Sunday, June 19, 2011

ಗೊಂಚಲು - ಹದಿನೈದು...

ನಗೆಯ ಸಂತೆಯ ನಡುವೆ ನಿಂತು
ಅಳುವ ಮಾರುವ ಬಯಕೆ
ಯಾಕೆ ಈ ಮನಕೆ...

                           ಉಸಿರ ವೇಗಕೆ ಸ್ಪಂದಿಸುವ
                           ಎದೆಗೂಡ ಸಣ್ಣ ನೋವ ಕದಲಿಕೆಯಲ್ಲೂ
                           ನನ್ನ ಕನಸುಗಳ ಗರ್ಭಪಾತ...

ಒಂದು ಘಳಿಗೆಯ ಹೃದಯ ಸ್ತಂಭನ
ಬದುಕಿನದೇ ಅಕಾಲ ಅವಸಾನ...

ಓ ಹೃದಯವೇ
ನೀ
ಮಿಡಿತವ ನಿಲ್ಲಿಸದಿರು.....
                                    ಸೋಲುಗಳ ಸುಳಿಯಿಂದ ಎದ್ದು
                                    ಗೆಲುವಿನ ತೆಪ್ಪವೇರಿ ತೇಲುವ ಆಸೆ
                                    ಇನ್ನೂ ಉಸಿರಾಡುತಿದೆ...


                                    ಅವಳ ಮಡಿಲಲ್ಲಿ ಮಲಗಿ
                                    ನನ್ನ ನಾ ಕಳೆದುಕೊಳ್ಳುವ ಬಯಕೆ
                                    ಇನ್ನೂ ಹಾಗೇ ಉಳಿದುಕೊಂಡಿದೆ...
 ಒಲವಿನೊರತೆಯ
                                    ಹನಿಗಳ ಹೀರಿ
                                    ಬಾಳ ಚಪ್ಪರದ 
                                    ತುಂಬೆಲ್ಲ ಹಬ್ಬಿ ನಿಂತ
                                    ನಗೆ ಬಳ್ಳಿಯ
ಘಮಘಮಿಸುವ
ಹೂವಾಗಿ ಅರಳುವ ಆಸೆ
ಇನ್ನೂ ಬಾಕಿ ಇದೆ...
                                                                                   
.....Pleas   give  me   some  time.....

Sunday, May 29, 2011

ಗೊಂಚಲು - ಹದಿನಾಕು...

ಬರೀ  ಕನಸು...
     ಮತ್ತು
ಮುಖವಾಡಗಳ  ಬದುಕು...


"ಕನಸುಗಳಿಗೆ ಬಸಿರಾಗದ ಮನಸಿಲ್ಲವೇನೋ.! ಆದರೆ ಎಂದೂ ನನಸಾಗದ 

ಕನಸುಗಳಿಗೆ ಬಸಿರಾಗಿ ಆ ಹುಸಿ ಬಸಿರನ್ನು ಬರಿದೇ ಹೊತ್ತು ಅಂಡಲೆಯುವ 

ಮನಸಿನ ಬೋಳೇತನಕ್ಕೆ ಏನೆನ್ನಬೇಕು.? ಅರ್ಥವಿಲ್ಲದ ಕನಸುಗಳನ್ನೇ 

ಅಲ್ಲವಾ ಹಗಲ್ಗನಸು ಅನ್ನೋದು. 

ಓ ಮನಸೇ.....ಬರಿದೇ ಭ್ರಮೆಯ ಸೃಷ್ಠಿಸುವ ಹಗಲ್ಗನಸುಗಳಿಗೆ ಬಸಿರಾಗಿ       

ಆ ಬಸಿರು ಹುಸಿಯಾದಾಗ ರೋಧಿಸದಿರು.

 ಮನಸೇ...ಪ್ಲೀಸ್...ತಿಳಿಯಾಗು...  

ತಿಳಿಯಾಗಿ ನಕ್ಕುಬಿಡು...

ಆ ಮುಗುಳ್ನಗು ನನಸಾಗಬಲ್ಲ ಕನಸುಗಳನ್ನು ಹೊತ್ತು ತರಲಿ...
                                               
                                               *****
                                                 ***
                                                   *  


"ನಾಳೆಯ ಕನಸುಗಳಲ್ಲಿ ಇಂದಿನ ವರ್ತಮಾನವನ್ನು ನಗ್ತಾ ನೂಕೋದು 

ಸುಲಭ."

