Wednesday, September 4, 2013

ಗೊಂಚಲು - ಎಂಬತ್ನಾಕು.....

ಒಳಗಿನಳಲು.....


ಕೆಲ ಮಧುರ ಭಾವಗಳ ಒಳಗೆಳೆದುಕೊಳ್ಳಲಾಗದ ವಾಸ್ತವದ ಅಸಹಾಯಕತೆ...
ಸಂಜೆ ನೆರಳಂತೆ ಬೆಳೆದು ಕಾಡುವ ಮಧುರ ಯಾತನೆಯ ಭಾವಗಳಿಂದ ದೂರ ಓಡಿ ಓಡಿ ಆವರಿಸಿದ ನಿಶ್ಯಕ್ತಿ... 
ಬೇಡವೆಂದು ಹೊರನೂಕಿ ಒಳಸೇರಿಕೊಳ್ಳಲೂ, ಬೇಕೆಂದು ಸೆಳೆದು ಒಳಗೆ ಅಡಗಿಸಿಕೊಳ್ಳಲೂ ಮನದ ಮನೆಗೆ ಬಾಗಿಲೇ ಇಲ್ಲ...
ನನ್ನ ತಪ್ಪೆಷ್ಟು ಕಾಲನ ಕೈವಾಡವೆಷ್ಟು ಅರ್ಥವಾಗದೇ ಎಲ್ಲ ಗೋಜಲು ಗೋಜಲು...
ಅಲ್ಲೆಲ್ಲೋ ಮಳೆಯಾದ ಸೂಚನೆಗೆ ನನ್ನೆದೆನೆಲದಲ್ಲಿ ಸಣ್ಣ ಕಂಪನ...
ಆಸೆ – ನನ್ನೆದೆ ನೆಲವೂ ಅಂಥದೊಂದು ಮಳೆಯಲ್ಲಿ ಒಂದಿಷ್ಟೇ ಇಷ್ಟು ನೆನೆವಂತಿದ್ದಿದ್ದರೆ... 
ಅಲ್ಲೆಲ್ಲ ಸುರಿವ ಸೋನೆ ಇಲ್ಲಿಯೂ ಸುರಿದು ಒಂದೇ ಒಂದು ಹನಿಯ ಮೇಲಾದರೂ ಕೇವಲ ನನ್ನ ಹೆಸರು ಬರೆದಿದ್ದಿದ್ದರೆ...
ಹಾಗೆಂದುಕೊಳ್ಳುತಿರುವಾಗಲೇ ದಾರಿ ತಪ್ಪಿ ಇತ್ತ ಬಂದ ಒಂದ್ಯಾವುದೋ ಮಳೆ ಮೋಡ ಕೂಡ ಈ ಮರಳು ಕಾಡಿನ ಒರಟು ಬಿಸಿಗೆ ಹೆದರಿ ಹನಿವ ಮೊದಲೇ ದೂರ ಸರಿಯುತ್ತೆ...
ಖರ್ಜೂರ ಬೆಳೆವಷ್ಟಾದರೂ ಮೆದುವಾಗಿಸಬೇಕೆಂದುಕೊಳ್ಳುತ್ತೇನೆ ನನ್ನ ನಾನು...
ಆದರೆ ಅದಕೂ ಧುತ್ತನೆ ಕಾಡುವ ಮರಳ ಸುಂಟರಗಾಳಿಯ ಭಯ...
ಕಾಲನೆಂಬ ಸುಂಟರಗಾಳಿಗೆ ಸಿಕ್ಕ ಬದುಕೆಂಬ ಮರಳುಗಾಡಲ್ಲಿ ನಾಳೆಗಳಿಗೆ ಕಸುವ ತುಂಬೋ ಒಲವ ಕನಸಿನ ಮಳೆ ಸುರೀದೀತು ಹೇಗೆ...
ಹುಟ್ಟು ಬಂಜರಾದ ಎದೆನೆಲದಲ್ಲಿ ಒಲವಧಾರೆಗೇನು ಕೆಲಸ...
ಆದರೂ ಬಂಜರು ಬದುಕಿಗೇ ಹಸಿರಿನಾಸೆ ಅಧಿಕವೇನೋ...:(


***


ಆಯೀ -

“ಬದುಕಿರುವುದಕ್ಕೆ ಒಂದು ಉದ್ದೇಶ ಬೇಕು; ಕೇವಲ ನನ್ನದು ಎಂಬ ಜೀವ – ಭಾವವೊಂದು ಜೊತೆಗಿರಬೇಕು; ಇಲ್ಲದಿರೆ ಒಂದು ಹಂತದಲ್ಲಿ ಎಲ್ಲ ಖಾಲಿ ಖಾಲಿ ಅನ್ನಿಸಿಬಿಡುತ್ತೆ..” ಹಾಗಂತ ಎಲ್ಲೋ ಓದಿದ ನೆನಪು... ಆ ಮಾತು ಸತ್ಯ ಅನ್ನಿಸಿದಾಗಲೆಲ್ಲ ನಾಳೆಗಳ ಬಗೆಗೆ ದಿಗಿಲಾಗುತ್ತೆ...
ಕಾರಣ – ಕೇವಲ ನಂದು, ನಂಗೆ ಮಾತ್ರ ಸ್ವಂತ ಅನ್ನುವಂತೆ ನಾವಿರೋದೇ ಇಬ್ಬರು... 
ಯಾರೇ ಒಬ್ಬರು ಕಳಚಿಕೊಂಡರೂ ಉಳಿದ ಒಬ್ಬರ ಬದುಕು ನಿರುದ್ದಿಶ್ಯವೇ...
ನೀನು ನನ್ನ ಉಸಿರ ನುಡಿ – ನಾ ನಿನ್ನ ಕರುಳ ಕುಡಿ...
ನಿನಗೆ ಅವನು ಇದ್ದೂ ಇಲ್ಲ – ನಂಗಾಗಿ ಅವಳು ಬರುವ ಸಾಧ್ಯತೆಯೇ ಇಲ್ಲ...
ನಾಳೆಗಳ್ಯಾಕೋ ಸ್ಮಶಾನದ ನಡುವಿನ ಒಂಟಿತನದಂತೆ ಕಾಡುತ್ತವೆ ಆಗಾಗ...
ಆಗೆಲ್ಲ ಸಮಾಧಾನಿಸಿಕೊಳ್ಳುತ್ತೇನೆ ನನ್ನ ನಾನೇ -
ಬಿಡು, ಇಂದಿನದೇ ಸಾಕಷ್ಟಿರುವಾಗ ನಿನ್ನೆ ನಾಳೆಗಳೇಕೆ ಕಾಡಬೇಕು ಹೇಳು...
ನಾಳೆಯ ಇಂದೇ ಕಂಡವರಿಲ್ಲ – ನಿನ್ನೆಯ ತಿರುಗಿ ಉಂಡವರಿಲ್ಲ ಎಂದುಕೊಂಡು ಇಂದನ್ನು ಆದಷ್ಟು ಮಟ್ಟಿಗೆ ನಗುತ ತಳ್ಳಿದರಾಯ್ತು... 
ಬದುಕೆಂದರೆ ಅದೇ ತಾನೆ...
ಬಲ್ಲೆ ನಾನು ನೀನೂ ಹೀಗಂದುಕೊಂಡೇ ದಿನವ ದೂಡ್ತೀಯಾ ಅಂತ...

3 comments: