Thursday, May 2, 2013

ಗೊಂಚಲು - ಏಳು x ಹತ್ತು + ಎರಡು.....

ಅರೆಜ್ಞಾನಿಯ ಒಂದಷ್ಟು ತುಂಡು ಭಾವಗಳು.....
(ದಯವಿಟ್ಟು ಇಲ್ಲಿನ ಯಾವ ಭಾವಗಳಿಗೂ ಅರ್ಥ ಕೇಳಬೇಡಿ)


ಸಾವ ಭಯ ಗೆಲ್ಲೆಂದು ಬೋಧಿಸುವಾತನನ್ನು ಸನ್ಯಾಸಿಯೆಂದು ಗೌರವಿಸಿ ಸಾಷ್ಟಾಂಗವೆರಗುತ್ತೇವೆ.
ಸಾವ ಭಯವನ್ನು ನಿಜಕ್ಕೂ ಗೆದ್ದ ಸೈನಿಕನನ್ನು ನೆನೆಸಿಕೊಳ್ಳಲೂ ಪುರುಸೊತ್ತಿಲ್ಲ.
ನಿಜವಾದ ಸನ್ಯಾಸಿ ಯಾರು..?
ಸೈನಿಕನೇ ಅಲ್ಲವೇ..??

&&&

ಅವರವರ ಆಸಕ್ತಿಯಂತೆ ಅವರವರ ಬದುಕು.
ಪ್ರತಿಯೊಬ್ಬನೂ ತನ್ನ ಆಸಕ್ತಿಗಳಿಗೆ ತಕ್ಕಂತೆ, ಅವುಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲೇ ತನ್ನ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸ್ತಾನೆ.
ಒಬ್ಬೊಬ್ಬರ ಆಸಕ್ತಿ ಒಂದೊಂದರಲ್ಲಿ.
ಹೆಣ್ಣು, ಹೊನ್ನು, ಮಣ್ಣು, ದೇವರು, ದೆವ್ವ, ರಿಕಗ್ನಿಷನ್ ಹೀಗೆ ತರಹೇವಾರಿ ಆಸಕ್ತಿಗಳು.
ಅವರವರ ಆಸಕ್ತಿಗಳ ಸುತ್ತಲೇ ಅವರವರ ಬದುಕೂ ಗಿರಕಿಹೊಡೆಯುತ್ತಿರುತ್ತದೆ.
ಒಮ್ಮೆ ಮನಕ್ಕೆ ಒಪ್ಪಿದ ವೃತ್ತದಿಂದಾಚೆ ಹೆಜ್ಜೆಯಿಡಲು ಎಲ್ಲರೂ ಹಿಂಜರಿಯುತ್ತಾರೆ.
ಯಾಕೆ.? 
ಬಾವಿಯಿಂದಾಚೆ ಇಣುಕಿದರೆ ಸಾಗರ ಕಂಡೀತು ಎಂಬ ಭಯವಾ..?

&&&

ಕನಸು ಕಲ್ಪನೆಗಳನೆಲ್ಲ ಬದಿಗೊತ್ತಿ ಕೇವಲ ವಾಸ್ತವದ, ವರ್ತಮಾನದ ಚಿಂತನೆಯನ್ನು ಮಾತ್ರ ಮಾಡುತ್ತಲಿದ್ದರೆ ಬದುಕು ಯಾಂತ್ರಿಕವಾಗುತ್ತದಷ್ಟೇ.
ಬದುಕು ಯಾಂತ್ರಿಕವಾಗುವುದಕ್ಕಿಂತ ನರಕ ಮತ್ತೊಂದಿದೆಯಾ...
ಎಲ್ಲೋ ಓದಿದ ಗಾಲಿಬ್ ರ ಮಾತು ನೆನಪಾಗುತ್ತೆ - "ಒಬ್ಬ ಬ್ರಾಹ್ಮಣ ಹೇಳಿದ್ದಾನೆ. ಈ ವರ್ಷ ತುಂಬಾ ಚೆನ್ನಾಗಿದೆ ಎಂದು. ಈ ಮನಸನ್ನು ಇದೊಂದು ವರ್ಷ ಸಂತೋಷವಾಗಿಟ್ಟುಕೊಳ್ಳಲು ಅಷ್ಟು ನೆಪ ಸಾಕು..." ಎಂಬುದು ಆ ಮಾತಿನರ್ಥ.ಅವರ ಆ ಮಾತಿನಂತೆಯೇ ಈ ಕನಸು ಕಲ್ಪನೆಗಳೆಲ್ಲ. ಅವುಗಳ ಸಾರ್ಥಕ್ಯ ಅದಷ್ಟೇ. ಮನಸನ್ನು ಆ ಕ್ಷಣಕ್ಕೆ ಖುಷಿ ಖುಷಿಯಾಗಿಡುವುದು...

&&&

ಬದುಕೆಂಬ ಮೂರು ಚರಣಗಳ ಭಾವಗೀತೆಯಲ್ಲಿ ಪಲ್ಲವಿ ಜನನವಾದರೆ - ಕೊನೆಯ ಚರಣ ಮರಣ - ನಡುವಿನ ಅನುಪಲ್ಲವಿ ಜೀವನದಂತೆ. 
ಪಲ್ಲವಿ ಮತ್ತು ಕೊನೆ ಚರಣದ ನಡುವಣ 'ಅನುಪಲ್ಲವಿಯನ್ನು' ಎಷ್ಟು ಚೆನ್ನಾಗಿ ರಚಿಸಿ ಹಾಡಬಲ್ಲೆ ಎಂಬುದು ನಮ್ಮ ಬದುಕಿನ ಯಶಸ್ಸನ್ನು ಸೂಚಿಸುತ್ತದೆ.
ಅನುಪಲ್ಲವಿಯನ್ನು ಚಂದಗೆ ರಚಿಸಿ ಹಾಡಬಲ್ಲವರಾದಾಗ ಪಲ್ಲವಿಗೂ - ಕೊನೆ ಚರಣಕ್ಕೂ ಸಾರ್ಥಕ್ಯ ಒದಗಿಸಬಲ್ಲವರಾಗುತ್ತೇವೆ...

&&&

ಎಲ್ಲೋ ಅರಳುವ ಪ್ರೇಮ - ಇನ್ನೆಲ್ಲೋ ಕರಗುವ ಕಾಮ...
ಸನ್ನಿ ಲಿಯೋನ್ ಳ ಎದೆಯ ಸಂಪತ್ತಿಗೆ ರಾತ್ರಿ ಕನಸಲ್ಲಿ ಕಾಮ ಬೆವರುತ್ತಿದ್ದರೆ, ಮುಂಜಾನೆದ್ದು ಬಾಗಿಲಾಚೆ ಕಣ್ಬಿಟ್ಟರೆ ಎದೆಯ ಸೊಬಗೇ ಇಲ್ಲದ ಪಕ್ಕದ ಮನೆ ಮಾಧುರಿ ಕಣ್ಣಲ್ಲೇ ಪ್ರೇಮದ ರಂಗೋಲಿಗೆ ಚುಕ್ಕಿಯಿಡುತ್ತಿರುತ್ತಾಳೆ..
ಬದುಕೂ ಹಾಗೇ...
ಎಲ್ಲೋ, ಹೇಗೋ, ಯಾವುದರಲ್ಲೋ ಮೂಡುವ ಪ್ರೇಮ (ಇಷ್ಟ) - ಇನ್ನೆಲ್ಲೋ, ಇನ್ಹೇಗೋ, ಈಡೇರುವ ಕಾಮ (ಇಚ್ಛೆ)...
ಸಂತೆ ನಡುವೆ ಕೈಹಿಡಿವ ಪ್ರೇಮ - ಸಂಜೆ ಏಕಾಂತದಲಿ ಕಾಮವಾಗಿ ಕೆರಳುವ ಪರಿ ಏನೋ...
ಒಣ ಹುಲ್ಲ ಬಣವೆಯಲ್ಲಿ ಕಳೆದುಕೊಂಡ ಸೂಜಿಯಂಥ ನನ್ನವಳ ಪ್ರೇಮ - ಯಾರವಳೂ ಅಲ್ಲದ ಇನ್ನೊಬ್ಬಾಕೆಯ ಬೆವರಲ್ಲಿ ಲೀನವಾಗಿ ಸಂಭ್ರಮಿಸಿತು.
ಛೆ..
ಬದುಕು - ಪ್ರೇಮ - ಕಾಮಗಳೆಲ್ಲದರ ಅರ್ಥ ವೈಶಾಲ್ಯವನ್ನು ಮೊಟಕುಗೊಳಿಸಿಬಿಟ್ಟೆನೇನೋ ಅಲ್ಲವಾ..?

&&&&&


ಯಾರದೋ ಮನಸಿಗೆ, ಇನ್ಯಾರದೋ ಬದುಕಿಗೆ ಒಲ್ಲದ ಅಥಿತಿಯಾಗಿ ಅನಿವಾರ್ಯವಾಗಿ ಬದುಕಿರಬೇಕಾದ ಪರಿಸ್ಥಿತಿ, ವಿಚಾರಶೀಲ ಮನಸ್ಸು ಮತ್ತು ದೀರ್ಘಾಯಸ್ಸು ಈ ಮೂರನ್ನೂ ಕೊಟ್ಟು ಅಲ್ಲೆಲ್ಲೋ ಕುಳಿತು ಮಜ ನೋಡುವ ಆ ದೇವರು - ಅವನಿದ್ದದ್ದೇ ಆದರೆ ಆತನ ಹಿಂಸಾ ವಿನೋದದೆಡೆಗೆ ನನ್ನ ಧಿಕ್ಕಾರವಿದೆ...

&&&&&

ದೇಹದ ಉಸಿರು ನಿಂತ ಕಾರಣಕ್ಕೆ ಕಣ್ಗಳಲ್ಲಿನ ಕನಸುಗಳೂ ಸಾಯಬೇಕೆ.
ದೃಷ್ಟಿದಾನ ಮಾಡೋಣ...
ಇನ್ಯಾರದೋ ಕನಸುಗಳಿಗೆ ಜೀವ ಬಂದು ಅಲ್ಲಿ ನಮ್ಮ ಕನಸೂ ಜೀವಂತ...

@@@

ಬಂಡೆಯ ಭಾವ ಸುತ್ತುವರಿದ ಬೆಟ್ಟಕ್ಕೆ ಮತ್ತು ಸುತ್ತ ಮೊರೆವ ನೀರಿಗೆ ಮಾತ್ರ ಅರ್ಥವಾದೀತು... ದೂರ ನಿಂತು ಸ್ವಾರ್ಥದ ಕಣ್ಣಲ್ಲಿ ನೋಡುವವರ ಮೂದಲಿಕೆಗಳ ನೋವಿಗೆಲ್ಲಾ ನಿನ್ನ ಮನ ಬಂಡೆಯಾಗಲಿ...


@@@

ತುಂಬಾ ಪ್ರೀತಿಸುವ ನಿನ್ನೊಡನೆ ಪ್ರತಿ ಬಾರಿ ಜಗಳವಾಡಿದಾಗಲೂ ಇಬ್ಬರ ಮನಸ್ಸೂ ಇಷ್ಟಿಷ್ಟೇ ಬೆತ್ತಲಾಗುತ್ತಾ ಹೋಗಿ ಬಂಧವೊಂದು ಸದ್ದಿಲ್ಲದೇ ಸಾಯುತ್ತಿರುತ್ತದೆ. ನನ್ನೊಳಗಿನ ರಾಕ್ಷಸ ವಿಜಯದ ನಗು ನಗುತ್ತಾನೆ...


&&&

ಇನ್ನೂ ಏನೋ ಬೇಕಿದೆ ಎಂಬ ತುಡಿತದಲ್ಲೇ ಬದುಕ ಈ ಕ್ಷಣ ನಗುತಿದೆ ಮತ್ತು ಆ ತುಡಿತದಲ್ಲೇ ನಗಬೇಕಿದ್ದ ಬದುಕ ಹಲ ಕ್ಷಣಗಳು ನಲುಗಿದ್ದೂ ಇದೆ...

****

ಹುಡುಗ ಹುಡುಗಿಯರೆಂಬ ಬೇಧವಿಲ್ಲದೇ ಎಲ್ಲ ಒಟ್ಟಾಗಿ ಕೂಡಿ, ಕುಣಿದು, ಕುಪ್ಪಳಿಸುವ ಸುಂದರ ಬಾಲ್ಯದ ಹುಡುಗಾಟಗಳದ್ದು ಒಂದು ತೂಕವಾದರೆ; ಹುಡುಗ ಹುಡುಗಿಯನ್ನು - ಹುಡುಗಿ ಹುಡುಗನನ್ನು ಕಣ್ಣಂಚಲ್ಲೇ ಕದ್ದು ನೋಡುವ, ಒಬ್ಬರನ್ನೊಬ್ಬರು ವಿನಾಕಾರಣ ಹುಡುಕಿಕೊಳ್ಳುವ, ಕಣ್ಣಲ್ಲೇ ನಗುವ, ಮಾತಾಡುವ, ಸಿಟ್ಟಾಗುವ ತುಂಟ ಚೆಲ್ಲಾಟಗಳ ಯೌವನದ್ದೇ ಒಂದು ತೂಕ...

####


ಭರವಸೆಯನೇನೋ ಕೊಡಬಹುದು, ಜೊತೆ ನಡೆವುದು ಸೊಗಸೂ ಹೌದು... ಆದರೆ ನಿನ್ನ ಬದುಕೆಂಬುದು ಅಂತಿಮವಾಗಿ ನೀ ಮಾತ್ರ ನಡೆಯಬೇಕಾದ ಒಬ್ಬಂಟಿ ದಾರಿ ಅನ್ನೋದು ಬದುಕ ಕಟು ವಾಸ್ತವ ಕಣೋ... ನನ್ನೊಲವಿನ ಜೀವ ನೀನು ತಾನೇ ತಾನಾಗಿ ನಡೆವುದ ಕಲೀಬೇಕೆಂಬುದು ನನ್ನಾಸೆ ಕಣೋ ಮರೀ...

&&&

ಹುಚ್ಚಮ್ಮಾ... ಹಳೆಯ ಕೊಳೆಯ ತೊಳೆದುಕೊಂಡು ಹೊಳೆಯಬೇಕೆಂದರೆ ಹೊಸ ನೀರ ಆಳದಲ್ಲಿ ಮುಳುಗೇಳಬೇಕು ಕಣೇ ಚಿನ್ನಾ... ನಿನ್ನ ಬದುಕು ಭಾವ ಎರಡೂ ವಿಸ್ತರಿಸೀತು... ಹೊಸದರೆಡೆಗೆ ನಾಕು ಹೆಜ್ಜೆ ಇಡುವ ಬಾ ಜೊತೆ ಜೊತೆಗೆ... ನಾಕು ಹೆಜ್ಜೆ ನನ್ನೊಡನೆ ಬಂದೆಯಾದರೆ ಐದನೇ ಹೆಜ್ಜೆ ನಾನಿಲ್ಲದೆಯೂ ಖುಷಿಯಿಂದಲೆ ಹೊಸದರೆಡೆಗೆ ತುಡಿವಂತೆ ಬೆಳೆದು ನಿಲ್ಲುವಿಯಂತೆ...

@@@

ಮನಸು ಎಲ್ಲೋ ಕಳೆದು ಹೋಗಿದೆ. ಸಿಕ್ಕವರು ಹಿಂದುರುಗಿಸಿ...
ಹಿಂದಿರುಗಿಸಲು ಮನಸಾಗದಿದ್ದರೆ ನಿಮ್ಮದನ್ನಾದರೂ ನಂಗೆ ಕೊಡಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, April 25, 2013

ಗೊಂಚಲು - ಏಳು X ಹತ್ತು + ಒಂದು.....

ಬಂಡೆಯಾಗೋ ಭಂಡ ಬಯಕೆಯಲ್ಲಿ ಒಂದಷ್ಟು.....

ಬಂಡೆಯಾಗಬೇಕು ನನ್ನೊಳಗು ಎಂಬ ಭಾವ ತೀವ್ರವಾಗಿ ಕಾಡುತಿದೆ...

ಬಂಡೆಗಾದರೆ ನೀರ ತಂಪು - ಬಿಸಿಲ ಬೇಗೆ ಎಲ್ಲ ಮೇಲ್ಮೈಯ ತಾಕೀತಷ್ಟೇ...
ಒಂದಷ್ಟು ಪಾಚಿ, ಇನ್ನೊಂದಿಷ್ಟು ಧೂಳಕಣ ಹೊರ ಮೈಯ ಸುತ್ತೀತಷ್ಟೇ...
ಆದರೆ ನೀರ ತಂಪು - ಬಿಸಿಲ ಬೇಗೆ ಇವ್ಯಾವುದೂ ಅದರ ಒಳಗನ್ನು ತಾಕಲಾರವು...
ಈ ಭಾವ ಸಂಬಂಧಗಳು ಬೆಸೆದುಕೊಳ್ಳುವ, ಬೆಸೆದುಕೊಂಡ ಬಂಧಗಳ ಸಲಹಿಕೊಳ್ಳುವಲ್ಲಿ ಸೋತೆ ಅನ್ನಿಸಿದಾಗಲೆಲ್ಲ (ಈ ಸಂಗತಿಯಲ್ಲಿ ನಾನು ಗೆದ್ದ ನೆನಪಿಲ್ಲ ನನ್ನಲ್ಲಿ) ಗೊಂದಲಕ್ಕೆ ಬೀಳುವ ಮನಸು ಬಂಡೆಯಾಗಲು ಬಯಸುತ್ತೆ...
ಆದರೇನ ಮಾಡಲಿ ನಾ ಸಾಗುವ ದಾರೀಲಿ ನಾನೊಬ್ಬನೇ ಇಲ್ಲ...
ದಾರಿ ತುಂಬ ಜನವೇ ಜನ...
ಕೆಲವರು ನನ್ನ ದಾಟಿ ಮುಂದೆ ಸಾಗುತ್ತಾರೆ... 
ಇನ್ಕೆಲವರು ಬೆನ್ನ ಹಿಂದೆ...
ಇನ್ನಷ್ಟು ಮಂದಿ ಜತೆಗೇ ಹೆಜ್ಜೆ ಜೋಡಿಸುತ್ತಾರೆ... 
ಹಿಂದು ಮುಂದಿನವರಿಂದ ಕಳಚಿಕೊಳ್ಳಬಹುದು...
ಆದರೆ
ಹಾಯ್ ಎಂದು ಕೈಕುಲುಕಿ ಜತೆಗೇ ಹೆಜ್ಜೆ ಇಡುತ್ತಾ ಹೆಗಲು ತಬ್ಬಿ ನಗುತ್ತಾರಲ್ಲ ಅವರನ್ನ ಕಳಚಿಕೊಂಡು ಬಂಡೆತನಾನ ಸಾಕಿಕೊಳ್ಳೋದು ಬಲು ಕಷ್ಟ ಕಷ್ಟ...
ನಾನಿವನು ನೀವಿವರಲ್ಲವಾ ಅಂತ ಮಾತಿಗಿಳಿಯುವ ಜೀವ ಇಷ್ಷಿಷ್ಟೇ ಮಾತುಗಳಲ್ಲಿ ನೀನು ನಾನುಗಳಾಗಿ ಚೂರು ಚೂರಾಗಿ ನೋವಿಗೆ ಕಿವಿ, ನಲಿವಿಗೆ ನಗುವಾಗುತ್ತಾ...
ಬಂಡೆಯ ಯಾವುದೋ ಮೂಲೆಯಲಿ ಕಂಡೂ ಕಾಣದಂತಿರೋ ಚಿಕ್ಕ ಬಿರುಕಿನಿಂದಲೇ ಒಳನುಗ್ಗಿ - ಮಾತು ಮೌನಗಳಲೆಲ್ಲ ಜತೆಗಿರುತ್ತಾ - ಹಂಚಿಕೊಳ್ಳುವ ಸುಖಕ್ಕೆ ನನ್ನನು ಪಕ್ಕಾಗುವಂತೆ ಮಾಡಿ ಅರಿವೇ ಆಗದಂತೆ ಒಳಗನೆಲ್ಲ ಆವರಿಸಿಬಿಡುತ್ತಾರೆ...
ಒಮ್ಮೆ ಒಳಬಂದು ನನ್ನವರೆನ್ನುವ ಭಾವ ಮೂಡಿಬಿಟ್ಟರೆ ಅಲ್ಲಿಗೆ ಮುಗಿಯಿತು... 
ಒಬ್ಬರೆಡೆಗೊಬ್ಬರಿಗೆ ನಿರೀಕ್ಷೆಗಳು ಸುತ್ತಿಕೊಂಡು ಮನಸು ಮತ್ತ ಕೋತಿ... 
ನಾನಿದನ್ನ ಹೇಳಿಕೊಂಡೆ, ಆತ ಇದನ್ನ ಹಂಚಿಕೊಂಡ...
ಅರೇ ಇದನ್ನಾತ ನಂಗೆ ಹೇಳಿಯೇ ಇಲ್ಲವಲ್ಲ... 
ಬಿಡು ಎಲ್ಲವನ್ನೂ ನಂಗೆ ಹೇಳೋಕೆ ಸಾಧ್ಯವಾ... 
ಅಲ್ಲ ನಂಗೆ ಹೇಳದಿದ್ದರೂ ಪರವಾಗಿರಲಿಲ್ಲ ಆದರೆ ಅವನಿಗೆ ಹೇಳಿದ...
ಅಂದರಾತ ನಂಗಿಂತ ಹತ್ತಿರದವನಾ...
ಅರೆ ನಾನ್ಯಾಕೆ ಇಷ್ಟು ಸಿನಿಕನಂತಾಡ್ತೀನಿ...
ಅವನ ಬದುಕಲ್ಲಿ ನಾನೂ ಒಂದು ಪಾತ್ರ ಅಷ್ಟೇ...
ಆದರೆ ನಾನೇ ಮುಖ್ಯಪಾತ್ರ ಆಗಬೇಕಿತ್ತಲ್ಲವಾ...
ಈಗೀಗ ಮಾತೇ ಇಲ್ಲ...
ಮನಸಾಗದಿದ್ದರೆ ಮಾತು ಬೇಡ ಬಿಡು - ಯಾವತ್ತೂ ಗೆಳೆತನ ಸಹಿಸಿಕೊಳ್ಳುವುದಾಗಬಾರದಲ್ಲವಾ...
ಆದರೂ ಹೀಗೆ ಸದ್ದೇ ಇಲ್ಲದೆ ಸಬೂಬುಗಳ ನೆರವು ಕೋರಿ ಇಂಚಿಂಚಾಗಿ ದೂರಾಗುವ ಬದಲು ಈಗಿತ್ತಲಾಗೆ ನೀನ್ಯಾಕೋ ಇಷ್ಟವಾಗುತ್ತಿಲ್ಲ ಕಣೋ ಗೂಬೆ ಅಂತ ನೇರಾ ನೇರ ಹೇಳಿ ಕಳಚಿಕೊಂಡರೆ ಎಷ್ಟೋ ಹಿತವೆನಿಸುತ್ತಿತ್ತು...
ಜೊತೆ ನಡೆವ ಖುಷಿ - ಬಿಟ್ಟು ಹೋದೀತೆಂಬ ಭಯ ಹೀಗೆ ಏನೇನೋ ಗೊಂದಲಗಳು...
ನಿರೀಕ್ಷೆಗಳಿಲ್ಲದ ವಿನಾಕಾರಣದ ಪ್ರೀತಿಯ ಮಾತಾಡುತ್ತಲೇ ಮನಸು ಗೆಳೆತನದ ಹುಟ್ಟು - ಸಾವಿಗೆ ಕಾರಣಗಳ ಹುಡುಕುತ್ತೆ... 
ಅಂದರೆ ನಿರೀಕ್ಷೆಗಳು ಉಸಿರಾಡುವುದರೊಂದಿಗೆ ಬಾಂಧವ್ಯದ ಸಾವಿಗೆ ಮುನ್ನುಡಿ ಸಿದ್ಧವಾಗುತ್ತೆ...
ಏನಂದ್ರೆ ನನ್ನ ಮನದಲ್ಲಿ ಬಂಧವೊಂದರ ಸಾವಿಗೆ ಮುನ್ನುಡಿ ಬರೆದ ನಾನೇ ಚೆಂದಗೆ ಬೆನ್ನುಡಿಯನ್ನೂ ಬರೆದು ನಿಸೂರಾಗಲಾರದೇ - ಬಂಧ ಸತ್ತಿದ್ದು ನನ್ನಿಂದಲ್ಲ ಎಂದು - ವಾದಗಳ ಮೂಲಕ, ಅಹಂನ ತೃಪ್ತಿಗಾಗಿ ಸಂಬಂಧವನ್ನು ಪ್ರಜ್ಞಾಪೂರ್ವಕವಾಗಿ ಹಿಡಿದಿಡಲು ಬಯಸುವದು ನನ್ನ ಮೂರ್ಖತನವಲ್ಲವಾ...
ಇಷ್ಟಕ್ಕೂ ಭಾವನಾತ್ಮಕ ಬಂಧಗಳ ಅಳಿವು - ಉಳಿವು ನಿಂತಿರುವುದು ನಡುವೆ ಕಚ್ಚಿಕೊಂಡಿರೋ ಭಾವತೀವ್ರತೆಯಲ್ಲಲ್ಲವಾ...
ಅಂದ್ರೆ ಭಾವಿಸಿಕೊಂಡಷ್ಟೇ ಬಂಧ...
ಭಾವವೆಂದರೆ ಮನೋ ಮೂಲದ್ದು ಮತ್ತು ಮನಸು ಎಂದಿಗಿದ್ದರೂ ಮರ್ಕಟವೇ...
ಈ ಹಾಳು ಮನಸು ತನ್ನ ಭಾವಗಳನ್ನ, ತಾನೇ ಬೆಸೆದುಕೊಂಡ ಬಂಧಗಳನ್ನ ಪ್ರೀತಿಯಿಂದ ನಿಭಾಯಿಸೋಕೆ ಕಲಿಯೋದು ಯಾವಾಗಲೋ...
ಇರುವ ಬಂಧಗಳನೇ ಸರಿಯಾಗಿ ನಿಭಾಯಿಸಲಾರದ ನಾನು ಹೊಸ ಬಂಧಗಳೆಡೆಗೆ ತುಡಿಯುವುದ್ಯಾಕೋ...
ಇಂಥ ಸಂಗತಿಗಳ ಸುಳಿಗೆ ಸಿಕ್ಕಿ ಮನಸು ಗೊಂದಲಗಳ ಗೂಡಾದಾಗಲೆಲ್ಲ ನಾನು ಮತ್ತೆ ಬಂಡೆಯಾಗಬೇಕೆನಿಸುತ್ತೆ - ಬಿರುಕುಗಳೇ ಇಲ್ಲದ ಉರುಟಾದ ಬಂಡೆ....
ಥುತ್ - ಒಳ್ಳೇ ಗರತಿಯ ವೇಷದಲ್ಲಿರೋ ಸೂಳೆಯಂತಾಡೋ ಈ ನನ್ನ ಮನಸಿಗೆ ಏನೆನ್ನಲಿ...

***

ನನಗೇ ಅರ್ಥವಾಗದ ನಾನು.... 
ಗೊಂದಲಗಳ ಗೂಡು...
ಇನ್ನಾರಿಗಾದರೂ ಅರ್ಥವಾದೇನಾ..?
ಅರ್ಥವಾಗುವ ಜರೂರತ್ತಿದೆಯಾ...??
ಉತ್ತರಗಳಿಲ್ಲದ ಅಡ್ನಾಡಿ (ಗೊಂದಲದ) ಪ್ರಶ್ನೆಗಳೇ ತಲೆತುಂಬ...
ಆದರೆ ಗೆಳೆತನದೆಡೆಗಿನ ನನ್ನ ಮನದ ಗೊಂದಲಗಳ ಬಗ್ಗೆ ಇಷ್ಟೆಲ್ಲ ಬರೆದ ಮೇಲೂ ಒಂದು ಮಾತು ಒಪ್ಪಿಕೊಳ್ಳಲೇ ಬೇಕಿದೆ...
ಪ್ರೀತಿ, ವಿಶ್ವಾಸ, ಗೆಳೆತನದ ಭಾವಗಳು ಮನಸಿಗೆ ಬೇಡವೆಂದರೂ ಖುಷಿಯನ್ನೇ ಕೊಡುತ್ತವೆ...
ಅದಕ್ಕೇ ಒಂದು ಗೆಳೆತನ ಕಳಚಿಕೊಂಡರೆ ಇನ್ನೊಂದರೆಡೆಗೆ ನಿಧಾನವಾಗಿಯಾದರೂ ಕೈಚಾಚಿ ನಗುತ್ತೇನೆ...
ಈ ಕ್ಷಣವನ್ನು ಮಾತ್ರ ಪ್ರೀತಿಸೋ ನಾನು - ಈ ಕ್ಷಣ ದಕ್ಕಿದ ಗೆಳೆತನಾನೂ ಅಷ್ಟೇ ಪ್ರೀತಿಸ್ತೇನೆ...
ಮತ್ತದೇ ಗೊಂದಲಗಳು ಹೊಸ ಮುಖದಲ್ಲಿ ನಗುತ್ತವೆ...


Monday, April 22, 2013

ಗೊಂಚಲು - ಏಳು X ಹತ್ತು.....


ನಿನ್ನ ಸ್ನೇಹದ ನೆನಪ ಗುಂಗಲ್ಲಿ.....

ಈ ಮರಳು ತೀರದಲಿ, ಸಂಜೆ ಸವೆಯುವ ಹೊತ್ತಲ್ಲಿ, ಅಲೆಗಳು ಪಾದ ತೋಯಿಸುತಿದ್ದರೆ...
ಹೆಜ್ಜೆಗೆ ನಿನ್ನ ಗೆಜ್ಜೆ ದನಿಯ ಜತೆಯಿದ್ದಿದ್ದ - ಪಕ್ಕ ಕೂತು ಸಾಗರ ಮತ್ತು ಬಾನು ಸಂಧಿಸುವ ಬಿಂದುವಿನಲಿ ಕಣ್ಣ ನೆಟ್ಟು ನಗೆಯ ಕನಸ ಹೊಸೆಯುತಿದ್ದ - ಆ ದಿನಗಳ ನೆನಪಾಗುತ್ತೆ ಗೆಳತಿ...

ಬೆಳಕ ಹುಡುಕಿ ಹೊರಟೆ - ಕತ್ತಲ ಸೊಬಗು ದಕ್ಕಿತು...
ನಿನ್ನನರಸಿ ಅಲೆದೆ - ನನ್ನೆ ನಾ ಕಂಡುಕೊಂಡೆ...

