Saturday, February 21, 2015

ಗೊಂಚಲು - ನೂರು + ನಲವತ್ತು + ಆರು.....

ಎಲ್ಲಾ ಅಯೋಮಯ.....
(ಏನು ಹೇಳಲು ಹೊರೆಟೆನೋ ನಂಗೇ ಅರಿವಿಲ್ಲ.....)

ಎಚ್ಚರಿಕೆಯಿಂದ ನಗಬೇಕು ಇಲ್ಲಿ – ಮುಖವಾಡಗಳು ಬಣ್ಣ ಬಣ್ಣದಲ್ಲಿರುತ್ತವೆ...

ಮುಳ್ಳಿನ ಗಿಡವೂ ಹಸಿರಾಗಿಯೇ ಇರುತ್ತದೆ ಮತ್ತು ಅದರಲ್ಲೂ ಹೂಗಳರಳುತ್ತವೆ...

ಗಡ್ಡ ಬಿಟ್ಟು ಅಥವಾ ಬಿಳಿ ಸೀರೆಯುಟ್ಟು ಧ್ಯಾನಕ್ಕೆ ಕೂತರೆ ಜ್ಞಾನಿಗಳಾದೇವಾ ಇಲ್ಲವಾ ಗೊತ್ತಿಲ್ಲ...
ಆದರೆ, ಖಂಡಿತಾ ಅರಿವೆಂಬುದು ಬದುಕಿನ ಮಳೆ, ಬಿಸಿಲು, ಬಿರುಗಾಳಿಗೆ ಎದೆಯೊಡ್ಡಿದವರ ಮನದ ಕಾಲಾಳು...
ಭಕ್ತನ ಕಾಣಿಕೆಯ ಬಾಳೆ ಹಣ್ಣು ತಿನ್ನೋ ಜ್ಞಾನಿ ಅನ್ನಿಸಿಕೊಂಡ ಸ್ವಾಮಿ ಖಂಡಿತಾ ಬಾಳೆಯ ಗಿಡ ನೆಟ್ಟು ಅದು ಫಲ ಕೊಟ್ಟಾಗ ರೈತ ಅನುಭವಿಸೋ ಖುಷಿಯ ಅನುಭವಿಸಿರಲಾರ...
ಕಾಯಕದ ಬೆಳಕಲ್ಲಿಲ್ಲದ ಕೈವಲ್ಯ ಜ್ಞಾನ ಗುಹೆಯ ಕತ್ತಲಲ್ಲಿದ್ದೀತಾ.?! 
ದುಡಿದು ಬೆವರಾದ ಕೊಳೆ ಬಟ್ಟೆಯವನಿಗಿರೋ ಜೀವನಾನುಭವ ಮಡಿಯ ಶುಭ್ರ ಪೀತಾಂಬರಧಾರಿಗೆ ಇದ್ದೀತೆನಿಸಲ್ಲ...

ಅಮ್ಮನ ಒದ್ದೆ ಕೈಯಲ್ಲೂ ರಂಗೋಲಿ ಹುಡಿ ಸರಾಗವಾಗಿ ಜಾರುತ್ತದೆ...
ನನ್ನ ಒರಟು ಕೈಯನೂ ಸುಡುವ ಬಿಸಿ ಹಂಚು ಅಮ್ಮನ ಮೃದು ಕೈಯಲಿ ಇಕ್ಕಳದ ಹಂಗಿಲ್ಲದೇ ಒಲೆಯಿಂದ ಕೆಳಗಿಳಿಯುತ್ತೆ...!!!
ಅಮ್ಮನ ಹಣೆಯ ಬೆವರ ಹನಿ – ಅಪ್ಪನೆದೆಯ ಒದ್ದೆ ರೋಮ ಹೇಗೆ ಬದುಕಬೇಕೆಂಬ ಸಾವಿರ ಕಥೆ ಹೇಳುತ್ತವೆ...
ಆದರೆ ಅವರೆಂದೂ ಪ್ರವಚನ ಕೊಟ್ಟಿದ್ದನ್ನ ಕೇಳಿಲ್ಲ...

ಜೀವಿಸಿ ಬಿಡಬೇಕು ರಾಕ್ಷಸ ಕರಡಿಯ ರತಿಯ ತೀವ್ರತೆಯಲ್ಲಿ ಭೂತ, ಭವಿಷ್ಯಗಳ ಹಂಗಿಲ್ಲದೆ ಇದ್ದದ್ದು ಇದ್ದಂತೆ ಈ ಘಳಿಗೆಯಲಿ...

ಹುಟ್ಟಿಲ್ಲದೆ ದೋಣಿಯ ನದಿಗಿಳಿಸಿದ ಮೇಲೆ ತೇಲಲೆ ಬೇಕು ನದಿ ತೇಲಿಸಿದ ಹಾಗೆ...

ಹೆಗಲ ಮೇಲೆ ಹೆಣ ಹೊತ್ತಾಗಲೇ ಇಲ್ಲಿನ ಸಕಲ ನಶ್ವರತೆಯೂ ಅರ್ಥವಾಗಿ ಬದುಕಿನೆಡೆಗೆ ಅಪಾರವಾದ ಹುಚ್ಚು ಮೋಹ ಹುಟ್ಟಿಬಿಟ್ಟಿತು...  

ಯಾರದೋ ಘೋರಿಯ ಮೇಲೆ ಅವರವರ‍್ಯಾರೋ ನೆಟ್ಟ ನಿಂಬೆಯ ಗಿಡಕ್ಕೆ ಅದ್ಹೇಗೋ ಮಲ್ಲಿಗೆ ಬಳ್ಳಿಯೊಂದು ಹಬ್ಬಿದೆ – ಇದೀಗ ಮಸಣದ ಮೂಲೆಯಲಿ ಮಲ್ಲಿಗೆ ಅರಳಿದೆ – ಸಾವಿನ ವಾಸನೆಯ ಜೊತೆ ಬೆರೆತ ಮಲ್ಲಿಗೆ ಕಂಪು...

ಕಿಟಕಿಯಾಚೆ ಕಾಂಬ ಲೋಕ ಮಹಾ ಮಾಯಕ ರೂಪ...
ಕುತೂಹಲದ ಎಣ್ಣೆ ಉರಿದು ಹೊಳೆವ ಕಣ್ಣ ದೀಪ...
ಮಿತಿಗಳ ಮೀರುವಾಸೆಯಲಿ ಉರಿವ ಮನದ ತಾಪ...
ನಾವೇ ನೆಟ್ಟುಕೊಂಡ ಕಂಬಿಗಳೊಳಗಿನ ಬದುಕಿದು ಯಾವ ದೇವನ ಶಾಪ...

ದನಿ ಇಂಪಿರುವ ಮಾತ್ರಕ್ಕೆ ಅಳಲೇ ಬಾರದೆ ಕೋಗಿಲೆ...?

ಎಲ್ಲ ಗೊಂದಲಗಳಾಚೆ ನಗುವೆಂಬುದಿದ್ದರೆ ಅದು ಸಾವೇ ಇರಬೇಕು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, February 13, 2015

ಗೊಂಚಲು - ನೂರಾ ನಲವತ್ತೈದು.....

ಸುಮ್ಮನೇ ಒಂದಷ್ಟು ಮಾತು.....

ಆ ದಾರಿಯ ತಗ್ಗು ದಿಣ್ಣೆಗಳಲ್ಲಿ ನಡೆವಾಗ ಆ ಅಜ್ಜಿ ಮೆಲ್ಲಗೆ ತಾತನ ಕೈ ಹಿಡಿಯುತ್ತಾಳೆ. ಬೆಸೆದ ನಡುಗುವ ಕೈಗಳಿಂದ ಶಕ್ತಿ ಸಂಚಾರದ ಆಸರೆ ಯಾರಿಂದ ಯಾರಿಗೆ ಎಂಬುದು ಅರಿವಾಗದ ಮಾಗಿದ ಅಕ್ಕರೆಯ ಕಾಳಜಿ. ಪ್ರೇಮವೆಂದರೆ ಇದೇ ಮತ್ತು ಇಷ್ಟೇ ಅಲ್ಲವಾ - ಪ್ರೇಮ ದೈವೀಕ ಅನ್ನಿಸೋದು ಇಂಥ ಪುಟ್ಟ ಪುಟ್ಟ ಕ್ಷಣಗಳ ಸಾಂಗತ್ಯದಲ್ಲೇ ಅಲ್ಲವಾ ಅಂತನ್ನಿಸಿ ಯಾವುದೋ ಹಿಗ್ಗಿನಿಂದ ಪಕ್ಕ ತಿರುಗಿದರೆ ನನ್ನ ಕಪ್ಪು ಹುಡುಗಿಯ ಕಡುಗಪ್ಪು ಕಂಗಳಲ್ಲಿ ತಂಪಾದ ತೆಳು ನಾಚಿಕೆ... 