 ಆದ್ರೆ ನಾಳೆಗಳ ಬಗೆಗೆ ಸಿಹಿಗನಸು ಕಾಣುವ ಅವಕಾಶವೇ 

ಇಲ್ಲದಾದಾಗ - ಭವಿಷ್ಯದೆಡೆಗಿನ ಭರವಸೆಗಳೇ ಸತ್ತು ಹೋದಾಗ, ನಿನ್ನೆಯ ಕಹಿ  

ಘಟನೆಗಳನ್ನೇ ಸವಿ ನೆನಪೆಂದುಕೊಂಡು ಶುಷ್ಕ ನಗು ನಕ್ಕು ಇಂದನ್ನು 

ತಳ್ಳಬೇಕಾಗಿ ಬರುವುದು ಬದುಕಿನ ಎಂಥ ಯಾತನಾದಾಯಕ  ವಿಪರ್ಯಾಸ 

ಅಲ್ವಾ? ಅಳಬೇಕೆನಿಸಿದಾಗಲೂ ನಗೆಯ ಮುಖವಾಡ ಧರಿಸ್ತಾ - ಹೇಗೋ 

ಜೀವಿಸಬೇಕೆಂದ್ಕೊಂಡು ಇನ್ಹೇಗೋ ಜೀವಿಸ್ತಾ ಕಾಲ ಕಳೆಯೋದೇನಾ 

ಬದುಕೆಂದರೆ.? ಸುತ್ತಲಿನ ಸಮಾಜದೆದುರು ನಾವು ಚೆನ್ನಾಗಿದೀವಿ 

(ಸಂತೋಷವಾಗಿ) ಅಂತ ತೋರಿಸ್ಕೊಳ್ಳೋದು ಒಂದಷ್ಟು ಮಟ್ಟಿಗೆ ಅಗತ್ಯ 

ಮತ್ತು ಅನಿವಾರ್ಯ ಕೂಡಾ. ಯಾಕಂದ್ರೆ, ಎಷ್ಟೇ ಸ್ವಾವಲಂಬಿ ಮನುಷ್ಯ 

ಅಂತಂದ್ಕೊಂಡ್ರೂ ಆತ ಜೀವಿಸಬೇಕಾದದ್ದು - ಬದುಕು ಸವೆಸಬೇಕಾದ್ದು ಇದೇ 

ಸಮಾಜದ ನಡುವೆ. ಇದೇ ಸಮಾಜದ ಒಂದು ಅಂಗವಾಗಿ.


ಮನುಷ್ಯಂಗೆ 'ಮುಖವಾಡಗಳು' ಎಷ್ಟೊಂದು ಅಗತ್ಯ ಅಲ್ವಾ...!


Sunday, May 8, 2011

ಗೊಂಚಲು - ಹದಿಮೂರು...

ಆಯಿ...



ಅವಳೆದೆಯ ಅಮೃತವ ಕುಡಿದೆ
ಜೀವ ಇನ್ನೂ ಉಸಿರಾಡುತಿದೆ.
ಅವಳ ಕೈತುತ್ತನುಂಡು ಬೆಳೆದೆ
ಹಸಿವ ಸಹಿಸುವ ಚೈತನ್ಯ ಮೈದುಂಬಿದೆ.

ನನ್ನ ಬಾಲ್ಯದಲ್ಲಿ ಅವಳು ಮುಟ್ಟಾದಾಗ
ಬೆತ್ತಲಾಗಿ ಅವಳ ಮಡಿಲಲ್ಲಿ ಕುಳಿತಾಗ
ಅವಳ ಸೆರಗು ಹೊದಿಕೆಯಾದದ್ದು ನೆನಪಾದರೆ
ಮತ್ತೆ ಮಗುವಾಗುವ ಆಸೆಯಾಗುತ್ತೆ.
ಹಿಮದ ನಾಡಲ್ಲೂ 
ಛಳಿಯ ಸಹಿಸುವ ಶಕ್ತಿ ಮೈಗೂಡತ್ತೆ.

ನನ್ನ ಖುಷಿ ಅವಳ ನಗುವು ಎಂಬುದು
ನನ್ನ ಬೆರಗು.
ನನ್ನ ಗಾಯ ಅವಳ ಕಣ್ಣೀರೆಂಬುದು
ನನ್ನ ಬೇಗುದಿ.

ನಾನು ಬಿದ್ದಾಗ ತಬ್ಬಿ ಸಂತೈಸಿದ ಆಯಿ
ನಾನು ಗೆದ್ದಾಗ ಬರೀ ನಕ್ಕು ಸುಮ್ಮನಾದ ಪರಿ
ನನಗಿನ್ನೂ ಅರ್ಥವೇ ಆಗಿಲ್ಲ.

ಈ ಆಯಂದಿರೇ ಹೀಗೆ
ತಮಗೆ ಹಸಿವಾದರೆ ನಮಗೆ ಉಣಬಡಿಸುವ
ತಮಗೆ ಛಳಿಯಾದರೆ ನಮಗೆ ಕಂಬಳಿ ಹೊದೆಸುವ
ವಿಚಿತ್ರ ಜೀವಗಳು.

ಅವಳ ಮಮತೆಗೆ ಕಾರಣ
ಅವಳ ಒಡಲ ಪ್ರೀತಿಯ ಆಳ
ಗಂಡು ಪ್ರಾಣಿಯಾದ ನನ್ನ ತಿಳಿವಿಗೆ ಇನ್ನೂ ಅರಿವಾಗುತ್ತಲೇ ಇಲ್ಲ.

ಜೊತೆಯಲಿರುವಾಗ ಅವಳೆಂದರೆ ಸದರ ಭಾವ
ಇಂದು ಒಳ್ಳೆಯ ಮಗನಾಗಲಿಲ್ಲವೆಂಬ ನೋವ ಭಾವ.

ಆಯೀ...
ಹೇಳದಿರಲು ಕಾರಣ 
ಗಂಡೆಂಬ ಅಹಂಭಾವವಾ..? ಇಲ್ಲಾ
ಹೇಳಬೇಕಿಲ್ಲವೆಂಬ ಸದರ ಭಾವವಾ..? ಗೊತ್ತಿಲ್ಲ.
ಆದರೂ
ನಿನ್ನೆದುರಿಗೆ ಎಂದೂ ಹೇಳದ ಮಾತೊಂದ 
ಇಂದು ಹೇಳುತ್ತೇನೆ

ಆಯೀ...
             I  LOVE  YOU... 

ಜಗದೆಲ್ಲ ಅಮ್ಮಂದಿರಿಗೆ - ಅಮ್ಮಂದಿರಂಥ ಹೆಣ್ಣು ಜೀವಗಳಿಗೆ
ನನ್ನದೊಂದು  ಸಲಾಮ್...

Sunday, April 17, 2011

ಗೊಂಚಲು - ಹನ್ನೆರಡು...

ಪ್ರೇಮದ  ಘೋರಿಯ  ಮೇಲೆ  ಕುಳಿತು.....


ಪ್ರೇಮ - 'ಮನದ ಯಾವುದೋ ಒಂದು ಮೂಲೆಯಲ್ಲಿ ಗೊತ್ತೇ ಆಗದೆ ಹುಟ್ಟಿ, ಅಷ್ಟೇ ನಿಶ್ಯಬ್ದವಾಗಿ ಸತ್ತೂ ಹೋಗಬಹುದಾದ ಮಧುರ ಭಾವ...'

ಪ್ರೇಮ - 'ಸಂಪೂರ್ಣ ಅಭಿವ್ಯಕ್ತಿಸಲಾಗದ ಅವ್ಯಕ್ತ ಭಾವಗಳ ಗೊಂಚಲು...'

ಪ್ರೇಮ - ಅದು ನನ್ನಲ್ಲಿ ಹುಟ್ಟಿದ ಭಾವ ಬಿಂದು ಯಾವುದು ?
             ಸತ್ತ ಕಾರಣವೇನು ?
ಉತ್ತರ ಸಿಗದ ಪ್ರಶ್ನೆಗಳಿಗೆ ಸಿಲುಕಿ ಬಳಲಿ ಹೋಗಿದ್ದೇನೆ.

ಸತ್ತ ಪ್ರೇಮ ಉಳಿಸಿ ಹೋದ ಸ್ತಬ್ಧತೆಯಿಂದ ಆಚೆ ಬರಲಿ ಹೇಗೆ...?

ಒಮ್ಮೊಮ್ಮೆ ಆಸೆ ಆಗುತ್ತೆ...
ಮನಸಾರೆ ಬಿಕ್ಕಳಿಸಬೇಕೆಂದು - ಪ್ರೇಮದ ನಿಶೆಯೆಲ್ಲ ಇಳಿದುಹೋಗುವಂತೆ...
ಮನದ ಭಾವಗಳನೆಲ್ಲ ಆಚೆಸುರಿದು ಮಾತಾಗಬೇಕೆಂದು...
ಮತ್ತೆ ನಗಬೇಕೆಂದು - ಜಗದ ನಗುವೆಲ್ಲ ನನ್ನೊಬ್ಬನದೇ  ಎನುವಂತೆ...

ಒಮ್ಮೊಮ್ಮೆ ಹೀಗೂ ಅನ್ನಿಸತ್ತೆ...
ಈ ಸಮಾಜದ ಮಿತಿಗಳನೆಲ್ಲ ಮೀರಬೇಕೆಂದು...
ಸೂಳೆ ಮನೆಯಲ್ಲಾದರೂ ಸರಿ ಗಂಡಸಾಗಬೇಕೆಂದು...
ಒಂದಿಷ್ಟು ಕೆಟ್ಟವನಾಗಬೇಕೆಂದು...

ಎಲ್ಲಕ್ಕಿಂತ ತೀವ್ರವಾಗಿ ಆಸೆ ಆಗ್ತಿದೆ...
ಮತ್ತೆ ಬದುಕಬೇಕೆಂದು - "ನಾನಾಗಿ ನಾನು"
                                     ಕೇವಲ
                                  "ನನಗಾಗಿ ನಾನು"


ಎದೆಯಂಗಳ ಖಾಲಿಯಿದೆ. ಅಲ್ಲ ಮತ್ತೆ ಖಾಲಿಯಾಗಿದೆ.
ಕನಸ ಗಿಡ ನೆಡ ಬಯಸುವವರು ಸಂಪರ್ಕಿಸಬಹುದು...

Monday, April 4, 2011

ಗೊಂಚಲು - ಹನ್ನೊಂದು...

ದೋಸ್ತಿ.....

ಸಮಾನ ಅಭಿರುಚಿಗಳಿಂದ ಹುಟ್ಟಿದ ಗೆಳೆತನ ದೀರ್ಘಕಾಲ ಉಳಿಯುತ್ತೆ ಹಾಗೂ ಗಾಢವಾಗಿ ಬೆಳೆಯುತ್ತೆ ಮತ್ತು ತುಂಬಾ ತುಂಬಾ ಬದುಕನ್ನು ಪ್ರೀತಿಸುವಂತೆ ಮಾಡುತ್ತೆ. ಯಾಕೇಂದ್ರೆ ಅಭಿರುಚಿಯಿಂದ ಹುಟ್ಟಿ ಬಂದ ಗೆಳೆತನದಲ್ಲಿ ಸಣ್ಣ ಸಣ್ಣ ಅಪಸವ್ಯಗಳೆಲ್ಲ ಲಕ್ಷಕ್ಕೆ ಬರಲಾರವು. ನಮ್ಮ ಇತರೆ ಖುಷಿಗಳಿಗೆ ಅವರು ಎರವಾಗದಿದ್ದಾಗಲೂ ಕೂಡ ಅದೊಂದು ಗೆಳೆತನ ಬೆಳೆಯುತ್ತಲೇ  ಇರುತ್ತದೆ. ಅಭಿರುಚಿಯೇ ಆ ಗೆಳೆತನವನ್ನು ಗಟ್ಟಿಯಾಗಿಡುತ್ತದೆ. ಒಳ್ಳೆಯ ಅಭಿರುಚಿಯ ಅಂತರ್ಗತ ಸೆಳವಿನಿಂದಾಗಿಯೇ, ವಯಸ್ಸಿನ ಅಂತರ ಮತ್ತು ಆರ್ಥಿಕ ಅಂತರಗಳಿದ್ದಾಗ್ಯೂ, ಬದುಕಿನುದ್ದಕ್ಕೂ ಒಂದು ಚೆಂದನೆಯ ಸ್ನೇಹದ ಬಳ್ಳಿ ಹಸಿರಾಗಿ ಹಬ್ಬಿ ಹರಡಿರುತ್ತೆ.

