Friday, January 25, 2013

ಗೊಂಚಲು - ಐವತ್ತು ಮತ್ತು ಒಂಭತ್ತು.....

ಬೆಳದಿಂಗಳ ನಗು.....
...ಇದು ನನ್ನೆಡೆಗಿನ ನಿಮ್ಮಗಳ ನಿಷ್ಕಾರಣ ಪ್ರೀತಿಯ ಅಭಿಮಾನಕ್ಕೆ ಮತ್ತು ನನ್ನ ಭಾವ ಬರಹಗಳ ಗೊಂಚಲಿಗೆ ಎರಡು ವಸಂತಗಳು ಸಂದ ಸಂಭ್ರಮದ ನಗು...ನಿಮ್ಮ ಪ್ರೀತಿಗೆ ನನ್ನ ನಮನಗಳು...ಈ ಪ್ರೀತಿ ಅನವರತ ಜಾರಿಯಲಿರಲಿ ಇದೇ ರೀತಿ...ಅಕ್ಷರ ಪ್ರೀತಿ ಬೆಸೆಯಲಿ ಬಂಧಗಳ...ವಿಶ್ವಾಸ ವೃದ್ಧಿಸಲಿ - ಶ್ರೀ...

ಹೊರಗೆ ಬೆಳದಿಂಗಳಿದೆ. 
ಬೆಳದಿಂಗಳು ನನಗ್ಯಾವತ್ತೂ ಆಕರ್ಷಣೀಯವೇ.
ಹಾಗೇ ನೋಡ್ತಿದ್ದೆ.
ಏನೋ ಗಡಿಬಿಡಿ ಇರುವಂತೆ, ಯಾರನ್ನೋ ತುರ್ತಾಗಿ ನೋಡಲೇಬೇಕೆಂಬಂತೆ ಒಂದು ಉಲ್ಕೆ ಬಾನಲ್ಲಿ ವೇಗವಾಗಿ ಓಡ್ತಾ ಇತ್ತು.
ಕಣ್ಣಿಗೆ ಕಾಣೋವರೆಗೂ ಅದನ್ನ ನೋಡಿದೆ.
ಎಂಥ ಖುಷಿ ಗೊತ್ತಾ...

ಮೊದಲ್ಯಾವತ್ತಾದ್ರೂ ಬರೆದಿದ್ದೀನಾ.?
ನೆನಪಿಲ್ಲ.
ಏನಂದ್ರೆ -
ಬೆಳದಿಂಗಳ ರಾತ್ರಿಗಳಲ್ಲೂ ವೈವಿಧ್ಯವಿದೆ ಕಣ್ರೀ.
ಹುಣ್ಣಿಮೆಯಂದು ಹೊಳೆವ ಪ್ರಕೃತಿಗೂ, ಬಿದಿಗೆಯಂದು ಕಾಣೋ ಸೃಷ್ಟಿ ಸೌಂದರ್ಯಕ್ಕೂ ವ್ಯತ್ಯಾಸವಿದೆ.
ಬೆಳದಿಂಗಳ ಚೆಲ್ಲೋ ಚಂದಿರನೊಬ್ಬನೇ.
ಕೆಳಗೆ ಅರಳಿ ನಳನಳಿಸೋ ವಸುಧೆಯೂ ಒಬ್ಬಳೇ.
ಆದರೂ ವೈವಿಧ್ಯ.
ಬೆಳದಿಂಗಳು ಪ್ರಖರವಾಗಿರುವ ಪೌರ್ಣಿಮೆಯಂದು ವಸುಧೆ -
ಹಾಲಲ್ಲಿ ಮಿಂದು ಮೈಯೊರೆಸಿಕೊಳ್ಳುವುದನ್ನು ಮರೆತವಳಂತೆ,
ಕಪ್ಪಂಚಿನ ಬಿಳಿಸೀರೆಯನುಟ್ಟು ಪ್ರಚ್ಛನ್ನವಾಗಿ ನಗುತ್ತ ನಿಂತ ಪ್ರಬುದ್ಧ ಚೆಲುವೆಯಂತೆ ಗೋಚರಿಸುತ್ತಾಳೆ.
ಅದೇ ಬಿದಿಗೆ ಮತ್ತು ಆಚೀಚಿನ ದಿನಗಳಲ್ಲಿ -
ಬಾಗಿಲ ಮರೆಯಿಂದ ಅಸ್ಪಷ್ಟವಾಗಿ ಇಣುಕುವ,
ತೆಳ್ಳನೆಯ ನಾಚಿಕೆಯ ತೆರೆ ಹೊದ್ದ,
ಕಡೆಗಣ್ಣಲ್ಲೇ ನೋಡಿ,
ತುಟಿಯಂಚಲ್ಲೇ ನಕ್ಕೂ ನಗದಂತಿರುವ
ಹೊಸ ಹರೆಯದ ಚೆಲುವರಳುವ ಸಮಯದ ಮುಗುದೆಯಂತೆ ಕಂಡು ಪುಳಕವೆಬ್ಬಿಸುತ್ತಾಳೆ.
ಎಂಥ ಸವಿರಸ ರೋಮಾಂಚನ...

                                  @@@@@


ಮೊನ್ನೆ ದಿನ ಬಿದಿಗೆಯ ಚಂದಿರ ಆಗಸದಿ ನಗುತಲಿದ್ದ.
ಆತ ಚೆಲ್ಲಿದ ಬೆಳದಿಂಗಳು ನೊರೆ ಹಾಲಿನಂತೆ ತೆಂಗು, ಅಡಿಕೆ, ಮಾವಿನ ಮರಗಳ ಮೇಲೆಲ್ಲಾ ಓಕುಳಿಯಾಡುತಿತ್ತು.
ಅಂಗಳದಲಿ ನಿಂತು ನೋಡಿದರೆ ಹಾಯೆನಿಸುವಂತಿತ್ತು.
ಒಂದು ಕ್ಷಣ ಇಂದು ಹುಣ್ಣಿಮೆ ಇರಬಹುದಾ ಅಂತ ಅನುಮಾನ ಪಡುವಷ್ಟು ಬೆಳದಿಂಗಳು.
ಬಿದಿಗೆಯ ಚಂದ್ರ ಹೇಗೆ ಇಷ್ಟೆಲ್ಲ ಬೆಳಗಲು ಸಾಧ್ಯ ಅನ್ನಿಸ್ತು.
ಸೂರ್ಯನಿಂದ ಸ್ವಲ್ಪ ಜಾಸ್ತಿಯಾಗಿ ಬೆಳಕ ಇಸಿದುಕೊಂಡಿರಬಹುದಾ ಅಂತ ಯೋಚಿಸ್ತಿದ್ದೆ.
ಆದ್ರೆ ಅದು ಸರಿಯಾದ ಕಾರಣವಲ್ಲಾ ಅಂತ ನಂಗೇ ಗೊತ್ತಾಗ್ತಿತ್ತು.
ತಲೆಯೆತ್ತಿ ಸರಿಯಾಗಿ ಚಂದ್ರನ್ನ ನೋಡಿದ್ರೆ ಏನೋ ಕಚಗುಳಿಯಿಂದ ಸ್ಫೂರ್ತಗೊಂಡ ಉಲ್ಲಾಸದಂಥದ್ದು ಅವನ ಮೊಗದಲ್ಲಿತ್ತು.
ಏನಿದ್ದೀತು ಕಾರಣ ಅಂತ ಅವನು ಮತ್ತೆ ಮತ್ತೆ ನೋಡುತ್ತಿದ್ದ ಕಡೆಗೆ ತಿರುಗಿ ನೋಡಿದೆ.
ಫಕ್ಕನೆ ಉತ್ತರ ಸ್ಪಷ್ಟವಾಯ್ತು.
ದುಂಡು ಮಲ್ಲಿಗೆಯೊಂದು ಬಿರಿದಂತೆ,
ಯಾವುದೋ ಸವಿ ನೆನಪು ಕೈಜಗ್ಗಿ ಕಾಡಿದಂತೆ,
ಹಾಗೇ ಸುಮ್ಮನೆ
ನೀನಲ್ಲಿ ನಿಂತು ನಗುತಲಿದ್ದೆ...
ಚಂದಿರ ನಿನ್ನ ಕೆನ್ನೆ ಗುಳಿಯನು ತನ್ನ ಬೆಳಕಿಂದ ತಾಕಿ ಉಲ್ಲಸಿತನಾಗುತಿದ್ದ...

ಸಣ್ಣ ಆಸೆ ನನ್ನಲ್ಲಿ...
ನಿನ್ನ ನಗುವ ಹಿಂದಿನ ಮಧುರ ನೆನಪಲ್ಲಿ ನಾನಿರಬಹುದಾ..!!!

ಹುಣ್ಣಿಮೆಯ ದಿನ ಬಿಳಿ ಮೋಡದ ಹದವಾದ ತೆರೆಯೊಂದು ಚಂದ್ರನ ಸುತ್ತುವರಿದರೆ ಅವನ ಸುತ್ತ ತಿಳಿಕೇಸರಿಯ ಬಳೆಯಂಥ ಪ್ರಭಾವಲಯವೊಂದು ಮೂಡಿನಿಲ್ಲುತ್ತದೆ.
ಆ ಸೊಬಗ ನೋಡಿದ್ದೀಯಾ ಒಮ್ಮೆಯಾದರೂ..?
ಆ ಚೆಲುವ ಹೀರಿಕೊಳ್ಳುವುದು ಕಣ್ಣಿಗೊಂದು ಹಬ್ಬ.


ಅವತ್ತೂ ಹಾಗೇ ಆಗಿತ್ತು...
ಅದ್ಯಾರದೋ ಮದುವೆ ಮನೇಲಿ ಗೆಳತಿಯರ ಹಿಂಡಿನ ನಡುವೆ ತಿಳಿಕೇಸರಿ ಸೀರೆಯಲಿ ನಗುತ ಕಂಗೊಳಿಸುತ್ತಿದ್ದ ನಿನ್ನ ಮೊದಲಬಾರಿ ನಾ ಕಂಡಿದ್ದೆ.
ಸಮ್ಮೋಹಿತನಾದ ನನ್ನಲ್ಲಿ ಹಗಲಲ್ಲೇ ಆ ಹುಣ್ಣಿಮೆ ಚಂದಿರನ ಕಂಡಂಥ ಭಾವ ಸಮ್ಮಿಲನ...

