಶಕ್ತನಿದ್ದೇನೆ ನಿಮ್ಮನ್ನು ನಿಮ್ಮಂತೆ...


ಕೇಳು ಹುಡುಗೀ -
ಅವ ನಕ್ಕುಬಿಟ್ಟ – ಭುವಿಯೆಲ್ಲ ಬೆಳಕಾಯಿತು...
ಅವನೂ ನಿದ್ದೆಗೆ ಜಾರುವನಂತೆ – ಆಗ ಇರುಳೆಂದರು...
ಆಗಸದೆಡೆಗೆ ಕಣ್ಣಿಟ್ಟು ನೋಡು ಒಮ್ಮೆ ಚಂದಿರನೊಳಗಿಂದ ನಗುತಿದ್ದಾನೆ ಅದೇ ಅವನು – ಕುರುಡು ಬದುಕುಗಳಲೂ ಬಣ್ಣ ಬಣ್ಣದ ಕನಸ ತುಂಬುತ್ತಾ...
ನಿದ್ದೆ ಮರುಳಲ್ಲಿರಬೇಕು ನಕ್ಕಿದ್ದು ಅದಕೇ ಚಂದಿರ ಅಷ್ಟು ತಂಪು ತಂಪು...
ಅವರಿಬ್ಬರೂ ಅವಳ ಆತ್ಮ ಸಂಗಾತಿಗಳು...
ಅವರಿಲ್ಲದೇ ಅವಳಲ್ಲಿ ಉಸಿರ ಸಂಚಾರವಿಲ್ಲ...
ಉರಿಯುತ್ತಲೇ ಅವಳ ತಾಕಿ ಅವಳಲ್ಲಿ ಜೀವ ಸಂಚಾರದ ಶಕ್ತಿಯಾದವನು ಅವನು ಹಗಲ ಮಣಿ – ಬೆಳಕ ಗಣಿ...
ಅವನ ಬೆಳಕಿಂದಲೇ ಒಂದಿನಿತು ಕಿರಣಗಳ ಬಸಿದುಕೊಂಡು ಚಂದಗೆ ತಂಪಾಗಿ ನಗುತ ಅವಳಲ್ಲಿನ ಒಲವಿನುಬ್ಬರಕೆ ಸಾಕ್ಷಿಯಾಗುವವನು ಇವನು ಇರುಳ ದೀಪ...
ಇರುಳಾಯಿತೆಂದು ಮರುಗದಿರು ಚಂದಿರ ನಗುತಾನೆ ಅಂತಂದೆಯಲ್ಲ ಅಮಾವಾಸ್ಯೆಯ ಇರುಳಲೇನ ಮಾಡಲಿ ಅಂತ ಕೇಳದಿರು; ಬಾನ ಬಯಲಲ್ಲಿ ತಾರೆಗಳೂ ಇವೆ ನಿನ್ನ ನಗಿಸಲು ಗೆಳತೀ... 
ಚಂದಿರನೂ ಇಲ್ಲ ಬಾನೆಲ್ಲ ತಮ್ಮದೇ ಎಂಬ ಹುರುಪಲ್ಲಿ ಮಿನುಗೋ ಆ ಚುಕ್ಕಿಗಳ ಸಂಭ್ರಮದ ಗಡಿಬಿಡಿಯ ನೋಡಬೇಕು ನೀನು ನಿನ್ನ ಕನಸ ಕಂಗಳಲಿ...
ಕಾಣುವ ಒಳಗಣ್ಣ ತೆರೆದು ನೋಡಿದರೆ ಭುವಿಯ ಹಸಿರಲ್ಲಿ, ಚಂದಮನ ತಂಪಲ್ಲಿ, ತಾರೆಗಳ ಮಿನುಗಲ್ಲಿ ಎಲ್ಲೆಲ್ಲೂ ಅವನೇ ಕಾಣುತ್ತಾನೆ... 
ಬೆಳಕ ಪ್ರತಿನಿಧಿ – ಶಕ್ತಿ ಸಂಜೀವಿನಿ... 
ಹೊರಗೆಲ್ಲ ಬೆಳಗುವ ಆ ಸೂರ್ಯ ಚಂದ್ರ ಒಂದಿಷ್ಟು ನಮ್ಮ ಒಳಗನ್ನೂ ಬೆಳಗಲಿ - ಎಡಬಿಡದ, ಸೋತು ಸುಸ್ತಾಗದ ತಮ್ಮ ನಿತ್ಯ ಕೈಂಕರ್ಯದಿಂದ; ಅರಿವಿನ ಬೆಳಕಿಂದ... 
ಬದುಕೆಲ್ಲ ಬೆಳಕೇ ತುಂಬಲಿ - ಅವಳ ಮಡಿಲಲ್ಲಿ ಜೀವ ಜಾಲ ತುಂಬಿ ನಕ್ಕಂತೆ...


ಮರೀ -
ನಿನ್ನ ಗೆಲುವು ನನ್ನ ಸೋಲೇ ಆದರೂ ಆ ಸೋಲಲ್ಲೂ ನಂಗೆ ಸಂಭ್ರಮವಿದೆ...
ನಿನ್ನ ಸೋಲು ನನ್ನ ಗೆಲುವೆಂಬುದಾದರೆ ಆ ಗೆಲುವಲ್ಲೂ ನನ್ನ ಮನದ ನೋವ ಕಣ್ಣೀರಿದೆ...
ಈ ಮಧುರ ಭಾವಕ್ಕೆ ನಾ ಯಾವ ಹೊಸ ಹೆಸರನೂ ಕೊಡಲಾರೆ – ಸವಿ ಸ್ನೇಹವನ್ನುಳಿದು...
ನಿನ್ನಾಯ್ಕೆ ಗೆಲುವೋ, ಸೋಲೋ...?
ಉಳಿದದ್ದು ನಿನ್ನ ಚಿತ್ತ...


ಹಾಳಾದ ಈ ಕಹಿ ನೆನಪುಗಳೆಂಬ ಪಾರ್ಥೇನಿಯಂ ಕಳೆಯಂಥ ಭಾವಗಳು ಅದೆಷ್ಟು ಹುಲುಸಾಗಿ ಬೆಳೆಯುತ್ತವೆ ಗೊತ್ತಾ...
ಬೆಳೆಯದಿರಲೆಂದು ಎಷ್ಟೇ ಚಿವುಟಿದರೂ ಮತ್ತೆ ಮತ್ತೆ ಚಿಗುರಿ ಕನಸುಗಳ ಬೆಳೆಯ ಬೆಳವಣಿಗೆಯ ಕತ್ತು ಹಿಸುಕಿ ಮೆರೆದಾಡುತ್ತವೆ...
ಬೇರು ಸಹಿತ ಕಿತ್ತೆಸೆಯೋಣ ಅಂದುಕೊಂಡರೆ ನನ್ನೀ ಮನಸೆಂಬುದು ಕನಸುಗಳಿಗಿಂತ ಮುಂಚೆ ನೆನಪುಗಳ ತಾಯಿ...
ನೆನಪುಗಳನೂ ಪ್ರೀತಿಸಲು ಸಾವಿರ ಕಾರಣಗಳಿವೆ ಆ ತಾಯಿ ಮಡಿಲಲ್ಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, July 2, 2014

ಗೊಂಚಲು - ನೂರಿಪ್ಪತ್ನಾಕು.....

ಈ ನಡುವೆ ಒಲವ ಮೆರವಣಿಗೆ.....
(ನೆನಪು, ಕನಸುಗಳ ಗುಂಗಲ್ಲಿ ಅವಳ ಒಲವ ಬಗೆಗೆ ಒಂದಷ್ಟು ಬಿಡಿ ಬಿಡಿ ಸಾಲುಗಳು...)

ನೋವ ಹೂಳು ತುಂಬಿ ಬಗ್ಗಡವಾಗಲಿದ್ದ ಕಣ್ಣ ಕೊಳದಲ್ಲಿ ಗೆಜ್ಜೆ ಕಾಲ್ಗಳನಾಡಿಸಿ ನಗೆಯಲೆಯನೆಬ್ಬಿಸಿದವಳು... 
ಕತ್ತಲಾಗಿದ್ದ ಎದೆಯ ಗರ್ಭಗುಡಿಯ ಬಾಗಿಲಲಿ ಒಲವ ಪ್ರಣತಿಯ ಹಚ್ಚಿಟ್ಟು ಕಣ್ಣ ಮಿಟುಕಿಸಿದವಳು...
ಅವಳೆದೆಯ ಬಟ್ಟಲ ಒಲವ ಅಕ್ಷಯ ಪಾತ್ರೆಯ ಬಲದಿಂದ ನಿತ್ಯ ದಾಸೋಹವ ನಡೆಸಿ ಎನ್ನೆದೆಯ ಹಸಿವ ನೀಗುತಿರುವಳು...