ಕತ್ತಲಲ್ಲು ಸೊಬಗಿತ್ತು - ನನ್ನೊಳಗೂ ಒಂದಿಷ್ಟು ಖುಷಿಯಿತ್ತು...
ಆದರೂ ಬದುಕಿಗೆನೋ ಕೊರತೆ...
ನೀನಿಲ್ಲ ಮತ್ತು ಬೆಳಕಿಲ್ಲ...

ಛೆ -
ನಾನು ಆ ಕವಿತೇನ ಬರೆಯಲೇಬಾರದಿತ್ತು...
ಬರೆದರೂ ಅಲ್ಲಿಯ ಪಾತ್ರಕ್ಕೆ ನಿನ್ನ ಗುಣಗಳ ಆವಾಹಿಸಬಾರದಿತ್ತು...
ಆದರೇನ ಮಾಡಲಿ ನಾನೂ ಮನುಷ್ಯನೇ ತಾನೆ...ಸಾಮಾನ್ಯರಲ್ಲಿ ಸಾಮಾನ್ಯ...
ಸಂಗಾತಿಯನರಸುವಷ್ಟು ಬೆಳೆದ ಮನಸೊಂದು ತನ್ನ ಸಂಗಾತಿಯ ಕನಸಿಗೆ ಜೀವ ತುಂಬುವಾಗ ತನ್ನದೇ ಸುತ್ತಲಿನ ಜೀವಗಳ ಗುಣಗಳನ್ನು ಆ ಸಂಗಾತಿಯ ಕನಸಿಗೂ ತುಂಬುವುದು ಸಹಜ ಮತ್ತು ಸಾಮಾನ್ಯ...
ನಾನು ಗಂಡು ಪ್ರಾಣಿ.. ಹಾಗಾಗಿ ಅಮ್ಮನ ಮಮತೆ, ತಂಗಿಯ ಕೀಟಲೆ, ಅಕ್ಕನ ಅಕ್ಕರೆ, ಅತ್ತೆಯ ಆಪ್ತ ನಗು ಮತ್ತು ನಿನ್ನ ಸರಳ ಪ್ರಶಾಂತ ಹಾಗೂ ಮೌನದಿಂದಲೆ ಬಂಧಗಳ ಸಲಹಿಕೊಂಬ ಗುಣಗಳ ನನ್ನ ಸಂಗಾತಿಯ ಕನಸಿಗೆ ಆವಾಹಿಸಿದ್ದು ತಪ್ಪಾ...
ಎಂಥ ಚಂದದ ಗೆಳೆತನವೊಂದು ಹಬ್ಬಿ ನಿಂತಿತ್ತು ನಮ್ಮಿಬ್ಬರ ನಡುವೆ...
ಎಲ್ಲ ಹೇಳಿಕೊಳ್ಳಬಹುದಾದ, ಹೇಳದೆಯೂ ನೋವುಗಳ ಅರಿಯಬಹುದಾದ, ನೋವಿಗೂ - ನಲಿವಿಗೂ ಹಂಚಿಕೊಳ್ಳಲು ಇನ್ನೊಬ್ಬರಿಲ್ಲವೇನೋ ಎಂಬಂತೆ ಒಬ್ಬರನ್ನೊಬ್ಬರು ಅಂಟಿಕೊಂಡಂತ ಸ್ವಚ್ಛ ನಗೆಯ ಗೆಳೆತನ...
ಈವರೆಗೆ ನಾವು ಆಡದ ಮಾತು, ಹಂಚಿಕೊಳ್ಳದ ಮೌನ ಹೇಳಿಕೊಳ್ಳಲೊಂದಾದರೂ ಇದೆಯಾ...
ಎದುರಿಗಿಲ್ಲವಾದಾಗಲೂ, ಇತರ ಸಾವಿರ ಜನರೊಟ್ಟಿಗಿದ್ದಾಗಲೂ ನಿನ್ನ ಮನಸು ನನ್ನೊಂದಿಗೇ ಮಾತಾಡುತ್ತಿರುತ್ತದೆಂಬುದು ನಂಗೂ ಗೊತ್ತು ಮತ್ತು ನನ್ನ ಮೌನವೂ ನಿನ್ನೊಂದಿಗೆ ಹರಟುತ್ತಲೇ ಇರುತ್ತೆ ಸದಾ ಎಂಬುದು ನಿಂಗೊತ್ತು...
ಯಾವುದೋ ನೋವಲ್ಲಿ, ತುಂಬ ಪ್ರೀತಿಸುವ ಹುಣ್ಣಿಮೆ ಚಂದಿರನ ಬಗೆಗೂ ಯಾಕೋ ಒಮ್ಮೊಮ್ಮೆ ಬೇಸರ ಮೂಡುತ್ತೆ ಕಣೇ ನಗುವ ಕೋಟಿ ತಾರೆಗಳ ಮಿನುಗೋ ಖುಷಿಯ ಒಂದಿಷ್ಟು ಕಿತ್ತುಕೊಂಡನೇನೋ ಈ ಚಂದಿರ ತನ್ನ ಬೆಳದಿಂಗಳ ಚೆಲ್ಲಿ ಅನ್ನೋ ಭಾವ ಕಾಡುತ್ತೆ ಅಂದಾಗ ನಾನು; ಅಮಾವಾಸ್ಯೆ ಪೂರ್ತಿ ಮಿನುಗೋ ತಾರೆಗಳಿಗಾಗಿಯೇ ಕಣೋ ಇರೋದು ಅಂತ ಸಂತೈಸುತಿದ್ದವಳು ನೀನು...
ರಂಪಾ ರಂಪ ಜಗಳ ಮಾಡಿ ಮುಖ ತಿರುಗಿಸಿಕೊಂಡು ಕೂತು ಐದೇ ನಿಮಿಷಕ್ಕೆ ‘ನಂಗಿನ್ನೂ ಸಿಟ್ಟು ಹೋಗಿಲ್ಲ, ನಾನು ಮಾತಾಡಲ್ಲ’ ಅಂತ ಮೆಸೇಜ್ ಮಾಡ್ತಾ ಇದ್ದೋಳು ನೀನು - ಮತ್ತದು ನಂಗೆ ನೀ ಮಾತಾಡಬಹುದು ಎಂಬುದರ ಸೂಚನೆ ಆಗಿರುತ್ತಿತ್ತು - ಪಕ್ಕದಲ್ಲೇ ಕೂತು ಮೆಸ್ಸೇಜಲ್ಲಿ ಸಿಟ್ಟಿನ ಮಾತಾಡೋ ನಿನ್ನ ಕಂಡು ನಕ್ಕು ನಕ್ಕು ಕಣ್ಣೀರಾದ ಸಂಜೆಗಳೆಷ್ಷೋ...
ಅಂಥದ್ದು ಇಂದಿಗೆ ಅದೆಷ್ಟು ಸಂಜೆಗಳು ಸರಿದು ಹೋದವು ಈ ನದಿಯ ತೀರದಲಿ ನಿನ್ನ ಪಾದದ ಗುರುತು ಕಾಣದೆ...
ಎಲ್ಲ ಕಳೆದು ಹೋದ ಭಾವ - ಮಾತುಗಳೆಲ್ಲಾ ಮೌನದ ಮೊರೆಹೋಗಿ ಮನಸು ಮೂಕ ಮೂಕ - ಜಾರಲಾರದು ಕಣ್ಣ ಹನಿ, ಅದಕೂ ಗಂಡಸೆಂಬ ಅಹಂಕಾರ - ಹಿಂಡುವ ತುಂಡು ಭಾವಗಳೆಲ್ಲಾ ಭಂಡ ಮನಸಲ್ಲೆ ಬಂಧಿ...
ಅಲ್ವೇ - ನನ್ನೊಳಗನೆಲ್ಲ ನನ್ನಷ್ಟೇ ಚೊಕ್ಕವಾಗಿ ತಿಳಿದವಳು ನೀನು...
ಯಾರನೂ ಪ್ರೇಮಿಸಲಾರದ ನಾನು ವಿನಾಕಾರಣ ನನ್ನೊಳಗೆ ಮೂಡಿ ನಿಲ್ಲೋ ಪ್ರೇಮದ ಕನಸಿನ ಆಲಾಪಗಳನ್ನು ವಿಶ್ವಾಸದ ಗೆಳತಿಯಾದ ನಿನ್ನೊಂದಿಗಲ್ಲದೆ ಇನ್ಯಾರೊಂದಿಗೆ ಹಂಚಿಕೊಳ್ಳಲೇ...
ಒಂದಿಷ್ಟು ಕೀಟಲೆಗೆ ನೀನೆ ನನ್ನ ಪ್ರೇಮಿಕೆ ಎಂಬಂತೆ ಮಾತಾಡಿದ್ದು ತಪ್ಪಾ..?
ಇಷ್ಟಕ್ಕೂ ಎದುರಾ ಎದುರು ನಾವಿಬ್ಬರೂ ಅದೆಷ್ಟು ಬಾರಿ ಹಾಗೆ ಮಾತಾಡಿಲ್ಲ....
ಅಂದರೆ ಮಾತಾಡಿದ್ದು ತಪ್ಪಲ್ಲ ಹಾಗೆ ಬರೆದು ಪ್ರಕಟಿಸಿದ್ದು ತಪ್ಪು ಅಥವಾ ನಿನ್ನ ಗುಣಗಳ ಇನ್ಯಾರಿಗೋ ಆವಾಹಿಸಿದ್ದು ತಪ್ಪಾ...?
ಅಷ್ಟು ಸಣ್ಣ ಸಲಿಗೆ ಇಷ್ಟು ಕಾಲದ ನಮ್ಮ ಗೆಳೆತನವ ಕೊಂದೀತಾ...?
ಕವಿ ಮನದಲ್ಲಿ ಕಲ್ಪನೆಯ ಕೂಸು ಅರಳಿ ಕವನವಾಗಿದ್ದೇ ತಪ್ಪಾಗಿಹೋಯಿತಾ..?
ಕಾರಣವೇನು ಈ ಪರಿಯ ಕೋಪಕ್ಕೆ...?
ನಿಜದ ಕಾರಣವಾದರೂ ಹೇಳಿ ಒಂದು ಜಗಳವನ್ನಾದರೂ ಮಾಡು ಬಾ ಒಮ್ಮೆ...
ಕಣ್ಣ ಹನಿಯೊಂದಿಗೆ ಭಾವಗಳು ಕರಗಿ ಮನಸು ಹಗುರಾಗುವುದಾದರೆ ಅತ್ತು ಬಿಡು ತಪ್ಪಿಲ್ಲ - ಕಾಡುವ ನೆನಪುಗಳೊಂದಿಗೆ ಅಳು ನಿರಂತರವಾಗದಿರಲಿ ಮತ್ತು ಖುಷಿಗಳಿಗೊಂದಷ್ಟು ಕಣ್ಣ ಹನಿಗಳು ಬಾಕಿ ಇರಲಿ ಅಂತ ನಿನಗಂದು ಹೇಳಿದ್ದ ನಾನೇ ಇಂದು ಇಲ್ಲಿ ಖುಷಿಯಿಲ್ಲದೇ ಅಳುವ ನಿತ್ತರಿಸಿಕೊಳ್ಳಲಾರದೇ ತತ್ತರಿಸುತಿದ್ದೇನೆ...
ಬಿಡು ಅಂದರೆ ಬರಹವನ್ನೇ ಬಿಟ್ಟೇನು - ಈ ದೂರ ಸಹಿಸಲಾರೆ - ಇನ್ನೆಂದೂ ನಿನ್ನಿಷ್ಟಕ್ಕೆ ವಿರುದ್ಧವಾಗಲಾರೆ - ನಿನ್ನಿಷ್ಟವೆ ನನ್ನಿಷ್ಟ ಕೂಡಾ - ಆ ಇಷ್ಟವೆ ಇಷ್ಟೆಲ್ಲಾ ಸಲಿಗೆ, ಸ್ವಾತಂತ್ರ್ಯ್ವ ಕೊಟ್ಟದ್ದು - ನಿನ್ನ ಕೆಣಕಿ ಕಾಡುವ ಖುಷಿಯ ಮೂಲ ಕಣೆ - ಪುಟಾಣಿ ಗೆಳತೀ ಈ ಜೀವದಲ್ಲಿ ಉಸಿರಿರುವವರೆಗೂ ನೀ ನನ್ನ ಪಾಲಿಗೆ ಜೀವದ ಗೆಳತಿ ಅಷ್ಟೇ - ಭಯ ಬೇಡ ಉಳಿದೆಲ್ಲ ಗೌಣ... 
ಗೆಳೆತನ ಮತ್ತೆ ನಗುವ ಕ್ಷಣಕಾಗಿ ಕಾಯುತ್ತ ಕಾಯುತ್ತ - ನೀ ಎದ್ದು ಹೋದ ಜಾಗದಲ್ಲೇ ಕೂತಿದ್ದೇನೆ...
ವಿಶ್ವಾಸ ನಗಲಿ ಮತ್ತೆ...

Sunday, April 7, 2013

ಗೊಂಚಲು - ಅರವತ್ತೊಂಬತ್ತು.....

ಕಪ್ಪು ಮೋಡ - ನನ್ನ ಹುಡುಗಿ.....

ಅಮಾವಾಸ್ಯೆಯ ಕಪ್ಪು ಕತ್ತಲು
ಮೈಯ ಬಣ್ಣದಲ್ಲಿ...
ಕೋಟಿ ತಾರೆಗಳ ಸುಳಿ ಮಿಂಚಿದೆ
ಕಣ್ಣ ಬಯಲಲ್ಲಿ...

ನಿನ್ನ ಸ್ವಚ್ಛ ಒಲವ ಸೆಳವು

ಎನ್ನ ಬೆನ್ನ ಹುರಿಯ ಬಲವು...
ನೀ ಒಲಿದ ಘಳಿಗೆಯೆನ್ನ
ಬದುಕು ಪಡೆದ ಮೊದಲ ಗೆಲುವು...

ಕಪ್ಪೆಂದು ಹಳಿವುದದು

ಡೊಂಕು ಮನದ ಲೋಕದ ರೀತಿ...
ನಿನ್ನೆಡೆಗೆ ಸೆಳೆವುದೆನ್ನ
ಹುಳುಕಿಲ್ಲದ ನಿನ್ನ ಪ್ರೀತಿ...

ಕಪ್ಪಾದರೇನಂತೆ

ಸುಕ್ಕಾಗೋ ಮೈಯ ಬಣ್ಣ...
ನಮ್ಮೊಳಗೆ ಪಕ್ಕಾದ
ಒಲವಲಿದೆಯಲ್ಲ ನೂರು ಕನಸಿಗೀಗ ಮಳೆಬಿಲ್ಲ ಬಣ್ಣ...

ಬರಡಾದ ಎದೆ ನೆಲಕೆ

ಒಲವೊಂದೆ ಜೀವಜಲ ನೋಡ...
ಎನ್ನೆದೆಗೆ ಒಲವ ಸುರಿಸೋ
ನೀನೆನ್ನ ಕಪ್ಪು ಮೋಡ...

ಬೆಸೆಯದು ಬಂಧಗಳ

ಜಾತಿ, ಧರ್ಮ, ಬಣ್ಣಗಳ ಮಿತಿಯ ಭ್ರಾಂತಿ...
ಬದುಕ ಬೆಳಗುವುದೊಂದೆ ಅದು
ಒಲವ ಹೊಂಬೆಳಕ ಎದೆಯ ಕಾಂತಿ...