@@@

ಒಂದು ಸ್ನೇಹ ಬಂಧ...
ಭಾವ ಮತ್ತು ಒಡನಾಟ ಅದರ ಎರಡು ಬೆಸುಗೆಗಳು...
ಭಾವ – ಅದು ಒಂಟಿಯಾಗಿಯೇ ಆದರೂ ನೂರು ಕಾಲ ನಡೆಯಬಲ್ಲ ಅಂತರಂಗದ ಒಡನಾಡಿ...
ಒಡನಾಟ – ಒಂಟಿಯಾಗಿ ಹತ್ತು ಹೆಜ್ಜೆಗಳನೂ ನಡೆಯಲಾರದ ಹೆಳವ...
‘ಸ್ನೇಹದ ಪಲ್ಲಕ್ಕಿಯ ಮೇಲೆ ಕೂತ ನಿರ್ವ್ಯಾಜ್ಯ ಪ್ರೀತಿ, ಅಭಿಮಾನಗಳೇ’ ಭಾವದ ಅಧಿದೇವತೆಗಳು...
ಒಡನಾಟ ತಾನು ‘ಕ್ರಿಯೆಗೆ ಪೂರಕವಾದ ಆಪ್ತ ಪ್ರತಿಕ್ರಿಯೆಯ’ ಅಡಿಯಾಳು...
ಭಾವ – ನಮ್ಮೊಳಗೆ ನಾವೇ ನಮಗೆ ಬೇಕಾದಂತೆ ಸಿಂಗರಿಸಿ ಕಾಪಿಟ್ಟುಕೊಳ್ಳಬಹುದಾದ ಎದೆಯ ಹಾಡು...
ಒಡನಾಟ – ನಾನೆಂಬುದು ನಾವಾಗಿ ನಕ್ಕು ಸಲಹಿಕೊಂಡು ಹಾಡಬೇಕಾದ ಜುಗಲ್ ಬಂಧಿ...
ಭಾವ ಒಂಟಿ ಮನದಲೂ ಉಸಿರಾಡಬಲ್ಲ ಮೌನ ಸಂಭಾಷಣೆ...
ಒಡನಾಟವೆಂದರೆ ಎರಡು ಮನಗಳ ಭಾವದ ಅಭಿವ್ಯಕ್ತಿಯಾದ ಮಾತು, ಕಥೆ, ವ್ಯಥೆಗಳ ವಿನಿಮಯ...
ಭಾವ ತನ್ನೊಳಗೇ ತಾನು ಬೆಳೆಯಬಲ್ಲ, ಅಳಿಯಲೂ ಬಲ್ಲ ಪ್ರೀತಿಯೊಂದನೇ ನೆಚ್ಚಿಕೊಂಡ ಆತ್ಮದ ಒಳಸೆಲೆ...
ಒಡನಾಟದ್ದು ದೊಡ್ಡ ಬಳಗ - ಪ್ರೀತಿ, ಅಭಿಪ್ರಾಯ, ಭಿನ್ನಾಭಿಪ್ರಾಯ, ಅಹಂ (ಇಗೋ), ಅಹಂಕಾರ, ಅಲಂಕಾರ ಹೀಗೆ ಎಷ್ಟೆಷ್ಟೋ ಆಕಾರ, ವಿಕಾರಗಳೆಲ್ಲ ಅದರ ಒಳಮನೆಯ ಒಕ್ಕಲೇ...
ಮನೆಯ ಯಾಜಮಾನ್ಯ ಯಾರದಿದೆ ಎಂಬುದರ ಮೇಲೆ ಒಡನಾಟದ ಅಳಿವು ಉಳಿವು ನಿರ್ಧರಿತ...
ಯಜಮಾನಿಕೆ ಪ್ರೀತಿಯ ಕೈತಪ್ಪಿತೋ ಎಂಥ ಆತ್ಮ ಸಾಂಗತ್ಯದ್ದೇ ಆದರೂ ಒಡನಾಟದ ಉಸಿರುಗಟ್ಟಿತೆಂದೇ ಅರ್ಥ...
ಭಾವದರಮನೆಗೆ ಆ ಭಾವದೆಡೆಗಿನ ಸೆಳೆತವೊಂದೇ ಅಧಿನಾಯಕ...
ಪ್ರೀತಿ ಪ್ರಧಾನವಾದ ಭಾವ ಮತ್ತು ಸೂಕ್ತ ಪ್ರತಿಕ್ರಿಯೆಗಳ ಒಡನಾಟ ಎರಡೂ ದಕ್ಕುವುದಾದರೆ (?) ಆ ಬಂಧದ ಸೌಂದರ್ಯವೇ ಬೇರೆ...
ಪ್ರೀತಿ ಅಭಿಮಾನದ ಸಾಂಗತ್ಯದಲ್ಲಿ ಒಡಮೂಡಿದ ಎಷ್ಟೋ ಸ್ನೇಹ ಬಂಧಗಳು ಒಡನಾಟದ ಹಾದಿಯಲ್ಲಿ ಪ್ರೀತಿಯ ಪ್ರತಿಕ್ರಿಯೆಗಳ ಸಾಂಗತ್ಯ ತಪ್ಪಿ ಕೇವಲ ಭಾವದ ಒಂಟೊಂಟಿ ನಡಿಗೆಯಲ್ಲಿ ಕಾಲ ತಳ್ಳುವುದು ಅನುಭವವೇದ್ಯ ಸತ್ಯ...
ಪ್ರತಿಕ್ರಿಯೆಗಳ ಸಾಂಗತ್ಯ ತಪ್ಪಿದ್ದು ಯಾವ ಕಡೆಯಿಂದ ಎಂಬುದು ನಗಣ್ಯ – ತಪ್ಪಿದ್ದು ಯಾವುದೋ ಒಂದು ಕಡೆಯಿಂದಲೇ ಆಗಿದ್ದರೂ ಪರಿಣಾಮ ಒಟ್ಟು ಬಾಂಧ್ಯವ್ಯದ ಮೇಲೇ...
ಆತ್ಮ ಸಾಂಗತ್ಯವಾಗಿ ಕೊನೆಗಾಲದವರೆಗೆ ಸಾಗಬಹುದಾಗಿದ್ದ ಎಷ್ಟೋ ಬಂಧಗಳ ನಡುದಾರಿಯಲ್ಲೇ ಕಳಕೊಂಡಾದ ಮೇಲೆ ಮೂಡಿದ ಅರಿವೆಂದರೆ - ಭಾವ ಇಲ್ಲದ ಒಡನಾಟ, ಒಡನಾಟಕ್ಕೆ ಕಾವು ನೀಡದ ಭಾವ ಎರಡೂ ಅಪೂರ್ಣವೇ...
ಅಲ್ಲಿ ನಗುವೆಂಬುದು ಮತ್ತದೇ ಕೃತಕ ಉಸಿರಾಟ ಸಾಧನ...
ಭಾವಕ್ಕೆ ತಕ್ಕ ಒಡನಾಟದ ಒಲವೂ ದಕ್ಕಿದರೆ ಸುಮ್ಮನೆ ಆ ಬಂಧದೊಂದಿಗೆ ನಡೆದುಬಿಡುವುದೊಳಿತು – ಯಾವ ತಕರಾರೂ ಮಾಡದೆ, ಎಂಥ ತಂಟೆಯನೂ ಹೂಡದೆ...

@@@

ಅಲ್ಲೆಲ್ಲೋ ಕೂತವರ ಮೌನ 'ಧ್ಯಾನ' ಆಗಿರದೇ ಅದವರ 'ಸಾವೂ' ಇರಬಹುದು...
ಸಾವೆಂದರೆ ದೇಹದ್ದು ಮಾತ್ರವೇ ಆಗಿರಬೇಕಿಲ್ಲ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, February 12, 2015

ಗೊಂಚಲು - ನೂರಾ ನಲವತ್ತು + ನಾಕು.....

ಹಗಲಿಗೊಂದಷ್ಟು - ಇರುಳಿಗಿನ್ನೊಂದಿಷ್ಟು ನಲ್ನುಡಿಗಳು.....

ಬೆಳಗೆಂದರೆ - ಒಲವು ಎದೆಯ ಅಕ್ಷರವಾಗಿ ಕೊನರಿ ಕೊರಳ ಹಾಡಾಗಿ ಬೆಳೆವ ಭರವಸೆಯ ಬೆಚ್ಚನೆ ಬೆಳಕಿನ ಗೂಡು...
ಶುಭೋದಯ...
:::
ಇರುಳ ಹಾಸಿನ ಮೇಲೆ ನಗೆಯ ದಿಬ್ಬಣದ ಕನಸಿನ ಚಿತ್ತಾರವ ನೇಯುತ್ತಾ ಬರುವ ಭವ್ಯತೆಯ ಬೆಳಕ ಉತ್ಸವಕೆ ಕಾತರದ ನಿರೀಕ್ಷೆಯಲಿ ಕಂಗಳಿವು ನಿದಿರೆಯ ಮುದ್ದಿಸಲಿ...
ಶುಭರಾತ್ರಿ...
:::
ಗರ್ಭದಲ್ಲಿ ಹೊಸ ಕನಸ ಹಾಡೊಂದನು ಹೊತ್ತು ಮತ್ತೊಂದು ಬೆಳಗಾಯಿತು...
ಬದುಕ ಋಣ ಬಲು ದೊಡ್ಡದು...
:::
ಇರುಳ ಗರ್ಭವು ಹೊಸ ಹೊಸ ಸವಿಗನಸುಗಳ ಹಡೆಯಲಿ...
ಭರವಸೆಯ ಮತ್ತೊಂದು ಹಗಲನ್ನು ಎದುರ್ಗೊಳ್ಳಲು ಎದೆಗೂಡನು ಸಿಂಗರಿಸೋಣ ಕಣ್ಣ ಹೊಳಪಿಂದ...
ಶುಭರಾತ್ರಿ...
:::
ಬೆಳಗೆಂದರೆ ಬರೀ ಬೆಳಗಷ್ಟೇ... 
ಮತ್ತೇನಿಲ್ಲ...
:::
ನಮ್ಮೆಲ್ಲರ ಎದೆಯ ಗರ್ಭಗುಡಿಯ ನಂದಾದೀಪಕೆ ಎಣ್ಣೆ ಸುರಿದು, ಕಣ್ಣ ಕಲ್ಯಾಣಿಯಲಿ ಕಾಲಾಡಿಸುತ ಕೂತ ಕನಸುಗಳಿಗೆ ಹಗಲಲ್ಲೂ ನಗಬಲ್ಲ ಜೀವಜಲವನ್ನು ಈ ಇರುಳು ತುಂಬಿಕೊಡಲಿ...
ಶುಭರಾತ್ರಿ...
:::
ಹೂಬುಟ್ಟಿ ಹೊತ್ತು ನಸು ನಾಚಿಕೆಯ ನಗು ಚೆಲ್ಲಿ ನಿಂತ ಹುಡುಗಿ 'ವಸುಧೆ...' 
ಅವಳ ಕಣ್ಣಲ್ಲಿ ತನ್ನ ಕನಸ ದುಕಾನು ತೆರೆದು ಕೂತ ಬಳೆಯಂಗಡಿ ಒಡೆಯ 'ರವಿರಾಯ...'
ಬೆಳಗಾಯಿತು - ನನ್ನ ಕಣ್ಣಲೂ ಹೊಸ ಬೆಳಕು...
ಶುಭದಿನ...
:::
ಇರುಳ ದಿಬ್ಬದ ಮೇಲೆ ಕನಸುಗಳ ದಿಬ್ಬಣ ಸಾಲು...
ಎಲ್ಲಿಂದಲೋ ಹೊರಟು ನನ್ನೆದೆಯ ಬೀದಿಗೇ ಬರುತಿರುವಂತಿದೆ...
ಶುಭರಾತ್ರಿ...

Saturday, February 7, 2015

ಗೊಂಚಲು - ನೂರಾ ನಲವತ್ಮೂರು.....

ಆಯಿ ಅಂದರೆ ಆಯಿ ಅಷ್ಟೇ.....
(ಹುಡುಗಿಯ ಹೊಗಳಿ ಪದಗಳ ಪೋಣಿಸಿದಂತಲ್ಲ ಅಮ್ಮನೊಲವ ಬಣ್ಣಿಸುವುದು...)

ಅವಳ ಮಡಿಲ ನಗು ನಾನು...:)
ಬದುಕು ಅವಳಿಗೆಂದು ಕೈಯೆತ್ತಿ ಒಂದಾದರೂ ನಗುವ ಕೊಟ್ಟಿದ್ದ ಕಂಡಿಲ್ಲ...
ಹಾಗಂತ ಅವಳೆಂದೂ ಕಣ್ತುಂಬಿಕೊಂಡು ಕೂತಿದ್ದನ್ನೂ ಕಂಡಿಲ್ಲ...
ಕೇವಲ ತನಗೆ ಅಂತ ಏನನ್ನೂ ಮಾಡಿಕೊಂಡದ್ದಿಲ್ಲ...
ಇಲ್ಲಿ ನಾ ನಗುವುದಕ್ಕಾಗಿ ಅಲ್ಲಿ ಅವಳು ಹಲ್ಲು ಕಚ್ಚಿ ಬದುಕ ಸೈರಿಸಿಕೊಳ್ಳುತ್ತಾಳೆ - ಆಗೀಗ ಸೆರಗಿನಂಚು ಒದ್ದೆಯಾದದ್ದೂ ನನ್ನ ಕಣ್ಣಳತೆಯಿಂದಾಚೆಯೇ ಉಳಿವಂತೆ ನೋಡಿಕೊಳ್ಳುತ್ತಾಳೆ...
ಅಕ್ಷರ ಗೊತ್ತಿಲ್ಲ – ಮಾತಿಗೆ ಬಣ್ಣ ಬಳಿಯುವ ಚಾತುರ್ಯದ ಅರಿವಿಲ್ಲ...
ಬದುಕನ್ನು ಹಳಿಯದೇ, ಎಂಥ ಸಮಸ್ಯೆಯ ಎದುರೂ ತಲೆ ಬಾಗದೇ, ಅವುಡುಗಚ್ಚಿ ನಡೆದುಬಿಡುವ ಅವಳ ಬದುಕ ರೀತಿ ತುಂಬಾನೇ ಕಲಿಸಿದೆ ನನಗೆ...
ಬದುಕು ಬಂಧಗಳೆಲ್ಲ ಸೇರಿ ದಯಪಾಲಿಸಿದ ನೋವುಗಳನೆಲ್ಲ ತನ್ನ ಗೆಲುವಿನ ನಗೆಯ ಬೆಳೆಯ ಗೊಬ್ಬರವಾಗಿಸಿಕೊಂಡ ಅವಳ ಆತ್ಮ ಶಕ್ತಿಯ ಪರಿಯನ್ನು ದಂಗಾಗಿ ನೋಡುತ್ತೇನೆ...
ಇಂದಿಗೂ – ಎಂದಿಗೂ ಅವಳ ಜೀವನ ಪ್ರೀತಿಯೇ ನನ್ನ ಬದುಕ ಸ್ಫೂರ್ತಿ...
ನಂಗೆ ಉಸಿರು ನೀಡಿದ ನನ್ನ ಮೊದಲ ಆಪ್ತ ಗೆಳತಿ ಆಕೆ...
ನಾನೇ ದೂರವಿಟ್ಟ ನನ್ನ ನಾಳೆಗಳ ಕನಸುಗಳನ್ನು ಅವಳು ಕಾಣುತ್ತಾಳೆ ನನಗಾಗಿ... 
ಅವಳೆದೆಯ ಬೆಂಕಿಯಲಿ ಚಳಿ ಕಾಯಿಸಿಕೊಂಡು ಬೆಚ್ಚಗಿರುವ ಮಹಾ ಪುರುಷ ಮಗರಾಯ ನಾನು... 
ಬದುಕಿನೊಂದಿಗೆ ಜಿದ್ದಿಗೆ ಬಿದ್ದ ಮಹಾ ಜಿಗುಟಿನ ಹೆಣ್ಣು ಜೀವ ಅವಳು - ಅವಳಿಗಿಂದು ಅರವತ್ತೇಳು ವಸಂತಗಳು ತುಂಬಿದವು – ಇಂದಿಗೂ ಅವಳಲ್ಲಿರುವ ಕುಂದದ ಜೀವನೋತ್ಸಾಹ ನನ್ನ ಅಚ್ಚರಿ...
ಉಹುಂ – ಅವಳಿಗದರ ಅರಿವಿಲ್ಲ...
ಹೇಳೋಣವೆಂದರೆ ಅವಳೂರಲ್ಲಿ ಜಂಗಮವಾಣಿ ಕೂಡ ಸದ್ದು ಮಾಡೋಲ್ಲ...
ಇಲ್ಲೇ ಹೇಳುತ್ತೇನೆ – ಪ್ರತ್ಯಕ್ಷವಾಗಿ ಅದು ಅವಳ ತಲುಪಲಾರದೆಂದು ಗೊತ್ತಿದ್ದೂ....
ಹೇಯ್ – ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ಕಣೇ “ಸಾವಿತ್ರೀ...”
ನನ್ನೆಲ್ಲ ಶಬ್ಧ ಬಂಢಾರದ ನಿಲುಕಿನಾಚೆಯ ಅಮೂರ್ತ ಭಾವಸೆಲೆ ನಿನ್ನ ಮಮತೆ...
ನೀನೆಂದರೆ ಎಂಥ- ಗ್ರೀಷ್ಮದ ದಾಳಿಗೂ ಒಂದೇ ಒಂದು ಹನಿ ಕೂಡಾ ಬತ್ತದ ಒಲವ ಸರಿತೆ...
ಎನ್ನ ಕಾಯುವ ಮಮತೆಯೊಡಲೇ ಲವ್ ಯೂ ಕಣೇ... ❤ ❤ ❤ 

Thursday, February 5, 2015

ಗೊಂಚಲು - ನೂರಾ ನಲವತ್ತೆರಡು.....

ಮತ್ತಿಷ್ಟು ಖಾಲಿ ಖಾಲಿ ಭಾವಗಳು.....

ಪ್ರತೀ ಖುಷಿಗೂ ಖಂಡಿತಾ ಒಂದು ಅಂತ್ಯ 'ಇದ್ದೇ' ಇದೆ...
ಅಂತೆಯೇ ಪ್ರತೀ ವೇದನೆಗೂ ಕೂಡಾ ಅಂತ್ಯ ಇರುವುದಂತೆ - 'ಅಂತೆ' (?)...
ನಂಬದೇ ವಿಧಿಯಿಲ್ಲ ಬಿಡಿ...

;;;

ದೃಷ್ಟಿ ಇಂಗಿದರೂ ನನ್ನ ಕಣ್ಣ ಗುಡ್ಡೆಗಳ ಮೇಲೆ ಮನಸ ಆಸರೆಯಿಂದ ಕಲ್ಪನೆಯ ಕುಂಚ ಬಳಸಿ ಕನಸ ಬಣ್ಣ ಬಳಿದು ನಿನ್ನ ಚಿತ್ರವೊಂದ ಬಿಡಿಸ ಬಯಸುತ್ತೇನೆ...
ಇನ್ನೇನು ಕೊನೆಯಲ್ಲಿ ಆ ಚಿತ್ರಕ್ಕೆ ಕಂಗಳ ಬರೆದು ಜೀವ ತುಂಬಬೇಕು; ಅಷ್ಟರಲ್ಲಿ ನೆನಪುಗಳೆಲ್ಲ ಹನಿಗಳಾಗಿ ನನ್ನ ಕುರುಡು ಕಣ್ಣಲ್ಲಿ ತುಳುಕಿ ಬರೆದ ಚಿತ್ರವೆಲ್ಲ ಕಲೆಸಿ ಹೋಗುತ್ತೆ...
ದೃಷ್ಟಿಹೀನವಾದರೂ ಮನದ ಭಾವ ರೂವಾರಿಗಳಾದ ಈ ಕಂಗಳು ಭಾವಹೀನ ಅಲ್ಲವಲ್ಲ...
ನೀನೆಂದರೆ ನನ್ನೊಳಗೆ ನಾ ಸದಾ ಹುಡುಕೋ ಖುಷಿಯ ಆಕಾಶ ಬುಟ್ಟಿ...

;;;

ಆತ್ಮ ಸಂಗಾತಗಳೇ -
ನೂರಾರು ವಿಧಗಳ ಬಣ್ಣಗಳ ಸೃಜಿಸೋ ಬೆಳಕಿನಂಥ ಬದುಕು – ಎಲ್ಲಾ ಬಣ್ಣಗಳನೂ ನುಂಗಿ ತೇಗುವ ಕತ್ತಲಿನಂಥ ಸಾವು ಎರಡೂ ಒಂದೇ ಎದೆಯ ಕೋಣೆಯಲಿ ತಬ್ಬಿ ಮಲಗಿವೆ...
ಅವುಗಳ ಅನೈತಿಕ (?) ಸರಸೋನ್ಮಾದ ಸೃಷ್ಟಿಸುವ ಸಂಬಾಳಿಸ ಹೋದಷ್ಟೂ ಕೆರಳಿ ನಿಲ್ಲುವ ವಿಕಾರ ಭಾವಗಳೆಲ್ಲದರ ಮೊದಲ ಬಲಿ ನಾನೇ...
ನೀವೂ ಬಲಿಯಾಗುವ ಮುನ್ನ ದೂರವಾಗಿಬಿಡಿ...

;;;

ಸ್ನೇಹಗಳೇ - 
ವ್ಯಕ್ತಿತ್ವದ ವೈರುಧ್ಯಗಳು, ವಿಚಾರ ಭಿನ್ನತೆಗಳೆಲ್ಲ ಕೇವಲ ಭಿನ್ನಾಭಿಪ್ರಾಯಗಳಷ್ಟೇ ಆಗಿರುವವರೆಗೂ ಪ್ರತಿದಿನವೂ ‘ಮಾತು’ ಒಡನಾಟದ ಉತ್ತುಂಗದ ಉತ್ಸವ – ಅಲ್ಲಿ ಜಗಳವೂ ಒಂದು ಮನರಂಜನೆಯ ಗಿಲಕಿಯಾಟ... 
ಒಂದ್ಯಾವುದೋ ಭಿನ್ನಾಭಿಪ್ರಾಯ ಒಟ್ಟು ವ್ಯಕ್ತಿತ್ವದೆಡೆಗೇ ಬೇಸರ, ಕ್ರೋಧಗಳಾಗಿ ಬದಲಾದ ಘಳಿಗೆಯ ಬಿಂದುವಿನಾಚೆ ‘ಮಾತು’ ಮೌನದರಮನೆಯ ಜೀತದಾಳಿನ ಶವ ಶೃಂಗಾರ – ಅಲ್ಲಿ ಸರಸವೂ ಬಂಧದ ಕೃತಕ ಉಸಿರಾಟ ಅಷ್ಟೇ...
ಅತಿ ಪ್ರಾಮಾಣಿಕತೆ ಕೆಲವೊಮ್ಮೆ ತುಂಬಾನೆ ತುಟ್ಟಿಯಾಗುತ್ತೆ ಅನ್ಸುತ್ತೆ – ಒಳಗೇ ಸುಡುವ ಅಪ್ರಾಮಾಣಿಕ ಮೌನವೇ ಹಿತವಿತ್ತು ಅನ್ನಿಸುವ ಹಾಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, February 2, 2015

ಗೊಂಚಲು - ನೂರು + ನಲವತ್ತು + ಒಂದು.....

ಖಾಲಿ ಖಾಲಿ ಭಾವಗಳು.....

ಅದೇ ಬೀದಿ, ಅದೇ ಹಾದಿ, ಅದದೇ ತಿರುವುಗಳಲಿ ಎಂದಿನಂತೆ ಒಂಟೊಂಟಿ ನಡಿಗೆ...
ನೆರಳು ಕೂಡ ದೂರ ಸರಿಯೋ ಕಾರಿರುಳಲ್ಲೂ ಜೊತೆ ಬಿಡದೆ ನಡೆವ ತುಸು ಜಾಸ್ತಿಯೇ ಉಪ್ಪುಪ್ಪು ನೆನಪುಗಳು...
ಒಪ್ಪವಾಗಿ ತಾವು ನೀಡಿ ಸಲಹುತಿರುವುದೂ - ಹೂಳಬೇಕಿತ್ತು ಈ ಹಾಳು ನೆನಪುಗಳ ಹೊಯ್ದಾಡಿ ಕಾಡದಂತೆ ಎಂದಳುವುದೂ ಎರಡೂ ಎನ್ನೆದೆಯೇ ಆಗಿರುವುದು ಬದುಕಿನ ದುರಂತವಾ...?
ಅಥವಾ ಬದುಕಿರುವುದೇ ಹಾಗಾ...??
ಎರಡು ತಲೆಯ ಹಾವಿನ ಹಾಗೆ... 

!!!

ಸ್ನೇಹವೇ -
ಎಲ್ಲಾ ಶಬ್ದಗಳೂ ಅದಿರುವಂತೆಯೇ ಅರಿವಿಗೆ ಬಾರದೇ ಹೋದರೂ ಭಾವ ಉಕ್ಕಿ ಹರಿವ ಮೌನದೊಳಗಣ ಮಾತು ಬಲು ಚಂದ...
ಎಲ್ಲಾ ಅರ್ಥವಾಗುವ ಭಾವನೆಗಳ ಶವದ ವರ್ಣನೆಯಂಥ ಮಾತಿನೊಳಗಣ ಮೌನ ಮಹಾ ಹಿಂಸೆ...
ಕಿಂಚಿತ್ತಾದರೂ ಒಲುಮೆ ಬಾಕಿ ಇದ್ದುದಾದರೆ ಎದೆಯಲ್ಲಿ, ಮೌನದ ನಡುವೆ ಒಂದು ಜಗಳವಾದರೂ ಹುಟ್ಟಲಿ...
ಒಲುಮೆಯನುಳಿಸುವ, ಉಳಿಸಿ ಬೆಳೆಸುವ ಹಠಕ್ಕೆ ಬಿದ್ದ ಜಗಳವೂ ಚಂದವೇ ಅಲ್ಲವಾ...

!!!

ಒಂದಷ್ಟು  ಬಣ್ಣ  ಬಣ್ಣದ ಖುಷಿಯ ನೆನಪುಗಳ ಬುಗ್ಗೆಗಳ ಹೆಗಲಿಗೇರಿಸಿಕೊಂಡು, ಇನ್ನಷ್ಟು ಸುಖದ ಕನಸುಗಳ ಅಂತರಂಗದ ಪೆಟ್ಟಿಗೆಯಲಿ ಬಚ್ಚಿಟ್ಟುಕೊಂಡು, ಬೆಳಕಿನುತ್ಸವದ ಕಡೆಗೆ ಒಂಟಿ ಹೆಜ್ಜೆಗಳನಿಡುತಿರುವ ಹುಚ್ಚು ಫಕೀರ ನಾನು...
ಈ ಘಳಿಗೆ ನನ್ನದೇ ಹೆಜ್ಜೆಯಡಿಯ ಧೂಳ ಹುಡಿಯನೂ ಕಣ್ಣಿಗೊಂತ್ತಿಕೊಂಬ, ಮರುಘಳಿಗೆ ದೇವಮುಡಿಯ ಪ್ರಸಾದವನೂ ತುಳಿದು ಗಹಗಹಿಸುವ ವಿಕ್ಷಿಪ್ತ ಮನದೊಡೆಯ...
ಈ ಘಳಿಗೆಯ ಖುಷಿಯೊಂದೇ ನನ್ನ ನೆಚ್ಚಿಗೆ...
ಕ್ಷಣ ಕ್ಷಣಗಳ ಖುಷಿಗಳಿಗಾಗಿ ಎಂಥ ಬೇಲಿಗಳನೂ ಮುರಿದು ಮುನ್ನುಗ್ಗುವ ಹರ ಹುಂಬ ದಾರಿ ನನ್ನದು...
ಸುಖದ ಸುಸ್ತಿನಮಲಿಗೆ ಒಗ್ಗಿಹೋದ ಈ ಮರುಳನ ಹಿಂದೆ ಬಿದ್ದವರೆಲ್ಲ ತಮ್ಮ ಸುಖಗಳ ಕಳೆದುಕೊಂಡು ಹಿಂದೆಯೇ ಉಳಿದು ಹೋದದ್ದು ನಂಬಲೇಬೇಕಾದ ಸತ್ಯ...

!!!

ಗುಲಾಬಿ ಗಿಡದಲ್ಲಿ ಮುಳ್ಳಿರುತ್ತೆ, ಮತ್ತಾಮುಳ್ಳು ನನ್ನ ಚುಚ್ಚುತ್ತೆ, ಅದಕೇ ನಾನೆಂದೂ ಗುಲಾಬಿ ಗಿಡವ ನೆಡಲಾರೆ - ನೆಟ್ಟು ನೀರು ಗೊಬ್ಬರ ಉಣಿಸಲಾರೆ ಎಂಬುವವನಿಗೆ ಗುಲಾಬಿ ಹೂವಿನ ಅಂದ ಗಂಧಗಳ ಸವಿಯುವ ಹಿತಾನುಭೂತಿಯೂ ದಕ್ಕದಲ್ಲವಾ...
ಅಂತೆಯೇ ಭಾವ ಬಂಧಗಳು ಕೂಡಾ - ನೋವ ನೀಡುತ್ತವೆಂದು ಬೆಸೆದುಕೊಳ್ಳದೇ ದೂರ ನಿಂತರೆ ಹತ್ತಿರ ಇರಬಹುದಾಗಿದ್ದಷ್ಟು ಕಾಲದ ಖುಷಿಗಳಿಂದಲೂ ವಂಚಿತರಾಗುತ್ತೇವೆ...
ಇಷ್ಟಕ್ಕೂ ಹೂವು ಬಾಡಿ ಹೋದರೂ, ಬಂಧ ಒಡನಾಟದಿಂದಾಚೆ ನಿಂತರೂ ಅವು ಅರಳಿಕೊಂಡಿರುವಾಗ ಇತ್ತ ಖುಷಿಗಿಂತ ಹೆಚ್ಚೇನಲ್ಲ ಅನ್ನಿಸುತ್ತೆ ಆ ಮೇಲಿನ ನೋವು...
ಬದುಕೆಂದರೆ ಕ್ಷಣ ಕ್ಷಣಗಳ ಖುಷಿ...
ಎಷ್ಟು ಹೆಚ್ಚು ಕ್ಷಣಗಳ ಖುಷಿಯಿಂದ ಕಳೆದೆವು ಎಂಬುದರ ಮೇಲೆ ಬದುಕಿನ ಶ್ರೀಮಂತಿಕೆಯ ಅಳೆಯೋಣ ಅಲ್ಲವಾ...
ಬೆಸೆದುಕೊಳ್ಳೋಣ ಇನ್ನಷ್ಟು ಮತ್ತಷ್ಟು ಪ್ರೀತಿಯ...
ಪ್ರೀತಿಯೆಂದರೆ ಮುಳ್ಳಿನ ನಡುವೆಯೂ ಅರಳುವ ನಗೆಗುಲಾಬಿ...

!!!

ಪಾರಿಜಾತ -
ಎಂಥ ಮೃದುವಾದ ಪಕಳೆಗಳು...
ಗಾಳಿಗೂ ಸಂಭ್ರಮವನೀವಂಥ ನವಿರು ಗಂಧ...
ಸಂಜೆ ಸಾಯುವ ಹೊತ್ತಲ್ಲಿ ಅಂಗಳದ ಏರಿಯಲಿ ಅರಳಿ ಒಂದಿಡೀ ಇರುಳನು ಉಲ್ಲಾಸದ ವಿಲಾಸದಲಿ ಲಾಲೈಸುವ ಉನ್ಮತ್ತ ಜವನಿಕೆ...
ನನ್ನ ಕನಸುಗಳೆಂದರೆ ಪಾರಿಜಾತ -
ಇರುಳ ತುಂಬ ಕನಸ ಕಾವ್ಯದ್ದೇ ಆಲಾಪ ಕಲಾಪ...
ಎದೆಯಿಂದ ಕಣ್ಣಿಗೇರಿದವೋ ಕಣ್ಣಿಂದ ಎದೆಗಿಳಿದವೋ ಒಟ್ನಲ್ಲಿ ಮೈಮನದ ಮೈದಾನವೆಲ್ಲ ಖುಷಿಯ ಕನಸುಗಳದೇ ಚಕ್ರಾಧಿಪತ್ಯ...
ಕತ್ತಲ ಕಾವಳದಲ್ಲಿ ವೈಭವದ ಒಡ್ಡೋಲಗ ನಡೆಸಿ ಬೆಳಗ ಮೊದಲ ಕಿರಣ ನೆಲ ಸೋಕುವ ಹೊತ್ತಿಗಾಗಲೇ ಅಂಗಳದಲ್ಲಿ ಪಾರಿಜಾತದ ಶವಯಾತ್ರೆ...
ನನ್ನ ಕನಸುಗಳೆಂದರೆ ಪಾರಿಜಾತ...

!!!

ಮುಖವಾಡ ತೊಡುವುದೆಂದರೆ ಆತ್ಮದ ಸಾವು ಎಂಬ ಭಾವ...
ತೊಡಲಾರೆನೆಂದರೆ ಯಾರೂ ಸುಳಿಯದ ದ್ವೀಪವಾಗುವ ಭಯ...
ಪ್ರೀತಿ ಕೊಡುವುದೆಂದರೇನೆಂಬ ಅರಿವಿನ ಗಂಧ ಗಾಳಿಯಿಲ್ಲ...
ಪ್ರೀತಿಯುಂಬುವುದರಲ್ಲಿ ಬಕಾಸುರನ ಹಸಿವು...
ಬಡಿಸುವವರಾದರೂ ಎಷ್ಟು ಕಾಲ ಬಡಿಸಿಯಾರು ಲಜ್ಜೆ ಇಲ್ಲದ ಲಂಪಟ ಮನಸಿಗೆ...
ಎತ್ತಿಡುವ ಪ್ರತೀ ಹೆಜ್ಜೆಯಡಿಯಲೂ ಬೊಗಸೆ ಒಡ್ಡುವುದೊಂದೇ ಬದುಕಾಗಿ ಹೋದಂತ ಪಾಪ ಪ್ರಜ್ಞೆಯ ಕಲೆ ಉಳಿದು ಕಾಡುತಿದೆ ಈಗೀಗ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, January 29, 2015

ಗೊಂಚಲು - ಒಂದುನೂರಾ ನಲವತ್ತು.....

ಈ ಹಗಲಿದು ಮುಗಿಯಲೇಬಾರದು.....
(ಮಲೆನಾಡ ಮನದ ಒಂದು ಒಲವ ಬೆಳಗು...)
ಹೀಗಿತ್ತು ಅಲ್ಲಿಯ ಒಡೆತನ...
ದಿನಮಣಿಯ ಮೊದಲ ಸ್ಪರ್ಶಕೆ ಕಂಪಿಸಿ ಇಬ್ಬನಿ ಹನಿಯೊಂದು ಅಡಿಕೆ ಹೆಡೆಯ ತುದಿಯಿಂದ ಕೆಳಜಾರುವ ಘಳಿಗೆಗೆ ಸರಿಯಾಗಿ ನಿದಿರೆಯ ತೋಳಿಂದ ಕೊಸರಿಕೊಂಡು ಮೆಲ್ಲಗೆ ಕಣ್ದೆರೆದೆ...

ಮುಂಬೆಳಗಿನ ಬಂಗಾರದೋಕುಳಿಯ ಹೊತ್ತಲ್ಲಿ ಗೋಪಿ ಹಕ್ಕಿಯೊಂದು ಕಳೆದಿರುಳಲಿ ನನ್ನ ಕನಸಿನೂರ ರಾಜಬೀದಿಯ ತುಂಬ ನಿನ್ನ ಹೆಜ್ಜೆ ಗುರುತು ಮೂಡಿ ನಗೆಯ ಗಂಧವೊಂದು ಸುರುಳಿ ಸುತ್ತಿದ ಸುದ್ದಿಯ ಊರಿಗೆಲ್ಲ ಸಾರುತ್ತಿತ್ತು...

ಆ ಹಕ್ಕಿಗೊರಳನು ಹಿತ ಮುನಿಸಿಂದ ಶಪಿಸುತ್ತ ಮಂಚ ಬಿಟ್ಟಿಳಿದರೆ ಅಂಗಳದ ತುಂಬಾ ಚೆಲ್ಲಿ ರಂಗವಲ್ಲಿಯಂತಾಗಿರುವ ಪಾರಿಜಾತದ ಕುಸುಮ ವಿದಾಯದ ಘಳಿಗೆಯಲೂ ನನ್ನ ನೋಡಿ ಎಲ್ಲ ಅರಿವಾದಂತೆ ನವಿರಾಗಿ ತುಂಟ ನಗೆಯ ಬೀರಿತು...

ಹಲಸಿನ ಮರದ ಕೊಂಬೆಯ ತುದಿಯಲಿ ಅತ್ತಿಂದಿತ್ತ ಬಾಲವನೆತ್ತಿಕೊಂಡು ಸುಳಿದಾಡುತಿದ್ದ ಅಳಿಲಮರಿಯೊಂದರ ಗಡಿಬಿಡಿಯಲೂ ಎಂಥದೋ ಅವ್ಯಕ್ತ ಸಂಭ್ರಮವಿದ್ದಂತಿದೆ...

ಕರುಳಿಗೆ ಕಚಗುಳಿಯಿಡುವ ಹಿತವಾದ ಚಳಿಯೊಂದಿಗೆ ಬೆರೆತ ನಿನ್ನ ಒನಪಿನ ನೆನಪಿನ ಕಾವು ಹಬ್ಬಿ ತಬ್ಬಿ ಮನಸಿದು ಮೈನೆರೆದು ಹೋಯ್ತು...

ನಿದ್ದೆ ಮರುಳಲೇ ಆಯಿಯ ಹೂ ಹಿತ್ತಲಿಗೆ ಹೋದರೆ ಮುತ್ಮಲ್ಲಿಗೆ ಹೂವಿಗೆ ಮುತ್ತಿಟ್ಟು ಅದರೊಡಲ ಜೇನ ಹೀರುತಲಿದ್ದ ದುಂಬಿಯ ಕಂಡು ಕಾಲ ಬೆರಳ ತುದಿಯಿಂದ ನಾಚಿಕೆಯಂಥ ಒಲವ ಸೆಳಕೊಂದು ನೆತ್ತಿಗೇರಿದ ಮೃದುಕಂಪನದನುಭಾವ...

ಗಂಗೆ ಕರುವಿನ ಘಂಟೆ ದನಿಗೆ ಕನಸಲ್ಲಿ ಪಿಸುನುಡಿದ ಮಾತೊಂದು ಮತ್ತೆ ಹೊರಳಿದಂತಾಗಿ ಒಡಲಿನಾಳದಲೇನೋ ಹೊಸದಾದ ಉದ್ವೇಗದುದ್ಗಾರ...

ಹಿಂದಿರುಗಿ ನೋಡಿದರೆ ಪಾಲಿ ಬೆಕ್ಕನು ಗದರುತಿದ್ದ ಪಾಂಡು ಕುನ್ನಿಯ ಕಣ್ಣಲ್ಲೂ ಅಚ್ಚರಿ ಬೆರೆತ ಅಕ್ಕರೆ ನನ್ನೆಡೆಗೆ...

ಅಮ್ಮನ ಕೈಬಳೆಗಳ ಕಣ ಕಣದೊಂದಿಗೆ ಕಲೆತ ನೊರೆ ನೊರೆ ಹಾಲು ಬಿಂದಿಗೆ ತುಂಬೋ ಸದ್ದಿಗೆ ಕಿವಿಗಳನೊಪ್ಪಿಸಿ, ಹಂಡೆಯೊಲೆಯ ಬೆಂಕಿ ನರ್ತನದೆಡೆ ಕಣ್ಣ ನೆಟ್ಟು ಕೂತ ಈ ಬೆಳ್ಳಂಬೆಳಗಲೇ ಹುಚ್ಚೆದ್ದ  ಭಾವಗಳ ಸಂತೆ ನೆರೆದ ಮನದ ಮುಗಿಲು...

ಆಹಾ ಮುಗಿಯಲೇ ಬಾರದು ಈ ಹಗಲು...

*** ಎಂದಾದರೂ ಮತ್ತೆ ಮರಳಿ ಹೊರಳೀತು.... 

Sunday, January 25, 2015

ಗೊಂಚಲು - ಒಂದು ನೂರಾ ಮೂವತ್ತೊಂಬತ್ತು.....

ಭಾವ ನಮನ.....

ಬದುಕ ಜೀವನ್ಮುಖೀ ಭಾವಗಳೆಲ್ಲ ಸದಾ ಹೊತ್ತಿ ಉರಿಯುತಲಿದ್ದು; ಆತ್ಮದ ಬೆಂಕಿ ಆರುವ ಮುನ್ನ ನನ್ನೀ ಬಂಡೆಯೆದೆಯ ಸಿಬಿರಿನೊಳಗೂ ಬೇರನಿಳಿಸಿ ಭಾವದ ಹಸಿರು ಚಿಗುರಲೆಂಬ ಹಾರೈಕೆಯಿರಲಿ...

::::::

ಸಾಹಿತ್ಯದ ಗಂಧವಿಲ್ಲದೇ, ಬರೆದದ್ದರ ಪರಿಣಾಮ ಮತ್ತು ಓದುಗನ ಮನಸಿನ ಕಳಕಳಿಯ ಹಂಗಿಲ್ಲದೇ, ನಾ ಕಂಡಂತೆ, ನಂಗೆ ತೋಚಿದಂತೆ, ನನ್ನೊಳಗೆ ಮೂಡಿದ ಭಾವಗಳಿಗೆ ಪದಗಳ ರೂಪ ಕೊಡುತ್ತಾ ಹೋದೆ... 
ಪದಗಳಿಗೆ ದಕ್ಕಿದ ಭಾವಗಳನೇ ನಂಬಿ, ಅವು ನನ್ನಲ್ಲಿ ಮೂಡಿದ್ದು ಮೂಡಿದಂತೆ ಗೀಚುತ್ತಾ ಹೋದೆ... 
ಹಾಗೆ ತೋಚಿದ್ದು ಗೀಚಿದ್ದನ್ನೆಲ್ಲ ಕೂಡಿಡುತ್ತ ಹೋದ ಸಾರ್ವಜನಿಕ ಡೈರಿಯಂಥ “ಭಾವಗಳ ಗೊಂಚಲು” ಎಂಬ ನನ್ನೀ ಬ್ಲಾಗಿಗೆ ಅದಾಗಲೇ ನಾಲ್ಕು ವರ್ಷಗಳು ಸಂದು ಹೋದವು...!!!

ಎದೆಯಂಗಳವಿದು ನೈತಿಕ ಅನೈತಿಕತೆಗಳ ಬೇಲಿಯಿಲ್ಲದೆ, ಅಸ್ಪ್ರಶ್ಯತೆಯ ಹಂಗಿಲ್ಲದೆ, ಏನೇನೆಲ್ಲ ಭಾವಗಳು ಹುಟ್ಟುವ ಪ್ರಸೂತಿ ತಾಣ – ಅದೇ ಹೊತ್ತಿಗೆ ಅವೆಲ್ಲ ಭಾವಗಳನೂ ಹೂಳುವ ಸುವಿಶಾಲ ಸ್ಮಶಾನ ಕೂಡ... 
ಅಲ್ಲಿ ಭಾಷೆಗೆ ದಕ್ಕದ ಭಾವಗಳ ನಗೆಯ ಕೇಕೆ ಮತ್ತು ನೋವ ಆರ್ತನಾದ ಎರಡೂ ಒಟ್ಟೊಟ್ಟಿಗೇ ಕಿವಿಗೆ ಬೀಳುತ್ತಿರುತ್ತವೆ... 
ಹೆಚ್ಚಿನ ಬಾರಿ ಹೂತ ಭಾವಗಳ ನಾತವೇ ರಮ್ಯ ಭಾವದಂತೆ ಪದಗಳ ಗುಚ್ಛವಾಗಿ ಆಚೆ ಬಂದದ್ದಿದೆ...

ಹುಟ್ಟು - ಸಾವು, ನಕ್ಕಿದ್ದು - ಅತ್ತಿದ್ದು, ಕಿತ್ತಾಡಿದ್ದು, ಹುಡುಕಾಡಿದ್ದು, ಕಾಡಿದ್ದು - ಹಾಡಿದ್ದು, ನಿರಾಭರಣ ಪ್ರೇಮ, ಕರಡಿಯ ಉನ್ಮಾದದ ಕಾಮ, ಮಲೆನಾಡು - ಮಳೆ - ಬೆಳದಿಂಗಳು, ಅಮ್ಮ ಮತ್ತು ಅವಳು, ಸಂಬಂಧಗಳು - ಒಳ ಒಪ್ಪಂದಗಳು, ನೋವಿನ - ಕಣ್ಣೀರಿನ ವಿಜೃಂಭಣೆ, ಬದುಕ ಕರುಣೆಯಿಂದ ಕಂಡದ್ದು - ಕಾಣಲು ಬಯಸಿದ್ದು... 
ಓಹ್ !!!
ಏನೇನೆಲ್ಲ ಬರೆದು ತುಂಬಿದೆ ನಾನಿಲ್ಲಿ...
ನನ್ನೊಳಗಿಳಿದ, ಉಳಿದ, ಅಳಿದ, ನನ್ನದೆನಿಸಿದ ಎಲ್ಲಾ ಭಾವಗಳನೂ ಬರೆದೇ ಬರೆದೆ... 
ಓದಿದ ನಿಮ್ಮಗಳ ಸಹನೆ ನಿಜಕ್ಕೂ ದೊಡ್ಡದು... 
ಮೆಚ್ಚುಗೆಯ ಮಾತುಗಳನೂ ಆಡಿ ಪ್ರೋತ್ಸಾಹಿಸಿದ ನಿಮಗಿದೋ ಋಣದ ನಮನ...

ಬರೆಯುತ್ತ ಬರೆಯುತ್ತ ಕಳಕೊಂಡವುಗಳೆಂದರೆ ಎದೆಯಾಳದ ಒಂದಷ್ಟು ದುಗುಡ, ದುಮ್ಮಾನ, ಭಾರ, ನೋವುಗಳು...
ಪಡಕೊಂಡದ್ದು ಒಂದಿಷ್ಟು ಹಗುರತೆ ಮತ್ತು ಎಲ್ಲಕಿಂತ ಮಿಗಿಲಾದ ನಿಮ್ಮಗಳ ಸ್ನೇಹ...

ನನಗೆಂದಿಗೂ ಇಷ್ಟವಾಗದ ಆದರೆ ಹೆಜ್ಜೆ ಹೆಜ್ಜೆಗೂ ಎಡತಾಕುವ ವಿಶಾದದ ಭಾವ ಸ್ಪರ್ಶವಿಲ್ಲದ ಒಣ ಒಣ ಸಾರಿಗಳು - ಕಣ್ಣಂಚಲ್ಲಿ ನಗು ಮೂಡದೇ ನಾಲಿಗೆ ತೊದಲುವ ಥ್ಯಾಂಕ್ಸ್‌ಗಳೂ (ಬಂಧದಲ್ಲಿ ಭಾವ ಇಲ್ಲದಿದ್ದುದು ಅಥವಾ ಇದ್ದ ಭಾವ ಸತ್ತದ್ದು  ಈ ಒಣ ಥ್ಯಾಂಕ್ಸ್ ಮತ್ತು ಸಾರಿಗಳಿಂದಲೇ ಅರಿವಿಗೆ ಬರುತ್ತೆ ಹೆಚ್ಚಿನ ಸಲ... ಭಾವಪೂರ್ಣವಾಗಿ ನುಡಿದ ಒಂದು ಥ್ಯಾಂಕ್ಸ್ ಅಥವಾ ಸಾರಿ ಬಂಧವೊಂದರ ಉಳಿವಿಗೆ ಕಾರಣವಾಗೋದು ಎಷ್ಟು ಸತ್ಯವೋ ಭಾವದ ಹಂಗಿಲ್ಲದಿರುವಾಗ ಇಷ್ಟಿಷ್ಟಾಗಿ ಬಂಧವ ಕೊಲ್ಲುವುದೂ ಅಷ್ಟೇ ದೊಡ್ಡ ಸತ್ಯ...) - ಮಧುರ ಬಂಧವೊಂದು ಸ್ವತಂತ್ರವಾಗಿ ಒಡನಾಡಿಕೊಂಡು ಬೆಳೆಯಲು ಬಿಡದ ಪರಿಸರ ಇವುಗಳೆಲ್ಲದರ ನಡುವೆ ಒಂದಿಷ್ಟು ಆಪ್ತ ಅನ್ನಿಸೋ ಬಾಂಧವ್ಯಗಳ ಬೆಸೆದು ಕೊಟ್ಟದ್ದು ಈ ಬ್ಲಾಗ್ ಎಂಬೋ ಜಾಲ ತಾಣ...

ಇಲ್ಲೂ ಒಂದಷ್ಟು ವಿಪರ್ಯಾಸವಿದೆ... 
ಏನ್ಗೊತ್ತಾ – ಯಾವೆಲ್ಲ ಭಾವಗಳಿಂದಾಗಿ, ಯಾವುದೆಲ್ಲ ಕಾರಣಗಳಿಗಾಗಿ ಒಂದಷ್ಟು ಸ್ನೇಹಗಳ ಪಡೆದೆನೋ ಅದದೇ ಭಾವ, ಕಾರಣಗಳಿಗಾಗಿ ಅದೇ ಸ್ನೇಹಗಳ ಕಳಕೊಂಡದ್ದೂ ಇದೆ... 
ನನ್ನ ಭಾವ, ಅನುಭವ, ಅನುಭಾವಗಳ ಓದುವಾಗ ಅಥವಾ ದೂರದಿಂದ ಕಾಣುವಾಗ ತುಂಬಾ ತುಂಬಾ ಇಷ್ಟವಾಗಿ ನಂಗೆ ಹತ್ತಿರವಾದ - ಅವನ್ನೇ ಆದರಿಸಿ, ಅನುಸರಿಸಿ ಅಂತಂದಾಗ ಕಷ್ಟವಾಗಿ ನನ್ನಿಂದ ದೂರ ನಿಂತ – ಮತ್ತೆಷ್ಟೋ ಕಾಲದ ನಂತರ ಆ ಅವವೇ ಭಾವಗಳನು ಸದ್ದೇ ಇಲ್ಲದೆ, ನನಗಿಂತ ಚೊಕ್ಕವಾಗಿ ಜೀವಿಸತೊಡಗಿದ ಸ್ನೇಹಗಳ ಕಂಡು ದಂಗಾಗಿ ನಿಂತದ್ದಿದೆ... 
ಆಶ್ಚರ್ಯವಾಗುತ್ತೆ ನಂಗೆ ಯಾವ ಭಾವ ಇಷ್ಟವಾಗದೇ ಒಡನಾಟದಿಂದಾಚೆ ನಿಂತರೋ ಅದೇ ಭಾವವ ಇನ್ಯಾವುದೋ ತಿರುವಿನಲ್ಲಿ  ತಾವೇ ಜೀವಿಸತೊಡಗಿದಾಗ ಅಥವಾ ಆ ಭಾವದ ಸತ್ಯ ಅರಿವಿಗೆ ಬಂದಾಗ ಬಿಟ್ಟು ಬಂದವನೆಡೆಗೆ ತಿರುಗಿ ಬಂದು ಅದೇ ಹಳೆಯ ಪ್ರೀತಿಯಿಂದ ಮಾತಾಡಿಸುವವರೂ ಕಡಿಮೆಯೇ...
ಆಗೆಲ್ಲ ಪಡೆದ ಖುಷಿ, ಕಳಕೊಂಡ ಬೇಸರ ಎರಡನ್ನೂ ಮತ್ತೆ ಇಲ್ಲೇ ಬರೆದು ನಿಸೂರಾಗಿದ್ದೇನೆ... 
ಅದಕೇ ಅಂದದ್ದು ಈ ಬ್ಲಾಗ್ ಒಂಥರಾ ನನ್ನ ಸಾರ್ವಜನಿಕ ಡೈರಿ ಅಂತ...:)

ನಾಲ್ಕು ವರ್ಷಗಳೆಂದರೆ ನನ್ನ ಮಟ್ಟಿಗೆ ಸುದೀರ್ಘ ನಡಿಗೆಯೇ... 
ಬರೆದ ಸಾಲುಗಳ ತೂಕ ಎಷ್ಟಿದೆಯೋ ಅರಿವಿಲ್ಲ ಎನಗೆ...
ಸಾಹಿತ್ಯದ ಪ್ರಕಾರಗಳ ತಿಳುವಳಿಕೆ, ಹಂಗು, ಗುಂಗು ಒಂದೂ ಇದ್ದವನಲ್ಲ... 
ಆದರೆ ಬರೆದಾದ ಮೇಲೆ ಮೂಡಿದ ಎದೆಯ ಹಗುರತೆಗೆ ಬೆಲೆ ಕಟ್ಟಲಾರೆ ನಾನು... 
ಆ ಕ್ಷಣದ ಎನ್ನೆದೆಯ ಸತ್ಯಗಳಿಗೆ, ಭಾವಗಳಿಗೆ ಪದಗಳ ಚೌಕಟ್ಟು ಕೊಟ್ಟ ಪ್ರತೀ ಬಾರಿಯೂ ನಿರಾಳವಾಗಿದ್ದೇನೆ...
ಅಲ್ಲದೇ ಹೊಸ ಭಾವಕ್ಕೆ, ಹೊಸ ಆತ್ಮಶಕ್ತಿಗೆ ಪಕ್ಕಾಗಿದ್ದೇನೆ...
ಅದೇನು ಅಂಥ ಸಣ್ಣ ಸಾರ್ಥಕ್ಯ ಅಂತನ್ನಿಸಲ್ಲ ನನಗೆ...

ಆ ಅಂತೆಲ್ಲ ನನ್ನೆದೆಯ ಭಾವಗಳು ನಿಮ್ಮದೂ ಅಂತನ್ನಿಸಿ, ಅಲ್ಲಿ ನಿಮ್ಮೆದೆಯಲ್ಲಿ ಇನ್ನಷ್ಟು ವಿಸ್ತಾರವಾಗಿ ಬೆಳೆದದ್ದಿದ್ದರೆ, ನೀವು ಓದಿದ ಆ ಕ್ಷಣ ನಿಮ್ಮೆದೆಯ ಭಾರ ಏರಿಳಿದಿದ್ದಿದ್ದರೆ ಇನ್ನೇನು ಬೇಕು ಬರೆದ ಜೀವಕ್ಕೆ...........

ಎದೆಯ ಭಾವಗಳ ಒರತೆಗೂ ವಸಂತ, ಗ್ರೀಷ್ಮಗಳ ಒಡನಾಟವಿದೆ...
ನನ್ನೆದೆಯ ಹೆಚ್ಚಿನ ಒಡನಾಟ ಗ್ರೀಷ್ಮದೊಂದಿಗೇ...
ಅದಕೇ ನೋವನೇ ಹೆಚ್ಚು ಬರೆದಿದ್ದರೆ ತಪ್ಪು ನನ್ನದಲ್ಲ...
ಅದು ಬದುಕಿನ ಕರುಣೆಯ ಪ್ರಸಾದ...
ನೋವನೇ ಹೆಚ್ಚು ಬರೆದಿದ್ದರೂ ಜೀವಿಸಿದ್ದು ನೋವ ಕೊಂದು ಮೆರೆದ ನಗುವನ್ನ ಎನ್ನುವುದು ನನ್ನೆಡೆಗೆ ನನಗಿರೋ ಅಭಿಮಾನ...
ನೋವು ಮೌನವಾಗಿ ಹೆಪ್ಪುಗಟ್ಟಿ ಹಿಮವಾಗಿ ದೂರನಿಲ್ಲುವ ಬದಲು ಮಾತಾಗಿ ನದಿಯಾಗಿ ಹರಿದು ಇಕ್ಕೆಲಗಳಲಿ ನಗೆಯ ಹಸಿರ ಚಿಮ್ಮಿಸಲಿ ಅಂದುಕೊಳ್ತೇನೆ...
ಈ ನಾಲಕ್ಕು ವರ್ಷಗಳನು ಅದನೇ ನಂಬಿ ಅದನೇ ಬರೆದು ಹಗುರಾಗುತ್ತ ಬಂದೆ...
ನನ್ನೊಳಗಿಂದು ಒಂದಿಷ್ಟು ನಗುವಿದೆ...
ಓದಿದ ನಿಮ್ಮೊಳಗೇನು ಮೂಡಿತೋ ಅಷ್ಟಾಗಿ ಅರಿವಿಲ್ಲ...
ನಿಮ್ಮ ಓದಿನ ಪ್ರೋತ್ಸಾಹ ಹಾಗೇ ಇರುವುದ ಕಂಡು ನಿಮ್ಮಲೂ ನಗುವೇ ಮೂಡಿದೆ ಎಂಬ ನಂಬಿಕೆಯಲಿದ್ದೇನೆ...

ಇನ್ನೆಷ್ಟು ಕಾಲ ಬರೆದೇನೋ ಗೊತ್ತಿಲ್ಲ...
ಗೊತ್ತಿರುವುದು, ಹೇಳಬೇಕಿರೋದು ಇಷ್ಟೇ - 
ಭಾವ ಪದವಾಗಿ ಆಚೆ ಬಂದ ಮರು ಘಳಿಗೆ ಅದು ಕೇವಲ ನನ್ನದು ಮಾತ್ರವಾಗಿರುವುದಿಲ್ಲ...
ಅದಿಲ್ಲಿ ಭಾವಗಳ ಗೊಂಚಲಿನ ಒಂದು ಗೊಂಚಲಾಗಿ ನಿಮ್ಮ ಸೇರುತ್ತಲಿರುತ್ತದೆ...
ನಿಮ್ಮ ಪ್ರೀತಿಯ ಮಡಿಲ ಬಗ್ಗೆ ಪೂರ್ಣ ನಂಬಿಕೆ ನನ್ನಲ್ಲಿ...
ಆ ನಿಮ್ಮಗಳ ಮಡಿಲ ತಂಪು ನನ್ನ ಸದಾ ಕಾಯುತ್ತಲೇ ಇರುತ್ತೆ... 
ಭಾವ ತೀರದ ಪಯಣ...
                                                        ವಿಶ್ವಾಸ ವೃದ್ಧಿಸಲಿ – ಶ್ರೀವತ್ಸ ಕಂಚೀಮನೆ.

Thursday, January 15, 2015

ಗೊಂಚಲು - ನೂರಾ ಮೂವತ್ತು ಮತ್ತೆಂಟು.....

ಜಂಗಮ ಭಾವಗಳು.....

ಸಾವನ್ನು ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳೋ ನರಕ ಸುಖಕ್ಕೆ ನಿತ್ಯ  ಸಾಕ್ಷಿಯಂತೆ ಕಾಣೋ ಉದ್ದುದ್ದ ಕಾರಿಡಾರು...
ಬಾಗಿಲಾಚೆ ಕಾಯುತ್ತ ಕುಂತ ಆತಂಕದ ಬೆಂಕಿ ಉರಿವ ಹತ್ತಾರು ಕಂಗಳು...
ಒಳ ಕೋಣೆಯಿಂದ ಭರವಸೆಯ ಮಾತೊಂದು ತೂರಿ ಬರಲೆಂದು ಕಾತರಿಸೋ ಹಸಿದ ಎಷ್ಟೆಲ್ಲ ಕಿವಿಗಳು...
ಅದು ವೈದ್ಯ ನಾರಾಯಣರ ಭವನ...
ವೈದ್ಯ ರಾಜ ನಮಸ್ತುಭ್ಯಂ...

###

ಬದುಕ ಪಾತಳಿಯಲ್ಲಿ ಎಡವಿಬಿದ್ದ, ಎದ್ದು ನಿಂತ ಹಸಿ ಬಿಸಿ ಅನುಭವಗಳೆಲ್ಲವ ಸೋಸುತ್ತ ನಡೆದೆ – ಅಲ್ಲೆಲ್ಲೋ ಮಸ್ತಕದಾಳದಲ್ಲಿ ಒಂಚೂರು ತಿಳುವಳಿಕೆಯ ಕಿಟಕಿ ತೆರಕೊಂಡಿತು...
ಕಿಟಕಿಯಿಂದ ಬರೋ ವಿಚಾರಗಳ ಕಿರು ಬೆಳಕ ಪ್ರಖರತೆಗೇ ಕಣ್ಣು ಕುಕ್ಕುವಾಗ ಅನ್ನಿಸುತ್ತಿದೆ ಈಗ – ಮುಗ್ಧತೆಯ ಹೆಸರು ಹೊದ್ದ ಅಜ್ಞಾನದ ಸೆಳವಿನಲ್ಲಿ ತೇಲಿದಷ್ಟು ಸುಲಭವಿಲ್ಲ ಜ್ಞಾನದ ಕಿರುದಾರಿಯಲಿ ತೆವಳುವುದು...!!!

###

- ಜಂಗಮನ ಜೋಳಿಗೆಯ ತುಂಬಾ ಹಾದಿ ತಪ್ಪಿದ ಕಥೆಗಳು...
- ಮತಿಹೀನ ಅಲೆಮಾರಿಯ ಕೈಯಲ್ಲಿ ಸ್ನೇಹದ ಭಿಕ್ಷಾಪಾತ್ರೆ...
- ಕರುಣೆಯ ಹಂಗಿಲ್ಲದ ಪ್ರೀತಿಯ ಒಡನಾಟದ ನಿರಂತರ ಹುಡುಕಾಟ...
- ಬದುಕಿದು ಬರೀ ವೈರುಧ್ಯಗಳನೇ ಮಾರುವ ವಿಚಿತ್ರ ತೆವಲಿನ ವ್ಯಾಪಾರೀ ಮಳಿಗೆ...


###

ಮನದ ಜಗುಲಿಯ ತುಂಬೆಲ್ಲಾ ಸೂತಕದ ಮುನ್ಸೂಚನೆಯ ಗಾಢ ವಾಸನೆ...
ಸಾವು ದೇಹದ್ದೇ ಆಗಬೇಕಿಲ್ಲ, ಭಾವದ್ದೂ ಆಗಬಹುದು...
ನೋವಿನ ತೀವ್ರತೆಯಲ್ಲಿ ಎರಡೂ ಸಮಾನ ಸ್ಥಾಯಿಯಲ್ಲಿ ನಿಲ್ಲುತ್ತವೆ - ಎದುರಲ್ಲೇ ನಿಂತು ಸಾವ ನೋಡುತ್ತಲಿರಬೇಕಾದವರ ಕಣ್ಣಲ್ಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, December 17, 2014

ಗೊಂಚಲು - ಒಂದು ನೂರಾ ಮೂವತ್ತೇಳು.....

