Thursday, March 28, 2013

ಗೊಂಚಲು - ಅರವತ್ತು ಮತ್ತು ಏಳು.....


ನಾಕು ಪ್ರಶ್ನೆ - ಹಗುರಾಗೋ ಮಾತು...

ನೀನೇನೋ ಎಂಬುದು ಅವಳ ಪ್ರಶ್ನೆ...

ನನ್ನ ಮನದಂತೆ ನಾನು...ಒಂದಷ್ಟು 'ನಾನು'ಗಳ ಪ್ರೀತಿಸುತ್ತಾ - ಪ್ರೀತಿಯೆದುರು ಇಷ್ಟಿಷ್ಟೇ 'ನಾನೆಂಬುದ' ಕಳಚಿಕೊಳ್ಳುತ್ತಾ - ಪೂರ್ಣತ್ವವ ಬಯಸದೇ ಅಪೂರ್ಣತೆಯಲ್ಲೇ ಸೊಬಗಿದೆಯೆಂದು ನಂಬುತ್ತಾ - ಕ್ಷಣ ಕ್ಷಣಕೂ ಅದಲು ಬದಲಾಗುವ ನನ್ನೊಳಗಿನ ನನ್ನದೇ ಭಾವಗಳಿಗೆ ಬೆಚ್ಚಿಬೀಳುತ್ತಾ - ಪರೀಕ್ಷೆ ನಡೆಸಿ ನಂತರ ಪಾಠ ಹೇಳೋ ಅನುಭವದ ನೆಲೆಯ ಬದುಕಿನ ಕಲಿಕಾ ವಿಧಾನದೆಡೆಗೆ ಒಮ್ಮಲೇ ಬೆರಗು ಮತ್ತು ಆತಂಕದಿಂದ ನೋಡುತ್ತಾ - ಬದುಕು ಹೇಳುವ ಪಾಠಗಳ ಅರ್ಥೈಸಿಕೊಳ್ಳಲಾಗದೇ - ಬದುಕಿಗೆ ಬೆನ್ನು ತಿರುಗಿಸಲೂ ಇಷ್ಟವಾಗದೇ - ಈ ಎಲ್ಲ ತೊಳಲಾಟಗಳು - ಬುದ್ಧಿ ಹುಟ್ಟು ಹಾಕೋ ದ್ವಂದ್ವಗಳು - ಅವೆಲ್ಲವುಗಳ ನಡುವೆ ಮನದ ಸನ್ನಿಧಿಯಲ್ಲಿ ಮೂಡುವ ಮಧುರ ಭಾವಗಳು - ಇವುಗಳನೆಲ್ಲ ಒಳಗೊಂಡು ನಗುತಿರುವ ಬದುಕೆಂಬ ಪಾಠ ಶಾಲೆಯ ಅತಿದಡ್ಡ ವಿದ್ಯಾರ್ಥಿ ನಾನು...



ನಿನ್ನ ಬರಹ ಎಂದರೇನೋ ಎಂಬುದು ಇನ್ನೊಂದು ಪ್ರಶ್ನೆ...

ನನ್ನೊಳಗಣ ಭಾವ ಮತ್ತು ನನ್ನ ಬದುಕು ಅದು ನನ್ನ ಬರಹ...
ಮನದ ಭಾವ ಶಬ್ದವಾಗಿ ಆಚೆ ಬಂದಾಗಲೂ ಅದು ನನ್ನದೇ ಭಾವ ಎಂದು ನನಗೆ ಪ್ರಾಮಾಣಿಕವಾಗಿ ಅನ್ನಿಸಿದ ಕ್ಷಣ ನಾನು ಸಂಭ್ರಮಿಸುತ್ತೇನೆ.
ಪ್ರತೀ ಕ್ಷಣವ ಹಾಗೇ ಬದುಕಬೇಕೆಂದು ಪ್ರಯತ್ನಿಸುತ್ತೇನೆ.
ಒಮ್ಮೊಮ್ಮೆ ಸೋಲುತ್ತೇನೆ...:(
ನಾ ಬರೆದ ಯಾವುದೇ ಬರಹ ಬರೆದಾದ ಆ ಕ್ಷಣ ನನ್ನಲ್ಲಿ ಒಂದು ಸಂತೃಪ್ತ ಭಾವ ಅಥವಾ ಏನನ್ನೋ ಇಳುಕಿ ಹಗುರಾದ ಭಾವವನ್ನು ಮೂಡಿಸುತ್ತಲ್ಲ ಆ ಖುಷಿಯೇ ಅಂತಿಮ...ಆ ಬರಹಾನ ಓದಿದವರೂ ಇಷ್ಟಪಟ್ಟರೆ ಅದು ಬೋನಸ್ ಖುಷಿ...ಬೋನಸ್ ಗಾಗಿಯೇ ಬರೆಯುವುದಿನ್ನೂ ರೂಢಿಯಾಗಿಲ್ಲ...(ಬೋನಸ್ ಗಾಗಿ ಬರೆಯ ಯತ್ನಿಸಿದಾಗ ನಂಗೆ ಪೂರ್ತಿ ಖುಷಿ ದಕ್ಕಿಲ್ಲ) ಒಮ್ಮೊಮ್ಮೆ ಇನ್ಯಾರದೋ ಭಾವ ಅದು ನನ್ನದೂ ಭಾವವೇ ಅಂತನ್ನಿಸಿದಾಗ ಅದಕ್ಕೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿಯೇನು...ನನ್ನ ಬರಹ ಸಹಜವಾಗಿಯೇ ನನ್ನನ್ನು ಇನ್ನಷ್ಟು ವಿಸ್ತಾರವಾಗಿಸುತ್ತಾ, ಬೆಳೆಸುತ್ತಾ, ನನ್ನೊಳಗನ್ನು ಬೆಳಗಿಸುತ್ತಾ ಸಾಗುತ್ತದೆಂಬುದು ನನ್ನ ಪ್ರಾಮಾಣಿಕ ನಂಬಿಕೆ...ಬೆಳವಣಿಗೆ ಹೊರತೋರದೆ ಇದ್ದೀತು ಆದರೆ ನನ್ನೊಳಗದು ಇದ್ದೇ ಇದ್ದೀತು...
ನಿಜ ಒಪ್ಪುತ್ತೇನೆ ತೀರ ನಮ್ಮ ಹತ್ತಿರದವರು, ಪ್ರಜ್ಞಾವಂತರೂ ಆಗಿರುವವರು ಒಂದು ಮಾತು ಹೇಳಿದಾಗ ನಾವು ನಮ್ಮನ್ನು ವಿಮರ್ಶಿಸಿಕೊಳ್ಳಬೇಕಾದ್ದು ಅಗತ್ಯವೇ...ಆದರೂ ಯಾವುದೇ ಬರಹಗಾರನ ಎಲ್ಲಾ ಬರಹಗಳೂ ಅತ್ಯುತ್ತಮವಾಗಿಯೇ ಇರಲು ಮತ್ತು ಎಲ್ಲರಿಗೂ ಖುಷಿಯ ನೀಡಲು ಸಾಧ್ಯವಿಲ್ಲ ಎಂಬುದನ್ನೂ ಮರೆಯಲಾಗದಲ್ಲವಾ...
ನಮ್ಮ ಯಾವುದೋ ಬರಹದ ಯಾವುದೋ ನಾಕು ಸಾಲು ಯಾರೋ ಓದುಗನಿಗೆ ಒಂದು ಹೊಸ ಯೋಚನೆ, ಹೊಸ ಖುಷಿ, ಈ ಭಾವ ತನ್ನದೆನ್ನುವಂಥ ಭಾವವನ್ನು ಮೂಡಿಸಿದರೆ ಅಲ್ಲಿಗೆ ಬರಹಗಾರನ ಬರಹಕ್ಕೆ ಸಾರ್ಥಕ್ಯ ದಕ್ಕಿದಂತೆಯೇ ಎಂಬುದು ನನ್ನ ಅನಿಸಿಕೆ...
ನಮ್ಮ ಬರಹ ಅಂದರೆ ಅದು ನಮ್ಮ ಭಾವ...ಅದು ಓದುಗರ ಭಾವವೂ ಆಗಿ ನಲಿದರೆ ಆಗ ಬರಹಗಾರನ ಖುಷಿಯ ವಿಸ್ತಾರ...ಆ ಖುಷಿಯ ವಿಸ್ತಾರಕ್ಕಾಗಿ ಶ್ರಮವಹಿಸುವುದಾದರೆ ಪ್ರಜ್ಞಾವಂತ ಓದುಗರ ಅಭಿಪ್ರಾಯಗಳನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ...ಅದು ನಮ್ಮ ಬರಹದ ನಮ್ಮದೇ ಶೈಲಿಗೆ, ನಮ್ಮೊಳಗಿನ ಮೂಲ ಸೆಲೆಗೆ ಧಕ್ಕೆಯಾಗದಿದ್ದಲ್ಲಿ ಮಾತ್ರ...


ಬಯಲಲ್ಲಿ ಪೂರ್ತಿ ಬೆತ್ತಲಾಗಿ ಹೋಗ್ತೀಯಾ ಎಂಬುದು ಆತಂಕಭರಿತ ಪ್ರಶ್ನೆ...

ಅರೆಬರೆಯಾಗಿ ಕಾಡುವುದಕಿಂತ ಪೂರ್ತಿ ಕಳಚಿ ಹಗುರಾಗುವುದು ಸುಲಭ ನಂಗೆ...
ಬರುವಾಗ ತಂದದ್ದು ಅಳುವೊಂದೇ...ಹೋಗುವಾಗ ನಾಕು ಕಂಗಳಲಿ ಎರಡು ಹನಿಗಳನುಳಿದು ಬೇರೇನನೂ ಉಳಿಸಿ ಹೋಗುವ ಹಂಬಲವಿಲ್ಲ...ಈ ನಡುವೆ ಮುಚ್ಚಿಟ್ಟು ಬಚ್ಚಿಟ್ಟು ಸಾಧಿಸುವುದೇನಿದೆ ಎಂಬುದೆನ್ನ ಮನದ ಪ್ರಶ್ನೆ...


ಹಾಗಲ್ಲವೋ ಕೆಲವು ನೋವುಗಳನ್ನಾದ್ರೂ ಮುಚ್ಚಿಡಬೇಕು...ನಮ್ಮ ಮೌನದೊಂದಿಗೆ ಕೊಂಡೊಯ್ಯಬೇಕು...ಹಾಗೆಲ್ಲ ಹೇಳುವುದಲ್ಲ...ಅಷ್ಟಕ್ಕೂ ನಿನ್ನ ನೋವಿಂದ ಯಾರಿಗೇನಾಗಬೇಕಿದೆ...?? ಬಯಲಲ್ಲಿ ಬೆತ್ತಲಾಗಿ ಸಾಧಿಸೋದೇನಿದೆ...???

ಒಂದು ಕ್ಷಣ ಮನಸು ತಡಬಡಾಯಿಸಿದ್ದು ಖರೆ...ಹೌದಲ್ಲವಾ ಅನ್ನಿಸಿದ್ದು ಸತ್ಯ...ಅರೆಘಳಿಗೆ ಮೌನದೊಂದಿಗೆ ಮಾತಾಡಿದೆ...
ಮನಸು ಹೇಳಿದ್ದಿಷ್ಟು...
ನನ್ನ ನೋವೆಂದರೆ ಅದು ಬರೀ ನನ್ನದೊಂದೇ ಅಲ್ಲವಲ್ಲಾ...ನೋವ ಸಾಗರವೇ ಉಸಿರಾಡೋ ಈ ಜಗದಲ್ಲಿ ನನ್ನ ನೋವು ಅದೆಷ್ಟು ಜೀವಗಳ ನೋವ ಹೋಲುತ್ತೋ - ನನ್ನ ಭಾವ ಅದೆಷ್ಟು ಜೀವಿಗಳ ಭಾವಗಳ ಸಂಧಿಸುತ್ತೋ...ನನ್ನ ನೋವಂಥದೇ ನೋವ ಭಾವವ ನುಂಗಿ ಉಸಿರಾಡುತಿರೋ ಒಂದ್ಯಾವುದೋ ಜೀವ ಆಕಸ್ಮಿಕವಾಗಿಯಾದರೂ ನನ್ನ ಭಾವವ ಓದಿದರೆ, ಓದಿ ಅರೆ ನನ್ನ ನೋವಂಥ ನೋವು ಇಲ್ಲೂ ಒಂದಿದೆ - ನನ್ನ ನೋವು ಒಂಟಿಯಲ್ಲ ಅಂದುಕೊಂಡು ಒಂದು ನಿಟ್ಟುಸಿರ ಚೆಲ್ಲಿದರೆ - ಆ ನೋವನುಂಡ ಜೀವ ಬದುಕಿದೆ ಅಂದರೆ ನಾನೂ ಬದುಕಬಹುದಲ್ಲವಾ ಅಂತ ಒಂದು ಕ್ಷಣ ನಗೆ ಚೆಲ್ಲಿದರೆ ಸಾಕಲ್ಲವಾ...ನನ್ನ ಬರಹಕ್ಕೆ ಅದಕಿಂತ ದೊಡ್ಡ ಸಾರ್ಥಕ್ಯ ಇನ್ನೇನು ಬೇಕು...
ಸ್ಫೂರ್ತಿಯಾಗಬೇಕಿಲ್ಲ ನಾನ್ಯಾರಿಗೂ - ಒಂದು ನೋವಿಗೆ ಜತೆಯಾದ ನೋವಿನ ಸಮಾಧಾನದ ನಿಟ್ಟುಸಿರಾದರೂ ಸಾಕು...
ಹಾಗನ್ನುತ್ತಲೇ ಒಂದಷ್ಟು ಎದೆಯ ನೋವ ಹಿಂಡಿ ಅಕ್ಷರವಾಗಿಸಿ ಹಗುರಾದೆ...ಓದಿದ ಒಂದಿಬ್ಬರ್ಯಾರೋ ಶ್ರೀ ನನ್ನ ಬದುಕು - ಭಾವಕ್ಕೆ ನೀ ಅಕ್ಷರಗಳ ಪೋಣಿಸಿದೆ, ಯಾಕೋ ನಾನು ಕಳೆದು ಹೋದೆ ಅಂತಂದರು...ಸಾರ್ಥಕವಾಯಿತು ಬರೆದದ್ದು ಮತ್ತು ಬದುಕಿದ್ದು ಅನ್ನಿಸಿತು...

Monday, March 25, 2013

ಗೊಂಚಲು - ಅರವತ್ತಾರು.....


ಇಳಿ ಸಂಜೆಯ ಮೌನ...
ಮಂಜುಗಣ್ಣಿನ ಮಾತು.....

ಏಳು ದಶಕಗಳ ಹಣ್ ಹಣ್ಣು ಬದುಕು...ಹೆಸರು ಆನಂದರಾವ್...
ಮಣ್ಣ ಮನೆಯಲಿ ಮಲಗುವ ಮುನ್ನಿನ ಮಂಜುಗಣ್ಣಿನ ಹಿನ್ನೋಟದಲ್ಲಿ, ಹೆಸರಲ್ಲಿ ಮಾತ್ರ ಕಂಡ ಆನಂದದ ಅರ್ಥ ಹುಡುಕುತ್ತಾ ಕಂಗಾಲಾಗಿದ್ದೇನೆ...

ಈದೀಗ ಮನದಿ ಸುಳಿದಿರುಗುತ್ತಿರೋ ಭಾವ ಇದೊಂದೇ - ಎಷ್ಟುಕಾಲ ಬದುಕಿದ್ದೊಡೇನು - ಜೀವಿಸಲಾಗದಿದ್ದೊಡೆ ನನ್ನಂತೆ ನಾನು... ಈ ಬದುಕಿಗೆ (ನನ್ನನ್ನೂ ಸೇರಿ ಈ ಜನಕ್ಕೆ) ಅದ್ಯಾಕೆ ಅಷ್ಟೊಂದು ಪ್ರೀತಿಯೋ ಮುಖವಾಡಗಳ ಮೇಲೆ...ಇಂದೀಗ ಬಯಲ ಹಸಿರ ತಂಗಾಳಿ ನಡುವೆಯೂ ಉಸಿರುಗಟ್ಟುವ ಭಾವ ನನ್ನಲ್ಲಿ...

