Tuesday, March 19, 2013

ಗೊಂಚಲು - ಅರವತ್ತು + ಐದು.....


ಜನ್ಮಕ್ಕಂಟಿದ.......

ನೆನಪಿದ್ದ ಖುಷಿ ಅದೊಂದೆ.
ಆಗೆಲ್ಲ ನೀ ಅಜ್ಜನ ಮನೆಗೆ (ನಾನು, ಅಮ್ಮ, ಅಕ್ಕಂದಿರೆಲ್ಲ ಬದುಕಿದ್ದೇ ಅಲ್ಲಿ ಮತ್ತು ಆ ಮನೆಯ ಪ್ರೀತಿಯಿಂದ ಆಗ) ಬರ್ತಿದ್ದೆ. ಶಾಲೆಯಿಂದ ನಾ ಬರೋ ಹೊತ್ಗೆ ದೇವರ ಮುಂದೆ ನೀನು ಮೂಗು ಮುಚ್ಕೊಂಡು ಪ್ರತಿಷ್ಠಾಪಿತ. ಆಗದು ಯಾವುದೇ ಜಿಜ್ಞಾಸೆಗಳಿಲ್ಲದ ಎಲ್ಲ ಸೊಗಸಾಗಿ ಕಾಣುತಿದ್ದ ವಯಸು ನಂದು. ನೀ ದೇವರೆದುರು ಕೂತಿದ್ರೆ ನಿನ್ನ ಪಕ್ಕದಲ್ಲಿ ಒಂಥರಾ ಸ್ಪ್ರಿಂಗ್ ನಂತಹ ಬೆಲ್ಟ್ ಇರೋ ನಿನ್ನ ವಾಚು ಇರ್ತಿತ್ತು. ಸುಮ್ನೆ ಅದನ್ನೆತ್ತಿಕೊಂಡು ಹೋಗಿ ನನ್ನ ಕೈಗದನ್ನು ಕಟ್ಕೊಂಡು ಖುಷಿ ಪಡ್ತಿದ್ದೆ. ಅದೊಂದೇ ಖುಷಿ ನಿನ್ನಿಂದ ಸಿಕ್ಕಿದ್ದು ನಂಗೆ. ಹಾಗೆ ನಿನ್ನ ವಾಚು ಕಟ್ಟಿಕೊಂಡು ವಾರಗೆಯ ಮಕ್ಕಳೆದುರು ಕೆಲಕ್ಷಣ ಮೆರೆದಿದ್ದಕ್ಕೆ ಬೈದಿಲ್ಲ ಅನ್ನೋ ಒಂದೇ ಕಾರಣಕ್ಕೆ ನಾನು ನಿಂಗೆ ಋಣಿಯಾಗಿರಬೇಕಿದೆ...

ಅಲ್ಲಿಂದಾಚೆ ನನ್ನ ಬುದ್ಧಿ ಬಲಿತಂತೆಲ್ಲ ನಿನ್ನ ಮನದ ಕ್ರೌರ್ಯದ ಮುಳ್ಳು ಹೆಜ್ಜೆ ಹೆಜ್ಜೆಗೂ ಚುಚ್ಚಿ ಘಾಸಿಗೊಳಿಸಿದ್ದೊಂದೇ ಸತ್ಯ...

ನನ್ನ ಮತ್ತು ಅಮ್ಮ, ಅಕ್ಕಂದಿರೆಲ್ಲರ ಎಲ್ಲ ಸಾಮಾಜಿಕ ಅವಮಾನಗಳಿಗೆ ನೀನೇ ಪ್ರಮುಖ ಕಾರಣನಾಗಿ ಬಿಸಿತುಪ್ಪವಾದದ್ದು ನಮ್ಮ ದೌರ್ಭಾಗ್ಯ...
ನಿನ್ನ ನೆವದಿಂದ ನನ್ನ ಕೆಣಕಿ ಕಾಡೋ ಸಮಾಜ ಅದೇ ನಿನ್ನ ಮೆರೆಸುವುದ ಕಂಡು ಕನಲಿಹೋಗಿದ್ದೇನೆ ಎಷ್ಟೋ ಬಾರಿ...

ಏಳು ಹೆಜ್ಜೆ ನಿನ್ನೊಂದಿಗೆ ನಡೆದದ್ದು ಮತ್ತು ಒಂದು ಕರಿ ದಾರಕ್ಕೆ ನಿನ್ನೆದುರು ತಲೆಬಾಗಿದ್ದಕ್ಕೆ ಅಮ್ಮ ಕಟ್ಟಿದ ಕಂದಾಯ ಒಂದಿಡೀ ಜನ್ಮದ ಜೀವಂತ ನಗು...
ಬಂಧ ಬೆಸೆಯಬೇಕಿದ್ದ ಹೋಮದ ಸುತ್ತ ಸುತ್ತುತ್ತಲೇ ಅಮ್ಮನ ಬದುಕ ಆಹುತಿಗೆ ಮುನ್ನುಡಿ ಬರೆದದ್ದು ನೀನು...
ರಾತ್ರಿಗಳ ನಿನ್ನ ತೆವಲಿನ ಕ್ರೌರ್ಯಕ್ಕೆ ಅಮ್ಮನ ಮಡಿಲು ತುಂಬಿತ್ತು...(ಬಹುಶಃ ಮಡಿಲು ತುಂಬಿದೆ ಅನ್ನೋ ಒಂದೇ ಕಾರಣಕ್ಕೆ ಅಮ್ಮ ನಿಂಗೆ ಋಣಿಯೇನೋ)

ಕೊಟ್ಟ ದೇಹಕ್ಕೆ ಅನ್ನವಿಕ್ಕದಿದ್ದರೂ ನಾನಿಂದು ನಿನ್ನ ದೂರುತ್ತಿರಲಿಲ್ಲ..
ದೇಹದೊಳಗಣ ಮನದ ಹಸಿವಿಗೆ ಒಂದೇ ಒಂದು ತುತ್ತು ಪ್ರೀತಿ ಉಣಿಸಿದ್ದಿದ್ದರೆ...

ನಾವು ಕ್ರೂರ ಪ್ರಾಣಿ ಅಂತನ್ನೋ ಚಿರತೆ ಕೂಡ ತನ್ನ ಮರಿಗಳು ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುವವರೆಗೆ ಸಲುಹಿ ಆನಂತರವಷ್ಟೇ ಕೈಬಿಡುತ್ತಂತೆ...
ನಿನ್ನ ಮನಸು ಚಿರತೆಗಿಂತ ಕ್ರೌರ್ಯವಂತ ಹೇಗೆ..???

ದಿನದ ಹದಿನೈದು ಘಂಟೆ ನೀ ನಡೆಸುವ ಡಂಭಾಚಾರದ ದೈವ ಭಕ್ತಿಯ ಕಂಡಿದ್ದೇ ಇದ್ದೀತು ದೇವರೆಡೆಗಿನ, ಆಚರಣೆಗಳೆಡೆಗಿನ ನನ್ನ ಜಿಗುಪ್ಸೆಗೆ ಮೂಲ ಕಾರಣ...

ನೀ ಪೂಜಿಸೋ ದೇವರು, ನೀ ನಂಬೋ ಧರ್ಮ ಹೇಳಿದ ನೀ ನನಗೆ ನೀಡಲೇಬೇಕಿದ್ದ ‘ಸಂಸ್ಕಾರ’ಗಳೆಡೆಗೆ ಕಣ್ಣೆತ್ತಿಯೂ ನೋಡದ ನಿನ್ನ ’ಕೊನೆಯ ಸಂಸ್ಕಾರ’ ಮಾಡಲೂ ನನ್ನ ಕೈ ಹೇಸುತ್ತೆ...
ಇನ್ನು ನಿನ್ನ ಇಳಿವಯಸಲಿ ಸೇವೆ ಎಲ್ಲಿಂದ ಮಾಡಲಿ...
ತನ್ನ ‘ಕೊನೆಯ ಸಂಸ್ಕಾರ’ದವರೆಗೆ ಮಗ ಬದುಕಿದ್ದರೆ ಸಾಕು ಅಂದೆಯಂತಲ್ಲ - ಸಂಸ್ಕೃತಿಯನ್ನು ಕಲಿಸದ ನಿನಗೆ ‘ಸಂಸ್ಕಾರ’ ಮಾಡ್ತೀನಿ ನಾನು ಅಂತ ಹೇಗೆ ನಂಬ್ತೀಯ...

ಒಂದು ಹನಿ ವೀರ್ಯ ಚೆಲ್ಲಿ ಈ ದೇಹದ ಜನ್ಮಕ್ಕೆ ನಿಮಿತ್ತನಾದೆ ಎಂಬ ಕಾರಣಕ್ಕೆ ನಿನ್ನೆಲ್ಲ ನೀಚತನಾನ ನಿನ್ನ ವೀರ್ಯಸಂಜಾತರು ಸಹಿಸಿಕೊಳ್ಳಬೇಕೆಂಬುದಾಗಿದ್ದರೆ, ಸೇವೆಗೈಯಬೇಕೆಂಬುದಾಗಿದ್ದರೆ ನಿನ್ನಂಥ ಗಂಡು ಜಂತುಗಳ್ಯಾರೂ ಮದುವೆ - ಸಂಸಾರಗಳಿಗೆಲ್ಲ ಜೋತು ಬೀಳ್ತಲೇ ಇರಲಿಲ್ಲವೇನೋ...
ಕನಿಷ್ಠ ಜವಾಬ್ದಾರಿಯನ್ನೂ ನೀಯಿಸದವನಿಗೆ ನಿರೀಕ್ಷೆಗಳೂ ಇರಬಾರದಲ್ಲವಾ...

ಎಂಥ ಅಪ್ಪನಾಗಬಾರದೆಂಬುದನ್ನು ಅಗತ್ಯಕ್ಕಿಂತ ಸ್ಪಷ್ಟವಾಗಿ ಅರುಹಿದ, ತುಂಬ ಸಭ್ಯರಾದ ಇತರರ ಅಪ್ಪಂದಿರನ್ನೂ ಅನುಮಾನದ - ಪೂರ್ವಗ್ರಹದ ಕಣ್ಣಿಂದ ನೋಡುವಂತೆ ನನ್ನ ಮನಸ ಕೆಡಿಸಿದ, ನಿನ್ನ ಕಾಮಕ್ಕೆ ಬೇಕಾದ ಅಧಿಕೃತತೆಗಾಗಿ ಮದುವೆಯ ಪಾವಿತ್ರ್ಯವನ್ನು ಬಳಸಿಕೊಂಡ (ಸಮಾಜದ ಕಣ್ಣಿಗೆ ಮಣ್ಣೆರಚಲು ಒಂದು ಮದುವೆ..ಆದರೆ ನಿನ್ನ ಕಾಮ ಅದರಾಚೆಯೇ ಹೆಚ್ಚು ವಿಜೃಂಭಿಸಿದ್ದೆಂಬುದು ಸತ್ಯ) ನಿನ್ನೆಡೆಗೆ ನನ್ನಲ್ಲಿ ಇರೋದು ಕೋಪವಲ್ಲ... ಅಪ್ಪಟ ಅಸಹ್ಯ...

ನಾ ಬದುಕುತಿರುವ, ನನ್ನನ್ನು ಪ್ರೀತಿಸೋ ಸಮಾಜದ ಒತ್ತಡಕ್ಕೆ ಮಣಿದು ಎಲ್ಲಿ ನಿನ್ನ ಕೊನೆಗಾಲದಲ್ಲಾದರೂ ನಿನ್ನೆಡೆಗೆ ನಡೆಯಬೇಕಾದೀತೋ ಎಂಬ ಭಯ ನನ್ನಲ್ಲಿ ನಿನಗಿಂತ ನಾನೇ ಮೊದಲು ಅಳಿದು ಹೋಗಿದ್ದರೆ ಚೆನ್ನವಿತ್ತು ಅಂತ ಯೋಚಿಸುವಂತೆ ಮಾಡುತ್ತೆ - ಪ್ರತಿ ಬಾರಿ ನಿನ್ನ ನೆನಪಾದಾಗ...

ದೇಹ ನೀಡಿದ ಕಾರಣಕ್ಕೆ ಹೆಸರಿಗೂ ಅಂಟಿಕೊಂಡು, ಜನ್ಮಕ್ಕಂಟಿದ ಶಾಪದಂತೆ ಕಾಡೋ ನಿನ್ನಂಥ ಅಪ್ಪಂದಿರೆಡೆಗೆ ನನ್ನ ಧಿಕ್ಕಾರವಿದೆ....

Friday, March 8, 2013

ಗೊಂಚಲು - ಅರವತ್ನಾಕು.....


ಗೆಲುವಿನಂಗಳದಿ ಮೂಡುತಿದೆ ಗೆಜ್ಜೆ ಕಾಲ್ಗಳ ಹೆಜ್ಜೆ ಗುರುತು.....


ಕಾರ್ಯೇಶು ದಾಸಿ - ಕರಣೇಶು ಮಂತ್ರಿ - ಪೂಜ್ಯೇಶು ಮಾತಾ – ಕ್ಷಮಯಾ ಧರಿತ್ರಿ – ರೂಪೇಶು ಲಕ್ಷ್ಮಿ - ಶಯನೇಶು ರಂಭಾ ಎಂದು ಹೆಣ್ಣಿಗೆ ಹಲವಾರು ಶ್ರೇಷ್ಠ ಗುಣಗಳನ್ನು ಆರೋಪಿಸಿ, ತ್ಯಾಗ ಮೂರ್ತಿಯಾಗಿ ಚಿತ್ರಿಸಿ, ಹೊಗಳಿ ಅಟ್ಟಕ್ಕೇರಿಸಿ ಆಕೆಯ ಕಾರ್ಯ ವ್ಯಾಪ್ತಿಯನ್ನು ತನ್ನ ಮನೆಯ ಅಡಿಗೆ ಕೋಣೆ ಮತ್ತು ಶಯನಾಗಾರಕ್ಕೆ ಮಾತ್ರ ಸೀಮಿತಗೊಳಿಸಿದ ಪುರುಷ ಸಮಾಜ ಇಂದು ಸಣ್ಣಗೆ ಕಂಪಿಸುವಂತಾಗಿದೆ. ಕಾರಣ ಹೆಣ್ಣು ನಿಧಾನವಾಗಿ ಅಡಿಗೆ ಕೋಣೆಯ ಕಿಟಕಿಯಿಂದ ಆಚೆ ಗಂಡು ಕೇವಲ ತನ್ನದು ಎಂದುಕೊಂಡಿದ್ದ ಪ್ರಪಂಚದ ಕಡೆಗೆ ದೃಷ್ಠಿ ಬೀರಿದ್ದಾಳೆ. ತನ್ನ ಕಾರ್ಯ ವ್ಯಾಪ್ತಿಯನ್ನು ಪುರುಷನಿಗೆ ಸರಿಸಮನಾಗಿ ವಿಸ್ತರಿಸಿಕೊಂಡು ಬೆಳೆಯುತ್ತಿದ್ದಾಳೆ. ತಾನು ಕೂಡ ಪುರುಷನಂತೆಯೇ – ಕೆಲವೊಮ್ಮೆ ಆತನಿಗಿಂತ ಸಮರ್ಥವಾಗಿ – ಎಂಥ ಕ್ಷೇತ್ರದಲ್ಲೇ ಆಗಲೀ ದುಡಿಯಬಲ್ಲೆ – ಎಂಥ ಗೆಲುವನ್ನೇ ಆದರೂ ದಣಿಯದೆ ದಕ್ಕಿಸಿಕೊಳ್ಳಬಲ್ಲೆ – ತಾನು ಅಬಲೆಯಲ್ಲ ಸಬಲೆಯೆಂಬುದನ್ನು ತೋರಿಸಿಕೊಡುತ್ತಿದ್ದಾಳೆ. ಅಡುಗೆಯನ್ನೂ ಒಂದು ವಿಜ್ಞಾನವನ್ನಾಗಿ ರೂಪಿಸಿದ್ದಾಳೆ. ಅಡುಗೆಮನೆಯಿಂದ ಅಂತರೀಕ್ಷದವರೆಗೂ ಎಲ್ಲೆಡೆಯೂ ತಾನು ಸಲ್ಲಬಲ್ಲೆ ಎಂದು ತೋರಿಸಿಕೊಟ್ಟಿದ್ದಾಳೆ. ಸೈನಿಕ ಸೇವೆಯಂಥ ದೈಹಿಕ ಸಾಮರ್ಥ್ಯ ಬೇಡುವಂಥ ಕ್ಷೇತ್ರದಲ್ಲಿ ಕೂಡ ತನ್ನ (ಸಾಮರ್ಥ್ಯದ ಛಾಪು ಮೂಡಿಸಿದ್ದಾಳೆ) ಗೆಲುವಿನ ನಗು ಬೀರಿದ್ದಾಳೆ. ತನ್ನ ಅರಿವಿನ ಬೆಳಕಲ್ಲಿ ತನ್ನ ಸುತ್ತಣ ಸಮಾಜವನ್ನೂ ಬೆಳಗುವ ಜ್ಯೋತಿಯಾಗಿದ್ದಾಳೆ. 

