Thursday, February 2, 2017

ಗೊಂಚಲು - ಎರಡ್ನೂರ್ಯೋಳು.....

ಕೃಷ್ಣ ಕೃಷ್ಣಾ = ರಾಧೆಯೊಡಲ ಬೆಂಕಿ..... 

ಅವನೆಂದರೆ ಅವಳ ಸೆರಗಿನ ನರುಗೆಂಪು...
ಬೆಳಗೆಂದರೆ ಅವನ ಅಮಲುಗಣ್ಣ ಬೆಳಕಲ್ಲಿ ಅರಳೋ ಅವಳ ತೃಪ್ತ ಮರುಳ ಮುಗುಳ್ನಗು...
ಚಂದಿರನ ಕಾವಲಿನಲಿ ಕದ್ದು ಸವಿದ ಇರುಳ ಒಲವಿಗೆ ಸಾಕ್ಷಿ: ಈಗವಳ ರೋಮಗಳೆಲ್ಲ ಹಸಿರೋ ಹಸಿರು - ಬಸಿದ ಬೆವರಿಗೆ ಸಾಗರ ಉಪ್ಪೋ ಉಪ್ಪು... 😉

ಅಲ್ಲಿ ಯಮುನೆ ದಡದಲ್ಲಿ ಕರಿಯ ಬಿದಿರಿಗೆ ಉಸಿರ ತುಂಬುತಿರೆ...
ಇಲ್ಲಿ ಹಾಡಿಗಳಲ್ಲಿ ಗೋಪಿಯರೆದೆಯಲಿ ಒಲವ ಹಾಲುಕ್ಕುವುದು ಯಾವ ವಿನೋದ...!!!

ಮಥುರೆಯ ಕಡಲು ಉಕ್ಕುಕ್ಕಿ ಹೇಳುವುದು ಯಮುನೆಯ ದಡದ ಮೌನದ ಕಥೆಯ...

ಕೃಷ್ಣನ ತೋಳಿಗೆ ರಾಧೆಯ ಮೂಗುತಿಯ ಗೀರಿನಾಭರಣ...
ನಕ್ಕ ಯಮುನೆಯಲಿ ಉಕ್ಕೋ ಹರೆಯ...

ಬೃಂದಾವನದಲಿಂದು ಪ್ರೇಮೋತ್ಸವವಂತೆ - ನಿರ್ಲಜ್ಜ ಚಂದಮ ತುಸು ಹೆಚ್ಚೇ ಬೆಳಗುವ...
ಗೋಪ ಗೋಪಿಯರ ಮೈತೊಳೆದ ಯಮುನೆಯ ಹರಿವಲ್ಲೀಗ ಹಸಿ ಹಾಲಿನ ಘಮ...

ಕೃಷ್ಣನ ನೆನಪಾದಾಗಲೆಲ್ಲ ಯಮುನೆ ರಾಧೆಯ ಪಾದ ಸೋಕುವಳಂತೆ... 

ಗೋಕುಲದ ಹಟ್ಟಿಗಳಲಿ ಹಾಲು ಕದಿವ ಬಾಲರೆಲ್ಲ ಈಗ ತುಂಟ ಕೃಷ್ಣರೇ... 

ಏನೋ ಮರುಳಲ್ಲಿ ರಾಧೆ ಬೃಂದಾವನವನ್ನೆಲ್ಲ ಬಿರಬಿರನೆ ಸುತ್ತುವಳು - ಅವಳು ತುಳಿದ ಹಾದಿಯ ಧೂಳಲ್ಲಿ ಕರಿಯನ ಹೆಜ್ಜೆ ಗುರುತು...

ನಿನ್ನೆಯಷ್ಟೇ ಮೈನೆರೆದ ಗೋಪಬಾಲೆ ಮಡುವಿನಲಿ ಮುಳುಗೆದ್ದು, ಬೃಂದಾವನದ ಹೂವ ಮುಡಿದು ಕೃಷ್ಣಾ ಅಂದು ನಾಚುತ್ತಾಳೆ - ಯಮುನೆಯ ಎದೆಯುಬ್ಬಿ ಹರಿವಿಗೇನೋ ಆವೇಗ - ಚಂದಿರ ಭಾವ ಮತ್ಸರದಿ ಸಣ್ಣಗೆ ಕಂಪಿಸುವನಂತೆ... 

ಏನೋ ನೆನಹಲ್ಲಿ ರಾಧೆ ನಿಡುಸುಯ್ವಳು - ಗೋಕುಲದ ಬಿದಿರೆಲ್ಲ ಕೊಳಲಾಗುವುದು - ಗಾಳಿಯಲೆಯಲ್ಲಿ ಜೋಗಿ ಜಂಗಮ ರಾಗ... 

ಮೂರು ಸಂಜೆಯಲಿ ಗೋಪಿ ಕೆಂಪಿ ಕರುವಿನ ಕೊರಳ ತಬ್ಬುವಳು - ಕರುವು ಗೋಪಿಯ ಉಸಿರ ಮೂಸುವುದು; ಗೋಪಿಗೂ, ಕರುವಿಗೂ ಕೃಷ್ಣ ಸಾನ್ನಿಧ್ಯ... 

No comments:

Post a Comment