ಏನೆಲ್ಲ ಇತ್ತಲ್ಲವಾ ಬದುಕ ದಾರೀಲಿ...ಸೊಗಸಾದದ್ದು, ಆಹ್ಲಾದವನೀಯುವಂಥದ್ದು...ಪುಟ್ಟ ಪುಟ್ಟದು...ಆಸ್ವಾದಿಸಿದರೆ ಬೆಟ್ಟದಷ್ಟು ಖುಷಿಯ ಕೊಡಬಲ್ಲದ್ದು...ಅವನ್ನೆಲ್ಲ ಎಡಗಾಲಲ್ಲಿ ಒದ್ದು ಓಡಿದ್ದು ಯಾವುದಕ್ಕಾಗಿ...

ಐಶ್ವರ್ಯದ, ಅಧಿಕಾರದ ಬೆನ್ನ ಹಿಂದೆ ಹೋಗಿ ಆನಂದಕ್ಕೆ ಬೆನ್ನು ಹಾಕಿದೆನಾ...

ಹಣ - ಹಣ ತಂದುಕೊಡುವ ಅಧಿಕಾರ - ಅಧಿಕಾರ ತಂದುಕೊಟ್ಟ ಮತ್ತಷ್ಟು ಹಣ - ಮತ್ತಷ್ಟು ಅಧಿಕಾರ...ಅಲ್ಲಲ್ಲೇ ಗಿರಕಿ ಹೊಡೆಯುತ್ತಾ ಪ್ರೀತಿ, ಸಂಸಾರ,ಸಂಬಂಧ, ಜೀವಿಸುವುದು ಎಲ್ಲವನ್ನು ಮರೆತು ಮನಸು ಸತ್ತವನಂತೆ ಬದುಕಿದ್ದೆನಲ್ಲ...ಯಾಕಾಗಿ..?

ಗಿರಿಯ ತುದಿ ತಲುಪುವ ಧಾವಂತದಲ್ಲಿ ಗಿರಿಮುಖದ ದಾರಿಯ ಆಚೀಚೆ ನೋಡಲೇ ಇಲ್ಲ...ದಾರಿಯ ಇಕ್ಕೆಲಗಳಲ್ಲಿ ಎಳೆಗರಿಕೆಯ ಮೇಲಿಂದ ಹಿಮಬಿಂದುವೊಂದು ಜಾರಿದ್ದು, ಗೋಪಿ ಹಕ್ಕಿ ಸೀಟಿ ಹಾಕಿದ್ದು, ಬಣ್ಣ ಬಣ್ಣದ ಹೂಗಳು ಅರಳಿದ್ದು, ದುಂಬಿಯೊಂದು ಕನವರಿಸಿದ್ದು, ಮಾವು ಚಿಗುರಿದ್ದು - ಕೋಗಿಲೆ ಉಲಿದದ್ದು, ಹರಿಣಗಳ ಸರಸ, ಹಾವು - ಮುಂಗುಸಿಯ ವಿರಸ, ಚಿರತೆಯೊಂದರ ಮರಿಗಳೆಡೆಗಿನ ಪ್ರೇಮ, ಕರಡಿಗಳ ಮಿಲನ, ಚಿಟ್ಟೆಯೊಂದು ಉಚ್ಚೆ ಹೊಯ್ದಿದ್ದು...ಉಹುಂ ಒಂದನೂ ನೋಡಿಲ್ಲ, ಆಸ್ವಾದಿಸಿಲ್ಲ, ಅಚ್ಚರಿಯಿಂದ ಕಣ್ಣರಳಿಸಿಲ್ಲ...ಬರೀ ಓಡಿದ್ದೇ ಓಡಿದ್ದು... ಕಣ್ಕಾಪು ಕಟ್ಟಿಸಿಕೊಂಡ ಯುದ್ಧ ಕುದುರೆಯಂತೆ...ಹಿಂಗದ ನನ್ನದಾಗಿಸಿಕೊಂಬ, ಹಿಡಿದಿಟ್ಟುಕೊಂಬ ದಾಹ...ಅದಕಿಟ್ಟುಕೊಂಡ ಚಂದದ ಹೆಸರು ಸಾಧನೆಯ ಮೈಲಿಗಲ್ಲು...

ಏರು ಯೌವನ, ಒಂದಷ್ಟು ಡಿಗ್ರಿಗಳು...ಆಗತಾನೆ ಸಿಕ್ಕ ಕೆಲಸ... ಬೆನ್ನಿಗಿದ್ದ ಹಣವಿಲ್ಲದೆ ಅನುಭವಿಸಿದ ಕಷ್ಟಗಳ, ಅವಮಾನಗಳ ನೆನಪು...ಕಣ್ಮುಂದೆ ಕುಣಿಯುವ ರಂಗು ರಂಗಿನ ಲೋಕ...ಹಣದ, ಅಧಿಕಾರದ ಹೆಗಲಿಗೆ ಜೋತುಬೀಳಲು ಅಷ್ಟು ಸಾಕಲ್ಲವಾ...

ಕೆಲಸ, ಧಕ್ಷತೆಯ ನಿರೂಪಣೆ, ಅಧಿಕಾರ, ಹಣ...ಸಂಜೆಗೆ ಸುಸ್ತು ಮರೆಯಲು ಹಣ ತಂದು ಕೊಡುವ ಸುಖಗಳು...ಇವುಗಳೆಲ್ಲ ಸೇರಿ ಇಷ್ಟಿಷ್ಟಾಗಿ ಜೀವಿಸುವುದು ಮರೆತೇ ಹೋಯಿತಲ್ಲವಾ...

ಸಂಸಾರ ಹೂಡಿದ್ದು ಖರೆ...ಹೊರಗೆ ಇನ್ಯಾರಿಂದಲೋ ಆಳಿಸಿಕೊಂಡಿದ್ದನ್ನು ಮರೆಯಲು ಮನೆಯಲ್ಲೊಂದಿಷ್ಟು ಆಳಿಸಿಕೊಳ್ಳುವ ಜೀವಗಳಿರಲಿ ಎಂಬ ಆಳದ ಭಾವದಿಂದಲೇನೋ ಎಂಬುದು ಇಂದಿನ ಅನುಮಾನ..
.
ಬೆಳಿಗ್ಗೆ ೮ ರಿಂದ ರಾತ್ರಿ ೮ ರವರೆಗೆ ಕತ್ತೆ ದುಡಿತ...ಒಂದಷ್ಟು ಮೀಟಿಂಗು, ಈಟಿಂಗು ಮತ್ತು ಒಣ ನಗೆಯ ಪ್ರದರ್ಶನ...ಆಮೇಲೆರಡು ತಾಸು ಐದು ನಕ್ಷತ್ರಗಳ ಹೋಟಲ್ಲಿನ ಕೃತಕ ಗಾಳಿ ಹಾಗೂ ಮಬ್ಬುಗತ್ತಲಲ್ಲಿ ಸುಖದ ಹುಡುಕಾಟ...ಅಮಲುಗಣ್ಣಲ್ಲಿ ಮನೆ ಸೇರುವಾಗ ಭರ್ತಿ ಮಧ್ಯರಾತ್ರಿ...ಮಕ್ಕಳಿಬ್ಬರೂ ನಿದ್ರಾ ದೇವಿಯ ಮಡಿಲಲ್ಲಿ ಮುಗುಳ್ನಗುತ್ತಿರುತ್ತವೆ...ಮಕ್ಕಳ ಆ ಮುಗ್ಧ ನಗುವನ್ನು ನೋಡಿ ಸವಿಯುವ ಸ್ಥಿತೀಲಿ ಖಂಡಿತ ನಾನಿರುತ್ತಿರಲಿಲ್ಲ...ಒಮ್ಮೆಯೂ ಮಕ್ಕಳು ಮೈಮೇಲೆ ಉಚ್ಚೆ ಹೊಯ್ದದ್ದು, ನಾನವರ ಕುಂಡೆ ತೊಳೆದದ್ದು, ಪಾಪಚ್ಚಿ ಮಕ್ಕಳ ಬೊಮ್ಮಟೆ ಕುಂಡೆಯ ಕಚ್ಚಿದ್ದು, ಅವು ಪಪ್ಪಾ ಮೀಸೆ ಚುಚ್ಚಿ ಚುಚ್ಚಿ ಅಂತ ತೊದಲು ತೊದಲಾಗಿ ನುಡಿದದ್ದನ್ನು ಕೇಳಿಸಿಕೊಂಡ ನೆನಪಿಲ್ಲ ನನ್ನಲ್ಲಿ...
ಹಾಸಿಗೆ ಮನೇಲಿ ನಿದ್ದೆಗಣ್ಣಲ್ಲೇ ಮಾತಾಡಿಸೋ ಹೆಂಡತಿಯ ಒಂದಿನವೂ ಎದೆಗೊರಗಿಸಿಕೊಂಡು ಪ್ರೇಮ ಸ್ಪರ್ಶನೀಡಿ ಸವಿನುಡಿಯನಾಡಿದ್ದಿಲ್ಲ...ಬದಲಿಗೆ ಕೊಟ್ಟದ್ದು ಮಧ್ಯರಾತ್ರಿ ನನ್ನ ಸೊಂಟದ ಕೆಳಗಿನ ಹಸಿವಿಗೆ ಒಂದು ಅವಸರದ ಬೆವರಿಳಿಸುವ ಬೆತ್ತಲೆ ಕಾಟ...ಅವಳ ಬೇಸರದ ನಿಟ್ಟುಸಿರು ನನ್ನ ಕಿವಿಯ ತಲುಪುವ ಮೊದಲೇ ಅವಳ ಕಿವಿಯಲ್ಲಿ ನನ್ನ ಗೊರಕೆ ಸದ್ದಿನ ಮಾರ್ದನಿ...

ಮಕ್ಕಳಿಗೆ ದೊಡ್ಡ ಹೆಸರಿನ, ಅಷ್ಟೇ ದೊಡ್ಡ ದುಡ್ಡಿನ ಶಾಲೆ, ಹೆಂಡತಿಗೊಂದಿಷ್ಟು ಒಡವೆ ಸೀರೆ...ಹಣವೊಂದನ್ನುಳಿದು ಬೇರೇನನ್ನೂ ಕೊಟ್ಟ ನೆನಪಿಲ್ಲ ಸಂಸಾರಕ್ಕೆ...
ಒಂದು ಸಿಹಿ ಮುತ್ತಿನ ಒಡವೆ, ಸವಿ ಮಾತಿನೂಟ, ಒಂದು ಬೆಚ್ಚನೆ ತಬ್ಬುಗೆಯ ಇಬ್ಬನಿ ಹಾರ, ಒಂದು ಒಲವಿನ ಕೂಟ...ಉಹುಂ ಕೊಟ್ಟದ್ದಿಲ್ಲ...ಒಲವ ಹಂಚದಿರುವುದರಿಂದ ಎಷ್ಟೆಲ್ಲ ಕಳೆದುಕೊಂಡೆ ಎಂಬ ಮನದ ಭಣ ಭಣ ಭಾವ ಇಂದು...

ಇಂದು ಈ ಅನಿವಾರ್ಯ ಮತ್ತು ಅಸಹಾಯ ನಿವೃತ್ತ ಇಳಿಸಂಜೆಯಲ್ಲಿ ಅದೆಲ್ಲ ಬೇಕೆನಿಸುತ್ತಿದೆ...ಹಣ ತಾನು ನೀಡಲಾರದ್ದು - ಒಲವು ಮಾತ್ರ ಕೊಡಮಾಡಬಹುದಾದ ಮಧುರ ಆನಂದ...ಆದರೆ ಕಾಲಕ್ಕೆ ಹಿಮ್ಮುಖ ಚಲನೆ ಇಲ್ಲವಲ್ಲ...:(

ಕಳೆದುಕೊಂಡ ಮುಗ್ಧ ಮಗುವ ನಗುವ ನೋಡುವ ಖುಷಿಯ ಮೊಮ್ಮಗುವಲ್ಲಿ ನೋಡೋಣ ಎಂದರೆ ಮಗಳಿಗೆ ಮಕ್ಕಳೇ ಬೇಡವಂತೆ...ಮಗ ದೂರದ ದೇಶದಲ್ಲಿ ಅದಾಗಲೇ ಮತ್ತೊಬ್ಬ ಆನಂದರಾವ್...ಮಗಳಿಗೆ ಮಕ್ಕಳು ಬೇಡವಾದರೆ ಮಗನಿಗೆ ಮದುವೆಯೇ ಬೇಡ...ಸಿಹಿ ಕಹಿಯ ಹಂಚಿಕೊಳ್ಳೋಣವೆಂದರೆ ಹೆಂಡತಿ ವಜ್ರದ ಹಾರ, ತೋಳಿಲ್ಲದ ರವಿಕೆ ತೊಟ್ಟು ಸಮಾಜ ಸೇವೆಯಲ್ಲಿ ಎಂದೋ ಕಳೆದುಹೋಗಿದ್ದಾಳೆ...ತಪ್ಪಿಲ್ಲ ಅವರಲ್ಲಿ - ನಾ ಬಿತ್ತಿದ್ದನ್ನೇ ನಾ ಬೆಳೆದಿದ್ದೇನಷ್ಟೇ...
ಇಂದೀಗ ನಾ ಕಟ್ಟಿಕೊಂಡ ಹಣದ ಮಹಲಿನಲ್ಲಿ ನಾನು ಏಕಾಂಗಿ ಖೈದಿ...
ಮನೆಯ ತುಂಬ ಇರುಳ ಕತ್ತಲಲ್ಲೂ ಝಗಮಗಿಸೋ ಬೆಳಕಿದೆ - ಅಂಗಳದಿ ಕೂತ ನನ್ನ ಮನದಲ್ಲಿ ಬರೀ ಕತ್ತಲು...

ಬದುಕ ಅರಿವಿನ ದಾರಿ ತಪ್ಪಿದ್ದೆಲ್ಲಿ..? ಬಾಲ್ಯದ ಕಷ್ಟ, ಅವಮಾನಗಳಲ್ಲಾ.?? ಯೌವನದ ಗೆಲುವಿನ ಹಂಬಲದಲ್ಲಾ.??? ಮಧ್ಯ ವಯಸಿನ ಕಳಕೊಳ್ಳುವ - ಸೋಲುವ ಭಯದಲ್ಲಾ.???? ಎಲ್ಲಿ ಕಳೆದು ಹೋಯಿತು ಬದುಕ ಜೀವಂತಿಕೆ..????? ಬರೀ ಪ್ರಶ್ನೆಗಳು...

ಮನೆ ಮುಂದಿನ ದಾರೀಲಿ ಓಡಾಡೋ ಅಂದಿನ ನನ್ನದೇ ಪ್ರತಿರೂಪಗಳಂತಹ ಕಿರಿಯರನ್ನು ಕಂಡಾಗ ವಿಷಾದವೊಂದು ಹರಳುಗಟ್ಟುತ್ತೆ...
ಒಮ್ಮೊಮ್ಮೆ ಈ ಒಂಟಿಭಾವ ತೀವ್ರವಾಗಿ ಕಂಗೆಡಿಸಿದಾಗ ಬೀದಿ ಮಧ್ಯೆ ನಿಂತು ಕೂಗಿ ಹೇಳಬೇಕೆನಿಸುತ್ತೆ - "ಹೆಣದ ಜೊತೆಗೆ ಹಣವ ಹೂಳುವುದಿಲ್ಲ" ಎಂದು...ತಕ್ಷಣ ಬಾಲ್ಯದ ಆ ನೆನಪು ಕಾಡುತ್ತೆ...ಹಣವಿಲ್ಲದಿರುವುದರಿಂದಲೇ ಅಮ್ಮನ ಹೆಣ ಹೂಳಲು ಪರದಾಡಿ ಬೋರೆಂದು ಅತ್ತ ಅಪ್ಪನ ಅಸಹಾಯಕ ಮುಖ ನೆನಪಾಗಿ ಗಂಟಲು ಕಟ್ಟಿ ಸುಮ್ಮನಾಗುತ್ತೇನೆ...

ಹಣವಿಲ್ಲದೇ ಕಳಕೊಂಡ ಬಾಲ್ಯದ ಮತ್ತು ಯೌವನದ ಮೊದಲರ್ಧದ ಹಲವಾರು ಸುಖಗಳು ಹಾಗೂ ಉಂಡ ಅವಮಾನಗಳು - ಹಣದಿಂದಾಗಿ ಕಳಕೊಂಡ ಆಮೇಲಿನ ಬದುಕಿನ ಆನಂದಗಳು ಎಲ್ಲ ಸೇರಿ ಮನ ಬರೀ ಗೊಂದಲದ ಗೂಡಾಗಿ ಉತ್ತರಗಾಣದ ಪ್ರಶ್ನೆಗಳಲಿ ನನ್ನೊಳಗಿನ ಮಾತೆಲ್ಲ ಸತ್ತು ವರ್ಷಗಳೇ ಸಂದವು...

ಅಥವಾ ಕೆಲವೆಲ್ಲ ದ್ವಂದ್ವಗಳ ಹುಟ್ಟುಹಾಕುವ ಗಂಭೀರ ಪ್ರಶ್ನೆಗಳಿಗೆ ಮೌನವೇ ಉತ್ತರವೇನೋ.....
ಕಾಯುವುದೊಂದೆ ಕೆಲಸ ಈಗ ಇರವನ್ನೆ ಕಳೆದು ಬಿಡುವ ಬರುವ ಆ ಚಿರಮೌನಕ್ಕಾಗಿ...
ನನ್ನ ಹೆಸರು ಆನಂದರಾವ್...:(

ಚಿತ್ರ ಕೃಪೆ : ಅಂತರ್ಜಾಲ...
ವಿ.ಸೂ : ಈ ಬರಹ ಅಂತರ್ಜಾಲ ಪತ್ರಿಕೆ 'ಪಂಜು'ವಿನ 25ನೇ ಮಾರ್ಚ್ 2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ...ಅದರ ಕೊಂಡಿ ಇಂತಿದೆ - http://www.panjumagazine.com/?p=1580

Tuesday, March 19, 2013

ಗೊಂಚಲು - ಅರವತ್ತು + ಐದು.....


ಜನ್ಮಕ್ಕಂಟಿದ.......

ನೆನಪಿದ್ದ ಖುಷಿ ಅದೊಂದೆ.
ಆಗೆಲ್ಲ ನೀ ಅಜ್ಜನ ಮನೆಗೆ (ನಾನು, ಅಮ್ಮ, ಅಕ್ಕಂದಿರೆಲ್ಲ ಬದುಕಿದ್ದೇ ಅಲ್ಲಿ ಮತ್ತು ಆ ಮನೆಯ ಪ್ರೀತಿಯಿಂದ ಆಗ) ಬರ್ತಿದ್ದೆ. ಶಾಲೆಯಿಂದ ನಾ ಬರೋ ಹೊತ್ಗೆ ದೇವರ ಮುಂದೆ ನೀನು ಮೂಗು ಮುಚ್ಕೊಂಡು ಪ್ರತಿಷ್ಠಾಪಿತ. ಆಗದು ಯಾವುದೇ ಜಿಜ್ಞಾಸೆಗಳಿಲ್ಲದ ಎಲ್ಲ ಸೊಗಸಾಗಿ ಕಾಣುತಿದ್ದ ವಯಸು ನಂದು. ನೀ ದೇವರೆದುರು ಕೂತಿದ್ರೆ ನಿನ್ನ ಪಕ್ಕದಲ್ಲಿ ಒಂಥರಾ ಸ್ಪ್ರಿಂಗ್ ನಂತಹ ಬೆಲ್ಟ್ ಇರೋ ನಿನ್ನ ವಾಚು ಇರ್ತಿತ್ತು. ಸುಮ್ನೆ ಅದನ್ನೆತ್ತಿಕೊಂಡು ಹೋಗಿ ನನ್ನ ಕೈಗದನ್ನು ಕಟ್ಕೊಂಡು ಖುಷಿ ಪಡ್ತಿದ್ದೆ. ಅದೊಂದೇ ಖುಷಿ ನಿನ್ನಿಂದ ಸಿಕ್ಕಿದ್ದು ನಂಗೆ. ಹಾಗೆ ನಿನ್ನ ವಾಚು ಕಟ್ಟಿಕೊಂಡು ವಾರಗೆಯ ಮಕ್ಕಳೆದುರು ಕೆಲಕ್ಷಣ ಮೆರೆದಿದ್ದಕ್ಕೆ ಬೈದಿಲ್ಲ ಅನ್ನೋ ಒಂದೇ ಕಾರಣಕ್ಕೆ ನಾನು ನಿಂಗೆ ಋಣಿಯಾಗಿರಬೇಕಿದೆ...

ಅಲ್ಲಿಂದಾಚೆ ನನ್ನ ಬುದ್ಧಿ ಬಲಿತಂತೆಲ್ಲ ನಿನ್ನ ಮನದ ಕ್ರೌರ್ಯದ ಮುಳ್ಳು ಹೆಜ್ಜೆ ಹೆಜ್ಜೆಗೂ ಚುಚ್ಚಿ ಘಾಸಿಗೊಳಿಸಿದ್ದೊಂದೇ ಸತ್ಯ...

ನನ್ನ ಮತ್ತು ಅಮ್ಮ, ಅಕ್ಕಂದಿರೆಲ್ಲರ ಎಲ್ಲ ಸಾಮಾಜಿಕ ಅವಮಾನಗಳಿಗೆ ನೀನೇ ಪ್ರಮುಖ ಕಾರಣನಾಗಿ ಬಿಸಿತುಪ್ಪವಾದದ್ದು ನಮ್ಮ ದೌರ್ಭಾಗ್ಯ...
ನಿನ್ನ ನೆವದಿಂದ ನನ್ನ ಕೆಣಕಿ ಕಾಡೋ ಸಮಾಜ ಅದೇ ನಿನ್ನ ಮೆರೆಸುವುದ ಕಂಡು ಕನಲಿಹೋಗಿದ್ದೇನೆ ಎಷ್ಟೋ ಬಾರಿ...

ಏಳು ಹೆಜ್ಜೆ ನಿನ್ನೊಂದಿಗೆ ನಡೆದದ್ದು ಮತ್ತು ಒಂದು ಕರಿ ದಾರಕ್ಕೆ ನಿನ್ನೆದುರು ತಲೆಬಾಗಿದ್ದಕ್ಕೆ ಅಮ್ಮ ಕಟ್ಟಿದ ಕಂದಾಯ ಒಂದಿಡೀ ಜನ್ಮದ ಜೀವಂತ ನಗು...
ಬಂಧ ಬೆಸೆಯಬೇಕಿದ್ದ ಹೋಮದ ಸುತ್ತ ಸುತ್ತುತ್ತಲೇ ಅಮ್ಮನ ಬದುಕ ಆಹುತಿಗೆ ಮುನ್ನುಡಿ ಬರೆದದ್ದು ನೀನು...
ರಾತ್ರಿಗಳ ನಿನ್ನ ತೆವಲಿನ ಕ್ರೌರ್ಯಕ್ಕೆ ಅಮ್ಮನ ಮಡಿಲು ತುಂಬಿತ್ತು...(ಬಹುಶಃ ಮಡಿಲು ತುಂಬಿದೆ ಅನ್ನೋ ಒಂದೇ ಕಾರಣಕ್ಕೆ ಅಮ್ಮ ನಿಂಗೆ ಋಣಿಯೇನೋ)

ಕೊಟ್ಟ ದೇಹಕ್ಕೆ ಅನ್ನವಿಕ್ಕದಿದ್ದರೂ ನಾನಿಂದು ನಿನ್ನ ದೂರುತ್ತಿರಲಿಲ್ಲ..
ದೇಹದೊಳಗಣ ಮನದ ಹಸಿವಿಗೆ ಒಂದೇ ಒಂದು ತುತ್ತು ಪ್ರೀತಿ ಉಣಿಸಿದ್ದಿದ್ದರೆ...

ನಾವು ಕ್ರೂರ ಪ್ರಾಣಿ ಅಂತನ್ನೋ ಚಿರತೆ ಕೂಡ ತನ್ನ ಮರಿಗಳು ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುವವರೆಗೆ ಸಲುಹಿ ಆನಂತರವಷ್ಟೇ ಕೈಬಿಡುತ್ತಂತೆ...
ನಿನ್ನ ಮನಸು ಚಿರತೆಗಿಂತ ಕ್ರೌರ್ಯವಂತ ಹೇಗೆ..???

ದಿನದ ಹದಿನೈದು ಘಂಟೆ ನೀ ನಡೆಸುವ ಡಂಭಾಚಾರದ ದೈವ ಭಕ್ತಿಯ ಕಂಡಿದ್ದೇ ಇದ್ದೀತು ದೇವರೆಡೆಗಿನ, ಆಚರಣೆಗಳೆಡೆಗಿನ ನನ್ನ ಜಿಗುಪ್ಸೆಗೆ ಮೂಲ ಕಾರಣ...

ನೀ ಪೂಜಿಸೋ ದೇವರು, ನೀ ನಂಬೋ ಧರ್ಮ ಹೇಳಿದ ನೀ ನನಗೆ ನೀಡಲೇಬೇಕಿದ್ದ ‘ಸಂಸ್ಕಾರ’ಗಳೆಡೆಗೆ ಕಣ್ಣೆತ್ತಿಯೂ ನೋಡದ ನಿನ್ನ ’ಕೊನೆಯ ಸಂಸ್ಕಾರ’ ಮಾಡಲೂ ನನ್ನ ಕೈ ಹೇಸುತ್ತೆ...
ಇನ್ನು ನಿನ್ನ ಇಳಿವಯಸಲಿ ಸೇವೆ ಎಲ್ಲಿಂದ ಮಾಡಲಿ...
ತನ್ನ ‘ಕೊನೆಯ ಸಂಸ್ಕಾರ’ದವರೆಗೆ ಮಗ ಬದುಕಿದ್ದರೆ ಸಾಕು ಅಂದೆಯಂತಲ್ಲ - ಸಂಸ್ಕೃತಿಯನ್ನು ಕಲಿಸದ ನಿನಗೆ ‘ಸಂಸ್ಕಾರ’ ಮಾಡ್ತೀನಿ ನಾನು ಅಂತ ಹೇಗೆ ನಂಬ್ತೀಯ...

ಒಂದು ಹನಿ ವೀರ್ಯ ಚೆಲ್ಲಿ ಈ ದೇಹದ ಜನ್ಮಕ್ಕೆ ನಿಮಿತ್ತನಾದೆ ಎಂಬ ಕಾರಣಕ್ಕೆ ನಿನ್ನೆಲ್ಲ ನೀಚತನಾನ ನಿನ್ನ ವೀರ್ಯಸಂಜಾತರು ಸಹಿಸಿಕೊಳ್ಳಬೇಕೆಂಬುದಾಗಿದ್ದರೆ, ಸೇವೆಗೈಯಬೇಕೆಂಬುದಾಗಿದ್ದರೆ ನಿನ್ನಂಥ ಗಂಡು ಜಂತುಗಳ್ಯಾರೂ ಮದುವೆ - ಸಂಸಾರಗಳಿಗೆಲ್ಲ ಜೋತು ಬೀಳ್ತಲೇ ಇರಲಿಲ್ಲವೇನೋ...
ಕನಿಷ್ಠ ಜವಾಬ್ದಾರಿಯನ್ನೂ ನೀಯಿಸದವನಿಗೆ ನಿರೀಕ್ಷೆಗಳೂ ಇರಬಾರದಲ್ಲವಾ...

ಎಂಥ ಅಪ್ಪನಾಗಬಾರದೆಂಬುದನ್ನು ಅಗತ್ಯಕ್ಕಿಂತ ಸ್ಪಷ್ಟವಾಗಿ ಅರುಹಿದ, ತುಂಬ ಸಭ್ಯರಾದ ಇತರರ ಅಪ್ಪಂದಿರನ್ನೂ ಅನುಮಾನದ - ಪೂರ್ವಗ್ರಹದ ಕಣ್ಣಿಂದ ನೋಡುವಂತೆ ನನ್ನ ಮನಸ ಕೆಡಿಸಿದ, ನಿನ್ನ ಕಾಮಕ್ಕೆ ಬೇಕಾದ ಅಧಿಕೃತತೆಗಾಗಿ ಮದುವೆಯ ಪಾವಿತ್ರ್ಯವನ್ನು ಬಳಸಿಕೊಂಡ (ಸಮಾಜದ ಕಣ್ಣಿಗೆ ಮಣ್ಣೆರಚಲು ಒಂದು ಮದುವೆ..ಆದರೆ ನಿನ್ನ ಕಾಮ ಅದರಾಚೆಯೇ ಹೆಚ್ಚು ವಿಜೃಂಭಿಸಿದ್ದೆಂಬುದು ಸತ್ಯ) ನಿನ್ನೆಡೆಗೆ ನನ್ನಲ್ಲಿ ಇರೋದು ಕೋಪವಲ್ಲ... ಅಪ್ಪಟ ಅಸಹ್ಯ...

ನಾ ಬದುಕುತಿರುವ, ನನ್ನನ್ನು ಪ್ರೀತಿಸೋ ಸಮಾಜದ ಒತ್ತಡಕ್ಕೆ ಮಣಿದು ಎಲ್ಲಿ ನಿನ್ನ ಕೊನೆಗಾಲದಲ್ಲಾದರೂ ನಿನ್ನೆಡೆಗೆ ನಡೆಯಬೇಕಾದೀತೋ ಎಂಬ ಭಯ ನನ್ನಲ್ಲಿ ನಿನಗಿಂತ ನಾನೇ ಮೊದಲು ಅಳಿದು ಹೋಗಿದ್ದರೆ ಚೆನ್ನವಿತ್ತು ಅಂತ ಯೋಚಿಸುವಂತೆ ಮಾಡುತ್ತೆ - ಪ್ರತಿ ಬಾರಿ ನಿನ್ನ ನೆನಪಾದಾಗ...

ದೇಹ ನೀಡಿದ ಕಾರಣಕ್ಕೆ ಹೆಸರಿಗೂ ಅಂಟಿಕೊಂಡು, ಜನ್ಮಕ್ಕಂಟಿದ ಶಾಪದಂತೆ ಕಾಡೋ ನಿನ್ನಂಥ ಅಪ್ಪಂದಿರೆಡೆಗೆ ನನ್ನ ಧಿಕ್ಕಾರವಿದೆ....

Friday, March 8, 2013

ಗೊಂಚಲು - ಅರವತ್ನಾಕು.....


ಗೆಲುವಿನಂಗಳದಿ ಮೂಡುತಿದೆ ಗೆಜ್ಜೆ ಕಾಲ್ಗಳ ಹೆಜ್ಜೆ ಗುರುತು.....


ಕಾರ್ಯೇಶು ದಾಸಿ - ಕರಣೇಶು ಮಂತ್ರಿ - ಪೂಜ್ಯೇಶು ಮಾತಾ – ಕ್ಷಮಯಾ ಧರಿತ್ರಿ – ರೂಪೇಶು ಲಕ್ಷ್ಮಿ - ಶಯನೇಶು ರಂಭಾ ಎಂದು ಹೆಣ್ಣಿಗೆ ಹಲವಾರು ಶ್ರೇಷ್ಠ ಗುಣಗಳನ್ನು ಆರೋಪಿಸಿ, ತ್ಯಾಗ ಮೂರ್ತಿಯಾಗಿ ಚಿತ್ರಿಸಿ, ಹೊಗಳಿ ಅಟ್ಟಕ್ಕೇರಿಸಿ ಆಕೆಯ ಕಾರ್ಯ ವ್ಯಾಪ್ತಿಯನ್ನು ತನ್ನ ಮನೆಯ ಅಡಿಗೆ ಕೋಣೆ ಮತ್ತು ಶಯನಾಗಾರಕ್ಕೆ ಮಾತ್ರ ಸೀಮಿತಗೊಳಿಸಿದ ಪುರುಷ ಸಮಾಜ ಇಂದು ಸಣ್ಣಗೆ ಕಂಪಿಸುವಂತಾಗಿದೆ. ಕಾರಣ ಹೆಣ್ಣು ನಿಧಾನವಾಗಿ ಅಡಿಗೆ ಕೋಣೆಯ ಕಿಟಕಿಯಿಂದ ಆಚೆ ಗಂಡು ಕೇವಲ ತನ್ನದು ಎಂದುಕೊಂಡಿದ್ದ ಪ್ರಪಂಚದ ಕಡೆಗೆ ದೃಷ್ಠಿ ಬೀರಿದ್ದಾಳೆ. ತನ್ನ ಕಾರ್ಯ ವ್ಯಾಪ್ತಿಯನ್ನು ಪುರುಷನಿಗೆ ಸರಿಸಮನಾಗಿ ವಿಸ್ತರಿಸಿಕೊಂಡು ಬೆಳೆಯುತ್ತಿದ್ದಾಳೆ. ತಾನು ಕೂಡ ಪುರುಷನಂತೆಯೇ – ಕೆಲವೊಮ್ಮೆ ಆತನಿಗಿಂತ ಸಮರ್ಥವಾಗಿ – ಎಂಥ ಕ್ಷೇತ್ರದಲ್ಲೇ ಆಗಲೀ ದುಡಿಯಬಲ್ಲೆ – ಎಂಥ ಗೆಲುವನ್ನೇ ಆದರೂ ದಣಿಯದೆ ದಕ್ಕಿಸಿಕೊಳ್ಳಬಲ್ಲೆ – ತಾನು ಅಬಲೆಯಲ್ಲ ಸಬಲೆಯೆಂಬುದನ್ನು ತೋರಿಸಿಕೊಡುತ್ತಿದ್ದಾಳೆ. ಅಡುಗೆಯನ್ನೂ ಒಂದು ವಿಜ್ಞಾನವನ್ನಾಗಿ ರೂಪಿಸಿದ್ದಾಳೆ. ಅಡುಗೆಮನೆಯಿಂದ ಅಂತರೀಕ್ಷದವರೆಗೂ ಎಲ್ಲೆಡೆಯೂ ತಾನು ಸಲ್ಲಬಲ್ಲೆ ಎಂದು ತೋರಿಸಿಕೊಟ್ಟಿದ್ದಾಳೆ. ಸೈನಿಕ ಸೇವೆಯಂಥ ದೈಹಿಕ ಸಾಮರ್ಥ್ಯ ಬೇಡುವಂಥ ಕ್ಷೇತ್ರದಲ್ಲಿ ಕೂಡ ತನ್ನ (ಸಾಮರ್ಥ್ಯದ ಛಾಪು ಮೂಡಿಸಿದ್ದಾಳೆ) ಗೆಲುವಿನ ನಗು ಬೀರಿದ್ದಾಳೆ. ತನ್ನ ಅರಿವಿನ ಬೆಳಕಲ್ಲಿ ತನ್ನ ಸುತ್ತಣ ಸಮಾಜವನ್ನೂ ಬೆಳಗುವ ಜ್ಯೋತಿಯಾಗಿದ್ದಾಳೆ. 

ಈ ವಿಚಾರದಲ್ಲಿ ನಮ್ಮ ಗ್ರಾಮೀಣ ಪ್ರದೇಶಗಳ ಮಹಿಳೆಯರೂ ಹಿಂದೆಬಿದ್ದಿಲ್ಲ. ತಮ್ಮ ನಡುವೆಯೇ ಸಹಕಾರ ಸಂಸ್ಥೆಗಳು, ಸ್ವ-ಸಹಾಯ ಸಂಘಗಳನ್ನು ರೂಪಿಸಿಕೊಂಡು ತಾನು ಆರ್ಥಿಕವಾಗಿ, ಬೌದ್ಧಿಕವಾಗಿ ಸಾಮಾಜಿಕವಾಗಿ ಸದೃಢಳಾಗುತ್ತಾ ತನ್ನ ಗ್ರಾಮವನ್ನೂ ಅಭಿವೃದ್ಧಿಪಡಿಸುತ್ತಾ ಗಾಂಧೀಜಿಯವರ ಗ್ರಾಮ ಸಬಲೀಕರಣದ ಮೂಲಕ ದೇಶಾಭಿವೃದ್ಧಿಯ ಕನಸನ್ನು ಸಮರ್ಥವಾಗಿ ಸಾಕಾರಗೊಳಿಸುತ್ತಿದ್ದಾಳೆ. ಮಹಿಳೆ ತನ್ನನ್ನು ತಾನು ಸಮಾಜ ಕಟ್ಟುವ, ತನ್ನ ದೇಶವನ್ನು ವಿಶ್ವಮಟ್ಟದಲ್ಲಿ ಬಲಿಷ್ಠ ಶಕ್ತಿಯಾಗಿಸುವ ಮುಖ್ಯಭೂಮಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. ಇದಕ್ಕೆಲ್ಲ ಮಹಿಳೆಯಲ್ಲಿ ಮೂಡಿದ ತನ್ನೊಳಗಿನ ಸಾಮರ್ಥ್ಯದ ಅರಿವು ಮುಖ್ಯ ಕಾರಣ ಎನ್ನಬಹುದು. ಹೀಗಿರುವಾಗ ಮಹಿಳೆಗೆ ಪ್ರಾಥಮಿಕ ಮಟ್ಟದಿಂದಲೇ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣವೂ ದೊರೆತರೆ ಖಂಡಿತ ಹೆಣ್ಣು ‘ಆದಿಶಕ್ತಿ’ ಎಂಬ ತನ್ನ ಬಿರುದಿಗೆ ಅನ್ವರ್ಥವಾಗುವುದರಲ್ಲಿ ಸಂಶಯವಿಲ್ಲ.

ಗಮನಾರ್ಹ ಸಂಗತಿ ಎಂದರೆ – ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳ ಮಹಿಳೆಯರಲ್ಲೂ ಮೂಡಿದ ಅರಿವಿನ ಜಾಗೃತಿ. ತನಗಿರುವ ಅವಕಾಶಗಳನ್ನು ಅರಿತುಕೊಂಡು, ಆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನನ್ನು ತಾನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಿರುವ ಪರಿ ನಿಜಕ್ಕೂ ಶ್ಲಾಘನೀಯವೇ. ಸಹಕಾರ ತತ್ವವನ್ನು ಅರಗಿಸಿಕೊಂಡು - ಅಳವಡಿಸಿಕೊಂಡು - ಸ್ವ ಉದ್ಯೋಗ ಮಾರ್ಗಗಳನ್ನು ರೂಪಿಸಿಕೊಂಡು ಆರ್ಥಿಕ ಸ್ವಾವಲಂಬನೆ ಗಳಿಸಿಕೊಳ್ಳುತ್ತಿದ್ದಾಳೆ. ಇಂದು ಪ್ರತೀ ಹಳ್ಳಿಗಳಲ್ಲೂ ಒಂದಿಲ್ಲ ಒಂದು ಮಹಿಳಾ ಸ್ವಸಹಾಯ ಸಂಘ ಅಥವಾ ಸಹಕಾರ ಸಂಘಗಳು ತುಂಬ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೊಲಿಗೆ, ಕೈಮಗ್ಗಗಳಂತಹ ಸಣ್ಣ ಬಟ್ಟೆ ಉದ್ಯಮ - ಹಪ್ಪಳ, ಸಂಡಿಗೆ, ಶ್ಯಾವಿಗೆ, ಸಿಹಿತಿಂಡಿಗಳಂತಹ ಆಹಾರೋತ್ಪನ್ನಗಳು – ಅರಿಶಿನ, ಕುಂಕುಮಗಳಂತಹ ಗೃಹೋಪಯೋಗಿ ಸಾಮಾನುಗಳ ತಯಾರಿಕೆ - ಹಳ್ಳಿಗಳಲ್ಲಿ ಮಾತ್ರ ಸಿಗತಕ್ಕಂತಹ ನಾರು, ಬೇರುಗಳ ಅಲಂಕಾರಿಕ ಸಾಮಗ್ರಿಗಳ ತಯಾರಿಕೆ ಮತ್ತು ಅವುಗಳ ಮಾರಾಟ. ಈ ಮೂಲಕ ಮಹಿಳೆ ಗಳಿಸುತ್ತಿರುವ ಆರ್ಥಿಕ ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸ ಸಣ್ಣ ಮಟ್ಟದ್ದೇನಲ್ಲ. ಸಾಮಾನ್ಯ ಮಹಿಳೆಯೊಬ್ಬಳು ಉತ್ಪನ್ನಗಳ ಮಾರುಕಟ್ಟೆ ಮೌಲ್ಯವನ್ನರಿತು, ಸಮರ್ಪಕ ಮಾರಾಟ ತಂತ್ರಗಳನ್ನು ರೂಪಿಸಿಕೊಂಡು, ಸರಿಯಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ಆರ್ಥಿಕವಾಗಿ ಗಟ್ಟಿ ಬೆಳವಣಿಗೆ ಸಾಧಿಸುವುದು ವಿಪರೀತ ಪೈಪೋಟಿಯ ಈ ಕಾಲದಲ್ಲಿ ಕಡೆಗಣಿಸುವಂಥ ವಿಷಯ ಅಲ್ಲವೇ ಅಲ್ಲ. ಬದಲಾಗಿ ಗೌರವಿಸುವಂಥದ್ದಾಗಿದೆ. 

ಹಾಗಂತ ಮೈಮರೆಯುವಂತಿಲ್ಲ. ಬೆಳವಣಿಗೆ ಮತ್ತು ಬದಲಾವಣೆ ನಿಂತ ನೀರಲ್ಲ. ಹೊರಗಿನ ತೀವ್ರ ಪೈಪೋಟಿಯೆದುರು ಗಟ್ಟಿಯಾಗಿ ನಿಂತು, ದೌರ್ಜನ್ಯಗಳ ಮೆಟ್ಟಿ, ತನ್ನ ದೌರ್ಬಲ್ಯಗಳ ಮೀರಿ ನಿಂತು ಇನ್ನಷ್ಟು ಬೆಳೆಯಬೇಕಿದೆ. ಉಳಿಯಬೇಕಿದೆ. ಏಕೆಂದರೆ ಹೆಣ್ಣು ಸ್ವಭಾವತಹ ಮೃದು ಮನಸಿನ ಜೀವಿ. ಅದಾಗಲೇ ಪ್ರಕೃತಿ ಅವಳಿಗೆ ನೀಡಿದ ಮೀರಲಾಗದ ಜವಾಬ್ದಾರಿಗಳೇ ಗಂಡಿನ ಜವಾಬ್ದಾರಿಗಳಿಗಿಂತ ಸಾಕಷ್ಟು ಪಟ್ಟು ಜಾಸ್ತಿ ಇದೆ. ತನ್ನ ಸ್ತ್ರೀ ಸಹಜವಾದ ಭಾವಗಳನ್ನೂ, ಕರ್ತವ್ಯಗಳನ್ನೂ ಬಿಟ್ಟುಕೊಡದೇ ತನ್ನದಲ್ಲದ ಗಂಡಸಿನ ಭಾವ - ಭಾದ್ಯತೆಗಳನ್ನೂ ಮೈಗೂಡಿಸಿಕೊಂಡು, ಎರಡರ ನಡುವೆ ಸಮತೋಲನ ಕಾಯ್ದುಕೊಂಡು ಬೆಳಗಬೇಕಿದೆ. ಪ್ರಕೃತಿ ನೀಡಿದ ಕರ್ತವ್ಯ ಸಂತಾನೋತ್ಪತ್ತಿ ಮತ್ತು ಸಂಸ್ಕೃತಿ ನೀಡಿದ ಸಂಸಾರ ನಿಭಾವಣೆಯ ಜವಾಬ್ದಾರಿಗಳನ್ನು ಮರೆಯದೇ ತನ್ನ (ಸ್ತ್ರೀ) ಭಾವಗಳನ್ನು ಉಳಿಸಿಕೊಂಡು, ಪರರ (ಪುರುಷ) ಭಾವಗಳನ್ನು ಆವಾಹಿಸಿಕೊಂಡು ಪುರುಷ ನಿರ್ಮಿತ ಸಮಾಜದಲ್ಲಿ ಅವನ ಸರಿಸಮನಾದ ಸ್ಥಾನ ಸ್ಥಾಪಿಸಿಕೊಳ್ಳಬೇಕಿದೆ. ಅದಷ್ಟು ಸುಲಭದ ಮಾತಲ್ಲ. ಬಹುಮಟ್ಟಿಗೆ ಆಕೆ ಆ ಸ್ಥಾನ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾದಂತೆ ಕಂಡುಬಂದರೂ ಅದು ಮೇಲ್ನೋಟದ ಅಂಕಿ ಸಂಕಿಗಳಷ್ಟೇ ಅನ್ನಿಸುತ್ತೆ. ಅವಳ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡುವ ಅವಕಾಶವನ್ನು ಅವಳಿನ್ನೂ ಸಂಪೂರ್ಣವಾಗಿ ಹೊಂದಿಲ್ಲ. ಈ ಇಪ್ಪತ್ತೊಂದನೇ ಶತಮಾನದಲ್ಲೂ ಸ್ವಯಂ ಅಥವಾ ಗುಂಪು ನಿರ್ಣಯ ತೆಗೆದುಕೊಳ್ಳುವದರಲ್ಲಿ ವಿಶ್ವಾಸದಿಂದ ದೃಢಪಡಿಸುವ ಸಾಮಥ್ರ್ಯ ಹೊಂದುವಲ್ಲಿ ಮತ್ತು ಸ್ವಯಂ ಪ್ರೇರಿತವಾಗಿ ನಿರಂತರ ಬದಲಾವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವಲ್ಲಿ ಅವಳಿನ್ನೂ ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ಅಲ್ಲೆಲ್ಲ  ಹೆಚ್ಚಿನ ಸಂದರ್ಭದಲ್ಲಿ ಅವಳ ಕುಟುಂಬದ ನಿರ್ಣಯಗಳೇ ಪ್ರಾಧಾನ್ಯತೆ ಪಡೆಯುವುದು ಸಹಜವಾಗಿದೆ. ಇದಕ್ಕೆ ಆಕೆಯ ಸಹಜವಾದ ಮಾನಸಿಕ ಮೃದುತ್ವವೂ ಕಾರಣವಿರಬಹುದೇನೋ. 

ಇಂತಿಪ್ಪ ಹೊತ್ತಿನಲ್ಲಿ ಮಹಿಳೆ ದೃಢ ಮನಸ್ಸಿನಿಂದ ಸ್ವಯಂ ಪ್ರೇರಣೆಯಿಂದ ಸರ್ಕಾರ ಮತ್ತು ಸಮಾಜ ಕೊಡತಕ್ಕ ಅಲ್ಪ ಸವಲತ್ತು, ಸೌಲಭ್ಯಗಳನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಇನ್ನೂ ಗಣನೀಯವಾಗಿ ಬೆಳೆಯಬೇಕಿದೆ. ಪಡೆಯಬೇಕಾದ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣಕ್ಕೆ ಸಂಪೂರ್ಣ ಒತ್ತು ಕೊಡಬೇಕಿದೆ. ತಾನು ಶಿಕ್ಷಿತಳಾಗಿ ಮತ್ತು ತನ್ನ ಮುಂದಣ ಪೀಳಿಗೆ ಇನ್ನಷ್ಟು ಶಿಕ್ಷಣವಂತವಾಗುವಂತೆ ನೋಡಿಕೊಳ್ಳಬೇಕಾದ್ದು ಇಂದಿನ ಮಹಿಳೆಯ ಆದ್ಯ ಕರ್ತವ್ಯ. ಮಹಿಳಾ ಸಮಾಜವನ್ನು ಸಂಪೂರ್ಣ ಶಿಕ್ಷಣವಂತರನ್ನಾಗಿ ರೂಪಿಸಲು ಪೂರ್ಣ ಪ್ರಮಾಣದಲ್ಲಿ ಮಹಿಳೆಯೇ ತೊಡಗಿಕೊಳ್ಳಬೇಕಿದೆ. ಆ ಮೂಲಕ ಇನ್ನಷ್ಟು ಅವಕಾಶಗಳ ದಾರಿ ಮಾಡಿಕೊಂಡು ತನ್ನ ದುಡಿಯುವ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳಬೇಕಿದೆ. ಹಾಗಾದಲ್ಲಿ ಮತ್ತೊಮ್ಮೆ ಮಾತೃ ಪ್ರಧಾನ ಆಡಳಿತ ವ್ಯವಸ್ಥೆ ಬಂದರೂ ಆಶ್ಚರ್ಯಪಡಬೇಕಿಲ್ಲ.


ಜಗದ ಎಲ್ಲ ಹೆಣ್ಣು ಜೀವಗಳಿಗೂ 'ಮಹಿಳಾ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು...
ಮುಂಬರುವ ಪ್ರತಿ ದಿನವೂ ನಿಮ್ಮ ದಿನವಾಗಲಿ...


ಚಿತ್ರ ಕೃಪೆ : ಅಂತರ್ಜಾಲದಿಂದ...

ವಿ.ಸೂ. : ಈ ಬರಹ ಇ-ವಾರಪತ್ರಿಕೆ "ಪಂಜು"ವಿನ ಮಾರ್ಚ್ 8ನೇ 2013ರ  ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದೆ...
ಕೊಂಡಿ : http://www.panjumagazine.com/?p=1303

Monday, March 4, 2013

ಗೊಂಚಲು - ಅರವತ್ಮೂರು.....

ಆ ಕಪ್ಪು ಹುಡುಗಿಯ ಬಗ್ಗೆ.....



ಕಪ್ಪೆಂದು ಹಳಿಯದಿರಿ
ಅವಳ ಮನದ ಒಪ್ಪವನರಿಯದೆ...
ನನ್ನೆಡೆಗೆ ತುಡಿಯುತಿಹ ಅವಳ ಕಡುಗಪ್ಪು ಕಣ್ಣಲ್ಲಿ
ಒಲವ ಬೆಳದಿಂಗಳಿದೆ...

ಅಂದಿದ್ದೆ ನಾನಂದು -
ನನ್ನೆಲ್ಲ ತಪ್ಪುಗಳ ಮರೆತೊಮ್ಮೆ ನನ್ನೆಡೆಗೆ ನಗುವ ಚೆಲ್ಲು
ನನ್ನ ಸಾವಿಗೂ ಬಣ್ಣ ಬಂದೀತು ನಿನ್ನ ಒಲವಿಂದ...
ನಿನ್ನ ಬದುಕ ಬಣ್ಣವಾಗುವ ಬಯಕೆ ನನ್ನದು 
ಕನಸಲೂ ಸಾವು ಸನಿಹ ಸುಳಿಯದಂತೆ...
ಅಂದದ್ದು ಆ ಕಪ್ಪು ಹುಡುಗಿ...

ನನ್ನ ಮನದ ಕತ್ತಲೆಯನೆಲ್ಲ 
ತನ್ನ ನಗುವ ಕಣ್ಣ ಬೆಳಕಲ್ಲೆ 
ದೂರ ಸರಿಸಿದ್ದು ಆ ಕಪ್ಪು ಹುಡುಗಿ...

ಮುಸ್ಸಂಜೆ ತಂಪಲ್ಲಿ
ಮೌನದ ತೇರಲ್ಲಿ
ಹೊಸ ಬದುಕ ಕನಸಿಗೆ ತೋರಣವ ಕಟ್ಟಿ
ಕಣ್ಣಲ್ಲೆ ಒಲವ ಭಾವಗೀತೆಯ ಹಾಡಿದ್ದು
ಆ ಕಪ್ಪು ಹುಡಿಗಿ...

ಬಡವ ನಾನು ಕೊಡುವುದಿಷ್ಟೇ
ಮುತ್ತಿನುಂಡೆಯ ಭೂರಿ ಭೋಜನ
ನಿತ್ಯ ಅವಳ ಮೃದು ಅಧರಕೆ...
ನಿನ್ನ ತೋಳ್ಬಲೆಯೆ ಇಂದ್ರನೋಲಗವೆಂದು
ತೃಪ್ತ ನಗೆಯಿಂದುಲಿವಳೆನ್ನಯ 
ಆ ಕಪ್ಪು ಹುಡುಗಿ...

ಕಪ್ಪಾದರೂ ಅವಳು
ಕಪ್ಪಲ್ಲ ಅವಳ ಒಲವು...
ನನ್ನ ನಲಿವಲ್ಲಿ ಅವಳ ನಗುವಿದೆ...
ಅವಳ ನಗುವಲ್ಲೆ ನನ್ನ ಉಸಿರಿದೆ...
ಬದುಕ ಹಸಿರಿನ ಹೆಸರು
ಆ ಕಪ್ಪು ಹುಡುಗಿ...

ಚಿತ್ರ ಕೃಪೆ : ಚಿತ್ರಸಂತೆಯಲ್ಲಿ ಸೆರೆಹಿಡಿದ ಚಿತ್ರ...ಕಲೆಗಾರನ ಹೆಸರು ಗೊತ್ತಿಲ್ಲ...ಕಲೆಗಾರನ ಕ್ಷಮೆಕೋರುತ್ತಿದ್ದೇನೆ...

ವಿ.ಸೂ. : ಈ ಬರಹ ಇ-ವಾರಪತ್ರಿಕೆ "ಪಂಜು"ವಿನ ಮಾರ್ಚ್ 4ನೇ 2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ...
ಕೊಂಡಿ : http://www.panjumagazine.com/?p=1178

Saturday, February 16, 2013

ಗೊಂಚಲು - ಅರವತ್ತು ಮತ್ತೆರಡು.....

ಎದೆಯ ಚುಂಬಿಸಿದ ಪ್ರೀತಿ ಗಂಗೆಯ ಗೆಳೆತನ.....

ಉಸಿರಲ್ಲಿ ಬೆರೆತ ಹೆಸರಿಲ್ಲದ ಹುಡುಗೀ -
ಈ ಬಡ ಜೋಗಿಯ ಎದೆ ಜೋಪಡಿಯಲೀಗ
ನಿನ್ನೊಲವ ಕನಸುಗಳ ಗೆಜ್ಜೆಯ ಶ್ರೀಮಂತ ಘಲಿರು...

ಸಣ್ಣ ಮಳೆಯ ಸಂಜೆ,
ತುಟಿ ಉರಿಯುವ ಖಾರದ ಜೋಳ,
ಅರೆಗತ್ತಲ ದಾರಿ,
ಒಬ್ಬಂಟಿ ನಡಿಗೆ ಮತ್ತು ನಿನ್ನ ನೆನಪು...
ನನ್ನಂತರಂಗಕ್ಕೆ ಮಳೆಬಿಲ್ಲ ರಂಗು...
ಈ ಬದುಕೆಷ್ಟು ಸೊಗಸಲ್ಲವಾ...!!!

ಮೊದಲೆಲ್ಲ ಹೀಗಿರಲಿಲ್ಲ ನಾನು. ಶುದ್ಧ ಬಂಡೆಯಂಥ ಮನುಷ್ಯ. ಹಾಗಂತ ಗೆಳೆಯ ಗೆಳತಿಯರಿರಲಿಲ್ಲ ಅಂತಲ್ಲ. ಭಾವ ಬಂಧಗಳಿಗೆ ಸ್ಪಂದಿಸುತ್ತಿರಲಿಲ್ಲ ಅಂತಲೂ ಅಲ್ಲ. ಸ್ನೇಹಿತರ ದೊಡ್ಡ ಹಿಂಡು ನನ್ನ ಸುತ್ತ ಆಗಲೂ, ಈಗಲೂ. ಆದರೆ ವ್ಯತ್ಯಾಸ ತುಂಬಾ ಇದೆ. ಅದು ನಂಗೇ ಕಾಣಿಸ್ತಿದೆ. ನನ್ನ ನಡುವಿನ ಗೆಳೆಯ ಗೆಳತಿಯರೆಲ್ಲ  ಪ್ರೀತಿ, ಪ್ರೇಮ ಅಂತ ಕನವರಿಸುವಾಗಲೆಲ್ಲ ನಕ್ಕುಬಿಡುತ್ತಿದ್ದೆ. ಪ್ರೇಮದಲ್ಲಿ ಸೋತು ಬಂದ ಗೆಳತಿ ನೋವಿನಿಂದ ಅಳುತ್ತಿದ್ದರೆ; ನಿನ್ನದು ಪ್ರೀತಿಯಾಗಿರಲೇ ಇಲ್ಲ ಅಂತ ಉಪದೇಶ ಕೊಟ್ಟಾಗ ಸಿಟ್ಟಿನಿಂದ ನೀನು ಹೃದಯಾನೇ ಇಲ್ಲದ ಪ್ರಾಣಿ ಅಂತ ಬೈದು ಎದ್ದು ಹೋಗಿದ್ದಳು. ಯಾರದೋ ನೋವಿಗೆ ಸ್ಪಂದಿಸುವುದೆಂದರೆ ಅವರೊಂದಿಗೆ ಸೇರಿ ಅಳೋದಲ್ಲ...ಭಾವುಕತೆಗೂ, ಬರೀ ಎಮೋಷನ್ಸ್‌ಗೂ ವ್ಯತ್ಯಾಸವಿದೆ ಅಂತೆಲ್ಲ ಭಾಷಣ ಬಿಗಿಯುತ್ತಿದ್ದವನು ನಾನು...

ಇಂತಹುದೇ ಘಳಿಗೆಯೊಂದರಲ್ಲಿ ನನ್ನ ಬದುಕಿಗೆ ಹೊಸದಾಗಿ ಬಂದು ಸೇರಿ ಹಾಯ್ ಅಂದವಳು ನೀನು... 
ಆ ದಿನ ನಿನ್ನ ಹೆಸರನ್ನೂ ಕೇಳಿರಲಿಲ್ಲ ನಾನು. ಇಂದಿಗೂ ನಿನ್ನ ಹೆಸರು ನಂಗೆ ನಗಣ್ಯವೇ. ನಿನ್ನೊಂದಿಗಿನ ಭಾವವಷ್ಟೇ ಮುಖ್ಯ.

ಮೊದಲ ನೋಟದಲ್ಲೇ ನೀನು ಆಕರ್ಷಿಸಿದವಳೂ ಅಲ್ಲ. ಅಂಥ ಅಪರೂಪದ ಚೆಲುವೆಯೂ ಅಲ್ಲ. ನನ್ನ ಬಾಲಿಶ ಕನಸಿನ ಹುಡುಗಿಯ ಚೆಲುವು ಖಂಡಿತಾ ನಿನ್ನಲಿರಲಿಲ್ಲ. ಸಣ್ಣ ಆಕಾರದ, ಸಾಮಾನ್ಯ ಬಿಳುಪಿನ, ಬೆರಗು ಕಣ್ಗಳ ಹುಡುಗಿ..ನನ್ನ ಸ್ನೇಹದ ಅಡ್ಡಾಕ್ಕೊಂದು ಹೊಸ ಸೇರ್ಪಡೆ ಅಷ್ಟೇ...

ಆದರೆ ಆ ಬೆಳಗು...ಅದು ಬೆಳಗಲ್ಲ... 
ನನ್ನ ಬದುಕು ಪ್ರೀತಿ ಪಾರಿಜಾತದ ಗಂಧ ಹೀರಲು ಹೆಜ್ಜೆ ಎತ್ತಿಟ್ಟ ಮೊದಲ ಘಳಿಗೆ ಅಂತ ಅನ್ನಿಸುತ್ತೆ ಈಗ. ಅಂದೂ ನೀನು ಎಂದಿನಂತೆಯೇ ಬಂದಿದ್ದೆ. ಆದರೆ ಎತ್ತಿಡುವ ಹೆಜ್ಜೆಗಳಲಿ, ಘಲಿರೆನ್ನುವ ಗೆಜ್ಜೆಯಲಿ ಏನೋ ಉತ್ಸಾಹ. ನೇರ ನನ್ನೆಡೆಗೆ ನಡೆದು ಬಂದು ಹಲ್ಲೋ ನಂಗೆ ವಿಷ್ ಮಾಡಲ್ವಾ; ನನ್ನಮ್ಮ ನಂಗೆ ಜನ್ಮ ನೀಡಿದ ಚಂದದ ದಿನ ಇಂದು ಅಂತ ನೇರಾ ನೇರ ನನ್ನ ಕಣ್ಗಳಲ್ಲಿಳಿದಿದ್ದೆ. ನಾನು ಶುಭಕೋರಿದೆನಾ ಗೊತ್ತಿಲ್ಲ. ಆದರೆ ನಿನ್ನ ಕಣ್ಗಳನ್ನ ಹತ್ತಿರದಿಂದ ಕಂಡ ಆ ಕ್ಷಣ ನಾನು ಸಣ್ಣಗೆ ಕಂಪಿಸಿದ್ದೆ. ಆ ಬಟ್ಟಲು ಕಂಗಳಲ್ಲಿನ ಆರೋಗ್ಯವ ಕಂಡು. ಕಣ್ಣು ಮನಸಿನ ಕನ್ನಡಿ ಅಂತ ಪ್ರಾಮಾಣಿಕವಾಗಿ ನಂಬ್ತೇನೆ. ಕಣ್ಗಳಲ್ಲಿ ಅಷ್ಟೆಲ್ಲ ಆರೋಗ್ಯ ಇದ್ದರೆ ಮನಸಲ್ಲೂ ಇರಲೇಬೇಕಲ್ಲವಾ...ಅಷ್ಟೇ..
ಮೊದಲಬಾರಿಗೆ ನಾನಾಗಿ ನಾನು ಒಂದು ಹೆಣ್ಣು ಜೀವದ ಗೆಳೆತನಾನ ಬಯಸಿ ನಿನ್ನೆಡೆಗೆ ಕೈಚಾಚಿದ್ದೆ. ಅಲ್ಲಿಂದ ಮುಂದೆ ನಿನ್ನೊಡನೆಯ ಪ್ರತಿ ಹೆಜ್ಜೆಯಲ್ಲೂ ನಿನ್ನ ಸ್ವಚ್ಛ ಮನದ ಆರೋಗ್ಯ ನಂಗೆ ಅನುಭವಕ್ಕೆ ಬರ್ತಾ ಹೋಯ್ತು. ನನಗೇ ಅರಿವಿಲ್ಲದೇ ನಂಗೆ ಪ್ರೇಮಕಥೆಗಳು ಇಷ್ಟವಾಗುತ್ತಾ ಹೋದವು.. ನಾನು ಇಷ್ಟಿಷ್ಟೇ ಮೃದುವಾಗುತ್ತಾ ಹೋದೆ..ಮನಸ್ಸಿಂದ, ಭಾವಗಳಿಂದ...ಯಾವ ಘಳಿಗೇಲಿ ಮನಸು ಪೂರಾ ಪೂರಾ ನಿನ್ನ ಮಡಿಲ ಮಗುವಾಗಿ ಹೋಯ್ತೋ ಗೊತ್ತಿಲ್ಲ. ಅಂತೂ ನಾನು ಪೂರ್ತಿ ನೀನೇ ಆಗಿ ಹೋದೆ...

