Tuesday, November 5, 2013

ಗೊಂಚಲು - ತೊಂಬತ್ತೆರಡು.....

ಏನೇನೋ.....

ನನಗೆಂದೇ ಹೊಯ್ದಾಡುವ ಕಪ್ಪು ಹುಡುಗಿಯ ಕಪ್ಪು ಮುಂಗುರುಳು... 
ಸದಾ ನನ್ನಡೆಗೇ ತುಡಿಯುವ ಅವಳ ಆ ಕಡುಗಪ್ಪು ಕಂಗಳು... 
ತುಟಿಯ ತಿರುವಲ್ಲಿ ನಗೋ ಸಂಗಾತಿ ಮಚ್ಚೆ... 
ಬೆರಳುಗಳ ಬೆಸೆದು ಸಂಜೆಗೊಂದು ಸುತ್ತಾಟ – ನಡುವೆ ಜಿನುಗಿದ ತಿಳಿ ಬೆವರೊಂದಿಗೆ ಹಸ್ತರೇಖೆಗಳೂ ಬೆರೆತ ಭರವಸೆಯ ಭಾವ... 
ತುಂಬ ಒಲವುಕ್ಕಿದಾಗ ಒಂದು ಬಿಗಿಯಾದ ತಬ್ಬುಗೆ – ಜಾತ್ರೇಲಿ ಕೊಂಡ ಗಾಜಿನ ಬಳೆಗಳಿಗೆ ಮೋಕ್ಷ... 
ಯಾವುದೋ ನಸುಗತ್ತಲ ತಿರುವಲ್ಲಿ ಕದ್ದು ಸವಿದ ಮುತ್ತಿನೂಟ – ಆರದ ತುಟಿಯ ತೇವದಲ್ಲಿ ಸದಾ ಹಸಿಯಾಗಿರುವ ಆಸೆಯ ಝೇಂಕಾರ... 
ಹುಸಿ ಮುನಿಸಿನಲಿ ಖುಷಿಯ ಆರೋಪದ ಪ್ರೀತಿಯ ಗುದ್ದು - ಮುಚ್ಚಿದ ಕಣ್ಣ ಕೊನೆಯಲ್ಲಿ ಒಲವ ತೀರ ಸೇರೋ ಪ್ರಣವ ನಾದ... 
ರಾತ್ರಿಯ ಒಂಟಿ ಹೊರಳಾಟದಲ್ಲಿ ನೆನಪಾಗಿ ಕಾಡಿ ನಶೆಯೇರಿಸೋ ಅವಳ ಬೆವರ ಘಮ... 
ಎಂದೋ ಕದ್ದೊಯ್ದ ನನ್ನ ಹಳೆಯ ಅಂಗಿಯಲ್ಲಿ ನಿತ್ಯ ರಾತ್ರಿಯಲ್ಲಿ ಅವಳಿಗೆ ನಾ ದಕ್ಕುವುದು - ಎದೆಗವಚ ಬಿಗಿಯಾದ ಸುದ್ದಿ ಅವಳ ಪೋಲಿ ಸಂದೇಶವಾಗಿ ಮಧ್ಯರಾತ್ರಿಯಲಿ ನನ್ನ ತಲುಪಿ ಕೆಣಕಿದ್ದು...  
ಆ ವಿರಹದುರಿಯಲಿ ನನ್ನ ಸಂತೈಸೋ ಅವಳ ಹಳೆಯ ಒಂಟಿ ಕಿವಿಯೋಲೆ... 
ಇನ್ನೂ ಸಂಸಾರವನೇ ಹೂಡಿಲ್ಲ ಆಗಲೇ ಮಗಳಿಗೆ ಹೆಸರ ಹುಡುಕಿ ಡೈರೀಲಿ ಬರೆದಿಟ್ಟದ್ದು... 
ಸುರಿವ ಸೋನೆಯಲಿ ನೆನೆಯುತ್ತ ಒಂದೇ ಐಸ್‌ಕ್ರೀಮನ್ನು ಇಬ್ಬರೂ ತಿಂದದ್ದು...
ಕನ್ನಡಿಯೂ ಕಂಡಿರದ ಅವಳ ಕತ್ತಲ ತಿರುವುಗಳು ನನ್ನ ಕಂಗಳಲ್ಲಿ ಇಂಗದ ಹಸಿವಾಗಿ ಭದ್ರವಾಗಿದ್ದು... 
ಆಹಾ..!!! 
ಎಷ್ಟೆಲ್ಲ ಹುಚ್ಚುಚ್ಚು ಭಾವದ ಖುಷಿಗಳ ನನ್ನಲ್ಲಿ ತುಂಬಿದ್ದು ಆ ಕಪ್ಪು ಹುಡುಗಿಯ ಕನಸು...
ಅದು ಬರೀ ಕನಸೇ ಆದರೂ ಎಂಥ ಸೊಬಗು ಆ ಕನಸಿಗೆ... 
ಹೌದು ತುಸು ಹೆಚ್ಚೇ ಅನ್ನುವಷ್ಟು ಪೋಲಿಕನಸುಗಳು ನನ್ನಲ್ಲಿ ಅವಳೆಡೆಗೆ... ಆದರದು ಹರೆಯದ ಉನ್ಮಾದ ಅನ್ನಿಸೊಲ್ಲ ಯಾಕೋ... ಸಂಯಮ ಮೀರಿದ ಕ್ಷಣ ಮತ್ತು ಕ್ರಿಯೆಯಾಗಿ ದಕ್ಕುತಿರುವ ಕ್ಷಣಗಳನು ಹೊರತುಪಡಿಸಿ, ಪ್ರೇಮದಿಂದೊಡಗೂಡಿದ ಬರೀ ಮನೋಭೂಮಿಕೆಯ ಕಲ್ಪನೆಯಲಿ ಅರಳುತಿರುವಲ್ಲಿ ಕಾಮ ಕೂಡ ಮಧುರ ಭಾವವೇ ಅಂತನ್ನಿಸುತ್ತೆ ನಂಗೆ...
ಅಂಥವಳೊಬ್ಬ ಕಪ್ಪು ಹುಡುಗಿಯ ನನ್ನ ಕನಸಿಗೆ ಕೊಟ್ಟ ಮತ್ತು ಆ ಕನಸ ಇಂದಿಗೂ ಜೀವಂತವಾಗಿಟ್ಟ ಬದುಕೇ ನಿನ್ನ ಮೇಲೆ ಮತ್ತೆ ಹುಚ್ಚು ಪ್ರೀತಿಯಾಗ್ತಿದೆ...

*****

ಸಾಗರವೇ -
ನಿನ್ನ ಅಗಾಧತೆಯೆಡೆಗೆ ಬೆರಗಿನ ಕಣ್ಣ ನೆಟ್ಟು – ನಿನ್ನ ನಿಗೂಢತೆಯ ಕಂಡು ನಿಟ್ಟುಸಿರ ಬಿಟ್ಟು – ಗರಬಡಿದು ಸುಸ್ತಾಗಿ ಕುಳಿತಿದ್ದೇನೆ...
ಅಲೆಯೊಂದು ಬಂದು ಪಾದ ಸೋಕಿತು... 
ತಾಕಿದ ತೇವ ಮನಸಿಗೂ ಆವರಿಸಿ - ಕಳೆದುಹೋಗಿದ್ದ ಹಳೆ ಕನಸುಗಳೆಲ್ಲ ಮತ್ತೆ ಒಳನುಗ್ಗಿ – ಹೊಸ ರಾಗದಲಿ ಹೊರಹೊಮ್ಮಿ – ನವ ರೋಮಾಂಚನ ಮೈಮನದಲಿ ಝೇಂಕರಿಸಿ ಜೀವ ಭಾವಕ್ಕೆ ರೆಕ್ಕೆ ಮೂಡಿದೆ...
ಬದುಕೇ ನೀನೂ ಸಾಗರದಂತೆಯೇ...
ನಿನ್ನ ಅಗಾಧತೆ, ನಿಗೂಢತೆಗಳಲಿ ಹಲ ಕನಸುಗಳ ಕೊಂದು ಹೂತು ಮತ್ತದೇ ಮಸಣದ ನಡುವಿಂದ ಹೊಸ ಕನಸುಗಳ ಹೊತ್ತು ತಂದು ನನ್ನದೇ ಶಾಶ್ವತ ಒಂಟಿತನದಲೂ ನಗುತಿರಬಲ್ಲ ಜಿಗುಟಾದ ಒರಟುತನವ ಕರುಣಿಸಿದ ಬದುಕೇ ನಿನ್ನ ಮೇಲೆ ಮತ್ತೆ ಪ್ರೀತಿಯಾಗುತಿದೆ...

*****

ಗೆಳತೀ -
ಇರುವಿಕೆಯಿಂದ ಈ ಕ್ಷಣಕೊಂದು ಉನ್ಮಾದ ತುಂಬುವ...
ಅದೇ ಇರುವಿಕೆಯಿಂದ ಅರಗಿಸಿಕೊಳ್ಳಲಾರದ ಭಯ ತುಂಬೋ...
ಅರಿವಿನ ಹರಿವಿಗೆ ದಕ್ಕದೇ – ಮರೆತು ಹಗುರಾಗಲಾಗದೇ ಅಡಿಗಡಿಗೆ ಕಾಡುವ ವಾಸ್ತವದ ಭಾವ - ಸಾವು...
ಅಗೋಚರವಾಗಿದ್ದಷ್ಟು ಕಾಲವೂ ಸ್ಪೂರ್ತಿಯನ್ನು ಮತ್ತು ಪ್ರಕಟವಾಗಿ ನೋವನ್ನೂ ತುಂಬುವ, ಏಕಕಾಲಕ್ಕೆ ಶಕ್ತಿಯೂ – ದೌರ್ಬಲ್ಯವೂ ಆಗಬಲ್ಲ ಭಾವ ಅದು...
ಬದುಕಿನೊಂದಿಗೆ ನನ್ನದು ಮತ್ತು ನನ್ನೊಂದಿಗೆ ನಿನ್ನದೂ ಸಾವಿನಂಥ ಗೆಳೆತನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, October 23, 2013

ಗೊಂಚಲು - ತೊಂಬತ್ತು ಮತ್ತು ಒಂದು.....

ಭಾವ ಬಂಧಕ್ಕೆ ಹೆಸರಿಡುವ ಕುರಿತು.....

ಮೊದಲೇ ಹೇಳಿಬಿಡುತ್ತೇನೆ – ನಾನಿಲ್ಲಿ ಹೇಳಿರೋ ವಿಚಾರ ಮತ್ತು ಭಾವ ಕೇವಲ ನನ್ನ ಪ್ರಾಮಾಣಿಕ ಭಾವ ಮತ್ತು ನಂಬಿಕೆ ಅಷ್ಟೇ... ಇನ್ಯಾರದೇ ಭಾವಗಳ – ಬೆಸೆದ ಬಂಧಗಳ ಅವಹೇಳನೆ ಖಂಡಿತಾ ಅಲ್ಲ... ಯಾಕೆ ಇದನ್ನ ಹೇಳುತ್ತಿದ್ದೇನಂದ್ರೆ ನಾನಿಲ್ಲಿ ಈಗ ಭಿನ್ನ ಲಿಂಗದ ವ್ಯಕ್ತಿಗಳ ನಡುವಿನ ಸ್ನೇಹದ ಬಗ್ಗೆ ಮಾತಾಡುತ್ತಿದ್ದೇನೆ... ಅದರಲ್ಲೂ ಗಂಡು ಪ್ರಾಣಿಯ ಕಣ್ಣಿಂದ ಹೆಚ್ಚು ನೋಡುತ್ತಿದ್ದೇನೆ... ರಕ್ತ ಸಂಬಂಧವಲ್ಲದ ಭಾವನಾತ್ಮಕ ಬಂಧವೊಂದಕ್ಕೆ ರಕ್ತ ಸಂಬಂಧೀ ಹೆಸರಿಡುವುದು ಸ್ವಲ್ಪ ಕಷ್ಟ ನನಗೆ... ಬಂಧವೊಂದು ಬೆಳೆಯುತ್ತ ಬೆಳೆಯುತ್ತ ಸಹೋದರ ಭಾವಕ್ಕೆ ತಿರುಗುವುದು ಬೇರೆ ಮತ್ತು ಪರಿಚಯದ ಮೊದಲ ಹಂತದಲ್ಲಿಯೇ ಹಾಗಂತ ಕೂಗುವುದು ಬೇರೆ... ನಡುವೆ ತುಂಬ ವ್ಯತ್ಯಾಸ ಇದೆ ಅನ್ಸುತ್ತೆ ನಂಗೆ...

ರಕ್ತ ಸಂಬಂಧಗಳಲ್ಲಿ ಪ್ರತೀ ಸಂಬಂಧಕ್ಕೂ ಒಂದು ಸ್ಪಷ್ಟ ಹೆಸರಿದೆ... ಮತ್ತೆ ನಾವದನ್ನು ಹಾಗೆಯೇ ಗುರುತಿಸಿ ಕರೆಯುತ್ತೇವೆ ಕೂಡ... ಅಮ್ಮ, ಅಪ್ಪ, ಅಕ್ಕ, ತಂಗಿ, ಅಣ್ಣ, ತಮ್ಮ, ಅತ್ತೆ, ಮಾವ ಹೀಗೆ ಆ ಆ ಸಂಬಂಧಗಳಿಗೆ ಅದದೇ ಹೆಸರಿಂದ ಕರೆಯುವ ನಾವು ರಕ್ತ ಸಂಬಂಧವಲ್ಲದ ಭಾವನಾತ್ಮಕ ಬಂಧಕ್ಕಿರುವ ಹೆಸರು ‘ಸ್ನೇಹ’ವನ್ನು ಮಾತ್ರ ಬರೀ ಸ್ನೇಹ ಅಂತ ಒಪ್ಪಿಕೊಂಡು ಕರೆಯುವಲ್ಲಿ ಯಾಕೆ ಸೋಲುತ್ತೇವೆ..? ಅದರಲ್ಲೂ ಮುಖ್ಯವಾಗಿ ಭಿನ್ನ ಲಿಂಗದ ಸ್ನೇಹದಲ್ಲಿ.!! ಹೆಚ್ಚಿನ ಸಂದರ್ಭದಲ್ಲಿ ಭಿನ್ನ ಲಿಂಗದ ಸ್ನೇಹವನ್ನು ಸ್ನೇಹ ಅಂತಲೇ ಗುರುತಿಸದೇ ಅದಕ್ಕೂ ರಕ್ತ ಸಂಬಂಧೀ ಅಕ್ಕ, ತಂಗಿ, ಅಣ್ಣ, ತಮ್ಮ ಎಂಬ ಹೆಸರಿಡಲು ಹೋಗುತ್ತೇವೆ... ಅದಲ್ಲದಿದ್ದರೆ ಸ್ನೇಹವನ್ನು ಪ್ರೇಮವಾಗಿಸಲು ಹೊರಟುಬಿಡುತ್ತೇವೆ ಏಕೆ..?? ಭಿನ್ನ ಲಿಂಗದ ಗೆಳೆತನವೊಂದು ಇದು ಬರೀ ಗೆಳೆತನ ಅಂತ ಪ್ರತೀ ಕ್ಷಣ ಕೂಗಿ ಕೂಗಿ ಹೇಳಬೇಕಾದ ಅನಿವಾರ್ಯತೆ ಯಾಕಿದೆ..???

ಬಹುಶಃ ಸಹಜ ಮಧುರ ಬಂಧವೊಂದಕ್ಕೆ ಅನಗತ್ಯ ರೂಪ, ಬಣ್ಣಗಳ ಆರೋಪಿಸಿ ಬಾಯಿ ಚಪಲ ತೀರಿಸಿಕೊಳ್ಳೋ ಸಮಾಜ ನಮ್ಮ ಸುತ್ತ ಇರೋವರೆಗೂ (ಇಂಥ ಸಮಾಜ ಸೃಷ್ಟಿಯಲ್ಲಿ ನಾವೂ ಭಾಗಿಗಳೇ ಆಗಿರಬಹುದು) ಬಂಧವೊಂದಕ್ಕೆ ಸಂಬಂಧದ ಮುಖವಾಡದ ಹೆಸರಿಡುವ ಅನಿವಾರ್ಯತೆ ಚಾಲ್ತಿಯಿದ್ದೇ ಇರುತ್ತೇನೋ... ಅಲ್ಲೊಬ್ಬರು – ಇಲ್ಲೊಬ್ಬರು ಬೆಸೆದ ಎಲ್ಲ ಬಂಧಗಳಲ್ಲೂ ಗೆಳೆತನವನೇ ಕಾಣಹೊರಟು, ಸಮಾಜದ ಮಿತಿಯ ಮೀರಬಯಸಿದರೆ ಅದಷ್ಟು ಸುಲಭ ಸಾಧ್ಯವಲ್ಲ ಅನ್ನೋದು ನನ್ನ ಅನುಭವ... ಯಾಕೇಂದ್ರೆ ನಾವೂ ಇದೇ ಸಮಾಜದ ಒಂದು ಭಾಗ ತಾನೆ...

ಭಿನ್ನ ಲಿಂಗದ ಸ್ನೇಹಕ್ಕೆ ಅನೈತಿಕ ಭಾವದ ಆರೋಪ ತುಂಬುವುದು ಮನುಷ್ಯನ ಮೂಲ ಸ್ವಭಾವಗಳಲ್ಲೊಂದಾದ ತಾನು ನಿಭಾಯಿಸಲಾಗದ್ದನ್ನು ಇನ್ಯಾರೋ ನಿಭಾಯಿಸಿದಾಗ ಉಂಟಾಗೋ ಮಾತ್ಸರ್ಯದಿಂದಿರಬಹುದಾ.? ಸಮಾನ ಲಿಂಗದ ಸ್ನೇಹದಲ್ಲಾದರೆ ಅನೈತಿಕತೆಯ ಆರೋಪ ಇಲ್ಲದಿದ್ದರೂ ಅಲ್ಲೂ ಮಾತ್ಸರ್ಯ ಮತ್ತು ಇಗೋಗಳು ಆ ಸ್ನೇಹದ ಬಗೆಗೂ ಕೀಳಾಗಿ ಮಾತಾಡುವಂತೆ ಪ್ರೇರೇಪಿಸುತ್ತಾ.?? ಕಷ್ಟ ಕಷ್ಟ...

ಬಂಧವೊಂದನ್ನು ನಿಭಾಯಿಸೋ ತಾಕತ್ತು ನಮ್ಮ ಮನಸಿನ ಸಂಸ್ಕಾರದಿಂದ ಬರೋದು... ಪ್ರತೀ ಸಂಬಂಧಕ್ಕೂ ಅದರದೇ ಆದ ಭಾವನಾತ್ಮಕತೆ ಮತ್ತು ಜವಾಬ್ದಾರಿಗಳಿರುತ್ತವೆ... ಅಣ್ಣ, ತಮ್ಮ ಅಂತ ಕರೆಸಿಕೊಂಡವರೆಲ್ಲ ಆ ಸಂಬಂಧದ ಜವಾಬ್ದಾರೀನ ನಿಭಾಯಿಸೊಲ್ಲ... ನಿಭಾಯಿಸಬಲ್ಲವನು ತಂಗಿಯಲ್ಲೂ ಗೆಳತಿಯನ್ನು ಕಾಣಬಲ್ಲ... ನಿಭಾಯಿಸುವ ಸಂಸ್ಕಾರ ಇಲ್ಲದೇ, ಮನಸಿನ ವಿಕಾರ ಇದ್ದವನು ಎಂಥ ಸಂಬಂಧಕ್ಕೂ ಅಸಹ್ಯವನ್ನು ಮೆತ್ತಬಲ್ಲ... ತಂದೆಯೇ ಮಗಳನ್ನು ಭೋಗವಸ್ತುವಾಗಿಸಿಕೊಂಡ ಮನುಷ್ಯ ಸಮಾಜ ನಮ್ಮದು... ಅದು ಮನೋವಿಕಾರದ, ಕ್ರೌರ್ಯದ ಉತ್ತುಂಗ... ಸ್ವಸ್ಥ ಮನಸಿನ ಪ್ರಜ್ಞಾವಂತರಾದರೆ ಭಾವ ಬಂಧಕ್ಕೆ ಯಾವುದೇ ಹೆಸರಿಡದೆಯೂ ಸ್ನೇಹವಾಗಿಯೇ ಗೌರವಯುತವಾಗಿ ನಡಕೊಳ್ಳಬಲ್ಲ... ಗೆಳತಿ ವೇಶ್ಯೆಯೇ ಆದರೂ ಅವಳನ್ನು ಬರೀ ಗೆಳತಿ ಮಾತ್ರವಾಗಿಯೇ ನಡೆಸಿಕೊಳ್ಳಬಲ್ಲ... ಒಪ್ಪುತ್ತೇನೆ ಅಂಥವರು ಅಪರೂಪ ಮತ್ತು ಮೊದಲಲ್ಲೇ ಅಂಥ ಪ್ರಜ್ಞಾವಂತರನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆಯೂ ಇದೆ...

ನಾನಿಲ್ಲಿ ಪ್ರಾಮಾಣಿಕ ಭಾವನಾತ್ಮಕತೆಯಿಂದ ಅಣ್ಣ, ತಮ್ಮ, ಅಕ್ಕ, ತಂಗಿ ಅಂತ ಪರಿಭಾವಿಸಿ ಬಾಂಧವ್ಯ ಬೆಸೆದುಕೊಂಡವರನ್ನು ಅವಮಾನಿಸಿ ಅವಹೇಳನ ಮಾಡುತ್ತಿಲ್ಲ... ನನಗೂ ಅಂಥ ಎಷ್ಟೋ ಅಕ್ಕ, ತಂಗಿಯರಿದ್ದಾರೆ... ಮತ್ತು ನಾನವರನ್ನು ತುಂಬ ಗೌರವಿಸುತ್ತೇನೆ, ಪ್ರೀತಿಸುತ್ತೇನೆ ಕೂಡ...  ಆದರೆ ಅಪರಿಚಿತ ಭಿನ್ನಲಿಂಗಿಯೊಬ್ಬ ಎದುರಾಗಿ ಹಾಯ್ ಅಂದ ತಕ್ಷಣವೇ ಅದಕ್ಕೆ ರಕ್ತಸಂಬಂಧೀ ಸಂಬಂಧಗಳ ಹೆಸರಿಡುವುದನ್ನು ಪ್ರಶ್ನಿಸುತ್ತಿದ್ದೇನೆ... ಪರಿಚಯ ಹಳೆಯದಾಗಿ, ಅಭಿರುಚಿಗಳು, ಭಾವಗಳು ಬೆಸೆದುಕೊಂಡು ಇಂಥ ಅಣ್ಣನೋ, ತಮ್ಮನೋ, ಅಕ್ಕ – ತಂಗಿಯರೋ ನನಗೂ ಇದ್ದಿದ್ದರೆ ಚೆನ್ನಿತ್ತು ಎಂಬ ಭಾವ ಪ್ರಾಮಾಣಿಕವಾಗಿ ಮೂಡಿ ಆಗ ಸ್ನೇಹಕ್ಕೆ ರಕ್ತ ಸಂಬಂಧದ ನಾಮಕರಣ ಮಾಡಿದರೆ ಅದನ್ನು ಖಂಡಿತಾ ಮೆಚ್ಚುತ್ತೇನೆ ಮತ್ತು ಗೌರವಿಸುತ್ತೇನೆ... ಅದಿಲ್ಲದೇ ಎದುರಾದ ತಕ್ಷಣ ಒಬ್ಬ ಹೆಣ್ಣು ಅಣ್ಣನೋ ತಮ್ಮನೋ ಅಂತ ಕರೆದರೆ ನಂಗಲ್ಲಿ ಅವರ ಅಭದ್ರತಾ ಭಾವವೇ ಹೆಚ್ಚು ಕಾಣುತ್ತೆ... ಸಮಾಜಕ್ಕೆ ಉತ್ತರಿಸಬೇಕಾದ ಮತ್ತು ಎದುರಿನ ವ್ಯಕ್ತಿಯ ಅಪರಿಚಿತತೆಯ ಭಯದಿಂದ ಮೂಡಿದ ಅಭದ್ರತಾಭಾವದಿಂದ ತನ್ನನ್ನ ತಾನು ರಕ್ಷಿಸಿಕೊಳ್ಳಲು ಪಕ್ಕನೆ ಒಂದು ರಕ್ತಸಂಬಂಧೀ ಹೆಸರಿಟ್ಟುಬಿಡುವುದು... ಇಂದಿನ ಸಾಮಾಜಿಕ ಪರಿಸ್ಥಿತೀಲಿ ಅದು ಒಂದಷ್ಟು ಮಟ್ಟಿಗೆ ಅಗತ್ಯವೂ ಹೌದೇನೋ... ಆದರೆ ಪ್ರತೀ ಸಂಬಂಧದಲ್ಲೂ ಒಂದು ಶುದ್ಧ ಸ್ನೇಹಭಾವವನ್ನು ಹುಡುಕೋ ನಂಗದು ಆತ್ಮವಂಚನೆಯಂತೆ ಗೋಚರಿಸುತ್ತೆ... 

ಬೀದಿ ತಿರುವಿನಲ್ಲಿ ನಿಂತು ಎದುರಿಂದ ಬರ್ತಿರೋ ಹುಡುಗೀನ ವಯೋಸಹಜವಾದ ಆಸೆಗಣ್ಣಿಂದ ನೋಡ್ತಿರ್ತೇನೆ... ಆಕೆ ಎದುರು ಬಂದು ತಕ್ಷಣ ತನ್ನ ಸರಳ ರಕ್ಷಣಾ ತಂತ್ರ ಬಳಸಿ ಅಣ್ಣ ಅಂತ ಕೂಗ್ತಾಳೆ... ನಾನು ಅಪ್ರಯತ್ನವಾಗಿ ನಗ್ತೇನೆ... ನಾನೂ ಬಾಯ್ತುಂಬ ತಂಗೀ ಅಂತೀನಿ... ಹಾಗೆ ತಂಗಿ ಅಂದ ತಕ್ಷಣವೇ ಅವಳ ಹೆಣ್ತನದೆದುರಿನ ಆಸೆ ಕಮ್ಮಿ ಆಗಿಬಿಡುತ್ತಾ..? ಅಣ್ಣ ಅಂದ ಹುಡುಗಿಗೂ ತಕ್ಷಣದಿಂದಲೇ ಬೆನ್ನಿಗೆ ಬಿದ್ದ ಅಣ್ಣನೊಂದಿಗೆ ವರ್ತಿಸಿದಂತೆಯೇ ವರ್ತಿಸೋಕೆ ಸಾಧ್ಯವಾಗುತ್ತಾ..? ಹಾಗೆ ಆಗಲ್ಲ ಅಂದಾಗ ಅಣ್ಣ ತಂಗಿ ಎಂಬ ಸಂಬಂಧಕ್ಕೆ ಅಪಚಾರ ಮಾಡಿದಂತಲ್ಲವಾ..? ಭೌತಿಕವಾಗಿ ಅನಿವಾರ್ಯವೆನಿಸಿದರೂ ಭಾವನಾತ್ಮಕವಾಗಿ ಆತ್ಮವಂಚನೆಯ ಭಾವ ಕಾಡಲಾರದಾ..? ಮುಖವಾಡ ಅನ್ನಿಸದಾ..? 

ಒಬ್ಬ ಗೆಳೆಯ ಅಥವಾ ಗೆಳತಿ ಜೊತೆಗಿರ್ತಾ ಇರ್ತಾ ಒಡನಾಟದಲ್ಲಿ ಭಾವಗಳ ಬೆಸೆದುಕೊಳ್ತಾ ಅಣ್ಣ, ತಂಗಿ, ಅಕ್ಕ, ತಮ್ಮರಿಗಿಂತ ಆತ್ಮೀಯರಾಗಬಹುದು... ಒಬ್ಬ ಗೆಳತಿ ಒಮ್ಮೆ ತುಂಟ ತಂಗಿ, ಒಮ್ಮೆ ಕಣ್ಣೀರೊರೆಸೋ ಅಮ್ಮ, ಒಮ್ಮೆ ಕಿವಿ ಹಿಂಡೋ ಅಕ್ಕ ಎಲ್ಲ ಆಗಬಲ್ಲಳು... ಅಂತೆಯೇ ಗೆಳೆಯ ಕೂಡಾ ತಮ್ಮ, ಅಣ್ಣ, ಅಮ್ಮ ಎಲ್ಲ ಆಗಬಲ್ಲ... ಅದು ಸ್ನೇಹದ ತಾಕತ್ತು... ಸ್ನೇಹಭಾವಕ್ಕೊಂದು ವಿಶೇಷ ಬಲವಿದೆ... ಎಲ್ಲ ಹರವಿ ಹಗುರಾಗಬಹುದಾದ ಬಲ... ಅಮ್ಮನೆದುರು ಕೂಡ ಸ್ನೇಹಭಾವ ಮೇಳೈಸದೇ ಹೋದರೆ ಕೆಲವನ್ನು ಹಂಚಿಕೊಳ್ಳಲಾಗದೇನೋ... ಒಮ್ಮೆ ಪ್ರಾಮಾಣಿಕ ಸ್ನೇಹಭಾವ ಮೈಗೂಡಿದರೆ ನಮ್ಮ ತಪ್ಪುಗಳನ್ನು ಕೂಡ ಸುಲಭವಾಗಿಯೇ ಒಪ್ಪಿಕೊಂಡು ತಿದ್ದಿಕೊಳ್ಳಬಹುದು... ಅದಕ್ಕೇ ಎಲ್ಲ ಬಂಧಗಳಲ್ಲೂ ಸ್ನೇಹಭಾವದ ಪಾಲು ಜಾಸ್ತಿ ಇರ್ಲಿ ಅಂತೀನಿ ನಾನು... ರಕ್ತ ಸಂಬಂಧದಲ್ಲಿ ಕೂಡ ಸ್ನೇಹಭಾವದ ಪಾಲಿರ್ಲಿ ಅಂತೀನಿ... ಅದಕ್ಕೇ ಸ್ನೇಹವನ್ನು ಸ್ನೇಹವೆಂದೇ ಗುರುತಿಸಲು ಬಯಸ್ತೀನಿ... ಗೆಳೆತನಾನ ಗೆಳೆತನ ಅಂತಲೇ ಗುರುತಿಸಿದಾಗ ಹೆಚ್ಚು ಸಂತೋಷಪಡ್ತೇನೆ...

ಹಾಗೆಯೇ ನಮ್ಮದು ಪುರುಷ ಪ್ರಧಾನ ಸಮಾಜ ವ್ಯವಸ್ಥೆ... ಸಹಜವಾಗಿಯೇ ಎಲ್ಲ ಭೌತಿಕ ಸಂಬಂಧಗಳಲ್ಲೂ ಗಂಡು ಹಿರಿಯನಾಗಿರೋದು ವಾಡಿಕೆ... ಮನಸ್ಥಿತಿ ಕೂಡ ಹಾಗೆಯೇ ರೂಪುಗೊಂಡಿದೆ... ಹಾಗಾಗಿ ಎದುರಿನ ಹೆಣ್ಣು ಜೀವ ಹಿರಿಯಳು ಅಂತಾದ ಕೂಡಲೇ ಭಾವನಾತ್ಮಕ ಸಂಬಂಧದಲ್ಲಿ ಕೂಡ ಆಕೆ ತಮ್ಮ ಅಂತ ಕೂಗಿದಾಗ ಗಂಡಿಗೆ ಒಪ್ಪಿಕೊಳ್ಳೋದು ಸುಲಭ... ಯಾಕೇಂದ್ರೆ ಆಕೆಯ ಹಿರಿತನ ಹುಡುಗನಲ್ಲಿ ಆಕೆ ತನಗಿಂತ ಪ್ರಬುದ್ಧಳು, ಹೆಚ್ಚು ಬದುಕ ಕಂಡವಳು, ಬಂಧಗಳ ದೃಢವಾಗಿ ಸಲಹಬಲ್ಲವಳು, ತನಗೆ ಮಾರ್ಗದರ್ಶಕವಾಗಬಲ್ಲವಳು ಎಂಬ ಗೌರವ ಭಾವ ಮೂಡಿಸಿ ತಮ್ಮ ಅನ್ನಿಸಿಕೊಳ್ಳಲು ಸುಲಭವಾಗುತ್ತೆ ಕೂಡ... 

ಅದೇ ಹೆಣ್ಣು ತನಗಿಂತ ಚಿಕ್ಕವಳು ಎಂದಾಕ್ಷಣ ಮೊದ ಮೊದಲ ಪರಿಚಯದಲ್ಲಿ ಆಕೆ ಬರೀ ಹೆಣ್ಣಾಗಿ ಗೋಚರಿಸುವ ಸಂದರ್ಭವೇ ಹೆಚ್ಚು... ಬರೀ ಹೆಣ್ಣು ತಾನು ಗಂಡಿನ ಕಣ್ಣನ್ನು ಮಾತ್ರ ತುಂಬಬಲ್ಲಳು... 

ಇಲ್ಲಿ ಕಿರಿಯ ಹೆಣ್ಣು ಜೀವಗಳಿಗೆ ಇನ್ನೂ ಒಂದು ಸಮಸ್ಯೆ ಇದೆ... ಸ್ನೇಹವ ನಿಭಾಯಿಸುವಲ್ಲಿ ವ್ಯಕ್ತಿತ್ವದ ಗಟ್ಟಿತನ ಕಳಕೊಂಡ ಗಂಡು ಪ್ರಾಣಿಗಳು ಒಂದು ಚಂದದ ಗೆಳೆತನದ ನಡುವೆ ಅವಸರವಸರವಾಗಿ ಪ್ರೇಮದ ಪ್ರವೇಶ ಮಾಡಿಸಿಬಿಡೋದು... ಗೆಳತಿ ತಾನು ಸ್ತ್ರೀಸಹಜವಾದ ಅಮ್ಮನ ಮನಸಿನ ಮೃದುಮಾತಿನಿಂದ ಆತ್ಮೀಯತೆ, ಕಾಳಜಿ ತೋರಿದ ಕೂಡಲೇ ಅದನ್ನು ಅವಳ ಪ್ರೇಮ ಅಂದುಕೊಂಡು, ಕಾಯ್ದುಕೊಳ್ಳಬೇಕಿದ್ದ ಸ್ನೇಹಕ್ಕೆ ಪ್ರೇಮದ ಹೆಸರಿಟ್ಟು ನಿವೇದನೆ ಮಾಡಿಕೊಳ್ಳೋದು... ಒಬ್ಬ ಹುಡುಗಿಯ ಬದುಕಲ್ಲಿ ಒಂದೆರಡಾದರೂ ಇಂಥ ಸಂದರ್ಭಗಳಿದ್ದೇ ಇರುತ್ತೇನೋ... ಅಲ್ಲಿಗೆ ಹುಡುಗರೊಂದಿಗಿನ ಗೆಳೆತನದಲ್ಲಿ ಒಂದು ಸಣ್ಣ ಭಯ, ಅಭದ್ರತೆ ಸದಾ ಇರೋದು ಸಹಜ ಹೆಣ್ಣಿಗೆ... ಅದರಿಂದ ತಪ್ಪಿಸಿಕೊಳ್ಳಲಿಕ್ಕಾದರೂ ಮೊದಲಿಗೇ ಅಣ್ಣ - ತಮ್ಮ ಅಂತ ಕರೆದುಬಿಡೋದು ಉತ್ತಮ ಎಂಬ ಮನಸ್ಥಿತಿಗೆ ಹೆಣ್ಣು ಬಂದಿದ್ರೆ ಅದೂ ತಪ್ಪೆನ್ನಲಾಗದು ಇಂದಿನ ಸಾಮಾಜಿಕ ಪರಿಸ್ಥಿತೀಲಿ...

ಮನದಲ್ಲಿ ಪ್ರಾಮಾಣಿಕವಾಗಿ ಈತ/ಈಕೆ ಚಂದದ ಸ್ನೇಹಿತ/ಸ್ನೇಹಿತೆ ಅಂತ ಪರಿಭಾವಿಸಿಕೊಂಡು ಅಂತ ಸ್ನೇಹದ ಬಗ್ಗೆ ತುಂಬ ಗೌರವ ಇಟ್ಟುಕೊಂಡ ಹುಡುಗ/ಹುಡುಗಿ ಕೂಡ ಸಮಾಜದ ಯಾರೋ ಮೂರನೇ ವ್ಯಕ್ತಿಯೆದುರು ಆ ಸ್ನೇಹವನ್ನು ಪರಿಚಯಿಸಬೇಕಾಗಿ ಬಂದಾಗ ಸ್ನೇಹ ಅಂತಲೇ ಪರಿಚಯಿಸಲು ಇರುಸುಮುರುಸು ಅನುಭವಿಸುವುದನ್ನು, ಅವ್ಯಕ್ತ ಭಯದಿಂದ ವರ್ತಿಸುವುದನ್ನು ಕಂಡಿದ್ದೇನೆ... ಎಷ್ಟೋ ಬಾರಿ ನಾನೇ ಅನುಭವಿಸಿದ್ದೇನೆ... (ನನ್ನ ಬಗ್ಗೆ ಭಯವಿಲ್ಲದಿದ್ದರೂ ನನ್ನಿಂದಾಗಿ ಹೆಣ್ಣು ಜೀವಕ್ಕಾಗುವ ಇರುಸುಮುರುಸಿನ ಭಯ ನನ್ನನೂ ಕಾಡಿದ್ದಿದೆ)... ಭಯ ತಮ್ಮ ನಡುವಿನ ಸ್ನೇಹದ ಬಗೆಗಿನ ಅಪನಂಬಿಕೆಯಿಂದ ಮೂಡಿದ್ದಲ್ಲ... ಆ ಮೂರನೇ ವ್ಯಕ್ತಿ ತಮ್ಮದು ಗೆಳೆತನ ಅಂದಾಕ್ಷಣ ತಮ್ಮೆಡೆಗೆ ನೋಡುವ ನೋಟದ ಬಗ್ಗೆ... ಸ್ನೇಹವನ್ನು ಸ್ನೇಹ ಅಂತಲೇ ಪರಿಚಯಿಸಿದರೆ ಎದುರಿನ ವ್ಯಕ್ತಿ ಎದುರಲ್ಲಿ ಏನೆನ್ನದಿದ್ದರೂ ಆಚೆ ಇನ್ನೆಲ್ಲೋ ಈ ಭಾವಬಂಧಕ್ಕೆ ಇನ್ಯಾವುದೋ ಅನುಮಾನದ ಸಂಬಂಧದ ಹೆಸರಿಟ್ಟುಬಿಟ್ಟರೆ ಎಂಬ ಭಯ... ಅದವನ ಮನೋವಿಕಾರವೇ ಇರಬಹುದು ಅಥವಾ ಮಾತ್ಸರ್ಯದ ಪ್ರಭಾವವೇ ಇರಬಹುದು... ಆತ ಏನೋ ಅಂದದ್ದರಿಂದ ನೇರವಾಗಿ ಇವರ ಸ್ನೇಹಕ್ಕೆ ಯಾವುದೇ ತೊಂದರೆ ಬರದೆ ಕೂಡ ಇರಬಹುದು... ಆದರೆ ಆತ ಕುಟುಂಬ ವಲಯ ಅಥವಾ ಸುತ್ತಮುತ್ತಲ ವಲಯದಲ್ಲಿ ಒಂದು ಅಸಹನೀಯ ವಾತಾವರಣವನ್ನಂತೂ ಸೃಷ್ಟಿಸಿಡುತ್ತಾನೆ... ಅಂತ ಅಸಹನೀಯತೆಯನ್ನು ಎದುರಿಸಿಯೂ ಸ್ನೇಹವನ್ನು ಸ್ನೇಹ ಅಂತಲೇ ಪರಿಚಯಿಸಿಕೊಂಡು ಮುನ್ನಡೆಯೋಕೆ ಆ ಇಬ್ಬರು ಸ್ನೇಹಿತರಲ್ಲೂ ತುಂಬ ಗಟ್ಟಿಯಾದ ವ್ಯಕ್ತಿತ್ವ ಮೈಗೂಡಿರಬೇಕು... ಸಮಾಜದ ಕ್ಷುದ್ರತೆಯನ್ನು ಎದುರಿಸಿಕೊಂಡು ಬಂಧ ಬೆಸೆದುಕೊಂಡಿರಬಲ್ಲ ಸಾಮರ್ಥ್ಯ, ತಮ್ಮ ನಡುವಿನ ಸ್ನೇಹದ ಬಗ್ಗೆ ಅಪರಿಮಿತ ನಂಬಿಕೆ, ಸ್ನೇಹವನ್ನು ಸದಾಕಾಲ ಸ್ನೇಹವಾಗಿಯೇ ಕಾಯ್ದುಕೊಳ್ಳಬಲ್ಲ ಮನೋ ಸ್ಥಿರತೆ ಎಲ್ಲ ಮೇಳೈಸಿರಬೇಕು... ಅದನ್ನೆಲ್ಲ ಸಾಧಿಸೋದು ಅಷ್ಟು ಸುಲಭವಲ್ಲ ಕೂಡ...

ಇಲ್ಲಿ ಇನ್ನೂ ಒಂದು ಸೂಕ್ಷ್ಮವಿದೆ... ಸ್ನೇಹವು ಆತ್ಮೀಕತೆಯ ಉತ್ತುಂಗದಲ್ಲಿ ಪ್ರೇಮದಂತೆ ಕಾಣುವ ಅಪಾಯ ಕೂಡ ಇದೆ... ಅಲ್ಲದೇ ಸ್ನೇಹವೇ ಪ್ರೇಮದ ಮೂಲ ಮೆಟ್ಟಿಲು ಎಂಬ ಮಾತಿದೆ... ಮತ್ತದು ಸತ್ಯ ಕೂಡ... ಹಾಗಾಗಿ ಸ್ನೇಹವನ್ನು ಸ್ನೇಹವಾಗಿಯೇ ಸಲಹಿಕೊಳ್ಳೋದು ಸುಲಭವೇನೂ ಅಲ್ಲ... ಸಮಾಜದ ಕುಹಕವೊಂದೇ ಅಲ್ಲದೇ ನಮ್ಮದೇ ಮರ್ಕಟ ಮನಸಿನ ಭಾವಗಳಿಂದಲೂ ಸ್ನೇಹವನ್ನು ಸಲಹಿಕೊಳ್ಳಬೇಕಿರುತ್ತೆ... ಸ್ನೇಹ ಪ್ರೇಮದ ಮೆಟ್ಟಿಲಿರಬಹುದು ಆದರೆ ಸ್ನೇಹವೇ ಪ್ರೇಮವಲ್ಲ... ಆದರೆ ಸ್ನೇಹವೊಂದು ಕಾಲದ ಮತ್ತು ಒಡನಾಟದ ಸಂಘರ್ಷಗಳಲ್ಲಿ ಮಿಂದು ಪಕ್ವಗೊಂಡ ಮೇಲೆ ಆ ಎರಡೂ ಜೀವಿಗಳು ಬಯಸಿ ಸ್ನೇಹಕ್ಕೆ ಏನೇ ಹೆಸರಿಟ್ಟರೂ ಕೊನೆಗೆ ಪ್ರೇಮವೆಂತಲೇ ಅಂದರೂ ಅದು ಚಂದವೇ... ಯಾಕಂದ್ರೆ ಪಕ್ವಗೊಂಡ ಸ್ನೇಹದಲ್ಲಿ ಆ ಹೆಸರುಗಳು ಸ್ನೇಹದ ಆತ್ಮೀಯ ನಾಮಗಳಂತಾಗಿ (ನಿಕ್‌ನೇಮ್) ಸ್ನೇಹದ ವಿಸ್ತಾರದಂತೆನಿಸುತ್ತೆ... ಆಗ ಅಕ್ಕ, ತಂಗಿ, ಅಣ್ಣ, ತಮ್ಮ, ಪ್ರೇಮಿ – ಹೆಸರೇನೇ ಇರಬಹುದು ಅದರ ಮೂಲ ಭಾವ ಹಾಗೂ ಮೂಲ ಸೆಲೆ ಮಧುರವಾದ ಪಕ್ವ ಸ್ನೇಹವೇ ಆಗಿರುತ್ತೆ... ಅಂಥ ಬಾಂಧವ್ಯಗಳಲ್ಲಿ ಬದುಕು ಚಂದ ಕೂಡ...

ಯಾಕೆ ಹುಡುಗರು ಬರೀ ಗೆಳೆಯರಾಗಿ ಸಿಕ್ಕಲ್ಲ ಅಂತ ಮಧುರ ಸ್ನೇಹವನ್ನು ಪ್ರೇಮವಾಗಿಸಹೊರಟ ನಿಯಂತ್ರಣ ತಪ್ಪಿದ ಅಪಕ್ವ ಮನಸಿನ ಹುಡುಗರ ಪ್ರೇಮ ನಿವೇದನೆಗಳಿಂದ ಕಂಗಾಲಾದ ಕಿರಿಯ ಹೆಣ್ಣು ಜೀವಗಳು ಕೇಳಿದಾಗ ಅಯ್ಯೋ ಅನ್ನಿಸಿದ್ದಿದೆ ಎಷ್ಟೋ ಬಾರಿ...

ಅಂತೆಯೇ ಇದುವರೆಗೂ ರಕ್ತ ಸಂಬಂಧದಾಚೆಯ ಯಾವ ಭಾವ ಬಂಧಕ್ಕೂ ಒಂದುಮಟ್ಟಿನ ಒಡನಾಟ, ಅಭಿರುಚಿಯ ಇಲ್ಲವೇ ವ್ಯಕ್ತಿತ್ವದ ಕನಿಷ್ಠ ಅವಗಾಹನೆ ದಕ್ಕುವ ಮುನ್ನವೇ ಅಕ್ಕ, ತಂಗಿ ಅಂದದ್ದಿಲ್ಲದ, ಯಾವ ಹೆಣ್ಣು ಜೀವದೆದುರೂ ಪ್ರೇಮನಿವೇದನೆಗಿಳಿದಿದ್ದಿಲ್ಲದ, ಗೆಳತಿಯರನ್ನು ಕೇವಲ ಗೆಳತಿಯರಾಗಿ ಕಂಡು ಗೌರವಿಸುತ್ತಲಿದ್ದೂ (ಕೀಟಲೆಗಳಿಗಾಗಿ ಪ್ರತಿ ಗೆಳತಿಯನ್ನೂ ಕಾಲೆಳೆದು ಕಿಚಾಯಿಸುತ್ತೇನೆ ಆ ಮಾತು ಬೇರೆ), ಆತ್ಮೀಯ ಸ್ನೇಹಾನ ಅತಿಯಾಗಿ ಪ್ರೀತಿಸೋ ನನ್ನನ್ನು ಯಾವ ಹುಡುಗಿಯೂ - ನಾನೇನು ಎಂಬುದು ಸ್ಪಷ್ಟವಾಗಿ ಅರಿವಾದ ಮೇಲೂ, ಎಲ್ಲರೆದುರೂ ಧೈರ್ಯವಾಗಿ ಗೆಳೆಯ ಅಂತಲೇ ಪರಿಚಯಿಸಿದ್ದೂ ಇಲ್ಲ ಯಾಕೆ ಅನ್ನೋ ಪ್ರಶ್ನೆ ಕೂಡ ಮೂಡುತ್ತೆ...

ಎರಡಕ್ಕೂ ನಂಗೆ ಗೋಚರಿಸಿದ ಕಾರಣ ಒಂದೇ – ಹೆಣ್ಣು ಜೀವಗಳಲ್ಲಿ ಅಂತರ್ಗತವಾಗಿ ಅಚ್ಚೊತ್ತಿರುವ ವಿಕಾರ ಮನಸಿನ ಸಮಾಜದ ಭಯ... ಮತ್ತು ಇಬ್ಬರಲ್ಲೂ ಇರಬಹುದಾದ ತಮ್ಮದೇ ಮನಸು ಮರ್ಕಟವಾಗಿ ಸ್ನೇಹ ಪ್ರೇಮವಾಗಿಬಿಡಬಹುದಾದ ಭಯ... ನಂಗೆ ಈ ಎರಡೂ ಭಯಗಳಿಲ್ಲ... ಆದ್ದರಿಂದ ಸ್ನೇಹವನ್ನು ಸ್ನೇಹ ಎಂದೇ ಹೇಳಿ ಪರಿಚಯಿಸಬಹುದಾದ, ಹಾಗೆಯೇ ಗೌರವಿಸಬಹುದಾದ ಸಮಾಜದ ನಿರೀಕ್ಷೆ ಇದೆ ನನ್ನಲ್ಲಿ...

ಕೊನೆಯಲ್ಲಿ ಮತ್ತೆ ಹೇಳ್ತೇನೆ – ಇಲ್ಲಿರೋದು ಕೇವಲ ನಾ ನಂಬಿದ, ನನ್ನ ಮನದ ಪ್ರಾಮಾಣಿಕ ಭಾವ ಅಷ್ಟೇ.. ಈ ಭಾವದ ಭಾಷಣ ಬಿಗಿದು ಎಷ್ಟೋ ಬಂಧಗಳನ್ನು ಚಿಗುರೋ ಮೊದಲೇ ಕಳಕೊಂಡದ್ದೂ ಇದೆ... ಮುಂದೆಯೂ ಕಳಕೊಂಡೇನು... ಆದರೆ ಆ ಬಗ್ಗೆ ನಂಗೆ ಬೇಸರವಿಲ್ಲ... ನಿಜವೆಂದರೆ ನನ್ನ ಭಾವದಾಚೆ ನಾನು ನಿಮ್ಮ ಭಾವಗಳನ್ನೂ ಗೌರವಿಸುತ್ತೇನೆ... ಯಾರೋ ನಂಗೆ ಬಂಧ ಬೆಸೆಯೋ ಮುನ್ನವೇ ಅದಕೊಂದು ಸಂಬಂಧ ರೂಪದ ಹೆಸರಿಡುವುದರಲ್ಲೇ ಖುಷಿಯಿದೆ ಮತ್ತು ಭದ್ರತಾ ಭಾವವಿದೆ ಅಂದರೆ ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ... ಆದರೆ ನನ್ನಿಂದಲೂ ಅದನ್ನೇ ಬಯಸದಿದ್ದರಾಯ್ತು... ಕೂಗಿದ್ದು ಹೇಗೆಂಬುದಕಿಂತ ಕೂಗುವಾಗಿನ ಭಾವವೇ ಹೆಚ್ಚು ಮುಖ್ಯವೆನ್ನಿಸುತ್ತೆ ನಂಗೆ... ಬಂಧದ ಆಯಸ್ಸು ಮತ್ತು ವಿಸ್ತಾರ ಅದರಿಂದಲೇ ನಿರ್ಧಾರವಾಗುತ್ತೆ ನನ್ನಲ್ಲಿ... ಇನ್ನೇನಿಲ್ಲ... 

ಸ್ನೇಹ ಹಾಡಲಿ ಎಲ್ಲೆಲ್ಲೂ...

Saturday, October 19, 2013

ಗೊಂಚಲು - ಒಂಬತ್ತು X ಹತ್ತು.....

ಹಂಗಂಗೇ ಏನೇನೋ.....

ನಂಗೊತ್ತು ನಾನು ನಿನ್ನ ವ್ಯಕ್ತಿತ್ವದೆದುರು ತುಂಬ ಕುಬ್ಜ ಅಂತ... ಆದರೆ ಒಪ್ಪಿಕೊಳ್ಳಲಿ ಹೇಗೆ... ಮಗ ನಾನು... ಗಂಡು ಪ್ರಾಣಿ ತಾನೆ... ನನ್ನ ಅಸಹಾಯಕತೆ, ನನ್ನ ಕೈಲಾಗದತನಗಳೆಲ್ಲ ನಾ ನಿನ್ನೆದುರು ನಿಂತಾಗ ನಂಗೇ ಅಗತ್ಯಕ್ಕಿಂತ ಸ್ಪಷ್ಟವಾಗಿ ಗೋಚರಿಸಿ ಕಂಗಾಲಾಗುತ್ತೇನೆ... ನನ್ನ ಕುಬ್ಜತೇನ ನಿನ್ನೆದುರು ಕೂಗಾಡುವ ಮೂಲಕ ಮುಚ್ಚಲು ಹೊರಡುತ್ತೇನೆ... ನೀನು ಅಮ್ಮ ಎಂದಿನಂತೆ ನಕ್ಕು ಸುಮ್ಮನಾಗ್ತೀಯ... ನಾನು ನನಗೇ ಸಾವಿರ ಸುಳ್ಳೇ ಸಮರ್ಥನೆಗಳ ನೀಡಿಕೊಂಡು ಗೆದ್ದ ಭ್ರಮೆಯಲ್ಲಿ ನಿಸೂರಾಗ್ತೇನೆ... ನೀನು ನಿನ್ನ ಕಣ್ಣ ಹನಿ ಎಂದೂ ನನ್ನ ತಲುಪದಂತೆ ಅಲ್ಲೆಲ್ಲೋ ಮೂಲೆಯಲ್ಲಿ ಸೆರಗ ತೋಯಿಸಿಕೊಳ್ತೀಯ... ಆಗೊಮ್ಮೆ ಈಗೊಮ್ಮೆ ನಿನ್ನ ದೇಹ ಇಷ್ಟಿಷ್ಟೇ ಕೃಷವಾಗುತ್ತಿರುವ ಸುದ್ದಿ ನನ್ನ ತಲುಪುತ್ತೆ... ಬರೀ ನೋವನ್ನೇ ಉಂಡರೆ ಇನ್ನೇನಾಗುತ್ತೆ... ನಾನಿಲ್ಲಿ ಅಡಗಿಕೊಳ್ಳಲು ಮತ್ತೆ ಹೊಸ ಸಮರ್ಥನೆಗಳ ಮರೆಯ ಹುಡುಕತೊಡಗುತ್ತೇನೆ...
***
ಒಮ್ಮೊಮ್ಮೆ ಇಷ್ಟೆಲ್ಲ ಗೆಳೆತನಗಳಿಂದ, ಕರುಣೆಯ ಮಡಿಲುಗಳ ಇಷ್ಟೆಲ್ಲ ಪ್ರೀತಿಯಿಂದ, ಮುರಿದರೂ ಮತ್ತೆ ಚಿಗುರೋ ಕನಸುಗಳಿಂದ, ಒಂದ್ಯಾವುದೋ ಭರವಸೆಯಿಂದ, ಮುಗಿಯದ ಹಸಿ ಹಸಿ ಆಸೆಗಳಿಂದ ತುಂಬಿದ ಈ ಬದುಕು ಎಂದಿಗೂ ಮುಗಿಯಲೇ ಬಾರದು ಅಂತಲೂ ಅನ್ನಿಸಿ ಬದುಕಿನಾಸೆ ಅತಿಯಾಗುತ್ತೆ... ನಗೆಯ ಸನ್ನಿಧಿಯಲ್ಲಿ ಶಾಶ್ವತತೆಯ ಹುಚ್ಚು ಹಂಬಲ ತೀವ್ರ...

ಮರುಕ್ಷಣ ಅನ್ಸುತ್ತೆ – ಬದುಕು ತುಂಬ ದೀರ್ಘವಾಗ್ತಿದೆಯೇನೋ ಅಂತ... ಎಷ್ಟೆಲ್ಲ ಖುಷಿಗಳಿವೆ ಇತ್ತೀಚಿನ ಈ ಬದುಕಲ್ಲಿ... ಈ ಸ್ನೇಹಗಳು, ಅದರಿಂದ ದಕ್ಕಿದ ನಗು, ಖುಷಿ ಎಲ್ಲ ಕಳೆದುಹೋಗಿ ಬದುಕು ಬರಡಾಗುವ ಮುನ್ನ, ನನಗೇ ನಾನು ಬೋರಾಗುವ ಮುನ್ನ, ಇವೆಲ್ಲ ಹೀಗೆ ಹೀಗೇ ಇರುವಾಗಲೇ, ನಗುತಿರುವಾಗಲೇ, ಈ ನಗುವಿನೊಂದಿಗೇ ಫಕ್ಕನೆ ಮುಗಿದುಹೋಗಿ ಇಲ್ಲವಾಗಿಬಿಡಬೇಕು... ಖುಷಿಯಿಲ್ಲದ, ಕನಸಿಲ್ಲದ, ಭಯತುಂಬಿದ ಭವಿಷ್ಯದಲ್ಲಿ ನಾನೂ ಇರಬಾರದು... ಅಳುವ ಕಡಲಲ್ಲಿ ಮುಳುಗಿ ಉಸಿರುಗಟ್ಟುವುದಕಿಂತ ಅಳಿದು ಹೋಗುವುದೇ ಸುಖವಿರಬಹುದಾ.??? 
***
ಎಷ್ಟೆಲ್ಲ ಖುಷಿಗಳ ನಡುವೆ, ಸಣ್ಣದ್ಯಾವುದೋ ಒಂದು ನೋವಿನ ಎದುರು ನೀವೇ ಪಕ್ಕನೆ ನೆನಪಾಗೋದು ಯಾಕೆ.? ಮತ್ತೆ ಸಿಕ್ಕೇ ಸಿಗ್ತೀವಿ ಅಂತ ಗೊತ್ತಿದ್ರೂ ನಿಮ್ಮೊಂದಿಗಿನ ಪ್ರತೀ ವಿದಾಯದಲ್ಲೂ ಮನಸು ಭಾರ ಆಗೋದೂ ಯಾಕೆ.? ಅಷ್ಟೆಲ್ಲ ನಿಮ್ಮಗಳ ತಲೆ ತಿಂದ ಮೇಲೂ ಇನ್ನೂ ಮಾತು ಬಾಕಿ ಇತ್ತು ಅನ್ನಿಸುವುದ್ಯಾಕೆ.? ನಿಮ್ಮ ಮಾತಿನಾಚೆಯ ಮೌನದೊಳಗಿನ ಖುಷಿ ಮತ್ತು ನೋವುಗಳನೂ ಆಲಿಸಬೇಕು ಅನ್ನುವ ಹಂಬಲವ್ಯಾಕೆ.? ನಿಮ್ಮದೊಂದು ಸಣ್ಣ ನಗುವೂ ನನ್ನಲಿ ಖುಷಿಯ ಅಲೆಗಳ ಸೃಷ್ಟಿಸುವುದ್ಯಾಕೆ.? ಅಷ್ಟೆಲ್ಲ ಜಗಳವಾಡಿದರೂ ಜಗಳ ಮುಗಿದ ಮರುಕ್ಷಣ ನೋವೆಷ್ಟಾಯಿತೆಂದು ಹೇಳಿಕೊಂಡು ಮತ್ತೆ ನಗಲು ನೀವೇ ಬೇಕು ಅನ್ನಿಸುವುದ್ಯಾಕೆ.? ಮೌನವೆಂದರೆ ಕಡು ವಿರೋಧಿ ನಾನು, ನೀವು ಮಾತೇ ಆಡದಿದ್ದರೂ ನಿಮ್ಮ ಮೌನದ ಸನ್ನಿಧಿಯಲೂ ಹಿತವಾದ ಭಾವದಲಿ ತೇಲಬಲ್ಲೆ ಹೇಗೆ.? ಬೆನ್ನಿಗೆ ಬಿದ್ದೋರೂ ಅರ್ಥೈಸಿಕೊಳ್ಳದೇ ನೋವ ಹೆಚ್ಚಿಸುವಾಗ ಬರೀ ಭಾವಕ್ಕೆ ದಕ್ಕಿದ ನೀವು ನಗೆಯ ಉಣಿಸಲು ಹೆಣಗುತ್ತೀರ ಯಾಕೆ.? ನೀವೆಲ್ಲ ಯಾರು ನಂಗೆ.?  ಕಣ್ಣ ಹನಿ ಕೂಡಾ ಅಪ್ಯಾಯಮಾನ ಅನಿಸುವಂತೆ ಯಾವುದೀ ಸ್ನೇಹ ಬಂಧ ಕರುಳ ಬೆಸೆದು ಬಂಧಿಸಿದೆಯೋ ನಿಮ್ಮಗಳೊಂದಿಗೆ ಅಂತ ಆಶ್ಚರ್ಯದಿಂದ ಯೋಚಿಸುತ್ತೇನೆ ಪ್ರತಿ ಬಾರಿಯೂ... ಇಂಥ ಪ್ರಶ್ನೆಗಳ ಸರಮಾಲೆಯೇ ಎದುರು ನಿಂತು ಕುಣಿಯುವಾಗ ನಂಗೇ ನಾನು ಒಂದು ಪ್ರಶ್ನೆಯಾಗುತ್ತೇನೆ.. ಬಹುಶಃ ಅದು ಅತೃಪ್ತ ಬದುಕಿನ ಹಪಹಪಿಯೂ ಇರಬಹುದೇನೋ ಗೊತ್ತಿಲ್ಲ... ಕಳೆದುಕೊಂಡದ್ದೇ ಜಾಸ್ತಿ ಇರೋ ಬದುಕಲ್ಲಿ  ಕಳೆದುಕೊಳ್ಳುವ, ಕಳೆದುಹೋಗುವ ಭಯವೂ ಇರಬಹುದು... ಅದೆಲ್ಲಕ್ಕಿಂತ ಹೆಚ್ಚಾಗಿ ಅರಿವು ಮೂಡಿದಾಗಿನಿಂದ ಬಯಸಿದ್ದ ಅಪರೂಪದ ಗೆಳೆತನವನ್ನು ನಿಮ್ಮಗಳಲ್ಲಿ ಕಂಡದ್ದು ಮತ್ತು ನೀವದನ್ನು ನಿಭಾಯಿಸಿದ್ದು ನಿಮ್ಮೆಡೆಗಿನ ಆ ಆತ್ಮೀಯ ಭಾವಕ್ಕೆ ಮೂಲ ಎಂದರೆ ಹೆಚ್ಚು ಸರಿ ಅನ್ಸುತ್ತೆ... ಅದರಿಂದಾಗಿ ಮನಸಿಗೊಂದು ಸ್ವೇಚ್ಛೆ ಮತ್ತು ಬದುಕಿಗೊಂದು ಸ್ಫೂರ್ತಿಯುತ ದೃಷ್ಟಿ ದಕ್ಕಿಬಿಟ್ಟಿದೆ... ಬದುಕ ನಚ್ಚಗಿಟ್ಟ ಸಸ್ನೇಹಿಗಳಿಗೊಂದು ಸಲಾಮ್...  
***
ಎಷ್ಟೆಲ್ಲ ಪ್ರಶ್ನೆಗಳಿವೆ...  ಒಳಗಿನ ಮಾತೂ ಕೇಳದಷ್ಟು ಪ್ರಶ್ನೆಗಳ ಗದ್ದಲ... ಉತ್ತರ ಮಾತ್ರ ಶೂನ್ಯ... ಎಷ್ಟೇ ಹರಿದು ಹಂಚಿದರೂ ಖಾಲಿಯಾಗದ  ತಲ್ಲಣಗಳು... ಇವೆಲ್ಲವುಗಳ ಕಣ್ತಪ್ಪಿಸಿ ಮೌನದ ಚಿಪ್ಪಿನೊಳಗೆ ಹುದುಗಿ ಅಡಗಿಕೊಂಡು ಬಿಡಬೇಕೆನ್ನಿಸುವಷ್ಟು ಗೊಂದಲಗಳು... ಉತ್ತರವ ಕಾಲವೇ ಕೊಡುತ್ತೆ ಅನ್ನುತ್ತಾರೆ... ಆದರೆ ಉತ್ತರ ದಕ್ಕುವ ಮುನ್ನವೇ ಕಾಲ ಕಳೆದು ಹೋಗುತ್ತೇನೋ ಅನ್ನುವ ಭಯವೂ ಇದೆ... ಆದರೂ ಕಾಯಲೇ ಬೇಕು... ಕಾಲ ಕಾಯದಿದ್ದರೂ...
***
ಕಣ್ಣಲ್ಲಿನ ಕನಸುಗಳೆಲ್ಲ ಹನಿಗಳಾಗಿ ಉದುರಿ ಹೋಗಿ ಕೆನ್ನೆ ತೋಯಿಸಿ ಕರೆಯಾಗಿ ಉಳಿದವು... ಒಣ ನಗೆಯ ಸಾಬೂನಿಂದ ಕೆನ್ನೆ ಮೇಲಿನ ಕಣ್ಣೀರ ಕರೆಗಳ ತಿಕ್ಕಿ ತಿಕ್ಕಿ ತೊಳೆದಿದ್ದೇನೆ... ಯಾರಿಗೂ ಕಾಣಬಾರದು... ಕೆನ್ನೆಯೀಗ ತುಂಬ ನುಣುಪು... ಆದರೂ ಮನದ ಕಣ್ಣುಗಳಿಂದ ನನ್ನೊಳಗನ್ನೇ ಇಣುಕಿ ನೋಡಬಲ್ಲ ಕೆಲ ಕಣ್ಣುಗಳಿಗೆ ಒಳಗಣ ಗಾಯ ಕಾಣದಂತೆ ತಡೆಯಲಾರದೆ ಸೋತಿದ್ದೇನೆ... ಮತ್ತೆ ಸ್ನೇಹಕ್ಕೆ ಸಲಾಮ್... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, October 9, 2013

ಗೊಂಚಲು - ಎಂಬತ್ತೊಂಬತ್ತು.....

ಅಲ್ಲಲ್ಲಿ ಹೇಳಿದ್ದು.....
(ಯಾರಿಗೆ ಮತ್ತು ಯಾವಾಗ ಅಂತ ಕೇಳಬೇಡಿ...)

ಕನಸಿನೂರಿಗೂ ನಿನ್ನ ಕನಸಿನಾಸೆ ಮೂಡುವಂತೆ ನಗುತಲಿರು ನನ ಗೆಳತಿ...
@@@
ನಿದ್ದೆ ಮಡಿಲಿಂದ ಎದ್ದು ಮೈಮುರಿದು ಯಾವುದೋ ಸವಿಗನಸು ನೆನಪಾದವಳಂತೆ ಸುಮ್ಮನೇ ಹಿತವಾಗಿ ನಗುತಿದ್ದ ನಿನ್ನ ಮುಂಗುರುಳ ತಾಕಿ ಬಂದೆ ಅಂತಂದ ರವಿ ಕಿರಣದ ಮೇಲೆ ನಂಗೆ ಸಿಟ್ಟು, ಹೊಟ್ಟೆಕಿಚ್ಚು ಮತ್ತು ಪ್ರೀತಿ ಒಟ್ಟೊಟ್ಟಿಗೇ ಮೂಡಿ ಒಂಥರಾ ರೋಮಾಂಚನ ಕಣೇ...;) 
@@@
ಅಷ್ಟು ದೊಡ್ಡ ಕಲೆಯಿದ್ದೂ ಚಂದಕ್ಕೆ ಮತ್ತೊಂದು ಹೆಸರು ಚಂದ್ರಮ...
ಚಂದ ಅವನಲ್ಲ ಅವನ ತಂಪು ತಂಪು ಬೆಳದಿಂಗಳು...
ನಾನೂ ಅವನಂತಾಗಬೇಕಿತ್ತು; ವ್ಯಕ್ತಿತ್ವದ ಬೆಳಕಿಂದ ಬೆಳಗಬೇಕಿತ್ತು...
ಆದರಿದು ನನ್ನ ಮಟ್ಟಿಗೆ ಬರೀ ಬಯಕೆ ಅಷ್ಟೇ...
ಅಲ್ಲಿ ನೀನು ಆ ದಾರೀಲಿ ನಾಕು ಹೆಜ್ಜೆ ನಡೆದಾಗಿದೆ ಅಂತ ಸುದ್ದಿ ಬಂತು...
ಇಲ್ಲಿ, ಗೆಳೆಯನೆಂಬ ಹೆಮ್ಮೆಯ ಭಾವ ಎದೆಯ ತುಂಬಿ ನನ್ನದೇ ಬಯಕೆ ತೀರಿದಷ್ಟು ಅವ್ಯಕ್ತ ಖುಷಿ ನನ್ನಲ್ಲಿ......
@@@
ಎಲ್ಲಿಂದ ಎಲ್ಲಿಗೋ ಬೆಸೆದುಕೊಂಡು ಕೊರಳೆತ್ತಿ ಹಾಡುವ ಈ ಭಾವ ಬಂಧಗಳು ನೀಡುವ ಆತ್ಮೀಕ ಖುಷಿಗಳು ಈ ಬದುಕನ್ನು ಅದೆಷ್ಟು ಚಂದಗೆ ಶೃಂಗರಿಸುತ್ತವೆ ಅಂದರೆ ಅಂಥ ಬಂಧಗಳೆದುರು ಅರಿವೇ ಇಲ್ಲದೆ ಮನಸು ಹಕ್ಕಿ ಹಕ್ಕಿ... 
ತಾರೆ, ಚಂದಿರರು ಕಾಣದ ಗಾಢ ಕತ್ತಲಲೂ ಆ ಜೀವಗಳ ಸ್ನೇಹದ ಬೆಳಕೇ ದಾರಿ ತೋರಿಬಿಡುತ್ತೆ... 
ಅಂಥ ಬಂಧಗಳಿಗೆ ಋಣಿ...
@@@
ಗೆಳತೀ -
ಎಲ್ಲಾ ಸೋಲಿಗೂ ಗೆಲುವಿನ ಇನ್ನೊಂದು ಮುಖ ಇದ್ದೇ ಇದೆ...
ಒಂದು ನಗೆಯ ಕ್ಷಣದ ನೆನಪು ಸಾಕು ಸಾವಿರ ನೋವುಗಳ ಮರೆತು ಹಗುರಾಗಲು...
ನಕ್ಕು ಬಿಡು ಮಗುವಂತೆ... ನಿಶ್ಚಿಂತೆಯಿಂದ - ಎಲ್ಲಾ ಒಳಿತೇ ಆಗುವುದೆಂಬ ಭರವಸೆಯಲ್ಲಿ...
ಒಳಿತು ಪ್ರತ್ಯಕ್ಷವಾಗಿ ದಕ್ಕುತ್ತೋ ಇಲ್ಲವೋ ಒಳಿತಿನ ಭರವಸೆಯ ನಗು ಈ ಕ್ಷಣವ ಬೆಳಗಿಸಿ ನಾಳೆಯೆಡೆಗೆ ಅಡಿಯಿಡಲು ಚೈತನ್ಯವನ್ನಂತೂ ಕೊಟ್ಟೇ ಕೊಡುತ್ತೆ...
@@@
ಭಾಷೆಯೆಂದರೆ ಬರೀ ಮಾತಲ್ಲ – ಮಾಧ್ಯಮರೂಪಿ ಶಬ್ದಾಡಂಬರವೂ ಅಲ್ಲ...
ಶಬ್ದದ ಹಿಂದಿನ ಭಾವ...
ಹೇಳಿದ್ದರ ಹಿಂದಿರುವ ಹೇಳದೇ ಉಳಿದದ್ದು – ನಾಲಿಗೆ ಆಡದೆಯೂ ಮನಸಿಗೆ ಕೇಳಿದ್ದು ಮತ್ತು ಮನಸಲ್ಲಿ ಮರೆವಿರದೆ ಉಳಿದದ್ದು...
@@@

Monday, September 23, 2013

ಗೊಂಚಲು - ಎಂಬತ್ತು + ಎಂಟು.....

ಹೀಗೊಂದು ಮಾತು.....

ಕಳೆದ ಮಹಿಳಾ ದಿನಾಚರಣೆಗಾಗಿ ಒಂದು ಲೇಖನ ಬರೆದಿದ್ದೆ.
ಬರೆದ ವಿಷಯ ಸತ್ಯವೇ. ತುಂಬಾ ಜನ ಮೆಚ್ಚಿಕೊಂಡರು ಕೂಡ. ಆದರೆ ನನಗೇ ಯಾಕೋ ಸಂತೃಪ್ತ ಅನ್ನಿಸಿಲ್ಲ. ಬರೆದ ಬರಹದಲ್ಲಿ ದೇಹ ಸದೃಢವಾಗೇ ಇದ್ದರೂ ಯಾಕೋ ಆತ್ಮ ಇಲ್ಲ ಅನ್ನಿಸ್ತಾ ಇತ್ತು. ಕಾರಣ ಇಷ್ಟೇ ನನ್ನ ಮನಸು ಪುರುಷ ಪ್ರಧಾನ ಮತ್ತು ಸ್ತ್ರೀ ಪ್ರಧಾನ ಎಂಬ ಎರಡೂ ವಾದಗಳನ್ನು ಒಪ್ಪಲಾರದು. ನಾನೆನ್ನುತ್ತೇನೆ ನಮ್ಮನೆಲ್ಲ ಸಷ್ಟಿಸಿದ ಪ್ರಕೃತಿ ಮಾತ್ರ ಪ್ರಧಾನ. ಅದರ ಪ್ರಾಧಾನ್ಯತೆಯನ್ನು ಒಪ್ಪಿಕೊಳ್ಳದ ನಾವು, ಅದು ನೀಡಿದ ಮಿತಿಗಳನ್ನು ಮೀರಲು ಹವಣಿಸುವ ನಾವು, ಪುರುಷ ಮೇಲು ಇಲ್ಲಾ ಸ್ತ್ರೀ ಮೇಲು ಎಂದುಕೊಂಡು ಬಡಿದಾಡಿಕೊಂಡು ನಿಜವಾದ ನಮ್ಮನ್ನು ನಾವೇ ಕಳೆದುಕೊಳ್ಳುತ್ತಿದ್ದೇವೇನೋ ಅನ್ನಿಸುತ್ತೆ ನಂಗೆ. ದೌರ್ಜನ್ಯಗಳ ಮಾತು ಬಿಟ್ಟುಬಿಡಿ. ಅದು ಮನಸಿನ ಸಂಸ್ಕಾರ ಇಲ್ಲದವರು ಮತ್ತೊಬ್ಬರ ಮೇಲೆ ನಡೆಸೋ ಕ್ರೌರ್ಯ. ಮಿತಿಗಳ ಅರಿತುಕೊಂಡು ಹೊಂದಿ ಬಾಳುವ ಬಗ್ಗೆ ಯೋಚಿಸೋಣ...

ಇಷ್ಟೆಲ್ಲ ಜೀವರಾಶಿಗಳನ್ನು ಸೃಷ್ಟಿಸಿದ ಪ್ರಕೃತಿ ಪ್ರತಿ ಜೀವಕ್ಕೂ ಅದರದೇ ಆದ ವಿಶಷ್ಠ ಸಾಮರ್ಥ್ಯ ಮತ್ತು ಮಿತಿ ಎರಡನ್ನೂ ನೀಡಿದೆ. ಸುತ್ತಲಿನ ವಾತಾವರಣದ ಅನುಕೂಲತೆಯನ್ನು ಬಳಸಿಕೊಂಡು ತನ್ನ ಪ್ರಬೇಧಗಳನ್ನು ತಾನೇ ಸ್ವತಂತ್ರವಾಗಿ ವೃದ್ಧಿಸಿಕೊಳ್ಳಬಲ್ಲ ಸಾಮರ್ಥ್ಯ ನೀಡಿ ಸಸ್ಯ ಸಂಕುಲವನ್ನು ಸೃಷ್ಟಿಸಿ; ವಾತಾವರಣ ಮುನಿದರೆ ಉಳಿಯಲಾರದ ಮಿತಿಯನ್ನೂ ಅದಕೆ ನೀಡಿದ್ದು ಪ್ರಕೃತಿ...
ಅದೇ ಪ್ರಕೃತಿ ಪ್ರಾಣಿ ಪ್ರಪಂಚದಲ್ಲಿ ಪ್ರತ್ಯೇಕ ಗಂಡು - ಹೆಣ್ಣು ಎಂಬ ಎರಡು ಪ್ರಭೇದವನ್ನೇ ಸೃಷ್ಟಿಸಿತು. ಅದರಲ್ಲೂ ಮನುಷ್ಯ ಪ್ರಾಣಿಗೆ ವಿಶೇಷವಾದ ವಿವೇಚನಾ ಶಕ್ತಿಯನ್ನೂ ನೀಡಿತು. ಮನುಷ್ಯ ಸ್ವಲ್ಪ ಮುಂದುವರಿದ (?) ಪ್ರಾಣಿ ತಾನೇ...
ಈಗ ನಾವು ಪ್ರಕೃತಿಯ ಸೃಷ್ಟಿಯಲ್ಲಿನ ಮನುಷ್ಯ ಜಂತುವಿನ ಬಗ್ಗೆ ಮಾತಾಡೋಣ...
ಗಂಡು - ಹೆಣ್ಣು ಎರಡೂ ಬೌದ್ಧಿಕವಾಗಿ ಸಮಾನ ಪ್ರಾಭಲ್ಯವುಳ್ಳ ಶಕ್ತಿಗಳು. ದೈಹಿಕತೆಯಲ್ಲಿ ಮಿತಿಗಳನ್ನಿಟ್ಟದ್ದು ಪ್ರಕೃತಿ...
ದೈಹಿಕ ಮಿತಿಗಳ ಮೀರುತ್ತೇನೆಂದು ಹೊರಡುವವರಿಗೆ ಬೇಲಿಯಂತಹ ಸೃಷ್ಟಿಯೇ ಅಗೋಚರ ಮನಸು...
ಮನಸು ಇದು ಮನುಜನಿಗಾಗಿ ಪ್ರಕೃತಿ ನೀಡಿದ ಅದ್ಭುತ ಕೊಡುಗೆ ಮತ್ತು ಅಷ್ಟೇ ಪ್ರಭಾವಶಾಲಿ ಮಿತಿ ಕೂಡಾ...
ಎರಡು ಬೇರೆಯದೇ ಶಕ್ತಿಗಳು ಒಂದೇ ಭಾವದಲ್ಲಿ ಬೆಸೆದು ಹೊಳೆಯುವ ವಿಶಿಷ್ಟ ಜೀವನ ಪ್ರೀತಿಗೆ ಮೂಲ ಧಾತು ಈ ಮನಸೆಂಬೋ ಮನಸಿನ ಆಳದ ಒಲವ ಬಯಕೆ...
ಸುಂದರ - ಸದೃಢ ಕಾಯ, ಪ್ರಭಲ ಬುದ್ಧಿ ಶಕ್ತಿ ಇವೆರಡನ್ನೂ ನೀಡಿ ಅವುಗಳನ್ನು ನಿಯಂತ್ರಿಸಲು ಮನಸು ಮತ್ತು ಅದರೊಳಗೊಂದಿಷ್ಟು ಪ್ರಾಕೃತಿಕ ಬಯಕೆಗಳನ್ನು ನೀಡಿದ್ದು ಪ್ರಕೃತಿ. ತಾ ಮೇಲು ತಾ ಮೇಲು ಎಂದು ಸಾಧಿಸಲು ಹೊರಟಾಗ ಗಂಡು ಮತ್ತು ಹೆಣ್ಣು ಇಬ್ಬರೂ ಒಬ್ಬರ ಮೇಲೊಬ್ಬರು ಕಾಯ ಹಾಗೂ ಬುದ್ಧಿಯ ಮೀತಿಗಳನ್ನು ಮೀರಿಬಿಟ್ಟಾರು. ಆದರೂ ಮನಸಿನ ಮಿತಿಗಳನ್ನು ಮೀರಲಾಗದೇ ಸೋತದ್ದೇ ಹೆಚ್ಚು ಸಾರಿ...
ಎಲ್ಲ ಬಡಿದಾಟಗಳಿಂದ ತನ್ನ ಮೇಲರಿಮೆಯನ್ನು ಸಾಧಿಸಿದ ಮೇಲೆ ಮನಸಲ್ಲಿ ಪ್ರಕೃತಿ ಬಚ್ಚಿಟ್ಟ ಮೂಲ ಬಯಕೆ ತನ್ನ ಪ್ರತಿಕೃತಿಯ ಸೃಷ್ಟಿಯ ಮಾತು ಬಂದಾಗ ಎಲ್ಲ ಮೇಲರಿಮೆಗಳೂ ಸಾಯಲೇಬೇಕಾದ್ದು ಅನಿವಾರ್ಯ. ಅದು ನಮಗೆ ಪ್ರಕೃತಿ ನೀಡಿದ ಮಿತಿ...
ಗಂಡು ತನ್ನ ಪುರುಷ ಶಕ್ತಿಯ ಸದ್ಬಳಕೆಯ ಬಯಕೆ ತೀವ್ರವಾಗಿ ಕಾಡಿದ ಕ್ಷಣ ಹೆಣ್ಣು ಜೀವದ ಮಡಿಲ ಅರಸಿ ಚಡಪಡಿಸುತ್ತಾನೆ...
ಹೆಣ್ಣು ತನ್ನ ಮೂಲ ಭಾವವಾದ ತಾಯ್ತನದ ಪೂರ್ಣತ್ವ ಹೊಂದಲೋಸುಗ ಗಂಡಿನ ತೆಕ್ಕೆಗಾಗಿ ಹಂಬಲಿಸುತ್ತಾಳೆ...
ಒಂದು ಬೀಜ ಮತ್ತು ಇನ್ನೊಂದು ಕ್ಷೇತ್ರ...
ಒಂದನ್ನುಳಿದು ಇನ್ನೊಂದು ಅಪೂರ್ಣ...
ಬೀಜದ ಪೂರ್ಣತ್ವ ಅದು ಕ್ಷೇತ್ರದಲ್ಲಿ ಬೆರೆತು ಹೊಸ ಸಸಿಯಾಗಿ ನಕ್ಕಾಗ...
ಬೀಜವೊಂದಕ್ಕೆ ಮಡಿಲಲ್ಲಿ ತಾವು ನೀಡಿ - ನೀರು ಗೊಬ್ಬರ ಉಣಿಸಿ - ಬೀಜಕ್ಕೆ ಉಸಿರ ತುಂಬಿ ಜೀವ ನೀಡುವಲ್ಲಿ ಕ್ಷೇತ್ರದ ಗರಿಮೆ...
ಒಂದು ಇನ್ನೊಂದನ್ನು ಬೆರೆತು ಒಂದಾಗಿ (ಒಂದೇ ಆಗಿ) ಹೊಸದೊಂದು ನಗುವನ್ನು ಸೃಜಿಸಿ ಸಂತತಿಯೊಂದು ಹಸಿರಾಗಿ ಟಿಸಿಲೊಡೆಯಲು ಒಂದನ್ನೊಂದು ಸೇರಬೇಕಾದದ್ದು ಪ್ರಕೃತಿ ನಮಗೆ ನೀಡಿದ ಚಂದದ ಮಿತಿ ಹಾಗೂ ಪ್ರೀತಿ...

ಆ ಪ್ರಕೃತಿಯ ಮಿತಿಗಳ ಮನಸಾರೆ ಒಪ್ಪಿಕೊಂಡು - ನಮ್ಮ ಮನದ ಪ್ರೀತಿಯ ಪ್ರಾಮಾಣಿಕವಾಗಿ ಅಪ್ಪಿಕೊಂಡು - ‘ನೀನು’ ‘ನಾನು’ ಎಂಬ ಅಹಂಗಳಿಂದಾಚೆ ಬಂದು - ‘ನಾವಾ’ಗಿ ಬೆರೆತು ಈ ಪುರುಷ ಪ್ರಧಾನ, ಸ್ತ್ರೀ ಪ್ರಧಾನ, ಸಮಾನತೆ ಎಂಬೆಲ್ಲ ತಿಕ್ಕಾಟ ಬಡಿದಾಟಗಳನು ಮೀರಿ ಬರೀ ಪ್ರೇಮ ಪ್ರಧಾನವಾದ ಸಮಾಜವನ್ನು ನಿರ್ಮಿಸಲಾಗದಾ...
ಹಾಗೆ ಬಯಸೋದು ಅತಿಯಾಸೆಯಾದೀತಾ...
ಮನುಷ್ಯ ಸ್ವಲ್ಪ ಮುಂದುವರಿದ ಪ್ರಾಣಿ ಎಂಬುದು ಸತ್ಯವಾ...

ಆತ ಬೆವರಿಳಿಸಿ ಹಣ ದುಡಿದರೆ - ಆಕೆ ಅನ್ನ ಬೇಯಿಸಿ ಬೆವರಾಗುತ್ತಾಳೆ...
ಅನ್ನ ಹೊಟ್ಟೆಗಿಳಿಯದೇ ಆತ ದುಡಿಯಲಾರ - ಆತನ ಹಣವೇ ಆಕೆಯ ಅನ್ನಕ್ಕೆ ಆಧಾರ...
ಹಾಗಿರುವಾಗ (ಹಣ) ದುಡಿಯುವ ಕೈ ಮತ್ತು ಬಡಿಸುವ ಕೈಗಳ ನಡುವೆ ಗುದ್ದಾಟವೇಕೆ...
ನಾಲ್ಕೂ ಕೈಗಳು ಪ್ರೇಮದಲಿ ಬೆಸೆದುಕೊಂಡರೆ ಕುಟುಂಬವೊಂದು ಒಲವ ಬಂಧದಲ್ಲಿ ಬೆಳಗಲಾರದಾ...
ಅಂಥ ಕುಟುಂಬಗಳು ನಾಲ್ಕು ಸೇರಿದರೆ ಒಂದು ಪುಟ್ಟ ಭವ್ಯ ಪ್ರೇಮ ಪೂರ್ಣ ಸಮಾಜ...
ಅಂಥ ಕುಟುಂಬಗಳ ಸಮುಚ್ಛಯವೇ  ನೂರಾಗಿ, ಸಾವಿರವಾಗಿ....
ಆಸೆ ಅತಿಯಾಯಿತಾ...!!!
*** ಈ ಬರಹ "ಪಂಜು" ಇ-ಪತ್ರಿಕೆಯ  23-09-2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ... ಅಲ್ಲಿ ಓದಲು -http://www.panjumagazine.com/?p=4338

Sunday, September 22, 2013

ಗೊಂಚಲು - ಎಂಬತ್ತು ಮತ್ತೇಳು.....

ಎರಡು ವಿರುದ್ಧ ಭಾವಗಳು.....

ನನ್ನೆಲ್ಲ ಹಗಲುಗನಸುಗಳಲ್ಲಿ - ಮುಸ್ಸಂಜೆಯ ಯಾವುದೋ ಮೌನ ವಿಷಾದದಲ್ಲಿ - ಸರಿ ರಾತ್ರಿ ಜಿನುಗೋ ಬೆವರಲ್ಲಿ - ಮುಂಬೆಳಗಿನ ಸವಿಗನಸಲ್ಲಿ - ಅಲ್ಲೆಲ್ಲ ಮನೆಮಾಡಿ ಸುಮ್ಮನೇ ಬೆಳದಿಂಗಳಂತೆ ನಕ್ಕು ಕಾಡುವ ಗುಳಿ ಕೆನ್ನೆಯ ಚೆಲುವಿನ ಅಮೂರ್ತ ಛಾಯೆಗೆ ನಾನಿಟ್ಟ ಪ್ರೀತಿ ಹೆಸರು "ನನ್ನ ಕಪ್ಪು ಹುಡುಗಿ..."
ಎದುರಾ ಎದುರು ಕಣ್ಣಲ್ಲಿ ಕಣ್ಣಿಡದೆಯೇ ನನ್ನ ಕಣ್ಣಲ್ಲಿ ಕನಸ ತುಂಬಿದವಳು - ಮೈಯಾಗಿ ದಕ್ಕದೆಯೇ ಎದೆಯ ಬೆವರಾಗುವಾಕೆ - ಪಕ್ಕ ಕೂತು ಹೆಗಲುತಬ್ಬದೆಯೇ ನನ್ನ ನಿಟ್ಟುಸಿರುಗಳಿಗೆ ಸಾಂತ್ವನವಾಗಬಲ್ಲವಳು - ಮೂರ್ತವಾಗಿ ಬೆರಳಲಿ ಬೆರಳ ಬೆಸೆದು ಹೆಜ್ಜೆಗೆ ಹೆಜ್ಜೆ ಜೋಡಿಸದೆಯೇ ಬದುಕ ದಾರಿಗೆ ಭರವಸೆಯ ಬೆಳಕನೀಯುವವಳು ನನ್ನ ಒಲವಿನ ಕಲ್ಪನಾ ಛಾಯೆ...
ಬುದ್ಧಿಯ ಮಾತ ಮೀರಿ ಮನಸೆಂಬುದು ಆ ನನ್ನ ಛಾಯೆಗೆ ಸುತ್ತಲಿನ ಯಾವುದೋ ಮೂರ್ತಿಯ ರೂಪವ ಆರೋಪಿಸಿ, ಚಿತ್ರಕ್ಕೆ ಬಣ್ಣ ತುಂಬಿ, ಛಾಯೆಗೆ ಮತ್ತು ಅದರೊಂದಿಗಿನ ನನ್ನ ಬಂಧಕ್ಕೆ ಹೊಸ ಹೆಸರ ನೀಡ ಬಯಸಿದರೆ - ಆ ನಾಮಕರಣ ಶಾಸ್ತ್ರದ ಮುಂಚಿನ ದಿನವೇ ನನ್ನ ಉಸಿರು ನಿಲ್ಲಲಿ...
ಪ್ರೇಮ ಮೂರ್ತರೂಪದಲ್ಲಿ ದಕ್ಕದಿರುವುದರಲ್ಲಿಯೇ `ಈ' ಬದುಕಿಗೆ ಒಳಿತಿದೆ ಅನ್ನಿಸ್ತಿದೆ...

*****

ಕಪ್ಪು ಕಲ್ಯಾಣೀ -
ಕಾಲನ ಕತ್ತಿ ನನ್ನ ಕತ್ತ ಕತ್ತರಿಸುವುದರ ಬಗೆಗೆ ಭಯವಿಲ್ಲ ನನ್ನಲ್ಲಿ... 
ಅದು ಎಲ್ಲದರ ಅಂತಿಮ ಸತ್ಯ... 
ಅದನ್ನ ಒಪ್ಪಿಕೊಂಡಾಗಿದೆ...
ಆದರೂ - 
ನಿನಗೊಂದು ಹಾಯನ್ನೂ ಹೇಳಲಾಗದೇ - ನಿನ್ನದೊಂದು ಹೂನಗೆಯನ್ನೂ ಕಾಣದೇ ಥಟ್ ಅಂತ ಅಳಿದು ಹೋಗಿಬಿಟ್ಟರೆ... 
ಅನುಕ್ಷಣವೂ ಕಾಡುವ ಭಯ ಅದೊಂದೇ...  

Saturday, September 14, 2013

ಗೊಂಚಲು - ಎಂಬತ್ತು + ಆರು.....

ಹೀಗೆಲ್ಲ ಅನ್ನಬಹುದಾ.....

ಪ್ರೀತಿ – ಪ್ರೇಮ – ಒಲವು...
ಮೇಲ್ನೋಟಕ್ಕೆ ಮತ್ತು ಬಳಕೆಯಲ್ಲಿ ಮೂರೂ ಪದಗಳು ಒಂದೇ ಅರ್ಥ ಸೂಚಿಸುತ್ತವೆ... ಆದರೆ ಒಳಗಿಳಿಯುತ್ತ ಹೋದರೆ ಬೇರೆ ಬೇರೆಯಾಗಿಯೇ ದಕ್ಕುತ್ತವೆ...
ಹೌದು ಮೂರೂ ಪದಗಳ ಮೂಲ ಮತ್ತು ಸ್ಥಿರ ಭಾವ ಗೆಳೆತನವೇ – ಆದರೆ ಅಲ್ಲೆಲ್ಲ ದಕ್ಕುವ ಗೆಳೆತನದ ಸ್ತರ ಬೇರೆ ಬೇರೆ...

ಪ್ರೀತಿ – ಪ್ರೀತಿಯೆಂದರೆ ಸರ್ವವ್ಯಾಪೀ ಸ್ನೇಹದ ಮುಗುಳ್ನಗು...ಮಗುವಿಂದ ಹಿಡಿದು ಮುಪ್ಪಾನ ಮುದುಕರವರೆಗೆ ಯಾರೆಂದರೆ ಅವರಲ್ಲಿ - ಇರುವೆಯಿಂದ ಚಂದಿರನವರೆಗೆ ಯಾರೆಂದರೆ ಯಾರೆಡೆಗೂ – ಚಿಗುರು, ಇಬ್ಬನಿ, ಕಾಮನಬಿಲ್ಲು, ಒಂದೊಳ್ಳೆ ಪುಸ್ತಕ ಹೀಗೆ ಯಾವ ಜೀವ, ಯಾವುದೇ ವಸ್ತು ವಿಷಯದ ಮೇಲೂ ಮೂಡಬಹುದಾದ ಮುಗಳ್ನಗೆಯ ಸಂವಹನ... ಪ್ರೀತಿ ಒಟ್ಟೊಟ್ಟಿಗೇ ಸಾವಿರ ಮುಖಗಳಲ್ಲೂ ನಗಬಹುದಾದ, ನೀಡಬಹುದಾದ, ಹಂಚಿದಷ್ಟೂ ಹರಡಿಕೊಳ್ಳುವ ಹಿತವಾದ ಮಿತವಾದ ಸಸ್ನೇಹ ಭಾವ ಬಂಧ...

ಪ್ರೇಮ – ಪ್ರೇಮವೆಂದರೆ ಪೂಜೆ... ಅಲ್ಲಿ ಎದುರಿಗೊಂದು ಸ್ಪಷ್ಟ ಮೂರ್ತಿ ಇದೆ... ಅಲ್ಲಿ ಮಂತ್ರ, ತಂತ್ರ, ಅಲಂಕಾರ, ಅಹಂಕಾರ ಎಲ್ಲವೂ ಮಿಳಿತವೆ... ಪ್ರೇಮ ಅವೆಲ್ಲವನೂ ಬಯಸುತ್ತೆ... ಪ್ರೇಮದಲ್ಲಿ ಬೇಡಿಕೆಯಿದೆ, ಕೂಡಿಕೆಯಿದೆ, ನಂಬಿಕೆಯಿದೆ, ಮೂಢನಂಬಿಕೆಯೂ ಇದೆ... ಪ್ರೇಮ ಅವ್ಯಕ್ತ ಮನಸು ಮತ್ತು ವ್ಯಕ್ತ ದೇಹ ಎರಡೂ ಸಮಾನವಾಗಿ ಸ್ಪಂದಿಸಿ ಕಟ್ಟಿಕೊಳ್ಳೊ ಗೂಡು... ಪಾತ್ರಗಳು ಬದಲಾದಂತೆ ಒಂಚೂರು ಆಚೀಚೆಯೂ ಆದೀತು ಪ್ರೇಮ... ಅದು ಕೇವಲ ಇಬ್ಬರ ನಡುವಿನ, ಒಂದು ಸಮಯದಲ್ಲಿ ಒಬ್ಬರು ಒಬ್ಬರೊಂದಿಗೆ ಮಾತ್ರ ಪ್ರಾಮಾಣಿಕವಾಗಿ ಸವಿಯಬಲ್ಲ ಸವಿಭಾವ ಸಂವಹನ...

ಒಲವು – ಒಲವೆಂದರೆ ಆರಾಧನೆ... ಒಲವೆಂದರೆ ಮೌನ... ಒಲವೆಂದರೆ ಧ್ಯಾನ... ಒಳಗು ಅರಳುವಿಕೆ... ಒಳಗೇ ಹುಟ್ಟಿ, ಒಳಗೇ ಬೆಳೆದು, ನಮ್ಮೊಳಗನೇ ಅಮೂರ್ತಗೊಳಿಸಿ ಬೆಳಗುವ ಸೌಂದರ್ಯ ಲಹರಿ... ಒಲವೆಂದರೆ ಮೂರ್ತಿ, ಕೀರ್ತಿಗಳ ಹಂಗಿಲ್ಲದೆ ಎಲ್ಲ ಹಮ್ಮುಗಳ ತೊಡೆದುಕೊಂಡು ನಮ್ಮೊಡನೆ ನಾವೇ ನಡೆಸುವ ಸಂತೃಪ್ತ ಸಂವಹನ... ಒಲವೆಂದರೆ ಊರ ಹೊರಗಿನ ಯಾರೂ ಸುಳಿಯದ ಗುಡ್ಡದ ತುದಿಯ ಹನುಮನ ಗುಡಿಯ ನೀರವ ಮೌನದ ನಡುವೆ ನಾವೇ ಮೊಳಗಿಸಿದ ಘಂಟೆಯ ಸದ್ದಿನ ಸೊಬಗು...  ಒಲವು ಅಡಿಯಿಟ್ಟರೆ ಒಮ್ಮೆ ಮನಸೆಂಬುದು ಸದಾ ಹಗುರ ಹಗುರ... ಒಲವೆಂದರೆ ನಮ್ಮನೇ ನಮಗೆ ತೋರಿ – ಒಳಗಿನ ಹೊಟ್ಟುಗಳ ಹೊರ ತೂರಿ – ನಮ್ಮಿಂದಲೇ ನಮ್ಮ ಗಟ್ಟಿಯಾಗಿಸಿ, ಹಸಿರ ಹೊತ್ತ ಬೆಟ್ಟವಾಗಿಸುವ ಅವ್ಯಕ್ತ ಅನುಭಾವದನುಸಂಧಾನ...

ಎಲ್ಲರ ಬದುಕಲೂ ಪ್ರೀತಿ ಮುಗಳ್ನಕ್ಕು – ಪ್ರೇಮ ಫಲಿಸಿ – ಒಲವು ಲಾಲೈಸಲಿ... :)

%%%%%

ಮೌನ – ಮೌನವೆಂದರೆ ಮೇಲಿಂದ ಸರಳ ಗೋಚರ ಎನ್ನಿಸುವ ಆದರೆ ಅಷ್ಟು ಸುಲಭಕ್ಕೆ ವಿಶ್ಲೇಷಣೆಗೆ ಸಿಕ್ಕದ, ಆಗಾಗ ಬೇರೆ ಬೇರೆ ರೂಪಗಳಲಿ ಎದುರಾಗಿ ಮಿಡಿವ ಭಾವ... ಚಿರ ಮೌನಕೆ ಜಾರುವ ಮೊದಲು ಸಂಚಾರಿಯಾಗಿ ದಕ್ಕಿದಷ್ಟು ಸುಲಭಕ್ಕೆ ಸ್ಥಿರ ಜೀವನಾಡಿಯಾಗಿ ದಕ್ಕದ ಮನದಾಳದ ಭಾವ... 

ನಿಜದ ಮೌನವೆಂದರೆ ಮಾತಾಡದೇ ಇರುವುದಲ್ಲ... ಮೌನವೆಂದರೆ ಒಳಗಣ ಮಾತು - ಅಂತರಂಗದ ಮೃದಂಗ ನಾದ... ಮೌನವೆಂದರೆ ಗೋಡೆಯಲ್ಲ... ಮೌನ - ಮಾತು ಮಾತಿನ ನಡುವಿನ ಖಾಲಿ... ಖಾಲಿಯೆಂದರೆ ಅದು ಖಾಲಿಯಲ್ಲ – ಕಳೆದುಕೊಳ್ಳುತ್ತಲೇ ತುಂಬಿಕೊಳ್ಳುವ ಪ್ರಕ್ರಿಯೆ – ಹೊಸ ಉಬ್ಬರಕೆ ಮುನ್ನುಡಿ... ಮೌನವೆಂದರೆ ಬೇಲಿಯಲ್ಲ... ಬಯಲು – ಎಲ್ಲವನೂ ಒಳಗೊಳ್ಳುವ ಬಯಲು... ಮಗುವ ನಗೆಯ ಮೌನದಿಂದ ಹಿಡಿದು ನಗುವೊಂದು ಚಿರಮೌನಕೆ ಜಾರುವವರೆಗಿನ ನಡುವಿನ ಈ ಬದುಕು ಕೂಡ ಒಂದು ಸುದೀರ್ಘ ಮೌನವೇ... 

Friday, September 13, 2013

ಗೊಂಚಲು - ಎಂಬತ್ತೈದು.....

ಹೀಗೆಲ್ಲ ಅನ್ನಿಸಿ.....

ಅಲೆಗಳು – ನಲಿವಿನಲೆಗಳು, ಒಲವಿನಲೆಗಳು, ಏನೋ ಅರಿಯದ ಒಳಗುದಿಯ ನೋವಿನಲೆಗಳು...
ಈ ಅಲೆಗಳಿಗೆಲ್ಲ ನಾನೆಂದರೆ ಏನೋ ವಿನಾಕಾರಣದ ಪ್ರೀತಿ – ಆ ಪ್ರೀತಿಯಿಂದಲೇ ಅಲೆದು ಬರುತ್ತವೆ ನನ್ನೆಡೆಗೆ...
ಆಗೊಂದು ಖುಷಿಯ ಅಲೆ ಕುಪ್ಪಳಿಸಿ ಬಂದು ನಗೆಯ ಸುರಿದು ಹೋದರೆ – ಹೀಗೊಂದು ಅರಿವಾಗದ ಗೊಂದಲಗಳ, ಹಿಂಡುವ ಭಾವಗಳ ಅವ್ಯಕ್ತ ನೋವಿನ ಅಲೆ ಮನಸ ತಾಕುತ್ತೆ...
ಗೊತ್ತು ನನಗೆ ನನ್ನಿಂದ ನಿರೀಕ್ಷೆಗಳಿಲ್ಲ ಅವಕೆ...
ಆದರೆ ನನ್ನ ಒಂದೇ ಒಂದು ಪ್ರೀತಿ ಮಾತು, ಆತ್ಮೀಯವಾದ ಮುಂಗುರುಳ ನೇವರಿಕೆ ಅವುಗಳ ಖುಷಿಯ ಇಮ್ಮಡಿಸಿ, ನೋವ  ಅಬ್ಬರವ ಚೂರೇ ಆದರೂ ಇಳಿಸುತ್ತದೆ – ಹೊಸ ಹುರುಪು ತುಂಬುತ್ತೆ...
ಆದರೆ ನಾನೋ ಅಷ್ಟನೂ ಮಾಡಲಾರದ – ನಗುವಿಗೊಂದು ಪ್ರತಿ ನಗು, ಅಳುವಿಗೊಂದು ಸಾಂತ್ವನದ ಸವಿ ನುಡಿಯನೂ ಕೊಡಲಾರದ - ಆತ್ಮಸಖನೆನ್ನಿಸಿಕೊಂಡೂ ಆತ್ಮಬಲ ತುಂಬಲಾರದ ಅಸಹಾಯ, ನಿಶ್ಚಲ, ಮೂಕ ಮರಳ ದಂಡೆ...
ಹಾಗಿದ್ದೂ ಈ ಅಲೆಗಳಿಗೆ ನಾನೆಂದರೆ ಅದೇಕಷ್ಟು ಆತ್ಮೀಯತೆಯೋ - ಎಲ್ಲ ಭಾವಗಳ ನಿರ್ಮಲ ಮನಸಿಂದ ನನ್ನೆದುರು ಹರವಿ ಹಿಂತಿರುಗುವಾಗ – ನಾನೇನನೂ ಕೊಡದೆಯೂ ಎಲ್ಲವನೂ ನನ್ನಿಂದಲೇ ಪಡೆದವರಂತೆ ಕಿವಿಯಲ್ಲೇ ಉಸುರುತ್ತಾರೆ ಮುದ್ದು  ಗೆಳೆಯಾ ನಾನೀಗ ಹಗುರ ಹಗುರ...
ಆಗೆಲ್ಲ ನನ್ನ ನಿರ್ಭಾವುಕ ಮನಸ್ಥಿತಿಯ ಬಗೆಗೆ ನನಗೇ ನನ್ನ ಮೇಲೆ ಮರುಕವಾಗುತ್ತದೆ...
ಆದರೂ ಒಳಗಿನ ಮಾತೊಂದ ಹೇಳಲಾ – ಆ ಪರಿ ನಿರ್ಭಾವುಕನಾದ ನನಗೂ; ನನ್ನ ಇರುವಿಕೆಗೆ ಅರ್ಥ ತುಂಬೋ ಈ ಅಲೆಗಳೆಂದರೆ ಆತ್ಮಸಾಂಗತ್ಯದ ಬಂಧವೇ – ಅವುಗಳೆಡೆಗೆ ಒಂದಿಷ್ಟು ಕಾಳಜಿಯಿದೆ – ಅವುಗಳ ಒಳಿತನ್ನು ಬಯಸಿ ಹಾರೈಸೋ ತುಡಿತವಿದೆ – ಆದರೆ ಅದನ್ನ ವ್ಯಕ್ತಪಡಿಸುವಲ್ಲಿ ಅತಿವಾಸ್ತವಿಕತೆಯ ರೂಢಿಸಿಕೊಂಡ ಮನಸ್ಥಿತಿಯ ಒದ್ದಾಟವಿದೆ... ಹಾಗಂತ ಹೇಳಿದರೆ ನಗಬಾರದು ನೀವು...!!!

*****

ಅವಳ ತಪ್ಪು ಒಪ್ಪುಗಳ ಅವಳಿಗರುಹುವಾಗ ಮೊದಲಿಗನಾಗಿ - ಅವಳದಲ್ಲದ ತಪ್ಪಿಗೆ ಜಗವೆಲ್ಲ ಅವಳ ದೂಷಿಸುವಾಗ ಅವಳಾತ್ಮ ಚೈತನ್ಯವಾಗಿ ನನ್ನ ನಗು ಅವಳ ಜತೆಗಿರಬೇಕು...
ಅವಳ ಒಡಲು ನೊಂದು ಅಳುವುಕ್ಕಿ ಬಂದು ಕಣ್ತುಂಬಿದ ಹನಿ ಕೆನ್ನೆ ತಾಕುವ ಮೊದಲೇ ನನ್ನ ಹೆಗಲು ಅವಳಿಗಾಸರೆಯಾಗಬೇಕು...
ನಾನಿಲ್ಲದೂರಲ್ಲೂ - ನಾನು ಬರೀ ನೆನಪು ಮಾತ್ರವೇ ಆದಾಗಲೂ ಅವಳು ನಗುತಿರಬೇಕು...
ಅವಳೊಂದಿಗೆ ನಾನು ಹಾಗೆ ಬಂಧವ ಬೆಸೆದಿರಬೇಕು...
ಆತ್ಮ ಸಾಂಗತ್ಯವೆಂದರೂ - ಒಲವಿನಾರಾಧನೆ ಎಂದರೂ ಅದೇ ಅಂದುಕೊಳ್ತೇನೆ ನಾನು...
ಆದರೆ ಅಂಥ ಸಾಂಗತ್ಯವ ಸಾಧಿಸಲಾರದ ನನ್ನ ಮನಸ್ಥಿತಿಯ ದೌರ್ಬಲ್ಯವನೂ ಒಪ್ಪಿಕೊಳ್ಳಲೇಬೇಕು ನಾನು...

*****

ಉಳಿಸಿಕೊಳ್ಳಬೇಕಿದ್ದ ಪ್ರೀತಿ - ಕಳೆದುಕೊಳ್ಳಬೇಕಿದ್ದ ಒಣ ಪ್ರತಿಷ್ಠೆಯಿಂದಾಗಿ ಸತ್ತು ಹೋದಾಗಲೂ ಎಂದಿನಂತೆ ನಗಬಲ್ಲ ನನ್ನ ಸ್ವಭಾವಕ್ಕೆ ಏನಂಥ ಹೆಸರಿಡಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, September 4, 2013

ಗೊಂಚಲು - ಎಂಬತ್ನಾಕು.....

ಒಳಗಿನಳಲು.....


ಕೆಲ ಮಧುರ ಭಾವಗಳ ಒಳಗೆಳೆದುಕೊಳ್ಳಲಾಗದ ವಾಸ್ತವದ ಅಸಹಾಯಕತೆ...
ಸಂಜೆ ನೆರಳಂತೆ ಬೆಳೆದು ಕಾಡುವ ಮಧುರ ಯಾತನೆಯ ಭಾವಗಳಿಂದ ದೂರ ಓಡಿ ಓಡಿ ಆವರಿಸಿದ ನಿಶ್ಯಕ್ತಿ... 
ಬೇಡವೆಂದು ಹೊರನೂಕಿ ಒಳಸೇರಿಕೊಳ್ಳಲೂ, ಬೇಕೆಂದು ಸೆಳೆದು ಒಳಗೆ ಅಡಗಿಸಿಕೊಳ್ಳಲೂ ಮನದ ಮನೆಗೆ ಬಾಗಿಲೇ ಇಲ್ಲ...
ನನ್ನ ತಪ್ಪೆಷ್ಟು ಕಾಲನ ಕೈವಾಡವೆಷ್ಟು ಅರ್ಥವಾಗದೇ ಎಲ್ಲ ಗೋಜಲು ಗೋಜಲು...
ಅಲ್ಲೆಲ್ಲೋ ಮಳೆಯಾದ ಸೂಚನೆಗೆ ನನ್ನೆದೆನೆಲದಲ್ಲಿ ಸಣ್ಣ ಕಂಪನ...
ಆಸೆ – ನನ್ನೆದೆ ನೆಲವೂ ಅಂಥದೊಂದು ಮಳೆಯಲ್ಲಿ ಒಂದಿಷ್ಟೇ ಇಷ್ಟು ನೆನೆವಂತಿದ್ದಿದ್ದರೆ... 
ಅಲ್ಲೆಲ್ಲ ಸುರಿವ ಸೋನೆ ಇಲ್ಲಿಯೂ ಸುರಿದು ಒಂದೇ ಒಂದು ಹನಿಯ ಮೇಲಾದರೂ ಕೇವಲ ನನ್ನ ಹೆಸರು ಬರೆದಿದ್ದಿದ್ದರೆ...
ಹಾಗೆಂದುಕೊಳ್ಳುತಿರುವಾಗಲೇ ದಾರಿ ತಪ್ಪಿ ಇತ್ತ ಬಂದ ಒಂದ್ಯಾವುದೋ ಮಳೆ ಮೋಡ ಕೂಡ ಈ ಮರಳು ಕಾಡಿನ ಒರಟು ಬಿಸಿಗೆ ಹೆದರಿ ಹನಿವ ಮೊದಲೇ ದೂರ ಸರಿಯುತ್ತೆ...
ಖರ್ಜೂರ ಬೆಳೆವಷ್ಟಾದರೂ ಮೆದುವಾಗಿಸಬೇಕೆಂದುಕೊಳ್ಳುತ್ತೇನೆ ನನ್ನ ನಾನು...
ಆದರೆ ಅದಕೂ ಧುತ್ತನೆ ಕಾಡುವ ಮರಳ ಸುಂಟರಗಾಳಿಯ ಭಯ...
ಕಾಲನೆಂಬ ಸುಂಟರಗಾಳಿಗೆ ಸಿಕ್ಕ ಬದುಕೆಂಬ ಮರಳುಗಾಡಲ್ಲಿ ನಾಳೆಗಳಿಗೆ ಕಸುವ ತುಂಬೋ ಒಲವ ಕನಸಿನ ಮಳೆ ಸುರೀದೀತು ಹೇಗೆ...
ಹುಟ್ಟು ಬಂಜರಾದ ಎದೆನೆಲದಲ್ಲಿ ಒಲವಧಾರೆಗೇನು ಕೆಲಸ...
ಆದರೂ ಬಂಜರು ಬದುಕಿಗೇ ಹಸಿರಿನಾಸೆ ಅಧಿಕವೇನೋ...:(