ಈ ವಿಚಾರದಲ್ಲಿ ನಮ್ಮ ಗ್ರಾಮೀಣ ಪ್ರದೇಶಗಳ ಮಹಿಳೆಯರೂ ಹಿಂದೆಬಿದ್ದಿಲ್ಲ. ತಮ್ಮ ನಡುವೆಯೇ ಸಹಕಾರ ಸಂಸ್ಥೆಗಳು, ಸ್ವ-ಸಹಾಯ ಸಂಘಗಳನ್ನು ರೂಪಿಸಿಕೊಂಡು ತಾನು ಆರ್ಥಿಕವಾಗಿ, ಬೌದ್ಧಿಕವಾಗಿ ಸಾಮಾಜಿಕವಾಗಿ ಸದೃಢಳಾಗುತ್ತಾ ತನ್ನ ಗ್ರಾಮವನ್ನೂ ಅಭಿವೃದ್ಧಿಪಡಿಸುತ್ತಾ ಗಾಂಧೀಜಿಯವರ ಗ್ರಾಮ ಸಬಲೀಕರಣದ ಮೂಲಕ ದೇಶಾಭಿವೃದ್ಧಿಯ ಕನಸನ್ನು ಸಮರ್ಥವಾಗಿ ಸಾಕಾರಗೊಳಿಸುತ್ತಿದ್ದಾಳೆ. ಮಹಿಳೆ ತನ್ನನ್ನು ತಾನು ಸಮಾಜ ಕಟ್ಟುವ, ತನ್ನ ದೇಶವನ್ನು ವಿಶ್ವಮಟ್ಟದಲ್ಲಿ ಬಲಿಷ್ಠ ಶಕ್ತಿಯಾಗಿಸುವ ಮುಖ್ಯಭೂಮಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. ಇದಕ್ಕೆಲ್ಲ ಮಹಿಳೆಯಲ್ಲಿ ಮೂಡಿದ ತನ್ನೊಳಗಿನ ಸಾಮರ್ಥ್ಯದ ಅರಿವು ಮುಖ್ಯ ಕಾರಣ ಎನ್ನಬಹುದು. ಹೀಗಿರುವಾಗ ಮಹಿಳೆಗೆ ಪ್ರಾಥಮಿಕ ಮಟ್ಟದಿಂದಲೇ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣವೂ ದೊರೆತರೆ ಖಂಡಿತ ಹೆಣ್ಣು ‘ಆದಿಶಕ್ತಿ’ ಎಂಬ ತನ್ನ ಬಿರುದಿಗೆ ಅನ್ವರ್ಥವಾಗುವುದರಲ್ಲಿ ಸಂಶಯವಿಲ್ಲ.

ಗಮನಾರ್ಹ ಸಂಗತಿ ಎಂದರೆ – ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳ ಮಹಿಳೆಯರಲ್ಲೂ ಮೂಡಿದ ಅರಿವಿನ ಜಾಗೃತಿ. ತನಗಿರುವ ಅವಕಾಶಗಳನ್ನು ಅರಿತುಕೊಂಡು, ಆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನನ್ನು ತಾನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಿರುವ ಪರಿ ನಿಜಕ್ಕೂ ಶ್ಲಾಘನೀಯವೇ. ಸಹಕಾರ ತತ್ವವನ್ನು ಅರಗಿಸಿಕೊಂಡು - ಅಳವಡಿಸಿಕೊಂಡು - ಸ್ವ ಉದ್ಯೋಗ ಮಾರ್ಗಗಳನ್ನು ರೂಪಿಸಿಕೊಂಡು ಆರ್ಥಿಕ ಸ್ವಾವಲಂಬನೆ ಗಳಿಸಿಕೊಳ್ಳುತ್ತಿದ್ದಾಳೆ. ಇಂದು ಪ್ರತೀ ಹಳ್ಳಿಗಳಲ್ಲೂ ಒಂದಿಲ್ಲ ಒಂದು ಮಹಿಳಾ ಸ್ವಸಹಾಯ ಸಂಘ ಅಥವಾ ಸಹಕಾರ ಸಂಘಗಳು ತುಂಬ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೊಲಿಗೆ, ಕೈಮಗ್ಗಗಳಂತಹ ಸಣ್ಣ ಬಟ್ಟೆ ಉದ್ಯಮ - ಹಪ್ಪಳ, ಸಂಡಿಗೆ, ಶ್ಯಾವಿಗೆ, ಸಿಹಿತಿಂಡಿಗಳಂತಹ ಆಹಾರೋತ್ಪನ್ನಗಳು – ಅರಿಶಿನ, ಕುಂಕುಮಗಳಂತಹ ಗೃಹೋಪಯೋಗಿ ಸಾಮಾನುಗಳ ತಯಾರಿಕೆ - ಹಳ್ಳಿಗಳಲ್ಲಿ ಮಾತ್ರ ಸಿಗತಕ್ಕಂತಹ ನಾರು, ಬೇರುಗಳ ಅಲಂಕಾರಿಕ ಸಾಮಗ್ರಿಗಳ ತಯಾರಿಕೆ ಮತ್ತು ಅವುಗಳ ಮಾರಾಟ. ಈ ಮೂಲಕ ಮಹಿಳೆ ಗಳಿಸುತ್ತಿರುವ ಆರ್ಥಿಕ ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸ ಸಣ್ಣ ಮಟ್ಟದ್ದೇನಲ್ಲ. ಸಾಮಾನ್ಯ ಮಹಿಳೆಯೊಬ್ಬಳು ಉತ್ಪನ್ನಗಳ ಮಾರುಕಟ್ಟೆ ಮೌಲ್ಯವನ್ನರಿತು, ಸಮರ್ಪಕ ಮಾರಾಟ ತಂತ್ರಗಳನ್ನು ರೂಪಿಸಿಕೊಂಡು, ಸರಿಯಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ಆರ್ಥಿಕವಾಗಿ ಗಟ್ಟಿ ಬೆಳವಣಿಗೆ ಸಾಧಿಸುವುದು ವಿಪರೀತ ಪೈಪೋಟಿಯ ಈ ಕಾಲದಲ್ಲಿ ಕಡೆಗಣಿಸುವಂಥ ವಿಷಯ ಅಲ್ಲವೇ ಅಲ್ಲ. ಬದಲಾಗಿ ಗೌರವಿಸುವಂಥದ್ದಾಗಿದೆ. 

ಹಾಗಂತ ಮೈಮರೆಯುವಂತಿಲ್ಲ. ಬೆಳವಣಿಗೆ ಮತ್ತು ಬದಲಾವಣೆ ನಿಂತ ನೀರಲ್ಲ. ಹೊರಗಿನ ತೀವ್ರ ಪೈಪೋಟಿಯೆದುರು ಗಟ್ಟಿಯಾಗಿ ನಿಂತು, ದೌರ್ಜನ್ಯಗಳ ಮೆಟ್ಟಿ, ತನ್ನ ದೌರ್ಬಲ್ಯಗಳ ಮೀರಿ ನಿಂತು ಇನ್ನಷ್ಟು ಬೆಳೆಯಬೇಕಿದೆ. ಉಳಿಯಬೇಕಿದೆ. ಏಕೆಂದರೆ ಹೆಣ್ಣು ಸ್ವಭಾವತಹ ಮೃದು ಮನಸಿನ ಜೀವಿ. ಅದಾಗಲೇ ಪ್ರಕೃತಿ ಅವಳಿಗೆ ನೀಡಿದ ಮೀರಲಾಗದ ಜವಾಬ್ದಾರಿಗಳೇ ಗಂಡಿನ ಜವಾಬ್ದಾರಿಗಳಿಗಿಂತ ಸಾಕಷ್ಟು ಪಟ್ಟು ಜಾಸ್ತಿ ಇದೆ. ತನ್ನ ಸ್ತ್ರೀ ಸಹಜವಾದ ಭಾವಗಳನ್ನೂ, ಕರ್ತವ್ಯಗಳನ್ನೂ ಬಿಟ್ಟುಕೊಡದೇ ತನ್ನದಲ್ಲದ ಗಂಡಸಿನ ಭಾವ - ಭಾದ್ಯತೆಗಳನ್ನೂ ಮೈಗೂಡಿಸಿಕೊಂಡು, ಎರಡರ ನಡುವೆ ಸಮತೋಲನ ಕಾಯ್ದುಕೊಂಡು ಬೆಳಗಬೇಕಿದೆ. ಪ್ರಕೃತಿ ನೀಡಿದ ಕರ್ತವ್ಯ ಸಂತಾನೋತ್ಪತ್ತಿ ಮತ್ತು ಸಂಸ್ಕೃತಿ ನೀಡಿದ ಸಂಸಾರ ನಿಭಾವಣೆಯ ಜವಾಬ್ದಾರಿಗಳನ್ನು ಮರೆಯದೇ ತನ್ನ (ಸ್ತ್ರೀ) ಭಾವಗಳನ್ನು ಉಳಿಸಿಕೊಂಡು, ಪರರ (ಪುರುಷ) ಭಾವಗಳನ್ನು ಆವಾಹಿಸಿಕೊಂಡು ಪುರುಷ ನಿರ್ಮಿತ ಸಮಾಜದಲ್ಲಿ ಅವನ ಸರಿಸಮನಾದ ಸ್ಥಾನ ಸ್ಥಾಪಿಸಿಕೊಳ್ಳಬೇಕಿದೆ. ಅದಷ್ಟು ಸುಲಭದ ಮಾತಲ್ಲ. ಬಹುಮಟ್ಟಿಗೆ ಆಕೆ ಆ ಸ್ಥಾನ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾದಂತೆ ಕಂಡುಬಂದರೂ ಅದು ಮೇಲ್ನೋಟದ ಅಂಕಿ ಸಂಕಿಗಳಷ್ಟೇ ಅನ್ನಿಸುತ್ತೆ. ಅವಳ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡುವ ಅವಕಾಶವನ್ನು ಅವಳಿನ್ನೂ ಸಂಪೂರ್ಣವಾಗಿ ಹೊಂದಿಲ್ಲ. ಈ ಇಪ್ಪತ್ತೊಂದನೇ ಶತಮಾನದಲ್ಲೂ ಸ್ವಯಂ ಅಥವಾ ಗುಂಪು ನಿರ್ಣಯ ತೆಗೆದುಕೊಳ್ಳುವದರಲ್ಲಿ ವಿಶ್ವಾಸದಿಂದ ದೃಢಪಡಿಸುವ ಸಾಮಥ್ರ್ಯ ಹೊಂದುವಲ್ಲಿ ಮತ್ತು ಸ್ವಯಂ ಪ್ರೇರಿತವಾಗಿ ನಿರಂತರ ಬದಲಾವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವಲ್ಲಿ ಅವಳಿನ್ನೂ ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ಅಲ್ಲೆಲ್ಲ  ಹೆಚ್ಚಿನ ಸಂದರ್ಭದಲ್ಲಿ ಅವಳ ಕುಟುಂಬದ ನಿರ್ಣಯಗಳೇ ಪ್ರಾಧಾನ್ಯತೆ ಪಡೆಯುವುದು ಸಹಜವಾಗಿದೆ. ಇದಕ್ಕೆ ಆಕೆಯ ಸಹಜವಾದ ಮಾನಸಿಕ ಮೃದುತ್ವವೂ ಕಾರಣವಿರಬಹುದೇನೋ. 

ಇಂತಿಪ್ಪ ಹೊತ್ತಿನಲ್ಲಿ ಮಹಿಳೆ ದೃಢ ಮನಸ್ಸಿನಿಂದ ಸ್ವಯಂ ಪ್ರೇರಣೆಯಿಂದ ಸರ್ಕಾರ ಮತ್ತು ಸಮಾಜ ಕೊಡತಕ್ಕ ಅಲ್ಪ ಸವಲತ್ತು, ಸೌಲಭ್ಯಗಳನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಇನ್ನೂ ಗಣನೀಯವಾಗಿ ಬೆಳೆಯಬೇಕಿದೆ. ಪಡೆಯಬೇಕಾದ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣಕ್ಕೆ ಸಂಪೂರ್ಣ ಒತ್ತು ಕೊಡಬೇಕಿದೆ. ತಾನು ಶಿಕ್ಷಿತಳಾಗಿ ಮತ್ತು ತನ್ನ ಮುಂದಣ ಪೀಳಿಗೆ ಇನ್ನಷ್ಟು ಶಿಕ್ಷಣವಂತವಾಗುವಂತೆ ನೋಡಿಕೊಳ್ಳಬೇಕಾದ್ದು ಇಂದಿನ ಮಹಿಳೆಯ ಆದ್ಯ ಕರ್ತವ್ಯ. ಮಹಿಳಾ ಸಮಾಜವನ್ನು ಸಂಪೂರ್ಣ ಶಿಕ್ಷಣವಂತರನ್ನಾಗಿ ರೂಪಿಸಲು ಪೂರ್ಣ ಪ್ರಮಾಣದಲ್ಲಿ ಮಹಿಳೆಯೇ ತೊಡಗಿಕೊಳ್ಳಬೇಕಿದೆ. ಆ ಮೂಲಕ ಇನ್ನಷ್ಟು ಅವಕಾಶಗಳ ದಾರಿ ಮಾಡಿಕೊಂಡು ತನ್ನ ದುಡಿಯುವ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳಬೇಕಿದೆ. ಹಾಗಾದಲ್ಲಿ ಮತ್ತೊಮ್ಮೆ ಮಾತೃ ಪ್ರಧಾನ ಆಡಳಿತ ವ್ಯವಸ್ಥೆ ಬಂದರೂ ಆಶ್ಚರ್ಯಪಡಬೇಕಿಲ್ಲ.


ಜಗದ ಎಲ್ಲ ಹೆಣ್ಣು ಜೀವಗಳಿಗೂ 'ಮಹಿಳಾ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು...
ಮುಂಬರುವ ಪ್ರತಿ ದಿನವೂ ನಿಮ್ಮ ದಿನವಾಗಲಿ...


ಚಿತ್ರ ಕೃಪೆ : ಅಂತರ್ಜಾಲದಿಂದ...

ವಿ.ಸೂ. : ಈ ಬರಹ ಇ-ವಾರಪತ್ರಿಕೆ "ಪಂಜು"ವಿನ ಮಾರ್ಚ್ 8ನೇ 2013ರ  ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದೆ...
ಕೊಂಡಿ : http://www.panjumagazine.com/?p=1303

Monday, March 4, 2013

ಗೊಂಚಲು - ಅರವತ್ಮೂರು.....

ಆ ಕಪ್ಪು ಹುಡುಗಿಯ ಬಗ್ಗೆ.....



ಕಪ್ಪೆಂದು ಹಳಿಯದಿರಿ
ಅವಳ ಮನದ ಒಪ್ಪವನರಿಯದೆ...
ನನ್ನೆಡೆಗೆ ತುಡಿಯುತಿಹ ಅವಳ ಕಡುಗಪ್ಪು ಕಣ್ಣಲ್ಲಿ
ಒಲವ ಬೆಳದಿಂಗಳಿದೆ...

ಅಂದಿದ್ದೆ ನಾನಂದು -
ನನ್ನೆಲ್ಲ ತಪ್ಪುಗಳ ಮರೆತೊಮ್ಮೆ ನನ್ನೆಡೆಗೆ ನಗುವ ಚೆಲ್ಲು
ನನ್ನ ಸಾವಿಗೂ ಬಣ್ಣ ಬಂದೀತು ನಿನ್ನ ಒಲವಿಂದ...
ನಿನ್ನ ಬದುಕ ಬಣ್ಣವಾಗುವ ಬಯಕೆ ನನ್ನದು 
ಕನಸಲೂ ಸಾವು ಸನಿಹ ಸುಳಿಯದಂತೆ...
ಅಂದದ್ದು ಆ ಕಪ್ಪು ಹುಡುಗಿ...

ನನ್ನ ಮನದ ಕತ್ತಲೆಯನೆಲ್ಲ 
ತನ್ನ ನಗುವ ಕಣ್ಣ ಬೆಳಕಲ್ಲೆ 
ದೂರ ಸರಿಸಿದ್ದು ಆ ಕಪ್ಪು ಹುಡುಗಿ...

ಮುಸ್ಸಂಜೆ ತಂಪಲ್ಲಿ
ಮೌನದ ತೇರಲ್ಲಿ
ಹೊಸ ಬದುಕ ಕನಸಿಗೆ ತೋರಣವ ಕಟ್ಟಿ
ಕಣ್ಣಲ್ಲೆ ಒಲವ ಭಾವಗೀತೆಯ ಹಾಡಿದ್ದು
ಆ ಕಪ್ಪು ಹುಡಿಗಿ...

ಬಡವ ನಾನು ಕೊಡುವುದಿಷ್ಟೇ
ಮುತ್ತಿನುಂಡೆಯ ಭೂರಿ ಭೋಜನ
ನಿತ್ಯ ಅವಳ ಮೃದು ಅಧರಕೆ...
ನಿನ್ನ ತೋಳ್ಬಲೆಯೆ ಇಂದ್ರನೋಲಗವೆಂದು
ತೃಪ್ತ ನಗೆಯಿಂದುಲಿವಳೆನ್ನಯ 
ಆ ಕಪ್ಪು ಹುಡುಗಿ...

ಕಪ್ಪಾದರೂ ಅವಳು
ಕಪ್ಪಲ್ಲ ಅವಳ ಒಲವು...
ನನ್ನ ನಲಿವಲ್ಲಿ ಅವಳ ನಗುವಿದೆ...
ಅವಳ ನಗುವಲ್ಲೆ ನನ್ನ ಉಸಿರಿದೆ...
ಬದುಕ ಹಸಿರಿನ ಹೆಸರು
ಆ ಕಪ್ಪು ಹುಡುಗಿ...

ಚಿತ್ರ ಕೃಪೆ : ಚಿತ್ರಸಂತೆಯಲ್ಲಿ ಸೆರೆಹಿಡಿದ ಚಿತ್ರ...ಕಲೆಗಾರನ ಹೆಸರು ಗೊತ್ತಿಲ್ಲ...ಕಲೆಗಾರನ ಕ್ಷಮೆಕೋರುತ್ತಿದ್ದೇನೆ...

ವಿ.ಸೂ. : ಈ ಬರಹ ಇ-ವಾರಪತ್ರಿಕೆ "ಪಂಜು"ವಿನ ಮಾರ್ಚ್ 4ನೇ 2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ...
ಕೊಂಡಿ : http://www.panjumagazine.com/?p=1178

Saturday, February 16, 2013

ಗೊಂಚಲು - ಅರವತ್ತು ಮತ್ತೆರಡು.....

ಎದೆಯ ಚುಂಬಿಸಿದ ಪ್ರೀತಿ ಗಂಗೆಯ ಗೆಳೆತನ.....

ಉಸಿರಲ್ಲಿ ಬೆರೆತ ಹೆಸರಿಲ್ಲದ ಹುಡುಗೀ -
ಈ ಬಡ ಜೋಗಿಯ ಎದೆ ಜೋಪಡಿಯಲೀಗ
ನಿನ್ನೊಲವ ಕನಸುಗಳ ಗೆಜ್ಜೆಯ ಶ್ರೀಮಂತ ಘಲಿರು...

ಸಣ್ಣ ಮಳೆಯ ಸಂಜೆ,
ತುಟಿ ಉರಿಯುವ ಖಾರದ ಜೋಳ,
ಅರೆಗತ್ತಲ ದಾರಿ,
ಒಬ್ಬಂಟಿ ನಡಿಗೆ ಮತ್ತು ನಿನ್ನ ನೆನಪು...
ನನ್ನಂತರಂಗಕ್ಕೆ ಮಳೆಬಿಲ್ಲ ರಂಗು...
ಈ ಬದುಕೆಷ್ಟು ಸೊಗಸಲ್ಲವಾ...!!!

ಮೊದಲೆಲ್ಲ ಹೀಗಿರಲಿಲ್ಲ ನಾನು. ಶುದ್ಧ ಬಂಡೆಯಂಥ ಮನುಷ್ಯ. ಹಾಗಂತ ಗೆಳೆಯ ಗೆಳತಿಯರಿರಲಿಲ್ಲ ಅಂತಲ್ಲ. ಭಾವ ಬಂಧಗಳಿಗೆ ಸ್ಪಂದಿಸುತ್ತಿರಲಿಲ್ಲ ಅಂತಲೂ ಅಲ್ಲ. ಸ್ನೇಹಿತರ ದೊಡ್ಡ ಹಿಂಡು ನನ್ನ ಸುತ್ತ ಆಗಲೂ, ಈಗಲೂ. ಆದರೆ ವ್ಯತ್ಯಾಸ ತುಂಬಾ ಇದೆ. ಅದು ನಂಗೇ ಕಾಣಿಸ್ತಿದೆ. ನನ್ನ ನಡುವಿನ ಗೆಳೆಯ ಗೆಳತಿಯರೆಲ್ಲ  ಪ್ರೀತಿ, ಪ್ರೇಮ ಅಂತ ಕನವರಿಸುವಾಗಲೆಲ್ಲ ನಕ್ಕುಬಿಡುತ್ತಿದ್ದೆ. ಪ್ರೇಮದಲ್ಲಿ ಸೋತು ಬಂದ ಗೆಳತಿ ನೋವಿನಿಂದ ಅಳುತ್ತಿದ್ದರೆ; ನಿನ್ನದು ಪ್ರೀತಿಯಾಗಿರಲೇ ಇಲ್ಲ ಅಂತ ಉಪದೇಶ ಕೊಟ್ಟಾಗ ಸಿಟ್ಟಿನಿಂದ ನೀನು ಹೃದಯಾನೇ ಇಲ್ಲದ ಪ್ರಾಣಿ ಅಂತ ಬೈದು ಎದ್ದು ಹೋಗಿದ್ದಳು. ಯಾರದೋ ನೋವಿಗೆ ಸ್ಪಂದಿಸುವುದೆಂದರೆ ಅವರೊಂದಿಗೆ ಸೇರಿ ಅಳೋದಲ್ಲ...ಭಾವುಕತೆಗೂ, ಬರೀ ಎಮೋಷನ್ಸ್‌ಗೂ ವ್ಯತ್ಯಾಸವಿದೆ ಅಂತೆಲ್ಲ ಭಾಷಣ ಬಿಗಿಯುತ್ತಿದ್ದವನು ನಾನು...

ಇಂತಹುದೇ ಘಳಿಗೆಯೊಂದರಲ್ಲಿ ನನ್ನ ಬದುಕಿಗೆ ಹೊಸದಾಗಿ ಬಂದು ಸೇರಿ ಹಾಯ್ ಅಂದವಳು ನೀನು... 
ಆ ದಿನ ನಿನ್ನ ಹೆಸರನ್ನೂ ಕೇಳಿರಲಿಲ್ಲ ನಾನು. ಇಂದಿಗೂ ನಿನ್ನ ಹೆಸರು ನಂಗೆ ನಗಣ್ಯವೇ. ನಿನ್ನೊಂದಿಗಿನ ಭಾವವಷ್ಟೇ ಮುಖ್ಯ.

ಮೊದಲ ನೋಟದಲ್ಲೇ ನೀನು ಆಕರ್ಷಿಸಿದವಳೂ ಅಲ್ಲ. ಅಂಥ ಅಪರೂಪದ ಚೆಲುವೆಯೂ ಅಲ್ಲ. ನನ್ನ ಬಾಲಿಶ ಕನಸಿನ ಹುಡುಗಿಯ ಚೆಲುವು ಖಂಡಿತಾ ನಿನ್ನಲಿರಲಿಲ್ಲ. ಸಣ್ಣ ಆಕಾರದ, ಸಾಮಾನ್ಯ ಬಿಳುಪಿನ, ಬೆರಗು ಕಣ್ಗಳ ಹುಡುಗಿ..ನನ್ನ ಸ್ನೇಹದ ಅಡ್ಡಾಕ್ಕೊಂದು ಹೊಸ ಸೇರ್ಪಡೆ ಅಷ್ಟೇ...

ಆದರೆ ಆ ಬೆಳಗು...ಅದು ಬೆಳಗಲ್ಲ... 
ನನ್ನ ಬದುಕು ಪ್ರೀತಿ ಪಾರಿಜಾತದ ಗಂಧ ಹೀರಲು ಹೆಜ್ಜೆ ಎತ್ತಿಟ್ಟ ಮೊದಲ ಘಳಿಗೆ ಅಂತ ಅನ್ನಿಸುತ್ತೆ ಈಗ. ಅಂದೂ ನೀನು ಎಂದಿನಂತೆಯೇ ಬಂದಿದ್ದೆ. ಆದರೆ ಎತ್ತಿಡುವ ಹೆಜ್ಜೆಗಳಲಿ, ಘಲಿರೆನ್ನುವ ಗೆಜ್ಜೆಯಲಿ ಏನೋ ಉತ್ಸಾಹ. ನೇರ ನನ್ನೆಡೆಗೆ ನಡೆದು ಬಂದು ಹಲ್ಲೋ ನಂಗೆ ವಿಷ್ ಮಾಡಲ್ವಾ; ನನ್ನಮ್ಮ ನಂಗೆ ಜನ್ಮ ನೀಡಿದ ಚಂದದ ದಿನ ಇಂದು ಅಂತ ನೇರಾ ನೇರ ನನ್ನ ಕಣ್ಗಳಲ್ಲಿಳಿದಿದ್ದೆ. ನಾನು ಶುಭಕೋರಿದೆನಾ ಗೊತ್ತಿಲ್ಲ. ಆದರೆ ನಿನ್ನ ಕಣ್ಗಳನ್ನ ಹತ್ತಿರದಿಂದ ಕಂಡ ಆ ಕ್ಷಣ ನಾನು ಸಣ್ಣಗೆ ಕಂಪಿಸಿದ್ದೆ. ಆ ಬಟ್ಟಲು ಕಂಗಳಲ್ಲಿನ ಆರೋಗ್ಯವ ಕಂಡು. ಕಣ್ಣು ಮನಸಿನ ಕನ್ನಡಿ ಅಂತ ಪ್ರಾಮಾಣಿಕವಾಗಿ ನಂಬ್ತೇನೆ. ಕಣ್ಗಳಲ್ಲಿ ಅಷ್ಟೆಲ್ಲ ಆರೋಗ್ಯ ಇದ್ದರೆ ಮನಸಲ್ಲೂ ಇರಲೇಬೇಕಲ್ಲವಾ...ಅಷ್ಟೇ..
ಮೊದಲಬಾರಿಗೆ ನಾನಾಗಿ ನಾನು ಒಂದು ಹೆಣ್ಣು ಜೀವದ ಗೆಳೆತನಾನ ಬಯಸಿ ನಿನ್ನೆಡೆಗೆ ಕೈಚಾಚಿದ್ದೆ. ಅಲ್ಲಿಂದ ಮುಂದೆ ನಿನ್ನೊಡನೆಯ ಪ್ರತಿ ಹೆಜ್ಜೆಯಲ್ಲೂ ನಿನ್ನ ಸ್ವಚ್ಛ ಮನದ ಆರೋಗ್ಯ ನಂಗೆ ಅನುಭವಕ್ಕೆ ಬರ್ತಾ ಹೋಯ್ತು. ನನಗೇ ಅರಿವಿಲ್ಲದೇ ನಂಗೆ ಪ್ರೇಮಕಥೆಗಳು ಇಷ್ಟವಾಗುತ್ತಾ ಹೋದವು.. ನಾನು ಇಷ್ಟಿಷ್ಟೇ ಮೃದುವಾಗುತ್ತಾ ಹೋದೆ..ಮನಸ್ಸಿಂದ, ಭಾವಗಳಿಂದ...ಯಾವ ಘಳಿಗೇಲಿ ಮನಸು ಪೂರಾ ಪೂರಾ ನಿನ್ನ ಮಡಿಲ ಮಗುವಾಗಿ ಹೋಯ್ತೋ ಗೊತ್ತಿಲ್ಲ. ಅಂತೂ ನಾನು ಪೂರ್ತಿ ನೀನೇ ಆಗಿ ಹೋದೆ...