ಯಾರ ದೊಡ್ಡಸ್ತಿಕೇನೂ ಸಹಿಸದ ನಾನು ಸುಮ್ ಸುಮ್ನೇ ನಿನ್ನೆದುರು ಕಬೋಜಿಯಾಗ್ತೇನೆ. ನೀನು ಒಮ್ಮೊಮ್ಮೆ ಅಮ್ಮನಂತೆ, ಇನ್ನೊಮ್ಮೆ ರಚ್ಚೆ ಹಿಡಿವ ತಂಗಿಯಂತೆ, ಮಗದೊಮ್ಮೆ ಪ್ರೀತಿಯಿಂದ ಕಿವಿ ಹಿಂಡೋ ಕನ್ನಡಶಾಲೆಯ ಅಕ್ಕೋರಂತೆ ಕಂಡುಬಂದು ನನ್ನಲ್ಲಿ ಖುಷಿಯುಕ್ಕಿಸುತ್ತೀಯಾ.. ಹಾಗಾಗಿ ನಾನೊಬ್ಬನೇ ಇರುವಾಗ ಕೂಡ ನನ್ನಷ್ಟಕ್ಕೇ ನಗುತ್ತಿರುತ್ತೇನೆ ಹಿತವಾಗಿ.. ಸೋಲೆಂದರೆ ಸಿಟ್ಟಿಗೇಳುವ ನಾನು ನಿನ್ನೆದುರು ನಗುನಗುತ್ತ ಮಂಡಿಯೂರುತ್ತೇನೆ. 
ಯಾಕೆ ಹಿಂಗೆಲ್ಲ ಆಗುತ್ತೆ ಅಂತ ಅಮ್ಮನ್ನ ಕೇಳಿದೆ. ಈ ಬದುಕಿನ ಮೊದಲ ಗೆಳತಿ ಅವಳು...ಅಯ್ಯೋ ಮರುಳಾ ಪ್ರೀತಿಯಾಗಿದೆ ಕಣೋ ಅಂತ ತಲೆ ತಟ್ಟಿದಳು.. ಇಷ್ಟು ದಿನಕ್ಕೆ ಒಂದು ಪ್ರೀತಿಯುಕ್ಕೋ ಕೆಲಸ ಮಾಡಿದೀಯಾ ಕಣೋ.. ಅಂತ ಅಪರಂಜಿಯಂಥ ಹುಡುಗಿಗೆ ಸೋತಿದೀಯಲ್ಲಾ ಅಷ್ಟು ಸಾಕು ಅಂದು ಬಿಟ್ಟಳು... ಯಾಕೋ ನಿನ್ನ ಬಗ್ಗೆ ಅಸೂಯೆ ಆಯ್ತು. ನನ್ನಮ್ಮನ ಪ್ರೀತೀನೂ ಗೆದ್ದುಬಿಟ್ಟೆಯಲ್ಲೇ ಕೂಸೇ..
ನಿನ್ನ ಜೊತೆಗಿದ್ದರೆ ನಂಗ್ಯಾಕೆ ಇಷ್ಟೊಂದು ಖುಷಿಯಾಗುತ್ತೆ.? ನಿನ್ನನ್ಯಾಕೆ ನಾನು ಇಷ್ಟೊಂದು ಹಚ್ಚಿಕೊಂಡಿದ್ದೇನೆ.?? ನಿನ್ನ ಜೊತೆಗಿರ್ತಾ ಇರ್ತಾ ನನಗೇ ನಾನು ಇನ್ನಷ್ಟು ಸ್ಪಷ್ಟವಾದಂತ ಭಾವ ನನ್ನಲ್ಯಾಕೆ.??? ನಿನ್ನ ಕಣ್ಣ ಕೊಳದಲ್ಲಿ ಮೀಯುತ್ತ ನನ್ನ ನಾನೇಕೆ ಕಳೆದುಕೊಳ್ಳುತ್ತೇನೆ.???? ಅಂತೆಲ್ಲ ಕೇಳಿದ್ದು ನೀನು.
ಯಾಕೇಂದ್ರೆ ನೀನು ನನ್ನ ಪ್ರೀತಿಸ್ತಿದೀಯಾ ಅದಿಕ್ಕೆ ಅಂದರೆ ನಾನು; ಏ ಇರ್ಲಿಕ್ಕಿಲ್ಲ ಕಣೋ ನಾನಿನ್ನೂ ಪ್ರೇಮ, ಮದುವೆ, ಸಂಸಾರಗಳ ಬಗ್ಗೆ ಯೋಚಿಸಿಲ್ಲ ಅಂದಿದ್ದೆ ನೀನು.
ಅಲ್ಲಾ ಕಣೇ ಎಲ್ಲಾರೂ ಮಾಡೋ ತಪ್ಪೇ ಇದು. ಪ್ರೀತಿಸಿದೆ ಅಂದ್ರೆ - ಇಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಂಡು, ಒಂದಷ್ಟು ಮರ ಸುತ್ತಿ, ಮನೆಯವರನೆಲ್ಲ ಒಪ್ಪಿಸಿಯೋ  - ಎದುರಿಸಿಯೋ ಮದುವೆಯಾಗಿ, ಸಂಸಾರ ಹೂಡಿ, ಮಕ್ಕಳನ್ನು ಹೆತ್ತು, ಅವರನ್ನು ಬೆಳೆಸಿ, ಅವರಿಗಾಗಿ ಗಳಿಸಿ, ಉಳಿಸಿ, ಒಂದಿನ ಎಲ್ಲರಂತೆ ಸತ್ತುಹೋಗೋದು ಅಂದ್ಕೊಂಬಿಡೋದು..ಪ್ರೀತಿ ಅದಲ್ಲ... ಪ್ರೀತಿ ಬಾವಿಯಲ್ಲ  ಕಣೇ ನದಿ..ಪ್ರೀತಿಗೆ ಚೌಕಟ್ಟು ಹಾಕಿದ ಕ್ಷಣ ಅಷ್ಟರಮಟ್ಟಿಗೆ ಪ್ರೀತಿ ಸತ್ತಂತೆ. ಪ್ರೇಮಕ್ಕೆ ಚೌಕಟ್ಟು ಕಟ್ಟಿದಾಗ ಪ್ರೇಮವೂ ಸ್ವಾರ್ಥವೇ. ಪ್ರೀತಿ ಇಬ್ಬರನ್ನೂ ಬೆಳೆಸಬೇಕು. ಇಬ್ಬರ ಸುತ್ತಣ ಬದುಕುಗಳನ್ನೂ ಬೆಳಗಿಸಬೇಕು... ಅರಳಿಸಬೇಕು.. ಸಂಭ್ರಮಿಸಬೇಕು... ಮದುವೆ, ಸಂಸಾರಗಳೆಲ್ಲ ಪ್ರೀತಿಯನ್ನು ವ್ಯಕ್ತಪಡಿಸೋ, ಹಂಚಿತಿನ್ನೋ ಸಾಮಾನ್ಯ ಮಾಧ್ಯಮವಾಗಬೇಕು... ಮದುವೆ, ಸಂಸಾರಗಳೇ ಪ್ರೀತಿ ಅಲ್ಲ. ಪ್ರೀತಿ ಅದಿಲ್ಲದೆಯೂ ಉಳಿಯಬೇಕು...ನಲಿಯಬೇಕು...ನದಿ ಸುಮ್ಮನೆ ತನ್ನ ಪಾಡಿಗೆ ತಾನು ಹರಿಯುತ್ತಿರುತ್ತೆ.. ಅದರ ಇಕ್ಕೆಲಗಳಲ್ಲಿ ನಾಗರೀಕತೆ ತಂತಾನೇ ಚಿಗುರುತ್ತಿರುತ್ತೆ. ಅವುಗಳ ಜತೆಗಿದ್ದೂ ಅವುಗಳ ಹಂಗಿಲ್ಲದೇ ನದಿ ಹರಿಯುತ್ತಲೇ ಇರುತ್ತೆ. ಅದಕ್ಕೇ ಪ್ರೀತಿ ಜೀವ ಉಳಿಸೋ ಗಂಗೆ...ಪ್ರೀತಿ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವ ಕೈಹಿಡಿದ ಗೆಳೆತನ ಅಂದದ್ದು ನಾನು...ನಾ ಅಂದಂತೆ ಬದುಕಿ ತೋರುತ್ತಿರುವುದು ನೀನು...
ಹೀಗೆಲ್ಲ ಯೋಚಿಸುತ್ತಲೇ, ಮಾತಾಡುತ್ತಲೇ ನನ್ನನ್ನು ನಾನು ಮತ್ತು ನನ್ನ ಬದುಕನ್ನು ನಾನು ಇನ್ನಷ್ಟು ಪ್ರೀತಿಸಿಕೊಳ್ಳುವಂತೆ,  ಜೀವದ್ರವ್ಯ ಬತ್ತಿದ ಮೇಲೂ ಹಾರು ಹಕ್ಕಿಯ ವಿಶ್ರಾಂತಿಗೆ - ತಬ್ಬಿ ಬೆಳೆವ ಲತೆಯ ಬದುಕಿಗೆ ಆಸರೆಯನೀವ ಒಣಮರದ ನಿಸ್ವಾರ್ಥ ಒಲವ ಒರತೆ ನನ್ನಲ್ಲೂ ಒಂದಿಷ್ಟು ಒಸರಿದ್ದರೆ ಅಂತ ಬಯಸುವಂತೆ ಮಾಡಿದ್ದು ನಿನ್ನ ಗೆಳೆತನ.

ನಾನೂ ನಿನ್ನನ್ನು ತುಂಬಾನೇ ಪ್ರೀತಿಸಿದೆ. ಹಾಗಾಗಿ ಬದುಕಿಂದು ಸಂಭ್ರಮಿಸುತ್ತಿದೆ. ಅಮ್ಮ ಇನ್ನಷ್ಟು ಹತ್ತಿರವಾಗ್ತಿದಾಳೆ. ಬೀದಿಯ ಮಕ್ಕಳೆಲ್ಲ ಅದ್ಭುತ ಗೆಳೆಯರು.. ಪ್ರೀತಿಯ ಚಂದಿರ ಇನ್ನಷ್ಟು ಬೆಳಗುತ್ತಿದ್ದಾನೆ..ಮನೆ ಮುಂದಿನ ಕೈತೋಟದಲ್ಲಿ ಹೂಗಳ ಬಣ್ಣದೋಕುಳಿ..

ನಾನೆಷ್ಟೇ ನೂಕಿದರೂ ನನ್ನೆಡೆಗೆ ನುಗ್ಗಿ ಬರುವ ನಿನ್ನೊಲವ ಅಲೆಗಳ ತೊನೆತಕ್ಕೆ ಸಿಕ್ಕಿ ನಾ ಕಟ್ಟಿಕೊಂಡ ನನ್ನಹಂಕಾರವೆಂಬ ಮರಳ ಮಹಲು ಕರಗಿ ಹೋಗಿ ಈಗಿಲ್ಲಿ, ಎನ್ನೆದೆಯ ದಂಡೆಯಲಿ ಪ್ರೀತಿ ಕಪ್ಪೆಚಿಪ್ಪು ಗರ್ಭಧರಿಸಿದೆ...


ಸಾಗರನ ಮರಳ ದಂಡೆಯ ಮೇಲೆ  ನಿನ್ನೆದೆಯ ಬಿಸುಪು ನನ್ನೆದೆಯ ರೋಮವ ತಾಕಿ, ಕಣ್ಣು ಕಣ್ಣು ಸೇರಿ ಪ್ರೀತಿ ಆಳ ಹುಡುಕುತಿರಲು, ಜೇನಿನಾಸೆಗೆ ತುಟಿಗಳು ಹಂಬಲಿಸಿ ಸನಿಹ ಸರಿಯುತಿರೆ, ಬಾನ ಭಾಸ್ಕರ ನಮ್ಮ ಏಕಾಂತದ ಹಿತವಾದ ಉನ್ಮಾದಕೆ ತಾನಡ್ಡಿಯಾಗದಿರಲೆಂದು ವಸುಧೆಯ ಸೆರಗ ಮರೆಯ ಹುಡುಕುತಿದ್ದಂತೆ ಮತ್ತೆ ಮತ್ತೆ ಕನಸಾಗುತ್ತಿದೆ ಈಗೀಗ...

ಯಾವುದೋ ದಾರಿಯಲಿ, ನೀರವ ಮೌನದಲಿ ಒಬ್ಬಂಟಿ ನಡೆಯುತಿದ್ದೆ...ಆಗಸದ ಚಂದಿರನೂ ನನ್ನೊಡನೆ ಹೆಜ್ಜೆ ಹಾಕುವವನಂತೆ ನನ್ನ ಮೇಲುಗಡೇಲೇ ನಡೀತಿದ್ದ ಬಾನ ದಾರಿಯಲ್ಲಿ. ಮನಸಿಗೇನೋ ಪುಳಕ. ಚಂದಿರನೆಂದರೆ ನನಗ್ಯಾಕಿಷ್ಟೊಂದು ಇಷ್ಟವಾಗುತಿದ್ದಾನೆ ಈಗೀಗ..? ಆತ ನಿನ್ನನೇ ಹೋಲುತ್ತಾನೆಂದಾ...

ಹೀಗೆ ನಮ್ಮಿಬ್ಬರ ಬದುಕಲ್ಲೂ ಒಂದು ಪ್ರೀತಿ ಅರಳಿ ನಿಂತಿದೆ ಮತ್ತು ನಾವಿಬ್ಬರೂ ಅರಳಿ ನಿಂತ ಪ್ರೀತಿಯ ತೋಟದಲ್ಲಿ ಸಂಭ್ರಮಿಸುತ್ತಿದ್ದೇವೆ. ಒಟ್ಟಿಗೆ ಬಾಳುವ ಮಾತಾಡದೇ, ಮನಸಲ್ಲೇ ಮನೆ ಕಟ್ಟಿಕೊಂಡು, ಅದನ್ನು ಚಂದಗೆ ಶೃಂಗರಿಸಿಕೊಂಡು ಅಲ್ಲಿ ಒಟ್ಟಿಗೇ ಬದುಕುತ್ತಿದ್ದೇವೆ. 
ಕನಸುಗಳಿಗೆ ಹೊಸ ಬಣ್ಣ ತುಂಬಿದ ಗೆಳತೀ - ಎಂಥ ಸೊಗಸಿದೆಯಲ್ಲವಾ ಈ ಪ್ರೀತಿಯಿಂದ ಬದುಕಿಗೆ..


ಇಂತಿ -   
                                                             ಪ್ರೀತಿ ಲೋಕದ ಬಡ ಜೋಗಿ...

ಚಿತ್ರ ಕೃಪೆ : ಅಂತರ್ಜಾಲ...

Tuesday, February 12, 2013

ಗೊಂಚಲು - ಹತ್ತು x ಆರು + ಒಂದು.....

ಅಗಾಧ ಬದುಕು - ನಿಗೂಢ ಸಾವು
ಅಳುವ ಮನಸು.....

ಕಣ್ಣಲ್ಲಿ ಸಾವಿರ ಕನಸುಗಳ ಮತಾಪು...
ಬೆನ್ನಲ್ಲಿ ಈಡೇರಿಸಿಕೊಳ್ಳಲಾಗದ ಅಸಹಾಯಕತೆಯ ನಡುಕ...

ಬಣ್ಣ ಬಣ್ಣದ ಕತ್ತಲು...
ಭವಿಷ್ಯವನ್ನು ತೋರಲಾರದ ಬೆಳಕು...
ನಮ್ಮೆಲ್ಲ ಪ್ರಯತ್ನವನ್ನೂ ಮೀರಿ ಒಮ್ಮೆಲೇ ಧುತ್ತನೆ ಎದುರಾಗಿ ಕಾಡುವ ಹತಾಶೆ...

ಮನುಷ್ಯನ್ನು ಸಾವು ಮತ್ತು ಸೋಲುಗಳು ಕಂಗೆಡಿಸಿದಷ್ಟು ಮತ್ಯಾವ ವಿಷಯಗಳೂ ಕಂಗೆಡಿಸಲಾರವೇನೋ. 
ಸಾವನ್ನಾದರೂ ಒಪ್ಪಿಕೊಂಡು ಬಿಡಬಹುದು. 
ಏಕೆಂದರೆ ಅದು ಸಾರ್ವಕಾಲಿಕ ಮತ್ತು ಸರ್ವವಿಧಿತ ಸತ್ಯ. 
ಆದರೆ ಸೋಲುಗಳು - 
ಮನುಷ್ಯನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಎರಡೂ ವಿಧಗಳಲ್ಲೂ ಹಣ್ಣಾಗಿಸುವ ವಿಚಾರವೆಂದರೆ ಸೋಲುಗಳು. 
ಅವು ಸತತ ಹಾಗೂ ನಿರಂತರವಾಗಿದ್ದರಂತೂ ಆ ವ್ಯಕ್ತಿ ಇದ್ದೂ ಸತ್ತಂತಿರುತ್ತಾನೆ. 
ಅದು ಸೋಲಿನ ತಾಕತ್ತು.
ಮತ್ತೆ ಈ ಕಷ್ಟಗಳೂ ಹಾಗೇ ತುಂಬಾ ಒಗ್ಗಟ್ಟು ಪ್ರದರ್ಶಿಸುತ್ತವೆ.
ಯಾವತ್ತೂ ಅವು ಒಂದರೊಡನೊಂದು ಕೂಡಿಕೊಂಡೇ ಬಂದು ಅಮರಿಕೊಳ್ಳುತ್ತವೆ.
  
ಕೆಲವೇ ಕೆಲವು ಸೋಲುಗಳಿರುತ್ತವೆ ಆನಂದವನ್ನೀಯುವಂಥವು. 
ಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯಗಳೆದುರಿನ ಸೋಲುಗಳು. 
ಭಿನ್ನ ಲಿಂಗದ ಪ್ರೇಮಕ್ಕೆ ಸೋತ ವ್ಯಕ್ತಿ  ಆ ಸೋಲಿನಲ್ಲೂ ಆನಂದವನ್ನು ಕಾಣ್ತಾನೆ. 
ಆದ್ರೆ ಯಾವ ಕ್ಷಣದಲ್ಲೇ ಆಗ್ಲಿ ಆ ಪ್ರೇಮ ವಿಫಲವಾದರೆ ಆ ವೈಫಲ್ಯವನ್ನಾತ ತನ್ನ ವ್ಯಕ್ತಿತ್ವದ ಸೋಲು ಅಂದ್ಕೋತಾನೆ. 
ಹಾಗಂದುಕೊಂಡ ವ್ಯಕ್ತಿಯ ಬದುಕು ನರಕ. 
ಕನಿಷ್ಠ ಪಕ್ಷ ಆ ಪ್ರೇಮ ವೈಫಲ್ಯದ ಬಿಸಿಯನ್ನು ಬದುಕು ತಣಿಸುವ ತನಕ.

