Thursday, June 26, 2025

ಗೊಂಚಲು - ನಾಕ್ನೂರರ್ವತ್ತೈದು.....

ಈಗಲೂ ಒಬ್ಬನೇ ನಗುತ್ತೇನೆ..... ನಿನಗಾಗಿ ಕಾಯುತ್ತಾ ಬಾಗಿಲಲೇ ನಿಂತಿದ್ದೆ ಅನಾದಿಕಾಲದಿಂದಲೂ - ಎದುರಿನ ಅಗಾಧ ಬಯಲು, ನಿಶಾಂತ ಆಗಸ ಅನಾಯಾಸ ನನ್ನದಾದವು... ನೀ ಬಾರದೇ ಹೋದದ್ದು ಎಂಥ ಮಧುರ ಶಾಪ - ಯೆದೆಯ ಗದ್ದಲಕೆ ಕರುಳ ಮೌನ ಸಂವಾದಿಯಾಗಿ ಉಳಿದದ್ದು ನಿನ್ನದೇ ಅಮೂರ್ತ ಕಲಾಪ... ಎದೆಗೆ ಸಿಕ್ಕಿದ್ದನ್ನು ಕೈಗೆ ಸಿಗದಂತೆ ಎತ್ತರದಲಿ ಎತ್ತಿಟ್ಟು, ಸಿಗಬೇಕಾದ್ದು ಇನ್ನೇನೋ ಇದೆ ಎಂದು ಸಿಗಲಾರದ್ದನ್ನು ಹುಡುಕುವ ಸಿಕ್ಕು ಬದುಕಾಯಿತು... ಪ್ರೇಮ ಕನಸಿಗೆ ಸಲೀಸು - ನೆನಪುಗಳಲ್ಲಿ ಪ್ರೇಮಿಯಷ್ಟೇ ಉಳಿಯುವುದು; ಪ್ರೇಮದ ಬೂದಿಗೆ ಕಣ್ಣು ತುರಿಸುತ್ತಲೇ ಇರುತ್ತದೆ ಕಾಲಕೂ... ನೋಡು, ಮಹಾಕಾವ್ಯಗಳ ತುಂಬಾ ವಿರಹದ್ದೇ ಪಾರುಪತ್ಯ... ಕಾಲನ ತುರಿಕೆಗೆ ಪ್ರೇಮದೌಷಧಿ ಕುಡೀ ಅಂದರು - ಪ್ರೇಮದ ಗಾಯಕ್ಕೀಗ ಕಾಲನಲ್ಲಿ ಮದ್ದು ಹುಡುಕುತ್ತಿದ್ದೇನೆ... ___ ಎಲ್ಲರೊಳಗೂ ಯಾರೋ ಬಂದು ತುಂಬಿಕೊಡುತ್ತಾರೆಂದು ಕಾಯುವ ಮತ್ತು ಎಂದಿಗೂ, ಯಾರೂ ಬಂದು ಭರ್ತಿ ಮಾಡದಿರುವ / ತುಂಬಲಾಗದ ಒಂದು ಖಾಲಿ ಜಾಗ ಅಥವಾ ಖಾಸಗೀ ಮೌನವೊಂದು ಉಳಿದೇ ಇರುತ್ತದೇನೋ... &&& ನಮ್ಮವರು ನಮಗೆ ಬೇಕಾದಂತೆ ನಡ್ಕೋತಿಲ್ಲ ಅಥವಾ ನಾವು ಹೇಳಿದ್ದನ್ನ ಕೇಳ್ತಿಲ್ಲ ಅನ್ನೋ ಅನಗತ್ಯ ಹತಾಶೆಗೂ; ಮತ್ತು ನಮ್ಮವರೇ, ಅವರೇ ಕೊಟ್ಟ ಮಾತಿನಂತೆ, ಅವರೇ ರೂಪಿಸಿದ ದಾರಿಯಲ್ಲವರೇ ನಡೆಯದೇ ಹೋದಾಗ ಅಥವಾ ಅವರೇ ಖುದ್ದು ನಮಗೆ ಅನುಸರಿಸಲು ಹೇಳಿದ ಚಿಂತನೆಯನು ಅವರೇ ಪಾಲಿಸಿಲ್ಲ ಅನ್ನಿಸಿದಾಗ ಒಡಮೂಡುವ ಅಸಹನೆಯ ಸಾತ್ವಿಕ ಕೋಪಕ್ಕೂ ತುಂಬಾನೇ ವ್ಯತ್ಯಾಸ ಇದೆ... ಕೃಷ್ಣ ತತ್ವವನೂ ಚಾಣಕ್ಯ ನೀತಿಯ ಗರಡಿಯಲಿ ಬಲಗೊಳಿಸಿ ಅನುಷ್ಠಾನಗೊಳಿಸಬೇಕಿದೆ ಈಗ; ಕಾರಣ, ಇದು ದ್ವಾಪರವಲ್ಲ, ಕಲಿಗಾಲ... ___ ನಂಬಿಕೆ ಮೂಡಿಸೋದೇನೂ ಕಷ್ಟವಲ್ಲ, ಕಟ್ಟಿಕೊಟ್ಟ ನಂಬಿಕೆಯ ಕಾಲವೂ ಉಳಿಸಿಕೊಳ್ಳೋ ಕ್ಷಾತ್ರವ ಕಾಯ್ದುಕೊಳ್ಳೋದು ಕಷ್ಟ... &&& ಸಾವಿನೆದುರು ಮಾತ್ರವೇ ಮೌನ ಸಂವಾದ ನನ್ನದು - ಅದಕೆಂದೇ ಮೌನವೆಂದರೆ ಶ್ರದ್ಧಾಂಜಲಿ ಅನ್ನುತ್ತೇನೆ... ಬದುಕಿನೊಡನೇನಿದ್ದರೂ ಮಾತೇ ಮಾತು ಎನ್ನದು - ಅದಕೇ ನೋವ ಬಡಿಯಲೂ ತರ್ಕಶಾಸ್ತ್ರದ ಬಡಿಗೆ ಹಿಡಿದು ನಿಲ್ಲುತ್ತೇನೆ... ನಿನ್ನದೊಂದು ಕಿವಿ ಸಾಕಿತ್ತು ಕಣೋ ನನ್ನ ನೂರು ದುಗುಡಗಳು ಹರಿದೋಗಿ ನಾ ಹಗುರಾಗಲು ಅನ್ನುತ್ತಿರುತ್ತಾರೆ, ನೀನು ಈ ಬದುಕಿನ ಪರಮಾಪ್ತ ಜೀವ ಅಂದವರೇ - ವಿಪರ್ಯಾಸ ಅಂದರೆ ಅವರು ಹಾಗನ್ನುವ ಧೈರ್ಯ ಮಾಡುವ ಹೊತ್ತಿಗೆ ನನ್ನ ಮಾತು, ತರ್ಕಗಳ ಇರಿತಕ್ಕವರು ರೋಸಿ ಹೋಗಿ ಬಂಧದೊಳಗಿನ ಭಾವತೀವ್ರತೆ ಇಷ್ಟಿಷ್ಟೇ ಸಾಯುತ್ತಾ ಸಾಗಿ ಬಂಧ ತೀವ್ರ ನಿಗಾ ಘಟಕದಲ್ಲಿ ಉಸಿರು ತೇಕುತ್ತಿರುತ್ತದೆ... ಗೆಳೆತನವೆಂದರೆ, ಹೆಗಲಾಗುವುದೆಂದರೆ ಅಳುವವನಿಗೆ ನಮ್ಮ ಹೆಗಲು ಕೊಟ್ಟು ಕೂರುವುದಲ್ಲ, ಅಳು ರೂಢಿಗತವಾಗದಂತೆ ಕಾಯುವುದು, ಕಹಿಯಾದರೂ ಸತ್ಯವನೇ ಕುಡಿಸುವುದು, ಪ್ರತ್ಯಕ್ಷವೋ ಪರೋಕ್ಷವೋ ನನ್ನ ನಿಲುಕಿನಷ್ಟಾದರೂ ನೋವಿನಿಂದಾಚೆ ಬಂದು ನಗುವ ಹುಡುಕಿಕೊಳ್ಳೋ ದಾರಿಯ ಮತ್ತೆ ಮತ್ತೆ ಹೇಳುವುದು, ಸಾಧ್ಯವಾದಷ್ಟು ಮಟ್ಟಿಗೆ ಅವರ ಆ ಹಾದಿಯಲ್ಲಿ ಜೊತೆಗಿದ್ದು ಸಲಹಿಕೊಳ್ಳುವುದು ಮತ್ತು ಬರೀ ಕಿವಿಯಾಗುವುದು ಅಥವಾ ವಿಷಯ ಸಂದರ್ಭ ಕಳೆದ ಮೇಲೆ ಇನ್ಯಾವಾಗಲೋ ಹೀಗಲ್ಲ ಹಾಗೆ ಮಾಡಬಹುದಿತ್ತು, ನಾನಾದರೆ ಹಿಂಗೆ ಮಾಡ್ತಿದ್ದೆ ಅನ್ನೋದೆಲ್ಲಾ ಆಯಾ ಕ್ಷಣದ ನನ್ನ ಜವಾಬ್ದಾರಿಯಿಂದ ನುಣುಚಿಕೊಂಡೂ ಸುಭಗನಾಗುಳಿವ ಮುಷಂಢಿತನವಲ್ಲವಾ? ಆ ಚಂದಕ್ಕೆ ಆಪ್ತ ಗೆಳೆತನವೇ ಬೇಕಾ? ಅಂತೆಲ್ಲಾ ಒಣ ವೇದಾಂತವ ನಂಬಿ, ನಂಬಿಸಲು ಹೆಣಗುವ ನನ್ನ ಬುದ್ಧಿಯ ಮಾತಿನಾರ್ಭಟಕ್ಕೆ; ಅತ್ತು ಹಗುರಾಗಿ ಎದ್ದ ಜೀವದಲ್ಲಿ ನನ್ನ ಯಾವ ತರ್ಕಗಳ ಹಂಗೂ ಇಲ್ಲದೇ ಹೊಸ ಕನಸು, ಚೈತನ್ಯ ಚಿಗುರಬಲ್ಲದು ಮತ್ತು ಹೆಚ್ಚಿನ ಸಲ ನನ್ನ ಬಿಟ್ಟಿ ಭಾಷಣಕ್ಕಿಂತ ಗಟ್ಟಿ ಭರವಸೆಯನು ಸುಮ್ಮನೇ ಹರಡಿಕೊಟ್ಟ ಮಡಿಲು ತುಂಬಿ ಕೊಡಬಹುದೂ ಅನ್ನೋ ಮನಸಿನ ಮೃದುತ್ವದಾಳದಾಳದಲ್ಲಿನ ಆತ್ಮಾಭಿಮಾನದ ಸೂಕ್ಷ್ಮ ಅರ್ಥವೇ ಆಗಿರದೇ ಪೆಕರನಂತೆ ನಗುತ್ತಿರುತ್ತೇನೆ... ಬಿಡಿ ಹುಟ್ಟಾ ಬರಡು ಮಡಿಲು, ಒರಟು ಹೆಗಲುಗಳ ಪ್ರಾಣಿಯಿಂದ ಏನು ಕಾಳಜಿ, ಏನಂಥ ಆರೈಕೆ ಕಂಡೀರಿ... ___ ಹೃದಯ ಸ್ಥಂಭನ ದೇಹಕ್ಕಾದರೆ ಫಕ್ಕನೆ ಸತ್ತು ಹೋಗುತ್ತೇವೆ - ಬಂಧದ್ದಾದರೆ ಹೃದಯಸ್ಪರ್ಶಿ ಭಾವಗಳು ದಿನೇ ದಿನೇ ಚೂರು ಚೂರೇ ಸಾಯುತ್ತಿರುತ್ತವೆ; ಉಳಿದುಕೊಂಡವರಲ್ಲಿ ಕೊನೆಗುಳಿವುದು ಖಾಲಿತನದ ನರಕಕ್ಕೆ ಗುರುತುಗಳಷ್ಟೇ... &&& ವತ್ಸಾ - ಕೇಳು... ಕೇಳಿದ್ದು ಅರ್ಥವಾದರೆ ಹೇಳು... ಮೌನ ಶ್ರೇಷ್ಠ ಅಂದವರ ಮಾತು ಇಷ್ಟೇ ಇಷ್ಟಾದರೂ ಅರ್ಥವಾದೀತು... ಮೌನ ಶ್ರದ್ಧಾಂಜಲಿ ಅಂದ ನಿನಗೂ ಇಷ್ಟೇ ಇಷ್ಟು ಮಾತು ಸಿದ್ದಿಸೀತು... ಹೃದಯದಿಂದ ಕೇಳು... ಕೇಳಿದ್ದು ಹೃದ್ಗತವಾದರಷ್ಟೇ ಹೇಳು... &&& ಮಳೆಯ ಮುಸ್ಸಂಜೆಗೆ ನೆನಪುಗಳು ತೋರಣ ಕಟ್ಟುತ್ತವೆ... ಮತ್ತೆ ನಗೆಯ ಮಡಿಲಾಗಿ ನೀನು ನಡೆದು ಬಂದೀಯಾ ಎಂದು ಗುಮಿಗೂಡಿದ ಮೋಡಗಳೊಡನೆ ಮಾತಿಗೆ ನಿಲ್ಲುತ್ತೇನೆ... 'ಆಡ್ಮಳೆ ಶುರು ಆತು, ಮಳೆಗಾಲಕ್ಕಿನ್ನೂ ಬಾಳ್ ದಿನ ಇಲ್ಲೆ, ಗೆಡಿದಿನದ ಕೆಲ್ಸ ಶುರು ಇಲ್ಲೆ ನಿಂದಿನ್ನೂವಾ, ಹಿಂಗ್ ಮೋಡ ನೋಡ್ತಾ ಒಬ್ನೇ ನೆಗಿ ಹೋಡೀತಿದ್ರೆ ಅವ್ತ್ಲೆ, ಬದ್ಕ್ ಪೂರಾ ಹಾಳವ್ತು ಕಡೀಗೆ ಒಂದೇ ಸತಿ ಮಳೆ ಹಿಡ್ದೋದ್ರೆ, ಹೊಳೆ ಮ್ಯಾಲ್ ಹೊಳೆ ಹೋದ್ರೂ ಏನೂ ಖಬರಿಲ್ಲೆ ಅಲ್ದಾ ನಿನ್ಗೊಬ್ಬಂಗೆ' ಹಂಗಂತ ಗೊಣ ಗೊಣ ಬೈತಾ ಒದ್ದೆ ಸೌದೀನ ಕೊಟ್ಗೆ ಕಿಬ್ಳಿಗೆ ಜೋಡಿಸ್ತಿದ್ದ ನಿನ್ನ ಮುಖ ನೆನಪಾಗಿ ಕಣ್ಮುಂದೆ ಬಂದೀಗ ಸಣ್ಣಗೆ ನಗುತ್ತೇನೆ - ಈಗಲೂ ಒಬ್ಬನೇ ನಗುತ್ತೇನೆ... ಮಳೆಯ ತಂಗಾಳಿಯೊಂದಿಗೆ ತೇಲಿ ಬಂದು ಕೂಡಲು ಕನಸುಗಳೇನಿಲ್ಲ ಇಲ್ಲೀಗ - ಮೋಡಗಳೂ ನೆನಪುಗಳನೇ ಬಿತ್ತಿ ಓಡುತ್ತವೆ ನನ್ನಂಗಳಕೀಗ... ಹುಚ್ಚುಗಳಿಲ್ಲದೆ ತೀವ್ರವಾಗಿ ಬದುಕಲಾಗದು ಅಂತಿದ್ದವನು ಹುಚ್ಚುಚ್ಚಾಗಿ ಬದುಕಿಯೇ ಇದ್ದೇನೆ ಇನ್ನೂ... ___ ಈಗಲೂ ಒಬ್ಬನೇ ನಗುತ್ತೇನೆ... &&&
ಕೇಳೋ ಇಲ್ಲೀ -
'ಬಿಡುವಾದಾಗ' ಮಾತಾಡಿಸೋಣ ಬಿಡು ಅಂದ್ಕೋಬೇಡ್ವೋ ನೀನು, ನಿನ್ನವರನ್ನೂ...
'ಬಿಡುವು ಮಾಡ್ಕೊಂಡು' ಬಂದು ಒಕ್ಕರಿಸುತ್ತೆ ಕಣೋ ಸಾವು, ಅವರನ್ನೂ ಇಲ್ಲಾ ನಿನ್ನನ್ನೂ...
ತುಂಡಿಲ್ಲದೇ ಲೆಕ್ಕ ಬರೆಯೋ ಚಿತ್ರಗುಪ್ತನೂ ನಿನ್ನ ಬಿಡುವಿನ ಕ್ಷಣಗಳ ಲೆಕ್ಕವನ್ನು ಲೆಕ್ಕಕ್ಕೆ ತೆಗೆದ್ಕೊಳ್ಳೋದಿಲ್ಲ ಆಯ್ತಾ...
ಒಡನಾಡಿ ಒಡಗೂಡಿ ಒಂದಿಷ್ಟು ನಿನ್ನನ್ನ ನೀನು ಜೀವಿಸುವುದಕ್ಕೇಂತ - ಇನ್ನಾದ್ರೂ ಒಂಚೂರೇಚೂರಾದ್ರೂ ಬಿಡುವು ಮಾಡ್ಕೊಳ್ಳೋದ್ನ ಕಲೀ ತೆಳತ್ತಾ...
ಸಾವು, ನೋವನ್ನು ಸಮಾ ಮಾತಾಡಿಸದೇ ನಿನ್ನಲ್ಲಿ ನಿನ್ನ ಬದುಕು ಮಾಗುವ ಮಾತದೆಂತೋ...!!
___ ಉಫ್!!! ಅವಳ ಚಿತ್ರದಲ್ಲಿನ ನಗು ಎಷ್ಟೆಲ್ಲಾ ಮಾತಾಡತ್ತೆ...

ನನ್ನೆದೆಯಲೂ ಉಳಿದದ್ದು ಚಿತ್ರದ ನಗುವೇ...
ಇಂಥದ್ದೇ ಮಳೆ ಮಾಸದ ಒಂದು ಸಂಜೆ, ಧೋಮಳೆಯನೂ ಲೆಕ್ಕಿಸದೇ ಅವಳ‌ ಚಿತೆ ಧಗಧಗಿಸಿ ಉರಿದುಹೋಯ್ತು - ನನ್ನೊಳಗಿನ ಬೆಳಕು ಇಷ್ಟಿಷ್ಟೇ ಸತ್ತುಹೋಯ್ತು... ___ ನೆನಪೀಗ ಮಳೆಗೂ ಆರದ ಉರಿ... *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment