Thursday, April 16, 2015

ಗೊಂಚಲು - ನೂರಾ ಐವತ್ತು ಮತ್ತೆರಡು.....

ಇಳಿಸಂಜೆ ಮತ್ತು ಕೆಣಕೋ ಭಾವಗಳು.....

ಹೇಳಿ ಬಿಡು ಒಮ್ಮೆ ಬಾಯ್ತೆರೆದು ಭಾವ ಸತ್ತಿದೆ ಎಂದು...
ಲೋಕವನು ನಂಬಿಸಿದ ಸುಳ್ಳು ನಗೆಯಲೇ ಆತ್ಮವನೂ ನಂಬಿಸುವ ಹುಚ್ಚು ಹಂಬಲವೇಕೆ...
ಏಕಾಂತದ ಇಳಿ ಸಂಜೆಯಲೂ ಮಾತಿನ ಹೆಣಕಾಯುವ ಕರ್ಮ...
ಇರುಳ ಸಾಂಗತ್ಯದಲಾಗೀಗ ಮಲ್ಲಿಗೆ ಮುದುಡದ ಶುಶ್ಕ ಕಾಮ...
ಒಲವಿನಾರೈಕೆ ತಪ್ಪಿದ ರುಚಿಹೀನ ಬದುಕಿನಲಿ ತೆವಳುತಿರುವುದಕಿಂತ ಹೊರಳಿಬಿಡುವುದು ಲೇಸಲ್ಲವಾ ಒಂಟಿ ಪಯಣದ ಆ ತೀರಕೆ...
ಹೇಳಿ ಬಿಡು ಒಮ್ಮೆ ಬಾಯ್ತೆರೆದು ಭಾವ ಸತ್ತಿದೆ ಎಂದು...
ಹೊಸೆಯುವುದನಾದರೂ ಬಿಡುತ್ತೇನೆ ಬತ್ತಿಯನು ಹೊಸ ಕನಸಿನ ಕುರುಡು ದೀಪಕೆ...

@@@

ಹನಿ ಹನಿ ಜಿನುಗೋ ಮಳೆ...
ಬಿತ್ತ ಹೋದೆ ಕನಸ ಬೀಜಗಳ...
ಮನದ ಬಿಡಾರದಲಿನ ನೆನಹುಗಳ ನಿತ್ಯ ಯಜ್ಞಕ್ಕೆ ಮಳೆಯು ಹವಿಸ್ಸಾಗಿ ನಾಳೆಗಳ ಆಸೆಗಳೆಲ್ಲ ಅಗ್ಗಿಷ್ಟಿಕೆಗಳಾಗಿ ಉರಿದು ಹೋದವು...
ಕನಸುಗಳ ಬೂದಿಯನೆ ಭಸ್ಮವೆಂದು ಹಣೆಗಿಟ್ಟು ಉಜ್ಜುತಿದ್ದೇನೆ...
ಆಸೆ  - ಅಳಿಸಲಾದೀತಾ ಹಣೆಯ ಬರಹವ...
ಬರೆಯಲಾದೀತಾ ಮತ್ತಲ್ಲಿ ಹೊಸದೊಂದು ಕನಸ ಕವಿತೆಯ...

@@@

ಹೆಳವಾದ ಕನಸುಗಳೆದುರು ಹೆಂಡ ಕುಡಿದ ಭಂಡನಂತೆ ನಾಟ್ಯವಾಡೋ ಸಿಹಿ ಕಹಿ ನೆನಪುಗಳು - 
ಮತ್ತೆ ಇಲ್ಲಿ  ಸಂಜೆ ಮಳೆ...

@@@

ಆಸೆ - 
ಯಾನ ಹೊರಡಬೇಕು ಜರೂರಾಗಿ...
ನೆನಪುಗಳು ಹಿಂಬಾಲಿಸದ, ಕನಸುಗಳ ಕರೆ ತಲುಪದ ಅಜ್ಞಾತ ತೀರವೊಂದಿದ್ದರೆ ಆ ದೂರಕೆ...

@@@

ಕನಸೇ -
ಅಂದು ಅಂಗಳದಂಚಿನ ಕಣಕು ನೀರಲ್ಲಿ ತೇಲಿಬಿಟ್ಟ ಕಾಗದದ ದೋಣಿಯಲಿ ನಿನಗಾಗಿ ಕಾಮನಬಿಲ್ಲಿಂದ ಬಣ್ಣಗಳ ಕದ್ದು ತರೋ ಹಂಬಲದ ಸೊಬಗಿತ್ತು...
ಇಂದು ನೀ ಕೊಟ್ಟ ನವಿಲುಗರಿ ಮರಿ ಹಾಕೋ ಹೊತ್ತಲ್ಲಿ ಬದುಕಿನ ದೋಣಿಯೇ ತೂತಾಗಿ ಮಗುಚಿ ಬಿದ್ದಿದೆ...
ನಿನ್ನ ಅಂಗಾಲಿಗೊಂದು ಗೆಜ್ಜೆ ತೊಡಿಸುವೆನೆಂದು ನಾ ಕೊಟ್ಟ ಭಾಷೆಯನು ಜಾಣತನದಿಂದ ಮರೆಯಲೆಳಸುತ್ತೇನೆ...
ಅದಕೇ ಈ ಸಂಜೆ ಮಳೆಯ ದನಿಗೆ ಕಿವುಡನೂ, ಮಳೆಬಿಲ್ಲಿನೆದುರು ಕುರುಡನೂ ಆಗಬಯಸುತ್ತೇನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ನಾ ಮತ್ತೆ ಮೂಕಿ.. :(
    "ಒಲವಿನಾರೈಕೆ ತಪ್ಪಿದ ರುಚಿಹೀನ ಬದುಕಿನಲಿ ತೆವಳುತಿರುವುದಕಿಂತ ಹೊರಳಿಬಿಡುವುದು ಲೇಸಲ್ಲವಾ ಒಂಟಿ ಪಯಣದ ಆ ತೀರಕೆ..."
    ಅರ್ಥಗರ್ಭಿತ ಸಾಲು ಎಂದಿನಂತೆ.

    ReplyDelete