Monday, April 1, 2013

ಗೊಂಚಲು - ಅರವತ್ತೆಂಟು.....

ಕನಸೇ -
ನನ್ನೀ ಮನಸೆಂಬುದು ಒಂದು ಬಂಡೆ...
ನಾನು ನೀನಿಲ್ಲದೆಯೂ ಬದುಕಬಲ್ಲೆ ಎಂದು ಹಮ್ಮಿನಿಂದ ಮಾತಾಡಿದ್ದೆ ಅಂದು ನಿನ್ನೊಂದಿಗೆ...
ಬದುಕಿ ಬಿಟ್ಟೀಯ ನಾನಿಲ್ಲದೆಯೂ - ಆದರೆ ಹೊತ್ತು ಮುಳುಗೋ ಹೊತ್ತಲ್ಲಿನ ನಿಗಿ ನಿಗಿ ಏಕಾಂತದಲ್ಲೂ ವಿನಾಕಾರಣ ಸ್ವಚ್ಛಂದ ನಗುವ ನಗುತಿದ್ದೆಯಲ್ಲ ನಿನ್ನೊಳಗೇ ನೀನು - ಆ ನಗುವ ಜೀವಿಸಬಲ್ಲೆಯಾ ನಾನಿಲ್ಲದೆಯೂ ಅಂತ ಕೇಳಿದ್ದೆ ನೀನು...
ಹಾಗಂದು ನನ್ನ ಹಮ್ಮನ್ನು ಕೊಲ್ಲಲೆಂದೇ ಬಿಟ್ಟು ಹೊರಟೆಯಾ ನೀ ಕರುಣೆ ಕಳಚಿ...
ಹಮ್ಮು ಕೊಲ್ಲಲು ಇಷ್ಟು ದೊಡ್ಡ ಶಿಕ್ಷೆಯಾ...:(
ಒಪ್ಪುತ್ತೇನೆ ನನ್ನೊಳಗಣ ಆ ಸ್ವಚ್ಛ ನಗು ಅಧಿಕೃತವಾಗಿ ಸತ್ತು ಹೋಗಿ ಅದಾಗಲೇ ನಲವತ್ತೊಂದು ಮಾಸಗಳು ಸರಿದು ಹೋದವು ಸದ್ದಿಲ್ಲದೆ....
ಹುಂಬ ನಾನು ಈಗಲೂ ನಗುತ್ತೇನೆ ಬಾಯ್ತುಂಬ...
ಆದರೆ ನಗುವ ಮೊಗದ ಹಿಂದಣ ಮನದ ದನಿಗೆ ಕಿವಿಯಾದರೆ ಅಲ್ಲಿ ನಿನ್ನ ಸಾವಿನ ಚರಮಗೀತೆಯ ರಿಂಗಣ ಮಾತ್ರ ಕೇಳುವುದು ಘೋರವಾದರೂ ಸತ್ಯ...
ತುಂಬ ಪ್ರೀತಿಸುವ ಹುಣ್ಣಿಮೆ ಚಂದಿರನಲ್ಲೂ ಯಾಕೋ ಈಗೀಗ ಕಲೆಯೇ ದೊಡ್ಡದಾಗಿ ಕಾಣಿಸ್ತಿದೆ...
ನಗುವ ಕೋಟಿ ತಾರೆಗಳೆಲ್ಲ ನಿನ್ನ ನೆನಪೊಂದಿಗೆ ಬೆಸೆದು ನಗುವ ಮರೆತಂತೆ ಭಾಸವಾಗಿ ಮನದಾಳವ ಹಿಂಡುತಿವೆ...
ನನ್ನಲೇ ಅರಳಬಹುದಾದ ಪ್ರೇಮದಿಂದ ಎಷ್ಟೇ ದೂರ ಓಡಿದರೂ - ಅಲ್ಲೆಲ್ಲೋ ಯಾರ್ಯಾರ ನಡುವೆಯೋ ನಗುವ ಪ್ರೇಮವ ಕಂಡಾಗ ಯಾಕೋ ಎದೆಗೆ ನಾಚಿಕೆ ಮುಳ್ಳು ಚುಚ್ಚಿದ ಸಣ್ಣ ನೋವಿನ ಭಾವ ಕಾಡುತ್ತೆ ಒಮ್ಮೊಮ್ಮೆ...
ನನ್ನದಲ್ಲದ ಊರಲ್ಲಿ, ನನ್ನದಲ್ಲವೇ ಅಲ್ಲದ ಕಾರ್ಯಕ್ಷೇತ್ರದಲ್ಲಿ, ನನ್ನ ಮಿತಿಗೂ ಮೀರಿ ಮಿರಿ ಮಿರಿ ಮಿಂಚುತ್ತ ಹಲ್ಲುಗಿಂಜುವಾಗ - ಎಲ್ಲೋ ಮನದಾಳದಲ್ಲಿ 'ಆರುವ ದೀಪ ಅತಿಯಾಗಿ ಉರಿಯುವ' ಭಾವ ಮತ್ತೆ ಮತ್ತೆ ಚುಚ್ಚುವುದೇಕೆ...
ನಗುವ ಹಂಬಲವ ಕಳಚಿಕೊಳ್ಳಲಾಗದೇ - ಮನದುಂಬಿ ನಗಲೂ ಆಗದೇ ಒಳಗೊಳಗೇ ನರಳಿ ಸೋತು ಶರಣಾಗಿ ನಿನ್ನೆದುರು ಮಂಡಿಯೂರಿದ್ದೇನೆ...
ಒಂದೇ ಒಂದು ಕ್ಷಣ ಎದೆ ಬಾಗಿಲಲಿ ನಕ್ಕು, ಕೈಯಾಸರೆ ನೀಡಿ ಬದುಕಿಗೆ ಜೀವ ತುಂಬುವೆಯಾ...
ಬರುವೆಯಾದರೆ ಮತ್ತೆ ಒಂದು ಹೆಜ್ಜೆ ಜೊತೆಯಾಗಿ - ನಾ ನಂಬದಿದ್ದ ಜನ್ಮಾಂತರಗಳನ್ನೂ ಕಣ್ಮುಚ್ಚಿ ನಂಬಿಯೇನು...
ನೀ ಬರುವ ಆ ಘಳಿಗೆಗಾಗಿ...
ಆ ಒಂದು ಕ್ಷಣದ ನಗುವಿಗಾಗಿ ಈ ದೇಹದುಸಿರ ಸಾವನ್ನೂ ಪ್ರೀತಿಯಿಂದಲೇ ಎದುರುಗೊಂಡೇನು...
ಜೀವ ಅಳಿವ ಮುನ್ನ ಬಂದು ಹೋಗೊಂದು ಘಳಿಗೆ ಕರುಣೆ ತೋರಿ ನನ್ನೆಡೆಗೆ - ಮನದುಂಬಿ ಜೀವಿಸುವ ಓ ನನ್ನ ಕನಸೇ...

Thursday, March 28, 2013

ಗೊಂಚಲು - ಅರವತ್ತು ಮತ್ತು ಏಳು.....


ನಾಕು ಪ್ರಶ್ನೆ - ಹಗುರಾಗೋ ಮಾತು...

ನೀನೇನೋ ಎಂಬುದು ಅವಳ ಪ್ರಶ್ನೆ...

ನನ್ನ ಮನದಂತೆ ನಾನು...ಒಂದಷ್ಟು 'ನಾನು'ಗಳ ಪ್ರೀತಿಸುತ್ತಾ - ಪ್ರೀತಿಯೆದುರು ಇಷ್ಟಿಷ್ಟೇ 'ನಾನೆಂಬುದ' ಕಳಚಿಕೊಳ್ಳುತ್ತಾ - ಪೂರ್ಣತ್ವವ ಬಯಸದೇ ಅಪೂರ್ಣತೆಯಲ್ಲೇ ಸೊಬಗಿದೆಯೆಂದು ನಂಬುತ್ತಾ - ಕ್ಷಣ ಕ್ಷಣಕೂ ಅದಲು ಬದಲಾಗುವ ನನ್ನೊಳಗಿನ ನನ್ನದೇ ಭಾವಗಳಿಗೆ ಬೆಚ್ಚಿಬೀಳುತ್ತಾ - ಪರೀಕ್ಷೆ ನಡೆಸಿ ನಂತರ ಪಾಠ ಹೇಳೋ ಅನುಭವದ ನೆಲೆಯ ಬದುಕಿನ ಕಲಿಕಾ ವಿಧಾನದೆಡೆಗೆ ಒಮ್ಮಲೇ ಬೆರಗು ಮತ್ತು ಆತಂಕದಿಂದ ನೋಡುತ್ತಾ - ಬದುಕು ಹೇಳುವ ಪಾಠಗಳ ಅರ್ಥೈಸಿಕೊಳ್ಳಲಾಗದೇ - ಬದುಕಿಗೆ ಬೆನ್ನು ತಿರುಗಿಸಲೂ ಇಷ್ಟವಾಗದೇ - ಈ ಎಲ್ಲ ತೊಳಲಾಟಗಳು - ಬುದ್ಧಿ ಹುಟ್ಟು ಹಾಕೋ ದ್ವಂದ್ವಗಳು - ಅವೆಲ್ಲವುಗಳ ನಡುವೆ ಮನದ ಸನ್ನಿಧಿಯಲ್ಲಿ ಮೂಡುವ ಮಧುರ ಭಾವಗಳು - ಇವುಗಳನೆಲ್ಲ ಒಳಗೊಂಡು ನಗುತಿರುವ ಬದುಕೆಂಬ ಪಾಠ ಶಾಲೆಯ ಅತಿದಡ್ಡ ವಿದ್ಯಾರ್ಥಿ ನಾನು...



ನಿನ್ನ ಬರಹ ಎಂದರೇನೋ ಎಂಬುದು ಇನ್ನೊಂದು ಪ್ರಶ್ನೆ...

ನನ್ನೊಳಗಣ ಭಾವ ಮತ್ತು ನನ್ನ ಬದುಕು ಅದು ನನ್ನ ಬರಹ...
ಮನದ ಭಾವ ಶಬ್ದವಾಗಿ ಆಚೆ ಬಂದಾಗಲೂ ಅದು ನನ್ನದೇ ಭಾವ ಎಂದು ನನಗೆ ಪ್ರಾಮಾಣಿಕವಾಗಿ ಅನ್ನಿಸಿದ ಕ್ಷಣ ನಾನು ಸಂಭ್ರಮಿಸುತ್ತೇನೆ.
ಪ್ರತೀ ಕ್ಷಣವ ಹಾಗೇ ಬದುಕಬೇಕೆಂದು ಪ್ರಯತ್ನಿಸುತ್ತೇನೆ.
ಒಮ್ಮೊಮ್ಮೆ ಸೋಲುತ್ತೇನೆ...:(
ನಾ ಬರೆದ ಯಾವುದೇ ಬರಹ ಬರೆದಾದ ಆ ಕ್ಷಣ ನನ್ನಲ್ಲಿ ಒಂದು ಸಂತೃಪ್ತ ಭಾವ ಅಥವಾ ಏನನ್ನೋ ಇಳುಕಿ ಹಗುರಾದ ಭಾವವನ್ನು ಮೂಡಿಸುತ್ತಲ್ಲ ಆ ಖುಷಿಯೇ ಅಂತಿಮ...ಆ ಬರಹಾನ ಓದಿದವರೂ ಇಷ್ಟಪಟ್ಟರೆ ಅದು ಬೋನಸ್ ಖುಷಿ...ಬೋನಸ್ ಗಾಗಿಯೇ ಬರೆಯುವುದಿನ್ನೂ ರೂಢಿಯಾಗಿಲ್ಲ...(ಬೋನಸ್ ಗಾಗಿ ಬರೆಯ ಯತ್ನಿಸಿದಾಗ ನಂಗೆ ಪೂರ್ತಿ ಖುಷಿ ದಕ್ಕಿಲ್ಲ) ಒಮ್ಮೊಮ್ಮೆ ಇನ್ಯಾರದೋ ಭಾವ ಅದು ನನ್ನದೂ ಭಾವವೇ ಅಂತನ್ನಿಸಿದಾಗ ಅದಕ್ಕೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿಯೇನು...ನನ್ನ ಬರಹ ಸಹಜವಾಗಿಯೇ ನನ್ನನ್ನು ಇನ್ನಷ್ಟು ವಿಸ್ತಾರವಾಗಿಸುತ್ತಾ, ಬೆಳೆಸುತ್ತಾ, ನನ್ನೊಳಗನ್ನು ಬೆಳಗಿಸುತ್ತಾ ಸಾಗುತ್ತದೆಂಬುದು ನನ್ನ ಪ್ರಾಮಾಣಿಕ ನಂಬಿಕೆ...ಬೆಳವಣಿಗೆ ಹೊರತೋರದೆ ಇದ್ದೀತು ಆದರೆ ನನ್ನೊಳಗದು ಇದ್ದೇ ಇದ್ದೀತು...
ನಿಜ ಒಪ್ಪುತ್ತೇನೆ ತೀರ ನಮ್ಮ ಹತ್ತಿರದವರು, ಪ್ರಜ್ಞಾವಂತರೂ ಆಗಿರುವವರು ಒಂದು ಮಾತು ಹೇಳಿದಾಗ ನಾವು ನಮ್ಮನ್ನು ವಿಮರ್ಶಿಸಿಕೊಳ್ಳಬೇಕಾದ್ದು ಅಗತ್ಯವೇ...ಆದರೂ ಯಾವುದೇ ಬರಹಗಾರನ ಎಲ್ಲಾ ಬರಹಗಳೂ ಅತ್ಯುತ್ತಮವಾಗಿಯೇ ಇರಲು ಮತ್ತು ಎಲ್ಲರಿಗೂ ಖುಷಿಯ ನೀಡಲು ಸಾಧ್ಯವಿಲ್ಲ ಎಂಬುದನ್ನೂ ಮರೆಯಲಾಗದಲ್ಲವಾ...
ನಮ್ಮ ಯಾವುದೋ ಬರಹದ ಯಾವುದೋ ನಾಕು ಸಾಲು ಯಾರೋ ಓದುಗನಿಗೆ ಒಂದು ಹೊಸ ಯೋಚನೆ, ಹೊಸ ಖುಷಿ, ಈ ಭಾವ ತನ್ನದೆನ್ನುವಂಥ ಭಾವವನ್ನು ಮೂಡಿಸಿದರೆ ಅಲ್ಲಿಗೆ ಬರಹಗಾರನ ಬರಹಕ್ಕೆ ಸಾರ್ಥಕ್ಯ ದಕ್ಕಿದಂತೆಯೇ ಎಂಬುದು ನನ್ನ ಅನಿಸಿಕೆ...
ನಮ್ಮ ಬರಹ ಅಂದರೆ ಅದು ನಮ್ಮ ಭಾವ...ಅದು ಓದುಗರ ಭಾವವೂ ಆಗಿ ನಲಿದರೆ ಆಗ ಬರಹಗಾರನ ಖುಷಿಯ ವಿಸ್ತಾರ...ಆ ಖುಷಿಯ ವಿಸ್ತಾರಕ್ಕಾಗಿ ಶ್ರಮವಹಿಸುವುದಾದರೆ ಪ್ರಜ್ಞಾವಂತ ಓದುಗರ ಅಭಿಪ್ರಾಯಗಳನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ...ಅದು ನಮ್ಮ ಬರಹದ ನಮ್ಮದೇ ಶೈಲಿಗೆ, ನಮ್ಮೊಳಗಿನ ಮೂಲ ಸೆಲೆಗೆ ಧಕ್ಕೆಯಾಗದಿದ್ದಲ್ಲಿ ಮಾತ್ರ...