ಹೊತ್ತು ಹೋಗದ ಹೊತ್ತಲ್ಲಿ ಹೊತ್ತಿ ಉರಿವ ಭಾವಗಳು.....

ಬದುಕ ಅಪ್ಪುವೆನೆಂದವಳ ಬದುಕ ಬೆಳಕ ಕಸಿದ ಹಸಿ ಹಸಿ ನೆನಪುಗಳ ನರಳಿಕೆಯ ಸದ್ದಲ್ಲಿ   ನಿದಿರೆಯ ಸಖ್ಯವಿಲ್ಲದ ಮಾಗಿಯ ಚಳಿಯ ನಸುಕು - ಎದೆಯ ಗರ್ಭದ ಗೋಡೆಯ ಆಗೀಗ ಒದೆಯೋ ಕಸುವಿಲ್ಲದ  ಕನಸ ಕೂಸು - ಕರುಳ ದಿಬ್ಬವ ತಬ್ಬಿದ ರುದ್ರ ಮೌನ - ದಿಂಬಿನ ಮೇಲೆ ಹೊರಳುತಲಿರೋ ಅವಳ ಒಂಟಿ ಕೂದಲೊಂದಿಗೆ ಮಾತಿಗಿಳಿದ ಎಂಥಾ ಚಳಿಗೂ ಹೆಪ್ಪುಗಟ್ಟದ ಕಣ್ಣ ಹನಿ - ಹೆಬ್ಬಾಗಿಲ ಮರೆಯಲ್ಲಿ ಸಾವಿನ ಹೆಜ್ಜೆ ಸಪ್ಪಳ...
***
ಬದುಕ ಜೀವನ್ಮುಖೀ ಭಾವಗಳಿಗೆ ಕಾವನ್ನಿತ್ತು ಉಸಿರ ತುಂಬಿ ಎದೆ ನೆಲದ ಹಸಿವನ್ನು ಹಿಂಗಿಸಬೇಕಿದ್ದ ಕನಸ ಊಟದ ಶಕ್ತಿಯ ಸಖ್ಯವಿಲ್ಲದ ಸಂಜೆಗಳಿಲ್ಲಿ ನಡು ಮುರಿದುಕೊಂಡು ತೆವಳುತಿವೆ...
***
ದೊಡ್ಡಾಸ್ಪತ್ರೆಯ ಖಾಲಿ ಖಾಲಿ ಕಾರಿಡಾರು - ನೋವ ನಗುವಾಗಿಸೋ ಪುಟ್ಟ ಯತ್ನ...
ಮನದ ಮನೇಲಿ ಅದೇ ಹಳೆಯ ವಾಸನೆ - ನೋವು, ಸಾವಿನದ್ದು... :-)
***
ಕನಸೇ -
ಮಕ್ಕಳ ಕೇಕೆಯ ಕಸಿದ ಇರುಳು ಹಗಲನ್ನು ಇಷ್ಟಿಷ್ಟಾಗಿ ನುಂಗುವ ಮುಸ್ಸಂಜೆಯ ಹೊತ್ತಲ್ಲಿನ ಬಯಲ ಮೂಲೆಯ  ನಿರಂಕುಶ ನೀರವ ಮೌನ (?)  ದಟ್ಟವಾಗಿ ನನ್ನೆದೆಯನೂ ಆವರಿಸುತ್ತೆ ನೀ ಬದುಕಿಂದ ಮತ್ತೆ ಬಾರದಂತೆ ಎದ್ದು ಹೋದ ನೆನಪು ಕಾಡುವಾಗ...
***
ಎಷ್ಟೆಲ್ಲಾ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರವೀಯುತಿದ್ದ ಚಂದಿರನಲ್ಲೂ ಈಗೀಗ ಉತ್ತರ ಖಾಲಿಯಾದಂತಿದೆ ನನ್ನ ಎಂದೂ ಮುಗಿಯದ ಗೊಂದಲದ ಪ್ರಶ್ನೆಗಳಿಗೆ...:-(
***
ಬಾಲರ ಕೇಕೆ, ಹರೆಯದ ಹುಚ್ಚಾಟ, ನಡುಗಾಲದ ಬೇಗುದಿ, ಮುಪ್ಪಿನ ನಿಟ್ಟುಸಿರು ಎಲ್ಲವಕ್ಕೂ ಕಿವಿಯಾದ ಊರಾಚೆಯ ಬಯಲು... 
ಅವರೆಲ್ಲರ ಮಾತು ಮೌನಗಳಿಗೆಲ್ಲ ಸಾಕ್ಷಿಯಾಗಿಯೂ ನಾ ಯಾರಿಗೂ ಸ್ವಂತವಲ್ಲ...
ಪಾದಗಳಿಗಂಟಿದ ಎನ್ನೆದೆಯ ಧೂಳಿಗೂ ಅವರುಗಳ ಒಳಮನೆಗೆ ಪ್ರವೇಶವಿಲ್ಲ; ಹೊಸ್ತಿಲಲಿ ಕಾಲು ಕೊಡವಿಯೇ ಒಳಗಡಿಯಿಡುವುದು ಎಲ್ಲ...:-)
***
ಅಮ್ಮನ ಗರ್ಭದಲ್ಲಿನ ಮೌನವೀಗ ಮತ್ತೆ ದಕ್ಕುವಂತಿದ್ದಿದ್ದರೆ; 
ನಗೆಯ ತೊಟ್ಟಿಲಲಿ ಬದುಕನಿಟ್ಟು, ಭರವಸೆಯ ಗಿಲಕಿಯ ಕುಲುಕಿನ ಹಿಮ್ಮೇಳದಲಿ ಗೆಲುವಿನ ಲಾಲಿ ಹಾಡುತ್ತ, ಹೊಸ ಕನಸಿನ ಕುಲಾವಿಗೆ ನೂಲು ನೇಯಬಹುದಿತ್ತೇನೋ ನೀನಿರದ ಈ ಪ್ರಕ್ಷುಬ್ಧ ಸಂಜೆಗಳಲೂ... 
ಮತ್ತೆಲ್ಲವನೂ ಮೊದಲಿಂದ ಶುರು ಮಾಡುವಂತಿದ್ದಿದ್ದರೆ; ಮಾತಿನೆಡೆಗಿನ ನನ್ನ ಅತೀವ ಹಪಹಪಿಯ ನಡುವೆಯೂ, ಮಾತು ಎದೆಯ ಸುಡುವಲೆಲ್ಲ ಮೂಗನಾಗಿ ಒಂಚೂರು ಒಲವ ಸಲಹಬಹುದಿತ್ತೇನೋ ನನ್ನೀ ಬಂಜರೆದೆಯಲೂ...
***
ಎದೆಯಾಳದಿ ಕನಸುಗಳ ಸೋಲಿನ ಬೇಗುದಿ - ಸುಡುವ ಚಳಿ - ನೆನಪುಗಳ ಅಗ್ಗಿಸ್ಟಿಕೆ - ಮಾತುಗಳ ಹವಿಸ್ಸು - ಮೌನ ಯಜ್ಞ...
***
ಮೌನ (?) ... 
ಅಲ್ಲಲ್ಲ ಮಾತು ಕೋಮಾದಲ್ಲಿರುವಂತಿದೆ...
***
ನೋವು, ಸಿಟ್ಟು, ದ್ವೇಷ, ಅಸೂಯೆ, ಹತಾಶೆಗಳು ಬದುಕಿಸುವುದಕಿಂತ ಪ್ರೀತಿ ಕೊಲ್ಲಲಿ ಎನ್ನ... 
ಒಲವ ತೋಳಲ್ಲಿ ಸಾವಿಗೂ ಶೃಂಗಾರ ಸಂಭ್ರಮ...
***
ಬದುಕ ಪ್ರೀತಿ ಮತ್ತು ಬದುಕಿಗೆ ಸ್ಫೂರ್ತಿ ಎರಡನ್ನೂ ಬದುಕಿನಿಂದಲೇ ಬಸಿದುಕೊಳ್ಳಬೇಕು... 
ಹುಟ್ಟಿದಲ್ಲಿಯೇ ಕೊನೆಗೊಂಡು ಮತ್ತಲ್ಲಿಂದಲೇ ಪರಿಭ್ರಮಣಕೆ ಮೊದಲಿಡುವ ಶೂನ್ಯದ ಖಾಲಿತನ ಮತ್ತು ಬಿಂದುವಿನ ಪೂರ್ಣತೆ ಎರಡೂ ಬದುಕಿನ  ಉನ್ನತ ಧ್ಯಾನಸ್ಥ ಸ್ಥಿತಿಗಳೇ...
ಪಡಕೊಂಡೆ, ಕಳಕೊಂಡೆ ಎಂಬುದೆಲ್ಲ ವೃತ್ತದೊಳಗಣ ಕಾಲುದಾರಿಯ ಇಬ್ಬದಿಯ ಆಗು ಹೋಗುಗಳಷ್ಟೇ...
ಹೊರಚೆಲ್ಲುತ್ತಾ ಹಿರಿದಾಗಿ ಶೂನ್ಯವಾಗುವುದೂ, ತುಂಬಿಕೊಳ್ಳುತ್ತಾ ಕಿರಿದಾಗಿ ಬಿಂದುವಾಗುವುದೂ ಎರಡೂ ಕೂಡಾ ವೃತ್ತದೊಳಗಣ ಸಂಪತ್ತುಗಳೇ...
ಅದಕೇ ಬದುಕಿಗೇನೆಲ್ಲ ಬೇಕೋ ಅದೆಲ್ಲವನ್ನೂ ಅಲ್ಲಿಂದಲೇ ಬಸಿದುಕೊಳ್ಳಬೇಕು ಅಂತನ್ನಿಸುತ್ತೆ... 
ಅದು ಕರುಣಿಸಿದಷ್ಟು - ಅಲ್ಲಲ್ಲ ನಮ್ಮ ಬೊಗಸೆಯ ವಿಸ್ತಾರದಷ್ಟು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)