ಯಾರ ದೊಡ್ಡಸ್ತಿಕೇನೂ ಸಹಿಸದ ನಾನು ಸುಮ್ ಸುಮ್ನೇ ನಿನ್ನೆದುರು ಕಬೋಜಿಯಾಗ್ತೇನೆ. ನೀನು ಒಮ್ಮೊಮ್ಮೆ ಅಮ್ಮನಂತೆ, ಇನ್ನೊಮ್ಮೆ ರಚ್ಚೆ ಹಿಡಿವ ತಂಗಿಯಂತೆ, ಮಗದೊಮ್ಮೆ ಪ್ರೀತಿಯಿಂದ ಕಿವಿ ಹಿಂಡೋ ಕನ್ನಡಶಾಲೆಯ ಅಕ್ಕೋರಂತೆ ಕಂಡುಬಂದು ನನ್ನಲ್ಲಿ ಖುಷಿಯುಕ್ಕಿಸುತ್ತೀಯಾ.. ಹಾಗಾಗಿ ನಾನೊಬ್ಬನೇ ಇರುವಾಗ ಕೂಡ ನನ್ನಷ್ಟಕ್ಕೇ ನಗುತ್ತಿರುತ್ತೇನೆ ಹಿತವಾಗಿ.. ಸೋಲೆಂದರೆ ಸಿಟ್ಟಿಗೇಳುವ ನಾನು ನಿನ್ನೆದುರು ನಗುನಗುತ್ತ ಮಂಡಿಯೂರುತ್ತೇನೆ. 
ಯಾಕೆ ಹಿಂಗೆಲ್ಲ ಆಗುತ್ತೆ ಅಂತ ಅಮ್ಮನ್ನ ಕೇಳಿದೆ. ಈ ಬದುಕಿನ ಮೊದಲ ಗೆಳತಿ ಅವಳು...ಅಯ್ಯೋ ಮರುಳಾ ಪ್ರೀತಿಯಾಗಿದೆ ಕಣೋ ಅಂತ ತಲೆ ತಟ್ಟಿದಳು.. ಇಷ್ಟು ದಿನಕ್ಕೆ ಒಂದು ಪ್ರೀತಿಯುಕ್ಕೋ ಕೆಲಸ ಮಾಡಿದೀಯಾ ಕಣೋ.. ಅಂತ ಅಪರಂಜಿಯಂಥ ಹುಡುಗಿಗೆ ಸೋತಿದೀಯಲ್ಲಾ ಅಷ್ಟು ಸಾಕು ಅಂದು ಬಿಟ್ಟಳು... ಯಾಕೋ ನಿನ್ನ ಬಗ್ಗೆ ಅಸೂಯೆ ಆಯ್ತು. ನನ್ನಮ್ಮನ ಪ್ರೀತೀನೂ ಗೆದ್ದುಬಿಟ್ಟೆಯಲ್ಲೇ ಕೂಸೇ..
ನಿನ್ನ ಜೊತೆಗಿದ್ದರೆ ನಂಗ್ಯಾಕೆ ಇಷ್ಟೊಂದು ಖುಷಿಯಾಗುತ್ತೆ.? ನಿನ್ನನ್ಯಾಕೆ ನಾನು ಇಷ್ಟೊಂದು ಹಚ್ಚಿಕೊಂಡಿದ್ದೇನೆ.?? ನಿನ್ನ ಜೊತೆಗಿರ್ತಾ ಇರ್ತಾ ನನಗೇ ನಾನು ಇನ್ನಷ್ಟು ಸ್ಪಷ್ಟವಾದಂತ ಭಾವ ನನ್ನಲ್ಯಾಕೆ.??? ನಿನ್ನ ಕಣ್ಣ ಕೊಳದಲ್ಲಿ ಮೀಯುತ್ತ ನನ್ನ ನಾನೇಕೆ ಕಳೆದುಕೊಳ್ಳುತ್ತೇನೆ.???? ಅಂತೆಲ್ಲ ಕೇಳಿದ್ದು ನೀನು.
ಯಾಕೇಂದ್ರೆ ನೀನು ನನ್ನ ಪ್ರೀತಿಸ್ತಿದೀಯಾ ಅದಿಕ್ಕೆ ಅಂದರೆ ನಾನು; ಏ ಇರ್ಲಿಕ್ಕಿಲ್ಲ ಕಣೋ ನಾನಿನ್ನೂ ಪ್ರೇಮ, ಮದುವೆ, ಸಂಸಾರಗಳ ಬಗ್ಗೆ ಯೋಚಿಸಿಲ್ಲ ಅಂದಿದ್ದೆ ನೀನು.
ಅಲ್ಲಾ ಕಣೇ ಎಲ್ಲಾರೂ ಮಾಡೋ ತಪ್ಪೇ ಇದು. ಪ್ರೀತಿಸಿದೆ ಅಂದ್ರೆ - ಇಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಂಡು, ಒಂದಷ್ಟು ಮರ ಸುತ್ತಿ, ಮನೆಯವರನೆಲ್ಲ ಒಪ್ಪಿಸಿಯೋ  - ಎದುರಿಸಿಯೋ ಮದುವೆಯಾಗಿ, ಸಂಸಾರ ಹೂಡಿ, ಮಕ್ಕಳನ್ನು ಹೆತ್ತು, ಅವರನ್ನು ಬೆಳೆಸಿ, ಅವರಿಗಾಗಿ ಗಳಿಸಿ, ಉಳಿಸಿ, ಒಂದಿನ ಎಲ್ಲರಂತೆ ಸತ್ತುಹೋಗೋದು ಅಂದ್ಕೊಂಬಿಡೋದು..ಪ್ರೀತಿ ಅದಲ್ಲ... ಪ್ರೀತಿ ಬಾವಿಯಲ್ಲ  ಕಣೇ ನದಿ..ಪ್ರೀತಿಗೆ ಚೌಕಟ್ಟು ಹಾಕಿದ ಕ್ಷಣ ಅಷ್ಟರಮಟ್ಟಿಗೆ ಪ್ರೀತಿ ಸತ್ತಂತೆ. ಪ್ರೇಮಕ್ಕೆ ಚೌಕಟ್ಟು ಕಟ್ಟಿದಾಗ ಪ್ರೇಮವೂ ಸ್ವಾರ್ಥವೇ. ಪ್ರೀತಿ ಇಬ್ಬರನ್ನೂ ಬೆಳೆಸಬೇಕು. ಇಬ್ಬರ ಸುತ್ತಣ ಬದುಕುಗಳನ್ನೂ ಬೆಳಗಿಸಬೇಕು... ಅರಳಿಸಬೇಕು.. ಸಂಭ್ರಮಿಸಬೇಕು... ಮದುವೆ, ಸಂಸಾರಗಳೆಲ್ಲ ಪ್ರೀತಿಯನ್ನು ವ್ಯಕ್ತಪಡಿಸೋ, ಹಂಚಿತಿನ್ನೋ ಸಾಮಾನ್ಯ ಮಾಧ್ಯಮವಾಗಬೇಕು... ಮದುವೆ, ಸಂಸಾರಗಳೇ ಪ್ರೀತಿ ಅಲ್ಲ. ಪ್ರೀತಿ ಅದಿಲ್ಲದೆಯೂ ಉಳಿಯಬೇಕು...ನಲಿಯಬೇಕು...ನದಿ ಸುಮ್ಮನೆ ತನ್ನ ಪಾಡಿಗೆ ತಾನು ಹರಿಯುತ್ತಿರುತ್ತೆ.. ಅದರ ಇಕ್ಕೆಲಗಳಲ್ಲಿ ನಾಗರೀಕತೆ ತಂತಾನೇ ಚಿಗುರುತ್ತಿರುತ್ತೆ. ಅವುಗಳ ಜತೆಗಿದ್ದೂ ಅವುಗಳ ಹಂಗಿಲ್ಲದೇ ನದಿ ಹರಿಯುತ್ತಲೇ ಇರುತ್ತೆ. ಅದಕ್ಕೇ ಪ್ರೀತಿ ಜೀವ ಉಳಿಸೋ ಗಂಗೆ...ಪ್ರೀತಿ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವ ಕೈಹಿಡಿದ ಗೆಳೆತನ ಅಂದದ್ದು ನಾನು...ನಾ ಅಂದಂತೆ ಬದುಕಿ ತೋರುತ್ತಿರುವುದು ನೀನು...
ಹೀಗೆಲ್ಲ ಯೋಚಿಸುತ್ತಲೇ, ಮಾತಾಡುತ್ತಲೇ ನನ್ನನ್ನು ನಾನು ಮತ್ತು ನನ್ನ ಬದುಕನ್ನು ನಾನು ಇನ್ನಷ್ಟು ಪ್ರೀತಿಸಿಕೊಳ್ಳುವಂತೆ,  ಜೀವದ್ರವ್ಯ ಬತ್ತಿದ ಮೇಲೂ ಹಾರು ಹಕ್ಕಿಯ ವಿಶ್ರಾಂತಿಗೆ - ತಬ್ಬಿ ಬೆಳೆವ ಲತೆಯ ಬದುಕಿಗೆ ಆಸರೆಯನೀವ ಒಣಮರದ ನಿಸ್ವಾರ್ಥ ಒಲವ ಒರತೆ ನನ್ನಲ್ಲೂ ಒಂದಿಷ್ಟು ಒಸರಿದ್ದರೆ ಅಂತ ಬಯಸುವಂತೆ ಮಾಡಿದ್ದು ನಿನ್ನ ಗೆಳೆತನ.

ನಾನೂ ನಿನ್ನನ್ನು ತುಂಬಾನೇ ಪ್ರೀತಿಸಿದೆ. ಹಾಗಾಗಿ ಬದುಕಿಂದು ಸಂಭ್ರಮಿಸುತ್ತಿದೆ. ಅಮ್ಮ ಇನ್ನಷ್ಟು ಹತ್ತಿರವಾಗ್ತಿದಾಳೆ. ಬೀದಿಯ ಮಕ್ಕಳೆಲ್ಲ ಅದ್ಭುತ ಗೆಳೆಯರು.. ಪ್ರೀತಿಯ ಚಂದಿರ ಇನ್ನಷ್ಟು ಬೆಳಗುತ್ತಿದ್ದಾನೆ..ಮನೆ ಮುಂದಿನ ಕೈತೋಟದಲ್ಲಿ ಹೂಗಳ ಬಣ್ಣದೋಕುಳಿ..

ನಾನೆಷ್ಟೇ ನೂಕಿದರೂ ನನ್ನೆಡೆಗೆ ನುಗ್ಗಿ ಬರುವ ನಿನ್ನೊಲವ ಅಲೆಗಳ ತೊನೆತಕ್ಕೆ ಸಿಕ್ಕಿ ನಾ ಕಟ್ಟಿಕೊಂಡ ನನ್ನಹಂಕಾರವೆಂಬ ಮರಳ ಮಹಲು ಕರಗಿ ಹೋಗಿ ಈಗಿಲ್ಲಿ, ಎನ್ನೆದೆಯ ದಂಡೆಯಲಿ ಪ್ರೀತಿ ಕಪ್ಪೆಚಿಪ್ಪು ಗರ್ಭಧರಿಸಿದೆ...


ಸಾಗರನ ಮರಳ ದಂಡೆಯ ಮೇಲೆ  ನಿನ್ನೆದೆಯ ಬಿಸುಪು ನನ್ನೆದೆಯ ರೋಮವ ತಾಕಿ, ಕಣ್ಣು ಕಣ್ಣು ಸೇರಿ ಪ್ರೀತಿ ಆಳ ಹುಡುಕುತಿರಲು, ಜೇನಿನಾಸೆಗೆ ತುಟಿಗಳು ಹಂಬಲಿಸಿ ಸನಿಹ ಸರಿಯುತಿರೆ, ಬಾನ ಭಾಸ್ಕರ ನಮ್ಮ ಏಕಾಂತದ ಹಿತವಾದ ಉನ್ಮಾದಕೆ ತಾನಡ್ಡಿಯಾಗದಿರಲೆಂದು ವಸುಧೆಯ ಸೆರಗ ಮರೆಯ ಹುಡುಕುತಿದ್ದಂತೆ ಮತ್ತೆ ಮತ್ತೆ ಕನಸಾಗುತ್ತಿದೆ ಈಗೀಗ...

ಯಾವುದೋ ದಾರಿಯಲಿ, ನೀರವ ಮೌನದಲಿ ಒಬ್ಬಂಟಿ ನಡೆಯುತಿದ್ದೆ...ಆಗಸದ ಚಂದಿರನೂ ನನ್ನೊಡನೆ ಹೆಜ್ಜೆ ಹಾಕುವವನಂತೆ ನನ್ನ ಮೇಲುಗಡೇಲೇ ನಡೀತಿದ್ದ ಬಾನ ದಾರಿಯಲ್ಲಿ. ಮನಸಿಗೇನೋ ಪುಳಕ. ಚಂದಿರನೆಂದರೆ ನನಗ್ಯಾಕಿಷ್ಟೊಂದು ಇಷ್ಟವಾಗುತಿದ್ದಾನೆ ಈಗೀಗ..? ಆತ ನಿನ್ನನೇ ಹೋಲುತ್ತಾನೆಂದಾ...

ಹೀಗೆ ನಮ್ಮಿಬ್ಬರ ಬದುಕಲ್ಲೂ ಒಂದು ಪ್ರೀತಿ ಅರಳಿ ನಿಂತಿದೆ ಮತ್ತು ನಾವಿಬ್ಬರೂ ಅರಳಿ ನಿಂತ ಪ್ರೀತಿಯ ತೋಟದಲ್ಲಿ ಸಂಭ್ರಮಿಸುತ್ತಿದ್ದೇವೆ. ಒಟ್ಟಿಗೆ ಬಾಳುವ ಮಾತಾಡದೇ, ಮನಸಲ್ಲೇ ಮನೆ ಕಟ್ಟಿಕೊಂಡು, ಅದನ್ನು ಚಂದಗೆ ಶೃಂಗರಿಸಿಕೊಂಡು ಅಲ್ಲಿ ಒಟ್ಟಿಗೇ ಬದುಕುತ್ತಿದ್ದೇವೆ. 
ಕನಸುಗಳಿಗೆ ಹೊಸ ಬಣ್ಣ ತುಂಬಿದ ಗೆಳತೀ - ಎಂಥ ಸೊಗಸಿದೆಯಲ್ಲವಾ ಈ ಪ್ರೀತಿಯಿಂದ ಬದುಕಿಗೆ..


ಇಂತಿ -   
                                                             ಪ್ರೀತಿ ಲೋಕದ ಬಡ ಜೋಗಿ...

ಚಿತ್ರ ಕೃಪೆ : ಅಂತರ್ಜಾಲ...

Tuesday, February 12, 2013

ಗೊಂಚಲು - ಹತ್ತು x ಆರು + ಒಂದು.....

ಅಗಾಧ ಬದುಕು - ನಿಗೂಢ ಸಾವು
ಅಳುವ ಮನಸು.....

ಕಣ್ಣಲ್ಲಿ ಸಾವಿರ ಕನಸುಗಳ ಮತಾಪು...
ಬೆನ್ನಲ್ಲಿ ಈಡೇರಿಸಿಕೊಳ್ಳಲಾಗದ ಅಸಹಾಯಕತೆಯ ನಡುಕ...