ಬಯಲಲ್ಲಿ ಪೂರ್ತಿ ಬೆತ್ತಲಾಗಿ ಹೋಗ್ತೀಯಾ ಎಂಬುದು ಆತಂಕಭರಿತ ಪ್ರಶ್ನೆ...

ಅರೆಬರೆಯಾಗಿ ಕಾಡುವುದಕಿಂತ ಪೂರ್ತಿ ಕಳಚಿ ಹಗುರಾಗುವುದು ಸುಲಭ ನಂಗೆ...
ಬರುವಾಗ ತಂದದ್ದು ಅಳುವೊಂದೇ...ಹೋಗುವಾಗ ನಾಕು ಕಂಗಳಲಿ ಎರಡು ಹನಿಗಳನುಳಿದು ಬೇರೇನನೂ ಉಳಿಸಿ ಹೋಗುವ ಹಂಬಲವಿಲ್ಲ...ಈ ನಡುವೆ ಮುಚ್ಚಿಟ್ಟು ಬಚ್ಚಿಟ್ಟು ಸಾಧಿಸುವುದೇನಿದೆ ಎಂಬುದೆನ್ನ ಮನದ ಪ್ರಶ್ನೆ...


ಹಾಗಲ್ಲವೋ ಕೆಲವು ನೋವುಗಳನ್ನಾದ್ರೂ ಮುಚ್ಚಿಡಬೇಕು...ನಮ್ಮ ಮೌನದೊಂದಿಗೆ ಕೊಂಡೊಯ್ಯಬೇಕು...ಹಾಗೆಲ್ಲ ಹೇಳುವುದಲ್ಲ...ಅಷ್ಟಕ್ಕೂ ನಿನ್ನ ನೋವಿಂದ ಯಾರಿಗೇನಾಗಬೇಕಿದೆ...?? ಬಯಲಲ್ಲಿ ಬೆತ್ತಲಾಗಿ ಸಾಧಿಸೋದೇನಿದೆ...???

ಒಂದು ಕ್ಷಣ ಮನಸು ತಡಬಡಾಯಿಸಿದ್ದು ಖರೆ...ಹೌದಲ್ಲವಾ ಅನ್ನಿಸಿದ್ದು ಸತ್ಯ...ಅರೆಘಳಿಗೆ ಮೌನದೊಂದಿಗೆ ಮಾತಾಡಿದೆ...
ಮನಸು ಹೇಳಿದ್ದಿಷ್ಟು...
ನನ್ನ ನೋವೆಂದರೆ ಅದು ಬರೀ ನನ್ನದೊಂದೇ ಅಲ್ಲವಲ್ಲಾ...ನೋವ ಸಾಗರವೇ ಉಸಿರಾಡೋ ಈ ಜಗದಲ್ಲಿ ನನ್ನ ನೋವು ಅದೆಷ್ಟು ಜೀವಗಳ ನೋವ ಹೋಲುತ್ತೋ - ನನ್ನ ಭಾವ ಅದೆಷ್ಟು ಜೀವಿಗಳ ಭಾವಗಳ ಸಂಧಿಸುತ್ತೋ...ನನ್ನ ನೋವಂಥದೇ ನೋವ ಭಾವವ ನುಂಗಿ ಉಸಿರಾಡುತಿರೋ ಒಂದ್ಯಾವುದೋ ಜೀವ ಆಕಸ್ಮಿಕವಾಗಿಯಾದರೂ ನನ್ನ ಭಾವವ ಓದಿದರೆ, ಓದಿ ಅರೆ ನನ್ನ ನೋವಂಥ ನೋವು ಇಲ್ಲೂ ಒಂದಿದೆ - ನನ್ನ ನೋವು ಒಂಟಿಯಲ್ಲ ಅಂದುಕೊಂಡು ಒಂದು ನಿಟ್ಟುಸಿರ ಚೆಲ್ಲಿದರೆ - ಆ ನೋವನುಂಡ ಜೀವ ಬದುಕಿದೆ ಅಂದರೆ ನಾನೂ ಬದುಕಬಹುದಲ್ಲವಾ ಅಂತ ಒಂದು ಕ್ಷಣ ನಗೆ ಚೆಲ್ಲಿದರೆ ಸಾಕಲ್ಲವಾ...ನನ್ನ ಬರಹಕ್ಕೆ ಅದಕಿಂತ ದೊಡ್ಡ ಸಾರ್ಥಕ್ಯ ಇನ್ನೇನು ಬೇಕು...
ಸ್ಫೂರ್ತಿಯಾಗಬೇಕಿಲ್ಲ ನಾನ್ಯಾರಿಗೂ - ಒಂದು ನೋವಿಗೆ ಜತೆಯಾದ ನೋವಿನ ಸಮಾಧಾನದ ನಿಟ್ಟುಸಿರಾದರೂ ಸಾಕು...
ಹಾಗನ್ನುತ್ತಲೇ ಒಂದಷ್ಟು ಎದೆಯ ನೋವ ಹಿಂಡಿ ಅಕ್ಷರವಾಗಿಸಿ ಹಗುರಾದೆ...ಓದಿದ ಒಂದಿಬ್ಬರ್ಯಾರೋ ಶ್ರೀ ನನ್ನ ಬದುಕು - ಭಾವಕ್ಕೆ ನೀ ಅಕ್ಷರಗಳ ಪೋಣಿಸಿದೆ, ಯಾಕೋ ನಾನು ಕಳೆದು ಹೋದೆ ಅಂತಂದರು...ಸಾರ್ಥಕವಾಯಿತು ಬರೆದದ್ದು ಮತ್ತು ಬದುಕಿದ್ದು ಅನ್ನಿಸಿತು...

Monday, March 25, 2013

ಗೊಂಚಲು - ಅರವತ್ತಾರು.....


ಇಳಿ ಸಂಜೆಯ ಮೌನ...
ಮಂಜುಗಣ್ಣಿನ ಮಾತು.....

ಏಳು ದಶಕಗಳ ಹಣ್ ಹಣ್ಣು ಬದುಕು...ಹೆಸರು ಆನಂದರಾವ್...
ಮಣ್ಣ ಮನೆಯಲಿ ಮಲಗುವ ಮುನ್ನಿನ ಮಂಜುಗಣ್ಣಿನ ಹಿನ್ನೋಟದಲ್ಲಿ, ಹೆಸರಲ್ಲಿ ಮಾತ್ರ ಕಂಡ ಆನಂದದ ಅರ್ಥ ಹುಡುಕುತ್ತಾ ಕಂಗಾಲಾಗಿದ್ದೇನೆ...

ಈದೀಗ ಮನದಿ ಸುಳಿದಿರುಗುತ್ತಿರೋ ಭಾವ ಇದೊಂದೇ - ಎಷ್ಟುಕಾಲ ಬದುಕಿದ್ದೊಡೇನು - ಜೀವಿಸಲಾಗದಿದ್ದೊಡೆ ನನ್ನಂತೆ ನಾನು... ಈ ಬದುಕಿಗೆ (ನನ್ನನ್ನೂ ಸೇರಿ ಈ ಜನಕ್ಕೆ) ಅದ್ಯಾಕೆ ಅಷ್ಟೊಂದು ಪ್ರೀತಿಯೋ ಮುಖವಾಡಗಳ ಮೇಲೆ...ಇಂದೀಗ ಬಯಲ ಹಸಿರ ತಂಗಾಳಿ ನಡುವೆಯೂ ಉಸಿರುಗಟ್ಟುವ ಭಾವ ನನ್ನಲ್ಲಿ...

ಏನೆಲ್ಲ ಇತ್ತಲ್ಲವಾ ಬದುಕ ದಾರೀಲಿ...ಸೊಗಸಾದದ್ದು, ಆಹ್ಲಾದವನೀಯುವಂಥದ್ದು...ಪುಟ್ಟ ಪುಟ್ಟದು...ಆಸ್ವಾದಿಸಿದರೆ ಬೆಟ್ಟದಷ್ಟು ಖುಷಿಯ ಕೊಡಬಲ್ಲದ್ದು...ಅವನ್ನೆಲ್ಲ ಎಡಗಾಲಲ್ಲಿ ಒದ್ದು ಓಡಿದ್ದು ಯಾವುದಕ್ಕಾಗಿ...

ಐಶ್ವರ್ಯದ, ಅಧಿಕಾರದ ಬೆನ್ನ ಹಿಂದೆ ಹೋಗಿ ಆನಂದಕ್ಕೆ ಬೆನ್ನು ಹಾಕಿದೆನಾ...

ಹಣ - ಹಣ ತಂದುಕೊಡುವ ಅಧಿಕಾರ - ಅಧಿಕಾರ ತಂದುಕೊಟ್ಟ ಮತ್ತಷ್ಟು ಹಣ - ಮತ್ತಷ್ಟು ಅಧಿಕಾರ...ಅಲ್ಲಲ್ಲೇ ಗಿರಕಿ ಹೊಡೆಯುತ್ತಾ ಪ್ರೀತಿ, ಸಂಸಾರ,ಸಂಬಂಧ, ಜೀವಿಸುವುದು ಎಲ್ಲವನ್ನು ಮರೆತು ಮನಸು ಸತ್ತವನಂತೆ ಬದುಕಿದ್ದೆನಲ್ಲ...ಯಾಕಾಗಿ..?

ಗಿರಿಯ ತುದಿ ತಲುಪುವ ಧಾವಂತದಲ್ಲಿ ಗಿರಿಮುಖದ ದಾರಿಯ ಆಚೀಚೆ ನೋಡಲೇ ಇಲ್ಲ...ದಾರಿಯ ಇಕ್ಕೆಲಗಳಲ್ಲಿ ಎಳೆಗರಿಕೆಯ ಮೇಲಿಂದ ಹಿಮಬಿಂದುವೊಂದು ಜಾರಿದ್ದು, ಗೋಪಿ ಹಕ್ಕಿ ಸೀಟಿ ಹಾಕಿದ್ದು, ಬಣ್ಣ ಬಣ್ಣದ ಹೂಗಳು ಅರಳಿದ್ದು, ದುಂಬಿಯೊಂದು ಕನವರಿಸಿದ್ದು, ಮಾವು ಚಿಗುರಿದ್ದು - ಕೋಗಿಲೆ ಉಲಿದದ್ದು, ಹರಿಣಗಳ ಸರಸ, ಹಾವು - ಮುಂಗುಸಿಯ ವಿರಸ, ಚಿರತೆಯೊಂದರ ಮರಿಗಳೆಡೆಗಿನ ಪ್ರೇಮ, ಕರಡಿಗಳ ಮಿಲನ, ಚಿಟ್ಟೆಯೊಂದು ಉಚ್ಚೆ ಹೊಯ್ದಿದ್ದು...ಉಹುಂ ಒಂದನೂ ನೋಡಿಲ್ಲ, ಆಸ್ವಾದಿಸಿಲ್ಲ, ಅಚ್ಚರಿಯಿಂದ ಕಣ್ಣರಳಿಸಿಲ್ಲ...ಬರೀ ಓಡಿದ್ದೇ ಓಡಿದ್ದು... ಕಣ್ಕಾಪು ಕಟ್ಟಿಸಿಕೊಂಡ ಯುದ್ಧ ಕುದುರೆಯಂತೆ...ಹಿಂಗದ ನನ್ನದಾಗಿಸಿಕೊಂಬ, ಹಿಡಿದಿಟ್ಟುಕೊಂಬ ದಾಹ...ಅದಕಿಟ್ಟುಕೊಂಡ ಚಂದದ ಹೆಸರು ಸಾಧನೆಯ ಮೈಲಿಗಲ್ಲು...

ಏರು ಯೌವನ, ಒಂದಷ್ಟು ಡಿಗ್ರಿಗಳು...ಆಗತಾನೆ ಸಿಕ್ಕ ಕೆಲಸ... ಬೆನ್ನಿಗಿದ್ದ ಹಣವಿಲ್ಲದೆ ಅನುಭವಿಸಿದ ಕಷ್ಟಗಳ, ಅವಮಾನಗಳ ನೆನಪು...ಕಣ್ಮುಂದೆ ಕುಣಿಯುವ ರಂಗು ರಂಗಿನ ಲೋಕ...ಹಣದ, ಅಧಿಕಾರದ ಹೆಗಲಿಗೆ ಜೋತುಬೀಳಲು ಅಷ್ಟು ಸಾಕಲ್ಲವಾ...

ಕೆಲಸ, ಧಕ್ಷತೆಯ ನಿರೂಪಣೆ, ಅಧಿಕಾರ, ಹಣ...ಸಂಜೆಗೆ ಸುಸ್ತು ಮರೆಯಲು ಹಣ ತಂದು ಕೊಡುವ ಸುಖಗಳು...ಇವುಗಳೆಲ್ಲ ಸೇರಿ ಇಷ್ಟಿಷ್ಟಾಗಿ ಜೀವಿಸುವುದು ಮರೆತೇ ಹೋಯಿತಲ್ಲವಾ...