ಸೋಲು ನಮ್ಮನ್ನು ಒಮ್ಮೊಮ್ಮೆ ಹಣಿದು ಹಣ್ಣಾಗಿಸಿ - ಸೋಲಿರುವಲ್ಲೇ ನಾವು ಹೆಜ್ಜೆ ಇಡ್ತೀವೋ ಅಥವಾ ಸೋಲೇ ನಾವು ಹೆಜ್ಜೆ ಇಡುವಲ್ಲೆಲ್ಲ ಬಂದು ಕುಳಿತಿರುತ್ತೋ ಎಂದು ಅರ್ಥವಾಗದಂಥ ಸ್ಥಿತಿಗೆ ತಂದು ನಿಲ್ಲಿಸಿ ಕಂಗೆಡಿಸುವುದು ನಿಜವೇ ಆದರೂ ಯಾವ ಸೋಲೂ ಶಾಶ್ವತವೇನಲ್ಲ. 
ಸೋಲು ನಾವು ಸ್ವೀಕರಿಸಿದಂತೆ - 
ಪತನ ಅಂದುಕೊಂಡರೆ ನಾವು ಜೀವಂತ ಹೆಣ. 
ಗೆಲುವಿನ ದಾರಿಯಲ್ಲಿನ ಹೊಸ ಅನುಭವ ಅಂದುಕೊಂಡರೆ ನಿಧಾನವಾಗಿಯಾದರೂ ನಮ್ಮ ಆಟದ ಅಂಗಳ ಗಗನ. 
ಸೋಲಿನ ಕೈಯಳತೆಯಲ್ಲೇ ಗೆಲುವಿನ ಕಣ್ಣಾಮುಚ್ಚಾಲೆ. 
ಅದನ್ನರಿತುಕೊಂಡು ಸೋಲುಗಳನೆಲ್ಲ ಮಣಿಸಿ ಗೆಲುವಾಗಿಸಿಕೊಂಬ ಸಹನೆ ಮತ್ತು ಛಲ ನಮಗಿರಬೇಕಷ್ಟೇ. 
ಬಾಹ್ಯವಾಗಿ ಎಂಥ ಸೋಲೇ ಎದುರಾದರೂ ಮನಸನ್ನು ಸೋಲಗೊಡದಂತೆ ಎಚ್ಚರವಹಿಸಿ  ಅಲ್ಲಿಂದಲೇ ಹೊಸ ಸ್ಫೂರ್ತಿ ಪಡಕೊಂಡು ಮತ್ತೆ ಯುದ್ಧಕ್ಕೆ ಹೊರಡುವ ತಾಕತ್ತು ಬೆಳೆಸಿಕೊಳ್ಳಬೇಕಷ್ಟೇ. 
ಸೋಲು ತರುವ ನೋವನ್ನು ಬಾಗಿಲಾಚೆಯೆ ನಿಲ್ಲಿಸಿ - ಆ ಪಯಣದುದ್ದಕ್ಕೂ ದಾರಿಯಲ್ಲಿ ಸಿಕ್ಕ ಅನುಭವಜನ್ಯ ಪಾಠವನ್ನಷ್ಟೇ ಒಳಗೆಳೆದುಕೊಳ್ಳುವ ಜಾಣ್ಮೆ ಗಳಿಸಿಕೊಳ್ಳಬೇಕಷ್ಟೇ. 
ಸೋಲುಗಳ ಮರುಭೂಮಿಯ ನಡುವೆ ನಿಂತು ಗೆಲುವುಗಳ ಜಲಪಾತದ ಅಪೇಕ್ಷೆ ಪಡದೇ - ಆ ಮರುಭೂಮಿಯ ಮಧ್ಯೆಯೇ ಅಲ್ಲಲ್ಲಿ ಸಿಗುವ ಹೊಸ ಹೊಸ ಅನುಭವಗಳೆಂಬ ಓಯಸ್ಸಿಸ್ಸಿನಿಂದಲೇ ಮನದಲ್ಲಿ ಭರವಸೆಯ ಖರ್ಜೂರದ ಗಿಡ ನೆಟ್ಟು ಹೊಸ ಕನಸಿಗಾಗಿ ಆತ್ಮಬಲವ ವೃದ್ಧಿಸಿಕೊಳ್ಳಬೇಕಿದೆ.
ಆಗ ಮುಂದಾದರೂ ಗೆಲುವಿನ ನಿತ್ಯಹರಿದ್ವರ್ಣ ದಕ್ಕೀತು.
ಗೆಲುವಿನ ಜಲಪಾತದಡಿಯಲಿ ನಿಂತು ಮೀಯುವ ಕನಸ ಕಣ್ಣಲ್ಲಿಟ್ಟುಕೊಂಡು - ಅದು ಕೈಗೂಡುವವರೆಗೆ ಪುಟ್ಟ ಕಲ್ಯಾಣಿಯಲ್ಲೇ ಮೀಯುತ್ತ - ಮೀನುಗಳೊಂದಿಗೆ ಆಟವಾಡುತ್ತ - ಈ ಕ್ಷಣವನ್ನು ಇದ್ದದ್ದು ಇದ್ದ ಹಾಗೇ ಅನುಭವಿಸ್ತಾ ಖುಷಿಯಾಗಿರಬಲ್ಲೆವಾದರೆ ಅದಕಿಂತ ದೊಡ್ಡ ಮಾನಸಿಕ ಗೆಲುವು ಇನ್ನೇನಿದೆ...
ಒಂದು ಸೋಲು ಹೊಸ ಹತ್ತು ಗೆಲುವುಗಳಿಗೆ ನಾಂದಿ ಹಾಡಬೇಕು.

ಬದುಕಿಗಾಗಿ - ಗೆಲುವಿಗಾಗಿ ಹೋರಾಡುವ ಮಾತು ಬಂದಾಗಲೆಲ್ಲ ನಂಗೆ ಜೇಡರ ಹುಳ ನೆನಪಾಗುತ್ತೆ. 
ಆ ಪುಟ್ಟ ಜೇಡರ ಹುಳದ ಪ್ರಯತ್ನಶೀಲತೆ ನನ್ನಲ್ಲಿ ಅಚ್ಚರಿ ಮೂಡಿಸುತ್ತೆ.
ಆಗಷ್ಟೇ ಬಲೆ ಹೆಣೆದು ಮುಗಿಸಿ ಬಲೆಗೆ ಬೀಳುವ ಆಹಾರಕ್ಕಾಗಿ ಕಾಯುತ್ತ ಕೂತರೆ ಅಷ್ಟರಲ್ಲಾಗಲೇ ಯಾರೋ ಶತ್ರು ಆ ಬಲೆಯನ್ನು ತುಂಡರಿಸಿರ್ತಾನೆ.
ಆಗ ಮತ್ತೆ ಓಂಕಾರದಿಂದ ಪ್ರಾರಂಭಿಸಬೇಕು. 
ಅದೂ ಹಸಿದ ಹೊಟ್ಟೆಯಲ್ಲಿ. 
ಆದ್ರೂ ಅದು ಕಂಗೆಡದೇ ಮತ್ತೆ ಮತ್ತೆ ಬಲೆ ನೇಯುತ್ತಲೇ ಇರುವ ಪರಿಯಿದೆಯಲ್ಲ ಅದು ಆ ಚಿಕ್ಕ ಜೀವದ ಪ್ರಯತ್ನಶೀಲತೆ, ಸಹನೆ, ಬದುಕಲೇಬೇಕೆಂಬ ಛಲ ಇವಕ್ಕೆಲ್ಲ ಸ್ಪಷ್ಟ ನಿದರ್ಶನ.
ಆ ಪುಟ್ಟ ಹುಳದ ಆಶಾಭಾವ ಪ್ರಕೃತಿಯ ಬಲಿಷ್ಠ ಕೃತಿ ಅನ್ನಿಸಿಕೊಂಡ ನಮ್ಮಲ್ಲೇಕಿಲ್ಲ. 
ಸೋಲಿಗೆ ಯಾಕಿಷ್ಟು ಕಂಗೆಡುತ್ತೇವೆ.

ನಮಗೆಲ್ಲ ಗೊತ್ತು - 
ಬದುಕಿನ ಅಗಾಧತೆಗೆ ಈ ಎಲ್ಲ ಸೋಲು ವೈಫಲ್ಯಗಳನ್ನೂ, ಅವುಗಳಿಂದ ಜೊತೆಯಾದ ನೋವುಗಳನ್ನೂ ಮರೆಸಿಬಿಡುವ, ಅಳಿಸಿಹಾಕುವ ದಿವ್ಯ ತಾಕತ್ತಿದೆ. 
ಹಾಗಂತಲೇ ಬದುಕಬೇಕೆಂಬ ಸಣ್ಣ ಆಸೆ ಇದ್ದರೂ ಸಾಕು ನಿರಾಸೆಯ ಕೂಪದಲ್ಲಿ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿ ಕೂಡ ಕ್ರಮೇಣ ಎದ್ದು ನಿಲ್ಲಬಲ್ಲ, ಚೇತರಿಸಿಕೊಳ್ಳಬಲ್ಲ. 
ಮತ್ತೆ ಬದುಕ ಕಟ್ಟಿಕೊಂಡು ನಗಬಲ್ಲ. 
ಬದುಕಿನ ಅಗಾಧತೆಗೆ ಅಂಥ ತಾಕತ್ತಿರೋದರಿಂದಲೇ ಪ್ರಾಜ್ಞರು ಬದುಕನ್ನು ಸಾಗರಕ್ಕೆ ಹೋಲಿಸಿದ್ದಾರೆ. 
ಉಕ್ಕಿ ಹರಿವ ನೂರಾರು ನದಿಗಳನ್ನು ತನ್ನಲ್ಲಡಗಿಸಿಕೊಂಡೂ ಕಡಲು ತನ್ನ ಸಮತೋಲನವನ್ನು ಕಾದಿಟ್ಟುಕೊಳ್ಳುವ ಪರಿ ಅಗಾಧ. 
ಎಲ್ಲೆಲ್ಲಿಂದಲೋ ಹರಿದು ಬರುವ ಬೇರೆ ಬೇರೆ ರುಚಿ ಬಣ್ಣಗಳ ನದಿಗಳನೆಲ್ಲ ತನ್ನೊಳಗೆ ಹೀರಿಕೊಂಡು, ತನಗೆ ಬೇಕಾದಂತೆ ಬದಲಿಸಿ ಒಂದೇ ತೆರನಾಗಿಸಿಕೊಂಡು ಗಂಭೀರವಾಗಿ ತೊನೆಯುವ ಶರಧಿಯ ವೈಶಾಲ್ಯವನ್ನು ಬದುಕಿಗೆ ಹೋಲಿಸಿದ್ದು ಎಂಥ ಸಮಂಜಸ ಅಲ್ವಾ...
ಯಾವ್ಯಾವ ಕಡೆಯಿಂದಲೋ ಹ್ಯಾಗ್ಯಾಗೋ ಮುತ್ತಿ ಬರುವ ನೋವು ನಲಿವುಗಳನ್ನೂ ನುಂಗಿಕೊಂಡು ಇಂದಿನ ನೋವು ನಲಿವುಗಳನೆಲ್ಲ ನಾಳೆಗೆ ಕೇವಲ ನೆನಪು ಮಾತ್ರವಾಗಿ ಪರಿವರ್ತಿಸಿ ನಮ್ಮ ನಾಳೆಗಳನ್ನು ಸಹನೀಯವಾಗಿಸಬಲ್ಲ ಸಾಮರ್ಥ್ಯ ಬದುಕಿನ ಅಗಾಧತೆಗಿದೆ. 
ಹಾಗಿರೋದಕ್ಕೇ ಯಾರ ಬದುಕೂ ಬದುಕಲಾರದಷ್ಟು ನಿಕೃಷ್ಟವಲ್ಲ ಎಂಬ ಮಾತಿಗೆ ಬೆಲೆ ಬಂದಿದೆ. 
ಇಂದಿನ ನೋವು, ನಲಿವು - ನಾಳೆಗೆ ಅದು ಬರೀ ನೆನಪು. 
ನೋವಿನದಿರಲಿ ನಲಿವಿನದಿರಲಿ ನೆನಪು ಮೂಡಿಸುವುದು ನಗುವನ್ನೇ.

ಇನ್ನು ಬದುಕಿನ ಅಗಾಧತೆಯನ್ನು ಕೂಡ ಅಳಿಸಿಬಿಡುವ ತಾಕತ್ತಿರೋದು ಸಾವಿಗೆ. 
ಸಾವು ಬಿಡಿ. 
ಅದಕ್ಕೆ ಈ ಬದುಕನ್ನೇನು ಈ ಭುವಿಯಲ್ಲಿ ನಮ್ಮದೊಂದು ಕುರುಹನ್ನೂ ಇಲ್ಲದಂತಾಗಿಸಿಬಿಡುವ ತಾಕತ್ತಿದೆ. 
ಸಾವಿನ ನಿಗೂಢತೆ ಬದುಕಿನ ಅಗಾಧತೆಗಿಂತ ಮಿಗಿಲು.
ಯಾವಾಗ..?
ಎಲ್ಲಿ.??
ಯಾವ ರೀತಿ.???
ಎಂಬಂಥ ಯಾವ ಮಾಹಿತಿಯನ್ನೂ ನೀಡದೇ ದಿಢೀರೆಂದು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಎದುರಾಗಿ ಬಿಡಬಲ್ಲ ಸಾವಿನ ಬಗೆಗೆ ಮಾತಾಡದಿರುವುದೇ ಲೇಸು.
ಸಾವು ಉಳಿಸಬಹುದಾದದ್ದು ವಿಷಾದ ಮಾತ್ರ.
ಉಳಿದವರ ಮನದಲ್ಲಿ - ಅಳಿದವರ ಬಗೆಗೆ...

ಇಷ್ಟೆಲ್ಲ ತಿಳಿದ ಮೇಲೂ
ಪ್ರಜ್ಞೆಯ ಆಳದಿಂದ
ನಿನ್ನೆ ಸತ್ತ ಕನಸಿನ ಘೋರಿಯ ಮೇಲೆಯೇ
ನಾಳೆ ಹೊಸದೊಂದು ಕನಸಿನ ಹಸಿರು ಚಿಗುರೀತು ಎಂಬ ಭರವಸೆ ಮೂಡಿ ನಿಲ್ಲುತ್ತಿದ್ದರೂ...
ಥೂ -
ಹಾಳಾದ ಈ ಮನಸ್ಯಾಕೆ ಹೀಗೆ...
ಸಿಕ್ಕ ಖುಷಿಗಳ ನೆನೆದು ನಗುತ ಹಾಯಾಗಿರುವುದ ಬಿಟ್ಟು...
ಒಂದ್ಯಾವುದೋ ಕನಸಿನ ಸಾವಿಗೆ...
ಅನುಭವಿಸಿದ ಪುಟ್ಟ ನೋವಿಗೆ ಜೋತು ಬಿದ್ದು ಸದಾ ಕೊರಗುತ್ತಿರುತ್ತದೆ...
ಏನದಕ್ಕೆ ಅಳುವೆಂದರೆ ಆ ಪರಿ ಖುಷಿಯೋ...!!!

ವಿ.ಸೂ : ಈ ಬರಹ ಈ-ಪತ್ರಿಕೆ 'ಪಂಜು'ವಿನ ದಿನಾಂಕ 11-02-2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪಂಜು ಪತ್ರಿಕೆಯ ಕೊಂಡಿ ಇಂತಿದೆ... http://www.panjumagazine.com/?p=650 

Thursday, February 7, 2013

ಗೊಂಚಲು - ಅರವತ್ತು.....

ಅವಳ ಮಡಿಲ ಕಂಪಲ್ಲಿ ಜಗವ ಮರೆವ ತಂಪು...
ಎಲ್ಲ ಹೋಲಿಕೆಗಳಿಗೂ ಮೀರಿದ, ಕರುಳಿಂದ ಬೆಸೆದ ಬಂಧ ...
ಅಮ್ಮ ಅಂದರೆ ಅಮ್ಮ ಅಷ್ಟೇ.....
ಈ ಚೆಲುವೆಯ ಮನದ ಮುಗುಳ್ನಗೆಯು ಎನ್ನಾತ್ಮಶಕ್ತಿಯ ಮೂಲ ಸೆಲೆ... 

ಇಂದು - 07/02/2013
ನಾ ನಕ್ಕಾಗ ಸಂಭ್ರಮಿಸಿ...
ನನ್ನ ನೋವಲ್ಲಿ ಕಣ್ಣ ಹನಿ ಹರಿಸಿ...
ತನ್ನ ನೋವ ಮರೆತು ನನ್ನ ನಗಿಸಿ ಆಡಿಸಿ...
ಒಲವ ಸುಧೆ ಉಣಬಡಿಸಿ...
ಮಮತೆಯ ಮಡಿಲಲ್ಲಿ ತೂಗಿ...
ತಾನುರಿದು - ತನ್ನ ಪ್ರೀತಿ ಹಣತೆಯ ಬೆಳಕಲ್ಲಿ
ಸದಾ ನನ್ನ ಬಾಳ ಬೆಳಗುತಿರುವ...
ಎನ್ನ ಉಸಿರಿಗೆ ಹೆಸರ ನೀಡಿದ...
ಎನ್ನ ಜೀವದ ಜೀವದಾತೆ...
ಎನ್ನ ಬದುಕ ಭಾಗ್ಯದೇವತೆ...
ಎನ್ನ ಕಾಯುವ ಒಲವ ಆಲದ ಮರ...
ಎನ್ನ ಆಯಿಯ ಜನುಮ ದಿನ...
ಆ ಚೈತನ್ಯಕ್ಕೊಂದು ಪ್ರಣಾಮ...