ಬಣ್ಣ ಬಣ್ಣದ ಕತ್ತಲು...
ಭವಿಷ್ಯವನ್ನು ತೋರಲಾರದ ಬೆಳಕು...
ನಮ್ಮೆಲ್ಲ ಪ್ರಯತ್ನವನ್ನೂ ಮೀರಿ ಒಮ್ಮೆಲೇ ಧುತ್ತನೆ ಎದುರಾಗಿ ಕಾಡುವ ಹತಾಶೆ...

ಮನುಷ್ಯನ್ನು ಸಾವು ಮತ್ತು ಸೋಲುಗಳು ಕಂಗೆಡಿಸಿದಷ್ಟು ಮತ್ಯಾವ ವಿಷಯಗಳೂ ಕಂಗೆಡಿಸಲಾರವೇನೋ. 
ಸಾವನ್ನಾದರೂ ಒಪ್ಪಿಕೊಂಡು ಬಿಡಬಹುದು. 
ಏಕೆಂದರೆ ಅದು ಸಾರ್ವಕಾಲಿಕ ಮತ್ತು ಸರ್ವವಿಧಿತ ಸತ್ಯ. 
ಆದರೆ ಸೋಲುಗಳು - 
ಮನುಷ್ಯನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಎರಡೂ ವಿಧಗಳಲ್ಲೂ ಹಣ್ಣಾಗಿಸುವ ವಿಚಾರವೆಂದರೆ ಸೋಲುಗಳು. 
ಅವು ಸತತ ಹಾಗೂ ನಿರಂತರವಾಗಿದ್ದರಂತೂ ಆ ವ್ಯಕ್ತಿ ಇದ್ದೂ ಸತ್ತಂತಿರುತ್ತಾನೆ. 
ಅದು ಸೋಲಿನ ತಾಕತ್ತು.
ಮತ್ತೆ ಈ ಕಷ್ಟಗಳೂ ಹಾಗೇ ತುಂಬಾ ಒಗ್ಗಟ್ಟು ಪ್ರದರ್ಶಿಸುತ್ತವೆ.
ಯಾವತ್ತೂ ಅವು ಒಂದರೊಡನೊಂದು ಕೂಡಿಕೊಂಡೇ ಬಂದು ಅಮರಿಕೊಳ್ಳುತ್ತವೆ.
  
ಕೆಲವೇ ಕೆಲವು ಸೋಲುಗಳಿರುತ್ತವೆ ಆನಂದವನ್ನೀಯುವಂಥವು. 
ಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯಗಳೆದುರಿನ ಸೋಲುಗಳು. 
ಭಿನ್ನ ಲಿಂಗದ ಪ್ರೇಮಕ್ಕೆ ಸೋತ ವ್ಯಕ್ತಿ  ಆ ಸೋಲಿನಲ್ಲೂ ಆನಂದವನ್ನು ಕಾಣ್ತಾನೆ. 
ಆದ್ರೆ ಯಾವ ಕ್ಷಣದಲ್ಲೇ ಆಗ್ಲಿ ಆ ಪ್ರೇಮ ವಿಫಲವಾದರೆ ಆ ವೈಫಲ್ಯವನ್ನಾತ ತನ್ನ ವ್ಯಕ್ತಿತ್ವದ ಸೋಲು ಅಂದ್ಕೋತಾನೆ. 
ಹಾಗಂದುಕೊಂಡ ವ್ಯಕ್ತಿಯ ಬದುಕು ನರಕ. 
ಕನಿಷ್ಠ ಪಕ್ಷ ಆ ಪ್ರೇಮ ವೈಫಲ್ಯದ ಬಿಸಿಯನ್ನು ಬದುಕು ತಣಿಸುವ ತನಕ.

ಸೋಲು ನಮ್ಮನ್ನು ಒಮ್ಮೊಮ್ಮೆ ಹಣಿದು ಹಣ್ಣಾಗಿಸಿ - ಸೋಲಿರುವಲ್ಲೇ ನಾವು ಹೆಜ್ಜೆ ಇಡ್ತೀವೋ ಅಥವಾ ಸೋಲೇ ನಾವು ಹೆಜ್ಜೆ ಇಡುವಲ್ಲೆಲ್ಲ ಬಂದು ಕುಳಿತಿರುತ್ತೋ ಎಂದು ಅರ್ಥವಾಗದಂಥ ಸ್ಥಿತಿಗೆ ತಂದು ನಿಲ್ಲಿಸಿ ಕಂಗೆಡಿಸುವುದು ನಿಜವೇ ಆದರೂ ಯಾವ ಸೋಲೂ ಶಾಶ್ವತವೇನಲ್ಲ. 
ಸೋಲು ನಾವು ಸ್ವೀಕರಿಸಿದಂತೆ - 
ಪತನ ಅಂದುಕೊಂಡರೆ ನಾವು ಜೀವಂತ ಹೆಣ. 
ಗೆಲುವಿನ ದಾರಿಯಲ್ಲಿನ ಹೊಸ ಅನುಭವ ಅಂದುಕೊಂಡರೆ ನಿಧಾನವಾಗಿಯಾದರೂ ನಮ್ಮ ಆಟದ ಅಂಗಳ ಗಗನ. 
ಸೋಲಿನ ಕೈಯಳತೆಯಲ್ಲೇ ಗೆಲುವಿನ ಕಣ್ಣಾಮುಚ್ಚಾಲೆ. 
ಅದನ್ನರಿತುಕೊಂಡು ಸೋಲುಗಳನೆಲ್ಲ ಮಣಿಸಿ ಗೆಲುವಾಗಿಸಿಕೊಂಬ ಸಹನೆ ಮತ್ತು ಛಲ ನಮಗಿರಬೇಕಷ್ಟೇ. 
ಬಾಹ್ಯವಾಗಿ ಎಂಥ ಸೋಲೇ ಎದುರಾದರೂ ಮನಸನ್ನು ಸೋಲಗೊಡದಂತೆ ಎಚ್ಚರವಹಿಸಿ  ಅಲ್ಲಿಂದಲೇ ಹೊಸ ಸ್ಫೂರ್ತಿ ಪಡಕೊಂಡು ಮತ್ತೆ ಯುದ್ಧಕ್ಕೆ ಹೊರಡುವ ತಾಕತ್ತು ಬೆಳೆಸಿಕೊಳ್ಳಬೇಕಷ್ಟೇ. 
ಸೋಲು ತರುವ ನೋವನ್ನು ಬಾಗಿಲಾಚೆಯೆ ನಿಲ್ಲಿಸಿ - ಆ ಪಯಣದುದ್ದಕ್ಕೂ ದಾರಿಯಲ್ಲಿ ಸಿಕ್ಕ ಅನುಭವಜನ್ಯ ಪಾಠವನ್ನಷ್ಟೇ ಒಳಗೆಳೆದುಕೊಳ್ಳುವ ಜಾಣ್ಮೆ ಗಳಿಸಿಕೊಳ್ಳಬೇಕಷ್ಟೇ. 
ಸೋಲುಗಳ ಮರುಭೂಮಿಯ ನಡುವೆ ನಿಂತು ಗೆಲುವುಗಳ ಜಲಪಾತದ ಅಪೇಕ್ಷೆ ಪಡದೇ - ಆ ಮರುಭೂಮಿಯ ಮಧ್ಯೆಯೇ ಅಲ್ಲಲ್ಲಿ ಸಿಗುವ ಹೊಸ ಹೊಸ ಅನುಭವಗಳೆಂಬ ಓಯಸ್ಸಿಸ್ಸಿನಿಂದಲೇ ಮನದಲ್ಲಿ ಭರವಸೆಯ ಖರ್ಜೂರದ ಗಿಡ ನೆಟ್ಟು ಹೊಸ ಕನಸಿಗಾಗಿ ಆತ್ಮಬಲವ ವೃದ್ಧಿಸಿಕೊಳ್ಳಬೇಕಿದೆ.
ಆಗ ಮುಂದಾದರೂ ಗೆಲುವಿನ ನಿತ್ಯಹರಿದ್ವರ್ಣ ದಕ್ಕೀತು.
ಗೆಲುವಿನ ಜಲಪಾತದಡಿಯಲಿ ನಿಂತು ಮೀಯುವ ಕನಸ ಕಣ್ಣಲ್ಲಿಟ್ಟುಕೊಂಡು - ಅದು ಕೈಗೂಡುವವರೆಗೆ ಪುಟ್ಟ ಕಲ್ಯಾಣಿಯಲ್ಲೇ ಮೀಯುತ್ತ - ಮೀನುಗಳೊಂದಿಗೆ ಆಟವಾಡುತ್ತ - ಈ ಕ್ಷಣವನ್ನು ಇದ್ದದ್ದು ಇದ್ದ ಹಾಗೇ ಅನುಭವಿಸ್ತಾ ಖುಷಿಯಾಗಿರಬಲ್ಲೆವಾದರೆ ಅದಕಿಂತ ದೊಡ್ಡ ಮಾನಸಿಕ ಗೆಲುವು ಇನ್ನೇನಿದೆ...
ಒಂದು ಸೋಲು ಹೊಸ ಹತ್ತು ಗೆಲುವುಗಳಿಗೆ ನಾಂದಿ ಹಾಡಬೇಕು.

ಬದುಕಿಗಾಗಿ - ಗೆಲುವಿಗಾಗಿ ಹೋರಾಡುವ ಮಾತು ಬಂದಾಗಲೆಲ್ಲ ನಂಗೆ ಜೇಡರ ಹುಳ ನೆನಪಾಗುತ್ತೆ. 
ಆ ಪುಟ್ಟ ಜೇಡರ ಹುಳದ ಪ್ರಯತ್ನಶೀಲತೆ ನನ್ನಲ್ಲಿ ಅಚ್ಚರಿ ಮೂಡಿಸುತ್ತೆ.
ಆಗಷ್ಟೇ ಬಲೆ ಹೆಣೆದು ಮುಗಿಸಿ ಬಲೆಗೆ ಬೀಳುವ ಆಹಾರಕ್ಕಾಗಿ ಕಾಯುತ್ತ ಕೂತರೆ ಅಷ್ಟರಲ್ಲಾಗಲೇ ಯಾರೋ ಶತ್ರು ಆ ಬಲೆಯನ್ನು ತುಂಡರಿಸಿರ್ತಾನೆ.
ಆಗ ಮತ್ತೆ ಓಂಕಾರದಿಂದ ಪ್ರಾರಂಭಿಸಬೇಕು. 
ಅದೂ ಹಸಿದ ಹೊಟ್ಟೆಯಲ್ಲಿ. 
ಆದ್ರೂ ಅದು ಕಂಗೆಡದೇ ಮತ್ತೆ ಮತ್ತೆ ಬಲೆ ನೇಯುತ್ತಲೇ ಇರುವ ಪರಿಯಿದೆಯಲ್ಲ ಅದು ಆ ಚಿಕ್ಕ ಜೀವದ ಪ್ರಯತ್ನಶೀಲತೆ, ಸಹನೆ, ಬದುಕಲೇಬೇಕೆಂಬ ಛಲ ಇವಕ್ಕೆಲ್ಲ ಸ್ಪಷ್ಟ ನಿದರ್ಶನ.
ಆ ಪುಟ್ಟ ಹುಳದ ಆಶಾಭಾವ ಪ್ರಕೃತಿಯ ಬಲಿಷ್ಠ ಕೃತಿ ಅನ್ನಿಸಿಕೊಂಡ ನಮ್ಮಲ್ಲೇಕಿಲ್ಲ. 
ಸೋಲಿಗೆ ಯಾಕಿಷ್ಟು ಕಂಗೆಡುತ್ತೇವೆ.

ನಮಗೆಲ್ಲ ಗೊತ್ತು - 
ಬದುಕಿನ ಅಗಾಧತೆಗೆ ಈ ಎಲ್ಲ ಸೋಲು ವೈಫಲ್ಯಗಳನ್ನೂ, ಅವುಗಳಿಂದ ಜೊತೆಯಾದ ನೋವುಗಳನ್ನೂ ಮರೆಸಿಬಿಡುವ, ಅಳಿಸಿಹಾಕುವ ದಿವ್ಯ ತಾಕತ್ತಿದೆ. 
ಹಾಗಂತಲೇ ಬದುಕಬೇಕೆಂಬ ಸಣ್ಣ ಆಸೆ ಇದ್ದರೂ ಸಾಕು ನಿರಾಸೆಯ ಕೂಪದಲ್ಲಿ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿ ಕೂಡ ಕ್ರಮೇಣ ಎದ್ದು ನಿಲ್ಲಬಲ್ಲ, ಚೇತರಿಸಿಕೊಳ್ಳಬಲ್ಲ. 
ಮತ್ತೆ ಬದುಕ ಕಟ್ಟಿಕೊಂಡು ನಗಬಲ್ಲ. 
ಬದುಕಿನ ಅಗಾಧತೆಗೆ ಅಂಥ ತಾಕತ್ತಿರೋದರಿಂದಲೇ ಪ್ರಾಜ್ಞರು ಬದುಕನ್ನು ಸಾಗರಕ್ಕೆ ಹೋಲಿಸಿದ್ದಾರೆ. 
ಉಕ್ಕಿ ಹರಿವ ನೂರಾರು ನದಿಗಳನ್ನು ತನ್ನಲ್ಲಡಗಿಸಿಕೊಂಡೂ ಕಡಲು ತನ್ನ ಸಮತೋಲನವನ್ನು ಕಾದಿಟ್ಟುಕೊಳ್ಳುವ ಪರಿ ಅಗಾಧ. 
ಎಲ್ಲೆಲ್ಲಿಂದಲೋ ಹರಿದು ಬರುವ ಬೇರೆ ಬೇರೆ ರುಚಿ ಬಣ್ಣಗಳ ನದಿಗಳನೆಲ್ಲ ತನ್ನೊಳಗೆ ಹೀರಿಕೊಂಡು, ತನಗೆ ಬೇಕಾದಂತೆ ಬದಲಿಸಿ ಒಂದೇ ತೆರನಾಗಿಸಿಕೊಂಡು ಗಂಭೀರವಾಗಿ ತೊನೆಯುವ ಶರಧಿಯ ವೈಶಾಲ್ಯವನ್ನು ಬದುಕಿಗೆ ಹೋಲಿಸಿದ್ದು ಎಂಥ ಸಮಂಜಸ ಅಲ್ವಾ...
ಯಾವ್ಯಾವ ಕಡೆಯಿಂದಲೋ ಹ್ಯಾಗ್ಯಾಗೋ ಮುತ್ತಿ ಬರುವ ನೋವು ನಲಿವುಗಳನ್ನೂ ನುಂಗಿಕೊಂಡು ಇಂದಿನ ನೋವು ನಲಿವುಗಳನೆಲ್ಲ ನಾಳೆಗೆ ಕೇವಲ ನೆನಪು ಮಾತ್ರವಾಗಿ ಪರಿವರ್ತಿಸಿ ನಮ್ಮ ನಾಳೆಗಳನ್ನು ಸಹನೀಯವಾಗಿಸಬಲ್ಲ ಸಾಮರ್ಥ್ಯ ಬದುಕಿನ ಅಗಾಧತೆಗಿದೆ. 
ಹಾಗಿರೋದಕ್ಕೇ ಯಾರ ಬದುಕೂ ಬದುಕಲಾರದಷ್ಟು ನಿಕೃಷ್ಟವಲ್ಲ ಎಂಬ ಮಾತಿಗೆ ಬೆಲೆ ಬಂದಿದೆ. 
ಇಂದಿನ ನೋವು, ನಲಿವು - ನಾಳೆಗೆ ಅದು ಬರೀ ನೆನಪು. 
ನೋವಿನದಿರಲಿ ನಲಿವಿನದಿರಲಿ ನೆನಪು ಮೂಡಿಸುವುದು ನಗುವನ್ನೇ.