ಒಂದು ಚಂದನೆಯ ಗೆಳೆತನವನ್ನು ನಿಭಾಯಿಸಬೇಕಾದಾಗ ಆ ಗೆಳೆಯನ ಸಣ್ಣ ಪುಟ್ಟ ದೌರ್ಬಲ್ಯಗಳನ್ನು ಸಹಿಸುವುದು ಅನಿವಾರ್ಯ. ತೀರ ಅದು ನಮ್ಮ ವ್ಯಕ್ತಿತ್ವಕ್ಕೇ ಮತ್ತು ಸಾಧನೆಗಳಿಗೇ ಅಡ್ಡಿಯಾಗುತ್ತೆ ಅಂದಾಗ ಆ ಗೆಳೆಯನನ್ನು ಧಿಕ್ಕರಿಸೋದು ಅನಿವಾರ್ಯವಾದರೂ ಉಳಿದ ಸಂದರ್ಭಗಳಲ್ಲಿ ಅವನ ಆ ದೌರ್ಬಲ್ಯಗಳೆಡೆಗೆ ನಿರ್ಲಿಪ್ತರಾಗಿರೋದು ಅವಶ್ಯಕ. ಆತ ಆತನ ದೌರ್ಬಲ್ಯಗಳನ್ನು ನಮ್ಮ ಮೇಲೆಯೂ ಹೇರುವಂತೆ ಕಂಡಾಗ ನಯವಾಗಿ ನಕ್ಕು ತಿರಸ್ಕರಿಸಿ ಅದರಿಂದ ನಾವು ಹೊರಗುಳಿದು ನಮ್ಮನ್ನು ರಕ್ಷಿಸಿಕೊಂಡರಾಯಿತಷ್ಟೇ. ಹಾಗಂತ ಅವನ ದೌರ್ಬಲ್ಯಗಳನ್ನು ಖಂಡಿಸಬಾರದೆಂತಲ್ಲ. ಅಗತ್ಯವಾಗಿ ಖಂಡಿಸಬೇಕು ಮತ್ತು ದೃಢ ಅಭಿಪ್ರಾಯಗಳಿಂದ ಮನಗಾಣಿಸಲು ಪ್ರಯತ್ನಿಸಬೇಕು. ಅದು ಗೆಳೆತನಕ್ಕೆ ಅಗತ್ಯ ಕೂಡ. ಹಾಗಾದಾಗಲೇ, ಅಭಿಪ್ರಾಯಗಳು ಘರ್ಷಿಸಿದಾಗಲೇ, ಅವರವರ ವ್ಯಕ್ತಿತ್ವಗಳು ಹೊರಹೊಮ್ಮಲು ಮತ್ತು ಗಟ್ಟಿಗೊಳ್ಳಲು ಸಾಧ್ಯ.


"ಎರಡು ಬೆಳೆದ ವ್ಯಕ್ತಿತ್ವಗಳ ನಡುವಿನ ಸ್ನೇಹಕ್ಕೆ 'Celebration of Personalities' ಅನ್ನಬಹುದೇನೋ..."


ಎರಡು ಬೆಳೆದ ವ್ಯಕ್ತಿತ್ವಗಳ ಮಧ್ಯದ ಸ್ನೇಹದಲ್ಲಿ ಅಭಿಪ್ರಾಯ ಭೇದಗಳು ಸರ್ವೇಸಾಮಾನ್ಯ. ಅದರಿಂದಾಗಿ ಖಂಡನೆ ಮಂಡನೆಗಳು ಅನಿವಾರ್ಯ. ಆ ಎಲ್ಲ ಖಂಡನೆ ಮಂಡನೆಗಳ, ಅಭಿಪ್ರಾಯ ಭೇದಗಳ, ಭಿನ್ನ ವಿಚಾರ ಧಾರೆಗಳ ನಡುವೆಯೂ ಸ್ನೇಹವನ್ನು ಚೆನ್ನಾಗಿಟ್ಟುಕೊಳ್ಳಬೇಕು ಅಂದರೆ - ಇಬ್ಬರ ನಡುವೆಯೂ ಆತ್ಮೀಯತೆ ಮತ್ತು ಒಬ್ಬರೆಡೆಗೆ ಇನ್ನೊಬ್ಬರಿಗೆ ಪ್ರೀತಿ ಮಿಶ್ರಿತ ಗೌರವವಿರಬೇಕು. ಅಭಿಪ್ರಾಯಗಳನ್ನು ಆಲಿಸುವ ಮತ್ತು ಗೌರವಿಸುವ ಮನಸ್ಥಿತಿಯಿರಬೇಕು. ಗೆಳೆಯನ ಒಂದು ಆರೋಪಕ್ಕೆ ಪ್ರತ್ಯಾರೋಪ ಮಾಡದೇ ಆತನ ಖಂಡನೆಯನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳುವ ವೈಶಾಲ್ಯತೆ ಇಬ್ಬರ ಮನಸಿಗೂ ಇರಬೇಕು. ಆತನ ಆರೋಪದಲ್ಲಿನ ಸತ್ಯಾಸತ್ಯತೆಯನ್ನು ವಿಶ್ಲೇಷಿಸುವ ಗುಣವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಾಡಬೇಕಾಗಿರುವ ಖಂಡನೆಯನ್ನು ಸರಿಯಾದ ಸಮಯದಲ್ಲಿ, ಸಂದರ್ಭೋಚಿತವಾಗಿ, ನಯವಾದ ಶಬ್ದಗಳಲ್ಲಿ, ನಾಜೂಕಾಗಿ, ಮನಮುಟ್ಟುವಂತೆ ಮಾಡುವ ಕಲೆಯಿರಬೇಕು.