ಆಯೀ ನನ್ನೊಲವು ನಿನ್ನೆಡೆಗಿದೆ...
ನಿನ್ನ ಮಗುವೆಂಬ ಹೆಮ್ಮೆ ನನ್ನದು...
ನಿನ್ನ ನಗಿಸುತಲಿರುವ ಚೈತನ್ಯ ನೀಡು...

Friday, January 25, 2013

ಗೊಂಚಲು - ಐವತ್ತು ಮತ್ತು ಒಂಭತ್ತು.....

ಬೆಳದಿಂಗಳ ನಗು.....
...ಇದು ನನ್ನೆಡೆಗಿನ ನಿಮ್ಮಗಳ ನಿಷ್ಕಾರಣ ಪ್ರೀತಿಯ ಅಭಿಮಾನಕ್ಕೆ ಮತ್ತು ನನ್ನ ಭಾವ ಬರಹಗಳ ಗೊಂಚಲಿಗೆ ಎರಡು ವಸಂತಗಳು ಸಂದ ಸಂಭ್ರಮದ ನಗು...ನಿಮ್ಮ ಪ್ರೀತಿಗೆ ನನ್ನ ನಮನಗಳು...ಈ ಪ್ರೀತಿ ಅನವರತ ಜಾರಿಯಲಿರಲಿ ಇದೇ ರೀತಿ...ಅಕ್ಷರ ಪ್ರೀತಿ ಬೆಸೆಯಲಿ ಬಂಧಗಳ...ವಿಶ್ವಾಸ ವೃದ್ಧಿಸಲಿ - ಶ್ರೀ...

ಹೊರಗೆ ಬೆಳದಿಂಗಳಿದೆ. 
ಬೆಳದಿಂಗಳು ನನಗ್ಯಾವತ್ತೂ ಆಕರ್ಷಣೀಯವೇ.
ಹಾಗೇ ನೋಡ್ತಿದ್ದೆ.
ಏನೋ ಗಡಿಬಿಡಿ ಇರುವಂತೆ, ಯಾರನ್ನೋ ತುರ್ತಾಗಿ ನೋಡಲೇಬೇಕೆಂಬಂತೆ ಒಂದು ಉಲ್ಕೆ ಬಾನಲ್ಲಿ ವೇಗವಾಗಿ ಓಡ್ತಾ ಇತ್ತು.
ಕಣ್ಣಿಗೆ ಕಾಣೋವರೆಗೂ ಅದನ್ನ ನೋಡಿದೆ.
ಎಂಥ ಖುಷಿ ಗೊತ್ತಾ...

ಮೊದಲ್ಯಾವತ್ತಾದ್ರೂ ಬರೆದಿದ್ದೀನಾ.?
ನೆನಪಿಲ್ಲ.
ಏನಂದ್ರೆ -
ಬೆಳದಿಂಗಳ ರಾತ್ರಿಗಳಲ್ಲೂ ವೈವಿಧ್ಯವಿದೆ ಕಣ್ರೀ.
ಹುಣ್ಣಿಮೆಯಂದು ಹೊಳೆವ ಪ್ರಕೃತಿಗೂ, ಬಿದಿಗೆಯಂದು ಕಾಣೋ ಸೃಷ್ಟಿ ಸೌಂದರ್ಯಕ್ಕೂ ವ್ಯತ್ಯಾಸವಿದೆ.
ಬೆಳದಿಂಗಳ ಚೆಲ್ಲೋ ಚಂದಿರನೊಬ್ಬನೇ.
ಕೆಳಗೆ ಅರಳಿ ನಳನಳಿಸೋ ವಸುಧೆಯೂ ಒಬ್ಬಳೇ.
ಆದರೂ ವೈವಿಧ್ಯ.
ಬೆಳದಿಂಗಳು ಪ್ರಖರವಾಗಿರುವ ಪೌರ್ಣಿಮೆಯಂದು ವಸುಧೆ -
ಹಾಲಲ್ಲಿ ಮಿಂದು ಮೈಯೊರೆಸಿಕೊಳ್ಳುವುದನ್ನು ಮರೆತವಳಂತೆ,
ಕಪ್ಪಂಚಿನ ಬಿಳಿಸೀರೆಯನುಟ್ಟು ಪ್ರಚ್ಛನ್ನವಾಗಿ ನಗುತ್ತ ನಿಂತ ಪ್ರಬುದ್ಧ ಚೆಲುವೆಯಂತೆ ಗೋಚರಿಸುತ್ತಾಳೆ.
ಅದೇ ಬಿದಿಗೆ ಮತ್ತು ಆಚೀಚಿನ ದಿನಗಳಲ್ಲಿ -
ಬಾಗಿಲ ಮರೆಯಿಂದ ಅಸ್ಪಷ್ಟವಾಗಿ ಇಣುಕುವ,
ತೆಳ್ಳನೆಯ ನಾಚಿಕೆಯ ತೆರೆ ಹೊದ್ದ,
ಕಡೆಗಣ್ಣಲ್ಲೇ ನೋಡಿ,
ತುಟಿಯಂಚಲ್ಲೇ ನಕ್ಕೂ ನಗದಂತಿರುವ
ಹೊಸ ಹರೆಯದ ಚೆಲುವರಳುವ ಸಮಯದ ಮುಗುದೆಯಂತೆ ಕಂಡು ಪುಳಕವೆಬ್ಬಿಸುತ್ತಾಳೆ.
ಎಂಥ ಸವಿರಸ ರೋಮಾಂಚನ...

                                  @@@@@


ಮೊನ್ನೆ ದಿನ ಬಿದಿಗೆಯ ಚಂದಿರ ಆಗಸದಿ ನಗುತಲಿದ್ದ.
ಆತ ಚೆಲ್ಲಿದ ಬೆಳದಿಂಗಳು ನೊರೆ ಹಾಲಿನಂತೆ ತೆಂಗು, ಅಡಿಕೆ, ಮಾವಿನ ಮರಗಳ ಮೇಲೆಲ್ಲಾ ಓಕುಳಿಯಾಡುತಿತ್ತು.
ಅಂಗಳದಲಿ ನಿಂತು ನೋಡಿದರೆ ಹಾಯೆನಿಸುವಂತಿತ್ತು.
ಒಂದು ಕ್ಷಣ ಇಂದು ಹುಣ್ಣಿಮೆ ಇರಬಹುದಾ ಅಂತ ಅನುಮಾನ ಪಡುವಷ್ಟು ಬೆಳದಿಂಗಳು.
ಬಿದಿಗೆಯ ಚಂದ್ರ ಹೇಗೆ ಇಷ್ಟೆಲ್ಲ ಬೆಳಗಲು ಸಾಧ್ಯ ಅನ್ನಿಸ್ತು.
ಸೂರ್ಯನಿಂದ ಸ್ವಲ್ಪ ಜಾಸ್ತಿಯಾಗಿ ಬೆಳಕ ಇಸಿದುಕೊಂಡಿರಬಹುದಾ ಅಂತ ಯೋಚಿಸ್ತಿದ್ದೆ.
ಆದ್ರೆ ಅದು ಸರಿಯಾದ ಕಾರಣವಲ್ಲಾ ಅಂತ ನಂಗೇ ಗೊತ್ತಾಗ್ತಿತ್ತು.
ತಲೆಯೆತ್ತಿ ಸರಿಯಾಗಿ ಚಂದ್ರನ್ನ ನೋಡಿದ್ರೆ ಏನೋ ಕಚಗುಳಿಯಿಂದ ಸ್ಫೂರ್ತಗೊಂಡ ಉಲ್ಲಾಸದಂಥದ್ದು ಅವನ ಮೊಗದಲ್ಲಿತ್ತು.
ಏನಿದ್ದೀತು ಕಾರಣ ಅಂತ ಅವನು ಮತ್ತೆ ಮತ್ತೆ ನೋಡುತ್ತಿದ್ದ ಕಡೆಗೆ ತಿರುಗಿ ನೋಡಿದೆ.
ಫಕ್ಕನೆ ಉತ್ತರ ಸ್ಪಷ್ಟವಾಯ್ತು.
ದುಂಡು ಮಲ್ಲಿಗೆಯೊಂದು ಬಿರಿದಂತೆ,
ಯಾವುದೋ ಸವಿ ನೆನಪು ಕೈಜಗ್ಗಿ ಕಾಡಿದಂತೆ,
ಹಾಗೇ ಸುಮ್ಮನೆ
ನೀನಲ್ಲಿ ನಿಂತು ನಗುತಲಿದ್ದೆ...
ಚಂದಿರ ನಿನ್ನ ಕೆನ್ನೆ ಗುಳಿಯನು ತನ್ನ ಬೆಳಕಿಂದ ತಾಕಿ ಉಲ್ಲಸಿತನಾಗುತಿದ್ದ...

ಸಣ್ಣ ಆಸೆ ನನ್ನಲ್ಲಿ...
ನಿನ್ನ ನಗುವ ಹಿಂದಿನ ಮಧುರ ನೆನಪಲ್ಲಿ ನಾನಿರಬಹುದಾ..!!!

ಹುಣ್ಣಿಮೆಯ ದಿನ ಬಿಳಿ ಮೋಡದ ಹದವಾದ ತೆರೆಯೊಂದು ಚಂದ್ರನ ಸುತ್ತುವರಿದರೆ ಅವನ ಸುತ್ತ ತಿಳಿಕೇಸರಿಯ ಬಳೆಯಂಥ ಪ್ರಭಾವಲಯವೊಂದು ಮೂಡಿನಿಲ್ಲುತ್ತದೆ.
ಆ ಸೊಬಗ ನೋಡಿದ್ದೀಯಾ ಒಮ್ಮೆಯಾದರೂ..?
ಆ ಚೆಲುವ ಹೀರಿಕೊಳ್ಳುವುದು ಕಣ್ಣಿಗೊಂದು ಹಬ್ಬ.


ಅವತ್ತೂ ಹಾಗೇ ಆಗಿತ್ತು...
ಅದ್ಯಾರದೋ ಮದುವೆ ಮನೇಲಿ ಗೆಳತಿಯರ ಹಿಂಡಿನ ನಡುವೆ ತಿಳಿಕೇಸರಿ ಸೀರೆಯಲಿ ನಗುತ ಕಂಗೊಳಿಸುತ್ತಿದ್ದ ನಿನ್ನ ಮೊದಲಬಾರಿ ನಾ ಕಂಡಿದ್ದೆ.
ಸಮ್ಮೋಹಿತನಾದ ನನ್ನಲ್ಲಿ ಹಗಲಲ್ಲೇ ಆ ಹುಣ್ಣಿಮೆ ಚಂದಿರನ ಕಂಡಂಥ ಭಾವ ಸಮ್ಮಿಲನ...

ಹುಡುಗೀ -
ನಿನ್ನ ಮುಂಗುರುಳ ಸುರುಳಿಯಲಿ ಬಂಧಿಯಾದ ನನ್ನ ಮನಸಲೀಗ ಒಲವಿನಲೆಗಳ ಅಬ್ಬರ...
ಮೊದಲೆಲ್ಲ ಬೆಳದಿಂಗಳ ಬೆಳಕಲ್ಲಿ ಭುವಿಯ ನೋಡಲು ಎಷ್ಟು ಸೊಗಸಿತ್ತು.
ಈಗೀಗ ಚಂದ್ರನ ನೋಡಿದರೆ ನಿನ್ನೇ ನೋಡಿದಂತಾಗಿ ಇಹವ ಮರೆವ ನನ್ನ ಮನದ ಪರಿಯ ಹೇಗೆ ಹೇಳಲಿ ನಿನಗೆ...

ನನ್ನ ಒಲವಿನ ಕನಸ ತುಂಬ ನೀನೇ - ಬರೀ ನೀನೇ
'ಪೌರ್ಣಿಮೆ....'

ಚಿತ್ರ ಕೃಪೆ : ಅಂತರ್ಜಾಲದಿಂದ...

Friday, January 11, 2013

ಗೊಂಚಲು - ಐವತ್ತೆಂಟು.....

ಕನಸೇ.....

ಬದುಕು ಕಸಿದುಕೊಂಡ ಸಾವಿರಾರು ಖುಷಿಗಳಲ್ಲಿ 
ನೀನೂ ಒಂದು ಖುಷಿ ಎಂದುಕೊಂಡು 
ನಿನ್ನ ಮರೆಯಲೆತ್ನಿಸಿದೆ....
ಆದರೆ -
ಜೀವ ಭಾವಗಳಲ್ಲಿ ಬೆರೆತುಹೋಗಿ 
ಚಿತ್ತ ಭಿತ್ತಿಯಲಿ ಕನಸುಗಳಿಗೆ 
ಉಸಿರನಿತ್ತವಳು ನೀನು...
ಖುಷಿಯಿಲ್ಲದೇ ಬದುಕಿಯೇನು...
ಕನಸೇ ಇಲ್ಲದೆ ಹೇಗೆ ಬದುಕಿಯೇನು..???

ನಿಚ್ಛಳ ಬೆಳದಿಂಗಳು...
ಮಂದ ಮಾರುತ...
ರಾತ್ರಿ ರಾಣಿಯ ಗಂಧ...
ಮುಂಜಾನೆ ಅಂಗಳದಲಿ ಇಬ್ಬನಿ ತಬ್ಬಿದ 
ಪಾರಿಜಾತದ ರಂಗೋಲಿ...
ಇವೆಲ್ಲ ನಿನ್ನ ಕೆನ್ನೆ ಗುಳಿಯ ಒನಪು 
ಮತ್ತು 
ನಿನ್ನ ಹರಡಿದ ಹೆರಳ ಕಂಪ 
ನೆನಪ ಹೊತ್ತು ತಂದು ಈಗಲೂ ಕಾಡುತ್ತವೆ.
ರಾತ್ರಿಯ ನೀರವ ಮೌನದಲ್ಲಿ ಅರಚುವ 
ಜೇಡರ ಹುಳದ ಗಿಜಿಗಿಜಿ ಸದ್ದು 
ನಿನ್ನ ಗೆಜ್ಜೆ ನಾದದಂತೆ ಕೇಳಿ 
ಈಗಲೂ ನನ್ನೆದೆ ಡಮರುಗವಾಗುತ್ತೆ.

ನಿನ್ನ ಜೊತೆ ನಡೆವಾಗ
ಮೌನ ಗುನುಗುವ ಪಿಸುಮಾತು...
ಅಮಾವಾಸ್ಯೆಯ ಕತ್ತಲಲೂ
ಹೊಳೆವ ನಿನ್ನ ಮುಗುಳ್ನಗು...
ನನ್ನ ಕಾಡಲೆಂದೇ
ಹೊಯ್ದಾಡುವ ನಿನ್ನ ಮುಂಗುರುಳು...
ಕಟ್ಟಿ ಕೊಡುತಿದ್ದ 
ಸಾವಿರ ಹೊಂಗನಸುಗಳು...
ಎಲ್ಲ ನಲುಗಿ ಹೋದವು...
ಸಮಾಜದ
ಅರಿವಿಗೆ ಕುರುಡಾದ - ಪರಂಪರೆಯ 
ಕೆಂಗಣ್ಣಿಗೆ ಸಿಲುಕಿ...

ನಿನ್ನ ನೋವಿನ ನಿಟ್ಟುಸಿರು...
ಸಮಾಜವ ಜಯಿಸಲಾರದ ನನ್ನ ಹೇಡಿತನ...
ಸಂತೆ ನೆರೆದ ಸಂಸಾರದಲೂ
ಇಬ್ಬರದೂ
ಏಕಾಂಗಿ ಬಾಳು...
ನಮ್ಮನ್ನು ನಾವೂ ಪ್ರೀತಿಸಿಕೊಳ್ಳಲಾಗದ
ನಮ್ಮೊಳಗಿನ ಗೋಳು...

ಕೊಟ್ಟ ಕೊನೆಯಲಿ ನೀ ಆಡಿದ ಮಾತು :
ಪ್ರತಿದಿನ ನೀನು ಆಸ್ತೆಯಿಂದ ಮುದ್ದಿಸುತಿದ್ದ 
ನನ್ನ ಕಿರುಬೆರಳ ಮಚ್ಚೆಯಲಿ 
ನಿನ್ನ ಉಸಿರಿನ ನೆನಪು ಸದಾ ಹಸಿರಾಗಿರುತ್ತೆ ಕಣೋ...
ಆ ಮಾತೇ ಈಗಿನ್ನೂ ನಾನು ಉಸಿರಾಡುತಿರಲು ಪ್ರೇರಣೆ ಕಣೇ...