ಸಂಸಾರ ಹೂಡಿದ್ದು ಖರೆ...ಹೊರಗೆ ಇನ್ಯಾರಿಂದಲೋ ಆಳಿಸಿಕೊಂಡಿದ್ದನ್ನು ಮರೆಯಲು ಮನೆಯಲ್ಲೊಂದಿಷ್ಟು ಆಳಿಸಿಕೊಳ್ಳುವ ಜೀವಗಳಿರಲಿ ಎಂಬ ಆಳದ ಭಾವದಿಂದಲೇನೋ ಎಂಬುದು ಇಂದಿನ ಅನುಮಾನ..
.
ಬೆಳಿಗ್ಗೆ ೮ ರಿಂದ ರಾತ್ರಿ ೮ ರವರೆಗೆ ಕತ್ತೆ ದುಡಿತ...ಒಂದಷ್ಟು ಮೀಟಿಂಗು, ಈಟಿಂಗು ಮತ್ತು ಒಣ ನಗೆಯ ಪ್ರದರ್ಶನ...ಆಮೇಲೆರಡು ತಾಸು ಐದು ನಕ್ಷತ್ರಗಳ ಹೋಟಲ್ಲಿನ ಕೃತಕ ಗಾಳಿ ಹಾಗೂ ಮಬ್ಬುಗತ್ತಲಲ್ಲಿ ಸುಖದ ಹುಡುಕಾಟ...ಅಮಲುಗಣ್ಣಲ್ಲಿ ಮನೆ ಸೇರುವಾಗ ಭರ್ತಿ ಮಧ್ಯರಾತ್ರಿ...ಮಕ್ಕಳಿಬ್ಬರೂ ನಿದ್ರಾ ದೇವಿಯ ಮಡಿಲಲ್ಲಿ ಮುಗುಳ್ನಗುತ್ತಿರುತ್ತವೆ...ಮಕ್ಕಳ ಆ ಮುಗ್ಧ ನಗುವನ್ನು ನೋಡಿ ಸವಿಯುವ ಸ್ಥಿತೀಲಿ ಖಂಡಿತ ನಾನಿರುತ್ತಿರಲಿಲ್ಲ...ಒಮ್ಮೆಯೂ ಮಕ್ಕಳು ಮೈಮೇಲೆ ಉಚ್ಚೆ ಹೊಯ್ದದ್ದು, ನಾನವರ ಕುಂಡೆ ತೊಳೆದದ್ದು, ಪಾಪಚ್ಚಿ ಮಕ್ಕಳ ಬೊಮ್ಮಟೆ ಕುಂಡೆಯ ಕಚ್ಚಿದ್ದು, ಅವು ಪಪ್ಪಾ ಮೀಸೆ ಚುಚ್ಚಿ ಚುಚ್ಚಿ ಅಂತ ತೊದಲು ತೊದಲಾಗಿ ನುಡಿದದ್ದನ್ನು ಕೇಳಿಸಿಕೊಂಡ ನೆನಪಿಲ್ಲ ನನ್ನಲ್ಲಿ...
ಹಾಸಿಗೆ ಮನೇಲಿ ನಿದ್ದೆಗಣ್ಣಲ್ಲೇ ಮಾತಾಡಿಸೋ ಹೆಂಡತಿಯ ಒಂದಿನವೂ ಎದೆಗೊರಗಿಸಿಕೊಂಡು ಪ್ರೇಮ ಸ್ಪರ್ಶನೀಡಿ ಸವಿನುಡಿಯನಾಡಿದ್ದಿಲ್ಲ...ಬದಲಿಗೆ ಕೊಟ್ಟದ್ದು ಮಧ್ಯರಾತ್ರಿ ನನ್ನ ಸೊಂಟದ ಕೆಳಗಿನ ಹಸಿವಿಗೆ ಒಂದು ಅವಸರದ ಬೆವರಿಳಿಸುವ ಬೆತ್ತಲೆ ಕಾಟ...ಅವಳ ಬೇಸರದ ನಿಟ್ಟುಸಿರು ನನ್ನ ಕಿವಿಯ ತಲುಪುವ ಮೊದಲೇ ಅವಳ ಕಿವಿಯಲ್ಲಿ ನನ್ನ ಗೊರಕೆ ಸದ್ದಿನ ಮಾರ್ದನಿ...

ಮಕ್ಕಳಿಗೆ ದೊಡ್ಡ ಹೆಸರಿನ, ಅಷ್ಟೇ ದೊಡ್ಡ ದುಡ್ಡಿನ ಶಾಲೆ, ಹೆಂಡತಿಗೊಂದಿಷ್ಟು ಒಡವೆ ಸೀರೆ...ಹಣವೊಂದನ್ನುಳಿದು ಬೇರೇನನ್ನೂ ಕೊಟ್ಟ ನೆನಪಿಲ್ಲ ಸಂಸಾರಕ್ಕೆ...
ಒಂದು ಸಿಹಿ ಮುತ್ತಿನ ಒಡವೆ, ಸವಿ ಮಾತಿನೂಟ, ಒಂದು ಬೆಚ್ಚನೆ ತಬ್ಬುಗೆಯ ಇಬ್ಬನಿ ಹಾರ, ಒಂದು ಒಲವಿನ ಕೂಟ...ಉಹುಂ ಕೊಟ್ಟದ್ದಿಲ್ಲ...ಒಲವ ಹಂಚದಿರುವುದರಿಂದ ಎಷ್ಟೆಲ್ಲ ಕಳೆದುಕೊಂಡೆ ಎಂಬ ಮನದ ಭಣ ಭಣ ಭಾವ ಇಂದು...

ಇಂದು ಈ ಅನಿವಾರ್ಯ ಮತ್ತು ಅಸಹಾಯ ನಿವೃತ್ತ ಇಳಿಸಂಜೆಯಲ್ಲಿ ಅದೆಲ್ಲ ಬೇಕೆನಿಸುತ್ತಿದೆ...ಹಣ ತಾನು ನೀಡಲಾರದ್ದು - ಒಲವು ಮಾತ್ರ ಕೊಡಮಾಡಬಹುದಾದ ಮಧುರ ಆನಂದ...ಆದರೆ ಕಾಲಕ್ಕೆ ಹಿಮ್ಮುಖ ಚಲನೆ ಇಲ್ಲವಲ್ಲ...:(

ಕಳೆದುಕೊಂಡ ಮುಗ್ಧ ಮಗುವ ನಗುವ ನೋಡುವ ಖುಷಿಯ ಮೊಮ್ಮಗುವಲ್ಲಿ ನೋಡೋಣ ಎಂದರೆ ಮಗಳಿಗೆ ಮಕ್ಕಳೇ ಬೇಡವಂತೆ...ಮಗ ದೂರದ ದೇಶದಲ್ಲಿ ಅದಾಗಲೇ ಮತ್ತೊಬ್ಬ ಆನಂದರಾವ್...ಮಗಳಿಗೆ ಮಕ್ಕಳು ಬೇಡವಾದರೆ ಮಗನಿಗೆ ಮದುವೆಯೇ ಬೇಡ...ಸಿಹಿ ಕಹಿಯ ಹಂಚಿಕೊಳ್ಳೋಣವೆಂದರೆ ಹೆಂಡತಿ ವಜ್ರದ ಹಾರ, ತೋಳಿಲ್ಲದ ರವಿಕೆ ತೊಟ್ಟು ಸಮಾಜ ಸೇವೆಯಲ್ಲಿ ಎಂದೋ ಕಳೆದುಹೋಗಿದ್ದಾಳೆ...ತಪ್ಪಿಲ್ಲ ಅವರಲ್ಲಿ - ನಾ ಬಿತ್ತಿದ್ದನ್ನೇ ನಾ ಬೆಳೆದಿದ್ದೇನಷ್ಟೇ...
ಇಂದೀಗ ನಾ ಕಟ್ಟಿಕೊಂಡ ಹಣದ ಮಹಲಿನಲ್ಲಿ ನಾನು ಏಕಾಂಗಿ ಖೈದಿ...
ಮನೆಯ ತುಂಬ ಇರುಳ ಕತ್ತಲಲ್ಲೂ ಝಗಮಗಿಸೋ ಬೆಳಕಿದೆ - ಅಂಗಳದಿ ಕೂತ ನನ್ನ ಮನದಲ್ಲಿ ಬರೀ ಕತ್ತಲು...

ಬದುಕ ಅರಿವಿನ ದಾರಿ ತಪ್ಪಿದ್ದೆಲ್ಲಿ..? ಬಾಲ್ಯದ ಕಷ್ಟ, ಅವಮಾನಗಳಲ್ಲಾ.?? ಯೌವನದ ಗೆಲುವಿನ ಹಂಬಲದಲ್ಲಾ.??? ಮಧ್ಯ ವಯಸಿನ ಕಳಕೊಳ್ಳುವ - ಸೋಲುವ ಭಯದಲ್ಲಾ.???? ಎಲ್ಲಿ ಕಳೆದು ಹೋಯಿತು ಬದುಕ ಜೀವಂತಿಕೆ..????? ಬರೀ ಪ್ರಶ್ನೆಗಳು...

ಮನೆ ಮುಂದಿನ ದಾರೀಲಿ ಓಡಾಡೋ ಅಂದಿನ ನನ್ನದೇ ಪ್ರತಿರೂಪಗಳಂತಹ ಕಿರಿಯರನ್ನು ಕಂಡಾಗ ವಿಷಾದವೊಂದು ಹರಳುಗಟ್ಟುತ್ತೆ...
ಒಮ್ಮೊಮ್ಮೆ ಈ ಒಂಟಿಭಾವ ತೀವ್ರವಾಗಿ ಕಂಗೆಡಿಸಿದಾಗ ಬೀದಿ ಮಧ್ಯೆ ನಿಂತು ಕೂಗಿ ಹೇಳಬೇಕೆನಿಸುತ್ತೆ - "ಹೆಣದ ಜೊತೆಗೆ ಹಣವ ಹೂಳುವುದಿಲ್ಲ" ಎಂದು...ತಕ್ಷಣ ಬಾಲ್ಯದ ಆ ನೆನಪು ಕಾಡುತ್ತೆ...ಹಣವಿಲ್ಲದಿರುವುದರಿಂದಲೇ ಅಮ್ಮನ ಹೆಣ ಹೂಳಲು ಪರದಾಡಿ ಬೋರೆಂದು ಅತ್ತ ಅಪ್ಪನ ಅಸಹಾಯಕ ಮುಖ ನೆನಪಾಗಿ ಗಂಟಲು ಕಟ್ಟಿ ಸುಮ್ಮನಾಗುತ್ತೇನೆ...

ಹಣವಿಲ್ಲದೇ ಕಳಕೊಂಡ ಬಾಲ್ಯದ ಮತ್ತು ಯೌವನದ ಮೊದಲರ್ಧದ ಹಲವಾರು ಸುಖಗಳು ಹಾಗೂ ಉಂಡ ಅವಮಾನಗಳು - ಹಣದಿಂದಾಗಿ ಕಳಕೊಂಡ ಆಮೇಲಿನ ಬದುಕಿನ ಆನಂದಗಳು ಎಲ್ಲ ಸೇರಿ ಮನ ಬರೀ ಗೊಂದಲದ ಗೂಡಾಗಿ ಉತ್ತರಗಾಣದ ಪ್ರಶ್ನೆಗಳಲಿ ನನ್ನೊಳಗಿನ ಮಾತೆಲ್ಲ ಸತ್ತು ವರ್ಷಗಳೇ ಸಂದವು...

ಅಥವಾ ಕೆಲವೆಲ್ಲ ದ್ವಂದ್ವಗಳ ಹುಟ್ಟುಹಾಕುವ ಗಂಭೀರ ಪ್ರಶ್ನೆಗಳಿಗೆ ಮೌನವೇ ಉತ್ತರವೇನೋ.....
ಕಾಯುವುದೊಂದೆ ಕೆಲಸ ಈಗ ಇರವನ್ನೆ ಕಳೆದು ಬಿಡುವ ಬರುವ ಆ ಚಿರಮೌನಕ್ಕಾಗಿ...
ನನ್ನ ಹೆಸರು ಆನಂದರಾವ್...:(

ಚಿತ್ರ ಕೃಪೆ : ಅಂತರ್ಜಾಲ...
ವಿ.ಸೂ : ಈ ಬರಹ ಅಂತರ್ಜಾಲ ಪತ್ರಿಕೆ 'ಪಂಜು'ವಿನ 25ನೇ ಮಾರ್ಚ್ 2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ...ಅದರ ಕೊಂಡಿ ಇಂತಿದೆ - http://www.panjumagazine.com/?p=1580

Tuesday, March 19, 2013

ಗೊಂಚಲು - ಅರವತ್ತು + ಐದು.....


ಜನ್ಮಕ್ಕಂಟಿದ.......

ನೆನಪಿದ್ದ ಖುಷಿ ಅದೊಂದೆ.
ಆಗೆಲ್ಲ ನೀ ಅಜ್ಜನ ಮನೆಗೆ (ನಾನು, ಅಮ್ಮ, ಅಕ್ಕಂದಿರೆಲ್ಲ ಬದುಕಿದ್ದೇ ಅಲ್ಲಿ ಮತ್ತು ಆ ಮನೆಯ ಪ್ರೀತಿಯಿಂದ ಆಗ) ಬರ್ತಿದ್ದೆ. ಶಾಲೆಯಿಂದ ನಾ ಬರೋ ಹೊತ್ಗೆ ದೇವರ ಮುಂದೆ ನೀನು ಮೂಗು ಮುಚ್ಕೊಂಡು ಪ್ರತಿಷ್ಠಾಪಿತ. ಆಗದು ಯಾವುದೇ ಜಿಜ್ಞಾಸೆಗಳಿಲ್ಲದ ಎಲ್ಲ ಸೊಗಸಾಗಿ ಕಾಣುತಿದ್ದ ವಯಸು ನಂದು. ನೀ ದೇವರೆದುರು ಕೂತಿದ್ರೆ ನಿನ್ನ ಪಕ್ಕದಲ್ಲಿ ಒಂಥರಾ ಸ್ಪ್ರಿಂಗ್ ನಂತಹ ಬೆಲ್ಟ್ ಇರೋ ನಿನ್ನ ವಾಚು ಇರ್ತಿತ್ತು. ಸುಮ್ನೆ ಅದನ್ನೆತ್ತಿಕೊಂಡು ಹೋಗಿ ನನ್ನ ಕೈಗದನ್ನು ಕಟ್ಕೊಂಡು ಖುಷಿ ಪಡ್ತಿದ್ದೆ. ಅದೊಂದೇ ಖುಷಿ ನಿನ್ನಿಂದ ಸಿಕ್ಕಿದ್ದು ನಂಗೆ. ಹಾಗೆ ನಿನ್ನ ವಾಚು ಕಟ್ಟಿಕೊಂಡು ವಾರಗೆಯ ಮಕ್ಕಳೆದುರು ಕೆಲಕ್ಷಣ ಮೆರೆದಿದ್ದಕ್ಕೆ ಬೈದಿಲ್ಲ ಅನ್ನೋ ಒಂದೇ ಕಾರಣಕ್ಕೆ ನಾನು ನಿಂಗೆ ಋಣಿಯಾಗಿರಬೇಕಿದೆ...

ಅಲ್ಲಿಂದಾಚೆ ನನ್ನ ಬುದ್ಧಿ ಬಲಿತಂತೆಲ್ಲ ನಿನ್ನ ಮನದ ಕ್ರೌರ್ಯದ ಮುಳ್ಳು ಹೆಜ್ಜೆ ಹೆಜ್ಜೆಗೂ ಚುಚ್ಚಿ ಘಾಸಿಗೊಳಿಸಿದ್ದೊಂದೇ ಸತ್ಯ...

ನನ್ನ ಮತ್ತು ಅಮ್ಮ, ಅಕ್ಕಂದಿರೆಲ್ಲರ ಎಲ್ಲ ಸಾಮಾಜಿಕ ಅವಮಾನಗಳಿಗೆ ನೀನೇ ಪ್ರಮುಖ ಕಾರಣನಾಗಿ ಬಿಸಿತುಪ್ಪವಾದದ್ದು ನಮ್ಮ ದೌರ್ಭಾಗ್ಯ...
ನಿನ್ನ ನೆವದಿಂದ ನನ್ನ ಕೆಣಕಿ ಕಾಡೋ ಸಮಾಜ ಅದೇ ನಿನ್ನ ಮೆರೆಸುವುದ ಕಂಡು ಕನಲಿಹೋಗಿದ್ದೇನೆ ಎಷ್ಟೋ ಬಾರಿ...