"ಸ್ನೇಹ ಅಂದರೆ - ಎರಡು ವ್ಯಕ್ತಿತ್ವಗಳು, ಎರಡು ಭಿನ್ನ ಅಭಿಪ್ರಾಯಗಳು, ಅಭಿರುಚಿಗಳು, ಭಿನ್ನ ವಿಚಾರಧಾರೆಗಳು ತಮ್ಮೆಲ್ಲ ವೈರುಧ್ಯಗಳ ನಡುವೆಯೇ  ಒಟ್ಟಾಗಿ ಬೆಸೆದು ಎರಡು ಜೀವಗಳ ಜೀವನವನ್ನು ಆಹ್ಲಾದಮಯವನ್ನಾಗಿಸುವ, ಎರಡು ಮನಸುಗಳ ನಡುವಿನ ಅಲೌಕಿಕ ಬಾಂಧವ್ಯ." ಹಾಗಂತ ನಾನು ನಂಬಿದೀನಿ. ಅಂಥ ಆಹ್ಲಾದಮಯ ಅಲೌಕಿಕ ಅನುಭೂತಿಯನ್ನ ನಾನು ತುಂಬ ಅನುಭವಿಸಿದ್ದೇನೆ - ರಘು ಮತ್ತು ರಾಘು ಇವರುಗಳ ಬೆಚ್ಚನೆಯ ಗೆಳೆತನದ ಸನ್ನಿಧಿಯಲ್ಲಿ.


ಗೆಳೆತನದ ಸನ್ನಿಧಿಯಲ್ಲಿ - ಶುದ್ಧ ಕಾಡು ಹರಟೆ, ನಗೆಯ ವಿಸ್ಫೋಟ, ಪ್ರಬುದ್ಧ ವೈಚಾರಿಕ ವಿಶ್ಲೇಷಣೆ, ಪುಟ್ಟ ಜಗಳ, ಜಗಳದ ನಂತರದ ಹ್ಯಾಂಗೋವರ್,ಕೊನೆಗೆ ಕಣ್ಣುಗಳಲ್ಲೇ ಕೇಳಿಕೊಳ್ಳುವ ಅಪಾಲಜಿ ಎಲ್ಲ ಸಮ್ಮತವೇ ಮತ್ತು ಸುಂದರವೇ.


ಎಂದೋ ಸುಮ್ಮನೆ ಕುಳಿತು ಕಳೆದ ಬದುಕಿನ ಪುಟಗಳನ್ನು ತಿರುವಿ ಹಾಕುವಾಗ, ತಕ್ಷಣ ಮುಖವರಳಿ, ತುಟಿಯಂಚಿನಲ್ಲಿ ತಂತಾನೇ ಮುಗುಳು ನಗೆಯೊಂದು ಮಿಂಚಿದರೆ ಅದಕ್ಕೆ ಕಾರಣ ಒಂದ್ಯಾವುದೋ ಮಧುರ ಗೆಳೆತನದ ನೆನಪಿನ ನರುಗಂಪೇ ಆಗಿರುತ್ತದೆ. ಅಂಥದೊಂದು ಬಿಸುಪು ಗೆಳೆತನಕ್ಕೆ ಮಾತ್ರ ಇರೋಕೆ ಸಾಧ್ಯ. ಮನಸು ಮಗುಚಿ ಬಿದ್ದಂತಾದ ಒಂದು ಘಳಿಗೆಯಲ್ಲಿ ಗೆಳೆತನದ ನೆನಪು ಎಷ್ಟೋ ಹಾಯಾಗಿರುತ್ತದೆ. ಮನಸು ಮತ್ತೆ ಚೇತರಿಸಿಕೊಳ್ಳುವಂತಾಗುತ್ತೆ. ಇವೆಲ್ಲ ಅನುಭವಜನ್ಯ ಸತ್ಯಗಳು.


"ಉಷಃ ಕಾಲದಲ್ಲಿ ಬಾಲ ಭಾಸ್ಕರನ ಹೊಂಗಿರಣದಂತೆ, ಇರುಳ ಬೆಳಗುವ ಚಂದಿರನ ಬೆಳದಿಂಗಳಂತೆ - ಬಾಳ ಪ್ರತಿ ಕ್ಷಣವೂ ಆಹ್ಲಾದಕರವಾಗಿರಲು ಸದಾ ನನ್ನ ಜೊತೆಗಿರಲಿ - ಒಲವು ತುಂಬಿದ ಗೆಳೆತನದ ನರುಗಂಪು."


"ನಮ್ಮನ್ನು ಪ್ರೀತಿಸುವ ಗೆಳೆಯರಿರೋರು ಅದೃಷ್ಟವಂತರು. ಅವರಿಗಿಂತ ಅದೃಷ್ಟವಂತರು - ನಮ್ಮನ್ನು ಪ್ರೀತಿಸುತ್ತಲೇ ನಮ್ಮ ತಪ್ಪುಗಳನ್ನು ದೃಢ ಅಭಿಪ್ರಾಯಗಳ ಮೂಲಕ ಖಂಡಿಸಿ, ನಮ್ಮ ವ್ಯಕ್ತಿತ್ವದ ವಿಕಾಸಕ್ಕೆ ನೆರವಾಗಬಲ್ಲಂಥ ಮಿತ್ರರಿರೋರು."


ನಾವು ದೌರ್ಬಲ್ಯಗಳೆಡೆಗೆ ಜಾರಿದಾಗಲೆಲ್ಲ ತಮ್ಮ ಶುದ್ಧ ಹಸ್ತದಿಂದ ನಮ್ಮ ಕೈ ಹಿಡಿದು ಜಗ್ಗಿ, ಕಿವಿ ಹಿಂಡಿ ಎಚ್ಚರಿಸಿ, ಸಾಧನೆಯ ಮಾರ್ಗದೆಡೆಗೆ ಮುಖ ತಿರುಗಿಸಿ ನಿಲ್ಲಿಸಬಲ್ಲಂಥ ಗೆಳೆಯರನ್ನು, ತಮ್ಮ ಕ್ಷುಲ್ಲಕ ದೌರ್ಬಲ್ಯಗಳಿಗಾಗಿ ಕಳೆದುಕೊಳ್ಳುವಂಥವರು ಮೂರ್ಖರೇ ಸರಿ.