***


ಆಯೀ -

“ಬದುಕಿರುವುದಕ್ಕೆ ಒಂದು ಉದ್ದೇಶ ಬೇಕು; ಕೇವಲ ನನ್ನದು ಎಂಬ ಜೀವ – ಭಾವವೊಂದು ಜೊತೆಗಿರಬೇಕು; ಇಲ್ಲದಿರೆ ಒಂದು ಹಂತದಲ್ಲಿ ಎಲ್ಲ ಖಾಲಿ ಖಾಲಿ ಅನ್ನಿಸಿಬಿಡುತ್ತೆ..” ಹಾಗಂತ ಎಲ್ಲೋ ಓದಿದ ನೆನಪು... ಆ ಮಾತು ಸತ್ಯ ಅನ್ನಿಸಿದಾಗಲೆಲ್ಲ ನಾಳೆಗಳ ಬಗೆಗೆ ದಿಗಿಲಾಗುತ್ತೆ...
ಕಾರಣ – ಕೇವಲ ನಂದು, ನಂಗೆ ಮಾತ್ರ ಸ್ವಂತ ಅನ್ನುವಂತೆ ನಾವಿರೋದೇ ಇಬ್ಬರು... 
ಯಾರೇ ಒಬ್ಬರು ಕಳಚಿಕೊಂಡರೂ ಉಳಿದ ಒಬ್ಬರ ಬದುಕು ನಿರುದ್ದಿಶ್ಯವೇ...
ನೀನು ನನ್ನ ಉಸಿರ ನುಡಿ – ನಾ ನಿನ್ನ ಕರುಳ ಕುಡಿ...
ನಿನಗೆ ಅವನು ಇದ್ದೂ ಇಲ್ಲ – ನಂಗಾಗಿ ಅವಳು ಬರುವ ಸಾಧ್ಯತೆಯೇ ಇಲ್ಲ...
ನಾಳೆಗಳ್ಯಾಕೋ ಸ್ಮಶಾನದ ನಡುವಿನ ಒಂಟಿತನದಂತೆ ಕಾಡುತ್ತವೆ ಆಗಾಗ...
ಆಗೆಲ್ಲ ಸಮಾಧಾನಿಸಿಕೊಳ್ಳುತ್ತೇನೆ ನನ್ನ ನಾನೇ -
ಬಿಡು, ಇಂದಿನದೇ ಸಾಕಷ್ಟಿರುವಾಗ ನಿನ್ನೆ ನಾಳೆಗಳೇಕೆ ಕಾಡಬೇಕು ಹೇಳು...
ನಾಳೆಯ ಇಂದೇ ಕಂಡವರಿಲ್ಲ – ನಿನ್ನೆಯ ತಿರುಗಿ ಉಂಡವರಿಲ್ಲ ಎಂದುಕೊಂಡು ಇಂದನ್ನು ಆದಷ್ಟು ಮಟ್ಟಿಗೆ ನಗುತ ತಳ್ಳಿದರಾಯ್ತು... 
ಬದುಕೆಂದರೆ ಅದೇ ತಾನೆ...
ಬಲ್ಲೆ ನಾನು ನೀನೂ ಹೀಗಂದುಕೊಂಡೇ ದಿನವ ದೂಡ್ತೀಯಾ ಅಂತ...

Tuesday, September 3, 2013

ಗೊಂಚಲು - ಎಂಬತ್ತು ಮತ್ತು ಮೂರು.....

ಮತ್ತೊಂದಿಷ್ಟು ತುಂಡು ಭಾವಗಳು.....


ಪಾಪಪ್ರಜ್ಞೆಯ ನಿಟ್ಟುಸಿರು: 
ಗೆಳೆಯಾ –
ನೋವಲ್ಲೂ - ನಗುವಲ್ಲೂ ಮೊದಲು ನೆನಪಾಗೋದು ನೀನು; ಅದಕೆಂದೇ ನನ್ನ ನೋವುಗಳ ನಿನ್ನಲ್ಲಿ ಕೊನೇಲಿ ಹಂಚಿಕೊಳ್ತೇನೆ; ಹೆಚ್ಚಿನ ಸಲ ನನ್ನೊಳಗೇ ಬಚ್ಚಿಟ್ಟುಕೊಳ್ತೇನೆ...
ಕಾರಣ ಇಷ್ಟೇ –
ನನ್ನ ನೋವುಗಳಿಂದ ನೀನು ನೋಯಬಾರದು...
ಹಾಗಂದುಕೊಂಡು ನೋವ ನುಂಗಿ ನಗುವ ತೋರುವ ಮತ್ತು ಅದೇ ಹೊತ್ತಿಗೆ ನಂದ್ಯಾವುದೋ ಮಾಮೂಲಿ ನೋವಿಗೆ ಕಣ್ಣೀರಾಗಿ ಸಾಂತ್ವನದ ಮದ್ದಾಗುವ ನಿನ್ನ ಮನದ ಹಿರಿತನದೆದುರು ಗೆಳತೀ ನಾನೆಷ್ಟು ಕುಬ್ಜ ಅಲ್ಲವಾ...:(

ಚಂದ್ರ - ತಾರೆ - ನೀಲಿ:
ತುಂತುರಾಗಿ ಸುರಿದು ಖಾಲಿಯಾಗಿ - ನಿಚ್ಚಳ ನೀಲಿಯಾದ ಬಾನ ಬಯಲಲ್ಲಿ ಚಂದಮ ತಾ ನಗುತಿರುವ ತಾರೆಗಳೊಡಗೂಡಿ - ಎನ್ನೀ ಮನವ ಮರಳು ಮಾಡಿ...
ನಿನ್ನೊಲವ ನೆನಪ ಮೋಡಿ ಜತೆಗೂಡಿದ ಈ ಇರುಳಿಗೆಂಥ ಸೊಬಗು...

ನಗು:

ಚಂದಿರ ಎಂದಿಗಿಂತ ಜಾಸ್ತಿ ನಗ್ತಾ ಇದಾನೆ...
ನನ್ನಹಂಕಾರದ ಕೋಟೆ ಮುರಿದದ್ದು ಕಂಡು ಖುಷಿಯಾಗ್ತಿದೆಯೇನೋ ಪಾಪಿಗೆ...
ನಾನೂನು ನಗುತಿದ್ದೇನೆ...
ನಗುವುದ ಬಿಟ್ಟು ಬೇರೇನೂ ಮಾಡಲಾಗದ್ದಕ್ಕೆ...

ರಾತ್ರಿ ಹಾಡು:

ಕಣ್ರೆಪ್ಪೆ ಸೆಳೆಯುತಿದೆ ಕತ್ತಲೆಡೆಗೆ ಹರುಷದಲಿ...
ಸಣ್ಣಗೆ ಗುನುಗಿದಂತಿದೆ ಅಲ್ಲಿ - ನಿದಿರಮ್ಮನ ಊರಲ್ಲಿ
ಹೊಸ ಕನಸಿನ ಸುವ್ವಾಲಿ...

ಕೃಷ್ಣ ಸನ್ನಿಧಿ:

ಹಿಡಿಯಷ್ಟು ಸಿಕ್ಕಿ - ಬೆಟ್ಟದಷ್ಟು ಕಾಡಿ...
ಇಷ್ಟ ಕಷ್ಟಗಳಲೆಲ್ಲ ಜೊತೆಯಾಗಿ
ಗುಟ್ಟಾಗಿ ಮನದಲ್ಲೇ ಗಟ್ಟಿಯಾಗುವ ಭಾವ ಕೃಷ್ಣ...
ಸದಾ ಕೊಳಲಿನ ಉಯಿಲಂತೆ - ಬೇಕೆಂದಾಗ ಪಾಂಚಜನ್ಯದ ಹುಯಿಲಂತೆ ಜತೆಗಿರಲು ಎಲ್ಲರಿಗೂ ಕೃಷ್ಣನಂಥಹ ಗೆಳೆಯನೊಬ್ಬ ದಕ್ಕಲಿ...
ಬಾಹ್ಯಕ್ಕೆ ದಕ್ಕದಿರೆ ಅಂತರಂಗಕ್ಕಾದರೂ...

ಅರಿವಿನಲೆ:

ಬರಹಗಾರರ ಪ್ರೀತಿಸುವುದರಿಂದ ಆಚೆಬಂದು ಕೇವಲ ಬರಹಗಳ ಮಾತ್ರ ಆರಾಧಿಸುವುದ ಕಲಿತಂದಿನಿಂದ ನನ್ನೊಳಗು ಇನ್ನಷ್ಟು ತೆರೆದುಕೊಂಡು; ನನ್ನ ಅರಿವಿನ ಪರಿಧಿ ಇಷ್ಟಿಷ್ಟಾಗಿ ಹಿಗ್ಗುತ್ತಿರುವುದರ ಅರಿವಾಗಿ ಮನಸಿಗೀಗೀಗ ಅರಳುವಿಕೆಯ ಹಿಗ್ಗು...
ಆ ಹಿಗ್ಗಿನಿಂದ ನನ್ನ ಮೇಲೆ ನನಗೇ ಇನ್ನಷ್ಟು ಪ್ರೀತಿಯಾಗುತ್ತಿದೆ...:)


ವಿದ್ಯೆಯ ಕೊಲೆ – ಶಿಕ್ಷಣವೆಂಬ ವ್ಯಾಪಾರ:
ಸಂದಿಗೊಂದಿಗಳಲೊಂದೊಂದು ರಂಗುರಂಗಿನ ಬಣ್ಣಗಳಲಿ ನಳನಳಿಸೋ, ಹೆಸರಲೇ ಹಣದ ವಾಸನೆ ಹೊಂದಿರೋ, ಅಂತರರಾಷ್ಟ್ರೀಯ ಮುದ್ರೆ ಹೊತ್ತಿರೋ ಭವ್ಯ ಪಂಜರಗಳಿವೆ ಇಲ್ಲಿ...
ಅಲ್ಲಿ ಆ ಪಂಜರಗಳ ಬಾಗಿಲಲ್ಲಿ ಈ ನೆಲದ ಗಂಧವಿಲ್ಲದ ಭಾಷೆಯ ಠುಸ್ಸು ಪುಸ್ಸು ಮಾತುಗಳಿಂದ, ಜೀವಸೆಲೆ ಇಲ್ಲದ – ಭಾವಸೆಲೆ ಉಕ್ಕಿಸದ ಹೆಪ್ಪಿಡೆಂಟ್ ನಗುವಿಂದ, ವಿನಾಕಾರಣ ಬಾಗಿ ಬಳುಕಿ ವಿಧ ವಿಧದ ಪ್ರಾಣಿಗಳ ಸೆಳೆಯುವ (ಅಲ್ಲಲ್ಲ ಆ ಪ್ರಾಣಿಗಳ ಖಿಸೆಯೊಳಗಣ ನೋಟುಗಳ ಸೆಳೆಯುವ) ರಿಂಗ್ ಮಾಸ್ಟರ್‌ಗಳಿದ್ದಾರೆ...
ಅವರ ಕೈಯಲ್ಲಿ ಅನುಶಾಸನದ ಹಂಗಿಲ್ಲದ ಶಿಸ್ತೆಂಬ ಹೆಸರಿನ ಬಾರುಕೋಲೂ ಇದೆ...
ಜೀವಿಸೋ ಆನಂದವ ಮರೆತು ಸುಖದ ಅಮಲಲ್ಲಿ ಕೊಳೆತ ಭಾವಗಳಲ್ಲಿ ಯಂತ್ರಗಳೆದುರು ಯಂತ್ರಗಳಾಗಿ ದುಡಿ ದುಡಿದು ಹೊಟ್ಟೆಯಷ್ಟೇ ಜೇಬನ್ನೂ ಉಬ್ಬಿಸಿಕೊಂಡು ಬರೋ ಮೂವತ್ತಕ್ಕೇ ಮುದುಕರಾದ ಅಪ್ಪಂದಿರು...
ಸೌಂದರ್ಯವೆಂದರೆ ಲಿಪ್‌ಸ್ಟಿಕ್ಕು, ಪೌಡರ‍್ರು ಮತ್ತು ತುಂಡುಬಟ್ಟೆ ಅಂದುಕೊಂಡಿರೋ; ಬೆತ್ತಲೆ ಬಂದಿದ್ದರೇ ಇನ್ನೂ ಸಹ್ಯವಾಗಿರುತ್ತಿತ್ತೇನೋ ಅನ್ನಿಸುವಂತೆ ಸಿಂಗರಿಸಿಕೊಂಡು ಬರೋ ದಸರಾ ಮೆರವಣಿಗೆಯ ಆನೆಗಳಂಥ ಅಮ್ಮಂದಿರು (ಅಲ್ಲಲ್ಲಿ ಬೋರೇಗೌಡನ ಬಡ ಎತ್ತಿನಂಥ ಝೀರೋ ಸೈಜುಗಳೂ ಇರುತ್ತವೆ)...
ನಿದ್ದೆಗಣ್ಣಲ್ಲಿ ಕಣ್ಣಿರಿಡುವ ತಮ್ಮ ಹಸುಕಂದಗಳನು ಅಂಥ ಆ ಸ್ಕೂಲುಗಳೆಂಬ ಪಂಜರಕ್ಕೆ ಎಳೆತಂದು ಗೇಟಿನೊಳಗೆ ನೂಕಿ, ಒಂದು ದಿನದ ಕಷ್ಟ ಕಳೆಯಿತೆಂಬ ನಿಟ್ಟುಸಿರೊಂದಿಗೆ ತಮ್ಮ ಮಹಲುಗಳಿಗೆ (ಅದೂ ಮತ್ತೊಂದು ಪಂಜರದಂತೆಯೇ ಇರುತ್ತೆ ಇಲ್ಲಿ)  ಹಿಂತಿರುಗುವುದ ನೋಡಿದಾಗಲೆಲ್ಲ ಶಿಕ್ಷಣದ ಹೆಸರಲ್ಲಿ ನಾವು ಎಂಥ ನಾಳೆಗಳ ಸೃಷ್ಟಿಸುತ್ತಿದ್ದೇವಪ್ಪಾ ಅಂತ ದಿಗಿಲಾಗುತ್ತದೆ...

** ಇಷ್ಟೆಲ್ಲ ಹೇಳಿದ ನಾನೂ ಇಂಥದೇ ಒಂದು ಪಂಜರದ ಕೂಲಿಯಾಳುಗಳಲ್ಲಿ ಒಬ್ಬ ಎಂಬುದು ನಿಮಗೆ ಹೇಳಲೇಬೇಕಾದ ಸತ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)