ತನ್ನ ಮುಗುಳ್ನಗುವಿಂದಲೇ ಶಕ್ತಿ ತುಂಬಿದಳಾಕೆ ನನ್ನಾಳದ ಕನಸ ಹಕ್ಕಿಯ ರೆಕ್ಕೆಗೆ...
ಇನ್ನೀಗ ಅವಳ ಮಡಿಲ ಅಕ್ಕರೆಯ ಜೇನೊಂದೆ ಸಾಕು ಈ ಬದುಕಿಗೆ...

ಅವಳ ಬದುಕ ಸಂತೆಯ ನಡುವೆ ನಕ್ಕ ಯಾವುದೋ ಮುಖ ನಾನು...
ನನಗಾದರೋ ಅವಳು ನನ್ನ ಕನಸ ನಕ್ಷತ್ರಗಳ ಸಂತೆ ಮಾಳಕೆ ತಾವು ನೀಡಿದ ಬಾನು...

ತನ್ನ ಸ್ನೇಹದ ತೊಟ್ಟಿಲಲೆನ್ನ ಕಂದನಾಗಿಸುವಳು...
ನನ್ನ ಖುಷಿಗಳಿಗೆಲ್ಲ ಅಮ್ಮನೆನಿಸುವಳು...

ತನ್ನ ಎದೆ ಕಣಿವೆಯ ಕತ್ತಲ ಸೊಬಗಿಂದ ನನ್ನ ದೇಹದ ಬಯಕೆ ಬೆಂಕಿಯ ಮಣಿಸಿ ತಣಿಸಿದಾಕೆ...
ಅದೇ ಹೊತ್ತಿಗೆ - 
ತನ್ನೊಳಗೆ ತಾ ಸದಾ ಹಚ್ಚಿಟ್ಟುಕೊಂಡ ಒಲವ ಹಣತೆಯ ಜ್ಯೋತಿಯಿಂದ ಎನ್ನ ಆತ್ಮದ ದೊಂದಿಗೆ ಕಿಡಿಯ ಹೊತ್ತಿಸಿದಾಕೆ...

ಅವಳ ಸ್ನೇಹದ ಮಡಿಲ ಘಮದ ನೆನಪ ಮಾಲೆಯ ಧರಿಸಿದ ನನ್ನೀ ಮನದ ಮನೆಯಂಗಳದಲ್ಲಿನ್ನು ಸದಾ ನಗುವಿನುತ್ಸವ...
ಎಷ್ಟೆಲ್ಲ ಸವಿಗನಸುಗಳು ಕುಂಟೆಬಿಲ್ಲೆಯಾಡುತ್ತಿವೆ ಅವಳು ಕಣ್ಣಲ್ಲಿ ಕಣ್ಣಿಟ್ಟ ಮೇಲೆ ನನ್ನ ಕಣ್ಣ ಬಯಲಲ್ಲಿ....
ಇದೀಗ ನನ್ನೆಲ್ಲ ಕ್ಷಣಗಳೂ ಸುಂದರ ಮತ್ತು ಬರೀ ಸುಂದರ...

ನನ್ನೀ ಬದುಕ ಕೊಳಲಿಗೆ ಉಸಿರ ತುಂಬಿ ಮಧುರ ನಾದ ಹೊಮ್ಮಿಸಿದಾಕೆ... 
ತಿಳಿ ಮನದ ನಗೆಯ ಬದುಕಿದು ಅವಳದೇ  ಕರುಣೆಯ ಕಾಣಿಕೆ...

ಅವಳು ಏನೂ ಆಗದೆಯೇ ಎಲ್ಲವೂ ಆಗಬಲ್ಲವಳು...
ಸ್ನೇಹದ ಕಿರುಗೆಜ್ಜೆ ನಾದದಲೇ ಎನ್ನ ಬದುಕನಾಳುವಳು...

ಹೆಸರೇನೆಂದು ಕೇಳದಿರಿ...
ಕಣ್ಣ ಬಿಂಬದ ಬೆಳಕಿಗೆ ಏನೆಂದು ಹೆಸರಿಡಲಿ...
ನನ್ನ ಹೆಸರನೂ ತನ್ನದಾಗಿಸಿಕೊಂಡ ಎನ್ನ ಮನ ಮನೆಯ ಮಾರಾಣಿ – ಅವಳೆನ್ನ ಕಪ್ಪು ಹುಡುಗಿ...