ನನ್ನ ಸನ್ಮಿತ್ರರಿಗೆ - ಒಂದ್ಯಾವುದೋ ಒಳ್ಳೆಯ ವಾಕ್ಯ ಓದಿದಾಗ, ಒಂದು ನಗೆಯ ಸಮ್ಮುಖದಲ್ಲಿ, ಬಾಳ ಮುಸ್ಸಂಜೆಯ ಒಂದು ಮೌನ ಸಂಜೆಯಲ್ಲಿ - ಕಳೆದ ಬದುಕಿನ ಮಧುರ ಘಳಿಗೆಗಳನ್ನು ನೆನಪಿಸಿಕೊಂಡು ಮುದಗೊಳ್ಳುವಾಗ - ಜೊತೆಗೆ ಅವನಿದ್ದಿದ್ದರೆ ಅಂತ ಈ ಮಿತ್ರನ ನೆನಪಾದರೆ ಈ ಜೀವಕ್ಕೆ, ಈ ಜೀವದೊಂದಿಗಿನ ಸ್ನೇಹಕ್ಕೆ ಅಷ್ಟೇ ಸಾರ್ಥಕ್ಯ.




"ಗೆಳೆತನದ ನರುಗಂಪು ನೆರಳಂತೆ ಜೊತೆಗಿರಲಿ.


ಸ್ನೇಹದ ಗಂಗೆ ಜಗದೆಲ್ಲೆಡೆಯಿಂದ ನನ್ನೆಡೆಗೆ ಹರಿದು ಬರಲಿ.


ನನ್ನ ಮನದ ಖುಷಿಯ ಭಾವಗಳ ಕಣಜಾನ ಶ್ರೀಮಂತಗೊಳಿಸಲಿ.


ಭವಿಷ್ಯದ ಪ್ರತಿ ದಿನವೂ ಹೇಮಂತದ ಪೌರ್ಣಿಮೆಯಾಗಲಿ."

Sunday, March 27, 2011

ಗೊಂಚಲು - ಹತ್ತು...

ನಿದ್ದೆಗೆ  ವಿಚಿತ್ರ  ಕನಸುಗಳು  ಭೇಟಿ  ಕೊಡುತ್ತಿವೆ.

ರಾತ್ರಿಯ  ನಿಶೀಥದಲ್ಲಿ  ಕಂಡ  ಕನಸುಗಳಿಗೆ
ಹಗಲಿನ  ನಿಚ್ಛಳದಲ್ಲಿ  ಅರ್ಥ  ಹುಡುಕುತ್ತಿದ್ದೇನೆ.

ನಾನು  ಓಡುತ್ತಿದ್ದೇನೆ  ಧೋ  ಮಳೆಯಲ್ಲಿ.

ತಲೆ  ತಗ್ಗಿಸಿದ್ದೇನೆ - ಕಾರಣ  ನಾ  ಬೆತ್ತಲಿದ್ದೇನೆ.

ಬೆನ್ನ  ಹಿಂದೆ,  ತೀರ  ಸನಿಹದಲ್ಲಿ  ಯಾತರದೋ  ಹೆಜ್ಜೆ  ಸದ್ದು.

ತಿರುಗಿ  ನೋಡಲು  ಭಯವಾಗುತ್ತೆ. 

ನಾನು  ಬೆಚ್ಚಿ  ಎಚ್ಚರಾಗುತ್ತೇನೆ.

ಮನದಾಳದ  ಹಗಲಿನ  ತಲ್ಲಣಗಳೇ
ನಿದ್ದೆಯ  ರಾತ್ರಿಯ  ಸ್ವಪ್ನಗಳಂತೆ.

ಹಾಗಾದರೆ  ನನ್ನ  ಕಾಡುವ  ಸುಪ್ತ  ತಲ್ಲಣ  ಯಾವುದು.?

ರಾತ್ರಿಯ  ಸ್ವಪ್ನವನ್ನು  ವಿಶ್ಲೇಷಿಸಿದಂತೆಲ್ಲ 
ಮನದಿ  ದ್ವಂದ್ವಗಳ  ದೊಂಬರಾಟ.
ಎಲ್ಲ  ಪ್ರಶ್ನಾರ್ಥಕ.


ನಾನು  ಓಡುತ್ತಿದ್ದೇನೆ - ಯಾವುದರಿಂದ ?
ಯಾವುದರೆಡೆಗೆ ?

ಸುರಿವ  ಧೋ  ಮಳೆ - ಈಡೇರದ  ಆಸೆಗಳದಾ ?

ಬಯಸುತ್ತೇನೆ  ಯಾರೂ  ಇದಿರಾಗದಿರಲೆಂದು  -
ಎದುರಿಸಲಾಗದ  ಅಸಹಾಯಕತೆಯಾ ?
ಮನವೂ  ಬತ್ತಲಾದೀತೆಂಬ  ಭಯವಾ ?

ಕತ್ತನ್ನು  ಪೂರ್ಣ  ಬಾಗಿಸಿದ್ದೇನೆ  ಯಾರೂ  ಗುರುತಿಸದಿರಲೆಂದು - 
ಅನಾಮಧೇಯ  ಪಥಿಕನಾಗುವ  ಆಸೆಯಾ ?
ಮುತ್ತಿಕ್ಕುವ  ಹಳೆಯ  ನೋವ  ನೆನಪುಗಳಿಂದ  ತಪ್ಪಿಸಿಕೊಳ್ಳೋ  ವ್ಯರ್ಥ  ಪ್ರಯತ್ನವಾ ?

ಆದರೂ  ಯಾರೋ  ಇದಿರಾಗ್ತಾರೆ.
ಹಾಗೇ  ಗುರುತಿಸಿಯೂಬಿಡ್ತಾರೆ.
ಕೆಲವರು  ನನ್ನ  ಹೆಸರಿನಿಂದ - ಒಳಗೊಳಗೇ  ಏನೋ  ಖುಷಿ.
ಕೆಲವರು  ಅಪ್ಪನ  ಹೆಸರು, ವಂಶದ  ಹೆಸರಿಂದ -  ಅಸಹ್ಯವಾಗುತ್ತೆ.

ಓಡುತ್ತೇನೆ  ಇನ್ನಷ್ಟು  ವೇಗವಾಗಿ.
ಗಮ್ಯ  ಯಾವುದು ?
ಬರೀ  ಶೂನ್ಯ... 

ಯಾರದು  ಬೆನ್ನ  ಹಿಂದೆ  ಇಷ್ಟು  ಸನಿಹ ?

ನನ್ನ  ತಲ್ಲಣದ  ಮೂಲ - ಕನಸಿನ  ಮೂಲ  ಎಲ್ಲ  ಅದೇನಾ ?

ತಿರುಗಿ  ನೋಡಲೂ  ಭಯ. ಅಂದುಕೊಂಡದ್ದು  ನಿಜವಾಗಿಬಿಟ್ಟರೆ ?

ಬೆನ್ನ  ಹಿಂದೆ  ಇಷ್ಟೊಂದು  ಸನಿಹದಲ್ಲಿ  ನೆರಳಂತೆ  ಹಿಂಬಾಲಿಸಿ
ಬರುತ್ತಿರೋದು...
ಅದು...
: : : : :
: : : :
: : :
: :
:
ಸಾವಾ.....??????


Sunday, March 13, 2011

ಗೊಂಚಲು - ಒಂಭತ್ತು...



ಆಗಸದ  ಚಂದ್ರಮ  ಭುವಿಯ  ಮುತ್ತಿಕ್ಕಲು  ಬಾಗುವನಂತೆ...


ಹಸಿದ  ಧರಣಿ  ಬಾಯ್ಬಿರಿವುದಂತೆ...


ಆಸೆಯ  ಶರಧಿ  ಉಕ್ಕಿ  ತನ್ನ  ಮಿತಿಯ  ಮೀರುವುದಂತೆ...


ಸಹಜ  ಸಂದರ್ಭದಲ್ಲಿ  ರತಿ  ರಮ್ಯವಾದ  ಪ್ರಕೃತಿಯೇ -
ಮುನಿದಾಗ,


ಅಟ್ಟಹಾಸದಿ  ಜವರಾಯ  ತನ್ನ  ರಾಜ್ಯ  ವಿಸ್ತರಿಸುವನಂತೆ...


ಆಗ -
ಊರು - ಕೇರಿಗಳೆಲ್ಲ  ಬರೀ  ಸ್ಮಶಾನದಂತೆ...









































ಮುನಿದ  ಪ್ರಕೃತಿ  ಶಾಂತವಾಗಲಿ.


ಜಪಾನಿನ  ಆ  ನೆಲದಲ್ಲಿ  ಚೈತನ್ಯ  ಮತ್ತೆ  ಚಿಗುರಲಿ.


ಅಳುವ  ಕಡಲಲಿ  ಮತ್ತೆ  ತೇಲಿ  ಬರಲಿ
ನಗೆಯ  ಹಾಯಿ  ದೋಣಿ...

Sunday, March 6, 2011

ಗೊಂಚಲು - ಎಂಟು...

ಕೆಲವು  ಭಾವಗಳಿಗೆ

ಅರ್ಥ  ಮತ್ತು  ಮೂಲ

ಹುಡುಕಬೇಡಿ.

ಮರ್ಕಟ  ಮನಸಿನ 

   ವಿಕಾರ  ಗೋಚರಿಸೀತು...

Wednesday, March 2, 2011

ಗೊಂಚಲು - ಏಳು...

"ಜನಿಸಿದ  ಘಳಿಗೆಯ  ನಂತರದ  ಪ್ರತಿ  ಕ್ಷಣವೂ  ಸಾವಿನದಾಗಬಹುದಾದರೆ - ಈ  ಕ್ಷಣ  ನಾವು  ಬದುಕಿದ್ದೇವೆ  ಎನ್ನುವುದಕ್ಕಿಂತ  ದೊಡ್ಡ  ಕಾರಣ  ಇನ್ಯಾವುದು  ಬೇಕು  ಈ  ಬದುಕನ್ನು  ಪ್ರೀತಿಸಲು, ಆಸ್ವಾದಿಸಲು.  ಈ  ಜೀವನವ  ಆರಾಧಿಸಲು."

"ಸಾವು - ಅಂತಿಮ  ವಾಸ್ತವವಾದರೆ,  ಬದುಕು - ನಿತ್ಯ  ಸತ್ಯ..."

ಬದುಕನ್ನು  ಪ್ರೀತಿಸುವವರಿಗೆ  ಈ  ಬದುಕಿನ  ಬಗ್ಗೆ,  ಅದು  ಕೊಡಮಾಡಿದ  ಸುಖ - ದುಃಖಗಳ  ಬಗ್ಗೆ,  ಆಸೆ - ನಿರಾಸೆಗಳ  ಕಡೆಗೆ  ಯಾವೊಂದೂ  ತಕರಾರುಗಳಿರುವುದಿಲ್ಲ.  ಬದುಕನ್ನು  ಯಾವುದೇ  ಪೂರ್ವಾಗ್ರಹಗಳಿಲ್ಲದೆಯೇ ಪ್ರಾಮಾಣಿಕವಾಗಿ  ಪ್ರೀತಿಸಬಲ್ಲವನು  ಸಾವನ್ನು  ಕೂಡ  ಸಮಚಿತ್ತದಿಂದ  ನೋಡಬಲ್ಲವನಾಗುತ್ತಾನೆ.