ಇನ್ನು ಬದುಕಿನ ಅಗಾಧತೆಯನ್ನು ಕೂಡ ಅಳಿಸಿಬಿಡುವ ತಾಕತ್ತಿರೋದು ಸಾವಿಗೆ. 
ಸಾವು ಬಿಡಿ. 
ಅದಕ್ಕೆ ಈ ಬದುಕನ್ನೇನು ಈ ಭುವಿಯಲ್ಲಿ ನಮ್ಮದೊಂದು ಕುರುಹನ್ನೂ ಇಲ್ಲದಂತಾಗಿಸಿಬಿಡುವ ತಾಕತ್ತಿದೆ. 
ಸಾವಿನ ನಿಗೂಢತೆ ಬದುಕಿನ ಅಗಾಧತೆಗಿಂತ ಮಿಗಿಲು.
ಯಾವಾಗ..?
ಎಲ್ಲಿ.??
ಯಾವ ರೀತಿ.???
ಎಂಬಂಥ ಯಾವ ಮಾಹಿತಿಯನ್ನೂ ನೀಡದೇ ದಿಢೀರೆಂದು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಎದುರಾಗಿ ಬಿಡಬಲ್ಲ ಸಾವಿನ ಬಗೆಗೆ ಮಾತಾಡದಿರುವುದೇ ಲೇಸು.
ಸಾವು ಉಳಿಸಬಹುದಾದದ್ದು ವಿಷಾದ ಮಾತ್ರ.
ಉಳಿದವರ ಮನದಲ್ಲಿ - ಅಳಿದವರ ಬಗೆಗೆ...

ಇಷ್ಟೆಲ್ಲ ತಿಳಿದ ಮೇಲೂ
ಪ್ರಜ್ಞೆಯ ಆಳದಿಂದ
ನಿನ್ನೆ ಸತ್ತ ಕನಸಿನ ಘೋರಿಯ ಮೇಲೆಯೇ
ನಾಳೆ ಹೊಸದೊಂದು ಕನಸಿನ ಹಸಿರು ಚಿಗುರೀತು ಎಂಬ ಭರವಸೆ ಮೂಡಿ ನಿಲ್ಲುತ್ತಿದ್ದರೂ...
ಥೂ -
ಹಾಳಾದ ಈ ಮನಸ್ಯಾಕೆ ಹೀಗೆ...
ಸಿಕ್ಕ ಖುಷಿಗಳ ನೆನೆದು ನಗುತ ಹಾಯಾಗಿರುವುದ ಬಿಟ್ಟು...
ಒಂದ್ಯಾವುದೋ ಕನಸಿನ ಸಾವಿಗೆ...
ಅನುಭವಿಸಿದ ಪುಟ್ಟ ನೋವಿಗೆ ಜೋತು ಬಿದ್ದು ಸದಾ ಕೊರಗುತ್ತಿರುತ್ತದೆ...
ಏನದಕ್ಕೆ ಅಳುವೆಂದರೆ ಆ ಪರಿ ಖುಷಿಯೋ...!!!

ವಿ.ಸೂ : ಈ ಬರಹ ಈ-ಪತ್ರಿಕೆ 'ಪಂಜು'ವಿನ ದಿನಾಂಕ 11-02-2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪಂಜು ಪತ್ರಿಕೆಯ ಕೊಂಡಿ ಇಂತಿದೆ... http://www.panjumagazine.com/?p=650 

Thursday, February 7, 2013

ಗೊಂಚಲು - ಅರವತ್ತು.....

ಅವಳ ಮಡಿಲ ಕಂಪಲ್ಲಿ ಜಗವ ಮರೆವ ತಂಪು...
ಎಲ್ಲ ಹೋಲಿಕೆಗಳಿಗೂ ಮೀರಿದ, ಕರುಳಿಂದ ಬೆಸೆದ ಬಂಧ ...
ಅಮ್ಮ ಅಂದರೆ ಅಮ್ಮ ಅಷ್ಟೇ.....
ಈ ಚೆಲುವೆಯ ಮನದ ಮುಗುಳ್ನಗೆಯು ಎನ್ನಾತ್ಮಶಕ್ತಿಯ ಮೂಲ ಸೆಲೆ... 

ಇಂದು - 07/02/2013
ನಾ ನಕ್ಕಾಗ ಸಂಭ್ರಮಿಸಿ...
ನನ್ನ ನೋವಲ್ಲಿ ಕಣ್ಣ ಹನಿ ಹರಿಸಿ...
ತನ್ನ ನೋವ ಮರೆತು ನನ್ನ ನಗಿಸಿ ಆಡಿಸಿ...
ಒಲವ ಸುಧೆ ಉಣಬಡಿಸಿ...
ಮಮತೆಯ ಮಡಿಲಲ್ಲಿ ತೂಗಿ...
ತಾನುರಿದು - ತನ್ನ ಪ್ರೀತಿ ಹಣತೆಯ ಬೆಳಕಲ್ಲಿ
ಸದಾ ನನ್ನ ಬಾಳ ಬೆಳಗುತಿರುವ...
ಎನ್ನ ಉಸಿರಿಗೆ ಹೆಸರ ನೀಡಿದ...
ಎನ್ನ ಜೀವದ ಜೀವದಾತೆ...
ಎನ್ನ ಬದುಕ ಭಾಗ್ಯದೇವತೆ...
ಎನ್ನ ಕಾಯುವ ಒಲವ ಆಲದ ಮರ...
ಎನ್ನ ಆಯಿಯ ಜನುಮ ದಿನ...
ಆ ಚೈತನ್ಯಕ್ಕೊಂದು ಪ್ರಣಾಮ...

ಆಯೀ ನನ್ನೊಲವು ನಿನ್ನೆಡೆಗಿದೆ...
ನಿನ್ನ ಮಗುವೆಂಬ ಹೆಮ್ಮೆ ನನ್ನದು...
ನಿನ್ನ ನಗಿಸುತಲಿರುವ ಚೈತನ್ಯ ನೀಡು...

Friday, January 25, 2013

ಗೊಂಚಲು - ಐವತ್ತು ಮತ್ತು ಒಂಭತ್ತು.....

ಬೆಳದಿಂಗಳ ನಗು.....
...ಇದು ನನ್ನೆಡೆಗಿನ ನಿಮ್ಮಗಳ ನಿಷ್ಕಾರಣ ಪ್ರೀತಿಯ ಅಭಿಮಾನಕ್ಕೆ ಮತ್ತು ನನ್ನ ಭಾವ ಬರಹಗಳ ಗೊಂಚಲಿಗೆ ಎರಡು ವಸಂತಗಳು ಸಂದ ಸಂಭ್ರಮದ ನಗು...ನಿಮ್ಮ ಪ್ರೀತಿಗೆ ನನ್ನ ನಮನಗಳು...ಈ ಪ್ರೀತಿ ಅನವರತ ಜಾರಿಯಲಿರಲಿ ಇದೇ ರೀತಿ...ಅಕ್ಷರ ಪ್ರೀತಿ ಬೆಸೆಯಲಿ ಬಂಧಗಳ...ವಿಶ್ವಾಸ ವೃದ್ಧಿಸಲಿ - ಶ್ರೀ...

ಹೊರಗೆ ಬೆಳದಿಂಗಳಿದೆ. 
ಬೆಳದಿಂಗಳು ನನಗ್ಯಾವತ್ತೂ ಆಕರ್ಷಣೀಯವೇ.
ಹಾಗೇ ನೋಡ್ತಿದ್ದೆ.
ಏನೋ ಗಡಿಬಿಡಿ ಇರುವಂತೆ, ಯಾರನ್ನೋ ತುರ್ತಾಗಿ ನೋಡಲೇಬೇಕೆಂಬಂತೆ ಒಂದು ಉಲ್ಕೆ ಬಾನಲ್ಲಿ ವೇಗವಾಗಿ ಓಡ್ತಾ ಇತ್ತು.
ಕಣ್ಣಿಗೆ ಕಾಣೋವರೆಗೂ ಅದನ್ನ ನೋಡಿದೆ.
ಎಂಥ ಖುಷಿ ಗೊತ್ತಾ...

ಮೊದಲ್ಯಾವತ್ತಾದ್ರೂ ಬರೆದಿದ್ದೀನಾ.?
ನೆನಪಿಲ್ಲ.
ಏನಂದ್ರೆ -
ಬೆಳದಿಂಗಳ ರಾತ್ರಿಗಳಲ್ಲೂ ವೈವಿಧ್ಯವಿದೆ ಕಣ್ರೀ.
ಹುಣ್ಣಿಮೆಯಂದು ಹೊಳೆವ ಪ್ರಕೃತಿಗೂ, ಬಿದಿಗೆಯಂದು ಕಾಣೋ ಸೃಷ್ಟಿ ಸೌಂದರ್ಯಕ್ಕೂ ವ್ಯತ್ಯಾಸವಿದೆ.
ಬೆಳದಿಂಗಳ ಚೆಲ್ಲೋ ಚಂದಿರನೊಬ್ಬನೇ.
ಕೆಳಗೆ ಅರಳಿ ನಳನಳಿಸೋ ವಸುಧೆಯೂ ಒಬ್ಬಳೇ.
ಆದರೂ ವೈವಿಧ್ಯ.
ಬೆಳದಿಂಗಳು ಪ್ರಖರವಾಗಿರುವ ಪೌರ್ಣಿಮೆಯಂದು ವಸುಧೆ -
ಹಾಲಲ್ಲಿ ಮಿಂದು ಮೈಯೊರೆಸಿಕೊಳ್ಳುವುದನ್ನು ಮರೆತವಳಂತೆ,
ಕಪ್ಪಂಚಿನ ಬಿಳಿಸೀರೆಯನುಟ್ಟು ಪ್ರಚ್ಛನ್ನವಾಗಿ ನಗುತ್ತ ನಿಂತ ಪ್ರಬುದ್ಧ ಚೆಲುವೆಯಂತೆ ಗೋಚರಿಸುತ್ತಾಳೆ.
ಅದೇ ಬಿದಿಗೆ ಮತ್ತು ಆಚೀಚಿನ ದಿನಗಳಲ್ಲಿ -
ಬಾಗಿಲ ಮರೆಯಿಂದ ಅಸ್ಪಷ್ಟವಾಗಿ ಇಣುಕುವ,
ತೆಳ್ಳನೆಯ ನಾಚಿಕೆಯ ತೆರೆ ಹೊದ್ದ,
ಕಡೆಗಣ್ಣಲ್ಲೇ ನೋಡಿ,
ತುಟಿಯಂಚಲ್ಲೇ ನಕ್ಕೂ ನಗದಂತಿರುವ
ಹೊಸ ಹರೆಯದ ಚೆಲುವರಳುವ ಸಮಯದ ಮುಗುದೆಯಂತೆ ಕಂಡು ಪುಳಕವೆಬ್ಬಿಸುತ್ತಾಳೆ.
ಎಂಥ ಸವಿರಸ ರೋಮಾಂಚನ...

                                  @@@@@


ಮೊನ್ನೆ ದಿನ ಬಿದಿಗೆಯ ಚಂದಿರ ಆಗಸದಿ ನಗುತಲಿದ್ದ.
ಆತ ಚೆಲ್ಲಿದ ಬೆಳದಿಂಗಳು ನೊರೆ ಹಾಲಿನಂತೆ ತೆಂಗು, ಅಡಿಕೆ, ಮಾವಿನ ಮರಗಳ ಮೇಲೆಲ್ಲಾ ಓಕುಳಿಯಾಡುತಿತ್ತು.
ಅಂಗಳದಲಿ ನಿಂತು ನೋಡಿದರೆ ಹಾಯೆನಿಸುವಂತಿತ್ತು.
ಒಂದು ಕ್ಷಣ ಇಂದು ಹುಣ್ಣಿಮೆ ಇರಬಹುದಾ ಅಂತ ಅನುಮಾನ ಪಡುವಷ್ಟು ಬೆಳದಿಂಗಳು.
ಬಿದಿಗೆಯ ಚಂದ್ರ ಹೇಗೆ ಇಷ್ಟೆಲ್ಲ ಬೆಳಗಲು ಸಾಧ್ಯ ಅನ್ನಿಸ್ತು.
ಸೂರ್ಯನಿಂದ ಸ್ವಲ್ಪ ಜಾಸ್ತಿಯಾಗಿ ಬೆಳಕ ಇಸಿದುಕೊಂಡಿರಬಹುದಾ ಅಂತ ಯೋಚಿಸ್ತಿದ್ದೆ.
ಆದ್ರೆ ಅದು ಸರಿಯಾದ ಕಾರಣವಲ್ಲಾ ಅಂತ ನಂಗೇ ಗೊತ್ತಾಗ್ತಿತ್ತು.
ತಲೆಯೆತ್ತಿ ಸರಿಯಾಗಿ ಚಂದ್ರನ್ನ ನೋಡಿದ್ರೆ ಏನೋ ಕಚಗುಳಿಯಿಂದ ಸ್ಫೂರ್ತಗೊಂಡ ಉಲ್ಲಾಸದಂಥದ್ದು ಅವನ ಮೊಗದಲ್ಲಿತ್ತು.
ಏನಿದ್ದೀತು ಕಾರಣ ಅಂತ ಅವನು ಮತ್ತೆ ಮತ್ತೆ ನೋಡುತ್ತಿದ್ದ ಕಡೆಗೆ ತಿರುಗಿ ನೋಡಿದೆ.
ಫಕ್ಕನೆ ಉತ್ತರ ಸ್ಪಷ್ಟವಾಯ್ತು.
ದುಂಡು ಮಲ್ಲಿಗೆಯೊಂದು ಬಿರಿದಂತೆ,
ಯಾವುದೋ ಸವಿ ನೆನಪು ಕೈಜಗ್ಗಿ ಕಾಡಿದಂತೆ,
ಹಾಗೇ ಸುಮ್ಮನೆ
ನೀನಲ್ಲಿ ನಿಂತು ನಗುತಲಿದ್ದೆ...
ಚಂದಿರ ನಿನ್ನ ಕೆನ್ನೆ ಗುಳಿಯನು ತನ್ನ ಬೆಳಕಿಂದ ತಾಕಿ ಉಲ್ಲಸಿತನಾಗುತಿದ್ದ...

ಸಣ್ಣ ಆಸೆ ನನ್ನಲ್ಲಿ...
ನಿನ್ನ ನಗುವ ಹಿಂದಿನ ಮಧುರ ನೆನಪಲ್ಲಿ ನಾನಿರಬಹುದಾ..!!!