ಏಳು ಹೆಜ್ಜೆ ನಿನ್ನೊಂದಿಗೆ ನಡೆದದ್ದು ಮತ್ತು ಒಂದು ಕರಿ ದಾರಕ್ಕೆ ನಿನ್ನೆದುರು ತಲೆಬಾಗಿದ್ದಕ್ಕೆ ಅಮ್ಮ ಕಟ್ಟಿದ ಕಂದಾಯ ಒಂದಿಡೀ ಜನ್ಮದ ಜೀವಂತ ನಗು...
ಬಂಧ ಬೆಸೆಯಬೇಕಿದ್ದ ಹೋಮದ ಸುತ್ತ ಸುತ್ತುತ್ತಲೇ ಅಮ್ಮನ ಬದುಕ ಆಹುತಿಗೆ ಮುನ್ನುಡಿ ಬರೆದದ್ದು ನೀನು...
ರಾತ್ರಿಗಳ ನಿನ್ನ ತೆವಲಿನ ಕ್ರೌರ್ಯಕ್ಕೆ ಅಮ್ಮನ ಮಡಿಲು ತುಂಬಿತ್ತು...(ಬಹುಶಃ ಮಡಿಲು ತುಂಬಿದೆ ಅನ್ನೋ ಒಂದೇ ಕಾರಣಕ್ಕೆ ಅಮ್ಮ ನಿಂಗೆ ಋಣಿಯೇನೋ)

ಕೊಟ್ಟ ದೇಹಕ್ಕೆ ಅನ್ನವಿಕ್ಕದಿದ್ದರೂ ನಾನಿಂದು ನಿನ್ನ ದೂರುತ್ತಿರಲಿಲ್ಲ..
ದೇಹದೊಳಗಣ ಮನದ ಹಸಿವಿಗೆ ಒಂದೇ ಒಂದು ತುತ್ತು ಪ್ರೀತಿ ಉಣಿಸಿದ್ದಿದ್ದರೆ...

ನಾವು ಕ್ರೂರ ಪ್ರಾಣಿ ಅಂತನ್ನೋ ಚಿರತೆ ಕೂಡ ತನ್ನ ಮರಿಗಳು ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುವವರೆಗೆ ಸಲುಹಿ ಆನಂತರವಷ್ಟೇ ಕೈಬಿಡುತ್ತಂತೆ...
ನಿನ್ನ ಮನಸು ಚಿರತೆಗಿಂತ ಕ್ರೌರ್ಯವಂತ ಹೇಗೆ..???

ದಿನದ ಹದಿನೈದು ಘಂಟೆ ನೀ ನಡೆಸುವ ಡಂಭಾಚಾರದ ದೈವ ಭಕ್ತಿಯ ಕಂಡಿದ್ದೇ ಇದ್ದೀತು ದೇವರೆಡೆಗಿನ, ಆಚರಣೆಗಳೆಡೆಗಿನ ನನ್ನ ಜಿಗುಪ್ಸೆಗೆ ಮೂಲ ಕಾರಣ...

ನೀ ಪೂಜಿಸೋ ದೇವರು, ನೀ ನಂಬೋ ಧರ್ಮ ಹೇಳಿದ ನೀ ನನಗೆ ನೀಡಲೇಬೇಕಿದ್ದ ‘ಸಂಸ್ಕಾರ’ಗಳೆಡೆಗೆ ಕಣ್ಣೆತ್ತಿಯೂ ನೋಡದ ನಿನ್ನ ’ಕೊನೆಯ ಸಂಸ್ಕಾರ’ ಮಾಡಲೂ ನನ್ನ ಕೈ ಹೇಸುತ್ತೆ...
ಇನ್ನು ನಿನ್ನ ಇಳಿವಯಸಲಿ ಸೇವೆ ಎಲ್ಲಿಂದ ಮಾಡಲಿ...
ತನ್ನ ‘ಕೊನೆಯ ಸಂಸ್ಕಾರ’ದವರೆಗೆ ಮಗ ಬದುಕಿದ್ದರೆ ಸಾಕು ಅಂದೆಯಂತಲ್ಲ - ಸಂಸ್ಕೃತಿಯನ್ನು ಕಲಿಸದ ನಿನಗೆ ‘ಸಂಸ್ಕಾರ’ ಮಾಡ್ತೀನಿ ನಾನು ಅಂತ ಹೇಗೆ ನಂಬ್ತೀಯ...

ಒಂದು ಹನಿ ವೀರ್ಯ ಚೆಲ್ಲಿ ಈ ದೇಹದ ಜನ್ಮಕ್ಕೆ ನಿಮಿತ್ತನಾದೆ ಎಂಬ ಕಾರಣಕ್ಕೆ ನಿನ್ನೆಲ್ಲ ನೀಚತನಾನ ನಿನ್ನ ವೀರ್ಯಸಂಜಾತರು ಸಹಿಸಿಕೊಳ್ಳಬೇಕೆಂಬುದಾಗಿದ್ದರೆ, ಸೇವೆಗೈಯಬೇಕೆಂಬುದಾಗಿದ್ದರೆ ನಿನ್ನಂಥ ಗಂಡು ಜಂತುಗಳ್ಯಾರೂ ಮದುವೆ - ಸಂಸಾರಗಳಿಗೆಲ್ಲ ಜೋತು ಬೀಳ್ತಲೇ ಇರಲಿಲ್ಲವೇನೋ...
ಕನಿಷ್ಠ ಜವಾಬ್ದಾರಿಯನ್ನೂ ನೀಯಿಸದವನಿಗೆ ನಿರೀಕ್ಷೆಗಳೂ ಇರಬಾರದಲ್ಲವಾ...

ಎಂಥ ಅಪ್ಪನಾಗಬಾರದೆಂಬುದನ್ನು ಅಗತ್ಯಕ್ಕಿಂತ ಸ್ಪಷ್ಟವಾಗಿ ಅರುಹಿದ, ತುಂಬ ಸಭ್ಯರಾದ ಇತರರ ಅಪ್ಪಂದಿರನ್ನೂ ಅನುಮಾನದ - ಪೂರ್ವಗ್ರಹದ ಕಣ್ಣಿಂದ ನೋಡುವಂತೆ ನನ್ನ ಮನಸ ಕೆಡಿಸಿದ, ನಿನ್ನ ಕಾಮಕ್ಕೆ ಬೇಕಾದ ಅಧಿಕೃತತೆಗಾಗಿ ಮದುವೆಯ ಪಾವಿತ್ರ್ಯವನ್ನು ಬಳಸಿಕೊಂಡ (ಸಮಾಜದ ಕಣ್ಣಿಗೆ ಮಣ್ಣೆರಚಲು ಒಂದು ಮದುವೆ..ಆದರೆ ನಿನ್ನ ಕಾಮ ಅದರಾಚೆಯೇ ಹೆಚ್ಚು ವಿಜೃಂಭಿಸಿದ್ದೆಂಬುದು ಸತ್ಯ) ನಿನ್ನೆಡೆಗೆ ನನ್ನಲ್ಲಿ ಇರೋದು ಕೋಪವಲ್ಲ... ಅಪ್ಪಟ ಅಸಹ್ಯ...

ನಾ ಬದುಕುತಿರುವ, ನನ್ನನ್ನು ಪ್ರೀತಿಸೋ ಸಮಾಜದ ಒತ್ತಡಕ್ಕೆ ಮಣಿದು ಎಲ್ಲಿ ನಿನ್ನ ಕೊನೆಗಾಲದಲ್ಲಾದರೂ ನಿನ್ನೆಡೆಗೆ ನಡೆಯಬೇಕಾದೀತೋ ಎಂಬ ಭಯ ನನ್ನಲ್ಲಿ ನಿನಗಿಂತ ನಾನೇ ಮೊದಲು ಅಳಿದು ಹೋಗಿದ್ದರೆ ಚೆನ್ನವಿತ್ತು ಅಂತ ಯೋಚಿಸುವಂತೆ ಮಾಡುತ್ತೆ - ಪ್ರತಿ ಬಾರಿ ನಿನ್ನ ನೆನಪಾದಾಗ...

ದೇಹ ನೀಡಿದ ಕಾರಣಕ್ಕೆ ಹೆಸರಿಗೂ ಅಂಟಿಕೊಂಡು, ಜನ್ಮಕ್ಕಂಟಿದ ಶಾಪದಂತೆ ಕಾಡೋ ನಿನ್ನಂಥ ಅಪ್ಪಂದಿರೆಡೆಗೆ ನನ್ನ ಧಿಕ್ಕಾರವಿದೆ....

Friday, March 8, 2013

ಗೊಂಚಲು - ಅರವತ್ನಾಕು.....


ಗೆಲುವಿನಂಗಳದಿ ಮೂಡುತಿದೆ ಗೆಜ್ಜೆ ಕಾಲ್ಗಳ ಹೆಜ್ಜೆ ಗುರುತು.....


ಕಾರ್ಯೇಶು ದಾಸಿ - ಕರಣೇಶು ಮಂತ್ರಿ - ಪೂಜ್ಯೇಶು ಮಾತಾ – ಕ್ಷಮಯಾ ಧರಿತ್ರಿ – ರೂಪೇಶು ಲಕ್ಷ್ಮಿ - ಶಯನೇಶು ರಂಭಾ ಎಂದು ಹೆಣ್ಣಿಗೆ ಹಲವಾರು ಶ್ರೇಷ್ಠ ಗುಣಗಳನ್ನು ಆರೋಪಿಸಿ, ತ್ಯಾಗ ಮೂರ್ತಿಯಾಗಿ ಚಿತ್ರಿಸಿ, ಹೊಗಳಿ ಅಟ್ಟಕ್ಕೇರಿಸಿ ಆಕೆಯ ಕಾರ್ಯ ವ್ಯಾಪ್ತಿಯನ್ನು ತನ್ನ ಮನೆಯ ಅಡಿಗೆ ಕೋಣೆ ಮತ್ತು ಶಯನಾಗಾರಕ್ಕೆ ಮಾತ್ರ ಸೀಮಿತಗೊಳಿಸಿದ ಪುರುಷ ಸಮಾಜ ಇಂದು ಸಣ್ಣಗೆ ಕಂಪಿಸುವಂತಾಗಿದೆ. ಕಾರಣ ಹೆಣ್ಣು ನಿಧಾನವಾಗಿ ಅಡಿಗೆ ಕೋಣೆಯ ಕಿಟಕಿಯಿಂದ ಆಚೆ ಗಂಡು ಕೇವಲ ತನ್ನದು ಎಂದುಕೊಂಡಿದ್ದ ಪ್ರಪಂಚದ ಕಡೆಗೆ ದೃಷ್ಠಿ ಬೀರಿದ್ದಾಳೆ. ತನ್ನ ಕಾರ್ಯ ವ್ಯಾಪ್ತಿಯನ್ನು ಪುರುಷನಿಗೆ ಸರಿಸಮನಾಗಿ ವಿಸ್ತರಿಸಿಕೊಂಡು ಬೆಳೆಯುತ್ತಿದ್ದಾಳೆ. ತಾನು ಕೂಡ ಪುರುಷನಂತೆಯೇ – ಕೆಲವೊಮ್ಮೆ ಆತನಿಗಿಂತ ಸಮರ್ಥವಾಗಿ – ಎಂಥ ಕ್ಷೇತ್ರದಲ್ಲೇ ಆಗಲೀ ದುಡಿಯಬಲ್ಲೆ – ಎಂಥ ಗೆಲುವನ್ನೇ ಆದರೂ ದಣಿಯದೆ ದಕ್ಕಿಸಿಕೊಳ್ಳಬಲ್ಲೆ – ತಾನು ಅಬಲೆಯಲ್ಲ ಸಬಲೆಯೆಂಬುದನ್ನು ತೋರಿಸಿಕೊಡುತ್ತಿದ್ದಾಳೆ. ಅಡುಗೆಯನ್ನೂ ಒಂದು ವಿಜ್ಞಾನವನ್ನಾಗಿ ರೂಪಿಸಿದ್ದಾಳೆ. ಅಡುಗೆಮನೆಯಿಂದ ಅಂತರೀಕ್ಷದವರೆಗೂ ಎಲ್ಲೆಡೆಯೂ ತಾನು ಸಲ್ಲಬಲ್ಲೆ ಎಂದು ತೋರಿಸಿಕೊಟ್ಟಿದ್ದಾಳೆ. ಸೈನಿಕ ಸೇವೆಯಂಥ ದೈಹಿಕ ಸಾಮರ್ಥ್ಯ ಬೇಡುವಂಥ ಕ್ಷೇತ್ರದಲ್ಲಿ ಕೂಡ ತನ್ನ (ಸಾಮರ್ಥ್ಯದ ಛಾಪು ಮೂಡಿಸಿದ್ದಾಳೆ) ಗೆಲುವಿನ ನಗು ಬೀರಿದ್ದಾಳೆ. ತನ್ನ ಅರಿವಿನ ಬೆಳಕಲ್ಲಿ ತನ್ನ ಸುತ್ತಣ ಸಮಾಜವನ್ನೂ ಬೆಳಗುವ ಜ್ಯೋತಿಯಾಗಿದ್ದಾಳೆ. 

ಈ ವಿಚಾರದಲ್ಲಿ ನಮ್ಮ ಗ್ರಾಮೀಣ ಪ್ರದೇಶಗಳ ಮಹಿಳೆಯರೂ ಹಿಂದೆಬಿದ್ದಿಲ್ಲ. ತಮ್ಮ ನಡುವೆಯೇ ಸಹಕಾರ ಸಂಸ್ಥೆಗಳು, ಸ್ವ-ಸಹಾಯ ಸಂಘಗಳನ್ನು ರೂಪಿಸಿಕೊಂಡು ತಾನು ಆರ್ಥಿಕವಾಗಿ, ಬೌದ್ಧಿಕವಾಗಿ ಸಾಮಾಜಿಕವಾಗಿ ಸದೃಢಳಾಗುತ್ತಾ ತನ್ನ ಗ್ರಾಮವನ್ನೂ ಅಭಿವೃದ್ಧಿಪಡಿಸುತ್ತಾ ಗಾಂಧೀಜಿಯವರ ಗ್ರಾಮ ಸಬಲೀಕರಣದ ಮೂಲಕ ದೇಶಾಭಿವೃದ್ಧಿಯ ಕನಸನ್ನು ಸಮರ್ಥವಾಗಿ ಸಾಕಾರಗೊಳಿಸುತ್ತಿದ್ದಾಳೆ. ಮಹಿಳೆ ತನ್ನನ್ನು ತಾನು ಸಮಾಜ ಕಟ್ಟುವ, ತನ್ನ ದೇಶವನ್ನು ವಿಶ್ವಮಟ್ಟದಲ್ಲಿ ಬಲಿಷ್ಠ ಶಕ್ತಿಯಾಗಿಸುವ ಮುಖ್ಯಭೂಮಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. ಇದಕ್ಕೆಲ್ಲ ಮಹಿಳೆಯಲ್ಲಿ ಮೂಡಿದ ತನ್ನೊಳಗಿನ ಸಾಮರ್ಥ್ಯದ ಅರಿವು ಮುಖ್ಯ ಕಾರಣ ಎನ್ನಬಹುದು. ಹೀಗಿರುವಾಗ ಮಹಿಳೆಗೆ ಪ್ರಾಥಮಿಕ ಮಟ್ಟದಿಂದಲೇ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣವೂ ದೊರೆತರೆ ಖಂಡಿತ ಹೆಣ್ಣು ‘ಆದಿಶಕ್ತಿ’ ಎಂಬ ತನ್ನ ಬಿರುದಿಗೆ ಅನ್ವರ್ಥವಾಗುವುದರಲ್ಲಿ ಸಂಶಯವಿಲ್ಲ.