ಬದುಕಿರುವ  ಪ್ರತಿ  ಘಳಿಗೆಯನ್ನೂ  ಅದಮ್ಯವಾಗಿ  ಪ್ರೀತಿಸುತ್ತಾ - ಸಾವನ್ನೂ  ಗೌರವದಿಂದ  ನಗುತ್ತ  ಸ್ವಾಗತಿಸಬಲ್ಲವನಾಗುವುದರೆಡೆಗೆ  ನನ್ನ  "ಪಯಣ..."

ಸಾವು - ಒಂದು  ನಿಲ್ದಾಣ ?????


Sunday, February 20, 2011

ಗೊಂಚಲು - ಆರು...

"ಈ ಪ್ರೀತಿ ಒಂಥರಾ ....."


ಪ್ರತೀ ಜೀವಕ್ಕೂ, ಗಂಡು - ಹೆಣ್ಣೆಂಬ ಭೇದವೇ ಇಲ್ಲದೆ ಎಲ್ಲ ಜೀವಗಳಿಗೂ ಒಂದು ಕನಸು,ಕಲ್ಪನೆ, ಆಸೆ ಇರುತ್ತೇನೋ. ತಾನೂ ಯಾರನ್ನಾದ್ರೂ ಪ್ರೀತಿಸ್ಬೇಕು - ಯಾರಿಂದಲೋ ಪ್ರೀತಿಸಲ್ಪಡಬೇಕು - ಒಂದಿಡೀ ಬದುಕನ್ನು ಅವರ ಸಾಂಗತ್ಯದಲ್ಲಿ ಕಳೀಬೇಕು - ತನ್ನೆಲ್ಲ ಪ್ರೀತೀನ ಅವ್ರಿಗೆ ಧಾರೆ ಎರೀಬೇಕು - ಅವರೆಲ್ಲ ಪ್ರೀತಿ ಭಾವಗಳನ್ನ ತನ್ನದನ್ನಾಗಿಸ್ಕೋಬೇಕು - ಅವರ ಮನೋಪ್ರಪಂಚದ ಕೇಂದ್ರಬಿಂದು ತಾನೇ ಆಗ್ಬೇಕು. ಸಿನೆಮಾಗಳ ಹಾಡುಗಳಲ್ಲಿ ತೋರಿಸ್ತಾರಲ್ಲ ಹಾಗೇ, ತಾನೂ ಕೂಡ ಜಗತ್ತಿನೆಲ್ಲ ಸುಂದರ ತಾಣಗಳನ್ನು ನೋಡಿ ಸವೀಬೇಕು. ಬೆಸೆದ ತೆಕ್ಕೇನ ಸಡಿಲಿಸದೇ ಓಡಾಡ್ಬೇಕು,ಓಲಾಡ್ಬೇಕು. ಮುತ್ತೇ ಮಾತಾಗ್ಬೇಕು, ಮತ್ತಲ್ಲಿ ತೇಲಾಡ್ಬೇಕು. ಹೀಗೇ ಏನೇನೋ ಕನಸುಗಳು - ಕಲ್ಪನೆಗಳು. ತನ್ನ ಜೀವ ತನ್ನಂತದೇ ಮತ್ತೊಂದು ಜೀವಾನ ಸೃಷ್ಠಿಸೋ ವಯಸ್ಸು ಮೂಡಿದ್ದು ತನಗೇ ತಿಳಿದಾಗಿನಿಂದ ಈ ಆಸೆ, ಕನಸು ಹೃದಯದ ಬಡಿತದೊಂದಿಗೇ ಮಿಳಿತವಾಗಿ ಬಿಡತ್ತೇನೋ. ಆದ್ರೆ ವಿಪರ್ಯಾಸ ಗೊತ್ತಾ.! 99.9% ಜನರ ಈ ಕನಸು ಕನಸಾಗಿಯೇ ಉಳಿದು ಹೋಗತ್ತೆ. ಬದುಕಿನ ಘನ ವಾಸ್ತವಗಳು "ಪ್ರೀತಿ"ಯಂಥ ತೀವ್ರತರ ಭಾವಗಳನ್ನೂ ಸಾಯಿಸಿ ಸಮಾಧಿ ಮಾಡಿಬಿಡುತ್ವೆ. ಕನಸಿನ ಗುಂಗಲ್ಲಿ ಕಣ್ತೆರೆದರೆ - ಕಣ್ಣೆದುರಿನ ವಾಸ್ತವ ರಾಚುತ್ತೆ. ಆದ್ರೂ ಈ ಕನಸುಗಳೇನೇನೋ ಬದುಕನ್ನು ಇಷ್ಟಾದರೂ ಸಹನೀಯವಾಗಿರಿಸೋದು. ಅಲ್ವಾ.? ಅದಕ್ಕೇ ಇರಬೇಕು ಕವಿ ಪ್ರೀತೀನ ಮಧುರ ಯಾತನೆ ಅಂತಂದದ್ದು. ಕೆಲವರು ಪ್ರೀತಿಸಲಾರದೇ - ಪ್ರೀತಿ ಸಿಗದೇ ಒದ್ದಾಡ್ತಾರೆ. ಇನ್ಕೆಲವರು ಪ್ರೀತಿಸಿ - ಪ್ರೀತೀನ ಉಳ್ಸ್ಕೊಳ್ಳೋಕಾಗ್ದೇ ಒದ್ದಾಡ್ತಾರೆ. 



ಒಟ್ನಲ್ಲಿ ಈ ಪ್ರೀತಿ ಒಂಥರಾ.....
                                    
               Yes, ಈ ಪ್ರೀತಿ ಒಂಥರಾsssss.....