ಹುಣ್ಣಿಮೆಯ ದಿನ ಬಿಳಿ ಮೋಡದ ಹದವಾದ ತೆರೆಯೊಂದು ಚಂದ್ರನ ಸುತ್ತುವರಿದರೆ ಅವನ ಸುತ್ತ ತಿಳಿಕೇಸರಿಯ ಬಳೆಯಂಥ ಪ್ರಭಾವಲಯವೊಂದು ಮೂಡಿನಿಲ್ಲುತ್ತದೆ.
ಆ ಸೊಬಗ ನೋಡಿದ್ದೀಯಾ ಒಮ್ಮೆಯಾದರೂ..?
ಆ ಚೆಲುವ ಹೀರಿಕೊಳ್ಳುವುದು ಕಣ್ಣಿಗೊಂದು ಹಬ್ಬ.


ಅವತ್ತೂ ಹಾಗೇ ಆಗಿತ್ತು...
ಅದ್ಯಾರದೋ ಮದುವೆ ಮನೇಲಿ ಗೆಳತಿಯರ ಹಿಂಡಿನ ನಡುವೆ ತಿಳಿಕೇಸರಿ ಸೀರೆಯಲಿ ನಗುತ ಕಂಗೊಳಿಸುತ್ತಿದ್ದ ನಿನ್ನ ಮೊದಲಬಾರಿ ನಾ ಕಂಡಿದ್ದೆ.
ಸಮ್ಮೋಹಿತನಾದ ನನ್ನಲ್ಲಿ ಹಗಲಲ್ಲೇ ಆ ಹುಣ್ಣಿಮೆ ಚಂದಿರನ ಕಂಡಂಥ ಭಾವ ಸಮ್ಮಿಲನ...

ಹುಡುಗೀ -
ನಿನ್ನ ಮುಂಗುರುಳ ಸುರುಳಿಯಲಿ ಬಂಧಿಯಾದ ನನ್ನ ಮನಸಲೀಗ ಒಲವಿನಲೆಗಳ ಅಬ್ಬರ...
ಮೊದಲೆಲ್ಲ ಬೆಳದಿಂಗಳ ಬೆಳಕಲ್ಲಿ ಭುವಿಯ ನೋಡಲು ಎಷ್ಟು ಸೊಗಸಿತ್ತು.
ಈಗೀಗ ಚಂದ್ರನ ನೋಡಿದರೆ ನಿನ್ನೇ ನೋಡಿದಂತಾಗಿ ಇಹವ ಮರೆವ ನನ್ನ ಮನದ ಪರಿಯ ಹೇಗೆ ಹೇಳಲಿ ನಿನಗೆ...

ನನ್ನ ಒಲವಿನ ಕನಸ ತುಂಬ ನೀನೇ - ಬರೀ ನೀನೇ
'ಪೌರ್ಣಿಮೆ....'

ಚಿತ್ರ ಕೃಪೆ : ಅಂತರ್ಜಾಲದಿಂದ...

Friday, January 11, 2013

ಗೊಂಚಲು - ಐವತ್ತೆಂಟು.....

ಕನಸೇ.....

ಬದುಕು ಕಸಿದುಕೊಂಡ ಸಾವಿರಾರು ಖುಷಿಗಳಲ್ಲಿ 
ನೀನೂ ಒಂದು ಖುಷಿ ಎಂದುಕೊಂಡು 
ನಿನ್ನ ಮರೆಯಲೆತ್ನಿಸಿದೆ....
ಆದರೆ -
ಜೀವ ಭಾವಗಳಲ್ಲಿ ಬೆರೆತುಹೋಗಿ 
ಚಿತ್ತ ಭಿತ್ತಿಯಲಿ ಕನಸುಗಳಿಗೆ 
ಉಸಿರನಿತ್ತವಳು ನೀನು...
ಖುಷಿಯಿಲ್ಲದೇ ಬದುಕಿಯೇನು...
ಕನಸೇ ಇಲ್ಲದೆ ಹೇಗೆ ಬದುಕಿಯೇನು..???

ನಿಚ್ಛಳ ಬೆಳದಿಂಗಳು...
ಮಂದ ಮಾರುತ...
ರಾತ್ರಿ ರಾಣಿಯ ಗಂಧ...
ಮುಂಜಾನೆ ಅಂಗಳದಲಿ ಇಬ್ಬನಿ ತಬ್ಬಿದ 
ಪಾರಿಜಾತದ ರಂಗೋಲಿ...
ಇವೆಲ್ಲ ನಿನ್ನ ಕೆನ್ನೆ ಗುಳಿಯ ಒನಪು 
ಮತ್ತು 
ನಿನ್ನ ಹರಡಿದ ಹೆರಳ ಕಂಪ 
ನೆನಪ ಹೊತ್ತು ತಂದು ಈಗಲೂ ಕಾಡುತ್ತವೆ.
ರಾತ್ರಿಯ ನೀರವ ಮೌನದಲ್ಲಿ ಅರಚುವ 
ಜೇಡರ ಹುಳದ ಗಿಜಿಗಿಜಿ ಸದ್ದು 
ನಿನ್ನ ಗೆಜ್ಜೆ ನಾದದಂತೆ ಕೇಳಿ 
ಈಗಲೂ ನನ್ನೆದೆ ಡಮರುಗವಾಗುತ್ತೆ.

ನಿನ್ನ ಜೊತೆ ನಡೆವಾಗ
ಮೌನ ಗುನುಗುವ ಪಿಸುಮಾತು...
ಅಮಾವಾಸ್ಯೆಯ ಕತ್ತಲಲೂ
ಹೊಳೆವ ನಿನ್ನ ಮುಗುಳ್ನಗು...
ನನ್ನ ಕಾಡಲೆಂದೇ
ಹೊಯ್ದಾಡುವ ನಿನ್ನ ಮುಂಗುರುಳು...
ಕಟ್ಟಿ ಕೊಡುತಿದ್ದ 
ಸಾವಿರ ಹೊಂಗನಸುಗಳು...
ಎಲ್ಲ ನಲುಗಿ ಹೋದವು...
ಸಮಾಜದ
ಅರಿವಿಗೆ ಕುರುಡಾದ - ಪರಂಪರೆಯ 
ಕೆಂಗಣ್ಣಿಗೆ ಸಿಲುಕಿ...

ನಿನ್ನ ನೋವಿನ ನಿಟ್ಟುಸಿರು...
ಸಮಾಜವ ಜಯಿಸಲಾರದ ನನ್ನ ಹೇಡಿತನ...
ಸಂತೆ ನೆರೆದ ಸಂಸಾರದಲೂ
ಇಬ್ಬರದೂ
ಏಕಾಂಗಿ ಬಾಳು...
ನಮ್ಮನ್ನು ನಾವೂ ಪ್ರೀತಿಸಿಕೊಳ್ಳಲಾಗದ
ನಮ್ಮೊಳಗಿನ ಗೋಳು...

ಕೊಟ್ಟ ಕೊನೆಯಲಿ ನೀ ಆಡಿದ ಮಾತು :
ಪ್ರತಿದಿನ ನೀನು ಆಸ್ತೆಯಿಂದ ಮುದ್ದಿಸುತಿದ್ದ 
ನನ್ನ ಕಿರುಬೆರಳ ಮಚ್ಚೆಯಲಿ 
ನಿನ್ನ ಉಸಿರಿನ ನೆನಪು ಸದಾ ಹಸಿರಾಗಿರುತ್ತೆ ಕಣೋ...
ಆ ಮಾತೇ ಈಗಿನ್ನೂ ನಾನು ಉಸಿರಾಡುತಿರಲು ಪ್ರೇರಣೆ ಕಣೇ...

Saturday, January 5, 2013

ಗೊಂಚಲು - ಐವತ್ತು + ಏಳು.....

ನೋವು ನಗುವಿನ ತೊಟ್ಟಿಲು.....
[ಒಂದಷ್ಟು ಅರ್ಧಸತ್ಯಗಳ ರವಾನಿಸಿದ್ದೇನೆ ಇಲ್ಲಿ]


ಸ್ನೇಹಿತೆಯೊಬ್ಬಳು ಮಾತನಾಡುತ್ತಾ 'ನಗುವ ಜತೆ ಜತೆಗೆ ನಮ್ಮೊಳಗಣ ನೋವನ್ನೂ ವಿನಿಮಯ ಮಾಡಿಕೊಂಡಾಗಲೇ ಗೆಳೆತನವೊಂದು ಗಟ್ಟಿಯಾಗಿ ಬೆಸೆಯಲು ಸಾಧ್ಯ ಕಣೋ' ಅಂತಿದ್ದಳು.
'ನೋವು ಒಳಗಿರುವಾಗ ಮೊಗದಲ್ಲಿ ನಗುತಿರುವುದು ಕೃತಕವೆನ್ನಿಸೊಲ್ಲವಾ.?' ಅಂತ ಪ್ರಶ್ನಿಸಿದ್ದ ಗೆಳೆಯನೊಬ್ಬ.
ಅವೆಲ್ಲ ಸೇರಿ ನನ್ನಲ್ಲಿ ನೋವಿನ ಬಗ್ಗೆ ಒಂದಿಷ್ಟು ಗಿರಗಿಟ್ಲೆ ಶುರುವಾಗಿತ್ತು.

ಹುಟ್ಟಿದ ತಕ್ಷಣ ಮಗುವೊಂದು ಅಳುವುದರ ಮೂಲಕ ತನ್ನ ಉಸಿರಾಟವನ್ನು ಸುಗಮಗೊಳಿಸಿಕೊಳ್ಳುತ್ತಂತೆ. ನಾವೆಲ್ಲ ಹಾಗೆ ಮಾಡಿಯೇ ಉಸಿರಾಡಿದ್ದು. 
ಬಹುಶಃ ಅಲ್ಲಿಂದಲೇ ಮನುಷ್ಯನ ಬದುಕಿಗಾಗಿ ಅಳುವ ಮತ್ತು ಅಳುವ ಪ್ರೀತಿಸುವ ಮೂಲ ಗುಣಕ್ಕೆ ಬೀಜಾಂಕುರ. ಅಳುವನ್ನು ಪ್ರೀತಿಸುವುದು ಮನಸ್ಸಿನ ಸ್ಥಾಯೀ ಭಾವವೇನೋ ಅನ್ನಿಸುತ್ತೆ. ಅದಕ್ಕೇ ಇರಬೇಕು ನೋವ ನುಂಗಿ ಬದುಕಿದ 'ಪಾರು'ವಿಗಿಂತ ಅಳುವ ಉಸಿರಾಡಿದ 'ದೇವದಾಸ್' ಹೆಚ್ಚು ಪ್ರಿಯನೆನ್ನಿಸಿದ್ದು. ನಗುವ ಪ್ರೇಮಕಾವ್ಯಕ್ಕಿಂತ ಭಗ್ನ ಪ್ರೇಮಕಾವ್ಯ ಹೆಚ್ಚು ಪ್ರಚಲಿತವಾದದ್ದು. (ನಮ್ಮ ಮಹಾಕಾವ್ಯಗಳೆಲ್ಲ ನೋವ ಕಾವ್ಯಗಳೇ) ನಮ್ಮ ಒಳಗನ್ನು ಬೇಕಾದರೂ ನೋಡಿ - ಕಣ್ಣೀರು ಹೆಪ್ಪುಗಟ್ಟಿದಾಗಲೇ ಮನಸು ಗಟ್ಟಿಯಾಗುವುದು. ನೋವ ನುಂಗಿ ನಗಬಲ್ಲವರೇ ಬದುಕಿಗೆ ಹೆಚ್ಚು ಪ್ರಾಮಾಣಿಕರೆನ್ನಿಸುವುದು. ಕೆಸರಲ್ಲಿ ಅರಳಿದ್ದಕ್ಕೆ ಕಮಲ, ಮುಳ್ಳ ನಡುವೆ ನಗುವ ಗುಲಾಬಿ ಅಷ್ಟೊಂದು ಪ್ರಿಯವೆನ್ನಿಸುವುದು. ಒಳಗೊಂದಿಷ್ಟು ನೋವಿಲ್ಲದಿದ್ದಲ್ಲಿ ಪುಟ್ಟ ಪುಟ್ಟ ಸಂತೋಷಗಳನ್ನು ನಾವು ಹೆಚ್ಚು ಹೆಚ್ಚು ಪ್ರಾಮಾಣಿಕವಾಗಿ ಆಸ್ವಾದಿಸಲಾರದೇ ಹೋಗುತ್ತೇವೇನೋ. ನಗುವಿಗೆ ಅರ್ಥ ಬರೋದೇ ನೋವನ್ನು ಮೆಟ್ಟಿ ನಗು ಮೆರೆದಾಗ. ನೋವ ಹೀರಿ ನಗುವವರ ನಗು ಸ್ವಲ್ಪ ಕೃತಕ ಅನ್ನಿಸೀತು ಒಮ್ಮೊಮ್ಮೆ. ಆದರೂ ಆ ನಗು ಹೆಚ್ಚು ಪ್ರಾಮಾಣಿಕ ಅನ್ನಿಸುತ್ತೆ ನಂಗೆ. ಉಳಿದ ಮುಖವಾಡಗಳಿಗಿಂತ ಈ ಮುಖವಾಡ ಹೆಚ್ಚು ಪ್ರಿಯವೆನ್ನಿಸುತ್ತೆ ನಂಗೆ. 

ರಕ್ತ ಸಂಬಂಧವಲ್ಲದ, ಭಾವನಾತ್ಮಕ ವಿನಿಮಯವನ್ನು ನೆಚ್ಚಿಕೊಂಡ ಎಲ್ಲ ಸಂಬಂಧಗಳೂ ಗಾಢವೆನ್ನಿಸುವುದು, ಇನ್ನಷ್ಟು ಬೇಕು ಅನ್ನಿಸುವುದು ಯಾವುದೋ ನೋವಿಂದ ಮನಸು ಮಗುಚಿ ಬಿದ್ದಾಗಲೇ. ನಾನಿಲ್ಲಿ ನಮ್ಮ ನೋವನ್ನು ಹೇಳಿಕೊಂಡು ಅನುಕಂಪಗಳಿಸಿಕೊಳ್ಳೋ ಮಾತು ಹೇಳ್ತಿಲ್ಲ. ನೋವನ್ನು ಹರವಿಕೊಂಡು ಹಗುರಾಗುವ ಮಾತಾಡುತ್ತಿದ್ದೇನೆ. ಎರಡಕ್ಕೂ ವ್ಯತ್ಯಾಸವಿದೆ. ಅನುಕಂಪ ಬಯಸಿ ಕೂತವನು ಕೂತಲ್ಲೇ ಕೊಳೆಯುತ್ತಾನೆ. ನೋವ ಹೊರಚೆಲ್ಲಿ ಹಗುರಾಗಿ ಎದ್ದು ಹೋದವನು ಬದುಕನ್ನು ಚೆಂದಗೆ ಆಳುತ್ತಾನೆ. 
ನೋವ ಮಾತಾಡಿದವರೆಲ್ಲ ನೋವನ್ನೇ ಬದುಕುತ್ತಾರೆಂದಲ್ಲ. 
ನೋವು ಬದುಕಿನ ಅಂಗವಷ್ಟೇ - ನೋವೇ ಬದುಕಲ್ಲ ಎಂಬುದು ಗೊತ್ತಿಲ್ಲದವರೆಂತಲೂ ಅಲ್ಲ. 
ಎರಡು ಹನಿ ಕಣ್ಣೀರು ಚೆಲ್ಲಿ, ಆ ಹನಿಗಳೊಂದಿಗೆ ಎದೆಯ ನೋವ ಇಳುಕಿ  ಹೊಸ ಭರವಸೆ - ಹೊಸ ಕನಸುಗಳ ಎತ್ತಿಕೊಳ್ಳಬಲ್ಲವರೂ, ಜತೆಗೇ ಎಲ್ಲ ಭರವಸೆ - ಕನಸುಗಳ ಮೇಲಿನ ನಂಬಿಕೆಯ ನಡುವೆಯೂ ವಾಸ್ತವಿಕತೆಯನ್ನು ಮರೆಯಲಾಗದವರೂ ಆಗಿರಬಹುದು. 
ಮನಸಿನ ನಗು ಅಂದ್ರೆ ಏನು - ನೋವ ನಡುವೆಯೂ ಹೊಸ ಕನಸಿಗೆ ಗೂಡು ಕಟ್ಟೋದೇ ಅಲ್ವಾ...
ಇದು ನಾ ಕಂಡ ಬದುಕು ನಂಗೆ ಕರುಣಿಸಿದ ಪಾಠ.