ಗಮನಾರ್ಹ ಸಂಗತಿ ಎಂದರೆ – ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳ ಮಹಿಳೆಯರಲ್ಲೂ ಮೂಡಿದ ಅರಿವಿನ ಜಾಗೃತಿ. ತನಗಿರುವ ಅವಕಾಶಗಳನ್ನು ಅರಿತುಕೊಂಡು, ಆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನನ್ನು ತಾನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಿರುವ ಪರಿ ನಿಜಕ್ಕೂ ಶ್ಲಾಘನೀಯವೇ. ಸಹಕಾರ ತತ್ವವನ್ನು ಅರಗಿಸಿಕೊಂಡು - ಅಳವಡಿಸಿಕೊಂಡು - ಸ್ವ ಉದ್ಯೋಗ ಮಾರ್ಗಗಳನ್ನು ರೂಪಿಸಿಕೊಂಡು ಆರ್ಥಿಕ ಸ್ವಾವಲಂಬನೆ ಗಳಿಸಿಕೊಳ್ಳುತ್ತಿದ್ದಾಳೆ. ಇಂದು ಪ್ರತೀ ಹಳ್ಳಿಗಳಲ್ಲೂ ಒಂದಿಲ್ಲ ಒಂದು ಮಹಿಳಾ ಸ್ವಸಹಾಯ ಸಂಘ ಅಥವಾ ಸಹಕಾರ ಸಂಘಗಳು ತುಂಬ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೊಲಿಗೆ, ಕೈಮಗ್ಗಗಳಂತಹ ಸಣ್ಣ ಬಟ್ಟೆ ಉದ್ಯಮ - ಹಪ್ಪಳ, ಸಂಡಿಗೆ, ಶ್ಯಾವಿಗೆ, ಸಿಹಿತಿಂಡಿಗಳಂತಹ ಆಹಾರೋತ್ಪನ್ನಗಳು – ಅರಿಶಿನ, ಕುಂಕುಮಗಳಂತಹ ಗೃಹೋಪಯೋಗಿ ಸಾಮಾನುಗಳ ತಯಾರಿಕೆ - ಹಳ್ಳಿಗಳಲ್ಲಿ ಮಾತ್ರ ಸಿಗತಕ್ಕಂತಹ ನಾರು, ಬೇರುಗಳ ಅಲಂಕಾರಿಕ ಸಾಮಗ್ರಿಗಳ ತಯಾರಿಕೆ ಮತ್ತು ಅವುಗಳ ಮಾರಾಟ. ಈ ಮೂಲಕ ಮಹಿಳೆ ಗಳಿಸುತ್ತಿರುವ ಆರ್ಥಿಕ ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸ ಸಣ್ಣ ಮಟ್ಟದ್ದೇನಲ್ಲ. ಸಾಮಾನ್ಯ ಮಹಿಳೆಯೊಬ್ಬಳು ಉತ್ಪನ್ನಗಳ ಮಾರುಕಟ್ಟೆ ಮೌಲ್ಯವನ್ನರಿತು, ಸಮರ್ಪಕ ಮಾರಾಟ ತಂತ್ರಗಳನ್ನು ರೂಪಿಸಿಕೊಂಡು, ಸರಿಯಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ಆರ್ಥಿಕವಾಗಿ ಗಟ್ಟಿ ಬೆಳವಣಿಗೆ ಸಾಧಿಸುವುದು ವಿಪರೀತ ಪೈಪೋಟಿಯ ಈ ಕಾಲದಲ್ಲಿ ಕಡೆಗಣಿಸುವಂಥ ವಿಷಯ ಅಲ್ಲವೇ ಅಲ್ಲ. ಬದಲಾಗಿ ಗೌರವಿಸುವಂಥದ್ದಾಗಿದೆ. 

ಹಾಗಂತ ಮೈಮರೆಯುವಂತಿಲ್ಲ. ಬೆಳವಣಿಗೆ ಮತ್ತು ಬದಲಾವಣೆ ನಿಂತ ನೀರಲ್ಲ. ಹೊರಗಿನ ತೀವ್ರ ಪೈಪೋಟಿಯೆದುರು ಗಟ್ಟಿಯಾಗಿ ನಿಂತು, ದೌರ್ಜನ್ಯಗಳ ಮೆಟ್ಟಿ, ತನ್ನ ದೌರ್ಬಲ್ಯಗಳ ಮೀರಿ ನಿಂತು ಇನ್ನಷ್ಟು ಬೆಳೆಯಬೇಕಿದೆ. ಉಳಿಯಬೇಕಿದೆ. ಏಕೆಂದರೆ ಹೆಣ್ಣು ಸ್ವಭಾವತಹ ಮೃದು ಮನಸಿನ ಜೀವಿ. ಅದಾಗಲೇ ಪ್ರಕೃತಿ ಅವಳಿಗೆ ನೀಡಿದ ಮೀರಲಾಗದ ಜವಾಬ್ದಾರಿಗಳೇ ಗಂಡಿನ ಜವಾಬ್ದಾರಿಗಳಿಗಿಂತ ಸಾಕಷ್ಟು ಪಟ್ಟು ಜಾಸ್ತಿ ಇದೆ. ತನ್ನ ಸ್ತ್ರೀ ಸಹಜವಾದ ಭಾವಗಳನ್ನೂ, ಕರ್ತವ್ಯಗಳನ್ನೂ ಬಿಟ್ಟುಕೊಡದೇ ತನ್ನದಲ್ಲದ ಗಂಡಸಿನ ಭಾವ - ಭಾದ್ಯತೆಗಳನ್ನೂ ಮೈಗೂಡಿಸಿಕೊಂಡು, ಎರಡರ ನಡುವೆ ಸಮತೋಲನ ಕಾಯ್ದುಕೊಂಡು ಬೆಳಗಬೇಕಿದೆ. ಪ್ರಕೃತಿ ನೀಡಿದ ಕರ್ತವ್ಯ ಸಂತಾನೋತ್ಪತ್ತಿ ಮತ್ತು ಸಂಸ್ಕೃತಿ ನೀಡಿದ ಸಂಸಾರ ನಿಭಾವಣೆಯ ಜವಾಬ್ದಾರಿಗಳನ್ನು ಮರೆಯದೇ ತನ್ನ (ಸ್ತ್ರೀ) ಭಾವಗಳನ್ನು ಉಳಿಸಿಕೊಂಡು, ಪರರ (ಪುರುಷ) ಭಾವಗಳನ್ನು ಆವಾಹಿಸಿಕೊಂಡು ಪುರುಷ ನಿರ್ಮಿತ ಸಮಾಜದಲ್ಲಿ ಅವನ ಸರಿಸಮನಾದ ಸ್ಥಾನ ಸ್ಥಾಪಿಸಿಕೊಳ್ಳಬೇಕಿದೆ. ಅದಷ್ಟು ಸುಲಭದ ಮಾತಲ್ಲ. ಬಹುಮಟ್ಟಿಗೆ ಆಕೆ ಆ ಸ್ಥಾನ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾದಂತೆ ಕಂಡುಬಂದರೂ ಅದು ಮೇಲ್ನೋಟದ ಅಂಕಿ ಸಂಕಿಗಳಷ್ಟೇ ಅನ್ನಿಸುತ್ತೆ. ಅವಳ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡುವ ಅವಕಾಶವನ್ನು ಅವಳಿನ್ನೂ ಸಂಪೂರ್ಣವಾಗಿ ಹೊಂದಿಲ್ಲ. ಈ ಇಪ್ಪತ್ತೊಂದನೇ ಶತಮಾನದಲ್ಲೂ ಸ್ವಯಂ ಅಥವಾ ಗುಂಪು ನಿರ್ಣಯ ತೆಗೆದುಕೊಳ್ಳುವದರಲ್ಲಿ ವಿಶ್ವಾಸದಿಂದ ದೃಢಪಡಿಸುವ ಸಾಮಥ್ರ್ಯ ಹೊಂದುವಲ್ಲಿ ಮತ್ತು ಸ್ವಯಂ ಪ್ರೇರಿತವಾಗಿ ನಿರಂತರ ಬದಲಾವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವಲ್ಲಿ ಅವಳಿನ್ನೂ ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ಅಲ್ಲೆಲ್ಲ  ಹೆಚ್ಚಿನ ಸಂದರ್ಭದಲ್ಲಿ ಅವಳ ಕುಟುಂಬದ ನಿರ್ಣಯಗಳೇ ಪ್ರಾಧಾನ್ಯತೆ ಪಡೆಯುವುದು ಸಹಜವಾಗಿದೆ. ಇದಕ್ಕೆ ಆಕೆಯ ಸಹಜವಾದ ಮಾನಸಿಕ ಮೃದುತ್ವವೂ ಕಾರಣವಿರಬಹುದೇನೋ. 

ಇಂತಿಪ್ಪ ಹೊತ್ತಿನಲ್ಲಿ ಮಹಿಳೆ ದೃಢ ಮನಸ್ಸಿನಿಂದ ಸ್ವಯಂ ಪ್ರೇರಣೆಯಿಂದ ಸರ್ಕಾರ ಮತ್ತು ಸಮಾಜ ಕೊಡತಕ್ಕ ಅಲ್ಪ ಸವಲತ್ತು, ಸೌಲಭ್ಯಗಳನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಇನ್ನೂ ಗಣನೀಯವಾಗಿ ಬೆಳೆಯಬೇಕಿದೆ. ಪಡೆಯಬೇಕಾದ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣಕ್ಕೆ ಸಂಪೂರ್ಣ ಒತ್ತು ಕೊಡಬೇಕಿದೆ. ತಾನು ಶಿಕ್ಷಿತಳಾಗಿ ಮತ್ತು ತನ್ನ ಮುಂದಣ ಪೀಳಿಗೆ ಇನ್ನಷ್ಟು ಶಿಕ್ಷಣವಂತವಾಗುವಂತೆ ನೋಡಿಕೊಳ್ಳಬೇಕಾದ್ದು ಇಂದಿನ ಮಹಿಳೆಯ ಆದ್ಯ ಕರ್ತವ್ಯ. ಮಹಿಳಾ ಸಮಾಜವನ್ನು ಸಂಪೂರ್ಣ ಶಿಕ್ಷಣವಂತರನ್ನಾಗಿ ರೂಪಿಸಲು ಪೂರ್ಣ ಪ್ರಮಾಣದಲ್ಲಿ ಮಹಿಳೆಯೇ ತೊಡಗಿಕೊಳ್ಳಬೇಕಿದೆ. ಆ ಮೂಲಕ ಇನ್ನಷ್ಟು ಅವಕಾಶಗಳ ದಾರಿ ಮಾಡಿಕೊಂಡು ತನ್ನ ದುಡಿಯುವ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳಬೇಕಿದೆ. ಹಾಗಾದಲ್ಲಿ ಮತ್ತೊಮ್ಮೆ ಮಾತೃ ಪ್ರಧಾನ ಆಡಳಿತ ವ್ಯವಸ್ಥೆ ಬಂದರೂ ಆಶ್ಚರ್ಯಪಡಬೇಕಿಲ್ಲ.


ಜಗದ ಎಲ್ಲ ಹೆಣ್ಣು ಜೀವಗಳಿಗೂ 'ಮಹಿಳಾ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು...
ಮುಂಬರುವ ಪ್ರತಿ ದಿನವೂ ನಿಮ್ಮ ದಿನವಾಗಲಿ...


ಚಿತ್ರ ಕೃಪೆ : ಅಂತರ್ಜಾಲದಿಂದ...

ವಿ.ಸೂ. : ಈ ಬರಹ ಇ-ವಾರಪತ್ರಿಕೆ "ಪಂಜು"ವಿನ ಮಾರ್ಚ್ 8ನೇ 2013ರ  ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದೆ...
ಕೊಂಡಿ : http://www.panjumagazine.com/?p=1303

Monday, March 4, 2013

ಗೊಂಚಲು - ಅರವತ್ಮೂರು.....

ಆ ಕಪ್ಪು ಹುಡುಗಿಯ ಬಗ್ಗೆ.....



ಕಪ್ಪೆಂದು ಹಳಿಯದಿರಿ
ಅವಳ ಮನದ ಒಪ್ಪವನರಿಯದೆ...
ನನ್ನೆಡೆಗೆ ತುಡಿಯುತಿಹ ಅವಳ ಕಡುಗಪ್ಪು ಕಣ್ಣಲ್ಲಿ
ಒಲವ ಬೆಳದಿಂಗಳಿದೆ...

ಅಂದಿದ್ದೆ ನಾನಂದು -
ನನ್ನೆಲ್ಲ ತಪ್ಪುಗಳ ಮರೆತೊಮ್ಮೆ ನನ್ನೆಡೆಗೆ ನಗುವ ಚೆಲ್ಲು
ನನ್ನ ಸಾವಿಗೂ ಬಣ್ಣ ಬಂದೀತು ನಿನ್ನ ಒಲವಿಂದ...
ನಿನ್ನ ಬದುಕ ಬಣ್ಣವಾಗುವ ಬಯಕೆ ನನ್ನದು 
ಕನಸಲೂ ಸಾವು ಸನಿಹ ಸುಳಿಯದಂತೆ...
ಅಂದದ್ದು ಆ ಕಪ್ಪು ಹುಡುಗಿ...

ನನ್ನ ಮನದ ಕತ್ತಲೆಯನೆಲ್ಲ 
ತನ್ನ ನಗುವ ಕಣ್ಣ ಬೆಳಕಲ್ಲೆ 
ದೂರ ಸರಿಸಿದ್ದು ಆ ಕಪ್ಪು ಹುಡುಗಿ...

ಮುಸ್ಸಂಜೆ ತಂಪಲ್ಲಿ
ಮೌನದ ತೇರಲ್ಲಿ
ಹೊಸ ಬದುಕ ಕನಸಿಗೆ ತೋರಣವ ಕಟ್ಟಿ
ಕಣ್ಣಲ್ಲೆ ಒಲವ ಭಾವಗೀತೆಯ ಹಾಡಿದ್ದು
ಆ ಕಪ್ಪು ಹುಡಿಗಿ...

ಬಡವ ನಾನು ಕೊಡುವುದಿಷ್ಟೇ
ಮುತ್ತಿನುಂಡೆಯ ಭೂರಿ ಭೋಜನ
ನಿತ್ಯ ಅವಳ ಮೃದು ಅಧರಕೆ...
ನಿನ್ನ ತೋಳ್ಬಲೆಯೆ ಇಂದ್ರನೋಲಗವೆಂದು
ತೃಪ್ತ ನಗೆಯಿಂದುಲಿವಳೆನ್ನಯ 
ಆ ಕಪ್ಪು ಹುಡುಗಿ...

ಕಪ್ಪಾದರೂ ಅವಳು
ಕಪ್ಪಲ್ಲ ಅವಳ ಒಲವು...
ನನ್ನ ನಲಿವಲ್ಲಿ ಅವಳ ನಗುವಿದೆ...
ಅವಳ ನಗುವಲ್ಲೆ ನನ್ನ ಉಸಿರಿದೆ...
ಬದುಕ ಹಸಿರಿನ ಹೆಸರು
ಆ ಕಪ್ಪು ಹುಡುಗಿ...

ಚಿತ್ರ ಕೃಪೆ : ಚಿತ್ರಸಂತೆಯಲ್ಲಿ ಸೆರೆಹಿಡಿದ ಚಿತ್ರ...ಕಲೆಗಾರನ ಹೆಸರು ಗೊತ್ತಿಲ್ಲ...ಕಲೆಗಾರನ ಕ್ಷಮೆಕೋರುತ್ತಿದ್ದೇನೆ...

ವಿ.ಸೂ. : ಈ ಬರಹ ಇ-ವಾರಪತ್ರಿಕೆ "ಪಂಜು"ವಿನ ಮಾರ್ಚ್ 4ನೇ 2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ...
ಕೊಂಡಿ : http://www.panjumagazine.com/?p=1178