ಹುಡುಗೀ -
ನಿನ್ನ ಮುಂಗುರುಳ ಸುರುಳಿಯಲಿ ಬಂಧಿಯಾದ ನನ್ನ ಮನಸಲೀಗ ಒಲವಿನಲೆಗಳ ಅಬ್ಬರ...
ಮೊದಲೆಲ್ಲ ಬೆಳದಿಂಗಳ ಬೆಳಕಲ್ಲಿ ಭುವಿಯ ನೋಡಲು ಎಷ್ಟು ಸೊಗಸಿತ್ತು.
ಈಗೀಗ ಚಂದ್ರನ ನೋಡಿದರೆ ನಿನ್ನೇ ನೋಡಿದಂತಾಗಿ ಇಹವ ಮರೆವ ನನ್ನ ಮನದ ಪರಿಯ ಹೇಗೆ ಹೇಳಲಿ ನಿನಗೆ...

ನನ್ನ ಒಲವಿನ ಕನಸ ತುಂಬ ನೀನೇ - ಬರೀ ನೀನೇ
'ಪೌರ್ಣಿಮೆ....'

ಚಿತ್ರ ಕೃಪೆ : ಅಂತರ್ಜಾಲದಿಂದ...

Friday, January 11, 2013

ಗೊಂಚಲು - ಐವತ್ತೆಂಟು.....

ಕನಸೇ.....

ಬದುಕು ಕಸಿದುಕೊಂಡ ಸಾವಿರಾರು ಖುಷಿಗಳಲ್ಲಿ 
ನೀನೂ ಒಂದು ಖುಷಿ ಎಂದುಕೊಂಡು 
ನಿನ್ನ ಮರೆಯಲೆತ್ನಿಸಿದೆ....
ಆದರೆ -
ಜೀವ ಭಾವಗಳಲ್ಲಿ ಬೆರೆತುಹೋಗಿ 
ಚಿತ್ತ ಭಿತ್ತಿಯಲಿ ಕನಸುಗಳಿಗೆ 
ಉಸಿರನಿತ್ತವಳು ನೀನು...
ಖುಷಿಯಿಲ್ಲದೇ ಬದುಕಿಯೇನು...
ಕನಸೇ ಇಲ್ಲದೆ ಹೇಗೆ ಬದುಕಿಯೇನು..???

ನಿಚ್ಛಳ ಬೆಳದಿಂಗಳು...
ಮಂದ ಮಾರುತ...
ರಾತ್ರಿ ರಾಣಿಯ ಗಂಧ...
ಮುಂಜಾನೆ ಅಂಗಳದಲಿ ಇಬ್ಬನಿ ತಬ್ಬಿದ 
ಪಾರಿಜಾತದ ರಂಗೋಲಿ...
ಇವೆಲ್ಲ ನಿನ್ನ ಕೆನ್ನೆ ಗುಳಿಯ ಒನಪು 
ಮತ್ತು 
ನಿನ್ನ ಹರಡಿದ ಹೆರಳ ಕಂಪ 
ನೆನಪ ಹೊತ್ತು ತಂದು ಈಗಲೂ ಕಾಡುತ್ತವೆ.
ರಾತ್ರಿಯ ನೀರವ ಮೌನದಲ್ಲಿ ಅರಚುವ 
ಜೇಡರ ಹುಳದ ಗಿಜಿಗಿಜಿ ಸದ್ದು 
ನಿನ್ನ ಗೆಜ್ಜೆ ನಾದದಂತೆ ಕೇಳಿ 
ಈಗಲೂ ನನ್ನೆದೆ ಡಮರುಗವಾಗುತ್ತೆ.

ನಿನ್ನ ಜೊತೆ ನಡೆವಾಗ
ಮೌನ ಗುನುಗುವ ಪಿಸುಮಾತು...
ಅಮಾವಾಸ್ಯೆಯ ಕತ್ತಲಲೂ
ಹೊಳೆವ ನಿನ್ನ ಮುಗುಳ್ನಗು...
ನನ್ನ ಕಾಡಲೆಂದೇ
ಹೊಯ್ದಾಡುವ ನಿನ್ನ ಮುಂಗುರುಳು...
ಕಟ್ಟಿ ಕೊಡುತಿದ್ದ 
ಸಾವಿರ ಹೊಂಗನಸುಗಳು...
ಎಲ್ಲ ನಲುಗಿ ಹೋದವು...
ಸಮಾಜದ
ಅರಿವಿಗೆ ಕುರುಡಾದ - ಪರಂಪರೆಯ 
ಕೆಂಗಣ್ಣಿಗೆ ಸಿಲುಕಿ...

ನಿನ್ನ ನೋವಿನ ನಿಟ್ಟುಸಿರು...
ಸಮಾಜವ ಜಯಿಸಲಾರದ ನನ್ನ ಹೇಡಿತನ...
ಸಂತೆ ನೆರೆದ ಸಂಸಾರದಲೂ
ಇಬ್ಬರದೂ
ಏಕಾಂಗಿ ಬಾಳು...
ನಮ್ಮನ್ನು ನಾವೂ ಪ್ರೀತಿಸಿಕೊಳ್ಳಲಾಗದ
ನಮ್ಮೊಳಗಿನ ಗೋಳು...

ಕೊಟ್ಟ ಕೊನೆಯಲಿ ನೀ ಆಡಿದ ಮಾತು :
ಪ್ರತಿದಿನ ನೀನು ಆಸ್ತೆಯಿಂದ ಮುದ್ದಿಸುತಿದ್ದ 
ನನ್ನ ಕಿರುಬೆರಳ ಮಚ್ಚೆಯಲಿ 
ನಿನ್ನ ಉಸಿರಿನ ನೆನಪು ಸದಾ ಹಸಿರಾಗಿರುತ್ತೆ ಕಣೋ...
ಆ ಮಾತೇ ಈಗಿನ್ನೂ ನಾನು ಉಸಿರಾಡುತಿರಲು ಪ್ರೇರಣೆ ಕಣೇ...

Saturday, January 5, 2013

ಗೊಂಚಲು - ಐವತ್ತು + ಏಳು.....

ನೋವು ನಗುವಿನ ತೊಟ್ಟಿಲು.....
[ಒಂದಷ್ಟು ಅರ್ಧಸತ್ಯಗಳ ರವಾನಿಸಿದ್ದೇನೆ ಇಲ್ಲಿ]


ಸ್ನೇಹಿತೆಯೊಬ್ಬಳು ಮಾತನಾಡುತ್ತಾ 'ನಗುವ ಜತೆ ಜತೆಗೆ ನಮ್ಮೊಳಗಣ ನೋವನ್ನೂ ವಿನಿಮಯ ಮಾಡಿಕೊಂಡಾಗಲೇ ಗೆಳೆತನವೊಂದು ಗಟ್ಟಿಯಾಗಿ ಬೆಸೆಯಲು ಸಾಧ್ಯ ಕಣೋ' ಅಂತಿದ್ದಳು.
'ನೋವು ಒಳಗಿರುವಾಗ ಮೊಗದಲ್ಲಿ ನಗುತಿರುವುದು ಕೃತಕವೆನ್ನಿಸೊಲ್ಲವಾ.?' ಅಂತ ಪ್ರಶ್ನಿಸಿದ್ದ ಗೆಳೆಯನೊಬ್ಬ.
ಅವೆಲ್ಲ ಸೇರಿ ನನ್ನಲ್ಲಿ ನೋವಿನ ಬಗ್ಗೆ ಒಂದಿಷ್ಟು ಗಿರಗಿಟ್ಲೆ ಶುರುವಾಗಿತ್ತು.

ಹುಟ್ಟಿದ ತಕ್ಷಣ ಮಗುವೊಂದು ಅಳುವುದರ ಮೂಲಕ ತನ್ನ ಉಸಿರಾಟವನ್ನು ಸುಗಮಗೊಳಿಸಿಕೊಳ್ಳುತ್ತಂತೆ. ನಾವೆಲ್ಲ ಹಾಗೆ ಮಾಡಿಯೇ ಉಸಿರಾಡಿದ್ದು. 
ಬಹುಶಃ ಅಲ್ಲಿಂದಲೇ ಮನುಷ್ಯನ ಬದುಕಿಗಾಗಿ ಅಳುವ ಮತ್ತು ಅಳುವ ಪ್ರೀತಿಸುವ ಮೂಲ ಗುಣಕ್ಕೆ ಬೀಜಾಂಕುರ. ಅಳುವನ್ನು ಪ್ರೀತಿಸುವುದು ಮನಸ್ಸಿನ ಸ್ಥಾಯೀ ಭಾವವೇನೋ ಅನ್ನಿಸುತ್ತೆ. ಅದಕ್ಕೇ ಇರಬೇಕು ನೋವ ನುಂಗಿ ಬದುಕಿದ 'ಪಾರು'ವಿಗಿಂತ ಅಳುವ ಉಸಿರಾಡಿದ 'ದೇವದಾಸ್' ಹೆಚ್ಚು ಪ್ರಿಯನೆನ್ನಿಸಿದ್ದು. ನಗುವ ಪ್ರೇಮಕಾವ್ಯಕ್ಕಿಂತ ಭಗ್ನ ಪ್ರೇಮಕಾವ್ಯ ಹೆಚ್ಚು ಪ್ರಚಲಿತವಾದದ್ದು. (ನಮ್ಮ ಮಹಾಕಾವ್ಯಗಳೆಲ್ಲ ನೋವ ಕಾವ್ಯಗಳೇ) ನಮ್ಮ ಒಳಗನ್ನು ಬೇಕಾದರೂ ನೋಡಿ - ಕಣ್ಣೀರು ಹೆಪ್ಪುಗಟ್ಟಿದಾಗಲೇ ಮನಸು ಗಟ್ಟಿಯಾಗುವುದು. ನೋವ ನುಂಗಿ ನಗಬಲ್ಲವರೇ ಬದುಕಿಗೆ ಹೆಚ್ಚು ಪ್ರಾಮಾಣಿಕರೆನ್ನಿಸುವುದು. ಕೆಸರಲ್ಲಿ ಅರಳಿದ್ದಕ್ಕೆ ಕಮಲ, ಮುಳ್ಳ ನಡುವೆ ನಗುವ ಗುಲಾಬಿ ಅಷ್ಟೊಂದು ಪ್ರಿಯವೆನ್ನಿಸುವುದು. ಒಳಗೊಂದಿಷ್ಟು ನೋವಿಲ್ಲದಿದ್ದಲ್ಲಿ ಪುಟ್ಟ ಪುಟ್ಟ ಸಂತೋಷಗಳನ್ನು ನಾವು ಹೆಚ್ಚು ಹೆಚ್ಚು ಪ್ರಾಮಾಣಿಕವಾಗಿ ಆಸ್ವಾದಿಸಲಾರದೇ ಹೋಗುತ್ತೇವೇನೋ. ನಗುವಿಗೆ ಅರ್ಥ ಬರೋದೇ ನೋವನ್ನು ಮೆಟ್ಟಿ ನಗು ಮೆರೆದಾಗ. ನೋವ ಹೀರಿ ನಗುವವರ ನಗು ಸ್ವಲ್ಪ ಕೃತಕ ಅನ್ನಿಸೀತು ಒಮ್ಮೊಮ್ಮೆ. ಆದರೂ ಆ ನಗು ಹೆಚ್ಚು ಪ್ರಾಮಾಣಿಕ ಅನ್ನಿಸುತ್ತೆ ನಂಗೆ. ಉಳಿದ ಮುಖವಾಡಗಳಿಗಿಂತ ಈ ಮುಖವಾಡ ಹೆಚ್ಚು ಪ್ರಿಯವೆನ್ನಿಸುತ್ತೆ ನಂಗೆ. 

ರಕ್ತ ಸಂಬಂಧವಲ್ಲದ, ಭಾವನಾತ್ಮಕ ವಿನಿಮಯವನ್ನು ನೆಚ್ಚಿಕೊಂಡ ಎಲ್ಲ ಸಂಬಂಧಗಳೂ ಗಾಢವೆನ್ನಿಸುವುದು, ಇನ್ನಷ್ಟು ಬೇಕು ಅನ್ನಿಸುವುದು ಯಾವುದೋ ನೋವಿಂದ ಮನಸು ಮಗುಚಿ ಬಿದ್ದಾಗಲೇ. ನಾನಿಲ್ಲಿ ನಮ್ಮ ನೋವನ್ನು ಹೇಳಿಕೊಂಡು ಅನುಕಂಪಗಳಿಸಿಕೊಳ್ಳೋ ಮಾತು ಹೇಳ್ತಿಲ್ಲ. ನೋವನ್ನು ಹರವಿಕೊಂಡು ಹಗುರಾಗುವ ಮಾತಾಡುತ್ತಿದ್ದೇನೆ. ಎರಡಕ್ಕೂ ವ್ಯತ್ಯಾಸವಿದೆ. ಅನುಕಂಪ ಬಯಸಿ ಕೂತವನು ಕೂತಲ್ಲೇ ಕೊಳೆಯುತ್ತಾನೆ. ನೋವ ಹೊರಚೆಲ್ಲಿ ಹಗುರಾಗಿ ಎದ್ದು ಹೋದವನು ಬದುಕನ್ನು ಚೆಂದಗೆ ಆಳುತ್ತಾನೆ. 
ನೋವ ಮಾತಾಡಿದವರೆಲ್ಲ ನೋವನ್ನೇ ಬದುಕುತ್ತಾರೆಂದಲ್ಲ. 
ನೋವು ಬದುಕಿನ ಅಂಗವಷ್ಟೇ - ನೋವೇ ಬದುಕಲ್ಲ ಎಂಬುದು ಗೊತ್ತಿಲ್ಲದವರೆಂತಲೂ ಅಲ್ಲ. 
ಎರಡು ಹನಿ ಕಣ್ಣೀರು ಚೆಲ್ಲಿ, ಆ ಹನಿಗಳೊಂದಿಗೆ ಎದೆಯ ನೋವ ಇಳುಕಿ  ಹೊಸ ಭರವಸೆ - ಹೊಸ ಕನಸುಗಳ ಎತ್ತಿಕೊಳ್ಳಬಲ್ಲವರೂ, ಜತೆಗೇ ಎಲ್ಲ ಭರವಸೆ - ಕನಸುಗಳ ಮೇಲಿನ ನಂಬಿಕೆಯ ನಡುವೆಯೂ ವಾಸ್ತವಿಕತೆಯನ್ನು ಮರೆಯಲಾಗದವರೂ ಆಗಿರಬಹುದು. 
ಮನಸಿನ ನಗು ಅಂದ್ರೆ ಏನು - ನೋವ ನಡುವೆಯೂ ಹೊಸ ಕನಸಿಗೆ ಗೂಡು ಕಟ್ಟೋದೇ ಅಲ್ವಾ...
ಇದು ನಾ ಕಂಡ ಬದುಕು ನಂಗೆ ಕರುಣಿಸಿದ ಪಾಠ.

ನೋವ ಹರವಿಕೊಳ್ಳಲು ಮತ್ತೊಂದು ಮನಸಿನ ಅಗತ್ಯ ಇಲ್ಲದಂತ ಮನೋ ಸಾಮರ್ಥ್ಯ ಹೊಂದಿದವರೆಡೆಗೆ ನಂಗೆ ಮಧುರ ಹೊಟ್ಟೆಕಿಚ್ಚಿದೆ. 

ದೊಡ್ಡ ದೊಡ್ಡ ಕನಸುಗಳ ಸಾಕಾರಗೊಳಿಸಿಕೊಳ್ಳಲಾಗದ ನೋವು - ಪುಟ್ಟ ಪುಟ್ಟ ಕನಸುಗಳನು ಪ್ರೀತಿಸುವ ಮತ್ತು ಜಯಿಸಿ ಆಸ್ವಾದಿಸುವ ಭವ್ಯ ಸುಖದ ಘಳಿಗೆಗಳನ್ನು ಒದಗಿಸಿಕೊಟ್ಟಿದ್ದಕ್ಕೆ ಯಾವುದೋ ದೊಡ್ಡ ನೋವಿಗೆ [ನನ್ನ ಮಟ್ಟಿಗೆ ದೊಡ್ಡದು..:)] ನಾನು ಬದುಕು ಪೂರ್ತಿ ಋಣಿಯಾಗಿರುವಂತೆ ಮಾಡಿದೆ. ಮನಸು ದ್ವಂದ್ವಗಳಲಿ - ನೋವಿನಲಿ - ಗೊಂದಲಗಳ ಸಂತೆಯಲಿದ್ದಾಗಲೂ ಬದುಕು ಬರೀ ನಗುವಿನಿಂದ ಕೂಡಿರುವಂತೆ ನೋಡಿಕೊಂಬ ಶಕ್ತಿ ಒಂದಿಷ್ಟಾದರೂ ಮೈಗೂಡಿದೆ. ಮನಸಿನ ನೋವು ಭಾವ ಕೋಶಕ್ಕೆ ಮಾತ್ರ ಸೀಮಿತವಾಗಿದ್ದು ಬದುಕು ಬುದ್ಧಿಯ ಕೈಲಿದ್ರೆ ಚೆನ್ನ ಅಂದ್ಕೋತೀನಿ. ನಾನು ಈವರೆಗೆ ಬರೆದಿದ್ದೆಲ್ಲ ಹೆಚ್ಚಿನದು ನೋವ ಕಥಾನಕವೇ. ಬದುಕಿದ್ದು ಈವರೆಗೂ ನಗುವ ತೊಟ್ಟಿಲಲ್ಲೇ.
ಮನಸಿಗೆ ಖುಷಿ ಎಲ್ಲಿಂದಲೋ ಬರಲ್ಲ. ನಾವೇ ಕೊಡಬೇಕು. 
ನಮ್ಮೊಳಗಿನ ನೋವು, ಸಂಕಟಗಳ ನಡುವಿನಿಂದಲೇ ಹೆಕ್ಕಿ ಹೆಕ್ಕಿ. ನಮ್ಮ ಬದುಕನ್ನು ಶೃಂಗರಿಸಿಕೊಳ್ಳಬೇಕಾದ್ದು ನಾವೇ ಅಂದ್ಕೋತೀನಿ. 
ಯಾವ ಭಾಗ್ಯವೂ ಯಾರನ್ನೂ ಮುನ್ನಡೆಸಿದ ಉದಾಹರಣೆ ಇಲ್ಲ - ನಮಗೆ ನಡೆವ ಮನಸಿಲ್ಲದಿದ್ದರೆ. 
ಯಾವ ನೋವೂ ಸಂಪೂರ್ಣ ಶಾಶ್ವತ ಅಲ್ಲ - ನಾವಾಗಿ ಗೊಬ್ಬರ ಹಾಕಿ ಬೆಳೆಸಿ ಕಾಯ್ದಿಟ್ಟುಕೊಳ್ಳದಿದ್ದರೆ.
ಯಾರೋ ತಂದುಕೊಟ್ಟಾರೆಂಬ ಖುಷಿಗಿಂತ - ನನ್ನದೇ ಬದುಕು ಕರುಣಿಸಿದ ನೋವುಗಳನು ಕಣ್ಣ ಹನಿಗಳೊಂದಿಗೆ ಕಳೆದುಕೊಂಡಾಗ ಒಂಥರಾ ಹಾಯೆನಿಸುತ್ತಲ್ಲ ಮತ್ತು ಮುಂದಿನ ಬದುಕನ್ನು ಎದುರುಗೊಳ್ಳೋಕೆ ಒಂದು ಹೊಸ ಚೈತನ್ಯ ಮೂಡಿ ನಿಂತಾಗ ಉಕ್ಕುತ್ತಲ್ಲ ಖುಷಿ - ಆ ಖುಷಿಯನ್ನ, ಕೇವಲ ನನ್ನದು ಮಾತ್ರ ಎನ್ನಿಸುವ ಆ ಆನಂದವನ್ನು ನಾನು ತುಂಬಾನೇ ಪ್ರೀತಿಸುತ್ತೇನೆ.

ನಾಳೆ ಬಂದೀತೆಂಬ ಬೆಳಕಿನ ನಿರೀಕ್ಷೆಗಿಂತ ನಂಗೆ ಈ ಕ್ಷಣ ನನ್ನದೇ ನೋವಿನ ಎಣ್ಣೆ ಸುರಿದು ನಾನೇ ಹಚ್ಚಿಟ್ಟುಕೊಂಡ ಸಣ್ಣ ನಗುವಿನ ದೀಪದ ಮೇಲೆ ಹೆಚ್ಚು ನಂಬಿಕೆ...

ಭಾವಗಳಿಗೆ ಮನಸ್ಸು - ಬದುಕಿಗೆ ಬುದ್ಧಿ.
ಬರಹ ಎದೆಯ ಭಾವ - ಅಲ್ಲೊಂದಿಷ್ಟು ನೋವು ಮತ್ತು ಪುಟ್ಟ ಪುಟ್ಟ ಸಂತಸಗಳಿವೆ.
ಬದುಕು ಬುದ್ಧಿಯ ಬರಹ - ಅಲ್ಲಿ ಬರೀ ನಗುವಿದೆ. 

ಮನಸಲ್ಲಿ ಇಂಗಿ ಹೆಪ್ಪಾದ ನೋವು ಬದುಕ ಕಟ್ಟಲು ಬುದ್ಧಿಗೆ ಗೊಬ್ಬರವಾಗಿ ನಗುವ ಬೆಳೆಯ ಬೆಳೆಸಲಿ ಬದುಕಲ್ಲಿ ಅಂತ ಬಯಸುತ್ತೇನೆ.

ಎಲ್ಲ ಜಂಜಡಗಳ ನಡುವೆಯೂ ಒಂದಿಷ್ಟು ಖುಷಿಯಾಗಿರೋಣ. 
ಬರಹ - ಭಾವ - ಬಂಧಗಳಲಿ...
ಏನಂತೀರಾ...

Thursday, January 3, 2013

ಗೊಂಚಲು - ಐವತ್ತಾರು.....

ಮನೆಯಂಗಳದ ಜಲಧಾರೆ.....

ಹಲವಾರು ಜಲಪಾತಗಳ ಜಿಲ್ಲೆ ಉತ್ತರ ಕನ್ನಡ. ಹಲವು ಪ್ರಸಿದ್ಧ ಸರ್ವಋತು ಜಲಪಾತಗಳೊಟ್ಟಿಗೆ ಮಳೆಗಾಲದಲ್ಲಿ ಮಾತ್ರ ಧುಮ್ಮಿಕ್ಕಿ ಬೇಸಿಗೆ ಇಣುಕುವ ಹೊತ್ತಿಗೆ ಬತ್ತಿ ಹೋಗುವ ನೂರಾರು ಜಲಪಾತಗಳು ಈ ಜಿಲ್ಲೆಯ ವೈಶಿಷ್ಟ್ಯ. ಆ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನವನು ನಾನು. ಯಲ್ಲಾಪುರದಿಂದ 28 ಮೈಲಿ ದೂರದ 'ಕಂಚೀಮನೆ' ನನ್ನೂರು. ದಟ್ಟ ಕಾಡಿನ ನಡುವೆಯ ಪುಟ್ಟ ಹಳ್ಳಿ. ನನ್ನ ಮನೆಯಂಗಳದಿಂದ ನಾಲ್ಕು ಮೈಲಿಯಷ್ಟು ಹೆಜ್ಜೆ ಸಾಗಿದರೆ ದಟ್ಟ ಕಾನನದ ಗೌವ್ವೆನ್ನುವ ನೀರವ ಮೌನದ ಮಧ್ಯೆ ಕೇಳುತ್ತೆ ಹರಿವ ಸಣ್ಣ ಹಳ್ಳದ ನೀರು ಧಾರೆಯಾಗಿ ಧುಮ್ಮಿಕ್ಕುವ ಧೋ ಎಂಬ ಸದ್ದು. ಮೈಲಿಯಾಚೆಯಿಂದಲೆ ಕೇಳುವ ನೀರಧಾರೆಯ ಸದ್ದಿಗೆ ಕಿವಿದೆರೆದು ಸಾಗಿದರೆ ಕಣ್ಣಿಗೊಂದು ಹಬ್ಬ ದಕ್ಕುತ್ತದೆ. ಸುಮಾರು 200 ಅಡಿಗಳಷ್ಟು ಎತ್ತರದಿಂದ ಕೆಳ ಧುಮುಕುವ ಜಲಪಾತಕ್ಕೆ ಸ್ಥಳೀಯರಿಟ್ಟ ಹೆಸರು "ಎಮ್ಮೆಶೀರಲ ವಜ್ರ". ವಜ್ರ ಅಂದರೆ ಜಲಪಾತ ಎಂದರ್ಥವಂತೆ. ಎಮ್ಮೆಶೀರಲ ಅನ್ನೋ ಹೆಸರಿನೊಂದಿಗೆ ಒಂದಷ್ಟು ಎಮ್ಮೆಗಳು ಮಳೆಗಾಲದ ನೀರ ಸೆಳವಿಗೆ ಸಿಕ್ಕಿ ಈ ಜಲಪಾತದಲ್ಲಿ ಬಿದ್ದು ಪ್ರಾಣ ಬಿಟ್ಟವು ಹಾಗಾಗಿ ಈ ಹೆಸರು ಎಂಬ ಪ್ರತೀತಿಯಿದೆ. ಇದೆಷ್ಟು ಸತ್ಯವೋ ಗೊತ್ತಿಲ್ಲ. ಅದೇನೇ ಇರಲಿ ಹಸಿರು ಮತ್ತು ನೀರ ಧಾರೆಯ ಚೆಲುವಿನಿಂದ ಈ ಜಲಪಾತ ಕಣ್ಮನ ತಣಿಸುವುದಂತೂ ಸತ್ಯ. ಚಾರಣ ಪ್ರಿಯರಿಗೊಂದು ಚಂದದ ತಾಣ. ಆದರೆ ಈ ಜಲಪಾತ ಮಳೆಯ ದಿನಗಳಲ್ಲಿ ಮಾತ್ರ ತುಂಬಿ ಹರಿಯುತ್ತೆ ಅನ್ನೋದು ಬೇಸರದ ಸಂಗತಿ. ಇಲ್ಲಿಗೆ ಹೋಗೋಕೆ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳವರೆಗಿನ ದಿನಗಳು ಮಾತ್ರ ಸೂಕ್ತ. ಅದರಲ್ಲೂ ಅಕ್ಟೋಬರ್ ಕೊನೆಯಲ್ಲಿ ತುಂಬಾ ಚಂದವಿರುತ್ತೆ. ಆದರೆ ಅಷ್ಟೇ ಅಪಾಯ ಕೂಡ.
ಈ ಬಾರಿ ಮನೆಗೆ ಹೋದಾಗ ನನ್ನವರೊಂದಿಗೆ ಮತ್ತೊಮ್ಮೆ ಈ ಜಲಪಾತಕ್ಕೆ ಹೋಗಿದ್ದೆ. ನೀರು ಖಾಲಿಯಾಗ್ತಿರೋ ದಿನಗಳಿವು. ಆದರೂ ಖುಷಿಗೆ ಕೊರತೆ ಆಗಲಿಲ್ಲ. ನನ್ನ ತಂಡದ ಜತೆಗೆ ನನ್ನ ಅಮ್ಮನೂ ಇದ್ದಳೆಂಬುದು ನನ್ನ ಖುಷಿಗೆ ಮೆರಗು ತಂದಿತ್ತು.
ನನ್ನ ಕ್ಯಾಮರಾ ಕಣ್ಣಲ್ಲಿ ಬಂಧಿಯಾದ ಚಾರಣದ ಕೆಲ ನೆನಪಿನ ಝಲಕುಗಳು ನಿಮಗಾಗಿ ಇಲ್ಲಿವೆ. ನಿಮಗೂ ಇಷ್ಟವಾದೀತೆಂದುಕೊಂಡಿದ್ದೇನೆ.
ಹೀಗೆ ಸಾಗಿತ್ತು ಕಾಡುದಾರಿಯ ಪಯಣ...




ಆಯಿ...

ಕಾಲು ಜಾರಿದರೆ ಕೈಲಾಸವೇ ಗತಿ...



ಮುಖ್ಯ ಜಲಧಾರೆ...


ಕಲ್ಲ ಮೇಲೆ ಹಸಿರ ಹಾಸು...





ಸಾಹಸ ಪ್ರಿಯರು...:)



ಪ್ರಕೃತಿ ನಿರ್ಮಿತ ಈಜುಕೊಳ...

ಇಲ್ಲಿಂದ ಧುಮುಕುತ್ತೆ ನೀರು...

ಮೇಲಿಂದ ಕೆಳ ನೋಡಿದಾಗ...

ಜಲಪಾತದ ಮೇಲಿಂದ ಕಾಡಿನೆಡೆಗೆ ಕಣ್ಣು ಹಾಯಿಸಿದಾಗ...



ಬಂಡೆ ಗಾತ್ರದ ಕಲ್ಲುಗಳು...:)

Thursday, December 13, 2012

ಗೊಂಚಲು - ಐವತ್ತು ಮತ್ತೈದು.....


ಗೊಂದಲದ ಹಾಡು.....

ನನ್ನ ಮನದ ಒಳನೋಟದಂತೆ ನನ್ನ ಕ್ಷಣಗಳು...

"ಕನಸ ಹಕ್ಕಿ ಹಾರುತಿದೆ" 
ಎಂಬ ನನ್ನದೇ ಸಾಲುಗಳು ಮನಸು ನಗುತಿದ್ದಾಗ - ಕನಸುಗಳಿಗೆ ರೆಕ್ಕೆ ಮೂಡಿ ಗಗನಗಾಮಿ ಎಂಬರ್ಥವನ್ನು ಮೂಡಿಸಿದರೆ,
ಮನಸು ಮಗುಚಿ ಬಿದ್ದಾಗ - ಕನಸುಗಳೆಲ್ಲ ನನ್ನ ತೊರೆದು ಹಾರಿ ಹೋಗುತಿವೆ ಎಂಬಂತೆ ಭಾಸವಾಗಿ ಇನ್ನಷ್ಟು ಖಿನ್ನವಾಗಿಸುತ್ತವೆ.

ಎಲ್ಲ ಸರಿಯಿದ್ದಾಗ ಸಣ್ಣ ಸೋಕುವಿಕೆಯೂ ಝೇಂಕಾರವೇ.
ಒಂದು ತಂತಿ ಹರಿದರೂ ಪ್ರತಿ ಸ್ವರವೂ ಅಪಸ್ವರವೇ.
ಬದುಕೂ ಹಾಗೆಯೇ...
ಅದೇ ವೀಣೆ, ಅದೇ ತಂತಿ...
ಮಿಡಿವ ರಾಗಗಳು ನೂರಾರು - ಹೊಮ್ಮಿಸುವ ಭಾವಗಳು ಸಾವಿರಾರು...
ಒಮ್ಮೆ ನಗೆಯ ಝೇಂಕಾರ - ಇನ್ನೊಮ್ಮೆ ನೋವ ಹೂಂಕಾರ...

ಕಾಯುತ್ತ ನಿಂತಾಗಲೆಲ್ಲ ನಾನು ಹೋಗಬೇಕಾದ ಬಸ್ಸೊಂದನ್ನುಳಿದು ಬೇರೆ ಬಸ್ಸುಗಳೆ ಜಾಸ್ತಿ ಬರುತ್ವೆ ಯಾವಾಗಲೂ ಅಥವಾ ನಂಗೇ ಹಂಗನ್ನಿಸುತ್ತಾ...

ಇನ್ನೂ ಏನೋ ಬೇಕಿದೆ ಎಂಬ ತುಡಿತದಲ್ಲೇ  ಬದುಕ ಈ ಕ್ಷಣ ನಗುತಿದೆ 
ಮತ್ತು
ಆ ತುಡಿತದಲ್ಲೇ ನಗಬೇಕಿದ್ದ ಬದುಕ ಹಲ ಕ್ಷಣಗಳು ನಲುಗಿದ್ದೂ ಇದೆ...
ನಿನ್ನೆ ಅದ್ಭುತವಾಗಿ ಕಂಡ ಕನಸು ಇಂದು ನನಸಾಗಿ ಕೈಸೇರಿದಾಗ ಕ್ಷುಲ್ಲಕ.
ನಿನ್ನೆ ಇದೇನು ಹೊಳೆಯಾ ಅಂತಂದು ಅಣಕಿಸಿ ನಾ ದಾಟಿ ಬಂದಿದ್ದ ಪುಟ್ಟ ತೊರೆ - ಇಂದು ಹೊಸ ಝರಿಗಳ ಒಳಗೊಂಡು ದೊಡ್ಡ ಹಳ್ಳವಾಗಿ ಬೆರಗು ಮೂಡಿಸಿ, ದಾಟಿ ಹೋಗದಂತೆ ತನ್ನ ಸುಳಿಗಳಲಿ ಎನ್ನ ಮುಳುಗೇಳಿಸುತ್ತೆ...

ಕಣ್ಣಿಂದ ಜಾರಿದ ಹನಿ -
ಕನಸೊಂದು ಅರ್ಧಕ್ಕೇ ಸತ್ತುಹೋದದ್ದಕ್ಕೆ ಶ್ರದ್ಧಾಂಜಲಿಯಾ ಅಥವಾ ಹೊಸಕನಸಿಗೆ ಬಾಗಿಲು ತೆರೆಯಬಹುದಾದ ಖುಷಿಗಾ ಎಂದರ್ಥವಾಗದೇ ಕಂಗಾಲಾಗ್ತೇನೆ...

ಗೊಂದಲಗಳ ತೆರೆಗಳ ಮೇಲೆ ಹೊಯ್ದಾಡುತಿದೆ ಜೀವನ ನೌಕೆ...
ಸದಾ ನನ್ನ ಕಾಡುವ ನನ್ನದೇ ಮನಸಿನ ಮಾಯೆಗಳಿಗೆ ಏನೆನ್ನಲಿ...

Wednesday, December 5, 2012

ಗೊಂಚಲು - ಐವತ್ನಾಕು.....

ಕ್ಷಮಿಸು.....
ಹೇಳಬಾರದ ಕೆಲವು ಸತ್ಯಗಳು ಹೀಗಿಲ್ಲಿ ಹೇಳಲ್ಪಟ್ಟಿವೆ..

ನೋವು ಕಾಡಲಿ, ನಗುವು ಹಾಡಲಿ, ನಾನಾದರೆ ಬರೆದು ನಿಸೂರಾಗುತ್ತೇನೆ.
ಯಾವುದ ಬರೆದರೂ ನಂಗೊಂದಿಷ್ಟು ಶಹಬ್ಬಾಶ್ಗಿರಿ ಸಿಗುತ್ತೆ. 
ಮುಖವೇ ಕಾಣದ 'ಮುಖಪುಟ'ದಲ್ಲಿ ನನ್ನ ನೋವಿಗೊಂದಿಷ್ಟು ಸಾಂತ್ವನ. 
ನಗುವಿಗೆ ಅವರೂ ಕಾರಣ...
ನೀನೇನು ಮಾಡ್ತೀಯ ಅಷ್ಟೈಶ್ವರ್ಯಗಳ ನಡುವೆಯೂ ಒಬ್ಬಂಟಿ ಜೀವಿ.
ಮಗನಿದ್ದೂ, ಮನೆಯಿದ್ದೂ ಜೊತೆಯಿಲ್ಲದ ಬದುಕು.
ಸುತ್ತ ಹಸಿರಿದ್ದರೇನು ನಗುವ ಗಾಳಿ ಬೆಳಕು ಮನೆಯ ಪಡಸಾಲೆಯಲಿ ಕುಣಿಯದಿದ್ದರೆ...
ಎಲ್ಲ ಇದ್ದೂ ನಿನಗಲ್ಲಿ ಉಪವಾಸ. 
ನಿನ್ನ ನೆನಪು ತೀವ್ರವಾದಾಗ ಹುಣ್ಣಿಮೆ ಚಂದಿರನೂ ನನ್ನೊಡನೊಮ್ಮೆ ಅಳುತ್ತಾನೆ. 
ಮಾರನೆ ಬೆಳಗು ಆ ನೋವೆಲ್ಲ ಅಕ್ಷರವಾಗುತ್ತೆ. 
ಅಲ್ಲಿಗೆ ನಾನು ಮತ್ತೆ ಎಂದಿನಂತೆ. 
ನನ್ನ ದುಡಿಮೆ, ನನ್ನ ರಿಕಗ್ನಿಷನ್, ನನ್ನ ಪದವಿ, ನನ್ನ ನಿತ್ಯದ ಒಡ್ಡೋಲಗದಲ್ಲಿ ನಾನು ಪರಮ ಬ್ಯೂಸಿ. 
ನಿನ್ನ ನೆನಪ ನೋವೂ ನನ್ನ ಬ್ಲಾಗ್ ನ ಹಲವು ಗೊಂಚಲುಗಳಲ್ಲಿ ಒಂದು. 
ಅಲ್ಲೆಲ್ಲಿಂದಲೋ ನೀನು ಫೋನಾಯಿಸಿ ಚೆನ್ನಾಗಿದೀನಿ ಅನ್ನುವ ನಿನ್ನ ಮಾತಲ್ಲಿ ಮತ್ತು ನೀನು ಚೆನ್ನಾಗೇ ಇದೀಯಾ ಅಂತ ನಾನು ನಂಬುವುದರಲ್ಲಿ; ಎರಡರಲ್ಲೂ ನಂಗೆ ನನ್ನ ಸುಖದ ಸ್ವಾರ್ಥವೇ ಕಾಣುತ್ತೆ.
ನಿನ್ನೆ ನಿನ್ನ ನೆನಪಲ್ಲಿ ಅತ್ತಿದ್ದು ನಾನೇನಾ ಮತ್ತು ಆ ಅಳು ಪ್ರಾಮಾಣಿಕವಾ ಎಂದು ಅನುಮಾನ ಇಂದು ನನಗೆ. 
ಇಂತಿಪ್ಪ ನಾನು ಇಲ್ಲಿ ತಿಂದುಂಡು, ತಿರುಗಿ ನನ್ನದೇ ಸುಖಗಳಲ್ಲಿ ಲೀನ. 
ನನ್ನ ಬೇರು ನೀನಲ್ಲಿ ಇಂಚಿಂಚಾಗಿ ಪ್ರಾಣ ಹೀನ. 
ನಾನು ಊರ ತೊರೆದ, ಪರವೂರಲ್ಲಿ ಮೆರೆದ ಸುದ್ದಿಗಳ ನಡುವೆ ನಡುಗುವ ನಿನ್ನ  ಮುಪ್ಪಿನ ಕೈಗಳ ಊರುಗೋಲು ಮುರಿದ ಸದ್ದು ಯಾರಿಗೂ ಕೇಳಲೇ ಇಲ್ಲ. 
ಹೆಜ್ಜೆ ಎತ್ತಿಡುವಾಗಲೆಲ್ಲ ಹೊರಬರುವ ನಿನ್ನ ನಿಟ್ಟುಸಿರು ನನ್ನ ತಾಕಲೇ ಇಲ್ಲ.
ತನ್ನ ನೋವನ್ನು ಹೇಳಿದರೆ ಎಲ್ಲಿ ನಾನು ನೊಂದುಕೊಳ್ತೀನೋ ಅಂತ ನಿನ್ನಲ್ಲೇ ಬಚ್ಚಿಟ್ಟುಕೊಂಡು ನೋವ ಹೀರಿ ಬದುಕುತಲಿರುವ ನೀನು ನಲಿವ ಕೊಲ್ಲುವ ಬದುಕಿಗೊಂದು ಸವಾಲು.
ಅಷ್ಟೆಲ್ಲ ನೋವುಗಳ, ಅವಮಾನಗಳ - ಹಂಚಿಕೊಳ್ಳದೇ, ಹರವಿಕೊಳ್ಳದೇ ನಿನ್ನಲ್ಲೇ ಹೀರಿಕೊಂಡು ಅದ್ಹೇಗೆ ನಗುತ್ತೀಯ.
ಅದ್ಯಾವ ಮೂಲದಲ್ಲಿ ಒಸರುತ್ತೆ ನಿನ್ನಲ್ಲಿ ಅಂತ ಪರಿ ಜೀವನ ಪ್ರೀತಿ. 
ನಿನ್ನದೇ ಮುಂದುವರಿಕೆ ನಾನು; ಆದರೆ ಕಂಗೆಡುತ್ತೇನೆ ಸಣ್ಣ ಅವಘಡಕ್ಕೂ.
ನಗುವಲ್ಲಿ ನೆನೆಯದೇ ನನ್ನ ನೋವಲ್ಲಿ ನಿನ್ನ ಮರೆಯದ ನನ್ನ ಕ್ರೌರ್ಯ ನನ್ನನ್ನೇ ಕಾಡುತ್ತದೆ ಆಗಾಗ; ಕಟುಕನ ಮನದ ಪಾಪಪ್ರಜ್ಞೆಯಂತೆ. 
ಎಲ್ಲ ತಿಳಿದೂ ಏನೂ ಮಾಡಲಾರದ ನನ್ನ ಅಸಹಾಯಕತೆ ಯಾವಾಗಲೂ ಅಣಕಿಸುತ್ತದೆ ನನ್ನ ಗಂಡೆಂಬ ಅಹಂಕಾರವ. 
ಹಸಿರ ಸಿರಿಯ ನಡುವೆ ನೀನಲ್ಲಿ ಒಂಟಿ. 
ಜನಜಾತ್ರೆಯ ನಡುವೆ ನಾನಿಲ್ಲಿ ಏಕಾಂಗಿ.
ಹೇಳಬಲ್ಲೆ ಇಷ್ಟನ್ನೇ - 
ಅಮ್ಮಾ ಕ್ಷಮಿಸಿಬಿಡು ಈ ನಿನ್ನ ಮಗನನ್ನು ಹಡೆದ ನಿನ್ನದೇ ತಪ್ಪಿಗೆ.

Saturday, December 1, 2012

ಗೊಂಚಲು - ಐವತ್ಮೂರು.....


'ಮಾಯಾ' ಜಾಲ.....

ಮೆಜೆಸ್ಟಿಕ್ಕಿನ ಜನ ಜಾತ್ರೆಯ ಜಂಗುಳಿ ನಡುವೆ 
ಸುಮ್ಮನೆ ಸಣ್ಣಗೆ ನಕ್ಕು ಮರೆಯಾಗುವ 
ಆ 
ಅರಳು ಕಂಗಳು...

ಹಳೆಯ ಯಾವುದೋ ಮಧುರ ನೆನಪೊಂದು
ಕೈಜಗ್ಗಿ
ಹೆಗಲು ತಬ್ಬಿ
ನೆತ್ತಿ ನೇವರಿಸಿ
ಹಣೆಯ ಮುದ್ದಿಸಿ 
ಇನ್ಯಾವುದೋ ಬೆಚ್ಚನೆ ಕನಸಿನ ಲೋಕಕ್ಕೆ ಒಯ್ದಂತೆ
ಯಾವುದೋ ಭಾವ ಲೋಕಕ್ಕೆ ನನ್ನ ಮನವ 
ಹೊತ್ತೊಯ್ಯುತ್ತವೆ...
ಕಂಡ ಪ್ರತಿ ಬಾರಿಯೂ...

ಮನವಾಗ 
ಸುರಿಯಲು
ಇಳೆಯ ಇಶಾರೆಗೆ ಕಾಯುತಿರುವ
ಮೋಡಗಟ್ಟಿದ ಬಾನು...

ಅವಳ ಕಣ್ಗಳ ಭಾವಗಳ ಓದಲು ಒದ್ದಾಡುತ್ತಾ
ಕಣ್ಗಳ ಒಡತಿಯ ಅಪರಿಚಿತತೆಯನ್ನು ಮರೆತು
ಹೊಸ ಕವನಕ್ಕೆ ಕಾವು ಕೊಟ್ಟ ಕವಿಯಂತೆ ನಲಿಯುತ್ತೇನೆ...

ಅವಳದೊಂದು ಕಿರುನಗೆಗೆ ಕಾಯುತ್ತ ಕಾಯುತ್ತ
ಹಸುಳೆಯ ಎಳೆ ದವಡೆಯಿಂದ ಕೆನ್ನೆ ಕಚ್ಚಿಸಿಕೊಂಡ
ಹಿತವಾದ ಯಾತನೆಯ ಖುಷಿಯ ಸವಿಯುತ್ತೇನೆ...

ಬಳುಕಿ ನಡೆವಾಗಿನ ಅವಳ ನೀಳವೇಣಿಯ ವೈಯಾರವ ಕಂಡು
ಒಂದು ಕ್ಷಣದ ಎನ್ನೆದೆಯ ಏರಿಳಿತ
ಪಕ್ಕ ಕುಳಿತ ಯಾರೋ ತಾತನ ಬೊಚ್ಚು ಬಾಯಲ್ಲಿ 
ಮುಗುಳ್ನಗೆಯಾಗಿ ತೋರುತ್ತದೆ...

ಅವಳೆದೆಯ ಗೊಂಚಲ ನಡುವೆ ಬೆಚ್ಚಗೆ
ಮೈಮರೆಯುವ ಆಸೆಗೆ
ಕನಸಲ್ಲೂ ಉಸಿರುಗಟ್ಟುತ್ತೇನೆ...

ನಕ್ಕೂ ನಗದಂತಿರುವ ಅವಳು
ಕುಡಿನೋಟಕ್ಕೂ ಚಡಪಡಿಸುವ ನಾನು
ಎನ್ನ ಮನದಿ ಕುಣಿದಾಡುವ ಭಾವ
ಅದು
ಬರೀ ಮೋಹವೋ
ಪ್ರೇಮವೋ - ಕಾಮವೋ
ಇವೆಲ್ಲ ಸೇರಿದ ಇನ್ಯಾವುದೋ
ಏನೆಂದು ಅರ್ಥೈಸಿಕೊಳ್ಳಲಾಗದೇ
ಹೊರಚೆಲ್ಲುವ ಭಾವಗಳ ಹಿಡಿದಿಟ್ಟುಕೊಳ್ಳಲು ಒದ್ದಾಡುತ್ತಾ
ಒಂದಿಷ್ಟು ಪುಳಕಗಳೊಂದಿಗೆ
ಕಾಲ ತಳ್ಳುತ್ತಿದ್ದೇನೆ...
ಹಾಗೇ ಸುಮ್ಮನೆ...

ಒಂದಂತೂ ಸತ್ಯ...
ಮನಸನ್ನು ಅವಳ ಉಡಿಯಲ್ಲಿ ಅಡವಿಟ್ಟು ಬಹುಕಾಲ ಸಂದು ಹೋಯಿತು...
ಬಿಡಿಸಿಕೊಳ್ಳುವ ಪರಿಯ ತಿಳಿಯದೇ ಬುದ್ಧಿ ಕಂಗಾಲು ಕಂಗಾಲು...
ಬಿಟ್ಟೇನೆಂದರೂ ಬಿಡದೀ ಮನಕೆ ಕವಿದ ಮರುಳ 
'ಮಾಯೆ...'

Monday, November 26, 2012

ಗೊಂಚಲು - ಐವತ್ತು ಮತ್ತೆರಡು.....

ದ್ವೀಪ.....

ಆಗಿರುವೆ -
ಸುತ್ತ ಮೊರೆವ ಸಾಗರದ ನಡುವೆ ನಾನೊಂದು ಏಕಾಂಗಿ ಕಲ್ಲು ದ್ವೀಪ...
ಯಾಕಿಲ್ಲಿ ಇನ್ನೂ ಇದ್ದೇನೆ..
ಒಡೆದು ಚೂರಾಗಿ ಹೋಗದೇ...

ಆಸೆಯಾಗುತ್ತೆ ನಂಗೂ ಭಾವಬಂಧಗಳ ಒಳಗೊಂಡು ಹಿಗ್ಗಬೇಕೆಂದು...
ಆದರೇನ ಮಾಡಲಿ 
ಒಡಲ ಗೀತೆ ಹಾಡಲರಿಯದ ಮೂಕ ನಾನು...

ಎಲ್ಲೋ ಕಣ್ಣು ಹಾಯದ ದೂರದಲ್ಲಿ ನಾವೆಯೊಂದು ತೇಲಿದರೆ
ಅದು ನನ್ನನೇ ಅರಸಿ ಬಂತೆಂದು ಭ್ರಮಿಸಿ,
ನಾನಿಲ್ಲಿ ಹೊಸ ಕನಸಿಗೆ ಕಣ್ಣರಳಿಸುತ್ತೇನೆ...
ಬಳಿ ಬಂತೆಂದುಕೊಂಡ ನಾವೆ ಮಾರು ದೂರದಿಂದಲೇ ತಿರುಗಿಯೂ ನೋಡದೆ ನನ್ನಿಂದ ಮುಂದೆ ಸರಿದು ಹೋಗುತ್ತೆ...
ಆಗೆಲ್ಲ ಮನ ಬಿಕ್ಕಳಿಸುತ್ತೆ...
ಸಾಗರನ ಮೊರೆತದಬ್ಬರಕೆ ಬಿಕ್ಕಳಿಸಿದ ಸದ್ದು ನನಗೂ ಕೇಳಿಸದಂತಾಗಿ,
ನಾನತ್ತದ್ದು ನನಗೇ ಸುಳ್ಳೆನಿಸಿ ಮತ್ತಷ್ಟು ಕಂಗೆಡುತ್ತೇನೆ...
ಅಪಾರ ಜಲರಾಶಿಯಲ್ಲಿ ಲೀನವಾದ ಕಣ್ಣ ಹನಿಗೇನೂ ವಿಶೇಷ ಅಸ್ತಿತ್ವವಿಲ್ಲ...
ನನ್ನ ಕಣ್ಣ ಹನಿಯಿಂದೇನೂ ಸಾಗರದ ಪಾತ್ರ ವ್ಯತ್ಯಾಸವಾಗಲ್ಲ...
ಮನಸೂ ಬಂಡೆಯಾಗಿರುವ ಮಾತ್ರಕ್ಕೆ  ಇನ್ನೂ ನಿಂತಿದ್ದೇನೆ ಅಚಲವಾಗಿ...
ಹೊಸ ಕನಸಿನ ನೌಕೆ ಬಳಿ ಸುಳಿಯದಿದ್ದರೂ - ಒಂದಲ್ಲ ಒಂದು ದಿನ ನಾನಿರುವಲ್ಲಿ ನನಗಾಗಿಯೇ ಬಂದೇ ಬರುವುದು ಕಾಲನ ನಾವೆ...
ಅಲ್ಲಿಯವರೆಗೆ ಮೊರೆತಕ್ಕೆ ಮೈಯೊಡ್ಡಿ ಅದೇ ಸುಖವೆಂದುಕೊಂಡು ಕಾಯುತ್ತಲೇ ಇರುತ್ತೇನೆ - 
ಒಂಚೂರು ಒಲವಿಗೆ, ಸಣ್ಣ ಗೆಲುವಿಗೆ, ಮಗುವ ನಗುವಿಗೆ, ನಾನೂ ಜೀವಂತ ಅಂತ ನನಗೂ ಅನ್ನಿಸುವಂತೆ ಒಂದು ಕ್ಷಣವಾದರೂ ಜೀವಿಸುವ ಕನಸಿಗೆ...

Tuesday, November 20, 2012

ಗೊಂಚಲು - ಐವತ್ತೊಂದು.....


ಬದುಕ ಖುಷಿಯ ಒಳಸೆಲೆಯ ಚಿಲುಮೆಗಳು.....

ಅಕ್ಷರ ಪ್ರೀತಿ...
                      ಭಾವ ಧಾರೆಯ ಹಾಡು...
                                                         ಸ್ನೇಹ ಗಂಗೆಯ ಹರಿವು.....


ಅಲೌಕಿಕ ಆನಂದ ಅಂತ ಒಂದಿದ್ದರೆ 
ಅದು 
ನಮ್ಮಿಷ್ಟದ ವಿಷಯದ ಹೊತ್ತಿಗೆಯೊಂದನ್ನ ಒಂದೇ ಗುಕ್ಕಿನಲ್ಲಿ ಓದುವುದರಲ್ಲಿ...
ತಾದಾತ್ಮ್ಯದಿಂದ ಚಂದನೆಯದೊಂದು ಹಾಡು ಕೇಳುವುದರಲ್ಲಿ...
ಆತ್ಮೀಯ ಗೆಳೆಯರೊಂದಿಗಿನ ಮೌನದಲ್ಲಿ  ಮಾತ್ರ ಇದೆಯೇನೋ.
ನನ್ನ ಮಟ್ಟಿಗಂತೂ ಅದು ಸತ್ಯ.
ನನ್ನಲ್ಲೂ ಒಬ್ಬ ಭಾವುಕನನ್ನು ನಾನು ಕಾಣೋದು ಈ ಸಂದರ್ಭಗಳಲ್ಲಿ ಮಾತ್ರ.
ಹಗಲ ಏಕಾಂತದಲ್ಲಿ ಒಂದು ಪುಸ್ತಕ...
ರಾತ್ರಿಯ ಕತ್ತಲ ನೀರವತೆಯಲ್ಲಿ ಒಂದಿಷ್ಟು ಭಾವಗೀತೆ...
ಆಗಾಗ ಹೃನ್ಮಿತ್ರರೊಂದಿಗೆ ಧುಮ್ಮಿಕ್ಕುವ ಮಾತು...
ದಿನಗಳೆಲ್ಲ ಕ್ಷಣಗಳಲ್ಲಿ ಕಳೆದು ಹೋದಾವು.

ಅಕ್ಷರ :


ಪುಸ್ತಕ - ಅದು ನಮ್ಮಿಂದ ಯಾವುದೇ ರೀತಿಯ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೇ ಖುಷಿಯನ್ನು ಪಡೆದಷ್ಟೂ ಮೊಗೆಮೊಗೆದು ಕೊಡುವ, ನಮ್ಮಲ್ಲಿ ಜ್ಞಾನದಸೆಲೆ ಉಕ್ಕುವಂತೆ ಮಾಡುವ ಏಕೈಕ ಮಿತ್ರ.

ಓದಿನ ಬಳುವಳಿಯಾದ ಅರಿವಿನಿಂದ ನಮ್ಮ ಜೀವನಾನುಭವವನ್ನು ವಿಮರ್ಶಿಸಿಕೊಳ್ಳುವಂತಾದಾಗ ಸಹಜವಾಗಿ ನಮ್ಮೊಳಗೊಂದು ಪ್ರಭುದ್ಧತೆ ಮೇಳೈಸಿ ಬದುಕು ಇನ್ನಷ್ಟು ಆನಂದದಿಂದ ಕೂಡಿ ಚೆಂದವೆನಿಸುತ್ತದೆ.

ಓದು ತೀರ ನಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತೋ ಇಲ್ಲವೋ ಗೊತ್ತಿಲ್ಲವಾಗಲೀ,
ಆದರೂ
ಮನಸಿನಾಳದಲ್ಲಿ ಎಲ್ಲೋ ಏನೋ ಕದಲಿದಂತಾಗಿ ಸ್ವಲ್ಪೇ ಸ್ವಲ್ಪಾದರೂ ನಮ್ಮನ್ನೇ ನಾವು ವಿಮರ್ಶಿಸಿಕೊಳ್ಳುವಂತೆ ಮಾಡುವುದಂತೂ ಸತ್ಯ.
ನಿಧಾನವಾಗಿಯಾದರೂ ಸರಿ ಆತ್ಮ ವಿಮರ್ಶೆ ನಮ್ಮನ್ನು ಬೌದ್ಧಿಕವಾಗಿ, ಮಾನಸಿಕವಾಗಿ ಚಿಂತನಶೀಲವಾಗಿ ಬೆಳೆಯುವಂತೆ ಮಾಡುತ್ತದೆ.
ನಿಧಾನವೇ ಆದರೂ ಬೆಳವಣಿಗೆ ಬೆಳವಣಿಗೆಯೇ ತಾನೆ...
ಕಲ್ಲು ಬೆಳೆಯುವುದು ನಿಧಾನ ಅಂತ ಅದು ವಿಕಾಸವಾಗುತ್ತಲೇ ಇಲ್ಲ ಎನ್ನಲಾಗದಲ್ಲ.
ನಿಧಾನಗತಿಯ ಪರಿವರ್ತನೆಯನ್ನು ಗುರುತಿಸುವುದು ಕಷ್ಟವಾಗಬಹುದು...
ಹಾಗಂತ ಆಗುತ್ತಿರುವ ವಿಕಾಸವನ್ನು ಅಲ್ಲಗಳೆಯಲಾಗದಲ್ಲ.
ಯಾರೋ ಬರೆದ ಯಾವುದೋ ಒಂದು ಸಾಲು 
ಓದಿನಿಂದ ನಮ್ಮದೇ ಆಗಿ ನಮ್ಮಲ್ಲಿ ವಿಕಸಿತವಾಗುವುದು ಅಕ್ಷರದ ಸಾಮರ್ಥ್ಯ...

ಪುಸ್ತಕದ ಮಾತು ಬಂದಾಗ ವಾಲ್ಮೀಕಿಯ - ಪ್ರಥಮ ಪ್ರಿಯ ಸಮಾಗಮದಲ್ಲಿ ಹೆಣ್ಣು ನಾಚಿಕೆ, ಸಂಕೋಚಗಳಿಂದ, ಪ್ರಿಯಕರನ ಪ್ರೋತ್ಸಾಹದಿಂದ ಇಷ್ಟಿಷ್ಟೇ ಬೆತ್ತಲಾಗುತ್ತ ಹೋಗುತ್ತಾಳೆಂಬರ್ಥದ ಮಾತು ನೆನಪಾಗುತ್ತೆ.
ಕಾರಣ -
ಇಷ್ಟಪಟ್ಟು ತಂದಿಟ್ಟುಕೊಂಡ ಪುಸ್ತಕಗಳನ್ನು ಮತ್ತೆ ಮತ್ತೆ ಓದಿದಾಗ ಆಗುವ ಅನುಭೂತಿ.
ಈ ಪುಸ್ತಕಗಳೂ ವಾಲ್ಮೀಕಿಯ ಹೆಣ್ಣಿನಂತೆಯೇ ಅಂತನ್ನಿಸುತ್ತೆ.
ಪ್ರತೀ ಬಾರಿ ಓದಿದಾಗಲೂ ಬೇರೆ ಬೇರೆ ರೀತಿಯಲ್ಲಿ ಇಷ್ಟಿಷ್ಟಾಗಿ ಅರ್ಥವಾಗ್ತಾ ಹೋಗುತ್ತವೆ.
ಓದಿದ ಒಂದೇ ಸಾಲು ಅದು ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಹೊಸ ಹೊಸ ಅರ್ಥ ಮತ್ತು ಭಾವಗಳನ್ನು ಮೂಡಿಸಿ ಬೆರಗುಗೊಳಿಸುತ್ತೆ.
ನಮ್ಮ ಅನುಭವಗಳ ನೆಲೆಯಲ್ಲಿ ಓದಿನ ಹೊಳಹು ಬದಲಾಗುತ್ತ ಸಾಗುತ್ತದೆ.
ಹೊಸದಾದ ಮನೋ ಮಂಥನಕ್ಕೆ ಎಡೆಮಾಡಿ ಬದುಕನ್ನು ಇನ್ನಷ್ಟು ಪಕ್ವವಾಗಿಸುತ್ತದೆ.
ಒಮ್ಮೆ ಗೆಳತಿಯಾಗಿ, ಇನ್ನೊಮ್ಮೆ ಪ್ರಿಯತಮೆಯಾಗಿ, ಮತ್ತೊಮ್ಮೆ ಬರೀ ಹೆಣ್ಣಾಗಿ, ಹಲವೊಮ್ಮೆ ತಾಯಂತೆ ಸಲಹುವ ಅದೇ ಹೆಂಡತಿಯಂತೆ...

ಹಾಡು :


ಖುಷಿಯ ಘಳಿಗೆಯಲಿ ಖುಷಿಯ ಇಮ್ಮಡಿಸಿ, ಯಾವುದೋ ನೋವಿಗೆ ಏನೋ ಸಾಂತ್ವನವಾಗಿ ಮನವ ಮೃದುವಾಗಿಸುವ ಮನದ ಗೆಳೆಯ ಹಾಡು.
ಯಾರದೋ ಗೀತೆ ಇನ್ನಾರದೋ ಕಂಠದಲಿ ಹಾಡಾಗಿ ನಲಿದು - ಕೇಳುಗನ ಕಿವಿಯ ಸೇರಿ - ಮನವನಾಲಂಗಿಸಿ ಲಾಲೈಸುವ ಆ ಪರಿ ಎಂಥ ಸೊಗಸು.

ತಲೆಯದೂಗಿಸುವ ಹಾಡು, ಸದಾ ಗುಣುಗುಣಿಸುವ ಹಾಡು, ತಕಥೈ ಕುಣಿಸುವ ಹಾಡು, ಕಣ್ಣ ಹನಿಗಳ ಹಾಡು, ನಗೆಯ ಚಿಮ್ಮುವ ಹಾಡು ಎಷ್ಟೆಲ್ಲ ವೈವಿಧ್ಯದ ಹಾಡುಗಳು...

ಯಾವ ಹಾಡಾದರೇನು - 
ಹಾಡೆಂದರೆ ಖುಷಿ, ಹಾಡೆಂದರೆ ಮಮತೆ, ಹಾಡೆಂದರೆ ಪ್ರೀತಿ, ಹಾಡೆಂದರೆ ವಿರಹ, ಹಾಡೆಂದರೆ ಏನೇನೋ ಭಾವ ಸಮ್ಮಿಲನ...

ಪುಸ್ತಕ ಮತ್ತು ಹಾಡು ಇವೆರಡಕ್ಕೆ ಕೊರತೆ ಆಗದಿದ್ರೆ ಒಂದಿಡೀ ಬದುಕನ್ನು ಒಂಟಿಯಾಗಿ ಕಳೆದುಬಿಡಬಹುದೇನೋ...
ಜೊತೆಗೆ ಸಮಾನ ಅಭಿರುಚಿಯ ಸ್ನೇಹಿತರೂ ಸೇರಿಕೊಂಡರೆ ಬದುಕೊಂದು ನಳನಳಿಸುವ ಹೂವಿನ ತೋಟವೇ ಸರಿ...

ಸ್ನೇಹ :


ಎರಡು ಜೀವಗಳ ನಡುವೆ ಹಬ್ಬಿ ನಗುವ ಆತ್ಮೀಯ ಭಾವ ಸಂಬಂಧ ಸ್ನೇಹವೆಂದರೆ.

ಗೆಳೆತನವೊಂದು ಹಬ್ಬಿ ನಿಲ್ಲುತ್ತದೆ -
ಅಂಗಳದ ಕಂಬಕ್ಕೆ ಮಲ್ಲಿಗೆಯ ಬಳ್ಳಿಯೊಂದು ತಬ್ಬಿ ಹಬ್ಬಿ ನಿಂತಂತೆ ಸೊಗಸಾಗಿ...
ಸಮಾನ ಅಭಿರುಚಿಗಳ ನೀರು ಗೊಬ್ಬರ ಸಿಕ್ಕರೆ.

ಒಂದು ಚಂದನೆಯ ಸ್ನೇಹವನ್ನು ಬದುಕಿನ ಯಾವುದೇ ಕ್ಷಣದಲ್ಲಾದರೂ ಮರೆಯೋಕೆ ಸಾಧ್ಯವಾ..??

ಇಂದು ಜೀವದ ಸ್ನೇಹಿತರಾದ ಇಬ್ಬರು ಮುಂದೆಂದೋ ಬದುಕಿನ ಅನಿರೀಕ್ಷಿತ ತಿರುವುಗಳಲ್ಲಿ ಕವಲೊಡೆದ ದಾರಿಯಲ್ಲಿ ನಡೆಯಬೇಕಾದೀತು.
ಅರಿವೇ ಇಲ್ಲದೆ ಮತ್ತೆಂದೂ ಮುಖಾಮುಖಿಯಾಗದೇ ಹೋಗುವಷ್ಟು ದೂರಾಗಬಹುದು. 
ಕೊನೆಗೆ ಪರಿಸ್ಥಿತಿಯ ಒತ್ತಡದಲ್ಲಿ ಶತ್ರುಗಳೂ ಆಗಿಬಿಡಬಹುದೇನೋ.
ಆದರೂ ಆ ಶತ್ರುತ್ವದ ಆಳದಲ್ಲೂ ಮನದ ಮೂಲೆಯಲ್ಲಿ ಗೆಳೆತನದ ನರುಗಂಪು ಸುಳಿದಿರುಗದಿದ್ದೀತಾ...
ಮಿತ್ರರಾಗಿದ್ದಾಗ ಜೊತೆಯಾಗಿ ಕಳೆದ ಘಳಿಗೆಗಳ ಮರೆಯಲಾದೀತಾ..??
ಅದು ಸ್ನೇಹದ ತಾಕತ್ತು ಮತ್ತು ಶ್ರೇಷ್ಠತೆ.

ಮುಂಜಾನೆ ಮಂಜಲ್ಲದ್ದಿದ ಸೂರ್ಯಕಿರಣವನ್ನು ನೋಡುವಾಗ ಫಕ್ಕನೆ ನೆನಪಾಗಿಬಿಡುವ ಪ್ರೀತಿಯ ಗೆಳೆಯನ ಯಾವುದೋ ಖುಷಿಯ ಮಾತು ಆ ದಿನವೆಲ್ಲ ನಮ್ಮನ್ನ ಶಾಂತಿಯಿಂದ, ಸಂತೃಪ್ತಿಯಿಂದ ಕಳೆಯುವಂತೆ ಮಾಡಲಾರದೇ...
ನಮ್ಮನ್ನು ಇನ್ನಷ್ಟು ಉತ್ಸಾಹಿತರನ್ನಾಗಿಸದೇ...
ಸೋತ ಜೀವಕ್ಕೆ ಚೈತನ್ಯಧಾರೆಯೆರೆಯಲಾರದೇ...
ನಮ್ಮನ್ನು ಹೊಸ ಗೆಲುವಿನೆಡೆಗೆ ತುಡಿವಂತೆ, ಹೊಸ ಎತ್ತರಕ್ಕೆ ಏರುವಂತೆ ಪ್ರೇರೇಪಿಸಲಾರದೇ...
ಅಂಥದೊಂದು ಸ್ನೇಹಭಾವವನ್ನು, ಆ ಭಾವವನ್ನು ಕೊಡಮಾಡಿದ ಆತ್ಮಬಂಧುವಿನಂತ ಸ್ನೇಹಿತನನ್ನು ಎಂದಿಗಾದರೂ ಮರೆಯುವುದು ಸಾಧ್ಯವಾ..??
ಮರೆತವನು ಮನುಜನೆನಿಸಿಕೊಂಡಾನಾ..??

"ಶುಭ ಹಾರೈಕೆಗಳೊಂದಿಗೆ ವಿದಾಯವನ್ನು ಕೋರುತಿರುವ ಸ್ನೇಹಿತನ ಕಣ್ಣುಗಳೊಳಕ್ಕೆ ಇಣುಕು. ಅಲ್ಲಿ ಮನದಾಳದಲ್ಲಿ ಮೂಡಿದ ವಿದಾಯದ ವೇದನೆ ಹೆಪ್ಪುಗಟ್ಟಿರುತ್ತದೆ. ಭಾವಾವೇಷ ಕಣ್ಣ ಹನಿಯಾಗಿ ಹೊರಜಾರಲು ಸಿದ್ಧವಾಗಿ ಕಂಗಳನ್ನು ಮಂಜಾಗಿಸಿರುತ್ತದೆ."

"ತುಂಬು ಜೀವನ್ಮುಖೀ ವ್ಯಕ್ತಿಯಲ್ಲಿ ಕೂಡ ಸ್ನೇಹಿತನ ಅಗಲುವಿಕೆ ಮನದ ತುಂಬ ಒಂದು ಶೂನ್ಯಭಾವವನ್ನು ಸೃಷ್ಟಸಿರುತ್ತದೆ. ಆ ಅಗಲುವಿಕೆ ತಾತ್ಕಾಲಿಕದ್ದಾದರೂ ಕೂಡ. ಅದು ಪಕ್ವಗೊಂಡ ಸ್ನೇಹದ, ಮನಸು ಮಾತ್ರ ಅರ್ಥೈಸಿಕೊಳ್ಳಬಲ್ಲ, ವಿವರಿಸಲಾಗದ ಅನುಭಾವದ ಭಾವ ಶೂನ್ಯತೆ."
ಅಂಥ ಒಲವಧಾರೆಯ ಗೆಳೆತನದ ಕಲ್ಪನೆಯೇ ಎಷ್ಟು ಚಂದ.

ಅಹಂನ್ನು ಮರೆತು ಬೆರೆಯಬಲ್ಲೆವಾದರೆ, ಪ್ರಜ್ಞಾವಂತಿಕೆಯನ್ನು ಹೀರಿ ಬೆಳೆಯಬಲ್ಲೆವಾದರೆ, ಚಂದವಾಗಿ ಗೆಳೆತನವೊಂದನ್ನು ನಿಭಾಯಿಸಬಲ್ಲ ತಿಳುವಳಿಕೆ ನಮಗಿದ್ದರೆ ಖಂಡಿತಾ ಗೆಳೆತನವೊಂದು ನಮ್ಮ ಬದುಕ ಬೆಳಗಿಸಬಲ್ಲದು.

ಓದು ನಮ್ಮನ್ನು ಇನ್ನಷ್ಟು ಬೆಳೆಸಲಿ...
ಅಕ್ಷರ ಪ್ರೀತಿ ಹೊಸ ಬಾಂಧವ್ಯಗಳ ಬೆಸೆಯಲಿ...
ಮನದ ಮಡಿಲಲ್ಲಿ ಹೊಸ ಹಾಡು ಹುಟ್ಟಲಿ...
ಬದುಕ ತೋಟ ಹೂವಂತ ಗೆಳೆಯರಿಂದ ನಳನಳಿಸಲಿ...

ಈ ಬರಹ "ಕಹಳೆ ಆವೃತ್ತಿ - 2"ರಲ್ಲಿ 20-11-2012ರಂದು ಪ್ರಕಟವಾಗಿದೆ.
http://www.kahale.gen.in/2012/11/blog-post_20.html#comment-form

ಚಿತ್ರ ಕೃಪೆ : ಅಂತರ್ಜಾಲ.

Wednesday, November 7, 2012

ಚಿನ್ನದ ಗೊಂಚಲಿದು.....

ಕಾಲನ ಕುಣಿಕೆ.....

ಹೋಗುವವರೆಲ್ಲ
ಹೋಗುತ್ತಲೇ ಇರುತ್ತಾರೆ
ಕಳೆದುಕೊಂಬ ಇಚ್ಛೆ ಇರದಿದ್ದರೂ
ಉಳಿಸಿಕೊಂಬ ಸಾಮರ್ಥ್ಯ ನಮಗಿಲ್ಲ...



ಕಾಲನ ಕೈಯ ಕುಣಿಕೆಗೆ
ದಯೆಯ ಹಂಗಿಲ್ಲ
ಧರ್ಮದ ದರ್ದಿಲ್ಲ
ಯಾವ ಜಪ 
ಯಾವ ಜನಿವಾರವೂ
ಅವನ ಗೆದ್ದದ್ದಿಲ್ಲ...


ಎಂಥ ಕುಲ
ಯಾವ ಗೋತ್ರ
ಗಂಜಿಯೂ ಸಿಗದ ಬಡವ
ಸುಪ್ಪತ್ತಿಗೆ ಬಿಟ್ಟಿಳಿಯದ ಬಲ್ಲಿದ
ಅವನ ರಾಜ್ಯದಲ್ಲಿ 
ಎಲ್ಲರೂ ಸಮಾನ...
ಎಲ್ಲರಿಗೂ ಒಂದೇ
ನ್ಯಾಯದಾನ...


ಕಣ್ತೆರೆಯುತಿರುವ ಶಿಶು
ಕಣ್ಣು ಮಂಜಾದ ವೃದ್ಧ
ಯಾವುದು ಅಕಾಲ
ಯಾರದು ಸಕಾಲ
ಕಾಲನಿಗೆ ವಯಸೊಂದು
ಲೆಕ್ಕವೇ ಅಲ್ಲ...
ಅವನ ತೂಗುಗತ್ತಿ 
ನಮ್ಮ ತಲೆಮೇಲೆ
ಸದಾಕಾಲ... 

ನಮ್ಮ ಮುಂಚಿನವರು ಹೋದರು
ಹಿಂಚಿನವರೂ ಹೋದಾರು
ನಮ್ಮ ಸರದಿಗೆ ಕಾಯುತ್ತಾ
ನಾವು ಸಾಲಾಗಿ ನಿಂತಿದ್ದೇವಷ್ಟೇ...
ಅವನ ಬತ್ತಳಿಕೆ ಖಾಲಿಯಾದದ್ದಿಲ್ಲ
ಅಂಬಿಗೆ ಗುರಿ ಯಾರೆಂಬುದೂ
ತಗಲುವವರೆಗೆ 
ಅನಿಶ್ಚಿತ...


ಎಲ್ಲ ಹೋಗುವುದು ನಿಶ್ಚಿತ
ಹೋದವರ ನೆನಪೊಂದೇ ಶಾಶ್ವತ...
ನೆನಪು ಸಿಹಿಯಾ.? 
ಇಲ್ಲ ಕಹಿಯಾ.??
ಅದು
ಬದುಕಿದ್ದರ ಮೇಲೆ ಅವಲಂಬಿತ...

ಹೋಗುವ ಮುನ್ನ
ಸುತ್ತಲಿನ ನಾಕು ಮನಗಳಲಿ
ಸಿಹಿ ಭಾವಗಳ ಬಿತ್ತಿ ಹೋಗೋಣ...
ಅಳಿದ ಮೇಲೂ
ಉದುರೀತು ಎರಡು ಹನಿ
ಉಳಿದವರ ಕಣ್ಣಂಚಲ್ಲಿ...
ಸಾರ್ಥಕ್ಯ ಅಷ್ಟೇ
ಇಲ್ಲಿ ಬಂದಿದ್ದಕ್ಕೆ...
ಇಷ್ಟು ಕಾಲ ಬದುಕಿದ್ದಕ್ಕೆ...

ಚಿತ್ರ ಕೃಪೆ : ಅಂತರ್ಜಾಲ...