ನೋವ ಹರವಿಕೊಳ್ಳಲು ಮತ್ತೊಂದು ಮನಸಿನ ಅಗತ್ಯ ಇಲ್ಲದಂತ ಮನೋ ಸಾಮರ್ಥ್ಯ ಹೊಂದಿದವರೆಡೆಗೆ ನಂಗೆ ಮಧುರ ಹೊಟ್ಟೆಕಿಚ್ಚಿದೆ. 

ದೊಡ್ಡ ದೊಡ್ಡ ಕನಸುಗಳ ಸಾಕಾರಗೊಳಿಸಿಕೊಳ್ಳಲಾಗದ ನೋವು - ಪುಟ್ಟ ಪುಟ್ಟ ಕನಸುಗಳನು ಪ್ರೀತಿಸುವ ಮತ್ತು ಜಯಿಸಿ ಆಸ್ವಾದಿಸುವ ಭವ್ಯ ಸುಖದ ಘಳಿಗೆಗಳನ್ನು ಒದಗಿಸಿಕೊಟ್ಟಿದ್ದಕ್ಕೆ ಯಾವುದೋ ದೊಡ್ಡ ನೋವಿಗೆ [ನನ್ನ ಮಟ್ಟಿಗೆ ದೊಡ್ಡದು..:)] ನಾನು ಬದುಕು ಪೂರ್ತಿ ಋಣಿಯಾಗಿರುವಂತೆ ಮಾಡಿದೆ. ಮನಸು ದ್ವಂದ್ವಗಳಲಿ - ನೋವಿನಲಿ - ಗೊಂದಲಗಳ ಸಂತೆಯಲಿದ್ದಾಗಲೂ ಬದುಕು ಬರೀ ನಗುವಿನಿಂದ ಕೂಡಿರುವಂತೆ ನೋಡಿಕೊಂಬ ಶಕ್ತಿ ಒಂದಿಷ್ಟಾದರೂ ಮೈಗೂಡಿದೆ. ಮನಸಿನ ನೋವು ಭಾವ ಕೋಶಕ್ಕೆ ಮಾತ್ರ ಸೀಮಿತವಾಗಿದ್ದು ಬದುಕು ಬುದ್ಧಿಯ ಕೈಲಿದ್ರೆ ಚೆನ್ನ ಅಂದ್ಕೋತೀನಿ. ನಾನು ಈವರೆಗೆ ಬರೆದಿದ್ದೆಲ್ಲ ಹೆಚ್ಚಿನದು ನೋವ ಕಥಾನಕವೇ. ಬದುಕಿದ್ದು ಈವರೆಗೂ ನಗುವ ತೊಟ್ಟಿಲಲ್ಲೇ.
ಮನಸಿಗೆ ಖುಷಿ ಎಲ್ಲಿಂದಲೋ ಬರಲ್ಲ. ನಾವೇ ಕೊಡಬೇಕು. 
ನಮ್ಮೊಳಗಿನ ನೋವು, ಸಂಕಟಗಳ ನಡುವಿನಿಂದಲೇ ಹೆಕ್ಕಿ ಹೆಕ್ಕಿ. ನಮ್ಮ ಬದುಕನ್ನು ಶೃಂಗರಿಸಿಕೊಳ್ಳಬೇಕಾದ್ದು ನಾವೇ ಅಂದ್ಕೋತೀನಿ. 
ಯಾವ ಭಾಗ್ಯವೂ ಯಾರನ್ನೂ ಮುನ್ನಡೆಸಿದ ಉದಾಹರಣೆ ಇಲ್ಲ - ನಮಗೆ ನಡೆವ ಮನಸಿಲ್ಲದಿದ್ದರೆ. 
ಯಾವ ನೋವೂ ಸಂಪೂರ್ಣ ಶಾಶ್ವತ ಅಲ್ಲ - ನಾವಾಗಿ ಗೊಬ್ಬರ ಹಾಕಿ ಬೆಳೆಸಿ ಕಾಯ್ದಿಟ್ಟುಕೊಳ್ಳದಿದ್ದರೆ.
ಯಾರೋ ತಂದುಕೊಟ್ಟಾರೆಂಬ ಖುಷಿಗಿಂತ - ನನ್ನದೇ ಬದುಕು ಕರುಣಿಸಿದ ನೋವುಗಳನು ಕಣ್ಣ ಹನಿಗಳೊಂದಿಗೆ ಕಳೆದುಕೊಂಡಾಗ ಒಂಥರಾ ಹಾಯೆನಿಸುತ್ತಲ್ಲ ಮತ್ತು ಮುಂದಿನ ಬದುಕನ್ನು ಎದುರುಗೊಳ್ಳೋಕೆ ಒಂದು ಹೊಸ ಚೈತನ್ಯ ಮೂಡಿ ನಿಂತಾಗ ಉಕ್ಕುತ್ತಲ್ಲ ಖುಷಿ - ಆ ಖುಷಿಯನ್ನ, ಕೇವಲ ನನ್ನದು ಮಾತ್ರ ಎನ್ನಿಸುವ ಆ ಆನಂದವನ್ನು ನಾನು ತುಂಬಾನೇ ಪ್ರೀತಿಸುತ್ತೇನೆ.

ನಾಳೆ ಬಂದೀತೆಂಬ ಬೆಳಕಿನ ನಿರೀಕ್ಷೆಗಿಂತ ನಂಗೆ ಈ ಕ್ಷಣ ನನ್ನದೇ ನೋವಿನ ಎಣ್ಣೆ ಸುರಿದು ನಾನೇ ಹಚ್ಚಿಟ್ಟುಕೊಂಡ ಸಣ್ಣ ನಗುವಿನ ದೀಪದ ಮೇಲೆ ಹೆಚ್ಚು ನಂಬಿಕೆ...

ಭಾವಗಳಿಗೆ ಮನಸ್ಸು - ಬದುಕಿಗೆ ಬುದ್ಧಿ.
ಬರಹ ಎದೆಯ ಭಾವ - ಅಲ್ಲೊಂದಿಷ್ಟು ನೋವು ಮತ್ತು ಪುಟ್ಟ ಪುಟ್ಟ ಸಂತಸಗಳಿವೆ.
ಬದುಕು ಬುದ್ಧಿಯ ಬರಹ - ಅಲ್ಲಿ ಬರೀ ನಗುವಿದೆ. 

ಮನಸಲ್ಲಿ ಇಂಗಿ ಹೆಪ್ಪಾದ ನೋವು ಬದುಕ ಕಟ್ಟಲು ಬುದ್ಧಿಗೆ ಗೊಬ್ಬರವಾಗಿ ನಗುವ ಬೆಳೆಯ ಬೆಳೆಸಲಿ ಬದುಕಲ್ಲಿ ಅಂತ ಬಯಸುತ್ತೇನೆ.

ಎಲ್ಲ ಜಂಜಡಗಳ ನಡುವೆಯೂ ಒಂದಿಷ್ಟು ಖುಷಿಯಾಗಿರೋಣ. 
ಬರಹ - ಭಾವ - ಬಂಧಗಳಲಿ...
ಏನಂತೀರಾ...

Thursday, January 3, 2013

ಗೊಂಚಲು - ಐವತ್ತಾರು.....

ಮನೆಯಂಗಳದ ಜಲಧಾರೆ.....

ಹಲವಾರು ಜಲಪಾತಗಳ ಜಿಲ್ಲೆ ಉತ್ತರ ಕನ್ನಡ. ಹಲವು ಪ್ರಸಿದ್ಧ ಸರ್ವಋತು ಜಲಪಾತಗಳೊಟ್ಟಿಗೆ ಮಳೆಗಾಲದಲ್ಲಿ ಮಾತ್ರ ಧುಮ್ಮಿಕ್ಕಿ ಬೇಸಿಗೆ ಇಣುಕುವ ಹೊತ್ತಿಗೆ ಬತ್ತಿ ಹೋಗುವ ನೂರಾರು ಜಲಪಾತಗಳು ಈ ಜಿಲ್ಲೆಯ ವೈಶಿಷ್ಟ್ಯ. ಆ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನವನು ನಾನು. ಯಲ್ಲಾಪುರದಿಂದ 28 ಮೈಲಿ ದೂರದ 'ಕಂಚೀಮನೆ' ನನ್ನೂರು. ದಟ್ಟ ಕಾಡಿನ ನಡುವೆಯ ಪುಟ್ಟ ಹಳ್ಳಿ. ನನ್ನ ಮನೆಯಂಗಳದಿಂದ ನಾಲ್ಕು ಮೈಲಿಯಷ್ಟು ಹೆಜ್ಜೆ ಸಾಗಿದರೆ ದಟ್ಟ ಕಾನನದ ಗೌವ್ವೆನ್ನುವ ನೀರವ ಮೌನದ ಮಧ್ಯೆ ಕೇಳುತ್ತೆ ಹರಿವ ಸಣ್ಣ ಹಳ್ಳದ ನೀರು ಧಾರೆಯಾಗಿ ಧುಮ್ಮಿಕ್ಕುವ ಧೋ ಎಂಬ ಸದ್ದು. ಮೈಲಿಯಾಚೆಯಿಂದಲೆ ಕೇಳುವ ನೀರಧಾರೆಯ ಸದ್ದಿಗೆ ಕಿವಿದೆರೆದು ಸಾಗಿದರೆ ಕಣ್ಣಿಗೊಂದು ಹಬ್ಬ ದಕ್ಕುತ್ತದೆ. ಸುಮಾರು 200 ಅಡಿಗಳಷ್ಟು ಎತ್ತರದಿಂದ ಕೆಳ ಧುಮುಕುವ ಜಲಪಾತಕ್ಕೆ ಸ್ಥಳೀಯರಿಟ್ಟ ಹೆಸರು "ಎಮ್ಮೆಶೀರಲ ವಜ್ರ". ವಜ್ರ ಅಂದರೆ ಜಲಪಾತ ಎಂದರ್ಥವಂತೆ. ಎಮ್ಮೆಶೀರಲ ಅನ್ನೋ ಹೆಸರಿನೊಂದಿಗೆ ಒಂದಷ್ಟು ಎಮ್ಮೆಗಳು ಮಳೆಗಾಲದ ನೀರ ಸೆಳವಿಗೆ ಸಿಕ್ಕಿ ಈ ಜಲಪಾತದಲ್ಲಿ ಬಿದ್ದು ಪ್ರಾಣ ಬಿಟ್ಟವು ಹಾಗಾಗಿ ಈ ಹೆಸರು ಎಂಬ ಪ್ರತೀತಿಯಿದೆ. ಇದೆಷ್ಟು ಸತ್ಯವೋ ಗೊತ್ತಿಲ್ಲ. ಅದೇನೇ ಇರಲಿ ಹಸಿರು ಮತ್ತು ನೀರ ಧಾರೆಯ ಚೆಲುವಿನಿಂದ ಈ ಜಲಪಾತ ಕಣ್ಮನ ತಣಿಸುವುದಂತೂ ಸತ್ಯ. ಚಾರಣ ಪ್ರಿಯರಿಗೊಂದು ಚಂದದ ತಾಣ. ಆದರೆ ಈ ಜಲಪಾತ ಮಳೆಯ ದಿನಗಳಲ್ಲಿ ಮಾತ್ರ ತುಂಬಿ ಹರಿಯುತ್ತೆ ಅನ್ನೋದು ಬೇಸರದ ಸಂಗತಿ. ಇಲ್ಲಿಗೆ ಹೋಗೋಕೆ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳವರೆಗಿನ ದಿನಗಳು ಮಾತ್ರ ಸೂಕ್ತ. ಅದರಲ್ಲೂ ಅಕ್ಟೋಬರ್ ಕೊನೆಯಲ್ಲಿ ತುಂಬಾ ಚಂದವಿರುತ್ತೆ. ಆದರೆ ಅಷ್ಟೇ ಅಪಾಯ ಕೂಡ.
ಈ ಬಾರಿ ಮನೆಗೆ ಹೋದಾಗ ನನ್ನವರೊಂದಿಗೆ ಮತ್ತೊಮ್ಮೆ ಈ ಜಲಪಾತಕ್ಕೆ ಹೋಗಿದ್ದೆ. ನೀರು ಖಾಲಿಯಾಗ್ತಿರೋ ದಿನಗಳಿವು. ಆದರೂ ಖುಷಿಗೆ ಕೊರತೆ ಆಗಲಿಲ್ಲ. ನನ್ನ ತಂಡದ ಜತೆಗೆ ನನ್ನ ಅಮ್ಮನೂ ಇದ್ದಳೆಂಬುದು ನನ್ನ ಖುಷಿಗೆ ಮೆರಗು ತಂದಿತ್ತು.
ನನ್ನ ಕ್ಯಾಮರಾ ಕಣ್ಣಲ್ಲಿ ಬಂಧಿಯಾದ ಚಾರಣದ ಕೆಲ ನೆನಪಿನ ಝಲಕುಗಳು ನಿಮಗಾಗಿ ಇಲ್ಲಿವೆ. ನಿಮಗೂ ಇಷ್ಟವಾದೀತೆಂದುಕೊಂಡಿದ್ದೇನೆ.
ಹೀಗೆ ಸಾಗಿತ್ತು ಕಾಡುದಾರಿಯ ಪಯಣ...




ಆಯಿ...

ಕಾಲು ಜಾರಿದರೆ ಕೈಲಾಸವೇ ಗತಿ...



ಮುಖ್ಯ ಜಲಧಾರೆ...


ಕಲ್ಲ ಮೇಲೆ ಹಸಿರ ಹಾಸು...





ಸಾಹಸ ಪ್ರಿಯರು...:)



ಪ್ರಕೃತಿ ನಿರ್ಮಿತ ಈಜುಕೊಳ...

ಇಲ್ಲಿಂದ ಧುಮುಕುತ್ತೆ ನೀರು...

ಮೇಲಿಂದ ಕೆಳ ನೋಡಿದಾಗ...

ಜಲಪಾತದ ಮೇಲಿಂದ ಕಾಡಿನೆಡೆಗೆ ಕಣ್ಣು ಹಾಯಿಸಿದಾಗ...



ಬಂಡೆ ಗಾತ್ರದ ಕಲ್ಲುಗಳು...:)